ಅಂಕಿತ: | ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನ |
ಕಾಯಕ: | ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ,ರಾಜ್ಯ ತ್ಯಾಗಮಾಡಿ ಕಟ್ಟಿಗೆ ಮಾರುವ ಕಾಯಕ |
ಈಕೆ ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ, ಮೂಲ ಹೆಸರು ಗಂಗಾದೇವಿ. ಪತಿಯೊಡನೆ ರಾಜ್ಯ ತ್ಯಾಗಮಾಡಿ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಳ್ಳುತ್ತಾಳೆ. ಮಹಾದೇವ ಭೂಪಾಲ ‘ಮೋಳಿಗೆಯ ಮಾರಯ್ಯ’ನೆಂದು, ಗಂಗಾದೇವಿ ‘ಮೋಳಿಗೆಯ ಮಹಾದೇವಿ’ ಎಂದು ಹೆಸರು ಬದಲಿಸಿಕೊಂಡು ಕಲ್ಯಾಣದಲ್ಲಿ ಕಾಯಕ ಜೀವಿಗಳಾಗಿ ಬದುಕು ಸಾಗಿಸುತ್ತಾರೆ. ಅನುಭವ ಮಂಟಪದಲ್ಲಿ ಭಾಗವಹಿಸಿ, ವಚನ ರಚನೆಯಲ್ಲಿ ತೊಡಗುತ್ತಾರೆ. ಕಾಲ-1160. ಪುರಾಣಗಳಲ್ಲಿ ಇವರ ಚರಿತ್ರೆ ಪ್ರಸಿದ್ಧವಾಗಿದೆ.
‘ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನ’ ಅಂಕಿತದಲ್ಲಿ ರಚಿಸಿದ ಈಕೆಯ ೭೦ ವಚನಗಳು ದೊರೆತಿವೆ. ಎಲ್ಲ ವಚನಗಳು ತತ್ವ ಪ್ರಧಾನವಾಗಿವೆ. ಪತಿಗೆ ಸತ್ಯದ ನಿಲುವನ್ನು ತೋರಿಸುವಲ್ಲಿ ನುಡಿದ ನುಡಿಗಳೆ ಅವುಗಳಲ್ಲಿ ಅಧಿಕ. ಜೊತೆಗೆ ಷಟ್-ಸ್ಥಲ ಸ್ವರೂಪ, ಕ್ರಿಯಾ ಜ್ಞಾನ ಸಂಬಂಧ, ಇಷ್ಟಲಿಂಗ ಪ್ರಾಣಲಿಂಗಗಳ ಮಹತಿಯನ್ನು ತಿಳಿಸುವ ಈಕೆ ಉಳಿದ ವಚನಕಾರ್ತಿಯರಿಗಿಂತ ಭಿನ್ನವೆನಿಸಿದ್ದಾಳೆ.ಈಕೆ ಮಹಾದೇವಿಯಾಗಿ ತಾತ್ವಿಕ ವಚನಗಳನ್ನು ಬರೆದಿರುವಳು.