Categories
ಬಯಲಾಟ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪವ್ವ ಯಲ್ಲಪ್ಪ ಹರಿಜನ

ಗ್ರಾಮೀಣ ಭಾಗದ ದಿಟ್ಟ ಪ್ರತಿಭೆ ಕೆಂಪವ್ವ ಯಲ್ಲಪ್ಪ ಹರಿಜನ, ನಾಡಿನುದ್ದಕ್ಕೂ ಸಣ್ಣಾಟ ಕಲೆಯ ಕಂಪು ಸೂಸಿ ಕಲಾರಸಿಕರ ಮನಗೆದ್ದ ಅಪೂರ್ವ ಕಲಾವಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅರಭಾವಿಯ ಕೆಂಪವ್ವ ಹರಿಜನ ಕಲೆಯನ್ನೇ ಅಕ್ಷರವಾಗಿ ಕಲಿತು ಬೆಳಗಿದಾಕೆ. ಸಣ್ಣಾಟ ಕಲೆ ಕರಗತ ಮಾಡಿಕೊಂಡ ಕೆಂಪವ್ವ ‘ಸಂಗ್ಯಾ-ಬಾಳ್ಯಾ’ ಹಾಗೂ ರಾಧಾನಾಟ ಸಣ್ಣಾಟಗಳಲ್ಲಿ ಚಿಮನಾ ಪಾತ್ರಧಾರಿ, ಹಾಡುಗಾರಿಕೆ-ಕುಣಿತದಲ್ಲೂ ಸೈ ಎನಿಸಿಕೊಂಡ ಪ್ರತಿಭೆ. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿ ಸಣ್ಣಾಟ ಕಲೆಯ ಮೂಲಕ ಭಾಷಾ ಬಾಂಧವ್ಯವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. ಚೆನ್ನೈ, ದೆಹಲಿ, ಮುಂಬಯಿ, ಕಾಸರಗೋಡು, ಸೊಲ್ಲಾಪುರದಲ್ಲೂ ಕಲಾಪ್ರದರ್ಶನ. ನೂರಕ್ಕೂ ಅಧಿಕ ಜನರಿಗೆ ಕಲಾನಿರ್ದೇಶನ ಮಾಡಿದ ಗುರುಮಾತೆ. ನಾಲ್ಕು ದಶಕದಿಂದ ಸಣ್ಣಾಟ ಕಲಾಸೇವಾನಿರತೆ. ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಕ್ಕೂ ಅಧಿಕ ರಾಜ್ಯ ಪ್ರಶಸ್ತಿಗಳು, ೨೩ಕ್ಕೂ ಹೆಚ್ಚು ಜಿಲ್ಲಾ ಪ್ರಶಸ್ತಿ-ನೂರಾರು ಗೌರವ ಸನ್ಮಾನಗಳಿಂದ ಭೂಷಿತ ಕಲಾವಂತೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ಡಾ. ಸಿ.ಎನ್. ಮಂಚೇಗೌಡ

ಸಹಕಾರ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ ಮಹನೀಯರು ಡಾ. ಸಿ.ಎನ್. ಮಂಚೇಗೌಡ. ಅಪಾರ ತಜ್ಞತೆ, ದಕ್ಷತೆ, ವೃತ್ತಿಪರತೆಯಿಂದ ಸಾಧನೆಗೈದ ಕರ್ನಾಟಕದ ಕುರಿಯನ್.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪುಟ್ಟಹಳ್ಳಿಯಲ್ಲಿ ಜನಿಸಿದ ಮಂಚೇಗೌಡರು ಬಿಎಸ್ಸಿ ಪದವೀಧರರು, ಡೈರಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಸಂಶೋಧಕರು. ಯಲಹಂಕ ಹಾಗೂ ಬೆಂಗಳೂರು ಡೈರಿಯ ಕಾರ್ಯನಿರ್ವಾಹಕರಾಗಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ನಿಸ್ಪೃಹ ಸೇವೆ. ನಂದಿನಿ ಬ್ರಾಂಡ್ನ ರೂವಾರಿ. ಮುದ್ರಾ ಎಮ್ಮೆ ತಳಿಯಿಂದ ಬೆಂಗಳೂರು ಡೈರಿ ಉತ್ಪಾದನೆ ಹೆಚ್ಚಿಸಿದ ಹೆಗ್ಗಳಿಕೆ. ವಿದೇಶಗಳಿಂದ ವಿಶೇಷ ಪಶುತಳಿಗಳನ್ನು ತಂದು ಕ್ಷೀರಕ್ರಾಂತಿಗೆ ಕಾರಣೀಕರ್ತರಾದ ಅಗ್ಗಳಿಕೆ. ಬೆಂಗಳೂರು ಡೈರಿಗೆ ಅತ್ಯುತ್ತಮ ಡೈರಿ ರಾಷ್ಟ್ರಪತಿ ಪ್ರಶಸ್ತಿ ತಂದುಕೊಟ್ಟ ಸಾರ್ಥಕತೆ, ರಾಷ್ಟ್ರಪತಿಗಳ ಮೆರಿಟ್ ಅವಾರ್ಡ್, ಗ್ಲೋಬಲ್ ಉದ್ಯೋಗ ಅವಾರ್ಡ್, ಕೆಂಪೇಗೌಡ ಪ್ರಶಸ್ತಿ, ತುಮಕೂರು ವಿವಿ ಗೌರವ ಡಾಕ್ಟರೇಟ್ಗೆ ಭಾಜನರಾದ ಮಂಚೇಗೌಡರು ಭಾರತ ಸರ್ಕಾರದ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಹೆಮ್ಮೆಯ ಕನ್ನಡಿಗರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಚಿಂದಿ ವಾಸುದೇವಪ್ಪ

ಮೀನು ಕೃಷಿ ವಿಜ್ಞಾನದಲ್ಲಿ ರಾಷ್ಟ್ರದಲ್ಲೇ ಅಚ್ಚಳಿಯದ ಹೆಸರು ಡಾ. ಚಿಂದಿ ವಾಸುದೇವಪ್ಪ, ಪ್ರಖರ ಪಾಂಡಿತ್ಯ, ದಕ್ಷ ಆಡಳಿತ, ಜ್ಞಾನದ ಶಿಖರವೆನಿಸಿದ ಕೃಷಿ ತಜ್ಞರು.
ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಮಲೆನಾಡಿನ ಕೊಡುಗೆ ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಹುಟ್ಟೂರು. ತವರೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮಂಗಳೂರು ವಿವಿಯಲ್ಲಿ ಮೀನುಗಾರಿಕೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ. ಕೇರಳದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಎಚ್ಡಿ ಪಡೆದ ಬಳಿಕ ಅನೇಕ ಕೃಷಿ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ನಿರಂತರ ಸೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ನಿರ್ದೇಶಕ- ಸಲಹೆಗಾರರಾಗಿಯೂ ದುಡಿದ ಕೀರ್ತಿ, ಬೆಂಗಳೂರು ಕೃಷಿ ವಿವಿಯ ಡೀನ್ ಆಗಿದ್ದ ಡಾ. ಚಿಂದಿ ವಾಸುದೇವಪ್ಪ ಹರಿಯಾಣದ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಭಿವೃದ್ಧಿಗೆ ಜ್ಞಾನಧಾರೆಯೆರೆದ ವಿಶ್ರಾಂತ ಕುಲಪತಿಗಳು,

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಉಡುಪಿ ಶ್ರೀನಿವಾಸ

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಕೀರ್ತಿ ಬೆಳಗಿದ ಸಾಧಕಚೇತನ ಪ್ರೊ. ಉಡುಪಿ ಶ್ರೀನಿವಾಸ, ನಾಡಿನ ಅತ್ಯುತ್ತಮ ಅಭಿಯಂತರರು, ವೈಜ್ಞಾನಿಕ ಸಂಶೋಧಕರು ಮತ್ತು ದಕ್ಷ ಉದ್ಯಮಿ.
ಉಡುಪಿಯಲ್ಲಿ ೧೯೪೭ರ ಫೆಬ್ರವರಿ ೧೪ರಂದು ಜನಿಸಿದ ಶ್ರೀನಿವಾಸ ಬಡಕುಟುಂಬದ ಕೂಸು. ಅಕ್ಷರದಿಂದಲೇ ಅರಳಿದ ಮೇರು ಪ್ರತಿಭೆ, ಶಾಲಾ ದಿನಗಳಿಂದಲೂ ಅತ್ಯುತ್ತಮ ವಿದ್ಯಾರ್ಥಿಯಾದ ಉಡುಪಿ ಶ್ರೀನಿವಾಸ ಮದ್ರಾಸ್ನ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್., ಎಂ.ಟೆಕ್. ಮಾಡಿದರು. ಬೆಂಗಳೂರು ಐಐಎಸ್ಸಿಯಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದ ಪ್ರತಿಭಾಶಾಲಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನಾ ಸಿಬ್ಬಂದಿಯಾಗಿ ವೃತ್ತಿ ಬದುಕು ಆರಂಭಿಸಿ ಸಹಾಯಕ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಅನನ್ಯ ಸೇವೆ. ಭಾರತಕ್ಕೆ ಕ್ಯಾಪಿಡ್ ಪ್ರೋಟೋಟೈಪಿಂಗ್ ಪರಿಚಯಿಸಿದ ಮಹನೀಯರು, ತಂತ್ರಜ್ಞಾನದ ಹಲವು ಉಪಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವಿಮರ್ಶೆ

ಕೆ.ವಿ. ಸುಬ್ರಮಣ್ಯಂ

ಕೆವಿಎಸ್ ಎಂದೇ ಗುರುತಿಸಲ್ಪಡುವ ಕೆ. ವಿಸುಬ್ರಮಣ್ಯಂ ನಾಡಿನ ಸುಪ್ರಸಿದ್ಧ ಕಲಾಚಿಂತಕರು, ಕುಂಚ-ಲೇಖನಿ ಎರಡರಿಂದಲೂ ಕಲಾವಲಯದಲ್ಲಿ ಹೆಸರು ಮಾಡಿರುವ ಸಾಧಕರು. ನಿರಂತರ ಶೋಧನೆ, ಪರಿಪೂರ್ಣ ಕಲಾವ್ಯಕ್ತಿತ್ವ ಕೆಎಎಸ್ ಅವರ ವೈಶಿಷ್ಟ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಾಗಟ ಅಗ್ರಹಾರ ಸುಬ್ರಮಣ್ಯಂ ಅವರ ಮೂಲ ನೆಲೆ. ಬಾಲ್ಯದಲ್ಲೇ ಸಾಹಿತ್ಯ- ಕಲೆಯ ಬಗೆಗೆ ಆಸಕ್ತಿ. ಬಿ.ಎ, ಎ.ಸಿ.ಬಿ ಪದವೀಧರರು. ೧೯೬೯ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ. ಕಲಾಕೃತಿಗಳ ರಚನೆ, ಕಲಾವಿಮರ್ಶೆ ನೆಚ್ಚಿನ ಕಾರ್ಯಕ್ಷೇತ್ರ ಕರ್ನಾಟಕ ಚಿತ್ರಕಲಾ ಪರಿಷತ್ತು, ರಾಷ್ಟ್ರೀಯ ಕಲಾಮೇಳ ಮತ್ತಿತರೆಡೆ ಕಲಾಕೃತಿಗಳ ಪ್ರದರ್ಶನದಿಂದ ಮುಂಚೂಣಿಗೆ, ದೃಶ್ಯಕಲೆಯ ಕಲಾವಿಮರ್ಶಕರಾಗಿ ನಾಲ್ಕು ದಶಕಕ್ಕೂ ಮೀರಿದ ಅನನ್ಯ ಸೇವೆ. ವೆಂಕಟಪ್ಪ ಪುನರಾವಲೋಕನ, ದೃಶ್ಯಧ್ಯಾನ, ಲಲಿತಕಲೆಗಳು, ಆಧುನಿಕ ಶಿಲ್ಪಕಲೆ ಮುಂತಾದ ಮಹತ್ವದ ಕೃತಿಗಳ ರಚನಕಾರರು.ಜನಪ್ರಿಯ ಅಂಕಣಕಾರರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ, ಗೌರವ ಫೆಲೋಶಿಪ್, ಕಲಾಧ್ಯಾನ ಪುರಸ್ಕಾರಗಳಿಂದ ಭೂಷಿತರು.

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎನ್.ಡಿ. ಪಾಟೀಲ

ಸರ್ಕಾರಿ ಕೆಲಸದ ನಡುವೆಯೂ ಪರಿಸರ ರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡವರು ಎನ್.ಡಿ. ಪಾಟೀಲ. ೨೦ ಸಾವಿರಕ್ಕೂ ಅಧಿಕ ಸಸಿಗಳ ನೆಟ್ಟು ಪೋಷಿಸಿದ ಪರಿಸರ ಸಂರಕ್ಷಕ.
ವಿಜಯಪುರ ಜಿಲ್ಲೆಯ ಡೂಮನಾಳದ ನಾನಾಸಾಹೇಬ ದ್ಯಾಮನಗೌಡ ಪಾಟೀಲರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೩ರಂದು. ಬಿ.ಎ. ಪದವೀಧರರು. ವೃತ್ತಿ ಕಂದಾಯ ಇಲಾಖೆಯ ಸರ್ಕಾರಿ ನೌಕರಿ, ಪ್ರವೃತ್ತಿ ಪರಿಸರ ಸಂರಕ್ಷಣೆ. ೩೮ ವರ್ಷಗಳ ಸುದೀರ್ಘ ಸೇವಾವಧಿಯ ಉದ್ದಕ್ಕೂ ಸಸಿಗಳ ಪೋಷಣೆಗೈದ, ನಿವೃತ್ತಿಯ ಹಣವನ್ನೆಲ್ಲಾ ಗಿಡಗಳನ್ನು ನೆಡಲು ವ್ಯಯಿಸಿದ ಪರಿಸರಪ್ರೇಮಿ. ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ ಸಾರ್ಥಕತೆ. ಬೆಂಗಳೂರಿನ ತಿಂಡ್ಲುವಿನಲ್ಲೂ ೩೩೦ ಸಸಿ ನೆಟ್ಟಿರುವ ಎನ್.ಡಿ. ಪಾಟೀಲರ ಪರಿಸರಪೂರಕ ಚಟುವಟಿಕೆಗಳಿಗೆ ಆದಿ ಮಾತ್ರ ಅಂತ್ಯವೆಂಬುದೇ ಇಲ್ಲ. ಅನುದಿನ ಅನುಕ್ಷಣ ಪರಿಸರದ್ದೇ ಧ್ಯಾನ, ಸಂರಕ್ಷಣೆಯದ್ದೇ ಆಲೋಚನೆ. ಜಿಲ್ಲಾ ರಾಜ್ಯ ಮಟ್ಟದ ಹಲವು ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾಗಿರುವ ಪಾಟೀಲರು ನೈಜ ಪರಿಸರಮಿತ್ರ

Categories
ಗುಡಿ ಕೈಗಾರಿಕೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನವರತ್ನ ಇಂದುಕುಮಾರ್

ಗುಡಿಕೈಗಾರಿಕೆಯ ಹಿರಿಮೆಯನ್ನು ಸಾರಿದ ಪಾರಂಪರಿಕ ಕರಕುಶಲ ಕಲಾವಿದೆ ನವರತ್ನ ಇಂದುಕುಮಾರ್. ಗೊಂಬೆ ಮತ್ತು ಹೂಗುಚ್ಛಗಳ ತಯಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
ಚಿಕ್ಕಮಗಳೂರಿನ ವಾಸಿಗಳಾದ ನವರತ್ನ ಇಂದುಕುಮಾರ್ ಹಿಂದಿ ರಾಷ್ಟ್ರಭಾಷಾ ವಿಶಾರದರು, ಬಾಲ್ಯದಿಂದಲೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ವಿಶೇಷ ಆಸಕ್ತಿ, ಗೊಂಬೆ ಮತ್ತು ಹೂಗುಚ್ಛ ತಯಾರಿಕೆಯಲ್ಲಿ ಕಲಾನೈಪುಣ್ಯತೆ, ಬಟ್ಟೆ ಮತ್ತು ವುಡ್‌ವುಲ್‌ನಲ್ಲಿ ಗೊಂಬೆಗಳ ತಯಾರಿಸುವ ಭಾರತದಲ್ಲಿರುವ ಅಪರೂಪದ ಮೂವರು ಕಲಾವಿದರಲ್ಲಿ ಒಬ್ಬರೆಂಬುದು ನಾಡಿನ ಹೆಮ್ಮೆ, ಗಾಜು ಮತ್ತು ಮರದ ಮೇಲೆ ಪೈಂಟಿಂಗ್, ಉಬ್ಬು ಚಿತ್ರಗಳ ರಚನೆ, ಪಂಪನ ಆದಿಪುರಾಣದ ೩೨ ದೃಶ್ಯಗಳು, ಹೊಂಬುಜ ಪದ್ಮಾವತಿಯ ೨೪ ಕೈಗಳುಳ್ಳ ಚಾಮುಂಡೇಶ್ವರಿ, ಯಕ್ಷಗಾನದ ಗೊಂಬೆಗಳು, ಶಿಲಾಬಾಲಿಕೆಯರು, ಜಾನಪದ ಗೊಂಬೆಗಳು ಸೇರಿ ಸಾವಿರಾರು ಗೊಂಬೆಗಳ ರಚನೆ, ಗೊಂಬೆ ತಯಾರಿಕೆ- ಎಂಬೋಸಿಂಗ್ ಬಗ್ಗೆ ಯುವಪೀಳಿಗೆಗೆ ತರಬೇತಿ.ವೇದಿಕೆಗಳ ನಿರ್ಮಾಣದಲ್ಲೂ ನಿಸ್ಸಿಮರು, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದ ವೇದಿಕೆ ಮುಂತಾದ ವೇದಿಕೆಗಳು ಇವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ. ರಾಜ್ಯ-ಹೊರರಾಜ್ಯಗಳಲ್ಲಿನ ಅನೇಕ ಉತ್ಸವಗಳಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸಿರುವ ನವರತ್ನ ಅವರು ಸಾಂಸ್ಕೃತಿಕ ಸಂಘಟನೆ-ಬರಹದಲ್ಲೂ ತೊಡಗಿಕೊಂಡಿರುವ ಬಹುಮುಖ ಪ್ರತಿಭೆ. ಹತ್ತಾರು ಪ್ರಶಸ್ತಿಗಳಿಂದ ಭೂಷಿತರು.

