Categories
ಆಡಳಿತ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹೆಚ್. ಆರ್. ಕಸ್ತೂರಿ ರಂಗನ್

ನಿವೃತ್ತ ಐಪಿಎಸ್ ಅಧಿಕಾರಿ ಹೆಚ್.ಆರ್. ಕಸ್ತೂರಿ ರಂಗನ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ೧೯೭೨ ರಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ವಿಭಾಗದ ಡಿವೈಎಸ್ಪಿ ಯಾಗಿ ತಮ್ಮ ಸೇವೆ ಆರಂಭಿಸಿದರು. ತಮ್ಮ ಸೇವೆಗೆ ಮತ್ತು ತಮ್ಮ ದಕ್ಷ ಕಾರ್ಯ ನಿರ್ವಹಣೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯ ಅಧೀನ ಪೊಲೀಸ್ ಆಯುಕ್ತರಾಗಿ, ಮೈಸೂರಿನಲ್ಲಿ ಹೆಚ್ಚುವರಿ ಎಸ್.ಪಿ ಆಗಿ, ಎರಡು ಬಾರಿ ಜಾಗೃತದಳದ ಎಸ್.ಪಿ ಆಗಿ ಹಾಗು ಕೊಡಗು ಜಿಲ್ಲೆಯ ಎಸ್.ಪಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಲವು ಹುದ್ದೆಗಳನ್ನು ಅಲಂಕರಿಸಿ, ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ಐ.ಜಿ.ಪಿ ಆಗಿ ನಿವೃತ್ತಿ ಹೊಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಅತ್ಯುತ್ತಮ ಕೆಲಸಕ್ಕಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ನಗದು ಬಹುಮಾನ ದೊರೆತಿದೆ. ೧೯೮೮ ರಲ್ಲ ರಾಷ್ಟ್ರಪತಿಗ ಪೊಲೀಸ್ ಚಿನ್ನದ ಪದಕ ದೊರೆತಿದೆ.

Categories
ಆಡಳಿತ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮದನ್‌ಗೋಪಾಲ್‌

ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ಹೆಸರಾದವರು ಮದನ್‌ಗೋಪಾಲ್‌, ಮೂರು ದಶಕಗಳಿಗೂ ಅಧಿಕ ಕಾಲ ಬಹುಮುಖಿ ಸೇವೆಗೈದ ನಿವೃತ್ತ ಐಎಎಸ್ ಅಧಿಕಾರಿ, ಹಲವು ಮಹತ್ವದ ಕೃತಿಗಳ ರಚನಕಾರರು. ಮದಭೂಷಿ ಮದನ್ ಗೋಪಾಲ್ ಅವರು ವಾಣಿಜ್ಯ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಬಾಲ್ಯದ ಐಎಎಸ್ ಕನಸನ್ನು ನನಸಾಗಿಸಿಕೊಂಡ ಛಲಗಾರರು. ೧೯೮೪ರಲ್ಲಿ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಯಾದ ಮದನ್‌ಗೋಪಾಲ್ ಅವರು ಮೈಸೂರಿನ ನಂಜನಗೂಡಿನಲ್ಲಿ ಸಹಾಯಕ ಆಯುಕ್ತರಾಗಿ ಸಾರ್ವಜನಿಕ ಬದುಕು ಆರಂಭಿಸಿದರು. ಆನಂತರ ಅನೇಕ ಹುದ್ದೆಗಳಗೆ ಏರಿದವರು. ಆರೋಗ್ಯ ಮತ್ತು ಕುಟುಂಬಕಲ್ಯಾಣ, ಉನ್ನತ ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ, ಪರಿಸರ ಮತ್ತು ಜೀವಶಾಸ್ತ್ರ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ದಕ್ಷ ಸೇವೆ ಸಲ್ಲಿಸಿದವರು. ಬಿಜಾಪುರ ಮತ್ತು ಗುಲ್ಬರ್ಗಾ ಜಿಲ್ಲಾಧಿಕಾರಿಯಾಗಿ ಜನಪರ ಕಾರ್ಯ. ಜಲಸಂವರ್ಧನೆ ಯೋಜನೆಗೆ ಅನುದಾನ ಒದಗಿಸುವ ವಿಶ್ವಬ್ಯಾಂಕ್‌ನ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟಾರ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿಯೂ ಮದನ್‌ಗೋಪಾಲ್‌ ಅವರದ್ದು ವಿಶಿಷ್ಟ ಛಾಪು. ಐಎಎಸ್ ವಲಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೇ ಜನಪ್ರಿಯ. ಅನೇಕ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಹಿರಿತನ, ವಿಶ್ವದ ೫೦ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ಅನುಭವ. ಎರಡು ವಿಶಿಷ್ಟ ಕೃತಿಗಳ ಲೇಖಕರೂ ಆದ ಮದನಗೋಪಾಲ್ ಬಹುಮುಖಿ ಪ್ರತಿಭೆ.

