Categories
ಪೌರಕಾರ್ಮಿಕ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಲ್ಲಮ್ಮ

ಕಾಯಕವೇ ಕೈಲಾಸ ಎಂಬ ದಿವ್ಯನಂಬಿಕೆಯಲ್ಲಿ ಬದುಕು ನಡೆಸಿ ಸಾರ್ಥಕತೆ ಕಂಡವರು ಮಲ್ಲಮ್ಮ ನಿಸ್ಪೃಹ ಸೇವೆಯಿಂದ ಗಮನಸೆಳೆದ ಪೌರಕಾರ್ಮಿಕರು. ಮಲ್ಲಮ್ಮ ಅವಿಭಜಿತ ಬಳ್ಳಾರಿ ಜಿಲ್ಲೆಯವರು. ಹಾಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯವರು. ಬಡತನದ ಬದುಕಿನಲ್ಲಿ ಅಕ್ಷರದ ಸಖ್ಯ ದೊರೆತದ್ದು ತೀರಾ ಕಡಿಮೆ. ಆದರೆ, ಕಾಯಕದಲ್ಲಿ ಸದಾ ನಿಷ್ಠೆ, ಸೀಮೆಯಿಲ್ಲದ ಬದ್ಧತೆ, ಹೂವಿನಹಡಗಲಿಯ ಪುರಸಭೆಯಲ್ಲಿ ದೊರೆತ ಪೌರಕಾರ್ಮಿಕ ಹುದ್ದೆಯಲ್ಲೇ ಬಾಳಿನ ಬಂಡಿಯನ್ನು ಸಾಗಿಸಿದವರು. ಪಟ್ಟಣವನ್ನು ಸ್ವಚ್ಛಗೊಳಿಸುವುದರಲ್ಲೇ ದೈವವನ್ನು ದರ್ಶಿಸಿದ ಪೌರಕಾರ್ಮಿಕರು. ಸೇವೆಯ ಉದ್ದಕ್ಕೂ ಕಾಯಕಕ್ಕೆ ಬದ್ಧಳಾಗಿ ಕಾರ್ಯನಿರ್ವಹಿಸಿದ ಮಲ್ಲಮ್ಮ ಎಲ್ಲರೊಳಗೊಂದಾಗುವ ಸಹೃದಯಿ. ಮಾತಿಗಿಂತ ಕೃತಿಯನ್ನೇ ನಂಬಿ ಬದುಕಿದ ಜೀವಿ, ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡುವುದರಲ್ಲೇ ಸಂತೃಪ್ತ ಭಾವ ಕಂಡುಕೊಂಡ ಮಲ್ಲಮ್ಮ ಎಂದಿಗೂ ಯಾರೊಂದಿಗೂ ಮೈಮನಸ್ಸು ಮಾಡಿಕೊಳ್ಳದೇ ಸಹಬಾಳ್ವೆಯಲ್ಲಿ ಬದುಕಿದವರು. ಹಲವು ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಮಲ್ಲಮ್ಮ ನಮ್ಮ ನಡುವಿರುವ ಅಪ್ಪಟ ಕಾಯಕಜೀವಿ.