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪರೆಡ್ಡಿ ಅಮರನಾರಾಯಣ

ಪರಿಸರ ಸಂರಕ್ಷಣೆ-ಪೋಷಣೆಗಾಗಿ ಶ್ರಮಿಸಿದ ವಿರಳಾತಿವಿರಳ ನಿವೃತ್ತ ಐ.ಎ.ಎಸ್. ಕೆಂಪರೆಡ್ಡಿ ಅಮರನಾರಾಯಣ. ಪ್ರತಿದಿನವೂ ಪರಿಸರದಿನವಾಗಬೇಕೆಂಬ ಉದ್ವೇಷವನ್ನು ನಿಜವಾಗಿಸಿದ ಅಪ್ಪಟ ಹಸಿರು ಜಿಲ್ಲಾಧಿಕಾರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದ ಕೆಂಪರೆಡ್ಡಿ ಅಮರನಾರಾಯಣರು ಸ್ನಾತಕೋತ್ತರ ಪದವಿ, ಎಲ್.ಎಲ್.ಬಿ. ಬಳಿಕ ಇಂಗ್ಲೆಂಡ್ನ ಲೆಸ್ಟರ್ ವಿವಿಯಲ್ಲಿ ಟಿ.ಸಿ.ಟಿ. ಫೆಲೋಶಿಪ್ ಪಡೆದು ಐ.ಎ.ಎಸ್. ಅಧಿಕಾರಿಯಾದವರು. ಬಾಲ್ಯದಿಂದಲೂ ಉತ್ಕಟ ಪರಿಸರ ಪ್ರೇಮ. ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಅಮರನಾರಾಯಣ ಅವರು ಜಾರಿಗೊಳಿಸಿದ ಪರಿಸರಪೂರಕ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ. ಕೋಟಿನಾಟ, ಕೃಷಿ ಅರಣ್ಯ, ವೃಕ್ಷ ರಕ್ಷ, ಕಲ್ಲರಳಿ ಹಣ್ಣಾಗಿ, ಪರಿಮಳ ವನ, ದುರ್ಗದ ಮೊರೆ-ಹಸಿರಿಗೆ ಕೆರೆ, ಸ್ವಚ್ಛತೆಯೆ ಸ್ವರ್ಗ, ಕಸದಿಂದ ಕಾಸು, ಪ್ಲಾಸ್ಟಿಕ್ ಮುಕ್ತ ವಲಯ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಸರಮಿತ್ರ ಕಲ್ಯಾಣಿಗಳ ಜೀರ್ಣೋದ್ಧಾರ, ಉದ್ಯಾನವನಗಳ ರಕ್ಷಣೆ, ೩೫ ಸಾವಿರಕ್ಕೂ ಹೆಚ್ಚು ಸಸಿ, ೧೪೦೦ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದ, ನಿವೃತ್ತಿಯ ನಂತರವೂ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರು.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ರಾಮಪ್ಪ ಬ. ಪಾಟೀಲ

ಭೂತಾಯಿ ಮಕ್ಕಳ ಹಿತರಕ್ಷಣೆಗೆ ಬದುಕನ್ನೆ ಮೀಸಲಿಟ್ಟ ರೈತಪರ ಚಿಂತಕ ಡಾ. ಸಿದ್ರಾಮಪ್ಪ ಬ. ಪಾಟೀಲ. ಕೃಷಿ ಸಾಹಿತಿ, ಸಂಘಟನಾಕಾರರಾಗಿ ಅವರದ್ದು ಅನನ್ಯ ಸೇವೆ.
ಕಲಬುರಗಿ ತಾಲ್ಲೂಕಿನ ಶಾಂತಿನಗರದವರಾದ ಸಿದ್ರಾಮಪ್ಪ ಬಿ.ಎ., ಎಲ್ಎಲ್ಬಿ ಪದವೀಧರರು. ಆದಾಯ ತರುವ ವಕಾಲತ್ತು ತೊರೆದು ರೈತಪರ ಹೋರಾಟಕ್ಕೆ ಧುಮುಕಿದವರು. ಸಾವಯವ ಕೃಷಿಗೆ ಬೆಂಬಲ, ರೈತಪರ ಹೋರಾಟದ ಮುಂದಾಳತ್ವ, ನೊಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವಿಕೆ, ಚಳವಳಿಗಳಿಗೆ ರೈತರ ಸಂಘಟನೆ-ರವಾನೆ, ಕೃಷಿಕರಿಗಾಗಿಯೇ ಕವನ ರಚನೆ, ಆಳಂದ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಸೇವೆ. ಬಸವತತ್ವ ಪ್ರಚಾರ, ಹತ್ತಾರು ಸಂಘಟನೆಗಳಲ್ಲಿ ಸೇವೆ ಮುಂತಾದ ಬಹುಕೃತ ಸಾಮಾಜಿಕ ಕಾರ್ಯಗಳಲ್ಲಿ ಬಹುದಶಕಗಳಿಂದಲೂ ತನ್ಮಯರಾಗಿರುವ ಸಿದ್ರಾಮಪ್ಪ ರೈತರಿಗಾಗಿ ಕಾರಾಗೃಹವಾಸ ಅನುಭವಿಸಿದ ರೈತರಕ್ಷಕ. ಭಾರತ ಕೃಷಿಕ ಸಮಾಜದ ಸದಸ್ಯರಾಗಿ 30 ವರ್ಷಗಳಿಂದ ಸೇವೆಗೈಯುತ್ತಿರುವ, ಗೌರವ ಡಾಕ್ಟರೇಟ್ಗೆ ಪಾತ್ರವಾಗಿರುವ ರೈತಜೀವಿ.

Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ವೆಂಕಟಾಚಲಪತಿ

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರತೆಯಿಂದ ಹೆಸರಾದವರು ಎಸ್.ಕೆ.ವೆಂಕಟಾಚಲಪತಿ. ಬಡಕಕ್ಷಿದಾರರ ಪಾಲಿನ ಆಪತ್ಬಾಂಧವರು. ಎಸ್.ಕೆ.ವೆಂಕಟಾಚಲಪತಿ ಅವರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು. ಬಹು ದಶಕಗಳಿಂದಲೂ ನ್ಯಾಯಾಂಗದಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವವರು. ಬಡವರು, ನಿರ್ಗತಿಕರು, ದೇವಸ್ಥಾನಗಳು ಮತ್ತು ಧಾರ್ಮಿಕ ಪ್ರಕರಣಗಳಲ್ಲಿ ಹಣ ಪಡೆಯದೇ ಉಚಿತವಾಗಿ ಕಾನೂನು ಸೇವೆಯಲ್ಲಿ ನೀಡುವ ಅಪರೂಪದ ವಿರಳಾತಿ ವಿರಳ ನ್ಯಾಯವಾದಿ. ಬೆಂಗಳೂರಿನಲ್ಲಿ ನೆಲೆನಿಂತಿರುವ ವೆಂಕಟಾಚಲಪತಿಗಳು ಎಂದಿಗೂ ಕಕ್ಷಿದಾರರಿಗೆ ಹೊರೆಯಾಗಿದ್ದಿಲ್ಲ. ಕಕ್ಷಿದಾರರ ಆರ್ಥಿಕ ಸ್ಥಿತಿಗನುಗುಣವಾಗಿ ಕಾನೂನು ಸೇವೆ ಒದಗಿಸುವುದು ಅವರ ಹೆಚ್ಚುಗಾರಿಕೆ ಹಾಗೂ ಹೃದಯ ವೈಶಾಲ್ಯತೆಗೆ ಸಾಕ್ಷಿ, ತಮ್ಮನ್ನು ಸಂಪರ್ಕಿಸುವ ಬಡವರಿಗೆ ಯಾವುದೇ ಹೊರೆಯಾಗದಂತೆ ಎಚ್ಚರವಹಿಸುವ ಅವರು ಉಚಿತ ಸೇವೆ ನೀಡುವುದರ ಜತೆಗೆ ಬದುಕಿನಲ್ಲಿ ಭರವಸೆಯನ್ನೂ ತುಂಬುವುದು ಬಲು ವಿಶಿಷ್ಟ. ನ್ಯಾಯಾಂಗದಲ್ಲಿ ಹಿರಿತನವುಳ್ಳ ವೆಂಕಟಾಚಲಪತಿ ಅವರು ನ್ಯಾಯದಾನ ವ್ಯವಸ್ಥೆಯ ಘನತೆ ಮತ್ತು ಅಂತಃಕರಣವನ್ನು ಹೆಚ್ಚಿಸಿದ ಅಪರೂಪದ ನ್ಯಾಯವಾದಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬಿ.ಜಿ. ಮೋಹನ್‌ದಾಸ್

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯ ಅನ್ವರ್ಥಕವಾಗಿರುವವರು ಬಿ.ಜಿ.ಮೋಹನ್‌ದಾಸ್. ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆಯ ಕನ್ನಡಿಗ.
ದಕ್ಷಿಣ ಕನ್ನಡದ ಅಪ್ಪಟ ಕನ್ನಡಾಭಿಮಾನಿ ಮೋಹನ್‌ದಾಸ್, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬಿಜೂರು ಹುಟ್ಟೂರು. ಹುಟ್ಟಿನಿಂದಲೇ ಕನ್ನಡವೆಂದರೆ ಪಂಚಪ್ರಾಣ. ಮಣಿಪಾಲದಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಅಲ್ಪಕಾಲದ ಸೇವೆ. ಜೇಸಿಸ್ ಸಂಸ್ಥೆಯಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸಂಘಟನಾನುಭವ ಗಳಿಕೆ. ಆನಂತರ ಬದುಕು ಅರಸಿ ದುಬೈಗೆ, ಪರದೇಶದಲ್ಲಿ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ದೃಢಸಂಕಲ್ಪ, ಕೊಲ್ಲಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ಹೊರನಾಡ ಕನ್ನಡಿಗರ ಧ್ವನಿಯಾದವರು. ೧೯೮೫ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ೮೯ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು, ಗಲ್ಫ್ ವಾರ್ತೆ ಡಾಟ್ ಕಾಂ, ಗಲ್ಫ್ ಕನ್ನಡಿಗ ಅಂತರ್ಜಾಲ ಸುದ್ದಿಪತ್ರಿಕೆಯ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಸ್ತುತ್ಯಾರ್ಹ ಕಾರ್ಯ. ವಿದೇಶಿ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಾರ್ಥಕ ಸೇವೆ. ಪ್ರತಿಷ್ಠಿತ ಮಯೂರ ಪ್ರಶಸ್ತಿ, ಮಣಿಪಾಲ ವಿವಿಯ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾಗಿರುವ ಮೋಹನದಾಸ್ರ ಕನ್ನಡಸೇವೆ ಸರ್ವಕಾಲಕ್ಕೂ ಮಾದರಿಯೇ.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ

ಕೃಷಿ ಕ್ಷೇತ್ರದ ಅನನ್ಯ ಸಾಧಕಿಯರಲ್ಲಿ ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ಪ್ರಮುಖರು. ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲದಂತಹ ಕೃಷಿ ಕ್ಷೇತ್ರ ಸ್ಥಾಪಿಸಿದ ಹೆಮ್ಮೆಯ ರೈತಮಹಿಳೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲೂರು ತಾಲ್ಲೂಕಿನ ಬಿ.ಜಿ. ಕೆರೆಯವರಾದ ಸುಮಂಗಲಮ್ಮ ಓದಿದ್ದು ಪಿಯುಸಿವರೆಗೆ ಮಾತ್ರ ಆದರೆ ಸಾಧನೆ ವಿವಿ ಮಟ್ಟದ್ದು. ೮೦ ಎಕರೆ ವಿಶಾಲವಾದ ಜಾಗದಲ್ಲಿ ತಮ್ಮದೇ ‘ವಸುಂಧರ ಕೃಷಿ ಕ್ಷೇತ್ರ’ ಸ್ಥಾಪಿಸಿದ ಕೃಷಿಪಂಡಿತೆ. ತೆಂಗು ಬೆಳೆ, ಹುಣಸೆ ಮರಗಳ ಪೋಷಣೆ, ರೇಷ್ಮೆ ಬೆಳೆ, ರೇಷ್ಮೆ ಹುಳುಗಳ ಸಾಕಾಣಿಕೆ, ಅರಣ್ಯ ಬೆಳೆಗಳ ಅಭಿವೃದ್ಧಿ, ಪಶುಸಂಗೋಪನೆ, ಮೇಕೆ ಸಾಕಾಣಿಕೆ, ಎರೆಹುಳು ಗೊಬ್ಬರ ಮತ್ತು ಜೇನು ಸಾಕಾಣಿಕೆಯಲ್ಲಿ ಅನವರತ ನಿರತರು. ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ ಪರವಾನಿಗೆ ಪಡೆದ ಮೊದಲ ಮಹಿಳೆ, ೬೦ ಕೃಷಿ ಕಾರ್ಮಿಕರ ಅನ್ನದಾತೆ. ನಲವತ್ತು ವರ್ಷಗಳಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸುಮಂಗಲಮ್ಮ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಉತ್ತಮ ಸಾಧಕಿ ಮತ್ತಿತರ ಗೌರವಗಳ ಪುರಸ್ಕೃತರು.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸೂರಜಸಿಂಗ್ ಕನ್ಸಿಂಗ್ ರಜಪೂತ

ಸಾವಯವ ಕೃಷಿಯಲ್ಲಿ ಅಚ್ಚರಿಯ ಸಾಧನೆಗೈದವರು ಸೂರಜಸಿಂಗ್ ರಜಪೂತ, ಗೋ ಆಧಾರಿತ ಒಕ್ಕಲುತನದ ಮೂಲಕ ಗಮನಸೆಳೆದಿರುವ ಪ್ರಗತಿಪರ ಕೃಷಿಕ.
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದ ಸೂರಜ್ ಸಿಂಗ್ ಹಿರಿಯ ಹೋರಾಟಗಾರರು. ೧೯೫೨ರ ಫೆಬ್ರವರಿ ೨ರಂದು ಕೃಷಿಕುಟುಂಬದಲ್ಲಿ ಜನನ. ಸೇನೆ ಸೇರುವ ಕನಸು ನನಸಾಗದಾಗ ಕೃಷಿಯತ್ತ ಒಲವು. ೧೯೯೭ರಲ್ಲಿ ಒಂದೂವರೆ ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದು ಪಡೆದ ಐದು ಲಕ್ಷ ರೂಪಾಯಿ ಆದಾಯದಿಂದ ಖರೀದಿಸಿದ ಆರು ಎಕರೆ ಭೂಮಿಯಲ್ಲಿ ಹಣ್ಣು ಮತ್ತು ತರಕಾರಿಯ ಭರ್ಜರಿ ಇಳುವರಿ ತೆಗೆದವರು. ಆರು ಸಾವಿರ ಗಿಡಗಳ ನೆಡುವಿಕೆ, ೩೦ ಗೋವುಗಳ ಪೋಷಣಾನಿರತ ಸೂರಜಸಿಂಗ್ರ ನಿರಂತರ ಹೊಸತನ, ಪ್ರಯೋಗಶೀಲತೆ ಬೇಸಾಯಗಾರರಿಗೆ ಸದಾ ಮಾದರಿ, ನಾಲ್ಕು ದಶಕಗಳಿಂದಲೂ ಸಾವಯವ ಕೃಷಿಯಲ್ಲೇ ತನ್ಮಯರಾಗಿರುವ ಸೂರಜಸಿಂಗ್ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸದಸ್ಯತ್ವ ಸೇರಿ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಗಂಗಾಧರ ಬೇವಿನಕೊಪ್ಪ

ತಾಂತ್ರಿಕ ತಜ್ಞ ಉದ್ಯಮಿ, ಚತುರ ಸಂಘಟನಾಕಾರರಾದ ಗಂಗಾಧರ ಬೇವಿನಕೊಪ್ಪ ಅವರು ‘ಗಾಂಧಿ’ ಎಂಬ ವಿಶೇಷ ನಾಮದಿಂದಲೇ ಚಿರಪರಿಚಿತರು. ವಿದೇಶದಲ್ಲಿ ನಾಡಿನ ಕೀರ್ತಿ, ಧೀಶಕ್ತಿಯನ್ನು ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ,
ಗಂಗಾಧರ ಬೇವಿನಕೊಪ್ಪ ಗಡಿನಾಡಿನ ಪ್ರತಿಭೆ, ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಬಳಿಯ ಕೆಂಗನೂರು ಹುಟ್ಟೂರು. ಬಾಲ್ಯದಿಂದಲೂ ಪ್ರಖರ ಬುದ್ಧಿವಂತಿಕೆ. ಆಸ್ಟ್ರೇಲಿಯಾದ ಡೇಕಿನ್ ವಿ.ವಿ ಯ ಬಿ.ಟೆಕ್ ಪದವೀಧರರು. ಟೂಲ್ ಅಂಡ್ ಡೈ ಮೇಕಿಂಗ್‌ನಲ್ಲಿ ಡಿಪ್ಲೋಮಾ ಪಡೆದವರು. ತಾಂತ್ರಿಕ ಪರಿಣಿತಿ-ಅನುಭವದ ಆಧಾರದ ಮೇರೆಗೆ ಆಸ್ಟ್ರೇಲಿಯಾದ ಮೇಲ್ಬರ್ನನಲ್ಲಿ ದುಡಿಮೆ, ೧೯೯೪ರಲ್ಲಿ ಸ್ವಂತ ಉದ್ದಿಮೆ ಕೊಪ್ಪ ಇಂಜಿನಿಯರಿಂಗ್‌ ಸಂಸ್ಥೆ ಸ್ಥಾಪನೆ-ಯಶಸ್ಸು. ಆನಂತರ ಮೌಲ್ಡಿಂಗ್ ವಸ್ತುಗಳನ್ನು ಉತ್ಪಾದಿಸುವ ಬೆವ್ ಪ್ಲಾಸ್ಟಿಕ್ಸ್ ಸ್ಥಾಪಿಸಿ ಉನ್ನತ ಸಾಧನೆ. ಅನಿವಾಸಿ ಭಾರತೀಯರು ನೆಲೆನಿಲ್ಲಲು ನೆರವಾದ ಸಹೃದಯಿ. ಮೇಲ್ಬರ್ನ್ ಕನ್ನಡ ಸಂಘ, ವಿವೇಕಾನಂದ ಯೋಗ ಕೇಂದ್ರ, ಬಸವ ಸಮಿತಿ, ರೋಟರಿ ಕ್ಲಬ್‌ ಮತ್ತಿತರ ಹಲವು ಸಾಮಾಜಿಕ, ವೃತ್ತಿಪರ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂಘಟಕರಾಗಿ ಪರಿಶ್ರಮ-ಸಾರ್ಥಕ ಸೇವೆ ಸಲ್ಲಿಸಿದ ಅದಮ್ಯ ಉತ್ಸಾಹದ ಮಾದರಿ ತಂತ್ರಜ್ಞ ಉದ್ಯಮಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಹೆಚ್.ಎಂ. ವೆಂಕಟಪ್ಪ

ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸಾರ್ಥಕತೆ ಕಂಡವರು ಡಾ|| ಹೆಚ್.ಎಂ. ವೆಂಕಟಪ್ಪ. ನಿಸ್ಪೃಹ ಸೇವೆ, ದಕ್ಷ ಆಡಳಿತ, ಅತ್ಯುತ್ತಮ ಪರಿಚಾರಿಕೆಗೆ ಹೆಸರಾದ ವೈದ್ಯಶಿರೋಮಣಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದವರಾದ ವೆಂಕಟಪ್ಪ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಬಿ.ಎಂ.ಸಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಸೇವೆ ಆರಂಭ, ಸತತ ೨೪ ವರ್ಷಗಳ ಕಾಲ ಹಳ್ಳಿಗರ ಜೀವರಕ್ಷಕರಾಗಿ ಸಾರ್ಥಕ ಸೇವೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ ವೈದ್ಯಾಧಿಕಾರಿ, ಬೆಂಗಳೂರಿನ ಕುಷ್ಟರೋಗಿಗಳ ಆಸ್ಪತ್ರೆಯಲ್ಲೂ ಮಾನವೀಯ ಸೇವೆ. ೧೯೯೪ರಲ್ಲಿ ಸ್ವಯಂ ನಿವೃತ್ತಿ, ಬೆಂಗಳೂರಿನ ಎರಡು ಕಡೆ ಅತ್ಯಾಧುನಿಕ ಉಪಕರಣಗಳುಳ್ಳ ಕಣ್ವ ಡಯಾಸ್ಪೋಸ್ಟಿಕ್ ಕೇಂದ್ರ’ ಸ್ಥಾಪನೆ. ಕಡಿಮೆ ದರದಲ್ಲಿ ವೈದ್ಯಕೀಯ ತಪಾಸಣೆ-ಪರಿಣಿತರಿಂದ ಮಾಹಿತಿ-ಮಾರ್ಗದರ್ಶನ ನೀಡುವ ಕಾಯಕದಲ್ಲಿ ಇದೀಗ ನಿರತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಂತ ಮುನ್ನೊಳ್ಳಿ

ವರ್ಣಚಿತ್ರಕಲೆಯಲ್ಲಿ ತಮ್ಮದೇ ಅಚ್ಚಳಿಯದ ಛಾಪು ಮೂಡಿಸಿದ ಕಲಾಕುಸುಮ ಜಯಂತ ಮುನ್ನೊಳ್ಳಿ. ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ಸಂಚಲನ ಮೂಡಿಸಿದ ಸಾಧಕ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ಜಯಂತ ಮುನ್ನೊಳ್ಳಿ ಬಹುಭಾಷಾ ಪ್ರವೀಣರು. ಆಫ್ರಿಕನ್ ಭಾಷೆಯನ್ನೂ ಬಲ್ಲವರು. ೧೯೪೦ರ ಡಿಸೆಂಬರ್ ೧೦ರಂದು ಜನಿಸಿದ ಮುನ್ನೊಳ್ಳಿ ೬೪ರಲ್ಲಿ ಮದ್ರಾಸ್ ರಾಜ್ಯದ ಸೇಲಂನಲ್ಲಿ ಹ್ಯಾಂಡ್‌ಲೂಮ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಕಲಿತವರು. ಪೂರ್ವ ಆಫ್ರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು. ಕ್ರಿಯೇಟಿವ್ ಪೇಟಿಂಗ್ ಮತ್ತು ಆಯಿಲ್ ಪೇಟಿಂಗ್‌ನಲ್ಲಿ ವಿಶೇಷ ಪರಿಣಿತಿಯುಳ್ಳವರು. ಮುಂಬಯಿನ ಎಲಿಮೆಂಟ್ರಿ ಡ್ರಾಯಿಂಗ್ ಕಾಂಪಿಟೇಶನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭಾವಂತರು. ಮುಂಬಯಿನ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ ಹತ್ತು ಬಾರಿ ಸೇರಿ ದೇಶದ ವಿವಿಧೆಡೆ ೫೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನದ ಹೆಗ್ಗಳಿಕೆ ಇವರದ್ದು. ಪ್ರತಿ ಪ್ರದರ್ಶನದಲ್ಲೂ ನವೀನ ಕಲಾಕೃತಿಗಳ ಮೂಲಕ ಕಲಾಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಕಲಾವಂತಿಕೆ ಜಯಂತ ಅವರ ವಿಶೇಷತೆ. ೮೦ರ ಆಸುಪಾಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವ ಅವರು ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರು.

