ಬಿಲ್ಲವ ಸಮುದಾಯದ ಯುವಕರ ಅಭ್ಯುದಯಕ್ಕಾಗಿ ಕ್ರಿಯಾಶೀಲವಾಗಿರುವ ಸಂಸ್ಥೆ ಯುವವಾಹಿನಿ, ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ವಿಸ್ತಾರಗೊಂಡು ಕಾರ್ಯಚಲಿಸುತ್ತಿರುವ ಯುವಕರ ಪಡೆ. ಬಿಲ್ಲವ ಸಮುದಾಯದ ಯುವಕರು ಒಗ್ಗೂಡಿ ೧೯೮೭ರಲ್ಲಿ ಸ್ಥಾಪಿಸಿದ ಸಂಸ್ಥೆ ಯುವವಾಹಿನಿ. ಸಮಾವೇಶದ ಮೂಲಕ ಲೋಕಾರ್ಪಣೆಗೊಂಡ ಸಂಸ್ಥೆ ಬಿಲ್ಲವ ಜನಾಂಗದ ಯುವಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ವೆಚ್ಚ ಭರಿಸುತ್ತಿದೆ. ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಕ್ಕೆ ಇಂಬು ನೀಡುತ್ತಿದೆ. ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಇರುವ ಸಮುದಾಯದ ಯುವಕರ ಸಂಘಟನೆ, ವಿದ್ಯಾನಿಧಿ ಟ್ರಸ್ಟ್ ಮೂಲಕ ೨೪೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ, ಸೂರು ಇಲ್ಲದವರಿಗಾಗಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣ, ಬಡಹೆಣ್ಣುಮಕ್ಕಳಿಗೆ ಉಚಿತ ತಾಳಿಭಾಗ್ಯ, ವಧು-ವರಾನ್ವೇಷಣೆಗೆ ನೆರವು, ಕೋವಿಡ್ ಸಂದರ್ಭದಲ್ಲಿ ಅರ್ಹ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ, ಆಸ್ಪತ್ರೆಯಲ್ಲಿದ್ದ ಕಾರ್ಮಿಕರಿಗೆ ಒಂದು ತಿಂಗಳವರೆಗೆ ಉಚಿತ ಆಹಾರ ವಿತರಣೆ, ಪ್ರತಿವರ್ಷ ಕೆಸರುಗದ್ದೆ ಕ್ರೀಡಾಕೂಟ, ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮುಂತಾದ ಹಲವು ಬಗೆಯ ಸಮುದಾಯದ ಹಿತರಕ್ಷಣಾ ಚಟುವಟಿಕೆಗಳಲ್ಲಿ ಯುವವಾಹಿನಿ ನಿರತವಾಗಿದೆ. ಬರೋಬ್ಬರಿ ೩೫ ಘಟಕಗಳನ್ನು ಹೊಂದಿರುವ ಸಂಸ್ಥೆ ಅಧ್ಯಕ್ಷರಾದಿಯಾಗಿ ಎಲ್ಲರ ಅಧಿಕಾರವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಗೆ ಇಂಬು ಕೊಟ್ಟಿದೆ. ಯುವಕರ ಕಲ್ಯಾಣಕ್ಕೆ ದುಡಿಯುತ್ತಿರುವ ಯುವವಾಹಿನಿ ಮಾದರಿ ಸೇವಾಸಂಸ್ಥೆ.
Category: ರಾಜ್ಯೋತ್ಸವ 2022
ಕಲೆಗಾಗಿ ಆಸ್ತಿಯನ್ನು ಕಳೆದುಕೊಂಡು ತಾವೇ ಕಲೆಗೆ ಆಸ್ತಿಯಾದ ದೇಸೀ ಪ್ರತಿಭೆ ತಿಪ್ಪಣ್ಣ ಹೆಳವರ್, ಆರು ದಶಕಗಳಿಗೂ ಮೀರಿ ಸೇವೆಗೈದ ಬಯಲಾಟದ ಕಲಾವಿದ. ಜನಪದರಿಗೆ ಕಲೆಯೇ ಬದುಕು, ಬದುಕೇ ಕಲೆ. ತಿಪ್ಪಣ್ಣ ಅಂತಹ ಜನಪದೀಯ ಗಾಯಕ. ಅವಿಭಜಿತ ಬಿಜಾಪುರ ಜಿಲ್ಲೆ ಲಕ್ಕುಂಡಿಯವರು. ೧೯೪೪ರಲ್ಲಿ ಜನಿಸಿದ ತಿಪ್ಪಣ್ಣರದ್ದು ಅಪ್ಪಟ ಅನಕ್ಷರಸ್ಥ ಮನೆತನ, ಬಾಲ್ಯದಿಂದಲೂ ಕಲಾಸಕ್ತಿ, ನಟನೆಯ ಗೀಳು. ಬಯಲಾಟದ ಕಲಾವಿದನಾಗಿ ಊರೂರು ತಿರುಗುವುದೇ ಜೀವನ. ಈ ಕಲಾತಿರುಗಾಟ, ಬಯಲಾಟದ ಮೋಹಕ್ಕೆ ೮೭ ಎಕರೆ ಜಮೀನು ಕಳೆದುಕೊಂಡು ಬರಿಗೈ ದಾಸನಾಗಿದ್ದು ದಿಟ. ಆದರೂ ಕೊಂಚವೂ ಮುಕ್ಕಾಗದ ಕಲಾಪ್ರೇಮ, ಬಯಲಾಟದ ಹಾಡುಗಳನ್ನು ನೆನಪಿಟ್ಟುಕೊಳ್ಳಲೆಂದೇ ಮನೆಯಲ್ಲೇ ಅಕ್ಷರಕಲಿತ ಜಾಣ, ಅಲೆಮಾರಿ ಹೆಳವ—ಪಿಚ್ಚ-ಗುಂಟಲು ಜನಾಂಗದವರಾಗಿ ಗುಂಟಲು ಸಮುದಾಯದ ಮೂಲಪುರುಷ ೬ನೇ ಶತಮಾನದ ಮುತ್ತಿನಾಥಯ್ಯ ಬಗ್ಗೆ ಕೆಲವು ವಚನಗಳನ್ನು ಸಂಸ್ಕರಿಸಿ ಇತಿಹಾಸಕಾರರಿಗೆ ಅಚ್ಚರಿ ಉಂಟುಮಾಡಿದಾತ. ಮನೆಮನೆಗಳಿಗೆ ತೆರಳಿ ಜನನ-ಮರಣ ದಾಖಲಿಸುವ ಒಕ್ಕಲುತನದಲ್ಲೂ ನಿರತರಾಗಿರುವ ತಿಪ್ಪಣ್ಣಗೆ ಭಿಕ್ಷಾಟನೆ ಮತ್ತು ಕಲಾರಾಧನೆ ಎರಡೇ ಆಧಾರ. ೭೮ರ ಇಳಿವಯಸ್ಸಿನಲ್ಲೂ ಕಲಾಕೈಂಕರ್ಯದಲ್ಲಿ ತೊಡಗಿರುವ ತಿಪ್ಪಣ್ಣ ಹಳ್ಳಿಗಾಡಿನ ನಿಜ ಜಾನಪದ ಸಂಪತ್ತು.
ಆರೋಗ್ಯ ಕ್ಷೇತ್ರದ ಮಾರಣಾಂತಿಕ ಕಾಯಿಲೆ ಪೀಡಿತ ಮಕ್ಕಳ ಶುಶೂಷೆಯಲ್ಲಿ ಸಕ್ರಿಯವಾಗಿರುವ ಸೇವಾನಿಧಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ. ನೂರಾರು ಮಕ್ಕಳ ಬಾಳಿನ ಜೀವರಕ್ಷಕಕೇಂದ್ರ, ತಲಸೇಮಿಯಾ ಹಾಗೂ ಹೀಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ೨೦೧೭ರಲ್ಲಿ ಬಾಗಲಕೋಟ ಜಿಲ್ಲೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ‘ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ’ ಅಸ್ತಿತ್ವಕ್ಕೆ ಬಂತು. ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ಈ ಸೊಸೈಟಿ ಬಾಗಲಕೋಟೆಯಲ್ಲಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪ್ರಾಮಾಣಿಕ ಕಾಳಜಿಯಿಂದ ಅವಿರತವಾಗಿ ಶ್ರಮಿಸುತ್ತಿದೆ. ಸುಮಾರು ೧೦೯ ಮಕ್ಕಳು ಚಿಕಿತ್ಸೆಗಾಗಿ ನೋಂದಾಯಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವುದು ವಿಶೇಷ, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಮಕ್ಕಳಿಗೂ ಉಚಿತ ಸೇವೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುವ ಕಡೆ ಹಾಗೂ ಸಾರ್ವಜನಿಕರಲ್ಲಿ ತಲಸೇಮಿಯಾ ಮತ್ತು ಹಿಮೋಫೀಲಿಯಾ ಕಾಯಿಲೆಯ ಬಗ್ಗೆ ತಿಳವಳಿಕೆ ಮೂಡಿಸಲು ಅನೇಕ ಶಿಖರಗಳನ್ನು ಸೊಸೈಟಿ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ತಲಸೇಮಿಯಾ ಪೀಡಿತ ಮಕ್ಕಳಿಗೆ ಉಚಿತ ರಕ್ತವರ್ಗಾವಣೆ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುತ್ತಿರುವ ಸೊಸೈಟಿ ರಕ್ತಭಂಡಾರವನ್ನೂ ಹೊಂದಿದ್ದು ಮಾನವೀಯ ಸೇವೆಯಿಂದಾಗಿ ನೊಂದ ಮಕ್ಕಳ ಮೊಗದಲ್ಲಿ ನಗು ಚಿಮ್ಮಿಸಿದೆ.
ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿಶಿಷ್ಟ ಸಂಸ್ಥೆ ಸುಮನಾ ಫೌಂಡೇಶನ್, ನಾಡು-ನುಡಿ ರಕ್ಷಣೆ, ಜನಹಿತಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಪರೂಪದ ಸೇವಾಕೇಂದ್ರ, ಸಾಮಾಜಿಕ ಸೇವಾಬದ್ಧತೆಯೊಂದಿಗೆ ೨೦೧೨ರಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸ್ಥಾಪನೆಗೊಂಡ ಸುಮನಾ ಫೌಂಡೇಶನ್ನ ರೂವಾರಿ ಡಾ. ಸುನೀತಾ ಮಂಜುನಾಥ್, ಸ್ವಚ್ಛಭಾರತ ಅಭಿಯಾನದೊಂದಿಗೆ ತನ್ನ ಸೇವಾಯಾನ ಆರಂಭಿಸಿದ ಸಂಸ್ಥೆ ಬೆಂಗಳೂರಿನ ರಸ್ತೆಗಳ ಬದಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿದೆ. ೧೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಖರಗಳು, ೧೦ ಸಾವಿರ ಆಯುಷ್ಮಾನ್ ಕಾರ್ಡ್ಗಳನ್ನು ಉಚಿತವಾಗಿ ಮಾಡಿಸಿಕೊಡುವಿಕೆ, ೫೦೯ಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿನಿತ್ಯ ೫೦೦ರಿಂದ ಒಂದು ಸಾವಿರ ಮಂದಿ ಬಡವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ, ನೂರಾರು ಬಸ್ ತಂಗುದಾಣಗಳಿಗೆ ಹೊಸ ರೂಪ, ಕಡುಬಡವರಿಗೆ ಮನೆಗಳ ನಿರ್ಮಾಣ, ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ವಿತರಣೆ, ತರಕಾರಿ ಸರಬರಾಜು, ಪರಿಸರಸ್ನೇಹಿ ಗಣಪತಿಗಳ ತಯಾರಿಗೆ ಪ್ರೋತ್ಸಾಹ, ಸೈಕಲ್ ರ್ಯಾಲಿ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ, ರುದ್ರಭೂಮಿ ಸ್ವಚ್ಛತೆ ಫೌಂಡೇಶನ್ನ ಜನಮುಖಿ ಕಾರ್ಯಗಳು. ಸ್ವತಃ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುನೀತಾ ಮಂಜುನಾಥ್ ಅವರು ಪ್ರತಿ ವರ್ಷ ೩೦ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಸೇವೆಗೆ ಸಂದ ಸತ್ಫಲವಾಗಿದೆ.
ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ, ನಿರ್ದೇಶಕ, ಕಥಾಸಂಯೋಜಕ, ಸಂಘಟಕ, ರಾಗಸಂಯೋಜಕರಾಗಿ ೪೯ ವರ್ಷಗಳ ಸೇವಾಹಿರಿತನದ ಕಲಾಕಾರರು. ೧೯೫೭ರಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಬಾಲ್ಯದಲ್ಲೇ ಸ್ವರಮೋಹಿತರು. ಹತ್ತನೇ ವಯಸ್ಸಿಗೆ ಹಿಂದೂಸ್ತಾನಿ ಸಂಗೀತಾಭ್ಯಾಸ, ನಾಟಕ ಕಂಪನಿಗಳಲ್ಲಿ ತರಬೇತಿ, ೧೬ನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಸಹಭಾಗವತನಾಗಿ ಕಲಾಸೇವಾರಂಭ, ೧೨ ವರ್ಷಗಳಲ್ಲಿ ನಿತ್ಯವೂ ಕಲಿಕೆ, ಆನಂತರ ಪ್ರಧಾನಭಾಗವತ, ನಿರ್ದೇಶಕ, ಕಥಾಸಂಯೋಜಕರಾಗಿ ೨೮ ವರ್ಷಗಳ ಕಾಲ ಶ್ರೀಪೆರ್ಡೂರು ಮೇಳ ಮುನ್ನಡೆಸಿದ ಹಿರಿಮೆ, ಹೊಸರಾಗಗಳ ಅಳವಡಿಕೆ ಮತ್ತು ಹೊಸ ತಾಂತ್ರಿಕತೆಯನ್ನು ಬಳಸಿದ ಹೆಗ್ಗಳಿಕೆ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ, ಸಂಯೋಜನೆ ಮತ್ತು ಪ್ರದರ್ಶನ. ೪೩೦ಕ್ಕೂ ಹೆಚ್ಚು ಕಥಾನಕದ ಆಡಿಯೋ ಕ್ಯಾಸೆಟ್ಗಳ ಮುದ್ರಣ, ೨೫೦ಕ್ಕೂ ಅಧಿಕ ವಿಡಿಯೋ-ಸಿಡಿ-ಡಿವಿಡಿಗಳ ಚಿತ್ರೀಕರಣದ ದಾಖಲೆ, ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರ ಕಲಾಸೇವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನಪ್ರಶಸ್ತಿ, ಶ್ರೀರಾಮವಿಠಲ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಸನ್ಮಾನಿತಗೊಂಡ ಮಾದರಿ ಸಾಧನೆ.
ಭಾರತೀಯ ಸೈನ್ಯದ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ದೇಶಸೇವೆಗೈದ ವೀರಯೋಧ ಸುಬೇದಾರ್ ಕುಮಾರಸ್ವಾಮಿ, ಗಡಿಬೇಲಿ ರಚಿಸಲು ನೆರವಾದ ದೇಶಪ್ರೇಮಿ. ಬೆಂಗಳೂರಿನಲ್ಲಿ ೧೯೬೨ರಲ್ಲಿ ಜನಿಸಿದ ಬಿ.ಕೆ.ಕುಮಾರಸ್ವಾಮಿ ೧೮ನೇ ವಯಸ್ಸಿಗೆ ಭಾರತೀಯ ಸೇನೆಗೆ ಸೇರಿದವರು. ಸಿಪಾಯಿಯಾಗಿ ಆಪರೇಷನ್ ಬ್ಲೂಸ್ಟಾರ್, ಆಪರೇಷನ್ ರಕ್ಷಕ್, ಆಪರೇಷನ್ ವಿಜಯ್, ಆಪರೇಷನ್ ಪರಾಕ್ರಮ್ ಮತ್ತು ಎಲ್ಸಿ ಫೆನ್ಸಿಂಗ್ನಂತಹ ಪ್ರಮುಖ ಕಾರ್ಯಾಚರಣೆಯಲ್ಲಿ ನಾಡಿಗಾಗಿ ಹೋರಾಡಿದವರು. ಕಬಡ್ಡಿ ಮತ್ತು ವೇಟ್ಲಿಫ್ಟಿಂಗ್ ಆಟಗಾರರಾಗಿ, ಭಾರತೀಯ ರಾಷ್ಟ್ರೀಯ ಕಬಡ್ಡಿ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದವರು. ೧೯೮೧ರಿಂದ ೮೩ರವರೆಗೆ ಬಾಕ್ಸಿಂಗ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ಹ್ಯಾಟ್ರಿಕ್ ದಾಖಲೆ. ಭಯೋತ್ಪಾದನೆಗೆ ಸುಲಭ ಪ್ರವೇಶ ನಿರ್ಬಂಧಿಸುವ ಗಡಿಪ್ರದೇಶದ ಬೇಲಿ ರಚಿಸಲು ಉಪಕ್ರಮ ಕೈಗೊಂಡು ಪ್ರಶಸ್ತಿಗೆ ಪಾತ್ರರಾದವರು. ನಿವೃತ್ತಿ ನಂತರವೂ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ, ಎನ್ಸಿಸಿ ಕೆಡೆಟ್ ಸಮಿತಿಯ ಗೌರವಾಧ್ಯಕ್ಷರಾಗಿ ಸೇವಾನಿರತರು. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಲೇ ಬಡಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾದ ಕುಮಾರಸ್ವಾಮಿ ಕೆ.ಎಂ.ಕಾರಿಯಪ್ಪ ಪ್ರಶಸ್ತಿ, ಜಯಕರ್ನಾಟಕ ಸಾಧನ ಪ್ರಶಸ್ತಿಗಳಿಂದ ಭೂಷಿತರು.
ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನರ್ಘ್ಯ ಸೇವೆಸಲ್ಲಿಸಿದ ಸಮಾಜಬಂಧು ಸುಬ್ಬರಾಮ ಶೆಟ್ಟಿ. ಆರ್.ವಿ. ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಣತಜ್ಞ. ಬಡಮಕ್ಕಳಿಗೆ ನೆರವಾದ ಸಮಾಜಮುಖಿ, ಉದ್ಯಮಿ. ಸುಶಿಕ್ಷಿತ ಕುಟುಂಬದ ಕುಡಿಯಾದ ಸುಬ್ಬರಾಮ ಶೆಟ್ಟಿ ಅವರು ಬಿಎಸ್ಸಿ, ಟೆಕ್ಸ್ಟೈಲ್ಸ್ ಪದವೀಧರರು. ಆರ್.ವಿ.ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷರಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದುಡಿದು ಸಂಸ್ಥೆಯ ಪ್ರಗತಿಗೆ ಅಮೂಲ್ಯ ಕಾಣಿಕೆ ಕೊಟ್ಟವರು. ವಾಸವಿ ಟ್ರಸ್ಟ್ ಅಧ್ಯಕ್ಷರಾಗಿ ಆಸ್ಪತ್ರೆ, ಕನ್ವೆನ್ಷನ್ ಹಾಲ್ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಮಾರುತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿ ಹಳ್ಳಿಮಕ್ಕಳ ಬಾಳಲ್ಲಿ ಅಕ್ಷರ ಜ್ಯೋತಿ ಬೆಳಗಿದವರು, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷರಾಗಿ ವೃದ್ಧರ ಸೇವೆ, ಎಪಿಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾಗಿ ಶ್ಲಾಘನೀಯ ಪಾತ್ರ, ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷರಾಗಿ ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಹಿಂದೂ ಸೇವಾ ಪ್ರತಿಷ್ಠಾನ-ಭಾರತ್ ವಿಕಾಸ್ ಪರಿಷತ್ತುಗಳಲ್ಲಿ ಗಣನೀಯ ಸೇವೆ, ಕೋಮರ್ಲ ಉದ್ದಿಮೆಗಳ ಗುಂಪಿನ ಅಧ್ಯಕ್ಷರಾಗಿ ಉದ್ಯಮರಂಗದಲ್ಲೂ ಸಾಧನೆ, ಎಫ್ಕೆಸಿಸಿಐ ಅಧ್ಯಕ್ಷ, ಬೆಂಗಳೂರು ವಿವಿ ಸೆನೆಟ್ ಸದಸ್ಯ, ಪೀಪಲ್ಸ್ ಟ್ರಸ್ಟ್ ಅಧ್ಯಕ್ಷ ಸೇರಿ ಹತ್ತಾರು ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆಗೈದ ವಿರಳ ಸೇವಾಸಿಂಧು.
ಸೋಲಿಗರ ಮಾದಮ್ಮ
ಬುಡಕಟ್ಟು ಸಮುದಾಯದ ಹಿತರಕ್ಷಣೆಗೆ ಹೋರಾಡಿದ ಮೊಟ್ಟಮೊದಲ ದಿಟ್ಟ ಮಹಿಳೆ ದೊಡ್ಡಮಾದಮ್ಮ. ಸೋಲಿಗರ ನಾಯಕಿ, ಜಾನಪದ ಹಾಡುಗಾರ್ತಿ, ಉಪಕಾರಿ ನಾಟಿವೈದ್ಯೆ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಜೀರಿಗೆಗದ್ದೆಯವರಾದ ದೊಡ್ಡಮಾದಮ್ಮ ಸೋಲಿಗ ಸಮುದಾಯದ ಹೆಣ್ಣುಮಗಳು. ಬಿಳಿಗಿರಿರಂಗನಬೆಟ್ಟದ ಡಾ. ಸುದರ್ಶನ್ರ ಮಾರ್ಗದರ್ಶನದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಸ್ಥಾಪಿಸಿ ಸಮುದಾಯದ ಏಳ್ಗೆಗೆ ಶ್ರಮಿಸಿದಾಕೆ. ಭೂಮಿ ಹಕ್ಕು, ಜಾತಿಪದ್ಧತಿ, ಅರಣ್ಯ ಅಧಿಕಾರಿಗಳ ಕಿರುಕುಳ ಮುಂತಾದ ಸಮಸ್ಯೆಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ಹೋರಾಡಿದ ಗಟ್ಟಿಗಿತ್ತಿ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸೋಲಿಗರನ್ನು ಒಗ್ಗೂಡಿಸಿದ ಮಹಾತಾಯಿ. ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಮಹಿಳಾಪ್ರಜ್ಞೆ ಜಾಗೃತಿಗೊಳಿಸಿದ ಛಲಗಾತಿ. ಪಾರಂಪರಿಕ ಅರಣ್ಯ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುವ ಮಾದಮ್ಮ ನಾಟಿ ವೈದ್ಯೆಯಾಗಿಯೂ ಸಮುದಾಯದ ಸೇವೆಯಲ್ಲಿ ಅನವರತ ನಿರತ. ಸೋಲಿಗರ ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆಗಳನ್ನು ಮಾಡಿಸಿರುವ ಈ ಅಜ್ಜಿಗೆ ಆದಿವಾಸಿ ಕಲೆ, ಸಂಸ್ಕೃತಿ–ಪದ್ಧತಿಯ ಬಗ್ಗೆ ಆಳಜ್ಞಾನ, ಸೋಲಿಗರ ಜಾನಪದ ಹಾಡು, ಸೋಬಾನೆ ಹಾಡು ಮತ್ತು ಮಾದೇಶ್ವರ ಹಾಡುಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ೮೫ರ ಇಆವಯಸ್ಸಿನಲ್ಲಿ ಕಣ್ಣುದೃಷ್ಟಿಗೆ ತೊಂದರೆಯಾಗಿದ್ದರೂ ಸೋಲಿಗರ ಹಿತ ಚಿಂತಿಸುವ ಮಾದಮ್ಮ ನಾಗರಿಕ ಸಮಾಜಕ್ಕೇ ಮಾದರಿ.
ನ್ಯಾಯಾಂಗ ಕ್ಷೇತ್ರದಲ್ಲಿ ಜನಪರತೆಯಿಂದ ಹೆಸರಾದವರು ಎಸ್.ಕೆ.ವೆಂಕಟಾಚಲಪತಿ. ಬಡಕಕ್ಷಿದಾರರ ಪಾಲಿನ ಆಪತ್ಬಾಂಧವರು. ಎಸ್.ಕೆ.ವೆಂಕಟಾಚಲಪತಿ ಅವರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು. ಬಹು ದಶಕಗಳಿಂದಲೂ ನ್ಯಾಯಾಂಗದಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವವರು. ಬಡವರು, ನಿರ್ಗತಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಪ್ರಕರಣಗಳಲ್ಲಿ ಹಣ ಪಡೆಯದೇ ಉಚಿತವಾಗಿ ಕಾನೂನು ಸೇವೆಯಲ್ಲಿ ನೀಡುವ ಅಪರೂಪದ ವಿರಳಾತಿ ವಿರಳ ನ್ಯಾಯವಾದಿ. ಬೆಂಗಳೂರಿನಲ್ಲಿ ನೆಲೆನಿಂತಿರುವ ವೆಂಕಟಾಚಲಪತಿಗಳು ಎಂದಿಗೂ ಕಕ್ಷಿದಾರರಿಗೆ ಹೊರೆಯಾಗಿದ್ದಿಲ್ಲ. ಕಕ್ಷಿದಾರರ ಆರ್ಥಿಕ ಸ್ಥಿತಿಗನುಗುಣವಾಗಿ ಕಾನೂನು ಸೇವೆ ಒದಗಿಸುವುದು ಅವರ ಹೆಚ್ಚುಗಾರಿಕೆ ಹಾಗೂ ಹೃದಯ ವೈಶಾಲ್ಯತೆಗೆ ಸಾಕ್ಷಿ, ತಮ್ಮನ್ನು ಸಂಪರ್ಕಿಸುವ ಬಡವರಿಗೆ ಯಾವುದೇ ಹೊರೆಯಾಗದಂತೆ ಎಚ್ಚರವಹಿಸುವ ಅವರು ಉಚಿತ ಸೇವೆ ನೀಡುವುದರ ಜತೆಗೆ ಬದುಕಿನಲ್ಲಿ ಭರವಸೆಯನ್ನೂ ತುಂಬುವುದು ಬಲು ವಿಶಿಷ್ಟ. ನ್ಯಾಯಾಂಗದಲ್ಲಿ ಹಿರಿತನವುಳ್ಳ ವೆಂಕಟಾಚಲಪತಿ ಅವರು ನ್ಯಾಯದಾನ ವ್ಯವಸ್ಥೆಯ ಘನತೆ ಮತ್ತು ಅಂತಃಕರಣವನ್ನು ಹೆಚ್ಚಿಸಿದ ಅಪರೂಪದ ನ್ಯಾಯವಾದಿ.
ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯನ್ನು ವಿಶಿಷ್ಟ ಬಗೆಯಲ್ಲಿ ಬೆಳಗಿ ಜನಮಾನಸವನ್ನು ರಂಜಿಸಿದ ಕಲಾಪ್ರತಿಭೆ ಸಿಹಿಕಹಿಚಂದ್ರು. ನಟ, ನಿರ್ದೇಶಕ, ಧಾರಾವಾಹಿಗಳ ನಿರ್ಮಾಪಕ, ಅಡುಗೆ ಪ್ರಚಾರಕ ಹಾಗೂ ಹಾಸ್ಯಗಾರನಾಗಿ ಅವರದ್ದು ಬಹುಮುಖ ಪ್ರತಿಭಾದರ್ಶನ. ಸಿಹಿಕಹಿ ಚಂದ್ರು ಎಂದೇ ಜನಜನಿತರಾದ ಚಂದ್ರಶೇಖರ್ ಬಾಲ್ಯದಿಂದಲೂ ಕಲಾಮೋಹಿ, ನಟನೆಯ ಗೀಳು, ಬಣ್ಣದ ಹುಚ್ಚು. ಕಾಲೇಜು ದಿನಗಳಿಂದಲೂ ರಂಗಸಖ್ಯ. ಶೇಕ್ಸ್ಪಿಯರ್ ಅವರ ಏ ಕಾಮಿಡಿ ಆಫ್ ಎರರ್ಸ್ನ ಕನ್ನಡ ರೂಪಾಂತರ ನೀನಾನಾದ್ರೆ ನಾನೀನೇನ? ಚಂದ್ರು ಅಭಿನಯಿಸಿದ ಜನಪ್ರಿಯ ಹಾಸ್ಯನಾಟಕ. ರಂಗಭೂಮಿಯಿಂದ ೯೦ರ ದಶಕದಲ್ಲೇ ಕಿರುತೆರೆ ಜಿಗಿದ ಚಂದ್ರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸಿಹಿಕಹಿ’ ಧಾರಾವಾಹಿಯಿಂದ ಜನಪ್ರಿಯರು. ಅಂದಿನಿಂದಲೇ ಸಿಹಿಕಹಿಚಂದ್ರುವಾಗಿ ರೂಪಾಂತರ. ಬ್ಯಾಂಕ್ ಜನಾರ್ದನ್, ಉಮಾಶ್ರೀ ಜತೆಗಿನ ಚಂದ್ರು ಅವರ ಹಾಸ್ಯ ಸನ್ನಿವೇಶಗಳು ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಧಾರಾವಾಹಿಗಳ ನಿರ್ಮಾಣಕ್ಕೆ ಇಳಿದ ಚಂದ್ರು ಸಿಲ್ಲಿಲಲ್ಲಿ, ಪಾಪಪಾಂಡು ಜನಪ್ರಿಯ ಧಾರಾವಾಹಿಗಳ ನಿರ್ದೇಶಕರು. ಅಡುಗೆ ಮಾಡುವುದು ಚಂದ್ರು ಅವರ ಪರಮಾಪ್ತ ಕಲೆ. ಈ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿವಾಹಿನಿಗಳಲ್ಲಿ ಶೋ ನಡೆಸಿದ ಜನಾನುರಾಗಿಯಾದ ಹೆಗ್ಗಳಿಕೆ. ಬದುಕು ಸಾಗಿದ ಹಾದಿಯಲ್ಲಿ ನಡೆಯುತ್ತಲೇ ಬಹುಬಗೆಯ ಪಾತ್ರ-ಆಸಕ್ತಿಯಿಂದ ಗೆದ್ದ ಸಿಹಿಕಹಿ ಚಂದ್ರು ಕಲೆಯಿಂದಲೇ ಬದುಕುಕಟ್ಟಿಕೊಂಡು ಬೆಳಗಿದ ಅಪರೂಪದ ಕಲಾವಂತರು.
ವೇದಾಧ್ಯಯನ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ವಿಶಿಷ್ಟ ಸಾಧಕರು ವಿದ್ವಾನ್ ಗೋಪಾಲಕೃಷ್ಣ ಶರ್ಮ, ೩೦ ಸಾವಿರ ಶ್ಲೋಕಗಳ ಅರ್ಥ ವಿಶ್ಲೇಷಕರು, ಹೆಸರಾಂತ ಜ್ಯೋತಿಷ ಪಂಡಿತರು, ಶಾಸ್ತ್ರ ವಿದ್ವಾಂಸರು, ಬಡವರಿಗೆ ನೆರವಾಗುವ ಸಮಾಜಸೇವಕರು. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬಾಲಿಕೊಪ್ಪ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಗೋಪಾಲಕೃಷ್ಣ ಶರ್ಮ ಅವರು ಬಾಲ್ಯದಲ್ಲೇ ವೇದಾಧ್ಯಯನದತ್ತ ಚಿತ್ತ ಹರಿಸಿದವರು. ಹೊನ್ನಾವರದಲ್ಲಿ ಪ್ರಾಥಮಿಕ ಸಂಸ್ಕೃತಾಧ್ಯಯನ, ವೇದಾಧ್ಯಯನ, ಉಡುಪಿಯಲ್ಲಿ ಜ್ಯೋತಿಷ ವಿದ್ವಾನ್ ಪದವಿ, ಪೌರೋಹಿತ್ಯದಲ್ಲಿ ವಿಶೇಷ ಪಾಂಡಿತ್ಯ, ಕೇರಳದಲ್ಲಿ ಮಂತ್ರಶಾಸ್ತ್ರ, ಪ್ರಶ್ನಾಶಾಸ್ತ್ರ ಅಧ್ಯಯನ. ಟಿವಿ ವಾಹಿನಿಗಳಜ್ಯೋತಿಷ ಪಂಡಿತರಾಗಿ ಬಲು ಜನಪ್ರಿಯರು. ವಿದ್ವತ್ತಿನ ಪಯಣದಾಚೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡವರು ಗೋಪಾಲಕೃಷ್ಣ ಶರ್ಮ, ಸಾವಿರಾರು ಬಡಮಕ್ಕಳಿಗೆ ಉಚಿತ ಪುಸ್ತಕ, ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಅಹಾರಕಿಟ್ಗಳ ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ದಿನಸಿ, ಬಟ್ಟೆ ವಿತರಿಸಿದ ಸಮಾಜಮುಖಿ, ೩೦ ಸಾವಿರ ಶ್ಲೋಕಗಳನ್ನು ಅರ್ಥ ಸಮೇತ ವಿವರಿಸಬಲ್ಲ ಪಂಡಿತೋತ್ತಮರು. ಜ್ಯೋತಿಷ ಮಾರ್ತಾಂಡ, ಜ್ಯೋತಿಷ ಸಾರ್ವಭೌಮ, ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ-ಗೌರವಗಳಿಂದ ಭೂಷಿತರಾದ, ಕನ್ನಡದ ವಿದ್ವತ್ ಪರಂಪರೆಯನ್ನು ಶ್ರೀಮಂತಗೊಳಿಸಿದ ವಿದ್ವತ್ಮಣಿ.
ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವ ಮಹತ್ತಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾಕೇಂದ್ರ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಸ್ವಾಮಿ ಸಿದ್ದೇಶ್ವರಾನಾಂದ ಸ್ವಾಮಿ ಅವರು ೧೯೨೫ರಲ್ಲಿ ಸ್ಥಾಪಿಸಿದ ಈ ಸಂಸ್ಥೆಗೆ ೧೯೩೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನೀಡಿದ ಅನುದಾನದಿಂದ ಸ್ವಂತಕಟ್ಟಡದ ಸ್ಥಾಪನೆ. ಸ್ವಾಮೀಜಿಗಳ ಪಾಲಿಗೆ ಪ್ರತಿಷ್ಠಿತ ವೇದಾಂತ ಅಧ್ಯಯನ ಕೇಂದ್ರವಾಗಿದ್ದ ಆಶ್ರಮ ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ. ರಾಷ್ಟ್ರಕವಿ ಕುವೆಂಪು ಅವರು ಬಾಲ್ಯದಲ್ಲಿ ಇಲ್ಲಿಯೇ ಕಲಿತದ್ದು ವಿಶೇಷ. ಸಂಸ್ಥೆಯು ವಿವೇಕ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿವರ್ಷ ೩೫೦ ರಿಂದ ೫೦೦ ವಿದ್ಯಾರ್ಥಿಗಳು ಶಿಕ್ಷಿತರಾಗುತ್ತಿರುವುದು ಮಹತ್ವದ ಸಾಧನೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು ೯ ಶಾಲೆಗಳನ್ನು ನಡೆಸುತ್ತಿರುವ ಎಲ್ಲೆಡೆ ಮಕ್ಕಳಲ್ಲಿ ಬದುಕಿನ ನೈತಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ. ಸಂಸ್ಥೆಯಲ್ಲಿ ಕಲಿತ ಮಕ್ಕಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು ಶಿಸ್ತು-ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ. ಸಂಸ್ಥೆಯು ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಶತಮಾನದ ಅಂಚಿನಲ್ಲಿದೆ.
ಪತ್ರಿಕೋದ್ಯಮದಲ್ಲಿ ‘ಕರೆಂಟ್ ಮಾತು’ನಿಂದಲೇ ಹೆಸರಾದ ಹಿರಿಯ ವಿಷಯತಜ್ಞ ಪತ್ರಕರ್ತರು ಎಚ್.ಆರ್.ಶ್ರೀಶಾ, ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೫೧ರಲ್ಲಿ ಜನಿಸಿದ ಶ್ರೀಶ ಕನ್ನಡ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು. ಖಾದ್ರಿ ಶಾಮಣ್ಣರ ಗರಡಿಯಲ್ಲಿ ಪಳಗಿದ ಪತ್ರಕರ್ತರು, ಹಾಸನದ ಜನಮಿತ್ರ, ಸಂಯುಕ್ತಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕದಲ್ಲಿ ಪತ್ರಿಕಾಸೇವೆ. ವಿಷಯತಜ್ಞರು ವಿರಳವಾಗುತ್ತಿರುವ ಪತ್ರಿಕಾರಂಗದಲ್ಲಿ ಎಚ್.ಆರ್.ಶ್ರೀಶ ಅವರದ್ದು ವಿಶೇಷ ಹೆಸರು. ವಿದ್ಯುತ್ ಕ್ಷೇತ್ರದ ಬಗ್ಗೆ ಅವರದ್ದು ತಳಸ್ಪರ್ಶಿ ಅಧ್ಯಯನ, ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೇ ಸರಳ, ಪದಗಳಂತೆ ಮಾತು ಮೃದು. ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳು ಬರೆದ ಲೇಖನಸರಮಾಲೆಗೆ ಲೆಕ್ಕವಿಲ್ಲ. ಸರ್ಕಾರದ ಕಣ್ಣಿರೆಸಿದವರು. ಜನಪ್ರಿಯ ಕರೆಂಟ್ ಮಾತು’ ಅಂಕಣಕಾರರು. ಕೆಇಆರ್ಸಿ, ಕೆಪಿಸಿಎಲ್ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು. ವಾದ-ವಿವಾದಗಳಲ್ಲದೇ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಅಪ್ಪಟ ಪತ್ರಿಕಾಜೀವಿ.
ಶ್ರೀ ಶಂಕರ ಬುಚಡಿ
ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲಪರವಾದ ಹೋರಾಟಗಳಿಂದ ಮರಾಠಿ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಿದ ವೀರಕನ್ನಡಿಗ ಶಂಕರ ಮಾಣಿಕಾ ಬುಚಡಿ. (೧೯೬೦-೭೦ರ ದಶಕದಲ್ಲಿ ಬೆಳಗಾವಿಯಲ್ಲಿದ್ದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಕನ್ನಡದ ಉಳಿವಿಗಾಗಿ ಕನ್ನಡ ಗೆಳೆಯರ ಬಳಗ ಸ್ಥಾಪಿಸಿ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡ ಸೇವೆಗೈದವರು. ಕನ್ನಡ ವಾಚಾನಾಲಯ ತೆರೆದವರು, ರಸ್ತೆನಾಮಫಲಕಗಳನ್ನು ಕನ್ನಡಜಾರಿಗೆ ಶ್ರಮಿಸಿದವರು, ಕನ್ನಡ ಚಳವಳಿಗಾರರ ಸಂಘದ ಮೂಲಕ ಕನ್ನಡದಕಹಳೆ ಮೊಳಗಿಸಿದವರು. ಮಹಾಜನ್ ವರದಿ ಜಾರಿಗಾಗಿ ಹೋರಾಡಿದ ಶಂಕರ್ ಬುಚಡಿ ನೇಕಾರರ ಸಂಘದ ಮೂಲಕ ಸಮುದಾಯದ ಸೇವೆಗೈದವರು. ಗಾಯಿತ್ರಿ ಅರ್ಬನ್ ಸೊಸೈಟಿ ತೆರೆದು ಜನಾಂಗದ ಆರ್ಥಿಕಾಭಿವೃದ್ಧಿಗೆ ನೀರೆರೆದವರು. ಹಲವು ಕೃತಿಗಳ ಲೇಖಕರು, ಹವ್ಯಾಸಿ ಬರಹಗಾರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರದಾಸಿಮಯ್ಯ ಅಧ್ಯಯನ ಪೀಠದ ಸಂಪಾದಕ ಮಂಡಲ ಸದಸ್ಯರಾಗಿ ಗುರುತರ ಸೇವೆಗೈದವರು. ಜೈಲುವಾಸ ಅನುಭವಿಸಿದ ಅಪ್ರತಿಮ ಚಳವಳಿಗಾರರು. ದಶಕಗಳ ಕಾಲ ಕನ್ನಡದ ಗೇಯತೆ ಮೆರೆಯಲು ಅಹರ್ನಿಶಿ ದುಡಿದ ಬುಚಡಿ ಅವರು ಕನ್ನಡನುಡಿ ಶ್ರೀ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ನೇಕಾರರತ್ನ ಪ್ರಶಸ್ತಿ, ಪ್ರತಿಭಾರತ್ನ ಪ್ರಶಸ್ತಿ ಮುಂತಾದ ಗೌರವಗಳಿಂದ ಭೂಷಿತರು. ೮೦ರ ಇಳಿವಯಸ್ಸಿನಲ್ಲೂ ಕನ್ನಡಸೇವೆಗೆ ಮುಂದಾಗುವ ಅಪ್ಪಟ ಕನ್ನಡಪ್ರೇಮಿ.
ಬದುಕಿನ ಮಾಟದಲ್ಲಿ ಬಯಲಾಟವನ್ನೇ ಜೀವಭಾವವಾಗಿಸಿಕೊಂಡವರು ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ, ಕಲಾರಂಗದ ನಾದಸೇವಕರು, ಹಳ್ಳಿಗರ ಮನಗೆದ್ದ ದೊಡ್ಡಾಟದ ಹಾಮ್ಮೋನಿಯಂ ವಾದಕ, ಪಾತ್ರಧಾರಿ, ಸ್ವರಸಂಯೋಜಕ, ಶಂಕರಪ್ಪ ಕೊಪ್ಪಳ ಜಿಲ್ಲೆಯ ಪ್ರತಿಭೆ, ಕೊಪ್ಪಳ ತಾಲ್ಲೂಕಿನ ಸಾ.ಮೋರನಾಳದ ಉಪ್ಪಿನ ಬೆಟಗೇರಿ ಹುಟ್ಟೂರು. ನಾದದೊಲುಮೆ ಅಪ್ಪನಿಂದ ಬಂದ ಬಳುವಳಿ, ಕಲಾಪ್ರೇಮ ಊರುಕೇರಿ ಬೆಸೆದ ಭಾವ. ಹರೆಯದಲ್ಲಿ ಮನವೇರಿದ ನಾದದ ಗುಂಗು. ೨೭ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಕಲಾರಂಗಪ್ರವೇಶ. ಪಕ್ಕವಾದ್ಯಪಟುವಾಗಿ ಕಲಾಸೇವೆಗೈಯುತ್ತಲೇ ಬಣ್ಣ ಹಚ್ಚಿ ಕಲಾವಿದನಾದ ಹಿರಿಮೆ, ಬಯಲಾಟಗಳ ನಿರ್ದೇಶಕನಾಗಿಯೂ ಮೇಲೆ ಬರೋಬ್ಬರಿ ೧೮೦ ಬಯಲಾಟಗಳಿಗೆ ಸ್ವರಸಂಯೋಜನೆ ಮಾಡಿದ ಹೆಗ್ಗಳಿಕೆ, ಕೊಪ್ಪಳ ಜಿಲ್ಲೆಯಿಂದ ಹಿಡಿದು ನಾಡಿನ ಹಲವೆಡೆ ಬಯಲಾಟಗಳಿಗೆ ನಾದದ ರಂಗುತುಂಗ ಸೈ ಎನಿಸಿಕೊಂಡು ಕಲಾನಿಪುಣ, ೪೨ ವರ್ಷಗಳಿಂದ ಅವಿರತವಾಗಿ ಕಲಾಸೇವಾನಿರತರಾಗಿರುವ ಶಂಕರಪ್ಪಗೆ ಬದುಕೇ ಬಯಲಾಟ, ಬಯಲಾಟವೇ ಬದುಕು. ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ಶಂಕರಪ್ಪ ಹಳ್ಳಿಗಾಡಿನ ಕಲಾವಂತಿಕೆ, ಸಮರ್ಪಣಾಭಾವ ಮತ್ತು ನಿಸ್ಪೃಹ ಕಲಾಸೇವೆಯ ನಿಜಪ್ರತೀಕ.
ಜಾನಪದವನ್ನೇ ಬದುಕಿನ ಪಥವಾಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಸಾಧಕಿ ಸಾವಿತ್ರಿ ಶಿವಪ್ಪ ಪೂಜಾರ, ಮಹಿಳಾಪರ ಹೋರಾಟಗಾರ್ತಿ, ಗೀಗೀಪದ ಹಾಡುಗಾರ್ತಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ೧೯೬೧ರಲ್ಲಿ ಜನಿಸಿದ ಸಾವಿತ್ರಿ ಪೂಜಾರ್ ಬಡಕುಟುಂಬದ ಕುಡಿ, ಸಾಮಾಜಿಕವಾಗಿ ಹಿಂದುಳಿದ ಮನೆತನ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಈ ಹಂತದಲ್ಲಿ ಸಾವಿತ್ರಿ ಅವರ ಕೈಹಿಡಿದು ನಡೆಸಿದ್ದು ಜಾನಪದ. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿದ ಗೀಗೀಪದ ಹಾಡುಗಾರಿಕೆಯನ್ನೇ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡ ಕಲಾವಿದೆ. ಜಾತ್ರೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ತತ್ವಪದಗಳ ಗಾಯನದಿಂದ ಕಲಾರಸಿಕರ ಮನಗೆದ್ದ ಸಾವಿತ್ರಿ ಪೂಜಾ ಜಾನಪದ ಕೋಲಲೆಯೆಂದೆ ಜನಜನಿತರು. ಸರ್ಕಾರದ ಉತ್ಸವಗಳು ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ನಿರಂತರ ಕಲಾಪ್ರದರ್ಶನ, ನಾಲ್ಲೂವರೆ ದಶಕಗಳ ಅನನ್ಯ ಕಲಾಸೇವೆ, ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಯಾಗಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಿದವರು. ದೇವದಾಸಿ ಪದ್ಧತಿ ವಿರುದ್ಧ ಸಮರ ಸಾರಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಸಾವಿತ್ರಿ ಪೂಜಾರ ಅವರದ್ದು. ಫಕೀರವ್ವ ಗುಡಿಸಾಗರ ಪ್ರಶಸ್ತಿ, ಬಾಬು ಜಗಜೀವನರಾಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಸಾವಿತ್ರಿ ಪೂಜಾರ ಜಾನಪದ ಲೋಕದ ಮಂದಾರ ಪುಷ್ಪ.
ಯಕ್ಷರಂಗಭೂಮಿಯಲ್ಲಿ ಕಲಾವಿದನಾಗಿ ರಸಿಕರ ಮನರಂಜಿಸಿದ ಕಲಾಚೇತನ ಸರಪಾಡಿ ಅಶೋಕ ಶೆಟ್ಟಿ, ನಾಟ್ಯಗುರು, ಸಮರ್ಥ ಪಾತ್ರಧಾರಿ, ಯಕ್ಷಪ್ರಸಂಗಗಳ ರಚನಾಕಾರರು, ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರುನಲ್ಲಿ ೧೯೬೧ರಲ್ಲಿ ಜನಿಸಿದ ಅಶೋಕ ಶೆಟ್ಟಿ ಎಳವೆಯಿಂದಲೇ ಯಕ್ಷಪ್ರೇಮಿ, ಪ್ರೌಢಶಿಕ್ಷಣದವರೆಗಷ್ಟೇ ವ್ಯಾಸಂಗ, ಆನಂತರ ಕಲೆಯೇ ಜೀವನ, ಕಲೆಯೇ ಶಿಕ್ಷಣ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ, ಉತ್ತಮ ನೃತ್ಯಪಟು, ಅರ್ಜುನ, ದೇವೇಂದ್ರ, ರಕ್ತಬೀಜ, ಕೌಂಡ್ಲಕ, ಶತ್ರುಘ್ನ, ಇಂದ್ರಜಿತು ಮುಂತಾದವು ಅಶೋಕಶೆಟ್ಟಿ ಅವರ ಕಲಾಭಿವ್ಯಕ್ತಿಯ ಜನಪ್ರಿಯ ಪಾತ್ರಗಳು. ಕಟೀಲು ಮೇಳ, ಅಳದಂಗಡಿ ಮೇಳ, ಬಪ್ಪನಾಡು ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳ ಮುಂತಾದ ಮೇಳಗಳಲ್ಲಿ ಕಲಾವಿದ, ಸಂಚಾಲಕನಾಗಿ ಸಾರ್ಥಕ ಕಲಾಸೇವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಉಚಿತ ನಾಟ್ಯ ತರಬೇತಿ ನೀಡಿದ ಗುರು. ಸಾವಯವ ಕೃಷಿ ವಿಜಯ ಕುರಿತ ಆರು ಯಕ್ಷಗಾನ ಪ್ರಸಂಗಗಳ ರಚನೆ ಮತ್ತು ನಿರ್ದೇಶನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ. ಹತ್ತಾರು ಸಂಘಸಂಸ್ಥೆಗಳಲ್ಲಿ ನಿಸ್ವಾರ್ಥ ಕಾರ್ಯ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸೇರಿದಂತೆ ಹಲವು ಸನ್ಮಾನಗಳಿಂದ ಭೂಷಿತ ಯಕ್ಷಪ್ರತಿಭೆ.
ನಶಿಸುತ್ತಿರುವ ಕಿನ್ನಾಳ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಹಿರಿಯ ಕಲಾಚೇತನ ಸಣ್ಣರಂಗಪ್ಪ ಚಿತ್ರಗಾರ, ಕಲೆಯನ್ನೇ ಬದುಕಾಗಿಸಿಕೊಂಡ ವಿರಳ ಕಲಾವಿದರು. ಸಾಂಪ್ರದಾಯಿಕ ಮರದ ಕಲೆಯಾದ ಕಿನ್ನಾಳ ಕಲೆ ಬಲು ಪುರಾತನವಾದುದು. ಕಾಲಚಕ್ರದೊಟ್ಟಿಗೆ ನಶಿಸುತ್ತಿರುವ ಈ ಕಲಾಸಂತತಿಯ ದಿವ್ಯಕೊಂಡಿಯಂತಿರುವ ಸಣ್ಣರಂಗಪ್ಪ ಚಿತ್ರಗಾರ ಕೊಪ್ಪಳ ಜಿಲ್ಲೆಯ ದೇಸೀ ಪ್ರತಿಭೆ. ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಹುಟ್ಟೂರು. ಇಡೀ ಊರಿಗೆ ಊರೇ ತಿನ್ನಾಳಕಲೆಗೆ ಅರ್ಪಿತಗೊಂಡಿರುವುದು ವಿಶೇಷ. ತಲೆತಲಾಂತರದಿಂದ ಕಿನ್ನಾಳ ಕಲೆಯೆ ಕುಲಕಸುಬು. ಸಣ್ಣರಂಗಪ್ಪಗೆ ಅಪ್ಪನೇ ಕಲಾಗುರು. ಬದುಕಿಗಾಗಿ ಕಲಿತ ಕಲೆಯಿಂದಲೇ ಹೊಟ್ಟೆಪಾಡು. ಕಿನ್ನಾಳ ಆಟಿಕೆಗಳು ಮತ್ತು ಧಾರ್ಮಿಕ ವಿಗ್ರಹಗಳನ್ನು ತಯಾರಿಸುವುದೇ ನಿತ್ಯದ ಕಾಯಕ, ತರಹೇವಾರಿ ವಸ್ತುಗಳನ್ನು ತಯಾರಿಸಿ ಕಣ್ಣಿಗೆ ಹಬ್ಬವೆಂಬಂತೆ ತೋರ್ಗಾಣಿಸುವಲ್ಲಿ ಸಣ್ಣರಂಗಪ್ಪ ಎತ್ತಿದ ಕೈ. ಈ ಕಲಾಕಾರನ ಮೋಡಿಗೆ ತಲೆದೂಗದವರೇ ಇಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ದಶಕಗಳಿಂದಲೂ ಕಿನ್ನಾಳ ಕಲೆಯಲ್ಲಿ ಅನವರತ ನಿರತದ ಮಹತ್ಸಾಧನೆ. ಈ ನಿಸ್ಪೃಹ ಕಲಾಸೇವೆಗೆ ಸಂದ ಗೌರವಗಳು-ಪ್ರಶಸ್ತಿಗಳು ಬಲು ಅಲ್ಪವೇ. ಸದ್ಯ ನೇತ್ರದೋಷದಿಂದ ಆಟಿಕೆ ತಯಾರಿಸಲಾಗದ ಸಂಕಟದಲ್ಲಿ ಕಾಲಕಳೆಯುತ್ತಿರುವ, ಕಣ್ಣಿಗಿಂತಲೂ ಕಿನ್ನಾಳಕಲೆ ದೀರ್ಘಕಾಲ ಬಾಳಲೆಂಬುದೇ ಹಾರೈಸುವ ಸಣ್ಣರಂಗಪ್ಪ ಕಲೆಗೆ ಸಮರ್ಪಿತಗೊಂಡ ಜೀವಿ.
ಬಡತನದ ಬದುಕಿನಲ್ಲೂ ಸಮಷ್ಟಿ ಪ್ರಜ್ಞೆ ಮೆರೆದ ಅಪ್ಪಟ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ. ಹಳ್ಳಿಗಾಡಿನ ನಿಜ ಸೇವಕ, ಸಾವಿರಾರು ಗಿಡಗಳನ್ನು ಪೋಷಿಸಿದ ಸಮಾಜಮುಖಿ, ರಾಮನಗರ ಜಿಲ್ಲೆ ಕೂಟಗಲ್ ಹೋಬಳಿಯ ಅರೇಹಳ್ಳಿಯವರಾದ ನಿಂಗಣ್ಣ ವೃತ್ತಿಯಲ್ಲಿ ಕೂಲಿಕಾರ್ಮಿಕ, ಬಾಲ್ಯದಿಂದಲೂ ಪ್ರಕೃತಿಯ ಆರಾಧಕ, ಬಟಾಬಯಲಿನಂತಿದ್ದ ಅರೇಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದೇ ನಿತ್ಯಕಾಯಕ. ಆಲ, ಅರಚಿ, ಬೇವು, ಬಾಗೆ, ಹೊಂಗೆ, ಅತ್ತಿ ಮುಂತಾದ ಗಿಡಗಳನ್ನು ನೆಟ್ಟು ನಿತ್ಯ ನೀರೆರೆದು ಪೋಷಿಸಿ ಬೇಲಿ ಹಾಕಿ ಕಾವಲು ಕಾದು ಮರಗಳನ್ನಾಗಿ ಬೆಳೆಸಿದ ಪರಿಸರಪ್ರೇಮಿ, ಬರಗಾಲದಲ್ಲಿ ಮರಗಳಿಗೆ ನೀರುಣಿಸಲು ಪತ್ನಿಯ ಮಾಂಗಲ್ಯ ಮಾರಲು ಹೋಗಿದ್ದ ತ್ಯಾಗಮಯಿ, ಊರವರ ಕುಹಕಮಾತು, ಅಧಿಕಾರಿಗಳ ಕಿರುಕುಳದ ಮಧ್ಯೆಯೂ ೩೦ ವರ್ಷಗಳಲ್ಲಿ ಬರೋಬ್ಬರಿ ೧೫೦೦ ಮರಗಳನ್ನು ಬೆಳೆಸಿದ ಪರಿಸರ ರಕ್ಷಕ. ಗಿಡಮರಗಳ ಬಗ್ಗೆ ನಿಷ್ಕಲ್ಮಶ ಪ್ರೀತಿ, ನಿಷ್ಕಾಮ ಸೇವೆ. ೬೭ರ ಇಳಿವಯಸ್ಸಿನಲ್ಲೂ ತವರೂರಿನ ಕೆರೆಯ ಪಕ್ಕ ನೂರು ಗಿಡನೆಟ್ಟು ನಿತ್ಯ ಆರೈಕೆ ಮಾಡುತ್ತಿರುವ ನಿಂಗಣ್ಣ ನಿಜ ಅರ್ಥದಲ್ಲಿ ಸಾಲುಮರದ ನಿಂಗಣ್ಣ. ಪರಿಸರಕಾಳಜಿಗೆ ರಾಜ್ಯಪಾಲರ ಸನ್ಮಾನ, ರಾಜ್ಯ ಪರಿಸರ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರ. ಮರಗಳನ್ನು ಬೆಳೆಸಲು ದುಡಿದ ಕೂಲಿ ಹಣದ ಒಂದು ಭಾಗ ವ್ಯಯಿಸಿರುವ ನಿಂಗಣ್ಣ ನಮ್ಮ ನಡುವಿರುವ ನಿಜ ಮನುಷ್ಯ, ನಿಸ್ವಾರ್ಥ ಸೇವೆಗೊಂದು ಮಹಾಮಾದರಿ.
ಜಾನಪದ ಕ್ಷೇತ್ರದಲ್ಲಿ ಗಾಯಕರಾಗಿ ಹೆಜ್ಜೆಗುರುತು ಮೂಡಿಸಿದ ಗ್ರಾಮೀಣ ಪ್ರತಿಭೆ ಸಹದೇವಪ್ಪ ಈರಪ್ಪ ನಡಿಗೇರ್, ಹೊಸ ತಲೆಮಾರಿಗೆ ಕಲೆ ಕಲಿಸಿದ ಜಾನಪದ ಗುರು, ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ೧೯೫೭ರಲ್ಲಿ ಜನಿಸಿದ ಸಹದೇವಪ್ಪ ಬಡತನದಲ್ಲೆ ಬೆಳೆದವರು. ಎಸ್ಎಸ್ಎಲ್ಸಿವರೆಗಷ್ಟೇ ಓದಿದವರು. ಬಾಲ್ಯದಲ್ಲೇ ಸೆಳೆದ ಜನಪದ ಹಾಡುಗಾರಿಕೆಗೆ ಮನಸೋತವರು, ಹಿರಿಯ ಕಲಾವಿದರಿಂದ ಜಾನಪದದ ಹಲವು ಬಗೆಯ ಗಾಯನದ ಅಭ್ಯಾಸ, ಜಾನಪದ ಗೀತೆ, ಭಾವಗೀತೆ, ಗೀಗೀಪದ, ಲಾವಣಿಪದಗಳನ್ನು ಹಾಡುವುದರಲ್ಲಿ ನಿಷ್ಣಾತರು. ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ವಿಶೇಷ ಪರಿಶ್ರಮ. ಹಳ್ಳಿಹಳ್ಳಿಗೆ ತೆರಳಿ ತತ್ವಪದಗಾಯನ ಉಣಬಡಿಸಿದ ಕಲಾವಿದರು, ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸಾವಿರಾರು ಮಕ್ಕಳಿಗೆ ಜಾನಪದ ಗಾಯನದ ಕಲೆಗಾರಿಕೆಯನ್ನು ಧಾರೆ ಎರೆದ ಕಲಾಗುರು. ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ೪೬ ವರ್ಷಗಆಂದಲೂ ಕಲಾಸೇವೆಯಲ್ಲಿ ತೊಡಗಿರುವ ಸಹದೇವಪ್ಪ ಕಲೆಯೇ ಉಸಿರು. ಕಲೆ ಉಳಿಸುವುದೇ ಬದುಕಿನ ಹೆಗ್ಗುರಿ. ಹಲವು ಸಂಘಸಂಸ್ಥೆಗಳಿಂದ ಸನ್ಮಾನಿತರು. ಈಗಲೂ ಕಲಾಕೈಂಕರ್ಯದಲ್ಲಿ ತನ್ನಯವಾಗಿರುವ ಕಲಾನಿಷ್ಠ ದೇಸಿ ಪ್ರತಿಭೆ.
