Categories
ಕಿರುತೆರೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿಹಿಕಹಿ ಚಂದ್ರು

ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯನ್ನು ವಿಶಿಷ್ಟ ಬಗೆಯಲ್ಲಿ ಬೆಳಗಿ ಜನಮಾನಸವನ್ನು ರಂಜಿಸಿದ ಕಲಾಪ್ರತಿಭೆ ಸಿಹಿಕಹಿಚಂದ್ರು. ನಟ, ನಿರ್ದೇಶಕ, ಧಾರಾವಾಹಿಗಳ ನಿರ್ಮಾಪಕ, ಅಡುಗೆ ಪ್ರಚಾರಕ ಹಾಗೂ ಹಾಸ್ಯಗಾರನಾಗಿ ಅವರದ್ದು ಬಹುಮುಖ ಪ್ರತಿಭಾದರ್ಶನ. ಸಿಹಿಕಹಿ ಚಂದ್ರು ಎಂದೇ ಜನಜನಿತರಾದ ಚಂದ್ರಶೇಖರ್ ಬಾಲ್ಯದಿಂದಲೂ ಕಲಾಮೋಹಿ, ನಟನೆಯ ಗೀಳು, ಬಣ್ಣದ ಹುಚ್ಚು. ಕಾಲೇಜು ದಿನಗಳಿಂದಲೂ ರಂಗಸಖ್ಯ. ಶೇಕ್ಸ್‌ಪಿಯರ್ ಅವರ ಏ ಕಾಮಿಡಿ ಆಫ್ ಎರರ್ಸ್‌ನ ಕನ್ನಡ ರೂಪಾಂತರ ನೀನಾನಾದ್ರೆ ನಾನೀನೇನ? ಚಂದ್ರು ಅಭಿನಯಿಸಿದ ಜನಪ್ರಿಯ ಹಾಸ್ಯನಾಟಕ. ರಂಗಭೂಮಿಯಿಂದ ೯೦ರ ದಶಕದಲ್ಲೇ ಕಿರುತೆರೆ ಜಿಗಿದ ಚಂದ್ರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸಿಹಿಕಹಿ’ ಧಾರಾವಾಹಿಯಿಂದ ಜನಪ್ರಿಯರು. ಅಂದಿನಿಂದಲೇ ಸಿಹಿಕಹಿಚಂದ್ರುವಾಗಿ ರೂಪಾಂತರ. ಬ್ಯಾಂಕ್ ಜನಾರ್ದನ್, ಉಮಾಶ್ರೀ ಜತೆಗಿನ ಚಂದ್ರು ಅವರ ಹಾಸ್ಯ ಸನ್ನಿವೇಶಗಳು ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಧಾರಾವಾಹಿಗಳ ನಿರ್ಮಾಣಕ್ಕೆ ಇಳಿದ ಚಂದ್ರು ಸಿಲ್ಲಿಲಲ್ಲಿ, ಪಾಪಪಾಂಡು ಜನಪ್ರಿಯ ಧಾರಾವಾಹಿಗಳ ನಿರ್ದೇಶಕರು. ಅಡುಗೆ ಮಾಡುವುದು ಚಂದ್ರು ಅವರ ಪರಮಾಪ್ತ ಕಲೆ. ಈ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿವಾಹಿನಿಗಳಲ್ಲಿ ಶೋ ನಡೆಸಿದ ಜನಾನುರಾಗಿಯಾದ ಹೆಗ್ಗಳಿಕೆ. ಬದುಕು ಸಾಗಿದ ಹಾದಿಯಲ್ಲಿ ನಡೆಯುತ್ತಲೇ ಬಹುಬಗೆಯ ಪಾತ್ರ-ಆಸಕ್ತಿಯಿಂದ ಗೆದ್ದ ಸಿಹಿಕಹಿ ಚಂದ್ರು ಕಲೆಯಿಂದಲೇ ಬದುಕುಕಟ್ಟಿಕೊಂಡು ಬೆಳಗಿದ ಅಪರೂಪದ ಕಲಾವಂತರು.

Categories
ಕಿರುತೆರೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಜಯಕುಮಾರ ಕೊಡಗನೂರು

ವೃತ್ತಿ ರಂಗಭೂಮಿಯನ್ನೇ ಬದುಕಿನ ಕರ್ಮಭೂಮಿಯಾಗಿಸಿಕೊಂಡ ಅಭಿಜಾತ ಕಲಾವಿದ ಜಯಕುಮಾ‌ ಕೊಡಗನೂರು.ಕಿರುತೆರೆ-ಬೆಳ್ಳಿತೆರೆಯಲ್ಲೂ ಛಾಪೊತ್ತಿದ ಕಲಾಚೇತನ.
ದಾವಣಗೆರೆ ಜಿಲ್ಲೆಯ ಕೊಡಗನೂರು ಜಯಕುಮಾರ್ ಹುಟ್ಟೂರು. ಹತ್ತನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು. ಹಳ್ಳಿಗಾಡಿನ ನಾಟಕಗಳಲ್ಲಿ ನಟಿಸುತ್ತಿದ್ದವರಿಗೆ ತಿರುವು ಸಿಕ್ಕಿದ್ದು ಸದಾರಾಮೆ ನಾಟಕದ ಮೂಲಕ. ೭೦ರ ದಶಕದಿಂದ ಇವರಿಗೆ ಬಣ್ಣವೇ ಬದುಕು, ಪಾತ್ರವೇ ಜೀವ. ಗುಬ್ಬಿ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಸಂಗಮೇಶ್ವರ ನಾಟಕ ಸಂಘ, ಕೆ.ಬಿ.ಆರ್. ಡ್ರಾಮಾ ಕಂಪನಿ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ತರಹೇವಾರಿ ಪಾತ್ರ ನಿರ್ವಹಿಸಿ ರಂಗಪ್ರಿಯರ ಮನಗೆದ್ದವರು. ದೇವಿ ಮಹಾತ್ಮಯ ಮಹಿಷಾಸುರ, ರೇಣುಕಾದೇವಿ ಮಹಾತ್ಮಯ ಕಾರ್ತ್ಯವೀರಾರ್ಜುನ, ಮದಕರಿನಾಯಕ, ಪೊಲೀಸನ ಮಗಳಲ್ಲಿನ ಎಸ್ಪಿ ಚಂದ್ರಶೇಖರ್ ಜಯಕುಮಾರ್‌ಗೆ ಹೆಸರು ತಂದುಕೊಟ್ಟ ಪಾತ್ರಗಳು. ಕಿರುತೆರೆಯ ಸಂಕ್ರಾಂತಿ, ಮಹಾಮಾಯೆ, ಕೆಳದಿ ಚೆನ್ನಮ್ಮ, ಭಾಗೀರಥಿ ಸೇರಿ ಹತ್ತಾರು ಧಾರಾವಾಹಿಗಳು, ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಹಿರಿಮೆ.ಎಲ್ಲಾ ಬಗೆಯ ಪಾತ್ರಗಳಲ್ಲೂ ಸೈ ಎನಿಸಿಕೊಂಡ ಕಲಾನಿಪುಣ. ಐದು ದಶಕಗಳ ಸಾರ್ಥಕ ಕಲಾಸೇವೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿ, ಹತ್ತಾರು ಬಿರುದುಗಳಿಂದ ಭೂಷಿತರು.