Categories
ವಚನಗಳು / Vachanagalu

ಧರ್ಮ ಗುರು ಬಸವಣ್ಣನವರ ವಚನಗಳು

ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ./1
ಅಂಕ ಕಳನೇರಿ ಕೈಮರೆದಿರ್ದಡೆ
ಮಾರಂಕ ಬಂದಿರಿವುದ ಮಾಬನೆ
ನಿಮ್ಮ ನೆನಹ ಮನ ಮರೆದಿರ್ದಡೆ
ಮಾಯೆ ತನುವನಂಡಲೆವುದ ಮಾಬುದೆ
ಕೂಡಲಸಂಗಯ್ಯನ ನೆನೆದಡೆ,
ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ./2
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ,
ಕಾದಿ ಗೆಲಿಸಯ್ಯಾ ಎನ್ನನು.
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ./3
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ
ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ,
ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ,
ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ./4
ಅಂಗದ ಮೇಲೆ ಲಿಂಗ ಆಯತವಾಗಿ
ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು,
ಪ್ರಾಣದ ಮೇಲೆ ಲಿಂಗ[ಸ್ವಾ]ಯತವ ಮಾಡಿ
ಎನ್ನಂತರಂಗ ಶುದ್ಧವ ಮಾಡಿ
ಲಿಂಗೈಕ್ಯದ ಹೊಲಬ ತೋರಿದನಯ್ಯಾ, ಚೆನ್ನಬಸವಣ್ಣನು. ಕಾಯದ ಕಳವಳವು
ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು
ಜಂಗಮಮುಖಲಿಂಗವಾಗಿ ಬಂದು
ಎನ್ನ ಶಿಕ್ಷಿಸಿ ರಕ್ಷಿಸಿ
ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು.
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಚೆನ್ನಬಸವಣ್ಣನ
ಕರುಣದಿಂದಲಾನು ಬದುಕಿದೆನು./5
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ?
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ./6
ಅಂಗದಲಳವಟ್ಟ ಲಿಂಗಕ್ಕೆ ಅಂಗವೆ ಭಾಜನ,
ಪ್ರಾಣದ ಮೇಲಣ ಲಿಂಗಕ್ಕೆ ನಿರ್ಭಾವವೆ ಭಾಜನ.
ಅರಿವಿನ ಮೇಲಣ ಲಿಂಗಕ್ಕೆ ನಿರ್ಭಾವವೆ ಭಾಜನ
ಕೂಡಲಸಂಗಮದೇವಯ್ಯಾ,
ಪ್ರಭುದೇವರು ಆರೋಗಣೆಯ ಮಾಡುವಡೆ
ಭಕ್ತಿಪರಿಯಾಣವಲ್ಲದೆ ಬೇರೆ ಭಾಜನವ ಕಾಣೆನು./7
ಅಂಗದಲ್ಲಿ ಅರ್ಪಿತವಾದ ಸುಖವು
ಲಿಂಗದಲ್ಲಿ ಲೀಯವಾಯಿತ್ತೆಂದಡೆ
ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ
ಕಾರಣವೇಕಯ್ಯಾ ಶರಣಂಗೆ
ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ,
ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ
ಹೇಳಯ್ಯಾ ನಿಮ್ಮ ಧರ್ಮ. /8
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ,
ಸಂದು ಭೇದವಳಿವ ಪರಿ ಎಂತು ಹೇಳಾ
ಅಂಗದಲ್ಲಿ ಸಂಗವ ಮಾಡಿಹೆನೆಂದಡೆ,
ಮುಂದುಗೆಡಿಸಿ ಕಾಡುವನು ಶಿವನು.
ಕಾಮವೆಂಬ ಬಯಕೆಯಲ್ಲಿ
ಅಳಲಿಸುವ ಬಳಲಿಸುವ ಶಿವನು.
ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ,
ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು.
ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು.
ಕೂಡಲಸಂಗಮದೇವರ ಬೆರಸುವಡೆ,
ಭಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ./9
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಛೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು
ಲಿಂಗಪಥವ ತಪ್ಪಿ ನಡೆವವರು
ಜಂಗಮಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವಾ./10
ಅಂಗಯ್ಯ ಒಳಗಣ ಲಿಂಗವ ನೋಡುತ್ತ,
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ
ನೋಟವೆ ಪ್ರಾಣವಾಗಿ ಎಂದಿಪ್ಪೆನೊ
ಕೂಟವೇ ಪ್ರಾಣವಾಗಿ ಎಂದಿಪ್ಪೆನೊ
ಎನ್ನ ಅಂಗವಿಕಾರದ ಸಂಗವಳಿದು,
ಕೂಡಲಸಂಗಯ್ಯಾ, ಲಿಂಗ ಲಿಂಗವೆನುತ್ತ./11
ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವಾ. /12
ಅಂಗವಿಕಾರವಳಿದು ಸತಿಯ ಸಂಗವರಿಯ ನೋಡಾ,
ದೇಹಗುಣಂಗಳಿಲ್ಲಾಗಿ ನಿರ್ದೆಹಪ್ರಸಾದಿ ನೋಡಯ್ಯಾ,
ಅಶನವ್ಯಸನಾದಿಗಳೆಲ್ಲವು ಬೆಂದವು ನೋಡಯ್ಯಾ.
ಈ ಎಲ್ಲ ಗುಣಂಗಳಳಿದು ಕೂಡಲಸಂಗಮದೇವರಲ್ಲಿ
ಸಾವಧಾನಿ ಪ್ರಸಾದಿ ಚೆನ್ನಬಸವಣ್ಣನು. /13
ಅಂಗುಲ ಹನ್ನೆರಡು ಕೂಡಲು ಒಂದು ಗೇಣು,
ಗೇಣು ಎರಡು ಕೂಡಲು ಒಂದು ಮೊಳ,
ಮೊಳವೆರಡು ಕೂಡಲು ಒಂದು ಹಸ್ತ,
ಹಸ್ತವೆರಡು ಕೂಡಲು ಒಂದು ಮಾರು,
ಮಾರೆರಡು ಕೂಡಲು ಒಂದು ಜಂಘೆ,
ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ,
ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ,
ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ,
ಹರದಾರಿ ನಾಲ್ಕು ಕೂಡಲು ಒಂದು ಯೋಜನ,
ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು
ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು.
ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ
ಕೂಡಲಸಂಗಯ್ಯಾ
ನಿಮ್ಮೊಳು ಕಂಡು ಸುಖಿಯಾಗಿರ್ದೆನು./14
ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹವಯ್ಯಾ,
ಬಂದಹರಯ್ಯಾ ಪುರಾತರೆನ್ನ ಮನೆಗೆ,
ಬಂದಹರಯ್ಯಾ ಶರಣರೆನ್ನ ಮನೆಗೆ.
ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ,
ಶಿವಾರ್ಚನೆಯ ಮಾಡುವೆ,
ಕೂಡಲಸಂಗಮದೇವಯ್ಯಾ, ನಿಮ್ಮ ಮುಂದೆ./15
ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ,
ಆಳಿನಾಳು ಕೀಳಾಳು ಬಹರೆ
ಹೋಗದಿರು, ಹೋಗದಿರು, ಕೂಡಲಸಂಗಮದೇವಾ. /16
ಅಂಜದಿರು ಅಳುಕದಿರು,
ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು.
ಏನೊ ಎಂತೊ ಎಂದು ಚಿಂತಿಸದಿರು,
ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ. /17
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ. /18
ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ !
ನಾದಬಿಂದುಕಳಾತೀತ, ಆದಿಯಾಧಾರ ನೀನೆ ಅಯ್ಯಾ !
ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ !/19
ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ. /20
ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,
ಮೃಡ ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು-
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ./21
ಅಂದಾ ತ್ರಿಪುರವನುರುಹಿದಾತ ವೀರ,
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ,
ಕಡುಗಲಿ ನರಸಿಂಹನನುಗಿದಾತ ವೀರ,
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,
ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ./22
ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ’ಬವಂಗೆ,
ದಿನವಿಂದೇ ‘ಹರ ಶರಣೆಂ’ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ./23
ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ,
ವೀರರ ನಿಗ್ರಹಿಸಿ ನೀರು ಮಾಡಿ, ಧೀರರ ಧೃತಿಗೆಡಿಸಿ,
ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ,
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ,
ಕೂಡಲಸಂಗಮದೇವಾ./24
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ./25
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ,
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ,
ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ
ಪರಲೋಕದೂರನ ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ/26
ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ /27
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ,
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,
ಜಂಗಮವಾಪ್ಯಾಯನವಾದಡೆ ಲಿಂಗ ಸಂತ್ಟುಯಹುದಯ್ಯಾ.
ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಅಹಂ ತುಷ್ಟೋಡಿಸ್ಮ್ಯುಮಾದೇವಿ ಉಭಯೋರ್ಲಿಂಗಜಂಗಮಾತ್
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮವಾಪ್ಯಾಯನವಾದಡೆ ಲಿಂಗಸಂತ್ಟು./28
ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ
ಸರ್ವಶುದ್ಧವೆಂಬ ಗೋಮಯವ ತಂದು,
ವಿನಯಾರ್ಥವೆಂಬ ಉದಕದಿಂದ ಸಮ್ಮಾರ್ಜನೆಯಂ ಮಾಡಿ
ತನುವಿನ ಅವಗುಣಂಗಳಂ ಹುಡಿಗುಟ್ಟಿ ರಂಗವಾಲೆಯನಿಕ್ಕಿ,
ಅಕ್ಷಯವೆಂಬ ಬಿಂದಿಗೆಯಲ್ಲಿ ಪರಮಾನಂದವೆಂಬ ಅಗ್ಫವಣಿಯ ತುಂಬಿ,
ಸಮರಸದಿಂದ ಮಜ್ಜನಕ್ಕೆರೆಯಲು
ಹೃದಯಕಮಲವೆಂಬ ಪುಷ್ಪಮಂ ಸಲಿಸಿ,
ಸೌಖ್ಯತರ ಶಾಂತಿಯೆಂಬ ಗಂಧವನಿಟ್ಟು,
ಅಕ್ಷಯವೆಂಬ ಅಕ್ಷತೆಯನಳವಡಿಸಿ,
ಸದ್ಭಾವವೆಂಬ ಧೂಪಮಂ ಬೀಸಿ, ಸುಜ್ಞಾನವೆಂಬ ನಿವಾಳಿಯನೆತ್ತಿ
ನಿತ್ಯನಿರಂಜನವೆಂಬ ನೀರಾಜನಮಂ ಬೆಳಗಲು,
ಬ್ರಹ್ಮನಾದವೆಂಬ ಘಂಟೆಯಂ ಬಾರಿಸಲು
ನಿತ್ಯಲಿಂಗಾರ್ಚನೆಗೆಡೆಮಾಡಲು,
ಇದರ ವರ್ಮಕರ್ಮಸ್ಥಿತಿಯನರಿದು ಶಿವಲಿಂಗಾರ್ಚನೆಯ ಮಾಡಬಲ್ಲಡೆ,
ಮತ್ರ್ಯದಲ್ಲಿ ನಾನಾರನೂ ಕಾಣೆನು.
ಕೂಡಲಸಂಗಮದೇವಾ,
ಪ್ರಭು ಶಿವಲಿಂಗಾರ್ಚನೆಯಂ ಮಾಡಲು, ನಾನೆ ಪರಿಚಾರಕನು./29
ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು,
ಬಚ್ಚ ಬರಿಯ ಮಾತನಾಡುವೆನು.
ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ.
ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ./30
ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು./31
ಅಜ್ಞಾನ ಹಿಂಗಿತ್ತು, ಅಹಂಕಾರವಡಗಿತ್ತು,
ಅರಿಷಡ್ವರ್ಗಂಗಳು ಹರಿಹಂಚಾದವು,
ಅಷ್ಟಮದಂಗಳು ಪಟ್ಟಪರಿಯಾದವು,
ದಶವಾಯುಗಳು ವಶವರ್ತಿಯಾದವು,
ಇಂದ್ರಿಯಂಗಳು ಬಂಧನವಡೆದವು,
ಮನೋವಿಕಾರ ನಿಂದಿತ್ತು.
ಕೂಡಲಸಂಗಮದೇವಾ,
ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ
ನಿರ್ವಾಣದ ಸಹಜ ನಿಲವ ಕಂಡು,
ನಮೋ ನಮೋ ಎನುತಿರ್ದೆನಯ್ಯಾ, ಪ್ರಭುವೆ./32
ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ,
ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ,
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ,
ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ,
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ,
ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ,
ಅಜ್ಞಾನದಿಂದ ಹುಟ್ಟಿತ್ತು ಸಂಸಾರ,
ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ,
ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚು,
ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ,
ಕೂಡಲಸಂಗಮದೇವಾ, ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ
ನಿಮ್ಮನೊಡಗೂಡಬಾರದಯ್ಯಾ./33
ಅಟ್ಟಟ್ಟಿಕೆಯ ಮಾತನಾಡಲದೇಕೋ
ಮುಟ್ಟಿ ಬಂದುದಕ್ಕಂಜಲದೇಕೋ
ಕಾದಿದಲ್ಲದೆ ಮಾಣೆನು, ಓಡಿದಡೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ./34
ಅಡವಿಯಲೊಬ್ಬ ಕಡು ನೀರಡಿಸಿ,
ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯಾ.
ಕುರುಡ ಕಣ್ಣ ಪಡೆದಂತೆ,
ಬಡವ ನಿಧಾನವ ಹಡೆದಂತಾಯಿತ್ತಯ್ಯಾ.
ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ./35
ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
`ಅಂಬೆ ಅಂಬೆ’ ಎಂದು ಕರೆವುತ್ತಲಿದ್ದೇನೆ,
`ಅಂಬೆ ಅಂಬೆ’ ಎಂದು ಒರಲುತ್ತಲಿದ್ದೇನೆ,
ಕೂಡಲಸಂಗಮದೇವ `ಬಾಳು ಬಾಳೆಂಬನ್ನಕ್ಕ./36
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ.
ಬಡವನೆಂದೆನ್ನ ಕಾಡದಿರಯ್ಯಾ.
ಎನಗೆ ಒಡೆಯರುಂಟು ಕೂಡಲಸಂಗನ ಶರಣರು./37
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ,
ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ !
ಮುಂದೆ ಪಥಕ್ಕೆ ಸಲ್ಲರು.
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ,
ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ
ಕೂಡಲಸಂಗಮದೇವಾ /38
ಅಡಿಗಡಿಗೆ ಲಿಂಗವನಡಿಯಡರಿ ನೋಡಿ ನೋಡಿ,
ಕಂಗಳು ಕಡೆಗೋಡಿವರಿದವೆನಗಯ್ಯಾ, ಎನ್ನ ಅಶ್ರುಜಲಂಗಳು !
ಆಲಿಕಲ್ಲ ರೂಹಿನಂತೆ, ಅರಗಿನ ಪುತ್ಥಳಿಯಂತೆ
ತನು ಪುಳಕಿತವಾದ ಬೆಮರ ಬಿಂದುಗಳೆಲ್ಲಾ !
ಕೂಡಲಸಂಗನ ದರ್ಶನಸ್ಪರ್ಶದಿಂದ
ಮನವೊಲಿದು ನೆರೆವ ಭರವನೇನ ಹೇಳುವೆನಯ್ಯಾ./39
ಅಡಿಗಡಿಗೆ ಸ್ಥಾನನಿದಿ, ಅಡಿಗಡಿಗೆ ದಿವ್ಯಕ್ಷೇತ್ರ,
ಅಡಿಗಡಿಗೆ ನಿದಿಯು ನಿಧಾನ ನೋಡಯ್ಯಾ !
ಆತನ ಇರವೆ ವಾರಣಾಸಿ, ಅವಿಮುಕ್ತಿ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ./40
ಅಡ್ಡ ತ್ರಿಪುಂಡ್ರದ, ಮಣಿಮಕುಟವೇಷದ
ಶರಣರ ಕಂಡಡೆ ನಂಬುವುದೆನ್ನ ಮನವು,
ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ.
ಇವಿಲ್ಲದವರ ಕಂಡಡೆ ನಂಬೆ ಕೂಡಲಸಂಗಮದೇವಾ./41
ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ./42
ಅಡ್ಡದೊಡ್ಡ ನಾನಲ್ಲಯ್ಯಾ, ದೊಡ್ಡ ಬಸುರನಲ್ಲಯ್ಯಾ,
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ.
ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ
ಬೋಧಿಸಲು, ಪ್ರಾಥರ್ಿಸಲು ಮುನ್ನ ನಾನರಿಯೆನಯ್ಯಾ,
ದೊಡ್ಡತನವೆನಗಿಲ್ಲಯ್ಯಾ, ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ.
ಅನಾಥ ನಾನಯ್ಯಾ, ಕೂಡಲಸಂಗಮದೇವಾ./43
ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು
ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ.
ನಂಟುಭಕ್ತಿ ನಾಯಕನರಕ,
ಕೂಡಲಸಂಗಮದೇವಾ. /44
ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ./45
ಅದುರಿತು ಪಾದಾಘಾತದಿಂದ ಧರೆ,
ಬಿದಿರಿದುವು ಮಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ !
ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ ಭುಜಪರಿಘರುಗ್ಣಗ್ರಹಗಣಂ
ಮುಹುರ್ದ್ಯೌದೌರ್ದಾಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ
ಜಗದ್ರಕ್ಷಾಯೈ ತ್ವಂ ನಟಸಿ ನನು ವಾಮೈವ ವಿಭುತಾ
ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ./46
ಅದ್ವೈತವ ಅಂತರಂಗದಲ್ಲಿ ಅರಿದು
ಹೊರಗೆ ದಾಸೋಹವ ಮಾಡದಿರ್ದಡೆ
ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು
ನಿಮ್ಮ ಶರಣರ ಮನ ನೊಂದಲ್ಲಿ
ನಾನು ಸೈರಿಸಿಕೊಂಬೆನೆಂತಯ್ಯಾ
ಕೂಡಲಸಂಗಮದೇವಾ,
ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ./47
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ.
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸುದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾುತ್ತು, ತಂದೆಯ ಹೆಸರಿಲ್ಲ
ಕೂಡಲಸಂಗಮದೇವಾ./48
ಅನಾಯಸದಿಂದ ಮನೆಯ ಮಾಡಿ,
ನಿರಾಯಾಸದಿಂದ ಪರಮಸುಖಿ !
ರೂಪಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟ ಘನ.
ಇಂತಹ ಸಹಜಸಂಗಿಯ ನಿಲವಿನ ಪರಿ;
ಉದಕದೊಳಗಣ ಬಿಂದು ಉದಯರತ್ನದಂತೆ
ಕೂಡಲಸಂಗನ ಶರಣರ ನಿಲವು. /49
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ!
ನಿಮ್ಮ ಧರ್ಮದ ಕವಿಲೆಯಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಮನೆಯ ಮಗ ನಾನಯ್ಯಾ./50
ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ./51
ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು,
ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು,
ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು,
ಅನುಭಾವವಿಲ್ಲದ ಏನನೂ ಅರಿಯಬಾರದು.
ತನ್ನಲ್ಲಿ ತಾ ಸನ್ನಿಹಿತವುಳ್ಳಡೆ
ಶಿವಶರಣರ ಸಂಗವೇತಕ್ಕೆನಲುಂಟೆ
ಕೂಡಲಸಂಗಮದೇವಯ್ಯಾ,
ನಿಮ್ಮ ಅನುಭಾವ
ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ /52
ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ;
ಅನ್ಯದೈವದ ಮಾತನಾಡಲಾಗದು,
ಅನ್ಯದೈವದ ಪೂಜೆಯ ನೋಡಲಾಗದು,
ಸ್ಥಾವರಲಿಂಗಕ್ಕೆರಗಲಾಗದು,
ಆ ಲಿಂಗದ ಪ್ರಸಾದವ ಕೊಳಲಾಗದು,
ಇಷ್ಟು ನಾಸ್ತಿಯಾದಡೆ
ಅನ್ಯದೈವವ ಬಿಟ್ಟು ಭಕ್ತನೆನಿಸುವನು.
ಇವರೊಳಗನುಸರಣೆಯ ಮಾಡಿದನಾದಡೆ,
ಕುಂಬಿಪಾಕ ನಾಯಕನರಕದಲ್ಲಿಕ್ಕುವ
ನಮ್ಮ ಕೂಡಲಸಂಗಮದೇವರು./53
ಅನ್ಯವಿಚಾರವ ಮರೆದು ನಿಮ್ಮ ವಿಚಾರವೆಡೆಗೊಂಡಿತ್ತಾಗಿ,
ಪ್ರಾಣದ ನೆಲೆಗೆಟ್ಟಿತ್ತಯ್ಯಾ,
ದಶವಾಯುಗಳ ಸಂಚ ತಪ್ಪಿತ್ತಯ್ಯಾ,
ಕರಣಂಗಳ ಲಿಂಗಕಿರಣಂಗಳು ನುಂಗಿದವಯ್ಯಾ,
ಒಳಗೆ ಕರತಳಾಮಳಕಗೊಂಡೆನಯ್ಯಾ,
ಹೊರಗೆ ಅದೆಂತೆಂದರಿಯದೆ ನೀನೆ ಗತಿಯಾಗಿದ್ದೆ,
ಕೂಡಲಸಂಗಮದೇವಾ./54
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ
ಮತ್ತಾ ಶ್ವಪಚಯ್ಯನ ಸನ್ನಿಧಿುಂದ
ಭಕ್ತಿಯ ಸದ್ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲಿ ಜನಿುಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ/55
ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ/56
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವಾ./57
ಅಮೂಲ್ಯನಪ್ರಮಾಣನಗೋಚರಲಿಂಗ,
ಆದಿಮಧ್ಯಾವಸಾನಗಳಿಲ್ಲದ ಸ್ವತಂತ್ರಲಿಂಗ,
ನಿತ್ಯನಿರ್ಮಳಲಿಂಗ,
ಅಯೋನಿಸಂಭವ ನಮ್ಮ ಕೂಡಲಸಂಗಮದೇವರು./58
ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಬಿರಾಜ ಮರುತಾದೇವಿಗೆ ಹುಟ್ಟಿದಾತನರುಹ
ಇವರೆಲ್ಲರು ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೊ ! /59
ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,
ದೇವರೆಂಬವರೆತ್ತ ಹೋದರೇನಿಂ ಭೋ
ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ
ಕೂಡಲಸಂಗಯ್ಯ ದೇವರಿಗೆ ದೇವನು,
ಇವರೆಲ್ಲ ಆಳೆಂಬುದನರಿಯಿರಿಂ ಭೋ ! /60
ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ,
ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ,
ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯ ಮೇಲೆ,
ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ. /61
ಅಯ್ಯಾ ! ನೀನೆಂದಡೆ ಏನೆಂಬೆನು
ನಿನ್ನ ಹಂಗೇನು ಹರಿಯೇನು
ನಿನ್ನ ಮುಖದಲ್ಲಿ ಒಂದಗುಳು ಸವೆಯದು.
ನಿನ್ನ ಪ್ರಸಾದವ ಕೊಂಡೆನ್ನ ಭವಕ್ಕೆ ಬೀಜವಾಯಿತ್ತು.
ಜಂಗಮವೆ ಲಿಂಗವೆಂದು ಒಕ್ಕುದ ಕೊಂಡಡೆ
ಎನ್ನ ಭವಂ ನಾಸ್ತಿಯಾಯಿತ್ತು ಕೂಡಲಸಂಗಮದೇವಾ./62
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ./63
ಅಯ್ಯಾ ನೀ ಒಲಿದಡೆ
ಹುಚ್ಚನೆಂದೆನಿಸಿ ಕಲ್ಲಲಿಡಿಸಿ,
ಎಲ್ಲರ ಕೈಯ್ಯಲು ಸುಡಿಸಿ,
ನಿನ್ನ ನಚ್ಚಿದವರನ್ನೆಲ್ಲ [ಬ]ಡಿಸು
ಕೂಡಲಸಂಗಮದೇವಾ./64
ಅಯ್ಯಾ, ಅಯ್ಯಾ, ಎಂದು ಕರೆವುತ್ತಲಿದ್ದೇನೆ.
ಅಯ್ಯಾ, ಅಯ್ಯಾ, ಎಂದು ಒರಲುತ್ತಲಿದ್ದೇನೆ.
ಓ ಎನ್ನಲಾಗದೆ ಅಯ್ಯಾ
ಆಗಳೂ ನಿಮ್ಮ ಕರೆವುತ್ತಲಿದ್ದೇನೆ
ಮೋನವೇ ಕೂಡಲಸಂಗಮದೇವಾ./65
ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ,
ಎನ್ನ ಮನದಲ್ಲಿ ತನ್ನ ನಿಲವ ತೋರಿದ,
ಎನ್ನ ಅರಿವಿನಲ್ಲಿ ನಿಮ್ಮ ತೋರಿದ,
ಇಂತೀ ತ್ರಿವಿಧಸ್ವಾಯತವನು
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನ ಕರುಣದಿಂದ
ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ. /66
ಅಯ್ಯಾ, ಎನ್ನ ಕೈಯ ದರ್ಪಣ [ಸಂದಿತ್ತು],
ಆಸ್ಥಾನದ ಜ್ಯೋತಿ ನಂದಿತ್ತು,
ಸರಸ್ವತಿಯ ಭಂಡಾರ ಸೂರೆಹೋಯಿತ್ತು,
ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು.
ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು, ನಾನೆಲ್ಲಿ
ಅರಸುವೆನು ಕೂಡಲಸಂಗಮದೇವಯ್ಯ
ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು /67
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ./68
ಅಯ್ಯಾ, ಎಳಗರು ತಾಯನರಸಿ ಬಳಲುವಂತೆ
ನಾ ನಿಮ್ಮನರಸಿ ಬಳಲುತ್ತಿದ್ದೇನೆ.
ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನವಾಗಿ ಕಾರುಣ್ಯವ ಮಾಡು.
ಅಯ್ಯಾ, ನೀವೆನ್ನ ಮನಕ್ಕೆ ನೆಲೆವನೆಯಾಗಿ
ಕಾರುಣ್ಯವ ಮಾಡು, ಕಾರುಣ್ಯವ ಮಾಡು.
ನೀನಿನಿತು ಲೇಸನೀಯಯ್ಯಾ,
ಅಂಬೇ ಅಂಬೇ ಕೂಡಲಸಂಗಮದೇವಾ./69
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. #
ಅಂಗದ ನಮಾಫಟವು ಸಿಂಗದ ಗಾತ್ರವು,
ಹಿಂಗದು ಮನದಲ್ಲಿ ನಾನಾ ವಿಕಾರವು.
ಬಂದೆಹೆನೆಂದರಿಯಲಿಲ್ಲಾಗಿ, ಸಂದೇಹ ಬಿಡದಾಗಿ,
ಮುಂದುಗಾಣದು ಲೋಕ,
ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ,
ಕೂಡಲಸಂಗಮದೇವಾ./70
ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು
ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ.
ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು
ಹರಹಿಕೊಂಡಿದ್ದೆನಯ್ಯಾ ದಾಸೋಹವನು.
ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು,
ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ,
ಹಿಂದಣ ಸಂದೇಹ ಸೂತಕ ಹಿಂಗಿತ್ತು.
ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ,
ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ. /71
ಅಯ್ಯಾ, ನಾನು ದಾಸೋಹವ ಮಾಡುವೆನಲ್ಲದೆ, ಸಮಯವನರಿಯೆ,
ಅಯ್ಯಾ, ನಾನು ಭಕ್ತಿಯ ಮಾಡುವೆನಲ್ಲದೆ, ಭಾವವನರಿಯೆ.
ಸ್ಥಳಕುಳವ ವಿಚಾರಿಸಿದಡೆ, ಎನ್ನಲ್ಲಿ ಏನೂ ಹುರುಳಿಲ್ಲ,
ನಿಮ್ಮ ಶರಣರ ಸೋಂಕಿನಲ್ಲಿ ಶುದ್ಧನಾದೆನು.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು./72
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತಯ್ಯಾ,
ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು
ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ./73
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತಯ್ಯಾ,
ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು
ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ. /74
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಮೀನಜ, ರೋಮಜ ಮಹಾಮುನಿಗಳ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ನವಕೋಟಿಬ್ರಹ್ಮರಿಗೆ
ಪ್ರಳಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಅನಂತಕೋಟಿರುದ್ರರಿಗೆ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಎನ್ನನೇಳೇಳು ಭವಕ್ಕೆ ತಂದಲ್ಲಿ,
ಆನುಭಯಲಿಂಗಜಂಗಮದ ಮೊರೆಹೊಕ್ಕು
ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ./75
ಅಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದೆನ್ನ
ತನು ಶುದ್ಧವಾಯಿತ್ತು, ಮನ ಶುದ್ಧವಾಯಿತ್ತು, ಧನ ಶುದ್ಧವಾಯಿತ್ತು,
ಎನ್ನ ಸರ್ವಾಂಗಶುದ್ಧವಾಯಿತ್ತು,
ವಾರಿಕಲ್ಲ ಪುತ್ಥಳಿಯನಪ್ಪಿಕೊಂಡಂತಾಯಿತ್ತು.
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರ ಕೃಪೆಯಿಂದ
ಎನಗೊದಗಿದ ಘನವನೇನೇಂದುಪಮಿಸುವೆ/76
ಅಯ್ಯಾ, ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು.
ಶಿವಧೋ ಶಿವಧೋ ! ಕಂಗಳಶ್ರುಗಳಲ್ಲಿ ಮುಂದುಗಾಣೆನು.
ಲಿಂಗಸಂಗಿಗಳನಗಲಿ ಆನೆಂತು ಬದುಕುವೆ,
ಕೂಡಲಸಂಗಮದೇವಾ./77
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು
ಪೂರ್ವಾಚಾರಿಯಾದೆನಯ್ಯಾ.
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು
ವೃಷಭನಾದೆನಯ್ಯಾ.
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಸಂಗನಬಸವಣ್ಣನಾಗಿ,
ಗೊಹೇಶ್ವರನ ಶರಣನ ಮಹಾಬಸುರೊಳಗೆ ಕಂದನಾಗಿರ್ದೆ
ಕಾಣಾ, ಕೂಡಲಸಂಗಮದೇವಾ./78
ಅಯ್ಯಾ, ನಿಮ್ಮ ವಂಶವಳಿಯಲು ಒಬ್ಬ ತೊತ್ತಿನ ಮಗ ಹುಟ್ಟಿದ.
