ಹಾರಾಡಿ ಮನೆತನದ ಯಕ್ಷಗಾನ ಕಲಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬಂದ ಪ್ರತಿಭಾವಂತ ಕುಡಿ ಕೋಡಿ ಶಂಕರ ಗಾಣಿಗ ಅವರು.
ಅಪ್ಪ, ತಾತಂದಿರ ಕಾಲದಿಂದಲೂ ಮನೆಯಲ್ಲಿ ರಿಂಗಣಿಸುತ್ತಿದ್ದ ಯಕ್ಷಗಾನ ಮದ್ದಳೆಯ ನಾದಕ್ಕೆ ಶ್ರುತಿ ಕೊಟ್ಟು ಬೆಳೆದ ಶ್ರೀಯುತರು ಯಾವ ಮೇಳದಲ್ಲೇ ಇರಲಿ, ಜನ ನಮ್ಮ ಶಂಕರ ಎಂದೇ ಗುರುತಿಸುತ್ತಾರೆ. ನಾಡಿನ ಬಹುಮುಖ್ಯ ಯಕ್ಷಗಾನ ಮೇಳಗಳಲೆಲ್ಲ ದುಡಿದ ೫೦
ವರ್ಷಗಳ ಅವಿರತ ಕಲಾ ಸೇವೆ ಅವರದು.
ಮಂದರ್ತಿ, ಮಾರನಕಟ್ಟೆ, ಕಮಲ ಶಿಲೆ, ಸೌಕೂರು, ಪೆರಡೂರು, ಇಡಗುಂಜಿ, ಮುಂತಾದ ಎಲ್ಲ ಮೇಳಗಳಲ್ಲೂ ತಮ್ಮ ಛಾಪು ಮೂಡಿಸಿ ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲೂ ಪಾತ್ರ ಮಾಡಿದ ಪ್ರತಿಭಾವಂತ ಕಲಾವಿದ ಶಂಕರ ಗಾಣಿಗ.
ರಾಜ್ಯ, ರಾಷ್ಟ್ರದಿಂದಾಚೆಗೂ ತಮ್ಮ ಯಕ್ಷಗಾನ ಕಲೆಯಿಂದ ಪ್ರಸಿದ್ಧರಾದ ಶಂಕರ ಗಾಣಿಗರ ಪ್ರತಿಭೆಯನ್ನು ಅರಸಿಬಂದ ಬಿರುದು ಸನ್ಮಾನಗಳು ಹಲವಾರು. ೭೩ರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಬಲ್ಲ ಯುವಕನ ಉತ್ಸಾಹ ಹೊಂದಿರುವ ಅದ್ಭುತ ಯಕ್ಷಗಾನ ಕಲಾವಿದ ಶ್ರೀ ಕೋಡಿಶಂಕರ ಗಾಣಿಗರು.
Category: ರಾಜ್ಯೋತ್ಸವ ಪ್ರಶಸ್ತಿ
ತಮ್ಮ ನಿಸ್ಪೃಹ ಸೇವೆಯಿಂದ ನೂರಾರು ಬಡಜನರ ಆರಾಧ್ಯದೈವವೆನಿಸಿರುವ ವೈದ್ಯಕೀಯ ಕ್ಷೇತ್ರದ ಹಿರಿಯ ಚೇತನ ಡಾ. ಎಚ್. ಶಂಕರ ಶೆಟ್ಟಿ ಅವರು.
೧೯೩೫ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಗ್ರಾಮ ಹರ್ಕೂರಿನಲ್ಲಿ ಜನಿಸಿದ ಇವರು ಮದರಾಸಿನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ ಮುಂದೆ ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಹಿರಿಯ ಶಸ್ತ್ರಚಿಕಿತ್ಸಕರಾಗಿ, ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಹೀಗೆ ರಾಜ್ಯದ ಬಹುಪಾಲು ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದು.
ಶ್ರೀಯುತ ಶಂಕರ ಶೆಟ್ಟಿ ಅವರ ವೈದ್ಯಕೀಯ ಸೇವೆಗೆ ಅಪಾರ ಜನಮನ್ನಣೆಯ ಜೊತೆಗೆ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನ ಪುರಸ್ಕಾರಗಳು ಸಂದಿವೆ.
ನಿವೃತ್ತಿಯ ನಂತರವೂ ವೈದ್ಯಕೀಯ ಕ್ಷೇತ್ರದಲ್ಲಿ ಬಡಜನರ ಸೇವೆ ಮುಂದುವರಿಸಿರುವ ಹಿರಿಯ ವೈದ್ಯರು ಶ್ರೀಯುತ ಡಾ. ಎಚ್. ಶಂಕರ ಶೆಟ್ಟಿ ಅವರು.
ಹನುಮಂತ ಬೊಮ್ಮಗೌಡ ಅವರು ಪಾರ್ಶ್ವ ರೋಗವನ್ನು ನಿವಾರಿಸುವಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ತಮ್ಮ ತಂದೆಯವರಿಂದ ಕಲಿತ ಈ ಔಷಧಿ ಕೊಡುವ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಲು ಒಳರೋಗಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಿ ಪಾರ್ಶ್ವರೋಗ ಪೀಡಿತರಿಗೆ ಅವರು ನೆರವಾಗುತ್ತಿದ್ದಾರೆ.
ಹಾಲಕ್ಕಿ ಒಕ್ಕಲಿಗರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಇವರ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ ಹನುಮಂತ ಬೊಮ್ಮಗೌಡ ವನ ಔಷಧಗಳಿಂದ ಪಾರ್ಶ್ವರೋಗ ಪೀಡಿತರಿಗೆ ಲೇಪನ ಚಿಕಿತ್ಸೆಯನ್ನು ಮಾಡುವಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಬಳ್ಳಾರಿಯ ಕಪ್ಪಗಲ್ಲು ಗ್ರಾಮದ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಹರಿಜನ ಪದ್ಮಮ್ಮ ಹುಟ್ಟಿನಿಂದಲೇ ಜಾನಪದ ಬಯಲಾಟ ಕಲಾವಿದೆ, ತಾಯಿ ದಿವಂಗತ ಗಂಗಮ್ಮ ಸಹ ಒಳ್ಳೆಯ ಅಭಿನೇತ್ರಿಯಾಗಿದ್ದವರು. ಹಾಗಾಗಿ ಪದ್ಮಮ್ಮನಿಗೆ ಅಭಿನಯ ರಕ್ತಗತವಾಗಿ ಬಂದುದು. ಹೆಣ್ಣುಮಕ್ಕಳು ಬಣ್ಣ ಬಳಿದುಕೊಂಡು ವೇದಿಕೆ ಏರುವುದನ್ನು ಮಹಾಪರಾಧ ಎಂದೇ ಪರಿಗಣಿಸುತ್ತಿದ್ದ ಕಾಲದಲ್ಲೇ ಬಯಲಾಟದ ಗೀಳು ಹಚ್ಚಿಕೊಂಡ ಪದ್ಮಮ್ಮ ಎದುರಿಸಿದ ಎಡರು ತೊಡರುಗಳು ಅನೇಕ. ಆದರೂ ಎದೆಗೆಡದೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವತುಂಬಿ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಸನ್ನಿವೇಶವನ್ನು ಕಣ್ಣಿಗೆ ಕಾಣುವ ಚಿತ್ರದಂತೆ ಅಭಿನಯಿಸುವಲ್ಲಿ ಸಿದ್ಧ ಹಸ್ತರೆನಿಸಿದವರು. ಜನ ಸಮುದಾಯದ ಮನಗೆದ್ದವರು.
ಸಾವಿರಕ್ಕೂ ಹೆಚ್ಚು ಬಯಲಾಟದ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡಿದ್ದಾರೆ. ಅಭಿನಯದ ಜೊತೆಗೆ ಉಚ್ಛಕಂಠದಲ್ಲಿ ದಕ್ಷಿಣಾದಿ ಶೈಲಿಯಲ್ಲಿ ರಂಗಗೀತೆಗಳನ್ನು ಹಾಡುವಾಗ ತನ್ಮಯತೆಯಿಂದ ಮೈಮರೆಯುತ್ತಾರೆ.
ಬಳ್ಳಾರಿ ಹೊಸಪೇಟೆ, ಕೂಡ್ಲಿಗಿ ಸಂಡೂರುಗಳೇ ಅಲ್ಲದೆ ಗಡಿನಾಡು ಪ್ರದೇಶಗಳಲ್ಲೂ ಕನ್ನಡ ಬಯಲಾಟಗಳ ಜಯಭೇರಿ ಬಾರಿಸಿದ ಹೆಗ್ಗಳಿಕೆ ಇವರದು. ಬಳ್ಳಾರಿ ಜನತೆ ಇವರಿಗೆ ಗಾನಕಲಾ ಸರಸ್ವತಿ ಎಂದು ಹಾಡಿಹೊಗಳಿದ್ದಾರೆ. ಇಂಥ ಅಭಿಜಾತ ಕಲಾವಿದೆಗೆ ಸಂದ ಗೌರವ ಸನ್ಮಾನಗಳು ಆನೇಕ ಅಪಾರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿರುವ ಹರಿಜನ ಪದ್ಮಮ್ಮ ಜಾನಪದ ಬಯಲಾಟ ಕ್ಷೇತ್ರದ ದೊಡ್ಡ ಆಸ್ತಿ ಎನ್ನಬಹುದು.
ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರಾಗಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಹಿರಿಮೆಯನ್ನು ಹೊರನಾಡಿನಲ್ಲಿ ಪ್ರಚುರಪಡಿಸುತ್ತಿರುವ ಅಪರೂಪದ ಗಣ್ಯ ವೈದ್ಯರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
ವಿಶ್ವಂಬರನಾಥ್ ಅವರು ಕಿವಿ, ಮೂಗು, ಗಂಟಲು ಚಿಕಿತ್ಸೆಯಲ್ಲಿ ಕರ್ನಾಟಕದ ಹೊಸಪೇಟೆಯಲ್ಲಿ ೧೯೪೨ರಲ್ಲಿ ಜನಿಸಿದ ಶ್ರೀ ವಿಶೇಷ ಪರಿಣತಿಯನ್ನು ಪಡೆದಿರುವವರು. ಆಕ್ಯುಪ್ರೆಷರ್ ನಲ್ಲೂ ಸೇವೆಯಲ್ಲಿ ತೊಡಗಿದ್ದಾರೆ.
ಸಿದ್ಧಹಸ್ತರು. ಕಳೆದ ೨೭ ವರ್ಷಗಳಿಂದ ವೈದ್ಯಕೀಯ ವೃತ್ತಿಯ ಜೊತೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಮಹತ್ವವನ್ನು ವಿದೇಶಿಯರಿಗೆ ಅತ್ಯಂತ ಸಮರ್ಥವಾಗಿ ಅರುಹುವುದು ಇವರ ಪ್ರೀತಿಯ ಹವ್ಯಾಸ.
ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳ ನೃತ್ಯ ಪ್ರವಾಸವನ್ನು ವಿದೇಶದಲ್ಲಿ ಏರ್ಪಡಿಸಿದ ಹಿರಿಮೆ ಇವರದು. ‘ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ‘ಸ್ಕೂಲ್ ಫಾರ್ ದಿ ಡೆಫ್ ಅಂಡ್ ಡೆಮ್’ಗೆ ಶಿಕ್ಷಣ ಪರಿಕರಗಳನ್ನು ಉಚಿತವಾಗಿ ಒದಗಿಸಿದ ಉದಾರಿಗಳು, ೧೯೮೨ರಲ್ಲಿ ಫಾಕ್ಲ್ಯಾಂಡ್ಸ್ನ ಗವರ್ನರ್ ಅವರ ಆಹ್ವಾನದ ಮೇರೆಗೆ ಅಲ್ಲಿನ ಮಕ್ಕಳಿಗೆ ಉಚಿದ ವೈದ್ಯಕೀಯ ನೆರವನ್ನು ನೀಡಿದ ಕರುಣಾಳು.
ಭಗವದ್ಗೀತೆಯ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ವಿಶೇಷವಾಗಿ ಅಭ್ಯಸಿಸಿ ತಮ್ಮ ಉಪನ್ಯಾಸಗಳಲ್ಲಿ ಅವನ್ನು ಉಲ್ಲೇಖಿಸುವ ಮೂಲಕ ಭಾರತೀಯ ಶ್ರೇಷ್ಠ ಅಧ್ಯಾತ್ಮ ಗ್ರಂಥವೊಂದರ ವಿಶಿಷ್ಟತೆಯನ್ನು ಪರಿಚಯಿಸುತ್ತಿರುವ ಶ್ರೀಯುತರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ತಾಯ್ನಾಡಿನಿಂದ ಬಹುದೂರವಿದ್ದೂ ತಾಯ್ನೆಲದ ಸಂಸ್ಕೃತಿ ಮತ್ತು ಅಧ್ಯಾತ್ಮದ ಸೊಗಡನ್ನು ವಿದೇಶಿ ನೆಲದಲ್ಲಿ ಬಿತ್ತುತ್ತಿರುವ ಅಭಿಮಾನಿ ಕನ್ನಡಿಗರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
‘ಭಾರತೀಯ ಸಂವಿಧಾನದ ತಿದ್ದುಪಡಿಯ ಸಾಮರ್ಥ್ಯ ಮತ್ತು ಶಕ್ತಿಗಳ ಮೂಲ ಸ್ವರೂಪದ ಸಿದ್ಧಾಂತ’ ಪುಸ್ತಕದ ಲೇಖಕರಾದ ಶ್ರೀ ಸಿ. ವಿ. ಕೇಶವಮೂರ್ತಿಯವರು ಹಿರಿಯ ವಕೀಲರು. ಮೈಸೂರಿನವರಾದ ಇವರು ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು,ಕಾರ್ಯದರ್ಶಿಗಳು, ಮೇಲ್ವಿಚಾರಕರು, ಕಾನೂನು ಸಲಹೆಗಾರರು ಹಾಗೂ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಸ್ಥಾನವೊಂದರ ಧರ್ಮದರ್ಶಿಯೂ ಆಗಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ ಸುಮಾರು ೩೮ ವರ್ಷಗಳ ಅನುಭವವಿರುವ ಡಾ. ಯು. ಬಿ. ರಾಜಲಕ್ಷ್ಮಿಯವರು ಪ್ರಸ್ತುತ ‘ತರಂಗ’ವಾರಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಪತ್ರಿಕೋದ್ಯಮದಲ್ಲಿ ಡಿ. ಅಟ್ ಪಡೆದಿರುವ ಮೊದಲ ಪತ್ರಕರ್ತೆ.
ಮುಂಗಾರು, ಹೊಸದಿಗಂತ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿರುವ ಇವರು, ಹಲವು ಕೃತಿಗಳನ್ನು ಹೊರತಂದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿದ್ದು, ‘ತುಲಾ ಪ್ರಕಾಶನ’ವನ್ನು ನಿರ್ವಹಣೆ ಮಾಡುತ್ತ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.
ಮೂಲತ: ಮೈಸೂರಿನವರಾದ ಪಟ್ಟಂ ಅನಂತ ಪದ್ಮನಾಭ ಅವರು, ೧೯೭೦ ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಕನ್ನಡ ಪ್ರಮುಖ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ೩೫ ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ.
ಕ್ರೀಡಾ ವರದಿಗಳನ್ನು ಬರೆಯುವಲ್ಲಿ ಅನಂತಪದ್ಮನಾಭ ಅವರು ಸಿದ್ಧಹಸ್ತರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇವರಷ್ಟು ಬರೆದವರು ಮತ್ತೊಬ್ಬರಿಲ್ಲ. ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ ಕ್ರೀಡಾಕೂಟಗಳ ವರದಿ ಮಾಡಿದ್ದಾರೆ. ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಗಳಲ್ಲಿ ಕ್ರೀಡೆ ವಾಣಿಜ್ಯ ಮುಂತಾದ ವಿಷಯಗಳ ಬಗ್ಗೆ ಲೇಖನಗಳನ್ನು, ಸಂಪಾದಕೀಯವನ್ನು ಬರೆದಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಅನೇಕ ಯುವ ಪತ್ರಕರ್ತರನ್ನು ಬೆಳೆಸಿದ್ದಾರೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಮಂಗಳೂರಿನ ಮೀನುಗಾರರ ನಾಯಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಚೇರ್ಮನ್ ಆಗಿರುವ ಪಣಂಬೂರಿನ ಶ್ರೀ ಬೈಕಂಪಾಡಿ ರಾಮಚಂದ್ರ ಮೀನುಗಾರರ ಹಿತಕ್ಕಾಗಿ ಹೋರಾಟ ಮಾಡುತ್ತಿರುವವರು. ೧೯೮೯ ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾದವರು. ೧೯೯೨ ರಲ್ಲಿ ವಿದೇಶಿ ಕಂಪನಿಗಳು ಸಾಗರದಲ್ಲಿ ಮಾಡುವ ಅಕ್ರಮ ಮೀನುಗಾರಿಕೆ ವಿರುದ್ಧ ೪೮ ದಿನಗಳ ಕಾಲ ಮತ್ಯ ಜಲ ಯಾತ್ರೆಯ ನಾಯಕತ್ವ ವಹಿಸಿ ನ್ಯಾಯ ಒದಗಿಸುವಲ್ಲಿ ಸಫಲರಾದವರು. ಸಮುದ್ರ ಮಾಲಿನ್ಯದ ವಿರುದ್ಧ ಹಲವಾರು ಬಾರಿ ಯಶಸ್ವಿ ಹೋರಾಟ ಮಾಡಿದ್ದಾರೆ.
ಇವರಿಗೆ ೨೦೨೧ ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಲಭಿಸಿದೆ.
ಶ್ರೀ ಮಹಾದೇವ ವೇಳಿಪ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಇರುವ ಕಾರ್ಟೊ೪ ಕಾಡಿನ ಕುಣಬಿ ಜನಾಂಗದ ಶ್ರೀ ಮಹಾದೇವ ವೇಳಪ ಕುಣಬಿಗಳ ನಡೆದಾಡುವ ವಿಶ್ವಕೋಶ ಎಂದೇ ಹೆಸರಾದವರು. ಮಹಾದೇವ ವೇಳಪ ಅವರು ಸುಮಾರು ೩೮ ಜಾತಿಯ ಗೆಡ್ಡೆಗಳನ್ನು ಗುರುತಿಸಬಲ್ಲರು. ಕಾಡಿನ ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ.
೯೧ ವರ್ಷದ ಮಹಾದೇವ ವೇಳಿಪರವರ ಪರಿಸರ ಪ್ರೀತಿ ದೊಡ್ಡದು. ಕಲ್ಲಿಗೆ ಕಲ್ಲು ಕುಟ್ಟಿ, ಕಲ್ಲು ಮತ್ತು ಮಾಡಿ ಮರದ ತೊಗಟೆಯ ಸಹಾಯದಿಂದ ಬೆಂಕಿ ಹೊತ್ತಿಸಿ ಉಪಯೋಗಿಸುವುದರ ಮೂಲಕ ಬೆಂಕಿ ಕಡ್ಡಿ ಬಳಸದೇ ಪರಿಸರ ಕಾಪಾಡುತ್ತಿದ್ದಾರೆ. ಇವರು ಉತ್ತಮ ಮನೆ ಮದ್ದು ಕೊಡುವುದರಲ್ಲಿ ಕೂಡ ಪರಿಣಿತರು. ತುಳಸಿ ಪದ, ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ್ದ ಅನೇಕ ಹಾಡುಗಳನ್ನು ಹಾಗೂ ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂಥ ಹಾಡುಗಳನ್ನು ಇವರು ಹಾಡುತ್ತಾರೆ. ಒಂದಕ್ಷರ ಕಲಿಯದಿದ್ದರೂ ದಟ್ಟ ಕಾನನದ ಕಾರ್ಟೊಆ ಊರಿಗೆ ಕನ್ನಡ ಶಾಲೆ ತರುವಲ್ಲಿ ಇವರ ಶ್ರಮವೂ ಇದೆ.
ಸಾವಯವ ಕೃಷಿ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಶ್ರೀ ಎಸ್. ಶಂಕರಪ್ಪ ಅಮ್ಮಿನಘಟ್ಟ ಅವರದು ವಿಶಿಷ್ಟ ಸಾಧನೆ. ಸಾವಯವ ಕೃಷಿಯನ್ನು ಪ್ರೇರೇಪಿಸಲು ಶ್ರಮಿಸುತ್ತಿರುವ ಇವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಾವಯವ ಕೃಷಿ ಪ್ರೇರಕರಾಗಿ ದುಡಿಯುತ್ತಿದ್ದಾರೆ.
ತಮ್ಮ ಎಂಟು ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ, ಹಲಸು, ಮಾವು, ಮೆಣಸು, ಸಪೋಟ ಹಾಗೂ ನಾನಾ ತರದ ಗಿಡಗಳನ್ನು ಬೆಳೆಸಿದ್ದಾರೆ. ಇದಲ್ಲದೇ ಮಳೆ ನೀರು ಸಂಗ್ರಹಣೆಯಲ್ಲಿ ಕೂಡ ಇವರ ಕಾಳಜಿ ಅಪಾರ, ನಿಸರ್ಗ ಸಾವಯವ ಕೃಷಿ ಪರಿವಾರದಲ್ಲಿ ನಿರ್ದೇಶಕರಾಗಿ ಹಾಗೂ ತುಮಕೂರು ಜಿಲ್ಲಾ ಸಂಚಾಲಕರಾಗಿ ಸಕ್ರಿಯವಾಗಿದ್ದಾರೆ. ಸುಭಿಕ್ಷ ಆರ್ಗಾನಿಕ್ ಫಾರ್ಮಸ್್ರ ಮಲ್ಟಿ ಸ್ಟೇಟ್ಸ್ ಕೋ ಆಪರೇಟಿವ್ ಸೊಸೈಟಿ ಅಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾವಯವ ಕೃಷಿಯನ್ನು ಕಳೆದ ೨೧ ವರ್ಷಗಳಿಂದ ಮಾಡುತ್ತಾ ಬಂದಿರುವ ಶ್ರೀ ಗುರುಲಿಂಗಪ್ಪ ಮೇಲೊಡ್ಡಿ, ತೊಗರಿ ಬೆಳೆಯಲ್ಲಿ ವಿನೂತನ ಪದ್ಧತಿಯಾದ ನಾಟಪದ್ಧತಿ ಅಳವಡಿಸಿಕೊಂಡು ದಾಖಲೆ ಇಳುವರಿ ಪಡೆದಿದ್ದಾರೆ. ಸಾವಯವ ಬೆಳೆಯ ಬೆಲ್ಲ, ತರಕಾರಿ, ಹಣ್ಣು ಇತ್ಯಾದಿಗಳನ್ನು ಬೆಳೆದು ಸಂಸ್ಕರಿಸಿ ಬಳಕೆದಾರರಿಗೆ ಪೂರೈಸುತ್ತಿದ್ದಾರೆ.
ತಮ್ಮಂತೆಯೇ ಸಾವಯವ ಕೃಷಿ ಮಾಡಿ ಯಶ ಕಾಣಲಿ ಎನ್ನುವ ಸಹಕಾರ ಮನೋಭಾವದಲ್ಲಿ ಇವರು ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ಇತರ ರೈತರಿಗೆ ತಿಳಿಸಿಕೊಡುತ್ತಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಕೃಷಿ ಇಲಾಖೆಯು ಸಾವಯವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹಲವು ಪ್ರಶಸ್ತಿಗಳು, ಪ್ರಯೋಗಶೀಲ ಕಿಸಾನ್ ಪ್ರಶಸ್ತಿಯನ್ನು ಗುಜರಾತ್ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದಲೂ ಪಡೆದಿದ್ದಾರೆ. ಹಲವು ಕೃಷಿ ಮತ್ತು ವಸ್ತುಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಡಾ. ಸಿ. ನಾಗರಾಜ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನವರಾದ ಡಾ.ಸಿ.ನಾಗರಾಜ್ ಅವರ ನೆಚ್ಚಿನ ಕ್ಷೇತ್ರ ಕೃಷಿಯಾಗಿದೆ. ಸುಮಾರು ೩೫ ವರ್ಷಗಳ ಸುದೀರ್ಘ ಪರಿಶ್ರಮದಿಂದ ರೈತರಿಗೆ ಅನುಕೂಲವಾಗುವಂಥ ಬಹುಪಯೋಗಿ ಯಂತ್ರವನ್ನು ತಯಾರಿಸಿಕೊಟ್ಟಿದ್ದು ಈ ಯಂತ್ರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ಮಾರುತಿ ಕೃಷಿ ಉದ್ಯೋಗ್ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿ ಯಂತ್ರಗಳನ್ನು ತಯಾರಿಸಿದ್ದು, ರೈತರ ಸಮಯ ಮತ್ತು ಖರ್ಚು ಕಡಿಮೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಾವಯವ ಕೃಷಿಯ ಅಗತ್ಯತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಸಂಶೋಧನೆ ಮಾಡಿದ್ದಾರೆ. ಇವರ ಸಾಧನೆಗಾಗಿ ರೋಟರಿ ಸಂಸ್ಥೆಯಿಂದ ಎಕ್ಸಲೆನ್ಸ್ ಅವಾರ್ಡ್, ಉಜ್ವಲ ಉದ್ಯಮಿ ಪ್ರಶಸ್ತಿ, ಮಣ್ಣಿನ ಮಗ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಗೌರವ ಸನ್ಮಾನ, ಎ.ಪಿ.ಜೆ. ಅಬ್ದುಲ್ ಕಲಾಂ ಇನ್ನೋವೇಷನ್ ಅವಾರ್ಡ್ಗಳು ಸಂದಿವೆ.
ಬೆಂಗಳೂರಿನ ಪ್ರೊ. ಜಿ. ಯು. ಕುಲಕರ್ಣಿ ಹಲವಾರು ಸಂಶೋಧನೆ ಹಾಗೂ ಅವಿಷ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಸಂಶೋಧನೆಗೆ ಸಂಬಂಧಿಸಿದ ಉಪಯುಕ್ತ ಪ್ರಬಂಧಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.
ಪ್ರಸ್ತುತ ಜವಾಹರ್ ಲಾಲ್ ನೆಹರು ಮುಂದುವರೆದ ವೈಜ್ಞಾನಿಕ ಸಂಶೋಧನಾ ಕೇಂದ್ರ ಜಕ್ಕೂರಿನಲ್ಲಿ ಅಧ್ಯಕ್ಷರಾಗಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದಾರೆ.
ಮೂಲತ: ಬೆಂಗಳೂರಿನವರಾದ ಡಾ. ಸಾವಿತ್ರಿ ಅವರು ಸಸ್ಯಗಳ ವೈರಸ್ ಗಳನ್ನು ಕುರಿತು ಸಂಶೋಧನೆ ನಡೆಸಿದವರು. ಇವರು ಪ್ರಯೋಗ ಶಾಲೆಯಲ್ಲಿ ಕಂಡು ಹಿಡಿದ ಮೊದಲ ವೈರಸ್ ‘ಜಿನೋಮ್’ ಇವರದ್ದೆಂದರೆ ಉತ್ತೇಕ್ಷೆಯಲ್ಲ. ಜೀವರಸಾಯನ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ೧೯೭೭ ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಐ.ಐ.ಎಸ್ಸಿಯಲ್ಲಿ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಿರುವ ಸಾವಿತ್ರಿಯವರು ಮನುಷ್ಯರ ವಂಶವಾಹಿನಿಯನ್ನೂ ಕುರಿತು ಸಂಶೋಧನೆ ಮಾಡಿದ್ದಾರೆ. ಸುಮಾರು ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಜೀವರಸಾಯನ ಶಾಸ್ತ್ರ’ವಿಭಾಗದ ‘ಚೇರ್ ಪರ್ಸನ್’ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬೀಚಿ ಅವರ ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್ ಅವರು ತಮ್ಮ ಹಾಸ್ಯದ ಮಾತುಗಳಿಂದ ಜನರನ್ನು ರಂಜಿಸುತ್ತಾ ಸ್ಟಾ ಂಡಪ್ ಕಾಮಿಡಿ ಅನ್ನುವ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದವರು. ಹಾಸ್ಯದ ಜೊತೆಯಲ್ಲಿಯೇ ಸಮಾಜಕ್ಕೆ ಸಂದೇಶವನ್ನೂ ನೀಡುವ ಕಾಯಕವನ್ನು ಮಾಡುತ್ತ ನಗೆಯ ಚಾಟಿಯಿಂದಲೇ ಜನತೆಯನ್ನು ಎಚ್ಚರಿಸುತ್ತಿದ್ದಾರೆ.
ಪ್ರಾಣೇಶ್ ಅವರ ವೈಶಿಷ್ಟ್ಯತೆಯೆಂದರೆ ಉತ್ತರ ಕರ್ನಾಟಕ ಭಾಷಾ ಶೈಲಿ. ಆ ಸೊಗಡಿನಲ್ಲಿಯೇ ರಂಜಿಸುವ ಇವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟದೆ. ಅಮೇರಿಕಾದ ಅಕ್ಕ ಸಂಸ್ಥೆಯು ಅಲ್ಲಿನ ೧೯ ಪ್ರಮುಖ ನಗರಗಳಲ್ಲಿ ಇವರ ಕಾರ್ಯಕ್ರಮವನ್ನು ಏರ್ಪಡಿಸಿ ಸಂಭ್ರಮಿಸಿದೆ. ಹಾಸ್ಯದ ಕುರಿತ ಸಾಕಷ್ಟು ಪುಸ್ತಕಗಳು, ಸಿ.ಡಿಗಳನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣೇಶ್ ಅವರ ಹಾಸ್ಯಕ್ಕೆ ಅಸಂಖ್ಯಾತ ವೀಕ್ಷಕರಿದ್ದಾರೆ.
ಖ್ಯಾತ ನೀರಾವರಿ ತಜ್ಞರಾದ ಕ್ಯಾಪ್ಟನ್ ರಾಜರಾವ್ ಅವರು, ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಸ್ತಿತ್ವವನ್ನು ಒತ್ತಾಯಿಸಿದವರು. ಕರ್ನಾಟಕ ಸೀನಿಯರ್ ಇಂಜಿನಿಯರ್ಸ್ ಫೋರಂನ ಚೇರ್ಮನ್ ಆಗಿರುವ ರಾಜಾರಾವ್ ಅವರು, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಹಾಳಾಗಿ ಪರಿಸರಕ್ಕೆ ಧಕ್ಕೆಯಾಗುವ ಮುನ್ನ ಡಿಟರ್ಜೆಂಟ್ ಗಳಲ್ಲಿ ಪಾಸ್ಟೇಟ್ ಬಳಕೆಯನ್ನು ನಿಲ್ಲಿಸಿ, ಕೆರೆಗಳನ್ನು ಉಳಿಸಿ ಎಂದು ಎಚ್ಚರಿಕೆ ನೀಡುತ್ತ ಈಗಲೂ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.
ಡಾ. ಬಿ. ಅಂಬಣ್ಣ
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿರುವ ಡಾ. ಅಂಬಣ್ಣ, ತಮ್ಮ ಹುಟ್ಟೂರನ್ನು ಮರೆಯದೇ ಮರ೪ ೧೯೬೧ ರಲ್ಲಿ ಮರಿಯಮ್ಮನಹಳ್ಳಿಗೆ ಬರುವ ಮೂಲಕ ವೈದ್ಯರು ಹಳ್ಳಿಗಳಿಗೆ ಬರುವುದಿಲ್ಲ ಎಂಬ ಅಪವಾದವನ್ನು ಹುಸಿ ಮಾಡಿದವರು.
ಕಳೆದ ಐದು ದಶಕಗಳಿಂದ ನಿರಂತರವಾಗಿ ಮರಿಯಮ್ಮನ ಹಳ್ಳಿಯ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಔಷಧೋಪಚಾರ ಮಾಡುವ ಡಾ.ಅಂಬಣ್ಣ ಅವರು ಜನರ ಡಾಕ್ಟರ್ ಎಂದೇ ಜನಪ್ರಿಯ. ಪ್ರತಿದಿನ ೧೫೦ ಮಂದಿಗೆ ಚಿಕಿತ್ಸೆ ನೀಡುವ ಇವರು, ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಗುಣಪಡಿಸಿದ್ದಾರೆ.
ವೈದ್ಯಕೀಯ ಸೇವೆಯ ಜೊತೆಗೆ ತರಳಬಾಳು ಹೈಸ್ಕೂಲ್, ಚಿಲಕನ ಹಟ್ಟಿಯ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವಾಮನೋಭಾವವನ್ನು ಗುರುತಿಸಿ,ಲೋಕಕಲ್ಯಾಣ ಪ್ರಶಸ್ತಿ ಪಡೆದುಕೊಂಡಿದ್ದು ಈಗಲೂ ತಮ್ಮ ಕಾಯಕ ಮುಂದುವರೆಸಿದ್ದಾರೆ.
ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರದ ದೀವಿಗೆ ಹಿಡಿಯಲು ಸತತ ೩೭ ವರ್ಷಗಳ ಕಾಲ ಗಣಿತ ಶಿಕ್ಷಕನಾಗಿ, ಹುಬ್ಬಳ್ಳಿಯ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಶ್ರಮಿಸಿದ್ದಾರೆ. ಅವರ ಈ ಅವಿರತ ಪ್ರಯತ್ನದ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ನಕ್ಷತ್ರದಂತೆ ವಿವಿಧ ಕ್ಷೇತ್ರಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತಮ್ಮ ಸೇವೆಯಲ್ಲಿ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಅಭ್ಯಾಸದ ಖರ್ಚನ್ನು ತಮ್ಮ ಗಳಿಕೆಯಲ್ಲೇ ನೀಡಿದ್ದಾರೆ. ನಿವೃತ್ತಿಯ ನಂತರವೂ ಸಹ ಅವರು ಮಹಾಗುರು ಎಜುಕೇಶನ್ ಟ್ರಸ್ಟ್ ನ ಮಾರ್ಗದರ್ಶಕರಾಗಿ ತಮ್ಮ ನಿವೃತ್ತಿ ಹಣದ ಶೇ ೯೦ ರಷ್ಟನ್ನು ಟ್ರಸ್ಟ್ ಮೂಲಕ ಬಡ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇವರಿಗೆ ‘ಶಿಕ್ಷಣ ಸಿರಿ’ ಹಾಗೂ ೨೦೦೫ ರ ಆದರ್ಶ ಶಿಕ್ಷಕ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಮೂಲತ: ಹರಿಹರ ತಾಲ್ಲೂಕಿನವರಾದ ಶ್ರೀ ಸ್ವಾಮಿ ಅಂಗಪ್ಪ, ಶಿಕ್ಷಣ ಹಾಗೂ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸದೇ ಮನೆಯಲ್ಲೇ ಇರಿಸಿಕೊಂಡಿದ್ದವರ ಮನ ಒಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತ ಅಕ್ಷರಕ್ರಾಂತಿಗೆ ಕಾರಣರಾದವರು. ತಮ್ಮ ನಿವೃತ್ತಿಯ ನಂತರ ಆಧ್ಯಾತ್ಯ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದು, ಹಲವು ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪಠ್ಯಪುಸ್ತಕಗಳನ್ನು ಕೊಡಿಸಿ, ಶಾಲಾ ಶುಲ್ಕವನ್ನು ಕೂಡ ತಾವೇ ಕಟ್ಟುವುದರ ಮೂಲಕ ತಮ್ಮ ಧೀಮಂತಿಕೆ ಮೆರೆಯುತ್ತಿದ್ದಾರೆ.
ಶ್ರೀ ದೇವರಾಜ್
ಕನ್ನಡ ಚಲನಚಿತ್ರರಂಗದಲ್ಲಿ ಡೈನಾಮಿಕ್ ಹೀರೋ ಎಂದೇ ಖ್ಯಾತರಾದ ಹಿರಿಯ ನಟ ದೇವರಾಜ್, ೧೯೮೬ ರಲ್ಲಿ ಚಿತ್ರರಂಗ ಪ್ರವೇಶಿಸಿದ್ದು ೨೭ ಮಾವಳ್ಳಿ ಸರ್ಕಲ್ ಎನ್ನುವ ಚಿತ್ರದ ಮೂಲಕ.
ಮೂಲತ: ನಾಟಕರಂಗದಿಂದ ಬಂದವರಾದ ಇವರು, ಸ್ಪಂದನ ತಂಡ ಹಾಗೂ ಸಂಕೇತ್ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಸರಿಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಆಗಂತುಕ ಸಿನಿಮಾದಲ್ಲಿನ ಪಾತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದುಕೊಂಡರು. ಹಾಗೂ ಮತ್ತೊಂದು ಚಿತ್ರ ವೀರಪ್ಪನ್ ನಲ್ಲಿ ನಿರ್ವಹಿಸಿದ ಪಾತ್ರಕ್ಕೆ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು.
ಲಾಕಪ್ ಡೆತ್,ಹುಲಿಯ, ಗೋಲಿಬಾರ್, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಪ್ರಚಂಡರಾವಣ ಇವರ ಪ್ರಮುಖ ಚಿತ್ರಗಳು
ಶ್ರೀ ಎ. ನಾಗರಾಜ್
ಬೆಂಗಳೂರಿನ ಎ. ನಾಗರಾಜ್ ಅವರು ಕಡ್ಡಿ ತರಬೇತುದಾರರು. ಸುಮಾರು ಮೂರು ದಶಕಗಳ ಕಾಲದ ಕ್ರೀಡಾ ಜೀವನವನ್ನು ನಡೆಸಿರುವ ಇವರು ೨೨ ವರ್ಷಗಳ ಕಾಲ ಐ.ಟಿ.ಐ ಸಂಸ್ಥೆಯ ತಂಡವನ್ನು ತರಬೇತುಗೊಳಸಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸಿದ್ಧಗೊಳಿಸಿದ್ದಾರೆ. ಇವರಿಂದ ತಯಾರಾದ ಕಬ್ಬಡ್ಡಿ ಆಟಗಾರರು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ ಪ್ರಶಸ್ತಿ’ ಹಾಗೂ ‘ಏಕಲವ್ಯ ಪ್ರಶಸ್ತಿ’ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಕ್ರೀಡಾಗುರುವಾಗಿ ಸಾರ್ಥಕತೆಯನ್ನು ಕಂಡಿರುವ ಶ್ರೀ ನಾಗರಾಜು ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಇವರದ್ದಾಗಿದೆ.
ಬೆಂಗಳೂರಿನಲ್ಲಿ ೧೯೭೩ ರಲ್ಲಿ ಆರಂಭಗೊಂಡ ಬನಶಂಕರಿ ಮಹಿಳಾ ಸಮಾಜ ಸಕ್ರಿಯವಾಗಿ ಧಾರ್ಮಿಕ,ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಮಹಿಳಾ ಸಮಾಜವು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮ, ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಕಾರ್ಯಕ್ರಮ, ಅರೋಗ್ಯ ಜಾಗೃತಿ,ಮನೆ ಮದ್ದು,ಅಡುಗೆ ಕಾರ್ಯಕ್ರಮ,ಕಾನೂನು ಅರಿವು, ಪರಿಸರ ಸಂರಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮಹಿಳೆಯರಿಗೆ ನೆರವಾಗುತ್ತಿದೆ.
ಕಾರ್ಕಳ ತಾಲ್ಲೂಕಿನ ಕ್ರೀಡಾಪ್ರತಿಭೆ ಶ್ರಿ ರೋಹಿತ್ ಕುಮಾರ್ ಕಟೀಲ್ ಅಸಾಧಾರಣ ಪ್ರತಿಭೆ, ಹೈ ಜಂಪ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಇವರು ವಿಶ್ವ ಕಿರಿಯರ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗ.
ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಇವರು, ಬ್ರೆಜಿಲ್ ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿನ ಭಾರತೀಯ ತಂಡದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದವರು. ಇದೀಗ ಕಾರ್ಕಳದ ವಿಮಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಸ್ಟೆಪ್ ಒನ್
‘ಸ್ಟೆಪ್ ಒನ್ ಟು ಸ್ಟಾಪ್ ಕೋವಿಡ್’ಅನ್ನುವ ಶಿರೋನಾಮೆಯಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ, ಕೋವಿಡ್ ನ ವಿರುದ್ಧ ದೊಡ್ಡ ಸಮರ ಸಾರಿದೆ. ಇಡಿ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-೧೯ ರ ವಿರುದ್ಧವೇ ಸಜ್ಜಾದ ಈ ಸಂಸ್ಥೆ ಸುಮಾರು ೭೦೦೦ ಡಾಕ್ಟರ್ ಗಳ ಸಹಕಾರ ಹೊಂದಿದ್ದು ೧೦೦೦ ಕ್ಕೂ ಹೆಚ್ಚು ಸ್ವಯಂಸ್ಥೆವಕರನ್ನು ಒಳಗೊಂಡಿದೆ. ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳು ಒಗ್ಗೂಡಿ ಸಾರ್ವಜನಿಕ ಆರೋಗ್ಯ ಜಾಗೃತಿ ಹಾಗೂ ರಕ್ಷಣೆಯ ಭಾರ ಹೊರುವುದೇ ಸ್ಟೆಪ್ ಒನ್ ಸಂಸ್ಥೆಯ ಪರಿಕಲ್ಪನೆ. ಸಾರ್ವಜನಿಕರ ಅಗತ್ಯಕ್ಕಾಗಿ ಟೋಲ್ ಫ್ರೀ ಸಹಾಯವಾಣಿ ಇದ್ದು, ಸಂಸ್ಥೆ ಸಹಾಯಕ್ಕೆ ಧಾವಿಸುತ್ತದೆ.
ಅದಮ್ಯ ಚೇತನ
ಅನ್ನ-ಅಕ್ಷರ,ಆರೋಗ್ಯ-ಪ್ರಕೃತಿ-ಸಂಸ್ಕೃತಿ ಎಂಬ ಪ್ರಮುಖ ಧೈಯಗಳಡಿಯಲ್ಲಿ ಸೇವಾನಿರತವಾಗಿರುವ ಸಂಸ್ಥೆ ಅದಮ್ಯ ಚೇತನ. ೧೯೯೭ ರಲ್ಲಿ ಆರಂಭವಾದ ಈ ಸಂಸ್ಥೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಡಿಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಶಾಲಾಮಕ್ಕಳ ಹಸಿವನ್ನು ನೀಗಿಸಲು ‘ಅನ್ನಪೂರ್ಣ’ಬಿಸಿಯೂಟದ ಯೋಜನೆಯಡಿಯಲ್ಲಿ ಬೆಂಗಳೂರು, ಹುಬ್ಬಳ್ಳಿ,ಕಲಬುರಗಿ, ಅಡುಗೆ ಕೇಂದ್ರಗಳಿಂದ ಶುಚಿಯಾದ ಪೌಷ್ಟಿಕವಾದ ಮಧ್ಯಾಹ್ನದ ಬಿಸಿಯೂಟವನ್ನು ಉಣಬಡಿಸುತ್ತಿದೆ. ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ಜೊತೆಗೆ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಅಲೆಯ ಸಂದರ್ಭದಲ್ಲಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ, ಸಾವಿರಾರು ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಅದಮ್ಯ ಚೇತನವು ಗ್ರಾಮಗಳನ್ನು ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಸಬಲೀಕರಿಸಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿದೆ. ಜೊತೆಗೆ ಸಸ್ಯಾಗ್ರಹ ಯೋಜನೆಯಡಿಯಲ್ಲಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ.
ಶ್ರೀ ಗೋಪಿನಾಥ್ ಕೆ
ಪ್ಯಾರಾ ಓಲಂಪಿಕ್ ಕ್ರೀಡೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಬೆಂಗಳೂರಿನ ಕೆ.ಗೋಪಿನಾಥ್ ವಿಕಲಚೇತನ ಕ್ರೀಡಾಪಟು.
