Categories
ಶರಣರು / Sharanaru

ಮೆರೆಮಿಂಡಯ್ಯ

ಅಂಕಿತ: ಐಘಟದೂರ ರಾಮೇಶ್ವರಲಿಂಗ

ತಮಿಳುನಾಡಿನ 63 ಪುರಾತನರಲ್ಲಿ ಒಬ್ಬನಾದ ‘ಮೆರೆಮಿಂಡದೇವ’ನಿಂದ ಭಿನ್ನವಾದ ಈತ, ಬಸವ ಸಮಕಾಲೀನ ಶರಣ. ಕಾಲ-1160. “ಐಘಟದೂರ ರಾಮೇಶ್ವರಲಿಂಗ’ ಅಂಕಿತದಲ್ಲಿ ಬರೆದ 110 ವಚನಗಳು ದೊರೆತಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ ಮೊದಲಾದ ತಾತ್ವಿಕ ವಿಷಯ, ಸಾಮಾಜಿಕ ವಿಡಂಬನೆಗಳು ಸರಳ ಶೈಲಿಯಲ್ಲಿ ನಿರೂಪಿತವಾಗಿವೆ. ಅನೇಕ ಶರಣರನ್ನು ಗೌರವದಿಂದ ಸ್ಮರಿಸಿದ್ದಾನೆ.

ಯಾವುದೇ ಕಾಯಕವಿರಲಿ, ಅದನ್ನು ಮಾಡುವಾಗ ಹುಸಿಯಿಲ್ಲದಿರಬೇಕು, ಅದು ಶಿವನ ವರ, ಪಶುಪತಿಯ ವಾಸಸ್ಥಾನ, ಅದು ಪ್ರತ್ಯಕ್ಷ ಪರಮೇಶ್ವರ ಎಂದು ಕಾಯಕದ ಬಗ್ಗೆ ತುಂಬುಗೌರವದಿಂದ ಮಾತನಾಡಿರುವನು. ತನ್ನ ಸಮಕಾಲೀನ ಶರಣರನ್ನು ಒಂದು ವಚನದಲ್ಲಿ ನೆನೆದಿರುವನು. ಭಕ್ತನ ಆರ್ತತೆ, ಹಠಮಾರಿತನ ಅವನ ವಚನಗಳಲ್ಲಿ ಹೆಪ್ಪುಗಟ್ಟಿದೆ. ಅಶನ, ವ್ಯಸನಗಳಲ್ಲಿ ಲೌಕಿಕದಲ್ಲಿ ಮುಳುಗಿರುವವರ ಟೀಕೆ ಮಾಡಿರುವನು. ಇರುಳಿಗೆ ಮೊಲೆ, ಯೋನಿ, ಅಧರ, ಹಗಲಿಗೆ ಗ್ರಂಥ, ಲೇಖನಿ – ಇಂಥವರದು ಮಾತಿನ ಮಾಲೆಯ ಸರಕು, ವೇಷದ ಪುಣ್ಯ, ಭ್ರಾಂತಿನ ಮಾತು ಇವರ ಮಾತು ಸಾಕು ಎನ್ನುವನು. ಏಕೋರಾಮಾರಾಧ್ಯರು, ಪಂಡಿತಾರಾಧ್ಯರು, ರೇವಣಸಿದ್ಧೇಶ್ವರರು, ಮರುಳಸಿದ್ಧೇಶ್ವರರು – ಈ ಚಮರಾಚಾರ್ಯರನ್ನು ನೆನೆದಿರುವನು. ಗುರುವಾಗಿ ದೀಕ್ಷೆಯನ್ನು ಅನುಗ್ರಹಿಸಿ ಆ ಭಕ್ತರ ಮನೆಯಲ್ಲಿ ಉಣ್ಣಲೊಲ್ಲದೆ ಅಕ್ಕಿ ತುಪ್ಪವನ್ನು ಪಡೆದು, ಪ್ರತ್ಯೇಕವಾಗಿ ಅಡುಗೆ ಮಾಡಿ ಉಣ್ಣುವ ಗುರುವನ್ನು ತೀವ್ರವಾಗಿ ಟೀಕಿಸಿರುವನು.