ಆತನ ತೊತ್ತಿನ ಮಗ ನಾನಯ್ಯಾ,
ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ, ಎನ್ನ ತೊತ್ತುತನಕ್ಕೆ ಕೇಡಿಲ್ಲ./79
ಅಯ್ಯಾ, ನಿಮ್ಮ ಶರಣನ ಮತ್ರ್ಯಕ್ಕೆ ತಂದೆಯಾಗಿ
ನೆನೆದು ಸುಖಿಯಾಗಿ ಆನು ಬದುಕಿದೆಯ್ಯಾ,
ಅದೇನು ಕಾರಣ ತಂದೆಯೆಂದರಿದೆನಯ್ಯಾ,
ಎನ್ನ ಕಾರಣ ತಂದೆಯೆಂದರಿದೆನಯ್ಯಾ,
ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು
ಕಣ್ದೆರೆದೆನಯ್ಯಾ, ಕೂಡಲಸಂಗಮದೇವಾ. #
ಆನು ಒಬ್ಬನು, ಸುಡುವರೈವರು,
ಮೇಲೆ ಕಿಚ್ಚು ಘನ, ನಿಲಲುಬಾರದು.
ಕಾಡ ಬಸವನ ಹುಲಿ ಕೊಂಡೊಯ್ದಡೆ
ಆರೈಯಲಾಗದೆ ಕೂಡಲಸಂಗಮದೇವಾ/80
ಅಯ್ಯಾ, ನಿಮ್ಮ ಶರಣರ ಕಂಡ ಕಡು ಸುಖವನೇನೆಂಬೆನಯ್ಯಾ
ಅದು ಸಾಲೋಕ್ಯದಂತುಟಲ್ಲ, ಸಾಮೀಪ್ಯದಂತುಟಲ್ಲ,
ಸಾರೂಪ್ಯದಂತುಟಲ್ಲ, ಸಾಯುಜ್ಯದಂತುಟಲ್ಲ.
ಕೂಡಲಸಂಗಯ್ಯಾ, ನಿಮ್ಮ ಶರಣರ ಚರಣದ
ದರುಶನ ಸ್ಪರುಶನದಿಂದಾನು ಧನ್ಯನಾದೆನು./81
ಅಯ್ಯಾ, ನಿಮ್ಮ ಶರಣರ ಕಂಡರೆ ಕಡು ಸುಖವೆನಗಯ್ಯಾ,
ಕಾಣದಿರೆ ಅವಸ್ಥೆ ನೋಡಯ್ಯಾ.
ತವಕದ ಸ್ನೇಹ ದರುಶನದಲ್ಲಿ ತರಹರವಾಯಿತ್ತು,
ಕೂಡಲಸಂಗಮದೇವಾ,
ನಿಮ್ಮ ಶರಣರ ಶ್ರೀಪಾದವ ಕಂಡು ಧನ್ಯನಾದೆನು. /82
ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ
ತನುಮನಧನವಲಸದಂತೆ ಮಾಡಯ್ಯಾ,
ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯಾ,
ಮನ ದಾಸೋಹಕ್ಕೆ ಲೀಯವಹಂತೆ ಮಾಡು,
ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು ಕೂಡಲಸಂಗಮದೇವಾ./83
ಅಯ್ಯಾ, ನಿಮ್ಮ ಶರಣರ ನಿಲವ
ಸ್ವರ್ಗ ಮತ್ರ್ಯ ಪಾತಾಳದೊಳಗೆ ಬಲ್ಲವರಿಲ್ಲವಯ್ಯಾ,
ಅಘಟಿತ ಘಟಿತರು, ಅಖಂಡಿತ ಮಹಿಮರು,
ನಿಜದಲ್ಲಿ ನಿರ್ಲೇಪ ಭಾವಕರು.
ಕೂಡಲಸಂಗಮದೇವಾ,
ನಿಮ್ಮ ಶರಣರ ನಿಲವನರಿವಡೆ ನಾನೇತರವನಯ್ಯಾ./84
ಅಯ್ಯಾ, ನಿಮ್ಮ ಶರಣರ ಸಂಗವೆನಗೆ ಪರಮಸುಖವಯ್ಯಾ,
ಅಯ್ಯಾ, ನಿಮ್ಮ ಶರಣರ ಅಗಲಿಕೆ
ಎನ್ನ ಪ್ರಾಣವಿಯೋಗವಯ್ಯಾ,
ಶಿವಶಿವಾ ಸಂತವಿಡುವೆನು, ಇನ್ನೆಂತಯ್ಯಾ
ಎನಗೇನು ಗತಿ, ಕೂಡಲಸಂಗಮದೇವಾ
ನಿಮ್ಮ ಶರಣರ ಮುನಿಸು ಎನಗೆ ಬಿಡಿಸಬಾರದ ತೊಡಕು/85
ಅಯ್ಯಾ, ನಿಮ್ಮ ಶರಣರ ಸಂಗಸುಖವ ಏನೆಂದುಪಮಿಸುವೆನಯ್ಯಾ,
ನಿಮ್ಮ ಶರಣರ ಕೂಡೆ ಸಮಗೋಷ್ಠಿಯ
ಮಾಡುವುದನುಪಮಿಸಲಮ್ಮೆನಯ್ಯಾ.
ಕೂಡಲಸಂಗಾ, ನಿಮ್ಮ ಪ್ರಮಥರೆಲ್ಲರೂ
ನೆರೆದ ಗಣತಿಂಥಿಣಿಯೊಳಗೆನ್ನನೇನೆಂದರಿಯದೆ
ಅಗಲದಂತಿರಿಸಯ್ಯಾ, ನಾ ನಿಮ್ಮ ಧರ್ಮದ ಕವಿಲೆ./86
ಅಯ್ಯಾ, ನಿಮ್ಮ ಶರಣರು ಪರಮಸುಖಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ
ಹೊದ್ದದ ನಿಷ್ಕರ್ಮಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಮನದಲ್ಲಿ ನಿರ್ಲೇಪಜ್ಞಾನಿಗಳಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಘನವನೆನಗೆ ಹೇಳಲು, ನಾನು ಕೇಳಲಮ್ಮದೆ
ನಮೋ ನಮೋ ಎನುತಿರ್ದೆನು ಕಾಣಾ, ಪ್ರಭುವೆ./87
ಅಯ್ಯಾ, ನಿಮ್ಮ ಶರಣರು ಬಂದೆನ್ನ ಅಂಗಳದೊಳಗೆ ರಕ್ಷಿಸಿಹೆವೆಂದಿರಲು
ನಾನು ತೆರಹು-ಮರಹಾಗಿರ್ದು ಕೆಟ್ಟೆನಯ್ಯಾ,
ನಾನು ಕೆಟ್ಟ ಕೇಡಿಂಗೆ ಕಡೆಯಿಲ್ಲವಯ್ಯಾ.
ಕೂಡಲಸಂಗಮದೇವಾ,
ಎನ್ನ ಭಕ್ತಿ ಸಾವಿರ ನೋಂಪಿಯ ನೋಂತು
ಹಾದರದಲ್ಲಿ ಅಳಿದಂತಾಯಿತ್ತಯ್ಯಾ. /88
ಅಯ್ಯಾ, ನಿಮ್ಮ ಶರಣರೆನ್ನ ಪಾವನವ ಮಾಡಿ,
ತಿಳುಹಿ ತಮ್ಮಂತೆ ಎನ್ನ ಮಾಡಿದ ಬಳಿಕ,
ನಾನು ಅವರು ಮಾಡಿದಂತಾದೆನಯ್ಯಾ.
ನಾನೊಬ್ಬನು ನಿಮ್ಮ ಶರಣರ ಬಳಿಬಳಿಯವನು.
ಕೂಡಲಸಂಗನ ಶರಣರು ಮೆಚ್ಚಿ ಎನಗೊಲಿದಡೆ
ನಾನು ಬದುಕಿದೆನಲ್ಲದೆ, ಸಮರಸ ಸಂಗಕ್ಕೆ ಸರಿಯೆ
ಹೇಳಾ ಚೆನ್ನಬಸವಣ್ಣಾ. /89
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ,
ನೀಡಿದಡೆ ಅಕ್ಕಿ ಬೀಳುವಂತೆ ಮಾಡುವಿರಿ,
ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ,
ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ
ಕೂಡಲಸಂಗಮದೇವಾ. /90
ಅಯ್ಯಾ, ನೀ ಮಾಡಲಾದ ಜಗತ್ತು, ಅಯ್ಯಾ ನೀ ಮಾಡಲಾದ ಸಂಸಾರ,
ಅಯ್ಯಾ, ನೀ ಮಾಡಲಾದ ಮರವೆ, ಅಯ್ಯಾ, ನೀ ಮಾಡಲಾದ ದುಃಖ,
ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ.
ಅಯ್ಯಾ ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ
ಕೂಡಲಸಂಗಮದೇವಾ /91
ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ,
ಅಯ್ಯಾ, ನೀನೆನ್ನ ಭವವ ಕೊಂದೆಹೆನೆಂದು
ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ. #
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ.
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು-
ಕೂಡಲಸಂಗಮದೇವಯ್ಯಾ, ನಿಮ್ಮ ಧರ್ಮ./92
ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆ
ನಿಮ್ಮ ನಿಲವ ನೋಡಿಹೆನೆಂದಡೆ
ನಿಮ್ಮ ಘನವೆನ್ನ ಮನಕ್ಕೆ ಸಾಧ್ಯವಾಗದ ಕಾರಣ,
ಅಂತಿಂತೆಂದುಪಮಿಸಲಮ್ಮದೆ ಇದ್ದೆ ನೋಡಯ್ಯಾ,
ನಿತ್ಯತೃಪ್ತಮಹಿಮಾ, ನಿಮಗೆಂದಳವಡಿಸಿದ ಪದಾರ್ಥವ
ಸುಚಿತ್ತದಿಂದವಧರಿಸಿ ಸಲಹಯ್ಯಾ ಪ್ರಭುವೆ,
ಕೂಡಲಸಂಗಮದೇವಾ. /93
ಅಯ್ಯಾ, ಮರದೊಳಗೆ ಅಗ್ನಿ ಇದ್ದಡೇನಯ್ಯಾ,
ಮಥನಿಸಿ ತೋರುವರಿಲ್ಲದನ್ನಕ್ಕರ ಕಾಣಬಹುದೆ
ಜಗದೊಳಗೆ ಕೂಡೆ ಪರಿಪೂರ್ಣ ಶಿವನೆಂದಡೆ
ಅಂತರಂಗದಲ್ಲಿ ಕಾಣಬಹುದೆ
ಆದಿ ಲಿಂಗ ಅನಾದಿ ಶರಣನ ಭೇದವ ತಿಳುಹಿ,
ನಿಜಪ್ರಾಣದೊಳಗಿಪ್ಪ ಸುಜ್ಞಾನಲಿಂಗವ ಕರಸ್ಥಲಕ್ಕೆ ತಂದು,
ಆ ಕರಸ್ಥಲದ ಲಿಂಗವನೆನ್ನ ಸರ್ವಾಂಗದೊಳಗೆ ಪ್ರತಿಷ್ಠಿಸಿ ತೋರಿ,
ನಿತ್ಯ ನಿಜಲಿಂಗೈಕ್ಯವಹ ಹೊಲಬಿನ ಹರಿಬ ತೋರಿ,
ಮತ್ರ್ಯಲೋಕದೊಳಗೆಲ್ಲಾ ಇಂದು ಮೊದಲಾಗಿ
ಪ್ರಾಣಲಿಂಗದ ಘನವ ಹರಹಿ ಶಿವಭಕ್ತಿಯನುದ್ಧರಿಸಿದನು.
ಕೂಡಲಸಂಗಮದೇವರಲ್ಲಿ, ಚೆನ್ನಬಸವಣ್ಣನೆನ್ನನಾಗುಮಾಡಿ ಉಳುಹಿದನಾಗಿ
ಇನ್ನು ಮತ್ರ್ಯಲೋಕಕ್ಕೆ ಬಂದಡೆ ಚೆನ್ನಬಸವಣ್ಣನ ಪಾದದಾಣೆ. /94
ಅಯ್ಯಾ, ರುದ್ರಾಕ್ಷಿಯಿಂದ ಹರಿದೆನು ಭವಪಾಶಂಗಳ,
ಅಯ್ಯಾ, ರುದ್ರಾಕ್ಷಿಯಿಂದ ಮುರಿದೆನು ತನುಗುಣಾದಿಗಳ,
ಅಯ್ಯಾ, ರುದ್ರಾಕ್ಷಿಯಿಂದ ಒರೆಸಿದೆನು ಮಹಾಮಾಯೆಯ,
ಅಯ್ಯಾ, ರುದ್ರಾಕ್ಷಿಯಿಂದ ಕಳೆದೆನು ಪಂಚಮಹಾಪಾತಕವ.
ಅಯ್ಯಾ ಕೂಡಲಸಂಗಮದೇವಾ,
ಶ್ರೀಮಹಾರುದ್ರಾಕ್ಷಿಯಿಂದ ಗೆಲಿದೆನಯ್ಯಾ ಸಕಲದುರಿತಂಗಳನು./95
ಅಯ್ಯಾ, ಶ್ರೀಮಹಾವಿಭೂತಿಯಿಂದ ಕಂಡೆ
ಆ ನಿಮ್ಮ ದಿವ್ಯ ಬೆಳಗಿನ ಹೊಳಹ, ಈ ಎನ್ನ ಕರಸ್ಥಲದೊಳಗೆ.
ಅಯ್ಯಾ, ಶ್ರೀಮಹಾರುದ್ರಾಕ್ಷಿಯಿಂದ ಕಂಡೆ
ಆ ನಿಮ್ಮ ದಿವ್ಯಮೂರ್ತಿಯ ಗೂಢವ, ಈ ಎನ್ನ ಕರಸ್ಥಲದೊಳಗೆ.
ಅಯ್ಯಾ, ಶ್ರೀಮಹಾಪಂಚಾಕ್ಷರಿಯಿಂದ ಕಂಡೆ
ಆ ನಿಮ್ಮ ದಿವ್ಯವಕ್ತ್ರಂಗಳ, ಈ ಎನ್ನ ಕರಸ್ಥಲದೊಳಗೆ.
ನಾ ಬಯಸುವ ಬಯಕೆ ಕೈಸಾರಿತ್ತಿಂದು
ಕೂಡಲಸಂಗಮದೇವಾ. /96
ಅಯ್ಯಾ, ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದಯ್ಯಾ.
ಮಹಾನುಭಾವರ ಸಂಗದಿಂದ
ಶ್ರೀಗುರುವನರಿಯಬಹುದು,
ಲಿಂಗವನರಿಯಬಹುದು, ಜಂಗಮವನರಿಯಬಹುದು,
ಪ್ರಸಾದವನರಿಯಬಹುದು, ತನ್ನ ತಾನರಿಯಬಹುದು.
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು
ಕೂಡಲಸಂಗಮದೇವಾ, ನಿಮ್ಮ ಧರ್ಮ. /97
ಅಯ್ಯಾ, ಹಿಂದೆಯಾನು ಮಾಡಿದ ಮರಹಿಂದ ಬಂದೆನೀ ಭವದಲ್ಲಿ.
ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ,
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ,
ಆ ದಾಸೋಹವೆಂಬ ಮಹಾಗಣಸಂಕುಳದೊಳೆನ್ನನಿರಿಸಿ,
ನಿಮ್ಮ ಭಕ್ತಿಯ ಘನವ ನೀವೆ ಮೆರೆಯಲೆಂದು
ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ ಹೋರಿಸಿ,
ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ,
ಮೂವತ್ತಾರು ಕೊಂಡೆಯವ ಗೆಲಿಸಿ,
ಎಂಬತ್ತೆಂಟು ಪವಾಡಂಗಳಂ ಕೊಂಡಾಡಿ,
ಮತ್ರ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ.
ನಿಮ್ಮ ಮಹಾಗಣಂಗಳು ಮೆಚ್ಚೆ, ಎನ್ನ ಸೂತಕವ ತೊಡೆದೆ
ಪ್ರಭುದೇವರ ಕರುಣದಿಂದ ಪ್ರಾಣಲಿಂಗಸಂಬಂಧ ಸಯವಾಯಿತ್ತು.
ನೀವು ಕಳುಹಿದ ಬೆಸನು ಸಂದಿತ್ತು,
ಉಘೇ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ. /98
ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು
ಮಾತಾಡುವ ಸರಸ ಬೇಡ !
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದಡೆ ಹಲ್ಲು ಹೋಹುದು !
ಕೂಡಲಸಂಗನ ಶರಣರೊಡನೆ ಸರಸವಾಡಿದಡೆ
ಅದು ವಿರಸ ಕಾಣಿರಯ್ಯಾ. /99
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ. /100
ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ,
ಆವರಿಸಿತ್ತಯ್ಯಾ ಲಿಂಗವಂಗವನು,
ಏನೆಂದರಿಯೆನಯ್ಯಾ ಲೋಕಲಾಕಿಕವ.
ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ,
ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ. /101
ಅರಸನ ಕಂಡು ತನ್ನ ಪುರುಷನ ಮರೆದಡೆ
ಮರನನೇರಿ ಕಯ್ಯ ಬಿಟ್ಟಂತಾಯಿತ್ತಯ್ಯಾ.
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖ ಲಿಂಗವಾದ ಕಾರಣ./102
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.
`ತಾರೌ ಅಗ್ಘವಣಿ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
`ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು./103
ಅರಸರು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ
ಆನು ಅಂಜುವಳೇ ಆನು ಸಿರಿಯಕ್ಕನೇ.
ಪರುಷ ಮುಟ್ಟಿದ ಬಳಿಕ ಲೋಹವೇ
ಕೂಡಲಸಂಗಮದೇವ, ಎನ್ನನೊಲ್ಲದಡಾನು ಬದುಕುವೆನೆ /104
ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯಾ.
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ /105
ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ. /106
ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು,
ಬಯಸುವ ಬಯಕೆ ಕೈಸಾರಿದಂತಾಯಿತ್ತು,
ಹಲವು ದಿವಸಕೆ ನಂಟರ ಕಂಡಂತಾಯಿತ್ತು.
ಅಂದೊಮ್ಮೆ ಅನಿಮಿಷಂಗೆ ಕೋಳುಹೋದ ಲಿಂಗವೆಂದು
ಉಮ್ಮಹದಿಂದ ಮಂಗಳಾರತಿಯ ಬೆಳಗಿ,
ನವರತ್ನದ ಹಾರ ತೋರಣವ ಕಟ್ಟಿ,
ಸಂತೋಷದಿಂದೆನ್ನ ಮನವು ತೊಟ್ಟನೆ ತೊಳಲಿ,
ತಿಟ್ಟನೆ ತಿರುನಗೆಫ, ದೃಷ್ಟವ ಕಂಡೆನಯ್ಯಾ.
ಬಿಟ್ಟು ಹಿಂಗಿದವೆನ್ನ ಭವಮಾಲೆಗಳು,
ಗೋಹೇಶ್ವರನ ಶರಣ ಪ್ರಭುದೇವರ ಕರಸ್ಥಲದೊಳಗೆ,
ಕೂಡಲಸಂಗಮದೇವರೆಂಬ ಲಿಂಗವ ಕಂಡೆನಾಗಿ./107
ಅರಿದರಿದರಿದು !
ಸಮಗಾಣಿಸಬಾರದು, ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದಡೆ
ಈಶ್ವರನು ಒಡೆಯಿಕ್ಕದೆ ಮಾಣುವನೆ
ಪಾತ್ರ ಅಪಾತ್ರವೆಂದು ಕಂಡಡೆ ಶಿವನೆಂತು ಮೆಚ್ಚುವನು
ಜೀವ ಜೀವಾತ್ಮವ ಸರಿಯೆಂದು ಕಂಡಡೆ
ಸಮವೇದಿಸದಿಪ್ಪನೆ ಶಿವನು
ತನ್ನ ಮನದಲ್ಲಿ `ಯತ್ರ ಜೀವಃ ತತ್ರ ಶಿವ’ನೆಂದು ಸರ್ವಜೀವದಯಾಪಾರಿಯಾದಡೆ, ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ /108
ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು,
ಒಂದಹುದು ಒಂದಾಗದೆಂಬ ಭ್ರಮೆಯವನಲ್ಲ,
ಬೇಕು ಬೇಡೆಂಬ ಜಂಜಡದವನಲ್ಲ,
ಎಡೆವರಿಯದ ನೋಟ, ನುಡಿಯ ಸಡಗರವರತು
ಎಡೆಯಾಟ ಕೋಟಲೆಯ ಕಳೆಯ ಬಂದನು,
ನೋಡುವರ ಮನದ ಸುಖದ ಸಾಗರನಿಧಿಯನೇನೆಂದುಪಮಿಸುವೆನು
ಎನ್ನ ಉಭಯಕರ್ಮವ ಕಳೆದು ತನ್ನೊಳಗೆ ಇಂಬಿಟ್ಟುಕೊಳಬಂದನು,
ಕೂಡಲಸಂಗಮದೇವ, ಕೃಪಾಮೂರ್ತಿ./109
ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ,
ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು
ಉದಯವಪ್ಪುದೆಂಬ ಶ್ರುತಿ ಹುಸಿಯೆ
ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ ಮಥನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ. /110
ಅರಿದುದ ಅರಿಯಲೊಲ್ಲದು, ಅದೆಂತಯ್ಯಾ !
ಮರೆದುದ ಮರೆಯಲೊಲ್ಲದು, ಅದೆಂತಯ್ಯಾ !
ಅರಿದು ಮರೆದ ಮನವ
ಕೂಡಲಸಂಗಯ್ಯ ಬಲ್ಲ. /111
ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳ ಬರಿಸಿದೆ ತಂದೆ,
ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?
ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !
ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ./112
ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ,
ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ,
ನಿರ್ನಾಮವಾಯಿತ್ತು, ನಿಃಪತಿಯಾಯಿತ್ತು,
ಅಗಮ್ಯದಲ್ಲಿ ಗಮನ ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು./113
ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ ಸರ್ವನಿವಾಸಿಯಾಗಿರ್ದೆನು. /114
ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ,
ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ.
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ. /115
ಅರಿವಿಂದಲರಿವೆನೆಂದಡೆ ಅರಿವಿಂಗಸಾಧ್ಯ,
ಅರಿಯದೆ ಅರಿದ ಪರಿ ಎಂತಯ್ಯಾ
ಭಾವಿಸಿ ಬೆರೆಸುವೆನೆಂದಡೆ ಭಾವ ನಿರ್ಭಾವವೆಂದುದಾಗಿ
ಮತ್ತೆ ಭಾವಿಸಿಯಲ್ಲದೆ ಕಾಣಬಾರದಯ್ಯಾ.
ವಾಙ್ಮನಕ್ಕಗೋಚರವೆಂದಡೆ
ನುಡಿಯಲಿಲ್ಲದೆ ನಡೆ ಸಾಧ್ಯವಹ ಪರಿ ಎಂತು ಹೇಳಯ್ಯಾ
ಹಲವು ಮಾತಿನ ನಿಲವು ಒಂದೆಂಬ
ನುಡಿಗಡಣದ ನಿಜವ ಬಲ್ಲವರಾರು ಹೇಳಯ್ಯಾ
ನಿಮ್ಮ ಮಾತೆಂಬ ಪರತತ್ವವೊಂದಲ್ಲದೆ ಎರಡುಂಟೆ
ಕೂಡಲಸಂಗಮದೇವ ಕಡೆಮುಟ್ಟ ನೋಡುವಡೆ
ನುಡಿಗೆಡೆಯಿಲ್ಲ, ಕೃಪೆಯಿಂದ ಕರುಣವ ಮಾಡಯ್ಯಾ ಪ್ರಭುವೆ. /116
ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ,
ಅರಿವು ನೆರೆ ಕೂಡಿ, ಆ[ಚಾ]ರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ,
ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗದ ಘನವೆಂತೆಂದಡೆ:
ಮತ್ಸ್ಯನುಂಗಿದ ಮಾಣಿಕ್ಯದಂತೆ,
ಮುತ್ತುನುಂಗಿದ ನೀರಿನಂತೆ,
ಕಣ್ಣಾಲಿ ನುಂಗಿದ ನೋಟದಂತೆ,
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ
ಸ್ವಯಾನುಭಾವಿಗಳ ಅನುಭಾವವ ತೋರಿ ಬದುಕಿಸಾ,
ಕೂಡಲಸಂಗಮದೇವಾ. /117
ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು,
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು,
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ,
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ ಕೂಡಲಸಂಗಮದೇವಾ. /118
ಅರಿವಿಲ್ಲದ ಕಾಯವುಂಟೆ ಅರಿವಿಲ್ಲದ ಪ್ರಾಣವುಂಟೆ
ಅರಿವಿಲ್ಲದ ನಿಲವುಂಟೆ ಭಾವವಿಲ್ಲದ ಭಕ್ತಿಯುಂಟೆ
ಕೂಡಲಸಂಗಮದೇವಾ, ನೀವು ಪರಿಪೂರ್ಣರಾಗಿಪ್ಪಿರಾಗಿ,
ಅವಗುಣಕ್ಕೆ ತೆರಹಿಲ್ಲ./119
ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು./120
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ./121
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ಆನಿದ್ದೇನಯ್ಯಾ.
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮ ಒಲವಿಲ್ಲದಂತೆ ಆನಿದ್ದೇನಯ್ಯಾ.
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ,
ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ./122
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ,
ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ,
ಕೂಡಲಸಂಗನ ಶರಣರಲ್ಲಿ
ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ./123
ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಬನಕ್ಕ.
ಅರೆದಡೆ ಸಣ್ಣವಾಗಿ, ಒರೆದಡೆ ಬಣ್ಣವಾದಡೆ
ಕೂಡಲಸಂಗಮದೇವನೊಲಿದು ಸಲಹುವನು. /124
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ./125
ಅರ್ಥ ಪ್ರಾಣ ಅಬಿಮಾನವನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ.
ಆದಿರುದ್ರನ ಮಗಳು ಆದಿಶಕ್ತಿ,
ಆದಿಶಕ್ತಿಯ ಮಗ ವಿಷ್ಣು,
ವಿಷ್ಣುವಿನ ಅರ್ಧಾಂಗಿ ಲಕ್ಷ್ಮಿ.
ಈ ತೊತ್ತಿನ ತೊತ್ತಿನ ಪಡಿದೊತ್ತನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ.
ಎನ್ನ ಮನದೊಡೆಯ ಮಹಾದೇವಾ,
ನಿಮ್ಮ ಮನವ ನಿಮಗೊಪ್ಪಿಸಿ ಶುದ್ಧ ನಾನು ಕಾಣಾ,
ಕೂಡಲಸಂಗಮದೇವಾ./126
ಅರ್ಥ ಪ್ರಾಣ ಅಭಿಮಾನ ನಿಮ್ಮದೆಂ’ಬಿರಿ,
ಒತ್ತಿ ನೋಡಿದಡೆ ಮುಟ್ಟಲೀಯಿರಿ.
ಮುಟ್ಟೆ ಬಂದಲ್ಲಿ ಕಠಾರಿಯ ಕಾಳಗವ ನೀವಾಡಿಸುವಿರಲ್ಲದೆ
ಲಿಂಗಜಂಗಮವಂತನಾಗಬಾರದು.
ಕೂಡಲಸಂಗಮದೇವಾ, ವೇಷಡಂಭಕರಿಗೆ ಭಕ್ತಿ ಎಂತಪ್ಪುದಯ್ಯಾ. /127
ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರು ಸದ್ಭಕ್ತರಲ್ಲದೆ
ಎನಗಾರೂ ಇಲ್ಲಯ್ಯಾ.
`ಭೃತ್ಯಾಪರಾಧಃ ಸ್ವಾಮಿನೋ ದಂಡಃ
ಕೂಡಲಸಂಗಮದೇವಾ, ನೀವೇ ಪ್ರಮಾಣು./128
ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆುಲ್ಲದಿಹುದೆ ಭಕ್ತಿ,
ಹೆಚ್ಚು ಕುಂದಿಲ್ಲದಿಹುದೆ ಸಮಯಾಚಾರ,
ಜಂಗಮವೆ ಲಿಂಗವೆಂಬುದಕ್ಕೆ ಏನು ಗುಣ
ಮನದ ಲಂಪಟತನ ಹಿಂಗದಾಗಿ
ಒಡೆಯರ ಬರವಿಂಗೆ ಕುನ್ನಿ ಬಾಲವ ಬಡಿದಡೆ
ವೆಚ್ಚವೇನು ಹತ್ತುವುದು ಕೂಡಲಸಂಗಮದೇವಾ/129
ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ
ಕೊಟ್ಟ ಭಕ್ತರನಾರನೂ ಕಂಡುದಿಲ್ಲ;
ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ.
ಇವೆಲ್ಲ ಹೊರಗಣ ಮಾತು,
ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ./130
ಅರ್ಥಕ್ಕೆ ತಪ್ಪಿದಡೇನು, ಪ್ರಾಣಕ್ಕೆ ತಪ್ಪಿದಡೇನು,
ಅಭಿಮಾನಕ್ಕೆ ತಪ್ಪಿದಡೇನು
ಶರಣರು ಶರಣರಲ್ಲಿ ಗುಣವನರಸುವರೆ
ಕೂಡಲಸಂಗನ ಶರಣರು ನೊಂದು ಸೈರಿಸಬೇಕು./131
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ,
ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ
ಶರಣನೆಂತೆನಿಸುವೆನಯ್ಯಾ,
ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ/132
ಅರ್ಥರೇಖೆಯಿದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ! ಶಿವಪಥವನರಿಯದನ್ನಕ್ಕ./133
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ,
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ,
ಮುಟ್ಟುವ ಸ್ತ್ರೀಯ ಕಣ್ಣಮುಂದೆ
ಅಭಿಮಾನಂಗೊಂಡು ನೆರೆವುತ್ತಿರಲಿ,
ಇಂತೀ ತ್ರಿವಿಧವೂ ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ,
ಇಕ್ಕುವ ಶೂಲ ಪ್ರಾಪ್ತಿಸಲಿ,
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ.
