Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವಿಮರ್ಶೆ

ಕೆ.ವಿ. ಸುಬ್ರಮಣ್ಯಂ

ಕೆವಿಎಸ್ ಎಂದೇ ಗುರುತಿಸಲ್ಪಡುವ ಕೆ. ವಿಸುಬ್ರಮಣ್ಯಂ ನಾಡಿನ ಸುಪ್ರಸಿದ್ಧ ಕಲಾಚಿಂತಕರು, ಕುಂಚ-ಲೇಖನಿ ಎರಡರಿಂದಲೂ ಕಲಾವಲಯದಲ್ಲಿ ಹೆಸರು ಮಾಡಿರುವ ಸಾಧಕರು. ನಿರಂತರ ಶೋಧನೆ, ಪರಿಪೂರ್ಣ ಕಲಾವ್ಯಕ್ತಿತ್ವ ಕೆಎಎಸ್ ಅವರ ವೈಶಿಷ್ಟ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಾಗಟ ಅಗ್ರಹಾರ ಸುಬ್ರಮಣ್ಯಂ ಅವರ ಮೂಲ ನೆಲೆ. ಬಾಲ್ಯದಲ್ಲೇ ಸಾಹಿತ್ಯ- ಕಲೆಯ ಬಗೆಗೆ ಆಸಕ್ತಿ. ಬಿ.ಎ, ಎ.ಸಿ.ಬಿ ಪದವೀಧರರು. ೧೯೬೯ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ. ಕಲಾಕೃತಿಗಳ ರಚನೆ, ಕಲಾವಿಮರ್ಶೆ ನೆಚ್ಚಿನ ಕಾರ್ಯಕ್ಷೇತ್ರ ಕರ್ನಾಟಕ ಚಿತ್ರಕಲಾ ಪರಿಷತ್ತು, ರಾಷ್ಟ್ರೀಯ ಕಲಾಮೇಳ ಮತ್ತಿತರೆಡೆ ಕಲಾಕೃತಿಗಳ ಪ್ರದರ್ಶನದಿಂದ ಮುಂಚೂಣಿಗೆ, ದೃಶ್ಯಕಲೆಯ ಕಲಾವಿಮರ್ಶಕರಾಗಿ ನಾಲ್ಕು ದಶಕಕ್ಕೂ ಮೀರಿದ ಅನನ್ಯ ಸೇವೆ. ವೆಂಕಟಪ್ಪ ಪುನರಾವಲೋಕನ, ದೃಶ್ಯಧ್ಯಾನ, ಲಲಿತಕಲೆಗಳು, ಆಧುನಿಕ ಶಿಲ್ಪಕಲೆ ಮುಂತಾದ ಮಹತ್ವದ ಕೃತಿಗಳ ರಚನಕಾರರು.ಜನಪ್ರಿಯ ಅಂಕಣಕಾರರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ, ಗೌರವ ಫೆಲೋಶಿಪ್, ಕಲಾಧ್ಯಾನ ಪುರಸ್ಕಾರಗಳಿಂದ ಭೂಷಿತರು.

Categories
ಗುಡಿ ಕೈಗಾರಿಕೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನವರತ್ನ ಇಂದುಕುಮಾರ್

ಗುಡಿಕೈಗಾರಿಕೆಯ ಹಿರಿಮೆಯನ್ನು ಸಾರಿದ ಪಾರಂಪರಿಕ ಕರಕುಶಲ ಕಲಾವಿದೆ ನವರತ್ನ ಇಂದುಕುಮಾರ್. ಗೊಂಬೆ ಮತ್ತು ಹೂಗುಚ್ಛಗಳ ತಯಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
ಚಿಕ್ಕಮಗಳೂರಿನ ವಾಸಿಗಳಾದ ನವರತ್ನ ಇಂದುಕುಮಾರ್ ಹಿಂದಿ ರಾಷ್ಟ್ರಭಾಷಾ ವಿಶಾರದರು, ಬಾಲ್ಯದಿಂದಲೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ವಿಶೇಷ ಆಸಕ್ತಿ, ಗೊಂಬೆ ಮತ್ತು ಹೂಗುಚ್ಛ ತಯಾರಿಕೆಯಲ್ಲಿ ಕಲಾನೈಪುಣ್ಯತೆ, ಬಟ್ಟೆ ಮತ್ತು ವುಡ್‌ವುಲ್‌ನಲ್ಲಿ ಗೊಂಬೆಗಳ ತಯಾರಿಸುವ ಭಾರತದಲ್ಲಿರುವ ಅಪರೂಪದ ಮೂವರು ಕಲಾವಿದರಲ್ಲಿ ಒಬ್ಬರೆಂಬುದು ನಾಡಿನ ಹೆಮ್ಮೆ, ಗಾಜು ಮತ್ತು ಮರದ ಮೇಲೆ ಪೈಂಟಿಂಗ್, ಉಬ್ಬು ಚಿತ್ರಗಳ ರಚನೆ, ಪಂಪನ ಆದಿಪುರಾಣದ ೩೨ ದೃಶ್ಯಗಳು, ಹೊಂಬುಜ ಪದ್ಮಾವತಿಯ ೨೪ ಕೈಗಳುಳ್ಳ ಚಾಮುಂಡೇಶ್ವರಿ, ಯಕ್ಷಗಾನದ ಗೊಂಬೆಗಳು, ಶಿಲಾಬಾಲಿಕೆಯರು, ಜಾನಪದ ಗೊಂಬೆಗಳು ಸೇರಿ ಸಾವಿರಾರು ಗೊಂಬೆಗಳ ರಚನೆ, ಗೊಂಬೆ ತಯಾರಿಕೆ- ಎಂಬೋಸಿಂಗ್ ಬಗ್ಗೆ ಯುವಪೀಳಿಗೆಗೆ ತರಬೇತಿ.ವೇದಿಕೆಗಳ ನಿರ್ಮಾಣದಲ್ಲೂ ನಿಸ್ಸಿಮರು, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದ ವೇದಿಕೆ ಮುಂತಾದ ವೇದಿಕೆಗಳು ಇವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ. ರಾಜ್ಯ-ಹೊರರಾಜ್ಯಗಳಲ್ಲಿನ ಅನೇಕ ಉತ್ಸವಗಳಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸಿರುವ ನವರತ್ನ ಅವರು ಸಾಂಸ್ಕೃತಿಕ ಸಂಘಟನೆ-ಬರಹದಲ್ಲೂ ತೊಡಗಿಕೊಂಡಿರುವ ಬಹುಮುಖ ಪ್ರತಿಭೆ. ಹತ್ತಾರು ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬಿ.ಜಿ. ಮೋಹನ್‌ದಾಸ್

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯ ಅನ್ವರ್ಥಕವಾಗಿರುವವರು ಬಿ.ಜಿ.ಮೋಹನ್‌ದಾಸ್. ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆಯ ಕನ್ನಡಿಗ.
ದಕ್ಷಿಣ ಕನ್ನಡದ ಅಪ್ಪಟ ಕನ್ನಡಾಭಿಮಾನಿ ಮೋಹನ್‌ದಾಸ್, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬಿಜೂರು ಹುಟ್ಟೂರು. ಹುಟ್ಟಿನಿಂದಲೇ ಕನ್ನಡವೆಂದರೆ ಪಂಚಪ್ರಾಣ. ಮಣಿಪಾಲದಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಅಲ್ಪಕಾಲದ ಸೇವೆ. ಜೇಸಿಸ್ ಸಂಸ್ಥೆಯಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸಂಘಟನಾನುಭವ ಗಳಿಕೆ. ಆನಂತರ ಬದುಕು ಅರಸಿ ದುಬೈಗೆ, ಪರದೇಶದಲ್ಲಿ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ದೃಢಸಂಕಲ್ಪ, ಕೊಲ್ಲಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ಹೊರನಾಡ ಕನ್ನಡಿಗರ ಧ್ವನಿಯಾದವರು. ೧೯೮೫ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ೮೯ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು, ಗಲ್ಫ್ ವಾರ್ತೆ ಡಾಟ್ ಕಾಂ, ಗಲ್ಫ್ ಕನ್ನಡಿಗ ಅಂತರ್ಜಾಲ ಸುದ್ದಿಪತ್ರಿಕೆಯ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಸ್ತುತ್ಯಾರ್ಹ ಕಾರ್ಯ. ವಿದೇಶಿ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಾರ್ಥಕ ಸೇವೆ. ಪ್ರತಿಷ್ಠಿತ ಮಯೂರ ಪ್ರಶಸ್ತಿ, ಮಣಿಪಾಲ ವಿವಿಯ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾಗಿರುವ ಮೋಹನದಾಸ್ರ ಕನ್ನಡಸೇವೆ ಸರ್ವಕಾಲಕ್ಕೂ ಮಾದರಿಯೇ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಗಂಗಾಧರ ಬೇವಿನಕೊಪ್ಪ

ತಾಂತ್ರಿಕ ತಜ್ಞ ಉದ್ಯಮಿ, ಚತುರ ಸಂಘಟನಾಕಾರರಾದ ಗಂಗಾಧರ ಬೇವಿನಕೊಪ್ಪ ಅವರು ‘ಗಾಂಧಿ’ ಎಂಬ ವಿಶೇಷ ನಾಮದಿಂದಲೇ ಚಿರಪರಿಚಿತರು. ವಿದೇಶದಲ್ಲಿ ನಾಡಿನ ಕೀರ್ತಿ, ಧೀಶಕ್ತಿಯನ್ನು ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ,
ಗಂಗಾಧರ ಬೇವಿನಕೊಪ್ಪ ಗಡಿನಾಡಿನ ಪ್ರತಿಭೆ, ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಬಳಿಯ ಕೆಂಗನೂರು ಹುಟ್ಟೂರು. ಬಾಲ್ಯದಿಂದಲೂ ಪ್ರಖರ ಬುದ್ಧಿವಂತಿಕೆ. ಆಸ್ಟ್ರೇಲಿಯಾದ ಡೇಕಿನ್ ವಿ.ವಿ ಯ ಬಿ.ಟೆಕ್ ಪದವೀಧರರು. ಟೂಲ್ ಅಂಡ್ ಡೈ ಮೇಕಿಂಗ್‌ನಲ್ಲಿ ಡಿಪ್ಲೋಮಾ ಪಡೆದವರು. ತಾಂತ್ರಿಕ ಪರಿಣಿತಿ-ಅನುಭವದ ಆಧಾರದ ಮೇರೆಗೆ ಆಸ್ಟ್ರೇಲಿಯಾದ ಮೇಲ್ಬರ್ನನಲ್ಲಿ ದುಡಿಮೆ, ೧೯೯೪ರಲ್ಲಿ ಸ್ವಂತ ಉದ್ದಿಮೆ ಕೊಪ್ಪ ಇಂಜಿನಿಯರಿಂಗ್‌ ಸಂಸ್ಥೆ ಸ್ಥಾಪನೆ-ಯಶಸ್ಸು. ಆನಂತರ ಮೌಲ್ಡಿಂಗ್ ವಸ್ತುಗಳನ್ನು ಉತ್ಪಾದಿಸುವ ಬೆವ್ ಪ್ಲಾಸ್ಟಿಕ್ಸ್ ಸ್ಥಾಪಿಸಿ ಉನ್ನತ ಸಾಧನೆ. ಅನಿವಾಸಿ ಭಾರತೀಯರು ನೆಲೆನಿಲ್ಲಲು ನೆರವಾದ ಸಹೃದಯಿ. ಮೇಲ್ಬರ್ನ್ ಕನ್ನಡ ಸಂಘ, ವಿವೇಕಾನಂದ ಯೋಗ ಕೇಂದ್ರ, ಬಸವ ಸಮಿತಿ, ರೋಟರಿ ಕ್ಲಬ್‌ ಮತ್ತಿತರ ಹಲವು ಸಾಮಾಜಿಕ, ವೃತ್ತಿಪರ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂಘಟಕರಾಗಿ ಪರಿಶ್ರಮ-ಸಾರ್ಥಕ ಸೇವೆ ಸಲ್ಲಿಸಿದ ಅದಮ್ಯ ಉತ್ಸಾಹದ ಮಾದರಿ ತಂತ್ರಜ್ಞ ಉದ್ಯಮಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಂತ ಮುನ್ನೊಳ್ಳಿ

ವರ್ಣಚಿತ್ರಕಲೆಯಲ್ಲಿ ತಮ್ಮದೇ ಅಚ್ಚಳಿಯದ ಛಾಪು ಮೂಡಿಸಿದ ಕಲಾಕುಸುಮ ಜಯಂತ ಮುನ್ನೊಳ್ಳಿ. ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ಸಂಚಲನ ಮೂಡಿಸಿದ ಸಾಧಕ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ಜಯಂತ ಮುನ್ನೊಳ್ಳಿ ಬಹುಭಾಷಾ ಪ್ರವೀಣರು. ಆಫ್ರಿಕನ್ ಭಾಷೆಯನ್ನೂ ಬಲ್ಲವರು. ೧೯೪೦ರ ಡಿಸೆಂಬರ್ ೧೦ರಂದು ಜನಿಸಿದ ಮುನ್ನೊಳ್ಳಿ ೬೪ರಲ್ಲಿ ಮದ್ರಾಸ್ ರಾಜ್ಯದ ಸೇಲಂನಲ್ಲಿ ಹ್ಯಾಂಡ್‌ಲೂಮ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಕಲಿತವರು. ಪೂರ್ವ ಆಫ್ರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು. ಕ್ರಿಯೇಟಿವ್ ಪೇಟಿಂಗ್ ಮತ್ತು ಆಯಿಲ್ ಪೇಟಿಂಗ್‌ನಲ್ಲಿ ವಿಶೇಷ ಪರಿಣಿತಿಯುಳ್ಳವರು. ಮುಂಬಯಿನ ಎಲಿಮೆಂಟ್ರಿ ಡ್ರಾಯಿಂಗ್ ಕಾಂಪಿಟೇಶನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭಾವಂತರು. ಮುಂಬಯಿನ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ ಹತ್ತು ಬಾರಿ ಸೇರಿ ದೇಶದ ವಿವಿಧೆಡೆ ೫೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನದ ಹೆಗ್ಗಳಿಕೆ ಇವರದ್ದು. ಪ್ರತಿ ಪ್ರದರ್ಶನದಲ್ಲೂ ನವೀನ ಕಲಾಕೃತಿಗಳ ಮೂಲಕ ಕಲಾಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಕಲಾವಂತಿಕೆ ಜಯಂತ ಅವರ ವಿಶೇಷತೆ. ೮೦ರ ಆಸುಪಾಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವ ಅವರು ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರು.

Categories
ನ್ಯಾಯಾಂಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಕುಮಾರ್

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರ ನಿಲುವುಗಳಿಂದಲೇ ಹೆಸರುವಾಸಿಯಾದವರು ನ್ಯಾಯಮೂರ್ತಿಗಳಾದ ಎನ್. ಕುಮಾರ್, ವಕೀಲರು, ನ್ಯಾಯಾಧೀಶರು, ನ್ಯಾಯಾಂಗ ತರಬೇತುದಾರರಾಗಿ ಅನುಪಮ ಸೇವೆಗೈದ ಸಾಧಕರು.
ಪ್ರಸ್ತುತ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎನ್. ಕುಮಾರ್ ಅವರು ವಕೀಲಿ ವೃತ್ತಿ ಆರಂಭಿಸಿದ್ದು ೧೯೭೬ರಲ್ಲಿ. ವಕೀಲ ವ್ಯಾಸಂಗವನ್ನು ಆಳವಾಗಿ ಅಧ್ಯಯನಿಸಿದ ಅವರು ತಮ್ಮ ಅಭ್ಯಾಸವನ್ನು ಹೈಕೋರ್ಟ್‌ಗೆ ವಿಸ್ತರಿಸಿದರು. ಸಿವಿಲ್‌, ಕಂಪನಿ, ಕಾರ್ಮಿಕ, ತೆರಿಗೆ, ಐಪಿರ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಕರ್ನಾಟಕದ ಭಾರತೀಯ ಕಾನೂನು ವರದಿಗಳ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ೨೦೦೦ರಲ್ಲಿ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಹಲವು ಮಹತ್ವದ ಜನಪರ ತೀರ್ಪುಗಳ ಮೂಲಕ ಜನಾನುರಾಗಿಯಾದವರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ನ್ಯಾಯಾಂಗದ ಅಧಿಕಾರಿಗಳಿಗೆ ತರಬೇತುದಾರರಾಗಿಯೂ ಸೇವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ನ್ಯಾಯಾಧೀಶರ ರೌಂಡ್ ಟೇಬಲ್ ಸಮ್ಮೇಳನಗಳಲ್ಲಿ ಉಪನ್ಯಾಸ-ಪ್ರಬಂಧಗಳ ಮಂಡನೆ ಮಾಡಿರುವ ನ್ಯಾಯಮೂರ್ತಿಗಳಿಗೆ ಅಲೈಯನ್ಸ್ ವಿ.ವಿ ಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅನನ್ಯ ಸೇವೆಗೆ ಸಂದಿರುವ ಸತ್ಪಲ. ಸಧ್ಯ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಸೇವಾನಿರತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೃಷ್ಣಪ್ರಸಾದ್. ಕೆ

ಕತ್ತಲೆಯಲ್ಲಿರುವವರ ಬಾಳು ಬೆಳಗಿದ ದೀಪವಾದವರು ಹೆಸರಾಂತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್.ಕೆ. ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಜಾಗೃತಿ ಮೂಡಿಸಲೆಂದೇ ಬದುಕು ಮೀಸಲಿಟ್ಟಿರುವ ವೈದ್ಯಶಿರೋಮಣಿ.
ಉಡುಪಿ ಜಿಲ್ಲೆಯವರಾದ ಕೃಷ್ಣಪ್ರಸಾದ್ ನೇತ್ರ ಚಿಕಿತ್ಸೆಯಲ್ಲಿ ಅದ್ವಿತೀಯ ಸಾಧನೆಗೈದವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಎಸ್. ಪೂರೈಸಿದವರು. ಅದೇ ಕಾಲೇಜಿನ ಪ್ರಾಧ್ಯಾಪಕ, ಉಡುಪಿ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಆಸ್ಪತ್ರೆಯ ಗೌರವ ಪ್ರಾಧ್ಯಾಪಕರಾಗಿ, ಸುಪ್ರಸಿದ್ಧ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಕಣ್ಣಿನ ಚಿಕಿತ್ಸೆಯಲ್ಲಿ ಅಪೂರ್ವ ಸೇವೆ ಕೃಷ್ಣಪ್ರಸಾದ್‌ ಹಿರಿಮೆ. ೨೦ ಲಕ್ಷ ಜನರ ಕಣ್ಣಿನ ತಪಾಸಣೆ, ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ, ೬೦ ಸಾವಿರಕ್ಕೂ ಮಿಗಿಲಾದ ಕಣ್ಣಿನ ಶಸ್ತ್ರಚಿಕಿತ್ಸೆ, ೩.೭೫ ಲಕ್ಷ ಜನರಿಗೆ ಉಚಿತ ಕನ್ನಡ ವಿತರಣೆ, ಉಚಿತ ನೇತ್ರ ತಪಾಸಣಾ ಶಿಬಿರಗಳು, ಕಣ್ಣಿನ ಆರೋಗ್ಯದ ಬಗ್ಗೆ ಜನಸಾಮಾನ್ಯರು-ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ ಮುಂತಾದವು ಕೃಷ್ಣಪ್ರಸಾದ್‌ ಸಾಧನೆಯ ಮೈಲಿಗಲ್ಲುಗಳು. ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸದ ಹೆಗ್ಗಳಿಕೆ.ರಾಜ್ಯ, ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದಲೂ ಭೂಷಿತರಾಗಿರುವ ಕೃಷ್ಣಪ್ರಸಾದ್ ವೈದ್ಯಲೋಕದ ನಕ್ಷತ್ರಗಳಲ್ಲಿ ಒಬ್ಬರೆಂಬುದಕ್ಕೆ ಅವರ ಸಾಧನೆಯೇ ಜ್ವಲಂತ ಸಾಕ್ಷಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜಿ.ಟಿ. ಸುಭಾಷ್

ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸೇವೆ-ಸಾಧನೆಗೈದ ಅಪರೂಪದ ಪ್ರತಿಭಾವಂತರು ಡಾ.ಜಿ.ಟಿ.ಸುಭಾಷ್. ವೈದ್ಯಕೀಯ, ಸಮಾಜಸೇವೆ, ಆಡಳಿತ, ಸಾಮಾಜಿಕ ಕ್ಷೇತ್ರದ ಸಾಧಕರು.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಗಂಜಿಗೆರೆಯವರಾದ ಸುಭಾಷ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಎ.ತಿಮ್ಮಪ್ಪಗೌಡರ ಸುಪುತ್ರರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಡಿ, ನಿಮ್ಹಾನ್ಸ್‌ನಲ್ಲಿ ಡಿ.ಎಂ.ಮಾಡಿದವರು. ಗ್ರಾಮೀಣ ವೈದ್ಯಕೀಯ ಸೇವೆಗಳ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನರವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಡೀನ್ – ನಿರ್ದೇಶಕರಾಗಿ ಸ್ಮರಣೀಯ ಸೇವೆ. ರಾಜೀವಗಾಂಧಿ ವಿವಿ ಹಣಕಾಸು ಸಮಿತಿಯ ಸೆನೆಟ್ ಸದಸ್ಯ, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ ಸದಸ್ಯ, ಯುಜಿಸಿಯ ಮೆಡಿಕಲ್ ಇನ್ಸ್‌ಪೆಕ್ಟರ್, ಪಿಎಂಎಸ್‌ ವೈನ ವಿಶೇಷ ಆಡಳಿತಾಧಿಕಾರಿ..ಹೀಗೆ ಬಹುಹುದ್ದೆಗಳಲ್ಲಿ ದುಡಿದವರು.ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಬೀದಿ ನಾಟಕಗಳು, ಸಮ್ಮೇಳನಗಳು, ಪರಿಸರ ಸಂರಕ್ಷಣೆ-ಧೂಮಪಾನದ ವಿರುದ್ಧ ಜಾಗೃತಿ ಮೂಡಿಸುವಿಕೆ, ಪಾರ್ಶ್ವವಾಯು ಪೀಡಿತರಿಗೆ ಮಾಹಿತಿ-ಚಿಕಿತ್ಸೆ ಮುಂತಾದ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರು.ಡಾ. ಬಿ.ಸಿ.ರಾಯ್ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಫೆಲೋಶಿಪ್ ಮತ್ತಿತರ ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್. ನಾಗರತ್ನ

ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥಕವಾಗಿ ಬದುಕಿರುವವರು ಡಾ.ಆರ್.ನಾಗರತ್ನ, ಯೋಗ ಚಿಕಿತ್ಸಾ ವಿಧಾನದಲ್ಲಿ ಸಿದ್ಧಹಸ್ತರು, ಅನುಪಮ ಸೇವೆಯ ಮಾದರಿ ವೈದ್ಯರು.
ಬೆಂಗಳೂರಿನವರಾದ ಡಾ. ನಾಗರತ್ನ ವೈದ್ಯಕೀಯ ಸ್ನಾತಕೋತ್ತರ ಪದವೀಧರರು. ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯಸಂಬಂಧಿ ಕಾಯಿಲೆಗಳಿಗೆ ಯೋಗ ಚಿಕಿತ್ಸಾ ವಿಧಾನ ಅಭಿವೃದ್ಧಿ ಪಡಿಸಿ ಐದು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಆರು ಪ್ರಾಯೋಜಿತ ಸಂಶೋಧನೆ ಪೂರ್ಣಗೊಳಿಸಿದ ಹಿರಿಮೆ, ಯೋಗ ಚಿಕಿತ್ಸಾ ವಿಧಾನದ ರಚನೆ, ವ್ಯಾಲಿಡೇಶನ್, ಪ್ರಮಾಣೀಕರಣ ಮತ್ತು ಪರೀಕ್ಷಾ ಪ್ರಮಾಣೀಕರಣದಲ್ಲಿ ಪರಿಣಿತಿ ಸಾಧಿಸಿದ ಗರಿಮೆ ಅವರದ್ದು. ಬೆಂಗಳೂರು ಆರೋಗ್ಯಧಾಮದ ಮುಖ್ಯ ಆರೋಗ್ಯಾಧಿಕಾರಿ, ವಾಣಿ ವಿಲಾಸ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕರು, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು, ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಅಮೆರಿಕದ ಆಸ್ಪತ್ರೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಾನವೀಯ ಸೇವೆ. ಹನ್ನೊಂದು ಕೃತಿಗಳ ರಚಿಸಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡಿಸಿರುವ ಡಾ. ಆರ್.ನಾಗರತ್ನ ಅವರ ಸೇವೆಗೆ ಸಂದಿರುವ ಹತ್ತಾರು ಪ್ರಶಸ್ತಿಗಳ ಘನತೆಯೇ ಹೆಚ್ಚಿರುವುದು ಉತ್ಪಕ್ಷೆಯಲ್ಲದ ನಿಜದ ಮಾತು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಟಿ.ಹೆಚ್. ಅಂಜನಪ್ಪ

ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಮಾದರಿಯಾಗಿರುವ ಸಾಧಕರು ಡಾ. ಟಿ.ಹೆಚ್. ಅಂಜನಪ್ಪ ಸಾವಿರಾರು ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಜೀವರಕ್ಷಿಸಿದ ಧನ್ವಂತರಿ,
ವೈದ್ಯಕೀಯ, ಸಮಾಜಸೇವೆ, ಉಪನ್ಯಾಸ, ಆರೋಗ್ಯ ಶಿಬಿರಗಳ ಸಂಘಟನೆಯ ಕಾರ್ಯದಲ್ಲಿ ಮೈಲಿಗಲ್ಲು ನಿರ್ಮಿಸಿರುವ ಅಪರೂಪದ ವೈದ್ಯರು ಡಾ.ಟಿ.ಹೆಚ್.ಅಂಜನಪ್ಪ, ಮೂರೂವರೆ ದಶಕಗಳಿಂದಲೂ ವೈದ್ಯಕೀಯ ಸೇವೆಯಲ್ಲಿ ಅನವರತ ನಿರತರಾಗಿರುವ ಡಾ.ಟಿ.ಹೆಚ್. ಅಂಜನಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಪೇಗೌಡ ಆಸ್ಪತ್ರೆಗಳಲ್ಲಿ ರೋಗಿಗಳ ಜೀವರಕ್ಷಣೆಗೆ ದುಡಿದವರು. ೩೫ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವಿಶಿಷ್ಟ ದಾಖಲೆ ಅವರದ್ದು. ಬಡರೋಗಿಳಿಗೆ ಉಚಿತ ಚಿಕಿತ್ಸೆ, ೭೦೦ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ೯೦೦ಕ್ಕೂ ಅಧಿಕ ಆರೋಗ್ಯದ ಕುರಿತ ಉಪನ್ಯಾಸ, ಕರ್ನಾಟಕ ಕ್ಯಾನ್ಸರ್ ಸಂಸ್ಥೆಯಿಂದ ನಿರಂತರ ಸಮಾಜಸೇವೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನೇಕ ಕಾಲೇಜು-ಸಂಘಸಂಸ್ಥೆಗಳಲ್ಲಿ ಅರ್ಬುದ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಡಾ.ಟಿ.ಹೆಚ್ ಅಂಜನಪ್ಪ ಅವರ ಬಹುಮುಖಿ ಸೇವೆ-ಸಾಧನೆಗೆ ಹಿಡಿದ ಕೈಗನ್ನಡಿ. ಹತ್ತಾರು ಪ್ರಶಸ್ತಿ-ಗೌರವಗಳಿಗೆ ಪಾತ್ರವಾಗಿರುವ ಅಂಜನಪ್ಪ ವೈದ್ಯರಂಗದ ವಿಶಿಷ್ಟ ಹಾಗೂ ಮಾದರಿ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹನುಮಂತರಾಯ ಪಂಡಿತ್‌

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರು ಡಾ. ಹನುಮಂತರಾಯ ಪಂಡಿತ್. ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಹೊಸ ಸಂಶೋಧನೆಗಳಿಂದ ಜನೋಪಕಾರಿಯಾದ‌ ಪಂಡಿತರು.
ತುಮಕೂರು ತಾಲ್ಲೂಕಿನ ರಾಮುಗನಹಳ್ಳಿ ಹನುಮಂತರಾಯರ ಹುಟ್ಟೂರು. ೧೯೨೯ರ ಮೇ.೨೫ರಂದು ಜನನ. – ಓದು, ಛಲ ಹುಟ್ಟುಗುಣ. ಬಡತನದಿಂದಾಗಿ ಪ್ರೌಢಶಾಲೆಯ ಮೆಟ್ಟಿಲೇರಲಾಗದಿದ್ದರೂ ಸಂಸ್ಕೃತ ಭಾಷಾ ಅಧ್ಯಯನದಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್‌ ಗಳಿಸಿದವರು. ಪರಿಶ್ರಮದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಅಧ್ಯಾಪಕ, ಉಪನ್ಯಾಸಕರಾಗಿ ಹುದ್ದೆಗೇರಿದವರು. ಎಸ್‌ಎಸ್‌ಎಲ್, ಕನ್ನಡಪಂಡಿತ ಪದವಿ, ಜ್ಯೋತಿಷ್ಯ, ಹೋಮಿಯೋಪಥಿ ಹಾಗೂ ಆಯುರ್ವೇದದ ಅಧ್ಯಯನವೆಲ್ಲವೂ ಛಲದ ಫಲವೇ. ಮಾಧ್ಯಮಿಕ ಶಾಲೆಯ ಉಪಪಠ್ಯವಾದ ನಾಲ್ಕು ಕಿರುಕಥೆಗಳು, ಹತ್ತನೇ ತರಗತಿ ಪಠ್ಯಪುಸ್ತಕವಾದ ಸಾಹಿತ್ಯಸಂಪುಟ ರಚಿಸಿದವರು. ವಿವಿಧ ಕಾಯಿಲೆಗಳ ನಿವಾರಣೆಗೆ ೨೦ ಸಂಶೋಧನೆಗಳು, ಆಯುರ್ವೇದ ಔಷಧಿಗಳ ನಿರ್ಮಾಣಗಾರದ ಸ್ಥಾಪನೆ, ಆಯುರ್ ಪಾರ್ಕ್ ಹೆಲ್ತ್‌ಕೇರ್ ಲಿಮಿಟೆಡ್‌ನ ನಿರ್ದೇಶಕತ್ವ ಸಾದು ಜನಾಂಗದ ಇತಿಹಾಸದ ಸಂಗ್ರಹ, ಸಹಕಾರ ಸಂಘ ಸ್ಥಾಪನೆ, ಸಾದರ ಸುದ್ದಿ ಪತ್ರಿಕೆ. ಎಲ್ಲವೂ ಸಾಧನೆಯ ಮೈಲಿಗಲ್ಲುಗಳೇ.೯೦ರ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿರುವ ಹಿರಿಯ ಜೀವ ಸಾಧಕರಿಗೆ ನಿಜಮಾದರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ

ಯೋಗ ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ-ಪೋಷಣೆಗೆ ಶ್ರಮಿಸುತ್ತಿರುವ ವಿಶಿಷ್ಟ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಪಾರಂಪರಿಕ ಯೋಗ ಪದ್ಧತಿಯ ಪ್ರಸಾರಕ್ಕಾಗಿಯೇ ಮುಡಿಪಿರುವ ಸಂಘಟನೆ.
ತುಮಕೂರಿನಲ್ಲಿ ನೆಲೆನಿಂತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯು ೧೯೮೦ರಲ್ಲಿ ಪ್ರಾರಂಭಗೊಂಡಿತು. ಯೋಗ ಗುರು ಅ.ರಾ.ರಾಮಸ್ವಾಮಿ ಅವರು ಈ ಸಂಸ್ಥೆಯ ರೂವಾರಿಗಳು. ಪುಟ್ಟ ಯೋಗ ತರಗತಿ ರೂಪದಲ್ಲಿ ಮೈದೆಳೆದ ಸಂಸ್ಥೆ ಆನಂತರ ಬೃಹದಾಕಾರವಾಗಿ ಮೈಚಾಚಿ ನಿಂತಿದ್ದು ಇತಿಹಾಸ. ಮಲ್ಲಾಡಿಹಳ್ಳಿಯ ರಾಘವೇಂದ್ರ ಮಹಾಸ್ವಾಮಿಗಳು, ವಿಶ್ವವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ರೂಪತೆಳೆದ ಈ ಸಂಸ್ಥೆಯದ್ದು ಸಂಸ್ಕಾರ, ಸಂಘಟನೆ ಮತ್ತು ಸೇವೆಯೇ ಮುಖ್ಯಗುರಿ. ಸರಿಸುಮಾರು ೪೦ ವರ್ಷಗಳಿಂದಲೂ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವುದು ಸ್ಮರಣಾರ್ಹ. ರಾಜ್ಯವೊಂದರಲ್ಲೇ ೯೦೦ ಶಾಖೆ ಮಾತ್ರವಲ್ಲದೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಶಾಖೆ ಹೊಂದಿರುವ ಸಮಿತಿಯಲ್ಲಿ ಈವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ತಯಾರಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿಕೊಡಲಾಗಿದ್ದು ಆ ಮೂಲಕ ಯುವಜನತೆಯ ಮಾನಸಿಕ-ದೈಹಿಕ ಆರೋಗ್ಯದ ಸುಸ್ಥಿರತೆಗೆ ಅಪೂರ್ವ ಕಾಣೆ ನೀಡಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವ ವಿಷಯ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್

ಕಲಾರಕ್ಷಣೆ ಮತ್ತು ಕಲಾವಿದರ ಪೋಷಣೆಯಲ್ಲಿ ಅವಿರತ ಶ್ರಮ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯದ್ದು. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಧೀಮಂತ ಸಂಸ್ಥೆ.
ಕರ್ನಾಟಕ ಕಲಾರಂಗದ ಪ್ರಮುಖ ಸಂಸ್ಥೆಯೆನಿಸಿರುವ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರುವಾಸಿ. ಬಹಮುಖ ಪ್ರತಿಭೆ ರಾಘವೇಂದ್ರ ಜೆ.ಪ್ರಭಾತ್‌ ಅವರ ಕಲ್ಪನೆಯ ಕೂಸು. ಆಧ್ಯಾತ್ಮ, ತತ್ವ, ಸಾಹಿತ್ಯ, ಸಂಗೀತ, ನೃತ್ಯ, ನೃತ್ಯನಾಟಕ, ಪತ್ರಿಕೋದ್ಯಮ. ಹೀಗೆ ಹತ್ತು ಹಲವು ಮುಖದ ಕಲೆಯ ಪರಿಚಯವಿರುವ ರಾಘವೇಂದ್ರ ಪ್ರಭಾತ್ ಪ್ರಖರ ವಾಗ್ನಿ, ರಂಗನಟ, ನಿರ್ದೇಶಕ ಮತ್ತು ನೃತ್ಯ ನಾಟಕಗಳ ರಚನಕಾರರು.ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಮೆರಿಕಾ, ಯುರೋಪ್, ಸಿಂಗಪುರ, ಮಲೇಷಿಯ ಮುಂತಾದ ಪೌರಾತ್ಯ ದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಪ್ರವಾಸ ಕೈಗೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ರಾಘವೇಂದ್ರದ ಹೆಗ್ಗಳಿಕೆ. ನೃತ್ಯ ಕ್ಷೇತ್ರಕ್ಕೆ ರಾಘವೇಂದ್ರರಂತೆ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯದ್ದು ಮಹತ್ವದ ಕೊಡುಗೆ. ಸಂಸ್ಥೆಯ ‘ಶ್ರೀ ಕೃಷ್ಣಕಮಲಾನಾಥ್’ ಎಂಬ ವರ್ಣವು ಜಗತ್ತಿನಾದ್ಯಂತ ಎಲ್ಲಾ ನರ್ತಕರು ಪ್ರದರ್ಶಿಸುವ ಜನಪ್ರಿಯ ಆಕೃತಿಯಾಗಿರುವುದು ವಿಶೇಷ. ಕಲಾವನದ ಮಂದಾರಪುಷ್ಟವಾಗಿ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ತನ್ನ ಸುಗಂಧವನ್ನೂ ಬೀರುತ್ತಲೇ ಇರುವುದು ಸಾಂಸ್ಕೃತಿಕ ಹೆಗ್ಗುರುತು.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಛತ್ರಪ್ಪ ಕಾಗಣಿಕ‌ರ್

ಸಮಾಜಸೇವೆಯೇ ಭಗವಂತನ ಸೇವೆಯೆಂಬ ದಿವ್ಯನಂಬಿಕೆಯಲ್ಲಿ ಸೇವಾನಿರತರಾಗಿರುವವರು ಶಿವಾಜಿ ಛತ್ರಪ್ಪ ಕಾಗಣಿಕ‌. ಬೆಳಗಾವಿ ಜಿಲ್ಲೆಯ ಅಣ್ಣಾಹಜಾರೆಯೆಂದೇ ಜನಜನಿತರು.
ಬೆಳಗಾವಿ ತಾಲ್ಲೂಕಿನ ಕಟ್ಟನಭಾವಿ ಶಿವಾಜಿ ಕಾಗಣಿಕರ್‌ರ ಹುಟ್ಟೂರು. ಬಿಎಸ್ಸಿ ಪದವೀಧರರಾದ ಕಾಗಣಿಕ‌ ಬಾಲ್ಯದಿಂದಲೂ ಸಮಾಜಸೇವಾಸಕ್ತರು. ಪರಿಸರ ಅಧ್ಯಯನ, ಸಮಾಜಸೇವೆಯಲ್ಲಿ ಕ್ರಿಯಾಶೀಲರು. ಗಾಂಧಿವಾದದ ಅನುಯಾಯಿಯಾದ ಕಾಗಣಿಕ‌ ೧೯ನೇ ವಯಸ್ಸಿನಲ್ಲಿ ೧೯೬೮ರಲ್ಲಿ ಜನ ಜಾಗ್ರಣ ಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿಗರಲ್ಲಿ ಶಿಕ್ಷಣ, ನೀರಿನ ಸಂರಕ್ಷಣೆ ಜೊತೆಗೆ ಗ್ರಾಮೀಣ ಜನಪದದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದು ಮೊದಲ ಸಾಮಾಜಿಕ ಹೆಜ್ಜೆ. ಆನಂತರ ಗ್ರಾಮದಲ್ಲಿ ರಾತ್ರಿ ಶಾಲೆಯ ಸ್ಥಾಪನೆ. ಹಳ್ಳಿಯ ಅಡುಗೆ ಮನೆಗಳನ್ನು ಹೊಗೆರಹಿತ ಮಾಡಲು ೬೦ಕ್ಕೂ ಅಧಿಕ ಜೈವಿಕ ಇಂಧನ ಘಟಕಗಳ ಸ್ಥಾಪನೆ. ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಐದು ದಶಕಗಳಿಂದ ಕಾರ್ಯೋನ್ಮುಖರಾಗಿ ಅವಿರತ ಶ್ರಮಿಸುತ್ತಿರುವ ಕಾಗಣಿಕ‌ ಅವರ ನಡೆ-ನುಡಿ- ವೇಷಭೂಷಣವೆಲ್ಲವೂ ಗಾಂಧಿಮಯ. ಗಾಮೀಣಾಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಾಜಿ ಛತ್ರಪ್ಪ ಕಾಗಣಿಕ‌ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿಯಿಂದ ಭೂಷಿತರು. ೬೯ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ಅನುದಿನ ಅನುಕ್ಷಣ ನಿರತರಾಗಿರುವ ನಿಸ್ವಾರ್ಥ ಜೀವಿ.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಸಾಲುಮರದ ವೀರಾಚಾರ್

ಪರಿಸರ ಸಂರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡ ಅಪಾರ ವೃಕ್ಷಪ್ರೇಮಿ ವೀರಾಚಾರ್, ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಸಾವಿರ ಗಿಡಗಳ ಸರದಾರ, ಅಪೂರ್ವ ಪರಿಸರಮಿತ್ರ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಂದಿಹಳ್ಳಿ ವೀರಾಚಾರ್‌ರ ಹುಟ್ಟೂರಾದರೂ ಬದುಕು ನೆಲೆಗೊಂಡಿದ್ದು ಹರಿಹರ ತಾಲೂಕಿನ ಮಿಟ್ಲಕಟ್ಟೆಯಲ್ಲಿ. ಕುಲುಮೆ ಕೆಲಸವೇ ಬದುಕಿಗೆ ಆಧಾರ. ಬಾಲ್ಯದಿಂದಲೂ ಗಿಡ ಮರಗಳೆಂದರೆ ವಿಪರೀತ ಪ್ರೀತಿ. ಗಿಡ ನೆಡುವುದು ನೆಚ್ಚಿನ ಕೆಲಸ. ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭಿಸಿದ ವೀರಾಚಾರ್‌ರ ಸಸ್ಯಪ್ರೇಮ ಬದುಕಿನ ಗತಿಯನ್ನೇ ಬದಲಿಸಿದ್ದು ವಿಶೇಷ. ಸ್ವಂತ ಕುಟುಂಬ, ಖಾಸಗಿ ಬದುಕು, ಕುಲುಮೆ ಉದ್ಯೋಗವನ್ನು ನಿರ್ಲಕ್ಷಿಸುವಷ್ಟು ಪರಿಸರ ಪ್ರೇಮ ಅವರದ್ದು. ಮದುವೆ ಸಮಾರಂಭ, ಗೃಹಪ್ರವೇಶ ಮುಂತಾದ ಯಾವುದೇ ಸಮಾರಂಭಗಳಿಗೂ ತೆರಳಿದರೂ ಗಿಡವೇ ಊಡುಗೊರೆ. ಸಾವಿನ ಮಣ್ಣಿಗೆ ಹೋದರೂ ಸಮಾಧಿ ಬಳಿ ಗಿಡ ನೆಟ್ಟು ಬರುವುದು ನೆಚ್ಚಿನ ಹವ್ಯಾಸ. ಶಾಲೆಗಳ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಲೆಕ್ಕವಿಲ್ಲ. ವನಮಹೋತ್ಸವ ಕಾರ್ಯಕ್ರಮಗಳ ಮೂಲಕ ಮೂಡಿಸಿದ ಪರಿಸರ ಜಾಗೃತಿ ಅಗಣಿತ.ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಿರುವ ವೀರಾಚಾರ್ ಸಾವಿರ ಗಿಡಗಳ ಸರದಾರರೆಂದೇ ಜನಜನಿತ. ನಿರ್ವಾಜ್ಯ ಪರಿಸರ ಪ್ರೇಮದ ವೀರಾಚಾರ್‌ಗೆ ಬದುಕಿಗಿಂತಲೂ ಪರಿಸರವೇ ದೊಡ್ಡದು. ಅದಕ್ಕಾಗಿಯೇ ಬದುಕು ಸದಾ ಮೀಸಲು.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವೇಶ್ವರ ಸಜ್ಜನ್

ಒಣಭೂಮಿ ಬೇಸಾಯವನ್ನೇ ಬದುಕಾಗಿಸಿಕೊಂಡು ಬಂಗಾರದ ಬೆಳೆ ಬೆಳೆದವರು ವಿಶ್ವೇಶ್ವರ ಸಜ್ಜನ್, ಸಾವಯವ ಕೃಷಿಯಲ್ಲಿ ಯಶಸ್ಸಿನ ಹೊಸ ದಾಖಲೆ ಬರೆದ ಆದರ್ಶ ಕೃಷಿಕರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯವರಾದ ವಿಶ್ವೇಶ್ವರ ಸಜ್ಜನ್ ಕನ್ನಡದ ಸ್ನಾತಕೋತ್ತರ ಪದವೀಧರರು. ಕೃಷಿಯಲ್ಲಿ ಆಸಕ್ತಿ ಮೊಳಕೆಯೊಡೆದು ಬೇಸಾಯಕ್ಕಿಳಿದವರು. ಪಾಲಿಗೆ ಬಂದ ಐದು ಎಕರೆ ಒಣಭೂಮಿಯೇ ಕರ್ಮಭೂಮಿ, ಬರ ಮತ್ತು ಅಕಾಲಿಕ ಮಳೆಯ ಮಧ್ಯೆಯೇ ಸಾವಯವ ಕೃಷಿಯಿಂದ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣು, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಮತ್ತೊಂದು ಎಕರೆಯಲ್ಲಿ ಜಂಬೂ ನೇರಳೆ ಬೆಳೆದ ಸಾಧಕರು.ಬೇಲದ ಜ್ಯೂಸ್, ಪೇಡ, ರಸಂ, ಟೀಪೌಡರ್ ತಯಾರಿಕೆ, ಹತ್ತು ದೇಸೀ ಗೀರ್ ತಳಿಯ ಗೋವುಗಳ ಸಾಕಣೆ, ಅವುಗಳ ಹಾಲಿನಿಂದಲೂ ಪೇಡ, ಗೋಮೂತ್ರ, ಆರ್ಕ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಿ ಗೆದ್ದವರು. ಕೃಷಿ ಆದಾಯದಲ್ಲೇ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಸಜ್ಜನ್ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ನೈಜ ಕೃಷಿಋಷಿ.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ಕೆ.ದೇವರಾವ್

