- This event has passed.
ಬಿ.ಕೆ.ಎಸ್. ವರ್ಮಾ
September 5, 2023
೦೫.೦೯.೧೯೪೯ ಪರಿಸರ ಕಾಳಜಿಯ, ಸೂಕ್ಮಸಂವೇದನಾಶೀಲ ಕಲಾವಿದ ಬಿ.ಕೆ.ಎಸ್. ವರ್ಮಾರವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಅತ್ತಿಗುಪ್ಪೆಯ ಬಳಿ. ತಂದೆ ಕೃಷ್ಣಮಾಚಾರ್ಯ. ಹೆಸರಾಂತ ಸಂಗೀತ ವಿದ್ವಾಂಸರು. ತಾಯಿ ಸಾಂಪ್ರದಾಯಿಕ ಚಿತ್ರಕಲಾವಿದೆ ಜಯಲಕ್ಷ್ಮಿ. ವರ್ಮರಿಗೆ ವಿದ್ಯೆಗಿಂತ ಕಲೆಯ ಬಗ್ಗೆ ಬೆಳೆದ ಆಸಕ್ತಿಯಿಂದ ಕಲಿತದ್ದು ತಾಯಿಯಿಂದ. ಹುಡುಗನಾಗಿದ್ದಾಗಲೇ ಗೋಡೆಗಳ ಮೇಲೆ, ರಸ್ತೆ, ಮರಗಳೇ ಇವರ ಕಲಾಭ್ಯಾಸದ ಕ್ಯಾನ್ವಾಸ್. ಜಗನ್ಮೋಹನ ಅರಮನೆಯಲ್ಲಿ ರವಿವರ್ಮನ ಕಲಾಕೃತಿಗಳನ್ನು ನೋಡಿದ ಬಳಿಕ, ಚಿತ್ರಕಲೆಯನ್ನು ಕಲಿಯಲು ನಿರ್ಧರಿಸಿ ಶ್ರೀನಿವಾಸ ಹೆಸರಿನ ಹಿಂದೆ ಸೇರಿಸಿಕೊಂಡದ್ದು ‘ವರ್ಮಾ’ ಎಂದೆ. ಕಲಾಮಂದಿರದ ಅ.ನ. ಸುಬ್ಬರಾಯರಲ್ಲಿ ಸಾಂಪ್ರದಾಯಿಕ ಚಿತ್ರಕಲೆಗೆ ಬುನಾದಿ, ಚಿತ್ರಕಲೆಯಲ್ಲಿ ಪಡೆದ ಡಿಪ್ಲೊಮೊ. ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ಹೊರಗಡೆ ನೋಡಿ ಕಲಿತದ್ದೇ ಜಾಸ್ತಿ. ಪ್ರಕೃತಿಯ ಸತತ ಅಧ್ಯಯನ. ಪ್ರಾರಂಭಿಕ ದಿನಗಳಲ್ಲಿ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಬಿಡಿಸಿದ ಹಲವಾರು ಚಿತ್ರಗಳು. ಇವರ ಕಲಾಕೃತಿಗಳನ್ನು ಕಂಡ ರಾಷ್ಟ್ರಪತಿ ರಾಧಾಕೃಷ್ಣನ್ರವರಿಂದ ಮೆಚ್ಚುಗೆ. ಜನಜೀವನಕ್ಕೆ ಸಂಬಂಧಿಸಿದ ಚಿತ್ರ ರಚಿಸಲು ಸಲಹೆ. ಪರಿಸರನಾಶದ ಬಗ್ಗೆ ಮನನೊಂದು, ಜನಜಾಗೃತಿ ಮೂಡಿಸಲು ರಚಿಸಿದ ಹಲವಾರು ಚಿತ್ರಗಳು. ಕತ್ತರಿಸಿದ ಮರವೇ ಹೆಣ್ಣು ಜೀವ, ಪದತಲದಲ್ಲಿ ಆಕ್ರಂದನಗೈವ ಮಕ್ಕಳ ಚಿತ್ರ. ಕಾಲುಗಳಿಂದ ಹರಿವ ರಕ್ತಧಾರೆ, ಇದು ಪರಿಸರನಾಶದ ಬಗ್ಗೆ ಬರೆದ ಚಿತ್ರ. ಮಾಧ್ಯಮಗಳ ಮೂಲಕ ಚಿತ್ರರಸಿಕರ ಮನಸೂರೆಗೊಂಡು ಹಲವಾರು ಮಾಧ್ಯಮಗಳಲ್ಲಿ ಪ್ರಸಾರ. ವಿದೇಶಿ ಚಿತ್ರೋತ್ಸವಗಳಲ್ಲೂ ಕಲಾಕೃತಿಗಳ ಪ್ರದರ್ಶನ. ಮೇಘಮಿಲನ, ಉನ್ಮತ್ತ ಉನ್ಮಾದಿನಿ, ವಸಂತ ವೈಖರಿ ಪ್ರಶಸ್ತಿಗಳಿಸಿದ ಚಿತ್ರಗಳು. ಮೈಸೂರಿನ ಅರಣ್ಯಭವನ, ಜಿಂದಾಲ್ ಕಚೇರಿ, ಮುಂಬೈ, ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸಂಗ್ರಹಿತ. ದಸರ ವಸ್ತುಪ್ರದರ್ಶನ ಪ್ರಶಸ್ತಿ, ಅರಣ್ಯ ಇಲಾಖೆಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದವುಗಳು. ಇದೇ ದಿನ ಹುಟ್ಟಿದ ಕಲಾವಿದರು ದೇಶಪಾಂಡೆ ಲೋಕಾಪುರ – ೧೯೩೦ ಗಂಗಾಚರಣ್ – ೧೯೫೧ ಎಂ. ರವಿ – ೧೯೭೧
* * *