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ
ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ./134
ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ,
ಭಕ್ತಿಯುಳ್ಳವರೆಲ್ಲ ಜಂಗಮಕ್ಕಂಜುವರಯ್ಯಾ,
ಸೂಳೆಗೊಲಿದವರೆಲ್ಲ ಸೂಳೆಯೆಂಜಲು ತಿಂಬರಯ್ಯಾ.
ಮಾಂಸವ ಮಚ್ಚಿದವರೆಲ್ಲ ಸೊಣಗನೆಂಜಲ ತಿಂಬರಯ್ಯಾ.
ಕೂಡಲಸಂಗನ ಶರಣರ ಒಕ್ಕುಮಿಕ್ಕುದ
ಲಿಂಗಕ್ಕೆ ಕೊಟ್ಟುಕೊಂಡು ಯೋಗ್ಯವಾದವರ
ನಮ್ಮ ಚಿಕ್ಕ ಬಸವಣ್ಣ ಬಲ್ಲ. /135
ಅರ್ಪಿತವ ಮಾಡುವ ಅವಧಾನವು, ಅನ್ಯವ ಸೋಂಕದ ಅವಧಾನವು,
ಅರಿಷಡ್ವರ್ಗಂಗಳ ಮುಟ್ಟಲೀಯದವಧಾನದ ಪರಿಯ ನೋಡಾ,
ಪಂಚಭೂತವೆಂಬ ಭವಿಯ ಕಳೆದು ಪ್ರಸಾದಿಯಾಗಿಪ್ಪ ಪರಿಯ ನೋಡಾ,
ಪಂಚೇಂದ್ರಿಯಂಗಳ ಗುಣವಳಿದು ಪಂಚವಿಂಶತಿತತ್ವದಲ್ಲಿ ಪರಿಣಾಮಿ
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು./136
ಅರ್ಪಿತವೆಂಬೆನೆ
ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ.
ಅರ್ಪಿತ ಅನರ್ಪಿತ ನೀನೆ ಎಂಬೆ,
ಕೂಡಲಸಂಗಮದೇವಾ. /137
ಅರ್ಪಿಸಿದ ಸುಖ ತಪ್ಪದೆ ಇಂಬುಗೊಂಡಿತ್ತಾಗಿ
ಅಲ್ಲಿಯೆ ಅರ್ಪಿತವಾಯಿತ್ತಯ್ಯಾ.
ಅಂಗವೆಂಬ ಶಂಕೆ ತಾನೆತ್ತ ಹೋಯಿತ್ತೆಂದರಿಯೆ,
ಕಾಯಸುಖವೆ ಲಿಂಗಸುಖಕ್ಕೀಡಾಯಿತ್ತು.
ಅಂತಪ್ಪ ಅರ್ಪಿತ ದಷ್ಟ ತಲೆಗೇರಿದಲ್ಲಿ
ನೀ ಮುಂತಾಗಿರ್ದೆ, ಕೂಡಲಸಂಗಮದೇವಾ. /138
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು.
ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು,
ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ,
ಪಾಪಿಯ ಕೂಸನೆತ್ತಿದಂತೆ.
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯಾ./139
ಅಲ್ಲಾ ಎನಬಾರದು, ಅಹುದೆನಬಾರದು,
ಕೂಡಲಸಂಗನ ಶರಣರ ಸಂಗ
ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ /140
ಅವರ ನಡೆಯೊಂದು ನುಡಿಯೊಂದಾದಡೆ
ಶಿವಾಚಾರಕ್ಕವರು ಸಲ್ಲರಯ್ಯಾ !
ಬಲ್ಲನು, ಸಾತ್ವಿಕರಲ್ಲದವರನೊಲ್ಲನು.
ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು.
ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು./141
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
[ಬಿ]ಬ್ಬನೆ ಬಿರಿವೆ ನಾನು, ಕೆಚ್ಚು ಬೆಳೆುತ್ತಯ್ಯಾ.
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರದಂತೆ ಮಾಡು ಕೂಡಲಸಂಗಮದೇವಾ./142
ಅವಲಕ್ಷಣ ನಾಯನುಡಿಯ ನಾಲಗೆಯ ಸಡಗರ
ಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.
ಬೇಡವೋ ಪರವಾದಿ ಗಳುಹದಿರು.
ಬೇಡವೊ ದೂಷಕ ಬಗುಳದಿರು.
ಭಕ್ತಿಗೆಯೂ ಬೋಟ್ಟಕ್ಕೆಯೂ ಜಾತಿಸೂತಕವುಂಟೆ
ಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ.
ನಮ್ಮ ಕೂಡಲಸಂಗನ ಶರಣರನವರಿವರೆಂದಡೆ
ಕುಂಬಿಪಾತಕ ನಾಯಕನರಕ ತಪ್ಪದು ಕಾಣಾ. /143
ಅವಳ ವಚನ ಬೆಲ್ಲದಂತೆ, ಹೃದಯದಲಿಪ್ಪುದು ನಂಜು ಕಂಡಯ್ಯಾ.
ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು.
ಕೂಡಲಸಂಗಮದೇವ ಕೇಳಯ್ಯಾ,
ಮಾನಿಸಗಳ್ಳೆಯ ನಂಬದಿರಯ್ಯಾ./144
ಅಶನ ಕುಂದದು, ವ್ಯಸನ ಮಾಣದು,
ಆರತವಡಗದು, ಬೆವಹಾರ ಮಾಣದು.
ಮಜ್ಜನಕ್ಕೆರೆವೆನಯ್ಯಾ:ಕಾಯವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಜೀವವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಶರಣನಲ್ಲ, ಲಿಂಗೈಕ್ಯನಲ್ಲ.
ಕೂಡಲಸಂಗಮದೇವರಲ್ಲಿ
ಅಂತರಬೆಂತರ ನಾನಯ್ಯಾ./145
ಅಶ್ವಮೇಧಯಾಗವಂತಿರಲಿ,
ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ !
ಗಾಯತ್ರಿಯ ಜಪವಂತಿರಲಿ, ಹೋ !
ಜನಮೋಹನ ಮಂತ್ರವಂತಿರಲಿ, ಹೋ !
ಕೂಡಲಸಂಗನ ಶರಣರ ನುಡಿಗಡಣ
ಎಲ್ಲಕ್ಕಧಿಕ ನೋಡಾ. /146
ಅಷ್ಟತನುಮೂರ್ತಿ ಲಿಂಗವೆಂದೆಂಬರು ಕೇಳಿರಯ್ಯಾ:
ಆದಿಯ ಮಗ ಅತೀತ, ಅತೀತನ ಮಗ ಆಕಾಶ,
ಆಕಾಶನ ಮಗ ವಾಯು, ವಾಯುವಿನ ಮಗ ಅಗ್ನಿ,
ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ,
ಪೃಥ್ವಿಯಿಂದ ಸಕಲ ಜನನವು.
ಮನಸಿನ ಮಗ ಚಂದ್ರ, ನಯನದ ಮಗ ಸೂರ್ಯ,
ದೇಹದ ಮಗನಾತ್ಮ,
ಇಂತೀ ಅಷ್ಟತನುವೆಲ್ಲಕ್ಕೆಯು ಉತ್ಪತ್ಯವುಂಟು.
ಉತ್ಪತ್ಯರಹಿತ ಅಯೋನಿಜ ಶೂನ್ಯನಿರಾಳ
ನಮ್ಮ ಕೂಡಲಸಂಗಮದೇವಂಗೆ ಮಾತಾಪಿತರಿಲ್ಲ./147
ಅಷ್ಟದಳ ಕಮಲವ ಸುತ್ತುವ ಜೀವಾತ್ಮನ
ಮೆಟ್ಟಿದ ದಳವನರಿಯದೆ,
ಆನು ಭಕ್ತನೆಂತೆಂಬೆ ! ಆನು ಶರಣನೆಂತೆಂಬೆ !
ಆನು ಲಿಂಗೈಕ್ಯನೆಂತೆಂಬೆ ಕೂಡಲಸಂಗಮದೇವಾ
ಎನ್ನ ಮನವು ಸಮಾಧಾನವಾಗದನ್ನಕ್ಕ /148
ಅಷ್ಟದಳಕಮಳಾತ್ಮದೊಳಗೆ
ನೆಟ್ಟನೆ ಮನಃಪ್ರೇರಕನೆಂದು ನಂಬಿದೆ, ಮತ್ತೊಂದನರಿಯದೆ,
ನಿತ್ಯಸ್ವತಂತ್ರನು ನೀನೆ,
ದೃಷ್ಟಲಿಂಗ ಜಂಗಮ ಒಂದೆ ಎಂದು ಇಪ್ಪೆನು,
ಪ್ರಭುವೆ ಕೂಡಲಸಂಗಮದೇವಾ. /149
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿಮನುಜರನೇನೆಂಬೆ,
ಕೂಡಲಸಂಗಮದೇವಾ ! /150
ಅಷ್ಟವಿಧಾರ್ಚನೆ ಅರಸರಿಯದ ಬಿಟ್ಟಿ ಕಾಣಿರೇ,
ಸಗುಣ ನಿರ್ಗುಣ ಸ್ಥೂಲ ಸೂಕ್ಷ್ಮ,
ಅವು ನಿಜವನರಿವವೆ ಅವು ತಮ್ಮ ತಾವರಿಯವು.
ಅವ ಭಿನ್ನವೆಂದರಸಲುಂಟೆ
ಕೂಡಲಸಂಗಮದೇವಾ. /151
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು,
ಅರಸರಿಯದ ಬಿಟ್ಟಿ ಮಾಡುವೆನು.
ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು.
ಸ್ಥಾವರ ಜಂಗಮವನರಿಯದ ಪೂಜಕ ನಾನು.
ಮತ್ತೆ ನಾಚದೇ ಕೂಡಲಸಂಗಮದೇವಯ್ಯಾ,
ಜಂಗಮವೆನ್ನ ಪ್ರಾಣಲಿಂಗವೆಂಬೆನು./152
ಅಷ್ಟವಿಧಾರ್ಚನೆ ಷೋಡಶೋಪಚಾರವ
ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ.
ಹಂಗು ಹರಿಯಿಲ್ಲದ ಕಾರಣ,
ಕೂಡಲಸಂಗಮದೇವ ನಿಷ್ಫಲದಾಯಕನಾಗಿ
ಆನು ಮಾಡಿ ಶುದ್ಧನಯ್ಯಾ./153
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ.
ಲಿಂಗವೆಂದರಿಯದೆ, ಜಂಗಮವೆಂದರಿಯದೆ,
ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ.
ಕೂಡಲಸಂಗಮದೇವಾ, ಆನು ಮಾಡುವುದೆಲ್ಲವೂ
ಉಪಚಾರವಯ್ಯಾ./154
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು,
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು,
ನಮ್ಮ ಕೂಡಲಸಂಗನ ಕೂಡುವುದು./155
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ
ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ
ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ
ಅರಿವವರದಾರಯ್ಯಾ ಏನೆಂಬೆ
ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು,
ಕೂಡಲಸಂಗಮದೇವಾ, ಅವರನಯ್ಯ ಎಂಬೆನು. /156
ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ ?
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ
ಲಿಂಗಾರ್ಚಕರಪ್ಪರೆ, ಅಯ್ಯಾ ?
ವೇಷವ ಹೊತ್ತು ಗ್ರಾಸಕ್ಕೆ ತಿರುಗುವ
ಈ ವೇಷ ದುರಾಚಾರಿಗಳ ಮೆಚ್ಚುವನೆ
ಕೂಡಲಸಂಗಮದೇವ ? /157
ಅಸಂಬಂಧ ಸಂಬಂಧವಾಯಿತ್ತು, ಲಿಂಗಸಾರಾಯರ ಸನುಮತದಿಂದ
ಉತ್ತಮ ಮಧ್ಯಮವ ಕೆಡಿಸಿತ್ತು, ಏಕೋ ಸತಿಪತಿಗುಣದಿಂದ,
ಗರುವರ ಗರುವತನ ಕೂಡಲಸಂಗಯ್ಯನ ಅನುಭಾವದಿಂದ./158
ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ
ಮಸೆದ ಕೂರಲಗನಿಕ್ಕದೆ ಮಾಬನೆ
ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ
ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ
ಗುರುಲಘುವೆನ್ನದವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಪರಸ್ತ್ರೀಗಳುಪಿದವರ ಗಾಣದಲಿಕ್ಕಿ ಹಿಳಿಯನೆ
ಪರಧನಕ್ಕಳುಪಿದವರ ಹಿಡಿ ಖಂಡವ ಕೊಯ್ಯನೆ
ಎಲೆ ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ
ಪಿಂಬೇರ ಮೈ[ಲುಗ] ಮೇಳವಾಡುತ ಇದ್ದ ಕಾಣಾ, ತೃಜಗದೊಳಗೆ./159
ಅಸುರನೈಶ್ವರ್ಯವನೆಣಿಸುವಡೆ,
ಸೀತೆಗೆ ಸರಿಮಿಗಿಲೆನಿಸುವ ಸತಿಯರೆಂಟು ಕೋಟಿ,
ಮತಿವಂತ ಶಿರಃಪ್ರಧಾನರೆಂಟು ಕೋಟಿ,
ಲೆಕ್ಕವಿಲ್ಲದ ದಳವು, ಲಕ್ಷ ಕುಮಾರರು,
ದಿಕ್ಪಾಲಕರವನ ಮನೆಯ ಬಂಧನದಲ್ಲಿಪ್ಪರು,
ಸುರಪತಿಯರೆಲ್ಲರನಾತ ಸೆರೆಮಾಡಿ ಆಳಿದ.
ಶಿವನೆ, ನೀನು ಕರುಣಿಸಿದಂತಿರದೆ,
ಪರವಧುವಿನ ಬೇಟವನನ ಪ್ರಾಣ ಕೊಂಡಿತ್ತು.
ಇದನರಿದು ಪರವಧುಗಳಿಗೆಳಸುವರ ಕಂಡು
ಗರುಡನ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯಾ
ಕೂಡಲಸಂಗಮದೇವಾ. /160
ಅಸ್ತಿ ಭಾತಿಯೆಂಬ ಭಿತ್ತಿಯ ಮೇಲೆ,
ಕ್ರೀ ನಾಮ ರೂಪವೆಂಬ ಚಿತ್ರ ಬರೆಯಿತ್ತು.
ಇಲ್ಲದ ಭಿತ್ತಿಯ ಮೇಲೆ ಉಂಟೆಂಬ ಚಿತ್ರದಂತಿರ್ದಿತ್ತು.
ಅದೆಂತೆಂದಡೆ;
ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಂ
ಆದ್ಯತ್ರಯಂ ಬ್ರಹ್ಮರೂಪಂ ಮಾಯಾರೂಪಂ ತತೋದ್ವಯಂ
ಎಂದುದಾಗಿ-
ಎನಗಿದೇ ಮಾಯೆಯಾಗಿ ಕಾಡಿತ್ತು, ಕೂಡಲಸಂಗಮದೇವಾ. /161
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ
ಕೂಡಲಸಂಗಮದೇವ. /162
ಅಹುದಹುದು;
ಕೆರೆಯ ತಪ್ಪಿ ಬಾವಿಯ ಬಿದ್ದಂತೆ,
ಮುಳ್ಳ ಕಳೆದು ದಸಿಯ ಬೆಟ್ಟಿದಂತೆ,
ಬದುಕಿದ ಹಕ್ಕಿಯ ಕಿಚ್ಚಿನೊಳಗಿಕ್ಕುವರೆ,
ಕೂಡಲಸಂಗಮದೇವಾ /163
ಅಹುದೆಂದರಿಯೆ, ಆಗದೆಂದರಿಯೆ,
ಆದಿಪಥವ ತೋರಲರಿಯೆ,
ಸತ್ಯವನರಿಯೆ, ಸಹಜವನರಿಯೆ,
ಸಜ್ಜನ ಶುದ್ಧವ ಮುನ್ನರಿಯೆ.
ನಿಮ್ಮ ಶರಣರ ಒಕ್ಕುದನುಂಡಿಪ್ಪೆ
ಕೂಡಲಸಂಗಮದೇವಾ./164
ಅಳವಡಿಸಿದ ಪದಾರ್ಥ ಅರ್ಪಿತಕ್ಕೆ ಸರಿಯಾಯಿತ್ತು,
ಅಳವಡಿಸದ ಮುನ್ನವೆ ಕೈಕೊಳ್ಳುತ್ತೈದಾನೆ ಶಿವನು,
ಸಂದ ಪದಾರ್ಥ ಸಲ್ಲಲಿ.
ಕೂಡಲಸಂಗಮದೇವರ ಆರೋಗಣೆಯ ಅವಸರಕ್ಕೆ
ಸಂಚಿತ ಸಯದಾನವ ತೆಗೆಸಿರೆ, ಸೊಡ್ಡಳ ಬಾಚರಸೆರೆ. /165
ಅಳಿಯನ ಕಂಡಡೆ ನಾಚೆಂಬೆ ಮಗಳೆ,
ಅಳಿಯನ ಕಂಡಡೆ ತೊಲಗೆಂಬೆ ಮಗಳೆ,
ನಾಚುವಡೆ ಮೊರೆಯಿಲ್ಲ, ತೊಲಗುವಡೆ ನೆಲನಿಲ್ಲ.
ಇಬ್ಬರಿಗೊಬ್ಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ ಮಗಳೆ
ಕೂಡಲಸಂಗಮದೇವಯ್ಯನೆಂಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ ಮಗಳೆ /166
ಅಳಿವನಲ್ಲ, ಉಳಿವನಲ್ಲ, ಪ್ರಳಯವೆಂಬುದ ಮುನ್ನರಿಯನು,
ಕಳಾಕುಳರಹಿತನು, ಉಭಯಕುಳರಹಿತನು,
ಅರಿವ ಬೈಚಿಟ್ಟು ಮೆರೆವ ಗಮನನಲ್ಲ.
ಕೂಡಲಸಂಗಯ್ಯನೆಂಬ ಶಬ್ದಮುಗ್ಧನ
ಭಾವದ ಬಳಕೆಯಲ್ಲಿ ಗೆಲಬುಹದೆ ಹೇಳಾ/167
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ
ನಡೆವುತ್ತ ನಡೆವುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ, ಕೋಲು ಬಳಲುವುದೆ
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ
ಕೂಡಲಸಂಗಮದೇವಾ, ಅರಸರಿಯದ ಬಿಟ್ಟಿಯೋ./168
ಆ ಕರಿಯಾಕೃತಿಯ ಸೂಕರನ ಹೋಲಿಸಿದಡೆ
ಆ ಕರಿಯಾಗಲರಿವುದೆ
ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದಡೆ
ವ್ಯಾಳೇಶನಾಗಲರಿವುದೆ
ನಾನು ಭಕ್ತನಾದಡೇನಯ್ಯಾ,
ನಮ್ಮ ಕೂಡಲಸಂಗಮದೇವನ ಸದ್ಭಕ್ತರ ಹೋಲಲರಿವೆನೆ/169
ಆ ಭಸ್ಮತಾಗಿ ಬ್ರಹ್ಮ ತನ್ನ ಕಪಾಲವಿಡಿದನು.
ಗಣನಾಥನ ಐವತ್ತೆರಡು ಸರ ಹರಿದು ಬಿದ್ದವು.
ಆ ಭಸ್ಮತಾಗಿ ಅಂಡಜಮುಗ್ಧೆಯ ಮೂರು ಮೊಲೆ ಹರಿದು ಬಿದ್ದವು.
ನಾದಪ್ರಿಯ ನಂದಿಯನೇರಿಕೊಂಡು
ಅತೀತನ ಮೇಲೆ ಆನಂದಸಿಂಹಾಸನವನಿಕ್ಕಿ ಕುಳ್ಳಿತ್ತ,
ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು. /170
ಆ ಮಿಹಿಲಾಳು ಭೋಜ ದೇವುಲಾಳು.
ಆನು ಸೂಳೆ, ನಮ್ಮಕ್ಕ ಸೂಳೆ.
ಬೆಳ್ಳಿಗೆಯಾವಿನ ಕರುವೆಂದಡೆ ಬಳ್ಳವಾಲ ಕರೆವುದೆ
ಕೂಡಲಸಂಗನ ಶರಣರ ಮುಂದೆ ನಾನು ಕಾದಿಹೆ, ಬಾ ಬಿಸಿಲೆ./171
ಆ ರತ್ನ ಪ್ರಸಾದವನಾರಾಧಿಸುತ್ತಿರಲು
ಆ ಪ್ರಸಾದದಲ್ಲಿ ಬೀಳುತ ಆಳುತ್ತಿದ್ದಿತ್ತು, ನೋಡಾ.
ಅದ ಹಲಬರು ನೋಡಿ ನೋಡಿ ಹೋಗುತ್ತಿದ್ದರು.
ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು.
ಇದ ಪದಾರ್ಥವ ಮಾಡಿಕೊಡಯ್ಯಾ ಕೂಡಲಸಂಗಮದೇವಾ. /172
ಆಕಳ, ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ !
ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ !
ಅರರಸಾಡದಿರಿಂ ಭೋ, ನಿಮ್ಮ ಧರ್ಮ !
ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ,
ಕೂಡಲಸಂಗಮದೇವ ಏಕೋಭಾವ. /173
ಆಗದ ಕಾಲಕ್ಕೆ ಆಗೆಂದಡಾಗದು,
ಆಗಬೇಕೆಂದು ನಾ ಬೆಂಬೀಳೆನಯ್ಯಾ.
ಆಗುಮಾಡುವ ತಂದೆ ನೀನು,
ಆಡಿ ಬಹ ಮಕ್ಕಳಿಗೆ ಊಡುವ ತಾಯಂತೆ ನೋಡಿ
ಸಲಹೆನ್ನ ಕೂಡಲಸಂಗಮದೇವಾ. /174
ಆಚಾರ ಶಿವಾಚಾರವೆಂದರಿಯದ ಕಾರಣ,
ಷಡುದರುಶನಂಗಳೆಲ್ಲಾ ತಮತಮಗೆ ಶರಣೆನುತ್ತಿದ್ದುವು.
ಮಹತ್ವದ ಸಮಯಾದಿ ಶೈವಂಗಳೆಂಬುವೆಲ್ಲಾ, ಶರಣು ಶರಣೆನುತ್ತಿದ್ದುವು.
ನಮ್ಮ ಕೂಡಲಸಂಗನ ಶರಣರು ಮಾಡಿದ ವಿನಿಯೋಗ
ಬಹಿರಂಗದಲ್ಲಿ ವರ್ತಿಸುವವರಿಗೆ ಎಲ್ಲಿಯದೊ/175
ಆಚಾರದ ಸುಖವನಂಗದಲ್ಲಿ ನೆಲೆಗೊಳಿಸಿ ತೋರಿದ,
ಅನುಭಾವದನುವ ಪ್ರಾಣದಲ್ಲಿ ನೆಲೆಗೊಳಿಸಿ ತೋರಿದ,
ಮಹಾಜ್ಞಾನದ ಸುಖವ ಸರ್ವಾಂಗದಲ್ಲಿ ನೆಲೆಗೊಳಿಸಿ ತೋರಿದ.
ಇಂತೀ ತ್ರಿವಿಧಸ್ಥಲನಿರ್ಣಯವನೆನಗೆ ಅರುಹಿದ ಕಾರಣ
ಕೂಡಲಸಂಗಮದೇವಯ್ಯಾ,
ಮಡಿವಾಳ ಮಾಚಯ್ಯನ ಪಾದಕ್ಕೆ ನಮೋ ನಮೋ ಎನ್ನುತ್ತಿರ್ದೆನು./176
ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ,
ಅನುಭಾವಲಿಂಗವಿಡಿದು ಮಾರ್ಗಕ್ರೀಲಿಂಗಸಿದ್ಧಿ,
ಮಾರ್ಗಕ್ರೀಲಿಂಗವಿಡಿದು ಮೀರಿದಕ್ರೀಲಿಂಗಸಿದ್ಧಿ,
ಮೀರಿದ ಕ್ರೀಲಿಂಗವಿಡಿದು ಕ್ರಿಯಾನಿಷ್ಪತ್ತಿಲಿಂಗಸಿದ್ಧಿ,
ಇದು ಕಾರಣ, ಕೂಡಲಸಂಗಮದೇವಾ ಲಿಂಗವಿಡಿದು ಲಿಂಗಸಿದ್ಧಿ. /177
ಆಚಾರವನಾಚಾರವಾಯಿತ್ತು, ಸೀಮೆ ನಿಸ್ಸೀಮೆಯಾಯಿತ್ತು,
ಪ್ರಾಣಸಂಚ ತಪ್ಪಿ ಲಿಂಗಸಂಚವಾಯಿತ್ತು,
ಎಲ್ಲಿ ಶಬ್ದವಲ್ಲಿಯೆ ಲಿಂಗಸ್ವಾಯತವಾಯಿತ್ತು,
ಎಲ್ಲಿ ಸೋಂಕು ಅಲ್ಲಿಯೆ ಲಿಂಗಸ್ವಾಯತವಾಯಿತ್ತು,
ಎಲ್ಲಿ ರೂಪವಲ್ಲಿಯೆ ಲಿಂಗಸ್ವಾಯತವಾಯಿತ್ತು,
ಎಲ್ಲಿ ರುಚಿಯಲ್ಲಿಯೆ ಲಿಂಗಸ್ವಾಯತವಾಯಿತ್ತು,
ಎಲ್ಲಿ ಗಂಧವಲ್ಲಿಯೆ ಲಿಂಗಸ್ವಾಯತವಾಯಿತ್ತು,
ಕೂಡಲಸಂಗಮದೇವರ ಕರುಣರಸಾಬ್ದಿ
ಕಡೆಗೋಡಿವರಿಯಿತ್ತಯ್ಯಾ, ಎನ್ನ ಮೇಲೆ. /178
ಆಚಾರವರಿುರಿ, ವಿಚಾರವರಿುರಿ
ಜಂಗಮಸ್ಥಲ ಲಿಂಗ ಕಾಣಿರಯ್ಯಾ.
ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ.
ನುಡಿದಂತೆ ನಡೆಯದಿದ್ದಡೆ
ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ./179
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ.
ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ.
ನಾಡ ಮಾತು ಬೇಡ, ಸೆರಗೊಡ್ಡಿ ಬೇಡು
ಕೂಡಲಸಂಗನ ಶರಣರ./180
ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು,
ಹಾಡಿ ನಾಲಿಗೆ ದಣಿಯದು, ಇನ್ನೇವೆನಿನ್ನೇವೆ.
ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ
ಕೂಡಲಸಂಗಮದೇವಾ ಕೇಳಯ್ಯಾ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ. /181
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ
ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ./182
ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ,
ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ.
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ./183
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ;
ಅದು ಬೇಡದು, ಬೆಸಗೊಳ್ಳದು,
ತಂದೊಮ್ಮೆ ನೀಡಬಹುದು.
ಕಾಡುವ ಬೇಡುವ ಜಂಗಮ ಬಂದಡೆ,
ನೀಡಲುಬಾರದು ಕೂಡಲಸಂಗಮದೇವಾ./184
ಆಡುವುದಳವಟ್ಟಿತ್ತು, ಹಾಡುವುದಳವಟ್ಟಿತ್ತು,
ಅರ್ಚನೆಯಳವಟ್ಟಿತ್ತು, ಪೂಜನೆಯಳವಟ್ಟಿತ್ತು,
ನಿತ್ಯಲಿಂಗಾರ್ಚನೆ ಮುನ್ನವೆಯವಳವಟ್ಟಿತ್ತು.
ಕೂಡಲಸಂಗನ ಶರಣರು ಬಂದಡೆ,
ಏಗುವುದು, ಏ ಬೆಸೆನೆಂಬುದು ಒಪ್ಪಚ್ಚಿ ಅಳವಡದು./185
ಆತ್ಮ ಲಿಂಗ, ಪರಮಾತ್ಮ ಜಂಗಮ,
ತನು ಮಧ್ಯೆ ಪ್ರಸಾದವಾಯಿತ್ತು,
ನಿಶ್ಚಿಂತ ನಿವಾಸವಾಯಿತ್ತು.
ಕೂಡಲಸಂಗನ ಶರಣರ ಸಂಗದಿಂದ
ನಿಶ್ಚಿಂತ ನಿವಾಸವಾಯಿತ್ತು./186
ಆತ್ಮನ ನಿಜವನರಿಯದು
ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ !
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ. /187
ಆತ್ಮನ ಸುಳುಹು ನಿಂದ ಮತ್ತೆ
ಕಾಯದ ಅವತಾರವಳಿಯಿತ್ತು.
ನೀನೆಂಬ ಭಾವವರತಲ್ಲಿ,
ಕೂಡಲಸಂಗಮದೇವರ ಭಾವ
ಪ್ರಭುದೇವರಲ್ಲಿ ಐಕ್ಯವಾಯಿತ್ತು. /188
ಆತ್ಮನೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ
ಪ್ರಾಣವೆ ಲಿಂಗವೆಂಬರು,
ಪ್ರಾಣವನು ಕಾಯವ ಬಿಟ್ಟು ಬೇರೆ ಕಾಣಬಹುದೆ
ಕಂಡೆಹೆನೆಂದಡೆ ಅದು ನಿರವಯ, ನಿರಾಕಾರವಾದುದು,
ಭಾವಕ್ಕೆ ಬಾರದು.
ಭಾವಕ್ಕೆ ಬಾರದುದ ಪೂಜಿಸಬಹುದೆ
ಅದು ಕಾರಣ, ಕಾಯದ ಕರಸ್ಥಲದಲ್ಲಿ ಕ್ರಿಯಾಲಿಂಗವಿಡಿದು ನೋಡಲು
ಪ್ರಾಣ ಆತ್ಮನೆಂಬವು ಬೇರಿಲ್ಲ.