ಸಾವಯವ ಕೃಷಿಯನ್ನೇ ಬದುಕಿನ ಮಾರ್ಗವಾಗಿಸಿಕೊಂಡ ಕಾಯಕಯೋಗಿ ಬಿ.ಕೆ.ದೇವರಾವ್. ಭತ್ತದ ತಳಿಗಳ ಸಂರಕ್ಷಣೆಯಲ್ಲಿ ಮೌಲಿಕವಾದ ಸಾಧನೆಗೈದ ಮಾದರಿ ಕೃಷಿಕರು.
ದೇವರಾಯರು ಮೂಲತಃ ಕೃಷಿ ಮನೆತನದವರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಹುಟ್ಟೂರು. ಓದಿದ್ದು ೧೧ನೇ ಇಯತ್ತೆವರೆಗೆ ಮಾತ್ರ ಶಾಲೆಗಿಂತ ಕೃಷಿ ಅನುಭವದಲ್ಲಿ ಕಲಿತದ್ದೇ ಅಪಾರ. ಮಿತ್ತಬಾಗಿಲಿನ ಕೃಷಿ ಭೂಮಿಯೇ ಇವರ ತಪೋಭೂಮಿ. ತಂದೆಯಿಂದ ಬಂದ ೩೦ ಎಕರೆ ಭೂಮಿಯ ಪೈಕಿ ೪ ಎಕರೆಯಲ್ಲಿ ಭತ್ತ, ಎರಡೂವರೆ ಎಕರೆಯಲ್ಲಿ ಅಡಿಕೆ, ೨೫೦ ತೆಂಗು, ಗೇರು, ಕಾಳುಮೆಣಸು, ಮನೆಮಟ್ಟಿಗೆ ತರಕಾರಿ ಬೆಳೆವ ಸ್ವಾವಲಂಬಿ ಕೃಷಿ ಬದುಕು. ಮಲೆನಾಡಿನ ಆಕಳ ತಳಿಗಳ ಸಂರಕ್ಷಣೆಯಲ್ಲೂ ಎತ್ತಿದ ಕೈ. ಮರೆಯಾಗಿದ್ದ ಭತ್ತದ ೨೩ ತಳಿಗಳ ಸಂರಕ್ಷಕರು- ಪೋಷಕರು. ತಳಿ ವೈವಿಧ್ಯ ಹೆಚ್ಚಿಸುವುದೇ ಬದುಕಿನ ಹೆಗ್ಗುರಿ. ಸಾಂಪ್ರದಾಯಿಕ ಕ್ರಮದ ಬಿತ್ತನೆ ಮತ್ತು ನಾಟ ದೇವರಾಯರ ಬೇಸಾಯದ ವೈಶಿಷ್ಟ್ಯ, ರೈತ ಅವರ ಊಟಕ್ಕಾದರೂ ಗದ್ದೆ ಮಾಡಲಿ ಎಂಬ ದಿವ್ಯಮಂತ್ರ ಪಠಿಸುತ್ತಿರುವ ದೇವರಾಯರು ಸಾವಯವ ಕೃಷಿಯ ಅನನ್ಯ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕತ್ತಿಗೆ ಚನ್ನಪ್ಪ

ಮಲೆನಾಡಿನ ಬಹುಮುಖಿ ಸಾಧಕರ ಸಾಲಿಗೆ ನಿಸ್ಸಂಶಯವಾಗಿ ಸೇರುವವರು ಕತ್ತಿಗೆ ಚನ್ನಪ್ಪ, ಸಾಹಿತ್ಯ, ರಂಗಭೂಮಿ, ಸಮಾಜಸೇವೆಯಲ್ಲಿ ಧನ್ಯತೆ ಕಂಡುಕೊಂಡ ನಿನ್ನಹ ಸಾಧಕರು.
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕತ್ತಿಗೆ ಚೆನ್ನಪ್ಪ ಅವರು ಹೊನ್ನಾಳಿ ತಾಲ್ಲೂಕಿ ಕತ್ತಿಗೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿಇಡಿ ವ್ಯಾಸಂಗ ಮಾಡಿದವರು. ಸಾಹಿತ್ಯಾಭಿರುಚಿ, ರಂಗಪ್ರೇಮ, ಸಮಾಜಚಿಂತನೆ ಕತ್ತಿಗೆ ಚೆನ್ನಪ್ಪರ ವೈಶಿಷ್ಟ್ಯತೆ.ಕವಿ, ಕಥೆಗಾರರಾಗಿಯೂ ಜನಪ್ರಿಯ. ಜೇನುಹುಟ್ಟು ಕವನಸಂಕಲನ, ಮಾನಜ್ಜಿ ಮತ್ತು ಇತರೆ ಕಥೆಗಳು ಕಥಾಸಂಕಲನ, ಮುತ್ತಿನ ತೆನೆ, ಚಿತ್ತಾರ ಮಕ್ಕಳ ಕವಿತಾಸಂಕಲನವೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನಕಾರರು. ನಟನೆ ನೆಚ್ಚಿನ ಗೀಳು. ಹಲವಾರು ನಾಟಕಗಳ ಪಾತ್ರಗಳಿಗೆ ಜೀವತುಂಬಿದ ಪಾತ್ರಧಾರಿ, ಸಾಮಾಜಿಕ ಸೇವೆ ವ್ಯಕ್ತಿತ್ವದ ಮತ್ತೊಂದು ಮುಖ. ಶ್ರೀಚೆನ್ನೇಶ್ವರ ಯುವಕ ಸಂಘ, ಹೊನ್ನಾಳಿ ತಾಲ್ಲೂಕು ಕಸಾಪ, ಶಿಕಾರಿಪುರ ತಾಲ್ಲೂಕು ಕಸಾಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತಿತರ ಸಂಸ್ಥೆಗಳಲ್ಲಿ ಸೇವೆ. ಹುಟ್ಟೂರಿನಲ್ಲಿ ಗ್ರಂಥಾಲಯ ಕಟ್ಟಡ, ಲಂಕೇಶ್ ಬಯಲು ರಂಗಮಂದಿರ, ಯುವಕರಿಗೆ ಕ್ರೀಡಾ ಉಪಕರಣಗಳ ನೀಡಿಕೆ, ಸಮುದಾಯ ಭವನ ನಿರ್ಮಾಣ, ನೀರಾವರಿ ಯೋಜನೆ ಕುರಿತ ಹೋರಾಟ ಮುಂತಾದ ಸಾಮಾಜಿಕ ಕಾರ್ಯಗಳ ನಿರ್ವಹಿಸಿರುವ ಚನ್ನಪ್ಪ ಸೇವೆಗೆ ಮುಡಿಪಾಗಿರುವ ಜೀವಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಸ್.ಜಿ. ಭಾರತಿ

ದಮನಿತರ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿರುವ ವಿಶಿಷ್ಟ ಸಮಾಜ ಸೇವಕ ಎಸ್.ಜಿ. ಭಾರತಿ. ಲೋಕಕಲ್ಯಾಣಕ್ಕಾಗಿ ಮಿಡಿವ ಹೃದಯವಂತ.
ಬಯಲು ನಾಡಾದ ಕಲ್ಲುಗಿಯ ನಿವಾಸಿಯಾಗಿರುವ ಎಸ್.ಜಿ.ಭಾರತಿ ಹುಟ್ಟಿದ್ದು ೧೯೫೮ರ ಜುಲೈ ೧೧ರಂದು. ಸ್ನಾತಕೋತ್ತರ ಪದವೀಧರರಾದ ಅವರದ್ದು ಶುದ್ಧ ಸೇವಾಮನೋಭಾವ. ಬಹು ದಶಕಗಳಿಂದಲೂ ತರಹೇವಾರಿ ಸಮಾಜಸೇವೆಯಲ್ಲಿ ನಿರತರು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಅಸ್ಪಶ್ಯತೆ ನಿವಾರಣೆ, ದಮನಿತರು ಮತ್ತು ಇತರೆ ಜನಾಂದವರಿಗೆ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವುದೇ ನಿತ್ಯದ ಕಾಯಕ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಕ್ಷಣವೂ ಮೀಸಲಿಟ್ಟಿರುವ ಎಸ್.ಜಿ.ಭಾರತಿ ಅವರು ಗುಲ್ಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ರಾಜ್ಯ ಸರ್ಕಾರದ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ಭಾರತಿ ಅವರ ಸೇವಾತತ್ಪರತೆಗೆ ರಾಜ್ಯಾದ್ಯಂತ ಸಾಕಷ್ಟು ಸಂಘ ಸಂಸ್ಥೆಗಳು, ಅಕಾಡೆಮಿಗಳು ಪ್ರಶಸ್ತಿ-ಸನ್ಮಾನಗಳನ್ನಿತ್ತು ಗೌರವಿಸಿರುವುದು ನೈಜಸೇವೆಗೆ ಸಂದ ಸತ್ಫಲವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ರಮೇಶ್ ವೈದ್ಯ

ರಾಜ್ಯದ ಕೃಷಿ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ರಮೇಶ್ ವೈದ್ಯ ಪ್ರಮುಖ ಸಾಧಕರು. ಹಳ್ಳಿಗಾಡಿನ ಕೃಷಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಪರಿಶ್ರಮಿಸಿದ ಸಹಕಾರ ಧುರೀಣರು.
ಕೊಪ್ಪಳ ಜಿಲ್ಲೆಯ ಹಿಟ್ನಾಳದವರಾದ ರಮೇಶ್ ವೈದ್ಯ ಕೃಷಿ ಮನೆತನದ ಕುಡಿ. ೧೯೫೦ರ ಜುಲೈ ೮ರಂದು ಜನಿಸಿದ ರಮೇಶ್ ವಿಜ್ಞಾನ ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಚಟುವಟಿಕೆಗಳಲ್ಲಿ ಆಸಕ್ತರು. ಬೇಸಾಯದ ಒಳಸುಳಿ-ನೋವು ನಲಿವುಗಳ ಅರಿತಾಕ್ಷಣ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತಲ್ಲೀನ, ರಾಜ್ಯದ ಉದ್ದಗಲಕ್ಕೂ ಹಾಗೂ ಹೊರದೇಶಗಳಿಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಸಂಚಾರ-ಪರಿಶ್ರಮ. ಕೊಪ್ಪಳ ಜಿಲ್ಲಾ ಕೃಷಿ ಮಾರಾಟ ಸೊಸೈಟಿಯ ಕಾರ್ಯಾಕಾರಿ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಯಚೂರು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಮತ್ತಿತರ ಸಂಸ್ಥೆಗಳಲ್ಲಿ ಸಾರ್ಥಕ ಸೇವೆ. ಸದ್ಯ ಕರ್ನಾಟಕ ರಾಜ್ಯ ಹೈನುಗಾರಿಕಾ ಒಕ್ಕೂಟದ ನಿರ್ದೇಶಕರು ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಮೇಶ್ ವೈದ್ಯ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮುಂತಾದ ಪ್ರಶಸ್ತಿಗಳಿಂದ ಭೂಷಿತರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ. ಮಲ್ಲಿಕಾರ್ಜುನಯ್ಯ

ಪತ್ರಿಕೋದ್ಯಮದ ಹಲವು ಸ್ತರಗಳಲ್ಲಿ ದಕ್ಷತೆ ಮೆರೆದವರು ಬಿ.ವಿ.ಮಲ್ಲಿಕಾರ್ಜುನಯ್ಯ. ಐದು ದಶಕಗಳ ಸುದೀರ್ಘ ಸೇವೆಯ ಪತ್ರಕರ್ತರು, ಪತ್ರಿಕಾ ಸಂಘಟನೆಗಳಲ್ಲೂ ಕ್ರಿಯಾಶೀಲರು.
ತುಮಕೂರು ಜಿಲ್ಲೆಯ ಬ್ರಹ್ಮಸಂದ್ರದವರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕನ್ನಡಪ್ರಭ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭ.ಉಪಸಂಪಾದಕ ಸ್ಥಾನದಿಂದ ಸಂಪಾದಕ ಹುದ್ದೆವರೆಗೆ ವಿವಿಧ ಸ್ಥಾನಗಳಲ್ಲಿ ಅಕ್ಷರಸೇವೆ. ಉದಯವಾಣಿಯಲ್ಲಿಯೂ ಆರು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ, ಸುವರ್ಣ ನ್ಯೂಸ್‌ನಲ್ಲಿ ಒಂದೂಕಾಲು ವರ್ಷ ವಾರ್ತಾ ಸಂಯೋಜಕರಾಗಿ ಸೇವೆ. ಬರವಣಿಗೆಯ ಜೊತೆಗೆ ಪತ್ರಿಕಾ ಸಂಘಟನೆಗಳಲ್ಲೂ ಪರಿಶ್ರಮ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇಂದ್ರ ಪತ್ರಿಕಾ ಮಾನ್ಯತಾ ಸಮಿತಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ರಾಜ್ಯ ಪತ್ರಿಕಾ ಅಕಾಡೆಮಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮುಂತಾದ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿ ದುಡಿದವರು.ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕಾಗಿ ವಿದೇಶಗಳ ಪ್ರವಾಸ ಕೈಗೊಂಡವರು.ಸದ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ಸೇವಾನಿರತರಾಗಿರುವ ಮಲ್ಲಿಕಾರ್ಜುನಯ್ಯ ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೂ ಭಾಜನರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕೆ. ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರು-ಎಂ.ಆರ್.ಜಿ ಗ್ರೂಪ್

ಹೋಟೆಲ್ ಉದ್ಯಮದಲ್ಲಿ ಅದ್ವಿತೀಯ ಸಾಧನೆ-ಯಶಸ್ಸು ಪಡೆದ ಉದ್ಯಮಿ ಕೆ. ಪ್ರಕಾಶ್‌ ಶೆಟ್ಟಿ, ಬಡವರಾಗಿ ಹುಟ್ಟಿದರೂ ಬಡವರಾಗಿಯೇ ಸಾಯಬೇಕಿಲ್ಲ ಎಂಬ ಮಾತನ್ನು ನಿಜವಾಗಿಸಿದ ಛಲವಂತರು.
ಪ್ರಕಾಶ್‌ ಶೆಟ್ಟಿ ಉಡುಪಿ ಜಿಲ್ಲೆಯವರು. ಸಾಮಾನ್ಯ ಕುಟುಂಬದ ಕುಡಿ.ಬಾಲ್ಯದ ಬಡತನ ಯಶಸ್ಸಿನ ಹಂಬಲ ಹುಟ್ಟುಹಾಕಿದ್ದು ಸಹಜವೇ. ಅತಿಥಿ ಸತ್ಕಾರದ ಕನಸು. ೧೯೯೩ರಲ್ಲಿ ಬಂಜಾರ ಹೋಟೆಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಕ್ಕೆ ಪ್ರವೇಶ. ಆನಂತರ ತಿರುಗಿ ನೋಡಿದ್ದೇ ಇಲ್ಲ. ದಶಕಗಳ ಅಂತರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಸೋಜಿಗ, ಶುದ್ದ ಸಾಹಸಯಾತ್ರೆ ಪ್ರತಿಷ್ಠಿತ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾಗಿರುವ ಪ್ರಕಾಶ್‌ ಶೆಟ್ಟಿ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿನಲ್ಲಿರುವ ಗೋಲ್ಡನ್ ಫಿಂಚ್ ಹೋಟೆಲ್, ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳು ಪ್ರಕಾಶ್‌ ಶೆಟ್ಟಿ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿವೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ, ನಾಲ್ಕು ಮತ್ತು ಐದನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಊಟ-ವಸತಿ ಒದಗಿಸಿದ ಹಿರಿಮೆ ಅವರದ್ದು ಬಡಮಕ್ಕಳ ಶಾಲಾ ಕಾಲೇಜು ವೆಚ್ಚ ಭರಿಸುವ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿರುವುದು ಅವರೊಳಗಿನ ಸಮಾಜಮುಖಿತ್ವದ ದ್ಯೋತಕವಾಗಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ನಾ.ಸೋಮೇಶ್ವರ

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕವೇ ಜನಪ್ರಿಯರಾಗಿರುವ ಸಾಧಕರು ನಾ. ಸೋಮೇಶ್ವರ, ವೈದ್ಯರು, ಲೇಖಕರು, ರಸಪ್ರಶ್ನೆ ತಜ್ಞರಾಗಿ ಅವರದ್ದು ನಾಡಿಗೆ ನಾಡೇ ಮೆಚ್ಚುವಂತಹ ಬಹುಶ್ರುತ ಸಾಧನೆ.
ಬೆಂಗಳೂರು ಮೂಲದವರಾದ ನಾ.ಸೋಮೇಶ್ವರ ಹುಟ್ಟಿದ್ದು ೧೯೫೫ರ ಮೇ ೧೪ ರಂದು. ನಾರಪ್ಪ ಮತ್ತು ಅಂಜನಾ ದಂಪತಿ ಸುಪುತ್ರರು, ಅಧ್ಯಯನ, ಕ್ರಿಯಾಶೀಲತೆ ಮತ್ತು ಪ್ರತಿಭಾಸಂಪನ್ನತೆ ಹುಟ್ಟಿನಿಂದಲೇ ಬಂದ ಗುಣವಿಶೇಷ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನದಿ’ ಮಾಸಿಕ ಪತ್ರಿಕೆ ಹೊರತಂದ ಪ್ರತಿಭಾವಂತರು. ಬಿಎಸ್ಸಿ ಪದವಿ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದವರು.ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಫಾರ್ಮಸಿಟಿಕಲ್ ಕಂಪನಿಯ ಸಲಹೆಗಾರರೂ ಕೂಡ.ಬರವಣಿಗೆ-ಸಾಮಾಜಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ.ಅವರೊಳಗಿನ ಜ್ಞಾನಶೀಲತೆ ಬೆಳಕಿಗೆ ಬಂದಿದ್ದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಲೇ. ೨೦೦೪ರಲ್ಲಿ ಚಂದನ ವಾಹಿನಿಯಲ್ಲಿ ಆರಂಭವಾದ ಈ ಜ್ಞಾನ ಪ್ರಸರಣದ ರಸಪ್ರಶ್ನೆ ಕಾರ್ಯಕ್ರಮ ೧೫ ವರ್ಷಗಳಿಂದಲೂ ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದು ೩೨೦೦ಕ್ಕೂ ಹೆಚ್ಚು ಕಂತುಗಳನ್ನು ದಾಟಿ ಮುನ್ನಡೆದಿರುವುದು ವಿದ್ಯುನ್ಮಾನ ಮಾಧ್ಯಮದ ಇತಿಹಾಸದಲ್ಲೇ ಅದ್ವಿತೀಯ ದಾಖಲೆ. ಲೇಖಕರಾಗಿಯೂ ಹಲವು ಪುಸ್ತಕಗಳನ್ನು ಹೊರತಂದಿರುವ ನಾ. ಸೋಮೇಶ್ವರ ಅವರು ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ ಪ್ರಸಾದ್

ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಬಿಳಿಗೆರಿ ನಾರಾಯಣ ಭಟ್ ಮಹವೀರ್ ಪ್ರಸಾದ್ ಅವರ ಅನುಪಮ ಸಾಧಕರು. ಸೇವಾ ಮತ್ತು ವಿಶಿಷ್ಟ ಸೇವಾ ಪದಕ ವಿಜೇತರು.
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಬಿ.ಎನ್.ಬಿ.ಎಂ ಪ್ರಸಾದ್, ಮಡಿಕೇರಿ ತಾಲ್ಲೂಕಿನ ಬಿಳಿಗರಿ ಹುಟ್ಟೂರು.ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಪುಣೆಯಲ್ಲಿ ಸ್ನಾತಕೋತ್ತರ ಪದವಿ, ಹಲವು ಡಿಪ್ಲೋಮಾಗಳನ್ನು ಪಡೆದವರು. ಆನಂತರ ಭಾರತೀಯ ಭೂಸೇನೆಗೆ ಸೇರ್ಪಡೆ. ಭೂಸೇನೆಯ ಆಸ್ಪತ್ರೆ ಸೇವೆಗಳ ಪ್ರಧಾನ ನಿರ್ದೇಶಕರು, ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾಗಿ ಅನನ್ಯ ಸೇವೆ, ಸೇನಾ ವೈದ್ಯರಿಗೆ ಸೂಚನಾ ಕೋರ್ಸ್‌ಗಳನ್ನು ಕೈಗೊಂಡವರು. ಮಾನವೀಯ ಸೇವೆಗೆ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾದ ಶಸ್ತ್ರಚಿಕಿತ್ಸಕರು. ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿಯನ್ನೂ ಪಡೆದವರಾದ ಬಿ.ಎನ್.ಬಿ.ಎಂ ಪ್ರಸಾದ್ ಅವರು ಲೆಫ್ಟಿನೆಂಟ್ ಜನರಲ್ ಆಗಿಯೂ ಸೇವೆಗೈದವರು.ರಾಷ್ಟ್ರಪತಿಗಳ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾದ ಬಿ.ಎನ್.ಬಿ.ಎಂ ಪ್ರಸಾದ್ ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ ವೈದ್ಯಶಿರೋಮಣಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು

ಆನ್ನೋದ್ಧಾರದ ಜೊತೆಗೆ ಲೋಕೋದ್ಧಾರವನ್ನು ಕೈಗೊಂಡ ಸಂತಪರಂಪರೆಯನ್ನು ಬೆಳಗಿದ ಪುಣ್ಯಪುರುಷರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು.ವಚನ ಸಾಹಿತ್ಯದ ಪ್ರಚಾರದಲ್ಲಿ ಮಹತ್ವದ ಕಾಣೆಯಿತ್ತವರು.
ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠಾಧೀಶರಾದ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿಯೇ ಬದುಕು ಮೀಸಲಿಟ್ಟಿರುವವರು. ೧೯೬೩ರ ಜುಲೈ ಒಂದರಂದು ಜನಿಸಿದ ಶ್ರೀಗಳು ಶಿಶುವಿದ್ದಾಗಲೇ ಶಿವಸಂಕಲ್ಪದಂತೆ ಹಾರಕೂಡ ಸಂಸ್ಥಾನಮಠದ ಭಾವೀ ಪೀಠಾಧಿಪತಿಯೆಂದು ಘೋಷಿಸಲ್ಪಟ್ಟವರು ಕಲ್ಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತದ ಪದವೀಧರರು ಶ್ರೀಮಠದ ಪೀಠಾಧಿಪತಿಯಾದ ಮೇಲೆ ಕೈಗೊಂಡ ಕಾರ್ಯಗಳೆಲ್ಲವೂ ಮಹತ್ತರವಾದುದೇ. ಶ್ರೀ ಚೆನ್ನರೇಣುಕ ಬಸವ ರಾಜ್ಯ ಮಟ್ಟದ ಪ್ರಶಸ್ತಿ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠರ ಗುರುತಿಸಲೆಂದೇ ಚನ್ನಶ್ರೀ ಪ್ರಶಸ್ತಿಗಳ ಸ್ಥಾಪನೆಯ ಮೈಲುಗಲ್ಲು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತು ಬೃಹತ್ ಹತ್ತು ಬೃಹತ್ ಸಂಪುಟಗಳ ಪ್ರಕಟಣಾ ಕಾರ್ಯ ಬಹುಕಾಲದವರೆಗೂ ನೆನಪಿನಲ್ಲುಳಿಯುವಂತಹುದು. ಶಿಕ್ಷಣ, ಧರ್ಮ, ಚಿಂತನೆ, ಪ್ರವಚನ, ಸಂಗೀತ, ಸಾಹಿತ್ಯ, ಕಲೆ ಹೀಗೆ ಹತ್ತಾರು ಸಾಂಸ್ಕೃತಿಕ ಕ್ಷೇತ್ರಗಳಿಗೆ ಶ್ರೀಗಳು ಸಲ್ಲಿಸಿದ ಸೇವೆ ಅಪಾರ. ಗುಲ್ಬರ್ಗಾ ವಿ.ವಿ ಯ ಗೌರವ ಡಾಕ್ಟರೇಟ್, ಶಿವಾಚಾರ್ಯರತ್ನ, ಧರ್ಮರತ್ನ ಮತ್ತಿತರ ಗೌರವಗಳು ಶ್ರೀಗಳ ನಿಜಸೇವೆಗೆ ಸಂದ ಮಹಾಗೌರವವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್.ಟಿ. ಶಾಂತಗಂಗಾಧರ

