ಅಂಕಿತ: | ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ |
ಕಾಯಕ: | ಕಟ್ಟಿಗೆ ಅಥವಾ ಕೋಲು ಹಿಡಿದು ಕಾಯಕ ಮಾಡುವವನು. |
ಪಶುಪಾಲನ ವೃತ್ತಿಯನ್ನು ಕೈಕೊಂಡಿದ್ದ ಈತನ ಹೆಸರು ವಚನಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಸಕಲಪುರಾತನರ ಮೂರು ವಿಧದ ಕಟ್ಟುಗಳಲ್ಲಿ ಮೊದಲನೆಯದು ಈತನ ವಚನಗಳಿಂದ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ. ಚೆನ್ನಬಸವ ಪುರಾಣ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನಿಗೆ ಸಂಬಂಧಿಸಿದ ಕಥೆ ನಿರೂಪಿತವಾಗಿದೆ. ಕಾಲ-೧೧೬೦. ‘ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ’ ಅಂಕಿತದಲ್ಲಿ ೧೦೩ ವಚನಗಳು ದೊರೆತಿವೆ. ಹೆಚ್ಚಾಗಿ ಎಲ್ಲವೂ ಬೆಡಗಿನ ರೂಪದಲ್ಲಿವೆ. ಭಕ್ತಿಯ ಸ್ವರೂಪ, ಸದ್ಗುರುವಿನ ರೀತಿ, ಆಷಾಢಭೂತಿಗಳ ಟೀಕೆ ಇತ್ಯಾದಿ ವಿಷಯಗಳು ಪ್ರತಿಪಾದಿತವಾಗಿದೆ. ಕೆಲವು ವಚನಗಳಲ್ಲಿ ತನ್ನ ಗೋಪಾಲ ವೃತ್ತಿಯ ಪರಿಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾನೆ.