Loading Events

« All Events

  • This event has passed.

ಕೃಷ್ಣಮೂರ್ತಿ ಪುರಾಣಿಕ

September 5, 2023

೦೫..೧೯೧೧ ೧೩.೧೧.೧೯೮೫ ಅಗ್ರಶ್ರೇಣಿಯ ಕಾದಂಬರಿಕಾರರಾಗಿದ್ದು,  ಕಾದಂಬರಿ ಸಾಮ್ರಾಟರೆಂದೇ ಪ್ರಖ್ಯಾತರಾಗಿದ್ದ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬೀಳಗಿಯಲ್ಲಿ (ಈಗ ಬಾಗಲಕೋಟ ಜಿಲ್ಲಾ, ಬೀಳಗಿ ತಾಲ್ಲೂಕು ಕೇಂದ್ರ) ೧೯೧೧ ರ ಸೆಪ್ಟಂಬರ್ ತಿಂಗಳ ಶಿಕ್ಷಕರ ದಿನದಂದು. ತಾಯಿ ಲಕ್ಷ್ಮೀಬಾಯಿ. ತಂದೆ ತಮ್ಮಣ್ಣಭಟ್ಟರು, ವೈದಿಕ ವೃತ್ತಿಯ ಸುಸಂಸ್ಕೃತ ಮನೆತನ. ಮನೆಯಲ್ಲಿ ಸದಾ ಪುರಾಣ-ಪುಣ್ಯ ಕತೆಗಳ ಪರಿಸರದಲ್ಲಿ ಬೆಳೆದವರು. ಪ್ರಾರಂಭಿಕ ಶಿಕ್ಷಣ ಬಾಗಲಕೋಟೆಯಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿ (೧೯೩೬) ಮತ್ತು ಬೆಳಗಾವಿಯ ಎಲ್‌.ಟಿ. ಕಾಲೇಜಿನಿಂದ ಪಡೆದ ಬಿ.ಟಿ. ಪದವಿ (೧೯೪೦). ಉದ್ಯೋಗಕ್ಕಾಗಿ ಗೋಕಾಕದ ಮುನಿಸಿಪಲ್‌ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿ ಗೋಕಾಕವನ್ನೂ ವೃತ್ತಿ ಹಾಗೂ ಪ್ರವೃತ್ತಿಯ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು. ಮನೆಯಲ್ಲಿ ಸಾಹಿತ್ಯದ ಬಗ್ಗೆ ರುಚಿ ತೋರಿಸಿದವರು ತಂದೆ ತಾಯಿಗಳಾದರೆ ಹೊರಗೆ ರಂ.ಶ್ರೀ. ಮುಗಳಿ, ಭಾವಗೀತೆಗಳಲ್ಲಿ ಬೇಂದ್ರೆ, ಸರಳ ರಗಳೆಯ ನಾಟಕಗಳಿಗೆ ಕುವೆಂಪುರವರು ಮಾರ್ಗದರ್ಶಕರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿದ್ದಾಗಲೇ ಕತೆ, ಕವನಗಳ ರಚನೆ. ವಾರಾನ್ನದ ಹುಡುಗನಾಗಿ ಬಾಗಲಕೋಟೆಯ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಊಟಮಾಡುತ್ತಿದ್ದ ಮನೆಯಲ್ಲಿದ್ದ ಹದಿಹರೆಯದ ಹುಡುಗಿಯೊಬ್ಬಳು ಮದುವೆಯಾದ ವರ್ಷವೇ ವಿಧವೆಯಾಗಿ ಬಂದವಳನ್ನೂ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದರಂತೆ.  ಅಚಾನಕವಾಗಿ ಇವರ ಕಣ್ಣಿಗೆ ಬಿದ್ದ ಆಕೆ, ‘ಕೃಷ್ಣ ಕೊಂಚ ವಿಷ ತಂದು ಕೊಡು, ಬದುಕು ಬೇಡವಾಗಿದೆ’ ಎಂದಳಂತೆ. ಅವಳ ದುಃಖದ ಜೀವನವು ಇವರನ್ನು ಹಿಂಡಿ ಹಿಪ್ಪೆಮಾಡಿ, ಮನದಾಳದಲ್ಲಿ ಮೂಡಿದ ದುಃಖ ಸುಡು ಸುಡಲೇ ಸುಡುಜೀವ ಸುಡುಗಾಡು ಸೇರಿಹಳು ಹುಡುಕದಿರು ಸಂತಸದ ಬಾಳಿನಲಿ….. ಎಂದು ಕವನವಾಗಿ ಹೊಮ್ಮಿತಂತೆ. ಆದರ್ಶದ ಕನಸು ಕಾಣುತ್ತಿದ್ದ ಯುವಕನಿಗೆ ಬಾಳಿನ ನೋವಿನ ದರ್ಶನವಾದಂತೆಲ್ಲ ಬರೆದದ್ದು ಹಲವಾರು ಕತೆಗಳು ಹಾಗೂ ಕವಿತೆಗಳು. ಹೀಗೆ ಬರೆದ ಕತೆ, ಕವನಗಳು ಕನ್ನಡಿಗ, ಕರ್ನಾಟಕ ವೈಭವ, ಜಯಕರ್ನಾಟಕ, ಜಯಂತಿ, ವಸಂತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಮೊದಲ ಗದ್ಯಕೃತಿ ಪ್ರಕಟವಾದುದು ‘ರಾಮೂನ ಕತೆಗಳು’ ೧೯೪೬ ರಲ್ಲಿ. ಮೊದಲ ಕವನ ಸಂಕಲನ ‘ಬಾಳ ಕನಸು’ ೧೯೪೭ ರಲ್ಲಿ. ಒಮ್ಮೆ ಶಿವರಾಮಕಾರಂತರು, ದ.ಬಾ. ಕುಲಕರ್ಣಿಯವರು ಗೋಕಾಕಕ್ಕೆ ನಾಡಹಬ್ಬದ ಸಲುವಾಗಿ ಬಂದಾಗ, ಇವರ ಮನೆಗೂ ಬಂದರು. ಪುರಾಣಿಕರು ಹೊಸದಾಗಿ ಬರೆದ ಕವನವನ್ನೂ ಹಾಡಿ ತೋರಿಸಿದರು. ಕಾರಂತ ಕೇಳಿದರು, ಮೆಚ್ಚಿದರು. ಜೊತೆಗೆ ಮತ್ತೊಂದು ಮಾತನ್ನೂ ಸೇರಿಸಿದರು. ‘ನಾವು ಬರೆಯುವುದು ಜನರಿಗೆ ಮುಟ್ಟಬೇಕು, ಅವರಲ್ಲಿ ಜಾಗೃತಿಯನ್ನುಂಟುಮಾಡಬೇಕು, ಇದು ಕಾವ್ಯದಿಂದ ಆಗುವುದೆಂದು ಅನ್ನಿಸುವುದಿಲ್ಲ.ನೀವು ಗದ್ಯದಲ್ಲೇ ಬರೆಯಲು ಪ್ರಾರಂಭಿಸಿ’ ಎಂದರಂತೆ. ಸಮಾಜ ಜೀವನದಲ್ಲಿರುವ ಅಂಕುಡೊಂಕುಗಳು, ಏರು-ಪೇರುಗಳು, ಕಷ್ಟ-ಕಾರ್ಪಣ್ಯಗಳೇ ಇವರ ಕಾದಂಬರಿಗಳ ವಸ್ತುವಾಗಿ ಬರೆದ ಮೊದಲ ಕಾದಂಬರಿ ‘ಮುಗಿಲಮಲ್ಲಿಗೆ’ (೧೯೪೮) ಪ್ರಕಟಗೊಂಡಾಗ ಕನ್ನಡ ಜನತೆ ಸಂತಸದಿಂದ ಬರಮಾಡಿಕೊಂಡಿತು. ಒಮ್ಮೆ ಅ.ನ.ಕೃ.ರವರು ಪ್ರಕಾಶಕರೊಬ್ಬರೊಡನೆ ಮಾಡಿಕೊಂಡ ಒಪ್ಪಂದದಂತೆ ಕಾದಂಬರಿಯೊಂದನ್ನು ಬರೆದು ಕೊಡಬೇಕಿತ್ತು. ಆದರೆ ಬರವಣಿಗೆ ಸಾಗದಿದ್ದಾಗ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನೂ ಶಿಫಾರಸ್ಸು ಮಾಡಿದರು. ಇದರಿಂದ ಅ.ನ.ಕೃ ರವರ ಕಾದಂಬರಿಯನ್ನು ಕಾಯುತ್ತಿದ್ದವರು ಪುರಾಣಿಕರ ಕಾದಂಬರಿಯನ್ನು ಓದಿ ಇವರ ಕಾದಂಬರಿಗಳಿಗೆ ಕಾಯುವಂತಾಯಿತು. ಕತೆ, ಕಾದಂಬರಿ ಓದುವುದೇ ಮುಖ್ಯ ಮನರಂಜನೆಯಾಗಿದ್ದ ಕಾಲದಲ್ಲಿ ಸುಸಂಸ್ಕೃತ ಬರಹದ ಕಾದಂಬರಿಗಳಿಗೆ ಬಹುಬೇಡಿಕೆ ಇತ್ತು. ಒಂದಾದಮೇಲೊಂದರಂತೆ ಬರೆದ ಪುರಾಣಿಕರ ಕಾದಂಬರಿಗಳಿಗೆ ಹಳೆಯ ಮೈಸೂರು ಪ್ರದೇಶದಲ್ಲೂ ಓದುಗರಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಪುರಾಣಿಕರು ಓದುಗರ ಮನೆಮಾತಾದರು. ಈ ಸಂದರ್ಭದಲ್ಲಿ ಕೀಳುದರ್ಜೆಯ ಕಾದಂಬರಿಗಳ ಪ್ರಕಟಣೆಯೂ ಪ್ರಾರಂಭವಾಗಿದ್ದು ಆಯ್ಕೆಯೂ ಕಷ್ಟಕರವಾಗಿತ್ತು. ರಂ.ಶ್ರೀ. ಮುಗಳಿಯವರು ಒಮ್ಮೆ ಪುರಾಣಿಕರನ್ನು ಪರಿಚಯಿಸುತ್ತಾ, “ನಾನು ಮೊದಲು ಕಾದಂಬರಿ ಓದಿ ನಂತರ ಮನೆಯವರ ಕೈಲಿಡುತ್ತೇನೆ. ಆದರೆ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನು ನೇರವಾಗಿ ಮಗಳಿಗೆ ಕೊಡುತ್ತೇನೆ” ಎಂದಿದ್ದರಂತೆ. ಇದು ಪುರಾಣಿಕರ ಕಾದಂಬರಿಗಳ ಬಗ್ಗೆ ಸುಸಂಸ್ಕೃತ ಬರಹದ ಬಗ್ಗೆ ಇದ್ದ ಅಭಿಪ್ರಾಯ. ಹೀಗೆ ಪ್ರಾಚೀನ ಪರಂಪರೆ, ಜೀವನ ಮೌಲ್ಯಗಳು, ಹೆಣ್ಣಿನ ದುಃಖ-ದುಮ್ಮಾನ ಮೊದಲಾದವುಗಳೇ ಕಾದಂಬರಿಗಳ ವಸ್ತುವಾಗಿದ್ದರಿಂದ ಮನೆಯವರೆಲ್ಲರೂ ಓದುವುದಷ್ಟೇ ಅಲ್ಲದೆ ಕುಳಿತು ಚರ್ಚಿಸಬಲ್ಲ ಸಹ್ಯ ಸಾಹಿತ್ಯ ಸೃಷ್ಟಿಸಿದರು. ಸುಮಾರು ೮೦ ಕಾದಂಬರಿಗಳು, ೧೧ ಗೀತನಾಟಕಗಳು, ೧೨ ಸಣ್ಣಕಥಾ ಸಂಕಲನಗಳು, ೪ ಕವನ ಸಂಕಲನಗಳು, ೮ ಶಿಶು ಸಾಹಿತ್ಯ ಕೃತಿಗಳು ಸೇರಿ ಒಟ್ಟು ೧೧೫ ಕೃತಿಗಳನ್ನು ರಚಿಸಿದ್ದಾರೆ. ಕಾಲೇಜು ದಿನಗಳಲ್ಲೇ ಬರೆದ ಸೈರಂಧ್ರಿ ಸುಂದರ ಸರಳ ರಗಳೆಯ ನಾಟಕ. ಇದು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡ ನಂತರ ರಂಗಭೂಮಿಯ ಮೇಲೂ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಸರಳ ರಗಳೆಯ ಕೃತಿ ರಚನೆಗೆ ಕುವೆಂಪುರವರೇ ಆದರ್ಶ. ಕುವೆಂಪುರವರ ಕೆಲ ಕೃತಿಗಳನ್ನು ಸಾರ್ವಜನಿಕವಾಗಿ ವಾಚನ ಮಾಡತೊಡಗಿದ ನಂತರ, ಇದರಿಂದ ಸ್ಫೂರ್ತಿಗೊಂಡು ರಚಿಸಿದ್ದು ‘ಮಗನ ಗೆಲುವು’, ‘ಸೈರಂಧ್ರಿ’, ‘ರಾಧೇಯ’, ‘ರತಿವಿಲಾಸ’, ‘ಜಯಭೇರಿ’, ‘ವಾಸವದತ್ತ’ ಮೊದಲಾದ ಕೃತಿಗಳು. ಸೈರಂಧ್ರಿಯ ಎಪ್ಪತ್ತು ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿತು. ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ದುಡಿದಿದ್ದರೂ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. “ಗೃಹಿಣಿಯರಿಗೆ ಪಥ್ಯವಾಗುವ ರೀತಿಯಲ್ಲಿ ಕಾದಂಬರಿ ರಚಿಸಿರುವೆ, ಸೀತಾ, ದ್ರೌಪದಿ, ಕುಂತಿ ಮುಂತಾದವರು ಪಟ್ಟ ಕಷ್ಟ, ತೋರಿದ ಎದೆಗಾರಿಕೆ ಇಂದಿನ ಮಹಿಳೆಯರಿಗೆ ಬೇಕಾಗಿದೆ. ಹೀಗೆ ಚಿತ್ರಿಸುವಾಗ ವಿವೇಕ, ಕಲಾವಂತಿಕೆಯನ್ನೂ ತೋರಿಸುವ ಶಕ್ತಿ ನಿನ್ನಲ್ಲಿದೆ, ಮುಂದುವರೆಸು” ಎಂದು ಬೇಂದ್ರೆಯವರು ಹಾರೈಸಿದರಂತೆ. ಅದರಂತೆ ಯಾವಾಗಲೂ ಅನುಕಂಪದ ಪನ್ನೀರಿನಲ್ಲಿ ಅದ್ದಿ ಬರೆದ ಪುರಾಣಿಕರ ಲೇಖನಿಯಿಂದ ಮುತ್ತೈದೆ, ಮಣ್ಣಿನ ಮಗಳು, ಧರ್ಮದೇವತೆ, ಮಂಗಳಾಕ್ಷತೆ, ಗಂಧದ ಬಳ್ಳಿ, ಕಣ್ಣು ತುಂಬಿದ ಕರುಣೆ, ಹಿಮಗಿರಿಯ ಗೌರಿ , ಹಾಲುಂಡ ತವರು ಮುಂತಾದ ಕಾದಂಬರಿಗಳು ಓದುಗರಿಗೆ ಮೆಚ್ಚುಗೆಯಾದವು. ಚಿತ್ರೋದ್ಯಮಿಗಳು ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸತೊಡಗಿದ್ದೂ ಪುರಾಣಿಕರ ಕಾದಂಬರಿಗಳಿಂದಲೇ. ಪ್ರಥಮ ಚಲನಚಿತ್ರವಾದ ಕಾದಂಬರಿ ‘ಧರ್ಮದೇವತೆ’ಯು ಕರುಣೆಯೇ ಕುಟುಂಬದ ಕಣ್ಣು (೧೯೬೨) ಎಂಬ ಹೆಸರಿನಿಂದ ಚಲನಚಿತ್ರವಾಗಿ ಜನಪ್ರಿಯವಾಯಿತು. ಸುಮಾರು ೧೧ ಕಾದಂಭರಿಗಳು  ಚಲನಚಿತ್ರವಾಗಿ ಕೃಷ್ಣಮೂರ್ತಿ ಪುರಾಣಿಕರಿಗೆ ಖ್ಯಾತಿಯನ್ನು ತಂದು ಕೊಟ್ಟವು. ಮಗಳ ಮದುವೆಯ ಸಂದರ್ಭದಲ್ಲಿ ಕಡಿಮೆಬಿದ್ದ ಒಂದುವರೆ ಸಾವಿರ ರೂಪಾಯಿಗೆ ಭಗವಂತನ ಮೇಲೆ ಭಾರ ಹಾಕಿದಾಗ, ತಮಿಳಿನ ಎ.ವಿ.ಎಂ. ಪಿಕ್ಚರ್ಸ್ ಪ್ರತಿನಿಧಿ ‘ಮುತ್ತೈದೆ’ ತಮಿಳು ತರ್ಜುಮೆಯ ಚಿತ್ರೀಕರಣಕ್ಕೆ ಮುಂಗಡ ಹಣವೆಂದು ಒಂದುವರೆ ಸಾವಿರ ರೂಪಾಯಿ ಕೊಟ್ಟು ಹೋದನಂತೆ. “ಕನ್ನಡದಲ್ಲಿ ಮುತ್ತೈದೆ ಹಸೆಗೆ ಬರುವುದರ ಮೊದಲೇ ತಮಿಳು ಚಿತ್ರರಂಗದವರು ಆರತಿ ಬೆಳಗಿದ್ದು ಸ್ವಾರಸ್ಯಕರ ಸಂಗತಿ” ಎಂದು ಎಚ್ಚೆಸ್ಕೆ ಬರೆಯುತ್ತಾರೆ. ಹೀಗೆ ಚಲನಚಿತ್ರಗಳಾದ ಕಾದಂಬರಿಗಳೆಂದರೆ ಧರ್ಮದೇವತೆ (೧೯೬೨), ಕುಲವಧು(೧೯೬೩), ಭಾಗೀರಥಿ(೧೯೬೯), ಮಣ್ಣಿನ ಮಗಳು (೧೯೭೪), ಪಾವನ ಗಂಗಾ ಮತ್ತು