Categories
ಕಿರುತೆರೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿಹಿಕಹಿ ಚಂದ್ರು

ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯನ್ನು ವಿಶಿಷ್ಟ ಬಗೆಯಲ್ಲಿ ಬೆಳಗಿ ಜನಮಾನಸವನ್ನು ರಂಜಿಸಿದ ಕಲಾಪ್ರತಿಭೆ ಸಿಹಿಕಹಿಚಂದ್ರು. ನಟ, ನಿರ್ದೇಶಕ, ಧಾರಾವಾಹಿಗಳ ನಿರ್ಮಾಪಕ, ಅಡುಗೆ ಪ್ರಚಾರಕ ಹಾಗೂ ಹಾಸ್ಯಗಾರನಾಗಿ ಅವರದ್ದು ಬಹುಮುಖ ಪ್ರತಿಭಾದರ್ಶನ. ಸಿಹಿಕಹಿ ಚಂದ್ರು ಎಂದೇ ಜನಜನಿತರಾದ ಚಂದ್ರಶೇಖರ್ ಬಾಲ್ಯದಿಂದಲೂ ಕಲಾಮೋಹಿ, ನಟನೆಯ ಗೀಳು, ಬಣ್ಣದ ಹುಚ್ಚು. ಕಾಲೇಜು ದಿನಗಳಿಂದಲೂ ರಂಗಸಖ್ಯ. ಶೇಕ್ಸ್‌ಪಿಯರ್ ಅವರ ಏ ಕಾಮಿಡಿ ಆಫ್ ಎರರ್ಸ್‌ನ ಕನ್ನಡ ರೂಪಾಂತರ ನೀನಾನಾದ್ರೆ ನಾನೀನೇನ? ಚಂದ್ರು ಅಭಿನಯಿಸಿದ ಜನಪ್ರಿಯ ಹಾಸ್ಯನಾಟಕ. ರಂಗಭೂಮಿಯಿಂದ ೯೦ರ ದಶಕದಲ್ಲೇ ಕಿರುತೆರೆ ಜಿಗಿದ ಚಂದ್ರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಸಿಹಿಕಹಿ’ ಧಾರಾವಾಹಿಯಿಂದ ಜನಪ್ರಿಯರು. ಅಂದಿನಿಂದಲೇ ಸಿಹಿಕಹಿಚಂದ್ರುವಾಗಿ ರೂಪಾಂತರ. ಬ್ಯಾಂಕ್ ಜನಾರ್ದನ್, ಉಮಾಶ್ರೀ ಜತೆಗಿನ ಚಂದ್ರು ಅವರ ಹಾಸ್ಯ ಸನ್ನಿವೇಶಗಳು ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಧಾರಾವಾಹಿಗಳ ನಿರ್ಮಾಣಕ್ಕೆ ಇಳಿದ ಚಂದ್ರು ಸಿಲ್ಲಿಲಲ್ಲಿ, ಪಾಪಪಾಂಡು ಜನಪ್ರಿಯ ಧಾರಾವಾಹಿಗಳ ನಿರ್ದೇಶಕರು. ಅಡುಗೆ ಮಾಡುವುದು ಚಂದ್ರು ಅವರ ಪರಮಾಪ್ತ ಕಲೆ. ಈ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಖಾಸಗಿವಾಹಿನಿಗಳಲ್ಲಿ ಶೋ ನಡೆಸಿದ ಜನಾನುರಾಗಿಯಾದ ಹೆಗ್ಗಳಿಕೆ. ಬದುಕು ಸಾಗಿದ ಹಾದಿಯಲ್ಲಿ ನಡೆಯುತ್ತಲೇ ಬಹುಬಗೆಯ ಪಾತ್ರ-ಆಸಕ್ತಿಯಿಂದ ಗೆದ್ದ ಸಿಹಿಕಹಿ ಚಂದ್ರು ಕಲೆಯಿಂದಲೇ ಬದುಕುಕಟ್ಟಿಕೊಂಡು ಬೆಳಗಿದ ಅಪರೂಪದ ಕಲಾವಂತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಎ. ನಾಗರತ್ನ

ವೈದ್ಯಲೋಕದಲ್ಲಿ ಮಾನವೀಯ ಸೇವೆ-ಅಂತಃಕರಣದ ನಡೆಗೆ ಹೆಸರಾದ
ಡಾ|| ಎ.ನಾಗರತ್ನ, ಗಣಿನಾಡು ಬಳ್ಳಾರಿಯ ಹಿರಿಯ ವೈದ್ಯೆ, ಹಿರಿಯ ನಾಗರಿಕರ ಆಶ್ರಯದಾತೆ. ಅಪರೂಪದ ವೈದ್ಯೆ ೭೦ರ ದಶಕದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದ ಡಾ. ನಾಗರತ್ನ ಮಣೆ ಮತ್ತು ಮುಂಬಯಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರ್ಣಗೊಳಿಸಿದರು. ವೃದ್ಧರನ್ನು ಕಾಡುವ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ಪರಿಣಿತಿ, ಬಳ್ಳಾರಿಯಲ್ಲಿ ಸ್ವಂತ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ನಡೆಸುವುದರ ಜೊತೆಗೆ ಕೇಂದ್ರ ಸರ್ಕಾರದ పెటుంబ ಯೋಜನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂರಾರು ಲಸಿಕಾ ಶಿಬಿರಗಳ ಆಯೋಜನೆ. ತಂದೆಯ ಕನಸಿನಂತೆ ೧೯೯೮ರಲ್ಲಿ ಹಿರಿಯ ನಾಗರಿಕರಿಗಾಗಿಯೇ ‘ಕೃಷ್ಣ ಸನ್ನಿಧಿ’ ಆಶ್ರಮ ಸ್ಥಾಪಿಸಿ ಮಾನವೀಯ ಸೇವೆ. ೨೦೧೨ರಲ್ಲಿ ಬಳ್ಳಾರಿಯ ಹೊರವಲಯದ ಸಂಗನಕಲ್ಲುನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆಯಿರುವ ಬೃಹತ್ ವೃದ್ಧಾಶ್ರಮ ನಿರ್ಮಾಣ. ೮೦ ವೃದ್ಧರ ಆರೈಕೆಯಲ್ಲಿ ಅನವರತ ನಿರತರು. ವೃದ್ಧರ ಸೇವೆಯಲ್ಲೇ ಕೃಷ್ಣನ ಕಂಡ ಸೇವಾಸಿಂಧು.

Categories
ನ್ಯಾಯಾಂಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಕುಮಾರ್

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರ ನಿಲುವುಗಳಿಂದಲೇ ಹೆಸರುವಾಸಿಯಾದವರು ನ್ಯಾಯಮೂರ್ತಿಗಳಾದ ಎನ್. ಕುಮಾರ್, ವಕೀಲರು, ನ್ಯಾಯಾಧೀಶರು, ನ್ಯಾಯಾಂಗ ತರಬೇತುದಾರರಾಗಿ ಅನುಪಮ ಸೇವೆಗೈದ ಸಾಧಕರು.
ಪ್ರಸ್ತುತ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎನ್. ಕುಮಾರ್ ಅವರು ವಕೀಲಿ ವೃತ್ತಿ ಆರಂಭಿಸಿದ್ದು ೧೯೭೬ರಲ್ಲಿ. ವಕೀಲ ವ್ಯಾಸಂಗವನ್ನು ಆಳವಾಗಿ ಅಧ್ಯಯನಿಸಿದ ಅವರು ತಮ್ಮ ಅಭ್ಯಾಸವನ್ನು ಹೈಕೋರ್ಟ್‌ಗೆ ವಿಸ್ತರಿಸಿದರು. ಸಿವಿಲ್‌, ಕಂಪನಿ, ಕಾರ್ಮಿಕ, ತೆರಿಗೆ, ಐಪಿರ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಕರ್ನಾಟಕದ ಭಾರತೀಯ ಕಾನೂನು ವರದಿಗಳ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ೨೦೦೦ರಲ್ಲಿ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಹಲವು ಮಹತ್ವದ ಜನಪರ ತೀರ್ಪುಗಳ ಮೂಲಕ ಜನಾನುರಾಗಿಯಾದವರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ನ್ಯಾಯಾಂಗದ ಅಧಿಕಾರಿಗಳಿಗೆ ತರಬೇತುದಾರರಾಗಿಯೂ ಸೇವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ನ್ಯಾಯಾಧೀಶರ ರೌಂಡ್ ಟೇಬಲ್ ಸಮ್ಮೇಳನಗಳಲ್ಲಿ ಉಪನ್ಯಾಸ-ಪ್ರಬಂಧಗಳ ಮಂಡನೆ ಮಾಡಿರುವ ನ್ಯಾಯಮೂರ್ತಿಗಳಿಗೆ ಅಲೈಯನ್ಸ್ ವಿ.ವಿ ಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅನನ್ಯ ಸೇವೆಗೆ ಸಂದಿರುವ ಸತ್ಪಲ. ಸಧ್ಯ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಸೇವಾನಿರತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಎಸ್. ಶ್ರೀನಾಥ್

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಸಾಧನೆ ಮತ್ತು ಸೇವೆಗೈದವರು ಡಾ|| ಬಿ.ಎಸ್. ಶ್ರೀನಾಥ್. ನಾಡಿನ ಅತ್ಯುತ್ತಮ ಶಸ್ತ್ರಚಿಕಿತ್ಸಕ, ದಕ್ಷ ಆಡಳಿತಗಾರ, ಕ್ಯಾನ್ಸರ್ ಪೀಡಿತರ ದಯಾಬಂಧು.
ವೈದ್ಯಲೋಕಕ್ಕೆ ಮಲೆನಾಡಿನ ಕೊಡುಗೆ ಡಾ|| ಬಿ.ಎಸ್. ಶ್ರೀನಾಥ್, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ೧೯೫೦ರಲ್ಲಿ ಜನಿಸಿದ ಶ್ರೀನಾಥ್ ಬಾಲ್ಯದಲ್ಲೇ ವೈದ್ಯರಾಗುವ ಕನಸು ಕಂಡವರು. ಮೈಸೂರಲ್ಲಿ ಎಂ.ಬಿ.ಬಿ.ಎಸ್, ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೆಂಡ್ನಲ್ಲಿ ವಿಶೇಷ ತರಬೇತಿ ಪಡೆದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ, ಪುದುಚೇರಿ, ಚಂಡೀಗಢ, ಕೇರಳ, ಇಂಗ್ಲೆಂಡ್, ಬೆಂಗಳೂರಿನ ಕಿದ್ವಾಯಿ, ಬೆಂಗಳೂರು ಕ್ಯಾನ್ಸರ್ ಸಂಸ್ಥೆ, ಎಚ್ಸಿಜಿ, ರಂಗದೊರೈ ಹಾಗೂ ಶಂಕರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಮಹತ್ವದ ಸೇವೆ. ಕ್ಯಾನ್ಸರ್ ರೋಗಿಗಳಿಗೆ ಹೊಸ ಬದುಕು ಕೊಟ್ಟ ಧನ್ವಂತರಿ, ಸದ್ಯ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ, ಹತ್ತಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಶ್ರೀನಾಥ್ ರಾಜ್ಯದ ಹೆಮ್ಮೆಯ ವೈದ್ಯರಲ್ಲೊಬ್ಬರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೃಷ್ಣಪ್ರಸಾದ್. ಕೆ

ಕತ್ತಲೆಯಲ್ಲಿರುವವರ ಬಾಳು ಬೆಳಗಿದ ದೀಪವಾದವರು ಹೆಸರಾಂತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್.ಕೆ. ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಜಾಗೃತಿ ಮೂಡಿಸಲೆಂದೇ ಬದುಕು ಮೀಸಲಿಟ್ಟಿರುವ ವೈದ್ಯಶಿರೋಮಣಿ.
ಉಡುಪಿ ಜಿಲ್ಲೆಯವರಾದ ಕೃಷ್ಣಪ್ರಸಾದ್ ನೇತ್ರ ಚಿಕಿತ್ಸೆಯಲ್ಲಿ ಅದ್ವಿತೀಯ ಸಾಧನೆಗೈದವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಎಸ್. ಪೂರೈಸಿದವರು. ಅದೇ ಕಾಲೇಜಿನ ಪ್ರಾಧ್ಯಾಪಕ, ಉಡುಪಿ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಆಸ್ಪತ್ರೆಯ ಗೌರವ ಪ್ರಾಧ್ಯಾಪಕರಾಗಿ, ಸುಪ್ರಸಿದ್ಧ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಕಣ್ಣಿನ ಚಿಕಿತ್ಸೆಯಲ್ಲಿ ಅಪೂರ್ವ ಸೇವೆ ಕೃಷ್ಣಪ್ರಸಾದ್‌ ಹಿರಿಮೆ. ೨೦ ಲಕ್ಷ ಜನರ ಕಣ್ಣಿನ ತಪಾಸಣೆ, ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ, ೬೦ ಸಾವಿರಕ್ಕೂ ಮಿಗಿಲಾದ ಕಣ್ಣಿನ ಶಸ್ತ್ರಚಿಕಿತ್ಸೆ, ೩.೭೫ ಲಕ್ಷ ಜನರಿಗೆ ಉಚಿತ ಕನ್ನಡ ವಿತರಣೆ, ಉಚಿತ ನೇತ್ರ ತಪಾಸಣಾ ಶಿಬಿರಗಳು, ಕಣ್ಣಿನ ಆರೋಗ್ಯದ ಬಗ್ಗೆ ಜನಸಾಮಾನ್ಯರು-ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ ಮುಂತಾದವು ಕೃಷ್ಣಪ್ರಸಾದ್‌ ಸಾಧನೆಯ ಮೈಲಿಗಲ್ಲುಗಳು. ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸದ ಹೆಗ್ಗಳಿಕೆ.ರಾಜ್ಯ, ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದಲೂ ಭೂಷಿತರಾಗಿರುವ ಕೃಷ್ಣಪ್ರಸಾದ್ ವೈದ್ಯಲೋಕದ ನಕ್ಷತ್ರಗಳಲ್ಲಿ ಒಬ್ಬರೆಂಬುದಕ್ಕೆ ಅವರ ಸಾಧನೆಯೇ ಜ್ವಲಂತ ಸಾಕ್ಷಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಅಶೋಕ್ ಆರ್. ಸೊನ್ನದ್

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅನ್ವರ್ಥಕ ಡಾ|| ಅಶೋಕ್ ಆರ್. ಸೊನ್ನದ್. ನಾಡು ಕಂಡ ಅಪರೂಪದ ಅನುಭವಿ ವೈದ್ಯ, ಸೇವೆಗೆ ನಿಂತ ಸಂತ. ಲಕ್ಷಾಂತರ ಜನರ ಆರೋಗ್ಯ ರಕ್ಷಿಸಿದ ಸಂಜೀವಿನಿ.
ಬಾಗಲಕೋಟೆ ಜಿಲ್ಲೆ ಮುಧೋಳದವರಾದ ಅಶೋಕ್ ಸೊನ್ನದ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯ ಪದವಿ, ಗುಜರಾತ್ ಅಹಮದಾಬಾದ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಫಿಲೆಡಾಲ್ಪಿಯಾದಲ್ಲಿ ತರಬೇತಿಗೊಂಡವರು. ಅಮೆರಿಕಾದ ವಿವಿಧ ಆಸ್ಪತ್ರೆಗಳಲ್ಲಿ ೩೬ ವರ್ಷಗಳ ಸುದೀರ್ಘ ಸೇವೆ, ನೂರಾರು ಯಶಸ್ವಿ ಶಸ್ತ್ರಚಿಕಿತ್ಸೆ, ಅಪಾರ ಅನುಭವ-ಗೌರವ ಸಂಪಾದನೆ. ೨೦೧೦ರಲ್ಲಿ ವೈಭೋಗದ ಜೀವನ-ಕುಟುಂಬ ತೊರೆದು ಭಾರತಕ್ಕೆ ವಾಪಸ್, ಹುಟ್ಟೂರಿನಲ್ಲಿ ತಾಯಿಯ ಹೆಸರಿನಲ್ಲಿ ಮಧುಮೇಹ ತಪಾಸಣೆ ಹಾಗೂ ಸಂಶೋಧನೆ ಕೇಂದ್ರ ಸ್ಥಾಪನೆ, ದಶಕದ ಅವಧಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ಸೇವೆ, ಹೊಸ ಬದುಕು ನೀಡಿದ ಮಾನವೀಯ ಕಾರ್ಯ. ಜಿಲ್ಲೆಯಲ್ಲಿ ಆರೋಗ್ಯಕ್ರಾಂತಿಗೆ ಮುನ್ನುಡಿ ಬರೆದ ಧನ್ವಂತರಿ ಅಶೋಕ್ ಅವರ ಪಾಲಿಗೆ ಚಿಕಿತ್ಸೆಯೇ ಪ್ರಜೆ, ರೋಗಿಗಳೇ ದೇವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಶ್ರೀ ಗೋಪಾಲಕೃಷ್ಣ ಶರ್ಮ

ವೇದಾಧ್ಯಯನ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ವಿಶಿಷ್ಟ ಸಾಧಕರು ವಿದ್ವಾನ್ ಗೋಪಾಲಕೃಷ್ಣ ಶರ್ಮ, ೩೦ ಸಾವಿರ ಶ್ಲೋಕಗಳ ಅರ್ಥ ವಿಶ್ಲೇಷಕರು, ಹೆಸರಾಂತ ಜ್ಯೋತಿಷ ಪಂಡಿತರು, ಶಾಸ್ತ್ರ ವಿದ್ವಾಂಸರು, ಬಡವರಿಗೆ ನೆರವಾಗುವ ಸಮಾಜಸೇವಕರು. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬಾಲಿಕೊಪ್ಪ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಗೋಪಾಲಕೃಷ್ಣ ಶರ್ಮ ಅವರು ಬಾಲ್ಯದಲ್ಲೇ ವೇದಾಧ್ಯಯನದತ್ತ ಚಿತ್ತ ಹರಿಸಿದವರು. ಹೊನ್ನಾವರದಲ್ಲಿ ಪ್ರಾಥಮಿಕ ಸಂಸ್ಕೃತಾಧ್ಯಯನ, ವೇದಾಧ್ಯಯನ, ಉಡುಪಿಯಲ್ಲಿ ಜ್ಯೋತಿಷ ವಿದ್ವಾನ್ ಪದವಿ, ಪೌರೋಹಿತ್ಯದಲ್ಲಿ ವಿಶೇಷ ಪಾಂಡಿತ್ಯ, ಕೇರಳದಲ್ಲಿ ಮಂತ್ರಶಾಸ್ತ್ರ, ಪ್ರಶ್ನಾಶಾಸ್ತ್ರ ಅಧ್ಯಯನ. ಟಿವಿ ವಾಹಿನಿಗಳಜ್ಯೋತಿಷ ಪಂಡಿತರಾಗಿ ಬಲು ಜನಪ್ರಿಯರು. ವಿದ್ವತ್ತಿನ ಪಯಣದಾಚೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡವರು ಗೋಪಾಲಕೃಷ್ಣ ಶರ್ಮ, ಸಾವಿರಾರು ಬಡಮಕ್ಕಳಿಗೆ ಉಚಿತ ಪುಸ್ತಕ, ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಅಹಾರಕಿಟ್‌ಗಳ ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ದಿನಸಿ, ಬಟ್ಟೆ ವಿತರಿಸಿದ ಸಮಾಜಮುಖಿ, ೩೦ ಸಾವಿರ ಶ್ಲೋಕಗಳನ್ನು ಅರ್ಥ ಸಮೇತ ವಿವರಿಸಬಲ್ಲ ಪಂಡಿತೋತ್ತಮರು. ಜ್ಯೋತಿಷ ಮಾರ್ತಾಂಡ, ಜ್ಯೋತಿಷ ಸಾರ್ವಭೌಮ, ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ-ಗೌರವಗಳಿಂದ ಭೂಷಿತರಾದ, ಕನ್ನಡದ ವಿದ್ವತ್ ಪರಂಪರೆಯನ್ನು ಶ್ರೀಮಂತಗೊಳಿಸಿದ ವಿದ್ವತ್ಮಣಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜಿ.ಟಿ. ಸುಭಾಷ್

ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸೇವೆ-ಸಾಧನೆಗೈದ ಅಪರೂಪದ ಪ್ರತಿಭಾವಂತರು ಡಾ.ಜಿ.ಟಿ.ಸುಭಾಷ್. ವೈದ್ಯಕೀಯ, ಸಮಾಜಸೇವೆ, ಆಡಳಿತ, ಸಾಮಾಜಿಕ ಕ್ಷೇತ್ರದ ಸಾಧಕರು.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಗಂಜಿಗೆರೆಯವರಾದ ಸುಭಾಷ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಎ.ತಿಮ್ಮಪ್ಪಗೌಡರ ಸುಪುತ್ರರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಡಿ, ನಿಮ್ಹಾನ್ಸ್‌ನಲ್ಲಿ ಡಿ.ಎಂ.ಮಾಡಿದವರು. ಗ್ರಾಮೀಣ ವೈದ್ಯಕೀಯ ಸೇವೆಗಳ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನರವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಡೀನ್ – ನಿರ್ದೇಶಕರಾಗಿ ಸ್ಮರಣೀಯ ಸೇವೆ. ರಾಜೀವಗಾಂಧಿ ವಿವಿ ಹಣಕಾಸು ಸಮಿತಿಯ ಸೆನೆಟ್ ಸದಸ್ಯ, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ ಸದಸ್ಯ, ಯುಜಿಸಿಯ ಮೆಡಿಕಲ್ ಇನ್ಸ್‌ಪೆಕ್ಟರ್, ಪಿಎಂಎಸ್‌ ವೈನ ವಿಶೇಷ ಆಡಳಿತಾಧಿಕಾರಿ..ಹೀಗೆ ಬಹುಹುದ್ದೆಗಳಲ್ಲಿ ದುಡಿದವರು.ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಬೀದಿ ನಾಟಕಗಳು, ಸಮ್ಮೇಳನಗಳು, ಪರಿಸರ ಸಂರಕ್ಷಣೆ-ಧೂಮಪಾನದ ವಿರುದ್ಧ ಜಾಗೃತಿ ಮೂಡಿಸುವಿಕೆ, ಪಾರ್ಶ್ವವಾಯು ಪೀಡಿತರಿಗೆ ಮಾಹಿತಿ-ಚಿಕಿತ್ಸೆ ಮುಂತಾದ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರು.ಡಾ. ಬಿ.ಸಿ.ರಾಯ್ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಫೆಲೋಶಿಪ್ ಮತ್ತಿತರ ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೋಹಿನಿ ಸಿದ್ದೇಗೌಡ

ಶೋಷಿತ ಮಹಿಳೆಯರನ್ನು ಸಲುಹಿದ ಅಪರೂಪದ ಸಮಾಜಸೇವಕಿ ಮೋಹಿನಿ ಸಿದ್ದೇಗೌಡ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶ್ರಮಿಸಿದ ಅಪ್ಪಟ ಅಬಲೆಯರ ಆಶಾಕಿರಣ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅಂಜುಗೊಂಡನಹಳ್ಳಿಯಲ್ಲಿ ಜನಿಸಿದ ಮೋಹಿನಿ ಸಿದ್ದೇಗೌಡ ಚಿಕ್ಕಮಗಳೂರಿನ ಸೊಸೆ. 23ನೇ ವಯಸ್ಸಿನಿಂದಲೇ ಮಹಿಳಾ ಸಮಾಜದ ಸದಸ್ಯೆಯಾಗಿ ಸಮಾಜಸೇವಾ ಕಾರ್ಯಾರಂಭ. ಮಹಿಳಾ ಶೋಷಣೆ, ಮದ್ಯಪಾನ, ವರದಕ್ಷಿಣೆ ಕಿರುಕುಳ, ಸಾರಾಯಿ ಮಾರಾಟದ ವಿರುದ್ಧ ಗುಡುಗಿದ ಸ್ತ್ರೀದನಿ. ಕಸ್ತೂರಿಬಾ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯದರ್ಶಿಯಾಗಿ ನೊಂದ ಮಹಿಳೆಯರಿಗೆ ಆಸರೆ. ನಾಲ್ಕು ದಶಕದ ಅನನ್ಯ ಸೇವೆ. ವಿದ್ಯುಚ್ಛಕ್ತಿ ಮಂಡಳಿಯ ಮಹಿಳೆಯರ ಕ್ಲಬ್ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಮ್ಯಾಂಡ್ ಹೋಂ ಸದಸ್ಯೆ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯೆ, ಸಹಕಾರಿ ಸಂಘದ ಸದಸ್ಯೆ, ನಗರಸಭೆಯ ಸದಸ್ಯೆ ಸೇರಿದಂತೆ ಹತ್ತಾರು ಸಂಸ್ಥೆಗಳ ವಿವಿಧ ಹುದ್ದೆಗಳ ನಿರ್ವಹಣೆ-ಅನುಗಾಲವೂ ಸಮಾಜಸೇವೆ. ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೊಹಮದ್ ಮೀರಾನ್ ಸಾಹೇಬ್

ವಿದೇಶದಲ್ಲಿದ್ದೂ ತಾಯ್ತಾಡಿನ ಸಮಾಜಸೇವೆಯಲ್ಲಿ ಅನವರತ ನಿರತರು ಮೊಹಮದ್ ಮೀರಾನ್ ಸಾಹೇಬ್. ಬಡಕುಟುಂಬಗಳ ಬಾಳು ಬೆಳಗಿದ ಹೆಮ್ಮೆಯ ಅನಿವಾಸಿ ಕನ್ನಡಿಗ
ದಕ್ಷಿಣ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಿಸಿದ ಮೊಹಮದ್ ಮೀರಾನ್ ಸಾಹೇಬ್ ಶಿಕ್ಷಣದ ಬಳಿಕ ಬದುಕು ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದರು. ಅನಿವಾಸಿ ಭಾರತೀಯ ಉದ್ಯಮಿಯಾಗಿ ಛಾಪು ಮೂಡಿಸಿರುವ ಮೊಹಮದ್ ಮೀರಾನ್ ಸಾಹೇಬ್ ಅವರಿಗೆ ತಾಲ-ತಾಯ್ತುಡಿಯೆಂದರೆ ಅಪಾರ ಪ್ರೀತಿ. ವಿದೇಶದಲ್ಲಿದ್ದುಕೊಂಡೇ ತವರೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿರಳ ಕನ್ನಡಿಗ, ಗಲ್ಫ್ನ ಕುಂದಾಪ್ರ ಕನ್ನಡ ಬಳಗ, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ನಲವತ್ತು ವರ್ಷಗಳಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ನಾಡು-ನುಡಿಯ ಸೇವೆ. ಕರ್ನಾಟಕದ ಹಲವೆಡೆ ಜನಪರ ಕಾರ್ಯಕ್ರಮಗಳ ಮುಖೇನ ನೂರಾರು ಬಡಕುಟುಂಬಗಳಿಗೆ ನೆರವಾದ ದಯಾಳು. ಹುಟ್ಟೂರಿಗೆ ಆ್ಯಂಬುಲೆನ್ಸ್, ಕಸದ ವಾಹನ ಸೇರಿದಂತೆ ಹಲವು ಸೌಲಭ್ಯಗಳ ಧಾರೆಯೆರೆದಿರುವ ಸಮಾಜಸೇವಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್. ನಾಗರತ್ನ

ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥಕವಾಗಿ ಬದುಕಿರುವವರು ಡಾ.ಆರ್.ನಾಗರತ್ನ, ಯೋಗ ಚಿಕಿತ್ಸಾ ವಿಧಾನದಲ್ಲಿ ಸಿದ್ಧಹಸ್ತರು, ಅನುಪಮ ಸೇವೆಯ ಮಾದರಿ ವೈದ್ಯರು.
ಬೆಂಗಳೂರಿನವರಾದ ಡಾ. ನಾಗರತ್ನ ವೈದ್ಯಕೀಯ ಸ್ನಾತಕೋತ್ತರ ಪದವೀಧರರು. ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯಸಂಬಂಧಿ ಕಾಯಿಲೆಗಳಿಗೆ ಯೋಗ ಚಿಕಿತ್ಸಾ ವಿಧಾನ ಅಭಿವೃದ್ಧಿ ಪಡಿಸಿ ಐದು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಆರು ಪ್ರಾಯೋಜಿತ ಸಂಶೋಧನೆ ಪೂರ್ಣಗೊಳಿಸಿದ ಹಿರಿಮೆ, ಯೋಗ ಚಿಕಿತ್ಸಾ ವಿಧಾನದ ರಚನೆ, ವ್ಯಾಲಿಡೇಶನ್, ಪ್ರಮಾಣೀಕರಣ ಮತ್ತು ಪರೀಕ್ಷಾ ಪ್ರಮಾಣೀಕರಣದಲ್ಲಿ ಪರಿಣಿತಿ ಸಾಧಿಸಿದ ಗರಿಮೆ ಅವರದ್ದು. ಬೆಂಗಳೂರು ಆರೋಗ್ಯಧಾಮದ ಮುಖ್ಯ ಆರೋಗ್ಯಾಧಿಕಾರಿ, ವಾಣಿ ವಿಲಾಸ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕರು, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು, ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಅಮೆರಿಕದ ಆಸ್ಪತ್ರೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಾನವೀಯ ಸೇವೆ. ಹನ್ನೊಂದು ಕೃತಿಗಳ ರಚಿಸಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡಿಸಿರುವ ಡಾ. ಆರ್.ನಾಗರತ್ನ ಅವರ ಸೇವೆಗೆ ಸಂದಿರುವ ಹತ್ತಾರು ಪ್ರಶಸ್ತಿಗಳ ಘನತೆಯೇ ಹೆಚ್ಚಿರುವುದು ಉತ್ಪಕ್ಷೆಯಲ್ಲದ ನಿಜದ ಮಾತು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಕೆ. ಪ್ರೇಮಾ

ಧರ್ಮ-ಸಾಹಿತ್ಯ-ಸಂಗೀತದ ಮೂಲಕ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗೆ ಶ್ರಮಿಸಿದ ಸೇವಾಚೇತನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಬಹುಮುಖಿ ಆಸಕ್ತಿಯ ಬಹುಶ್ರುತ ಸಾಧಕಿ.
ಕೋಲಾರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಜನಿಸಿದ ಪ್ರೇಮಾ ಅವರು ಆಗಿನ ಕಾಲದಲ್ಲೇ ಎಲ್.ಎಸ್. ಪರೀಕ್ಷೆ ಪಾಸು ಮಾಡಿದ ವಿದ್ಯಾವಂತೆ, ಭಗವದ್ಗೀತೆ ಪಠಣದಲ್ಲಿ ಪ್ರಾವೀಣ್ಯತೆ, ಹದಿನೈದನೇ ವಯಸ್ಸಿನಿಂದಲೇ ಮಕ್ಕಳಿಗೆ ‘ಗೀತಾಪಾಠ’, ಪ್ರೇಮಾರದ್ದು ಸಾಹಿತ್ಯ, ಧರ್ಮ ಮತ್ತು ಸಂಗೀತದಿಂದ ಮುಪ್ಪರಿಗೊಂಡ ವ್ಯಕ್ತಿತ್ವ, ಗಾಯಕಿ, ಗಮಕಿ, ಆಶುಕವಿಯೂ ಸಹ, ಚಿಕ್ಕಮಗಳೂರಿನ ಕೋದಂಡರಾಮ ಶ್ರೇಷ್ಠ ಅವರೊಡನೆ ಮದುವೆಯಾದ ಬಳಿಕ ಸಮಾಜಸೇವಾ ಕಾರ್ಯದಲ್ಲಿ ಪೂರ್ಣ ತಲ್ಲೀನ. ಕಾಫಿನಾಡಲ್ಲಿ ಸಮೃದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಪರಿಶ್ರಮ. ಪ್ರತಿ ವರ್ಷ ಗೀತಾಜ್ಞಾನ ಯಜ್ಞ ಆಯೋಜನೆ. ಸಾವಿರಾರು ಜನರಿಗೆ ಗೀತಬೋಧನೆ-ಗೀತಾ ಪುಸ್ತಕ ವಿತರಣೆ. ವಿದೇಶಗಳಲ್ಲೂ ಹಿಂದು ಧರ್ಮದ ಪ್ರಚಾರಕಾರ್ಯ. ರಾಜ್ಯಮಟ್ಟದ ಆರವೈಶ್ಯ ಮಹಿಳಾ ಸಮ್ಮೇಳನ ಆಯೋಜಿಸಿದ ಕೀರ್ತಿ. ಪರಮಾರ್ಥ ಕೃತಿಗಾರ್ತಿ, ಆರೂವರೆ ದಶಕಗಳಿಂದ ಆಧ್ಯಾತ್ಮ-ಗಾಯನ ಕ್ಷೇತ್ರದ ಕೃಷಿಯಲ್ಲಿ ನಿರತವಾಗಿರುವ ‘ಗುರುಭಕ್ತಿರತ್ನ’ ಬಿರುದಾಂಕಿತ ಸೇವಾಮೂರ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ನಾರಾಯಣ ಸುಬ್ರಾಯ ಹೆಗಡೆ

ಬಹುರಂಗಗಳಲ್ಲಿ ಸಾರ್ಥಕ ಸಮಾಜಸೇವೆಗೈದ ಬಹುರೂಪಿ ಎನ್.ಎಸ್. ಹೆಗಡೆ (ಕುಂದರಗಿ, ಗ್ರಾಮೀಣ ಭಾಗದ ಏಳೆಗೆ ಆರು ದಶಕಗಳಿಂದಲೂ ಪರಿಶ್ರಮಿಸುತ್ತಿರುವ ಸಮಾಜಬಂಧು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕುಂದರಗಿಯವರಾದ ನಾರಾಯಣ ಸುಬ್ರಾಯ ಹೆಗಡೆ ಅವರು ಹರೆಯದಿಂದಲೂ ಸಮಾಜಸೇವಾನಿರತರು. ಹಿಂದುಳಿದ ಪ್ರದೇಶವೆನಿಸಿದ್ದ ಕುಂದರಗಿಯಲ್ಲಿ ಪ್ರಪ್ರಥಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ತೆರೆದವರು. ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರು. ಬಡಮಕ್ಕಳಿಗೆ ಅನಾಥಾಲಯ, ವಾಚನಾಲಯ ಸೌಲಭ್ಯ, ಸಹಕಾರ ಸಂಘಗಳ ಸ್ಥಾಪನೆ-ಸೇವೆ, ಹಲವು ದೇವಸ್ಥಾನಗಳ ಆಡಳಿತ ಮಂಡಳಿಯ ಸದಸ್ಯರಾಗಿ ದುಡಿಮೆ. ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾಧ್ಯಕ್ಷ, ಸಮ್ಮೇಳನಗಳ ಸಂಘಟನೆ, ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕನ್ನಡದ ಕೈಂಕರ್ಯ, ಹತ್ತಾರು ಸಂಘಟನೆಗಳ ಹೊಣೆಗಾರಿಕೆಯ ಸಮರ್ಥ ನಿರ್ವಹಣೆ, ಪತ್ರಕರ್ತ, ಅಂಕಣಕಾರರಾಗಿಯೂ ಅಕ್ಷರಸೇವೆಗೈದ ಎನ್.ಎಸ್. ಹೆಗಡೆ ಅವರು ಶ್ರಮಿಸಿದ ಕ್ಷೇತ್ರಗಳಿಲ್ಲ. ೮೭ರ ವಯದಲ್ಲೂ ಸಮಾಜಸೇವೆಗೆ ಮಿಡಿವ ವಿರಳಾತಿವಿರಳ ಜೀವಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಟಿ.ಹೆಚ್. ಅಂಜನಪ್ಪ

ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಮಾದರಿಯಾಗಿರುವ ಸಾಧಕರು ಡಾ. ಟಿ.ಹೆಚ್. ಅಂಜನಪ್ಪ ಸಾವಿರಾರು ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಜೀವರಕ್ಷಿಸಿದ ಧನ್ವಂತರಿ,
ವೈದ್ಯಕೀಯ, ಸಮಾಜಸೇವೆ, ಉಪನ್ಯಾಸ, ಆರೋಗ್ಯ ಶಿಬಿರಗಳ ಸಂಘಟನೆಯ ಕಾರ್ಯದಲ್ಲಿ ಮೈಲಿಗಲ್ಲು ನಿರ್ಮಿಸಿರುವ ಅಪರೂಪದ ವೈದ್ಯರು ಡಾ.ಟಿ.ಹೆಚ್.ಅಂಜನಪ್ಪ, ಮೂರೂವರೆ ದಶಕಗಳಿಂದಲೂ ವೈದ್ಯಕೀಯ ಸೇವೆಯಲ್ಲಿ ಅನವರತ ನಿರತರಾಗಿರುವ ಡಾ.ಟಿ.ಹೆಚ್. ಅಂಜನಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಪೇಗೌಡ ಆಸ್ಪತ್ರೆಗಳಲ್ಲಿ ರೋಗಿಗಳ ಜೀವರಕ್ಷಣೆಗೆ ದುಡಿದವರು. ೩೫ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವಿಶಿಷ್ಟ ದಾಖಲೆ ಅವರದ್ದು. ಬಡರೋಗಿಳಿಗೆ ಉಚಿತ ಚಿಕಿತ್ಸೆ, ೭೦೦ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ೯೦೦ಕ್ಕೂ ಅಧಿಕ ಆರೋಗ್ಯದ ಕುರಿತ ಉಪನ್ಯಾಸ, ಕರ್ನಾಟಕ ಕ್ಯಾನ್ಸರ್ ಸಂಸ್ಥೆಯಿಂದ ನಿರಂತರ ಸಮಾಜಸೇವೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನೇಕ ಕಾಲೇಜು-ಸಂಘಸಂಸ್ಥೆಗಳಲ್ಲಿ ಅರ್ಬುದ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಡಾ.ಟಿ.ಹೆಚ್ ಅಂಜನಪ್ಪ ಅವರ ಬಹುಮುಖಿ ಸೇವೆ-ಸಾಧನೆಗೆ ಹಿಡಿದ ಕೈಗನ್ನಡಿ. ಹತ್ತಾರು ಪ್ರಶಸ್ತಿ-ಗೌರವಗಳಿಗೆ ಪಾತ್ರವಾಗಿರುವ ಅಂಜನಪ್ಪ ವೈದ್ಯರಂಗದ ವಿಶಿಷ್ಟ ಹಾಗೂ ಮಾದರಿ ಸಾಧಕರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ), ಧರ್ಮಸ್ಥಳ

ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ನಿರತ ಮೈಲಿಗಲ್ಲಿನ ಸಂಸ್ಥೆ ಧರ್ಮೋತ್ಥಾನ ಟ್ರಸ್ಟ್ (ರಿ), ಪುರಾತನ ಸ್ಮಾರಕಗಳ ರಕ್ಷಣೆಯಲ್ಲೂ ತೊಡಗಿರುವ ಸಮಾಜಸೇವಾ ಸಂಸ್ಥೆ.
ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ರಕ್ಷಣೆ ಬಲುಮುಖ್ಯವೆಂಬ ಸದಾಶಯದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಸಂಸ್ಥೆ ‘ಧರ್ಮೋತ್ಥಾನ ಟ್ರಸ್ಟ್’. ಕೆಲವೇ ವರ್ಷಗಳಲ್ಲಿ ರಾಜ್ಯದ ೨೫ ಜಿಲ್ಲೆಗಳಲ್ಲಿ ಒಟ್ಟು ೨೫೩ ಪುರಾತನ, ಶಿಥಿಲಗೊಂಡ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಿದ ಹೆಗ್ಗಳಿಕೆ ಈ ಟ್ರಸ್ಟ್ನದ್ದು. ಟ್ರಸ್ಟ್ನ ಸಂರಕ್ಷಣಾ ಕಾರ್ಯದ ಗುಣಮಟ್ಟ ಹಾಗೂ ಪ್ರಗತಿ ಪರಿಶೀಲಿಸಿ ಸಹಭಾಗಿತ್ವದ ಸಂಸ್ಥೆಯೆಂದು ಸರ್ಕಾರದಿಂದ ಮಾನ್ಯತೆ, ವಾರ್ಷಿಕ ಕ್ರಿಯಾಯೋಜನೆಯಡಿ ಅನುದಾನ ಬಿಡುಗಡೆ, ರಾಜ್ಯದುದ್ದಗಲಕ್ಕೂ ಶಿಥಿಲಗೊಳ್ಳುತ್ತಿರುವ ಅನೇಕ ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವ ಹೆಗ್ಗುರಿಯಿಂದ ಮುನ್ನಡೆದಿರುವ ಟ್ರಸ್ಟ್ನ ಸಾಮಾಜಿಕ-ಧಾರ್ಮಿಕ ಕೈಂಕರ್ಯ ಪ್ರಶಂಸನೀಯವೂ ಹೌದು, ಮಾದರಿಯೂ ಸಹ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ

ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಪ್ಪಟ ಕನ್ನಡದ ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆಯೇ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ವಚನ ಅಧ್ಯಯನ ಕೇಂದ್ರ

ವಚನ ಸಾಹಿತ್ಯದ ಅಭ್ಯಾಸಿಗಳಿಗೆ, ಸಂಶೋಧಕರಿಗೆ ಪೂರಕ ಸಾಮಗ್ರಿಯನ್ನು ಒದಗಿಸುವುದಕ್ಕಾಗಿ ಆರಂಭಿಸಲಾದ ವಚನ ಅಧ್ಯಯನ ಕೇಂದ್ರ ಪ್ರಾತಿನಿಧಿಕ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದೆ.

ಈ ಅಧ್ಯಯನ ಕೇಂದ್ರದಲ್ಲಿ ಈಗಾಗಲೇ ಎಪ್ಪತ್ತೊಂಭತ್ತಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಅಭ್ಯಾಸ ಮಾಡಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದು, ಇಲ್ಲಿ ಕಳೆದ ಒಂಭೈನೂರು ವರ್ಷಗಳಲ್ಲಿ ರಚಿತವಾದ ಶರಣರ ಅಪರೂಪದ ಸಾಹಿತ್ಯ ಗ್ರಂಥಗಳನ್ನು ಸಂಗ್ರಹಿಸಲಾಗಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹನುಮಂತರಾಯ ಪಂಡಿತ್‌

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರು ಡಾ. ಹನುಮಂತರಾಯ ಪಂಡಿತ್. ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಹೊಸ ಸಂಶೋಧನೆಗಳಿಂದ ಜನೋಪಕಾರಿಯಾದ‌ ಪಂಡಿತರು.
ತುಮಕೂರು ತಾಲ್ಲೂಕಿನ ರಾಮುಗನಹಳ್ಳಿ ಹನುಮಂತರಾಯರ ಹುಟ್ಟೂರು. ೧೯೨೯ರ ಮೇ.೨೫ರಂದು ಜನನ. – ಓದು, ಛಲ ಹುಟ್ಟುಗುಣ. ಬಡತನದಿಂದಾಗಿ ಪ್ರೌಢಶಾಲೆಯ ಮೆಟ್ಟಿಲೇರಲಾಗದಿದ್ದರೂ ಸಂಸ್ಕೃತ ಭಾಷಾ ಅಧ್ಯಯನದಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್‌ ಗಳಿಸಿದವರು. ಪರಿಶ್ರಮದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಅಧ್ಯಾಪಕ, ಉಪನ್ಯಾಸಕರಾಗಿ ಹುದ್ದೆಗೇರಿದವರು. ಎಸ್‌ಎಸ್‌ಎಲ್, ಕನ್ನಡಪಂಡಿತ ಪದವಿ, ಜ್ಯೋತಿಷ್ಯ, ಹೋಮಿಯೋಪಥಿ ಹಾಗೂ ಆಯುರ್ವೇದದ ಅಧ್ಯಯನವೆಲ್ಲವೂ ಛಲದ ಫಲವೇ. ಮಾಧ್ಯಮಿಕ ಶಾಲೆಯ ಉಪಪಠ್ಯವಾದ ನಾಲ್ಕು ಕಿರುಕಥೆಗಳು, ಹತ್ತನೇ ತರಗತಿ ಪಠ್ಯಪುಸ್ತಕವಾದ ಸಾಹಿತ್ಯಸಂಪುಟ ರಚಿಸಿದವರು. ವಿವಿಧ ಕಾಯಿಲೆಗಳ ನಿವಾರಣೆಗೆ ೨೦ ಸಂಶೋಧನೆಗಳು, ಆಯುರ್ವೇದ ಔಷಧಿಗಳ ನಿರ್ಮಾಣಗಾರದ ಸ್ಥಾಪನೆ, ಆಯುರ್ ಪಾರ್ಕ್ ಹೆಲ್ತ್‌ಕೇರ್ ಲಿಮಿಟೆಡ್‌ನ ನಿರ್ದೇಶಕತ್ವ ಸಾದು ಜನಾಂಗದ ಇತಿಹಾಸದ ಸಂಗ್ರಹ, ಸಹಕಾರ ಸಂಘ ಸ್ಥಾಪನೆ, ಸಾದರ ಸುದ್ದಿ ಪತ್ರಿಕೆ. ಎಲ್ಲವೂ ಸಾಧನೆಯ ಮೈಲಿಗಲ್ಲುಗಳೇ.೯೦ರ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿರುವ ಹಿರಿಯ ಜೀವ ಸಾಧಕರಿಗೆ ನಿಜಮಾದರಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವ ಬ್ರಿಗೇಡ್

ಕೆರೆಗಳ ಸಂರಕ್ಷಣೆ, ಕಲ್ಯಾಣಿಗಳ ಜೀರ್ಣೋದ್ದಾರದಂತಹ ಸಮಾಜಮುಖಿ ಕಾರ್ಯದಲ್ಲಿ ಅನವರತ ನಿರತವಾಗಿರುವ ಅಪ್ಪಟ ಕನ್ನಡ ಸಂಸ್ಥೆ ಯುವ ಬ್ರಿಗೇಡ್, ಯುವ ಸಮುದಾಯದ ಹೊಸ ಆಶಾಕಿರಣ.
ಯುವಕರ ಶಿಕ್ಷಣ, ಸಮಾಜದ ಸ್ವಾಸ್ಥ ರಕ್ಷಣೆ, ಸಾಮರಸ್ಯ ಕಾಪಾಡುವಿಕೆಯಂತಹ ಮಹತ್ತರ ಧೈಯಗಳೊಂದಿಗೆ ಸ್ಥಾಪಿತವಾದ ಸಂಸ್ಥೆ ‘ಯುವ ಬ್ರಿಗೇಡ್’, ಲೇಖಕ, ವಾಗ್ನಿ, ಸಮಾಜಮುಖಿ ಚಕ್ರವರ್ತಿ ಸೂಲಿಬೆಲೆ ಸ್ಥಾಪಿಸಿದ ಈ ಸಂಸ್ಥೆ ಅಲ್ಪಾವಧಿಯಲ್ಲಿ ಕೈಗೊಂಡ ಕೈಂಕರ್ಯಗಳು ಅನೇಕಾನೇಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಕೊಟ್ಟ ಕೊಡುಗೆ ಅಪಾರ. ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಕಲ್ಯಾಣಿಗಳ ಜೀರ್ಣೋದ್ದಾರ, ಕಾವೇರಿ, ನೇತ್ರಾವತಿ, ಭೀಮಾ, ಕಪಿಲೆ ಸೇರಿದಂತೆ ೮ ನದಿಗಳ ಸ್ವಚ್ಛಗೊಳಿಸುವಿಕೆ, ಮಳೆನೀರು ಸಂಗ್ರಹಣೆಯ ಮಹತ್ವ ಪಸರಿಸುವಿಕೆ, ಹುತಾತ್ಮ ಯೋಧರ ಸ್ಮರಣೆ, ಪ್ರವಾಹ ಪೀಡಿತರಿಗೆ ನೆರವು, ಕಾರ್ಗಿಲ್ ವಿಜಯ ದಿನದ ಆಚರಣೆ, ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿ, ಕನ್ನಡ ಕಲೆ, ಸಂಸ್ಕೃತಿ ಕುರಿತ ಪ್ರವಚನ-ನೃತ್ಯ ಮಾಲಿಕೆ, ಪರಭಾಷಿಕರಿಗೆ ಕನ್ನಡ ಕಲಿಸುವಿಕೆ, ಸ್ವಚ್ಛ ಭಾರತ ಯೋಜನೆಯ ಅನುಷ್ಠಾನ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಕೊರೊನಾ ಪೀಡಿತರು-ಸಂತ್ರಸ್ತರಿಗೆ ಮಾನವೀಯ ನೆರವು, ಗ್ರಾಮಸ್ವರಾಜ್ಯ ಕಲ್ಪನೆಯ ಸಾಕಾರ ಮುಂತಾದ ಹತ್ತಾರು ಸಮಾಜಸೇವಾ ಕಾರ್ಯಗಳಲ್ಲಿ ನಿರತವಾಗಿರುವ ಯುವ ಬ್ರಿಗೇಡ್ ನಾಡಿನ ಹೆಮ್ಮೆಯ ಮಾದರಿ ಯುವ ಸಂಸ್ಥೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ದಿ ಬೆಟರ್ ಇಂಡಿಯಾ

ಉತ್ತಮ ಭಾರತ ನಿರ್ಮಾಣಕ್ಕಾಗಿ ಮಿಡಿದು ದುಡಿಯುತ್ತಿರುವ ಹೆಮ್ಮೆಯ ಸುದ್ದಿಸಂಸ್ಥೆ ‘ದಿ ಬೆಟರ್ ಇಂಡಿಯಾ’. ಸತ್ಯ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುತ್ತಿರುವ ವೆಬ್ ತಾಣ.
ಸಿವಿಲ್ ಎಂಜಿನಿಯರಿಂಗ್ ಪದವಿ ಹಾಗೂ ವಾಣಿಜ್ಯ ಆಡಳಿತದ ಸ್ನಾತಕೋತ್ತರ ಪದವೀಧರಾದ ಬೆಂಗಳೂರು ಮೂಲದ ಧೀಮಂತ್ ಪರೇಖ್ ಮತ್ತು ಅನುರಾಧ ಪರೇಖ್ರವರು ದಿ ಬೆಟರ್ ಇಂಡಿಯಾದ ಸಂಸ್ಥಾಪಕರು. ಸುಳ್ಳು ಮತ್ತು ಸಮಾಜವಿರೋಧಿ ಸುದ್ದಿ ಮಾಧ್ಯಮಗಳಿಂದ ಬೇಸತ್ತು ಸತ್ಯ, ಸಕಾರಾತ್ಮಕ, ಸಮಾಜಮುಖಿ ಪತ್ರಿಕೋದ್ಯಮದ ಕನಸು ಹೊತ್ತು ೨೦೦೮ರಲ್ಲಿ ಆರಂಭಿಸಲಾದ ಈ ಸುದ್ದಿ ವೆಬ್ ತಾಣ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ನಿರ್ಲಕ್ಷಿತ ಭಾರತೀಯ ಕಲೆ, ಗ್ರಾಮೀಣ ಭಾಗದ ಅನಕ್ಷರತೆ, ಸಮಸ್ಯೆಗಳನ್ನು ಬಿಂಬಿಸುತ್ತಾ ಬಂದಿರುವ ಸಂಸ್ಥೆ ಅನೇಕ ಹಳ್ಳಿಗಳಿಗೆ ತನ್ನ ವರದಿಗಳಿಂದ ನೀರು, ವಿದ್ಯುತ್ಗಳು ದೊರೆಯುವಂತೆ ಮಾಡಿದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಸರ್ಕಾರದ ಅವೈಜ್ಞಾನಿಕ ನೀತಿಗಳ ಬಗ್ಗೆ ಬೆಳಕು ಚೆಲ್ಲಿ ಆಡಳಿತಗಾರರ ಕಣ್ಣು ತೆರೆಸಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಶ್ರೀಸಾಮಾನ್ಯರಿಗೆ ಪರಿಹಾರ ದೊರಕಿಸಿರುವ ದಿ ಬೆಟರ್ ಇಂಡಿಯಾ ಸಂಸ್ಥೆ ವಿಶ್ವಾದ್ಯಂತ ೯ ಕೋಟಿ ಜನರನ್ನು ತಲುಪುತ್ತಿದ್ದು ಸಮಾಜಮುಖಿ ಕೈಂಕರ್ಯದಲ್ಲಿ ಸಾರ್ಥಕತೆ ಕಂಡಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ

ಯೋಗ ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ-ಪೋಷಣೆಗೆ ಶ್ರಮಿಸುತ್ತಿರುವ ವಿಶಿಷ್ಟ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಪಾರಂಪರಿಕ ಯೋಗ ಪದ್ಧತಿಯ ಪ್ರಸಾರಕ್ಕಾಗಿಯೇ ಮುಡಿಪಿರುವ ಸಂಘಟನೆ.
ತುಮಕೂರಿನಲ್ಲಿ ನೆಲೆನಿಂತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯು ೧೯೮೦ರಲ್ಲಿ ಪ್ರಾರಂಭಗೊಂಡಿತು. ಯೋಗ ಗುರು ಅ.ರಾ.ರಾಮಸ್ವಾಮಿ ಅವರು ಈ ಸಂಸ್ಥೆಯ ರೂವಾರಿಗಳು. ಪುಟ್ಟ ಯೋಗ ತರಗತಿ ರೂಪದಲ್ಲಿ ಮೈದೆಳೆದ ಸಂಸ್ಥೆ ಆನಂತರ ಬೃಹದಾಕಾರವಾಗಿ ಮೈಚಾಚಿ ನಿಂತಿದ್ದು ಇತಿಹಾಸ. ಮಲ್ಲಾಡಿಹಳ್ಳಿಯ ರಾಘವೇಂದ್ರ ಮಹಾಸ್ವಾಮಿಗಳು, ವಿಶ್ವವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ರೂಪತೆಳೆದ ಈ ಸಂಸ್ಥೆಯದ್ದು ಸಂಸ್ಕಾರ, ಸಂಘಟನೆ ಮತ್ತು ಸೇವೆಯೇ ಮುಖ್ಯಗುರಿ. ಸರಿಸುಮಾರು ೪೦ ವರ್ಷಗಳಿಂದಲೂ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವುದು ಸ್ಮರಣಾರ್ಹ. ರಾಜ್ಯವೊಂದರಲ್ಲೇ ೯೦೦ ಶಾಖೆ ಮಾತ್ರವಲ್ಲದೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಶಾಖೆ ಹೊಂದಿರುವ ಸಮಿತಿಯಲ್ಲಿ ಈವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ತಯಾರಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿಕೊಡಲಾಗಿದ್ದು ಆ ಮೂಲಕ ಯುವಜನತೆಯ ಮಾನಸಿಕ-ದೈಹಿಕ ಆರೋಗ್ಯದ ಸುಸ್ಥಿರತೆಗೆ ಅಪೂರ್ವ ಕಾಣೆ ನೀಡಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವ ವಿಷಯ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ರೋನಾಲ್ಡ್ ಕೊಲಾಸೋ

ಮಂಗಳೂರಿನವರಾದ ರೋನಾಲ್ಡ್ ಕೊಲಾಸೋ ವಿದೇಶದಲ್ಲಿ ನೆಲೆಸಿ ಅನೇಕ ಉದ್ಯಮಗಳನ್ನು ಕಟ್ಟಿದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸ್ವಂತ ಖರ್ಚಿನಿಂದ ಜಾರಿಗೊಳಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನೇಕ ಪೋಲೀಸ್ ಕಚೇರಿಗಳನ್ನು ನವೀಕರಣಗೊಳಿಸುವುದರಲ್ಲಿ ಹಾಗು ತಾಲೂಕು ಪಂಚಾಯಿತಿ ಕಚೇರಿಗಳನ್ನು ನಿರ್ಮಾಣ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೊನಾಲ್ಡ್ ಕೊಲಾಸೋ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಸೌಹಾರ್ದತೆಗಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಲಾಸೋ, ಅನ್ನ ಆರೋಗ್ಯ ಒದಗಿಸುವಲ್ಲಿಯೂ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ರೊನಾಲ್ಡ್ ಕೊಲಾಸೋ ಅವರಿಗೆ ಪ್ರತಿಷ್ಠಿತ ಟೈಮ್ಸ್ ನೌ ಗ್ಲೋಬಲ್ ಏನ್.ಆರ್.ಐ ಪ್ರಶಸ್ತಿ, ಇಂಡಿಯನ್ ಬಹರೇನ್ ಸೆಂಟಿನರಿ ಅವಾರ್ಡ್, ವಿಶ್ವ ಕೊಂಕಣಿ ಸಮ್ಮೇಳನದ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಊರಮ್ಮದೇವಿ ಸೇವಾ ಟ್ರಸ್ಟ್

ದೇವದಾಸಿಯರ ಬಾಳಲ್ಲಿ ಸ್ವಾಭಿಮಾನದ ಬೆಳಕು ಹರಿಸಿದ ಸಂಸ್ಥೆ ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ ಉದ್ಯೋಗಿಗಳಾಗಿ ಹೊಸ ಬದುಕು ಕಂಡುಕೊಂಡ ನಿರ್ಭಾಗ್ಯರು.
ಬಳ್ಳಾರಿ ಜಿಲ್ಲೆಯ ೧೦,೫೪೦ ಮಾಜಿ ದೇವದಾಸಿಯರ ಪೈಕಿ ಕೂಡ್ಲಿಗಿಯಲ್ಲೇ ಅಗ್ರಪಾಲು, ಈ ಮಾಜಿ ದೇವದಾಸಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಜಿಲ್ಲಾಡಳಿದಿಂದ ಶೇಂಗಾ ಚಿಕ್ಕಿ ತಯಾರಿಕಾ ಘಟಕ ಸ್ಥಾಪಿಸಿ ಉದ್ಯೋಗಿನಿ ಯೋಜನೆಯಡಿ ಸಾಲ ಒದಗಿಸುವಿಕೆ. ಆ ಘಟಕದ ನಿರ್ವಹಣೆಯ ಹೊಣೆ ಹೊತ್ತಿದ್ದು ದೇವದಾಸಿ ಸ್ವಾವಲಂಬನ ಕೇಂದ್ರ ಮುಂದಿನದ್ದು ಪರಿಶ್ರಮಕ್ಕೆ ದೊರೆತ ಯಶಸ್ಸಿನ ಕಥೆ. ನಿತ್ಯ ನಾಲ್ಕು ಸಾವಿರ ಚಿಕ್ಕಿ ತಯಾರಿಕೆಯಲ್ಲಿ ತೊಡಗಿರುವ ಕೇಂದ್ರದ ಮಾಜಿ ದೇವದಾಸಿಯರು ತಾಲ್ಲೂಕಿನ ೩೦೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಚಿಕ್ಕಿ ಪೂರೈಸುತ್ತಿರುವುದು ವಿಶೇಷ, ಮಾಸಿಕ ೭ ಲಕ್ಷ ಚಿಕ್ಕಿಗೆ ಬೇಡಿಕೆಯಿದ್ದು ಆ ಬೇಡಿಕೆ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ಮಾಜಿ ದೇವದಾಸಿಯರ ಶ್ರಮದಾನಕ್ಕೆ ಇದೀಗ ಪ್ರಶಸ್ತಿಯಿಂದ ಸಾರ್ಥಕತೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಬಿ.ಎ.ರಡ್ಡಿ

ಕರ್ನಾಟಕ ಸರ್ಕಾರದ ಇಂಜಿನಿಯರಿಂಗ್ ಇನ್ ಚೀಫ್ ಆಗಿ ನಿವೃತ್ತರಾಗಿರುವ ಬಿ.ಎ.ರಡ್ಡಿ ಅವರು ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಣ್ಣ ನೀರಾವರಿ ವಿಭಾಗದಲ್ಲಿ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಡ್ಡಿ ಅವರು ನಾರಾಯಣಪುರ ಜಲಾಶಯದ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.