ಸಮಾಜಸೇವೆಯಲ್ಲೇ ದಿವ್ಯಾನುಭೂತಿ ಅನುಭವಿಸಿದ ವಿರಳ ಸೇವಾನಿರತರಲ್ಲಿ ಶಾಂತಗಂಗಾಧರ್ ಸಹ ಒಬ್ಬರು. ಸಾಹಿತ್ಯ-ಸಂಸ್ಕೃತಿ-ಸಮಾಜಸೇವೆ-ಕನ್ನಡ ಸೇವೆ. ಹೀಗೆ ಬಹುರಂಗದಲ್ಲಿ ಬಹುಶ್ರುತ ಸಾಧನೆ ಅವರದ್ದು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳುವಿನಲ್ಲಿ ಜನಿಸಿದ ಶಾಂತ ಗಂಗಾಧರ ವಿದ್ಯಾರ್ಥಿ ದೆಸೆಯಲ್ಲೇ ಚರ್ಚಾ ಸ್ಪರ್ಧೆ-ಪ್ರಬಂಧ ಸ್ಪರ್ಧೆಗಳಲ್ಲಿ ಪಾರಿತೋಷಕಗಳನ್ನು ಗೆದ್ದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.ಸಿಂಡಿಕೇಟ್ ಬ್ಯಾಂಕ್ ಶಿರಾಳಕೊಪ್ಪ ಶಾಖೆಯಲ್ಲಿ ನೌಕರಿಗೆ ಸೇರ್ಪಡೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದಲ್ಲೇ ವ್ಯವಹರಿಸಿದ ದಾಖಲೆ. ಬ್ಯಾಂಕಿಂಗ್ ಕನ್ನಡ ಶಬ್ದಕೋಶದಲ್ಲಿ ಕೊಡುಗೆಯಿತ್ತವರು. ಹವ್ಯಾಸಿ ರಂಗಕಲಾವಿದನಾಗಿ ಸೈ ಎನಿಸಿಕೊಂಡವರು. ಧಾರಾವಾಹಿಯಲ್ಲೂ ನಟಿಸಿ ಹಿರಿಮೆ ಮೆರೆದವರು.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿದ್ದ ಶಾಂತಗಂಗಾಧರ ಶಿಕಾರಿಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ. ಕವನ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟ. ಸಾಹಿತ್ಯ-ಸಾಂಸ್ಕೃತಿಕ ಮತ್ತು ಸಮಾಜಸೇವಾ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ಕ್ರಿಯಾಶೀಲರಾಗಿರುವ ಶಾಂತಗಂಗಾಧರ್ ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೂ ಭಾಜನರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ವಿಜಯ ಸಂಕೇಶ್ವರ

ಉದ್ಯಮ ರಂಗದಲ್ಲಿ ಅದ್ವಿತೀಯ ಸಾಧನೆ ಮೂಲಕ ಅಚ್ಚಳಿಯದ ಛಾಪು ಮೂಡಿಸಿದವರು ವಿಜಯ ಸಂಕೇಶ್ವರ. ಪ್ರತಿಷ್ಠಿತ ವಿಆರ್‌ ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಯಶಸ್ವಿ ಉದ್ಯಮಿ.
ಉತ್ತರಕರ್ನಾಟಕದ ಗದಗ ಜಿಲ್ಲೆಯ ಸಂಕೇಶ್ವರ ವಿಜಯ ಸಂಕೇಶ್ವರರ ಹುಟ್ಟೂರು. ೧೯೫೦ರ ಆಗಸ್ಟ್ ೨ರಂದು ಜನನ, ಗದಗಿನ ಆದರ್ಶ ಶಿಕ್ಷಣ ಸಮಿತಿಯಲ್ಲಿ ಅಕ್ಷರಾಭ್ಯಾಸ, ವಾಣಿಜ್ಯ ಪದವೀಧರರು. ಬಾಲ್ಯದಿಂದಲೂ ವಾಣಿಜ್ಯೋದಮದಲ್ಲಿ ವಿಶೇಷ ಆಸಕ್ತಿ. ೧೯೭೬ರಲ್ಲಿ ಗದಗಿನಲ್ಲಿ ಏಕೈಕ ಟ್ರಕ್‌ನೊಂದಿಗೆ ವಿಆರ್‌ಲ್‌ ಗ್ರೂಪ್ ಸ್ಥಾಪನೆ. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಕಾರ್ಯಕ್ಷೇತ್ರ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗೆ ವಿಸ್ತರಣೆ.ಕೆಲವೇ ದಶಕಗಳಲ್ಲಿ ಪಾರಮ್ಯ ಮೆರೆಯುವಿಕೆ. ಸರಕು ಸಾಗಾಣಿಕೆ, ಪಾರ್ಸಲ್ ಸಾಗಾಣಿಕೆ ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯ ಸಂಪಾದನೆ, ಗಿನ್ನಿಸ್ ಪುಸ್ತಕದಲ್ಲಿ ನವೀನ ದಾಖಲೆ ಸ್ಥಾಪನೆ. ದೇಶಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವುದು ಮಹತ್ಸಾಧನೆ. ಶಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮಿಯೂ ಸಹ. ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಯನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಹೆಗ್ಗಳಿಕೆ. ಇದೀಗ ದಿಗ್ವಿಜಯ ಸುದ್ದಿವಾಹಿನಿಯೂ ಚಾಲ್ತಿಯಲ್ಲಿದ್ದು ಉದ್ಯಮದ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇರುವುದು ನಾಡಿಗೆ ಹೆಮ್ಮೆ ತರುವ ಸಂಗತಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಗುರುರಾಜ ಕರ್ಜಗಿ

ನಾಡಿನ ಹೆಸರಂತ ಶಿಕ್ಷಣ ತಜ್ಞರು, ಪ್ರಖರ ವಾಗಿ, ಉಪನ್ಯಾಸಕರು ಅಂಕಣಕಾರರು ಹಾಗೂ ಆಧ್ಯಾತ್ಮಿಕ ಚಿಂತಕರಾಗಿ ಡಾ.ಗುರುರಾಜ ಕರ್ಜಗಿ ಅವರದ್ದು ಬಹುಶ್ರುತ ಸಾಧನೆ.
ಧಾರವಾಡದವರಾದ ಡಾ. ಗುರುರಾಜ ಕರ್ಜಗಿ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ ಪಡೆದವರು. ಬೆಂಗಳೂರಿನ ವಿವಿಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ವಿವಿಎಸ್ ಶೈಕ್ಷಣಿಕ-ಆಡಳಿತ ಮಹಾವಿದ್ಯಾಲಯದ ನಿರ್ದೇಶಕರು, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ನಿರ್ದೇಶಕರು, ಅನೇಕ ವೈದ್ಯಕೀಯ ವಿ.ವಿ ಗಳ ಹಾಗೂ ಅಂತಾರಾಷ್ಟ್ರೀಯ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಅವರದ್ದು ಅನನ್ಯ ಶೈಕ್ಷಣಿಕ ಸೇವೆ. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ೮೫ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣದ ಕಾರಣೀಕರ್ತರು, ಕರ್ನಾಟಕ ಜ್ಞಾನ ಆಯೋಗದ ಸದಸ್ಯರೂ ಆಗಿರುವ ಕರ್ಜಗಿ ಅತ್ಯುತ್ತಮ ಬರಹಗಾರರೂ ಕೂಡ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಲೇಖನ, ೧೭೦೦ಕ್ಕೂ ಅಧಿಕ ಅಂಕಣ ಬರಹ, ಆಂಗ್ಲ ಮತ್ತು ಕನ್ನಡದಲ್ಲಿ ಕಥೆ, ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರು. ಕರುಣಾಳು ಬಾ ಬೆಳಕೆ ಅವರ ಮಹೋನ್ನತ ಜನಪ್ರಿಯ ಕೃತಿ. ಅವರ ವಿದ್ವತ್ತೂರ್ಣ ಮಾತು-ಬರಹಗಳು ಯುವಜನತೆಗೆ ಮಾದರಿ, ನಾಡಿಗೆ ಹೆಮ್ಮೆಯ ವಿಷಯ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಚಿದಾನಂದಗೌಡ

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದಗೌಡರು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಕಂಡ ಅಪ್ರತಿಮ ಪ್ರತಿಭೆ. ಶಿಕ್ಷಣ ತಜ್ಞ ಆಡಳಿತಗಾರ, ಲೇಖಕರಾಗಿ ಅವರದ್ದು ವಿದ್ವತ್ತೂರ್ಣ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಚೊಕ್ಕಾಡಿ ಚಿದಾನಂದಗೌಡರ ಹುಟ್ಟೂರು. ಬಾಲ್ಯದಲ್ಲೇ ಪ್ರಖರ ಬುದ್ಧಿವಂತಿಕೆ. ಯುವಿಸಿಇಯಲ್ಲಿ ಇಂಜಿನಿಯರಿಂಗ್, ಬರೋಡಾದಲ್ಲಿ ಸ್ನಾತಕೋತ್ತರ ಪದವಿ, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌ ಡಿ ಪಡೆದವರು. ಅಮೇರಿಕಾದ ನಾಸಾ, ಫ್ರಾನ್ಸ್‌ನ ಇನಿಯಾದ ಫೆಲೋಶಿಪ್ ಪುರಸ್ಕೃತರು. ಉಪನ್ಯಾಸಕರಾಗಿ ಆರಂಭವಾದ ವೃತ್ತಿ ಬದುಕು ಪ್ರಾಧ್ಯಾಪಕ, ಪ್ರಾಂಶುಪಾಲಗಿರಿ ದಾಟಿ ಮೈಸೂರು ವಿವಿಯ ಕುಲಪತಿ ಸ್ಥಾನದವರೆಗೂ ವಿಸ್ತಾರಗೊಂಡಿದ್ದು ಚಿದಾನಂದಗೌಡರ ದೈತ್ಯ ಪ್ರತಿಭೆಯ ಪ್ರತೀಕ. ಹಲವು ವಿವಿಗಳ ಶೈಕ್ಷಣಿಕ- ಆಡಳಿತಾತ್ಮಕ ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳ ನಿರ್ವಹಣೆ-ಮಾರ್ಗದರ್ಶನ. ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಮಂಡನೆ, ಹತ್ತಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ, ಪ್ರಪಂಚದ ಉದ್ದಗಲಕ್ಕೂ ಸಂಚಾರ ಚಿದಾನಂದಗೌಡರ ಜ್ಞಾನದ ಆಳಕ್ಕೆ ಸಾಕ್ಷಿ. ಪುಟಾಣಿಗಳ ವಿಜ್ಞಾನ ಪದ್ಯಗಳು, ವಿಜ್ಞಾನ ವಚನಗಳು, ಪತ್ತೇದಾರಿ ಪದ್ಯಗಳು ಸೇರಿ ಹಲವು ಕೃತಿಗಳ ರಚಿಸಿರುವ ಚಿದಾನಂದಗೌಡರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೇಜಗೌ ಸಾಹಿತ್ಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಟಿ. ಶಿವಣ್ಣ

ಶಿಕ್ಷಣದ ಬಹು ಅಂಗಗಳಲ್ಲಿ ಮಾದರಿಯಾದ ಕಾರ್ಯಗಳನ್ನು ಕೈಗೊಂಡ ಶಿಕ್ಷಣ ತಜ್ಞರು ಪ್ರೊಟಿ. ಶಿವಣ್ಣ. ಅಧ್ಯಯನ, ಅಧ್ಯಾಪನ, ಸಮುದಾಯದ ಸೇವೆ ಮತ್ತು ಬರವಣಿಗೆಯಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದವರು.
ಸಕ್ಕರೆಯ ನಾಡಿನ ಗಟ್ಟಿ ಪ್ರತಿಭೆ ಪ್ರೊ.ಟಿ. ಶಿವಣ್ಣ. ಮದ್ದೂರು ಜನ್ಮಸ್ಥಳ. ೧೯೩೦ರ ಸೆಪ್ಟೆಂಬರ್ ೨ರಂದು ಜನಿಸಿದ ಶಿವಣ್ಣ ಅವರು ಬಿ.ಎ ಹಾನರ್ ಪದವೀಧರರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕ, ರೀಡರ್, ಪ್ರಾಚಾರ್ಯ ಮತ್ತು ಪ್ರಾಂಶುಪಾಲರಾಗಿ ಶೈಕ್ಷಣಿಕ ಸೇವೆ. ಎನ್‌ಸಿ ಅಧಿಕಾರಿಯಾಗಿ ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಪ್ರತಿಭಾವಂತರು. ಬೆಂಗಳೂರು ವಿ.ವಿ ಯ ಶೈಕ್ಷಣಿಕ ಮಂಡಳಿ, ಸೆನೆಟ್, ಸಿಂಡಿಕೇಟ್ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿಯೂ ಸೇವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮಾಜವಿಜ್ಞಾನ ಪುಸ್ತಕಗಳ ರಚನೆ, ರಂಗನಟನೆ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ, ವಿದೇಶ ಪ್ರವಾಸಗಳು ನೆಚ್ಚಿನ ಹವ್ಯಾಸ ಮಾತ್ರವಲ್ಲ ಅವರ ಬಹುಮುಖಿ ಆಸಕ್ತಿ-ಸಾಧನೆಗೆ ಸಾಕ್ಷಿ. ಆರು ದಶಕದಲ್ಲಿ ವಿದೇಶಗಳಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೊಂಡು ಭಾಷಣಕಾರರಾಗಿ ವಿದ್ವತ್ ಮೆರೆದ ಪ್ರೊಟಿ.ಶಿವಣ್ಣರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿಗಳು ಸಂದಿದ್ದು ೯೦ರ ಆಸುಪಾಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ಸಾಧಕರಿಗೆ ಅವರ ಬದುಕೇ ನೈಜ ಪ್ರೇರಣೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಸ್.ಆರ್. ಗುಂಜಾಳ

ಪ್ರಾಧ್ಯಾಪಕ, ಸಂಶೋಧಕ ಲೇಖಕ ಹಾಗೂ ಆಡಳಿತಗಾರರಾಗಿ ಡಾ.ಎಸ್‌.ಆರ್.ಗುಂಜಾಳ ಅವರದು ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ. ಹೊಸತಲೆಮಾರಿಗೆ ಮಾದರಿಯಾದಂತಹ ವ್ಯಕ್ತಿತ್ವ.
ಧಾರವಾಡ ಜಿಲ್ಲೆಯ ಕೋಳಿವಾಡದವರಾದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಹುಟ್ಟಿದ್ದು ೧೯೩೨ರ ಜೂನ್ ೨೫ರಂದು, ಅಕ್ಷರದಿಂದ ಅರಳಿದ ಪ್ರತಿಭೆ. ಸ್ನಾತಕೋತ್ತರ ಪದವಿ, ದೆಹಲಿ ವಿ.ವಿ ಯಿಂದ ಎಂ.ಲಿಟ್.ಎಸ್.ಸಿ, ಪಿಎಚ್‌ಡಿ ಪದವೀಧರರು, ಗ್ರಂಥಪಾಲ, ಡೆಪ್ಯೂಟಿ ಗ್ರಂಥಪಾಲ, ಪ್ರಾಧ್ಯಾಪಕ, ಮುಖ್ಯಸ್ಥರಾಗಿ ದುಡಿದವರು. ಅಧ್ಯಾಪನದ ಜೊತೆಗೆ ಸಂಶೋಧನೆ-ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳೂ ಸೇರಿದಂತೆ ೭೨ ಕೃತಿಗಳು, ೧೫೦ ಲೇಖನಗಳ ರಚನಕಾರರು.೨೫ ರಾಷ್ಟ್ರೀಯ-ಪ್ರಾಂತೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆ, ೨೦ ವಿ.ವಿ ಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗಾ ವಿ.ವಿ ಸಮಾಜವಿಜ್ಞಾನ ವಿಭಾಗದ ಡೀನ್ ಆಗಿ ಶೈಕ್ಷಣಿಕ ಸೇವೆ. ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಂದ ಭೂಷಿತರಾದ ಗುಂಜಾಳ್ ನಿಯತಕಾಲಿಕೆಗಳ ಸಂಪಾದಕರು, ಪಿಎಚ್‌ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯೂ ಸೇವೆಗೈದ ಸಾಧಕಮಣಿ.

Categories
ಕಿರುತೆರೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಜಯಕುಮಾರ ಕೊಡಗನೂರು

ವೃತ್ತಿ ರಂಗಭೂಮಿಯನ್ನೇ ಬದುಕಿನ ಕರ್ಮಭೂಮಿಯಾಗಿಸಿಕೊಂಡ ಅಭಿಜಾತ ಕಲಾವಿದ ಜಯಕುಮಾ‌ ಕೊಡಗನೂರು.ಕಿರುತೆರೆ-ಬೆಳ್ಳಿತೆರೆಯಲ್ಲೂ ಛಾಪೊತ್ತಿದ ಕಲಾಚೇತನ.
ದಾವಣಗೆರೆ ಜಿಲ್ಲೆಯ ಕೊಡಗನೂರು ಜಯಕುಮಾರ್ ಹುಟ್ಟೂರು. ಹತ್ತನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು. ಹಳ್ಳಿಗಾಡಿನ ನಾಟಕಗಳಲ್ಲಿ ನಟಿಸುತ್ತಿದ್ದವರಿಗೆ ತಿರುವು ಸಿಕ್ಕಿದ್ದು ಸದಾರಾಮೆ ನಾಟಕದ ಮೂಲಕ. ೭೦ರ ದಶಕದಿಂದ ಇವರಿಗೆ ಬಣ್ಣವೇ ಬದುಕು, ಪಾತ್ರವೇ ಜೀವ. ಗುಬ್ಬಿ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಸಂಗಮೇಶ್ವರ ನಾಟಕ ಸಂಘ, ಕೆ.ಬಿ.ಆರ್. ಡ್ರಾಮಾ ಕಂಪನಿ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ತರಹೇವಾರಿ ಪಾತ್ರ ನಿರ್ವಹಿಸಿ ರಂಗಪ್ರಿಯರ ಮನಗೆದ್ದವರು. ದೇವಿ ಮಹಾತ್ಮಯ ಮಹಿಷಾಸುರ, ರೇಣುಕಾದೇವಿ ಮಹಾತ್ಮಯ ಕಾರ್ತ್ಯವೀರಾರ್ಜುನ, ಮದಕರಿನಾಯಕ, ಪೊಲೀಸನ ಮಗಳಲ್ಲಿನ ಎಸ್ಪಿ ಚಂದ್ರಶೇಖರ್ ಜಯಕುಮಾರ್‌ಗೆ ಹೆಸರು ತಂದುಕೊಟ್ಟ ಪಾತ್ರಗಳು. ಕಿರುತೆರೆಯ ಸಂಕ್ರಾಂತಿ, ಮಹಾಮಾಯೆ, ಕೆಳದಿ ಚೆನ್ನಮ್ಮ, ಭಾಗೀರಥಿ ಸೇರಿ ಹತ್ತಾರು ಧಾರಾವಾಹಿಗಳು, ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಹಿರಿಮೆ.ಎಲ್ಲಾ ಬಗೆಯ ಪಾತ್ರಗಳಲ್ಲೂ ಸೈ ಎನಿಸಿಕೊಂಡ ಕಲಾನಿಪುಣ. ಐದು ದಶಕಗಳ ಸಾರ್ಥಕ ಕಲಾಸೇವೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿ, ಹತ್ತಾರು ಬಿರುದುಗಳಿಂದ ಭೂಷಿತರು.

Categories
ಚಲನಚಿತ್ರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶೈಲಶ್ರೀ

‘ಸಂಧ್ಯಾರಾಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಶೈಲಶ್ರೀ. ಬೆಳ್ಳಿತೆರೆಗೆ ಬರುವ ಮುನ್ನ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದವರು.
ಮನಸ್ಸಿದ್ದರೆ ಮಾರ್ಗ, ಬಂಗಾರದ ಹೂವು, ಜಾಣರ ಜಾಣ ಮುಂತಾದ ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಗಮನಸೆಳೆದಿದ್ದ ಶೈಲಶ್ರೀ ಅವರು ಆರ್.ಎನ್. ಸುದರ್ಶನ್ ನಾಯಕರಾಗಿದ್ದ ‘ನಗುವ ಹೂವು’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದ ನಟಿ, ಸುವರ್ಣಭೂಮಿ, ಬೋಕರ್ ಭೀಷ್ಮಾಚಾರಿ, ಕಾಡಿನರಹಸ್ಯ, ಮಕ್ಕಳೇ ಮನೆಗೆ ಮಾಣಿಕ್ಯ, ವಂಶಜ್ಯೋತಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶೈಲಶ್ರೀ ಅವರದ್ದು. ಮದರಾಸಿನಲ್ಲಿ ನೃತ್ಯಶಾಲೆ ನಡೆಸಿದ ಭರತನಾಟ್ಯ ಕಲಾವಿದೆ. ಪತಿ ಸುದರ್ಶನ್‌ ರೊಡಗೂಡಿ ನಾಟಕಗಳನ್ನು ಪ್ರದರ್ಶಿಸಿದ ಅಭಿನೇತ್ರಿ ಮಕ್ಕಳಿಗಾಗಿ ‘ಯೂತ್ ಪೀಸ್ ಷೋರ್ಸ್’ ತಂಡ ಕಟ್ಟಿ ಅಭಿನಯ ಕಲೆ ಧಾರೆಯೆರೆದ ಗುರು. ಮಹಿಳೆಯರಿಗಾಗಿ ಸಲಹಾಕೇಂದ್ರವನ್ನೂ ನಡೆಸಿದ ಸಮಾಜಮುಖಿ, ಕನ್ನಡ, ತಮಿಳು, ತೆಲುಗು, ಮಲೆಯಾಳ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ಪಂಚಭಾಷಾ ನಟಿ ಕಿರುತೆರೆಯಲ್ಲೂ ಚಿರಪರಿಚಿತರಾಗಿರುವ ಕಲಾವಿದೆ.

