Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಮಾರೆಪ್ಪ ಮಾರೆಪ್ಪ ದಾಸರ

ಜನಪದ ಸಂಗೀತವನ್ನೇ ತಮ್ಮ ಬದುಕನ್ನಾಗಿಸಿಕೊಂಡು ಹಸಿವು ಬಡತನಗಳಿಂದ ನಲುಗಿದ್ದರೂ, ಹಾಡುತ್ತಲೇ ಹಾಡನ್ನಷ್ಟೇ ನೀಡುತ್ತಿರುವ ಜನಪದ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.
ಶ್ರೀ ಮಾರೆಪ್ಪ ದಾಸರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ತುಮ್ಮರಗುಬ್ಬಿಯೆಂಬ ಪುಟ್ಟ ಗ್ರಾಮದಲ್ಲಿ ಜೀವನದುದ್ದಕ್ಕೂ ಅಲೆಮಾರಿ ಜೀವನ. ಬೀದಿಬೀದಿಗಳಲ್ಲಿ ಹಾಡುತ್ತಾ, ಬೇಡುತ್ತಾ, ತತ್ವಪದ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಬಳ್ಳಾರಿ ಶಿಶುಹತ್ಯಾ ಲಾವಣಿ, ಬಂಜೆ ಪದ ಹೀಗೆ ನೂರಾರು ಪದಗಳನ್ನು ರಾತ್ರಿಯಲ್ಲಿ ಹಾಡುತ್ತಾ, ಮೂರು ತಂತಿಯ ಏಕತಾರಿ, ಚೌಟಕಿತಾಳ, ಪಿಟೀಲು ಬಾರಿಸುತ್ತಾ ಉತ್ತರ ಕರ್ನಾಟಕದ ಮನೆ ಮಾತಾಗಿರುವ ಶ್ರೀ ಮಾರೆಪ್ಪ ದಾಸರ ಪದ ಎಂದರೆ ಜನ ಜಮಾಯಿಸುತ್ತಾರೆ. ತಂತಿವಾದ್ಯಗಳ ಮಧುರ ಧ್ವನಿಯೊಡನೆ ರಾಗ ಕೂಡಿಸುತ್ತಾ ಹಾಡುವ ಶ್ರೀಯುತರ ಗಾಯನ ಎಂಥವರನ್ನೂ ಮರುಳು ಮಾಡುತ್ತದೆ.
ಶ್ರೀ ಮಾರೆಪ್ಪ ದಾಸರ ಜನಪದ ಗಾಯನಕ್ಕೆ ಅನೇಕ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ದೊರೆತಿವೆ. ೧೯೮೫ರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಧಾರವಾಡದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರಶಸ್ತಿ ಇವು ಅವರಿಗೆ ಸಂದ ಕೆಲವು ಗೌರವಗಳು.
ಜನಪದ ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟ ಅಲೆಮಾರಿ ಜನಪಢ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.