Categories
ಕನ್ನಡ ಪಂಪಮಹಾಕವಿ ವಿರಚಿತ ಪಂಪಭಾರತಂ ಪ್ರಾಚೀನ ಕೃತಿಗಳು

ಉಪೋದ್ಘಾತ

ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂ ಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ನಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ನಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ. ಲಬ್ಧವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.

ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರ ದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರ ಪಂಥವನ್ನು ದಕ್ಷಿಣದಲ್ಲಿ ಬೆಳೆಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮ ಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈದಿಕ ಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ನಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡು ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ಧರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮ ಮತಗ್ರಂಥಗಳನ್ನು ಸಂಸ್ಕ ತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳೆಸಿಕೊಂಡು ಬಂದರು.ಜೈನರು ಕರ್ನಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ನಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡ ಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳೆಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನುಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡ ಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗ ಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮ ಮತತತ್ತ್ವಗಳನ್ನು ಜನಸಾಮಾನ್ಯರಿಗೆ ಬೋಸತೊಡಗಿದರು. ಕರ್ನಾಟಕದ ದ್ರಾವಿಡ ಸಂಸ್ಕ ತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತ ಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ನಾಟಕವನ್ನು ಸ್ವಾನ ಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ದವಾಗಿಲ್ಲ.

Categories
ಕನ್ನಡ ಪಂಪಮಹಾಕವಿ ವಿರಚಿತ ಪಂಪಭಾರತಂ ಪ್ರಾಚೀನ ಕೃತಿಗಳು

ಪಂಪಭಾರತಂ

ಕೃತಿ-ಪಂಪಭಾರತಂ
ಸರಣಿ-ಕನ್ನಡ, ಪಂಪಮಹಾಕವಿ ವಿರಚಿತ ಪಂಪಭಾರತಂ, ಪ್ರಾಚೀನ ಕೃತಿಗಳು
ಕೃತಿಯನ್ನು ಓದಿ