Categories
ಬಯಲಾಟ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವೈ. ಮಲ್ಲಪ್ಪ ಗವಾಯಿ

ಜಾನಪದ ದೊಡ್ಡಾಟದ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿ ಹಿರಿಮೆ ಮೆರೆದವರು ವೈ. ಮಲ್ಲಪ್ಪ ಗವಾಯಿ, ಗಾಯಕರು, ಪಕ್ಕವಾದ್ಯಗಾರರಾಗಿ ಅವರದ್ದು ಮಾದರಿ ಕಲಾಸೇವೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತಿಪ್ಪೆಗುಂಡಿಯವರ ಓಣಿಯಲ್ಲಿ ೧೯೫೫ರ ಜನವರಿ ಒಂದರಂದು ಜನಿಸಿದ ವೈ.ಮಲ್ಲಪ್ಪ ಗವಾಯಿ ಅವರಿಗೆ ಕಲೆ ಪರಂಪಾರಗತ. ತಂದೆ ರುದ್ರಪ್ಪ ಬಾಲ್ಯದಲ್ಲೇ ಬಯಲಾಟ ಕಲೆಯ ಮೋಹಿತರಾದ ಮಲ್ಲಪ್ಪ ಅದನ್ನೇ ಬದುಕಿನ ಬುತ್ತಿ, ಸಾಧನೆಯ ಪ್ರವೃತ್ತಿಯಾಗಿಸಿಕೊಂಡವರು. ಬಯಲಾಟದ ಕಲಾವಿದರಾಗಿ, ದೊಡ್ಡಾಟದ ಗಾಯಕರಾಗಿ ಅವರದ್ದು ಅನುಪಮ ಸೇವೆ. ಎರಡೂವರೆ ದಶಕಕ್ಕೂ ಮೀರಿದ ಅವಧಿಯಿಂದಲೂ ಬಯಲಾಟದ ಪ್ರದರ್ಶನವನ್ನು ನೀಡುತ್ತಾ ಆ ಕಲಾಪ್ರಕಾರದ ಏಳೆಗೆ ಶ್ರಮಿಸುತ್ತಿರುವ ಕಲಾವಿದರು. ಹಂಪಿ ಉತ್ಸವ, ಮೈಸೂರು ದಸರಾ, ಹೊಸಪೇಟೆಯ ಆಕಾಶವಾಣಿಯಲ್ಲಿ ಜಾನಪದ ಸಿರಿ, ದೊಡ್ಡಾಟದ ಹಾಡುಗಳು, ರಂಗಗೀತೆಗಳನ್ನು ಪ್ರಸ್ತುತಪಡಿಸುತ್ತಾ ಬಂದಿರುವುದು ಕಲಾಪಯಣದ ಹೆಗ್ಗುರುತು. ಹಾರೋನಿಯಂ, ತಬಲ ಮತ್ತು ಮೃದುಂಗ ನುಡಿಸುವಲ್ಲಿಯೂ ನಿಷ್ಣಾತರು. ಸೋಗಿಯ ಶ್ರೀ ವೀರೇಶ್ವರ ಜಾನಪದ ದೊಡ್ಡಾಟ ಸಂಘದ ಸದಸ್ಯ ಕಾರ್ಯದರ್ಶಿ, ಇದೀಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಪ್ಪ ಗವಾಯಿ ಬಯಲಾಟ ಕ್ಷೇತ್ರವನ್ನು ಸಂಪನ್ನಗೊಳಿಸಿದ ಕಲಾಚೇತನ.

Categories
ಯಕ್ಷಗಾನ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಧರ್ ಭಂಡಾರಿ ಪುತ್ತೂರು

ಯಕ್ಷಗಾನ ಕಲೆಯನ್ನೇ ಸಾಧನಾ ಪಥವಾಗಿಸಿಕೊಂಡ ಹಿರಿಯ ಕಲಾಚೇತನ ಡಾ. ಶ್ರೀಧರ್ ಭಂಡಾರಿ. ಯಕ್ಷಗಾನ ಕಲಾವಿದ, ಶಿಕ್ಷಕ, ಸಂಘಟಕ ಹಾಗೂ ಮೇಳದ ಮುಖ್ಯಸ್ಥರಾಗಿ ಮಹತ್ವಪೂರ್ಣ ಸೇವೆ.
ಯಕ್ಷಗಾನ ಕಲೆ ಶ್ರೀಧರ್ ಭಂಡಾರಿ ಅವರಿಗೆ ರಕ್ತಗತ. ತಂದೆ ಶೀನಪ್ಪ ಭಂಡಾರಿ ಯಕ್ಷಗಾನದ ದಂತಕಥೆ. ೧೯೪೫ರ ಅಕ್ಟೋಬರ್ ಒಂದರಂದು ಜನಿಸಿದ ಶ್ರೀಧರ್ ಭಂಡಾರಿ ೯ನೇ ವಯಸ್ಸಿಗೆ ತೆಂಕುತಿಟ್ಟಿನ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ. ಐದನೇ ತರಗತಿವರಗಷ್ಟೇ ವಿದ್ಯಾಭ್ಯಾಸ. ೧೧ರ ಹರೆಯದಿಂದಲೂ ಯಕ್ಷಗಾನವೇ ಬದುಕು-ಭಾವ. ಹೆಸರಾಂತ ಮೇಳಗಳಾದ ಶ್ರೀ ಬಳ್ಳಂಬೆಟ್ಟ ಮೇಲ, ಶ್ರೀ ಧರ್ಮಸ್ಥಳ ಮೇಳ, ಶ್ರೀ ಮಹಾಲಿಂಗೇಶ್ವರ ಮೇಳ, ಕಾಂತೇಶ್ವರ ಮೇಳಗಳಲ್ಲಿ ೬೫ ವರ್ಷಗಳ ಕಾಲ ನಿರಂತರ ಕಲಾಸೇವೆ. ವೃತ್ತಿ ಕಲಾವಿದರಾಗಿ, ಸಂಘಟಕರಾಗಿ ಅನನ್ಯ ದುಡಿಮೆ. ನೂರಾರು ಬಾರಿ ಭಾರತದ ಉದ್ದಗಲಕ್ಕೂ ಯಕ್ಷಗಾನ ಪ್ರದರ್ಶನ. ೬೨ರ ಇಳಿವಯಸ್ಸಿನಲ್ಲಿ ಮೂರು ನಿಮಿಷಗಳಲ್ಲಿ ೧೪೮ ಬಾರಿ ಗಿರಕಿಗಳನ್ನು ಹೊಡೆದು ದಾಖಲೆ ಸ್ಥಾಪಿಸಿರುವ ಅಪೂರ್ವ ಕಲಾವಿದ, ಯಕ್ಷಗಾನ ಮೇಳಗಳ ಯಶಸ್ವಿ ಆಯೋಜನೆ. ದೇಶ-ವಿದೇಶಗಳಲ್ಲಿ ಪ್ರದರ್ಶನ, ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಅಮೆರಿಕದ ಹೂಸ್ಟನ್ ವಿ.ವಿ ಯಿಂದ ಗೌರವ ಡಾಕ್ಟರೇಟ್ ಸೇರಿ ೬೦೦ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾದ ಅಭಿಜಾತ.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಖುಷಿ

ಯೋಗದಿಂದ ಸುಯೋಗ ಎಂಬ ಲೋಕನುಡಿಯನ್ನು ನಿಜವಾಗಿಸಿರುವ ಕುಮಾರಿ ಖುಷಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಅತ್ಯುತ್ತಮ ಯೋಗಪಟು.
ಮೈಸೂರಿನ ವಿಜಯವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಖುಷಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತಹ ಪ್ರತಿಭೆ. ಉಸಿರಾಟದ ತೊಂದರೆ ನಿವಾರಣೆಗೆಂದು ಆರಂಭಿಸಿದ ಯೋಗವೇ ಸಾಧನೆಯ ಮಾರ್ಗವಾಗಿದ್ದು ವಿಶೇಷ, ಮೈಸೂರು ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ.ಪಿ.ಎನ್. ಗಣೇಶ್‌ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದ ಖುಷಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯದ ಕೀರ್ತಿ ಬೆಳಗಿದವರು. ನಿರಾಳಂಬ ಪೂರ್ಣಚಕ್ರಾಸನವನ್ನು ನಿಮಿಷಕ್ಕೆ ಹದಿನಾಲ್ಕು ಬಾರಿ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಸಾಧಕಿ. ಆರು ಬಾರಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಪದಕ ಗೆದ್ದ ಯೋಗಪಟು. ಕರ್ನಾಟಕ ಕಲಾಶ್ರೀ, ಅಸಾಧಾರಣ ಪ್ರತಿಭೆ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಭೂಷಿತೆ, ಯೋಗಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಂಡು ದೇಶದ ಉತ್ತಮ ಯೋಗಶಿಕ್ಷಕಿಯಾಗುವ ಕನಸೊತ್ತಿರುವ ಈಕೆ ಆ ಗುರಿ ಮುಟ್ಟುವುದು ನಿಶ್ಚಿತವೆಂಬ ಭರವಸೆ ಮೂಡಿಸಿರುವ ಪ್ರತಿಭಾಶೀಲೆ.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವನಿತಕ್ಕ

ಭಾರತೀಯ ಸನಾತನ ಯೋಗ ಪದ್ಧತಿಯನ್ನು ಹೊಸ ತಲೆಮಾರಿಗೆ ಪರಿಚಯಿಸಿ ಪ್ರಚುರಪಡಿಸಿದ ಹಿರಿಮೆಯ ಯೋಗಗುರು ವನಿತಕ್ಕ ನಾಲ್ಕೂವರೆ ದಶಕದಿಂದಲೂ ಯೋಗಶಿಕ್ಷಣದಲ್ಲಿ ನಿರತ ಸಾಧಕಿ.
ಶಿವಮೊಗ್ಗ ಜಿಲ್ಲೆ ಹೊಸನಗರ ವನಿತಾ ಅವರ ಹುಟ್ಟೂರು. ಓದು-ಸನಾತನ ಪರಂಪರೆಯ ಅಧ್ಯಯನ ಮತ್ತು ಯೋಗ ಬಾಲ್ಯದಲ್ಲೇ ಮನ ಆವರಿಸಿಕೊಂಡ ಆಸಕ್ತಿಯ ಕ್ಷೇತ್ರಗಳು. ವಾಣಿಜ್ಯ ಪದವೀಧರರು. ಚರಿತ್ರೆ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಿಶು ಶಿಕ್ಷಣ ತರಬೇತಿ ಮತ್ತು ಮಕ್ಕಳ ಮನಃಶಾಸ್ತ್ರವನ್ನು ಅಧ್ಯಯನಿಸಿರುವ ವನಿತಾ ಹರೆಯದಲ್ಲೇ ಸಮಾಜಸೇವೆಗೆ ಬದುಕು ಮುಡುಪಿಟ್ಟವರು. ಯೋಗದ ತುಡಿತದಿಂದ ವ್ಯಯಕ್ತಿಕ ಬದುಕಿನ ವ್ಯಾಮೋಹ ತೊರೆದ ವನಿತಕ್ಕ ರಾಘವೇಂದ್ರ ಸ್ವಾಮಿ ಮಲ್ಲಾಡಿಹಳ್ಳಿ, ಅಜಿತ್‌ಕುಮಾರ್, ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಯೋಗ ಶಿಕ್ಷಣ ಕಲಿತವರು. ಬೆಂಗಳೂರಿನ ಗಿರಿನಗರದಲ್ಲಿ ಯೋಗಶ್ರೀ ಸಂಸ್ಥೆ ಸ್ಥಾಪನೆ. ಹೊಸ ಪೀಳಿಗೆಗೆ ಯೋಗಶಿಕ್ಷಣ, ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ಪಂದನೆಯನ್ನೇ ಸಾಧನಮಾರ್ಗವಾಗಿಸಿಕೊಂಡು ೪೫ ವರ್ಷಗಳಿಂದಲೂ ಸೇವಾನಿರತರು. ಶಿಷ್ಯರು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಚಿರಪರಿಚಿತರಾಗಿರುವ ವನಿತಾ ಅವರು ಬದುಕು-ಭಾವವೆಲ್ಲವೂ ಯೋಗ ಶಿಕ್ಷಣಕ್ಕೆ ಅಂದಿಗೂ
ಇಂದಿಗೂ ಎಂದೆಂದಿಗೂ ಮೀಸಲು,

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನಂದಿತ ನಾಗನಗೌಡ‌

ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಬೆಳಗಿದ ಹೆಮ್ಮೆಯ ಪರ್ವತಾರೋಹಿ ನಂದಿತ ನಾಗನಗೌಡರ್‌, ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಏಕೈಕ ಕನ್ನಡತಿ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಯಾದ ನಂದಿತಾ ನಾಗನಗೌಡರ್ ಅವರದ್ದು ಬಾಲ್ಯದಿಂದಲೂ ಸಾಹಸ ಪ್ರವೃತ್ತಿ. ಓದಿದ್ದು ಎಂಬಿಎ. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಪರ್ವತಾರೋಹಿ, ಅತಿ ಎತ್ತರದ ಹಿಮಾಲಯ ಪರ್ವತ ಏರುವ ಮೂಲಕ ಪರ್ವತಾರೋಹಣದ ಸಾಹಸ ಆರಂಭಿಸಿದ ನಂದಿತ ಆನಂತರ ಏರಿದ ಪರ್ವತಗಳು ಸಾಕಷ್ಟು. ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಕಾರ್ಸ್‌ಟೆನ್ಸ್ ಪಿರಮಿಡ್ ಏರುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ೧೭,೦೦೦ ಅಡಿ ಎತ್ತರದ ಕಡಿದಾದ ಬಂಡೆಗಳಿಂದ ಕೂಡಿರುವ ಈ ಪರ್ವತವನ್ನು ಏರಿದ ಮೊದಲ ಮಹಿಳೆಯೆಂಬುದು ನಾಡೇ ಹೆಮ್ಮೆ ಪಡುವ ವಿಷಯ ಇದಲ್ಲದೆ, ಯುರೋಪ್‌ನ ಅತಿ ಎತ್ತರದ ೧೮,೬೦೦ ಅಡಿ ಎತ್ತರದ ಎಲಬಸ್ ಪರ್ವತವನ್ನೂ ಏರಿದ ಮೊದಲ ಭಾರತೀಯ ಮಹಿಳೆ. ಇದಲ್ಲದೆ, ಆಫ್ರಿಕಾದ ಅತಿ ಎತ್ತರದ ಕಿಲಿಮಾಂಜರೋ ಪರ್ವತವನ್ನೂ ಏರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಕಡಿದಾದ, ಅತ್ಯಂತ ಅಪಾಯಕರವಾದ ಪರ್ವತಗಳನ್ನು ಏರುತ್ತಿರುವ ನಂದಿತ ನಾಗನಗೌಡ‌ ಅವರು ಭವಿಷ್ಯದಲ್ಲೂ ಇನ್ನೂ ಎತ್ತರೆತ್ತರದ ಪರ್ವತವನ್ನು ಏರುವ ಗುರಿ ಹೊಂದಿದ್ದಾರೆ. ಸ್ತ್ರೀ ಧೀಶಕ್ತಿಯ ದ್ಯೋತಕವಾಗಿರುವ ನಂದಿತ ಅವರ ಸಾಧನೆ-ಸಾಹಸ ಇಡೀ ನಾರಿ ಕುಲಕ್ಕೇ ಮಾದರಿಯಾಗಿರುವುದಂತೂ ಹೌದು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಚೆನ್ನಂಡ ಎ ಕುಟ್ಟಪ್ಪ

ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ಅತ್ಯುತ್ತಮ ಬ್ಯಾಕ್ಸಿಂಗ್ ಪಟು. ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಕೋಚ್.
ಮೈಸೂರು ಮೂಲದವರಾದ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ೧೯೭೯ರ ಮಾರ್ಚ್ ೫ರಂದು ಜನಿಸಿದವರು.ಬಿ.ಎ ಪದವೀಧರರು. ಬಾಲ್ಯದಿಂದಲೂ ಬೆನ್ನತ್ತಿದ್ದ ಕ್ರೀಡಾಸಕ್ತಿಯನ್ನೇ ಸಾಧನೆಯ ದಾರಿದೀಪ ಮಾಡಿಕೊಂಡವರು. ಬ್ಯಾಕ್ಸಿಂಗ್ ಅಂದರೆ ಪಂಚಪ್ರಾಣ. ಬ್ಯಾಕ್ಸಿಂಗ್‌ನಲ್ಲಿ ಎನ್‌ಐಎಸ್ ಡಿಪ್ಲೋಮಾ, ರೋಟಿಕ್‌ನಲ್ಲಿ ಎಐಬಿಎ ಸ್ಟಾರ್ ೨ ಕೋಚಿಂಗ್‌ ಹಾಗೂ ಉಚ್ಚೇಕಿಸ್ತಾನ್‌ನಲ್ಲಿ ಎಐಬಿಎ ಕುಟಮನ್ ಕೋರ್ಸ್‌ಗಳನ್ನು ಪೂರೈಸಿದವರು.ಆನಂತರ ಭಾರತೀಯ ಸೇನೆಗೆ ಸೇರ್ಪಡೆಯಾದ ಕುಟ್ಟಪ್ಪ ವೃತ್ತಿಯಲ್ಲಿ ಸುಭೆದಾರ್, ಪ್ರವೃತ್ತಿಯಲ್ಲಿ ಬ್ಯಾಕ್ಸಿಂಗ್ ಕೋಚ್. ರಾಷ್ಟ್ರಮಟ್ಟದ ೨೩ ಬ್ಯಾಕ್ಸಿಂಗ್‌ ಸ್ಪರ್ಧೆಗಳಲ್ಲಿ ೯ ಬಾರಿ ಚಿನ್ನದ ಪದಕ, ನಾಲ್ಕು ಬಾರಿ ರಜತ ಹಾಗೂ ಕಂಚಿನ ಪದಕ ಪಡೆದಿರುವ ಕ್ರೀಡಾಪ್ರತಿಭೆ, ಜರ್ಮನಿ, ಬ್ಯಾಂಕಾಕ್, ಕ್ಯೂಬಾ, ಬ್ರಿಜಿಲ್, ಜೆಕ್ ಗಣರಾಜ್ಯ, ಥ್ಯಾಯ್ಲೆಂಡ್, ಐಲ್ಯಾಂಡ್, ಚೀನಾ, ಇಂಗ್ಲೆಂಡ್, ಸ್ಕಾಟ್ಯಾಂಡ್ ಮುಂತಾದೆಡೆ ಜರುಗಿದ ಸುಮಾರು ೪೦ಕ್ಕೂ ಹೆಚ್ಚು ಬ್ಯಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತೀಯ ಬ್ಯಾಕ್ಸಿಂಗ್ ತಂಡದ ಕೋಚ್ ಆಗಿ ತಂಡದ ಯಶಸ್ಸಿಗೆ ದುಡಿದು ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಹಿರಿಮೆಯ ಕುಟ್ಟಪ್ಪ ನಿಜಕ್ಕೂ ಮಾದರಿ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವನಾಥ್ ಭಾಸ್ಕರ್ ಗಾಣಿಗ

ದೇಶದ ಕ್ರೀಡಾರಂಗಕ್ಕೆ ಕರ್ನಾಟಕದ ಶ್ರೇಷ್ಠ ಕೊಡುಗೆಗಳಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ ಒಬ್ಬರು. ಪವರ್ ಲಿಫ್ಟಿಂಗ್‌ನಲ್ಲಿ ಪದಕಗಳ ಭೇಟೆಯಾಡುತ್ತಿರುವ ಚಿನ್ನದ ಹುಡುಗ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ಹುಟ್ಟೂರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ತಾಲೂಕಿನ ನೆಂಪುವಿನಲ್ಲಿ ಪಿಯು ಶಿಕ್ಷಣ ಪೂರೈಸಿದ ವಿಶ್ವನಾಥ್ ಬಿಸಿಎ ಪದವೀಧರರು. ಸಾಪ್ಟವೇರ್ ಕಂಪನಿಯೊಂದರ ಉದ್ಯೋಗಿ ವಿಶ್ವನಾಥ್ ಅವರಲ್ಲಿ ಕ್ರೀಡಾಸಕ್ತಿ ಮೊಳಕೆಯೊಡೆದದ್ದು ತೀರಾ ಆಕಸ್ಮಿಕ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದವಗೆ ಭಾರ ಎತ್ತುವ ಸ್ಪರ್ಧೆಯತ್ತ ಚಿತ್ತ ಹರಿದದ್ದು ಯೋಗವೇ ಸರಿ. ಆನಂತರದ್ದು ಕಠಿಣ ಪರಿಶ್ರಮದ ಕ್ರೀಡಾಯಾನ. ಕುಂದಾಪುರದವರೇ ಆದ ಪ್ರಶಾಂತ್ ಶೇರಿಗಾರ್‌ರಿಂದ ಸ್ಪೂರ್ತಿ- ಮಾರ್ಗದರ್ಶನ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಮೊದಲನೇ ಏಷ್ಯನ್ ಪವರ್‌ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವುದರೊಂದಿಗೆ ಮುಂಚೂಣಿಗೆ, ಕೆಲವೇ ವರ್ಷಗಳ ಕ್ರೀಡಾ ಜೀವನದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ೬ ಚಿನ್ನ, ೪ ರಜತ, ೩ ಕಂಚಿನ ಪದಕಗಳು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ೧೭ ಚಿನ್ನ, ೫ ರಜತ ಹಾಗೂ ೩ ಕಂಚಿನ ಪದಕಗಳನ್ನು ಗೆದ್ದು ಮುನ್ನಡೆದಿರುವ ವಿಶ್ವನಾಥ್ ನಾಡಿನ ಅತ್ಯಂತ ಭರವಸೆಯ ಕ್ರೀಡಾಚೇತನ.

Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಮೋಹನ್ ಸಿತನೂ‌ರ್‌

ಕರ್ನಾಟಕದ ಚಿತ್ರಕಲಾ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು ಮೋಹನ್ ಹೆಚ್.ಸಿತನೂ‌. ಗ್ರಾಫಿಕ್ ಕಲೆಯ ನಿಷ್ಣಾತ ಕಲಾವಿದರು. ಕುಂಚದ ಸಖ್ಯದಿಂದ ಅರಳಿ ನಳನಳಿಸಿದ ಪ್ರತಿಭಾಶಾಲಿಗಳು.
ಗುಲ್ಬರ್ಗ ಜಿಲ್ಲೆಯಲ್ಲಿ ೧೯೫೫ರ ನವೆಂಬರ್ ೧೯ರಂದು ಜನಿಸಿದ ಮೋಹನ್ ಹೆಚ್.ಸಿತನೂ‌ ಕಲಾಶಿಕ್ಷಕರು. ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದಶಕಕ್ಕೂ ಹೆಚ್ಚು ಕಾಲ ಹೊಸ ತಲೆಮಾರಿಗೆ ಕುಂಚ ಕಲೆಯ ಕಲಿಸಿದವರು. ಗ್ರಾಫಿಕ್ ಕಲೆಯಲ್ಲಿ ವಿಶೇಷ ಅಧ್ಯಯನ ಮೋಹನ್ ಅವರ ಹೆಗ್ಗಳಿಕೆ. ರಾಜ್ಯ- ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ಪ್ರದರ್ಶನ, ಅಪಾರ ಮೆಚ್ಚುಗೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಅನುಪಮ ಸೇವೆ ಸಲ್ಲಿಸಿದವರು. ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ, ಭೂಪಾಲ್, ಜೈಪುರ ಹಾಗೂ ವಿದೇಶಿಯ ಕಲಾಗ್ಯಾಲರಿಯಲ್ಲಿ ಮೋಹನ್ ಅವರ ಕಲಾಕೃತಿಗಳು ಸಂಗ್ರಹವಾಗಿರುವುದು ವಿಶೇಷ ಸಾಧನೆ. ಕಲಾರಚನೆಯಲ್ಲಿ ಅನವರತ ನಿರತರು, ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಕಲಾಧ್ಯಾನಿ.

Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಯು. ರಮೇಶ್‌ರಾವ್‌

ಕರ್ನಾಟಕದ ಚಿತ್ರಕಲಾ ಪರಂಪರೆಯನ್ನು ಬೆಳಗಿದವರಲ್ಲಿ ಯು.ರಮೇಶ್‌ರಾವ್ ಪ್ರಮುಖರು. ವಿಶಿಷ್ಟ ಒಳನೋಟವುಳ್ಳ ಕಲಾಕೃತಿಗಳ ರಚನೆಯಲ್ಲಿ ಸಿದ್ಧಹಸ್ತರು.
೧೯೪೯ರಲ್ಲಿ ಉಡುಪಿಯಲ್ಲಿ ಜನಿಸಿದ ರಮೇಶ್‌ ರಾವ್ ಬಿ.ಎ ಪದವೀಧರರು. ಚಿತ್ರಕಲೆಯ ಬಗ್ಗೆ ತೀರದ ಮೋಹದಿಂದಾಗಿ ಕಲಾವಿದರಾಗಿ ರೂಪಗೊಂಡವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾಪ್ರದರ್ಶನದಲ್ಲಿ ೮ ಬಾರಿ ಆಯ್ಕೆಯಾದ ಹಿರಿಮೆ.ಮೈಸೂರ್ ಆರ್ಟಕೌನ್ಸಿಲ್ ಸಂಸ್ಥಾಪಕ ಸದಸ್ಯರು. ರಾಜ್ಯ, ರಾಷ್ಟ್ರ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ನೋಡುಗರ ಮನಗೆದ್ದ ಹೆಗ್ಗಳಿಕೆ. ಉಡುಪಿಯಲ್ಲಿ ಎರಡು ಬಾರಿ ಏಕವ್ಯಕ್ತಿ ಕಲಾಪ್ರದರ್ಶನ ಕರ್ನಾಟಕ ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಸಿಂಡಿಕೇಟ್ ಬ್ಯಾಂಕ್ ಹಾಗೂ ರಾಷ್ಟ್ರ-ಅಂತರಾಷ್ಟ್ರೀಯ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಸಾಧನೆಯ ಪ್ರತೀಕ. ಕಲಾವಿದ, ಕಲಾಶಿಕ್ಷಕ ಹಾಗೂ ಕಲಾಸಂಘಟಕರಾಗಿ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದ ರಮೇಶ್ ರಾವ್ ಕರ್ನಾಟಕ ಲಲಿತಕಲಾ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಗೌರವಗಳಿಗೆ ಭಾಜನರಾದ ಕಲಾಚೇತನ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಕೆ.ಜ್ಞಾನೇಶ್ವ‌ರ್‌

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಶಿಲ್ಪಕಲಾವಿದರಲ್ಲಿ ಕೆ.ಜ್ಞಾನೇಶ್ವರ್ ಅವರದ್ದು ಅಚ್ಚಳಿಯದ ಹೆಸರು. ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ತಮ್ಮದೇ ವೈಶಿಷ್ಟ್ಯದಿಂದ ಜನಜನಿತರು.
ಶಿಕಾರಿಪುರದ ಸುಪ್ರಸಿದ್ಧ ಚಿತ್ರಕಲಾವಿದರಾದ ತಿಪ್ಪಾಜಿ ವಂಶದ ಕುಡಿ ಕೆ.ಜ್ಞಾನೇಶ್ವರ್. ಶಿವಮೊಗ್ಗದಲ್ಲಿ ೧೯೪೬ರ ಆಗಸ್ಟ್ ೨೧ರಂದು ಜನಿಸಿದ ಜ್ಞಾನೇಶ್ವರ್ ಅವರಿಗೆ ಚಿತ್ರ, ಶಿಲ್ಪಕಲಾಸಕ್ತಿ ಹುಟ್ಟಿನಿಂದಲೇ ಬಂದ ಬಳುವಳಿ. ತಾತ ಶಿಕಾರಿಪುರದ ಪರಶುರಾಮಪ್ಪನವರೇ ಮೊದಲ ಗುರು. ಬಿಎಸ್‌ ಎಸ್ಸಿ ಪದವಿ ಪಡೆದರೂ ಕಲೆಯೇ ಕಾಯಕಕ್ಷೇತ್ರ ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ವಿದ್ಯಾಲಯದಲ್ಲಿ ಕಲಾಶಿಕ್ಷಣ. ೧೯೭೫ರಿಂದ ವೃತ್ತಿಪರ ಕಲಾವಿದರಾಗಿ ಕಲಾಜೀವನ, ಸಾಂಪ್ರದಾಯಿಕ, ಭಾವಶಿಲ್ಪ ಹಾಗೂ ದೇವಾಲಯ ವಾಸ್ತುಶಿಲ್ಪಗಳಲ್ಲಿ ಸಿದ್ಧಹಸ್ತರು. ಶಿವಮೊಗ್ಗ, ಕೊಯಮತ್ತೂರು, ಮಧುರೈ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಮಾತ್ರವಲ್ಲದೆ, ವಿದೇಶಗಳಲ್ಲೂ ಇವರ ಶಿಲ್ಪಕಲಾಕೃತಿಗಳು ನೆಲೆನಿಂತಿರುವುದು ಸಾಧನೆಯ ಕೈಗನ್ನಡಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯತ್ವ, ವಾರ್ಷಿಕ ಗೌರವ ಪ್ರಶಸ್ತಿಗಳಿಂದ ಭೂಷಿಸಲ್ಪಟ್ಟಿರುವ ಜ್ಞಾನೇಶ್ವರ್ ಅವರು ನಾಲ್ಕೂವರೆ ದಶಕದಿಂದ ಕಲಾಸೇವೆಯಲ್ಲಿ ನಿರತ ಶಿಲ್ಪಕಲಾಕೋವಿದರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ವಿ.ಎ. ದೇಶಪಾಂಡೆ

ಶಿಲ್ಪಕಲೆಯಲ್ಲಿ ವೈವಿಧ್ಯಮಯ ಸಾಧನೆಗೈದ ವಿಶಿಷ್ಠ ಪ್ರತಿಭೆ ವ್ಯಾಸಮೂರ್ತಿ ಅನಂತರಾವ್‌ ದೇಶಪಾಂಡೆ, ನಾಡಿನ ಪ್ರತಿಷ್ಠಿತ ಸ್ಮಾರಕಗಳ ನಿರ್ಮಾಣದಲ್ಲಿ ಕಲಾಕೌಶಲ್ಯ ಮೆರೆದ ಕಲಾವಿದರು.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ದೇಶಪಾಂಡೆ ಅವರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೧ರಂದು. ಶಿಲ್ಪಕಲೆಯಲ್ಲಿ ಡಿಪ್ಲೋಮಾ, ಮೆಟಲ್ ಕ್ಯಾಸ್ಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದವರು ಬರೋಡಾದ ಎಂ.ಎಸ್. ವಿವಿಯಿಂದ ಮೆರಿಟ್ ಸ್ಕಾಲರ್‌ಪ್ ಪಡೆದ ದೇಶಪಾಂಡೆ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಬದುಕು ಆರಂಭಿಸಿದವರು. ಕಾವಾದಲ್ಲಿ ಡೀನ್ ಆಗಿರುವ ದೇಶಪಾಂಡೆ ವಿಶಿಷ್ಟ ಕಲಾಕೃತಿಗಳ ರಚನೆಯಲ್ಲಿ ಪಳಗಿದವರು.ಮೂರು ಬಾರಿ ಏಕವ್ಯಕ್ತಿ ಪ್ರದರ್ಶನ, ಐದು ಬಾರಿ ಸಮೂಹ ಪ್ರದರ್ಶನ ಮೈಸೂರಿನ ಬಾಬುಜಗನ್ ಜೀವನ್ ರಾಂರ ೯.೫ ಅಡಿಯ ಕಂಚಿನ ಪ್ರತಿಮೆ, ಸರ್ವಜ್ಞ ರಾಜೇಂದ್ರಸ್ವಾಮಿ ಮುಂತಾದ ಹಲವು ಸ್ಮಾರಕಗಳನ್ನು ರೂಪಿಸಿದವರು. ರಾಜ್ಯ ಮಾತ್ರವಲ್ಲದೆ, ಸ್ವೀಡನ್, ಜರ್ಮನಿಯಲ್ಲೂ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಹೆಮ್ಮೆ ತರುವ ವಿಚಾರ. ೧೭ಕ್ಕೂ ಹೆಚ್ಚು ಕಲಾಶಿಬಿರಗಳಲ್ಲಿ ಕಲಾಕೃತಿಗಳ ರಚನೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಅಖಿಲ ಭಾರತ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್ ಸೊಸೈಟಿ, ಮೈಸೂರು ದಸರಾ ಕಲಾಪ್ರದರ್ಶನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಗುಜರಾತ್ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳಿಂದ ಭೂಷಿತರಾದ ಪ್ರತಿಭೆ.

Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕೆ.ಆರ್. ಹೊಸಳಯ್ಯ

ಜನಪದ ಕಲೆಯ ವಿಶಿಷ್ಟ ಪ್ರಕಾರವಾದ ವೀರಭದ್ರ ಕುಣಿತದ ಅತ್ಯುತ್ತಮ ಕಲಾವಿದರು ಕೆ.ಆರ್. ಹೊಸಳಯ್ಯ. ಐದೂವರೆ ದಶಕಗಳಿಂದಲೂ ಕಲಾಸೇವೆಯಲ್ಲಿ ನಿರತ ಕಲಾಧ್ಯಾನಿ.
ತುಮಕೂರು ಜಿಲ್ಲೆಯ ಜಾನಪದೀಯ ಕೊಡುಗೆ ಹೊಸಳಯ್ಯ, ಕುಣಿಗಲ್ ತಾಲ್ಲೂಕಿನ ಎಡೆಯೂರು ಹುಟ್ಟೂರು. ವೀರಭದ್ರ ಕುಣಿತ ವಂಶಪಾರಂಪರವಾಗಿ ಬಂದ ಕಲೆ. ಹತ್ತು ವರ್ಷದ ಬಾಲಕನಾಗಿರುವಾಗಲೇ ಕಲಾರಂಗಕ್ಕೆ ಪಾದಾರ್ಪಣೆ. ವಯಸ್ಸು-ಅನುಭವ ಮಾಗಿದಂತೆ ವೀರಭದ್ರ ಕುಣಿತದಲ್ಲಿ ಕಲಾನೈಪುಣ್ಯತೆ, ಕನ್ನಡ ಮತ್ತು ಸಂಸ್ಕೃತಿಯ ಹಲವು ಕಾರ್ಯಕ್ರಮಗಳು, ರಾಜ್ಯದ ಇತರೆಡೆ ಮಾತ್ರವಲ್ಲದೆ, ಚೆನೈ, ಅಂಡಮಾನ್ ಮತ್ತು ನಿಕೋಬಾರ್, ಕಲ್ಕತ್ತಾ, ದೆಹಲಿ, ತಂಜಾವೂರು, ಒರಿಸ್ಸಾ, ಪಂಜಾಬ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಕಲಾಪ್ರದರ್ಶನ, ಸಿಂಹದಮರಿ, ಸಿರಿಗಂಧ, ಕಲಾಸಿಪಾಳ್ಯ ಚಿತ್ರ, ಲಕ್ಷ್ಮೀಬಾರಮ್ಮ, ಹರಹರಮಹದೇವ ಮುಂತಾದ ಧಾರಾವಾಹಿಗಳಲ್ಲೂ ಕಲಾಪ್ರದರ್ಶನಗೈದ ಹಿರಿಮೆ, ಐವತ್ತೈದು ವರ್ಷಗಳಿಂದಲೂ ಬದುಕಿನ ನಿರ್ವಹಣೆ ಹಾಗೂ ಸಾಧನೆಗೆ ವೀರಭದ್ರ ಕುಣಿತವನ್ನೇ ನೆಚ್ಚಿ ತನ್ಮಯರಾಗಿ ಕಲಾಸೇವೆಗೈಯುತ್ತಿರುವ ಹೊಸಳಯ್ಯ ದೇಸೀ ಕಲೆಯ ವಿರಳ ಕಲಾಕುಸುಮ.

Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕೊಟ್ರೇಶ ಚನ್ನಬಸಪ್ಪ ಕೊಟ್ರಪ್ಪನವರ

ನಟ, ವಾದ್ಯಗಾರ, ಸಂಘಟಕರಾಗಿ ಜನಪದ ಹಾಗೂ ವೃತ್ತಿರಂಗಭೂಮಿಯಲ್ಲಿ ವಿಶಿಷ್ಟ ಸಾಧನೆಗೈದವರು ಕೊಟ್ರಪ್ಪ ಚನ್ನಬಸಪ್ಪ ಕೊಟ್ರಪ್ಪನವರ ಬಹುದಶಕಗಳ ಬಹುಮುಖಿ ಸಾಧನೆಯ ಕಲಾವಿದರು.

ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆ ಕೊಟ್ರಪ್ಪ, ಶಿಗ್ಗಾಂವ ತಾಲ್ಲೂಕಿನ ಹಿರೇಮಣಕಟ್ಟಿಯ ಬೆಳಗಲಿ ಹುಟ್ಟೂರು. ಬಾಲ್ಯದಿಂದಲೂ ಹಾಡು-ನಟನೆಯೆಂದರೆ ಪಂಚಪ್ರಾಣ. ಓದಿದ್ದು ೭ನೇ ತರಗತಿಯವರೆಗೆ ಮಾತ್ರ ಮುಂದಿನದ್ದೆಲ್ಲಾ ಕಲಾಶಿಕ್ಷಣ ಮತ್ತು ಕಲಾಸೇವೆಯೇ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ನಿರಂತರ ನಟನೆ ಜೊತೆಗೆ ಸಂಗೀತಗಾರನಾಗಿಯೂ ಸಾರ್ಥಕ ಸೇವೆ. ನಾಟಕದ ಹಾಡುಗಳಿಗೆ ಸಂಗೀತ ಸಂಯೋಜಿಸುವಲ್ಲಿಯೂ ಎತ್ತಿದಕೈ. ಕೆ.ಬಿ.ಆರ್‌. ಡ್ರಾಮಾ ಕಂಪನಿ, ಗುಡಿಗೇರಿಯ ಶ್ರೀ ಸಂಗಮೇಶ್ವರ ನಾಟ್ಯ ಸಂಘದಲ್ಲಿ ದಶಕಗಳ ಕಾಲ ತರಹೇವಾರಿ ಪಾತ್ರಗಳಲ್ಲಿ ನಟನೆ-ಸಂಗೀತವಾದ್ಯಗಾರನಾಗಿ ಸೇವೆ. ಕಲಾಶ್ರೀ ಡ್ರಾಮಾ ಸೀನರಿ ಸಂಸ್ಥೆ ಸ್ಥಾಪಿಸಿ ನಾಲ್ಕು ದಶಕಗಳಿಂದಲೂ ರಂಗಪರಿಕರಗಳನ್ನು ಉಚಿತವಾಗಿ ಒದಗಿಸಿದ ಹಿರಿಮೆ. ಕ್ಯಾಶಿಯೋ ವಾದನ ನುಡಿಸುವಿಕೆಗೆ ಅಪಾರ ಮೆಚ್ಚುಗೆ. ರಾಜ್ಯ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಕಲಾಪ್ರೌಢಿಮೆ ಮೆರೆದ ಖುಷಿ, ಧರ್ಮ ಎಲ್ಲಿದೆ, ಸೂಳೆ ಸವಾಲು ಮುಂತಾದ ನಾಟಕಗಳು, ರಂಗಗೀತೆಗಳು, ಭಾವ-ಭಕ್ತಿಗೀತೆಗಳ ರಚಿಸಿ ಸಂಗೀತ ಸಂಯೋಜಿಸಿದ ಕೊಟ್ರಪ್ಪ ಅವರ ಕಲಾಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು ನಿತ್ಯ ನೂತನವಾಗಿ ಮುಂದುವರೆದಿದೆ.

Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಭೀಮಸಿಂಗ್ ಸಕಾರಾಮ್ ರಾಥೋಡ್

ಕನ್ನಡ ಜನಪದ ಕ್ಷೇತ್ರವನ್ನು ಬೆಳಗಿದ ದೇಸೀ ಪ್ರತಿಭೆ ಭೀಮಸಿಂಗ್ ರಾಥೋಡ್, ಜಾನಪದ ಕ್ಷೇತ್ರಕ್ಕೆ ಜೀವ ಮುಡುಪಿಟ್ಟಿರುವ ಗ್ರಾಮೀಣ ಕಲಾವಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾಮುನಗರ ಭೀಮಸಿಂಗ್ ಅವರ ಹುಟ್ಟೂರು. ೧೯೫೬ರ ಏಪ್ರಿಲ್‌ ೭ರಂದು ಜನಿಸಿದ ಅವರಿಗೆ ಬಾಲ್ಯದಿಂದಲೂ ಜನಪದದತ್ತ ವಿಶೇಷ ಒಲವು. ಹಾಡು-ಭಜನೆಗಳೆಂದರೆ ಪಂಚಪ್ರಾಣ. ಜನಪದ ಗೀತೆ, ಭಜನಾ ಗೀತ ಗಾಯನ ಹಾಗೂ ನಾಟಕಗಳ ಅಭಿನಯ-ನಿರ್ದೇಶನ ನೆಚ್ಚಿನ ಹವ್ಯಾಸ. ಕಲೆಯ ಸೆಳತದಿಂದಾಗಿ ಯುವಕರಾಗಿದ್ದಾಗಲೇ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲಾರಂಗದಲ್ಲಿ ತೊಡಗಿಕೊಂಡವರು. ಸಾಕ್ಷರತಾ ಮತ್ತು ಜನಜಾಗೃತಿ ಗೀತೆಗಳ ಗಾಯನದಲ್ಲಿ ನಿಸ್ಸಿಮರು, ಹತ್ತಾರು ನಾಟಕಗಳಲ್ಲಿ ನಟನೆ, ನಿರ್ದೇಶನದಿಂದ ಹೆಸರುವಾಸಿಯಾಗಿರುವ ಭೀಮಸಿಂಗ್ ರಾಥೋಡ್ ಬಂಜಾರು ಭಜನೆ ಹಾಡುವುದರಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸುಪ್ರಸಿದ್ಧರು. ಕನ್ನಡ ಸಾಹಿತ್ಯ ಪರಿಷತ್ತು, ಬಂಜಾರ ಸಮಾಜ, ಕರ್ನಾಟಕ ಬರಹಗಾರರ ಸಂಘ ಮತ್ತಿತರ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಭೀಮಸಿಂಗ್ ಕಲಾಧ್ಯಾನದಲ್ಲೇ ಧನ್ಯತೆ ಕಾಣುವ ವಿರಳ ಕಲಾವಿದರು.

Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಹೊಸಬಸವಯ್ಯ ದುಂಡಯ್ಯ ಸಂಬಳದ

ಜನಪದ ಕಲೆಯನ್ನೇ ಸಾಧನೆಯ ಪಥವಾಗಿಸಿಕೊಂಡ ಅಪ್ಪಟ ದೇಸೀ ಪ್ರತಿಭೆ ಹೊಸಬಸವಯ್ಯ ದುಂಡಯ್ಯ ಸಂಬಳದ ಹೆಸರಾಂತ ಕರಡಿವಾದನದ ಕಲಾವಿದ. ಜನಪ್ರಿಯ ಶ್ರೀಕೃಷ್ಣ ಪಾತ್ರಧಾರಿ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಹೊಸಬಸವಯ್ಯ ಅವರ ಜನ್ಮಸ್ಥಳ. ಕಡುಬಡತನದ ಕುಟುಂಬ. ಅಕ್ಷರದ ಭಾಗ್ಯವಿಲ್ಲದ ದಿಕ್ಕೆಟ್ಟ ಬಾಳಿಗೆ ಆಸರೆಯಾಗಿದ್ದು ಕಲೆಯೇ, ಮನೆತನದ ಕುಲಕಲೆಯಾದ ಕರಡಿವಾದನದಲ್ಲಿ ನಿಷ್ಣಾತತೆ.ಬೇಸಾಯ, ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅರ್ಚಕ ವೃತ್ತಿಯೇ ಬುತ್ತಿಗೆ ದಾರಿ. ೧೦ನೇ ವಯಸ್ಸಿಗಾಗಲೇ ಭಜನೆ, ಕೈವಲ್ಯ ಪದಗಳ ಸರಾಗ ಹಾಡುಗಾರಿಕೆಗೆ ಮನಸೋಲದವರೇ ಇಲ್ಲ. ಹಾಡಿನ ಕಲೆ ನಟನೆಯತ್ತಲೂ ಸೆಳೆದದ್ದು ವಿಶೇಷ. ೧೯ನೇ ವಯಸ್ಸಿಗೆ ಕೃಷ್ಣಾಜಿ ದೇಶಪಾಂಡೆ ಅವರ ಶ್ರೀಕೃಷ್ಣ ಪಾರಿಜಾತ ತಂಡಕ್ಕೆ ಸೇರ್ಪಡೆ. ಶ್ರೀಕೃಷ್ಣನ ಪಾತ್ರದಲ್ಲಿ ಮನೋಜ್ಞ ಅಭಿನಯ, ಸತತ ೨೫ ವರ್ಷಗಳ ಕಾಲ ಮನರಂಜಿಸಿದ ಕೃಷ್ಣ. ಹತ್ತು ವರ್ಷಗಳ ಕಾಲ ಮಾತ್ರ ಅನ್ಯ ಪಾತ್ರಗಳಲ್ಲಿ ಪರಕಾಯ ಪ್ರವೇಶ, ಆರು ದಶಕಗಳ ಕಲಾಯಾನದಲ್ಲಿ ಉಂಡ ಕಷ್ಟಗಳಿಗಿಂತಲೂ ಪಡೆದ ಚಪ್ಪಾಳೆಗಳದ್ದೇ ಖುಷಿ. ಸದ್ಯ ಶ್ರೀ ಕೃಷ್ಣ ಪಾರಿಜಾತ ತಂಡದ ವ್ಯವಸ್ಥಾಪಕನಾಗಿ ಬದುಕಿನ ಸಂಧ್ಯಾಕಾಲದಲ್ಲೂ ಕಲಾಸೇವೆಯಲ್ಲಿ ನಿರತ ಈ ದೇಸೀ ಕಲಾಕುಸುಮಕ್ಕೆ ಸಂದ ಪ್ರತಿ ಗೌರವ-ಸನ್ಮಾನಗಳೆಲ್ಲದರಿಂದ ಮನದುಂಬಿದ ಧನ್ಯತಾಭಾವ.