ವಿದೇಶದಲ್ಲಿ ಕನ್ನಡದ ಕಂಪು ಹರಿಸಿ ಕರುನಾಡಿನ ಕೀರ್ತಿ ಬೆಳಗಿದವರು ರಾಜ್ಕುಮಾರ್, ಬೆಹರಿನ್ ಕನ್ನಡ ಸಂಘದ ಆದ್ಯ ಪ್ರವರ್ತಕರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ರೂವಾರಿ, ಉಡುಪಿ ಜಿಲ್ಲೆ ಅಂಬಲಪಾಡಿಯಲ್ಲಿ ೧೯೯೨ರ ಜನವರಿಯಲ್ಲಿ ಜನಿಸಿದ ರಾಜ್ಕುಮಾರ್ ಬದುಕು ಅರಸಿ ದ್ವೀಪ ರಾಷ್ಟ್ರ ಬೆಹರಿನ್ಗೆ ಗುಳೆ ಹೋದವರು. ವೃತ್ತಿಯಲ್ಲಿ ಉದ್ಯಮಿ, ಪ್ರವೃತ್ತಿಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಾರಕ. ನಾಲ್ಕು ದಶಕಗಳಿಂದಲೂ ಬೆಹರಿನ್ನಲ್ಲಿ ನೆಲೆನಿಂತಿರುವ ರಾಜ್ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಹರಿನ್ ಕನ್ನಡ ಸಂಘವನ್ನು ಹತ್ತು ವರ್ಷಗಳಿಗೂ ಮಿಗಿಲು ಮುನ್ನಡೆಸಿದವರು. ಸಂಘಕ್ಕೊಂದು ಸುಸಜ್ಜಿತ ಕನ್ನಡಭವನ ನಿರ್ಮಾಣಕ್ಕೆ ಕಾರಣರಾದವರು. ವಿದೇಶಿ ನೆಲದಲ್ಲಿ ಎರಡು ಬಾರಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ ಹೆಗ್ಗಳಿಕೆ, ಆಳ್ವಾಸ್ ನುಡಿಸಿರಿ ಕಾರ್ಯಕ್ರಮ, ಅಂಧರ ಸಾಂಸ್ಕೃತಿಕ ಕಾರ್ಯಕ್ರಮ, ಪುನೀತ್ನಮನ ಮುಂತಾದ ಕನ್ನಡತನದ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿದವರು. ಬೆಹರೈನ್ ಬಿಲ್ವಾಸ್ ಸಂಸ್ಥಾಪಕ, ಐದು ಬಾಲ ಅಧ್ಯಕ್ಷರಾಗಿ ಸಮುದಾಯದ ಸೇವೆಗೈದವರು. ಧಾರ್ಮಿಕ, ಸಾಹಿತ್ಯಕ, ಜಾನಪದ ಮತ್ತು ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿದ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದ ನೈಜ ಭಾಷಾಪ್ರತಿನಿಧಿ, ಮಾದರಿ ಸಮಾಜಸೇವಕರು.
ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಬೆಳಗಿದ ಸಾಧಕ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ರತ್ನಾಕರ ಅಣವೇಕರ್, ಏಷ್ಯನ್ ಕ್ರೀಡಾಕೂಟದ ಪದಕವಿಜೇತ ಈಜುಪಟು, ಬೆಳಗಾವಿ ಮೂಲದ ರಾಘವೇಂದ್ರ ರತ್ನಾಕರ ಬಾಲ್ಯದಲ್ಲೇ ಅಂಗವೈಕಲ್ಯಕ್ಕೊಳಗಾಗಿ ನಡೆದಾಡುವ ಭಾಗ್ಯ ಕಳೆದುಕೊಂಡರೂ ಏನಾದರೂ ಸಾಧಿಸುವ ಹುಮ್ಮಸ್ಸಿನಿಂದ ನೀರಿಗಿಳಿದವರು. ಈಜಿನಾಸಕ್ತಿಯನ್ನೇ ಸಾಧನೆಯ ಗಮ್ಯವಾಗಿಸಿಕೊಂಡವರು. ಕೋಚ್ ಉಮೇಶ್ ಕಲಘಟಗಿ ಅವರ ಗರಡಿಯಲ್ಲಿ ಈಜು ಪಟ್ಟುಗಳನ್ನು ಕರಗತ ಮಾಡಿಕೊಂಡು ಬೆಳಗಾವಿ ಈಜುಗಾರರ ಕ್ಲಬ್ ಪ್ರತಿನಿಧಿಯಾಗಿ ಕ್ರೀಡಾರಂಗಪ್ರವೇಶ. ೧೬ನೇ ವಯಸ್ಸಿಗೆ ೨೦೦೩ರಲ್ಲಿ ಹಾಂಗ್ಕಾಂಗ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂರು ಬಿಚ್ಚಿ, ಮೂರು ಕಂಚಿನ ಪದಕಗಳನ್ನು ಗೆದ್ದ ಬೆನ್ನಲ್ಲೆ ಕೌಲಲಾಂಪುರದಲ್ಲಿ ೨ ಕಂಚಿನ ಪದಕ, ೨೦೦೭ರಲ್ಲಿ ತೈವಾನ್ನಲ್ಲಿ ನಡೆದ ಅಂಗವಿಕಲರ ವಿಶ್ವ ಕ್ರೀಡಾಕೂಟದಲ್ಲೂ ೨ ಬೆಟ್ಟ, ೨ ಕಂಚಿನ ಪದಕಗಳ ಭೇಟಿ, ಮುಂದಿನದ್ದು ಯಶಸ್ವಿ ಕ್ರೀಡಾಯಾನ, ಪ್ಯಾರಾ ಏಷ್ಯನ್ ಕ್ರೀಡಾಕೂಟವನ್ನೊಳಗೊಂಡಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಐದು ಜನ್ಮ ೧೨ ಬೆಟ್ಟ, ೧೧ ಕಂಚು ಸೇರಿ ೨೮ ಪದಕ, ರಾಷ್ಟ್ರೀಯ ಮಟ್ಟದಲ್ಲಿ ೫೪ ಚಿನ್ನ ಸೇರಿ ೭೫ ಪದಕಗಳನ್ನು ಬಾಚಿಕೊಂಡಿರುವ, ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮನಸ್ಸಿದ್ದರೆ ಮಾರ್ಗವುಂಟೆಂದು ನಿರೂಪಿಸಿರುವ ಸಾಧಕ.
ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟನಾಗಿ ವಿಶೇಷ ಛಾಪೊತ್ತಿದ ರಂಗಪ್ರತಿಭೆ ರಾಚಯ್ಯ ರುದ್ರಯ್ಯ ಸಾಲಿಮಠ, ನಟ, ನಿರ್ದೇಶಕ, ಗಾಯಕ, ನಾಟ್ಯಗಾರನಾಗಿ ಸೇವೆಗೈದ ಸಾಧಕರು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ೧೯೩೮ರಲ್ಲಿ ಜನಿಸಿದ ರಾಚಯ್ಯ ಸಾಲಿಮಠ ಬಾಲ್ಯದಲ್ಲೇ ರಂಗಭೂಮಿಗೆ ಆಕರ್ಷಿತರಾದವರು. ಶಾಲಾದಿನಗಳಲ್ಲೆ ಮನಸ್ಸಿಲ್ಲದ ಮದುವೆ, ಬ್ಲಾಕ್ ಮಾರ್ಕೆಟ್, ವಶಿಷ್ಟ ವಿಶ್ವಾಮಿತ್ರರ ಸಂವಾದ ನಾಟಕದಲ್ಲಿ ಪಾತ್ರ ವಹಿಸಿ, ದೇಶಭಕ್ತಿಗೀತೆ, ಜನಪದ ಗೀತೆ ಮತ್ತು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಗಮನಸೆಳೆದ ಪ್ರತಿಭೆ. ಬಣ್ಣದ ಈ ನಂಟು ಅಪ್ಪನಿಂದ ಬಂದ ಬಳುವಳಿ. ೭ನೇ ತರಗತಿವರೆಗಷ್ಟೇ ಓದಿ ಆನಂತರ ಕಲೆಗೆ ಸಂಪೂರ್ಣ ಸಮರ್ಪಿತಗೊಂಡ ಬದುಕು. ಮಾತಂಗತಕನ್ಯೆ, ಪ್ರೇಮಬಂಧನ, ಸೌಭಾಗ್ಯಲಕ್ಷ್ಮಿ ಅತ್ತಿಅಳಿಯ, ರತ್ನಮಾಂಗಲ್ಯ, ವಿಷಮ ಸಂಸಾರ, ಹಳ್ಳಿಯಿಂದ ದಿಲ್ಲಿಯವರೆಗೆ ಮು೦ತಾದ ನಾಟಕಗಳಲ್ಲಿ ಬಹುಬಗೆಯ ಪಾತ್ರ, ಹಾಸ್ಯಗಾರನಾಗಿ ಜನಮಾನಸದಲ್ಲಿ ಜನಜನಿತ. ನಾಟ್ಯ ಕಲೆಯನ್ನೂ ರೂಢಿಸಿಕೊಂಡು ಶ್ರೀಮಹಾಲಿಂಗೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲೂ ಕಲಾಪ್ರದರ್ಶನ ನೀಡಿದ ಕಲಾವಿದರು. ಹಲವು ನಾಟಕಗಳ ನಿರ್ದೇಶಕರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ರಾಚಯ್ಯ ಸಾಲಿಮಠ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ರಂಗಸೇವಾನಿರತರು.
ಪ್ರೊ. ಕೃಷ್ಣೇಗೌಡ
ಕನ್ನಡ ಸಾಹಿತ್ಯಲೋಕದಲ್ಲಿ ಪ್ರಾಧ್ಯಾಪಕ, ಚಿಂತಕ, ವಾಲ್ಮೀ, ಮಾತಿನಮಲ್ಲರಾಗಿ ಹೆಸರಾಗಿರುವ ಪ್ರೊ. ಕೃಷ್ಣೇಗೌಡರದ್ದು ವಿಶಿಷ್ಟ ಸಾಧನೆ. ಅಸ್ಖಲಿತ ಮಾತುಗಾರಿಕೆಯಿಂದ ದೇಶ-ವಿದೇಶಗಳಲ್ಲಿ ಕನ್ನಡ ಭಾಷೆಯ ಸೌಂದರ್ಯವನ್ನು ಬೆಳಗಿದ ಕನ್ನಡಬಂಧು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕನಗಮನಮರಡಿ ಗ್ರಾಮದಲ್ಲಿ ೧೯೫೮ರಲ್ಲಿ ಜನಿಸಿದ ಕೃಷ್ಣೇಗೌಡರು ಕೃಷಿಕ ಕುಟುಂಬದ ಕುಡಿ. ಹುಟ್ಟೂರಿನಲ್ಲಿ ಪ್ರೌಢಶಿಕ್ಷಣ, ಮೈಸೂರಿನಲ್ಲಿ ಉನ್ನತ ಶಿಕ್ಷಣ. ಮೈಸೂರು ವಿವಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಸೆಂಟ್ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (೧೯೮೩ರಲ್ಲಿ ವೃತ್ತಿಬದುಕು ಆರಂಭಿಸಿದ ಗೌಡರು ಪ್ರಾಂಶುಪಾಲರಾಗಿ ನಿವೃತ್ತರಾದವರು. ಬಾಲ್ಯದಿಂದಲೂ ರಂಗಕಲೆ, ಜನಪದಕಲೆಗಳ ಬಗ್ಗೆ ಆಸಕ್ತರಾಗಿದ್ದ ಕೃಷ್ಣಗೌಡರು ಗ್ರಾಮ್ಯ ಭಾಷೆ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲವರು. ನಿರರ್ಗಳವಾಗಿ, ಸುಸ್ಪಷ್ಟವಾಗಿ ಮಾತನಾಡುವ ಅಪೂರ್ವ ಕಲೆಗಾರಿಕೆ ಅವರದ್ದು. ಹಾಗಾಗಿ ವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಅವರು ಅಪ್ಪಟ ಹಾಸ್ಯಗಾರ. ನಗೆಕೂಟಗಳಲ್ಲಿ ಕೃಷ್ಣೇಗೌಡರು ಮಾತಿಗೆ ನಿಂತರೆ ಸಾಕು ನಗುವಿನ ಅಲೆಗಳ ಭೋರ್ಗರೆತ ಖಚಿತ, ದೇಶಾದ್ಯಂತ ಹಾಗೂ ೫೦ಕ್ಕೂ ಹೆಚ್ಚು ವಿದೇಶಗಳಲ್ಲಿ ನಗೆಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿರುವ ಕೃಷ್ಣಗೌಡರು ಮಾತಿನಮಲ್ಲರೆಂದೇ ಸುವಿಖ್ಯಾತಿ, ಕವಣೆಕಲ್ಲು, ಕೃಷ್ಣವಿನೋದ ಮತ್ತು ಜಲದ ಕಣ್ಣು ಕೃತಿಗಳ ಲೇಖಕರೂ ಸಹ. ಬದುಕಿನ ಪುಟ್ಟಪುಟ್ಟ ಅನುಭವಗಳನ್ನು ಆಸ್ವಾದಿಸಬೇಕೆಂಬ ನಂಬಿಕೆಯ ಕೃಷ್ಣೇಗೌಡರ ಕನ್ನಡ ಭಾಷೆಯ ಬೆರಗು, ಮಾತಿನ ಬೆಡಗಿನ ಮೂರ್ತರೂಪ.
ಕರ್ನಾಟಕದ ನೃತ್ಯ ಕಲಾಕ್ಷೇತ್ರದಲ್ಲಿ ನೃತ್ಯಪಟು, ಗುರು, ಸಂಘಟಕರಾಗಿ ಹೆಗ್ಗುರುತಿನ ಸಾಧನೆ ದಾಖಲಿಸಿದವರು ಪಿ.ಕಮಲಾಕ್ಷ ಆಚಾರ್, ಬಹುಕಲಾ ಆಸಕ್ತಿಯ ಬಹುಮುಖ ಪ್ರತಿಭೆ, ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಪಡ್ಡಿರೆಯಲ್ಲಿ ೧೯೪೭ರಲ್ಲಿ ಜನಿಸಿದ ಕಮಲಾಕ್ಷ ಆಚಾರ್ ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಬಹುಕಲಾವಿದರು. ಕುಲಕಸುಬು ಬಡಗಿ ಕೆಲಸ ಮಾಡುತ್ತಲೇ ಎಸ್ಎಸ್ಎಲ್ಸಿ ಪೂರೈಸಿದ ಕಮಲಾಕ್ಷ ಅವರು ಚಿತ್ರಕಲೆ, ಛಾಯಾಗ್ರಹಣದಲ್ಲೂ ದುಡಿದವರು. ಪ್ರಾಥಮಿಕ ಶಾಲಾಶಿಕ್ಷಕನಾಗಿರುವಾಗ ನೃತ್ಯಕಲೆಯ ಮೋಹಕ್ಕೊಳಗಾಗಿ ಹಲವು ಗುರುಗಳ ಗರಡಿಯಲ್ಲಿ ನೃತ್ಯಪಟುವಾಗಿ ರೂಪಗೊಂಡ ಹೆಗ್ಗಳಿಕೆ. ೧೯೭೮ರಲ್ಲಿ ನೃತ್ಯನಿಕೇತನ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ, ಅನೇಕ ಪ್ರತಿಭಾವಂತ ನೃತ್ಯಪಟುಗಳನ್ನು ಕ್ಷೇತ್ರಕ್ಕೆ ಕೊಟ್ಟ ಹಿರಿಮೆ, ಸಾವಿರಾರು ಕಲಾವಿದರನ್ನು ರೂಪಿಸಿದ ಗುರು. ಉತ್ತಮ ಶಿಕ್ಷಕನಾಗಿ ಗೌರವಿಸಲ್ಪಟ್ಟ ಸಂತೃಪ್ತಿ, ಬೆಳ್ತಂಗಡಿಯಲ್ಲಿ ದೇಶದ ಹೆಸರಾಂತ ನೃತ್ಯಗುರುಗಳ ಭರತನಾಟ್ಯ ಕಾರ್ಯಕ್ರಮವನ್ನು ಸಂಘಟಿಸಿ ಕಲಾರಸಧಾರೆ ಉಣಬಡಿಸಿದ ಕಮಲಾಕ್ಷ ಆಚಾರ್ ಸ್ವತಃ ನಡೆಸಿಕೊಟ್ಟ ಕಾರ್ಯಕ್ರಮಗಳು ಅಗಣಿತ. ಶಿಷ್ಯರನ್ನು ರಂಗಪ್ರವೇಶ ಮಾಡಿಸಿ ನೃತ್ಯಗಾರರಾಗಿಸುವಲ್ಲಿ ಸಾರ್ಥಕತೆ ಕಂಡ ಕಮಲಾಕ್ಷ ಆಚಾರ್ ಅವರು ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸಿಸಿರುವ ಬಹುಕಲಾಸಕ್ತರು, ನೃತ್ಯಕಲಾಸಂಸ್ಕಾರರತ್ನ, ನೃತ್ಯಸೌರಭ, ನೃತ್ಯನಿಧಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಸತ್ಪಾತ್ರರು.
ಪರಂಪರೆಯ ಪ್ರತೀಕವಾದ ರಥಗಳ ನಿರ್ಮಾಣದಲ್ಲಿ ಹೊಸ ಆಯಾಮ ಸೃಷ್ಟಿಸಿದ ವಿಶಿಷ್ಟ ರಥಶಿಲ್ಪಿ ಪರಶುರಾಮ್ ಪವಾರ್, ದೇಶದ ಮೊಟ್ಟಮೊದಲ ಕಬ್ಬಿಣದ ರಥ ನಿರ್ಮಾಣಕಾರ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ೧೯೬೧ರಲ್ಲಿ ಜನಿಸಿದ ಪರಶುರಾಮ್ ಪವಾರ್ ಅವರದ್ದು ಕಮ್ಮಾರಿಕೆ ಕುಟುಂಬ. ಕಿಟಕಿ, ಬಾಗಿಲುಗಳಿಗೆ ಸೀಮಿತವಾಗಿದ್ದ ಕುಲಕಸುಬು. ಪಿಯುಸಿವರೆಗೆ ಓದಿ ಬೆಳಗಾವಿಯ ಸಣ್ಣ ಕೈಗಾರಿಕೆಯ ವಿಸ್ತರಣಾ ಘಟಕದಲ್ಲಿ ತರಬೇತಿ ಪಡೆದ ಪರುಶರಾಮರ ಕಸುಬಿನ ದಿಕ್ಕು ಬದಲಿಸಿದವರು ಶಿಕ್ಷಕ ಮೋಕೇಶಿ. ಗುರುಗಳ ಸಲಹೆಯಂತೆ ಮೊದಲಬಾರಿಗೆ ಕಬ್ಬಿಣದ ರಥ ನಿರ್ಮಾಣಕ್ಕೆ ಮುಂದಡಿ. ಈ ವಿನೂತನ ಆವಿಷ್ಕಾರ ತಂದುಕೊಟ್ಟ ಯಶಸ್ಸು ಅಪಾರ. ದೇಶದಲ್ಲೇ ಏಕೈಕ ಕಬ್ಬಣದ ರಥಶಿಲ್ಪಿ ಎಂಬ ಹೆಗ್ಗಳಿಕೆ, ನರೇಂದ್ರ ಇಂಜಿನಿಯಲಿಂಗ್ ವರ್ಕ್ಸ್ ಮೂಲಕ ಅನೇಕ ಕಾರ್ಮಿಕರ ಜೀವನಾಧಾರ. ೨೫೦ಕ್ಕೂ ಹೆಚ್ಚು ಕಬ್ಬಿಣದ ರಥಗಳ ನಿರ್ಮಾಣಕಾರ. ದಕ್ಷಿಣ ಭಾರತದಾದ್ಯಂತ ವಿವಿಧ ದೇಗುಲಗಳಲ್ಲಿ ಸಂಚರಿಸುತ್ತಿರುವ ರಥಗಳಲ್ಲಿ ಪವಾರ್ ನಿರ್ಮಿತ ರಥಗಳದ್ದೇ ಸಿಂಹಪಾಲು, ಮುದ್ದೇಬಿಹಾಳ ತಾಲ್ಲೂಕಿನ ಧವಳಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿರುವ ೫೫ ಅಡಿ ಎತ್ತರದ ಮಹಾರಥ ಪವಾರ್ ಕಲಾವಂತಿಕೆಗೆ ಮೇರುಸಾಕ್ಷಿ. ಹತ್ತಾರು ಸಂಘಸಂಸ್ಥೆಗಳಿಂದ ಸನ್ಮಾನ. ವಿವಿಧ ಮಠಾಧೀಶರಿಂದ ಪ್ರಶಂಸೆಗೆ ಪಾತ್ರವಾಗಿರುವ ಪವಾರ್ ನಾಡಿನ ಹೆಮ್ಮೆಯ ರಥಶಿಲ್ಪಿ.
ಅನಾಥ ಮಕ್ಕಳ ಪುನರ್ವಸತಿಯ ಮಾನವೀಯ ಕಾರ್ಯದಲ್ಲಿ ಸಕ್ರಿಯವಾಗಿರುವ ವಿಶಿಷ್ಟ ಸೇವಾಕೇಂದ್ರ ನೆಲೆ ಫೌಂಡೇಶನ್, ಸಂಸ್ಕಾರ ಶಿಕ್ಷಣ ಮತ್ತು ವಸತಿ ಸೌಲಭ್ಯಧಾರಣೆಯ ಸಂಸ್ಥೆ. ಜೀವನದಲ್ಲಿ ಪೋಷಕರ ಪ್ರೀತಿ, ಅಕ್ಷರದ ಆಸರೆ ಮತ್ತು ಬದುಕಿನ ಭರವಸೆಗಳ ನೆಲೆಯೇ ಇಲ್ಲದವರಿಗೆ ಅಕ್ಷರ, ವಸತಿ ಮತ್ತು ವಾತ್ಸಲ್ಯದ ನೆಲೆ ಒದಗಿಸುವ ಉದ್ದೇಶದಿಂದ ೨೦೦೦ರಲ್ಲಿ ನರೇಂದ್ರ ಅವರಿಂದ ಸ್ಥಾಪಿತವಾದ ನೆಲೆ ಫೌಂಡೇಶನ್, ಎರಡು ದಶಕಗಳಿಂದಲೂ ತನ್ನ ಅನಾಥ ಮಕ್ಕಳ ಬದುಕನ್ನು ಹಸನಾಗಿಸುವ ಕೆಲಸದಲ್ಲಿ ಅವಿರತ ನಿರತವಾಗಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ಕಾರ್ಯಾರಂಭ ಮಾಡಿದ ಸಂಸ್ಥೆ ೨೦ ವರ್ಷಗಳಲ್ಲಿ ಬೆಂಗಳೂರಿನಲ್ಲಿನ ಐದು ಕೇಂದ್ರಗಳೂ ಸೇರಿದಂತೆ ರಾಜ್ಯದಲ್ಲಿ ಹತ್ತು ಘಟಕಗಳನ್ನು ಹೊಂದಿದೆ. ೨೮೯ ಅನಾಥ ಮಕ್ಕಳನ್ನು ಸಲುಹುತ್ತಿರುವ ನೆಲೆ ಫೌಂಡೇಶನ್ ಈ ವರ್ಷದಿಂದ ಮತ್ತೂ ೧೦೩ ಮಕ್ಕಳನ್ನು ತನ್ನ ಪಾಲನೆಯ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಸಾರ್ವಜನಿಕ ದೇಣಿಗೆ ಮತ್ತು ಉದಾರಿಗಳ ನೆರವಿನಲ್ಲಿ ಆರ್ಥಿಕವಾಗಿ ಹಿಂದುಳಿದ, ಅನಾಥ ಹಾಗೂ ಏಕಷೋಷಕ ಮಕ್ಕಳಿಗೆ ಆದ್ಯತೆ ಮೇರೆಗೆ ಉಚಿತವಾಗಿ ಸಂಸ್ಕಾರಯುತ ಶಿಕ್ಷಣ ಮತ್ತು ವಸತಿಯನ್ನು ನೀಡುತ್ತಿದೆ. ಆ ಮೂಲಕ ಅನಾಥ ಮಕ್ಕಳು ಸಮಾಜಘಾತುಕರಾಗಿ ಪರಿವರ್ತನೆ ಆಗದಂತೆ ತಡೆಯುವ ಸತ್ಕಾರ್ಯದಲ್ಲಿ ನೆಲೆ ಫೌಂಡೇಶನ್ ನಿರಂತರವಾಗಿ ಶ್ರಮಿಸುತ್ತಿದ್ದು ಅನಾಥ ಮಕ್ಕಳ ಪುನರ್ವಸತಿಯಲ್ಲಿ ಮಾದರಿಯಾಗಿದೆ.
ಅನಾಥರ ಬಾಳು ಬೆಳಗುವ ಸತ್ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯರ ಅಪರೂಪದ ಸಂಸ್ಥೆ ನಮ್ಮನೆ-ಸುಮ್ಮನೆ. ನಿರ್ಗತಿಕರ ಪಾಲಿಗೆ ಆಶ್ರಯಧಾತು, ಲೈಂಗಿಕ ಅಲ್ಪಸಂಖ್ಯಾತರಿಗೆ ರಕ್ಷಕ, ವಿಶ್ವದಲ್ಲೇ ಮೊದಲೆಂಬ ಹಿರಿಮೆಯ ಸೇವಾಸಂಸ್ಥೆ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರ ಬದುಕು ನಿಜಕ್ಕೂ ಘೋರ, ಜೀವನನಿರ್ವಹಣೆಗೆ ಅವರು ಪಡುವ ಪಾಡು ವರ್ಣಿಸಲಸದಳ. ಅಂತಹ ಶೋಷಿತ ಮಂಗಳಮುಖಿಯರು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸಲೆಂದು ಸ್ಥಾಪಿಸಿದ ವಿನೂತನ, ವಿಶ್ವದಲ್ಲೇ ಮೊದಲೆನ್ನಲಾದ ಸಂಸ್ಥೆ ‘ನಮ್ಮನೆ ಸುಮ್ಮನೆ’. ನಕ್ಷತ್ರ ಗೋಳ ಮತ್ತವರ ಸ್ನೇಹಿತರಾದ ಮಿಲನ, ಸೌಂದರ್ಯ, ರೇಷ್ಮಾ, ತನುಶ್ರೀ ಈ ಸಂಸ್ಥೆಯ ಸಂಸ್ಥಾಪಕರು. ಬ್ಯೂಟಿಪಾರ್ಲರ್ವೊಂದರನ್ನು ನಡೆಸುತ್ತಿರುವ ಈ ಐವರು ಆ ಕಸುಬಿನಲ್ಲಿ ಬರುವ ಹಣದ ಒಂದು ಭಾಗವನ್ನು ವ್ಯಯಿಸಿ ಈ ನಿರಾಶ್ರಿತರ ಕೇಂದ್ರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ಬೀದಿಬದಿಯಲ್ಲಿ ಸೂರಿಲ್ಲದೆ ಪಡಿಪಾಟಲು ಪಡುತ್ತಿರುವ ಅನಾಥರು, ನಿರ್ಗತಿಕರು, ಅಂಗವಿಕಲರು, ಬುದ್ಧಿಮಾಂದ್ಯರಿಗೆ ಜೀವನಕ್ಕೆ ನಮ್ಮನೆ ಸುಮ್ಮನೆ’ಯೇ ಆಸರೆ. ಉಚಿತ ಊಟ, ವಸತಿ ಮತ್ತು ವಿದ್ಯಾಭ್ಯಾಸ ಕಲ್ಪಿಸುತ್ತಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಚಾರ. ಗುಲ್ಬರ್ಗದವರಾದ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಈ ಐವರು ನಡೆಸುತ್ತಿರುವ ಈ ಸಂಸ್ಥೆ ೧೦೦ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಸರೆಯಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಮಂಗಳಮುಖಿಯರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದೆ. ಹೊಸ ಜೀವನ ಕಟ್ಟಿಕೊಳ್ಳಲು ಕೈಲಾದ ಸಹಾಯವನ್ನೂ ಮಾಡಿದ್ದು ಮಂಗಳಮುಖಿಯರನ್ನು ಕಡೆಗಣಿಸುವ ಸಮಾಜಕ್ಕೆ ತಮ್ಮದೇ ಸೇವೆಯ ಮೂಲಕ ಹೊಸ ಸಂದೇಶ ರವಾನಿಸಿರುವ ‘ನಮ್ಮನೆ ಸುಮ್ಮನೆ’ ಮಾದರಿ ಸೇವಾಕೇಂದ್ರ.
ಜನಪರ ಹೋರಾಟಗಳ ಮೂಲಕ ಸಮುದಾಯದ ಸೇವೆಗೈದ ಸಮಾಜಸೇವಕರು ಎಂ.ಎಸ್.ಕೋರಿಶೆಟ್ಟರ್, ಕನ್ನಡಪರ ಹೋರಾಟಗಾರ, ಸಮಾಜದ ಹಿತಕಾಯಲು ಜೈಲು ವಾಸ ಅನುಭವಿಸಿದ ಸಮಾಜಮುಖಿ, ಮಹಂತೇಶ ಶಿವರುದ್ರಪ್ಪ ಕೋರಿ ಶೆಟ್ಟರ್ ಹಾವೇರಿ ಜಿಲ್ಲೆಯವರು. ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರದಲ್ಲಿ ೧೯೫೪ರಲ್ಲಿ ಜನನ. ಬಿಜಾಪುರ, ಧಾರವಾಡ ಮತ್ತು ಹಾವೇರಿಯಲ್ಲಿ ಶಿಕ್ಷಣ, ಬಿ.ಎ.ಪದವೀಧರರು. ಕೃಷಿಕರು, ವ್ಯಾಪಾರಸ್ಥರು. ಬಾಲ್ಯದಿಂದಲೂ ಸಮಾಜಪ್ರೇಮಿ, ಅನ್ಯಾಯದ ವಿರುದ್ಧ ಹೋರಾಡುವ ಛಾತಿ, ಜನಸಂಕಟವನ್ನು ಅನುಭಾವಿಸುವ ಅಂತಃಕರಣಿ. ಹರೆಯದಲ್ಲೇ ಸಾಮಾಜಿಕ ಹೋರಾಟಕ್ಕೆ ಪ್ರವೇಶ, ಜೆ.ಪಿ.ಚಳವಳಿ, ತುಂಗಾ ನೀರಾವರಿ ಹೋರಾಟ, ರೈತಪರ ಹೋರಾಟ, ಹಾವೇರಿ ಜಿಲ್ಲಾ ರಚನೆಗಾಗಿ ನಡೆದ ಚಳವಳಿ, ಗೋಕಾಕ್ ಚಳವಳಿಗಳಲ್ಲಿ ಹೋರಾಡಿದ ದಿಟ್ಟತೆ, ಎರಡು ಬಾಲ ಕಾರಾಗೃಹವಾಸಿಯಾದರೂ ಅಂಜದ ಗಂಡೆದೆ. ನಾಲ್ಕು ಮುಕ್ಕಾಲು ದಶಕಗಳಿಂದಲೂ ಸಮಾಜಸೇವೆಯಲ್ಲಿ ಅನವರತ ನಿರತರು, ನೆಲ, ಜಲ, ಬಡವರ ಪರವಾಗಿ ಸಮರ್ಥವಾಗಿ ದನಿ ಎತ್ತಿದ ಹೆಗ್ಗಳಿಕೆ, ಶಿಗ್ಗಾಂವಿಯಲ್ಲಿ ನಡೆದ ೯ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮೈಸೂರಿನಲ್ಲಿ ನಡೆದ ೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮಾಜಸೇವಕ’ ಪ್ರಶಸ್ತಿ ಪುರಸ್ಕೃತರು. ಬದುಕನ್ನೇ ಸಮಾಜಸೇವೆಗೆ ಮುಡಿಪಿಟ್ಟಿರುವ ವಿರಳ ಜೀವಿ.
ವಿದೇಶದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಆಶ್ರಯದಾತರಾಗಿರುವ ಮೂಡಂಬೈಲ್ ರವಿ ಶೆಟ್ಟಿ ಹೃದಯವಂತ ಉದ್ಯಮಿ. ನಾನಾ ಬಗೆಯಲ್ಲಿ ಸೇವೆಗೈದ ಸಮಾಜಮುಖಿ, ದಕ್ಷಿಣಕನ್ನಡ ಜಿಲ್ಲೆ ಮೂಡಂಬೈಲ್ನವರಾದ ರವಿಶೆಟ್ಟಿ ಅವರು ಮೆಕಾನಿಕಲ್ ಇಂಜಿನಿಯರ್, ಎಂ.ಬಿ.ಎ ಪದವೀಧರರು. ದೂರದ ದೋಹಾ-ಕತಾರ್ನಲ್ಲಿ ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಬದುಕು ರೂಪಿಸಿಕೊಂಡವರು. ಹೋಟೆಲ್ ಉದ್ದಿಮೆದಾರರಾಗಿಯೂ ನೆಲೆನಿಂತವರು. ತಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾದವರು, ಜನೋಪಕಾರದಲ್ಲಿ ಸಾರ್ಥಕತೆ ಕಾಣುವ ಗುಣವಿಶೇಷ ಅವರದ್ದು. ಕತಾರ್ನ ಕರ್ನಾಟಕ ಸಂಘದ ಉಪಾಧ್ಯಕ್ಷ, ತುಳುಕೂಟದ ಅಧ್ಯಕ್ಷ ಹಾಗೂ ಬಂಟ್ಸ್ ಕತಾರ್ನ ಸ್ಥಾಪಕ ಅಧ್ಯಕ್ಷರಾಗಿ ಜನಮುಖಿ ಕಾರ್ಯಗಳನ್ನು ಕೈಗೊಂಡವರು. ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸಿದವರು. ಕೊರೋನಾ ಸಂದರ್ಭದಲ್ಲಿ ಅಶಕ್ತ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಆಹಾರದ ಕಿಟ್ಗಳ ವಿತರಣೆ, ಆರ್ಥಿಕ ನೆರವಿನ ಹಸ್ತ ಚಾಚಿದ ಉಪಕಾರಿ, ಕರ್ನಾಟಕದ ಮುಖ್ಯಮಂತ್ರಿಗಳ ನಿಧಿಗೆ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ ಉದಾರಿ. ನೆರೆಹಾವಳಿ ಸಂದರ್ಭದಲ್ಲಿ ಹದಿನೈದು ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಅರ್ಪಿಸಿದ ರವಿಶೆಟ್ಟಿ ಸಮಾಜದ ಋಣ ತೀರಿಸಲು ಸದಾ ಮುಂದು. ಅಮೆರಿಕಾದ ಕಿಂಗ್ಸ್ ಯೂನಿವರ್ಸಿಟಿಯ ಗೌರವ ಡಾಕ್ಟರೇಟ್, ಬದುಕಿನ ಹೆಗ್ಗುರಿ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ಈಗಲೂ ಕಲಾಕೈಂಕರ್ಯದಲ್ಲಿ ತನ್ಮಯವಾಗಿರುವ ಕಲಾನಿಷ್ಠ ದೇಸೀ ಪ್ರತಿಭೆ.
ಶ್ರೀ ಎಂ. ನಾರಾಯಣ
ಸಂಗೀತ ಕ್ಷೇತ್ರ ಕಂಡ ಪ್ರತಿಭಾವಂತ ಕೃತಿರಚನಕಾರರು ಎಂ.ನಾರಾಯಣ, ತುಳುಭಾಷೆಯಲ್ಲಿ ವರ್ಣ ಮತ್ತು ಕೃತಿಗಳನ್ನು ರಚಿಸಿದ ಮೊದಲಿಗರು. ಸಂಗೀತದ ಗುರು, ಅತ್ಯುತ್ತಮ ಗಾಯಕರು ಹಾಗೂ ಅಪರೂಪದ ೭೨ ಮೇಳ ಕರ್ತರಾಗಗಳ ಕೃತಿ ರಚನೆಕಾರರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ (೧೯೪೩ರಲ್ಲಿ ಜನಿಸಿದ ಸಂಗೀತ ವಿದ್ವಾನ್ ಎಂ. ನಾರಾಯಣ ಅವರಿಗೆ ಹೆಸರಾಂತ ವೇಣುವಾದನ ವಿದ್ವಾಂಸರಾಗಿದ್ದ ತಂದೆ ಎಂ.ಬಾಬು ಮೊದಲ ಗುರು. ಗೋಪಾಲಕೃಷ್ಣ ಅಯ್ಯರ್ ಅವರ ಬಳಿ ವಿಶೇಷ ಸ್ವರಾಭ್ಯಾಸ, ಮಂಗಳೂರು ಆಕಾಶವಾಣಿ ಕಲಾವಿದರಾಗಿ ಸಂಗೀತಕ್ಷೇತ್ರದಲ್ಲಿ ಸಾಧನಾಯಾನ ಆರಂಭ. ದೂರದರ್ಶನ ಕಲಾವಿದರಾಗಿ ಸ್ವರಪ್ರೇಮಿಗಳಿಗೆ ಚಿರಪರಿಚಿತರು. ಸುರತ್ಕಲ್ ಮತ್ತು ಮುಲ್ಕಿಯಲ್ಲಿ ಮೂರು ದಶಕಗಳಿಂದ ಸಾವಿರಾರು ಮಕ್ಕಳಿಗೆ ಸಂಗೀತ ಕಲಿಸಿದ ಮಹಾಗುರು, ಹೆಸರಾಂತ ಗಾಯನ-ಬೋಧನೆಯ ಜತೆಗೆ ಕೃತಿರಚನಕಾರರಾಗಿ ಹೆಗ್ಗುರುತು.
ಯಕ್ಷಗಾನ ಕ್ಷೇತ್ರ ಕಂಡ ಶ್ರೇಷ್ಠ ಕಲಾಕುಸುಮಗಳಲ್ಲಿ ಪ್ರಮುಖರು ಎಂ.ಎ. ನಾಯ್ಕ, ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿ. ಮೇಳಗಳ ಕೀರ್ತಿ ಬೆಳಗಿದ ಕಲಾವಿದರು. ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಂದಾರ್ತಿ ಗ್ರಾಮದಲ್ಲಿ ೧೯೫೨ ರಲ್ಲಿ ಜನಿಸಿದ ಎಂ.ಎ.ನಾಯ್ಕ ಅವರ ಮೂಲ ಹೆಸರು ಮಂದಾತಿ ಅಣ್ಣಪ್ಪ ಮರಕಾಲ, ಬಡತನದ ಬೇಗೆಗೆ ಆರನೇ ತರಗತಿಗೆ ಓದು ಸ್ಥಗಿತ. ಮಂದಾರ್ತಿ ಮೇಳದ ಚಂಡೆಯ ಶಬ್ದಕ್ಕೆ ಮನಸೋತು ಕಲಾರಂಗಪ್ರವೇಶ. ಹಿರಿಯ ಯಕ್ಷಗಾನ ಕಲಾವಿದ ಭಾಗವತ ನಾರಾಯಣ ಉದ್ದೂರರ ಶಿಷ್ಯರಾಗಿ ಪ್ರವರ್ಧಮಾನಕ್ಕೆ, ಸ್ತ್ರೀವೇಷಧಾರಿಯಾಗಿ ಜನಜನಿತ. ಸ್ತ್ರೀವೇಷಕ್ಕೆ ಬೇಕಾದ ಒನಪು, ವೈಯ್ಯಾರ, ಶರೀರ, ಶಾರೀರ, ಸ್ವರಭಾರಗಳ ಸರ್ವ ಅಂಗಗಳಲ್ಲಿ ಉತ್ಕರ್ಷ ಹೊಂದಿರುವ ವಿಶಿಷ್ಟ ಕಲಾವಿದರು. ಮೋಹಿನಿ, ಸೈರೇಂದ್ರಿ, ದಮಯಂತಿ, ದ್ರೌಪದಿ, ಚಂದ್ರಮತಿ, ಸೀತೆ, ದೇವಿ ಮುಂತಾದವು ನಾಯ್ಕರ ಜನಪ್ರಿಯ ಸ್ತ್ರೀಪಾತ್ರಗಳು, ಅಮೃತೇಶ್ವರಿ ಮೇಳ, ಶಿರಸಿ ಮಾರಿಕಾಂಬ ಮೇಳ, ಇಡಗುಂಜಿ ಮೇಳ, ಮಂದಾತಿ ಮೇಳ ಸೇರಿದಂತೆ ಹಲವು ಮೇಳಗಳಲ್ಲಿ ಒಟ್ಟು ೪೨ ವರ್ಷಗಳ ಸುದೀರ್ಘ ಕಾಲ ಕಲಾಸೇವೆಗೈದ ಹಿರಿಮೆ, ಜರ್ಮನಿ, ಪೋಲೆಂಡ್, ಸ್ವಿಜರ್ಲ್ಯಾಂಡ್, ಹಾಂಗಕಾಂಗ್ ಮುಂತಾದೆಡೆಯೂ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆಯ ಎಂ.ಎ.ನಾಯ್ಕ ಅವರು ಕಾಳಿಂಗನಾವಡ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಭೂಷಿತರಾದ ಕಲಾಚೇತನ.
ಕಾಯಕವೇ ಕೈಲಾಸ ಎಂಬ ದಿವ್ಯನಂಬಿಕೆಯಲ್ಲಿ ಬದುಕು ನಡೆಸಿ ಸಾರ್ಥಕತೆ ಕಂಡವರು ಮಲ್ಲಮ್ಮ ನಿಸ್ಪೃಹ ಸೇವೆಯಿಂದ ಗಮನಸೆಳೆದ ಪೌರಕಾರ್ಮಿಕರು. ಮಲ್ಲಮ್ಮ ಅವಿಭಜಿತ ಬಳ್ಳಾರಿ ಜಿಲ್ಲೆಯವರು. ಹಾಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯವರು. ಬಡತನದ ಬದುಕಿನಲ್ಲಿ ಅಕ್ಷರದ ಸಖ್ಯ ದೊರೆತದ್ದು ತೀರಾ ಕಡಿಮೆ. ಆದರೆ, ಕಾಯಕದಲ್ಲಿ ಸದಾ ನಿಷ್ಠೆ, ಸೀಮೆಯಿಲ್ಲದ ಬದ್ಧತೆ, ಹೂವಿನಹಡಗಲಿಯ ಪುರಸಭೆಯಲ್ಲಿ ದೊರೆತ ಪೌರಕಾರ್ಮಿಕ ಹುದ್ದೆಯಲ್ಲೇ ಬಾಳಿನ ಬಂಡಿಯನ್ನು ಸಾಗಿಸಿದವರು. ಪಟ್ಟಣವನ್ನು ಸ್ವಚ್ಛಗೊಳಿಸುವುದರಲ್ಲೇ ದೈವವನ್ನು ದರ್ಶಿಸಿದ ಪೌರಕಾರ್ಮಿಕರು. ಸೇವೆಯ ಉದ್ದಕ್ಕೂ ಕಾಯಕಕ್ಕೆ ಬದ್ಧಳಾಗಿ ಕಾರ್ಯನಿರ್ವಹಿಸಿದ ಮಲ್ಲಮ್ಮ ಎಲ್ಲರೊಳಗೊಂದಾಗುವ ಸಹೃದಯಿ. ಮಾತಿಗಿಂತ ಕೃತಿಯನ್ನೇ ನಂಬಿ ಬದುಕಿದ ಜೀವಿ, ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದರಲ್ಲೇ ಸಂತೃಪ್ತ ಭಾವ ಕಂಡುಕೊಂಡ ಮಲ್ಲಮ್ಮ ಎಂದಿಗೂ ಯಾರೊಂದಿಗೂ ಮೈಮನಸ್ಸು ಮಾಡಿಕೊಳ್ಳದೇ ಸಹಬಾಳ್ವೆಯಲ್ಲಿ ಬದುಕಿದವರು. ಹಲವು ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಮಲ್ಲಮ್ಮ ನಮ್ಮ ನಡುವಿರುವ ಅಪ್ಪಟ ಕಾಯಕಜೀವಿ.
ಕಲೆಯನ್ನೇ ಬದುಕಿಗೆ ನೆಲೆ, ಭಾವದ ಸೆಲೆಯಾಗಿಸಿಕೊಂಡು ಸೇವೆ ಸಲ್ಲಿಸಿದ ಜಾನಪದ ಸಾಧಕರು ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿ, ಸುವರ್ಣ ಕಲಾಬದುಕಿನ ಹಿರಿಮೆಯುಳ್ಳ ವಿಶಿಷ್ಟ ಪುರವಂತಿಕೆ ಕಲಾವಿದರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪದಲ್ಲಿ ೧೯೫೭ರಲ್ಲಿ ಜನಿಸಿದ ಮಹೇಶ್ವರಗೌಡ ಕಲಾಕುಟುಂಬದ ಕೂಸು, ಜನಪದೀಯ ಕಲೆಯಾದ ಪುರವಂತಿಕೆ ಅಪ್ಪನಿಂದ ಬಂದ ಬಳುವಳಿ ಹತ್ತನೇ ವಯಸ್ಸಿನಿಂದಲೇ ಈ ಕಲೆಗೆ ಬದುಕು ಸಮರ್ಪಿತ, ಗ್ರಾಮೋತ್ಸವಗಳಲ್ಲಿ ಆರಂಭವಾದ ಕಲಾಪ್ರದರ್ಶನ ರಾಜ್ಯ, ರಾಷ್ಟ್ರಮಟ್ಟಕ್ಕೂ ವಿಸ್ತಾರಗೊಂಡಿದ್ದು ವಿಶೇಷ, ಧಾರವಾಡ ಆಕಾಶವಾಣಿ, ಬೆಂಗಳೂರು ದೂರದರ್ಶನ, ಹಂಪಿ ಉತ್ಸವ, ಗಣರಾಜ್ಯೋತ್ಸವಮ, ಕಂದಬೋತ್ಸವ, ಆನೆಗುಂದಿ ಉತ್ಸವ, ದಸರಾ, ಲಕ್ಕುಂಡಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ವಿಶ್ವಕನ್ನಡ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ರಾಜಸ್ಥಾನದ ಲೋಕರಂಗ ಉತ್ಸವ ಮುಂತಾದೆಡೆ ಬೆಳಗಿದ ಜನಪದ ಪ್ರತಿಭೆ, ೫೫ ವರ್ಷಗಳಿಂದಲೂ ಕಲಾಸೇವಾ ನಿರತ ಮಹೇಶ್ವರಗೌಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಂದ ಭೂಷಿತರಾದ ದೇಸೀ ಕಲಾಚೇತನ.
ಶ್ರೀ ಮದನ್ಗೋಪಾಲ್
ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ಹೆಸರಾದವರು ಮದನ್ಗೋಪಾಲ್, ಮೂರು ದಶಕಗಳಿಗೂ ಅಧಿಕ ಕಾಲ ಬಹುಮುಖಿ ಸೇವೆಗೈದ ನಿವೃತ್ತ ಐಎಎಸ್ ಅಧಿಕಾರಿ, ಹಲವು ಮಹತ್ವದ ಕೃತಿಗಳ ರಚನಕಾರರು. ಮದಭೂಷಿ ಮದನ್ ಗೋಪಾಲ್ ಅವರು ವಾಣಿಜ್ಯ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಬಾಲ್ಯದ ಐಎಎಸ್ ಕನಸನ್ನು ನನಸಾಗಿಸಿಕೊಂಡ ಛಲಗಾರರು. ೧೯೮೪ರಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಯಾದ ಮದನ್ಗೋಪಾಲ್ ಅವರು ಮೈಸೂರಿನ ನಂಜನಗೂಡಿನಲ್ಲಿ ಸಹಾಯಕ ಆಯುಕ್ತರಾಗಿ ಸಾರ್ವಜನಿಕ ಬದುಕು ಆರಂಭಿಸಿದರು. ಆನಂತರ ಅನೇಕ ಹುದ್ದೆಗಳಗೆ ಏರಿದವರು. ಆರೋಗ್ಯ ಮತ್ತು ಕುಟುಂಬಕಲ್ಯಾಣ, ಉನ್ನತ ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ, ಪರಿಸರ ಮತ್ತು ಜೀವಶಾಸ್ತ್ರ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ದಕ್ಷ ಸೇವೆ ಸಲ್ಲಿಸಿದವರು. ಬಿಜಾಪುರ ಮತ್ತು ಗುಲ್ಬರ್ಗಾ ಜಿಲ್ಲಾಧಿಕಾರಿಯಾಗಿ ಜನಪರ ಕಾರ್ಯ. ಜಲಸಂವರ್ಧನೆ ಯೋಜನೆಗೆ ಅನುದಾನ ಒದಗಿಸುವ ವಿಶ್ವಬ್ಯಾಂಕ್ನ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಹೈದರಾಬಾದ್ನ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟಾರ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿಯೂ ಮದನ್ಗೋಪಾಲ್ ಅವರದ್ದು ವಿಶಿಷ್ಟ ಛಾಪು. ಐಎಎಸ್ ವಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೇ ಜನಪ್ರಿಯ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಹಿರಿತನ, ವಿಶ್ವದ ೫೦ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ಅನುಭವ. ಎರಡು ವಿಶಿಷ್ಟ ಕೃತಿಗಳ ಲೇಖಕರೂ ಆದ ಮದನಗೋಪಾಲ್ ಬಹುಮುಖಿ ಪ್ರತಿಭೆ.
ನಾಡಿನ ಹೆಮ್ಮೆಯ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಗದಗಿನ ಲಿಂಗಾಯತ ಪ್ರಗತಿಶೀಲ ಸಂಘ. ಬಹುರೂಪಿ ಸಾಧನೆಗೈದು ದಾಖಲೆ ಬರೆದ ಸೇವಾಸಂಸ್ಥೆ-ಗದಲಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಂಗಸಂಸ್ಥೆಯಾದ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆಯಾಗಿದ್ದು ೧೯೭೦ರಲ್ಲಿ. ಅಪ್ಪಣ್ಣ ಮಾನ್ವಿ, ಪಿ.ಎಸ್.ಸಂಶಿಮಠ ಮತ್ತಿತರ ಸಮಾನಮನಸ್ಕ ಸ್ನೇಹಿತರು ಸ್ಥಾಪಿಸಿದ ಈ ಸಂಸ್ಥೆ ೧೯೭೨ರಿಂದ ಸತತ ೫೧ ವರ್ಷಗಳಿಂದ ಜನಮಾನಸವನ್ನು ತಿದ್ದಿ ಸಾಂಸ್ಕೃತಿಕ ಪರಿಸರ ನಿರ್ಮಿಸುವ ಘನಕಾರ್ಯದಲ್ಲಿ ತೊಡಗಿದೆ. ಪ್ರತಿ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಸಂಘದ ಹೆಜ್ಜೆಗುರುತು. ೫೧ ವರ್ಷಗಳಿಂದ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ೨೬೧೦ ಶಿವಾನನುಭವ ಗೋಷ್ಠಿ ನಡೆಸಿರುವುದು ಚಾರಿತ್ರಿಕದಾಖಲೆ. ನಾಡಿನ ಸರ್ವಕ್ಷೇತ್ರದ ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಬೆಳಗಿರುವುದು ವಿಶೇಷ. ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ರಕ್ತದಾನ, ನೇತ್ರದಾನಶಿಬಿರ, ಜಾನಪದ, ರಂಗಭೂಮಿ, ಕೃಷಿಮೇಳಗಳು ಮತ್ತು ಕಮ್ಮಟಗಳನ್ನು ನಿರಂತರವಾಗಿ ನಡೆಸುತ್ತಿರುವುದು ಮಾದರಿ ನಡೆ.ಮಠಗಳು ಧರ್ಮದಾಚೆಗೆ ಜನಮನವನ್ನು ಕಟ್ಟಬೇಕೆಂಬ ಲೋಕಮಾತನ್ನು ನಿಜವಾಗಿಸಿದ ಲಿಂಗಾಯತ ಪ್ರಗತಿಶೀಲ ಸಂಘದ ನಮ್ಮ ನಡುವಿರುವ ಹೆಮ್ಮೆಯ ಸೇವಾಕೇಂದ್ರ.
ಕನ್ನಡ ರಂಗಭೂಮಿಯನ್ನು ಬೆಳಗಿದ ರಂಗಚೇತನಗಳಲ್ಲಿ ಲಲಿತಾಬಾಯಿ ಲಾಲಪ್ಪ ದಶವಂತ ಅವರೂ ಪ್ರಮುಖರು, ಬಯಲಾಟದ ಪಾರಿಜಾತ ಕಲಾವಿದೆ. ನಾಲ್ಕೂವರೆ ದಶಕಗಳಿಂದ ಕಲಾಸೇವಾ ನಿರತ ರಂಗಕರ್ಮಿ, ವಿಜಯಪುರದ ರಂಗಕೊಡುಗೆ ಲಲಿತಾಬಾಯಿ ಲಾಲಪ್ಪ ದಶವಂತ, ಬಾಲ್ಯದಲ್ಲೇ ಬಯಲಾಟದ ಬೆರಗಿಗೆ ಮನಸೋತ ಮನ. ೯ನೇ ವಯಸ್ಸಿಗೆ ‘ಪಾರಿಜಾತ ಬಯಲಾಟದಲ್ಲಿ ರುಕ್ಮಿಣ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಪ್ರವೇಶ. ಬಣ್ಣದ ಸಖ್ಯ ದೊರೆತ ಮೇಲೆ ಬದುಕೇ ಕಲಾಯಾನ, ಆರಂಭದ ಮೂರು ವರ್ಷ ಪಾರಿಜಾತ ಬಯಲಾಟ ಮತ್ತು ಲವ-ಕುಶ ದೊಡ್ಡಾಟದಲ್ಲಿ ನಟನೆ. ೧೨ನೇ ವಯಸ್ಸಿಗೆ ಸಾಮಾಜಿಕ ನಾಟಕಗಳಲ್ಲಿ ನಟಿಸಲು ಮುಂದಡಿ. ಅಣ್ಣತಂಗಿ, ದೀಪಾಮ ಸಂಗಮ, ಹುಡುಗಿ ಮೆಚ್ಚಿದ ಹುಂಬ, ಸಮಾಜಕ್ಕೆ ಶಿಕ್ಷೆ, ಚಿನ್ನದಗೊಂಬೆ, ಅತ್ತಿಗೆಗೆ ತಕ್ಕ ಮೈದುನ, ಹೆಣ್ಣು ಜಗದ ಕಣ್ಣು, ಗೌರಿಗೆದ್ದಳು, ಗರುಡ ರಾಜ್ಯದಲ್ಲಿ ಘಟಸರ್ಪ ಮುಂತಾದ ಸಾಮಾಜಿಕ ನಾಟಕ, ಕುರುಕ್ಷೇತ್ರ, ವೀರ ಅಭಿಮನ್ಯು ಪೌರಾಣಿಕ ನಾಟಕಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಕಲಾವಿದೆ. ಮಹಾರಾಷ್ಟ್ರದಲ್ಲೇ ಬಹುತೇಕ ನಾಟಕ ಪ್ರದರ್ಶನಗಳಾಗಿರುವುದು ವಿಶೇಷ. ಹಳ್ಳಿಗಾಡಿನ ಜಾತ್ರಾಮಹೋತ್ಸವಗಳಲ್ಲಿ ಬೆಳಗಿದ ಕಲಾಚೇತನ. ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ರಂಗಪುಷ್ಪ.
ಭಾರತೀಯ ಬಾಹ್ಯಾಕಾಶ ವಿಜ್ಞಾನದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಡಾ. ಕೆ.ಶಿವನ್. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ನಿಕಟಪೂರ್ವ ಅಧ್ಯಕ್ಷರು, ಚಂದ್ರಯಾನ–೨ರ ರೂವಾರಿ, ಅಜ್ಞಾತ ನೆಲೆಯಿಂದ ಅರಳಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಕ್ಷತೆ ಮೆರೆದ ವಿಶಿಷ್ಟ ಪ್ರತಿಭೆ ಡಾ. ಕೆ.ಶಿವನ್. ೧೯೫೭ರ ಏಪ್ರಿಲ್ ೧೪ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯಿರುವ ಮೇಳ ಸರಕ್ಕಲ್ವಲೈ ಗ್ರಾಮದಲ್ಲಿ ಜನಿಸಿದ ಶಿವನ್ ತಂದೆ ಕೃಷಿಕರು, ಬಡಕುಟುಂಬದ ಕುಡಿ, ಅಕ್ಷರವೇ ಸಾಧನೆಗೆ ಮೆಟ್ಟಲು. ಸರ್ಕಾರಿ ಶಾಲೆಯಲ್ಲಿ ತಮಿಳು ಮಾಧ್ಯಮದಲ್ಲಿ ಕಲಿತ ಶಿವನ್ ಪರಿವಾರ ಮೊಟ್ಟಮೊದಲ ಪದವೀಧರರು. ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರ್ ಪದವಿ ಪಡೆದ ಶಿವನ್ ೮೨ರಲ್ಲಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಬಾಹ್ಯಾಕಾಶ ಇಂಜಿನಿಯಲಿಂಗ್ನಲ್ಲಿ ಸ್ನಾತಕೋತ್ತರ ಪದವಿ, ಬಾಂಬೆಯ ಐಎಸ್ಸಿಯಿಂದ ಪಿಎಚ್ಡಿ ಪಡೆದ ಶಿವನ್ ಇಸ್ರೋದ ಪಿಎಸ್ಎಲ್ಐ ಯೋಜನೆಯ ಭಾಗವಾಗುವುದರೊಂದಿಗೆ ವೃತ್ತಿ ಬದುಕು ಆರಂಭಿಸಿದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ನ ನಿರ್ದೇಶಕ, ಪ್ರತಿಷ್ಠಿತ ಇಸ್ರೋದ ಅಧ್ಯಕ್ಷರಾಗಿ ನಾಲ್ಕು ವರ್ಷ ಗುರುತರ ಸೇವೆ. ಬಹುನಿರೀಕ್ಷಿತ ಚಂದ್ರಯಾನ-೨ರ ರೂವಾರಿಯಾಗಿ ಸಂಪೂರ್ಣ ಸಫಲತೆ ಕಾಣದೇ ನೊಂದರೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಗಾದ ಸಾಧಕರು.
ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಹೊಸ ಅಧ್ಯಾಯವನ್ನೇ ಬರೆದ ಯಶಸ್ವಿ ಉದ್ಯಮಿ ಕೃಷ್ಣಮೂರ್ತಿ ಮಂಜ. ಹಲವು ಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಸಮಾಜಸೇವಕರು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಾರಣಕಟ್ಟೆಯಲ್ಲಿ ಜನಿಸಿದ ಕೃಷ್ಣಮೂರ್ತಿ ಅವರದ್ದು ಅಪ್ಪಟ ಅರ್ಚಕ ಕುಟುಂಬ. ತಂದೆ ಸುಬ್ರಹ್ಮಣ್ಯ ಮಾರಣಕಟ್ಟೆ ದೇವಾಲಯದ ಪ್ರಮುಖ ಅರ್ಚಕರು. ಎಸ್.ಎಸ್.ಎಲ್.ಸಿವರೆಗೂ ವಿದ್ಯಾಭ್ಯಾಸ ಮಾಡಿದ ಕೃಷ್ಣಮೂರ್ತಿ ಮಂಜ ಅವರು ಬದುಕು ಅರಸಿ ಹೈದರಾಬಾದ್ಗೆ ಗುಳೆ ಹೋದವರು. ಕಡುಕಷ್ಟದ ದಿನಗಳನ್ನು ಕಳೆದ ಮೇಲೆ ಸಣ್ಣದಾಗಿ ಹೈದರಾಬಾದ್ನಲ್ಲಿ ಹೋಟೆಲ್ ಅನ್ನು ಸ್ಥಾಪಿಸಿದರು. ಸತತ ಪರಿಶ್ರಮದಿಂದಾಗಿ ಹಂತಹಂತವಾಗಿ ಯಶಸ್ಸು ಕಂಡವರು. ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಸುಪ್ರಭಾತ ಹೋಟೆಲ್ ಅನ್ನು ಜನಪ್ರಿಯ ಹೋಟೆಲ್ ಆಗಿ ರೂಪಿಸಿದ ಕೀರ್ತಿ ಅವರದ್ದು. ಅಪ್ಪಟ ಸಸ್ಯಹಾರಿ ತಿನಿಸುಗಳು, ಸ್ವಚ್ಛತೆ ಮತ್ತು ಶುದ್ಧ ಪರಿಸರದಿಂದ ಗ್ರಾಹಕರ ಪಾಲಿಗೆ ಸುಪ್ರಭಾತ ನೆಚ್ಚಿನ ಹೋಟೆಲ್ ಆಗಿರುವುದು ವಿಶೇಷ, ಹೈದರಾಬಾದ್ನ ಕರಾವಳಿ ಮೈತ್ರಿ ಸಂಘ, ಭಾಗ್ಯನಗರ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿ, ಕನ್ನಡ ನಾಟ್ಯಸಂಘ, ತೆಲಂಗಾಣ ಹೋಟೆಲ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದವರು. ತಂದೆ ಸುಬ್ರಹ್ಮಣ್ಯ ಮಂಜ ಅವರ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವ, ಅನೇಕ ಪ್ರಶಸ್ತಿ-ಗೌರವಗಳಿಂದ ಭೂಷಿತರಾಗಿರುವ ಸೇವಾಬಂಧು.