೨೦೦೩ ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ರೀ ಕೆ.ಗೋಪಿನಾಥ್ ಪ್ಯಾರಾ ಬ್ಯಾಂಡ್ಮಿಂಟನ್, ಡಿಸ್ಕ್ ಪ್ರೋ ಹಾಗೂ ಶಾಟ್ ಪುಟ್ ಆಡಿ ಚಿನ್ನದ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಹಾಂಕಾಂಗ್, ಚೀನಾ, ಮಲೇಶಿಯಾ, ಇಸ್ರೇಲ್, ಜರ್ಮನಿ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಪ್ಯಾರಾ ಓಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಕ್ರೀಡಾಸಾಧನೆಯನ್ನು ಪರಿಗಣಿಸಿ ೨೦೧೧ ರಲ್ಲಿ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ರೀಡಾ ಸಂಸ್ಥೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕರ್ನಾಟಕ ರಾಜ್ಯ ವಿಕಲ ಚೇತನ ಒಕ್ಕೂಟದ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಹುಬ್ಬಳ್ಳಿ ಮತ್ತು ಹಾವೇರಿ ನಡುವೆ ನಗರ ಜೀವನದಿಂದ ದೂರವಿರುವ ಸುಮಾರು ೫೦ ಎಕರೆ ಪ್ರದೇಶದಲ್ಲಿ ಸೃಷ್ಟಿಗೊಂಡಿರುವ ರಾಕ್ ಗಾರ್ಡನ್ ಪಾರಂಪರಿಕ ಶಿಲ್ಪಕಲೆಗಳ ವಸ್ತುಸಂಗ್ರಹಾಲಯ. ೨೦೦೯ ರಲ್ಲಿ ಡಾ. ಟಿ.ಟಿ. ಸೊಲಬಕ್ಕನವರ್ ಅವರ ಕಲ್ಪನೆಯ ಮೂಸೆಯಿಂದ ಅರಳದ ರಾಕ್ ಗಾರ್ಡನ್ನಲ್ಲಿ ಸಂಗ್ರಹವಾಗಿರುವ ಶಿಲ್ಪಕಲೆಗಳ ಉತ್ಸವದಿಂದ ಖ್ಯಾತಿಗೊಂಡಿದೆ. ಇಂಥ ಅದ್ಭುತ ಕನಸಿಗೆ ಜೀವವನ್ನೆರೆದು ನಿರ್ಮಾಣ ಮಾಡಿದವರು ಸೊಲಬಕ್ಕನವರ್ ಅವರ ಅಳಿಯನಾದ ದಾಸನೂರು ಗ್ರೂಪ್ನ ಶ್ರೀ ಪ್ರಕಾಶ್ ದಾಸನೂರು ಅವರು. ಇದೀಗ ಅತ್ಯದ್ಭುತ ಕಲಾಕೇಂದ್ರ ಎನಿಸಿಕೊಂಡಿದೆ. ನೂರಾರು ಕಲಾವಿದರು ರಾಕ್ ಗಾರ್ಡನ್ ಸೃಷ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ರಾಕ್ ಗಾರ್ಡನ್ ನ ಮತ್ತೊಬ್ಬ ಪ್ರೇರಕ ಶಕ್ತಿ ಎಂದರೆ ಶ್ರೀಮತಿ ವೇದಾರಾಣಿ ದಾಸನೂರು. ಅವರು ಈ ರಾಕ್ ಗಾರ್ಡನ್ ನಿರ್ಮಾಣದ ಹಿಂದೆ ಹೆಚ್ಚಿನ ಶ್ರಮಪಟ್ಟಿದ್ದಾರೆ. ಅದಕ್ಕಾಗಿ ಈ ಹನ್ನೊಂದು ವರ್ಷಗಳಲ್ಲಿ ಮೂರೂವರೆ ಲಕ್ಷ ಕಿ.ಮಿ ಪ್ರಯಾಣ ಮಾಡಿ ಅದ್ಭುತ ಕಲಾಲೋಕದ ಸೃಷ್ಟಿಗೆ ಕಾರಣಕರ್ತರಲ್ಲಿ ತಾವೂ ಒಬ್ಬರಾಗಿ ತನ್ಮೂಲಕ ಗ್ರಾಮೀಣ ಕಲೆಗಳ ಮೌಲ್ಯಗಳನ್ನು ಪರಿಚಯಿಸುವಲ್ಲಿ ಸಫಲರಾಗಿದ್ದಾರೆ. ಈ ಜಾಗತೀಕರಣ, ಹೆಸರುವಾಸಿಯಾಗಿದೆ.
೧೯೯೪ ರಲ್ಲಿ ಆರಂಭಗೊಂಡ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್, ಸೇವಾ ಮನೋಭಾವದ ದೃಷ್ಟಿಯಿಂದ ಪ್ರಮುಖವಾಗಿ ವಿಶೇಷಚೇತನರ ಅನುಕೂಲಕ್ಕಾಗಿಯೇ ಸಮರ್ಪಿಸಿಕೊಂಡ ಸಂಸ್ಥೆ. ಹುಬ್ಬಳ್ಳಿಯಲ್ಲಿ ನೆಲೆ ನಿಂತಿರುವ ಈ ಸಂಸ್ಥೆ, ೧೯೯೭ ರಿಂದ ೪೦ ಸಾವಿರಕ್ಕೂ ಹೆಚ್ಚು ಕೃತಕ ಅಂಗಗಳನ್ನು ನೀಡಿ ಮಾನವೀಯತೆ ಮೆರೆದಿದೆ. ಸಂಸ್ಥೆಯಿಂದ ಕೃತಕ ಅಂಗ ಪಡೆದುಕೊಂಡ ಕರ್ನಾಟಕ, ಆಂಧ್ರ ಹಾಗೂ ಗೋವಾದ ಫಲಾನುಭವಿಗಳು ಸ್ವಾವಲಂಬನೆಯ ಬದುಕು ನಡೆಸುತ್ತಿದ್ದಾರೆ.
೧೯೪೭ರಲ್ಲಿ ಆರಂಭವಾದ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ, ಸುಮಾರು ಆರು ದಶಕಗಳಿಂದ ಸಮಾಜದಲ್ಲಿ ಧರ್ಮ ಮತ್ತು ಆಧ್ಯಾತ್ಮದ ಬೀಜವನ್ನು ಬಿತ್ತುವಲ್ಲಿ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅಕ್ಷರ, ಆಶ್ರಯ ಮತ್ತು ಅನ್ನ ನೀಡುವ ಉದ್ದೇಶದಿಂದ ಆರಂಭಗೊಂಡ ಈ ಆಶ್ರಮ, ಧ್ಯಾನ, ಭಜನೆ, ಪ್ರಾರ್ಥನೆಗಳ ಮೂಲಕ ಶಾಂತಿ ನೆಮ್ಮದಿ ನೀಡುವಲ್ಲಿ ಯಶಸ್ವಿಯಾಗಿದೆ. ಯೋಗ, ಶಿಕ್ಷಣಗಳ ಮೂಲಕ ಸಮಾಜದ ಹಾಗೂ ಜನರ ಮಾನಸಿಕ ಸ್ವಾಸ್ಥ ಕಾಪಾಡುತ್ತಿದೆ.
ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬ ಆಶಯದಲ್ಲಿ ಆರಂಭಗೊಂಡ ಸಂಸ್ಥೆ. ಶೈಕ್ಷಣಿಕ ದೃಷ್ಟಿಕೋನದಿಂದ ಸಂಸ್ಥೆ ಇಲ್ಲಿಯವರೆಗೆ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ೧೯೯೯ ರಲ್ಲಿ ರಜತ ಮಹೋತ್ಸವ ಕಂಡಿರುವ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ
ಮಾಡಿದೆ.
೧೯೭೪ ರಲ್ಲಿ ಆರಂಭಗೊಂಡ ಈ ಸಂಸ್ಥೆ ಇದೀಗ ಸುಮಾರು ೩೫ ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯು ಅತ್ಯಂತ ಕ್ರಿಯಾಶೀಲವಾಗಿದ್ದು ೨೦೨೪ ರಲ್ಲಿ ಸುವರ್ಣ ಮಹೋತ್ಸವ ಕಾಣಲಿದೆ.
ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವವರ ಕ್ಷೇಮಾಭಿವೃದ್ಧಿಗಾಗಿ ೧೯೯೦ ರಲ್ಲಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಆರಂಭಗೊಂಡು ಎರಡೂವರೆ ದಶಕಗಳು ಕಳೆದಿವೆ. ಹಿಮೋಫೀಲಿಯ ಕಾಯಿಲೆಯನ್ನು ಗುಣಪಡಿಸದೇ ಹೋದರೆ ಶಾಶ್ವತ ಊನಕ್ಕೆ ತುತ್ತಾಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿತವಾಯಿತು.
ಮಾನವೀಯ ನೆಲೆಯಲ್ಲಿ ಶುರುವಾದ ಹಿಮೊಫೀಲಿಯ ಸೊಸೈಟಿ, ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುತ್ತಿದೆ. ಸಾವಿರಾರು ಜನ ಹಿಮೋಫೀಲಿಯಾಕ್ಕೆ ತುತ್ತಾದವರು ಇಲ್ಲಿ ಗುಣವಾಗಿ ಸಂತಸದ ಬದುಕನ್ನ ನಡೆಸುತ್ತಿದ್ದಾರೆ. ನಿಸ್ವಾರ್ಥ ಮತ್ತು ನಿರಪೇಕ್ಷೆಯಿಂದ ನಡೆಯುತ್ತಿರುವ ಈ ಸಂಸ್ಥೆಗೆ ಸಾರ್ವಜನಿಕರು, ದಾನಿಗಳು ಹಾಗೂ ಸಂಘ ಸಂಸ್ಥೆಗಳಿಂದ ಬೆಂಬಲ ಸಿಗುತ್ತಿದೆ. ಸೊಸೈಟಿಗಾಗಿ ಸಹಾಯಾರ್ಥ ಪ್ರದರ್ಶನಗಳನ್ನು ಶ್ರೀ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶ್ರೀಮತಿ ಸಂಗೀತಾಕಟ್ಟ, ಶ್ರೀಮತಿ ಉಷಾ ಉತ್ತುಪ್, ಮುಂತಾದವರು ನೀಡಿ ಮಾನವೀಯತೆ ಮೆರೆದಿದ್ದಾರೆ.
ಭಾರತದ ಅಗ್ರಗಣ್ಯ ಟೆನ್ನಿಸ್ ಆಟಗಾರರಲ್ಲಿ ಶ್ರೀ ರೋಹನ್ ಬೋಪಣ್ಣ ಒಬ್ಬರು. ಮೊಟ್ಟ ಮೊದಲ ಬಾರಿಗೆ ೨೦೦೨ ರಲ್ಲಿ ಇವರು ಭಾರತವನ್ನು ಪ್ರತಿನಿಧಿಸಿ ವಿಜಯ ಪತಾಕೆಯನ್ನು ಹಾರಿಸುತ್ತ ಬಂದಿದ್ದಾರೆ. ೨೦೧೮ ರಲ್ಲಿ ಇವರಿಗೆ ಕ್ರೀಡಾಪಟುಗಳಿಗೆ ಕೊಡಮಾಡುವ ‘ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.
ಪುರುಷರ ಡಬಲ್ಸ್ ಪಂದ್ಯದಲ್ಲಿ ಕತಾರ್ ಮತ್ತು ಕೆನಡಾ ಓಪನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಷ್ಯನ್ ಗೇಮ್ಸ್ ೨೦೧೮ ರಲ್ಲಿ ಚಿನ್ನದಪದಕ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ೨೦೦೫ ರಲ್ಲಿ ‘ಏಕಲವ್ಯ ಪ್ರಶಸ್ತಿ’ ದೊರೆತಿದೆ.
ತಾವೇ ಒಬ್ಬ ಪ್ರಭಾವಿ ಟೆನ್ನಿಸ್ ಕ್ರೀಡಾಪಟುವಾಗಿದ್ದು ಮುಂದಿನ ಪೀಳಿಗೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತಿದ್ದಾರೆ. ಟೆನ್ನಿಸ್ ತರಬೇತಿ ಕೇಂದ್ರಗಳನ್ನು ತೆರೆದು ಆಟಗಾರರು ಭಾರತವನ್ನು ಪ್ರತಿನಿಧಿಸುವಷ್ಟು ಸಾಮರ್ಥ್ಯ ಪಡೆಯುವತ್ತ ಶ್ರಮಿಸುತ್ತಿದ್ದಾರೆ.
ಶ್ರೀ ಶ್ಯಾಮರಾಜ್
ಬೆಂಗಳೂರಿನ ಮೌರ್ಯ ಹೋಟೆಲ್ನ ವ್ಯವಸ್ಥಾಪಕ ನಿರ್ದೇಶಕ ಶ್ಯಾಮರಾಜ್ ಅವರು ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೋಟೆಲ್ ಉದ್ಯಮದಲ್ಲಿನ ಅವರ ಶಿಸ್ತು ಮತ್ತು ಕಾಯಕನಿಷ್ಠೆ ಅವರನ್ನ ಒಬ್ಬ ಪ್ರಮುಖ ಉದ್ಯಮಿಯನ್ನಾಗಿಸಿದೆ.
ಶ್ರೀ ವೀರೇಶ್ವರ ಪುಣ್ಯಾಶ್ರಮ
ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸುಮಾರು ಎಳು ದಶಕಗಳಿಂದ ಅಂಧ ಮತ್ತು ಅನಾಥರ ಬಾಳಿಗೆ ಬೆಳಕಾಗಿದೆ. ಈ ಪುಣ್ಯಾಶ್ರಮಕ್ಕೆ ಚೇತನರಾಗಿದ್ದವರು ಪಂ.ಪಂಚಾಕ್ಷರಿ ಗವಾಯಿಗಳು. ಹುಟ್ಟು ಕುರುಡರಾಗಿದ್ದ ಪಂಚಾಕ್ಷರಿ ಗವಾಯಿಗಳ ನಂತರ ಈ ವೀರೇಶ್ವರ ಪುಣ್ಯಾಶ್ರಮಕ್ಕೆ ಕಣ್ಣಾದವರು ಶ್ರೀ ಪುಟ್ಟರಾಜ ಗವಾಯಿಗಳು.
ಸುಮಾರು ೭೦೦ ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತ್ರಿವಿಧ ದಾಸೋಹ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತದೆ. ಅಂಧ ಮಕ್ಕಳಿಗೆ ಜೀವನ ಸಾಗಿಸಲು ಹಾಗೂ ಆತ್ಮವಿಶ್ವಾಸ ತುಂಬುವುದಕ್ಕೆ ಸಂಗೀತವನ್ನು ಕಲಿಸಲಾಗುತ್ತದೆ. ಇಲ್ಲಿ ಆಳವಾಗಿ ಅಧ್ಯಯನ ಮಾಡಿದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಅಭ್ಯಾಸ ನಡೆಯುತ್ತಿದೆ.
ಹಳ್ಳಿಯ ಜನರು ಅರೋಗ್ಯ ಸೇವೆಯಿಂದ ವಂಚಿತರಾಗಿ ಕಷ್ಟಪಡುವುದನ್ನು ಕಂಡ ಗೌಡರು, ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಧಾರವಾಡದಲ್ಲಿ ಆಸ್ಪತ್ರೆಯನ್ನು ೧೯೬೦ ರಲ್ಲಿ ಪ್ರಾರಂಭ ಮಾಡಿದರು. ನಂತರ ಸ್ವಂತ ಕಟ್ಟಡ ನಿರ್ಮಿಸಿ ಸತತ ೪೦ ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿ ಹಳ್ಳಿಗರ ಪ್ರಾಣ ಉಳಿಸಿ ಬಡಜನರ ವೈದ್ಯರೆಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗಲೂ ಪ್ರತಿ ಭಾನುವಾರ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ. ಎಂ. ಕೆ. ಸುದರ್ಶನ್ ಅವರು ಪ್ರಾಧ್ಯಾಪಕರಾಗಿ, ಡೀನ್ ಆಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತಂದವರು. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತ ಕೋವಿಡ್ ನಿಯಂತ್ರಣ ಮಾಡುವಲ್ಲಿ ಹೆಚ್ಚು ಶ್ರಮಿಸಿದ್ದಾರೆ. ಪ್ರಸ್ತುತ ಕಿಮ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ರಾಘವೇಂದ್ರ ಶೆಣೈ
ಬೆಂಗಳೂರಿನ ಯೋಗಗುರು ಡಾ. ರಾಘವೇಂದ್ರ ಶೆಣೈ ಪ್ರತಿಯೊಬ್ಬರಿಗೂ ಯೋಗಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ೨೦೦೭ ರಲ್ಲಿ ‘ನಿರ್ಮಯ ಯೋಗ ಕುಟೀರಂ’ ಸ್ಥಾಪಿಸಿ ಸಾವಿರಾರು ಯೋಗಾಸಕ್ತರಿಗೆ ಯೋಗ ಕಲಿಸುತ್ತ ಬಂದಿದ್ದಾರೆ. ಜೀವನವೇ ಒಂದು ಯೋಗವಾಗಬೇಕು, ಸ್ವಸ್ಥ ಜೀವನಕ್ಕೆ ಯೋಗವೇ ಸಹಕಾರಿ ಎಂಬ ತತ್ವದಡಿಯಲ್ಲಿ ಯೋಗಶಿಕ್ಷಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಪ್ರಖ್ಯಾತ ಯೋಗಗುರುಗಳಾದ ಬಿ.ಕೆ.ಎಸ್ ಅಯ್ಯಂಗಾರ್ ಅವರ ಶಿಷ್ಯರಾದ ಇವರ ಬಳಿ ಯೋಗ ಕಲಿತವರು ಸ್ವಸ್ಥ ಹಾಗೂ ಸಮಭಾವದ ಜೀವನ ನಡೆಸುತ್ತಿದ್ದಾರೆ.
ಶ್ರೀ ಭ. ಮ. ಶ್ರೀಕಂಠ
ಶಿವಮೊಗ್ಗದ ಶ್ರೀ. ಭ. ಮ. ಶ್ರೀಕಂಠರವರು ಯೋಗಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ವಿದ್ಯಾರ್ಥಿಗಳನ್ನು ಯೋಗಶಿಕ್ಷಕರನ್ನಾಗಿ ರೂಪಿಸಿದ ಕೀರ್ತಿ ಇವರದು. ಶಿವಮೊಗ್ಗದಲ್ಲಿ ಯೋಗಶಿಕ್ಷಣ ಸಮಿತಿಯ ಪ್ರಾರಂಭಕ್ಕೆ ಪ್ರೇರಣೆ ನೀಡಿ ನಗರದ ವಿವಿಧ ಬಡಾವಣೆಗಳಲ್ಲಿ ೫೫ ಕ್ಕೂ ಹೆಚ್ಚು ಉಚಿತ ಯೋಗ ತರಗತಿಗಳ ಪ್ರಾರಂಭಕ್ಕೆ ಉತ್ತೇಜನ ನೀಡಿದ್ದಾರೆ.
ಯೋಗಶಿಕ್ಷಣದಲ್ಲಿ ಶ್ರೀಯುತರು ಸಲ್ಲಿಸಿರುವ ಸೇವೆಗೆ, ಬೆಂಗಳೂರು ಯೋಗ ಸೆಂಟರ್ ನವರು ‘ಯೋಗಶ್ರೀ ಪ್ರಶಸ್ತಿ-೧೯೯೦ ನೀಡಿ ಗೌರವಿಸಿದ್ದಾರೆ. ೨೦೧೬ ರಲ್ಲಿ ‘ಆರ್ಟ್ ಆಫ್ ಅವಿಂಗ್’ ರವರಿಂದ ‘ಯೋಗೋಪಾಸಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸನ್ಮಾನ ಮತ್ತು ಶ್ರೀ ರಾಘವೇಂದ್ರ ಯೋಗಕೇಂದ್ರದಿಂದ ಪುರಸ್ಕಾರ ಲಭ್ಯವಾಗಿವೆ. ಅಜಿತಶ್ರೀ ಪ್ರಶಸ್ತಿ ಯೋಗಾಚಾರ್ಯ ಪ್ರಶಸ್ತಿಗಳು ಇವರನ್ನ ಹುಡುಕಿ ಬಂದಿವೆ.
ಸ್ವಾತಂತ್ರ್ಯ ಚಳವಳಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಹೋರಾಟದ ಹಾದಿಯನ್ನು ಕಂಡ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಶ್ರೀ ಮಹದೇವಪ್ಪ ಕಡೆಚೂರು ಅವರು ಯಾದಗಿರಿ ಜಿಲ್ಲೆಯ ಸುರಪುರದವರು. ಗಣಿತ ಹಾಗೂ ಹಿಂದಿ ಉಪನ್ಯಾಸಕರಾಗಿ ಕೆಲಸ ಮಾಡಿದ ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು. ಸ್ವಾತಂತ್ರಾ ನಂತರವೂ ಹೈದರಾಬಾದ್ ನಿಜಾಮನ ವಶದಲ್ಲಿದ್ದ ಹೈದರಾಬಾದ್ ಅನ್ನು ಉಳಿಸಿಕೊಳ್ಳಲು ಹೈದರಾಬಾದ್ ಮುಕ್ತಿ ಹೋರಾಟ ಮಾಡಿ, ಹೈದರಾಬಾದ್ ಅನ್ನು ಸ್ವತಂತ್ರಭಾರತದಲ್ಲಿ ವಿಲೀನಗೊಳಿಸುವಲ್ಲಿಯಶಸ್ವಿಯಾದವರು. ೭೫ ವರ್ಷಗಳ ಕಾಲ ಸಮಾಜದ ಅಭ್ಯುದಯಕ್ಕಾಗಿ ದುಡಿದ ಅವರು ಈಗ ೯೦ ರ ಹರೆಯದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಡಾ.ಸುರೇಶ್ ರಾವ್, ಹುಟ್ಟೂರು ಕಟೀಲು ಆದರೂ ಸಹ ಅವರ ಕರ್ಮಭೂಮಿ ಮುಂಬೈ. ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕೆಂದು ಬಯಸಿದ ಅವರು ೧೯೮೮ ರಲ್ಲಿ ‘ಸಂಜೀವಿನಿ’ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಸಮಾಜದಲ್ಲಿ ಕೆಳಸ್ತರದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕಡಿಮೆ ವೆಚ್ಚದಲ್ಲಿ ಪ್ರತಿ ತಿಂಗಳು ೩೦೦ ಡಯಾಲಿಸಿಸ್ಗಳು ಇವರ ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಯಾದಗಿರಿ ನಗರಸಭೆಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬದಲಾದ ೩೫ ವರ್ಷಗಳ ಕಾಲ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಡುವ ಕೆಲಸದಲ್ಲಿ ಮೇಲು ಕೀಳು ಅನ್ನುವ ತಾರತಮ್ಯ ತೋರದೇ ಶೀಮತಿ ರತ್ನಮ್ಮ ಸ್ವಚ್ಛತಾ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ ತಮ್ಮ ವೃತ್ತಿಬದ್ಧತೆಯನ್ನು ಮೆರೆದಿದ್ದಾರೆ. ಜೀವನದ ನಡುದಾರಿಯಲ್ಲಿ ಗಂಡನನ್ನು ಕಳೆದುಕೊಂಡರೂ ಎದೆಗುಂದದೆ ತಮ್ಮ ಐವರು ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಇವರ ಕರ್ತವ್ಯ ಪ್ರಜ್ಞೆ ದೊಡ್ಡದು.
ಬೆಂಗಳೂರು ನಗರದ ದಂತ ವೈದ್ಯಕೀಯ ವಿಭಾಗದಲ್ಲಿ ಡಾ.ಎ.ಆರ್. ಪ್ರದೀಪ್ ಅವರ ಹೆಸರು ವಿಶಿಷ್ಟವಾದದ್ದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನ ವಿಶ್ರಾಂತ ಕುಲಪತಿಗಳು ಹಾಗೂ ಎಮಿರಿಟಸ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಇವರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ವಿಚಾರ ಮಂಡನೆ ಮಾಡಿರುವ ಇವರು ಹೃದ್ರೋಗದ ಬಗ್ಗೆ ಹಲವು ಲೇಖನಗಳನ್ನು ರಚಿಸಿದ್ದಾರೆ.
ಶ್ರೀ ಪ್ರವೀಣ್ ಕುಮಾರ್ ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಮಹನೀಯರಲ್ಲಿ ಒಬ್ಬರು. ಕಳೆದ ಎರಡು ದಶಕಗಳಿಂದ ಯು.ಎ.ಇ ಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಶ್ರೀ ಪ್ರವೀಣ್ ಶೆಟ್ಟಿ ಅವರು, ೩೭ ದೇಶಗಳ ೧೨೩ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ‘ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್’ನ ಮಹಾಪೋಷಕರಾಗಿದ್ದು ಎಲ್ಲ ಕನ್ನಡಿಗರನ್ನು ಬೆಸೆದಿದ್ದಾರೆ. ಪರರಾಷ್ಟ್ರದಲ್ಲಿದ್ದರೂ ಕನ್ನಡ ನಾಡಿನ ಸೆಳೆತದಲ್ಲಿಯೇ ಇರುವ ಅವರು ಅನೇಕ ಬಡಕುಟುಂಬದ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ಅವರೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ನೀಡುತ್ತ ಉತ್ತಮ ನಾಗರೀಕರನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ.
ದೇಶದಾದ್ಯಂತ ಗ್ರಾಹಕರ ವ್ಯಾಜ್ಯಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಶ್ರಮಿಸುತ್ತಿರುವ ಡಾ. ಸಿದ್ದರಾಮೇಶ್ವರ ಕಂಟೀಕ ದೊಡ್ಡ ಹೆಸರು. ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಭಾರತ ಸರ್ಕಾರದ ವತಿಯಿಂದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯಕೀಯ ಓದಿಕೊಂಡಿದ್ದರೂ ನ್ಯಾಯಾಂಗ ವಿಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಗ್ರಾಹಕರ ವ್ಯಾಜ್ಯಗಳನ್ನು ಪರಿಹರಿಸಲು, ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಗಳು ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡುವುದು ಅಪರೂಪವಾಗಿರುವ ಸಂದರ್ಭದಲ್ಲಿ ಡಾ. ವೇದವ್ಯಾಸ ದೇಶಪಾಂಡೆ ಅವರು ಕಳೆದ ೩೫ ವರ್ಷಗಳಿಂದ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಸುತ್ತಮುತ್ತಲಿನ ಸಮುದಾಯಕ್ಕೆ ವೈದ್ಯಕೀಯ ಸೇವೆ ನೀಡುವುದರ ಮೂಲಕ ಬಡವರ ಡಾಕ್ಟರ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
೧೯೭೮ ರಲ್ಲಿ ‘ಗ್ರಾಮೋತ್ಥಾನ’ ಎಂಬ ಪರಿಕಲ್ಪನೆಯಡಿಯಲ್ಲಿ ಆರಂಭಗೊಂಡ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡ ಡಾ. ದೇಶಪಾಂಡೆ ಅವರು ಹಳ್ಳಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ನಿರ್ಧಾರ ಕೈಗೊಂಡು ಈಗಲೂ ತಮ್ಮ ಸೇವಾಕಾರ್ಯ ಮುಂದುವರೆಸಿದ್ದಾರೆ. ವೈದ್ಯರಾಗಿದ್ದರೂ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಂಡು ಬಂದಿದ್ದಾರೆ.
ಪುತ್ತೂರು ತಾಲ್ಲೂಕಿನ ಬಜೆತ್ತೂರು ಗ್ರಾಮದ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಹೆಸರಾಂತ ಪತ್ರಕರ್ತರು, ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ, ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನು ಹಾಗೂ ವರದಿಗಳನ್ನು ಬರೆದು ಓದುಗರಿಗೆ ಹತ್ತಿರವಾದವರು. ಮುಂಬೈನಲ್ಲಿ ನೆಲೆಸಿರುವ ಇವರು, ಮುಂಬೈನಿಂದ ಪ್ರಕಟವಾಗುವ ಏಕೈಕ ಕನ್ನಡ ಪತ್ರಿಕೆ ‘ಕರ್ನಾಟಕ ಮಲ್ಲ’ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕನ್ನಡಿಗರ ಧ್ವನಿಯನ್ನು ಒಗ್ಗೂಡಿಸುವ ಮಹಾನ್ ಕಾರ್ಯವನ್ನು ಮಾಡುತ್ತಿದ್ದಾರೆ. ಇವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ, ತುಳುವ ಸಿರಿ ಪ್ರಶಸ್ತಿ, ಮುಂತಾದ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಂದಿವೆ.
ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಶ್ರೀಮತಿ ಸುಲ್ತಾನ್ ಬಿ, ನಾಟಿ ಔಷಧಿ ಕೊಡುವುದರಲ್ಲಿ ಸುತ್ತಮುತ್ತ ಹೆಸರುವಾಸಿ. ಚರ್ಮ ರೋಗ, ಹುಳುಕಡ್ಡಿ ಮತ್ತು ಇಸುಬಿಗೆ ತಾನೇ ಔಷಧಿ ತಯಾರಿಸಿ ಚಿಕಿತ್ಸೆ ನೀಡುವ ಸುಲಾನ್ ಬಿ ಯವರ ಖ್ಯಾತಿ ಈಗ ಆಂಧ್ರ, ತಮಿಳುನಾಡು, ಬೆಂಗಳೂರು ಹಾಗೂ ಮಂಗಳೂರಿನವರೆಗೂ ಹಚ್ಚಿದೆ.
ಶ್ರೀಮತಿ ಸುಲ್ತಾನ್ ಬಿ ಸೂಲಗಿತ್ತಿ ಕಾರ್ಯವನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ಹೆರಿಗೆ ಕಿಟ್ ಗಳನ್ನು ವಿತರಿಸಿ ಅಧೀಕೃತಗೊಳಿಸಲಾಗಿದ್ದು, ಎಲ್ಲ ಹೆರಿಗೆಗಳನ್ನು ಯಶಸ್ವಿಯಾಗಿಸಿದ ಹೆಗ್ಗಳಿಕೆ ಇವರದು.
ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳು ಇವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿವೆ.
ಹೊರನಾಡ ಕನ್ನಡಿಗರಲ್ಲಿ ಅಪರೂಪದ ಸಾಧನೆ ಮಾಡಿದವರು ಶ್ರೀಮತಿ ಸುನೀತಾ. ಎಂ. ಶೆಟ್ಟಿ. ಮುಂಬೈ ನಲ್ಲಿ ಅನಿವಾಸಿ ಕನ್ನಡಿಗರಾಗಿದ್ದು, ಮೂವತ್ತಾರು ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಮುಂಬಯಿ ವಿ.ವಿ. ಮತ್ತು ಮಹಾರಾಷ್ಟ್ರ ಸರ್ಕಾರದ ಕನ್ನಡ ಭಾಷಾಮಂಡಳ ಸದಸ್ಯೆಯಾಗಿದ್ದು, ಶಾಲಾ ಕಾಲೇಜುಗಳಿಗೆ ಪಠ್ಯಪುಸ್ತಕ ರಚನೆ, ಆಯ್ಕೆಯ ಕೆಲಸ ನಿರ್ವಹಿಸಿದ್ದಾರೆ. ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ತುಳು ಪಠ್ಯಗಳಲ್ಲಿ ಕವಿತೆ ಹಾಗೂ ಲೇಖನಗಳು ಸೇರ್ಪಡೆಯಾಗಿವೆ. ಇವರು ಒಟ್ಟು ೪೦ ಕೃತಿಗಳನ್ನು ಬರೆದಿದ್ದು ಸ್ವತಂತ್ರ ಕೃತಿಗಳು, ಸಂಪಾದಿತ ಕೃತಿಗಳು, ವ್ಯಕ್ತಿ ವಿಶೇಷ ಗ್ರಂಥಗಳು, ಆತ್ಮಕಥನಗಳು ಸೇರಿವೆ. ಹಲವು ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಹಾಗೂ ವಿಷಯ ಮಂಡನೆ ಮಾಡಿದ್ದಾರೆ.
ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಅತಿಮಬ್ಬೆ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದಿಂದ ಸಾಧನಾ ಸಾಧಕ ಪ್ರಶಸ್ತಿ ಲಭಿಸಿದೆ.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಜವರನಹಳ್ಳಿಯವರಾದ ಡಾ. ಜೆ. ಎನ್. ರಾಮಕೃಷ್ಣಗೌಡರು, ಶ್ರೀ ಆದಿಚುಂಚನಗಿರಿ ಮಠದ ದೊಡ್ಡಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸತ್ಕಾರ್ಯಗಳನ್ನು ಸಾಕಾರಗೊಳಿಸಲು ಶ್ರಮಿಸಿರುವವರಲ್ಲಿ ಅಗ್ರಗಣ್ಯರು.
ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕಲೆ,ಸಾಹಿತ್ಯ, ಆರೋಗ್ಯ, ಕ್ರೀಡೆ, ವೈದ್ಯಕೀಯ, ಪರಿಸರ ಸಂರಕ್ಷಣೆ, ನೆರೆ ಸಂತ್ರಸ್ತರಿಗೆ ಪರಿಹಾರ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತ ನಾಡಿನ ಏಳಿಗೆಗೆ ಕಾರಣರಾಗಿದ್ದಾರೆ. ಬೆಳ್ಳೂರು ಹಾಗು ಸುತ್ತಮುತ್ತಲಿನ ತಾಲ್ಲೂಕಿನ ಅಭಿವೃದ್ಧಿಗೆ ರಾಮಕೃಷ್ಣಗೌಡರು ದುಡಿದಿದ್ದಾರೆ. ಶ್ರೀಯುತರಿಗೆ ‘ಸಾರ್ಥಕ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಅಮೇರಿಕಾದ ಫ್ಲಾರಿಡಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮಂಡ್ಯ ಜಿಲ್ಲಾಡಳಿತದ ವತಿಯಿಂದ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ನೀಡಿ ಪುರಸ್ಕರಿಸಲಾಗಿದೆ
ಶ್ರೀ ಗೋಪಾಲ ಆಚಾರ್ಯ ಹಿರಿಯ ಯಕ್ಷಗಾನ ಪ್ರತಿಭೆ, ಇವರ ಹುಟ್ಟೂರು ತೀರ್ಥಹಳ್ಳಿ. ಸುಮಾರು ೫೫ ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು, ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಲ್ಲಿ ಒಬ್ಬರು. ಇವರ ಬಬ್ರುವಾಹನ, ಲವ-ಕುಶ, ಲಕ್ಷಣ, ಅಭಿಮನ್ಯು ಪಾತ್ರಗಳು ಹೆಸರುವಾಸಿಯಾಗಿವೆ.
ಯಕ್ಷಗಾನದಲ್ಲಿ ಹಲವಾರು ಅನುವಾದ, ನಿಘಂಟು ರಚನೆ, ವೇಷಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಯಕ್ಷಗಾನದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ತಮ್ಮ ಯಕ್ಷಗಾನ ರಸದೌತಣವನ್ನು ಮಸ್ಕತ್ನಲ್ಲಿಯೂ ಕೂಡ ಉಣಬಡಿಸಿ, ಬಡಗುತಿಟ್ಟಿನ ನಿಜವೈಭವ ವಿಜೃಂಭಿಸುವಂತೆ ಮಾಡಿದ್ದಾರೆ.
ಐದು ದಶಕಗಳ ಕಾಲ ಯಕ್ಷಕಲೆಯನ್ನು ಉಳಿಸಿಕೊಂಡು, ಇಳಿವಯಸ್ಸಿನಲ್ಲೂ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಪ್ರಶಸ್ತಿಗಳು ಸನ್ಮಾನಗಳು ಅವರನ್ನು ಹುಡುಕಿ ಬಂದಿವೆ.
ಶ್ರೀ ನವೀನ್ ನಾಗಪ್ಪ
ಕ್ಯಾಪ್ಟನ್ ನವೀನ್ ನಾಗಪ್ಪ, ಭಾರತೀಯ ಸೇನೆಯ ದಿಟ್ಟ ಹೋರಾಟಗಾರ, ಕಾರ್ಗಿಲ್ ಯುದ್ಧದಲ್ಲಿ ಎದೆಗುಂದದೆ ಹೋರಾಟ ನಡೆಸಿ ವೈರಿಗಳನ್ನು ಮಣಿಸುವ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯಲ್ಲಿ, ೬೦ ಗಂಟೆಗಳ ಕಾಲ ತೀವ್ರ ಸಂಕಟ ಅನುಭವಿಸಿದರು. ಕಾರ್ಗಿಲ್ ಯುದ್ಧದ ಕೊನೆಯಲ್ಲಿ ತೀವ್ರವಾಗಿ ಗಾಯಗೊಂಡ ಶ್ರೀ ನವೀನ್ ನಾಗಪ್ಪ, ಪರಿಣಾಮವಾಗಿ ೨೧ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸೇನೆಗೆ ಅರ್ಹರಲ್ಲವೆಂದ ಬಳಿಕ ತಾಯ್ಯಾಡಿಗೆ ಮರಳಿದರು. ಕಾರ್ಗಿಲ್ ಯುದ್ಧದಲ್ಲಿನ ಅವರ ಧೈರ್ಯ ಶೌರ್ಯಗಳನ್ನ
ಪ್ರಶಂಸಿಸಿ ಅವರಿಗೆ ‘ಸೇನಾ ಮೇಡಲ್’ ಪ್ರದಾನ ಮಾಡಲಾಗಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಹೆಚ್.ಆರ್. ಕಸ್ತೂರಿ ರಂಗನ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ೧೯೭೨ ರಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ವಿಭಾಗದ ಡಿವೈಎಸ್ಪಿ ಯಾಗಿ ತಮ್ಮ ಸೇವೆ ಆರಂಭಿಸಿದರು. ತಮ್ಮ ಸೇವೆಗೆ ಮತ್ತು ತಮ್ಮ ದಕ್ಷ ಕಾರ್ಯ ನಿರ್ವಹಣೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯ ಅಧೀನ ಪೊಲೀಸ್ ಆಯುಕ್ತರಾಗಿ, ಮೈಸೂರಿನಲ್ಲಿ ಹೆಚ್ಚುವರಿ ಎಸ್.ಪಿ ಆಗಿ, ಎರಡು ಬಾರಿ ಜಾಗೃತದಳದ ಎಸ್.ಪಿ ಆಗಿ ಹಾಗು ಕೊಡಗು ಜಿಲ್ಲೆಯ ಎಸ್.ಪಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಲವು ಹುದ್ದೆಗಳನ್ನು ಅಲಂಕರಿಸಿ, ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ಐ.ಜಿ.ಪಿ ಆಗಿ ನಿವೃತ್ತಿ ಹೊಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಅತ್ಯುತ್ತಮ ಕೆಲಸಕ್ಕಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ನಗದು ಬಹುಮಾನ ದೊರೆತಿದೆ. ೧೯೮೮ ರಲ್ಲ ರಾಷ್ಟ್ರಪತಿಗ ಪೊಲೀಸ್ ಚಿನ್ನದ ಪದಕ ದೊರೆತಿದೆ.
ದೇವದಾಸಿ ಮುಗ್ಧ ಹೆಣ್ಣು ಮಕ್ಕಳ ವಿಮೋಚನೆ ಹಾಗೂ ಪುನರ್ವಸತಿಗಾಗಿ ಶ್ರೀ ಬಸವಪ್ರಭು ಲಕಮಗೌಡ ಪಾಟೀಲರು ಹಗಲಿರುಳು ದುಡಿದು ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘವನ್ನು ಕಟ್ಟಿದರು.
ಮೂಲತ: ವಕೀಲರಾಗಿರುವ ಪಾಟೀಲರು ಅಥಣಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ದೇವದಾಸಿಯರಿಗೆ ‘ವಿಮೋಚನಾ ಸಂಸ್ಥೆಯಿಂದ ನೆಲೆ ಒದಗಿಸಿಕೊಟ್ಟಿದ್ದಾರೆ. ತಾಲ್ಲೂಕಿನ ೭೦ ಕ್ಕೂ ಮೀರಿ ಹೆಚ್ಚಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳನ್ನು ಆಯ್ದುಕೊಂಡು ಅವರ ರಕ್ಷಣೆಯ ಭಾರ ಹೊರಲಾಗಿದೆ. ದೇವದಾಸಿಯರಿಗೆ ವಿದ್ಯಾಭ್ಯಾಸ, ಹೊಲಿಗೆ, ಹೈನುಗಾರಿಕೆ, ಕಸೂತಿ ಮುಂತಾದ ತರಬೇತಿಗಳನ್ನು ಕೊಟ್ಟು ಅವರು ಸ್ವಾವಲಂಬಿ ಬದುಕನ್ನು ನಡೆಸಲು ಅನುವು ಮಾಡಿಕೊಡಲಾಗಿದೆ. ದೇವದಾಸಿಯರ ಹೆಣ್ಣು ಮಕ್ಕಳಿಗೆ ಪಾಟೀಲರು ಮದುವೆ ಮಾಡಿಸಿ ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ದೇಶದ ಏಕೈಕ ದೇವದಾಸಿ ಮಕ್ಕಳ ವಸತಿ ಶಾಲೆ ಕಟ್ಟಿಸಿದ್ದು ಅದು ೩೦ ವರ್ಷಗಳನ್ನು ದಾಟಿದೆ.
ಲೆಕ್ಕವಿಲ್ಲದಷ್ಟು ಶವಗಳು ತಮಗೆ ಅಂತ್ಯಕ್ರಿಯೆ ಮಾಡುವವರಿಲ್ಲದೇ ಅನಾಥವಾಗುತ್ತವೆ. ಅಂಥ ಅನಾಥಶವಗಳ ಬಂಧುವಾಗಿ ದೊಮ್ಮಲೂರು ಮುನಿಯಪ್ಪ ಅಂತ್ಯಕ್ರಿಯೆ ನೆರವೇರಿಸಿ ಋಣ ಕಳೆದುಕೊಳ್ಳುತ್ತಾರೆ. ಸಾವಿರಾರು ಅನಾಥಶವಗಳಿಗೆ ದಿಕ್ಕಾದ ಮುನಿಯಪ್ಪ ಸ್ಮಶಾನವಾಸಿಯಾಗಿದ್ದು ಹರನಂತೆ ಸ್ಮಶಾನದಲ್ಲೇ ನೆಲೆಸಿದ್ದಾರೆ.
ಮೈಸೂರು ಜಿಲ್ಲೆ. ಎಚ್.ಡಿ.ಕೋಟೆ ತಾಲ್ಲೂಕಿನ ಜಾಗನಕೋಟೆಯ ಮದಲ್ಲಿ ಮಾದಯ್ಯ ಅವರು ಬೆಟ್ಟಕುರುಬ ಆದಿವಾಸಿ ಗಿರಿಜನ ಸಮುದಾಯದ ಯಜಮಾನರಾಗಿದ್ದಾರೆ. ಪಾರಂಪರಿಕವಾಗಿ ಬಂದ ಕಲೆ,ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ಬೆಟ್ಟ ಕುರುಬ ಜನಾಂಗವನ್ನು ಈಗಿನ ಜಾಗನಕೋಟೆ ಹಾಡಿಗೆ ಅರಣ್ಯ ಇಲಾಖೆಯವರು ಸ್ಥಳಾಂತರಿಸಿದರು. ಆದರೆ ಯಾವುದೆ ಪುನರ್ವಸತಿ ಕಲ್ಪಿಸಲಿಲ್ಲ. ಶ್ರೀಮದಲ್ಲಿ ಮಾದಯ್ಯ ಅವರು ಆದಿವಾಸಿ ಸಮುದಾಯದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿದರು. ಇದರ ಫಲವಾಗಿ ೧೫೪ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಯಿತು. ಶ್ರೀಯುತರು ಈಗಲೂ ಬೆಟ್ಟಕುರುಬ ಸಮುದಾಯದ ಸಂಪ್ರದಾಯದಂತೆ ಜೀವನ ನಡೆಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನ ಚಿಚಖಂಡಿ ಬಿ.ಕೆ ಗ್ರಾಮದ ಶಿಳ್ಳೆಕ್ಯಾತ ಸಮುದಾಯದ ಯಮನವ್ವ ಇಲ್ಲಯವರೆಗೂ ಸುಮಾರು ೩ ಸಾವಿರ ಹೆರಿಗೆ ಮಾಡಿಸಿದ್ದಾರೆ.
ವೈದ್ಯಕೀಯ ನೆರವು ಸಿಗದ ಈ ಕುಗ್ರಾಮದಲ್ಲಿ, ಅಲೆಮಾರಿ ಜನಾಂಗದ ಬಿಡಾರಗಳಲ್ಲಿ ಯಮನವ್ವ ಸೂಲಗಿತ್ತಿಯಾಗಿ ಫಲಾಪೇಕ್ಷೆಯಿಲ್ಲದೇ ಹೆರಿಗೆ ಮಾಡಿಸಿ ಕಡು ಬಡವರ ಪಾಲಿಗೆ ನೆರವಾಗಿದ್ದಾರೆ. ಈಗಲೂ ನಾಟಿ ಔಷಧವನ್ನು ಬಳಸಿ ಸೂಲಗಿತ್ತಿ ಕೆಲಸವನ್ನು ಯಮನವ್ವ ಮುಂದುವರೆಸುವ ಮೂಲಕ ಜನಪದ ವೈದ್ಯವೃತ್ತಿಯನ್ನು ಇಂದಿಗೂ ಜೀವಂತವಿಟ್ಟಿದ್ದಾರೆ. ಜೀವನೋಪಾಯಕ್ಕಾಗಿ ಕೌದಿ ಹೊಲೆಯುವ ಕಲೆಯನ್ನು ಕಲಿತು, ಸುಮಾರು ೫ ಸಾವಿರಕ್ಕು ಹೆಚ್ಚು ಕೌದಿ ಹೊಲೆಯುವ ಮೂಲಕ ಬದುಕು ಕಟ್ಟಿಕೊಂಡು ತಮ್ಮ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.
ಗಂಗಾವತಿಯ ಶ್ರೀಯುತ ವೆಂಕಣ್ಣ ಚಿತ್ರಗಾರ ಅವರು ಸುಮಾರು ಐವತ್ತು ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸುಮಾರು ೧೦೦ ಕ್ಕೂ ಅಧಿಕ ರಥಗಳು ಇವರ ಕೈಯ್ಯಲ್ಲಿ ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತುಪ್ರಕಾರ ಹೊಂದಿದ್ದು, ಕೇವಲ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕಾಣಬಹುದು.
ಪರಿಸರಸ್ನೇಹಿ ಸುಂದರವಾದ ಮಣ್ಣಿನ ಮೂರ್ತಿಗಳನ್ನೂ ಸಹ ಮಾಡುವಲ್ಲಿ ಪ್ರಸಿದ್ಧಿ ಹೊಂದಿರುವ ಇವರು ಅನೇಕ ಗ್ರಾಮದೇವತೆಗಳು, ಪಲ್ಲಕ್ಕಿ, ಪೂಜಾ ಮಂಟಪ, ದೇವರ ತೊಟ್ಟಿಲು, ಛತ್ರಿ, ಸಿಂಹಾಸನ ಇತ್ಯಾದಿ ಕರಕುಶಲ ಕೆಲಸಗಳನ್ನು ಮಾಡುತ್ತಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಕಲಾನೈಪುಣ್ಯತೆಯನ್ನು ಗುರುತಿಸಿ, ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ. ‘ರಥರಚನ ಕೋವಿದ’ ಹಾಗೂ ‘ಕದಂಬ’ಪ್ರಶಸ್ತಿ ಇವರದ್ದಾಗಿವೆ.
ಕನ್ನಡ ನಾಡಿನ ಸಾಂಪ್ರದಾಯಿಕ ಶಿಲ್ಪಗಳ ಮೂಲ ಬೇರನ್ನು ಕಂಡುಕೊಂಡು ಸಾಂಪ್ರದಾಯಿಕ ಶಿಲ್ಪಕ್ಕೆ ಹೊಸ ಆಯಾಮವನ್ನು ಕಲ್ಪಸುವ ಕೆಲಸವನ್ನು ಸ್ಥಪತಿ ಡಾ. ಜಿ. ಜ್ಞಾನಾನಂದ ಅವರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರಸ್ತುತ ಶಿಲ್ಪಶಾಸ್ತ್ರವನ್ನು ಡಾ. ಜಿ. ಜ್ಞಾನಾನಂದ ಅವರು ರಚಿಸಿದ್ದಾರೆ.
ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿ ಡಿ.ಅಟ್ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಬ್ರಹ್ಮರ್ಷಿ ಶಿಲ್ಪಗುರುಕುಲಂ ಕಾಲೇಜಿನ ಪ್ರಾಂಶುಪಾಲರಾಗಿ ಕರ್ನಾಟಕ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರುಗಳಾಗಿ (ಡೀನ್) ಸೇವೆ ಸಲ್ಲಿಸುತ್ತ ಪಾರಂಪರಿಕ ಶಿಲ್ಪವನ್ನು ಬೋಧಿಸುತ್ತಿದ್ದಾರೆ.
ಬ್ಯಾಂಡ್ ಮಾಸ್ಟರ್ ಎಂದೇ ಖ್ಯಾತರಾದ ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜ ಅವರು, ಕಳೆದ ಐವತ್ತು ವರ್ಷಗಳಿಂದ ಬ್ರಾಸ್ ಬಾಂಡ್ ಕಲೆಯಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಬದುಕಿನ ಬಹುಭಾಗವನ್ನು ವಾದ್ಯ ಸಂಗೀತಕ್ಕಾಗಿಯೇ ವಿನಿಯೋಗಿಸಿದ ಇವರು, ಮೈಸೂರು ಅರಮನೆ ಬ್ಯಾಂಡ್ನಲ್ಲೂ ನುಡಿಸಿದ್ದಾರೆ. ‘ಸಾನಿಧ್ಯ’ ಎನ್ನುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಮಕ್ಕಳನ್ನು ತರಬೇತುಗೊಳಿಸಿ, ಕಲಾವಿದರಾಗುವಂತೆ ಮಾಡಿದ್ದಾರೆ. ‘ಹ್ಯಾರಿಸ್ ಸೆಂಚುರಿ ಸಿಲ್ವ ಬ್ಯಾಂಡ್’ ಸ್ಥಾಪಿಸಿ ೧೦೦೦ ಕ್ಕೂ ಹೆಚ್ಚು ಸಂಗೀತಗಾರರನ್ನು ಬ್ಯಾಂಡ್ ನುಡಿಸುವಲ್ಲಿ ತರಬೇತುಗೊಳಿಸಿದ್ದಾರೆ. ನಶಿಸಿ ಹೋಗುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯನ್ನು ಪುನರುಜ್ಜಿವನಗೊಳಿಸಲು ಶ್ರಮಿಸುತ್ತಿದ್ದಾರೆ.
ಕೋಪಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದವರಾದ ಶ್ರೀ.ಸಿ. ತ್ಯಾಗರಾಜ್ ಅವರು, ಖ್ಯಾತ ನಾದಸ್ವರ ವಿದ್ವಾಂಸರು. ಕಳೆದ ೫೦ ವರ್ಷಗಳಿಂದ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ನಾದಸ್ವರ ಕಚೇರಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ ಮತ್ತು ಹಂಪಿ ಮಹೋತ್ಸವಗಳಲ್ಲಿ ಹಾಗೂ ಜಾನಪದ ಜಾತ್ರೆಗಳಲ್ಲಿ ಜೊತೆಗೆ ನಾಡಿನ ಹೆಸರಾಂತ ದೇಗುಲಗಳಲ್ಲಿ ನಾದಸ್ವರ ಸೇವೆ ಸಲ್ಲಿಸಿರುವುದು ಇವರ ಹೆಗ್ಗಳಿಕೆ. ಸುಮಾರು ೭೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾದಸ್ವರ ಕಲೆಯನ್ನು ಕಲಿಸುತ್ತ ಕಲಾಸೇವೆ ಮುಂದುವರೆಸಿದ್ದಾರೆ.
ಇವರ ಪ್ರತಿಭೆಗೆ ಪುರಸ್ಕಾರವಾಗಿ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸವಿತಾ ಕಲಾವಿದರ ಸಮಾವೇಶದಲ್ಲಿ ಕಲಾರತ್ನ ಪ್ರಶಸ್ತಿ, ದಸರಾ ಮಹೋತ್ಸವ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.
ಹಾವೇರಿ ಜಿಲ್ಲೆ ಹಿರೇಕೇರೂರು ತಾಲ್ಲೂಕಿನ ಶ್ರೀ ಮಹಾರುದ್ರಪ್ಪ ವೀರಪ್ಪ ಇಟಗಿಯವರು ವಂಶಪಾರಂಪರ್ಯವಾಗಿ ಬಂದ ಪುರವಂತಿಕೆ ಮತ್ತು ಸಮಾಳದ ಕಲೆಯನ್ನು ಕಳೆದ ೩೫ ವರ್ಷಗಳಿಂದ ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕಲೆಯನ್ನು ಭಾರತದಾದ್ಯಂತ ಪ್ರದರ್ಶಿಸಿರುವುದಲ್ಲದೇ ದೆಹಲಿಯ ಕೆಂಪುಕೋಟೆಯ ಮುಂದೆ ‘ಭಾರತ ಪರ್ವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶಿಸಿದ್ದಾರೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಶೆರೆವಾಡಾ ಗ್ರಾಮದವರಾದ ಶ್ರೀ ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಕಳೆದ ೫೫ ವರ್ಷಗಳಿಂದ ಶಹನಾಯಿ ವಾದಕರಾಗಿ ಜಾನಪದ ಕಲೆಯನ್ನು ಶ್ರೀಮಂತಗೊಳಿಸಿದವರು. ಸಣ್ಣಾಟ, ದೊಡ್ಡಾಟ, ಕೋಲಾಟ ಹೆಜ್ಜೆಮೇಳಗಳಲ್ಲಿ ಶಹನಾಯಿ ನುಡಿಸಿ ಪ್ರಸಿದ್ಧರಾಗಿದ್ದಾರೆ. ಇದರ ಜೊತೆಗೆ ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿದ್ದಾರೆ. ಮೈಸೂರು ದಸರಾ ಉತ್ಸವ, ಮಂಗಳೂರು ದಸರಾ ಕುದ್ರೋಳಿ ಉತ್ಸವಗಳಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದ್ದಾರೆ.
ಗುರುಶಿಷ್ಯ ಪರಂಪರೆಯಲ್ಲಿ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ‘ನಮ್ಮ ಸಾಧಕರು’ ಪ್ರಶಸ್ತಿ ನೀಡಿದೆ.
ಶ್ರೀ ಕೃಷ್ಣ ಪಾರಿಜಾತ ಕಲಾವಿದರಾದ ಇವರು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ದಾದನಟ್ಟಿ ಗ್ರಾಮದವರು. ಇವರು ಭಾಗವತ, ಕೊರವಂಜಿ, ಕೃಷ್ಣ, ಸತ್ಯಭಾಮ, ರುಕ್ಕಿಣಿ ಪ್ರಹಸನಗಳ ನಿರ್ದೇಶನ ಮಾಡಿದ್ದು, ಅನೇಕ ಸಂಘ ಸಂಸ್ಥೆಗಳಿಂದ ಹಾಗೂ ಸರ್ಕಾರದಿಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ.
ಬಿಲ್ಲವ ಸಮುದಾಯದ ಯುವಕರ ಅಭ್ಯುದಯಕ್ಕಾಗಿ ಕ್ರಿಯಾಶೀಲವಾಗಿರುವ ಸಂಸ್ಥೆ ಯುವವಾಹಿನಿ, ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ವಿಸ್ತಾರಗೊಂಡು ಕಾರ್ಯಚಲಿಸುತ್ತಿರುವ ಯುವಕರ ಪಡೆ. ಬಿಲ್ಲವ ಸಮುದಾಯದ ಯುವಕರು ಒಗ್ಗೂಡಿ ೧೯೮೭ರಲ್ಲಿ ಸ್ಥಾಪಿಸಿದ ಸಂಸ್ಥೆ ಯುವವಾಹಿನಿ. ಸಮಾವೇಶದ ಮೂಲಕ ಲೋಕಾರ್ಪಣೆಗೊಂಡ ಸಂಸ್ಥೆ ಬಿಲ್ಲವ ಜನಾಂಗದ ಯುವಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ವೆಚ್ಚ ಭರಿಸುತ್ತಿದೆ. ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಕ್ಕೆ ಇಂಬು ನೀಡುತ್ತಿದೆ. ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಇರುವ ಸಮುದಾಯದ ಯುವಕರ ಸಂಘಟನೆ, ವಿದ್ಯಾನಿಧಿ ಟ್ರಸ್ಟ್ ಮೂಲಕ ೨೪೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ, ಸೂರು ಇಲ್ಲದವರಿಗಾಗಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣ, ಬಡಹೆಣ್ಣುಮಕ್ಕಳಿಗೆ ಉಚಿತ ತಾಳಿಭಾಗ್ಯ, ವಧು-ವರಾನ್ವೇಷಣೆಗೆ ನೆರವು, ಕೋವಿಡ್ ಸಂದರ್ಭದಲ್ಲಿ ಅರ್ಹ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ, ಆಸ್ಪತ್ರೆಯಲ್ಲಿದ್ದ ಕಾರ್ಮಿಕರಿಗೆ ಒಂದು ತಿಂಗಳವರೆಗೆ ಉಚಿತ ಆಹಾರ ವಿತರಣೆ, ಪ್ರತಿವರ್ಷ ಕೆಸರುಗದ್ದೆ ಕ್ರೀಡಾಕೂಟ, ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮುಂತಾದ ಹಲವು ಬಗೆಯ ಸಮುದಾಯದ ಹಿತರಕ್ಷಣಾ ಚಟುವಟಿಕೆಗಳಲ್ಲಿ ಯುವವಾಹಿನಿ ನಿರತವಾಗಿದೆ. ಬರೋಬ್ಬರಿ ೩೫ ಘಟಕಗಳನ್ನು ಹೊಂದಿರುವ ಸಂಸ್ಥೆ ಅಧ್ಯಕ್ಷರಾದಿಯಾಗಿ ಎಲ್ಲರ ಅಧಿಕಾರವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಗೆ ಇಂಬು ಕೊಟ್ಟಿದೆ. ಯುವಕರ ಕಲ್ಯಾಣಕ್ಕೆ ದುಡಿಯುತ್ತಿರುವ ಯುವವಾಹಿನಿ ಮಾದರಿ ಸೇವಾಸಂಸ್ಥೆ.
ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಬನ್ನಂಜೆ ಬಾಬು ಅಮೀನ್ ಅವರು ಉಡುಪಿಯ ನಿಟ್ಟೂರು ಗ್ರಾಮದವರು. ತುಳುನಾಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ದೈವಾರಾಧನೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುತ್ತಾರೆ. ಇವರು ಬರೆದಿರುವ ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥವು ಸಂಗ್ರಹಯೋಗ್ಯವಾಗಿದ್ದು ಕರ್ನಾಟಕ ಯಕ್ಷಗಾನ ಜಾನಪದ ಅಕಾಡೆಮಿಯಿಂದ ಪುರಸ್ಕಾರಗಳು ದೊರೆತಿವೆ.
ತುಳುನಾಡಿನ ಸಂಸ್ಕೃತಿ, ಜಾನಪದ ಆಚರಣೆಗಳು, ದೈವಗಳು ಹಾಗೂ ಸಮಗ್ರ ಕೋಟಿ ಚೆನ್ನಯ್ಯ ಮುಂತಾದ ವಿಷಯಗಳ ಕುರಿತು ೩೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಾಹಿತ್ಯ ಸಂಶೋಧನೆ ಪ್ರಶಸ್ತಿ ಲಭ್ಯವಾಗಿದೆ. ದೇಶ ವಿದೇಶಗಳಲ್ಲಿ ಸನ್ಮಾನ ಹಾಗೂ ಗೌರವ ದೊರೆತಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಮೆಟಿ ಗ್ರಾಮದ ಶ್ರೀ ದುರ್ಗಪ್ಪ ಚನ್ನದಾಸರ, ಮನೆ ಮನೆಗೆ ತೆರಳಿ, ಪಾರಂಪರಿಕ ಕಲಾಪ್ರದರ್ಶನ ಹಾಗೂ ತತ್ವಪದ ಗಾಯನ ಮಾಡುತ್ತ ಅಲೆಮಾರಿ ಬದುಕು ನಡೆಸುತ್ತ ಬರುತ್ತಿದ್ದಾರೆ. ಕಲಾಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡ ಇವರು ದಿಮ್ಮಡಿ, ಗೆಜ್ಜೆ, ತಂಬೂರಿ, ಏಕತಾರಿ ವಾದನ ನುಡಿಸುತ್ತ ದಾನಧರ್ಮ ಸ್ವೀಕಾರ ಮಾಡುತ್ತ ಜಾನಪದ ಕಲಾಪ್ರಕಾರವನ್ನು ಜೀವಂತಗೊಳಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ತತ್ವಪದ ಹಾಗೂ ದಾಸರ ಪದಗಳ ಗಾಯನಕ್ಕೆ ಮನಸೋತು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಸನ್ಮಾನಿಸಿವೆ.
ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಕಾನಲೆ ಗ್ರಾಮದ ಗೌರಮ್ಮನವರು ಹಸೆ ಚಿತ್ತಾರವನ್ನು ಮೈಗೂಡಿಸಿಕೊಂಡವರು. ಪಾರಂಪರಿಕ ಕಲೆಗಳಲ್ಲಿ ರೂಢಿಯಾದ ಇವರು ಮಲೆನಾಡಿನ ದೀವರು ಸಮುದಾಯದ ‘ಹಸೆ ಗೋಡೆ ಚಿತ್ತಾರ, ಭತ್ತದ ತೆನೆಯ ಬಾಗಿಲು ತೋರಣ, ಬುಟ್ಟಿ ಚಿತ್ತಾರಗಳಲ್ಲಿ ಖ್ಯಾತಿ ಪಡೆದವರು. ಚಿತ್ತಾರ ಕಲೆಯನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ ಮೊದಲ ಕಲಾವಿದೆ ಇವರು. ಸುತ್ತಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಚಿತ್ತಾರ ತರಬೇತಿ ಕಾರ್ಯಾಗಾರ ನಡೆಸಿ, ಗ್ರಾಮೀಣ ಮಹಿಳೆಯರಲ್ಲಿ ಹಸಿ ಚಿತ್ತಾರದ ಬಗ್ಗೆ ಅರಿವು ಮೂಡಿಸಿದ್ದಾರೆ. ಕೋಲ್ಕತ್ತ, ದೆಹಲಿ, ಶಿರಸಿ, ಹಂಪಿ, ಮೈಸೂರು ಮತ್ತಿತರೆಡೆಗಳಲ್ಲಿ ಹಸೆ ಕಲೆಯ ಪ್ರದರ್ಶನ ನಡೆಸಿ ಹಸೆ ಚಿತ್ರ ಕಲಾವಿದೆಯರ ಬೃಹತ್ ಸಮಾವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ೨೦೦೬ ಏಪ್ರಿಲ್ ೩ ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಸೆ ಚಿತ್ತಾರದಲ್ಲಿ ಮಾಡಿದ ಶ್ರೇಷ್ಠ ಸಾಧನೆಯನ್ನು ಗುರುತಿಸಿ ‘ಅಕಾಡೆಮಿ ಪ್ರಶಸ್ತಿ’ಯನ್ನು ನೀಡಿದ್ದಾರೆ. ಸಾಗರ ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳು ಶ್ರೀಮತಿ ಗೌರಮ್ಮನವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.
ವಿಜಯಪುರ ಜಿಲ್ಲೆಯ ಶ್ರೀ. ಆರ್. ಬಿ. ನಾಯಕ್ ಬಂಜಾರ ಜಾನಪದ ಗಾಯಕರು. ತಮ್ಮ ಬಂಜಾರ ಜಾನಪದ ಗೀತ ಗಾಯನ ಕಲೆಯಿಂದ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಬಂಜಾರ ಜಾನಪದ ಗೀತೆಗಳ ರಚನೆ ಹಾಗೂ ಗಾಯನ ಇವರ ನಿತ್ಯಕಾಯಕ.
ಶ್ರೀ. ಆರ್. ಬಿ. ನಾಯಕ್ ಅವರ ಪ್ರತಿಭೆಗೆ ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳು ದೊರೆತಿವೆ. ಕಳೆದ ನಾಲ್ಕು ದಶಕಗಳಿಂದ ಜಾನಪದ ಗೀತ ಗಾಯನ ನಿರಂತರವಾಗಿ ನಡೆದಿದೆ. ಆಲ್ ಇಂಡಿಯ ರೇಡಿಯೋ ಇವರನ್ನು ಗುರುತಿಸಿ ಲಂಬಾಣಿ ಜಾನಪದ ಗೀತೆಗಳನ್ನು ಹಾಡಲು ಅವಕಾಶ ಮಾಡಿಕೊಟ್ಟಿದೆ.
ಶ್ರೀ.ಆರ್. ಬಿ. ನಾಯಕ್ ಅವರು ಲಂಬಾಣಿ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ೧೯೯೯ ನೇ ಸಾಲಿನ ಜಾನಪದ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬಂಜಾರ ಕಲಾರತ್ನ ‘ಸಂತ ಶ್ರೀ ಸೇವಾಲಾಲ್ ಪ್ರಶಸ್ತಿ ೨೦೧೦ ಪ್ರಶಸ್ತಿಗಳು ಲಭ್ಯವಾಗಿವೆ.
ಮೂಲತ: ಗದಗ ಜಿಲ್ಲೆಯವರಾದ ರಂಗಭೂಮಿ ಕಲಾವಿದೆ ಶ್ರೀಮತಿ ಸಾವಿತ್ರಿಗೌಡರ್ ಅಸಾಧಾರಣ ಪ್ರತಿಭೆ. ವೃತ್ತಿ ರಂಗಭೂಮಿಯ ನಾಟಕಗಳಲ್ಲಿ ಪಾತ್ರವಹಿಸುತ್ತ ೫೦ ವರ್ಷಗಳ ನಿರಂತರ ಸೇವೆಯನ್ನು ಮಾಡಿದ್ದಾರೆ. ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ, ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಓಬಳೇಶ್ವರ ನಾಟಕ ಕಂಪನಿ, ಕೆ.ಬಿ.ಆರ್ ನಾಟಕ ಕಂಪನಿ, ಮುಂತಾದ ವೃತ್ತಿ ರಂಗಭೂಮಿಯ ಹಲವು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ಹೆಸರಾಗಿದ್ದಾರೆ. ಅವರ ಅಭಿನಯ ಪ್ರತಿಭೆಯನ್ನು ಗುರುತಿಸಿ, ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಗೌರವಿಸಿವೆ.
ಕಲೆಗಾಗಿ ಆಸ್ತಿಯನ್ನು ಕಳೆದುಕೊಂಡು ತಾವೇ ಕಲೆಗೆ ಆಸ್ತಿಯಾದ ದೇಸೀ ಪ್ರತಿಭೆ ತಿಪ್ಪಣ್ಣ ಹೆಳವರ್, ಆರು ದಶಕಗಳಿಗೂ ಮೀರಿ ಸೇವೆಗೈದ ಬಯಲಾಟದ ಕಲಾವಿದ. ಜನಪದರಿಗೆ ಕಲೆಯೇ ಬದುಕು, ಬದುಕೇ ಕಲೆ. ತಿಪ್ಪಣ್ಣ ಅಂತಹ ಜನಪದೀಯ ಗಾಯಕ. ಅವಿಭಜಿತ ಬಿಜಾಪುರ ಜಿಲ್ಲೆ ಲಕ್ಕುಂಡಿಯವರು. ೧೯೪೪ರಲ್ಲಿ ಜನಿಸಿದ ತಿಪ್ಪಣ್ಣರದ್ದು ಅಪ್ಪಟ ಅನಕ್ಷರಸ್ಥ ಮನೆತನ, ಬಾಲ್ಯದಿಂದಲೂ ಕಲಾಸಕ್ತಿ, ನಟನೆಯ ಗೀಳು. ಬಯಲಾಟದ ಕಲಾವಿದನಾಗಿ ಊರೂರು ತಿರುಗುವುದೇ ಜೀವನ. ಈ ಕಲಾತಿರುಗಾಟ, ಬಯಲಾಟದ ಮೋಹಕ್ಕೆ ೮೭ ಎಕರೆ ಜಮೀನು ಕಳೆದುಕೊಂಡು ಬರಿಗೈ ದಾಸನಾಗಿದ್ದು ದಿಟ. ಆದರೂ ಕೊಂಚವೂ ಮುಕ್ಕಾಗದ ಕಲಾಪ್ರೇಮ, ಬಯಲಾಟದ ಹಾಡುಗಳನ್ನು ನೆನಪಿಟ್ಟುಕೊಳ್ಳಲೆಂದೇ ಮನೆಯಲ್ಲೇ ಅಕ್ಷರಕಲಿತ ಜಾಣ, ಅಲೆಮಾರಿ ಹೆಳವ—ಪಿಚ್ಚ-ಗುಂಟಲು ಜನಾಂಗದವರಾಗಿ ಗುಂಟಲು ಸಮುದಾಯದ ಮೂಲಪುರುಷ ೬ನೇ ಶತಮಾನದ ಮುತ್ತಿನಾಥಯ್ಯ ಬಗ್ಗೆ ಕೆಲವು ವಚನಗಳನ್ನು ಸಂಸ್ಕರಿಸಿ ಇತಿಹಾಸಕಾರರಿಗೆ ಅಚ್ಚರಿ ಉಂಟುಮಾಡಿದಾತ. ಮನೆಮನೆಗಳಿಗೆ ತೆರಳಿ ಜನನ-ಮರಣ ದಾಖಲಿಸುವ ಒಕ್ಕಲುತನದಲ್ಲೂ ನಿರತರಾಗಿರುವ ತಿಪ್ಪಣ್ಣಗೆ ಭಿಕ್ಷಾಟನೆ ಮತ್ತು ಕಲಾರಾಧನೆ ಎರಡೇ ಆಧಾರ. ೭೮ರ ಇಳಿವಯಸ್ಸಿನಲ್ಲೂ ಕಲಾಕೈಂಕರ್ಯದಲ್ಲಿ ತೊಡಗಿರುವ ತಿಪ್ಪಣ್ಣ ಹಳ್ಳಿಗಾಡಿನ ನಿಜ ಜಾನಪದ ಸಂಪತ್ತು.
ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿಯ ರಂಗಪ್ರತಿಭೆ ಶ್ರೀ ಎನ್. ಮಲ್ಲೇಶಯ್ಯ, ಕಳೆದ ಐದು ದಶಕಗಳಿಂದ ರಂಗಭೂಮಿಯ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ಮಲ್ಲೇಶಯ್ಯನವರು ಪೌರಾಣಿಕ ನಾಟಕಗಳಲ್ಲಿ ಎತ್ತಿದ ಕೈ. ವಿಶೇಷವಾಗಿ ಇವರ ಶ್ರೀ ಕೃಷ್ಣಸಂಧಾನ ನಾಟಕದ ‘ಕೃಷ್ಣನ’ಪಾತ್ರ ಜನಪ್ರಿಯಗೊಂಡಿದ್ದು ನೂರಾರು ಬಾರಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಗೆ ಇವರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ದೊರೆತಿವೆ.
ಮೂಲತ: ರೈತ ಕುಟುಂಬದವರಾದ ಇವರು, ನಾಟಕದ ಜೊತೆ ಜೊತೆಯಲ್ಲಿ ದನಗಳ ಜಾತ್ರೆಯಲ್ಲಿ ಕೂಡ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.
ಕಳೆದ ೫೫ ವರ್ಷಗಳಿಂದ ರಂಗಭೂಮಿಯ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ರಮೇಶ್ ಗೌಡ ಪಾಟೀಲ್ ಅವರು ಸಾಮಾಜಿಕ, ಪೌರಾಣಿಕ ನಾಟಕಗಳ ವೈವಿಧ್ಯಮಯ ಪಾತ್ರಗಳ ಮೂಲಕ ೩೦೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ತಾರಾನಗರದವರಾದ ಇವರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದು ೨೦೦೫ ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ರಂಗಭೂಮಿಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಶ್ರೀಯುತರು ವೃತ್ತಿರಂಗಭೂಮಿ ಸಮಾವೇಶ, ವಿಚಾರ ಸಂಕಿರಣ, ವೃತ್ತಿ ನಾಟಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಮೂಲಕ ನಾಟಕರಂಗದಲ್ಲಿ ಸಕ್ರಿಯರಾಗಿದ್ದಾರೆ.
ಶ್ರೀ ಪ್ರಕಾಶ್ ಬೆಳವಾಡಿ ಅವರು ಭಾರತೀಯ ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಸುಮಾರು ೭೨ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಫಿಲ್ಕ್ ಅಂಡ್ ಡ್ರಾಮಾದ ಸಹ ಸಂಸ್ಥಾಪಕರು, ಯುವಪೀಳಿಗೆಗೆ ಚಿತ್ರ ನಿರ್ಮಾಣದಲ್ಲಿ ತರಬೇತಿ ನೀಡಲು ಸುಚಿತ್ರ ಫಿಲಂ ಸ್ಕೂಲ್ ಆಫ್ ಆರ್ಟ್ಸ್ ಸ್ಥಾಪಿಸಿದ್ದಾರೆ.
೨೦೦೨ ರಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ ‘ಸ್ಟಂಬಲ್’ ರಾಷ್ಟ್ರಪ್ರಶಸ್ತಿ ಪಡೆಯಿತು. ಇವರು ಹಲವು ಭಾಷೆಗಳಲ್ಲಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಮಹೋನ್ನತ ಕೃತಿ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ, ‘ಪರ್ವ’ನಾಟಕ ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಫಕೀರಪ್ಪ ರಾಮಪ್ಪ ಕೊಂಡಾಯಿ ಗ್ರಾಮೀಣ ರಂಗಭೂಮಿ ಪ್ರತಿಭೆ, ಸಾಮಾಜಿಕ ಪೌರಾಣಿಕ ನಾಟಕ ಕಅಸುತ್ತ ಹಾರ್ಮೋನಿಯಮ್ ಮಾಸ್ತರ್ ಆಗಿ ಕಲಾಸೇವೆ ಮಾಡುತ್ತಿದ್ದಾರೆ. ಹೆಸರಾಂತ ನಾಟಕಗಳನ್ನು ನಿರ್ದೇಶನ ಮಾಡಿರುವ ಇವರು, ಶಿಗ್ಗಾಂವ ನಗರದಲ್ಲಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಉಚಿತ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ಪ್ರತಿಭೆಗೆ ಸಾಕ್ಷಿಯಾಗಿ ಹಲವಾರು ಪ್ರಶಸ್ತಿ ಫಲಕಗಳು ಲಭಿಸಿವೆ.
ಬಾಗಲಕೋಟೆ ಜಿಲ್ಲೆ ಬೀಳಗಿಯವರಾದ ಶ್ರೀ ಸಿದ್ದಪ್ಪ ಸಾಬಣ್ಣ ಬಿದರಿ ಅವರು ಅನಕ್ಷರಸ್ಥ ಆಶುಕವಿ. ಅಪ್ಪಟ ಕೃಷಿ ಕುಟುಂಬದವರಾದ ಇವರ ಸಾವಿರಾರು ಕವಿತೆಗಳು ೨೩ ಕ್ಕೂ ಹೆಚ್ಚು ಕವನ ಸಂಕಲಗಳನ್ನು ಕನ್ನಡ ಸಾಹಿತ್ಯಕ್ಕೆ ಬಳುವಳಿಯಾಗಿ ನೀಡಿ ಜಾನಪದ ಸಾಹಿತ್ಯದ ಕಣಜವೇ ಆಗಿದ್ದಾರೆ. ಹಳ್ಳಿ ಬದುಕಿನ ಅನುಭವ, ಉತ್ತರ ಕರ್ನಾಟಕದ ಭಾಷೆಯ ಸೊಬಗು, ಇವರ ಕವಿತೆಗಳ ಪ್ರಮುಖ ಆಕರ್ಷಣೆ. ಮೈಸೂರಿನ ದಸರಾ ಕವಿಗೋಷ್ಠಿಯಿಂದ ಹಿಡಿದು ಬೆಳಗಾವಿಯ ೭೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯವರೆಗೂ ಹತ್ತಾರು ಕವಿಗೋಷ್ಟಿಗಳಲ್ಲಿ ತನ್ನ ಕವನ ವಾಚನ ಮಾಡಿರುವ ಹೆಗ್ಗಳಿಕೆ ಇವರದು.
‘ಹೊಆಸಾಲ ಹೋರಿ’,’ಹತ್ತೂನ ಬಾ ಪ್ರೀತಿ ಗಾಡಿ’ ಮತ್ತು ಅನುಭವದ ಅಡಿಗಿ’, ‘ಮಾತು ಮಾಣಿಕ್ಯ’, ‘ಕೆರೆಯ ನೀರನು ಕೆರಿಗೆ ಚೆಕ್ಲೀನಿ’ ಹಾಗೂ ‘ಹತ್ತಿತೋ ಉರಿ’ ಇವು ಇವರ ಪ್ರಸಿದ್ಧ ಕವನ ಸಂಕಲನಗಳು. ಹಲವು ಹಾಡುಗಳು ಧ್ವನಿಸುರುಳಿಗಳಾಗಿಯೂ ಹೆಸರು ಮಾಡಿವೆ.
ಆರೋಗ್ಯ ಕ್ಷೇತ್ರದ ಮಾರಣಾಂತಿಕ ಕಾಯಿಲೆ ಪೀಡಿತ ಮಕ್ಕಳ ಶುಶೂಷೆಯಲ್ಲಿ ಸಕ್ರಿಯವಾಗಿರುವ ಸೇವಾನಿಧಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ. ನೂರಾರು ಮಕ್ಕಳ ಬಾಳಿನ ಜೀವರಕ್ಷಕಕೇಂದ್ರ, ತಲಸೇಮಿಯಾ ಹಾಗೂ ಹೀಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ೨೦೧೭ರಲ್ಲಿ ಬಾಗಲಕೋಟ ಜಿಲ್ಲೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ‘ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ’ ಅಸ್ತಿತ್ವಕ್ಕೆ ಬಂತು. ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ಈ ಸೊಸೈಟಿ ಬಾಗಲಕೋಟೆಯಲ್ಲಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪ್ರಾಮಾಣಿಕ ಕಾಳಜಿಯಿಂದ ಅವಿರತವಾಗಿ ಶ್ರಮಿಸುತ್ತಿದೆ. ಸುಮಾರು ೧೦೯ ಮಕ್ಕಳು ಚಿಕಿತ್ಸೆಗಾಗಿ ನೋಂದಾಯಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವುದು ವಿಶೇಷ, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಮಕ್ಕಳಿಗೂ ಉಚಿತ ಸೇವೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುವ ಕಡೆ ಹಾಗೂ ಸಾರ್ವಜನಿಕರಲ್ಲಿ ತಲಸೇಮಿಯಾ ಮತ್ತು ಹಿಮೋಫೀಲಿಯಾ ಕಾಯಿಲೆಯ ಬಗ್ಗೆ ತಿಳವಳಿಕೆ ಮೂಡಿಸಲು ಅನೇಕ ಶಿಖರಗಳನ್ನು ಸೊಸೈಟಿ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ತಲಸೇಮಿಯಾ ಪೀಡಿತ ಮಕ್ಕಳಿಗೆ ಉಚಿತ ರಕ್ತವರ್ಗಾವಣೆ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುತ್ತಿರುವ ಸೊಸೈಟಿ ರಕ್ತಭಂಡಾರವನ್ನೂ ಹೊಂದಿದ್ದು ಮಾನವೀಯ ಸೇವೆಯಿಂದಾಗಿ ನೊಂದ ಮಕ್ಕಳ ಮೊಗದಲ್ಲಿ ನಗು ಚಿಮ್ಮಿಸಿದೆ.
ದಾಸಸಾಹಿತ್ಯದಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿರುವ ಡಾ.ಕೃಷ್ಣ ಕೊಲ್ದಾರ ಕುಲಕರ್ಣಿ ಅವರು ವಿಜಯಪುರದ ಹಿರಿಯ ವಿದ್ವಾಂಸರು. ಗಮಕದ ಮುಖೇನ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಖ್ಯಾತಿ ಇವರದು. ಈವರೆಗೆ ಸುಮಾರು ಐವತ್ತು ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಸುಮಾರು ೧೪ ಪುಸ್ತಕಗಳು ದಾಸಸಾಹಿತ್ಯದ ಕುರಿತದ್ದೇ ಆಗಿವೆ.
ದಾಸಸಾಹಿತ್ಯದ ಬಗೆಗಿನ ಕುಲಕರ್ಣಿಯವರ ಸಂಶೋಧನೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ಅವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದ ನಾಲ್ಕು ದಶಕಗಳಿಂದ ಪತ್ರಿಕಾ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಶ್ರೀ ಮಂಜುನಾಥ ಅಜ್ಜಂಪುರ ಅವರು ವಿವಿಧ ದಿನಪತ್ರಿಕೆ, ವಾರಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ೯೦೦ ಕ್ಕೂ ಹೆಚ್ಚು ಅಂಕಣ, ಲೇಖನ,ಕಥೆ ಮತ್ತು ಪ್ರಬಂಧಗಳನ್ನು ಬರೆದವರು.
ಇವರ ಅನುವಾದಿತ ಕೃತಿಗಳು, ಅಂಕಣ ಸಂಕಲನಗಳು ಹಾಗೂ ಜೀವನ ಚರಿತ್ರೆಗಳು ಬಿಡುಗಡೆಗೊಂಡು ಪ್ರಸಿದ್ಧಿ ಪಡೆದಿವೆ. ವಾಟ್ಸ್ ಆಫ್ ಇಂಡಿಯ ಸಾಹಿತ್ಯ ಸರಣಿಯಲ್ಲಿ ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದು, ಪ್ರಸ್ತುತ ವಾಟ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿ ಮತ್ತು ಅರುಣ್ ಶೌರಿ ಸಾಹಿತ್ಯ ಸರಣಿಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಯಚೂರಿನ ಎಸ್.ಎಸ್.ಆರ್.ಜೆ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರು ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಾದ್ಯಂತ ಮತ್ತು ಮಹಾರಾಷ್ಟ್ರ, ಆಂಧ್ರ, ಮದ್ರಾಸ್ ಮುಂತಾದ ಹೊರ ರಾಜ್ಯಗಳಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.
೧೯೯೬ ರಲ್ಲಿ ಗುಲಬರ್ಗಾ ವಿಶ್ವವಿದ್ಯಾಯಲಕ್ಕೆ ಸಲ್ಲಿಸಿದ ‘ಆಧುನಿಕ ಹರಿದಾಸರು’ಮಹಾಪ್ರಬಂಧಕ್ಕೆ ಇವರಿಗೆ ಡಾಕ್ಟರೇಟ್ ಪದವಿ ದೊರೆತಿದೆ. ‘ನರಸಿಂಹ ವಿಠಲ’ಅನ್ನುವ ಅಂಕಿತದಿಂದ ೮೦ ಉಗಾಭೋಗಗಳು ಮತ್ತು ೪೦ ಸಂಕೀರ್ತನೆಗಳನ್ನು ರಚಿಸಿದ ಕೀರ್ತಿ ಇವರದು. ಜೊತೆಗೆ ೧೪ ಸ್ವರಚಿತ ಗ್ರಂಥಗಳು, ೮ ಸಂಪಾದಿತ ಕೃತಿಗಳು, ಬಯಲಾಟ ಭಾಗ-೧,೨ ಮತ್ತು ರಾಯಚೂರು ಜಿಲ್ಲೆಯ ಹರಿದಾಸ ಸಾಹಿತ್ಯ, ಶ್ರೀ ಗೋಪಾಲದಾಸರು, ಶ್ರೀ ಪ್ರಸನ್ನವೆಂಕಟದಾಸರು, ಅಮೋತೋಪಾನ ಮುಂತಾದ ಕೃತಿಗಳನ್ನು ರಚಿಸಿದ ಖ್ಯಾತಿ ಇವರದ್ದು. .
ಚಿತ್ರದುರ್ಗ ಜಿಲ್ಲೆ ಹೊರಕೆರೆದೇವರಪುರದವರಾದ ಶ್ರೀ.ಡಿ.ಟಿ. ರಂಗಸ್ವಾಮಿಯವರು ಕನ್ನಡದಲ್ಲಿ ೫೦ ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆ,ಜೀವನಚರಿತ್ರೆ, ನಾಟಕಗಳು, ಶಾಸ್ತ್ರ ಗ್ರಂಥಗಳು, ಪತ್ರಲೇಖನ ಕಲೆ, ಮಕ್ಕಳ ಸಾಹಿತ್ಯ ಇತ್ಯಾದಿ ಎಲ್ಲ ಪ್ರಕಾರಗಳಲ್ಲು ಕೃತಿ ರಚನೆ ಮಾಡಿದ್ದಾರೆ.
ಸಾವಿರಾರು
ಮೂಲತ: ಅಧ್ಯಾಪಕರಾದ ಪ್ರೊ.ಡಿ.ಟಿ. ರಂಗಸ್ವಾಮಿಯವರು ರೀಡರ್,ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಇವರು ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ೧೦ ನೇ ತರಗತಿ ಕನ್ನಡ ಪಠ್ಯಪುಸ್ತಕ ರಚನೆಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿಯೂ ಭಾಗವಹಿಸಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರರು ಎನಿಸಿಕೊಂಡಿದ್ದಾರೆ.
‘ಶ್ರೀ ರಂಗಬಿನ್ನಪ’ ಅಭಿನಂದನಾ ಗ್ರಂಥವು ಪ್ರೊ. ರಂಗಸ್ವಾಮಿಯವರ ಸಮಗ್ರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಗ್ರಂಥವಾಗಿದೆ.
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಶ್ರೀ ಮಹಾದೇವ ಶಂಕನಪುರ, ಇವರು ಶೋಷಿತ ಸಮುದಾಯದಿಂದ ಬಂದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತ, ಇತಿಹಾಸ- ಸಂಸ್ಕೃತಿ-ಜಾನಪದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಸಾಹಿತ್ಯ ಪ್ರಕಾರವನ್ನು ಕಂಡುಕೊಂಡವರು.
ಮಾರಿಹಬ್ಬಗಳು,ಚಿಕ್ಕಲ್ಲೂರು ಜಾತ್ರೆ,ಮಂಟೇಸ್ವಾಮಿ, ಮಲೆಯ ಮಾದಯ್ಯನ ಸಾಂಸ್ಕೃತಿಕ ಜಾತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ-ಇತ್ಯಾದಿ ಇವರ ಕೃತಿಗಳು. ಸಾಹಿತ್ಯ ಮತ್ತು ಸಂಶೋದನೆಗೆ ಇವರು ಸಲ್ಲಿಸಿರುವ ಸೇವೆಗೆ ೨೦೦೨ ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ ತೀನಂಶ್ರಿ ಪುಸ್ತಕ ಪ್ರಶಸ್ತಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಶಸ್ತಿ ಇವರ ಮಡಿಅಗಿವೆ.
ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿಶಿಷ್ಟ ಸಂಸ್ಥೆ ಸುಮನಾ ಫೌಂಡೇಶನ್, ನಾಡು-ನುಡಿ ರಕ್ಷಣೆ, ಜನಹಿತಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಪರೂಪದ ಸೇವಾಕೇಂದ್ರ, ಸಾಮಾಜಿಕ ಸೇವಾಬದ್ಧತೆಯೊಂದಿಗೆ ೨೦೧೨ರಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸ್ಥಾಪನೆಗೊಂಡ ಸುಮನಾ ಫೌಂಡೇಶನ್ನ ರೂವಾರಿ ಡಾ. ಸುನೀತಾ ಮಂಜುನಾಥ್, ಸ್ವಚ್ಛಭಾರತ ಅಭಿಯಾನದೊಂದಿಗೆ ತನ್ನ ಸೇವಾಯಾನ ಆರಂಭಿಸಿದ ಸಂಸ್ಥೆ ಬೆಂಗಳೂರಿನ ರಸ್ತೆಗಳ ಬದಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿದೆ. ೧೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಖರಗಳು, ೧೦ ಸಾವಿರ ಆಯುಷ್ಮಾನ್ ಕಾರ್ಡ್ಗಳನ್ನು ಉಚಿತವಾಗಿ ಮಾಡಿಸಿಕೊಡುವಿಕೆ, ೫೦೯ಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿನಿತ್ಯ ೫೦೦ರಿಂದ ಒಂದು ಸಾವಿರ ಮಂದಿ ಬಡವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ, ನೂರಾರು ಬಸ್ ತಂಗುದಾಣಗಳಿಗೆ ಹೊಸ ರೂಪ, ಕಡುಬಡವರಿಗೆ ಮನೆಗಳ ನಿರ್ಮಾಣ, ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ವಿತರಣೆ, ತರಕಾರಿ ಸರಬರಾಜು, ಪರಿಸರಸ್ನೇಹಿ ಗಣಪತಿಗಳ ತಯಾರಿಗೆ ಪ್ರೋತ್ಸಾಹ, ಸೈಕಲ್ ರ್ಯಾಲಿ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ, ರುದ್ರಭೂಮಿ ಸ್ವಚ್ಛತೆ ಫೌಂಡೇಶನ್ನ ಜನಮುಖಿ ಕಾರ್ಯಗಳು. ಸ್ವತಃ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುನೀತಾ ಮಂಜುನಾಥ್ ಅವರು ಪ್ರತಿ ವರ್ಷ ೩೦ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಸೇವೆಗೆ ಸಂದ ಸತ್ಫಲವಾಗಿದೆ.
ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ, ನಿರ್ದೇಶಕ, ಕಥಾಸಂಯೋಜಕ, ಸಂಘಟಕ, ರಾಗಸಂಯೋಜಕರಾಗಿ ೪೯ ವರ್ಷಗಳ ಸೇವಾಹಿರಿತನದ ಕಲಾಕಾರರು. ೧೯೫೭ರಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಬಾಲ್ಯದಲ್ಲೇ ಸ್ವರಮೋಹಿತರು. ಹತ್ತನೇ ವಯಸ್ಸಿಗೆ ಹಿಂದೂಸ್ತಾನಿ ಸಂಗೀತಾಭ್ಯಾಸ, ನಾಟಕ ಕಂಪನಿಗಳಲ್ಲಿ ತರಬೇತಿ, ೧೬ನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಸಹಭಾಗವತನಾಗಿ ಕಲಾಸೇವಾರಂಭ, ೧೨ ವರ್ಷಗಳಲ್ಲಿ ನಿತ್ಯವೂ ಕಲಿಕೆ, ಆನಂತರ ಪ್ರಧಾನಭಾಗವತ, ನಿರ್ದೇಶಕ, ಕಥಾಸಂಯೋಜಕರಾಗಿ ೨೮ ವರ್ಷಗಳ ಕಾಲ ಶ್ರೀಪೆರ್ಡೂರು ಮೇಳ ಮುನ್ನಡೆಸಿದ ಹಿರಿಮೆ, ಹೊಸರಾಗಗಳ ಅಳವಡಿಕೆ ಮತ್ತು ಹೊಸ ತಾಂತ್ರಿಕತೆಯನ್ನು ಬಳಸಿದ ಹೆಗ್ಗಳಿಕೆ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ, ಸಂಯೋಜನೆ ಮತ್ತು ಪ್ರದರ್ಶನ. ೪೩೦ಕ್ಕೂ ಹೆಚ್ಚು ಕಥಾನಕದ ಆಡಿಯೋ ಕ್ಯಾಸೆಟ್ಗಳ ಮುದ್ರಣ, ೨೫೦ಕ್ಕೂ ಅಧಿಕ ವಿಡಿಯೋ-ಸಿಡಿ-ಡಿವಿಡಿಗಳ ಚಿತ್ರೀಕರಣದ ದಾಖಲೆ, ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರ ಕಲಾಸೇವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನಪ್ರಶಸ್ತಿ, ಶ್ರೀರಾಮವಿಠಲ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಸನ್ಮಾನಿತಗೊಂಡ ಮಾದರಿ ಸಾಧನೆ.
ಭಾರತೀಯ ಸೈನ್ಯದ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ದೇಶಸೇವೆಗೈದ ವೀರಯೋಧ ಸುಬೇದಾರ್ ಕುಮಾರಸ್ವಾಮಿ, ಗಡಿಬೇಲಿ ರಚಿಸಲು ನೆರವಾದ ದೇಶಪ್ರೇಮಿ. ಬೆಂಗಳೂರಿನಲ್ಲಿ ೧೯೬೨ರಲ್ಲಿ ಜನಿಸಿದ ಬಿ.ಕೆ.ಕುಮಾರಸ್ವಾಮಿ ೧೮ನೇ ವಯಸ್ಸಿಗೆ ಭಾರತೀಯ ಸೇನೆಗೆ ಸೇರಿದವರು. ಸಿಪಾಯಿಯಾಗಿ ಆಪರೇಷನ್ ಬ್ಲೂಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ್ ಮತ್ತು ಎಲ್ಸಿ ಫೆನ್ಸಿಂಗ್ನಂತಹ ಪ್ರಮುಖ ಕಾರ್ಯಾಚರಣೆಯಲ್ಲಿ ನಾಡಿಗಾಗಿ ಹೋರಾಡಿದವರು. ಕಬಡ್ಡಿ ಮತ್ತು ವೇಟ್ಲಿಫ್ಟಿಂಗ್ ಆಟಗಾರರಾಗಿ, ಭಾರತೀಯ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದವರು. ೧೯೮೧ರಿಂದ ೮೩ರವರೆಗೆ ಬಾಕ್ಸಿಂಗ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ಹ್ಯಾಟ್ರಿಕ್ ದಾಖಲೆ. ಭಯೋತ್ಪಾದನೆಗೆ ಸುಲಭ ಪ್ರವೇಶ ನಿರ್ಬಂಧಿಸುವ ಗಡಿಪ್ರದೇಶದ ಬೇಲಿ ರಚಿಸಲು ಉಪಕ್ರಮ ಕೈಗೊಂಡು ಪ್ರಶಸ್ತಿಗೆ ಪಾತ್ರರಾದವರು. ನಿವೃತ್ತಿ ನಂತರವೂ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ, ಎನ್ಸಿಸಿ ಕೆಡೆಟ್ ಸಮಿತಿಯ ಗೌರವಾಧ್ಯಕ್ಷರಾಗಿ ಸೇವಾನಿರತರು. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಲೇ ಬಡಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾದ ಕುಮಾರಸ್ವಾಮಿ ಕೆ.ಎಂ.ಕಾರಿಯಪ್ಪ ಪ್ರಶಸ್ತಿ, ಜಯಕರ್ನಾಟಕ ಸಾಧನ ಪ್ರಶಸ್ತಿಗಳಿಂದ ಭೂಷಿತರು.
ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನರ್ಘ್ಯ ಸೇವೆಸಲ್ಲಿಸಿದ ಸಮಾಜಬಂಧು ಸುಬ್ಬರಾಮ ಶೆಟ್ಟಿ. ಆರ್.ವಿ. ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಣತಜ್ಞ. ಬಡಮಕ್ಕಳಿಗೆ ನೆರವಾದ ಸಮಾಜಮುಖಿ, ಉದ್ಯಮಿ. ಸುಶಿಕ್ಷಿತ ಕುಟುಂಬದ ಕುಡಿಯಾದ ಸುಬ್ಬರಾಮ ಶೆಟ್ಟಿ ಅವರು ಬಿಎಸ್ಸಿ, ಟೆಕ್ಸ್ಟೈಲ್ಸ್ ಪದವೀಧರರು. ಆರ್.ವಿ.ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷರಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದುಡಿದು ಸಂಸ್ಥೆಯ ಪ್ರಗತಿಗೆ ಅಮೂಲ್ಯ ಕಾಣಿಕೆ ಕೊಟ್ಟವರು. ವಾಸವಿ ಟ್ರಸ್ಟ್ ಅಧ್ಯಕ್ಷರಾಗಿ ಆಸ್ಪತ್ರೆ, ಕನ್ವೆನ್ಷನ್ ಹಾಲ್ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಮಾರುತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿ ಹಳ್ಳಿಮಕ್ಕಳ ಬಾಳಲ್ಲಿ ಅಕ್ಷರ ಜ್ಯೋತಿ ಬೆಳಗಿದವರು, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷರಾಗಿ ವೃದ್ಧರ ಸೇವೆ, ಎಪಿಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾಗಿ ಶ್ಲಾಘನೀಯ ಪಾತ್ರ, ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷರಾಗಿ ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಹಿಂದೂ ಸೇವಾ ಪ್ರತಿಷ್ಠಾನ-ಭಾರತ್ ವಿಕಾಸ್ ಪರಿಷತ್ತುಗಳಲ್ಲಿ ಗಣನೀಯ ಸೇವೆ, ಕೋಮರ್ಲ ಉದ್ದಿಮೆಗಳ ಗುಂಪಿನ ಅಧ್ಯಕ್ಷರಾಗಿ ಉದ್ಯಮರಂಗದಲ್ಲೂ ಸಾಧನೆ, ಎಫ್ಕೆಸಿಸಿಐ ಅಧ್ಯಕ್ಷ, ಬೆಂಗಳೂರು ವಿವಿ ಸೆನೆಟ್ ಸದಸ್ಯ, ಪೀಪಲ್ಸ್ ಟ್ರಸ್ಟ್ ಅಧ್ಯಕ್ಷ ಸೇರಿ ಹತ್ತಾರು ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆಗೈದ ವಿರಳ ಸೇವಾಸಿಂಧು.
ನೃತ್ಯ ಕ್ಷೇತ್ರದ ಮಹೋನ್ನತ ಸಾಧಕಿ ನಾಟ್ಯಾಚಾರ್ಯ ಜ್ಯೋತಿ ಪಟ್ಟಾಭಿರಾಮ್, ನೂರಾರು ವಿದ್ಯಾರ್ಥಿಗಳ ನೃತ್ಯಗುರು, ಪ್ರತಿಭಾವಂತ ನೃತ್ಯ ಸಂಯೋಜಕಿ
ಶಿವಮೊಗ್ಗ ಜಿಲ್ಲೆ ಸಾಗರದವರು ಜ್ಯೋತಿ ಪಟ್ಟಾಭಿರಾಮ್. ಬಾಲ್ಯದಲ್ಲೇ ಅಜ್ಜಿಯ ಒತ್ತಾಸೆಯಿಂದ ಭಾರತಿ- ಮಣಿಯವರಲ್ಲಿ ನೃತ್ಯಾಭ್ಯಾಸ ಶುರು, ಅನಂತರ ಓಂಕಾರ್, ಮುರಳೀಧರರಾವ್, ಉಪಾದಾತಾರ್, ಎಚ್.ಆರ್. ಕೇಶವಮೂರ್ತಿ, ಕಲಾನಿಧಿ ಮಾಮಿ, ತಂಜಾವೂರಿನ ಕಿಟ್ಟಪ್ಪ ಪಿಳ್ಳೆ ಮುಂತಾದ ಗುರುವರ್ಯರಿಂದ ದಕ್ಕಿಸಿಕೊಂಡ ನೃತ್ಯಕಲಾವಂತಿಕೆ, ಸ್ನಾತಕೋತ್ತರ ಇಂಗ್ಲಿಷ್ ಪದವಿ ಪಡೆದು ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದರೂ ಸೆಳೆತವೆಲ್ಲ ನೃತ್ಯದೆಡೆಗೆ, ಸಾಧನ ಸಂಗಮ ನಾಟ್ಯ ಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾಸೋಹ. ನಿರಂತರ ಶಾಸ್ತ್ರೀಯ ನೃತ್ಯೋತ್ಸವಗಳ ಆಯೋಜನೆ, ದೇಶ-ವಿದೇಶಗಳಲ್ಲಿ ನೂರಾರು ನೃತ್ಯಪ್ರದರ್ಶನ, ಅಮೆರಿಕಾದಲ್ಲಿ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸಗಳ ನೀಡಿಕೆ, ನ್ಯೂಜೆರ್ಸಿಯಲ್ಲೂ ನೃತ್ಯ ಸಂಸ್ಥೆ ಸ್ಥಾಪನೆ. ಜನಪ್ರಿಯ ನೃತ್ಯರೂಪಕಗಳ ನಿರ್ದೇಶನ, ನಾಟ್ಯಸಂಯೋಜನೆ, ಭರತನಾಟ್ಯ, ಸಂಗೀತ, ಯೋಗ, ಶ್ರೀವಿದ್ಯೆಯ ಧಾರೆಯೆರೆದ ಹೆಗ್ಗಳಿಕೆಯ ನಾಟ್ಯಕಲಾವಿಶಾರದೆ, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿ ಪುರಸ್ಕೃತೆ.
ಸುಪ್ರಸಿದ್ಧ ಜಂಬೂಸವಾರಿ ಮೆರವಣಿಗೆಯ ಚಾಮುಂಡೇಶ್ವರಿ ವಿಗ್ರಹವನ್ನು ರೂಪಿಸಿದ ಖ್ಯಾತಿಯ ಅಪರೂಪದ ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ. ಲೋಹದ ಶಿಲ್ಪ ತಯಾರಿಕೆಯ ಮೇರು ಕಲಾವಿದ, ಕಲಾಶಿಕ್ಷಕ.
ಸಾಂಸ್ಕೃತಿಕ ನಗರಿ ಮೈಸೂರಿನ ಎನ್.ಎಸ್. ಜನಾರ್ಧನ ಮೂರ್ತಿ ಅವರಿಗೆ ಕಲೆಯೇ ಬದುಕು-ಜೀವಾಳ- ಕುಲಕಸುಬು, ತಂದೆ ಎನ್.ಪಿ. ಶ್ರೀನಿವಾಸಾಚಾರ್ ಜಿ. ಭಾಷ್ಯಂ ಸ್ಥಪತಿ ಅವರಿಂದ ಎಳವೆಯಲ್ಲೇ ಶಿಲ್ಪಕಲಾಭ್ಯಾಸ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ ಅಖಿಲ ಭಾರತ ಕರಕುಶಲ ಮಂಡಳಿ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲೆಯ ಡಿಪ್ಲೋಮಾ ಕಲಿಕೆ, ಕಂಚಿನ ಎರಕದ ಶಿಲ್ಪಕಲೆ ಕರಗತ. ಅನಂತರ ಕಲೆಯೇ ಆಸರೆ. ಮೈಸೂರಿನ ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆಯಲ್ಲಿ ಸಹಬೋಧಕನಾಗಿ ನೇಮಕ, ೩೫ ವರ್ಷಗಳ ಸಾರ್ಥಕ ಸೇವೆ. ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಅಸಾಮಾನ್ಯ ಕಲಾಕೃತಿಗಳ ರಚನೆ, ನಾಲ್ಕು ಬಾರಿ ದಸರಾ ಕಲಾಪ್ರದರ್ಶನದಲ್ಲಿ ಪ್ರಶಸ್ತಿ, ಜೀವಮಾನ ಪ್ರಶಸ್ತಿ, ಹೊಯ್ಸಳ, ಚೋಳ, ಪಲ್ಲವ ಶೈಲಿಯಲ್ಲಿ ರಚಿಸಿದ ಕಲಾಕೃತಿಗಳು ನೂರಾರು, ಹತ್ತಾರು ಪ್ರಮುಖ ದೇವಳದಲ್ಲಿ ಪೂಜಿತ. ಆರು ದಶಕದ ಕಲಾಸೇವೆಯ ಧನ್ಯತೆ.
ಜನಪದ ಸಾಹಿತ್ಯ, ವಿಮರ್ಶೆ ಹಾಗೂ ಸಂಶೋಧನೆಯಲ್ಲಿ ಸಾಧನೆಗೈದ ಜಾನಪದ ವಿದ್ವಾಂಸರು ಡಾ. ಹಂಪನಹಳ್ಳಿ ತಿಮ್ಮೇಗೌಡ, ವಿದ್ಯಾರ್ಥಿಗಳ ನೆಚ್ಚಿನ ಗುರು, ಅತ್ಯುತ್ತಮ ಸಂಘಟಕರು.
ಹಾಸನ ತಾಲ್ಲೂಕಿನ ಹಂಪನಹಳ್ಳಿಯ ತಿಮ್ಮೇಗೌಡ ೧೯೫೭ರಲ್ಲಿ ಜನನ, ಸ್ನಾತಕೋತ್ತರ ಪದವಿ, ಪಿಎಚ್.ಡಿ.ಯಿಂದ ಸಂಪನ್ನ ವ್ಯಾಸಂಗ. ಹಾಸನದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥ- ಡೀನ್ ಆಗಿ ಸೇವಾನಿವೃತ್ತಿ. ಜನಪದ ಸಂಶೋಧನೆ-ಬರವಣಿಗೆ-ಸಂಘಟನೆ ಸಾಧನಾಕ್ಷೇತ್ರ ತೊಗಲುಬೊಂಬೆ,
ಕರಪಾಲ, ರಂಗದ ಕುಣಿತ, ಜನಪದಗೀತೆ, ತಮಟೆ ವಾದನ ಮುಂತಾದ ಕಲೆಗಳ ಕಾರ್ಯಾಗಾರ ನಡೆಸಿದ ಸಂಚಾಲಕ. ಗುಣಮುಖ, ಹಿರಿಮೆಯ ಹಾಸನ, ಮನನ, ಕದಿರು, ಹಾಸನ ಜಿಲ್ಲೆಯ ಒಕ್ಕಲಿಗರು ಸೇರಿದಂತೆ ೩೧ ಮೌಲಿಕ ಕೃತಿಗಳ ಕರ್ತೃ. ಹಾಸನ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪದ ಕಲಾಮೇಳಗಳ ಸಂಘಟಕ, ೧೫೦ಕ್ಕೂ ಲೇಖನಗಳ ಬರಹಗಾರ, ಹಾಸನ ಜಿಲ್ಲಾ ಜಾನಪದ ಘಟಕದ ಅಧ್ಯಕ್ಷರಾಗಿ ಸಾರ್ಥಕ ಸೇವೆ. ಜಾನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಜಾನಪದ ಚೇತನ, ಕುವೆಂಪು ವಿಶ್ವಮಾನವ ಪ್ರಶಸ್ತಿ ಸೇರಿ ಹಲವಾರು ಗೌರವಗಳಿಗೆ ಸತ್ಪಾತ್ರರು.
ಗುರುರಾಜ ಹೊಸಕೋಟೆ
ಹಳ್ಳಿಗಾಡಿನ ಬದುಕನ್ನು ಹಾಡಾಗಿಸಿದ ವಿಶಿಷ್ಟ ಜನಪದ ಪ್ರತಿಭೆ ಗುರುರಾಜ ಹೊಸಕೋಟೆ, ಗಾಯಕ, ಸ್ವರಸಂಯೋಜಕ, ಗೀತರಚನೆಕಾರ, ನಟ, ಚಿತ್ರ ನಿರ್ಮಾಪಕ-ನಿರ್ದೇಶಕರಾಗಿ ಅವರದ್ದು ಬಹುಮುಖಿ ಸಾಧನೆ.
ಗುರುರಾಜ ಹೊಸಕೋಟೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಗಟ್ಟಿ ಪ್ರತಿಭೆ. ಹಾಡುಗಾರಿಕೆಯ ಕಲೆ ಅಪ್ಪ-ಅಮ್ಮನ ಬಳುವಳಿ. ಕಲಿತದ್ದು ಪಿಯುಸಿ, ವೃತ್ತಿ ನೇಕಾರಿಕೆ. ಗಾಯನ, ಗೀತರಚನೆ, ಸ್ವರಸಂಯೋಜನೆ, ನಟನೆಯೇ ಪ್ರವೃತ್ತಿ-ಬದುಕು. ೧೯೭೮ರಲ್ಲಿ ಪ್ರಾರಂಭಿಸಿದ ಹಾಡುಗಾರಿಕೆಗೀಗ ೪೨ ವಸಂತದ ಪಕ್ವತೆ, ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದವ್ವ, ಕಲಿತ ಹುಡುಗಿ ಕುದುರಿ ನಡಿಗಿಯಂತಹ ಹಾಡುಗಳು ಸದಾಕಾಲಕ್ಕೂ ಜನಪ್ರಿಯ. ೬೦೦೦ ಹಾಡುಗಳ ರಚನೆ, ೧೫ ಸಾವಿರಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳು, ದೇಶಾದ್ಯಂತ ಕಲಾಸಂಚಾರ, ೧೫೦ ಚಿತ್ರಗಳಲ್ಲಿ ನಟನೆ, ೬೦೪ ಧ್ವನಿಸುರುಳಿಗಳಲ್ಲಿ ಗಾಯನ, ನಾಲ್ಕು ನಾಟಕಗಳ ರಚನೆ, ಸಿನಿಮಾ ನಿರ್ದೇಶನ-ನಿರ್ಮಾಣ. ಎಲ್ಲವೂ ಜನಮೆಚ್ಚಿದ ಕಲಾಸಾಧನೆ. ೫೦ಕ್ಕೂ ಹೆಚ್ಚು ಬಿರುದಾವಳಿಗಳಿಂದ ಭೂಷಿತ ಕಲಾವಂತಿಕೆಯ ಅಚ್ಚಳಿಯದ ಹೆಗ್ಗಳಿಕೆ.
ಎಂ.ಜಿ. ವಾಚೀದ ಮಠ
ದೃಶ್ಯಕಲೆಯನ್ನೇ ಬದುಕು-ಸಾಧನೆಯ ನೆಲೆಯಾಗಿಸಿಕೊಂಡ ಎಂ.ಜಿ.ವಾಚೀದ ಮಠ ನಾಡು ಕಂಡ ವಿಶಿಷ್ಟ ರೇಖಾಚಿತ್ರ ಕಲಾವಿದ, ಕಲಾಶಿಕ್ಷಕ ಮತ್ತು ಕಲಾಗುರು.
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕೊಗನೂರ ಗ್ರಾಮದ ಎಂ.ಜಿ.ವಾಚೀದ ಮಠ ಬಾಲ್ಯದಲ್ಲೇ ಚಿತ್ರಕಲೆಯೆಡೆಗೆ ಆಕರ್ಷಿತಗೊಂಡವರು. ಮುಂಬಯಿನ ಡ್ರಾಯಿಂಗ್ ಶಿಕ್ಷಕರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನ ಪಡೆದವರು. ವೃತ್ತಿ-ಪ್ರವೃತ್ತಿ ಎರಡೂ ಕಲೆಯೇ. ಕಲಾಶಿಕ್ಷಕರಾಗಿ ಮುಂಬಯಿ, ಸವದತ್ತಿ, ಧಾರವಾಡದಲ್ಲಿ ೩೭ ವರ್ಷಗಳ ಸುದೀರ್ಘ ಸೇವೆ. ವಿದ್ಯಾರ್ಥಿಗಳ ನೆಚ್ಚಿನ ಕಲಾಗುರು, ಸನ್ನಿವೇಶಕ್ಕನುಗುಣವಾಗಿ ಕೃತಿ ರಚಿಸುವ ವಿಶಿಷ್ಟ ಕಲೆಗಾರಿಕೆ, ಸರ್ಕಾರಿ ಪಠ್ಯಪುಸ್ತಕಗಳಿಗೆ ದಶಕಗಳ ಕಾಲ ಚಿತ್ರಗಳನ್ನು ರಚಿಸಿದ ಹೆಮ್ಮೆಯ ಕಲಾವಿದ. ಸಾವಿರಾರು ರೇಖಾಚಿತ್ರಗಳು, ಸಂಯೋಜನೆ ಮತ್ತು ಭಾವಚಿತ್ರಗಳನ್ನು ಕಣ್ಣಿಗೆ ಕಣ್ಣುವಂತೆ ರಚಿಸಿದ ಹಿರಿಮೆ. ಮಕ್ಕಳಿಗೆ ತರಬೇತಿ ನೀಡಿ ಅವರು ರಚಿಸಿದ ಕಲಾಕೃತಿಗಳನ್ನು ಸಭೆ-ಸಮಾರಂಭಗಳಲ್ಲಿ ಪ್ರದರ್ಶಿಸಿ ಕಲಾವಿದರ ರೂಪಿಸಿದ ಮಾರ್ಗದರ್ಶಿ, ೮೬ರ ಹರೆಯದಲ್ಲೂ ರೇಖೆಗಳ ಜೊತೆಗೆ ಒಡನಾಡುವ ಕಲಾಕಾರರು.
ಎ.ಟಿ. ರಘು
ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರನಿರ್ದೇಶಕರಲ್ಲಿ ಎ.ಟಿ. ರಘು ಸಹ ಒಬ್ಬರು. ೨೫ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ, ಉತ್ತಮ ಯಶಸ್ಸಿನ ಗರಿಮೆ ಅವರದ್ದು.
ಕನ್ನಡ ಚಿತ್ರಲೋಕಕ್ಕೆ ಕೊಡಗಿನ ಕೊಡುಗೆ ಎ.ಟಿ. ರಘು. ಕೊಡವ ಜನಾಂಗದವರಾದ ರಘು ಅವರಿಗೆ ಬಾಲ್ಯದಿಂದಲೇ ಸಿನಿಮಾಸಕ್ತಿ. ಚಿತ್ರನಿರ್ದೇಶಕನಾಗುವ ಹೊಂಗನಸು ಹೊತ್ತು ಗಾಂಧಿನಗರಕ್ಕೆ ಬಂದು ಬಹಳ ವರ್ಷಗಳ ಬಳಿಕ ಸ್ವತಂತ್ರ ನಿರ್ದೇಶಕರಾದರು. ೧೯೮೦ರಲ್ಲಿ ತೆರೆಕಂಡ ನ್ಯಾಯ ನೀತಿ ಧರ್ಮ ರಘು ನಿರ್ದೇಶನದ ಚೊಚ್ಚಲ ಚಿತ್ರ ರೆಬೆಲ್ ಸ್ಟಾರ್ ಅಂಬರೀಷ್ ನಾಯಕ, ಶಂಕರ್ ಸುಂದರ್, ಆಶಾ, ಅವಳ ನೆರಳು. ಧರ್ಮಯುದ್ಧ, ಗೂಂಡಾಗುರು. ಗುರು ಜಗದ್ಗುರು, ಪ್ರೀತಿ, ಕಾಡಿನ ರಾಜ, ಮಿಡಿದ ಹೃದಯಗಳು, ನ್ಯಾಯಕ್ಕಾಗಿ ನಾನು, ಮಂಡ್ಯದ ಗಂಡು ಮುಂತಾದ ೨೬ ಚಿತ್ರಗಳ ನಿರ್ದೇಶನ. ಬಹುತೇಕ ಚಿತ್ರಗಳಲ್ಲಿ ಅಂಬರೀಷ್ ಅವರೇ ನಾಯಕನಟ. ಗಲ್ಲಾಪೆಟ್ಟಿಗೆಯಲ್ಲಿ ರಘು ಚಿತ್ರಗಳು ಹಣ ಸೂರೆಗೊಂಡಿದ್ದರಿಂದ ಜಯಶೀಲ ನಿರ್ದೇಶಕರೆಂದೇ ಖ್ಯಾತಿ ಪಡೆದವರು. ಚಿತ್ರ ನಿರ್ಮಾಪಕರಾಗಿ ನಷ್ಟ ಅನುಭವಿಸಿದ ರಘು ಚಿತ್ರರಂಗದಿಂದ ಹಿಂಬದಿಗೆ ಸರಿದಿದ್ದರೂ ಅವರ ಚಿತ್ರಗಳಿಗೆ ಮಾತ್ರ ಅದೇ ಜನಪ್ರಿಯತೆ.