Categories
ಜಾನಪದ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನೀಲ್‌ಗಾರರು ದೊಡ್ಡಗವಿಬಸಪ್ಪ

ಮಂಟೇಸ್ವಾಮಿ ಪದವನ್ನೇ ಸಾಧನೆಗೆ ಹದ ಮಾಡಿಕೊಂಡ ದೇಸೀ ಪ್ರತಿಭೆ ದೊಡ್ಡ ಗವಿಬಸಪ್ಪ.ಮೋಡಿ ಮಾಡುವ ತಂಬೂರಿ ಶೈಲಿಯ ನೀಲಗಾರರು.
ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಗ್ರಾಮ ದೊಡ್ಡ ಗವಿಬಸಪ್ಪ ಅವರ ಹುಟ್ಟೂರು. ಅನಕ್ಷರಸ್ಥತೆ ಮತ್ತು ಬಡತನ ಬದುಕಿಗೇ ಅಂಟಿದ ಶಾಪ. ೧೭ನೇ ವಯಸ್ಸಿಗೆ ಅಪ್ಪ ಅಮ್ಮನ ಹರಕೆಯಂತೆ ದೇವರಗುಡ್ಡಕ್ಕೆ ಬಿಟ್ಟ ಪರಿಣಾಮ ಗವಿಬಸಪ್ಪ ನೀಲಗಾರರಾಗಿ ರೂಪಾಂತರ, ಯಳಂದೂರು ತಾಲ್ಲೂಕಿನ ಕೃಷ್ಣಪುರದ ಹಿರಿಯ ನೀಲಗಾರ ಕಲಾವಿದ ಕಾಳವಾರ ಸಿದ್ದಶೆಟ್ಟಿ ಅವರಿಂದ ಎರಡು ವರ್ಷಗಳ ಕಾಲ ಮಂಟೇಸ್ವಾಮಿ ಕಥೆ, ಸಿದ್ದಪ್ಪಾಜಿ ಕಥೆ, ಮಲೆಮಹಾದೇಶ್ವರನ ಕಾವ್ಯ, ಶರಣೆ ಶಂಕರಮ್ಮನ ಸಾಲು, ಜುಂಜೇಗೌಡನ ಸಾಲು, ಬಿಳಿಗಿರಿರಂಗಸ್ವಾಮಿ ಕಥೆ, ಮುಡುಕುತೊರೆ ಮಲ್ಲಿಕಾರ್ಜುನನ ಕಥೆಗಳ ಗಾಯನದ ತರಬೇತಿ, ಮುಂದಿನದ್ದು ಸಿದ್ದಪ್ಪಾಜಿ ತೋರಿದ ಸಾಧನೆಯ ಹಾದಿ. ಹಳ್ಳಿಗಾಡಿನ ಶುಭಕಾರ್ಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನಿರಂತರ ಗಾನಸೇವೆ. ಕಾಲೇಜು ವಿದ್ಯಾರ್ಥಿಗಳಿಗೆ ನೀಲಗಾರ ಪದ ಹಾಡುವ ತರಬೇತಿ, ಬೀಸು ಕಂಸಾಳೆ ಪ್ರದರ್ಶನವೂ ಸೇರಿದಂತೆ ೪೩ ವರ್ಷಗಳಿಂದಲೂ ನಿಸ್ವಾರ್ಥ ಕಲಾಸೇವೆ. ಜಾನಪದ ಅಕಾಡೆಮಿಯ ಪ್ರಶಸ್ತಿ, ಹೆಚ್.ಎಲ್.ನಾಗೇಗೌಡ, ಮಂಟೇಸ್ವಾಮಿ ಪ್ರಶಸ್ತಿಗಳಿಂದ ಭೂಷಿತವಾದ ದೇಸೀ ಕಲಾಕುಸುಮ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀನಿವಾಸ ಉಡುಪ

ಸುಗಮ ಸಂಗೀತ ಕ್ಷೇತ್ರವನ್ನೇ ಸಾಧನಾ ಕ್ಷೇತ್ರವಾಗಿಸಿಕೊಂಡವರಲ್ಲಿ ನಗರ ಶ್ರೀನಿವಾಸ ಉಡುಪ ಸಹ ಪ್ರಮುಖರು. ಗಾಯಕರು, ಸಂಗೀತ ಶಿಕ್ಷಕರು ಮತ್ತು ಸಂಘಟಕರಾಗಿ ಅವರದ್ದು ಅನುಕರಣೀಯ ಸಾಧನೆ.
ಶಿವಮೊಗ್ಗ ಜಿಲ್ಲೆಯ ನಗರ ಶ್ರೀನಿವಾಸ ಉಡುಪರ ಹುಟ್ಟೂರು. ನಾಲ್ಕು ತಲೆಮಾರಿನಿಂದಲೂ ಸಂಗೀತದ ಹಿನ್ನೆಲೆಯುಳ್ಳ ಕುಟುಂಬ. ಹುಟ್ಟಿನಿಂದಲೇ ಸ್ವರಸಂಸ್ಕಾರ. ವಿದ್ವಾನ್ ಬಾಲಕೃಷ್ಣರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಪಂಡಿತ್ ಶಿವರಾಜ್ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತದ ಕಲಿಕೆ. ಶಿವಮೊಗ್ಗ ಸುಬ್ಬಣ್ಣರ ಸಖ್ಯದಿಂದ ಸುಗಮ ಸಂಗೀತದತ್ತ ಒಲವು, ಮೈಸೂರು ಅನಂತಸ್ವಾಮಿ ಬಳಿ ಶಿಷ್ಯತ್ವ-ಗಾಯನ, ೧೯೬೭ರಲ್ಲಿ ಆಕಾಶವಾಣಿ ಕಲಾವಿದರಾಗಿ ಮುನ್ನೆಲೆಗೆ ಐದು ದಶಕದಿಂದಲೂ ನಿರಂತರ ಸಂಗೀತ ಕಾರ್ಯಕ್ರಮಗಳ ಮೂಲಕ ಶೋತೃಗಳಿಗೆ ಸಂಗೀತದ ರಸದೌತಣ ಉಣಬಡಿಸಿದ ಹಿರಿಮೆ, ದೇಶಾದ್ಯಂತ ಹಾಗೂ ಹಲವು ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ. ಸಾಧನಾ ಸಂಗೀತ ಶಾಲೆಯಿಂದ ಆರಂಭವಾದ ‘ಗುರುತ್ವ’ ಇಂದಿಗೂ ಅವ್ಯಾಹತ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವ ಖಜಾಂಚಿ-ಕಾರ್ಯದರ್ಶಿಯಾಗಿ ಸಂಘಟನೆಯಲ್ಲೂ ಛಾಪು.ಕರ್ನಾಟಕ ಕಲಾಶ್ರೀ, ಗಾನಗಂಧರ್ವ ಮತ್ತಿತರ ಪ್ರಶಸ್ತಿಗಳಿಂದ ಭೂಷಿತರಾದ ಶಾರದಾಪುತ್ರರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮುದ್ದುಮೋಹನ್

ಸಾರ್ವಜನಿಕ ಆಡಳಿತ ಮತ್ತು ಸಂಗೀತ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಿದ ವಿಶಿಷ್ಟ ಸಾಧಕರು ಡಾ.ಮುದ್ದುಮೋಹನ್, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆಗೈದ ಬಹುಮುಖಿ.
ರಾಯಚೂರು ಜಿಲ್ಲೆಯ ಮಸ್ಕಿ ಮುದ್ದುಮೋಹನ್‌ ಹುಟ್ಟೂರು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಿಕಾಂ ಪದವಿಯಲ್ಲಿ ೨ನೇ ಬ್ಯಾಂಕ್ ಪಡೆದವರು. ಕೆ.ಎ.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಪಡೆದು ನಂತರ ಐಎಎಸ್ ಹುದ್ದೆಗೆ ಪದೋನ್ನತಿಗೊಂಡು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪರ ಕಾರ್ಯಕೈಗೊಂಡವರು, ಪದ್ಮಭೂಷಣ ಡಾ. ಬಸವರಾಜ ರಾಜಗುರು, ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ ಮತ್ತು ಚಂದ್ರಶೇಖರ ಗವಾಯಿಗಳಿಂದ ಹಿಂದೂಸ್ತಾನಿ ಸಂಗೀತ ಕಲಿತವರು. ದಾಸವಾಣಿ, ಶರಣರ ವಚನ ಗಾಯನ ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರು. ರಂಗದಿಗ್ಗಜ ಏಣಗಿ ಬಾಳಪ್ಪರಿಂದ ತರಬೇತುಗೊಂಡು ನಾಟ್ಯಗೀತೆಗಳನ್ನು ಹಾಡಿದವರು, ಭಾವಗೀತೆಗಳನ್ನು ಹಾಡುವಲ್ಲಿ ಹೆಸರುವಾಸಿ, ಆಕಾಶವಾಣಿಯ ಬಿ’ಹೈ’ ಗ್ರೇಡ್ ಕಲಾವಿದರು, ದೂರದರ್ಶನ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರು. ರಾಜ್ಯದ ಎಲ್ಲಾ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ, ದೇಶ- ವಿದೇಶಗಳಲ್ಲಿ ಗಾನಸುಧೆ ಹರಿಸಿದ, ನೂರಾರು ಸಿಡಿಗಳಿಗೆ ಹಾಡಿರುವ ಮುದ್ದು ಮೋಹನ್ ತಮ್ಮ ಬಹುಶ್ರುತ ಸಾಧನೆಗೆ ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಪಂಚಾಕ್ಷರ ಗವಾಯಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರು. ೧೯೯೨ರಲ್ಲಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಸಿವಿಲ್ ಸರ್ವಿಸಸ್ ಸಾಂಸ್ಕೃತಿಕ ಸ್ಪರ್ಧೆಗಲ್ಲಿ ಭಾರತ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಗೌರವಿಸಲ್ಪಟ್ಟಿದ್ದಾರೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ನಾಗವಲ್ಲಿ ನಾಗರಾಜ್

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರ ಕಂಡ ವಿಶಿಷ್ಟ ಕಲಾವಿದೆ ವಿದ್ವಾನ್ ನಾಗವಲ್ಲಿ ನಾಗರಾಜ್, ತ್ರಿಸ್ಥಾಯಿಯಲ್ಲೂ ಸಂಚರಿಸಬಲ್ಲ ಅಪರೂಪದ ಕಂಠವುಳ್ಳ ಶಾರದಾಪುತ್ರಿ.
ಪ್ರಸಿದ್ಧ ವಾಗ್ಗೇಯಕಾರರಾದ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳ ಮೊಮ್ಮಗಳು ನಾಗವಲ್ಲಿ ನಾಗರಾಜ್. ತಂದೆಯೂ ಸಂಗೀತಜ್ಞ ಬಾಲ್ಯದಲ್ಲೇ ಸ್ವರಸಂಸ್ಕಾರ, ತಂದೆಯೇ ಮೊದಲ ಗುರು, ಪ್ರಸಿದ್ಧ ಪಿಟೀಲು ವಿದ್ವಾಂಸರಾದ ಅನೂರು ರಾಮಕೃಷ್ಣ ಅವರಲ್ಲಿ ಉನ್ನತಸ್ತರದ ವ್ಯಾಸಂಗ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್‌ಡಿ ಪಡೆದವರು, ಬೆಂಗಳೂರು ವಿ.ವಿ ಯಲ್ಲಿ ಪ್ರಾಧ್ಯಾಪಕಿಯಾಗಿ ಮೂರು ದಶಕಗಳಿಂದಲೂ ನಿರಂತರ ಸೇವೆ. ಏಕಕಾಲಕ್ಕೆ ವಿದ್ವಾಂಸರು, ಜನಸಾಮಾನ್ಯರನ್ನು ರಂಜಿಸಬಲ್ಲ ವಿಶಿಷ್ಟ ಗಾಯನ ಶೈಲಿವುಳ್ಳ ಆಕಾಶವಾಣಿಯ ಎ ಟಾಪ್ ಕಲಾವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತಸುಧೆ ಹರಿಸಿ ಸುವಿಖ್ಯಾತರಾದವರು. ಸಂಗೀತ ಚೂಡಾಮಣಿ, ಸಂಗೀತ ವಿದ್ಯಾವಾರಿಧಿ, ಗಾನಕಲಾಶ್ರೀ ಮುಂತಾದ ಬಿರುದುಗಳಿಂದ ಭೂಷಿತರು. ರಾಗವಲ್ಲಿ ರಸಾಲ ಹೆಸರಿನಡಿ ಅರವತ್ತು ಕೃತಿಗಳನ್ನು ಹೊರತಂದಿರುವ ಹೆಗ್ಗಳಿಕೆ. ಕನ್ನಡದ ಮಹಾಕಾವ್ಯಗಳಾದ ಕುಮಾರವ್ಯಾಸ ಭಾರತ, ಹರಿಶ್ಚಂದ್ರಕಾವ್ಯ ದಾಸಸಾಹಿತ್ಯ ಮತ್ತು ವಚನಸಾಹಿತ್ಯವನ್ನು ಸಂಗೀತಕ್ಕಳವಡಿಸಿ ಜನಪ್ರಿಯಗೊಳಿಸಿದ ಹಿರಿಮೆಯ ನಾಗವಲ್ಲಿ ಅವರು ಅಭಿಜಾತ ಕಲೆಗಳ ಉಳಿವಿಗೆ ಅನವರತ ಸೇವಾನಿರತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಛೋಟೆ ರೆಹಮತ್ ಖಾನ್

ಕನ್ನಡ ನಾಡು ಕಂಡ ಪ್ರಖ್ಯಾತ ಸಂಗೀತ ಕಲಾವಿದರು ಉಸ್ತಾದ್ ಛೋಟೆ ರಹಿಮತ್ ಖಾನ್, ಸಿತಾರ್ ವಾದನದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಸಾಧಕರು.
ಛೋಟೆ ರಹಿಮತ್ ಖಾನ್ ಅವರದ್ದು ಸಿತಾರ್ ವಾದಕರ ಕುಟುಂಬ. ಧಾರವಾಡ ಘರಾಣೆಯ ಆರನೇ ತಲೆಮಾರಿನ ಕುಡಿ, ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್‌ ಮೊಮ್ಮಗ, ಉಸ್ತಾದ್ ಅಬ್ದುಲ್ ಕರೀಂಖಾನ್‌ ಸುಪುತ್ರರು. ಸಂಗೀತಕಲೆ ರಕ್ತಗತ. ಬಾಲ್ಯದಿಂದಲೇ ಕಲಿಕೆ. ೧೫ರ ಹರೆಯದಲ್ಲೇ ಛೋಟೆ ರಹಿಮತ್ ಖಾನ್‌ರ ಸಿತಾರ್ ವಾದನಕ್ಕೆ ತಲೆದೂಗಿದವರೇ ಎಲ್ಲಾ. ೧೯ನೇ ವಯಸ್ಸಿನಲ್ಲಿ ಆಕಾಶವಾಣಿಯ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಡಾ.ಗಂಗೂಬಾಯಿ ಹಾನಗಲ್‌ರಿಂದ ಸನ್ಮಾನಿಸಲ್ಪಟ್ಟ ಪ್ರತಿಭಾವಂತರು. ಆನಂತರದ್ದು ಅವ್ಯಾಹತ ಸಾಧನಾಪರ್ವ. ಆಕಾಶವಾಣಿಯ ಉನ್ನತಶ್ರೇಣಿಯ ಕಲಾವಿದರಾಗಿರುವ ಛೋಟೆ ರಹಿಮತ್ ಖಾನ್ ರಾಜ್ಯ, ಹೊರರಾಜ್ಯಗಳು ಮಾತ್ರವಲ್ಲದೆ, ಪ್ರಪಂಚದ ಉದ್ದಗಲಕ್ಕೂ ಕಛೇರಿ ನಡೆಸಿಕೊಟ್ಟ ಸಾಧಕ.ಗೋವಾ ಕಲಾ ಅಕಾಡೆಮಿಯ ನಿರ್ದೇಶಕರಾಗಿ ಮೂರು ದಶಕಗಳಿಂದಲೂ ಸೇವಾನಿರತರು. ವಿಶ್ವಾದ್ಯಂತ ಅಸಂಖ್ಯ ಗೌರವ-ಸನ್ಮಾನಗಳಿಗೆ ಪಾತ್ರವಾಗಿರುವ ಛೋಟಿ ರಹಿಮತ್ ಖಾನ್ ರಾಜ್ಯ ಸಂಗೀತಲೋಕದ ಅನರ್ಥ್ಯ ರತ್ನಗಳಲ್ಲೊಬ್ಬರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಭಾರ್ಗವಿ ನಾರಾಯಣ

ಕನ್ನಡ ರಂಗಭೂಮಿ ಕಂಡ ಪ್ರತಿಭಾವಂತ ಕಲಾವಿದೆಯರಲ್ಲಿ ಭಾರ್ಗವಿ ನಾರಾಯಣ್ ಅವರದ್ದು ಅಚ್ಚಳಿಯದ ಹೆಸರು.ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಬೆಳಗಿದ ಪ್ರತಿಭೆ.
ಜನನ.
ಬೆಂಗಳೂರು ಭಾರ್ಗವಿ ನಾರಾಯಣರ ಹುಟ್ಟೂರು. ೧೯೩೮ರ ಫೆಬ್ರವರಿ ೪ರಂದು ಡಾ.ಎಂ.ರಾಮಸ್ವಾಮಿ-ನಾಮಗಿರಿಯಮ್ಮ ದಂಪತಿಯ ಪುತ್ರಿ ಬಿಎಸ್ಸಿ ಪದವೀಧರೆ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ. ಇಎಸ್‌ಐ ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ. ಪ್ರೌಢಶಾಲೆಯಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಮೊಳಕೆಯೊಡೆದ ಆಸಕ್ತಿ, ಶಾಲಾಕಾಲೇಜುಗಳ ನಾಟಕಗಳಲ್ಲಿ ಅಭಿನಯ, ಎರಡು ಬಾರಿ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿ, ನಟನೆ ಜೊತೆಗೆ ನಿರ್ದೇಶನ, ಮಕ್ಕಳಿಗಾಗಿ ನಾಟಕ ರಚನೆ, ರಂಗಾನುಭವ ಸಿನಿಮಾ-ಕಿರುತೆರೆಗೂ ವಿಸ್ತಾರ. ನಟನೆ ಜೊತೆಗೆ ಚಿತ್ರಕಥೆ, ಸಂಭಾಷಣೆ ಬರೆದ ಹಿರಿಮೆ.ಪಲ್ಲವಿ, ಮುಯ್ಯ, ಅಂತಿಮಘಟ್ಟ, ಜಂಬೂಸವಾರಿ, ಇತ್ತೀಚಿನ ರಾಜಕುಮಾರ ಸೇರಿ ೨೨ ಚಿತ್ರಗಳಲ್ಲಿ ನಟನೆ, ಕಿರುತೆರೆಯ ಧಾರಾವಾಹಿಗಳಲ್ಲೂ ಜನಪ್ರಿಯ. ಭಾರ್ಗವಿ ನಾರಾಯಣ ಲೇಖಕಿಯೂ ಸಹ. ಅವರ ‘ನಾನು ಭಾರ್ಗವಿ’ ಅನೇಕ ಮುದ್ರಣಗಳನ್ನು ಕಂಡ ಕೃತಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ ಗೌರವ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಕೆ. ರಾಮನಾಥ್

ನಟ, ನಿರ್ದೇಶಕ, ನಾಟಕಕಾರ, ಅಧ್ಯಾಪಕ, ಲೇಖಕರಾದ ಡಾ.ಎಚ್.ಕೆ. ರಾಮನಾಥ್ ಅವರದು ಬಹುಮುಖ ಪ್ರತಿಭೆ. ರಂಗದ ಬಹುರೂಪಿ. ಆರು ದಶಕಕ್ಕೂ ಮೀರಿದ ರಂಗಸೇವೆಯ ಹಿರಿಮೆಯ ರಂಗಕರ್ಮಿ.
ಮೈಸೂರು ವಿ.ವಿ ಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪ್ರದರ್ಶಕ ಕಲೆಯಲ್ಲಿ ಪಿ.ಎಚ್.ಡಿ ಪದವಿ ಪಡೆದ ರಾಮನಾಥ್ ಕನ್ನಡ ಅಧ್ಯಾಪಕರು, ದೆಹಲಿಯ ಎನ್.ಸಿ.ಇ.ಆರ್.ಟಿ ಯ ನಿವೃತ್ತ ಶ್ರವಣ ಕಾರ್ಯಕ್ರಮ ನಿರ್ಮಾಪಕರು. ಬಾಲ್ಯದಲ್ಲೇ ಬಣ್ಣದ ಬೆಡಗಿಗೆ ಮನಸೋತವರು, ಮೈಸೂರಿನ ಸಮತಂತೋ, ಕಲಾಪ್ರಿಯ, ಅಮರ ಕಲಾಸಂಘ, ಶಿವಮೊಗ್ಗದ ಕಲಾಸೇವಾಸಂಘ ಮತ್ತಿತರ ಹವ್ಯಾಸಿ ತಂಡಗಳಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ.ಆಕಾಶವಾಣಿಯಲ್ಲೂ ನಟನಾಪರ್ವ, ಹಲವು ಮಕ್ಕಳ ನಾಟಕಗಳ ನಿರ್ದೇಶಕರು. ರಂಗಭೂಮಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಲೇಖನಗಳು-ವಿಮರ್ಶೆಗಳ ರಚನೆ, ನಾಟಕ ಸ್ಪರ್ಧೆಗಳು-ಕಾರ್ಯಾಗಾರಗಳ ಆಯೋಜನೆ, ಉಪನ್ಯಾಸದಲ್ಲಿ ಸದಾ ನಿರತರು. ನಾಲ್ಕು ಮಕ್ಕಳ ನಾಟಕಗಳು ಸೇರಿ ೧೮ ಕೃತಿಗಳ ಕರ್ತೃ.ರಾಜ್ಯ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಶಿವಲಿಂಗಯ್ಯ