ಪರೋಪಕಾರದಲ್ಲೇ ಬದುಕಿನ ಸಾರ್ಥಕತೆಯ ಕಂಡುಕೊಂಡ ನಿಸ್ವಾರ್ಥ ಕಾಯಕಜೀವಿ ಕಮಲಮ್ಮ, ಉಚಿತ ಹೆರಿಗೆ ಮಾಡಿಸುವ ಸೂಲಗಿತ್ತಿ, ಜನಪದ ಭಂಡಾರವುಳ್ಳ ದೇಸೀ ಪ್ರತಿಭೆ, ಅಲೆಮಾರಿ ಸಮುದಾಯಕ್ಕೆ ಸೇರಿದ ಕಮಲಮ್ಮ ಕೋಲಾರದವರು. ಹಟ್ಟಿಚಿನ್ನದಗಣಿ ಹುಟ್ಟೂರು. ಶಾಲೆಯ ಮೆಟ್ಟಲೇ ಹತ್ತದ ನತದೃಷ್ಟೆ, ಆದರೆ, ಲೋಕಜ್ಞಾನದಲ್ಲಿ ನಿಪುಣೆ, ಅಮ್ಮ ನಾಗಮ್ಮನಿಂದ ಸೂಲಗಿತ್ತಿತನ, ಅಪ್ಪನಿಂದ ಪಾರಂಪರಿಕ ನಾಟಿ ಔಷಧಿ ನೀಡುವಿಕೆ ಕಮಲಮ್ಮಳಿಗೆ ಬಂದ ಬಳುವಳಿ, ಗರ್ಭಿಣಿಯರ ಪಾಲಿನ ನೆಚ್ಚಿನ ಕಮಲಜ್ಜಿ, ಆಸ್ಪತ್ರೆಯ ಮುಖವನ್ನೇ ನೋಡದ ಕಮಲಮ್ಮ ಈವರೆಗೆ ೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ. ಎಲ್ಲವೂ ಸುಸೂತ್ರ ಹೆರಿಗೆಯೇ. ಕಾಮಾಲೆ, ತಲೆಶೂಲೆ, ಪಿತ್ತ ಅಜೀರ್ಣ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ಮೂಲಕ ಪರಿಹಾರ ನೀಡುವ ಈ ನಾಟಿವೈದ್ಯೆಗೆ ಪರೋಪಕಾರವೇ ಬದುಕಿನ ಗೊತ್ತು-ಗುರಿ. ಕಮಲಮ್ಮ ಜಾನಪದ ಜ್ಞಾನದ ಭಂಡಾರ, ಸೋಬಾನೆ, ಜೋಗುಳ ಮತ್ತು ಬುರ್ರಕಥಾ ಹಾಡುಗಳನ್ನು ಹಾಡುವಲ್ಲಿ ನಿಸ್ಸೀಮೆ. ಆಕೆಯ ಕಂಠದಲ್ಲಿ ಜನಪದ ಹಾಡುಗಳನ್ನು ಕೇಳುವುದೇ ಚೆಂದವೆಂಬುದು ಶ್ರೋತೃಗಳ ಸಾಮಾನ್ಯ ಅಭಿಪ್ರಾಯ. ಎಲೆಮರೆಯಕಾಯಿಯಂತೆ ಬದುಕಿದರೂ, ಬಡತನ ಕಿತ್ತು ತಿನ್ನುತ್ತಿದ್ದರೂ ಎಲ್ಲೆಮೀರಿದ ಲೋಕಸೇವೆಯಲ್ಲಿ ನಿರತವಾಗಿರುವ ಕಮಲಮ್ಮ ಸಮಾಜಸೇವೆಗೆ ಆದರ್ಶ.
ಭಾರತೀಯ ಹೋಟೆಲ್ ಉದ್ಯಮದಲ್ಲಿ ವಿಕ್ರಮಗಳನ್ನು ದಾಖಲಿಸಿದ ವಿಶಿಷ್ಟ ಉದ್ಯಮಿ ಜಯರಾಮ ಬನನ್, ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದ ಸಮಾಜಮುಖಿ, ಸಾವಿರಾರು ಮಂದಿಯ ಸ್ವಾವಲಂಬಿ ಬದುಕಿಗೆ ಪ್ರೇರಕಶಕ್ತಿ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಠದಬೆಟ್ಟುವಿನಲ್ಲಿ ೧೯೫೫ರಲ್ಲಿ ಜನಿಸಿದ ಜಯರಾಮ್ ೧೩ನೇ ವಯಸ್ಸಿನಲ್ಲಿ ಮನೆ-ಊರು ತೊರೆದು ಮುಂಬಯಿಗೆ ವಲಸೆ ಹೋದರೂ ಎರಡೊತ್ತಿನ ಊಟಕ್ಕೂ ತತ್ವಾರಪಟ್ಟು ಘಾಜಿಯಾಬಾದ್ಗೆ ಗುಳೆ. ಅಲ್ಪದುಡಿಮೆಯ ಐದು ಸಾವಿರ ರೂಪಾಯಿ ಹಣ ಹೂಡಿ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ “ಸಾಗರ ರತ್ನ” ಹೋಟೆಲ್ ತೆರೆದರು. ಸತತ ಶ್ರಮ, ಶುದ್ಧ ಆಹಾರ, ಸ್ವಚ್ಛವಾತಾವರಣ ಮತ್ತು ಗ್ರಾಹಕಸ್ನೇಹಿ ನಡೆಯಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡ ಜಯರಾಮ್ ಆನಂತರ ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್ಗಳನ್ನು ತೆಗೆದದ್ದು ಇತಿಹಾಸ. ದೇಶಾದ್ಯಂತ ಸದ್ಯ ೧೦೫ಕ್ಕೂ ಹೆಚ್ಚು ಶಾಖೆಗಳು ಮತ್ತು ಸ್ವಾಗತ್ ಹೋಟೆಲ್ಗಳ ಮಾಲೀಕರು, ಬನನ್ ಸದಾ ಸಮಾಜಸೇವಾನಿರತರು. ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಭರಿಸುವ ಅವರು ಸಂಘಸಂಸ್ಥೆ, ದೇವಾಲಯಗಳು, ಸಂಘಸಂಸ್ಥೆಗಳಿಗೆ ದೇಣಿಗೆ ನೀಡುವ ಕೊಡುಗೈ ದಾನಿ. ಜಿಆರ್ಬಿ ಕಂಪನಿ ಮೂಲಕ ಕರ್ನಾಟಕದ ೨ ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಿರುವ, ಕಾರ್ಮಿಕ ಮಕ್ಕಳ ಶಿಕ್ಷಣ–ಮದುವೆಗಳಿಗೆ ನೆರವಾಗುವ ಜಯರಾಮ ಹೃದಯವಂತಿಕೆ, ಸರಳತೆ, ಮಾನವೀಯತೆವುಳ್ಳ ವಿರಳ ಉದ್ಯಮಿ.
ನೇತ್ರತಜ್ಞ, ಲೇಖಕ, ಅಂಕಣಕಾರ, ಸಂಶೋಧಕ, ಪತ್ರಿಕಾಸಂಪಾದಕ, ಸಮಾಜಸೇವಕ, ಸಂಘಟಕರಾದ ಡಾ. ಎಚ್.ಎಸ್. ಮೋಹನ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸಾಧನೆಗೈದ ಬಹುಮುಖ ಪ್ರತಿಭೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ೧೯೫೫ರಲ್ಲಿ ಜನಿಸಿದ ಡಾ. ಮೋಹನ್ ಮಲೆನಾಡಿನ ಜನಪ್ರಿಯ ನೇತ್ರಚಿಕಿತ್ಸಾ ತಜ್ಞರು. ನಾಲ್ಕು ದಶಕಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದವರು. ೩೨ ಸಾವಿರ ಮಕ್ಕಳಿಗೆ ಉಚಿತ ನೇತ್ರ ಚಿಕಿತ್ಸೆ, ತಪಾಸಣೆಗೈದವರು. ವಿಜಯ ಸೇವಾಟ್ರಸ್ಟ್ ಮೂಲಕ ಹಳ್ಳಿಗಾಡಿನ ಅಶಕ್ತರಿಗಾಗಿ ಐವತ್ತಕ್ಕೂ ಹೆಚ್ಚು ನೇತ್ರ ಚಿಕಿತ್ಸಾ ಶಿಖರ, ಕಾರ್ಯಾಗಾರ, ವಿಚಾರಸಂಕಿರಣಗಳ ಆಯೋಜನೆ. ಕನ್ನಡದ ಎಲ್ಲಾ ದಿನಪತ್ರಿಕೆಗಳಲ್ಲಿ ಒಟ್ಟು ೩೫೦೦ ಲೇಖನಗಳು, ಇಂಗ್ಲೀಷ್ನಲ್ಲಿ ೧೫೦೦ ಲೇಖನಗಳ ಪ್ರಕಟ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ೨೪ ವೈದ್ಯಕೀಯ ಕೃತಿಗಳ ರಚನೆ, ಗ್ಲುಕೋಮಾ ರೋಗ ಪತ್ತೆ ಹಚ್ಚಿದ ಹಿರಿಮೆ, ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಚಾಕ್ಷು ನಿಯತಕಾಲಿಕದ ಸಂಪಾದಕ, ಜನಪ್ರಿಯ “ವೈದ್ಯವೈವಿಧ್ಯ”
ವೃತ್ತಿರಂಗಭೂಮಿಯ ಬಯಲಾಟದಲ್ಲಿ ಪಕ್ಕವಾದ್ಯಪಟುವಾಗಿ ಸೇವೆಸಲ್ಲಿಸಿದ ದೇಸಿ ಕಲಾಚೇತನ ಎಚ್.ಪಾಂಡುರಂಗಪ್ಪ, ಕಲಾರಸಿಕರ ಮನಗೆದ್ದ ತಬಲವಾದಕ, ಸ್ವರಸಂಯೋಜಕ, ಗಣಿನಾಡು ಬಳ್ಳಾರಿಯ ಕಲಾಕೊಡುಗೆ ಪಾಂಡುರಂಗಪ್ಪ. ಅಕ್ಷರಕ್ಕಿಂತಲೂ ಕಲಾಮೋಹಕ್ಕೊಳಗಾದವರು. ಬಾಲ್ಯದಲ್ಲಿ ಅ೦ಟಿದ ಸಂಗೀತದ ಗೀಳಿನ ಬೆನ್ನುಹತ್ತಿ ತಬಲವಾದಕರಾಗಿ ರೂಪುಗೊಂಡವರು. ಶ್ರೀಕನಕದುರ್ಗಮ್ಮ ಬಯಲಾಟ ಕಲಾ ಟ್ರಸ್ಟ್ ಸ್ಥಾಪಿಸಿ ಕಲಾಕೈಂಕರ್ಯದಲ್ಲಿ ನಿರತರಾದವರು. ಪುರಾಣ ಪ್ರವಚನ, ಹರಿಕಥೆ, ಬಯಲಾಟ, ಅಭಿಮನ್ಯುಬಳಗ, ಪ್ರಮೀಳ ದರ್ಬಾರ್, ಪಾರ್ಥವಿಜಯ, ಗಿರಿಜಾಕಲ್ಯಾಣ, ರತಿಕಲ್ಯಾಣ, ಪಾಂಡುವಿಜಯ ಮುಂತಾದ ನಾಟಕಗಳಿಗೆ ತಬಲ ಸಾಥ್ ಜತೆಗೆ ಸ್ವರಸಂಯೋಜನೆ, ಜಾನಪದ ಜಾತ್ರೆ, ಸಂಸ್ಕೃತಿ ದಿಬ್ಬಣ, ಜಾತ್ರಾಮಹೋತ್ಸವ, ಅನೇಕ ಸಾಂಸ್ಕೃತಿಕ ಉತ್ಸವ, ಶರಣಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸೇರಿದಂತೆ ನೂರಾರು ವೇದಿಕೆಗಳಲ್ಲಿ ಬೆಳಗಿದ ಪ್ರತಿಭೆ, ತೆಲುಗು ನಾಟಕಗಳಲ್ಲೂ ಸೇವೆ. ಕರ್ನಾಟಕ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನವಾಗಿರುವ ಪಾಂಡುರಂಗಪ್ಪ ಅವರಿಗೆ ಕಲೆಯೇ ಬದುಕು, ಕಲೆಯಿಂದಲೇ ಬದುಕು. ೫೫ ವರ್ಷಗಳಿಂದಲೂ ಕಲಾಸೇವೆಯಲ್ಲಿ ತನ್ಮಯರಾಗಿರುವ ಪಾಂಡುರಂಗಪ್ಪ ಹಳ್ಳಿಗಾಡಿನ ಗಟ್ಟಿ ಪ್ರತಿಭೆ, ಮಾದರಿ ಕಲಾಸೇವಕ.
ಹೆಚ್. ಜಿ. ದತ್ತಾತ್ರೇಯ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಾದ ದತ್ತಣ್ಣ ಕನ್ನಡ ನಾಡಿನ ಹೆಮ್ಮೆ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಪಾತ್ರಗಳಿಗೆ ಜೀವತುಂಬಿದ ಚಿರಂಜೀವಿ ನಟರು. ೧೯೪೨ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ದತ್ತಣ್ಣ ಎಸ್ಎಸ್ಎಲ್ಸಿಯಲ್ಲಿ ಮೊದಲ ಬ್ಯಾಂಕ್. ಪಿಯುಸಿಯಲ್ಲಿ ಎರಡನೇ ಬ್ಯಾಂಕ್, ಇಂಜಿನಿಯರಿಂಗ್ ಮುಗಿಸಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿ ಬಹುವರ್ಷ, ಎಚ್ಎಎಲ್ನ ಉಪಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಕೆಲವರ್ಷ ದುಡಿದವರು. ಶಾಲಾದಿನಗಳಲ್ಲೇ ನಾಟಕದ ಗೀಳು ಹಚ್ಚಿಕೊಂಡಿದ್ದ ದತ್ತಣ್ಣರ ರುಸ್ತುಂ ನಾಟಕ ಬಲು ಜನಪ್ರಿಯವಾಗಿತ್ತು. ಅಳಿಯದೇವರು, ದೇವದಾಸಿ ನಾಟಕಗಳಲ್ಲಿ ಸ್ತ್ರೀಪಾತ್ರಧಾರಿಯಾಗಿ ಮಿಂಚಿದ್ದರು. ೪ನೇ ವಯಸ್ಸಿನಲ್ಲಿ ಬಿ.ಎಸ್.ರಂಗರ ‘ಉದ್ಭವ್’ ಕಿರುಚಿತ್ರದ ಮೂಲಕ ಬಣ್ಣದಲೋಕಕ್ಕೆ ಮರುಪ್ರವೇಶ, ೨ನೇ ಚಿತ್ರ ‘ಆಸ್ಫೋಟ’ದ ನಟನೆಗೆ ಅತ್ಯುತ್ತಮ ಪೋಷಕನಟ ಪ್ರಶಸ್ತಿಯ ಗರಿ. ಆನಂತರದ ಸಿನಿಯಾನದಲ್ಲಿ ದತ್ತಣ್ಣರ ಪಾತ್ರಗಳದ್ದೇ ಮೇಲುಗೈ, ಮುನ್ನುಡಿ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿದರೆ, ಮೌನಿ, ಭಾರತ್ಸ್ಟೋರ್ ರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ಭಾಜನ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟನೆ, ಪಾತ್ರ ಯಾವುದೇ ಇರಲಿ ದತ್ತಣ್ಣರದ್ದು ಪರಕಾಯ ಪ್ರವೇಶ. ಅದ್ಭುತ ಭಾವಾಭಿನಯ, ಇಡೀ ಚಿತ್ರವನ್ನೇ ತಮ್ಮ ಹೆಗಲಮೇಲೆ ಕೊಂಡೊಯ್ಯುವಷ್ಟು ಕಲೆಗಾರಿಕೆ. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅನೇಕ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ದತ್ತಣ್ಣರದ್ದು ನಾಡಿಗೆ ನಾಡೇ ತಲೆದೂಗುವಂತಹ ಸೋಪಜ್ಞ ಕಲೆ.
ಶಿಲ್ಪಕಲೆಯಿಂದಲೇ ಬದುಕಿನಲ್ಲಿ ನೆಲೆ ಕಂಡುಕೊಂಡ ಕಲಾವಿದರು ಹನುಮಂತ ಬಾಳಪ್ಪ ಹುಕ್ಕೇರಿ, ದೇವರಮೂರ್ತಿಗಳ ಕೆತ್ತನೆಯಲ್ಲಿ ಪಳಗಿದ ಹಿರಿಯ ಕಲಾವಿದರು. ಶಿಲ್ಪಕಲೆಯಲ್ಲಿ ದೇವರ ಮೂರ್ತಿಗಳ ಕೆತ್ತನೆಗೆ ವಿಶೇಷ ಮಾನ್ಯತೆ, ಪ್ರತಿಯೊಂದು ದೇವರಮೂರ್ತಿಗಿರುವ ವಿಭಿನ್ನ ಅಳತೆ-ಸ್ವರೂಪ ಮತ್ತು ಕೆತ್ತನೆಯ ಕುಶಲಗಾರಿಕೆಯನ್ನು ಕರಗತ ಮಾಡಿಕೊಳ್ಳುವುದು ಸುಲಭಸಾಧ್ಯವಲ್ಲ. ಕಲಾಬದ್ಧತೆ, ನಿಷ್ಠೆ, ಪರಿಶ್ರಮ ಮತ್ತು ತನ್ಮಯತೆಗಷ್ಟೆ ಒಲಿಯುವ ಆ ಅಪರೂಪದ ಕಲೆಯಲ್ಲಿ ವಿಶಿಷ್ಟತೆ ಮೆರೆದವರು ಹನುಮಂತ ಬಾಳಪ್ಪ ಹುಕ್ಕೇರಿ, ಗಡಿನಾಡಿನ ಕಲಾಕುಸುಮ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಶಿಲ್ಪಕಲಾವಿದರಿಗೆ ಹೆಸರುವಾಸಿ. ಆ ಊರಿನ ಪ್ರತಿಮನೆಯೂ ಕಲಾಕುಟುಂಬ, ಅಂತಹುದೇ ಪರಿಸರದಲ್ಲಿ ಅಪ್ಪನಿಂದ ಶಿಲ್ಪಕಲೆ ಕಲಿತ ಹನುಮಂತ ಹುಕ್ಕೇರಿ ಇಡೀ ಬದುಕನ್ನೇ ದೇವರಮೂರ್ತಿಗಳ ತಯಾರಿಕೆಗೆ ಅರ್ಪಿಸಿಕೊಂಡಿದ್ದು ವಿಶೇಷ. ಲಕ್ಷ್ಮಿ, ಸರಸ್ವತಿ, ಆಂಜನೇಯ, ವೀರಭದ್ರೇಶ್ವರ ಮುಂತಾದ ದೇವತೆಗಳ ಮೂರ್ತಿ ಕೆತ್ತನೆಯಲ್ಲಿ ನಿಸ್ಸೀಮರು. ವಿವಿಧ ಬಗೆಯ ಕಲ್ಲುಗಳನ್ನು ಸಂಗ್ರಹಿಸಿ ಮೂರ್ತಿಯ ಆಕಾರ ನೀಡುವ ಹನುಮಂತ ಹುಕ್ಕೇರಿ ಅವರ ಕಲಾನೈಪುಣ್ಯತೆಗೆ ತಲೆದೂಗದವರೇ ಇಲ್ಲ. ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿರುವ ಹನುಮಂತ ಹುಕ್ಕೇರಿ ಕಲಾನಿಷ್ಠ ಪ್ರತಿಭೆ.
ವೃತ್ತಿ ರಂಗಭೂಮಿಯಲ್ಲಿ ಅನೂಹ್ಯ ಸೇವೆಗೈದು ಅದ್ವಿತೀಯ ಛಾಪು ಮೂಡಿಸಿರುವ ದೇಸೀ ಪ್ರತಿಭೆ ಗುರುನಾಥ್ ಬಿ.ಹೂಗಾರ, ನಟ, ನಿರ್ದೇಶಕ, ಪ್ರಸಾದನ ಕಲಾವಿದ, ವಸ್ತ್ರವಿನ್ಯಾಸಕ, ಸಂಘಟಕರಾಗಿ ಅವರದ್ದು ಬಹುರೂಪಿ ರಂಗಕೈಂಕರ್ಯ. ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದವರಾದ ಗುರುನಾಥ್ ಬಿ.ಹೂಗಾರ ಅವರಿಗೆ ವೃತ್ತಿ-ಪ್ರವೃತ್ತಿ, ಬದುಕು-ಭಾವ ಎಲ್ಲವೂ ರಂಗಭೂಮಿಯೇ. ಓದಿದ್ದು ಕೇವಲ ಏಳನೇ ತರಗತಿವರೆಗೆ ಮಾತ್ರ. ಎಳೆವೆಯಲ್ಲೇ ಬಣ್ಣದ ಮೋಹಕ್ಕೆ ಸಿಲುಕಿ ರಂಗಪ್ರವೇಶ. ಹುಟ್ಟೂರನ್ನೇ ಕಲಾಕೈಂಕರ್ಯದ ಕೇಂದ್ರಸ್ಥಾನವಾಗಿ ಮಾಡಿಕೊಂಡು ಆರು ದಶಕಗಳಿಂದಲೂ ನಿರಂತರ ರಂಗಸೇವೆ. ನಟನೆ, ನಿರ್ದೇಶನ ಜತೆಗೆ ಪ್ರಸಾದನ ಕಲಾವಿದರಾಗಿ ಹೆಜ್ಜೆಗುರುತು. ಸಂಪತ್ತಿಗೆ ಸವಾಲ್, ಚೀನಾದುರಾಕ್ರಮಣ, ನನ್ನಭೂಮಿ, ಗರೀಬಿ ಹಠಾವೋ, ನೀತಿಗೆಲ್ಲಿದೆ ಜಾತಿ?, ಹಾರಕೂಡ ಚೆನ್ನಬಸವೇಶ್ವರ ಮಹಾತ್ಮ, ವಿಶ್ವಜ್ಯೋತಿ ಶರಣಬಸವ, ಕಾರ್ಗಿಲ್ ಕೂಗು ಮುಂತಾದ ೧೧೦ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯನಟ, ಖಳನಟನಾಗಿ ರಂಜಿಸಿದ ಕಲಾವಿದರು. ತವರುಮನೆ ತಣ್ಣಗಿರಲಿ, ಆಶಾಲತಾ, ಗೌಡ್ರಗದ್ಲ, ಜೋಕುಮಾರಸ್ವಾಮಿ ಮತ್ತಿತರ ೨೫ಕ್ಕೂ ಹೆಚ್ಚು ನಾಟಕಗಳ ನಿರ್ದೇಶಕರು. ನೂರಾರು ನಟ–ನಟಿಯರಿಗೆ ವಸ್ತ್ರವಿನ್ಯಾಸಕರು. ಕಿರುಚಿತ್ರ-ಸಾಕ್ಷ್ಯಚಿತ್ರಗಳಲ್ಲೂ ಪ್ರತಿಭೆ ಮೆರೆದ ರಂಗಕರ್ಮಿ, ಹತ್ತಾರು ಗೌರವಗಳಿಗೆ ಪಾತ್ರರಾದ ಗುರುನಾಥ್ ಹೂಗಾರ ಅವರು ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯಿಂದಲೂ ಪುರಸ್ಕೃತರು.
ಶ್ರೀ ಗುಡ್ಡ ಪಾಣಾರ
ಕರಾವಳಿ ಭಾಗದ ಅತ್ಯಂತ ಹಿರಿಯ ಅನುಭವಿ ದೈವ ನರ್ತಕರು ಗುಡ್ಡ ಪಾಣಾರ, ದೈವ ಸೇವೆಯಲ್ಲಿ ಬದುಕಿನ ಧನ್ಯತೆಯನ್ನು ಕಂಡುಕೊಂಡ ಅಪರೂಪದ ಕಲಾವಂತರು. ಗುಡ್ಡ ಪಾಣಾರ ಅವರಿಗೆ ದೈವನರ್ತನ ಅಪ್ಪನಿಂದ ಬಂದ ಬಳುವಳಿ, ಕೋಲ ನರ್ತಕರಾಗಿದ್ದ ತಂದೆ ನಾಣು ಪಾಣಾರ ಅವರ ದೈವನರ್ತನವನ್ನು ಕಣ್ಣುಂಬಿಕೊಳ್ಳುತ್ತಲೇ ಬಾಲ್ಯದಲ್ಲೇ ಹೆಜ್ಜೆಹಾಕುತ್ತಾ ದೈವನರ್ತನ ಕಲೆಯನ್ನು ಮೈಗೂಡಿಸಿಕೊಂಡವರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ದೈವನರ್ತನ ಆರಂಭಿಸಿದ ಗುಡ್ಡ ಪಾಣಾರ ಅವರು ವಿವಿಧ ದೈವ ಸಾನಿಧ್ಯಗಳಲ್ಲಿ ಪಂಜುರ್ಲಿ, ಬೊಬ್ಬರ, ಧಮಾವತಿ ಹಾಗೂ ಸ್ತ್ರೀ ದೈವಗಳಾದ ವರ್ತೆ, ತನಿಮಾನಿಗ ಮುಂತಾದ ದೈವಗಳ ನರ್ತನವನ್ನು ಮಾಡುವುದು ವಿಶೇಷ. ಕರಾವಳಿ ದೈವಭಕ್ತರ ಮನದಲ್ಲಿ ಗುಡ್ಡ ಪಾಣಾರ ಅವರು ಮೂಡಿಸಿರುವ ನರ್ತನದ ಛಾಪು ಮತ್ತು ದೈವಭಾವ ವರ್ಣಿಸಲಸದಳ. ಒಂದಲ್ಲ ಎರಡಲ್ಲ ಬರೋಬ್ಬರಿ ೪೬ ವರ್ಷಗಳಿಂದ ಈ ದೈವನರ್ತನದಲ್ಲಿ ಅನವರತ ನಿರತರು. ಕಾಪುವಿನ ಸುತ್ತಮುತ್ತಲೂ ಜರುಗುವ ಪಿಲಿಕೋಲದಲ್ಲಿ ಗುಡ್ಡ ಪಾಣಾರ ದೈವನರ್ತನ ಅತ್ಯಂತ ಜನಪ್ರಿಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರರಾಗಿರುವ ಗುಡ್ಡ ಪಾಣಾರ ಅವರ ದೈವನರ್ತನಕ್ಕೆ ಅವರಷ್ಟೇ ಸಾಟಿ ಎನ್ನುವಷ್ಟು ಅಪೂರ್ವ ಕಲೆಗಾರಿಕೆ.
ಬಾನುಲಿ ಮತ್ತು ಬಾನುಲಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಪ್ರಮುಖರು ಜಿ.ಎಂ.ಶಿರಹಟ್ಟಿ. ಬರವಣಿಗೆಯ ಸಾಹಿತ್ಯವನ್ನು ಪರಿವರ್ತಿಸಿ ಶ್ರವಣ ಸಾಹಿತ್ಯವನ್ನು ರಚಿಸಿದ ಸಾಹಿತಿ, ಬಹುಮಾಧ್ಯಮಗಳ ಬಹುಶ್ರುತ ಸಾಧಕರು. ಜಿ.ಎಂ.ಶಿರಹಟ್ಟಿ ಎಂದೇ ಜನಪ್ರಿಯರಾದ ಗೌಸ್ ಮೊಹದ್ದೀನ ಶಿರಹಟ್ಟಿ ಅವರು ೧೯೪೧ರಲ್ಲಿ ಜನಿಸಿದವರು. ಪತ್ರಿಕೋದ್ಯಮ, ರೇಡಿಯೋ ಹಾಗೂ ದೂರದರ್ಶನ ಅವರ ತ್ರಿವಳಿ ಕಾರ್ಯಕ್ಷೇತ್ರಗಳು, ನಲವತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿದ ಶಿರಹಟ್ಟಿ ಬೆಂಗಳೂರು ವಿವಿ, ಭಾರತೀಯ ವಿದ್ಯಾಭವನ, ರೇವಾಗಾರ್ಡನ್ ಮತ್ತಿತರ ಸಂಸ್ಥೆಗಳಲ್ಲಿ ಮಾಧ್ಯಮ ಪ್ರಾಧ್ಯಾಪಕರಾಗಿ ದುಡಿದವರು. ಕನ್ನಡಸಾಹಿತ್ಯದಲ್ಲಿ ಪ್ರಸಾರ ಸಾಹಿತ್ಯವನ್ನು ನಾಟಕ, ರೂಪಕ, ಸಂದರ್ಶನ, ಸಾಕ್ಷ್ಯಚಿತ್ರಗಳಲ್ಲಿ ಅಳವಡಿಸಿ ಬಾನುಲಿ ಸಾಹಿತ್ಯವನ್ನು ಬೆಳಕಿಗೆ ತಂದ ಹೆಗ್ಗಳಿಕೆ, ಸಾರ್ಕ ದೇಶದ ಕ್ವಿಜ್ ಕಾರ್ಯಕ್ರಮಗಳ ಭಾರತೀಯ ತಂಢಗಳ ನಾಯಕರಾಗಿ ಡಾಕಾದಲ್ಲೂ ಸೇವೆ ಸಲ್ಲಿಸಿದ ಶಿರಹಟ್ಟಿ ಅವರು ಚೇತನಚಿಲುಮೆ, ಪ್ರಬಂಧಗಳ ಸಂಕಲನ, ಮಕ್ಕಳ ನಾಟಕಗಳ ಕತೃ, ಆಕಾಶವಾಣಿ ಕಾರ್ಯಕ್ರಮಗಳಿಗೆ ಐದು ರಾಷ್ಟ್ರೀಯ, ೨ ಅಂತಾರಾಷ್ಟ್ರೀಯ, ಒಂದು ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಕರ್ನಾಟಕ ನಾಟಕ ಅಕಾಡೆಮಿ, ಮಾಧ್ಯಮ ಅಕಾಡೆಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಂದ ಭೂಷಿತರಾದ ಶಿರಹಟ್ಟಿ ಬಾನುಲಿ ಮಾಧ್ಯಮದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಸಾಧಕಮಣಿ.
ಶ್ರೀ ಗಣೇಶ ತಿಮ್ಮಯ್ಯ
ಕೃಷಿ ಕ್ಷೇತ್ರದಲ್ಲಿ ನವೀನ ಸಂಶೋಧನೆಗಳಿಂದ ಹೊಸ ಸಾಧ್ಯತೆಗಳನ್ನು ತೋರ್ಗಾಣಿಸಿದ ಸಾಧಕರು ಗಣೇಶ ತಿಮ್ಮಯ್ಯ, ಸೇನೆ ಮತ್ತು ಕೃಷಿಯಲ್ಲಿನ ಸಾಧನೆ ರಾಷ್ಟ್ರಪ್ರಶಸ್ತಿಗಳಿಗೆ ಭಾಜನವಾದ ಪ್ರತಿಭಾವಂತರು, ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ೧೯೬೦ರಲ್ಲಿ ಜನಿಸಿದ ಗಣೇಶ ತಿಮ್ಮಯ್ಯ ಅವರು ಅಪ್ಪಟ ದೇಶಪ್ರೇಮಿ, ಬೇಸಾಯದಲ್ಲಿ ಧನ್ಯತೆ ಕಂಡುಕೊಂಡ ಪ್ರಗತಿಪರ ಕೃಷಿಕ, ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸೈನಿಕರು. ಸೇನೆಯಿಂದ ನಿವೃತ್ತರಾದ ಮೇಲೆ ಸಾಧನಾಕ್ಷೇತ್ರವಾಗಿಸಿಕೊಂಡವರು. ಭತ್ತದ ವಿವಿಧ ತಳಿಗಳನ್ನು ಬೆಳೆದು ಸಂಶೋಧನಾ ಕೇಂದ್ರಗಳಿಗೆ ಬೀಜ ನೀಡುತ್ತಿರುವ ಬೇಸಾಯಗಾರರು. ಹೊಸ ಹೊಸ ಬೆಳೆಯಾದ ನುಸುಗುನ್ನಿ, ಬೀಯಂವನ್ನೂ ಬೆಳೆದವರು. ರಾಜ್ಯದಲ್ಲೇ ಪ್ರತಿ ಹೆಕ್ಟೇರ್ಗೆ ಅತಿ ಹೆಚ್ಚು ಭತ್ತದ ಇಳುವರಿಯನ್ನು ಬೆಳೆದ ಹೆಗ್ಗಳಿಕೆ, ಕೋಟಿಯ ಹೊಸ ತಳಿ, ಮೀನಿನ ಹೊಸ ತಳಿ, ಬೆಳೆಗಂದ, ಬಿದಿರು ಮಾಡಂಗಲ, ತುಂಗಾ, ಅಲೇರಾ ಜೀರಿಗೆ ಸಣ್ಣ, ಕಜೆ.ವಿ.ಆರ್ನಂರ ಬೆಳೆಗಳನ್ನು ಬೆಳೆದ ಮಾದರಿ ರೈತರು. ರಾಜ್ಯ, ರಾಷ್ಟ್ರೀಯ ಕೃಷಿ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಹಿರಿಮೆ. ಕೃಷಿ ಸಾಧನೆಗಾಗಿ ಎರಡು ರಾಷ್ಟ್ರೀಯ ಹಾಗೂ ಆರು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇಲಿಸಿಕೊಂಡ ದೇಸೀ ಕೃಷಿ ವಿಜ್ಞಾನಿ.
ಜನಪದ ರಂಗಭೂಮಿಯಲ್ಲಿ ಬಹುರೂಪಿಯಾಗಿ ವಿಶೇಷ ಛಾಪು ಮೂಡಿಸಿದ ಸಂಪನ್ಮೂಲ ವ್ಯಕ್ತಿ ಡಾ. ಶ್ರೀಶೈಲ ಹುದ್ದಾರ, ನಟ, ನಿರ್ದೇಶಕ, ನಾಟಕಕಾರ, ಕನ್ನಡ ಪ್ರಾಧ್ಯಾಪಕರಾಗಿ ಬಹುಶ್ರುತ ಸಾಧನೆಗೈದ ರಂಗಜೀವಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯಲ್ಲಿ ಜನಿಸಿದ ಶ್ರೀಶೈಲ ಹುದ್ದಾರ ಅಕ್ಷರದ ಚುಂಗು ಹಿಡಿದು ಅರಳಿ ನಳನಳಿಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು, ‘ದೊಡ್ಡಾಟ ಪರಂಪರೆ ಮತ್ತು ಪ್ರಯೋಗಗಳು’ ಕುರಿತು ಪಿಎಚ್ಡಿ ಪದವಿ. ವೃತ್ತಿಯಲ್ಲಿ ಕನ್ನಡ ಅಧ್ಯಾಪಕ, ಪ್ರವೃತ್ತಿಯಲ್ಲಿ ರಂಗಕರ್ಮಿ. ಬಾಲ್ಯದಲ್ಲೇ ಅಂಟಿದ ರಂಗನಂಟನ್ನು ಬದುಕಿನುದ್ದಕ್ಕೂ ಭಾವದ ಗಂಟಾಗಿಸಿಕೊಂಡು ಸಾಧನೆಯ ಪಥ ಸ್ಪರ್ಶಿಸಿದವರು. ಕನಕವಿಜಯ, ಬುದ್ಧಪ್ರಬುದ್ಧ, ಅಕ್ಕಮಹಾದೇವಿ, ಬಾಹುಬಲಿ, ಅನುಭಾವಿ ಅಲ್ಲಮ, ನಿಜಗುಣ ಶಿವಯೋಗಿ, ಭಾಗೀರಥಿ, ಲಿಂಗರಾಜ ದೇಸಾಯಿ ಮುಂತಾದ ದೊಡ್ಡಾಟ-ಸಣ್ಣಾಟಗಳಲ್ಲಿ ನಟಿಸಿ ರಸಿಕರ ಮನಗೆದ್ದ ಕಲಾವಿದ, ಜೈಸಿದನಾಯಕ, ಅಮಟೂರ ಬಾಳಪ್ಪ, ರಕ್ತರಾತ್ರಿ, ಅಪ್ಪ ಮತ್ತು ಟಿಂಗರಬುಡ್ಡಣ್ಣ ನಿರ್ದೇಶಿತ ನಾಟಕಗಳು. ದೊಡ್ಡಾಟ – ಒಂದು ಪರಿಕಲ್ಪನೆ, ನೆಲದ ಹಾಡುಗಳು, ಕರ್ನಾಟಕ ಜಾನಪದ ರಂಗಭೂಮಿ, ಸಾಹಿತ್ಯಸೌರಭ ಕೃತಿಗಳ ಕತೃ, ಹಲವು ನಾಟಕ ಮತ್ತು ಬೀದಿನಾಟಕಗಳ ರಚನಕಾರರು. ಸಿನಿಮಾ ದೂರದರ್ಶನದಲ್ಲೂ ಬೆಳಗಿದ ಪ್ರತಿಭಾಶಾಲಿ, ಸಮಾಜಮುಖಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಈ ಅನುಭವಿ ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ಕಲಾಜೀವಿ.
ಕನ್ನಡ ವೃತ್ತಿ ರಂಗಭೂಮಿಯ ಆಳ ಅಧ್ಯಯನಕಾರರಲ್ಲಿ ಡಾ. ರಾಮಕೃಷ್ಣ ಮರಾಠೆ ಪ್ರಮುಖರು, ನಟ, ನಾಟಕಕಾರ, ಅನುವಾದಕ, ತೌಲನಿಕ ಅಧ್ಯಯನಕಾರ, ಕನ್ನಡ ಉಪನ್ಯಾಸಕ ಮತ್ತು ಪತ್ರಕರ್ತರಾಗಿ ಸೇವೆಗೈದ ಬಹುರೂಪಿ, ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವಣಗಾಂವ್ನಲ್ಲಿ ೧೯೫೮ರಲ್ಲಿ ಜನಿಸಿದ ಡಾ. ರಾಮಕೃಷ್ಣ ಮರಾಠೆ ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಬಹುರೂಪಿ, ರಂಗನಟನೆ, ನಾಟಕರಚನೆ ಮತ್ತು ಸಾಹಿತ್ಯ ಕೃಷಿ ಪ್ರಧಾನ ಆಸಕ್ತಿಯ ಕ್ಷೇತ್ರಗಳು, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ *ಉತ್ತರಕರ್ನಾಟಕದ ವೃತ್ತಿರಂಗಭೂಮಿ ಕುರಿತು ಪಿಎಚ್ಡಿ ಮಾಡಿದವರು. ಕರ್ನಾಟಕ ವೃತ್ತಿರಂಗ ಕಂಪನಿಗಳ ನಿಖರ ಮಾಹಿತಿಯುಳ್ಳವರು. ಅಪರೂಪದ ಕಾವ್ಯ ಸಂಪಾದಿಸಿದವರು. ಕೊಣ್ಣೂರ ನಾಟಕ ಕಂಪನಿ, ಬಿ.ಆರ್.ಅಲಶಿನಗೋಜ ಜೀವನಚಲಿತ್ರೆ, ರಂಗಭೂಮಿಯ ಕನ್ನಡ ಸಂವೇದನೆ, ನಾಟಕ-ಕರ್ನಾಟಕ ಕೃತಿ ಮತ್ತು ರಾಮಧಾನ್ಯ ನಾಟಕದ ರಚನಾಕಾರರು. ಗ್ರಂಥ ಸಂಪಾದಕರು, ಅಂಗಾಯತ ಪತ್ತಿಕೆಯ ಸಹಸಂಪಾದಕರು. ಕನ್ನಡದಿಂದ ಮರಾಠಿ-ಮರಾಠಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ತಂದ ಅನುವಾದಕರು. ಮಾಧ್ಯಮಗಳಲ್ಲಿ ಲೇಖನ ಬರೆದವರು, ಅನೇಕ ಏಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ವಿದ್ವತ್ ದರ್ಶಿಸಿದವರು. ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರಾಮಕೃಷ್ಣ ಮರಾಠ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವಾನಿರತರಾಗಿರುವ ಕ್ರಿಯಾಶೀಲರು.
ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಗೈದಿರುವ ಡಾ. ಪ್ರಭಾಕರ ಜೋಷಿ ಅವರು ಕರ್ನಾಟಕದ ಬಹುಶ್ರುತ ಏದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. ೧೯೪೬ರಲ್ಲಿ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ ಜನಿಸಿದ ಪ್ರಭಾಕರಜೋಷಿ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಸಾಹಿತ್ಯ ರತ್ನ ಮತ್ತು ಯಕ್ಷಗಾನದಲ್ಲಿ ಪಿ.ಎಚ್.ಡಿ., ಮೂರು ದಶಕಗಳ ಕಾಲ ವಾಣಿಜ್ಯ ಪ್ರಾಧ್ಯಾಪಕರಾಗಿ ಸೇವೆ. ಪ್ರಾಂಶುಪಾಲರಾಗಿಯೂ ಅನುಭವ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿ. ಬಹುಮುಖ್ಯವಾಗಿ ಯಕ್ಷಗಾನ ತಾಳಮದ್ದಳೆ ರಂಗದ ಸಮರ್ಥ ಅರ್ಥಧಾರಿ, ಭಾಷೆ-ಭಾವ–ವಿಚಾರಯುಕ್ತ ಅರ್ಥಗಾರಿಕೆಗೆ ಹೆಸರುವಾಸಿ. ಕಲಾವಿದನಾಗಿ ಹೆಗ್ಗುರುತು. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ, ಯಕ್ಷಗಾನ ಪ್ರಸಂಗಗಳ ವಿಮರ್ಶೆಯಲ್ಲಿ ಪ್ರಖರ ಹಿಡಿತ. ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾಗಿಯೂ ನಿರಂತರ ಸೇವೆ. ಯಕ್ಷಗಾನ ಪಾರಿಭಾಷಿಕ ಕೋಶದ ನಿರ್ಮಾತೃ, ಉತ್ತಮ ಉಪನ್ಯಾಸಕಾರ, ಸಮನ್ವಯಕಾರರೂ ಕೂಡ. ನಾಲ್ಕು ದಶಕಗಳಿಂದಲೂ ಯಕ್ಷರಂಗದಲ್ಲಿ ತನ್ಮಯರಾಗಿರುವ ಡಾ. ಪ್ರಭಾಕರ ಜೋಷಿ ತಮಗೆ ದಕ್ಕಿದ ಹತ್ತಾರು ಪ್ರಶಸ್ತಿಗಳಿಗೂ ಮೀರಿದ ಮೇರು ಪ್ರತಿಭೆ.
ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದ ಹಿರಿಯ ಶಾಸನತಜ್ಞರು ಡಾ. ಎಂ.ಜಿ.ನಾಗರಾಜ್, ಶಾಸನಶಾಸ್ತ್ರ ಕ್ಷೇತ್ರದ ಅದ್ವಿತೀಯ ಸಾಧಕರು, ಸಂಶೋಧಕರು ಪ್ರಾಚಾರ್ಯರು ಹಾಗೂ ದಕ್ಷ ಆಡಳಿತಗಾರರು. ಸಾಂಸ್ಕೃತಿಕ ನಗರ ಮೈಸೂರಿನ ಸಾಹಿತ್ಯಕ ಕೊಡುಗೆ ಡಾ. ಎಂ.ಜಿ.ನಾಗರಾಜ್, ೧೯೩೦ರಲ್ಲಿ ಜನಿಸಿದ ನಾಗರಾಜ್ ಪ್ರಖರ ಪಂಡಿತರು. ಎಂಎಸ್ಸಿ, ಎಂಎಸ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸದಲ್ಲಿ ಡಿ.ಲಿಟ್, ಶಾಸನಶಾಸ್ತ್ರದಲ್ಲಿ ಡ್ರೈಮಾಟಿಕ್ಸ್ ಪೂರೈಸಿದವರು. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನಾನಿರತರು. ನಿವೃತ್ತ ಪ್ರಾಚಾರ್ಯರು. ಶಾಸನಕ್ಷೇತ್ರದಲ್ಲಿ ಅವರದ್ದು ತಳಸ್ಪರ್ಶಿ ಅಧ್ಯಯನ. ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ೮ ರಿಂದ ೧೮ ಶತಮಾನದವರೆಗಿನ ಸುಮಾರು ೨೦ ಹೊಸ ಶಾಸನಗಳನ್ನು ಪತ್ತೆಹಚ್ಚಿದ ಅಪೂರ್ವ ಸಂಶೋಧಕರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸೇರಿ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸನಶಾಸ್ತ್ರ ಬೋಧಿಸಿದ ತಜ್ಞರು. ೪೦ಕ್ಕೂ ಹೆಚ್ಚು ಮಹತ್ವದ ಕೃತಿಗಳ ರಚನಕಾರರು. ಕನ್ನಡ-ಇಂಗ್ಲೀಷ್ ಎರಡರಲ್ಲೂ ಅತ್ಯುತ್ತಮ ಪ್ರಬಂಧಕಾರರು. ಮಿಥಿಕ್ ಸೊಸೈಟಿಯೂ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿದ ದಕ್ಷ ಆಡಳಿತಗಾರರು. ಜ್ಞಾನಶಾಖೆಯ ಹಲವು ಮಜಲುಗಳನ್ನು ತೋರ್ಗಾಣಿಸಿದವರು. ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗುತ್ತಲೇ ಅವುಗಳ ಗೌರವ-ಘನತೆ ಹೆಚ್ಚಿಸಿದ, ೯೨ರ ಇಳಿವಯಸ್ಸಿನಲ್ಲೂ ಸಾಹಿತ್ಯ-ಶಾಸನಚಿಂತನೆಯಲ್ಲಿ ತೊಡಗಿರುವ ಡಾ. ನಾಗರಾಜ್ ನಮ್ಮ ನಡುವಿರುವ ಅಪರೂಪದ ವಿದ್ವತ್ಮಣಿ.
ಆಡಳಿತದಲ್ಲಿ ಜನಪರತೆ, ದಕ್ಷತೆ ಮತ್ತು ಸೇವಾತತ್ಪರತೆಗೆ ಹೆಸರಾದವರು ಡಾ. ಎಚ್.ಎಲ್. ಮಂಜುನಾಥ್, ಸಾರ್ವಜನಿಕ ಹುದ್ದೆಗಳ ಘನತೆ ಹೆಚ್ಚಿಸಿದ ಆಡಳಿತ ತಜ್ಞ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶಸ್ಸಿನ ರೂವಾಲಿ, ಡಾ. ಎಲ್.ಎಚ್.ಮಂಜುನಾಥ್ ಮೂಲತಃ ಪಶುವೈದ್ಯರು. ರಾಯಚೂರಿನ ಕುಕ್ಕನೂರಿನಲ್ಲಿ ವೃತ್ತಿಬದುಕು ಆರಂಭಿಸಿ ಬಳಿಕ ಮಣಿಪಾಲಕ್ಕೆ ಬಂದವರು. ಬಿ.ಎ.ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾಗಿ ದಶಕದವರೆಗೆ ದುಡಿದವರು. ಆನಂತರ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿ ದೇಶದ ವಿವಿಧೆಡೆ ಸೇವೆ. ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದ ಮೇಲೆ ಬದುಕಿನ ಚಿತ್ರಣವೇ ಬದಲು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೊಸ ಪರ್ವ ಸೃಷ್ಟಿ. ಬೆಳ್ತಂಗಡಿ ತಾಲ್ಲೂಕಿಗೆ ಸೀಮಿತವಾಗಿದ್ದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರ. ೫೦ ಲಕ್ಷ ಕುಟುಂಬಗಳ ಆರ್ಥಿಕ ಪರಿವರ್ತನೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ೧೭ ವರ್ಷಗಳ ಕಾಲ ಆಡಳಿತ ನಿರ್ದೇಶಕರಾಗಿ ಸಾವಿರಾರು ಮಹಿಳೆಯರಿಗೆ ಕೌಶಲ್ಯದ ತರಬೇತಿ. ದುಶ್ಚಟಗಳ ಮುಕ್ತಿಗೆ ಜಾಗೃತಿ. ೪೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಉದ್ಯೋಗದ ಅವಕಾಶ. ಹಲವು ಪ್ರಶಸ್ತಿಗಳ ಪುರಸ್ಕೃತರು, ಐದು ಕೃತಿಗಳ ಲೇಖಕರೂ ಆಗಿರುವ ಮಂಜುನಾಥ್ ದುರ್ಬಲ ವರ್ಗದ ಜನರನ್ನು ಸ್ವಾವಲಂಬಿಗಳನ್ನಾಗಿಸಿದ ಸಾಮಾಜಿಕ ಪರಿವರ್ತಕರು.
ಡಾ. ಕೋಡಿ ರಂಗಪ್ಪ
ಶಿಕ್ಷಣ ಕ್ಷೇತ್ರದಲ್ಲಿ ಬಹುರೂಪಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತಜ್ಞರು ಡಾ. ಕೋಡಿ ರಂಗಪ್ಪ. ಪ್ರಾಧ್ಯಾಪಕರು, ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿ, ಲೇಖಕರು, ಪಠ್ಯಪುಸ್ತಕ ರಚನಾಕಾರರರು, ಕನ್ನಡ ಪರಿಚಾರಕರು.
ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಕೋಡಿ ರಂಗಪ್ಪ ಅವರು ರೈತ ಕುಟುಂಬದ ಕುಡಿ, ಬಡತನದ ನಡುವೆಯೇ ಅಕ್ಷರದಿಂದ ಅರಳಿದ ಪ್ರತಿಭೆ, ಕನ್ನಡ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ ಪದವೀಧರರು. ಶಿಕ್ಷಣದಲ್ಲಿ ಲಿಂಗಸಮಾನತೆ ಕುರಿತು ಬೆಂಗಳೂರು ವಿವಿಯಿಂದ ಪಿಎಚ್ಡಿ. (೧೯೮೫ರಲ್ಲಿ ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ವೃತ್ತಿಬದುಕಿನಾರಂಭ. ೩೨ ವರ್ಷಗಳ ಸುದೀರ್ಘ ಸೇವೆ, ಪ್ರಾಂಶುಪಾಲರಾಗಿ ನಿವೃತ್ತಿ. ವೃತ್ತಿಯ ಜೊತೆ ಭಾಷೆ ಸಾಹಿತ್ಯ ಸಂಸ್ಕೃತಿ ಚಿಂತನೆ ಮತ್ತು ಸಾಕ್ಷರತಾ ಆಂದೋಲನದಲ್ಲಿ ಸೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯ, ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷನಾಗಿ ಮಾನವೀಯ ಸೇವೆ. ಬಿಎಡ್, ಡಿಎಡ್ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ, ಕನ್ನಡ ಕಲಿಕಾ ಮಾನಕಗಳ ರಚನೆ ಅಧ್ಯಕ್ಷ, ರಾಷ್ಟ್ರೀಯ ಸಾಕ್ಷರತಾ ಮಿಷನ್ಯಡಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ತರಬೇತಿ ಸಂಯೋಜಕ, ಮನೆಯಲ್ಲೇ ಗ್ರಂಥಾಲಯ ತೆರೆದು ೧೦ ಸಾವಿರ ಪುಸ್ತಕಗಳ ಸಂಗ್ರಹ ಹಾಗೂ ಹಳ್ಳಿಹಳ್ಳಿಗೆ ತೆರಳಿ ರಾತ್ರಿಪಾಠಶಾಲೆಗಳನ್ನು ನಡೆಸಿದ, ಹಲವು ಕೃತಿಗಳ ಲೇಖಕರೂ ಆಗಿರುವ ಕೋಡಿರಂಗಪ್ಪ ಅಪ್ಪಟ ಶಿಕ್ಷಣಬಂಧು.
ವೈದ್ಯೋನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥವಾಗಿ ಬಾಳಿದ ವೈದ್ಯರು ಡಾ. ಎಂ.ಬಸವಂತಪ್ಪ, ಉಚಿತ-ಮಾನವೀಯ ಸೇವೆಗೆ ಹೆಸರಾದ ವೈದ್ಯರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ೧೯೫೧ರಲ್ಲಿ ಜನಿಸಿದ ಬಸವಂತಪ್ಪ ಬಡತನದ ಬೇಗೆಯಲ್ಲಿ ಅರಳಿದ ಸಾಧಕರು. ಸಿರಿಗೆರೆ ಮತ್ತು ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗುವ ಕನಸು ನನಸಾಗಿಸಿಕೊಂಡ ಛಲಗಾರ, ಹುಟ್ಟೂರಿನಲ್ಲಿ ವೈದ್ಯವೃತ್ತಿ ಆರಂಭಿಸಿದ ಬಸವಂತಪ್ಪ ಮೂರೂವರೆ ದಶಕಗಳಿಗೂ ಅಧಿಕ ಕಾಲ ಹಗಲಿರುಳೆನ್ನದೇ ರೋಗಿಗಳಿಗೆ ಚಿಕಿತ್ಸಾ ಸೇವೆ ಒದಗಿಸಿದವರು. ೨ ರೂ. ವೈದ್ಯರೆಂದೇ ಹೆಸರಾದ ಅವರು ೨೦ ವರ್ಷಗಳ ಬಳಿಕ ೫ ರೂಪಾಯಿ ಪಡೆಯಲಾರಂಭಿಸಿದ್ದು ವಿಶೇಷ, ಬಡರೋಗಿಗಳಿಗೆ ಹಣಪಡೆಯದೇ ಉಚಿತ ಸೇವೆ ಒದಗಿಸುವ ಮಾನವೀಯ ವ್ಯಕ್ತಿ, ಕೊರೊನಾ ಸಂದರ್ಭದಲ್ಲಿ ಅರೆದಿನವೂ ಕ್ಲಿನಿಕ್ ಮುಚ್ಚದೇ ಜನಸಾಮಾನ್ಯರ ಅನಾರೋಗ್ಯದ ಸಂಕಟಗಳನ್ನು ನಿವಾರಿಸಿದ ಪುಣ್ಯಾತ್ಮರು. ಹಳ್ಳಿಗಾಡಿನಲ್ಲಿ ಹೆಸರುವಾಸಿಯಾಗಿರುವ ಡಾ. ಬಸವಂತಪ್ಪ ಅವರ ಕೈಗುಣಕ್ಕೆ ವಾಸಿಯಾಗದ ರೋಗಿ ಬಲು ವಿರಳ, ಅಂತಃಕರಣ, ಮಾನವೀಯತೆ ಮತ್ತು ವೃತ್ತಿ ಬದ್ಧತೆಯಿಂದ ರೋಗಿಗಳ ಮೊಗದಲ್ಲಿ ನಗುಚಿಮ್ಮಿಸಿದ ಆದರ್ಶ ಧನ್ವಂತರಿ.
ಕನ್ನಡದ ವಿಜ್ಞಾನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಆಯಾಮಗಳಲ್ಲಿ ಕೃಷಿಗೈದ ವಿಶೇಷ ತಜ್ಞರು ಡಿ.ಆರ್.ಬಳೂರಗಿ, ಬರಹಗಾರ, ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ, ಆಡಳಿತಗಾರರಾಗಿ ಅವರದ್ದು ಅಳಿಸಲಾಗದ ಹೆಜ್ಜೆಗುರುತು. ಧಾರವಾಡದ ದೈತ್ಯ ಪ್ರತಿಭೆ ಡಿ.ಆರ್.ಬಳೂರಗಿ ಕರ್ನಾಟಕ ವಿವಿಯ ಎಂಎಸ್ಸಿ ಪದವೀಧರರು. ರಾಯಚೂರಿನ ಎಲ್.ಐ.ಡಿ. ಕಾಲೇಜಿನ ಮೂರು ದಶಕಗಳ ಕಾಲ ಅಧ್ಯಾಪಕ, ಗುಲ್ಬರ್ಗಾ ವಿವಿ ಸಹಾಯಕ ಕುಲಸಚಿವ, ಬೆಳಗಾವಿ ವಿಜ್ಞಾನಕೇಂದ್ರದ ನಿರ್ದೇಶಕ, ಹಂಪಿ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ೩೮ ಸೃಜನ ಕೃತಿಗಳು, ಮೂರು ಅನುವಾದ, ೭ ಸಂಪಾದಿತ ಕೃತಿಗಳು ವಿಜ್ಞಾನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಕರ್ನಾಟಕ ರಾಜ್ಯ ವಿಜ್ಞಾನಪರಿಷತ್ತಿನ ಸ್ಥಾಪಕ ಸದಸ್ಯ, ಮಾಸಪತ್ರಿಕೆಯ ಸಂಪಾದಕಮಂಡಲ ಸದಸ್ಯ, ಸಂಪನ್ಮೂಲವ್ಯಕ್ತಿಯಾಗಿ ೧೦೦ಕ್ಕೂ ಹೆಚ್ಚು ವಿಜ್ಞಾನ ಕಾರ್ಯಾಗಾರಗಳ ಆಯೋಜನೆ, ವಿಜ್ಞಾನ ಬೋಧನೋಪಕರಣಗಳ ವಿನ್ಯಾಸ, ಹಲವು ಶಾಲೆಗಳಲ್ಲಿ ವಿಜ್ಞಾನಕೇಂದ್ರಗಳ ಸ್ಥಾಪನೆ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಲಹೆಗಾರ, ಸಾವಿರಾರು ಶಿಕ್ಷಕರಿಗಾಗಿ ಕಾರ್ಯಾಗಾರ, ನವಕರ್ನಾಟಕ ಪಬ್ಲಿಕೇಷನ್ಸ್ಗೆ ೩೦ ಪುಸ್ತಕಗಳ ಮಾಲಿಕೆ ಸಿದ್ಧಪಡಿಸುವಿಕೆ, ೫೦ಕ್ಕೂ ಹೆಚ್ಚು ರೇಡಿಯೋ ಉಪನ್ಯಾಸ ಮುಂತಾದ ಅಮೂಲ್ಯ ಕೊಡುಗೆಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಅಸೀಮ ಸಾಧಕರು.
ಬಹುಮುಖಿ ಕ್ಷೇತ್ರಗಳಲ್ಲಿ ಸೇವೆಗೈದ ವಿಶಿಷ್ಟ ಸಮಾಜಸೇವಕ ಡಾ. ಎಸ್. ಬಲಬೀರ್ಸಿಂಗ್, ಬೀದರ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಪಾತ್ರಧಾರಿ. ಬಡವರಿಗೆ ನೆರವಾದ ಉದ್ಯಮಿ. ೧೯೬೦ರ ಮಾರ್ಚ್ ೧೫ರಂದು ಜನಿಸಿದ ಬಲಬೀರ್ಸಿಂಗ್ ಬಿ.ಎ ಪದವೀಧರರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ, ಪ್ರವೃತ್ತಿಯಲ್ಲಿ ಸಮಾಜಸೇವಕ, ಭಾವಸಂಪನ್ನದ ಸಹೃದಯಿ, ಹಣವಂತರಾದರೂ ಹೃದಯವಂತರು. ಗುರುನಾನಕ್ ಶೈಕ್ಷಣಿಕ ಸಂಸ್ಥೆ, ಗುರುದ್ವಾರ ಶ್ರೀನಾನಕ್ ಜೀರಾಸಾಹೇಬ್ ಹಾಗೂ ಗುರುನಾನಕ್ ಆಸ್ಪತ್ರೆಯ ಅಧ್ಯಕ್ಷರಾಗಿ ಬಹುರೂಪಿ ಸೇವೆ. ಗುರುದ್ವಾರದಲ್ಲಿ ೪೦೦ ಕೊಠಡಿಗಳ ನಿರ್ಮಾಣ, ಉಚಿತ ವಸತಿ, ಅನ್ನದಾಸೋಹದ ಸೇವೆ. ೧೫ ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ. ೧೫೦೦ಕ್ಕೂ ಹೆಚ್ಚು ಶಿಕ್ಷಿತರಿಗೆ ಉದ್ಯೋಗದಾಸರೆ, ಗುರುನಾನಕ್ ಆಸ್ಪತ್ರೆಯಲ್ಲಿ ಬಡವರಿಗೆ ಅಲ್ಪದರದಲ್ಲಿ ಚಿಕಿತ್ಸೆ, ಸಿಖ್ ಸಮುದಾಯಕ್ಕೆ ೨೦೦೮ರಲ್ಲಿ ಕೇಂದ್ರ ಸರ್ಕಾರ ಕೊಟ್ಟ ೧೫೦ ಕೋಟಿ ರೂ. ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, ಹೊರವರ್ತುಲ ರಸ್ತೆ ನಿರ್ಮಾಣದಿಂದ ಬೀದರ್ನ ಶೈಕ್ಷಣಿಕ-ಆರ್ಥಿಕ ಚಿತ್ರಣವನ್ನೇ ಬದಲಿಸಿದ ಉದ್ಯಮಿ, ಸಮುದಾಯದ ಸೇವೆಯಲ್ಲೇ ಸಾರ್ಥಕತೆ ಕಂಡುಕೊಂಡ ಬಲಬೀರ್ಸಿಂಗ್ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ಗೆ ಪಾತ್ರರು. ಬೀದರ್ ಜಿಲ್ಲೆಯ ಹೆಮ್ಮೆ-ಸಮಾಜಸೇವೆಗೆ ಮಾದರಿ.
ನ್ಯಾಯಾಂಗದಲ್ಲಿ ಸಮಾಜಪರ ನಿಲುವುಗಳಿಂದ ವಿಶಿಷ್ಟ ಛಾಪೊತ್ತಿದವರು ನಂಜುಂಡರೆಡ್ಡಿ, ನಾಲ್ಕು ದಶಕಗಳಿಂದಲೂ ಕಕ್ಷಿದಾರರ ಹಿತ ಕಾಯುತ್ತಿರುವ ನ್ಯಾಯವಾದಿ, ನ್ಯಾಯಾಂಗ ವಲಯದಲ್ಲಿ ನಂಜುಂಡರೆಡ್ಡಿ ಅವರದ್ದು ಬಲು ಜನಪ್ರಿಯ ಹೆಸರು. ಅಸೀಮ ವೃತ್ತಿಪರತೆ, ಜ್ಞಾನ ನಂಜುಂಡರೆಡ್ಡಿ ಅವರ ವಿಶೇಷತೆ, ಕ್ಲಿಷ್ಟಕರವಾದ ಪ್ರಕರಣಗಳಲ್ಲಿ ಅತ್ಯಂತ ಜಾಣ್ಮೆಯಿಂದ ವಾದಿಸಿ ಕಕ್ಷಿದಾರರಿಗೆ ಗೆಲುವನ್ನು ತಂದುಕೊಡುವಲ್ಲಿ ಅವರು ಸದಾ ಯಶಸ್ವಿ. ಸಮಾಜದ ಉನ್ನತಿಗೆ ಶ್ರಮಿಸುವುದೇ ಬದುಕಿನ ಮೂಲಧ್ಯೇಯ. ವಕೀಲವಲಯಲ್ಲಿ ಹಣಕ್ಕಿಂತಲೂ ಸಮಾಜಮುಖಿತ್ವ ಮುಖ್ಯವೆಂಬ ದಿವ್ಯ ನಂಬಿಕೆಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಾದಿಸಿ ಮಂಡಿಸಿದವರು. ಬಿಬಿಎಂಪಿ ಮತ್ತು ಬಿಡಿಎಯಿಂದ ಕೈತಪ್ಪುವಂತಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನೂರಾರು ಎಕರೆ ಭೂಮಿಯನ್ನು ಮರಳಿ ವಾಪಸ್ ಪಡೆದುಕೊಟ್ಟ ಅಪೂರ್ವ ಸಾಧನೆ-ಸೇವೆ. ನಂಜುಂಡರೆಡ್ಡಿ ಅವರ ಈ ವೃತ್ತಿಕುಶಲತೆಯಿಂದಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಜನತೆಗೆ ಆದ ಲಾಭ ಅಗಣಿತ. ವೃತ್ತಿಪರತೆ ಮತ್ತು ವೃತ್ತಿಬದ್ಧತೆಗಳ ಮಹಾಸಂಗಮದಂತಿರುವ ನಂಜುಂಡರೆಡ್ಡಿ ನ್ಯಾಯಾಂಗದಲ್ಲಿ ಕಂಡುಬರುವ ಅಪರೂಪದ ಸಮಾಜಪರ ನ್ಯಾಯವಾದಿ.
ಜನಸೇವೆಯೇ ಜನಾರ್ದನ ಸೇವೆಯೆಂದು ನಂಬಿ ನಡೆದ ವಿರಳ ರಾಜಕಾರಣಿ ಡಿ. ಮಾದೇಗೌಡ, ಸಾವಿರಾರು ಜನರಿಗೆ ಸೂರು ಕಲ್ಪಿಸಿದ ಜನನಾಯಕ, ಮಾಜಿ ಶಾಸಕರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೯೪೨ರಲ್ಲಿ ಜನಿಸಿದ ಮಾದೇಗೌಡರು ಬಿ.ಎ, ಬಿ.ಎಲ್. ಪದವೀಧರರು, ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ರಾಜಕಾರಣಿ, ಸಮಾಜಸೇವಕರು, ಜನಪರ ಕಾಳಜಿ, ಸಮಾಜಮುಖಿ ಚಿಂತನೆ ಮಾದೇಗೌಡರ ವಿಶೇಷತೆ, ಮೈಸೂರಿನ ಸಿಐಟಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೮ ಬಡಾವಣೆಗಳನ್ನು ನಿರ್ಮಿಸಿ ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಸೂರು ಕಲ್ಪಿಸುವ ಮೂಲಕ ಮನೆಮನೆ ಮಾದೇಗೌಡರೆಂದು ಜನಜನಿತರಾದವರು, ಆಶಾಮಂದಿರ ವಸತಿ ಯೋಜನೆ ಅನುಷ್ಠಾನಕ್ಕಾಗಿ ಹುಡ್ಕೋ ಸಂಸ್ಥೆಯಿಂದ ಪುರಸ್ಕಾರಕ್ಕೂ ಪಾತ್ರರಾದವರು. ಕುಂಬಾರಕೊಪ್ಪಲು ವಾರ್ಡ್ನಲ್ಲಿ ನಿರ್ಮಲನಗರ ಯೋಜನೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಕೀರ್ತಿ ಅವರದ್ದು. ಶೂನ್ಯ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ವಾರ್ಡ್ ಆಗಲು ಕಾರಣೀಕರ್ತರು. ಭಾರತ ಸೇವಾದಳ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ನಗರಾಭಿವೃದ್ಧಿ ವಿಶ್ವಸ್ತ ಮಂಡಳಿಯ ಅಧ್ಯಕ್ಷರು, ಮೇಲ್ಮನೆಯ ಸದಸ್ಯರಾಗಿ ಅನನ್ಯ ಸೇವೆ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ರೂವಾರಿ, ಬಡಾವಣೆಗಳಲ್ಲಿ ಸಸ್ಯಾರಾಧನೆ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿರುವ ಪರಿಸರ ಪ್ರೇಮಿ, ದಣಿವರಿಯದ ಸಮಾಜಸೇವಕರು.
ಮುಂಬಯಿ ನೆಲದಲ್ಲಿ ಕನ್ನಡದ ಪ್ರತಿಭಾಶಕ್ತಿಯನ್ನು ಬೆಳಗಿದವರು ದೇವಿದಾಸ ಶೆಟ್ಟಿ, ಚಿತ್ತಕಲಾವಿದ, ಮುಖಪುಟ ವಿನ್ಯಾಸಕ, ಬರಹಗಾರ, ಮ್ಯೂರಲ್ ಕಲಾವಿದರಾಗಿ ಹೆಜ್ಜೆಗುರುತು ಮೂಡಿಸಿರುವ ಪ್ರತಿಭಾಶಾಲಿ. ಮುಂಬಯಿನಲ್ಲೇ ಹುಟ್ಟಿ ಬೆಳೆದ ದೇವಿದಾಸ ಶೆಟ್ಟಿ ಅವರು ಕನ್ನಡದಲ್ಲೇ ವಿದ್ಯಾಭ್ಯಾಸ ಕಲಿತವರು. ಬಾಲ್ಯದಲ್ಲೇ ಸೆಳೆದ ಚಿತ್ರಕಲೆಗೆ ಬದುಕು ಸಮರ್ಪಿಸಿಕೊಂಡವರು. ರೇಖಾಚಿತ್ರ, ಮ್ಯೂರಲ್ ಕಲಾಭಿವ್ಯಕ್ತಿ ಹಾಗೂ ಮುಖಪುಟ ವಿನ್ಯಾಸದಲ್ಲಿ ಕೈಚಳಕ ತೋರಿದ ಕಲಾವಿದರು. ದೇಶ-ವಿದೇಶಗಳಲ್ಲಿ ೭೮ ಏಕವ್ಯಕ್ತಿ ಪ್ರದರ್ಶನ, ೪೫ ಸಾಮೂಹಿಕ ಕಲಾಪ್ರದರ್ಶನದ ಜತೆಗೆ ೨೪೦ ಕಲಾಶಿಖರಗಳಲ್ಲಿ ಭಾಗಿಯಾದ ಹೆಗ್ಗಳಿಕೆ. ಕನ್ನಡ, ಇಂಗ್ಲೀಷ್, ಹಿಂದಿ, ಬಂಗಾಳಿ, ಮರಾಠಿಯ ೨೫೦ ಪುಸ್ತಕಗಳಿಗೆ ಮುಖಪುಟ ವಿನ್ಯಾಸ. ದೇವ್ಮಾಣಿಸ್ ಎಂದೇ ಜನಜನಿತರು. ಅತಿದೊಡ್ಡ ಲೋಹದ ಮ್ಯೂರಲ್ ಆರ್ಟ್, ಅತಿಎತ್ತರದ ಗಣೇಶ ಮ್ಯೂರಲ್ ಆರ್ಟ್ ಸೇರಿ ಹಲವು ವಿಭಿನ್ನ ಕಲಾಕೃತಿಗಳಿಂದ ಜನಪ್ರಿಯರು, ಬದುಕು ಬಿಡಿಸಿದ ಚಿತ್ರಗಳು, ಅರಳಿದ ಹೂವುಗಳು, ರೇಖೆಯಲ್ಲಿ ಜೀವನ ಪಯಣ ಮುಂತಾದ ೮ ಕೃತಿಗಳ ರಚನಾಕಾರರು. ೫೦೦೦ಕ್ಕೂ ಅಧಿಕ ರೇಖಾಚಿತ್ರಗಳನ್ನು ರಚಿಸಿರುವ ದೇವಿದಾಸ್ ಶೆಟ್ಟಿ ಬಾಂಬೆ ಆರ್ಟ್ ಸೊಸೈಟಿ, ಆರ್ಟ್ ಸೊಸೈಟಿ ಆಫ್ ಇಂಡಿಯಾದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರು. ರಾಮಾಯಣ-ಮಹಾಭಾರತದ ರೇಖಾಚಿತ್ರಗಳಲ್ಲಿ ನಿರತರಾಗಿರುವ ಅವರು ೫೫ ವರ್ಷಗಳ ಹಿರಿತನವುಳ್ಳ ಕಲಾಚೇತನ.
ಕ್ರೀಡೆಯೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ವಿಕಲಚೇತನ ದತ್ತಾತ್ರೇಯ ಗೋವಿಂದ ಕುಲಕರ್ಣಿ, ಶಿಕ್ಷಕ, ಪತ್ರಕರ್ತ, ಲೇಖಕ, ತರಬೇತಿಗಾರ, ಜಾನಪದ ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ೧೯೬೫ರಲ್ಲಿ ಜನಿಸಿದ ದತ್ತಾತ್ರೇಯ ಗೋವಿಂದ ಕುಲಕರ್ಣಿ ಅವರು ಹುಟ್ಟು ವಿಕಲಚೇತನರು. ಆದರೆ, ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಾಧಕರಾಗಿ ರೂಪುಗೊಂಡವರು. ಬಿ.ಎ. ಪದವೀಧರರು, ಕಿವುಡ ಮಕ್ಕಳ ವಿಶೇಷ ತರಬೇತಿ ಪಡೆದವರು. ಅನೇಕ ಕಾರ್ಯಾಗಾರಗಳಲ್ಲಿ ಪಾಲ್ಗೊಂಡವರು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯು ಸ್ಥಾಪಿಸಿದ ಕಿವುಡ ಮಕ್ಕಳ ವಸತಿ ಶಾಲೆಯ ಶಿಕ್ಷಕರಾಗಿ ೩೨ ವರ್ಷಗಳಿಂದಲೂ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಗುರು. ಕಿವುಡ–ಮೂಕ ಮಕ್ಕಳನ್ನು ಕ್ರೀಡೆಗೆ ಪ್ರೇರೇಪಿಸಿದವರು. ಶಾಲಾ ಮಕ್ಕಳನ್ನು ಕ್ರೀಡಾಪಟುವಾಗಿ ರೂಪಿಸಿದ ಹಿರಿಮೆ. ಮೂಕವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಉಚಿತ ಪಾಠ, ಕಿರುನಾಟಕಗಳನ್ನು ರಚಿಸಿ ನಿರ್ದೇಶನ, ಮಕ್ಕಳಿಗಾಗಿ ಕೋಲಾಟದ ಪದಗಳನ್ನು ಬರೆದು ಹಾಡಿಸಿದ ಹೆಗ್ಗಳಿಕೆ. ಹಲವಾರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದ ಕ್ರೀಡಾಪಟು. ಪತ್ರಕರ್ತನಾಗಿಯೂ ದುಡಿದ ಅನುಭವ. ಭಾಷಣ, ಉಪನ್ಯಾಸ ಮತ್ತಿತರ ತುಂಬು ಚಟುವಟಿಕೆಗಳಿಂದ ಗಮನಸೆಳೆದ, ವಿಕಲಚೇತನ ಮಕ್ಕಳಿಗೆ ಸ್ಫೂರ್ತಿ ತುಂಬಿದ ಮಾದರಿ ಸಾಧಕರು.
ಗ್ರಾಮೀಣರಿಗೆ ವೈದ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯವನ್ನೇ ಬದುಕಿನ ಕಾಯಕವಾಗಿಸಿಕೊಂಡವರು ಸಿ. ಕರಿಯಪ್ಪ, ಸಾವಿರಾರು ಬಡವರ ಕಣ್ಣಲ್ಲಿ ಬೆಳಕು ಮೂಡಿಸಿದ ಮಾದರಿ ಸಮಾಜಸೇವಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನರಸೀಪುರದ ಭೂಗಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಜನಿಸಿದ ಕರಿಯಪ್ಪ ಓದಿದ್ದು ಪಿಯುಸಿ, ಕಣ್ಣಿನ ಕುರಿತ ಡಿಪ್ಲೋಮಾ, ಬಾಲ್ಯದಲ್ಲೇ ಆರ್ಎಸ್ಎಸ್ ಸಖ್ಯ ಶಿಕ್ಷವರ್ಗಾ ಪಡೆದು ಕಾರ್ಯವಾಹಕನಾಗಿಯೂ ದುಡಿದ ವೇಳೆಯೇ ಸೇವೆಗೆ ಬದುಕು ಮೀಸಲಿಡಬೇಕೆಂಬ ದಿವ್ಯನಿರ್ಧಾರ, ಅಯೋಧ್ಯೆಯ ರಥಯಾತ್ರೆಯಲ್ಲಿ ಭಾಗಿಯಾದ ಮೇಲೆ ಬದುಕೇ ಸೇವಾಕ್ಷೇತ್ರ, ಆರೋಗ್ಯ ಇಲಾಖೆಯ ನೇತ್ರ ಪರೀಕ್ಷಕನಾದ ಬಳಿಕ ಬಡಜನರ ಕಣ್ಣಿನ ಆರೋಗ್ಯರಕ್ಷಣೆಗಾಗಿ ಸಂಕಲ್ಪ, ಹಳ್ಳಿಗಳಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಖರಗಳ ಆಯೋಜನೆ, ಉಚಿತ ಕನ್ನಡಕಗಳನ್ನು ಕೊಡಿಸುವ ಕಾರ್ಯಕ್ಕೆ ಮುಂದಡಿ. ವಾರಕ್ಕೆ ೨೦ ಜನರಿಗೆ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಜತನದಿಂದ ಮಾಡಿಕೊಂಡು ಬಂದ ಕಾಯಕ, ಮೂರು ದಶಕಗಳಲ್ಲಿ ೧೦ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ೧೫ ಸಾವಿರ ಬಡವರಿಗೆ ಉಚಿತ ಕನ್ನಡಕಗಳನ್ನು ದೊರೆಯುವಂತೆ ಮಾಡಿದ ಸಾರ್ಥಕತೆ, ವೃತ್ತಿಯಿಂದ ನಿವೃತ್ತರಾದರೂ ವೈದ್ಯಕೀಯ ಸೇವೆ ತಲುಪಿಸುವ ಕಾರ್ಯದಲ್ಲಿ ಅನವರತ ನಿರತ ಅನುಕರಣೀಯ ಸಮಾಜಮುಖಿ.
ಬೇಸಾಯ ಲಾಭದಾಯಕ ಎಂಬುದನ್ನು ನಿರೂಪಿಸಿದ ಕೃಷಿಪಂಡಿತರು ಎನ್.ಎಸ್. ಚಂದ್ರಶೇಖರ್, ನೈಸರ್ಗಿಕ ಕೃಷಿಯ ಪ್ರತಿಪಾದಕ, ರೈತರ ಆಶಾಕಿರಣ, ಆದರ್ಶ ಕೃಷಿರತ್ನ, ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಲ್ಲಿ ೧೯೬೦ರಲ್ಲಿ ಜನಿಸಿದ ಚಂದ್ರಶೇಖರ್ ಮೂಲತಃ ಕೃಷಿಕರಾದರೂ ಬಹುರೂಪಿ, ೧೫ ವರ್ಷದ ಅನುಭವವುಳ್ಳ ಪತ್ರಿಕೋದ್ಯಮಿ, ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಧ್ಯಯನಕ್ಕಾಗಿ ೨೪ ಸಾವಿರ ಹಳ್ಳಿಗಳ ವೀಕ್ಷಿಸಿದ ಅಲೆಮಾರಿ, ೨೦೦೯ರಲ್ಲಿ ಕೃಷಿರಂಗಪ್ರವೇಶ, ಉಳುಮೆ ಮಾಡದೇ, ಗೊಬ್ಬರ ಬಳಸದೇ, ಔಷಧಿ ಸಿಂಪಡಿಸದೇ ನೈಸರ್ಗಿಕ ವಾತಾವರಣ ಸೃಷ್ಟಿಸಿ ಬೆಳೆಗಳ ಉತ್ಪಾದಿಸಿ ನೈಸರ್ಗಿಕ ಕೃಷಿಯಲ್ಲಿ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ ತೋರಿಸಿದ ಪ್ರಗತಿಪರ ಕೃಷಿಕ, ಕಾಫಿ, ಕೋಕೋ, ಬಾಳೆ, ೧೦ ವಿಧದ ಹಣ್ಣಿನ ಗಿಡಗಳು, ಜಾಯಿಕಾಯಿ ಬೆಳೆದ ಕೃಷಿಋಷಿ, ನೈಸರ್ಗಿಕ ಕೃಷಿ ಕುರಿತು ೧೫೦೦ ರೈತರಲ್ಲಿ ಅರಿವು ಮೂಡಿಸಿದ ಹೆಗ್ಗಳಿಕೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಸಮ್ಮೇಳನ, ಆಕಾಶವಾಣಿ, ದೂರದರ್ಶನಗಳಲ್ಲಿ ಉಪನ್ಯಾಸ, ರೈತಬಳಗ ರಚಿಸಿ ಕೃಷಿ ಚಟುವಟಿಕೆ ಕುರಿತು ನಿರಂತರ ಸಮಾಲೋಚನೆ, ಪ್ರತಿಷ್ಠಿತ ಕೃಷಿಪಂಡಿತ ಪ್ರಶಸ್ತಿ, ವಾರಣಾಸಿಯ ಕೃಷಿರತ್ನ ಪ್ರಶಸ್ತಿ, ಗುಜರಾತ್ ಸರ್ಕಾರದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇನ್ನಿತರ ಗೌರವಗಳಿಂದ ಭೂಷಿತರು, ಲೇಖಕರೂ ಆಗಿರುವ ಚಂದ್ರಶೇಖರ್ ಮಾದರಿ ಕೃಷಿಕರು.
ತಳಸಮುದಾಯದ ಏಳ್ಗೆಗೆ ಶ್ರಮಿಸಿ ಉದ್ಯಮಶೀಲತೆಗೆ ನೆರವಾದ ವಿಶಿಷ್ಟ ಸಮಾಜಸೇವಕ, ಸಿ.ಜಿ.ಶ್ರೀನಿವಾಸನ್, ಬಹುಮುಖಿ ಚಿಂತಕ, ದಲಿತೋದ್ಧಾರದ ಕನಸುಗಾರ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಜನಿಸಿದ ಶ್ರೀನಿವಾಸನ್ ಅಕ್ಷರದಿಂದಲೇ ಅರಳಿದವರು. ಸ್ನಾತಕೋತ್ತರ ಪದವಿ, ಎಲ್ಎಲ್ಬಿ ಕಲಿತವರು. ವಿದ್ಯಾರ್ಥಿ ಜೀವನದಲ್ಲೇ ನಾಯಕರಾಗಿ ಸೇವೆ. ಹೊಟ್ಟೆಪಾಡಿಗೆ ಕೆಎಸ್ಎಸ್ಐಡಿಸಿಗೆ ಸೇರ್ಪಡೆಗೊಂಡು ಮುಖ್ಯ ವ್ಯವಸ್ಥಾಪಕ ಹುದ್ದೆಗೇರಿದರೂ ತುಳಿತಕ್ಕೊಳಗಾದ ದಲಿತೋದ್ಧಾರದ ಕನಸಿನ ಸಾಕಾರಕ್ಕಾಗಿ ಸ್ವಯಂನಿವೃತ್ತಿ, ದಲಿತರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಸತತ ಪರಿಶ್ರಮ, ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ, ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿಯಾಗಿ ಅಹರ್ನಿಶಿ ಸೇವೆ. ದಲಿತ ಕೈಗಾರಿಕೋದ್ಯಮಿಗಳಿಗಾಗಿಯೇ ವಿಶೇಷ ಕೈಗಾರಿಕಾ ನೀತಿ ಜಾರಿಗೆ ಬರುವಲ್ಲಿ ಸಾಫಲ್ಯ ಕಂಡ ಹೋರಾಟ, ಸ್ವಯಂ ಕೈಗಾರಿಕೋದ್ಯಮಿ, ಸಮಾಜಸೇವಕ ಹಾಗೂ ವ್ಯವಸಾಯಗಾರರಾಗಿ ಬಹುಮುಖಿ ಕ್ರಿಯಾಶೀಲತೆ, ದಲಿತರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಸಾರ್ಥಕತೆಯ ಸಿ.ಜಿ. ಶ್ರೀನಿವಾಸನ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಸಮಸಮಾಜ ನಿರ್ಮಾಣದ ಆಶಯಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ವಿಕ್ರಮಗಳ ಮೂಲಕ ಅಮೂಲ್ಯ ಸೇವೆ ಸಲ್ಲಿಸಿದ ಉದ್ಯಮಿ ಬಿ.ವಿ.ನಾಯ್ಡು. ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ನ ರೂವಾರಿ, ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಿ.ವಿ.ನಾಯ್ಡು ಅವರದ್ದು ಪಾರಮ್ಯ ಸಾಧನೆ. ಎಲೆಕ್ಟ್ರಾನಿಕ್ಸ್ನಲ್ಲಿ ಸ್ನಾತಕೋತ್ತರ ಪದವೀಧರರಾದ ಬಿ.ವಿ.ನಾಯ್ಡು ಕೇಂದ್ರ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ಅಧಿಕಾರಿಯಾಗಿ ೧೯೮೭ರಲ್ಲಿ ವೃತ್ತಿ ಬದುಕು ಆರಂಭಿಸಿದವರು. ದೇಶದಲ್ಲಿ ಮೊಟ್ಟಮೊದಲ ಇ-ಮೇಲ್ ಜಾಲ ಮತ್ತು ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದವರು. ೧೯೯೨ರಲ್ಲಿ ಐಟಿ ಉದ್ಯಮವನ್ನು ಉತ್ತೇಜಿಸಲು ಎಸ್ಐಪಿಐಗೆ ನಿಯೋಜಿತರಾದ ಬಿ.ವಿ.ನಾಯ್ಡು ಹದಿನೈದು ವರ್ಷಗಳಲ್ಲಿ ಕರ್ನಾಟಕದಲ್ಲಿದ್ದ ಐಟಿಕಂಪನಿಗಳ ಸಂಖ್ಯೆಯನ್ನು ಹದಿಮೂರರಿಂದ ಎರಡು ಸಾವಿರಕ್ಕೆ ಹೆಚ್ಚಿಸಿದ ಪ್ರವರ್ತಕರು. ಬೆಂಗಳೂರಿಗೆ ಸಿಲಿಕಾಲ್ ವ್ಯಾಲಿ ಎಂಬ ಜಾಗತಿಕ ಮನ್ನಣೆ ದೊರೆಯಲು ಕಾರಣೀಕರ್ತರು, ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಡಿಜಿಟಲ್ ಗೇಟ್ವೇ ತೆರೆದ ಸಾಧಕರು. ೨೦೦೦ರಲ್ಲಿ ಎಸ್.ಎಂ.ಕೃಷ್ಣ ಅವರು ರಚಿಸಿದ್ದ ಮುಖ್ಯಮಂತ್ರಿಗಳ ಕಾರ್ಯಪಡೆಯ ಸದಸ್ಯರಾಗಿದ್ದವರು. ಮೂವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಐಟಿ ಉದ್ಯಮದಲ್ಲಿ ಅನೇಕ ಗುರುತರ ಸಾಧನೆಗಳನ್ನು ದಾಖಲಿಸಿರುವ ಬಿ.ವಿ. ನಾಯ್ಡು ಕರ್ನಾಟಕ ಜ್ಞಾನ ಆಯೋಗದ ಸದಸ್ಯರು, ಪ್ರಸ್ತುತ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕ ವಿದ್ವತ್ಮಣಿ.
ಶ್ರೀ ಅವಿನಾಶ್
ಕನ್ನಡ ಚಿತ್ರರಂಗದ ಮಧ್ಯತಲೆಮಾರಿನ ಅತ್ಯಂತ ಪ್ರಮುಖ ಪೋಷಕ ಕಲಾವಿದರು ಅವಿನಾಶ್, ಚಾರಿತ್ರಿಕ ಪಾತ್ರಗಳಿಗೆ ಜೀವತುಂಬಿದ ಅಭಿಜಾತ ನಟ, ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ವಿಶಿಷ್ಟ ಛಾಪೊತ್ತಿದ ಪಂಚಭಾಷಾ ತಾರೆ, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ೧೯೫೯ರಲ್ಲಿ ಜನಿಸಿದ ಅವಿನಾಶ್ ಅಪ್ಪಟ ಬಹುಮುಖ ಪ್ರತಿಭೆ, ಮೈಸೂರು ವಿವಿಯಲ್ಲಿ ಇಂಗ್ಲೀಷ್ನಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದ ಸುಶಿಕ್ಷಿತರು, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯಲಿಂಗ್ ಹಾಗೂ ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದವರು. ಬಾಲ್ಯದಿಂದಲೂ ನಟನೆ, ರಂಗಭೂಮಿಯೆಡೆಗೆ ಅಪಾರ ಒಲವು, ಲಂಡನ್ನ ಮರ್ಮೈಡ್ ಥಿಯೇಟರ್ನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತ ಕನಸುಗಾರ, ಬಿ.ಜಯಶ್ರೀ ಅವರ ಸ್ಪಂದನ ಹಾಗೂ ಶಂಕರ್ನಾಗ್ರ ಸಂಕೇತ್ ತಂಡಗಳ ರಂಗಪ್ರಯೋಗಗಳಲ್ಲಿ ಬಣ್ಣ ಹಚ್ಚುವ ಮೂಲಕ ಕಲಾರಂಗಕ್ಕೆ. ಜಿವಿ ಅಯ್ಯರ್ರ ಮಧ್ವಾಚಾರ್ಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಂಯುಕ್ತ’ ಚಿತ್ರದಿಂದ ಮುನ್ನೆಲೆಗೆ, ಆನಂತರದ ಮೂರೂವರೆ ದಶಕಗಳು ಅಪ್ಪಟ ಸಿನಿಯಾನ, ಕಠಿಣ ಎನಿಸುವಂತಹ ಸಂಕೀರ್ಣ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆ, ಪೋಷಕಪಾತ್ರಗಳ ಘನತೆ ಹೆಚ್ಚಿಸಿದ ಕಲಾವಂತಿಕೆ, ೨೦೦ಕ್ಕೂ ಹೆಚ್ಚು ನಿರ್ದೇಶಕರ ಗರಡಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಸೇರಿದಂತೆ ಒಟ್ಟು ೭೦೦ ಚಿತ್ರಗಳಲ್ಲಿ ನಟಿಸಿದ ಮಹಾಹಿರಿಮೆ, ಕರ್ನಾಟಕ, ತಮಿಳುನಾಡು ರಾಜ್ಯ ಪ್ರಶಸ್ತಿಗಳಿಗೂ ಪಾತ್ರವಾಗಿರುವ ಅವಿನಾಶ್ ಬೆಳ್ಳಿತೆರೆ ಕಂಡ ಅತ್ಯುತ್ತಮ ಪೋಷಕ ಕಲಾವಿದರು.
ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿಗೈದು ಸೈ ಎನಿಸಿಕೊಂಡ ಅಶೋಕಬಾಬು ನೀಲಗಾರ ಅಪ್ಪಟ ದೇಸೀ ಪ್ರತಿಭೆ. ರಂಗಭೂಮಿ, ಕಿರುತೆರೆ, ಚಲನಚಿತ್ರ ಕ್ಷೇತ್ರದಲ್ಲೂ ಗುರುತು ಮೂಡಿಸಿದ ಬಹುಮುಖಿ ಸಾಧಕ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಶಿಂಧಿಕುರಬೆಟ್ಟ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಅಶೋಕಬಾಬು ಹೆಚ್ಚು ಕಲಿತವರಲ್ಲ, ಓದಿದ್ದು ಮಾಧ್ಯಮಿಕ ಶಿಕ್ಷಣದವರೆಗಷ್ಟೆ, ಹೊಟ್ಟೆ ಹೊರೆಯುವ ಲ್ಯಾಬೋರೇಟಲಿಯಲ್ಲಿ ದುಡಿಯುತ್ತಲೇ ಅನುಭವದ ಬುತ್ತಿ ತುಂಬಿಕೊಂಡವರು. ಅನುಭಾವಕ್ಕೆ ಅಕ್ಷರ ಲೇಪಿಸಿ ಸಾಹಿತ್ಯಲೋಕ ಪ್ರವೇಶಿಸಿ ಎತ್ತಿದ ಅವತಾರಗಳು ಹತ್ತಾರು, ಲೇಖಕ, ಕಾದಂಬರಿಕಾರ, ಕವಿ, ನಾಟಕಕಾರ, ಹಾಡುಗಾರ, ರಂಗನಟ, ನಿರ್ದೇಶಕ, ಸಾಮಾಜಿಕ ಕಾರ್ಯಕರ್ತರಾಗಿ ಬಹುಮುಖಿ ಕಾರ್ಯ. ಮಾಗಿದ ಕನಸು, ಬಿಡಿಸಲಾಗದ ಬೆಸುಗೆ, ನೆಲಕಚ್ಚಿದನೌಕೆ, ಕನಸು-ಮನಸು, ಓ ಪ್ರೇಮಿ ಎಲ್ಲಿರುವೆ ಮುಂತಾದ ಸಾಮಾಜಿಕ ಕಾದಂಬರಿ, ಹಲವು ಕಥಾಸಂಕಲನ, ನಾಟಕಗಳು, ಹತ್ತಕ್ಕೂ ಹೆಚ್ಚು ಧ್ವನಿಸುರುಳಿನಾಟಕಗಳು, ಮೂರು ಆಕಾಶವಾಣಿ ನಾಟಕ, ಭಜನಾಪದಗಳನ್ನು ಸೇರಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ. ನಟ-ಗಾಯಕನಾಗಿ ರಂಗದ ಮೇಲೆ ಬೆಳಗಿದ ಹಳ್ಳಿಹೈದ. ಕಿರುತೆರೆ–ಚಲನಚಿತ್ರದಲ್ಲೂ ನಟಿಸಿ ಮೋಡಿ ಮಾಡಿದರೂ ಎಲೆಮರೆಯ ಕಾಯಿಯಂತೆಯೇ ಉಳಿದಿರುವ ಪ್ರತಿಭಾವಂತರು.
ಕೊಲ್ಲಿ ರಾಷ್ಟ್ರದಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡಿದ ಸಮಾಜಮುಖಿ ಅರವಿಂದ ಪಾಟೀಲ್, ಕನ್ನಡ ಪರಿಚಾರಕರು, ಸಂಸ್ಕೃತಿ ಚಿಂತಕರು. ೧೯೫೮ರಲ್ಲಿ ಜನಿಸಿದ ಅರವಿಂದ ಶಿವಮೂರ್ತಿ ಪಾಟೀಲ್ ಸಿವಿಲ್ ಇಂಜಿನಿಯಲಿಂಗ್ ಪದವೀಧರರು. ಪರಿಸರದಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ. ೧೯೯೩ರಲ್ಲಿ ಕೊಲ್ಲಿ ರಾಷ್ಟ್ರದ ಕತಾರ್ನಲ್ಲಿ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದ ಅರವಿಂದ ಪಾಟೀಲ್ ಕತಾರ್ನಲ್ಲಿ ಅನಿವಾಸಿ ಭಾರತೀಯ ಕಾರ್ಮಿಕರು ಅನುಭವಿಸುತ್ತಿದ್ದ ಸಂಕಟಗಳಿಗೆ ಮರುಗಿದವರು. ಕಾರ್ಮಿಕರ ದನಿಯಾಗಿ ದುಡಿದವರು. ೨೦ ವರ್ಷಕ್ಕೂ ಮಿಗಿಲು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹೆಗ್ಗಳಿಕೆ, ಕರ್ನಾಟಕ ಮತ್ತು ಕತಾರ್ ದೇಶದ ನಡುವಿನ ಸಾಂಸ್ಕೃತಿಕ ಕೊಂಡಿ. ಕತಾರ್ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಕಾಯಕ. ವಿಶ್ವ ಕನ್ನಡ ಸಾಂಸ್ಕೃತಿಕ ಸಮಾವೇಶದ ಸಂಚಾಲಕ, ಇಂಡಿಯನ್ ಸೊಸೈಟಿ ಆಫ್ ದುಖಾನ್ ಅಧ್ಯಕ್ಷರಾಗಿ ಭಾರತೀಯ ಸಾಹಿತ್ಯ-ಸಂಸ್ಕೃತಿಯನ್ನು ಪಸರಿಸುವ ಸ್ತುತ್ಯಾರ್ಹ ಕಾರ್ಯ. ಬಡಮಕ್ಕಳಿಗೆ ಆರ್ಥಿಕ ನೆರವು, ಕಾರ್ಮಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವಲ್ಲಿ ಮಾನವೀಯ ಸೇವೆ, ಕಾರ್ಮಿಕರಿಗಾಗಿಯೇ ೨೫ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ, ಆಹಾರ-ಬಟ್ಟೆಗಳ ದಾನ ಮುಂತಾದ ಹಲವು ಸೇವಾಕಾರ್ಯಗಳನ್ನು ಕೈಗೊಂಡ ಹೃದಯವಂತ, ನಿವೃತ್ತಿಯ ನಂತರ ಕರ್ನಾಟಕದಲ್ಲೂ ಅನೇಕ ಬಗೆಯ ಸೇವಾಕೈಂಕರ್ಯದಲ್ಲಿ ತೊಡಗಿರುವ, ಹತ್ತಾರು ಪ್ರಶಸ್ತಿ-ಗೌರವಗಳಿಗೂ ಪಾತ್ರವಾಗಿರುವ ವಿರಳ ಸೇವಾಕರ್ತರು.
ಶ್ರೀ ಅ.ರಾ.ಮಿತ್ರ
ಕನ್ನಡ ಸಾರಸ್ವತ ಲೋಕದ ವಿದ್ವತ್ಪರಂಪರೆಯನ್ನು ಬೆಳಗಿದ ಸಾಹಿತಿ ಅ.ರಾ.ಮಿತ್ರ, ಹಾಸ್ಯಜ್ಞ, ಉಪನ್ಯಾಸಕ, ಅಧ್ಯಾಪಕ, ಬರಹಗಾರ, ವಿಮರ್ಶಕರಾಗಿ ನಾಡಿನ ಮನೆಮಾತಾದ ಸಾಧಕರು, ಹಾಸನ ಜಿಲ್ಲೆ ಬೇಲೂರಿನಲ್ಲಿ ೧೯೩೫ರಲ್ಲಿ ಜನಿಸಿದ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತ್ಯಲೋಕದಲ್ಲಿ ಅ.ರಾ.ಮಿತ್ರರೆಂದೇ ಸುವಿಖ್ಯಾತರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ೧೯೫೫ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವೃತ್ತಿಬದುಕಿಗೆ ಮುನ್ನುಡಿ, ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರವಾಚಕರಾಗಿ ಮಡಿಕೇರಿ, ತುಮಕೂರು, ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕ, ಅಮೆರಿಕನ್ ಪೀಸ್ ಕೋರ್ನಲ್ಲಿ ಕನ್ನಡ ಶಿಕ್ಷಕ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ, ಹಾಸ್ಯಪ್ರಜ್ಞೆ, ಸಜ್ಜನಿಕೆ, ಅಸ್ಖಲಿತ ಮಾತುಗಾರಿಕೆ ಅ.ರಾ.ಮಿತ್ರರ ವಿಶೇಷತೆ. ಅಧ್ಯಯನ-ಬರವಣಿಗೆ ನೆಚ್ಚಿನ ಕಾಯಕ, ಕ್ರಿಯಾಶೀಲತೆ ಅಮಿತೋತ್ಸಾಹದ ಮೂಲಧಾತು, ಹಾಸ್ಯಕೂಟಗಳ ಸಹಸಂಚಾಲಕರಾಗಿ ನಗೆಚಿಮ್ಮಿಸಿದ ವಾಗ್ಮಿ, ಬಾಲ್ಕನಿಯ ಬಂಧುಗಳು, ಯಾರೊ ಬಂದಿದ್ದರು, ನಾನೇಕೆ ಕೊರೆಯುತ್ತೇನೆ ಮುಂತಾದ ಪ್ರಬಂಧ ಸಂಕಲನಗಳು, ವಿಮರ್ಶೆ, ವ್ಯಕ್ತಿಪರಿಚಯ, ಗ್ರಂಥಸಂಪಾದನೆ, ಅನುವಾದದ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುವ ಅ.ರಾ.ಮಿತ್ರ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅನಕೃ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರಗಳಿಂದ ಭೂಷಿತರು.
ಅಳಿವಿನಂಚಿನಲ್ಲಿರುವ ಕಲೆಯ ಉಳಿವಿಗಾಗಿ ಜೀವತೇಯುತ್ತಿರುವ ಅನನ್ಯ ಕಲಾಚೇತನ ಆಂಜಿನಪ್ಪ ಸತ್ಪಾಡಿ, ಏಕಕಾಲಕ್ಕೆ ೩ ವಾದ್ಯಗಳನ್ನು ನುಡಿಸುವ ರಾಜ್ಯದ ಏಕೈಕ ಕಲಾವಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗವಿಕುಂಟನಹಳ್ಳಿ ಗ್ರಾಮದ ಆಂಜಿನಪ್ಪ ಅಪ್ಪಟ ದೇಸೀ ಪ್ರತಿಭೆ, ಏಕಕಾಲದಲ್ಲಿ ಬಾಯಿ ಮತ್ತು ಮೂಗಿನ ಹೊಳ್ಳೆಗಳ ಮೂಲಕ ಮೂರು ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುವ ಮುಖವೀಣೆ ಕಲಾವಿದರು. ಮೂಗಿನ ಒಂದು ಹೊಳ್ಳೆಯಲ್ಲಿ ನೀರು ತೆಗೆದು ಮತ್ತೊಂದು ಹೊಳ್ಳೆಯಲ್ಲಿ ನೀರು ಬಿಡುತ್ತಲೇ ಬಾಯಿಯಿಂದ ವಾದ್ಯವನ್ನು ನುಡಿಸುವುದು ಆಂಜಿನಪ್ಪರ ಮತ್ತೊಂದು ವಿಶೇಷ, ಈ ಜಲವಾದ್ಯ ಹಾಗೂ ಮುಖವೀಣೆ ನುಡಿಸಬಲ್ಲ ರಾಜ್ಯದಲ್ಲಿ ಬದುಕುಳಿದಿರುವ ಏಕೈಕ ಕಲಾವಿದ ಆಂಜಿನಪ್ಪ ಎಂಬುದು ನಿಜಕ್ಕೂ ಹೆಗ್ಗಳಿಕೆ ಮಾತ್ರವಲ್ಲ, ನಾಡಿನ ಹೆಮ್ಮೆ, ವಂಶಪಾರಂಪರ್ಯವಾಗಿ ಅಪ್ಪನಿಂದ ಬಂದ ಈ ಬಳುವಳಿಯೇ ಆಂಜಿನಪ್ಪಗೆ ಸದಾ ಜೀವನಾಧಾರ. ಭಿಕ್ಷೆ ಬೇಡಿ ಬದುಕುವ ಅನಿವಾರ್ಯತೆಯ ನಡುವೆಯೇ ಆರು ದಶಕಗಳಿಂದಲೂ ಕಲಾಸೇವೆಗೈದ ಅಂಜಿನಪ್ಪಗೆ ೮೨ ಇಆವಯಸ್ಸಿನಲ್ಲೂ ಈ ಕಲೆಯನ್ನು ಉಳಿಸುವರಾರೆಂಬ ಕೊರಗು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ನೂರಾರು ಸನ್ಮಾನಗಳ್ಯಾವುದರಿಂದಲೂ ಸಮಾಧಾನಗೊಳ್ಳದೆ “ಮುಂದೇನು” ಎಂಬ ಚಿಂತೆಯ ಆಂಜಿನಪ್ಪ ಕಲೆಗೆ ಅರ್ಪಿತಗೊಂಡ ಜೀವಿ, ಅಪರೂಪದ ಜಾನಪದ ಕಲಾಷುಷ್ಪ.
ಹಿಂದೂಸ್ಥಾನಿ ಸಂಗೀತದಲ್ಲಿ ವಿಶೇಷ ಕೃಷಿಗೈದ ಸ್ವರಪ್ರತಿಭೆ ಅನಂತ ಕುಲಕರ್ಣಿ, ಆಕಾಶವಾಣಿಯ ಎ ಗ್ರೇಡ್ ಕಲಾವಿದರು, ದಾಸ ಸಾಹಿತ್ಯ ಪ್ರಚಾರಕರು, ಭಕ್ತಿಸಂಗೀತದಲ್ಲಿ ಅನನ್ಯ ಸೇವೆಗೈದ ಹರಿದಾಸ ಸಂಗೀತ ವಿದ್ವನ್ಮಣಿ, ನಾದಲೋಕಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅನಂತಕುಲಕರ್ಣಿ ಜನಿಸಿದ್ದು ೧೯೫೭ರಲ್ಲಿ. ಗ್ವಾಲಿಯರ್ ಘರಾಣದಲ್ಲಿ ಸ್ವರಾಭ್ಯಾಸ, ಸಂಗೀತದಲ್ಲಿ ಬಿಎ ಪದವಿ, ಪ್ರಯಾಗ ಸಂಗೀತ ಸಮಿತಿಯಿಂದ ಸಂಗೀತ ಮಾರ್ತಾಂಡ, ೧೯೮೬ರಿಂದ ಆಕಾಶವಾಣಿ ಎ ಗ್ರೇಡ್ ಕಲಾವಿದರಾಗಿ ನಿರಂತರ ಸ್ವರಸೇವೆ. ೧೯೯೦ರಿಂದ ದಾಸಸಾಹಿತ್ಯ ಸೇವಾನಿರತರು. ರಾಜ್ಯದ ಹಲವೆಡೆ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಬರೋಡಾ, ಗುಜರಾತ್, ಹರಿದ್ವಾರಗಳಲ್ಲಿ ಭಕ್ತಿಸ್ವರಧಾರೆ, ಜಗನ್ನಾಥದಾಸರ ಹರಿಕಥಾಮೃತಸಾರವನ್ನು ಸುಶ್ರಾವ್ಯವಾಗಿ ಹಾಡಿ ಹರಿದಾಸ ಸಾಹಿತ್ಯ ಜನಸಾಮಾನ್ಯರ ನಾಲಿಗೆಯಲ್ಲಿ ಹರಿಯುವಂತೆ ಮಾಡಿದ ಹೆಗ್ಗಳಿಕೆ, ಈ-ಟಿವಿ, ಉದಯ-ಟಿವಿಯಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ. ಹತ್ತಾರು ಸಿ.ಡಿ ಹಾಗೂ ಧ್ವನಿಸುರುಳಿಗಳನ್ನು ಹೊರತಂದ ಕೀರ್ತಿ, ಹರಿಕಥಾಮೃತಸಾರ ಭೂಷಣ, ಹರಿದಾಸ ಸಂಗೀತಬ್ರಹ್ಮ ರಂಗವಿಠಲ ಪ್ರಶಸ್ತಿ, ಹರಿದಾಸನಿಧಿ, ಮೇಘಮಲ್ಹಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಬಿರುದು ಬಾವಲಿಗಳಿಂದ ಭೂಷಿತರಾದ ಅನಂತ ಕುಲಕರ್ಣಿ ಹಿಂದೂಸ್ತಾನಿ ಸಂಗೀತದ ಅನನ್ಯ ಸಾಧಕರು.
ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವತ್ಮಣಿ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು. ಸಾವಿರಾರು ದಾಸರ ಪದಗಳ ಅಪೂರ್ವ ಭಂಡಾರ, ಪ್ರೋತೃಗಳ ಮನ ಅರಳಿಸಿದ ಹರಿದಾಸ ತೀರ್ತನಾ ಶಿರೋಮಣಿ, ಧಾರವಾಡದ ಮಾಳಮಡ್ಡಿಯ ಕಟಗೇರಿಯವರಾದ ಅನಂತಾಚಾರ್ಯರು ಸಂಗೀತ ಆಚಾರ್ಯರೆಂದೇ ಜನಜನಿತ, ದಾಸರಪದ ಗಾಯನದ ಜತೆಗೆ ಅವುಗಳ ಅರ್ಥ, ಸಂದರ್ಭ, ಔಚಿತ್ಯ, ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ವಿವರಿಸಬಲ್ಲಷ್ಟು ಆಳ ಜ್ಞಾನವಂತರು. ದಾಸಸಾಹಿತ್ಯದ ಅನನ್ಯ ಪ್ರಚಾರಕರು. ಕಂಚಿನ ಕಂಠ, ಸುಶ್ರಾವ್ಯ ಗಾಯನ, ಸ್ವರಗಳ ಮೇಲಿನ ಕರಾರುವಾಕ್ ಹಿಡಿತ, ಸ್ವರಶುದ್ಧಿ, ಭಾವಶುದ್ಧಿಯ ಪಂಡಿತೋತ್ತಮರು. ೧೯ ಪ್ರಕಾರಗಳ ದಾಸಸಾಹಿತ್ಯದ ನಾಲ್ಕು ಸಾವಿರಕ್ಕೂ ಅಧಿಕ ದಾಸರ ಪದಗಳ ಭಂಡಾರ. ಸಾವಿರಾರು ಸಂಗೀತಾಸಕ್ತರಿಗೆ ಸ್ವರಜ್ಞಾನ ಧಾರೆಯೆರೆದ ಗುರು. ಮನೆಮನೆಗೆ ತೆರಳಿ ಮಕ್ಕಳಿಗೆ ದಾಸರ ಪದ ಕಲಿಸಿದ ಮಹಾನುಭಾವರು. ಹರಿದಾಸ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡುಕೊಂಡ ಜ್ಞಾನವೃದ್ಧರು. ನೂರಾರು ಸನ್ಮಾನ-ಗೌರವಗಳಾಚೆಗೆ ನಿರ್ಲಿಪ್ತರಾಗಿ ಜೀವನಪ್ರೀತಿ–ನಾದಪ್ರೇಮದಲ್ಲಿ ೯೭ರ ವಯದಲ್ಲೂ ಶಾರದೆಯ ಸೇವೆಯಲ್ಲಿ ತನ್ಮಯರಾಗಿರುವ ವಿರಳಾತಿವಿರಳ ಸಾಧಕರು.
ಅನಾಥ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮಾನವೀಯ ಕಾರ್ಯದಲ್ಲಿ ತನ್ಮಯವಾಗಿರುವ ಸಂಸ್ಥೆ ಅಮೃತ ಶಿಶು ನಿವಾಸ, ಸೇವಾಕಾರ್ಯದಲ್ಲಿ ಅಮೃತಮಹೋತ್ಸವವನ್ನು ದಾಟಿ ಮುನ್ನುಗ್ಗುತ್ತಿರುವ ದಯಾಕೇಂದ್ರ, ಬೆಂಗಳೂರಿನ ಬಸವನಗುಡಿಯ ಹೆಗ್ಗುರುತು ಅಮೃತ ಶಿಶು ನಿವಾಸ, ಅನಾಥ ಮಕ್ಕಳ ಲಾಲನೆ ಪಾಲನೆಗೆಂದೇ ೧೯೪೨ರಲ್ಲಿ ಸ್ಥಾಪಿತವಾದ ಸೇವಾಸಂಸ್ಥೆ (೧೯೪೫ರಲ್ಲಿ ಸೊಸೈಟಿಯಾಗಿ ನೋಂದಾಯಿಸ್ಪಟ್ಟಿದೆ. ಪಾರಸ್ಕಲ್ ಪಟೇಲ, ಸುಶೀಲಾ ಚಿಂತೋಪಂತ್, ಡಾ. ಶಂಕರಾಂಬಾಟ್ ಸಂಸ್ಥೆಯ ಸಂಸ್ಥಾಪಕರು. ಗಂಜಾಂ ಭೀಮಾಜ ಮತ್ತು ಎಂ.ಸಿ.ಜಯದೇವ್ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಪುಣ್ಯಾತ್ಮರು. ಸಮಾಜದಲ್ಲಿ ತ್ಯಜಿಸಲ್ಪಟ್ಟ ಹಾಗೂ ಅದೃಷ್ಟಹೀನ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವು ನೀಡುವುದು ಸಂಸ್ಥೆಯ ಮೂಲಗುರಿ. ಸಂಸ್ಥೆಯ ಸೇವಾಸತ್ಕಾರ್ಯವನ್ನು ೧೯೫೭ದಲ್ಲಿ ಅಂದಿನ ಮೈಸೂರು ಸರ್ಕಾರ ಬಸವನಗುಡಿಯಲ್ಲಿ ೨೫ ಗುಂಟೆ ಜಾಗವನ್ನು ನೀಡಿದ್ದು ವಿಶೇಷ. ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಸ್ಟೀಸ್ ಜುವೆನೈಲ್ ಆಕ್ಟ್ ಮೂಲಕ ಮಕ್ಕಳ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು ನೂರಾರು ಮಕ್ಕಳ ಬಾಳು ಬೆಳಗಿದೆ. ಪ್ರಸ್ತುತ ಶಿಶು ನಿವಾಸದಲ್ಲಿ ೫೦ ಮಕ್ಕಳು ಪಾಲನೆಯಲ್ಲಿದ್ದಾರೆ. ೧೮ ವರ್ಷದ ಬಳಿಕ ಮಕ್ಕಳಿಗೆ ಸ್ವಾವಲಂಬಿಗಳಾಗಲು ಕೌಶಲ್ಯ ತರಬೇತಿಯನ್ನೂ ನೀಡುತ್ತಿರುವ ಸಂಸ್ಥೆ ಬೆಂಗಳೂರಿನ ದೊಡ್ಡಮಾವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಬಾಲಕಿಯರ ವಸತಿ ನಿಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಅಮೃತಮಹೋತ್ಸವ ದಾಟಿ ೮೦ನೇ ವಸಂತಕ್ಕೆ ಕಾಲಿಟ್ಟಿರುವ ಈ ಮಕ್ಕಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದು ಸೇವೆಯ ಅನಂತ ರೂಪಕ್ಕೆ ಸಾಕ್ಷಿಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ ನೆಲೆನಿಂತಿರುವ ಅಗಡಿ ತೋಟ ಸಾವಯವ ಕೃಷಿ ಪದ್ಧತಿ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ. ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ, ಹಾವೇರಿ ಜಿಲ್ಲೆ ಕುನ್ನೂರು ಗ್ರಾಮದ ಹಚ್ಚಹಸಿರಿನ ಪರಿಸರದಲ್ಲಿರುವ ಅಗಡಿ ತೋಟವನ್ನು ಜಯದೇವ್ ಅಗಡಿ ಅವರು ೨೦೦೦ರಲ್ಲಿ ಸ್ಥಾಪಿಸಿದರು. ಸಾವಯವ ಕೃಷಿಯನ್ನು ಉತ್ತೇಜಿಸುವುದು, ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈಸರ್ಗಿಕ ಸಾವಯವ ಆಹಾರ ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಧ್ಯೇಯ. ಗೋಡಂಬಿ ಮತ್ತು ಅಡಿಕೆ ಕೃಷಿಯೊಂದಿಗೆ ನಲವತ್ತು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ‘ಅಗಡಿತೋಟ’ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಸಾವಯವ ಆರೋಗ್ಯವಾಗಿರಿ ಎಂಬ ಮಂತ್ರವನ್ನು ಪಠಿಸುತ್ತಲಿದೆ. ಹಳ್ಳಿ, ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಜೀವನಶೈಲಿಯನ್ನು ಸ್ವಂತವಾಗಿ ಅನುಭವಿಸಲು ಶಿಕ್ಷಣ ನೀಡುತ್ತಲೇ ಅಳಿವಿನಂಚಿನಲ್ಲಿರುವ ೧೦೦೦ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳನ್ನು ತೋಟದಲ್ಲಿ ನೆಡಲಾಗಿದೆ. ಮೆಕ್ಕೆಜೋಳ, ಸೋಯಾಬಿನ್ ಮತ್ತು ಭತ್ತದ ಕೃಷಿಯ ಹೊರತಾಗಿ ಬದನೆ, ಟೊಮೊಟೊ, ಬೀನ್ಸ್ ಮತ್ತು ಕೊತ್ತಂಬರಿಯನ್ನೂ ಬೆಳೆಯಲಾಗುತ್ತಿದೆ. ತೋಟದಲ್ಲಿ ಪರಿಸರ ಹಾನಿ ಮಾಡುವ ಸರ್ವ ಚಟುವಟಿಕೆಗಳನ್ನೂ ನಿಷೇಧಿಸಲಾಗಿದ್ದು ಇದೊಂದು ಮಾದರಿ ಸಾವಯವ ಕೃಷಿ ತೋಟವಾಗಿ ಗಮನ ಸೆಳೆದಿದೆ. ತೋಟದ ಸಂಸ್ಥಾಪಕ ಜಯದೇವ್ ಅಗಡಿ ಅವರು ಕೃಷಿಪಂಡಿತ್, ಕೃಷಿರತ್ನ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದಾರೆ.
ಉತ್ತರಕರ್ನಾಟಕದ ಗಂಡುಕಲೆ ದೊಡ್ಡಾಟದಲ್ಲಿ ಅನನ್ಯ ಸಾಧನೆಗೈದ ಮೌನಸಾಧಕರು ಅಡವಯ್ಯ ಚನ್ನಬಸವಯ್ಯ ಹಿರೇಮಠ, ಭಾಗವತಿಕೆ ಕಲಾವಿದರು, ದೊಡ್ಡಾಟದ ನಿರ್ದೇಶಕರು.ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಅಡವಯ್ಯ ಹಿರೇಮಠ ಅಪ್ಪಟ ದೇಸೀ ಕಲಾಚೇತನ, ಅಕ್ಷರ ಅರಿಯದ ಜಾನಪದ ಪುಷ್ಪ, ಹದಿನೈದನೇ ವಯಸ್ಸಿನಲ್ಲಿ ಗ್ರಾಮದಲ್ಲಿ ನೋಡಿದ ದೊಡ್ಡಾಟದಿಂದ ಪ್ರಭಾವಿತರಾಗಿ ಕಲಾರಂಗ ಪ್ರವೇಶ. ಸತತ ಪರಿಶ್ರಮದಿಂದ ಕಲೆ ಕರಗತ ಮಾಡಿಕೊಂಡು ತಪಸ್ವಿ, ಉತ್ತಮ ಕಂಠ ಹೊಂದಿದ್ದರಿಂದ ಮಾಸ್ತರ ಆಸೆಯಂತೆ ಕತೆಗಾರಿಕೆಯಲ್ಲಿ ತಲ್ಲೀನ, ೨೫ನೇ ವಯಸ್ಲಿನಿಂದ ದೊಡ್ಡಾಟದ ಕತೆಗಾರಿಕೆ, ನಿರ್ದೇಶನ, ಹಳ್ಳಿಯಿಂದ ಹಳ್ಳಿಗೆ ಕಾಲ್ನಡಿಗೆಯಲ್ಲಿ ಅಲೆದಾಡುತ್ತಾ ಆಸಕ್ತರಿಗೆ ದೊಡ್ಡಾಟ ಕಲಿಸಿದ ಗುರು. ಮೂಡಲಪಾಯ ದೊಡ್ಡಾಟ ಹಾಡುಗಾರಿಕೆಯಲ್ಲಿನ ಮೂವತ್ತು ರಾಗಗಳನ್ನು ಈವರೆಗೂ ಉಳಿಸಿಕೊಂಡು ಬಂದಿರುವ ಏಕೈಕ ಕಲಾವಿದ, ೨೦೦ಕ್ಕೂ ಹೆಚ್ಚು ದೊಡ್ಡಾಟಗಳಿಗೆ ನಿರ್ದೇಶನ ಮಾಡಿರುವ ಹೆಗ್ಗಳಿಕೆ, ಧಾರವಾಡದ ಆಕಾಶವಾಣಿಯಿಂದ ಅಡವಯ್ಯರ ಕತೆಗಾರಿಕೆ ದಾಖಲೀಕರಣಗೊಂಡಿದ್ದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರವಾಗಿರುವ ಅಡವಯ್ಯ ೮೪ರ ಇಳಿವಯಸ್ಸಿನಲ್ಲೂ ಕಲಾಧ್ಯಾನದಲ್ಲಿ ತೊಡಗಿರುವ ಅನನ್ಯ ಜಾನಪದ ಸಂಪತ್ತು.