ಕನ್ನಡದ ಬೆಳ್ಳಿಪರದೆಯನ್ನು ಚೆಂದಗಾಣಿಸಿ-ಸನ್ನಿವೇಶದ ಅರ್ಥಪೂರ್ಣತೆ ಹೆಚ್ಚಿಸಿದ ಛಾಯಾಗ್ರಾಹಕರಲ್ಲಿ ಬಿ.ಎಸ್. ಬಸವರಾಜು ಪ್ರಮುಖರು.
ತುಮಕೂರು ಜಿಲ್ಲೆ ತಿಪಟೂರು ಮೂಲದ ಬಿ.ಎಸ್. ಬಸವರಾಜು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರಿಂದ ಸೈ ಎನಿಸಿಕೊಂಡ ಪ್ರತಿಭೆ, ಬಿಎಸ್ಸಿ ಪದವಿ ಮುಗಿದೊಡನೆ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಛಾಯಾಗ್ರಾಹಣದಲ್ಲಿ ಡಿಪ್ಲೊಮಾ ಪಡೆದವರು. ಹೆಸರಾಂತ ಛಾಯಾಗ್ರಾಹಕರಾದ ವಿ.ಕೆ. ಮೂರ್ತಿ-ರಾಜೇಂದ್ರ ಮೆಲೋನ್, ಡಿ.ವಿ. ರಾಜಾರಾಂ ಬಳಿ ಸಹಾಯಕರಾಗಿದ್ದವರು. ೧೯೭೮ರಲ್ಲಿ ಒರಿಯಾ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರೂ ಕನ್ನಡ ಸಿನಿಪಯಣ ಆರಂಭವಾಗಿದ್ದು ೧೯೮೧ರ ‘ಅಂದದ ಅರಮನೆ’ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ಅಮೃತಘಳಿಗೆ, ಮಾನಸಸರೋವರ ಚಿತ್ರದ ಛಾಯಾಗ್ರಹಣದೊಂದಿಗೆ ಮುನ್ನೆಲೆಗೆ ಬಂದ ಬಸವರಾಜು ಅವರದ್ದು ೧೨೦ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಹೆಗ್ಗಳಿಕೆ. ೪೦ ವರ್ಷಗಳ ಸುದೀರ್ಘ ಚಿತ್ರಯಾನದಲ್ಲಿ ಹೊಸನೀರು, ಭೂತಾಯಿ ಮಕ್ಕಳು, ಉದ್ಭವ, ನೀ ಮುಡಿದಾ ಮಲ್ಲಿಗೆ ಮುಂತಾದವು ಹೆಸರು ತಂದುಕೊಟ್ಟ ಚಿತ್ರಗಳು. ಹತ್ತಾರು ಸಾಕ್ಷ್ಯಚಿತ್ರಗಳ ನಿರ್ದೇಶಕರು, ಅಮೃತಘಳಿಗೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಬಿ.ಎಸ್.ರಂಗಾ ಪ್ರಶಸ್ತಿ, ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸನ್ಮಾನ ಸೇರಿ ಹಲವು ಪ್ರಶಸ್ತಿ-ಗೌರವಗಳಿಂದ ಭೂಷಿತರು.
ಸಂಗೀತ ಮತ್ತು ನಟನಾ ಕ್ಷೇತ್ರದ ದೈತ್ಯ ದೇಸಿ ಪ್ರತಿಭೆ ವಿದ್ವಾನ್ ತಿಪ್ಪೇಸ್ವಾಮಿ ಆರ್. ಪಾತ್ರಗಳಿಗೆ ಜೀವತುಂಬಿದ ಕಲಾವಿದರು, ಸಾವಿರಾರು ಶಿಷ್ಯರನ್ನು ರೂಪಿಸಿದ ಸಂಗೀತದ ಗುರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆ ಗ್ರಾಮದ ತಿಪ್ಪೇಸ್ವಾಮಿ ಅವರದ್ದು ಕಲಾಕುಟುಂಬ. ಅಪ್ಪತಾತ ರಂಗಕಲಾವಿದರು, ಅಮ್ಮ ಜನಪದ ಗಾಯಕಿ, ಕಲೆ ರಕ್ತಗತ. ೬ನೇ ವಯಸ್ಸಿಗೇ ರಂಗಪ್ರವೇಶ. ಭಕ್ತಮಾರ್ಕಂಡೇಯ, ಅಣ್ಣತಂಗಿ, ಶ್ರೀಕೃಷ್ಣಗಾರುಡಿ, ಕುರುಕ್ಷೇತ್ರ ಮುಂತಾದ ಪೌರಾಣಿಕ-ಐತಿಹಾಸಿಕ ನಾಟಕಗಳಲ್ಲಿ ನಟನೆ. ದುರ್ಗದ ಸಿಂಹಿಣಿ ಒನಕೆ ಓಬವ್ವ ನಾಟಕದ ಅಸಂಖ್ಯ ಪ್ರದರ್ಶನಗಳಲ್ಲಿ ಮಿಂಚಿದ ಕಲಾವಿದ. ರಂಗ ಸಂಗೀತ- ನಿರ್ದೇಶನದಲ್ಲೂ ಎತ್ತಿದ ಕೈ. ಗಡಿಯಾರ ರಿಪೇರಿಯ ವೃತ್ತಿಯ ನಡುವೆ ಶಾಸ್ತ್ರೀಯ ಸಂಗೀತದ ಕಲಿಕೆ, ವಿದ್ವತ್ ಸಂಪಾದನೆ. ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಸ್ಥಾಪಿಸಿ ೧೨೦೦ಕ್ಕೂ ಅಧಿಕ ಶಿಷ್ಯರ ರೂಪಿಸಿದ ಗುರು. ೩೨ ವರ್ಷಗಳ ಸಾರ್ಥಕ ಕಲಾಸೇವೆ. ಹತ್ತಾರು ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಬೆಳಗಿದ ಕಲಾಚೇತನ.
ವೃತ್ತಿ ರಂಗಭೂಮಿ ಕಲಾವಿದರ ಪರಂಪರೆಯ ಹಿರಿಯ ಕೊಂಡಿ ಹೆಚ್. ಷಡಾಕ್ಷರಪ್ಪ, ಆರೂವರೆ ದಶಕಗಳ ಕಾಲ ಕಲೆಯನ್ನೇ ಉಸಿರಾಡಿದ ಅಪರೂಪದ ಕಲಾಚೇತನ,
ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಷಡಾಕ್ಷರಪ್ಪ ಬಹುಶ್ರುತ ಸಾಧಕರು. ಬಹುಮುಖ ಆಸಕ್ತಿಯಿಂದ ರಂಗದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡವರು. ನಟನೆ, ರಂಗಗಾಯನ, ಜನಪದ, ಯಕ್ಷಗಾನ, ಭಜನೆ, ಧಾರ್ಮಿಕ ಕಾರ್ಯಕ್ರಮ, ಸಂಗೀತ ಕಲಿಸುವಿಕೆಯಲ್ಲಿ ಅವಿರತ ನಿರತರು. ನಟನೆಯೇ ಪ್ರಧಾನ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳ ಪೋಷಣೆ, ಗೋಣಿಬಸವೇಶ್ವರ ನಾಟಕದಲ್ಲಿ ಗೋಣಿಬಸವೇಶ್ವರ ಪಾತ್ರಕ್ಕೆ ೧೦೮೯ ಬಾರಿ ಬಣ್ಣ ಹಚ್ಚಿದ ದಾಖಲೆ. ಮಕ್ಕಳಿಗೆ ಸಂಗೀತ ಪಾಠ ಹೇಳಿದ ಗುರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿಯ ಸಂದೇಶ ಸಾರಿದ ಹಿರಿಮೆ, ಅರವತ್ತೈದು ವರ್ಷಗಳಿಂದಲೂ ಅವಿರತವಾಗಿ ಕಲಾಸೇವೆಗೈದ ಕಲಾವಿದರು. ಬಸವರತ್ನ ಪ್ರಶಸ್ತಿ, ಮೈಸೂರಿನ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಕಲಾವಂತರು.
ಅನಸೂಯಮ್ಮ
ರಂಗಭೂಮಿಯನ್ನೇ ಬದುಕಿನ ವೃತ್ತಿ-ಭಾವದ ಬುತ್ತಿಯಾಗಿಸಿಕೊಂಡ ಕಲಾವಿದೆ ಅನಸೂಯಮ್ಮ, ಐದು ದಶಕಗಳ ಕಲಾನುಭವದ ನಟ, ಹಾಡುಗಾರ್ತಿ, ಪಕ್ಕವಾದ್ಯಪ್ರವೀಣೆ.
ಸಿಳ್ಳೇಕ್ಯಾತ ಕುಟುಂಬದ ಅಪ್ಪಟ ವೃತ್ತಿ ರಂಗಕಲಾವಿದೆ ಅನಸೂಯಮ್ಮ ತುಮಕೂರು ಜಿಲ್ಲೆಯ ಪ್ರತಿಭೆ, ಶಿರಾ ತಾಲ್ಲೂಕಿನ ನಾದೂರು ಹೋಬಳಿಯ ಉದ್ದರಾಮನಹಳ್ಳಿ ಕ್ರಾಸ್ ಹುಟ್ಟೂರು. ನಟನೆ-ಹಾಡುಗಾರಿಕೆ ಪರಂಪರಾನುಗತ ಬಂದ ಕಲಾಬಳುವಳಿ, ಅಕ್ಷರ ಕಲಿಕೆ ಅಸಾಧ್ಯದ ಮಾತು. ಅನಕ್ಷರಸ್ಥ ಬದುಕಿಗೆ ಕಲೆಯೇ ಆಸರೆ, ಕಲೆಯ ಹಲವು ಪ್ರಕಾರಗಳಲ್ಲಿ ಹಿಡಿತ ಸಾಧಿಸಿದ ಮೇಲೆ ಬಹುಮುಖಿ ಆಸಕ್ತಿಯ ಬಹುಮುಖಿ ಪ್ರತಿಭೆ. ೧೬ರ ಹರೆಯದಲ್ಲೇ ಕಲಾರಂಗ ಪ್ರವೇಶ. ನಟಿ, ಸಂಗೀತಗಾರ್ತಿ, ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದ್ಯಗಾರ್ತಿಯಾಗಿ ಅವ್ಯಾಹತ ಸೇವೆ. ಬರೋಬ್ಬರಿ ೫೦ ವರ್ಷಗಳ ಸುದೀರ್ಘ ರಂಗಾನುಭವ. ೭೬೦೦ಕ್ಕೂ ಹೆಚ್ಚು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಹಿರಿಮೆ, ಹಾಡಿ ರಂಗಪ್ರೇಮಿಗಳ ತಣಿಸಿದ ಗರಿಮೆ. ವೃತ್ತಿ ರಂಗಭೂಮಿಯ ಅಗ್ಗಳಿಕೆ ಹೆಚ್ಚಿಸಿದ ಕಲಾವಿದೆ.
ಎಂ.ಕೆ. ರಮೇಶ್ ಆಚಾರ್ಯ
ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯ. ಬಡಗು ಮತ್ತು ತೆಂಕುತಿಟ್ಟು ಎರಡೂ ಪ್ರಕಾರದ ಸಮರ್ಥ ಪಾತ್ರಧಾರಿ.
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಅಂಚೆಯ ಆಲ್ಮನೆ ಗ್ರಾಮದವರಾದ ಎಂ.ಕೆ. ರಮೇಶ್ ಆಚಾರ್ಯ ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿದ ಪಟು. ಬಡಗು ಮತ್ತು ತೆಂಕುತಿಟ್ಟು ಪ್ರಕಾರಗಳೆರಡರಲ್ಲೂ ಅನನ್ಯ ಸ್ತ್ರೀವೇಷ ಪಾತ್ರಧಾರಿ. ವೃತ್ತಿ ಕಲಾವಿದರಾಗಿ ಐದು ದಶಕಗಳ ಸಾರ್ಥಕ ಕಲಾಸೇವೆ. ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ ಮಾಡಿದ ಹೆಗ್ಗಳಿಕೆ. ಮಹಾಮಾತೆ ಕುಂತಿ, ಸಮಗ್ರ ವಿಶ್ವಾಮಿತ್ರ, ಅನಸೂಯಾ ಉಪಾಖ್ಯಾನ, ಶ್ರೀಕೃಷ್ಣ ತುಲಾಭಾರದಂತಹ ಪುರಾಣ ಪ್ರಸಂಗಗಳು, ಕಿಗ್ಗ ಕ್ಷೇತ್ರ ಮಹಾತ್ಮ, ಕಳಸ ಕ್ಷೇತ್ರ ಮಹಾತ್ಮ ಮುಂತಾದ ಕ್ಷೇತ್ರ ಮಹಾತ್ಮ ಪ್ರಸಂಗಗಳಲ್ಲಿ ಪಾತ್ರಧಾರಿ, ಮೂವತ್ತೈದು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ ಪದ್ಯ ರಚನಾಕಾರರು. ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರು.
ಬಂಗಾರಾಚಾರಿ
ಮೂಡಲಪಾಯ ಯಕ್ಷಗಾನ ಕಲಾಪ್ರಕಾರದ ಪ್ರಖರ ಕಲಾವಿದರು ಬಂಗಾರಾಚಾರಿ, ಹೊಸ ನಮೂನೆಯ ಕುಣಿತಗಳನ್ನು ಚಾಲ್ತಿಗೆ ತಂದ ಕಲಾಗುರು.
ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ಮೇರುಪ್ರತಿಭೆ ಬಂಗಾರಾಚಾರಿ, ೭ನೇ ತರಗತಿವರೆಗಷ್ಟೇ ಕಲಿಕೆ. ಅನಂತರ ಕುಲಕಸುಬಾದ ಮರಕೆಲಸ-ಕಬ್ಬಿಣದ ಕೆಲಸದಲ್ಲಿ ತಲ್ಲೀನ. ಕಲಾಕರ್ಷಣೆಯಿಂದ ಮದ್ದಳೆ ವಾದನ-ಹಾಡುಗಾರಿಕೆಯ ಕಲಿಕೆ. ತಂದೆಯೇ ಗುರು. ಮರದ ಗೊಂಬೆಗಳಿಗೆ ಯಕ್ಷಗಾನದ ಉಡುಪು ಧರಿಸಿ ಕುಣಿಸುತ್ತಿದ್ದಂತೆ ಮದ್ದಳೆವಾದಕರಾಗಿ ರೂಪಾಂತರ. ಗೊಂಬೆಯಾಟದಲ್ಲಿ ಪರಿಣಿತಿ ಸಾಧಿಸಿದ ಮೇಲೆ ಭಾಗವತಿಕೆ ಶುರು. ಆರು ದಶಕದಿಂದಲೂ ಕಬ್ಬಳ್ಳಿಯಲ್ಲಿ ಪಂಚವಟಿ ರಾಮಾಯಣಕ್ಕೆ ಮೂಡಲಪಾಯ ಯಕ್ಷಗಾನದ ರೂಪ ನೀಡಿ ಪ್ರದರ್ಶನ, ಗೊಂಬೆಯಾಟದಲ್ಲಿನ ಸ್ತ್ರೀವೇಷದ ಕುಣಿತವನ್ನು ಮೂಡಲಪಾಯದಲ್ಲಿಯೂ ಅಳವಡಿಸಿದ ಕೀರ್ತಿ, ಹೊಸ ಕುಣಿತಗಳನ್ನು ಅಳವಡಿಸಿದ ಹಿರಿಮೆ. ಸತ್ಯಹರಿಶ್ಚಂದ್ರ, ವಾಲಿಸುಗ್ರೀವರ ಕಾಳಗ, ಸುಭದ್ರಾ ಕಲ್ಯಾಣ, ಐರಾವತ ಮುಂತಾದ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸಿದ ಪ್ರಯೋಗಶೀಲರು. ಮರದ ಕಿರೀಟಗಳನ್ನು ರಟ್ಟಿನಲ್ಲಿ ಮಾಡಿ ಮೂಡಲಪಾಯ ಯಕ್ಷಗಾನದ ಪರಂಪರೆಗೆ ಮಾನ್ಯತೆ ತಂದುಕೊಟ್ಟ ಕಲಾಚೇತನ.
ದೊಡ್ಡಾಟ ಕಲೆಯ ಅಪರೂಪದ ಮದ್ದಳೆ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ, ಆರು ದಶಕಗಳ ಸಾರ್ಥಕ ಕಲಾಸೇವೆಗೈದ ಕಲಾಚೇತನ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಮಾನಸನಕಟ್ಟಿಯ ಪ್ರತಿಭೆ ಚನ್ನಬಸಪ್ಪ ಬೆಂಡಿಗೇರಿ, ೧೯೩೭ರ ಜುಲೈ ೪ರಂದು ಜನಿಸಿದ ಚನ್ನಬಸಪ್ಪ ಅವರಿಗೆ ಬಾಲ್ಯದಿಂದಲೂ ಕಲಾ ಆಕರ್ಷಣೆ, ದೊಡ್ಡಾಟದ ಕಲಾಪ್ರಕಾರದ ಮೇಲೆ ಅಪರಿಮಿತ ಪ್ರೀತಿ. ಇಷ್ಟಪಟ್ಟು ರೂಢಿಸಿಕೊಂಡ ಕಲೆಯೇ ಬದುಕು-ಭಾವಕ್ಕೆ ಆಸರೆಯಾಗಿದ್ದು ವಿಶೇಷ, ದೊಡ್ಡಾಟದ ಬಹುಮುಖ್ಯ ಕಲೆಯಾದ ಮದ್ದಳೆ ವಾದನದಲ್ಲಿ ಅಸೀಮ ಹಿಡಿತ. ಬಯಲಾಟಕ್ಕಾಗಿ ಜೀವನ ಮುಡಿಪಿಟ್ಟ ಚನ್ನಬಸಪ್ಪ ಕರ್ನಾಟಕದ ನಾನಾ ಕಡೆ, ಗಡಿಭಾಗದಲ್ಲಿ ಅರವತ್ತು ವರ್ಷಗಳಿಂದಲೂ ದೊಡ್ಡಾಟದಲ್ಲಿ ಮದ್ದಳೆ ಬಾರಿಸುವ ಮೂಲಕ ನಿರಂತರ ಕಲಾಸೇವೆ. ನಶಿಸಿಹೋಗುತ್ತಿರುವ ದೊಡ್ಡಾಟ ಕಲೆಯ ಉಳಿವಿಗಾಗಿ ಹೊಸ ತಲೆಮಾರಿನ ಯುವಕ- ಯುವತಿಯರಿಗೆ ದೊಡ್ಡಾಟದ ಸಂಗೀತ ಮತ್ತು ಮದ್ದಳೆ ವಾದನದ ತರಬೇತಿ ನೀಡಿದ ಕಲಾಗುರು. ಅನೇಕ ರಾಜ್ಯ- ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಸತ್ತಾತರು.
ಸೋಲಿಗರ ಮಾದಮ್ಮ
ಬುಡಕಟ್ಟು ಸಮುದಾಯದ ಹಿತರಕ್ಷಣೆಗೆ ಹೋರಾಡಿದ ಮೊಟ್ಟಮೊದಲ ದಿಟ್ಟ ಮಹಿಳೆ ದೊಡ್ಡಮಾದಮ್ಮ. ಸೋಲಿಗರ ನಾಯಕಿ, ಜಾನಪದ ಹಾಡುಗಾರ್ತಿ, ಉಪಕಾರಿ ನಾಟಿವೈದ್ಯೆ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಜೀರಿಗೆಗದ್ದೆಯವರಾದ ದೊಡ್ಡಮಾದಮ್ಮ ಸೋಲಿಗ ಸಮುದಾಯದ ಹೆಣ್ಣುಮಗಳು. ಬಿಳಿಗಿರಿರಂಗನಬೆಟ್ಟದ ಡಾ. ಸುದರ್ಶನ್ರ ಮಾರ್ಗದರ್ಶನದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಸ್ಥಾಪಿಸಿ ಸಮುದಾಯದ ಏಳ್ಗೆಗೆ ಶ್ರಮಿಸಿದಾಕೆ. ಭೂಮಿ ಹಕ್ಕು, ಜಾತಿಪದ್ಧತಿ, ಅರಣ್ಯ ಅಧಿಕಾರಿಗಳ ಕಿರುಕುಳ ಮುಂತಾದ ಸಮಸ್ಯೆಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ಹೋರಾಡಿದ ಗಟ್ಟಿಗಿತ್ತಿ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸೋಲಿಗರನ್ನು ಒಗ್ಗೂಡಿಸಿದ ಮಹಾತಾಯಿ. ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಮಹಿಳಾಪ್ರಜ್ಞೆ ಜಾಗೃತಿಗೊಳಿಸಿದ ಛಲಗಾತಿ. ಪಾರಂಪರಿಕ ಅರಣ್ಯ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುವ ಮಾದಮ್ಮ ನಾಟಿ ವೈದ್ಯೆಯಾಗಿಯೂ ಸಮುದಾಯದ ಸೇವೆಯಲ್ಲಿ ಅನವರತ ನಿರತ. ಸೋಲಿಗರ ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆಗಳನ್ನು ಮಾಡಿಸಿರುವ ಈ ಅಜ್ಜಿಗೆ ಆದಿವಾಸಿ ಕಲೆ, ಸಂಸ್ಕೃತಿ–ಪದ್ಧತಿಯ ಬಗ್ಗೆ ಆಳಜ್ಞಾನ, ಸೋಲಿಗರ ಜಾನಪದ ಹಾಡು, ಸೋಬಾನೆ ಹಾಡು ಮತ್ತು ಮಾದೇಶ್ವರ ಹಾಡುಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ೮೫ರ ಇಆವಯಸ್ಸಿನಲ್ಲಿ ಕಣ್ಣುದೃಷ್ಟಿಗೆ ತೊಂದರೆಯಾಗಿದ್ದರೂ ಸೋಲಿಗರ ಹಿತ ಚಿಂತಿಸುವ ಮಾದಮ್ಮ ನಾಗರಿಕ ಸಮಾಜಕ್ಕೇ ಮಾದರಿ.