ಕರ್ನಾಟಕ ರಂಗಭೂಮಿಯಲ್ಲಿ ಬಹುಮುಖಿ ಕಾರ್ಯಗಳ ಮೂಲಕ ಸೇವೆಗೈದವರು ಎನ್.ಶಿವಲಿಂಗಯ್ಯ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಛಾಯಾಚಿತ್ರ ಮತ್ತು ದೃಶ್ಯಮಾಧ್ಯಮದಲ್ಲಿ ದುಡಿದ ಬಹುರೂಪಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯವರಾದ ಶಿವಲಿಂಗಯ್ಯ ಬಿಎಸ್ಸಿ ಪದವೀಧರರು.ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ರಂಗಕಲಾವಿದ. ಬಾಲ್ಯದಿಂದಲೂ ಆಸಕ್ತಿ ಹುಟ್ಟಿಸಿದ್ದ ರಂಗಭೂಮಿಗೆ ೧೯೭೩ರಲ್ಲಿ ಪ್ರವೇಶ. ಆನಂತರ ಕತ್ತಲೆಬೆಳಕು, ದೊರೆ ಈಡಿಪಸ್, ತೆರೆಗಳು, ಗೋಕರ್ಣದ ಗೌಡಶನಿ, ಸಂಕ್ರಾಂತಿ, ಬೆಳೆದವರು, ಪಂಚಮ ಮುಂತಾದ ನಾಟಕಗಳಲ್ಲಿ ನಟನೆ, ಕ್ರಮೇಣ ನಿರ್ದೇಶನಕ್ಕೂ ಅಡಿ. ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ ಮತ್ತಿತರ ದಾರ್ಶನಿಕರ ಬದುಕಿನ ಸಂಗತಿಗಳನ್ನು ಅಳವಡಿಸಿ ನಾಟಕಗಳ ಪ್ರದರ್ಶನ. ೪೦ಕ್ಕೂ ಹೆಚ್ಚು ನಾಟಕಗಳು, ನೂರಾರು ರಂಗಪ್ರದರ್ಶನಗಳಿಗೆ ಸಾರಥಿ. ೨೫ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ, ಮೂರು ನಾಟಕಗಳ ರಚನೆ, ಮೂರು ಕಿರುನಾಟಕಗಳಿಗೆ ರಂಗರೂಪ ನೀಡಿಕೆ, ಹಲವೆಡೆ ದಾರ್ಶನಿಕರ ಜೀವನಚರಿತ್ರೆಯ ಛಾಯಾಚಿತ್ರಗಳ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದ ಹಿರಿಮೆ. ಸಾಕ್ಷ್ಯಚಿತ್ರಗಳ ನಿರ್ಮಾಣ, ಸಾಂಸ್ಕೃತಿಕ ಶಿಬಿರಗಳ ಆಯೋಜನೆ, ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿ, ರಂಗಶಿಬಿರಗಳ ನಿರ್ದೇಶಕ ಮುಂತಾದ ಸ್ತುತ್ಯಾರ್ಹ ಕಾರ್ಯದಲ್ಲಿ ನಾಲ್ಕು ದಶಕಗಳಿಂದಲೂ ನಿರತರಾಗಿರುವ ವಿಶಿಷ್ಟ ಸಾಂಸ್ಕೃತಿಕ ಜೀವಿ.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಹೂಲಿ ಶೇಖ‌ರ್‌

ಬರವಣಿಗೆಯಿಂದಲೇ ರಂಗಭೂಮಿ, ಕಿರುತೆರೆ, ಸಾಹಿತ್ಯ ಕ್ಷೇತ್ರದಲ್ಲಿ ಮೈಲಿಗಲ್ಲಿನ ಸಾಧನೆ ಮಾಡಿದವರು ಹೂಲಿಶೇಖರ್, ಮೂಡಲಮನೆಯ ಸಂಭಾಷಣಕಾರರಾಗಿ ಜನಜನಿತರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದವರಾದ ಶೇಖರ್ ಹುಟ್ಟಿದ್ದು ೧೯೫೧ರ ಜೂನ್ ಒಂದರಂದು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬರವಣಿಗೆ ಬಾಲ್ಯದಲ್ಲೇ ಅಂಟಿಕೊಂಡ ಹವ್ಯಾಸ. ೭೦ರ ದಶಕದಲ್ಲಿ ಕಥಾರಚನೆ ಮೂಲಕ ಸಾರಸ್ವತ ಲೋಕಕ್ಕೆ ೨೫೦ಕ್ಕೂ ಹೆಚ್ಚು ಕಥೆಗಳು, ೧೫ಕ್ಕೂ ಅಧಿಕ ಕಾದಂಬರಿಗಳನ್ನು ಬರೆದ ಹಿರಿಮೆ, ರಂಗಭೂಮಿಯಲ್ಲೇ ಹೆಚ್ಚು ಕ್ರಿಯಾಶೀಲರು. ೩೫ಕ್ಕೂ ಹೆಚ್ಚು ನಾಟಕಗಳ ಪೈಕಿ ವೃತ್ತಿ ನಾಟಕ ಕಂಪನಿಗಾಗಿ ಬರೆದ ನಾಟಕಗಳೂ ಉಂಟು. ಆಕಾಶವಾಣಿಗೆ ೧೫ ನಾಟಕಗಳು, ಹದಿನೈದಕ್ಕೂ ಹೆಚ್ಚು ಬೀದಿನಾಟಕಗಳು ಹೂಲಿಶೇಖರ್‌ರ ಸೃಜನಶೀಲತೆಗೆ ಸಾಕ್ಷಿಯಾಗಿವೆ. ೯೦ರ ದಶಕದ ಅಂತ್ಯದಲ್ಲಿ ಕಿರುತೆರೆ ಪ್ರವೇಶಿಸಿದ ಹೂಲಿಶೇಖರ್ ಗೆಳತಿ, ಸೌಭಾಗ್ಯವತಿ, ಕಿನ್ನರಿ, ಕಾವ್ಯಕಸ್ತೂರಿ, ಕಿಚ್ಚು, ಗಂಗಾ ಸೇರಿ ೨೫ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿದ್ದು ‘ಮೂಡಲಮನೆ’ಯ ಸಂಭಾಷಣೆಗೆ ನಾಡಿಗರೆಲ್ಲರೂ ತಲೆದೂಗಿದ್ದು ವಿಶೇಷ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತರಾಗಿರುವ ಹೂಲಿಶೇಖರ್‌ಗೆ ಸದಾಕಾಲಕ್ಕೂ ಬರಹವೇ ಬದುಕು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪಾಲ್ ಸುದರ್ಶನ್

ನಟ, ನಾಟಕಕಾರ, ರಂಗಕರ್ಮಿ, ನಿರ್ದೇಶಕ, ಬರಹಗಾರರಾಗಿ ಕನ್ನಡ ರಂಗಭೂಮಿಯಲ್ಲಿ ಹೆಜ್ಜೆಗುರುತು ಮೂಡಿಸಿರುವ ವಿಶಿಷ್ಟ ಪ್ರತಿಭೆ ಪಾಲ್ ಸುದರ್ಶನ್, ಚಲನಚಿತ್ರ-ಕಿರುತೆರೆಯಲ್ಲೂ ಮಿಂಚಿದ ಪ್ರತಿಭಾಶಾಲಿ.
ಬೆಂಗಳೂರಿನ ಮೂಲದವರಾದ ಪಾಲ್ ಸುದರ್ಶನ್ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವೀಧರರು. ಕೆ.ಎಂ.ಎಫ್ ಉದ್ಯೋಗಿಯಾಗಿ ನೆಲೆ ಕಂಡುಕೊಂಡವರು. ಕ್ರಿಯಾಶೀಲತೆ-ಸೃಜನಶೀಲತೆ ಪಾಲ್‌ ಹುಟ್ಟುಗುಣ. ಕಾಲೇಜು ದಿನಗಳಿಂದಲೂ ಬರವಣಿಗೆಯ ಗೀಳು. ರಂಗದಿಗ್ಗಜ ದಿ|| ಆರ್.ನಾಗೇಶ್-ಸಿ.ಜಿ.ಕೆ ಅವರ ಸಖ್ಯದಿಂದ ರಂಗಭೂಮಿಗೆ ಪಾದಾರ್ಪಣೆ. ನಟ, ನಾಟಕಕಾರ, ರಂಗಕರ್ಮಿಯಲ್ಲದೆ ರಂಗಪತ್ರಿಕೆ ಸೂತ್ರಧಾರದ ಸಂಪಾದಕನಾಗಿಯೂ ಸೇವೆ. ಹವ್ಯಾಸಿ ರಂಗತಂಡಗಳಲ್ಲಿ ಸದಾ ಸಕ್ರಿಯ. ಕಿರುತೆರೆ-ಚಲನಚಿತ್ರಕ್ಕೂ ಅಡಿ, ವರನಟ ಡಾ.ರಾಜ್‌ಕುಮಾರ್ ಅವರ ಆಕಸ್ಮಿಕ, ಶಬ್ದವೇದಿ ಚಿತ್ರಕ್ಕೆ ಸಂಭಾಷಣಕಾರರಾಗಿ ದುಡಿದವರು. ೧೨ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಸೇವೆ. ಕಿರುತೆರೆಯ ಅನೇಕ ಧಾರಾವಾಹಿ, ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಅಕ್ಷರಸೇವೆ-ನಿರ್ದೇಶನ. ೭೦ಕ್ಕೂ ಹೆಚ್ಚು ಸಣ್ಣಕಥೆಗಳು, ಮೂರು ಕಾದಂಬರಿಗಳನ್ನು ಬರೆದಿರುವ ಪಾಲ್ ಸುದರ್ಶನ್ ಅವರದು ಎಂದಿಗೂ ಬತ್ತದ ಉತ್ಸಾಹ, ಕ್ರಿಯಾಶೀಲ ನಡೆಯಿಂದಲೇ ಸದಾ ಸದ್ದು ಮಾಡುವ ಪ್ರತಿಭೆ. ರಾಜ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪರಶುರಾಮ ಸಿದ್ಧಿ

ವನವಾಸಿಗಳಾದ ಸಿದ್ಧಿ ಜನಾಂಗದ ಶ್ರೇಯೋಭಿವೃದ್ಧಿಗೆ ಪರಿಶ್ರಮಿಸಿದ ಸಾರ್ಥಕ ಜೀವಿ ಪರಶುರಾಮ ಗಿರಿಗೋಲಿ ಸಿದ್ಧಿ, ಗಾಯನ, ಸಂಘಟನೆ, ನಟನಾ ರಂಗದಲ್ಲಿ ಅನುಪಮ ಸೇವೆಗೈದಿರುವ ಸಾಧಕರು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಹತ್ತಿರದ ಅಣಲೇಸರ ಪರಶುರಾಂ ಸಿದ್ಧಿ ಅವರ ಜನ್ಮಸ್ಥಳ.ಗಿರಿಗೋಲಿ ಸಿದ್ಧಿ-ಲಕ್ಷ್ಮಿ ದಂಪತಿಯ ಸುಪುತ್ರರು. ವನವಾಸಿಗಳಾದ ಪರಶುರಾಮ ಸಿದ್ಧಿ, ಓದಿದ್ದು ಏಳನೇ ತರಗತಿವರೆಗೆ ಮಾತ್ರ ಆದರೆ, ಬಾಲ್ಯದಿಂದ ಕಾಡಿದ ಕಲಾಸಕ್ತಿಯಿಂದ ಸಿದ್ಧಿಜನಾಂಗದ ಪ್ರಮುಖ ಜನಪದ ಕಲಾಪ್ರಕಾರವಾದ ಡಮಾಮಿ ನೃತ್ಯ ಕಲಿಕೆ. ಎಲ್ಲೆಡೆ ಪ್ರದರ್ಶನ, ನಟನೆಯಲ್ಲೂ ಆಸಕ್ತ ಪರಶುರಾಮ ಸಿದ್ಧಿ ಹೆಗ್ಗೋಡಿನ ನೀನಾಸಂನ ಹಲವಾರು ಶಿಬಿರಗಳ ನಾಟಕಗಳಲ್ಲಿ ನಟಿಸಿದ ಕಲಾವಿದರು. ಡಮಾಮಿ ಪುಗಡಿ ತಂಡ ಸ್ಥಾಪಿಸಿ ಮೂರು ದಶಕಗಳಿಂದಲೂ ಜನಾಂಗದ ಜನಪದ ಕಲೆಯ ಪ್ರಚುರಪಡಿಸುವಿಕೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ನಟ. ಕರ್ನಾಟಕ ವನವಾಸಿ ಕಲ್ಯಾಣದ ಉಪಾಧ್ಯಕ್ಷರಾಗಿ, ಸಿದ್ಧಿ ಟ್ರಸ್ಟ್‌ನ ಅಧ್ಯಕ್ಷರಾಗಿ ಮಕ್ಕಳ ಶಿಬಿರ, ನಾಟಕಗಳ ಆಯೋಜನೆಯ ಮೂಲಕ ಜನಾಂಗದ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಗ್ಗಳಿಕೆಯ ವಿಚಾರ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿರುವ ಪರಶುರಾಮ ಸಿದ್ಧಿ ಅಪ್ಪಟ ದೇಸೀ ಪ್ರತಿಭೆ, ಸದ್ದಿಲ್ಲದೆ ಸಾಧನೆಗೈದ ಮೌನಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸರಸ್ವತಿ ಚಿಮ್ಮಲಗಿ

ವಿಜಯಪುರದವರಾದ ಡಾ. ಸರಸ್ವತಿ ಚಿಮ್ಮಲಗಿ ಅವರು ಬಹುಮುಖ ಪ್ರತಿಭೆಯ ಲೇಖಕಿ. ಮಹಿಳಾ ಸಂಘಟಕಿ, ಉಪನ್ಯಾಸಕಿ ಹಾಗೂ ಹೋರಾಟಗಾರ್ತಿಯಾಗಿಯೂ ಹೆಜ್ಜೆಗುರುತು ಮೂಡಿಸಿದ ಸಾಧಕಿ.
ವಿಜಯಪುರದಲ್ಲಿ ೧೯೫೦ರ ಡಿಸೆಂಬರ್ ೨೪ರಂದು ಜನಿಸಿದ ಸರಸ್ವತಿ ಚಿಮ್ಮಲಗಿ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು, ಕನ್ನಡ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದವರು, ಬಂಡಾಯದ ಮನೋಧರ್ಮದಿಂದಲೇ ಬರವಣಿಗೆಗೆ ಧುಮುಕಿದವರು. ನಾವು ನಿಮ್ಮವರೇ ಸ್ವಾಮಿ, ಸಾಹಿತ್ಯ ವಿಹಾರ, ಮುಳ್ಳುಬೇಲಿ, ಹಡೆದವ್ವ, ಬಾಳು ಕೊಡವ್ವ ನೋವಾಮಿ, ರಂಗಾರೇರು, ಹಳೆ ನೆನಪು ಹಸಿರಾದಾಗ ಮುಂತಾದ ಕೃತಿಗಳ ರಚನಕಾರರು.ರಂಗಭೂಮಿಯಲ್ಲೂ ತೊಡಗಿಕೊಂಡಿರುವ ಚಿಮ್ಮಲಗಿ ನಟಿಯೂ ಸಹ.ಕತ್ತಲೆ ಬೆಳಕು, ಅಮ್ಮಾವ್ರ ಗಂಡ, ಕಾಡುಕುದುರೆ ಮುಂತಾದ ನಾಟಕ, ಹಳ್ಳಿಹಳ್ಳಿಯ ಕಥೆ, ನೋಸಿಲಾ ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಕವಯತ್ರಿಯರ ಸಮ್ಮೇಳನ, ಟರ್ಕಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿರುವ ಅವರು ಸಮಾಜಸೇವಾ ಕಾರ್ಯದಲ್ಲೂ ಸದಾ ಮುಂದು.ಅಂತಾರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ, ಆದರ್ಶ ಸ್ತ್ರೀರತ್ನ ಪ್ರಶಸ್ತಿ, ಅತ್ತಿಮಬ್ಬೆ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರತಿಭಾವಂತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಚಂದ್ರಕಾಂತ ಕರದಳ್ಳಿ

ಲೇಖಕ, ಪ್ರಕಾಶಕ, ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಸಾರಸ್ವತ ಲೋಕದ ಗಟ್ಟಿಪ್ರತಿಭೆ. ಶಿಶುಸಾಹಿತ್ಯದಲ್ಲೇ ತಮ್ಮದೇ ಛಾಪು ಮೂಡಿಸಿರುವ ಪ್ರತಿಭಾವಂತರು.
ಯಾದಗಿರಿ ಜಿಲ್ಲೆಯ ಶಹಾಪುರ ಚಂದ್ರಕಾಂತ ಕರದಳ್ಳಿ ಅವರ ಮೂಲನೆಲೆ, ಬಾಲ್ಯದಿಂದಲೂ ಓದು- ಬರಹದೆಡೆಗೆ ತೀವ್ರಾಸಕ್ತಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ ಪಡೆದವರು. ಶಹಾಪುರದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಅನನ್ಯ ಸೇವೆ. ಮಕ್ಕಳ ಮನೋಭೂಮಿಯೇ ಬರಹದ ತಪೋಭೂಮಿ. ಮಕ್ಕಳಿಗಾಗಿ ಆರು ಕವಿತಾಸಂಕಲನ, ೫ ಕಥಾಸಂಕಲನ, ೬ ಕಾದಂಬರಿ, ೨ ಶಿಶುಪ್ರಾಸಗಳು, ೧ ಒಗಟುಗಳು ಸೇರಿದಂತೆ ೨೫ಕ್ಕೂ ಹೆಚ್ಚು ಕೃತಿಗಳು, ಪ್ರೌಢ ಸಾಹಿತ್ಯದಲ್ಲಿ ೨೫ ಕೃತಿಗಳನ್ನು ರಚಿಸಿರುವ ಸಾಹಿತಿಗಳು. ಸುರಪುರದ ಮಕ್ಕಳ ಸಾಹಿತ್ಯ ಸಮ್ಮೇಳನ, ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪುಸ್ತಕ ಆಯ್ಕೆ ಸಮಿತಿಯ ಸದಸ್ಯತ್ವ, ಸಿಸು ಸಂಗಮೇಶ ಪ್ರಶಸ್ತಿ, ಸಗರನಾಡ ಸಿರಿ, ಉತ್ತಮ ಶಿಕ್ಷಕ ರಾಷ್ಟ್ರ-ರಾಜ್ಯ ಪ್ರಶಸ್ತಿಗಳಿಗೆ ಭಾಜನರು, ಸದ್ದಿಲ್ಲದೆ ಆದರಣೀಯ ಸಾಧನೆಯ ಕೃಷಿಗೈದ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ|| ಬಿ.ರಾಜಶೇಖರಪ್ಪ

ಕನ್ನಡ ಪ್ರಾಧ್ಯಾಪಕರು, ಇತಿಹಾಸ ಸಂಶೋಧಕರು, ಶಾಸನತಜ್ಞರೂ ಆಗಿರುವ ಡಾ. ಬಿ.ರಾಜಶೇಖರಪ್ಪ ಕ್ರಿಯಾಶೀಲ ಸಾಧಕರು.ದಣಿವರಿಯದ ಸಾಹಿತ್ಯ ಸೇವಕರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರಿನಲ್ಲಿ ೧೯೪೭ರ ಜೂನ್ ೧೫ರಂದು ಜನಿಸಿದ ರಾಜಶೇಖರಪ್ಪ ಸ್ನಾತಕೋತ್ತರ ಪದವೀಧರರು. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಪ್ರಾಧ್ಯಾಪಕರು, ಅಧ್ಯಯನ, ಅಧ್ಯಾಪನ, ಸಾಹಿತ್ಯ ರಚನೆ ಮತ್ತು ಸಂಶೋಧನೆಯಲ್ಲಿ ಸತತ ನಿರತರು. ಭಾಷಾ- ವಿಜ್ಞಾನ, ಗ್ರಂಥ ಸಂಪಾದನೆ, ಶಾಸನಲಿಪಿ, ಹಸ್ತಪ್ರತಿ ಲಿಪಿ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರು. ಚಿತ್ರದುರ್ಗ ಸುತ್ತಮುತ್ತ ೬೫೦ ಅಪ್ರಕಟಿತ ಶಾಸನಗಳ ಅನ್ವೇಷಕರು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ ಸಂಶೋಧಕರು, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ೨೦೦ಕ್ಕೂ ಹೆಚ್ಚು ವಿದ್ವತ್ಪಬಂಧಗಳನ್ನು ಮಂಡಿಸಿರುವ ರಾಜಶೇಖರಪ್ಪ ಹತ್ತಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಸಂಶೋಧನಾಶ್ರೀ ಪ್ರಶಸ್ತಿ, ರಾಷ್ಟ್ರೀಯ ಹಂಡೆಶ್ರೀ ಪ್ರಶಸ್ತಿ, ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳ ಪುರಸ್ಕೃತ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಮಂಜಪ್ಪಶೆಟ್ಟಿ ಮಸಗಲಿ

ಕವಿ, ವಿಮರ್ಶಕ, ಸಂಶೋಧಕ, ಸಂಪಾದಕ, ಜೀವನಚರಿತ್ರೆಕಾರ, ವ್ಯಾಕರಣಕಾರ ಹಾಗೂ ಹಸ್ತಪ್ರತಿ ತಜ್ಞರೂ ಆಗಿರುವ ಮಂಜಪ್ಪಶೆಟ್ಟಿ ಮಸಗಲಿ ಅವರು ಬಹುಮುಖಿ ಆಸಕ್ತಿಯ ಪ್ರತಿಭಾಶಾಲಿ.
ಚಿಕ್ಕಮಗಳೂರು ತಾಲ್ಲೂಕಿನ ಮಸಗಲಿ ಮಂಜಪ್ಪಶೆಟ್ಟರ ಹುಟ್ಟೂರು. ಚಿಕ್ಕಮಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ. ಚಿನ್ನದಪದಕ ವಿಜೇತರು. ಮೈಸೂರು ವಿ.ವಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕ-ಸಹ ನಿರ್ದೇಶಕರಾಗಿ ಸಾರ್ಥಕ ಸೇವೆ. ಅಧ್ಯಯನ- ಅಧ್ಯಾಪನ ಜೊತೆಗೆ ಸಂಶೋಧನೆಯಲ್ಲಿ ವಿಶೇಷ ಆಸಕ್ತಿ-ಕ್ರಿಯಾಶೀಲರು. ಅರವತ್ತಕ್ಕೂ ಹೆಚ್ಚು ಕೃತಿಗಳು, ೮೦ಕ್ಕೂ ಅಧಿಕ ಸಂಶೋಧನಾ ಲೇಖನಗಳು, ಅಪಾರ ಜಾನಪದ ಸಾಹಿತ್ಯದ ಸಂಗ್ರಹ, ಹಲವಾರು ಶಾಸನಗಳ ಪತ್ತೆಹಚ್ಚುವಿಕೆ ಮಂಜಪ್ಪ ಶೆಟ್ಟರ ಕ್ರಿಯಾಶೀಲತೆ-ಪ್ರತಿಭಾವಂತಿಕೆಗೆ ಸಾಕ್ಷಿ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಾಹಿತ್ಯ ಗೋಷ್ಠಿಗಳಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಹಿರಿಮೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ೧೪ನೇ ಹಸ್ತಪ್ರತಿಶಾಸ್ತ್ರ ಸಮ್ಮೇಳನ, ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯಸಿರಿ ಪ್ರಶಸ್ತಿ, ಕಸಾಪ ದತ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತ ತರಾಗಿರುವ ದೈತ್ಯ ಪ್ರತಿಭೆ.