ಸನಾದಿ ಅಪ್ಪಣ್ಣ (೧೯೭೭) ಮುಂತಾದವುಗಳಲ್ಲದೆ ಮುತ್ತೈದೆ ದೇವರ ಕೂಸು ಮೌನಗೌರಿ ಬೆವರಿನಬೆಲೆ ಮಂಗಳಾಕ್ಷತೆ ವಸಂತಲಕ್ಷ್ಮಿ ಮುಂತಾದ ಕಾದಂಬರಿಗಳು ರಜತ ಪರದೆಯನ್ನೇರಿದವು. ಕನ್ನಡದಲ್ಲಿ ಗದ್ಯಸಾಹಿತ್ಯವನ್ನು ಬೆಳೆಸಿದ್ದಲ್ಲದೆ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳೆಯುವಂತೆ ಮಾಡಿದ ಕೃಷ್ಣಮೂರ್ತಿ ಪುರಾಣಿಕರಿಗೆ ಸಂದ ಪ್ರಶಸ್ತಿ ಗೌರವಗಳೂ ಹಲವಾರು. ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ೧೯೫೭ ರಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ, ಮಣ್ಣಿನ ಮಗಳು ಕಾದಂಬರಿಗೆ ಮೈಸೂರು ರಾಜ್ಯ ಸರಕಾರದ ಮೊದಲ ಬಹುಮಾನ, ಶ್ರೀ ತರಳಬಾಳು ಜಗದ್ಗುರುಗಳಿಂದ ‘ಕಾದಂಬರಿ ಶ್ರೀ’ ಬಿರುದು. ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಧಾರವಾಡದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ‘ಕಾದಂಬರಿ ಮತ್ತು ಚಲನಚಿತ್ರ’ ಗೋಷ್ಠಿಯ ಅಧ್ಯಕ್ಷತೆ, ಶೃಂಗೇರಿ ಜಗದ್ಗುರುಗಳಿಂದ ಶಾರದಾಂಬ ಚಿನ್ನದ ಪದಕ, ವಿಜಾಪುರ, ಸೊಲ್ಲಾಪುರ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳ ಜೊತೆಗೆ ೧೯೭೪ ರಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಕಾದಂಬರಿ ದರ್ಶನ’ ಅಕ್ಕಮಹಾದೇವಿ ನೀಲಾಂಜನ ರವರು ‘ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳುಃ ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದ್ದಾರೆ (೧೯೯೫). ಮಧ್ಯಮವರ್ಗದ ಜನಸಾಮಾನ್ಯರ ದೈನಂದಿನ ಬದುಕಿನ ಚಿತ್ರಣವನ್ನೇ ತಮ್ಮ ಕಾದಂಬರಿಗಳ ಮೂಲ ದ್ರವ್ಯವಾಗಿಸಿಕೊಂಡು ಹಲವಾರು ಕಾದಂಬರಿಗಳನ್ನೂ ರಚಿಸಿ ಅ.ನ.ಕೃ.ರವರಂತೆ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನೂ ಬೆಳೆಸಿದ ಪುರಾಣಿಕರು ಕಾದಂಬರಿ ಲೋಕದಿಂದ ದೂರವಾದದ್ದು ೧೯೮೫ರ ನವಂಬರ್ ೧೩ರಂದು.

Details

Date:
September 5, 2023
Event Category: