Categories
ಶರಣರು / Sharanaru

ಶರಣ ಡೋಹರ ಕಕ್ಕಯ್ಯ

ಅಂಕಿತ: ಅಭಿನವಮಲ್ಲಿಕಾರ್ಜುನ
ಕಾಯಕ: ಚರ್ಮ ಹದ ಮಾಡುವವನು

ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಕಾಶ್ಮೀರದಿಂದ ಮಹದೇವ ಭೂಪಾಲ, ಅಫಘಾನಿಸ್ತಾನದಿಂದ ಮರುಳ ಶಂಕರದೇವ. ಸೌರಾಷ್ಟ್ರದಿಂದ ಆದಯ್ಯ, ಮಾಳವ ದೇಶದಿಂದ ಕಕ್ಕಯ್ಯ ಬಂದರು.

ಕಕ್ಕಯ್ಯ ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಆತನ ವೃತ್ತಿ. ಆತ ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾದ. ಆತ ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಅಗ್ಗಳಿಕೆಗೆ ಪಾತ್ರನಾದನು. ಬಸವಣ್ಣನವರು ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಕ್ಕಯ್ಯನ ಪ್ರಸಾದಕ್ಕಾಗಿ ಹಾತೊರೆದರು.

ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಟ, ಆಚಾರ ಸಂಪನ್ನ, ಜೊತೆಗೆ ಆತ ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಆತ ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ್ದನ್ನು ಆತ ಕೃತಜ್ಞತೆಯಿಂದ ನೆನೆದಿದ್ದಾನೆ.

ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದನು. ಆತನು ವಚನಗಳನ್ನು ರಚಿಸಿದ್ದಾನೆ. ಆತನ ಆರು ವಚನಗಳು ದೊರೆತಿವೆ.

ಗಣಾಚಾರಿಯಾದ ಕಕ್ಕಯ್ಯ ಕಲ್ಯಾಣಕ್ರಾಂತಿಯಲ್ಲಿ ವೀರೋಚಿತವಾದ ಪಾತ್ರವಹಿಸಿರುವುದುತಿಳಿಯುತ್ತದೆ. ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಆತ ಹೋರಾಟ ನಡೆಸಿದನು. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಬೆಳಗಾವಿಯ ಕಕ್ಕೇರಿಯ ಕಡೆ ತಿರುಗಿಸಿದನು.

ಕಕ್ಕೇರಿಯ ಬಳಿ ಆತ ಹೋರಾಡುತ್ತ ಹುತಾತ್ಮನಾದಂತೆ ತಿಳಿಯುತ್ತದೆ. ಆತನ ಹೆಸರಿನ ಬಾವಿ ಮತ್ತು ಕೆರೆ ಅಲ್ಲಿ ಇವೆ. ಆತನ ಸಮಾಧಿಯೂ ಕೂಡ ಅಲ್ಲೇ ಇದೆ. ಶರಣ ಉಳವಿಗಾಗಿ, ವಚನ ಸಾಹಿತ್ಯ ಸಂಪದದ ರಕ್ಷಣೆಗಾಗಿ ಹೋರಾಡಿ ಆತ್ಮಾರ್ಪಣೆ ಮಾಡಿದ ಹಿರಿಯ ಶರಣ ಡೋಹರ ಕಕ್ಕಯ್ಯ. ಕಕ್ಕಯ್ಯನ ಒಂದು ವಚನ :

ನೆನೆಯಲರಿಯೆ, ನಿರ್ಧರಿಸಲರಿಯೆ ಮನವಿಲ್ಲವಾಗಿ
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನಾಯಿತ್ತಾಗಿ
ಜ್ಞಾನ ಜ್ಞೇಯಂಗಳೆಲ್ಲವ ಮಿರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

ಬಸವಾದಿ ಶರಣರ ವಿಶೇಷ ಗೌರವಕ್ಕೆ ಪಾತ್ರಾನಾದ ದಲಿತ ಶರಣ ‘ಡೋಹಾರ’ ಜಾತಿಗೆ ಸೇರಿದವನು. ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಶರಣನಾಗುತ್ತಾನೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಚೆನ್ನಬಸವಣ್ಣನ ಜೊತೆ ಉಳವಿಯತ್ತ ಸಾಗುತ್ತಾನೆ. ಕಕ್ಕೇರಿಯಲ್ಲಿ ಐಕ್ಯನಾಗುತ್ತಾನೆ. ಅಲ್ಲಿ ಈತನ ಹೆಸರಿನ ಕೆರೆ, ಬಾವಿ ಮತ್ತು ಸಮಾಧಿ ಇವೆ. ಕಾಲ-೧೧೩0. ‘ಅಭಿನವ ಮಲ್ಲಿಕಾರ್ಜುನ’ ಅಂಕಿತದಲ್ಲಿ ೬ ವಚನಗಳು ದೊರೆತಿವೆ. ಅವುಗಳಲ್ಲಿ ಬಸವಾದಿ ಶರಣರ ಕೃಪೆಯಿಂದ ತನ್ನ ಕಷ್ಟಕುಲ (ಕೀಳುಜಾತಿ) ಕರ್ಮವನ್ನು ಕಳೆದುಕೊಂಡು ಶರಣನಾದ ಪರಿಯನ್ನು ತಿಳಿಸುತ್ತಾನೆ. ‘ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ’ ಎಂಬ ಮಾತು ಹನ್ನೇರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯ ಸ್ವರೂಪವನ್ನು ತೆರೆದುತೋರಿಸುತ್ತದೆ.

ಕೆಳವರ್ಗದಿಂದ ಬಂದ ತನ್ನ ಕುಲದ ಸೂತಕವನ್ನು ಬಸವಣ್ಣ ಇಷ್ಟಲಿಂಗ ವನ್ನು ಅನುಗ್ರಹಿಸುವ ಮೂಲಕ ಪರಿಹರಿಸಿದನೆಂದಿರುವನು.