ಇದು ಕಾರಣ, ಇಷ್ಟವ ಬಿಟ್ಟು ಬಟ್ಟಬಯಲೆ ವಸ್ತುವೆಂಬ
ಮಿಟ್ಟಿಯ ಭಂಡರ ನಮ್ಮ ಕೂಡಲಸಂಗನ ಶರಣರು ಮೆಚ್ಚರು./189
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ
ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ
ನಿಮಗಾನು ದ್ರೋಹಿಯಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ./190
ಆದಿ ಅನಾದಿಗಳಿಲ್ಲದಂದು, ಸದಾಶಿವನಿಲ್ಲದಂದು,
ಶಿವನಿಲ್ಲದಂದು, ಏನೆಂಬುದೇನು ತಾನಿಲ್ಲದಂದು,
ಕೂಡಲಸಂಗಯ್ಯ ತನ್ನ ತಾನೇನೆಂದು ಅರಿಯನಂದು./191
ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ. /192
ಆದಿ ಭಕ್ತ, ಅನಾದಿ ಜಂಗಮ,
ಆದಿ ಶಕ್ತಿ, ಅನಾದಿ ಶಿವನು ನೋಡಾ.
ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ
[ಎನ್ನ] ಹೃದಯಕಮಲದಲ್ಲಿ ನಿಮ್ಮ ಕಂಡೆನು.
ಆ ಕಾಂಬ ಜ್ಞಾನವೆ ಜಂಗಮ,
ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು.
ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು,
ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು.
ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು
ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ
ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ,
ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ./193
ಆದಿ ಲಿಂಗ, ಅನಾದಿ ಜಂಗಮವು,
ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ.
ಗುರುವಿಂಗೆ ಪರಮಗುರು ಜಂಗಮವೆಂದುದು
ಕೂಡಲಸಂಗಯ್ಯನ ವಚನ. /194
ಆದಿತ್ಯ ಸೋಮರು ಆಗಿ ಹೋಗುತ್ತ ಇದ್ದಾರು.
ಬ್ರಹ್ಮ ಪ್ರಳಯಕ್ಕೊಳಗಾದ, ಹರಿಯ ಸಿಂಹಾಸನವಡಗಿತ್ತು.
ಆತೋ ನಾಸ್ತಿ, ಇತೋ ನಾಸ್ತಿ.
ರೋಮಜರೆಂಬವರು ಸಿಟ್ಟುಗುಟ್ಟಿ ತರುಮರನಡಿಯಲ್ಲಿದ್ದರು.
ಮಾರ್ಕಂಡೇಯಮಹಾಮುನಿ ಸ್ವೇಚ್ಛಾಮರಣಿ ಎನಿಸಿಕೊಂಡನಲ್ಲದೆ
ಲಿಂಗದ ನಿಜವನರಿಯನು.
ಇದು ಕಾರಣ ಕೂಡಲಸಂಗಮದೇವಾ,
ನೀವು ಮಾಡಿದ ಬಯಲು ಭಕ್ಷಿಸಿತ್ತು, ಅನಂತ ಹಿರಿಯರನು./195
ಆದಿಪುರುಷನ ಮನವು ಮಹವನಕ್ಕಾಡೆ,
ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು.
ಧರೆ, ಅಂಬರ, ವಾರುಧಿ ಸಹಿತ,
ಜಾರೆಯೆಂದಡೆ ಜಗದಲ್ಲಿ ನಿಂದವು ಚಾರಾಸಿಲಕ್ಷ ಜೀವಜಾಲಗಳು.
ಹೋರೆಯೆಂದಡೆ ಆಕಾಶದಲ್ಲಿ ನಿಂದರು
ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು-
ಮೊದಲಾದ ದೇವಸಮೂಹಂಗಳೆಲ್ಲ
ಕೂಡಲಸಂಗಮದೇವಾ,
ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು. /196
ಆದಿಯ ಲಿಂಗವ ತಂದಾತನಲ್ಲಯ್ಯನು.
ಅನಾದಿಯ ಲಿಂಗವ ತಂದಾತನಲ್ಲಯ್ಯನು.
ಭಾಪುರೆ ಜಂಗಮವೆ, ನಿರ್ವಯಲಯನವಗ್ರಹಿಸಿದಿರಿ,
ನಿಮಗೋಸುಗ ಮಾಡುವ ಸಯದಾನವನು
ನಡೆಗೆಟ್ಟು ಮಾಡುವೆನು, ನುಡಿಗೆಟ್ಟು ಮಾಡುವೆನು,
ಸರ್ವಕುಳಕ್ಕೆ ನೀನೆಂದು ಅಲ್ಲಯ್ಯನ ಪ್ರಸಾದಕ್ಕೆ ಕೈಯಾನುವೆನು.
ನವಬ್ರಹ್ಮರ ಕೇರಿಯೊಳಗೆ ಅಲ್ಲಯ್ಯನ ಪರಭೆ,
ರುದ್ರಭೂಮಿಯೊಳಗೆ ಅಲ್ಲಯ್ಯನ ಪ್ರಭೆ,
ಬಂದು ನಿಂದ ನಿಲವಿಂಗೆ ಅಲ್ಲಯ್ಯನ ಪ್ರಭೆ.
ಸಯದಾನವಿಲ್ಲದಡೆ ಎನ್ನ ನೀಡುವೆನು ಕೂಡಲಸಂಗಮದೇವಯ್ಯಾ. /197
ಆದಿಯನರುಹಿದ, ಅನಾದಿಯ ತೋರಿದ,
ಇಹವ ಕೆಡಿಸಿದ, ಪರವ ನಿಲಿಸಿದ, ಘನವ ತೋರಿದ.
ಮನವ ಸರಿಸವಿಟ್ಟು ಅನುವ ತೋರಿ ಆಯತವ ಮಾಡಿ
ತನುವ ಮರೆಸಿ ಮಹವನರುಪಿದ,
ಹಿಂದಣ ಪೂರ್ವಾಶ್ರಯವ ಹಿಂದುಮಾಡಿ ತೋರಿ,
ಮುಂದಣ ಗತಿಯ ಸಂದೇಹವ ಬಿಡಿಸಿದ.
ಕೂಡಲಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು./198
ಆದಿಯನಾದಿಯಿಂದತ್ತತ್ತ ಮುನ್ನ
ಲಿಂಗಜಂಗಮವೆಂಬುದನಾರು ಬಲ್ಲವರಿಲ್ಲವೆಂದು,
ಇದರ ಸಕೀಲಸಂಬಂಧವ ತಿಳುಹಲೆಂದು,
ಮತ್ರ್ಯಕ್ಕೆ ಕಳುಹಿದನು ಶಶಿಧರನು.
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನಲ್ಲದೆ ಮತ್ತಾರನೂ ಕಾಣೆ.
ಶಿಷ್ಯಂಗೆ ಗುರು ಉಪದೇಶವ ಮಾಡಬೇಕಲ್ಲದೆ,
ಗುರುವಿಂಗೆ ಶಿಷ್ಯನನುಗ್ರಹವ ಮಾಡಿದಠಾವುಂಟೆ ?
ಎನ್ನ ಅರಿವಿನ ಆದಿಗೆ ನೀನೆ ಕರ್ತನೆಂದು ನಾನಿರುತಿರಲು
ನಿನಗೆ ನಾನಿನ್ನು ಅನುಗ್ರಹವ ಮಾಡುವ ಪರಿ ಎಂತಯ್ಯಾ ?
ಕೂಡಲಸಂಗಮದೇವರ ಸ್ವರೂಪವೆಂದು ನಿನ್ನ ಕಂಡಿಪ್ಪೆನು
ಕಾಣಾ ಚೆನ್ನಬಸವಣ್ಣಾ. /199
ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ.
ಎನ್ನವರೆನ್ನೆನು, ಎನ್ನವರೆನ್ನೆನು.
ಎನ್ನವರೆಂದಡೆ ಸಂಗಾ ನಿಮ್ಮಲ್ಲಿಗೆ ದೂರ.
ಎನ್ನವರೆಂದಡೆ ಜನ್ನಕ್ಕೆ ನಡೆವರೆ
ಎನ್ನವರಲ್ಲ, ಕೂಡಲಸಂಗಾ ನಿಮ್ಮಾಣೆ. /200
ಆದಿಯಲ್ಲಿ ಶಿವಬೀಜವಲ್ಲದವರಿಗೆ ವೇದ್ಯವಾಗದು ಶಿವಜ್ಞಾನ,
ಶಿವಭಕ್ತಿ,ಲಿಂಗಸ್ಥಲವಳವಡದು, ಜಂಗಮಸ್ಥಲವಳವಡದು,
ಪಾದೋದಕ ಪ್ರಸಾದಸ್ಥಲವಳವಡದು.
ನರಕದಲ್ಲಿ ಬೀಳುವ ಕರ್ಮಿಗಳಿಗೆ
ಕೂಡಲಸಂಗನ ಶರಣರ ಅನುಭಾವ ನೆಲೆಗೊಳ್ಳದು. /201
ಆದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ,
ಅನಾದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ,
ಸಾಧ್ಯಾಸಾಧ್ಯವೆಂಬ ಸೂತಕ ಶಬ್ದಕ್ಕತೀತ.
ಆ ಲಿಂಗವೆ ಆಲಿಂಗನವಾಗಿ ಅವಿರಳ ಸಂಪನ್ನನಾದಲ್ಲಿ,
ಭೇದಭಾವವುಂಟೆಂಬೆನೆ ಅದೆ ಭವಕ್ಕೆ ಬೀಜ.
ಎನ್ನ ಪ್ರಾಣಲಿಂಗ ನೀವೆಂದೆ ಇಪ್ಪೆನಯ್ಯಾ
ಕೂಡಲಸಂಗಮದೇವಾ. /202
ಆದುದನರಿಯೆ, ಹೋದುದನರಿಯೆ,
ಬಂದುದನರಿಯೆ, ನಿಂದುದನರಿಯೆ,
ಒಳಗನರಿಯೆ, ಹೊರಗನರಿಯೆ,
ಇಹವನರಿಯೆ, ಪರವನರಿಯೆ,
ಭಾವವನರಿಯೆ, ನಿರ್ಭಾವವನರಿಯೆ,
ಶೂನ್ಯವನರಿಯೆ, ನಿಃಶೂನ್ಯವನರಿಯೆ.
ಕೂಡಲಸಂಗಮದೇವಯ್ಯಾ,
ಇವೆಲ್ಲವ ಮಾಡಿ ಕೂಡಿದಾತ ಮಡಿವಾಳ ಬಲ್ಲನಾಗಿ,
ನಾನೇನೆಂದೂ ಅರಿಯೆನಯ್ಯಾ. /203
ಆದ್ಯರ ವಚನ ಆದ್ಯರಿಗಾಯಿತ್ತು,
ವೇದ್ಯರಿಗಲ್ಲದೆ ಸಾಧ್ಯವಾಗದು.
ಕೂಡಲಸಂಗಮದೇವಾ
ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು/204
ಆದ್ಯರ ವಚನ ಪರುಷ ಕಂಡಣ್ಣಾ;
ಸದಾಶಿವನೆಂಬ ಲಿಂಗ[ವು] ನಂಬುವುದು,
ನಂಬಲೊಡನೆ ನೀ ವಿಜಯ ಕಂಡಣ್ಣಾ.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವ ಸವಿದಂತೆ./205
ಆದ್ಯರ ವಚನ ಪರುಷವೆಂಬೆನು,
ಆ ಪರುಷವೆನಗೆಂತು ದೊರೆಕೊಂಬುದಯ್ಯಾ
ತನು ಮನ ಧನವ ವಿವರಿಸಿ ನುಡಿವೆ
ಸೋಂಕಿಂಗೆ ಸೈರಿಸಲಾರೆ,
ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ,
ಕೂಡಲಸಂಗಮದೇವಾ./206
ಆದ್ಯರಿಗಲ್ಲದೆ ವೇದ್ಯವಾಗದು; ಮಾಣಿ ಭೋ, ಮಾಣಿ ಭೋ !
ಶಿವಭಕ್ತನೇ ಕುಲಜ,
ಕೈವರ್ತಗರ್ಭಸಂಭೂತಮಾರ್ಕಂಡೇಯಮಹಾಮುನಿಃ
ತಪಸಾ ಜಾಯತೇ ವಿಪ್ರಕುಲಂ ಜಾತಿರ್ನ ವಿದ್ಯತೇ
ಜಾತನಲ್ಲ ಅಜಾತನಲ್ಲ,
ಕೂಡಲಸಂಗನ ಶರಣರು ನಿಸ್ಸೀಮರಯ್ಯಾ. /207
ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು
ಗಂಡುದೊತ್ತಾದೆನಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಶರಣರಿಗೆ./208
ಆನು ನಿಮ್ಮಲ್ಲಿ ಪ್ರಪಂಚಿನುಪಚಾರವನರಿಯೆನಯ್ಯಾ.
ನಿಮ್ಮ ಪಾದದಲ್ಲಿ ತದ್ಗತನಾಗಿಪ್ಪೆ,
ಭಕ್ತಿ ಯುಕ್ತಿ ವಿರಕ್ತಿಯ ಉಪಚಾರವನರಿಯೆನು.
ಕೂಡಲಸಂಗಮದೇವಾ,
ಭಿನ್ನವಿಲ್ಲದ ಭೃತ್ಯಾಚಾರಕ್ಕೆ ಬಂದ ಪದಾರ್ಥವ ನೀನೆಂದೆ ಚಿತ್ತೈಸಯ್ಯಾ./209
ಆನು ಭಕ್ತನಲ್ಲ, ಆನು ಯುಕ್ತನಲ್ಲ,
ನೀವು ಮಾಡಿದ ಸೂತ್ರದ ಬೊಂಬೆ ನಾನಯ್ಯ.
ಎನಗೆ ಬೇರೆ ಸ್ವತಂತ್ರವುಂಟೆ
ನೀವೆನ್ನ ಮಾನಾಬಿಮಾನಕ್ಕೊಡೆಯರಾದ ಬಳಿಕ
ಎನ್ನ ತಪ್ಪ ಲೆಕ್ಕಿಸದೆ ಬಿಜಯಂಗೈವುದಯ್ಯಾ,
ಕೂಡಲಸಂಗಮದೇವಾ./210
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ.
ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು.
ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ/211
ಆನು ಮಾಡಿದ ತಪ್ಪನೆಣಿಸಿಹೆನೆಂದಡೆ ಗಣನೆಯಿಲ್ಲ.
ನಡೆದು ತಪ್ಪುವೆ, ನುಡಿದು ತಪ್ಪುವೆ,
ಮಾಡಿ ತಪ್ಪುವೆ, ನೀಡಿ ತಪ್ಪುವೆ,
ಅರಿದು ತಪ್ಪುವೆ, ಮರೆದು ತಪ್ಪುವೆ,
ಎನ್ನ ತಪ್ಪನೊಪ್ಪವಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು.
ಕೂಡಲಸಂಗಯ್ಯನೆಂಬ ಗಂಡನೆನ್ನ ಬೆರಸಬೇಕೆಂದು ಕರೆಯಲಟ್ಟಿದನು,
ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆನು./212
ಆನು, ನಿಮ್ಮ ಬಂಟರ ಬಂಟ ನಾನಯ್ಯಾ,
ಆನು, ನಿಮ್ಮ ಲೆಂಕರ ಲೆಂಕ ನಾನಯ್ಯಾ,
ಆನು, ನಿಮ್ಮ ತೊತ್ತಿರ ಪಡುಗವ ತೆಗೆವ ಪಡಿದೊತ್ತಯ್ಯಾ.
ಕೂಡಲಸಂಗನ ಶರಣರಿಗೆಲ್ಲಾ ಸಂಗನಬಸವನ ಬಿನ್ನಪ;
ಕವಳಿಗೆಗೆ ಸಂದಿತ್ತು
ನಿಮ್ಮ ನಿಜಪದದಲ್ಲಿ ಬೆರಸೆಂದು ಕೃಪೆಮಾಡಿರಯ್ಯಾ/213
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ.
ಆನೀ ಬಿಜ್ಜಳಂಗಜುವೆನೆ ಅಯ್ಯಾ
ಕೂಡಲಸಂಗಮದೇವಾ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ. /214
ಆನೆ, ಭಂಡಾರ, ಲಾಯದ ಕುದುರೆಯ ಬೇಡುವರಿಲ್ಲದೆ ಬಡವಾದೆನಯ್ಯಾ.
ಬೇಡುವುದೇನು ದೇವಾ
ಮುನ್ನ ಬೇಡಿದೆ ಸಿಂಧುಬಲ್ಲಾಳನ ವಧುವನು,
ಇನ್ನು ಬೇಡಿದಡೆ, ನಿಗಳವನಿಕ್ಕುವೆ.
ಬೇಡಿದ ಶರಣರಿಗೆ ನೀಡದಿರ್ದಡೆ ತಲೆದಂಡ
ಕೂಡಲಸಂಗಮದೇವಾ. /215
ಆನೆತ್ತ ಬಲ್ಲೆನಯ್ಯಾ ನಿಮ್ಮ ಭಕ್ತಿಯ ಘನವ
ಆನೆತ್ತ ಬಲ್ಲೆನಯ್ಯಾ ನಿಮ್ಮ ಶ್ರೀಪಾದವ ನಿಲವ
ಕಾಯದ ಕಳವಳದ ಮರೆಯಲಿದ್ದವರಲ್ಲಿ ನಂಬುಗೆಯಳವಡುವುದೆ
ಕೂಡಲಸಂಗಮದೇವಾ
ಎನ್ನವಗುಣವ ನೋಡದೆ ಕರುಣದಿಂದ
ಭಕ್ತಿಯ ನಿಲವ ತೋರಾ ತಂದೆ./216
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ !
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ !
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ !/217
ಆನೆಯೂ ಆ ದಾರಿಯಲ್ಲಿ ಹೋಯಿತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ
ಹೇಳಾ, ಕೂಡಲಸಂಗಮದೇವಾ?/218
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ
ಕೂಡಲಸಂಗಮದೇವಾ,
ನೀ ಸಾಕ್ಷಿಯಾಗಿ ಛೀ ಎಂಬೆನು. /219
ಆಯತ ಒಂದೆಡೆಯಲ್ಲಿ ತೆರನನರಿಯರಾಗಿ
ನೋಡಬಾರದು, ನೋಡಿ ನುಡಿಸಬಾರದು.
ಅದು. ತಿದ್ದಬಾರದ ಡೊಂಕು ಕೂಡಲಸಂಗನ ಭಕ್ತಿ./220
ಆಯತ, ಸ್ವಾಯತದನುಭಾವವ ನಾನೆತ್ತ ಬಲ್ಲೆನು
ಲಿಂಗ ಜಂಗಮಕ್ಕೆ ಮಾಡಿ ನೀಡುವ
ಅಚ್ಚ ಶರಣರ ಮನೆಯಲು ಭೃತ್ಯನಾಗಿಪ್ಪೆನಯ್ಯಾ.
ಇದು ಕಾರಣ ಕೂಡಲಸಂಗನ ಶರಣರಲ್ಲದೆ ಅನ್ಯವನರಿಯೆನಾಗಿ./221
ಆಯತವೆಂಬುದು ಭಂಗ, ಸ್ವಾಯತವೆಂಬುದು ಭವ.
ಆಯತವರಿಯೆ, ಸ್ವಾಯತವರಿಯೆ,
ಭಾವದಲ್ಲಿ ವ್ರತಗೆಟ್ಟುದಾಗಿ.
ಆ ಭಾವದಲ್ಲಿ ಜೀವಸಂಹಾರಿ,
ಕೂಡಲಸಂಗಮದೇವ ಸರ್ವನಿವಾಸಿಯಾಗಿ. /222
ಆಯುಧವಿಕ್ಕಿದವಂಗೆ ವೀರದ ಮಾತೇಕೆ
ಲಿಂಗವು ಅಂತರಿಸಿದವಂಗೆ ಒಳುನುಡಿ ಏಕೆ
ಐದೆ ಅಣಚಿಯಿಲ್ಲದವಳಿಗೆ ಸಾಭಾಗ್ಯದ ಹೂವಿನ ಬೊಟ್ಟೇಕೆ
ಸತ್ಯವಿಲ್ಲದವಂಗೆ ನಿತ್ಯನೇಮವೇಕೆ
ಕತರ್ಾರ, ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ
ಕೂಡಲಸಂಗಮದೇವಯ್ಯಾ,
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ /223
ಆಯುಷ್ಯ ತೀರಿದಲ್ಲದೆ ಮರಣವಿಲ್ಲ,
ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕ ವಿಗರ್ಭಣೆಗೆ
ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ./224
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ !
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು./225
ಆರತವಡಗದು, ಕ್ರೋಧ ತೊಲಗದು.
ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗುತ್ತ ಮರುಳೆ.
ಭವರೋಗವೆಂಬ ತಿಮಿರ ತಿಳಿಯದನ್ನಕ್ಕ
ಕೂಡಲಸಂಗಯ್ಯನೆತ್ತ, ನೀನೆತ್ತ ಮರುಳೆ./226
ಆರತವಡಗಿತ್ತೆನ್ನ, ಬಯಕೆ ಸಮನಿಸಿತ್ತೆನ್ನ,
ಸಂಕಲ್ಪ ಸಮನಿಸಿತ್ತೆನ್ನ, ಸ್ವಯವು ದೊರೆಕೊಂಡಿತ್ತೆನ್ನ.
ನಿಮ್ಮ ನೋಡಿ ಎನ್ನ ಕಂಗೆ ಮಂಗಳಮಯದ ಸುಖಸಂಗವಾಯಿತ್ತು.
ಅಯ್ಯಾ, ಒಳಗು ಹೊರಗು, ಹೊರಗೊಳಗೆಂಬುದ ತಿಳಿದು,
ಪ್ರಭುವಿನ ಕರುಣದಿಂದ ಕೂಡಲಸಂಗಮದೇವರಲ್ಲಿ
ತೆರಹಿಲ್ಲದಿರ್ದೆನು. /227
ಆರಾಧನೆಯ ಮಾಡಿದಡೆ ಅಮೃತದ ಬೆಳಸು,
ವಿರೋಧಿಸಿದಡೆ ವಿಷದ ಬೆಳಸು,
ಇದು ಕಾರಣ ಜಂಗಮಕ್ಕೆ ಅಂಜಲೇಬೇಕು.
ಸ್ಥಾವರ ಜಂಗಮ ಒಂದೆಂದರಿದಡೆ
ಕೂಡಲಸಂಗಮದೇವ ಶರಣಸನ್ನಿಹಿತ./228
ಆರಾಧ್ಯ ಪ್ರಾಣಲಿಂಗವೆಂದರಿದು,
ಪೂರ್ವಗುಣವಳಿದು ಪುನರ್ಜಾತನಾದ ಬಳಿಕ,
ಸಂಸಾರಬಂಧುಗಳೆನ್ನವರೆಂದಡೆ
ನಂಟುಭಕ್ತಿ ನಾಯಕನರಕ-
ಇಂತೆಂದುದು ಕೂಡಲಸಂಗನ ವಚನ./229
ಆರಾರ ಮನದಲ್ಲಿ ಏನೇನಿಹುದೆಂದರಿಯೆ.
ಒಳ್ಳಿಹರೆಂದೆನಲಮ್ಮೆ, ಹೊಲ್ಲಹರೆಂದೆನಲಮ್ಮೆ, ಶಿವಭಕ್ತರಾದ ಕಾರಣ.
ಜಂಗಮವೆ ಲಿಂಗ ಕೂಡಲಸಂಗಮದೇವಾ./230
ಆರಾರ ಮನೆಗೆ ಹೋದಡೆ ಸಾರೆನ್ನರು, ಸರಕುಮಾಡರು,
ಆರ ಸಾರುವೆನಯ್ಯಾ, ಆರ ಹೊದ್ದುವೆನಯ್ಯಾ.
ಭಕ್ತಿಯಿಲ್ಲ-ಬಡವನೆಂದು ಒಡನೆ ನುಡಿಯರು,
ಆರ ಸಾರುವೆನಯ್ಯಾ
ಕಾರುಣ್ಯಮೂರ್ತಿ, ನೀನಲ್ಲದೆ ಇನ್ನಾರ ಸಾರುವೆನಯ್ಯಾ,
ಕೂಡಲಸಂಗಯ್ಯಾ /231
ಆರಾರ ಸಂಗವೇನೇನ ಮಾಡದಯ್ಯಾ
ಕೀಡೆ ಕೊಂಡಲಿಗನಾಗದೆ ಅಯ್ಯಾ
ಚಂದನದ ಸನ್ನಿದಿಯಲ್ಲಿ ಪರಿಮಳ ತಾಗಿ
ಬೇವು, ಬೊಬ್ಬುಲಿ, ತರಿಯ ಗಂಧಂಗಳಾಗವೆ
ನಮ್ಮ ಕೂಡಲಸಂಗನ ಶರಣರ ಸನ್ನಿದಿುಂದ
ಕರ್ಮ ನಿರ್ಮಳವಾಗದಿಹುದೆ/232
ಆರು ಕೋಟಿ ಬ್ರಹ್ಮರು ಮಡಿವಲ್ಲಿ
ನಾರಾಯಣಗೊಂದು ದಿನವಾಯಿತ್ತು.
ನಾರಾಯಣರೊಂದು ಕೋಟಿ ಮಡಿವಲ್ಲಿ
ರುದ್ರನ ಕಣ್ಣೆವೆ ಹಳಚಿತ್ತು.
ರುದ್ರಾವತಾರ ಹಲವಳಿವಲ್ಲಿ
ಕೂಡಲಸಂಗಮದೇವನೇನೆಂದರಿಯ. /233
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ /234
ಆಲಿಕಲ್ಲ ಹರಳಿನಂತೆ, ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬೆ.
ಕಡೆಗೋಡಿವರಿದುವೆನಗಯ್ಯಾ ನಯನದ ಸುಖಜಲಂಗಳು.
ನಮ್ಮ ಕೂಡಲಸಂಗಮದೇವರ
ಮುಟ್ಟಿ ನೆರೆವ ಸುಖವ ನಾನೇನೆಂಬೆ/235
ಆಲುತ್ತಲು ಹರೆಯ ಹೊುಸಿ, ಅಂಕವ ಮಾಡಿದೆನೆಲ್ಲರ ಕಂಡು.
ಆನು ಬೇಡೆಂದಡೆ ಮಾಣೆ, ಕಲಿತನ ಮಾಡಿದೆನೆಲ್ಲರ ಕಂಡು.
ಅಲ್ಲಿ ಹೋುತ್ತು ಗಳೆಯೆಂದಡೆ
ಆಸೆ ಮಾಡೆನು, ಕೂಡಲಸಂಗಮದೇವಾ./236
ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು,
ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ
ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃಶ
ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚಶ ಎಂದುದಾಗಿ,
ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ.
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು./237
ಆವಗೆಯಲೊದಗಿದ ಕರ್ಪಿನಂತೆ,
ಅಮೃತದೊಳಗಿರ್ದ ಸರ್ಪನ ತನುವಿನಂತೆ,
ಇರ್ದೆನಯ್ಯಾ, ಹೊರಗೆ ನುಂಪಾಗಿ.
ಸಿಂಹಕ್ಕೊಲಿದ ಮದಕರಿಯಂತೆ
ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ./238
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ,
ಕೂಡಲಸಂಗಮದೇವಾ./239
ಆವನೇವನಾದಡೇನು ಹೇಮವಿಲ್ಲದಂಗೈಸಬಹುದೆ
ಕೊಡಲಿಲ್ಲೆಂಬುದರಿಂದ ಸಾಯಲುಬಹುದು, ಸೈರಿಸಬಾರದು.
ಬೇಡುವವರ ನೋಡಿ ನೋಡಿ, ಈಯಲಿಲ್ಲದ ಜೀವನವದೇಕೆ
ಕೂಡಲಸಂಗಮದೇವಾ/240
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ
ಬಾಗಿಲ ತೋರಯ್ಯಾ.
ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ
ಬಾಗಿಲ ತೋರಯ್ಯಾ.
ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ
ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ./241
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದಡೇನಯ್ಯಾ
ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದಡೇನಯ್ಯಾ
ಸುಚರಿತ್ರರು ಎಂತಿದ್ದಡೇನಯ್ಯಾ
ಅವಲೋಹವ ಕಳೆವ ಪರುಷ ಎಂತಿದ್ದಡೇನಯ್ಯಾ
ಕೂಡಲಸಂಗನ ಶರಣರು
ರಸದ ವಾರುದಿಗಳು ಎಂತಿದ್ದಡೇನಯ್ಯಾ /242
ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ,
ದಾಸೋಹಿಯಾಗಿರ್ಪ ದಾಸನಾಗಿರಿಸೆನ್ನ
ಕೂಡಲಸಂಗಮದೇವಾ, ನಿಮ್ಮ ಧರ್ಮ./243
ಆಶೆಯಾಮಿಷ ತಾಮಸದಿಂದ ಭವಬಂಧನವಾದುದನರಿಯಾ !
ತ್ರಿವಿಧ ತ್ರಿವಿಧಾವಸ್ಥೆಯ ಮರೆಯಾ !
ಓಂ ನಮಃ ಶಿವಾಯ, ಶರಣೆಂಬುದ ಬಿಡದೆ ನೆನೆ ಮನವೆ !
ಮಹತಃ ಶಿವಲಿಂಗಸ್ಯ ಮಹತೋ ಜಂಗಮಸ್ಯ ಚ
ತತ್ ಪ್ರಸಾದೋ ಮಹಾನೇವ ಮಹದ್ಭಿರಿದಮೀರಿತಂ||
ಕೂಡಲಸಂಗಮದೇವನ ಪ್ರಸಾದಸಾನ್ನಿಧ್ಯದಿಂದ
ಭವಜನ್ಮಕರ್ಮ ಪಂಚಭೂತಪೂರ್ವನಾಸ್ತಿ./244
ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯಂಗಳೆಂಬವ ಮುಟ್ಟಲೀಯದೆ,
ಆಚಾರವ ಶಿವಾಚಾರವ ಮಾಡುವೆ,
ಭಯಭಕ್ತಿಯಿಂದ ತೋರುವೆ.
ಮನದಲ್ಲಿ ವಂಚನೆಯಿಲ್ಲದೆ, ಭಾವಶುದ್ಧಪೂಜೆಯ ಮಾಡುವೆ.
ಎನ್ನ ಪ್ರಾಣಶಕ್ತಿಯಿಂದ ಕೂಡುವೆ
ಕೂಡಲಸಂಗಮದೇವಾ./245
ಆಸೆ, ಆಮಿಷ, ತಾಮಸ, ಹುಸಿ, ವಿಷಯ,
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ./246
ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು,
ಪುಣ್ಯದ ಪದವಿಯ ಬಯಸಿದಡೆ
ಭವಮಾಲೆಯ ಬರವು ತಪ್ಪದು.
ಬೇಡಲು ಹುಟ್ಟಿದ ಪ್ರಾಣಿಗೆ, ಬೇಡಲು ವಿಧಿಯೆ
ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ
ಲಿಂಗ-ಉದಯ, ಶರಣ-ವಿಸ್ತಾರವು ಬಯಸಿದಡೊಳವೆ
ಕೂಡಲಸಂಗಮದೇವಾ, ನಿಮ್ಮಲ್ಲಿ/247
ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,
ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ !
ಕರುಣಾಕರ, ಅಭಯಕರ, ವರದ,
ನೀ ಕರುಣಿಸಯ್ಯಾ.
ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,
ಭಕ್ತಜನಮನೋವಲ್ಲ ಕೂಡಲಸಂಗಮದೇವಾ./248
ಆಹ್ವಾನವಿಲ್ಲ ಪ್ರಾಣಲಿಂಗವಾಗಿ,
ವಿಸರ್ಜನವಿಲ್ಲ ಲಿಂಗ ನೆಲೆಗೊಂಡಿಪ್ಪುದಾಗಿ.
ಇದು ಕಾರಣ, ಆಹ್ವಾನ ವಿಸರ್ಜನವಿಲ್ಲ, ಶರಣನ ಪರಿ ಬೇರೆ;
ಅಂಗಸಂಗವೆ ಲಿಂಗ, ಲಿಂಗಸಂಗವೆ ಮನ,
ಕೂಡಲಸಂಗನ ಶರಣ ಸುಯಿಧಾನಿ./249
ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು
ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ.
ಪಂಚಭೂತಕಾಯವ ಭವಿಯೆಂದೆನಿಸಲೀಯದೆ
ಪ್ರಸಾದಕಾಯವ ಮಾಡಿ ಸಲಹುವ ನಮ್ಮಯ್ಯ.
ಆಳಿ ಸವೆವಲ್ಲಿ ಅವಧಾನಿಯಾಗಿದ್ದಡೆ
ಆಳ್ದನು ನಮ್ಮ ಕೂಡಲಸಂಗಮದೇವ./250
ಆಳಿಗೊಂಡಹರೆಂದು ಅಂಜಲದೇಕೆ
ನಾಸ್ತಿಕವಾಡಿಹರೆಂದುನಾಚಲದೇಕೆ
ಆರಾದಡಾಗಲಿ ಶ್ರೀಮಹಾದೇವರಿಗೆ ಶರಣೆನ್ನಿ. ಏನೂ ಅರಿಯೆನೆಂದು ಮೋನಗೊಂಡಿರಬೇಡ.
ಕೂಡಲಸಂಗಮದೇವರ ಮುಂದೆ ದಂದಣ ದತ್ತಣಯೆನ್ನಿ./251
ಇಂದಿಂಗೆಂತು ನಾಳಿಂಗೆಂತು ಎಂದು-
ಬೆಂದ ಒಡಲ ಹೊರೆಯ ಹೋಯಿತ್ತೆನ್ನ ಸಂಸಾರ !
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ,
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ.
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದುದಯ್ಯಾ ಈ ಮಾಯೆ, ಕೂಡಲಸಂಗಮದೇವಾ./252
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ.
ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ.
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೆ ಬಲ್ಲ. /253
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾುತ್ತಯ್ಯಾ.
ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ.
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೆ ಬಲ್ಲ./254
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ `ಉಘೇ, ಚಾಂಗು ಭಲಾ’ ಎಂದೆಂಬೆ.
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ./255
ಇಂದ್ರನಾವಾಸ, ಉಪೇಂದ್ರನ ಓಲಗ
ಚಂದ್ರವರಿಾಳಿಯನರಿಯದೆ ಹೋಯಿತ್ತು,
ಬಂಧಮೋಕ್ಷದ ಭವಬಂಧನ ಬಿಡದನ್ನಕ್ಕರ
ಮತ್ತೊಂದರ ಮುಖ ಜನಿಸಿತಲ್ಲಾ.
ಕೂಡಲಸಂಗಮದೇವಾ,
ಚೆನ್ನಬಸವಣ್ಣನ ಸನ್ನಿಧಿಯಿಂದಲಾನು ಬದುಕಿದೆನು./256
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು
ಸತಿಪತಿರತಿಸುಖಭೋಗೋಪಭೋಗವ, ವಿಳಾಸವ
ಬಿಟ್ಟನೆ ಸಿಂಧುಬಲ್ಲಾಳನು
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮಾಚಾರಕ್ಕೆ ದೂರ, ಕೂಡಲಸಂಗಮದೇವಾ. /257
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ,
ಜಗಕ್ಕೆ ಇರುಳಪ್ಪುದೆ ಮರುಳೆ
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ
ಅನಾಮಿಕರೊಡನಾಡಿ ಗೆಲಿವುದೇನು
ಕೂಡಲಸಂಗಮದೇವಾ. /258
ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು
ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು,
ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ,
ಕಿರಿದಾಗಿ ಭೃತ್ಯಾಚಾರವ ನುಡಿದು,
ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ,
ಕೂಡಲಸಂಗಮದೇವ ಪ್ರಮಥರ ಮುಂದೆ./259
ಇದ್ದ ಪರಿ ಇಂತುಟಿದೆ ನೋಡಯ್ಯಾ;
ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ,
ಭೂತಳದೊಳಗೆ ಕಂಡುದಿಲ್ಲ.
ಇಂತಪ್ಪ ಅನಿಯಮದ ಸುಳುಹು,
ಅಹುದಹುದು, ಅರಿದರಿದು
ಜಂಗಮಸ್ಥಲ ಇಂತುಟಲ್ಲದೆ, ಎಂತುಟು ಹೇಳಾ
ಆಪ್ಯಾಯನದ ಅರಿಕೆಯ ಹೊಲಬ ಕಾಣಬಾರದು,
ಊಡಿಸಿದಡೆ ಉಂಬನೊ ಉಣ್ಣನೊ
ಉಂಬಂಥವರಾದಡೆ ನೀಡುವೆ ಕೂಡಲಸಂಗಮದೇವರಿಗೆ
ಚೆನ್ನಬಸವಣ್ಣಾ, ನೀನಹುದಹುದೆನಲಿಕೆ./260
ಇನ್ನೇವೆನಿನ್ನೇವೆ ಕೆಮ್ಮನೆ ಕೆಟ್ಟೆನು,
ಇನ್ನೇವೆನಿನ್ನೇವೆ ಕೆಮ್ಮನೆ ಕೆಟ್ಟೆನು.
ನಿಮ್ಮ ಶರಣರು ಬಂದು ಬಾಗಿಲೊಳಿರಲು,
ದಿಮ್ಮನೆ ಇದಿರೆದ್ದು ವಂದಿಸಲರಿಯದೆ
ಕೆಟ್ಟ ಕೇಡನೇನೆಂದುಪಮಿಸುವೆನು.
ಕೂಡಲಸಂಗಮದೇವಾ,
ನಾನುಭಯಭ್ರಷ್ಟನೆಂಬುದು ಎನಗಿಂದರಿಯಬಂದಿತ್ತು./261
ಇನ್ನೇವೆನಿನ್ನೇವೆನಯ್ಯಾ
ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು,
ಎನ್ನ ನಿಂದಲ್ಲಿ ನಿಲ್ಲಲೀಯದು,
ಎನ್ನ ಕುಳಿತಲ್ಲಿ ಕುಳ್ಳಿರಲೀಯದು,
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ.
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ.
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ.
ಕೂಡಲಸಂಗಮದೇವಾ
ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ,
ಎಂದು ನಿಮ್ಮನೊಡಗೂಡುವೆನಯ್ಯಾ./262
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ/263
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ,
ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ./264
ಇರಿಸಿಕೊಂಡು ಭಕ್ತರಾದರೆಮ್ಮವರು,
ತರಿಸಿಕೊಂಡು ಭಕ್ತರಾದರೆಮ್ಮವರು,
ಕೊರೆಸಿಕೊಂಡು ಭಕ್ತರಾದರೆಮ್ಮವರು,
ಜರಿಸಿಕೊಂಡು ಭಕ್ತರಾದರೆಮ್ಮವರು.
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾುತ್ತು./265
ಇರುಳೆಂದೇನೋ ಕುರುಡಂಗೆ, ಹಗಲೆಂದೇನೋ ಕುರುಡಂಗೆ !
ತಾಳವಬಾರಿಸಿದಡೇನೋ,ಪಂಚಮಹಾಶಬುದವ
ಬಾರಿಸಿದಡೇನೋ ಕಿವುಡಂಗೆ ! ಕೂಡಲಸಂಗಮದೇವಯ್ಯನ
ಪಥವಿನ್ನಾವುದೆಂದರಿಯದವಂಗೆ ! /266
ಇಲ್ಲವೆಯ ಮೇಲೆ ಕಂಚೊಡೆದಂತೆ ಬಡ ಮನವೆನ್ನ ಕಾಡಿಹಿತಯ್ಯಾ,
ಮತಿುಲ್ಲದ ಮರುಳ ನಾನಯ್ಯಾ,
ಭಕ್ತಿುಲ್ಲದ ಬಡವ ನಾನು.
ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ,
ಎನಗೆ ನೀ ಕರುಣಿಸು ಕೂಡಲಸಂಗಮದೇವಾ./267
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ./268
ಇಷ್ಟಲಿಂಗಕ್ಕರ್ಪಿಸಿ, ಮೃಷ್ಟಾನ್ನವನುಂಡು,
ಇಷ್ಟಾರ್ಥಸಿದ್ಧಿಯ ಪಡೆದೆಹೆವೆಂಬ ಮರಳುಗಳು ನೀವು ಕೇಳಿರೆ;
ಪ್ರಾಣಲಿಂಗಸ್ಥಲ ನಿಮಗೆಲ್ಲಿಯದು ಪ್ರಸಾದಸ್ಥಲ ನಿಮಗೆಲ್ಲಿಯದು
ಓಗರವನುಂಡು ಆಗಾದೆವೆಂದಡೆ,
ಮೂಗಕೊಯ್ಯದೆ ಮಾಣ್ಬನೆ ನಮ್ಮ ಕೂಡಲಸಂಗಮದೇವನು /269
ಇಷ್ಟಲಿಂಗವೊಂದು ಪ್ರಾಣಲಿಂಗ[ವೊಂದು, ಭಾವಲಿಂಗ]ವೊಂದೆಂಬ
ಮಿಟ್ಟಿಯ ಭಂಡರ, ಅವರ ಮಾತ ಕೇಳಲಾಗದು.
ಅಂಗಳದೊಳಗೊಬ್ಬ ಗಂಡ, ಮನೆಯೊಳಗೊಬ್ಬ ಗಂಡ,
ಹಿತ್ತಿಲೊಳಗೊಬ್ಬ ಗಂಡನೆಂಬ ಸತಿಯರ
ಲೋಕದ ಮಾನವರು ಮೆಟ್ಟಿ ಮೂಗಕೊಯ್ಯದೆ ಮಾಣ್ಬರೆ, ಅಯ್ಯಾ ?
ಲಿಂಗತ್ರಯವೆಂದು ತೋರಿದವರಾರೊ ?
`ಲಿಂಗಮೇಕಂ ಪರಂ ನಾಸ್ತಿ ಎಂದು ಸದ್ಗುರುಸ್ವಾಮಿ ಅರುಹಿದನಾಗಿ.
ಷಟ್ತ್ರಿಂಶತ್ತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು
ಕರಸ್ಥಲದಲ್ಲಿ, ಮನಸ್ಥಲದಲ್ಲಿ, [ಭಾವಸ್ಥಲದಲ್ಲಿ] ವೇದ್ಯವಾದ ಬಳಿಕ
ಸರ್ವಾಂಗಲಿಂಗ, ಕೂಡಲಸಂಗಯ್ಯಾ ನಿಮ್ಮ ಶರಣಂಗೆ./270
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು,
ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು
ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ.
ಅದೆಂತೆಂದಡೆ;
ತ್ರಿಗುಣಂ ಪಂಚಕಂ ಚೈವ ಚತ್ವಾರಿ ಷಡ್ವಿಧೈವ ಚ
ಸಘಾತಂ ವ್ಯಸನಂ ಚೈವ ಇತ್ಯಾದಿ ಭವಿಮಿಶ್ರಿತಂ
ಎಂದುದಾಗಿ, ಅಂತರಂಗದ ಭವಿಯನು ಹಿಂಗಿ,
ಅನೃತಮಸ್ಥಿರಂ ವಾಕ್ಯಂ ವಂಚನಂ ಪಙ್ತಭೇದನಂ
ಔದಾಸೀನಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ
ಎಂಬೀ ಮಾನವರಂಗದ ಭವಿಯನು ಕಳೆದು,
ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತಮಂ
ಪಾಪೀ ಕೋಪೀ ಪರಿಭ್ರಷ್ಟೋನಾಸ್ತಿಕೋ ವ್ರತದೂಷಕಃ
ದುರ್ಜನಶ್ಚ ದುರಾಚಾರೀ ದುರ್ಮುಖಶ್ಚಾಪ್ಯದೀಕ್ಷಿತಃ
ಪ್ರಮಾದಾದ್ದೃಶ್ಯತೇ ಯೇನ ತಸ್ಯ ಪೂಜಾ ತು ನಿಷ್ಫಲಂ
ಎಂಬೀ ಬಹಿರಂಗದ ಭವಿಯನ್ನು ತೊಲಗಿಸಿ,
ಇಂತೀ ತ್ರಿವಿಧಭವಿಯನು ದೂರಮಾಡಿ,
ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ
ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ. /271
ಈ ಕೈಯಲೆ ಸುಖವು, ಈ ಕೈಯಲೆ ದುಃಖವು.
ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ
ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು,
ಕೂಡಲಸಂಗಮದೇವಾ./272
ಈ ಲೋಕದ ಭೀತರು, ಆ ಲೋಕದ ಕಲಿಗಳು,
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯರೆಲ್ಲರು
ಅಜನಿತಂಗೆ ಸರಿಯೆ
ಮೂಜಗದಲ್ಲಿ ನಿ[ರು]ತರು ಕೂಡಲಸಂಗನ ಶರಣರು
ತ್ರಿವಿಧವನರಿಯರು./273
ಈರೇಳು ರತ್ನ, ಹದಿನೆಂಟು ಲಕ್ಷಗಜ,
ನಾರಿಯರು ನಾಲ್ಕು ಲಕ್ಷವು ಮೂವತ್ತೆರಡುಸಾವಿರ,
ಮಕ್ಕಳು ಹದಿನಾರು ಲಕ್ಷ,
ಅವರುಗಳೇರುವ ರಥಂಗಳು ಸೂರ್ಯನ ರಥಕ್ಕೆ ಸರಿಮಿಗಿಲೆನಿಸುವ ರಥಂಗಳು,
ಸಾಲದೆ, ಸಿರಿಗೆ ನೆಲೆಯೆನಿಸುವ ಅಸಂಖ್ಯಾತ ಪುರ,
ಮೂರುವರೆ ಕೋಟಿ ಬಂಧುಗಳು,
ಮೂವತ್ತೆಂಟು ಕೋಟಿ ಜಾತ್ಯಶ್ವ,
ಇಪ್ಪತ್ತೆಂಟು ಕೋಟಿ ಮೈಗಾವಲ ವೀರಭಟರು,
ಛಪ್ಪನ್ನ ದೇಶದ ರಾಯರುಗಳೆಲ್ಲರು ಕಪ್ಪಕಾಣಿಕೆಯಂ ತೆತ್ತು ಬಹರು.
ಕೂಡಲಸಂಗಮದೇವಾ, ನಿಮ್ಮ ಕೃಪೆ ತಪ್ಪಿದಲ್ಲಿ
ಆ ಸಗರ ಕಾರ್ತವೀರ್ಯರೊಂದು ಕ್ಷಣದಲ್ಲಿ ಮಡಿದರು./274
ಈಶ್ವರಸದ್ಭಾವೇ ಕಿಂ ಪ್ರಮಾಣಂ
ಎಂಬ ಮೀಮಾಂಸಕನ ಮೂಗಿನ ಕೊನೆಯನು
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೃಃ
ದ್ಯಾವಾಭೂಮೀ ಜನಯನ್ ದೇವ ಏಕಃ
ಎಂಬ ಸುರಗಿಯಲ್ಲಿ ಅರಿದು, ವೈಶೇಷಿಕವೆಂಬ ಇಟ್ಟಿಗೆಯಲೊರಸಿ,
ಕೂಡಲಸಂಗಯ್ಯನೆಂಬ ಕನ್ನಡಿಯ ತೋರುವೆನು./275
ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ:
ಉಂಡುದೇನಾಯಿತ್ತೆಂಬುದ ನಿನ್ನ ನೀ ತಿಳಿದು ನೋಡಾ,
ಉಂಡುದು ಆಗಳೆ ಅಪೇಯವಾುತ್ತು.
ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು
ಆನು ಮರುಗುವೆನಯ್ಯಾ, ಕೂಡಲಸಂಗಮದೇವಯ್ಯಾ./276
ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ,
ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿಯೆನಿಸಿತ್ತಯ್ಯಾ.
ಅರಿದಡೆ ಶರಣ, ಮರೆದಡೆ ಮಾನವ,
ಮರೆಯದೆ ಪೂಜಿಸು ಕೂಡಲಸಂಗನ. /277
ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ
ಎಂತಯ್ಯಾ ಅವರ ಯುಕ್ತರೆಂತೆಂಬೆ
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ. /278
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ,
ಬಂಧುಗಳು ಬಂದಾಗಳಿಲ್ಲೆನ್ನ.
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ,
ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ,
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ/279
ಉಟ್ಟು-ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು,
ಕಂತೆ-ಬೊಂತೆಯ ಜಂಗಮ ಬಂದಡೆ ಹೀನವೆಂದು
ಕಂಡೆನಾದಡೆ ಪಂಚಮಹಾಪಾತಕ.
ಇದು ಕಾರಣ, ಅನ್ನ-ವಸ್ತ್ರ-ಧನ ಮಾಟದಲ್ಲಿ
ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವ,
ಕೂಡಲಸಂಗಮದೇವ./280
ಉಡುವಿನ ಭಾವದಲ್ಲಿ ಹಡೆದರೆಮ್ಮವರು, ಊಸರವಳ್ಳಿಯಂತೆ ಎನ್ನ ಇರವು,
ಬಾವುಲ ಬಾಳುವೆಯ ತರನಂತೆ ! ಹೊತ್ತಾರೆ ಎದ್ದ ಕುರುಡಂಗೆ ಆಗುಸೆಯಲ್ಲಿ ಅಸ್ತಮಾನದಂತೆ-
ಆನು ಭಕ್ತಿಯ ಬಯಸಿದಡಹುದೆ ಕೂಡಲಸಂಗಮದೇವಾ/281
ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ. /282
ಉತುಪತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ
ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ
ಮೃತ್ಯುವಿನ ಬಾುಗೆ ಒಳಗಾಗಲೇಕೆ
ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು
ನಮ್ಮ ಕೂಡಲಸಂಗಮದೇವನ./283
ಉತ್ತಮ ಮಧ್ಯಮ ಕನಿಷ್ಟವೆಂದು, ಬಂದ ಜಂಗಮವನೆಂದೆನಾದಡೆ
ನೊಂದೆನಯ್ಯಾ, ಬೆಂದೆಯಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು.
ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ,
ಕೂಡಲಸಂಗಮದೇವಾ/284
ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ !/285
ಉದಕದ ಬರವು ವಿಶ್ವಕ್ಕೆ ಹೊಸಪರಿ ಎಂಬಂತೆ
ಮಾಟವ ಮಾಡುವನು ಜಂಗಮಕ್ಕೆ,
ನಿರವಯದ ಸುಳುಹು ನಿಬ್ಬೆರಗಿನ ಬರವಿಂಗೆ.
ಕೂಡಲಸಂಗಮದೇವ ಕೇಳಯ್ಯಾ,
ಇಂತಲ್ಲದೆ ನಿಮ್ಮ ನಿಜವನರಿಯಬಾರದೆನಗೆ./286
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,
ನನೆಯೊಳಗಣ ಪರಿಮಳದಂತಿದ್ದಿತ್ತು,
ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು./287
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ
ಮಾಡುವ ಕರ್ಮಿ ನೀ ಕೇಳಾ;
ಉದಯವೆಂದೇನೊ ಶರಣಂಗೆ
ಮಧ್ಯಾಹ್ನವೆಂದೇನೊ ಶರಣಂಗೆ
ಅಸ್ತಮಾನವೆಂದೇನೊ ಶರಣಂಗೆ
ಮಹಾಮೇರುವಿನ ಮರೆಯಲ್ಲಿರ್ದು
ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ,
ನಮ್ಮ ಕೂಡಲಸಂಗಮದೇವರು./288
ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾುತ್ತು,
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರ ಕಠಿಣವಾುತ್ತು
ಮೊದಲಲ್ಲಿ ಲಿಂಗಭಕ್ತಿ ಹಿತವಾುತ್ತು,
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾುತ್ತು
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ./289
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲಯ್ಯಾ. ಎಂತೋ ಲಿಂಗ ತಂದೆ, ಎಂತಯ್ಯಾ ಎನ್ನ ಪೂರ್ವಲಿಖಿತ
ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ, ನೀ ಕರುಣಿಸು, ಕೂಡಲಸಂಗಮದೇವಾ./290
ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು. /291
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ
ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ
`ಭಗರ್ೋ ದೇವಸ್ಯ ಧೀಮಹಿ’ ಎಂದುದಾಗಿ,
ಕೂಡಲಸಂಗನಲ್ಲದಿಲ್ಲೆಂದುದು ವೇದ. /292
ಉಮಾಧಿನಾಥರು ಕೋಟಿ, ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯಾ.
ಸದಾಶಿವರು ಕೋಟಿ, ಗಂಗೆವಾಳುಕ ಸಮರುದ್ರರಿವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ. /293
ಉರಿಯೊಳಗಣ ಕರ್ಪುರಕ್ಕೆ ಕರಿಯುಂಟೆ ಅಯ್ಯಾ
ಬಯಲ ಮರೀಚಿಜಲಕ್ಕೆ ಕೆಸರುಂಟೆ
ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೆ
ನೀವು ನೆರೆ ಒಲಿದ ಬಳಿಕ ಎನಗೆ ಭವವುಂಟೆ
ಕೂಡಲಸಂಗಮದೇವಾ,
ನಿಮ್ಮ ಚರಣಕಮಲದೊಳಗೆನ್ನನಿಂಬಿಟ್ಟುಕೊಳ್ಳಯ್ಯಾ./294
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು ಮಾಬುದೆ
ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ
ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ. /295
ಉರೆ ತಾಗಿದ ಮೃಗವು ಒಂದಡಿಯನಿಡುವುದೆ
ತನುವ ತಾಗಿದ ಸುಖವು ಅಗಲುವುದೆ
ಕೂಡಲಸಂಗನ ಶರಣರ ಅನುಭಾವವರಿದವರ
ಮರಳಿ ಮತ್ರ್ಯರೆಂದೆನಬಹುದೆ /296
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ./297
ಊಡುವ ಉಡಿಸುವ ಗಂಡನಿದ್ದಂತೆ
ಜೋಡೆ, ಮಿಂಡಂಗೆ ಕಣ್ಣ ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು.
ಕೂಡಲಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ, ಹಲುದೋರೆ ಕೊಯ್ವ. /298
ಊರ ಮಾರಿಯ ಮೂಗ ಕೊಯ್ವೆ, ಆಲದ ಬ್ರಹ್ಮನ ಹಲ್ಲ ಕಳೆವೆ,
ಅಂತರದವ ನಮ್ಮ ಲೆಂಕ ನೋಡಾ,
ಆಕಾಶದವ ನಮ್ಮಾಳು ನೋಡಾ.
ಎಮಗೆ ಕೂಡಲಸಂಗಯ್ಯನುಂಟು,
ಕಟ್ಟು, ಜವನೆಂಬ ತರುವಲಿಗೊರೆಯ./299
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ
ಲಜ್ಜೆಗೆಡಲೇಕೆ ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ. /300
ಊರ ಸೀರೆಗೆ ಅಸಗ ಬಡಿ ಹಡೆದಂತೆ
ಹೊನ್ನೆನ್ನದು, ಮಣ್ಣೆನ್ನದು ಎಂದು ಮರುಳಾದೆ,
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ,
ಕೂಡಲಸಂಗಮದೇವಾ./301
ಊರಿಗೆ ಹೊಸಬರು ಬಂದರೆ
ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ
ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು
ದೂಷಕರು ದೂಷಿಸದಿಪ್ಪರೇ ಅಯ್ಯ ?
ದೂಷಕರ ಧೂಮಕೇತುಗಳು ನಿಮ್ಮ ಶರಣರು,
ಕೂಡಲಸಂಗಮದೇವಾ./302
ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣು ಓ !
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣು ಓ !
ಮರಳಿ ಭವಕ್ಕೆ ಬಾಹೆ, ಬಾರದಿಹೆ,
ಕರ್ತು ಕೂಡಲಸಂಗಂಗೆ ಶರಣೆನ್ನು ಓ !/303
ಎಂತಕ್ಕೆ ಎಂತಕ್ಕೆ ನಾ ನಿಮ್ಮ ದೇವರೆಂದರಿದೆನು,
ಇಂತಾಗಿ ನೀವೆನ್ನನಾರೆಂದರಿುರಿ. ನಂಬಲರಿಯೆ, ನಂಬಿಸಲರಿಯೆ. ಒಲಿಯಲರಿಯೆ, ಒಲಿಸಲರಿಯೆ.
ಯಥಾ ಭಾವಸ್ತಥಾ ಲಿಂಗಂ ಸತ್ಯಂ ಸತ್ಯಂ ನ ಸಂಶಯಃ
ಯಥಾ ಭಕ್ತಿಸ್ತಥಾ ಸಿದ್ಧಿ:ಸತ್ಯಂ ಸತ್ಯಂ ನ ಸಂಶಯಃ ಎಂದುದಾಗಿ,
ಕೂಡಲಸಂಗಮದೇವಾ, ಕೇಳಯ್ಯಾ ಕೋಟಿ ಕೋಟಿ ವರುಷ ಕೋಟಲೆಗೊಂಡೆನಯ್ಯಾ./304
ಎಂತಹವನಾದಡೇನು, ಲಿಂಗವ ಮುಟ್ಟದವನೆ ಕೀಳುಜಾತಿ.
ಕುಲವಹುದು ತಪ್ಪದು ಲಿಂಗ ಮುಟ್ಟಲೊಡನೆ,
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ./305
ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ
ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಕಟ್ಟುವಡೆದೆನು.
ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ.
ಪಂಚೇಂದ್ರಿಯ, ಸಪ್ತಧಾತು
ಹರಿಹಂಚುಮಾಡಿ ಕಾಡಿಹವಯ್ಯಾ,
ಅಯ್ಯಾ, ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ./306
ಎಂದೊ, ಸಂಸಾರದ ದಂದುಗ ಹಿಂಗುವುದು ?
ಎಂದೊ, ಮನದಲ್ಲಿ ಪರಿಣಾಮವಹುದೆನಗೆಂದೋ, ಎಂದೋ ?
ಕೂಡಲಸಂಗಮದೇವಾ,
ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ/307
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು,
ಬೇಡದಿದ್ದಡೆ, ಅಯ್ಯಾ, ನಿಮಗೆ ಪ್ರಮಥರಾಣೆ.
ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು.
ಕೂಡಲಸಂಗಮದೇವಾ./308
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತೆನ್ನ ಭಕ್ತಿ.
ತನುವಿನೊಳಗೆ ಮನ ಸಿಲುಕದೆ
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು,
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು.
ನಾನೇತರಲ್ಲಿ ನೆನೆವೆನಯ್ಯಾ, ಕೂಡಲಸಂಗಮದೇವಾ/309
ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.
ಮಾಯದ ಸಂಸಾರವ ನಚ್ಚಿ, ಕೆಟ್ಟು
ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ./310
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು. /311
ಎಡದ ಕೈಯಲು ನಿಗಳವನಿಕ್ಕಿ
ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ
ಪ್ರಾಣವೊಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ
ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ./312
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲು ಓಜುಗಟ್ಟಿಗೆ,
ಆವಾಗ ಬಂದಾನೆಮ್ಮಯ್ಯ,
ಬಡಿದು ಹಾಲ ಕುಡಿಸುವ ತಂದೆ.
ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ
ಅತಿಭಕ್ತ್ಯಾ ಲಿಂಗತ್ಟುರಪಹಾಸ್ಯಾದ್ಯಮದಂಡನಮ್!
ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೆ
ಭಕ್ತಿಯ ಪಥವ ತೋರುವ ತಂದೆ./313
ಎಡದ ಪಾದದಲೊದ್ದಡೆ ಬಲದ ಪಾದವ ಹಿಡಿವೆ,
ಬಲದ ಪಾದದಲೊದ್ದಡೆ ಎಡದ ಪಾದವ ಹಿಡಿವೆ,
ತ್ರಾಹಿ ತ್ರಾಹಿ ತಪ್ಪೆನ್ನದು, ಕ್ಷಮೆ ನಿಮ್ಮದು.
ಕೂಡಲಸಂಗಮದೇವಾ,
ನಿಮ್ಮ ಕರುಣದ ಕಂದ ನಾನು./314
ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು,
ಗಣನೆಯಿಲ್ಲದೆ ನೀಡುತ್ತಿರಲು,
ತೋರದ ಮುನ್ನವೆ ಅರ್ಪಿತವಾದವು.
ಇಂತು ಎಣಿಸಿ ನೋಡೆಹೆನೆಂದಡೆ ಮನಕೆ ಸಾಧ್ಯವಲ್ಲ,
ಬಯಲು ಬಾಯಿದೆಗೆದಂತೆ ಉಣ್ಣುತ್ತಿದ್ದಾನು,
ಕೂಡಲಸಂಗಮದೇವನು./315
ಎತ್ತ ನೋಡಿದಡತ್ತ ನಿಮ್ಮ ತೇಜವನೇ ಕಾಬೆನಲ್ಲದೆ
ಮತ್ತೊಂದ ಕಾಣೆ.
ಎನ್ನ ಚಿತ್ತ ನೋವಲ್ಲಿ ನೊಂದಲ್ಲಿ ನೆನೆವಲ್ಲಿ ನೀನೇ ಇಪ್ಪೆಯಾಗಿ,
ಬೆಳಗಿರಲು ಕತ್ತಲೆಯುಂಟೆ
ಕೂಡಲಸಂಗಮದೇವಾ /316
ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ
ಧರಧುರ ಭಕ್ತಿಯ ಮಾಡಲೇಕಯ್ಯಾ
ನಿಂದಿಸಲೇಕೆ ಸ್ತುತಿುಸಲೇಕೆ
ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ
ಮೆಟ್ಟಿ ಹುಡಿಹೊಯ್ಯದೆ ಮಾಬನೆ
ಕೂಡಲಸಂಗಮದೇವ/317
ಎತ್ತು ತೊತ್ತಾಗಿ, ಭೃತ್ಯನಾಗಿ ಎಂದಿಪ್ಪೆನಯ್ಯಾ.
ನಿಮ್ಮವರ ಮನೆಯಲು ಕೂಡಲಸಂಗಮದೇವಾ,
ಲಿಂಗಜಂಗಮದ ಲೆಂಗಿಯಾಗಿ./318
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
`ವಿಶ್ವತಶ್ಚಕ್ಷು’ ನೀನೆ ದೇವಾ,
`ವಿಶ್ವತೋಮುಖ’ ನೀನೆ ದೇವಾ,
`ವಿಶ್ವತೋಬಾಹು’ ನೀನೇ ದೇವಾ,
`ವಿಶ್ವತಃಪಾದ’ ನೀನೆ ದೇವಾ, ಕೂಡಲಸಂಗಮದೇವಾ./319
ಎದೆ ಬಿರಿವನ್ನಕ್ಕ, ಮನ ದಣಿವನ್ನಕ್ಕ,
ನಾಲಗೆ ನಲಿನಲಿದೋಲಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ, ಎನಗೆನ್ನ ತಂದೆ.
ಬಿರಿಮುಗುಳಂದದಿ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ,
ಕೂಡಲಸಂಗಯ್ಯಾ./320
ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು.
ಬಾಣನವ ನಾನು, ಮಯೂರನವ ನಾನು,
ಕಾಳಿದಾಸನವ ನಾನು.
ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ
ಎತ್ತಿ ಮುದ್ದಾಡಿಸಿದರೆನ್ನ, ಕೂಡಲಸಂಗಯ್ಯಾ./321
ಎನಗೆ ಗುರುವಿನ ಪ್ರಸಾದ, ನಿನಗೆ ಚೆನ್ನನ ಪ್ರಸಾದ,
ಎನಗೆಯೂ ನಿನಗೆಯೂ ಸಮಯಾಚಾರ ಸರಿ.
ಕೂಡಲಸಂಗಮದೇವಾ, ನೀನೆನಗೆ ಚಿಕ್ಕ ತಮ್ಮ. /322
ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ,
ಎನಗೆ ಮರಣವಾಯಿತ್ತೆಂಬರು ಎನಗೆ ಮರಣವಿಲ್ಲವಯ್ಯಾ.
ಜನನವಾದಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ,
ಮರಣವಾದಡೆ ನಿಮ್ಮ ಶ್ರೀಚರಣವನೆಯ್ದುವೆ.
ಬಾವನ್ನದ ವೃಕ್ಷವು ಊರೊಳಗಿದ್ದಡೇನು, ಅಡವಿಯೊಳಗಿದ್ದಡೇನು
ಪರಿಮಳ ಒಂದೇ, ಕೂಡಲಸಂಗಮದೇವಾ./323
ಎನಗೆ ನಾನೇ ಹಗೆ ನೋಡಯ್ಯಾ,
ಎನಗೆ ನಾನೇ ಕೆಳೆ ನೋಡಯ್ಯಾ.
ನಿಮ್ಮ ಸದ್ಭಕ್ತರೊಡನೆ ವಿರೋಧಮಾಡಿದಡೆ ಎನ್ನ ಕೊಲುವುದಾಗಿ,
ನಿಮ್ಮ ಪುರಾತನರಿಗಂಜಿ ಬೆಸಗೊಂಡಡೆ ಎನ್ನ ಕಾಯ್ವುದಾಗಿ.
ಅನ್ಯ ಹಗೆಯೆಲ್ಲಿ ಕೆಳೆಯೆಲ್ಲಿ
ಬಾಗಿದ ತಲೆಯ ಮುಗಿದ ಕೈಯಾಗಿರಿಸು,
ಕೂಡಲಸಂಗಮದೇವಾ./324
ಎನಗೆ ನಿಮ್ಮ ನೆನಹಾದಾಗ ಉದಯ,
ಎನಗೆ ನಿಮ್ಮ ಮರಹಾದಾಗ ಅಸ್ತಮಾನ.
ಎನಗೆ ನಿಮ್ಮ ನೆನೆಹವೆ ಜೀವನ,
ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ.
ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ,
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ./325
ಎನಿಸನೋದಿದಡೇನು ! ಎನಿಸ ಕೇಳಿದಡೇನು !
ಚತುವರ್ೇದಪಠ ತೀವ್ರವಾದಡೇನು
ಲಿಂಗಾರ್ಚನೆ ಹೀನವಾದಡೆ, ಶಿವಶಿವಾ !
ಬ್ರಾಹ್ಮಣನೆಂಬೆನೆ ಎನಲಾಗದು.
ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ
ಶ್ರುತೇನ ಶ್ರೋತ್ರಿಯಶ್ಚೈವ ಬ್ರಹ್ಮ ಚರತಿ ಬ್ರಾಹ್ಮಣಾ ಎಂದುದಾಗಿ
ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ,
ಇದು ಕಾರಣ ಕೂಡಲಸಂಗಮದೇವಾ
`ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ ಎಂಬೆನು. /326
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,
ನೆನೆದು ಮೃದುವಾಗಬಲ್ಲುದೆ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಡವಿಲ್ಲದನ್ನಕ್ಕ
ನಿದಾನವ ಕಾಯಿದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ./327
ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ.
ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ.
ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ. /328
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ
ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ !
ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ!
ಕೂಡಲಸಂಗಮದೇವಾ, ಜಂಗಮವಾಗಿ ಬಂದು
ಎನ್ನ ಮನದ ಸೂತಕವ ಕಳೆಯಾ./329
ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ,
ಮತ್ತಾರೂ ಇಲ್ಲ, ಹರಹರಾ, ನೀನೆ ಕಂಡಯ್ಯಾ,
ಎನ್ನ ಮಾತಾಪಿತನು ನೀನೆ ಕಂಡಯ್ಯಾ.
ಕೂಡಸಂಗಮದೇವಾ./330
ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು,
ಅನಿಮಿಷನ ಕರಸ್ಥಲದ ಲಿಂಗವ ನೀವು ಕೊಂಡಿರಿ.
ನಿಮ್ಮ ಕರಸ್ಥಲವೆ ಪರಸ್ಥಲವಾಯಿತ್ತು,
ಕುರುಹಳಿದಲ್ಲಿ ಕುರುಹ ಕೊಂಬ ಪರಿ ಎಂತಯ್ಯಾ
ಕೊಡುವವರು ಕೊಂಬವರೊಳಗೆ ಸಿಲುಕಿದ ಬಳಿಕ
ಕೊಂಬವರು ಕೊಡುವವರೊಳಗೆ ಸಿಲುಕಿದ ಬಳಿಕ,
ಕೂಡಲಸಂಗಮದೇವಪ್ರಭುವೆ,
ನಿಮ್ಮ ಕರಸ್ಥಲದ ಲಿಂಗವೆನಗೆ ಸಾಧ್ಯವಹ ಪರಿಯೆಂತಯ್ಯಾ /331
ಎನ್ನ ಕಾಯಕ್ಕೆ ಕಾಹ ಹೇಳುವರಲ್ಲದೆ ಮನಕ್ಕೆ ಕಾಹ ಹೇಳುವರಿಲ್ಲಯ್ಯಾ,
ಅಣಕದ ಮಿಂಡತನಂಗಳ ನೋಡಿ ಕಂಡೆನವ್ವಾ.
ಈತನ ಲೀಲೆಗಂಡಾನು ಬೆರಗಾದೆ.
ಕೂಡಲಸಂಗಮದೇವ ಎನ್ನ ಮನಕ್ಕೆ ಕಾಹ ಹೇಳಿದನವ್ವಾ/332
ಎನ್ನ ಕಾಯದ ಕತ್ತಲೆ ಹಿಂಗಿತ್ತು,
ಚೆನ್ನಬಸವಣ್ಣಾ ಇಂದಿನಲ್ಲಿ.
ಎನ್ನ ತನುಮನಧನದ ಲೋಭವಳಿದು ತಳವೆಳಗಾಯಿತ್ತು,
ಚೆನ್ನಬಸವಣ್ಣಾ ಇಂದಿನಲ್ಲಿ.
ಎನ್ನನೆಡೆಗೊಂಡ ಅಹಂಕಾರ ನಿರ್ವಯಲಾಯಿತ್ತು
ಚೆನ್ನಬಸವಣ್ಣಾ ಇಂದಿನಲ್ಲಿ.
ಕೂಡಲಸಂಗಮದೇವರ ತೃಪ್ತಿಯ ತೆರನ
ನೀನು ತೋರಿದೆಯಾಗಿ ನಾನು ಬದುಕಿದೆ ಕಾಣಾ,
ಚೆನ್ನಬಸವಣ್ಣಾ./333
ಎನ್ನ ಕಾಯದ ಕತ್ತಲೆಯ ಕಳೆಯಲರಿಯೆನು,
ಎನ್ನ ಜೀವದ ನಿಲವ ಗೆಲಲರಿಯೆನು,
ಎನ್ನ ಭಾವದ ಸೂತಕವ ಕಳೆಯಲರಿಯೆನು.
ನಾನೆಂತು ಬಲ್ಲೆನಯ್ಯಾ ನಿಮ್ಮ ಘನಮಹಿಮರ ನಿಲವ
ಕೂಡಲಸಂಗಮದೇವಾ,
ನಿಮ್ಮ ಶರಣ ಮಡಿವಾಳ ಮಾಚಿತಂದೆಯ ಘನವ ನೀವೆ ಬಲ್ಲಿರಿ. /334
ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮಪ್ರಭುದೇವರ ಕಂಡೆನು,
ಎನ್ನ ಮನದ ಕರಸ್ಥಲದಲ್ಲಿ ಚೆನ್ನಬಸವಣ್ಣನ ಕಂಡೆನು,
ಎನ್ನ ಅರಿವಿನ ಕರಸ್ಥಲದಲ್ಲಿ ಮಡಿವಾಳಯ್ಯನ ಕಂಡೆನು.
ಒಳಗು ಹೊರಗು, ಹೊರಗು ಒಳಗೆಂಬ ಭೇದವನರಿಯದೆ ಇದ್ದೆನು.
ಕೂಡಲಸಂಗಮದೇವಯ್ಯಾ,ನಿಮ್ಮ ಶರಣರು ಎನ್ನ ಪಾವನವ ಮಾಡಿದ ಪರಿಣಾಮವ
ಅಂತಿಂತೆನಲಮ್ಮದೆ ನಮೋ ನಮೋ ಎನುತ್ತಿದ್ದೆನು./335
ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ./336
ಎನ್ನ ಕಾಯವ ಶುದ್ಧವ ಮಾಡಿದಾತ ಮಡಿವಾಳ,
ಎನ್ನ ಮನವ ನಿರ್ಮಳವ ಮಾಡಿದಾತ ಮಡಿವಾಳ,
ಎನ್ನಂತರಂಗವ ಬೆಳಗಿದಾತ ಮಡಿವಾಳ,
ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ.
ಕೂಡಲಸಂಗಮದೇವಾ,
ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ./337
ಎನ್ನ ಗಂಡ ಬರಬೇಕೆಂದು,
ಎನ್ನಂತರಂಗವೆಂಬ ಮನೆಯ ತೆರಹು ಮಾಡಿ,
ಅಷ್ಟದಳವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ,
ಧ್ಯಾನವೆಂಬ ಮೇಲುಕಟ್ಟಂ ಕಟ್ಟಿ,
ಜ್ಞಾನವೆಂಬ ದೀಪವ ಬೆಳಗಿ,
ನಿಷ್ಕ್ರೀಯೆಂಬ ಉಪಕರಣಂಗಳ ಹರಹಿಕೊಂಡು,
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು,
ಕಂಗಳೆ ಪ್ರಾಣವಾಗಿ ಬರವ ಹಾರುತ್ತಿರ್ದೆನಯ್ಯಾ.
ನಾನು, ಬಾರದಿರ್ದಡೆ ಉಮ್ಮಳಿಸಿಹೆನೆಂದು
ತಾನೆ ಬಂದು ಎನ್ನ ಹೃದಯಸಿಂಹಾಸನದ ಮೇಲೆ ಮೂರ್ತಗೊಂಡಡೆ,
ಎನ್ನ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರುಷದಲ್ಲಿದ್ದ
ಚಿಂತೆಯಿಂದು ನಿಶ್ಚಿಂತೆಯಾಯಿತ್ತು.
ಕೂಡಲಸಂಗಮದೇವರು
ಕೃಪಾಮೂರ್ತಿಯಾದ ಕಾರಣ
ನಾನು ಬದುಕಿದೆನು./338
ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ !
ಸರಿಯೆ, ಅಪ್ರತಿಮಹಿಮಾ, ನಿಮಗಾನು ಪ್ರತಿಯೆ
ಕೂಡಲಸಂಗಮದೇವಾ ನೀವು ಮಾಡಲಾನಾದೆನು./339
ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು./340
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ,
ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ ನೀವಿರಿಸಿದಿರಿ,
ಕೂಡಲಸಂಗಮದೇವಾ./341
ಎನ್ನ ಜನ್ಮವ ತೊಡೆದನೀ ಧರ್ಮಿ,
ಎನ್ನ ಜನ್ಮವನತಿಗಳೆದಾ ಸಧರ್ಮಿ.
ಎನ್ನ ಭವಬಂಧನವ ನಿಃಕರಿಸಿದೆಯಾಗಿ,
ಶಿವನೆ ಗತಿಯೆಂದು ನಂಬಿದೆನಯ್ಯಾ.
ಎನ್ನ ಅಷ್ಟಮದಂಗಳ ಸುಟ್ಟುರುಹಿದೆಯಾಗಿ,
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸ್ಟೃಪ್ರತಿಪಾಲಕಾ, ನಿಮ್ಮ ನಂಬಿದೆ,
ಕರುಣಿಸು ಕೂಡಲಸಂಗಮದೇವಾ./342
ಎನ್ನ ತನುಮನವೆರಡನೂ
ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ,
ಎನ್ನ ಅಂತರಂಗ ಬಹಿರಂಗವೆರಡೂ
ನಿಮ್ಮವು ನೋಡಾ !
ನಿಮ್ಮ ಅಂತರಂಗದೊಳಗೆ
ನಿಮ್ಮನೆ ಇಂಬಿಟ್ಟುಕೊಂಬೆ,
ನಿಮ್ಮ ಬಹಿರಂಗದೊಳಗೆ
ನಿಮ್ಮನೆ ನೀವಾಗಿ ಪೂಜಿಸುವೆ,
ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ,
ಕೂಡಲಸಂಗಮದೇವಾ./343
ಎನ್ನ ತನುವಿಂಗೆ ನೀನೊಡೆಯ,
ಎನ್ನ ಮನಕ್ಕೆಯೂ ನೀನೊಡೆಯ,
ಎನ್ನ ಧನಕ್ಕೆಯೂ ನೀನೊಡೆಯನಾದ ಬಳಿಕ
ಎನ್ನರಿವು ನಿನ್ನದು, ಎನ್ನ ಮರಹು ನಿನ್ನದು.
ಕೂಡಲಸಂಗಮದೇವಾ,
`ಭೃತ್ಯಾಪರಾಧಃ ಸ್ವಾಮಿನೋ ದಂಡಃ
ಎಂಬುದ ವಿಚಾರಿಸಿ ನೋಡಾ ಪ್ರಭುವೆ./344
ಎನ್ನ ತನುವಿಡಿದವರ ತನುವ ಬೆರೆಸುವೆನು,
ಎನ್ನ ಮನವಿಡಿದವರ ಮನವ ಬೆರೆಸುವೆನು,
ಎನ್ನ ಶಿರವನವರ ಪಾದಕ್ಕೆ ಪೂಜೆಯ ಮಾಡುವೆನು.
ಕೂಡಲಸಂಗನ ಶರಣರನು
ಒಡಗೊಂಡು ಬಂದೆನ್ನ ಭವವ ಹರಿವೆನು./345
ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ.
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ./346
ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ./347
ಎನ್ನ ನುಡಿ ಎನಗೆ ನಂಜಾಯಿತ್ತು, ಎನ್ನ ಅಲಗೆ ಎನ್ನ ಕೊಂದಿತ್ತು.
ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ.
ತರಳತನದಲ್ಲಿ ಕೆಟ್ಟೆನಯ್ಯಾ,
ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ.
ಆಳು ಮುನಿದಡೆ ಆಳೇ ಕೆಡುವನು,
ಆಳ್ದ ಮುನಿದಡೆ ಆಳೇ ಕೆಡುವನು.
ನೀವು ಮುನಿದಡೆ ನಾನೇ ಕೆಡುವೆನಯ್ಯಾ
ಕೂಡಲಸಂಗಮದೇವಾ./348
ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ,
ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು,
ನಿಜವೀರಶೈವಾಚಾರವನರುಹಿ ತೋರಿ,
ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ
ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿಸಂದಿಸಿದ
ಶೈವಕರ್ಮವ ಕಳೆದು,
ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,
ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ,
ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,
ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ
ಶಿವಸದಾಚಾರದ ಘನವನರುಹಿ ತೋರಿ,
ಮತ್ರ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ,
ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ
ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ,
ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು
ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕುವೆನು. /349
ಎನ್ನ ಭಕ್ತನೆಂದೆಂಬರು:
ಎನ್ನ ಹೊರಹಂಚೆ, ಒಳಬೊಳ್ಳೆತನವನರಿಯರಾಗಿ.
ಎನ್ನ ಮಾನಾಪಮಾನವೂ ಶರಣರಲ್ಲಿ, ಜಾತಿವಿಜಾತಿಯೂ ಶರಣರಲ್ಲಿ,
ತನುಮನಧನ[ವೂ] ಶರಣರಲ್ಲಿ.
ವಂಚನೆಯುಳ್ಳ ಡಂಭಕ ನಾನು.
ತಲೆಯೊಡೆಯಂಗೆ ಕಣ್ಣ ಬೈಚಿಡುವೆ
ಕೂಡಲಸಂಗಮದೇವಾ./350
ಎನ್ನ ಭಕ್ತಿ ಎಲವದ ಕಾಯಫಲದಂತೆ ನೋಡಯ್ಯಾ,
ಹೊರಗೆ ಹೆಂಪು, ಒಳಗೆ ಬೂರವಯ್ಯಾ,
ನಿಮ್ಮ ದೇವರೆಂದು ಪೂಜಿಸಿ ಮಾನವರೆಂದು ಮರೆವೆನು.
ಸಗುಣ ನಿರ್ಗುಣವೆರಡೂ ಅಳವಡದ ಸಂದೇಹಿ ನಾನಯ್ಯಾ.
ಕೂಡಲಸಂಗಮದೇವಾ,
ಎನ್ನ ಅಪರಾಧವ ಸೈರಿಸುವಡೆ ನೀವಲ್ಲದೆ ಮತ್ತಾರನೂ ಕಾಣೆ,
ಶರಣಾರ್ಥಿ ಶರಣಾರ್ಥಿ, ಕೃಪೆಯಿಂದ ಕರುಣಿಸಿರಯ್ಯಾ./351
ಎನ್ನ ಭಕ್ತಿಯ ಶಕ್ತಿಯು ನೀನೆ,
ಎನ್ನ ಯುಕ್ತಿಯ ಶಕ್ತಿಯು ನೀನೆ,
ಎನ್ನ ಮುಕ್ತಿಯ ಶಕ್ತಿಯು ನೀನೆ.
ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು
ತಳವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ
ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ./352
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ./353
ಎನ್ನ ಮನವು ನಿಮ್ಮ ಚರಣವ ಕಂಡ ಬಳಿಕ
ಬೆರಸಿಯಲ್ಲದೆ ಅಗಲಿ ಸೈರಿಸಲಾರೆನಯ್ಯಾ.
ತ್ರಾಹಿ ತ್ರಾಹಿ, ಘನಮಹಿಮಾ,
ನಿಮ್ಮ ಪಾದಾರ್ಚನೆಗೆ ಎನ್ನ ಪರಮಾನಂದಜಲವ ತುಂಬುವೆನಯ್ಯಾ.
ಪೂಜೆಯ ಮಾಡುವಡೆ ಎನ್ನ ಹೃದಯಕಮಲವನ[ರ್ಪಿ]ಸುವೆ,
ಆರತಿಯಿಂದ ಆರತಿಯನೆತ್ತುವೆ,
ಎನ್ನ ಮಹಾಪ್ರಕಾಶದ ಧೂಪವ ಬೀಸುವೆ,
ಎನ್ನ ಸ್ವಾನುಭಾವದ ಗಂಧವನೀವೆ.
ಈ ತೆರನಲ್ಲದೆ ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಕ್ಕೆ
ಬೇರೆ ತೆರನ ಕಾಣೆನಯ್ಯಾ.
ಕೂಡಲಸಂಗಮದೇವಯ್ಯಾ, ಪ್ರಭುವೆನ್ನ ಪ್ರಾಣಲಿಂಗವೆಂಬುದು
ಎನಗಿಂದು ಕಾಣಬಂದಿತ್ತು ನೋಡಯ್ಯಾ./354
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ !
ಕೂಡಲಸಂಗಮದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನೈದದು, ನೋಡಾ./355
ಎನ್ನ ವಚನರಚನೆಯ ಮೆಚ್ಚ,
ಅಡಿಗಡಿಗೆನ್ನ ಮನದ ಮೈಲಿಗೆಯ ತೊಳೆದು
ಹೋದ ಪ್ರಾಣವ ಮರಳಿ ತಂದು ರಕ್ಷಿಸಿದ.
ಕೂಡಲಸಂಗಮದೇವಯ್ಯಾ,
ಮಡಿವಾಳಯ್ಯಗಳ ಕರುಣದಿಂದ
ಮರುಳುಶಂಕರದೇವರ ನಿಲವ ಕಂಡು ಬದುಕಿದೆನು
ಕಾಣಾ ಕಿನ್ನರಿ ಬ್ರಹ್ಮಯ್ಯಾ./356
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ,
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ,
ಎನ್ನ ಮಾನಾಪಮಾನವೂ ನಿಮ್ಮದಯ್ಯಾ,
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ./357
ಎನ್ನ ಶಿರ ನಿಮ್ಮ ಚರಣವೊರಸೊರಸಿ ಬೆರಸಿ ಭೇದವಿಲ್ಲಯ್ಯಾ,
ಎನ್ನ ಕಾಯದ ಕಪಟ, ಎನ್ನ ಮನದ ವಿಕಾರ,
ನಿಮ್ಮ ಅಂಗುಷ್ಟದ ಮೊನೆಯ ಸೋಂಕಲೊಡನೆ ಹರಿದುದು ನೋಡಯ್ಯಾ.
ಕೂಡಲಸಂಗಮದೇವಯ್ಯಾ ನಿಮ್ಮ ಶ್ರೀಪಾದದ ಬೆಳಗ ಕಂಡು
ಎನ್ನ ಅಂತರಂಗದ ಕತ್ತಲೆ ಓಡಿತ್ತು./358
ಎನ್ನಂಗದ ಮೇಲಿದ್ದ ಲಿಂಗವ ದಿಟಮಾಡಲರಿಯೆನು,
ಜಂಗಮವೆ ಲಿಂಗವೆಂಬ ಮಾತೆನಗೆ ಕಷ್ಟ.
ಕಲಹ ಕಡುಗೋಪಿ ನಾನಯ್ಯಾ, ದುರಾಚಾರಿ ನಾನು,
ಎನಗೆ ಕರುಣಿಸು ಕೂಡಲಸಂಗಮದೇವಾ./359
ಎನ್ನಂತರಂಗ ನೀವಯ್ಯಾ, ಎನ್ನ ಬಹಿರಂಗ ನೀವಯ್ಯಾ,
ಎನ್ನ ಅರಿವು ನೀವಯ್ಯಾ, ಎನ್ನ ಮರಹು ನೀವಯ್ಯಾ,
ಎನ್ನ ಭಕ್ತಿ ನೀವಯ್ಯಾ, ಎನ್ನ ಯುಕ್ತಿ ನೀವಯ್ಯಾ,
ಎನ್ನ ಆಲಸ್ಯ ನೀವಯ್ಯಾ, ಎನ್ನ ಪರವಶ ನೀವಯ್ಯಾ,
ಸಮುದ್ರವ ಹೊಕ್ಕ ಕಾಲುವಳ್ಳದಲ್ಲಿ
ಕೊರತೆಯನರಸುವುದೆ, ಆ ಸಮುದ್ರವು
ಎನ್ನ ಲೇಸು ಹೊಲ್ಲೆಹವೆಂಬುದು ನಿಮ್ಮದೆಂಬುದ ನೀವೆ ಬಲ್ಲಿರಿ,
ಇದಕ್ಕೆ ನಿಮ್ಮ ಪಾದವೆ ಸಾಕ್ಷಿ, ಎನ್ನ ಮನವೆ ಸಾಕ್ಷಿ,
ಕೂಡಲಸಂಗಮದೇವಾ. /360
ಎನ್ನಂತರಂಗದೊಳಗೆ ಅರಿವಾಗಿ,
ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು,
ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು,
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ
ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ,
ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ,
ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ-
ಕೂಡಲಸಂಗಮದೇವಾ,
ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ,
ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ./361
ಎನ್ನನುಭಾವದ ಗಮ್ಯವೆ, ಎನ್ನರುಹಿನ ವಿಶ್ರಾಮವೆ,
ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ,
ಎನ್ನ ಪರಿಣಾಮದ ಮೇರುವೆ,
ಎನ್ನ ಘನದ ನಿಲವೆ,
ನಿಮ್ಮ ಸುಳುಹು ಎತ್ತಲಡಗಿತ್ತೊ
ನಿಮ್ಮ ನಾಮ ನಿರ್ನಾಮವಾಯಿತ್ತೆ
ಎಲೆ ಪರಮಗುರುವೆ
ಕೂಡಲಸಂಗಯ್ಯನಲ್ಲಿ
ಉರಿಯುಂಡಕರ್ಪುರದಂತಾದೆಯಲ್ಲಾ, ಪ್ರಭುವೆ/362
ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ, ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ,
ಎನ್ನಯ್ಯಾ ಕೀಟಧ್ಯಾನದಲ್ಲಿ ನಿಮ್ಮನರಸುತ್ತಿದ್ದೇನೆ.
ಎನ್ನಯ್ಯಾ ಕೂಡಲಸಂಗಮದೇವಾ,
ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು,
ತಪ್ಪೆನ್ನದು, ತಪ್ಪೆನ್ನದು ಶಿವಧೋ ಶಿವಧೋ./363
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದನಿತಿಲ್ಲ.
ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು
ನಾನೇನು ಪಾಪವ ಮಾಡಿದೆನೊ.
ಬೆಳೆಯದ ಮುನ್ನವೆ ಕೊಯ್ವರೆ ಹೇಳಯ್ಯಾ.
ಇರಿಯದ ವೀರ, ಇಲ್ಲದ ಸೊಬಗು !
ಎಲ್ಲಾ ಒಡೆಯರೂ ಏರಿಸಿ ನುಡಿವರು,
ಎನಗಿದು ವಿದಿಯೆ, ಕೂಡಲಸಂಗಮದೇವಾ./364
ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ.
ಅಹಂಕಾರಪೂರಾಯ ಘಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ
ಜಂಗಮವಾಗಿ ಬಂದು ಜರೆದು, ಸೂಲವನಿಳುಹಿ,
ಪ್ರಸಾದದ ಮದ್ದನಿಕ್ಕಿ,
ಸಲಹು ಕೂಡಲಸಂಗಮದೇವಾ./365
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ,
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ-
ಅಯ್ಯೋ, ನೊಂದೆನು, ಸೈರಿಸಲಾರೆನು !
ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ-
ಅಯ್ಯೋ ನೊಂದೆನು, ಸೈರಿಸಲಾರೆನು.
ಕೂಡಲಸಂಗಮದೇವಾ,
ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ, ಧರ್ಮಿ !/366
ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ./367
ಎನ್ನಿಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವೆನು.
ಅವಾವುವಯ್ಯಾ ಎಂದಡೆ;
ಜಲಗಂಧಾಕ್ಷತಂ ಚೈವ ಪುಷ್ಪಂ ಚ ಧೂಪದೀಪಯೋ
ನೈವೇದ್ಯಂ ಚೈವ ತಾಂಬೂಲಂ ಯಥೇಚ್ಛಾಷ್ಟವಿಧಾರ್ಚನಂ
ಇನ್ನು ಷೋಡಶೋಪಚಾರಗಳು;
ಸುಖತಲ್ಪಂ ಸುವಸ್ತ್ರಂ ಚ ಆಭರಣಾನುಲೇಪನಂ
ಛತ್ರಚಾಮರವ್ಯಜನಂ ದರ್ಪಣಂ ನಾದವಾದ್ಯಯೋ
ನೃತ್ಯಂ ಗೀತಂ ತಥಾ ಸ್ತೋತ್ರಂ ಪುಷ್ಪಾಂಜಲೀ ಪ್ರಣಾಮಕಂ
ಪ್ರದಕ್ಷಿಣಂ ಚ ಮೇ ಯಕ್ತಂ ಷೋಡಶಂ ಚೋಪಚಾರಕಂ
ಈ ಕ್ರಮವಿಡಿದು ಇಷ್ಟಲಿಂಗಾರ್ಚನೆಯ ಮಾಡಿ
ನಿಮ್ಮಲ್ಲಿ ಕೂಡುವೆನು,
ಕೂಡಲಸಂಗಮದೇವಾ./368
ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ./369
ಎಮ್ಮಯ್ಯನ ಬಲ್ಲವರು ಒಮ್ಮೆಯೂ ಅರ್ಪಿಸರು,
ಅವರರ್ಪಿಸುವನ್ನಬರ ಎಮ್ಮಯ್ಯ ಸುಮ್ಮನಿರನು.
ಬೆಂದ ಬಿಸಿಯಾರಿದಡೆ ಪ್ರಾಣೇಶನೊಲ್ಲ,
ಕೂಡಲಸಂಗಮದೇವನುಪಚಾರದರ್ಪಿತವನೋಗಡಿಸುವ./370
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು./371
ಎಮ್ಮವರು ಅಧಿಕರು, ಎಲ್ಲರಿಂದವೂ ಅಧಿಕರು;
ಪಾಕವ ಮಾಡುವ ಭಾಂಡ ಸೊಣಗನ ಡೊವಿಗೆಯಯ್ಯಾ !
ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ
ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು
`ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆ’ಂದೂ. /372
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ
ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ !
ಉಡುವಿನ ನಾಲಗೆಯಂತೆ ಎರಡಾದಡೆ
ಕೂಡಲಸಂಗಯ್ಯ ಮೆಚ್ಚುವನೆ/373
ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆುತ್ತು./374
ಎಲವದ ಮರ ಹೂತು ಫಲವಾದ ತೆರನಂತೆ;
ಸಿರಿಯಾದಡೇನು, ಶಿವಭಕ್ತಿುಲ್ಲದನ್ನಕ್ಕ
ಫಲವಾದಡೇನು ಹೇಳಾ, ಹಾವುಮೆಕ್ಕೆಯ ಕಾು
ಕುಲವಿಲ್ಲದ ರೂಹು ಎಲ್ಲದ್ದಡೇನು
ಬಚ್ಚಲ ನೀರು ತಿಳಿದಲ್ಲಿ ಫಲವೇನು
ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ./375
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ.
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ./376
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ, ಬೆಳೆದಿಂಗಳು, ಸಿರಿ ಸ್ಥಿರವಲ್ಲ.
ಕೇಡಿಲ್ಲದ ಪದವಿ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು./377
ಎಲೆ ಗಂಡುಗೂಸೆ ನೀ ಕೇಳಾ,
ನಿನಗೊಬ್ಬಗೆಂದುಟ್ಟೆ ಗಂಡುಡಿಗೆಯನು.
ಮತ್ತೊಮ್ಮೆ ಆನು ಗಂಡಪ್ಪೆನಯ್ಯಾ,
ಮತ್ತೊಮ್ಮೆ ನಾನು ಹೆಣ್ಣಪ್ಪೆನಯ್ಯಾ.
ಕೂಡಲಸಂಗಮದೇವಾ,
ನಿಮ್ಮಡಿಗೆ ವೀರನಪ್ಪೆ, ನಿಮ್ಮ ಶರಣರಿಗೆ ವಧುವಪ್ಪೆ./378
ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ.
ನಮ್ಮ ನಲ್ಲ ಸುಳಿಯಲಿಲ್ಲ, ಸುಳಿದು ಸಿಂಗಾರವ ಮಾಡಲಿಲ್ಲ,
ಕೂಡಲಸಂಗಮದೇವನು ತನ್ನೊಳಗೆ ಬೈಚಿಟ್ಟನಾಗಿ. /379
ಎಲ್ಲರ ಗಂಡರು ಬೇಂಟೆಯ ಹೋದರು,
ನೀನೇಕೆ ಹೋಗೆ, ಎಲೆ ಗಂಡನೆ
ಸತ್ತುದ ತಾರದಿರು, ಕೈ ಮುಟ್ಟಿ ಕೊಲ್ಲದಿರು.
ಅಡಗಿಲ್ಲದ ಮನೆಗೆ ಬಾರದಿರು.
ದೇವರ ಧರ್ಮದಲೊಂದು ಬೇಂಟೆ ದೊರೆಕೊಂಡಡೆ
ಕೂಡಲಸಂಗಮದೇವಂಗರ್ಪಿತ ಮಾಡುವೆ, ಎಲೆ ಗಂಡನೆ. /380
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ,
ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ.
ಕೂಡಲಸಂಗಮದೇವ ಕೇಳಯ್ಯಾ,
ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ./381
ಎಲ್ಲರೂ ವೀರರು, ಎಲ್ಲರೂ ಧೀರರು,
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು.
ನಮ್ಮ ಕೂಡಲಸಂಗನ ಶರಣರು ಧೀರರು,
ಉಳಿದವರೆಲ್ಲರೂ ಅದಿರರು./382
ಎಲ್ಲವ ಬೇಡಿದರೆಮ್ಮವರು, ಒಂದ ಬೇಡ ಮರೆದರಯ್ಯಾ,
ಮತ್ರ್ಯಲೋಕದ ಗಣಂಗಳು ಒಂದ ಬೇಡ ಮರೆದರು.
ಕೂಡಲಸಂಗಮದೇವಾ, ಎನ್ನ ಬೇಡ ಮರೆದರು. /383
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಪರವಧುವನುಮಾದೇವಿಯೆಂಬೆ
ಕೂಡಲಸಂಗಮದೇವಾ./384
ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಬಿಡೆ, ಮಾಣೆ, ಗರುವತನವೆ
ದಾಸನ ವಸ್ತ್ರವ ಸೀಳುವುದೊಂದು ಗರುವತನವೆ
ಸಿರಿಯಾಳನ ಮಗನ ಬೇಡುವುದೊಂದು ಗರುವತನವೆ
ಬಲ್ಲಾಳನ ವಧುವ ಬೇಡುವುದೊಂದು ಗರುವತನವೆ
ಕೋಡಗವ ಹುಲ್ಲಲಿ ಮುಸುಕಿದಂತೆ
ಕೂಡಲಸಂಗಮದೇವಾ, ನಿನ್ನ ಪರಿ./385
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ.
ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾಯಿತ್ತೆನ್ನ ಭಕ್ತಿ.
ಕೂಡಲಸಂಗಮದೇವಾ,
ಆನು ಮಾಡದೆನೆಂಬ ಕಿಚ್ಚು ಸಾಲದೆ/386
ಏತ ತಲೆವಾಗಿದಡೇನು, ಗುರುಭಕ್ತನಾಗಬಲ್ಲುದೆ
ಇಕ್ಕುಳ ಕೈಮುಗಿದಡೇನು, ಭೃತ್ಯಾಚಾರಿಯಾಗಬಲ್ಲುದೆ
ಗಿಳಿಯೋದಿದಡೇನು, ಲಿಂಗವೇದಿಯಾಗಬಲ್ಲುದೆ
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತಬಲ್ಲರು!/387
ಏನ ಮಾಡುವೆ ಎನ್ನ ಪುಣ್ಯವ ಫಲವು !
ಶಾಂತಿಯ ಮಾಡಹೋದಡೆ ಬೇತಾಳನಾಯಿತ್ತು.
ಕೂಡಲಸಂಗಮದೇವರ ಪೂಜಿಸಿಹೆನೆಂದಡೆ
ಭಕ್ತಿಯೆಂಬ ಮೃಗ ಎನ್ನನಟ್ಟಿ ಬಂದು ನುಂಗಿತ್ತಯ್ಯಾ. /388
ಏನ ಮಾಡುವೆ ಎನ್ನ ಪುಣ್ಯವ ಫಲವು !
ಶಾಂತಿಯ ಮಾಡಹೋದಡೆ ಬೇತಾಳನಾಯಿತ್ತು.
ಕೂಡಲಸಂಗಮದೇವರ ಪೂಜಿಸಿಹೆನೆಂದಡೆ
ಭಕ್ತಿಯೆಂಬ ಮೃಗ ಎನ್ನನಟ್ಟಿ ಬಂದು ನುಂಗಿತ್ತಯ್ಯಾ./389
ಏನನಾದಡೆಯೂ ಸಾಧಿಸಬಹುದು,
ಮತ್ತೇನನಾದಡೆಯೂ ಸಾಧಿಸಬಹುದಯ್ಯಾ
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವರ ಕರುಣವುಳ್ಳವಂಗಲ್ಲದೆ./390
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು,
ನಿಮ್ಮವರೊಲಿಯದನ್ನಕ್ಕ
ಶಿವ ಶಿವ, ಮಹಾದೇವಾ,
ಬಾಳಿಲ್ಲದವಳ ಓಲೆಯಂತಾಯಿತ್ತೆನಗೆ,
ಕೂಡಲಸಂಗಮದೇವಾ./391
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ !
ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ. /392
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ,
ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ/393
ಏನಿದ್ದಡೇನಿದ್ದಡೊಲ್ಲದು ನಿಮ್ಮನುಭಾವಕ್ಕೆನ್ನ ಮನವು.
ಡಂಬಕನೆಂಬವ ನಾನು ಕಂಡಯ್ಯಾ,
ಕೂಡಲಸಂಗಮದೇವರ ಪೂಜಿಸಿ ಮಾನವರಾಸೆ ಬಿಡದಾಗಿ./394
ಏನೆಂದುಪಮಿಸುವೆನಯ್ಯಾ
ತನ್ನಿಂದ ತಾ ತೋರದೆ,
ಗುರುಮುಖದಿಂದ ತೋರಿದ ತನ್ನ ನಿಲವ,
ನಿರುಪಮನು.
ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ
ಇರವೆ ಪರವಾಗಿರ್ದ ಅಜಡನು.
ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ
ಘನಮಹಿಮರ ದರ್ಶನದಿಂದ ಸತ್ಪ್ರಣವವ
ತಾನಾಗಿ ನುಡಿದ ಮೂಲಿಗನು,
ಕೂಡಲಸಂಗಮದೇವರಲ್ಲಿ
ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ
ಪ್ರಭುದೇವರು ಸಿದ್ಧರಾಮಯ್ಯದೇವರು
ಹಡಪದಪ್ಪಣ್ಣನಿಂದ ಕಂಡು
ಎನ್ನ ಜನ್ಮ ಸಫಲವಾಯಿತ್ತಯ್ಯಾ./395
ಏನೆಂಬೆ, ಏನೆಂಬೆ ಒಂದೆರಡಾದುದ
ಏನೆಂಬೆ, ಏನೆಂಬೆ ಎರಡೊಂದಾದುದ
ಏನೆಂಬೆ, ಏನೆಂಬೆ ಅವಿರಳ ಘನವ
ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ. /396
ಏರಂಡದ ಬಿತ್ತಿನಂತೆ, ರಸವಾರಿಯಂತೆ,
ಪಶುವಿನ ಪಿಸಿತದಲ್ಲಿ ತಲೆದೋರುವ ಅಮೃತದಂತೆ,
ಕಾಯವಿಡಿದು ಬಂದಡೆ ನಿನಗಾ ಭಾವವಿಲ್ಲ.
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಅಗಮ್ಯವಾಯಿತ್ತು./397
ಐದು ಮಾನವ ಕುಟ್ಟಿ ಒಂದು ಮಾನವ ಮಾಡು, ಕಂಡಾ ಮದವಳಿಗೆ !
ಇದು ನಮ್ಮ ಬಾಳುವೆ, ಮದವಳಿಗೆ !
ಇದು ನಮ್ಮ ವಿಸ್ತಾರ, ಮದವಳಿಗೆ !
ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,
ಕೂಡಲಸಂಗಮದೇವಾ. /398
ಒಂದಕ್ಕೊಂಬತ್ತ ನುಡಿದು, ಕಣ್ಣ ಕೆಚ್ಚನೆ ಮಾಡಿ, ಗಂಡುಗೆದರಿ
ಮುಡುಹಿಕ್ಕಿ ಕೆ[ಲೆ]ವರ ಕಂಡಡಂಜುವೆ, ಓಸರಿಸುವೆ !
ಓಡಿದೆನೆಂಬ ಭಂಗವಾದಡಾಗಲಿ.
ನಮ್ಮ ಕೂಡಲಸಂಗನ ಶರಣರ ಅನುಭಾವವಿಲ್ಲದವರ
ಹೊಲಮೇರೆಯ ಹೊಂದೆ, ಹೊಲನ ಬಿಟ್ಟೋಡುವೆ./399
ಒಂದು ಮಾತೆನ್ನಬಹುದೆ ಶಬ್ದಸಾರಾಯವನು
ಒಂದು ಮಾತೆನ್ನಬಹುದೆ ಶರಣ ಸಂಬಂಧವನು
ಕೂಡಲಸಂಗಮದೇವರು
ನಂಬಿಗೆ ಓ ಎಂದುದನೊಂದು ಮಾತೆನ್ನಬಹುದೆ /400
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ,
ಎನ್ನ ಬಿಡು, ತನ್ನ ಬಿಡು, ಎಂಬುದು ಮನೋವಿಕಾರ.
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುಗೆ, ಕೂಡಲಸಂಗಮದೇವಾ./401
ಒಂದುವನರಿಯದ ಸಂದೇಹಿ ನಾನಯ್ಯಾ,
ನಂಬುಗೆುಲ್ಲದ ಡಂಬಕ ನಾನಯ್ಯಾ,
ನಿಮ್ಮ ನಂಬಿದ ಶರಣರ ಡಿಂಗರಿಗ ನಾನು,
ಕೂಡಲಸಂಗಮದೇವಾ./402
ಒಂದೆತ್ತಿಗೈವರು ಗೊಲ್ಲರು,
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ.
ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ
ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ.
ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ
ಕೂಡಲಸಂಗಮದೇವಯ್ಯಾ./403
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ.
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು,
ಕೂಡಲಸಂಗನ ಶರಣರ ಮನೆಯ
ಭಕ್ತಿಯ ಮರುಳ ನಾನು./404
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ,
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ.
ಅಯ್ಯಾ, ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಚಂಡಾಲಗಿತ್ತಿ,
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮದೇವನಲ್ಲದೆ ಆರೂ ಇಲ್ಲ. /405
ಒಡನೆ ಹುಟ್ಟಿದುದಲ್ಲ, ಒಡನೆ ಬೆಳೆದುದಲ್ಲ,
ಎಡೆಯಲಾದ ಒಂದು ಉಡುಗೆಯನುಟ್ಟು
ಸಡಿಲಿದಡೆ ಲಜ್ಜೆ ನಾಚಿಕೆಯಾಯಿತ್ತೆಂಬ ನುಡಿ
ದಿಟವಾಯಿತ್ತು ಲೌಕಿಕದಲ್ಲಿ.
ಹಡೆದ ಗುರುಕರುಣವ, ಒಡನೆ ಹುಟ್ಟಿದ ನೇಮವನು ಬಿಡದಿರೆಲವೊ.
ಬಿಟ್ಟಡೆ ಕಷ್ಟ, ಕೂಡಲಸಂಗಮದೇವನಡಸಿ
ಕೆಡಹುವ ನಾಯಕನರಕದಲ್ಲಿ. /406
ಒಡಲ ಕಳವಳಕ್ಕೆ, ಬಾಯ ಸವಿಗೆ,
ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ.
ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ.
ಅವರೊಕ್ಕುದನುಂಬೆನೆಂದಂತೆ ನಡೆವೆ.
ಎನ್ನೊಡೆಯ ಕೂಡಲಸಂಗಮದೇವನೊಲ್ಲದವರ ಹಿಡಿದೆನಾದಡೆ
ನಿಮ್ಮ ಪಾದದಾಣೆ./407
ಒಡಲಿಲ್ಲದ ಭಕ್ತನ ಪರಿಯ ನೋಡಾ,
ಮನಪ್ರಾಣಮುಕ್ತ, ಭವರಹಿತಜಂಗಮದ ಪರಿಯ ನೋಡಾ.
ಸಿಡಿಲ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೆ
ಉಭಯ ಒಂದಾದವರ ಕಂಡಡೆ,
ನೀವೆಂಬೆ ಕೂಡಲಸಂಗಮದೇವಾ./408
ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾದಿ.
ಅದಕ್ಕೆ ನಾನಾ ಔಷದಿಯ ತಂದು ಹೊರೆವರು,
ಆ ಪರಿಯ ನಾನದ ಹೊರಿಯೆನು.
ಅದೇನು ಕಾರಣವೆಂದೆಡೆ :
ಭವರೋಗವೈದ್ಯ, ಭವಹರನೆಂಬ ಬಿರಿದು ನಿಮ್ಮದಾಗಿ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ. /409
ಒಡವೆ ಭಂಡಾರ ಕಡವರ ದ್ರವ್ಯವ
ಬಡ್ಡಿ ಬೆವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ,
ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ.
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ.
ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ.
ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ
ಬಾಣಸವ ಮಾಡುವಲ್ಲಿ,
ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಇಂತೀ ತ್ರಿವಿಧವೂ ಹೊರಗಣವು.
ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ.
ಇನ್ನು ನಾನಿದೇನೆ,
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ,
ನೀನು ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು,
ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು,
ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು,
ನವಖಂಡವ ಮಾಡಿ ಕಡಿಕಡಿದು ನೋಡು,
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು.
ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದ ಬಿಡೆ,
ಪಾದತೀರ್ಥಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ. ಬಡ್ಡಿ ಬೆವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ,
ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ.
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ.
ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ.
ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ
ಬಾಣಸವ ಮಾಡುವಲ್ಲಿ,
ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಇಂತೀ ತ್ರಿವಿಧವೂ ಹೊರಗಣವು.
ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ.
ಇನ್ನು ನಾನಿದೇನೆ,
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ,
ನೀನು ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು,
ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು,
ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು,
ನವಖಂಡವ ಮಾಡಿ ಕಡಿಕಡಿದು ನೋಡು,
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು.
ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದ ಬಿಡೆ,
ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ. /410
ಒಡೆದ ಹಂಚು ಮರಳಿ ಮಡಕೆಯಾಗಬಲ್ಲುದೆ
ಕೆಟ್ಟ ವ್ರತಗೇಡಿ ಭಕ್ತನಾಗಬಲ್ಲನೆ
ಬಾಳೆಗೆ ಫಲವೆ ಕಡೆ, ಚೇಳಿಗೆ ಗರ್ಭವೆ ಕಡೆ.
ಕೂಳು ಮಾರೆಡೆಯುಂಟು, ಸೀರೆ ಮಾರೆಡೆಯುಂಟು,
ಭಕ್ತಿ ಮಾರೆಡೆಯುಂಟೆ, ಕೂಡಲಸಂಗಮದೇವಾ /411
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯಾ,
ಕೊಡು ದೇವ, ಎನ್ನ ಕೈಯಲೊಂದು ಕರಿಕೆಯನು.
`ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದಡೆ
ಅಲ್ಲಿ, `ನಡೆ ದೇವಾ’ ಎಂದೆನಿಸು ಕೂಡಲಸಂಗಮದೇವಾ./412
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ.
ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ
ಕಿಂಕಿಲನಾಗಿ ಬದುಕು, ಮನವೆ./413
ಒಡೆಯರಾಡುವ ಮಾತ ಕಡೆಪರಿಯಂತರ ಕೇಳಿ,
ಇದರುವೋಗಿ ಕಿಂಕರನಾಗಿ ನಡುಗುತ್ತ ಬಿನ್ನಹಮಾಡುವ
ಸದ್ಭಕ್ತನ ತೋರಯ್ಯಾ.
ಒಡೆಯರಾಡುವ ಮಾತ ಕಂಡು, ಕರೆದಲ್ಲಿ ಕೆಡೆಮೆಟ್ಟಿ
ಬಾು ಘನವೆಂದು ಆಡುವನ ತೋರದಿರಯ್ಯಾ,
ಅವನ ಸಂಗದಲ್ಲಿರಿಸಯ್ಯಾ,
ಅವನ ಸಹಪಂಕ್ತ್ತಿಯಲ್ಲಿ ಕುಳ್ಳಿರಿಸದಿರಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಬೇಡುವುದೊಂದೆ ವರವು./414
ಒಡೆಯರಿಗೆ ಒಡವೆಯನೊಪ್ಪಿಸಲಾರದೆ
ಮೊರೆುಡುವ ಮನವ ನಾನೇನೆಂಬೆ
ನೆತ್ತಿಯಲ್ಲಿ ಆಲಗ ತಿರುಹುವಂತಪ್ಪ
ವೇದನೆಯಹುದೆನಗೆ.
ಕೊಯ್ದ ಮೂಗಿಂಗೆ ಕನ್ನಡಿಯ ತೋರುವಂತಪ್ಪ
ವೇದನೆಯಹುದೆನಗೆ.
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವಂತಪ್ಪ
ವೇದನೆಯಹುದೆನಗೆ.
ಕೂಡಲಸಂಗಮದೇ[ವಾ] ನೀ ಮಾಡಿ ನೋಡುವ ಹಗರಣವ
ನಾ ಮಾಡಿಹೆನೆಂದಡೆ, ಮನಕ್ಕೆ ಮನ ನಾಚದೆ ಅಯ್ಯಾ/415
ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ,
ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯಾ,
ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ
ನೀನಿದ್ದವನೆ ಕುಲಜನು. /416
ಒಡೆಯರು ತಮ್ಮ ಮನೆಗೆ ಒಡಗೊಂಡು ಹೋದಡೆ,
ತುಡುಗುಣಿತನದಲ್ಲಿ ಪರವಧುವ ನೋಡುವ ಸರಸ ಬೇಡ.
ಕಾಣಿರಣ್ಣಾ ! ಒಡೆಯನರಸಿಯ ಸರಸಬೇಡ.
ಕೂಳ ಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸ ಬೇಡ.
ಕೂಡಲಸಂಗಮದೇವ ಕರ ಸಿತಗನಯ್ಯಾ. /417
ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ,
ನಂಟರು ಬಂದಡೆ ಸಮಯವಿಲ್ಲೆನ್ನಿ.
ಅಂದೇಕೆ ಬಾರರು
ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ/418
ಒಡೆಯರುಳ್ಳಾಳಿಂಗೆ ಕೇಡಿಲ್ಲ ಕಾಣಿರೊ !
ಊರೆನ್ನದೆ ಅಡವಿಯೆನ್ನದೆ, ಆಳನರಸಿ ಬಹ[ಆಳ್ದ]ರುಂಟೆ ?
ಜೋಳವಾಳಿಂಗೆ ಬಿಜ್ಜಳಂಗೆ ಆಳಾದಡೇನು
ವೇಳೆವಾಳಿಂಗೆ ಕೂಡಿಕೊಂಡಿಪ್ಪ ಕೂಡಲಸಂಗಮದೇವ./419
ಒಡೆಯರೊಡವೆಯ ಕೊಂಡಡೆ ಕಳ್ಳಂಗಳಲಾಯಿತ್ತೆಂಬ
ಗಾದೆ ಎನಗಿಲ್ಲಯ್ಯಾ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದ್ದೆನ್ನ ತನುವ ಬೇಡರೇಕಯ್ಯಾ
ಕೂಡಲಸಂಗಮದೇವಾ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೆ ಅಯ್ಯಾ./420
ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ,
ಹರಣವುಳ್ಳನ್ನಕ್ಕ ನಿಮ್ಮ ಚರಣದ ನೆನೆವುದ ಮಾಣೆ, ಮಾಣೆ.
ಶರಣೆಂಬುದ ಮಾಣೆ, ಮಾಣೆ.
ಕೂಡಲಸಂಗಮದೇವಯ್ಯಾ, ಎನ್ನ ಹೆಣನ ಮೇಲೆ
ಕಂಚಿಟ್ಟುಂಡಡೆಯೂ ಮಾಣೆ, ಮಾಣೆ./421
ಒತ್ತಿ ಹೊಸೆದ ಕಿಚ್ಚ ನಾ ಮಾಡಿದೆನೆಂದು ಮುಟ್ಟಿ ಹಿಡಿದಡೆ,
ಕೈ ಬೇಯದಿಹುದೆ
ಎನ್ನಿಂದಾಯಿತ್ತು, ಎನ್ನಿಂದಾಯಿತ್ತು, ಎನ್ನಿಂದಾಯಿತ್ತು ಎನ್ನದಿರು ಮನವೆ,
ನಾನು ಮಾಡಿದೆನೆನ್ನದಿರು ಮನವೆ.
ಕೂಡಲಸಂಗಮದೇವ ಕೇಳಯ್ಯಾ,
ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು./422
ಒಪ್ಪವ ನುಡಿವಿರಯ್ಯಾ ತುಪ್ಪವ ತೊಡೆದಂತೆ,
ಶರಣ ತನ್ನ ಮೆರೆವನೆ ಬಿನ್ನಾಣಿಯಂತೆ
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೆ /423
ಒಬ್ಬ ಕೆಂಚ, ಒಬ್ಬ ಕರಿಕ, ಒಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೆ
ಒಬ್ಬರಿಗೊಬ್ಬರು ಘನವೆಂಬರು, ಅದೆಂತಯ್ಯಾ
ಒಬ್ಬರಿಗೊಬ್ಬರು ಹಿರಿದೆಂಬರು, ಎಂತಯ್ಯಾ
ಬ್ರಹ್ಮಂಗೆ ಪ್ರಳಯ, ವಿಷ್ಣುವಿಂಗೆ ಮರಣ ಉಂಟು.
ಕೂಡಲಸಂಗಂಗಿಲ್ಲ. /424
ಒಬ್ಬನ ಮನೆಯಲುಂಡು ಹೊತ್ತುಗಳೆದೆ,
ಒಬ್ಬನ ಮನೆಯಲುಡಲೊಂದ ಗಳಿಸಿದೆ,
ಗರ್ವ ಬೇಡ ಬೇಡ ನಿನಗೆ.
ಚೆನ್ನಯ್ಯನ ಮನೆಯಲಂಬಲಿಯನುಂಡು ಬದುಕಿದೆ.
ಗರ್ವ ಬೇಡ ಬೇಡ.
ಕೂಡಲಸಂಗಯ್ಯಾ, ಸಿರಿಯಾಳನಿಂದ ಮಾನಿಸಲೋಕಗಂಡೆ./425
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ:
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿುಲ್ಲ.
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ./426
ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ.
ತಪ್ಪೆನ್ನದು, ತಪ್ಪೆನ್ನದು !
ತನು ಮನ ಧನದಲ್ಲಿ ಮಾಟಕೂಟವೆಂದರಿಯದ
ತಪ್ಪೆನ್ನದು, ತಪ್ಪೆನ್ನದು !
ಕಡೆುಲ್ಲದ ಹುಸಿ ಎನ್ನದು, ಕೂಡಲಸಂಗಮದೇವಾ./427
ಒಲೆಯ ಬೂದಿಯ ಬಿಲಿಯಲು ಬೇಡ,
ಒಲಿದಂತೆ ಹೂಸಿಕೊಂಡಿಪ್ಪುದು.
ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ
ಒಂದನಾಡಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ
ಕೂಡಲಸಂಗಯ್ಯ./428
ಒಲೆಯಡಿಯನುರುಹಿದಡೆ
ಗೋಳಕನಾಥನ ಕೊರಳ ಸುತ್ತಿತ್ತು,
ಮಹೀತಳನ ಜಡೆ ಸೀಯಿತ್ತು, ಮರೀಚಿಕನ ಶಿರ ಬೆಂದಿತ್ತು,
ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳು ನಿವಾಟವಾದರು,
ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು,
ಕೂಡಲಸಂಗಮದೇವ ಭಸ್ಮಧಾರಿಯಾದ. /429
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲರಿಯಲು,
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದಡೆ ಮುನಿ.
ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. /430
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು./431
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು,
ಅವರು ಪಥಕ್ಕೆ ಸಲ್ಲರು ಸಲ್ಲರಯ್ಯಾ.
ಒಳಹೊರಗೊಂದಾಗದವರಿಗೆ
ಅಳಿಯಾಸೆದೋರಿ ಬೀಸಾಡುವನವರ
ಜಗದೀಶ ಕೂಡಲಸಂಗಮದೇವ./432
ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ.
ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆಯಿತ್ತಯ್ಯಾ ಎನ್ನ ಮತಿ, ಕೂಡಲಸಂಗಮದೇವಾ./433
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ.
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು.
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
ಎನ್ನುವನು ಕಾಯಯ್ಯಾ, ಕಾಯಯ್ಯಾ.
ಹುರುಳಿಲ್ಲ ! ಹುರುಳಿಲ್ಲ !
ಕೂಡಲಸಂಗಮದೇವಾ, ಶಿವಧೋ ! ಶಿವಧೋ !/434
ಓಡದಿರು, ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ,
ನೋಡುವೆನು ಕಣ್ಣ ತುಂಬ, ಆಡಿ ಪಾಡಿ ನಲಿದಾಡುವೆ.
ಬೇಡೆನ್ನ ಕೂಡೆ ಮಾತಾಡಲಾಗದೆ, ಎಲೆ ಶಿವನೆ.
ಕೂಡಲಸಂಗಮದೇವಾ, ನೀನಾಡಿಸುವ ಬೊಂಬೆ ನಾನು./435
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ,
ಹಿರಿಯರು ನರಮಾಂಸವ ಭುಂಜಿಸುವರೆ
ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ./436
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ.
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು.
ಓಡೆನಯ್ಯಾ, ಬೇಡೆನಯ್ಯಾ,
ಕೂಡಲಸಂಗಮದೇವಾ./437
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ
ಕೋಡುಗ ಬಲ್ಲುದೆ ಸೆಳೆಮಂಚದ ಸುಖವ
ಕಾಗೆ ನಂದನವನದೊಳಗಿದ್ದಡೇನು,
ಕೋಗಿಲೆಯಾಗಬಲ್ಲುದೆ ಹೇಳಾ
ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು,
ಕಳಹಂಸಿಯಾಗಬಲ್ಲುದೆ, ಕೂಡಲಸಂಗಮದೇವಾ/438
ಓತಿ ಬೇಲಿವರಿವಂತೆ ಎನ್ನ ಮನವಯ್ಯಾ,
ಹೊತ್ತಿಗೊಂದು ಪರಿನಪ್ಪ ಗೋಸುಂಬೆಯಂತೆನ್ನ ಮನವು,
ಬಾವುಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗೆ ಅಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದಡುಂಟೆ
ಕೂಡಲಸಂಗಮದೇವಾ/439
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾುತ್ತು
ಕೂಡಲಸಂಗಮದೇವಾ./440
ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು,
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು./441
ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ
ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ.
