Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಜಯರಾಮ ಬನನ್

ಭಾರತೀಯ ಹೋಟೆಲ್ ಉದ್ಯಮದಲ್ಲಿ ವಿಕ್ರಮಗಳನ್ನು ದಾಖಲಿಸಿದ ವಿಶಿಷ್ಟ ಉದ್ಯಮಿ ಜಯರಾಮ ಬನನ್, ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದ ಸಮಾಜಮುಖಿ, ಸಾವಿರಾರು ಮಂದಿಯ ಸ್ವಾವಲಂಬಿ ಬದುಕಿಗೆ ಪ್ರೇರಕಶಕ್ತಿ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಠದಬೆಟ್ಟುವಿನಲ್ಲಿ ೧೯೫೫ರಲ್ಲಿ ಜನಿಸಿದ ಜಯರಾಮ್ ೧೩ನೇ ವಯಸ್ಸಿನಲ್ಲಿ ಮನೆ-ಊರು ತೊರೆದು ಮುಂಬಯಿಗೆ ವಲಸೆ ಹೋದರೂ ಎರಡೊತ್ತಿನ ಊಟಕ್ಕೂ ತತ್ವಾರಪಟ್ಟು ಘಾಜಿಯಾಬಾದ್‌ಗೆ ಗುಳೆ. ಅಲ್ಪದುಡಿಮೆಯ ಐದು ಸಾವಿರ ರೂಪಾಯಿ ಹಣ ಹೂಡಿ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ “ಸಾಗರ ರತ್ನ” ಹೋಟೆಲ್ ತೆರೆದರು. ಸತತ ಶ್ರಮ, ಶುದ್ಧ ಆಹಾರ, ಸ್ವಚ್ಛವಾತಾವರಣ ಮತ್ತು ಗ್ರಾಹಕಸ್ನೇಹಿ ನಡೆಯಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡ ಜಯರಾಮ್‌ ಆನಂತರ ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ತೆಗೆದದ್ದು ಇತಿಹಾಸ. ದೇಶಾದ್ಯಂತ ಸದ್ಯ ೧೦೫ಕ್ಕೂ ಹೆಚ್ಚು ಶಾಖೆಗಳು ಮತ್ತು ಸ್ವಾಗತ್ ಹೋಟೆಲ್‌ಗಳ ಮಾಲೀಕರು, ಬನನ್ ಸದಾ ಸಮಾಜಸೇವಾನಿರತರು. ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಭರಿಸುವ ಅವರು ಸಂಘಸಂಸ್ಥೆ, ದೇವಾಲಯಗಳು, ಸಂಘಸಂಸ್ಥೆಗಳಿಗೆ ದೇಣಿಗೆ ನೀಡುವ ಕೊಡುಗೈ ದಾನಿ. ಜಿಆರ್‌ಬಿ ಕಂಪನಿ ಮೂಲಕ ಕರ್ನಾಟಕದ ೨ ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಿರುವ, ಕಾರ್ಮಿಕ ಮಕ್ಕಳ ಶಿಕ್ಷಣ–ಮದುವೆಗಳಿಗೆ ನೆರವಾಗುವ ಜಯರಾಮ ಹೃದಯವಂತಿಕೆ, ಸರಳತೆ, ಮಾನವೀಯತೆವುಳ್ಳ ವಿರಳ ಉದ್ಯಮಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಬಿ. ವಿ. ನಾಯ್ಡು

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ವಿಕ್ರಮಗಳ ಮೂಲಕ ಅಮೂಲ್ಯ ಸೇವೆ ಸಲ್ಲಿಸಿದ ಉದ್ಯಮಿ ಬಿ.ವಿ.ನಾಯ್ಡು. ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್‌ನ ರೂವಾರಿ, ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಿ.ವಿ.ನಾಯ್ಡು ಅವರದ್ದು ಪಾರಮ್ಯ ಸಾಧನೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರರಾದ ಬಿ.ವಿ.ನಾಯ್ಡು ಕೇಂದ್ರ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ಅಧಿಕಾರಿಯಾಗಿ ೧೯೮೭ರಲ್ಲಿ ವೃತ್ತಿ ಬದುಕು ಆರಂಭಿಸಿದವರು. ದೇಶದಲ್ಲಿ ಮೊಟ್ಟಮೊದಲ ಇ-ಮೇಲ್ ಜಾಲ ಮತ್ತು ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದವರು. ೧೯೯೨ರಲ್ಲಿ ಐಟಿ ಉದ್ಯಮವನ್ನು ಉತ್ತೇಜಿಸಲು ಎಸ್‌ಐಪಿಐಗೆ ನಿಯೋಜಿತರಾದ ಬಿ.ವಿ.ನಾಯ್ಡು ಹದಿನೈದು ವರ್ಷಗಳಲ್ಲಿ ಕರ್ನಾಟಕದಲ್ಲಿದ್ದ ಐಟಿಕಂಪನಿಗಳ ಸಂಖ್ಯೆಯನ್ನು ಹದಿಮೂರರಿಂದ ಎರಡು ಸಾವಿರಕ್ಕೆ ಹೆಚ್ಚಿಸಿದ ಪ್ರವರ್ತಕರು. ಬೆಂಗಳೂರಿಗೆ ಸಿಲಿಕಾಲ್ ವ್ಯಾಲಿ ಎಂಬ ಜಾಗತಿಕ ಮನ್ನಣೆ ದೊರೆಯಲು ಕಾರಣೀಕರ್ತರು, ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಡಿಜಿಟಲ್ ಗೇಟ್‌ವೇ ತೆರೆದ ಸಾಧಕರು. ೨೦೦೦ರಲ್ಲಿ ಎಸ್.ಎಂ.ಕೃಷ್ಣ ಅವರು ರಚಿಸಿದ್ದ ಮುಖ್ಯಮಂತ್ರಿಗಳ ಕಾರ್ಯಪಡೆಯ ಸದಸ್ಯರಾಗಿದ್ದವರು. ಮೂವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಐಟಿ ಉದ್ಯಮದಲ್ಲಿ ಅನೇಕ ಗುರುತರ ಸಾಧನೆಗಳನ್ನು ದಾಖಲಿಸಿರುವ ಬಿ.ವಿ. ನಾಯ್ಡು ಕರ್ನಾಟಕ ಜ್ಞಾನ ಆಯೋಗದ ಸದಸ್ಯರು, ಪ್ರಸ್ತುತ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕ ವಿದ್ವತ್ಮಣಿ.