Categories
ಆಡಳಿತ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಎಲ್. ಮಂಜುನಾಥ್

ಆಡಳಿತದಲ್ಲಿ ಜನಪರತೆ, ದಕ್ಷತೆ ಮತ್ತು ಸೇವಾತತ್ಪರತೆಗೆ ಹೆಸರಾದವರು ಡಾ. ಎಚ್.ಎಲ್. ಮಂಜುನಾಥ್, ಸಾರ್ವಜನಿಕ ಹುದ್ದೆಗಳ ಘನತೆ ಹೆಚ್ಚಿಸಿದ ಆಡಳಿತ ತಜ್ಞ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶಸ್ಸಿನ ರೂವಾಲಿ, ಡಾ. ಎಲ್.ಎಚ್.ಮಂಜುನಾಥ್ ಮೂಲತಃ ಪಶುವೈದ್ಯರು. ರಾಯಚೂರಿನ ಕುಕ್ಕನೂರಿನಲ್ಲಿ ವೃತ್ತಿಬದುಕು ಆರಂಭಿಸಿ ಬಳಿಕ ಮಣಿಪಾಲಕ್ಕೆ ಬಂದವರು. ಬಿ.ಎ.ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾಗಿ ದಶಕದವರೆಗೆ ದುಡಿದವರು. ಆನಂತರ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿ ದೇಶದ ವಿವಿಧೆಡೆ ಸೇವೆ. ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದ ಮೇಲೆ ಬದುಕಿನ ಚಿತ್ರಣವೇ ಬದಲು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೊಸ ಪರ್ವ ಸೃಷ್ಟಿ. ಬೆಳ್ತಂಗಡಿ ತಾಲ್ಲೂಕಿಗೆ ಸೀಮಿತವಾಗಿದ್ದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರ. ೫೦ ಲಕ್ಷ ಕುಟುಂಬಗಳ ಆರ್ಥಿಕ ಪರಿವರ್ತನೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ೧೭ ವರ್ಷಗಳ ಕಾಲ ಆಡಳಿತ ನಿರ್ದೇಶಕರಾಗಿ ಸಾವಿರಾರು ಮಹಿಳೆಯರಿಗೆ ಕೌಶಲ್ಯದ ತರಬೇತಿ. ದುಶ್ಚಟಗಳ ಮುಕ್ತಿಗೆ ಜಾಗೃತಿ. ೪೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಉದ್ಯೋಗದ ಅವಕಾಶ. ಹಲವು ಪ್ರಶಸ್ತಿಗಳ ಪುರಸ್ಕೃತರು, ಐದು ಕೃತಿಗಳ ಲೇಖಕರೂ ಆಗಿರುವ ಮಂಜುನಾಥ್ ದುರ್ಬಲ ವರ್ಗದ ಜನರನ್ನು ಸ್ವಾವಲಂಬಿಗಳನ್ನಾಗಿಸಿದ ಸಾಮಾಜಿಕ ಪರಿವರ್ತಕರು.