ಧನಕ್ಕೆ ಮುನಿವರಲ್ಲದೆ, ಎನ್ನ ಮನಕ್ಕೆ ಮುನಿವರಿಲ್ಲಯ್ಯಾ.
ಧನಕ್ಕೆ ಮುನಿವರಿಗೆ ಮುನಿದು, ಎನ್ನ ಮನಕ್ಕೆ ಮುನಿದ
ಕೂಡಲಸಂಗಮದೇವಾ, ಮಡಿವಾಳ ಮಾಚಯ್ಯನು./442
ಓಹೋ ನಾನೊಬ್ಬರಿಗೆಯೂ ಉಪದೇಶವ ಮಾಡಲಮ್ಮೆನು,
ಮುನ್ನಲಾದವರು ತಮ್ಮಿಂದ ತಾವಾದರು,
ಅವರೆಲ್ಲರೂ ನಿಜಲಿಂಗೈಕ್ಯರು, ನಾನೇನುವ ಮಾಡಿತಿಲ್ಲ,
ತತ್ವವ ಹಿಡಿದವರಿಗೆ ತೊತ್ತಾಗಿ ನಡೆವೆನು.
ಅಮರಗಣಂಗಳು ಸಾಕ್ಷಿಯಾಗಿ,
ಕೂಡಲಸಂಗಮದೇವರ ಮುಂದೆ
ಭಾಷೆಪ್ರಸಾದವನಿಕ್ಕಲಮ್ಮೆನಯ್ಯಾ, ಚೆನ್ನಬಸವಣ್ಣಾ./443
ಕಂಗಳಲ್ಲಿ ಕರಸ್ಥಳದ ನೋಟ, ಅಂಗವಿಕಾರವೆಂಬುದನರಿಯ ನೋಡಾ,
ಮನದ ಕೊನೆಯ ಮೊನೆಯ ಮೇಲಣ ಅನುಭಾವ ಗಮನಗೆಟ್ಟು,
ಭಾವ ನಿರ್ಭಾವವೆಂಬುದನರಿಯ, ನೋಡಾ.
ಕೂಡಲಸಂಗಮದೇವರಲ್ಲಿ
ಪ್ರಭುದೇವರಿಂದಲಾನು ಬದುಕಿದೆನು ಕಾಣಾ, ಚೆನ್ನಬಸವಣ್ಣಾ./444
ಕಂಗಳಿಲ್ಲದ ನೋಟ, ಲಿಂಗವಿಲ್ಲದ ಮಾಟ, ಜಂಗಮವಿಲ್ಲದೂಟ,
ಪ್ರಸಾದವಿಲ[ದ] ಪರ, ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ
ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ
ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ
ಬಂದ ಸಮಯವನರಿಯದೆ ಉದರವ ಹೊರೆವವರ
ಕೂಗಿಡೆ ನರಕದಲ್ಲಿಕ್ಕನೆ ಕೂಡಲಸಂಗಮದೇವ /445
ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ. /446
ಕಂಗಳೆ ಕರುಳಾಗಿ ಉರವಣಿಸಿ ಬಪ್ಪವನ
ಬರವ ನೋಡಾ, ಇರವ ನೋಡಾ.
ಪರವ ನೋಡಾ, ಇಹಪರವ ನೋಡಾ, ಇಹಪರವೊಂದಾದ ಘನವ ನೋಡಾ,
ಎಲೆ, ಘನಕ್ಕೆ ಘನವ ನೋಡಾ.
ಕರುವಿಟ್ಟ ರೂಪಿನಂತೆ ಕಂಗಳೆರಡು ಹಳಚದೆ
ಭುಗಿಲನೆ ನಡೆತಹ.
ಇಂತಪ್ಪ ಗರುವ ಪ್ರಭುವ ಕಂಡೆವೈ
ಕೂಡಲಸಂಗಮದೇವಾ./447
ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ,
ಮನದೊಳಗೆ ಅಹಂಕಾರವಿಲ್ಲ.
ದೇಹವೆಂದರಿಯೆ, ನಿರ್ದೆಹವೆಂದರಿಯೆ
ಜಂತ್ರದ ಸೂತ್ರದಂತೆ ಇಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ !
ಲಿಂಗಜಂಗಮದ ಒಕ್ಕುಮಿಕ್ಕ ಪ್ರಸಾದವ ಕೊಂಡು,
ಮಿಕ್ಕು ಮೀರಿ ನಿಂದ ಮಹಾಪ್ರಸಾದಿಯ ನೋಡಾ !
ತನ್ನನರಿದಹರೆಂದು ಜಗದ ಕಣ್ಣಿಂಗೆ ಮಾಯದ ಮಂಜು ಕವಿಸಿ,
ನಿಜಪದದಲ್ಲಿ ತದುಗತನಾದನು.
ಕೂಡಲಸಂಗಮದೇವರಲ್ಲಿ ಮರುಳುಶಂಕರದೇವರ
ನಿಲವ ನೋಡಾ, ಚೆನ್ನಬಸವಣ್ಣಾ./448
ಕಂಡ ಕನಸು ನಿಧಾನವ ಕಂಡೆನಯ್ಯಾ,
ಬಿಡಲಾರದ ನಿಧಾನವ ಕಂಡೆನಯ್ಯಾ,
ಕೂಡಲಸಂಗಯ್ಯನೆಂಬ ನಿಧಾನವ ಕಂಡು
ಬಿಡಲಾರೆನಯ್ಯಾ./449
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ./450
ಕಂಡಕಂಡವರೆಲ್ಲ ಗಂಡನೆಂದೆಂಬ
ದುಂಡೆಯನವಳ ಸಜ್ಜ[ನ] ಎಂದೆನ್ನಬಹುದೆ
ಲಿಂಗಪ್ರಸಾದವನುಂಡು ಅನ್ಯದೈವಂಗಳ ಕೊಂಡಾಡುವವರ
ನಮ್ಮ ಕೂಡಲಸಂಗಮದೇವನು
ಆ ಭಂಡರಿಗೆ ಮಾಡಿದ ಹುಳುಗೊಂಡವ ! /451
ಕಂಡಡೆ ಕಡು ಸುಖವೆನಗೆ, ಕಾಣದಿರ್ದಡೆ ಅವಸ್ಥೆಯಯ್ಯಾ.
ತವಕದ ಸ್ನೇಹ ದರ್ಶನದಲ್ಲಿ ತರಹರವಾಯಿತ್ತು.
ಕೂಡಲಸಂಗಮದೇವಯ್ಯಾ,
ನಿಮ್ಮ ಶ್ರೀಪಾದವ ಕಂಡು ಧನ್ಯನಾದೆನು./452
ಕಂಡಮಂಡಗೆ ಬೆಲ್ಲ ದ್ರಾಕ್ಷೆ ಸಕ್ಕರೆ,
ಸರಿಭಾಗವಾದ ಹೊಸ ಹೆಸರ ಭಕ್ಷ್ಯ ಪನ್ನಿರ್ಖಂಡುಗ,
ಸುಲಿಗಡಲೆಯ ಕಜ್ಜಾಯ ಹದಿನೆಂಟು ಖಂಡುಗ,
ಅಕಾಲ ಮಾವಿನಹಣ್ಣು ಇಪ್ಪತ್ತುನಾಲ್ಕು ಲಕ್ಷ,
ಕಡೆಯಿಲ್ಲದ ಕದಳೀಫಲ, ಚಾರಬೀಜ ಎಂಬತ್ತು ಖಂಡುಗ,
ತವರಾಜ ಹೆತ್ತುಪ್ಪ, ಹಲಸಿನ ಹಣ್ಣು ಮನ ಮೇರೆ,
ಹಾಲಕೆನೆ ಹದಿನೆಂಟು ಖಂಡುಗ,
ಉತ್ತತ್ತಿ, ಚಿಲುಪಾಲಘಟ್ಟಿ ಕಟ್ಟಣೆಯಿಲ್ಲ.
ಮನವೊಲಿದ ಕಜ್ಜಾಯವನಾರೋಗಣೆಯ ಮಾಡು ದೇವಾ,
ಕೂಡಲಸಂಗಮದೇವಾ./453
ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ ನೋಡಯ್ಯಾ.
ಹಗಲಿರುಳಹುದು, ಇರುಳು ಹಗಲಹುದು.
ಎಂತದನು ಆಳವಾಡಿ ಕಳೆವೆನು
ಒಂದು ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ದಾವತಿುಂದ
ಮರಣವೇ ಲೇಸು ಕಂಡಯ್ಯಾ./454
ಕಂಡಹರೆಂದು ಕಣ್ಗೆ ಮರೆಮಾಡಿದ,
ಕೇಳಿಹರೆಂದು ಕಿವಿಗೆ ಮರೆಮಾಡಿದ,
ಮುಟ್ಟಿಹರೆಂದು ಕೈಗೆ ಮರೆಮಾಡಿದ,
ಸೋಂಕಿಹರೆಂದು ತನುವಿಂಗೆ ಮರೆಮಾಡಿದ,
ನೆನೆದಹರೆಂದು ಮನಕ್ಕೆ ಮರೆಮಾಡಿದ,
ಅರಿದಹರೆಂದು ಅಂತರಂಗದಲ್ಲಿ ಮರೆಮಾಡಿದ,
ಪೂಜಿಸಿಹರೆಂದು ಕ್ರೀಗೆ ಮರೆಮಾಡಿದ,
ಕೂಡಲಸಂಗಮದೇವರೊಡನೆ, ಅಹಂಕಾರವ ಮಾಡಿ
ಕೆಟ್ಟ ಕೇಡನೇನೆಂದುಪಮಿಸುವೆನು./455
ಕಂಡುದಕ್ಕೆಳಸೆನೆನ್ನ ಮನದಲ್ಲಿ, ನೋಡಿ ಸೋಲೆನೆನ್ನ ಕಂಗಳಲ್ಲಿ,
ಆಡಿ ಹುಸಿಯೆನೆನ್ನ ಜಿಹ್ವೆಯಲ್ಲಿ.
ಕೂಡಲಸಂಗಮದೇವಾ,
ನಿಮ್ಮ ಶರಣನ ಪರಿ ಇಂತುಟಯ್ಯಾ. /456
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ,
ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ,
ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ.
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವಾ./457
ಕಕ್ಷೆ ಕರಸ್ಥಲ ಉತ್ತಮಾಂಗ ಉರಸೆಜ್ಜೆ ಅಂಗಸೋಂಕು ಅಮಳೋಕ್ಯವೆಂಬುದ
ನಾನು ಮನದಲ್ಲಿ ಅರಿಯದಂದು,
ಭಾವ ನಿರ್ಭಾವವೆಂಬುದನರಿದು
ಆಯತ ಸ್ವಾಯತವ ಮಾಡಲ್ಕೆ ಬಂದ ಪದಾರ್ಥವು
ಲಿಂಗಮುಖದಲ್ಲಿ ಅರ್ಪಿತವಾಗದೆಂದು,
ಜಂಗಮಮುಖದಲ್ಲಿ ಬಂದ ಪದಾರ್ಥವಲ್ಲದೆ ಅರ್ಪಿತವಾಗದೆಂದು,
ಆ ಜಂಗಮವನೆನ್ನ ಮನದಲ್ಲಿ ನೆನೆದುಕೊಂಡು
ಆ ಜಂಗಮದಾಸೋಹಕ್ಕೆ ಎನ್ನ ಮನವು ವೇದ್ಯವಾದಲ್ಲಿ
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದಲ್ಲಿ,
ಲಿಂಗವೂ ಹುಸಿ, ಜಂಗಮವೂ ಹುಸಿಯೆಂದು
ಪರವಾದಿ ಬಿಜ್ಜಳನು ಸಂ[ವಾ]ದಿಸುವಲ್ಲಿ,
ಅವರನು ಆದಿಗಣೇಶ್ವರನೆಂದರಿಯದೆ ತರ್ಕಿಸುವಲ್ಲಿ,
ಅವನೆನ್ನ ಭಕ್ತಿಗೆ ಒರೆಗಲ್ಲಾದಲ್ಲಿ,
ಆತನು ಭಕ್ತಿಯ ಪಥವಲ್ಲೆಂಬುದ, ನಾನಹುದೆಂಬುದ –
ಈ ಎರಡನೂ ನೀನು ಸೂತ್ರಧಾರಿಯಾಗಿ ಆಡಿಸುವಲ್ಲಿ,
ಶಿವಭಕ್ತಿಯ ಮುಖ ಮುಸುಕು ತೆಗೆವಲ್ಲಿ,
ಮೂವತ್ತಾರು ಕೊಂಡೆಯವ ಪರಿಹರಿಸಿ
ಎಂಬತ್ತೆಂಟು ಪವಾಡವ ಮೆರೆವಲ್ಲಿ,
ಮುನ್ನೂರರುವತ್ತು ಸತ್ತ ಪ್ರಾಣವನೆತ್ತುವಲ್ಲಿ
ಅಂದು ನೀನೇನಾಗಿರ್ದೆ ಹೇಳಾ,
ಕೂಡಲಸಂಗಮದೇವಾ./458
ಕಟ್ಟಿ ಬಿಡುವನೆ ಶರಣನು ಬಿಟ್ಟು ಹಿಡಿವನೆ ಶರಣನು
ನಡೆದು ತಪ್ಪುವನೆ ಶರಣನು ನುಡಿದು ಹುಸಿವನೆ ಶರಣರನು
ಸಜ್ಜನಿಕೆ ತಪ್ಪಿದಡೆ, ಕೂಡಲಸಂಗಯ್ಯ ಮೂಗ ಹಲುದೋರೆ ಕೊಯ್ವ. /459
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು
ದೃಷ್ಟವಾರಿ ಶರಣೆಂದಡೆ,
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು ನೋಡಾ.
ಮುಟ್ಟಿ ಚರಣಕ್ಕೆರಗಿದಡೆ ತನು[ವ]ಪ್ಪಿದಂತೆ,
ಅಹುದು ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು
ಮತ್ತೆ ಭವಮಾಲೆಗೆ ಹೊದ್ದಲೀಯದು ನೋಡಾ./460
ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯರ,
ಮುಟ್ಟಿ ಬಂದಿರಿದಡೆ ಓಸರಿಸುವನಲ್ಲ.
ಓಡದಿರು ಓಡದಿರು,
ನಿಮ್ಮ ಶರಣರ ಮನೆಯ ಬಿರಿದಿನ ಅಂಕಕಾರ.
ಓಡದಿರು, ಓಡದಿರು, ಎಲೆ ಎಲೆ ದೇವಾ,
ಎಲೆ ಎಲೆ ಸ್ವಾಮಿ, ಎಲೆ ಎಲೆ ಹಂದೆ
ಕೂಡಲಸಂಗಮದೇವಾ. /461
ಕಟ್ಟುವೆನುಪ್ಪರಗುಡಿಯ ಜಗವರಿಯೆ:
ಮಾಡುವೆನೆನ್ನ ಕಾಯ ಕೆಡೆವನ್ನಕ್ಕ,
ಬೇಡುವುದೆನ್ನ ತನುಮನಧನವ.
ಬೇಡಲಾರದ ಹಂದೇ, ನೀ ಕೇಳಾ,
ಈ ಬಿರಿದು ಸಂದಿತ್ತು, ಕೂಡಲಸಂಗಮದೇವಾ./462
ಕಡಿ[ಯೆ] ಕುಳ್ಳಿರಿಸಿದಲ್ಲಿ,
ಕತ್ತಿಯನೆತ್ತಿ ಹೊಡೆ[ಯೆ] ಹೊಡೆ[ಯೆ] ಬದುಕಿದವರುಂಟು, ತಲೆಯ
ಕಡಲ ನಡುವೆ ಹಡಗೊ[ಡೆ]ದು
ಹಲಗೆಯ ಹಿಡಿದು ತಡಿಗೆ ಸೇರಿ ಬದುಕಿದವರುಂಟು, ತಲೆಯ
ಎನ್ನೊಡೆಯ ಕೂಡಲಸಂಗಮದೇವ
ಬರೆದ ಬರಹವ ತೊಡೆಯಬಲ್ಲರೆ
ಹರಿ ಸುರ ಬ್ರಹ್ಮಾದಿಗಳು. /463
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು,
ಮನಮಚ್ಚಿ ಮರುಳಾದೆ ನೋಡವ್ವಾ !
ಕೇಳು, ಕೇಳವ್ವಾ ಕೆಳದಿ,
ಸಖಿಯರಿಲ್ಲದೆ ಸುಖವ ಬಯಸಿದಡೆ
ದೊರಕೊಂಬುದೆ ಹೇಳಾ.
ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು,
ಇನ್ನು ಬಾರಯ್ಯಾ, ಕೂಡಲಸಂಗಯ್ಯಾ./464
ಕಣ್ಣ ಮಚ್ಚಿ ಕನ್ನಡಿಯ ತೋರುವಂತೆ,
ಇರುಳು ಹಗಲಿನ ನಿದ್ರೆ ಸಾಲದೆ
ಬೆರಳನೆಣಿಸಿ ಪರಮಾರ್ಥವ ಹಡೆವಡೆ
ಚೋದ್ಯವಲ್ಲವೆ ಹೇಳಾ.
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ,
ಕೂಡಲಸಂಗಮದೇವಾ /465
ಕಣ್ಣೊಳಗೆ ಕಣ್ಣಿದ್ದು ಕಾಣಲೇಕರಿಯರಯ್ಯಾ
ಕಿವಿಯೊಳಗೆ ಕಿವಿಯಿದ್ದು ಕೇಳಲೇಕರಿಯರಯ್ಯಾ
ಘ್ರಾಣದೊಳಗೆ ಘ್ರಾಣವಿದ್ದು ವಾಸಿಸಲೇಕರಿಯರಯ್ಯಾ
ಜಿಹ್ವೆಯೊಳಗೆ ಜಿಹ್ವೆಯಿದ್ದು ರುಚಿಸಲೇಕರಿಯರಯ್ಯಾ
ಸ್ಪರ್ಶನದೊಳಗೆ ಸ್ಪರ್ಶನವಿದ್ದು ಮುಟ್ಟಲೇಕರಿಯರಯ್ಯಾ
ಪ್ರಾಣದೊಳಗೆ ಪ್ರಾಣವಿದ್ದು ನೆನೆಯಲೇಕರಿಯರಯ್ಯಾ
ಕಾಯದೊಳಗೆ ಕಾಯವಿದ್ದು ಬಿಡದು, ಬೇರಾಗದು.
ಕೂಡಲಸಂಗಮದೇವಾ,
ನೀನಿಕ್ಕಿದ ಅಣಕದ ಭೇದವ ಭೇದಿಸಬಾರದಯ್ಯಾ./466
ಕತರ್ಾರನ ಪೂಜಿಸಿ ಕುಚಿತ ದೈವಕ್ಕೆರಗುವವ
ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ.
ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ
ಎರಡುಳ್ಳ ಪ್ರಪಂಚಗಳ ಮೆಚ್ಚ
ಕೂಡಲಸಂಗಮದೇವ. /467
ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ,
ಕರ್ದಮವನೀಂಟಿದ ಸುಜಲದಂತೆ,
ಮಧುರರಸವನರಿದ ಜಿಹ್ವೆಯಂತೆ,
ಎನ್ನ ಕಂಗಳಿಗೆ ದೃಷ್ಟವಾಗಿ, ಮನಕ್ಕೆ ಮನೋಹರವಾಗಿ
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಚಿಹ್ನವಾಯಿತ್ತು. /468
ಕತ್ತೆ[ಯ] ಕರವೆತ್ತಿ ಕರವೆತ್ತಿ ಕರೆದಡೆ
ಅದೆತ್ತಣ ವಾರ್ತೆಯೆಂದು ಬಲ್ಲುದು
ಕುಬುದ್ಧಿಯುಳ್ಳವ[ರಿಗೆ] ಸುಬುದ್ಧಿಯ ಹೇಳಿದಡೆ
ಕುಬುದ್ಧಿ ಮಾ[ಣ್ಬು]ದೆ ಕೂಡಲಸಂಗಮದೇವಾ /469
ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು,
ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು.
ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು,
ಮುಳುಗುವನ ಕೈಯ ಹಿಡಿದೆತ್ತಿದ
ನಮ್ಮ ನಮ್ಮ ಕೂಡಲಸಂಗಮದೇವ./470
ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.
`ಸ್ಥಾವರ ಜಂಗಮ ಒಂದೆ’ ಎಂದುದು ಕೂಡಲಸಂಗನ ವಚನ./471
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ,
ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ.
ಕರ್ತುವೆ ಕೂಡಲಸಂಗದೇವಾ
ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ./472
ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವ ಕಂಡೆ,
ಆ ಪುರದೊಳಗೊಬ್ಬ ನಾರಿಯ ಕಂಡೆ,
ಆ ನಾರಿಯ ಕೈಯಲ್ಲಿ ನಾರಿವಳ ಸಸಿಯ ಕಂಡೆ.
ಇಂತಪ್ಪ ಬೆಡಗಿನ ಕೀಲ ಬಲ್ಲಾತನೆ
ಪ್ರಾಣಲಿಂಗಸಂಬಂಧಿಯೆಂದೆನಯ್ಯಾ,
ಕೂಡಲಸಂಗಮದೇವಾ./473
ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಭಿಮಾನವೆಂಬ ಸಿಗುರು
ಕಾಡಿತ್ತು ಕಾಣಾ, ಕೂಡಲಸಂಗಮದೇವಾ./474
ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ ಹಣಿದವನಾಡುವರೆ
ಮೇಲೊಡ್ಡವಾಯಿತ್ತೆಂದು ಕೂಡಲಸಂಗಮದೇವಾ,
ನೀನಿಕ್ಕಿದ ಜೂಜಿಂಗೆ ಹೊಯಿದು ಗೆದ್ದ ಸಿರಿಯಾಳ. /475
ಕಬ್ಬುನ ಪರುಷವೇಧಿಯಾದಡೇನು,
ಕಬ್ಬುನ ಹೊನ್ನಾಗದಡಾ ಪರುಷವದೇಕೊ
ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡಾ ಪೂಜೆಯದೇಕೊ /476
ಕಬ್ಬುನದ ಕೋಡಗವ ಪರುಷ ಮುಟ್ಟಲು,
ಹೊನ್ನಾದಡೇನು ಮತ್ತೇನಾದಡೇನು
ತನ್ನ ಮುನ್ನಿನ ರೂಹ ಬಿಡದನ್ನಕ್ಕ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರುಗಳಯ್ಯಾ./477
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ./478
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ.
ಗಿರಿ ಘನ ವಜ್ರ ಕಿರಿದೆನ್ನಬಹುದೆ ಬಾರದಯ್ಯಾ.
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ.
ಮರಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ!
ಬಾರದಯ್ಯಾ ಕೂಡಲಸಂಗಮದೇವಾ. #/479
ಕರಿಗೊರಳು ಮೆರೆವ ಚತುರ್ಭುಜ ಎಳೆವಾವಿನ ಕುಂಡಲವನಿಕ್ಕಿ,
ಪೊಳೆವ ತ್ರಿಶೂಲ ವೃಷಭವಾಹನದೇವ,
ಉಮೆಯೊಡನೆ ಸಾರ್ದು
ಬೇಡಿದ ವರವೀವನೇ ಕೂಡಲಸಂಗಮದೇವ./480
ಕರಿಯಂಜುವುದು ಅಂಕುಶಕ್ಕಯ್ಯಾ,
ಗಿರಿಯಂಜುವುದು ಕುಲಿಶಕ್ಕಯ್ಯಾ,
ತಮಂಧವಂಜುವುದು ಜ್ಯೋತಿಗಯ್ಯಾ,
ಕಾನನವಂಜುವುದು ಬೇಗೆಗಯ್ಯಾ,
ಪಂಚಮಹಾಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯಾ./481
ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ,
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು.
ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ,
ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂದೆನು./482
ಕರ್ತನನರಿಯದವನು ವಿಪ್ರನಾದಡೇನು ! ಚತುವರ್ೇದಿಯಾದಡೇನು
ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ !
ಭವಿಮಾಡಿದ ಪಾಕವ ತಂದು,
ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು,
ಕೂಡಲಸಂಗನ ಶರಣರ ಒಕ್ಕುದ ಕೊಂಡು
ಅನ್ಯವನಾಚರಿಸಿದಡೆ ತಪ್ಪದು
ಸೂಕರ ಶುಚಿಭರ್ೂತತೆಯ ಪ್ರಾಣಿಯಂತೆ. /483
ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯದಂತುಟಲ್ಲ-
ಕೇಳಯ್ಯಾ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು./484
ಕರ್ಮವೆಂಬ ಅಂಕದೊಡನೆ ತೊಡರಿದೆ.
ಬಿನ್ನಪ ಅವಧಾರು ! ನಿಮ್ಮಾಳಿನ ಭಾಷೆಯ;
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋ ಎನಿಸದಡೆ ನಿಮ್ಮಾಳಲ್ಲ.
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬ ಅಲಗಿನಿಂದಿರಿವೆ, ಕೂಡಲಸಂಗಮದೇವಾ./485
ಕಲಿ ಕರುಳ ತಕ್ಕೈಸಿ ಹರಿಯಬಲ್ಲನಲ್ಲದೆ
ಸಾಯ ಕಾದಿಸುವಡೆ, ಎಡೆಗೋಲನಿಕ್ಕುವಡೆ, ದಾತಾರನಾದಿನವಲ್ಲ[ವೆ!].
ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ,
ತನುಮನಧನದಲ್ಲಿ ವಂಚನೆಯ
ಆನು ಬಯಸಿದಡೆಂತಹುದಯ್ಯಾ /486
ಕಲಿತನ ತನಗುಳ್ಳಡೆ ಸೂಜಿ ಬಾಳು ಮೊದಲಾಗಿ ಕಾದಲೆಬೇಕು.
ಶರಣಪಥ ತನಗುಳ್ಳಡೆ ಶಿವಭಕ್ತರ ಮನೆಯಲ್ಲಿ ಶಿವರಸವ
ಪಂಚಾಮೃತವ ಮಾಡಿಕೊಳ್ಳಬೇಕು.
ಭ್ರಾಂತುವಿಡಿದು ಲಿಂಗಕ್ಕೋಗರವನರಸುವ
ಪಾತಕರ ಮೆಚ್ಚ ಕೂಡಲಸಂಗಮದೇವ./487
ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
ಎಲುದೋರೆ ಸರಸವಾಡಿದಡೆ ಸೈರಿಸಬೇಕಯ್ಯಾ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ. /488
ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ,
ಮನವ ಮಾಣಿಸಿ ಘನವ ನೆಲೆಗೊಳಿಸಿದ.
ತನುವ ಕೆಡಿಸಿ, ಅನುವ ಸ್ಥಾಪ್ಯವ ಮಾಡಿ,
ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ,
ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ.
ನಿಮ್ಮ ನಿಲವನೆನಗೆ ಒರೆದೊರೆದು ಹೇಳಿ ತೋರಿಸಿ,
ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ.
ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ
ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ./489
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ/490
ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು,
ಹಾಲೊಳಗೆ ತುಪ್ಪವುಂಟು,
ಅಂತರಾಮಿಯಲ್ಲಿ ಶಿವನಿಹನು.
ಇದೇನು ಕಾರಣ ಕತ್ತಲೆ ಕಾಣಬಾರದು,
ತೋರಬಲ್ಲ ಗುರು ಸುಳಿಯನು, ಕೂಡಲಸಂಗಮದೇವಾ./491
ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ.
ಬಣ್ಣವಿಟ್ಟು ನುಡಿದಲ್ಲಿ ಫಲವೇನು
ಚಿನ್ನಗೆಯ್ಕವನ್ನಾಡುವವನಂತೆ.
ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ
ಕೂಡಸಂಗಮದೇವನೊಲಿದು ಸಲಹುವ./492
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ./493
ಕಳಹೋದಡೆ ಕನ್ನದುಳಿಯ ಹಿಡಿವೆ,
ಬಂದಿವಿಡಿದಡೆ ನಿಮ್ಮಿಂದ ಮುಂದೆ ನಡೆವೆನು.
ಮನಭೀತಿ ಮನಶಂಕೆಗೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪುರಾತನರಾಣೆ.
ಆಳ್ದರ ನಡೆ ಸದಾಚಾರವೆನ್ನದಿರ್ದಡೆ,
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ,
ಕೂಡಲಸಂಗಮದೇವಾ. /494
ಕಳಾಬಿಂದು ವಟಾಮುಖಿಯೆಂಬ ಹೆಂಗೂಸಿನ ಕೈಯಲು
ಜಲಾಕಾರವೆಂಬ ಗಡಿಗೆಯಿದ್ದಿತ್ತು.
ಆ ಗಡಿಗೆಯಲ್ಲಿ ಚೆನ್ನಬಸವಣ್ಣ ನೀರ ತಂದ.
ಮಡಿವಾಳಯ್ಯ ಸಯದಾನವ ತಂದ,
ಇದರ ಒಲೆಯಡಿಯನುರುಹಿ ಕೊಡಾ ಪ್ರಭುವೆ
ಕೂಡಲಸಂಗಮದೇವಾ. /495
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದಡೆ,
ನೀ ಮುಂತಾಗಿ ಬಂದ ಭಕ್ತರ ನೀನೆಂದೆನ್ನದಿದ್ದಡೆ ಅದೇ ದ್ರೋಹ.
ನಡೆನುಡಿ ಹುಸಿಯುಂಟಾದಡೆ,
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ./496
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ.
ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆ[ಯ]ಲ್ಲ.
ಹಡಿಕೆಗೆ ಮಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ/497
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿುಂದ ಕರಕಷ್ಟ
ಕೂಡಲಸಂಗಮದೇವಾ. /498
ಕಾಗೆ ವ್ಟಿಸುವ ಹೊನ್ನಕಳಸವಹುದರಿಂದ
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ.
ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ.
ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ
ವಯಂ ತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ
ಕೂಡಲಸಂಗಮದೇವಾ,
ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ./499
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು.
ಅದೇನು ಕಾರಣ
ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ !
ಎನ್ನ ಮನದ ತದ್ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ./500