ನೀರಾವರಿ ವಿಭಾಗದಲ್ಲಿ ಬಿ.ಎ.ರೆಡ್ಡಿ ಅವರ ಅನುಪಮ ಸೇವೆಯನ್ನು ಗುರುತಿಸಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಯಿಂದ ಅತ್ಯುತ್ತಮ ಇಂಜಿನಿಯರ್, ನವದೆಹಲಿಯ ಫ್ರೆಂಡ್‌ಶಿಪ್ ಫೋರಂನ ಗೌರವ, ಔರಂಗಾಬಾದಿನ ಝಾನ್ಸಿ ಸಂಸ್ಥೆಯ ಪ್ರಶಸ್ತಿ ನೀಡಲಾಗಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯೂತ್ ಫಾರ್ ಸೇವಾ

ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಆಂದೋಲನದ ರೂವಾರಿ ಯೂತ್ ಫಾರ್ ಸೇವಾ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರವ್ಯಾಪಿ ಸಕ್ರಿಯವಾಗಿರುವ ಸ್ವಯಂಸೇವಾ ಸಂಸ್ಥೆ.
ಬೆಂಗಳೂರಿನಲ್ಲಿ ನೆಲೆನಿಂತಿರುವ ಯುತ್ ಫಾರ್ ಸೇವಾ ಸ್ಥಾಪನೆಯಾಗಿದ್ದು ೨೦೦೭ರಲ್ಲಿ, ಸ್ವಯಂಸೇವಾ ಸಂಸ್ಕೃತಿಯನ್ನು ಪಸರಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಸ್ಥೆಯ ಪರಮೋದ್ದೇಶ. ದೇಶದ ೧೨ ರಾಜ್ಯಗಳ ೪೨ ನಗರಗಳು ಒಂದು ಲಕ್ಷದ ಹದಿನೈದು ಸಾವಿರ ಸ್ವಯಂಸೇವಕರನ್ನೊಳಗೊಂಡ ವಿಶಾಲ ಜಾಲ ಹೊಂದಿರುವ ಯೂತ್ ಫಾರ್ ಸೇವಾ ಯುವಕರನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರದ ಯೋಜನೆಗಳ ಬೇರಿಗೆ ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ ೬,೭೮,೪೫೦ ಮಂದಿ ಫಲಾನುಭವಿಗಳನ್ನು ತಲುಪಿರುವ ಸಂಸ್ಥೆ ೧೬,೭೨೨ ವಿದ್ಯಾರ್ಥಿಗಳಿಗೆ ತರಬೇತಿ, ೫೦೦೦ಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ೧೮, ೨೭೯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಉಚಿತ ವೈದ್ಯಕೀಯ ನೆರವನ್ನೂ ಒದಗಿಸುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೀಡಾದ ೬,೪೫,೭೬೦ ಜನರಿಗೆ ನೆರವಾಗಿದ್ದು ೧,೩೫,೪೦೫ ಮಂದಿಗೆ ಆಹಾರದ ಕಿಟ್ಗಳನ್ನು ನೀಡಿ ಮಾನವೀಯತೆ ಮೆರೆದಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್

ಕಲಾರಕ್ಷಣೆ ಮತ್ತು ಕಲಾವಿದರ ಪೋಷಣೆಯಲ್ಲಿ ಅವಿರತ ಶ್ರಮ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯದ್ದು. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಧೀಮಂತ ಸಂಸ್ಥೆ.
ಕರ್ನಾಟಕ ಕಲಾರಂಗದ ಪ್ರಮುಖ ಸಂಸ್ಥೆಯೆನಿಸಿರುವ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರುವಾಸಿ. ಬಹಮುಖ ಪ್ರತಿಭೆ ರಾಘವೇಂದ್ರ ಜೆ.ಪ್ರಭಾತ್‌ ಅವರ ಕಲ್ಪನೆಯ ಕೂಸು. ಆಧ್ಯಾತ್ಮ, ತತ್ವ, ಸಾಹಿತ್ಯ, ಸಂಗೀತ, ನೃತ್ಯ, ನೃತ್ಯನಾಟಕ, ಪತ್ರಿಕೋದ್ಯಮ. ಹೀಗೆ ಹತ್ತು ಹಲವು ಮುಖದ ಕಲೆಯ ಪರಿಚಯವಿರುವ ರಾಘವೇಂದ್ರ ಪ್ರಭಾತ್ ಪ್ರಖರ ವಾಗ್ನಿ, ರಂಗನಟ, ನಿರ್ದೇಶಕ ಮತ್ತು ನೃತ್ಯ ನಾಟಕಗಳ ರಚನಕಾರರು.ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಮೆರಿಕಾ, ಯುರೋಪ್, ಸಿಂಗಪುರ, ಮಲೇಷಿಯ ಮುಂತಾದ ಪೌರಾತ್ಯ ದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಪ್ರವಾಸ ಕೈಗೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ರಾಘವೇಂದ್ರದ ಹೆಗ್ಗಳಿಕೆ. ನೃತ್ಯ ಕ್ಷೇತ್ರಕ್ಕೆ ರಾಘವೇಂದ್ರರಂತೆ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯದ್ದು ಮಹತ್ವದ ಕೊಡುಗೆ. ಸಂಸ್ಥೆಯ ‘ಶ್ರೀ ಕೃಷ್ಣಕಮಲಾನಾಥ್’ ಎಂಬ ವರ್ಣವು ಜಗತ್ತಿನಾದ್ಯಂತ ಎಲ್ಲಾ ನರ್ತಕರು ಪ್ರದರ್ಶಿಸುವ ಜನಪ್ರಿಯ ಆಕೃತಿಯಾಗಿರುವುದು ವಿಶೇಷ. ಕಲಾವನದ ಮಂದಾರಪುಷ್ಟವಾಗಿ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ತನ್ನ ಸುಗಂಧವನ್ನೂ ಬೀರುತ್ತಲೇ ಇರುವುದು ಸಾಂಸ್ಕೃತಿಕ ಹೆಗ್ಗುರುತು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವ ಮಹತ್ತಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾಕೇಂದ್ರ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಸ್ವಾಮಿ ಸಿದ್ದೇಶ್ವರಾನಾಂದ ಸ್ವಾಮಿ ಅವರು ೧೯೨೫ರಲ್ಲಿ ಸ್ಥಾಪಿಸಿದ ಈ ಸಂಸ್ಥೆಗೆ ೧೯೩೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನೀಡಿದ ಅನುದಾನದಿಂದ ಸ್ವಂತಕಟ್ಟಡದ ಸ್ಥಾಪನೆ. ಸ್ವಾಮೀಜಿಗಳ ಪಾಲಿಗೆ ಪ್ರತಿಷ್ಠಿತ ವೇದಾಂತ ಅಧ್ಯಯನ ಕೇಂದ್ರವಾಗಿದ್ದ ಆಶ್ರಮ ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ. ರಾಷ್ಟ್ರಕವಿ ಕುವೆಂಪು ಅವರು ಬಾಲ್ಯದಲ್ಲಿ ಇಲ್ಲಿಯೇ ಕಲಿತದ್ದು ವಿಶೇಷ. ಸಂಸ್ಥೆಯು ವಿವೇಕ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿವರ್ಷ ೩೫೦ ರಿಂದ ೫೦೦ ವಿದ್ಯಾರ್ಥಿಗಳು ಶಿಕ್ಷಿತರಾಗುತ್ತಿರುವುದು ಮಹತ್ವದ ಸಾಧನೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು ೯ ಶಾಲೆಗಳನ್ನು ನಡೆಸುತ್ತಿರುವ ಎಲ್ಲೆಡೆ ಮಕ್ಕಳಲ್ಲಿ ಬದುಕಿನ ನೈತಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ. ಸಂಸ್ಥೆಯಲ್ಲಿ ಕಲಿತ ಮಕ್ಕಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು ಶಿಸ್ತು-ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ. ಸಂಸ್ಥೆಯು ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಶತಮಾನದ ಅಂಚಿನಲ್ಲಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿ. ಲಕ್ಷ್ಮಿನಾರಾಯಣ

ಸಕ್ಕರೆ ನಾಡಿನ ಅಕ್ಕರೆಯ ವ್ಯಕ್ತಿತ್ವದ ವಿ. ಲಕ್ಷ್ಮಿನಾರಾಯಣ ಮೌನಸಾಧಕರು. ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಅವರದ್ದು ಅಚ್ಚಳಿಯದ ಹೆಜ್ಜೆಗುರುತು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹರದನಹಳ್ಳಿ ಹುಟ್ಟೂರು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ, ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣ, ೧೯೬೮ರಲ್ಲೇ ವಸತಿ ನಿರ್ಮಾಣದಲ್ಲಿ ತೊಡಗಿಕೊಂಡ ಉದ್ಯಮಿ, ಗುಣಮಟ್ಟದ ಕಾಮಗಾರಿ-ರಚನಾತ್ಮಕ ಕಾರ್ಯಗಳಿಗೆ ಹೆಸರುವಾಸಿ. ೧೯೯೦ರಲ್ಲಿ ‘ನಿರ್ಮಾಣ್ ಶೆಲ್ಟರ್’ ಸಂಸ್ಥೆ ಸ್ಥಾಪಿಸಿ ಬಡ-ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ನಿವೇಶನ-ಮನೆಗಳ ನಿರ್ಮಾಣ. ಆರು ಸುಸಜ್ಜಿತ ಬಡಾವಣೆಗಳ ನಿರ್ಮಾತೃ, ಸಾಹಿತ್ಯ, ಸಮಾಜಸೇವೆ ಲಕ್ಷ್ಮಿನಾರಾಯಣರ ವ್ಯಕ್ತಿತ್ವದ ಹೆಗ್ಗುರುತು. ಆಯುರ್ವೇದ ಆಸ್ಪತ್ರೆ, ಪುರಂದರ ಪ್ರತಿಷ್ಠಾನ, ಅ.ನ.ಕೃ ಪ್ರತಿಷ್ಠಾನ, ಹಿರಿಯ ನಾಗರಿಕರ ವಸತಿ ತಾಣ ಪ್ರಬುದ್ಧಾಲಯ, ‘ವಾತ್ಸಲ್ಯ’, ದೇವಸ್ಥಾನಗಳ ನಿರ್ಮಾಣ, ಧ್ಯಾನಮಂದಿರ ಬಡಮಕ್ಕಳಿಗೆ ಮಧ್ಯಾಹ್ನದೂಟದ ವ್ಯವಸ್ಥೆ, ಸುಸಜ್ಜಿತ ಅಡುಗೆಕೋಣೆ, ಭೋಜನಾ ಶಾಲೆ, ಕಲಾಭವನಗಳ ನಿರ್ಮಾಣದಂತಹ ಹತ್ತಾರು ಸೇವಾಕಾರ್ಯಗಳಲ್ಲಿ ತೊಡಗಿರುವ ದೀನಬಂಧು. ಆರ್ಯಭಟ ಪ್ರಶಸ್ತಿ, ಡಾ.ಅ.ನ.ಕೃ ಸಾರ್ವಭೌಮ, ರಾಜ್ಯ ಪ್ರಶಸ್ತಿಯಿಂದ ಭೂಷಿತವಾದ ಸಾರ್ಥಕ ಜೀವನ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ|| ಪಿ.ಶಾಮರಾಜು

ಬೆಂಗಳೂರಿನ ಮೂಲ ಸೌಕರ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಡಾ|| ಶ್ಯಾಮರಾಜು ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಣನೀಯ.

ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ವಿಭಿನ್ನ ಬಗೆಯ ಕಾರ್ಯಸ್ಥಳಗಳನ್ನು ನಿರ್ಮಿಸಿಕೊಟ್ಟಿರುವ ಶ್ಯಾಮರಾಜು ಅವರು ತಮ್ಮ ರೇವಾ ವಿಶ್ವವಿದ್ಯಾನಿಲಯದ ಮೂಲಕ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದಾರೆ.

ಬೆಂಗಳೂರಿನ ಟಿಟಿಡಿ ಸಂಸ್ಥೆಯ ದೇವಾಲಯದ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ಯಾಮರಾಜು ಅವರು ಹಲವು ದೇವಾಲಯಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಸಂಜೀವಿನಿ ಅಂಬ್ಯುಲೆನ್ಸ್, ವೃದ್ಧಾಲಯ, ಕಾರ್ಮಿಕ ಮಕ್ಕಳ ಶಾಲೆಗಳೇ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಎಸ್. ರಾಜಣ್ಣ (ವಿಶೇಷ ಚೇತನ)

ಅಂಗವೈಕಲ್ಯವನ್ನೇ ಮೆಟ್ಟಿನಿಂತು ಉತ್ತುಂಗ ಸಾಧನೆಗೈದ ವಿಶೇಷ ಚೇತನ ಡಾ. ಕೆ.ಎಸ್. ರಾಜಣ್ಣ, ದಿವ್ಯಾಂಗರ ಕಣ್ಮಣಿಯಾದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ೧೯೫೯ರಲ್ಲಿ ಜನಿಸಿದ ರಾಜಣ್ಣ ೧೧ ತಿಂಗಳ ಮಗುವಾಗಿದ್ದಾಗಲೇ ಪೋಲಿಯೋಗೆ ತುತ್ತಾಗಿ ಎರಡು ಕೈ, ಕಾಲಿನ ಸ್ವಾಧೀನ ಕಳೆದುಕೊಂಡರಾದರೂ ಧೃತಿಗೆಡಲಿಲ್ಲ. ಎಸ್.ಎಸ್.ಎಲ್.ಸಿ., ಮೈಕಾನಿಕಲ್ ಡಿಪ್ಲೋಮಾವರೆಗೆ ವ್ಯಾಸಂಗ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕ್ರೀಡೆಯಲ್ಲೂ ಆಸಕ್ತರು. ೧೯೮೦ರಲ್ಲಿ ಸ್ವಂತದ್ದೇ ಉದ್ಯಮ ಸ್ಥಾಪಿಸಿ ೫೦೦ ಮಂದಿ ಅಂಗವಿಕಲರ ಉದ್ಯೋಗದಾತರು. ಬದುಕಿನುದ್ದಕ್ಕೂ ವಿಶೇಷಚೇತನರ ಸೇವೆಗೆ ಮಿಡಿದ ರಾಜಣ್ಣ ಸಾವಿರಾರು ಮಂದಿ ನಿರುದ್ಯೋಗಿ ಅಂಗವಿಕಲರಿಗೆ ಮಾರ್ಗದರ್ಶನ, ಸ್ವಯಂ ಉದ್ಯೋಗಕ್ಕೆ ನೆರವು ನೀಡಿದ ಹೆಗ್ಗಳಿಕೆ. ೨೦೧೭ರಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಅಧಿನಿಯಮಕ್ಕೆ ರಾಜ್ಯ ಆಯುಕ್ತರಾಗಿ ನೇಮಕಗೊಂಡ ಹಿರಿಮೆ, ರಾಜ್ಯದ ೩೦ ಲಕ್ಷ ದಿವ್ಯಾಂಗರಿಗೆ ನೆರವಿನ ಹಸ್ತ ಚಾಚಿದ ಸಾರ್ಥಕತೆ. ಅಂತಾರಾಷ್ಟ್ರೀಯ ಕ್ರೀಡಾಪಟುವೂ ಆಗಿರುವ ರಾಜಣ್ಣ ೨೦೦೨ರ ಪ್ಯಾರಾ ಒಲಂಪಿಕ್ಸ್ನಲ್ಲಿ ಹಾಗೂ ಮೈಸೂರಿನ ರೋಟರಿ ಕ್ಲಬ್ ಕ್ರೀಡಾಕೂಟದಲ್ಲಿ ಚಿನ್ನ-ಬೆಳ್ಳಿ ಪದಕ ವಿಜೇತರು. ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಅಪೂರ್ವ ಸಾಧಕರು.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಛತ್ರಪ್ಪ ಕಾಗಣಿಕ‌ರ್

ಸಮಾಜಸೇವೆಯೇ ಭಗವಂತನ ಸೇವೆಯೆಂಬ ದಿವ್ಯನಂಬಿಕೆಯಲ್ಲಿ ಸೇವಾನಿರತರಾಗಿರುವವರು ಶಿವಾಜಿ ಛತ್ರಪ್ಪ ಕಾಗಣಿಕ‌. ಬೆಳಗಾವಿ ಜಿಲ್ಲೆಯ ಅಣ್ಣಾಹಜಾರೆಯೆಂದೇ ಜನಜನಿತರು.
ಬೆಳಗಾವಿ ತಾಲ್ಲೂಕಿನ ಕಟ್ಟನಭಾವಿ ಶಿವಾಜಿ ಕಾಗಣಿಕರ್‌ರ ಹುಟ್ಟೂರು. ಬಿಎಸ್ಸಿ ಪದವೀಧರರಾದ ಕಾಗಣಿಕ‌ ಬಾಲ್ಯದಿಂದಲೂ ಸಮಾಜಸೇವಾಸಕ್ತರು. ಪರಿಸರ ಅಧ್ಯಯನ, ಸಮಾಜಸೇವೆಯಲ್ಲಿ ಕ್ರಿಯಾಶೀಲರು. ಗಾಂಧಿವಾದದ ಅನುಯಾಯಿಯಾದ ಕಾಗಣಿಕ‌ ೧೯ನೇ ವಯಸ್ಸಿನಲ್ಲಿ ೧೯೬೮ರಲ್ಲಿ ಜನ ಜಾಗ್ರಣ ಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿಗರಲ್ಲಿ ಶಿಕ್ಷಣ, ನೀರಿನ ಸಂರಕ್ಷಣೆ ಜೊತೆಗೆ ಗ್ರಾಮೀಣ ಜನಪದದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದು ಮೊದಲ ಸಾಮಾಜಿಕ ಹೆಜ್ಜೆ. ಆನಂತರ ಗ್ರಾಮದಲ್ಲಿ ರಾತ್ರಿ ಶಾಲೆಯ ಸ್ಥಾಪನೆ. ಹಳ್ಳಿಯ ಅಡುಗೆ ಮನೆಗಳನ್ನು ಹೊಗೆರಹಿತ ಮಾಡಲು ೬೦ಕ್ಕೂ ಅಧಿಕ ಜೈವಿಕ ಇಂಧನ ಘಟಕಗಳ ಸ್ಥಾಪನೆ. ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಐದು ದಶಕಗಳಿಂದ ಕಾರ್ಯೋನ್ಮುಖರಾಗಿ ಅವಿರತ ಶ್ರಮಿಸುತ್ತಿರುವ ಕಾಗಣಿಕ‌ ಅವರ ನಡೆ-ನುಡಿ- ವೇಷಭೂಷಣವೆಲ್ಲವೂ ಗಾಂಧಿಮಯ. ಗಾಮೀಣಾಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಾಜಿ ಛತ್ರಪ್ಪ ಕಾಗಣಿಕ‌ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿಯಿಂದ ಭೂಷಿತರು. ೬೯ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ಅನುದಿನ ಅನುಕ್ಷಣ ನಿರತರಾಗಿರುವ ನಿಸ್ವಾರ್ಥ ಜೀವಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಪ್ರೊ. ಎನ್. ವೆಂಕೋಬರಾವ್

ಸಮಾಜಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುವ ಅಪ್ರತಿಮ ವ್ಯಕ್ತಿ ಪ್ರೊ, ನಂಜಪ್ಪ ವೆಂಕೋಬರಾವ್. ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ವಾಗಿ ಹಾಗೂ ಸೇವಾದುರಂಧರ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾಂತರಾಜಪುರದಲ್ಲಿ ೧೯೩೬ರಲ್ಲಿ ಜನಿಸಿದ ವೆಂಕೋಬರಾವ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರು. ಮೈಸೂರಿನ ಬನುಮಯ್ಯ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು. ಎಳವೆಯಲ್ಲೇ ಬ್ರಿಟಿಷರ ವಿರುದ್ಧ ಭಾಷಣ ಮಾಡಿ ಬಂಧನಕ್ಕೊಳಗಾದ ನಾಡಪ್ರೇಮಿ. ಅ.ನ.ಕೃ. ಪ್ರೇರಣೆಯಿಂದ ಖಾದಿ ಧರಿಸುವಿಕೆ-ಗ್ರಾಮೋತ್ಥಾನ ಕೈಂಕರ್ಯ. ಬರೆವಣಿಗೆ, ಸಮಾಜ ಸೇವೆಯೇ ಉಸಿರು, ಹೋರಾಟವೇ ಬದುಕು. ಅಂತಾರಾಷ್ಟ್ರೀಯ ಲಯನ್ಸ್ನ ಭೀಷ್ಮ ಬಿರುದಾಂಕಿತರು, ಜನಮಾನಸದ ನೆಚ್ಚಿನ ಮೇಷ್ಟ್ರು, ಭೂಮಿ ಕಂಪಿಸಲಿಲ್ಲ, ಪಾಪು ಮುಟ್ಟು, ಕೀಚಕರು ಮುಂತಾದ ಕೃತಿಗಳ ರಚನಕಾರರು. ಮೂರು ದಶಕಗಳ ಕಾಲ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸಿದ ಹೆಗ್ಗಳಿಕೆ. ರಾಷ್ಟ್ರೀಯ ಸ್ವಯಂಸೇವಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ, ಎಬಿವಿಪಿ ರಾಜ್ಯ ಕಾರ್ಯದರ್ಶಿ, ವಿಕ್ರಮ ಪತ್ರಿಕೆಯ ಉಪಾಸಂಪಾದಕ ಮತ್ತಿತರ ಗುರುತರ ಹೊಣೆಗಾರಿಕೆ ನಿರ್ವಹಿಸಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಿಶಿಷ್ಟ ಘನವ್ಯಕ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ವಿ. ರಾಜು

ಹೆಸರಾಂತ ಆರ್ಥಿಕ ತಜ್ಞರು, ಅತ್ಯುತ್ತಮ ಆರ್ಥಿಕ ಸಲಹೆಗಾರರು ಡಾ. ಕೆ.ವಿ. ರಾಜು. ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಆರ್ಥಿಕ ವಿಷಯಗಳ ಅಪಾರ ಜ್ಞಾನವಂತರು.
ಮೂಲತಃ ಕೋಲಾರದವರಾದ ಕೆ.ವಿ. ರಾಜು ಬಿ.ಎ. ಪದವೀಧರರು, ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ, ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದವರು, ಆರ್ಥಿಕ ವಿಷಯಗಳಲ್ಲಿ ಕರಾರುವಾಕ್ಕಾದ ಜ್ಞಾನವುಳ್ಳ ಕೆ.ವಿ. ರಾಜು ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕಾನಮಿಕ್ ಚೇಂಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಅಂತರ್ಜಲ ವೃದ್ಧಿ, ಬೇಸಾಯದ ನಿರ್ವಹಣೆ, ಗ್ರಾಮೀಣಾಭಿವೃದ್ಧಿ, ವಿಶ್ವಬ್ಯಾಂಕ್ನ ಸಾಮಾಜಿಕ-ಆರ್ಥಿಕ ಪರಿಣಾಮಗಳ ಮೌಲ್ಯಮಾಪನದಂತಹ ಹತ್ತಾರು ವಿಷಯಗಳ ಅಧ್ಯಯನಶೀಲರು, ಯೋಜನಾಕರ್ತೃ. ೨೨ ಮಹತ್ವದ ಕೃತಿ ಹಾಗೂ ೯೮ ಸಂಶೋಧನಾ ಪ್ರಬಂಧಗಳ ರಚನಕಾರರು. ಯಡಿಯೂರಪ್ಪ ಅವರು ಚೊಚ್ಚಲಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷ ಹಾಗೂ ಈಗ ಉತ್ತರಪ್ರದೇಶ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಹತ್ತಾರು ಯೋಜನೆಗಳ ಹಿಂದಿನ ರೂವಾರಿಯಾದ ಹೆಗ್ಗಳಿಕೆ. ಹಲವು ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲೂ ತಮ್ಮ ವಿದ್ವತ್ ಮೆರೆದಿರುವ ಡಾ. ಕೆ.ವಿ. ರಾಜು ಅವರ ಪಾಂಡಿತ್ಯ-ಆರ್ಥಿಕ ಜ್ಞಾನಕ್ಕೆ ಅವರಷ್ಟೇ ಸಾಟಿ, ಕರುನಾಡಿನ ಹೆಮ್ಮೆ.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಸಾಲುಮರದ ವೀರಾಚಾರ್

ಪರಿಸರ ಸಂರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡ ಅಪಾರ ವೃಕ್ಷಪ್ರೇಮಿ ವೀರಾಚಾರ್, ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಸಾವಿರ ಗಿಡಗಳ ಸರದಾರ, ಅಪೂರ್ವ ಪರಿಸರಮಿತ್ರ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಂದಿಹಳ್ಳಿ ವೀರಾಚಾರ್‌ರ ಹುಟ್ಟೂರಾದರೂ ಬದುಕು ನೆಲೆಗೊಂಡಿದ್ದು ಹರಿಹರ ತಾಲೂಕಿನ ಮಿಟ್ಲಕಟ್ಟೆಯಲ್ಲಿ. ಕುಲುಮೆ ಕೆಲಸವೇ ಬದುಕಿಗೆ ಆಧಾರ. ಬಾಲ್ಯದಿಂದಲೂ ಗಿಡ ಮರಗಳೆಂದರೆ ವಿಪರೀತ ಪ್ರೀತಿ. ಗಿಡ ನೆಡುವುದು ನೆಚ್ಚಿನ ಕೆಲಸ. ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭಿಸಿದ ವೀರಾಚಾರ್‌ರ ಸಸ್ಯಪ್ರೇಮ ಬದುಕಿನ ಗತಿಯನ್ನೇ ಬದಲಿಸಿದ್ದು ವಿಶೇಷ. ಸ್ವಂತ ಕುಟುಂಬ, ಖಾಸಗಿ ಬದುಕು, ಕುಲುಮೆ ಉದ್ಯೋಗವನ್ನು ನಿರ್ಲಕ್ಷಿಸುವಷ್ಟು ಪರಿಸರ ಪ್ರೇಮ ಅವರದ್ದು. ಮದುವೆ ಸಮಾರಂಭ, ಗೃಹಪ್ರವೇಶ ಮುಂತಾದ ಯಾವುದೇ ಸಮಾರಂಭಗಳಿಗೂ ತೆರಳಿದರೂ ಗಿಡವೇ ಊಡುಗೊರೆ. ಸಾವಿನ ಮಣ್ಣಿಗೆ ಹೋದರೂ ಸಮಾಧಿ ಬಳಿ ಗಿಡ ನೆಟ್ಟು ಬರುವುದು ನೆಚ್ಚಿನ ಹವ್ಯಾಸ. ಶಾಲೆಗಳ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಲೆಕ್ಕವಿಲ್ಲ. ವನಮಹೋತ್ಸವ ಕಾರ್ಯಕ್ರಮಗಳ ಮೂಲಕ ಮೂಡಿಸಿದ ಪರಿಸರ ಜಾಗೃತಿ ಅಗಣಿತ.ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಿರುವ ವೀರಾಚಾರ್ ಸಾವಿರ ಗಿಡಗಳ ಸರದಾರರೆಂದೇ ಜನಜನಿತ. ನಿರ್ವಾಜ್ಯ ಪರಿಸರ ಪ್ರೇಮದ ವೀರಾಚಾರ್‌ಗೆ ಬದುಕಿಗಿಂತಲೂ ಪರಿಸರವೇ ದೊಡ್ಡದು. ಅದಕ್ಕಾಗಿಯೇ ಬದುಕು ಸದಾ ಮೀಸಲು.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಹನಾ ಕುಮಾರಿ

ದೇಶದ ಹೈಜಂಪ್ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಹನಾ ಕುಮಾರಿ ಅವರು ಲಂಡನ್ನಿನಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರತಿಭಾವಂತ ಕ್ರೀಡಾಳು.

ಮಹಿಳಾ ಹೈಜಂಪ್ ವಿಭಾಗದಲ್ಲಿ ೧.೯೨ ಮೀಟರ್ ಎತ್ತರ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಹನಾಕುಮಾರಿ ಗೌಹಾತಿಯಲ್ಲಿ ಜರುಗಿದ ಹನ್ನೆರಡನೆಯ ದಕ್ಷಿಣ ಏಷಿಯಾ ಕ್ರೀಡಾಕೂಟದಲ್ಲಿಯೂ ಮಹಿಳಾ ವಿಭಾಗದ ಹೈಜಂಪ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹದಿನಾಲ್ಕಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿರುವ ಸಹನಾ ಕುಮಾರಿ ಅವರಿಗೆ ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಗೌರವ, ಕೆಂಪೇಗೌಡ ಪ್ರಶಸ್ತಿ ಹಾಗೂ ಕೇಂದ್ರ ರೈಲ್ವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಉಷಾರಾಣಿ ಎನ್.

ಕರ್ನಾಟಕ ಕಂಡ ಪ್ರತಿಭಾವಂತ ಕ್ರೀಡಾಪಟು ಉಷಾರಾಣಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕಗಳ ಭೇಟೆಯಾಡಿದ ಕಬಡ್ಡಿ ಪಟು.
ಮೂಲತಃ ಮಂಡ್ಯದವರಾದ ಉಷಾರಾಣಿ ಬಿ.ಎ. ಪದವೀಧರರು. ವೃತ್ತಿಯಲ್ಲಿ ಪೊಲೀಸ್ ಪೇದೆ. ಸದ್ಯ ಕೋರಮಂಗಲದ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರತರು. ಬಾಲ್ಯದಿಂದಲೂ ಕಬಡ್ಡಿ ಪ್ರೇಮ. ಇಲಾಖೆಯಲ್ಲಿ ಸಿಕ್ಕ ಪ್ರೋತ್ಸಾಹವೇ ಸಾಧನೆಗೆ ಹಾದಿ. ಒಂದೂವರೆ ದಶಕಗಳ ಕ್ರೀಡಾ ಜೀವನದಲ್ಲಿ ಸಾಧಿಸಿದ್ದು ಅಪಾರ, ಬೇಟೆಯಾಡಿದ ಪದಕಗಳು ಅನೇಕಾನೇಕ. ಕರ್ನಾಟಕ ಪೊಲೀಸ್ ಮಹಿಳಾ ಕಬ್ಬಡಿ ತಂಡಕ್ಕೆ ನಾಲ್ಕು ಬಾರಿ ನಾಯಕಿಯಾಗಿದ್ದ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬಾರಿ ಪದಕ ಗೆದ್ದ ಕ್ರೀಡಾಚೇತನ. ಅಖಿಲ ಭಾರತ, ರಾಜ್ಯಮಟ್ಟದ, ದಕ್ಷಿಣವಲಯ ಮಟ್ಟದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಹತ್ತಕ್ಕೂ ಹೆಚ್ಚು ಚಿನ್ನ, ಅನೇಕ ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡದ ಪ್ರತಿಭಾವಂತೆ, ಅನೇಕ ಬಾರಿ ಅತ್ಯುತ್ತಮ ಆಟಗಾರ ಪ್ರಶಸ್ತಿ, ನಾಲ್ಕು ಬಾರಿ ವರ್ಷದ ಅತ್ಯುತ್ತಮ ಕ್ರೀಡಾವ್ಯಕ್ತಿ ಗೌರವ ಹಾಗೂ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಹೆಮ್ಮೆಯ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿ.ಆರ್.ರಘುನಾಥ್

ಭಾರತ ಹಾಕಿ ತಂಡದ ಪ್ರಮುಖ ಆಟಗಾರರಾದ ವಿ.ಆರ್.ರಘುನಾಥ್ ರಾಷ್ಟ್ರಮಟ್ಟದಲ್ಲಿ ಸಬ್ ಜ್ಯೂನಿಯರ್ ಭಾರತೀಯ ತಂಡದ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

೨೦೦೫ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೀನಿಯರ್ ಹಾಕಿ ಪಂದ್ಯದಲ್ಲಿ ಸ್ಥಾನ ಪಡೆದ ರಘುನಾಥ, ನಂತರ ಹಲವು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿ ಪಾಲುಗೊಂಡಿದ್ದಾರೆ.

೨೦೦೭ರಲ್ಲಿ ಸುಲ್ತಾನ್ ಅಜ್ಞಾನ್ ಷಾ ಕಪ್ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಇವರು ರಾಷ್ಟ್ರೀಯ ಲೀಗ್ ಪಂದ್ಯಾವಳಿಗಳಲ್ಲಿ ಉತ್ತರ ಪ್ರದೇಶದ ನಾಯಕರಾಗಿದ್ದು, ಒಂದೇ ಸೀಸನ್ನಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಎರಡು ಬಾರಿ ಬರೆದಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವೇಶ್ವರ ಸಜ್ಜನ್

ಒಣಭೂಮಿ ಬೇಸಾಯವನ್ನೇ ಬದುಕಾಗಿಸಿಕೊಂಡು ಬಂಗಾರದ ಬೆಳೆ ಬೆಳೆದವರು ವಿಶ್ವೇಶ್ವರ ಸಜ್ಜನ್, ಸಾವಯವ ಕೃಷಿಯಲ್ಲಿ ಯಶಸ್ಸಿನ ಹೊಸ ದಾಖಲೆ ಬರೆದ ಆದರ್ಶ ಕೃಷಿಕರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯವರಾದ ವಿಶ್ವೇಶ್ವರ ಸಜ್ಜನ್ ಕನ್ನಡದ ಸ್ನಾತಕೋತ್ತರ ಪದವೀಧರರು. ಕೃಷಿಯಲ್ಲಿ ಆಸಕ್ತಿ ಮೊಳಕೆಯೊಡೆದು ಬೇಸಾಯಕ್ಕಿಳಿದವರು. ಪಾಲಿಗೆ ಬಂದ ಐದು ಎಕರೆ ಒಣಭೂಮಿಯೇ ಕರ್ಮಭೂಮಿ, ಬರ ಮತ್ತು ಅಕಾಲಿಕ ಮಳೆಯ ಮಧ್ಯೆಯೇ ಸಾವಯವ ಕೃಷಿಯಿಂದ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣು, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಮತ್ತೊಂದು ಎಕರೆಯಲ್ಲಿ ಜಂಬೂ ನೇರಳೆ ಬೆಳೆದ ಸಾಧಕರು.ಬೇಲದ ಜ್ಯೂಸ್, ಪೇಡ, ರಸಂ, ಟೀಪೌಡರ್ ತಯಾರಿಕೆ, ಹತ್ತು ದೇಸೀ ಗೀರ್ ತಳಿಯ ಗೋವುಗಳ ಸಾಕಣೆ, ಅವುಗಳ ಹಾಲಿನಿಂದಲೂ ಪೇಡ, ಗೋಮೂತ್ರ, ಆರ್ಕ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಿ ಗೆದ್ದವರು. ಕೃಷಿ ಆದಾಯದಲ್ಲೇ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಸಜ್ಜನ್ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ನೈಜ ಕೃಷಿಋಷಿ.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಬಿ. ನಂಜೇಗೌಡ

ಕರ್ನಾಟಕದ ವಾಲಿಬಾಲ್ ‘ಮಾರ್ಗನ್’ ಎಂದೇ ಹೆಸರುವಾಸಿಯಾದವರು ಹೆಚ್.ಬಿ. ನಂಜೇಗೌಡ, ರಾಷ್ಟ್ರಮಟ್ಟದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ಗ್ರಾಮೀಣ ಕ್ರೀಡಾ ಪ್ರತಿಭೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಪುರದ ಹೊಸಹಳ್ಳಿಯ ರೈತ ಕುಟುಂಬದವರಾದ ನಂಜೇಗೌಡರಿಗೆ ಬಾಲ್ಯದಿಂದಲೂ ವಾಲಿಬಾಲ್ ಆಟವೆಂದರೆ ಪಂಚಪ್ರಾಣ. ಬಿ.ಎ., ಬಿ.ಪಿ.ಇಡಿ., ಡಿಪ್ಲೋಮಾ ಇನ್ ಕೋಚಿಂಗ್ನಲ್ಲಿ ವ್ಯಾಸಂಗ, 70ರ ದಶಕದಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿರುವಾಗಲೇ ವಾಲಿಬಾಲ್ ಪಟುವಾಗಿ ರೂಪಾಂತರ. ಕಾಲೇಜು ತಂಡದ ಆಟಗಾರನಾಗಿ ಗಮನಸೆಳೆಯುವಿಕೆ. ಹಲವು ರಾಜ್ಯ-ಅಂತಾರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರತಿಭಾ ಪ್ರದರ್ಶನ. ಅನಂತರ ತರಬೇತುದಾರರಾಗಿ ಮಾರ್ಪಾಡು, ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ತರಬೇತುದಾರ, ತೀರ್ಪುಗಾರರಾಗಿ ಅನನ್ಯ ಸೇವೆ. ಹಳ್ಳಿಮಟ್ಟದಿಂದಿಡಿದು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಅದ್ಭುತ ಕ್ರೀಡಾಸಂಘಟನಕಾರರೆಂಬ ಅಚ್ಚಳಿಯದ ಹೆಗ್ಗಳಿಕೆ. ವಾಲಿಬಾಲ್ ಆಟದ ಜ್ಞಾನವನ್ನು ಹಳ್ಳಿಪ್ರತಿಭೆಗಳಿಗೆ ಹಂಚಿದ ‘ಆಚಾರ್ಯ’ರು. ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಲ್.ಶೇಖರ ನಾಯಕ್

ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಲ್.ಶೇಖರ ನಾಯಕ್ ಅವರು ಅಂತರರಾಷ್ಟ್ರೀಯ ಟಿ-೨೦ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ಶೇಖರ ನಾಯಕ್ ಬಡರೈತನ ಮಗನಾಗಿ ಜನಿಸಿದ ಹುಟ್ಟು ಅಂಧರು. ಅಂಧ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಕ್ರಿಕೆಟ್ ಕಲಿತ ಶೇಖರನಾಯಕ್ ಕರ್ನಾಟಕ ರಾಜ್ಯ ಅಂಧ ಕ್ರಿಕೆಟ್ ಆಟಗಾರರಾಗಿ, ನಾಯಕರಾಗಿ, ಹೆಸರುವಾಸಿಯಾದವರು.

