Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಬಿ. ವಿ. ನಾಯ್ಡು

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ವಿಕ್ರಮಗಳ ಮೂಲಕ ಅಮೂಲ್ಯ ಸೇವೆ ಸಲ್ಲಿಸಿದ ಉದ್ಯಮಿ ಬಿ.ವಿ.ನಾಯ್ಡು. ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್‌ನ ರೂವಾರಿ, ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಿ.ವಿ.ನಾಯ್ಡು ಅವರದ್ದು ಪಾರಮ್ಯ ಸಾಧನೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರರಾದ ಬಿ.ವಿ.ನಾಯ್ಡು ಕೇಂದ್ರ ಸರ್ಕಾರದ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ಅಧಿಕಾರಿಯಾಗಿ ೧೯೮೭ರಲ್ಲಿ ವೃತ್ತಿ ಬದುಕು ಆರಂಭಿಸಿದವರು. ದೇಶದಲ್ಲಿ ಮೊಟ್ಟಮೊದಲ ಇ-ಮೇಲ್ ಜಾಲ ಮತ್ತು ಅಂತರ್ಜಾಲವನ್ನು ಅಭಿವೃದ್ಧಿಪಡಿಸಿದವರು. ೧೯೯೨ರಲ್ಲಿ ಐಟಿ ಉದ್ಯಮವನ್ನು ಉತ್ತೇಜಿಸಲು ಎಸ್‌ಐಪಿಐಗೆ ನಿಯೋಜಿತರಾದ ಬಿ.ವಿ.ನಾಯ್ಡು ಹದಿನೈದು ವರ್ಷಗಳಲ್ಲಿ ಕರ್ನಾಟಕದಲ್ಲಿದ್ದ ಐಟಿಕಂಪನಿಗಳ ಸಂಖ್ಯೆಯನ್ನು ಹದಿಮೂರರಿಂದ ಎರಡು ಸಾವಿರಕ್ಕೆ ಹೆಚ್ಚಿಸಿದ ಪ್ರವರ್ತಕರು. ಬೆಂಗಳೂರಿಗೆ ಸಿಲಿಕಾಲ್ ವ್ಯಾಲಿ ಎಂಬ ಜಾಗತಿಕ ಮನ್ನಣೆ ದೊರೆಯಲು ಕಾರಣೀಕರ್ತರು, ಭಾರತದ ಮೊಟ್ಟಮೊದಲ ಅಂತಾರಾಷ್ಟ್ರೀಯ ಡಿಜಿಟಲ್ ಗೇಟ್‌ವೇ ತೆರೆದ ಸಾಧಕರು. ೨೦೦೦ರಲ್ಲಿ ಎಸ್.ಎಂ.ಕೃಷ್ಣ ಅವರು ರಚಿಸಿದ್ದ ಮುಖ್ಯಮಂತ್ರಿಗಳ ಕಾರ್ಯಪಡೆಯ ಸದಸ್ಯರಾಗಿದ್ದವರು. ಮೂವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಐಟಿ ಉದ್ಯಮದಲ್ಲಿ ಅನೇಕ ಗುರುತರ ಸಾಧನೆಗಳನ್ನು ದಾಖಲಿಸಿರುವ ಬಿ.ವಿ. ನಾಯ್ಡು ಕರ್ನಾಟಕ ಜ್ಞಾನ ಆಯೋಗದ ಸದಸ್ಯರು, ಪ್ರಸ್ತುತ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕ ವಿದ್ವತ್ಮಣಿ.