ಭಾರತ ತಂಡದ ಅಂಧ ಕ್ರಿಕೆಟ್ ಕ್ಯಾಪ್ಟನ್ ಆಗಿ ವಿಶ್ವಕಪ್ ಅಂಧ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದುಕೊಟ್ಟ ಶೇಖರನಾಯಕ್ ಅವರಿಗೆ ಭಾರತ ಸರ್ಕಾರ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ವಿದ್ಯಾಸಿಂಹಾಚಾರ್ಯ ಮಾಹುಲಿ

ಮುಂಬಯಿಯಲ್ಲಿ ಸನಾತನ ವೈದಿಕ ಸಂಸ್ಕೃತಿ ಉಳಿವಿಗೆ ಅಹರ್ನಿಶಿ ಶ್ರಮಿಸುತ್ತಿರುವ ಮಹಾಗುರು, ಘನ ವಿದ್ವಾಂಸರು ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ. ಹರಿದಾಸ ಸಾಹಿತ್ಯದ ಪ್ರಚಾರಕರು, ಹೊರನಾಡಿನ ಕನ್ನಡದ ಕಟ್ಟಾಳು.
ಮುಂಬಯಿನ ಮಾಳುಂದದಲ್ಲಿ ಮಾಳುಂದದಲ್ಲಿ ಮಧ್ವಸಿದ್ಧಾಂತದ ವಾಣಿ ವಿಹಾರ ಸಿದ್ಧಪಡಿಸಿದ ಮಾಹುಲಿ ಗೋಪಾಲಾಚಾರ್ಯರ ಸುಪುತ್ರರಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಬಾಲ್ಯದಲ್ಲೇ ಶಾಸ್ತ್ರಪಾರಂಗತರು. ತಂದೆ ಕಟ್ಟಿದ ಮಹಾವಿದ್ಯಾಲಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ಅನನ್ಯ ಸೇವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನವಸ್ತ್ರದಾನ, ಆಶ್ರಯ ನೀಡಿ ೧೪ ವರ್ಷ ವಿದ್ಯಾದಾನ ಮಾಡುವಲ್ಲಿ ಸದಾ ನಿರತರು. ಪಂಡಿತರನ್ನು ರೂಪಿಸಿದ ಪಂಡಿತೋತ್ತಮರು. ಮುಂಬಯಿ ನೆಲೆದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸಿದ ಅಗ್ರಗಣ್ಯ ಆಚಾರ್ಯರು, ಹರಿದಾಸ ಸಾಹಿತ್ಯದಲ್ಲಿ ಅಪಾರ ವಿದ್ವತ್ತು, ಸಿಡಿಗಳ ಮೂಲಕ ಹರಿಭಕ್ತಿಸಾರವನ್ನು ಪ್ರಚುರಪಡಿಸಿದ ಮಹನೀಯರು. ನಾನಾ ನಗರಗಳಿಗೆ ತೆರಳಿ ಜ್ಞಾನಸತ್ರ ನಡೆಸುವ ಅಪ್ಪಟ ಕನ್ನಡಪ್ರೇಮಿ, ಪಂಡಿತ ಪರಂಪರೆ ನಿರ್ಮಾಣಕ್ಕೆ ಬದುಕು ಮೀಸಲಿಟ್ಟಿರುವ ಕರ್ಮಯೋಗಿ.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ಕೆ.ದೇವರಾವ್

ಸಾವಯವ ಕೃಷಿಯನ್ನೇ ಬದುಕಿನ ಮಾರ್ಗವಾಗಿಸಿಕೊಂಡ ಕಾಯಕಯೋಗಿ ಬಿ.ಕೆ.ದೇವರಾವ್. ಭತ್ತದ ತಳಿಗಳ ಸಂರಕ್ಷಣೆಯಲ್ಲಿ ಮೌಲಿಕವಾದ ಸಾಧನೆಗೈದ ಮಾದರಿ ಕೃಷಿಕರು.
ದೇವರಾಯರು ಮೂಲತಃ ಕೃಷಿ ಮನೆತನದವರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಹುಟ್ಟೂರು. ಓದಿದ್ದು ೧೧ನೇ ಇಯತ್ತೆವರೆಗೆ ಮಾತ್ರ ಶಾಲೆಗಿಂತ ಕೃಷಿ ಅನುಭವದಲ್ಲಿ ಕಲಿತದ್ದೇ ಅಪಾರ. ಮಿತ್ತಬಾಗಿಲಿನ ಕೃಷಿ ಭೂಮಿಯೇ ಇವರ ತಪೋಭೂಮಿ. ತಂದೆಯಿಂದ ಬಂದ ೩೦ ಎಕರೆ ಭೂಮಿಯ ಪೈಕಿ ೪ ಎಕರೆಯಲ್ಲಿ ಭತ್ತ, ಎರಡೂವರೆ ಎಕರೆಯಲ್ಲಿ ಅಡಿಕೆ, ೨೫೦ ತೆಂಗು, ಗೇರು, ಕಾಳುಮೆಣಸು, ಮನೆಮಟ್ಟಿಗೆ ತರಕಾರಿ ಬೆಳೆವ ಸ್ವಾವಲಂಬಿ ಕೃಷಿ ಬದುಕು. ಮಲೆನಾಡಿನ ಆಕಳ ತಳಿಗಳ ಸಂರಕ್ಷಣೆಯಲ್ಲೂ ಎತ್ತಿದ ಕೈ. ಮರೆಯಾಗಿದ್ದ ಭತ್ತದ ೨೩ ತಳಿಗಳ ಸಂರಕ್ಷಕರು- ಪೋಷಕರು. ತಳಿ ವೈವಿಧ್ಯ ಹೆಚ್ಚಿಸುವುದೇ ಬದುಕಿನ ಹೆಗ್ಗುರಿ. ಸಾಂಪ್ರದಾಯಿಕ ಕ್ರಮದ ಬಿತ್ತನೆ ಮತ್ತು ನಾಟ ದೇವರಾಯರ ಬೇಸಾಯದ ವೈಶಿಷ್ಟ್ಯ, ರೈತ ಅವರ ಊಟಕ್ಕಾದರೂ ಗದ್ದೆ ಮಾಡಲಿ ಎಂಬ ದಿವ್ಯಮಂತ್ರ ಪಠಿಸುತ್ತಿರುವ ದೇವರಾಯರು ಸಾವಯವ ಕೃಷಿಯ ಅನನ್ಯ ಸಾಧಕರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್‌.ಆರ್. ಶ್ರೀಶಾ

ಪತ್ರಿಕೋದ್ಯಮದಲ್ಲಿ ‘ಕರೆಂಟ್ ಮಾತು’ನಿಂದಲೇ ಹೆಸರಾದ ಹಿರಿಯ ವಿಷಯತಜ್ಞ ಪತ್ರಕರ್ತರು ಎಚ್‌.ಆರ್.ಶ್ರೀಶಾ, ಬಹುಪತ್ರಿಕೆಗಳಲ್ಲಿ ಛಾಪು ಮೂಡಿಸಿದ ಅಂಕಣಕಾರರು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೫೧ರಲ್ಲಿ ಜನಿಸಿದ ಶ್ರೀಶ ಕನ್ನಡ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು. ಖಾದ್ರಿ ಶಾಮಣ್ಣರ ಗರಡಿಯಲ್ಲಿ ಪಳಗಿದ ಪತ್ರಕರ್ತರು, ಹಾಸನದ ಜನಮಿತ್ರ, ಸಂಯುಕ್ತಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕದಲ್ಲಿ ಪತ್ರಿಕಾಸೇವೆ. ವಿಷಯತಜ್ಞರು ವಿರಳವಾಗುತ್ತಿರುವ ಪತ್ರಿಕಾರಂಗದಲ್ಲಿ ಎಚ್.ಆರ್.ಶ್ರೀಶ ಅವರದ್ದು ವಿಶೇಷ ಹೆಸರು. ವಿದ್ಯುತ್ ಕ್ಷೇತ್ರದ ಬಗ್ಗೆ ಅವರದ್ದು ತಳಸ್ಪರ್ಶಿ ಅಧ್ಯಯನ, ನಿಖರ ಜ್ಞಾನ, ವ್ಯಕ್ತಿತ್ವದಂತೆ ಬರವಣಿಗೆಯೇ ಸರಳ, ಪದಗಳಂತೆ ಮಾತು ಮೃದು. ಇಂಧನ ವಲಯ ವಿದ್ಯಮಾನ, ಸಮಸ್ಯೆ, ಸವಾಲುಗಳು ಬರೆದ ಲೇಖನಸರಮಾಲೆಗೆ ಲೆಕ್ಕವಿಲ್ಲ. ಸರ್ಕಾರದ ಕಣ್ಣಿರೆಸಿದವರು. ಜನಪ್ರಿಯ ಕರೆಂಟ್ ಮಾತು’ ಅಂಕಣಕಾರರು. ಕೆಇಆರ್‌ಸಿ, ಕೆಪಿಸಿಎಲ್‌ ಕೈಪಿಡಿಗಳ ರಚನಕಾರರು. ವಿದ್ಯುತ್ ರಂಗ ಕುರಿತ ಗ್ರಂಥಕರ್ತರು. ಖಾದ್ರಿ ಶಾಮಣ್ಣ ಟ್ರಸ್ಟ್‌ನ ಅನನ್ಯ ಭಾಗವಾಗಿ ಧೀಮಂತ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿದವರು. ವಾದ-ವಿವಾದಗಳಲ್ಲದೇ ನಾಲ್ಕು ದಶಕಕ್ಕೂ ಮೀರಿ ಪತ್ರಿಕೋದ್ಯಮದಲ್ಲಿ ಸೇವೆಗೈಯುತ್ತಿರುವ ಅಪ್ಪಟ ಪತ್ರಿಕಾಜೀವಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ

ಮುಂಬಯಿ ನೆಲದಲ್ಲಿ ಕನ್ನಡದ ಕೀರ್ತಿ ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ ಕುಸಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ಉದ್ಯಮ-ಸಮಾಜಸೇವಾ ಕ್ಷೇತ್ರದ ಸಾಧನಾಶೀಲರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಚೆಲ್ಲಡ್ಕ ಗುತ್ತು ಹುಟ್ಟೂರು, ತಾಯ್ಕೆಲದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಂಬಯಿಯಲ್ಲಿ ವಾಣಿಜ್ಯ ಪದವಿ. ಶಿಪ್ಪಿಂಗ್ ಕಂಪನಿಯಲ್ಲಿ ವೃತ್ತಿ ಬದುಕಿನಾರಂಭ. ಸತತ ೨೮ ವರ್ಷಗಳ ಕಾಲ ವಿವಿಧ ಶಿಪ್ಪಿಂಗ್ ಕಂಪನಿಗಳಲ್ಲಿ ಗುರುತರ ಸೇವೆ. ೨೦೦೭ರಲ್ಲಿ ಸ್ವಂತದ್ದೇ ಭವಾನಿ ಶಿಪ್ಪಿಂಗ್ ಸರ್ವಿಸಸ್ ಕಂಪನಿ ಆರಂಭ. ಮುಂದಿನದು ಅಪ್ರತಿಮ ಯಶೋಗಾಥೆ, ದೇಶದ ೧೮ ವಲಯಗಳಲ್ಲಿ ಕಛೇರಿಗಳು, ನಾಲ್ಕು ವಿದೇಶಗಳಲ್ಲಿ ಶಿಪ್ಪಿಂಗ್ ಲೈನ್ಗಳು, ಶಿಪ್ಪಿಂಗ್ ಉದ್ಯಮದಲ್ಲಿ ಅಚ್ಚರಿಯ ಸಾಧನೆ. ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಹಿರಿಮೆ. ಅಬಲ ಹೆಣ್ಣುಮಕ್ಕಳ ವಿವಾಹಕ್ಕೆ ನಿರಂತರ ನೆರವು, ಸಾಮಾಜಿಕ ಕಾರ್ಯಗಳಲ್ಲಿ ನಿಸ್ಪೃಹ ನಡೆ, ಶಿಪ್ಪಿಂಗ್ ನೋಬಲ್, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಂದ ಭೂಷಿತರಾದ ಸಮಾಜಮುಖಿ ಸಹೃದಯಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಲೀಲಾವತಿ ದೇವದಾಸ್

ಹೈದರಾಬಾದ್ ಕರ್ನಾಟಕದಲ್ಲಿ ಹದಿನೈದು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಲೀಲಾವತಿ ದೇವದಾಸ್ ಅವರು ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ನಿಧಿಯಲ್ಲಿ ಸೇವೆ ಸಲ್ಲಿಸಿದವರು.

ಟಿ. ನರಸೀಪುರದಲ್ಲಿ ಕುಷ್ಠರೋಗ ನಿವಾರಣಾ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ವಿಶ್ರಾಂತ ಜೀವನದಲ್ಲಿಯೂ ಮೂರು ಮಿಷನ್ ಆಸ್ಪತ್ರೆಗಳಲ್ಲಿ ಸಲ್ಲಿಸುತ್ತಿರುವ ಲೀಲಾದೇವಿ ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಸೇವೆ ಅನುಕರಣೀಯ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಶಾಶ್ವತಿ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಡಾ|| ಲೀಲಾವತಿ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿಯೂ ಸಕ್ರಿಯರು.

ಐವತ್ತಕ್ಕೂ ಹೆಚ್ಚು ಆರೋಗ್ಯ ಸಂಬಂಧಿ ಕೃತಿಗಳನ್ನು ರಚಿಸಿರುವ ಇವರು ಅನೇಕ ಪತ್ರಿಕೆಗಳಲ್ಲಿ ಆರೋಗ್ಯ ವಿಷಯವಾಗಿ ಅಂಕಣಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಬಿಷ್ಟಪ್ಪ ಫಕೀರಪ್ಪ ದಂಡಿನ

ಸಾವಿರಾರು ಬಡಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿ ಬೆಳಗಿದ ಶಿಕ್ಷಣ ಚೇತನ ಡಾ. ಬಿ.ಎಫ್. ದಂಡಿನ. ೬೦ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಹಳ್ಳಿಮಕ್ಕಳ ಹಿತಚಿಂತಕ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ದ್ಯಾಮಣಸಿಯಲ್ಲಿ ಜನಿಸಿದ ದಂಡಿನ ಕಡುಬಡತನದಲ್ಲಿ ಅರಳಿದ ಪ್ರತಿಭೆ. ಕೂಲಿ ಮಾಡುತ್ತಲೇ ವ್ಯಾಸಂಗ. ಬಿ.ಎಸ್ಸಿ. ಪದವಿ, ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಒಂದೂವರೆ ದಶಕಗಳ ಕಾಲ ಸೇವೆ. ಪ್ರಾಚಾರ್ಯರಾಗಿಯೂ ದುಡಿತ. ಉದ್ಯೋಗಕ್ಕೆ ರಾಜೀನಾಮೆಯಿತ್ತು ಬಡಮಕ್ಕಳ ಶಿಕ್ಷಣಕ್ಕಾಗಿ ಜೀವನ ಅರ್ಪಣೆ, ಕನಕದಾಸ ಶಿಕ್ಷಣ ಸಂಸ್ಥೆ ಮೂಲಕ ಬಡ, ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ವಸತಿನಿಲಯ ಸ್ಥಾಪಿಸಿ ಉಚಿತ ಶಿಕ್ಷಣ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣ ಒದಗಿಸುವ ಹೈಸ್ಕೂಲ್, ಪದವಿಪೂರ್ವ ಕಾಲೇಜು, ಪದವಿ, ಬಿ.ಎಡ್, ಡಿ.ಎಡ್ ಹಾಗೂ ಸ್ನಾತಕೋತ್ತರ ಸಂಸ್ಥೆ ಸೇರಿದಂತೆ ಒಟ್ಟು ೬೦ ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಹೆಗ್ಗಳಿಕೆ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕು ರೂಪಿಸಿದ ಧನ್ಯತೆ. ೮೬ರ ಇಳಿ ವಯಸಿನಲ್ಲೂ ಕ್ರಿಯಾಶೀಲವಾಗಿರುವ ಅಕ್ಷರದಾಸೋಹಿ, ಶಿಕ್ಷಣ ಪ್ರದೀಪ, ಅತ್ಯುತ್ತಮ ಸಮಾಜ ಸೇವಕ ಮುಂತಾದ ಪ್ರಶಸ್ತಿಗಳಿಗೆ ಪಾತ್ರವಾಗಿರುವ ವಿರಳಾತಿವಿರಳ ಶಿಕ್ಷಣ ಶಿಲ್ಪಿ,

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕತ್ತಿಗೆ ಚನ್ನಪ್ಪ

ಮಲೆನಾಡಿನ ಬಹುಮುಖಿ ಸಾಧಕರ ಸಾಲಿಗೆ ನಿಸ್ಸಂಶಯವಾಗಿ ಸೇರುವವರು ಕತ್ತಿಗೆ ಚನ್ನಪ್ಪ, ಸಾಹಿತ್ಯ, ರಂಗಭೂಮಿ, ಸಮಾಜಸೇವೆಯಲ್ಲಿ ಧನ್ಯತೆ ಕಂಡುಕೊಂಡ ನಿನ್ನಹ ಸಾಧಕರು.
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕತ್ತಿಗೆ ಚೆನ್ನಪ್ಪ ಅವರು ಹೊನ್ನಾಳಿ ತಾಲ್ಲೂಕಿ ಕತ್ತಿಗೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿಇಡಿ ವ್ಯಾಸಂಗ ಮಾಡಿದವರು. ಸಾಹಿತ್ಯಾಭಿರುಚಿ, ರಂಗಪ್ರೇಮ, ಸಮಾಜಚಿಂತನೆ ಕತ್ತಿಗೆ ಚೆನ್ನಪ್ಪರ ವೈಶಿಷ್ಟ್ಯತೆ.ಕವಿ, ಕಥೆಗಾರರಾಗಿಯೂ ಜನಪ್ರಿಯ. ಜೇನುಹುಟ್ಟು ಕವನಸಂಕಲನ, ಮಾನಜ್ಜಿ ಮತ್ತು ಇತರೆ ಕಥೆಗಳು ಕಥಾಸಂಕಲನ, ಮುತ್ತಿನ ತೆನೆ, ಚಿತ್ತಾರ ಮಕ್ಕಳ ಕವಿತಾಸಂಕಲನವೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನಕಾರರು. ನಟನೆ ನೆಚ್ಚಿನ ಗೀಳು. ಹಲವಾರು ನಾಟಕಗಳ ಪಾತ್ರಗಳಿಗೆ ಜೀವತುಂಬಿದ ಪಾತ್ರಧಾರಿ, ಸಾಮಾಜಿಕ ಸೇವೆ ವ್ಯಕ್ತಿತ್ವದ ಮತ್ತೊಂದು ಮುಖ. ಶ್ರೀಚೆನ್ನೇಶ್ವರ ಯುವಕ ಸಂಘ, ಹೊನ್ನಾಳಿ ತಾಲ್ಲೂಕು ಕಸಾಪ, ಶಿಕಾರಿಪುರ ತಾಲ್ಲೂಕು ಕಸಾಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತಿತರ ಸಂಸ್ಥೆಗಳಲ್ಲಿ ಸೇವೆ. ಹುಟ್ಟೂರಿನಲ್ಲಿ ಗ್ರಂಥಾಲಯ ಕಟ್ಟಡ, ಲಂಕೇಶ್ ಬಯಲು ರಂಗಮಂದಿರ, ಯುವಕರಿಗೆ ಕ್ರೀಡಾ ಉಪಕರಣಗಳ ನೀಡಿಕೆ, ಸಮುದಾಯ ಭವನ ನಿರ್ಮಾಣ, ನೀರಾವರಿ ಯೋಜನೆ ಕುರಿತ ಹೋರಾಟ ಮುಂತಾದ ಸಾಮಾಜಿಕ ಕಾರ್ಯಗಳ ನಿರ್ವಹಿಸಿರುವ ಚನ್ನಪ್ಪ ಸೇವೆಗೆ ಮುಡಿಪಾಗಿರುವ ಜೀವಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಮುನಿವೆಂಕಟಪ್ಪ ಸಂಜಪ್ಪ

ಭಾರತೀಯ ಸಸ್ಯ ಸರ್ವೇಕ್ಷಣಾ ನಿರ್ದೇಶಕರಾದ ಎಸ್.ಸಂಜಪ್ಪ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದವರು. ಪ್ರಸಕ್ತ ಸಿ.ಎಸ್.ಐ.ಆರ್ ವಿಜ್ಞಾನಿಯಾಗಿರುವ ಎಸ್.ಸಂಜಪ್ಪ ಅವರು ರಾಷ್ಟ್ರೀಯ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಸಂಜಪ್ಪ ಅವರು ಟಾನಮಿ ಸಂಶೋಧನೆಯಲ್ಲಿ ಪರಿಣತರು.

ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಸ್ಯ ಶಾಸ್ತ್ರಜ್ಞರಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಸಂಜಪ್ಪ ಅವರು ಸಸ್ಯಶಾಸ್ತ್ರಕ್ಕೆ ಮುವ್ವತ್ತೈದು ನೂತನ ಪ್ರಬೇಧಗಳನ್ನು ಪತ್ತೆ ಹಚ್ಚಿಕೊಟ್ಟವರು. ಹಲವಾರು ಸಸ್ಯಶಾಸ್ತ್ರ ಕೃತಿಗಳ ರಚನಾಕಾರರಾದ ಸಂಜಪ್ಪ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಇವರಿಗೆ ಪ್ರತಿಷ್ಠಿತ ಬಿ.ವಿ.ಶಿವರಂಜನ್ ಚಿನ್ನದ ಪದಕ, ಡಾ|| ಜಿ.ಪಾಣಿಗ್ರಾಹಿ ಸ್ಮರಣ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಜಾನಕಿ ಅಮ್ಮಾಳ್ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಅಶೋಕ್ ಎಸ್. ಶೆಟ್ಟರ್

ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪರೂಪದ ಶಿಕ್ಷಣ ತಜ್ಞರು ಡಾ. ಅಶೋಕ್ ಎಸ್. ಶೆಟ್ಟರ್, ಕುಲಪತಿ, ದಕ್ಷ ಆಡಳಿತಗಾರ, ಮೇರುಸಾಧನೆಯ ಶಿಕ್ಷಣಶಿಲ್ಪಿ.
ಧಾರವಾಡ ಮೂಲದ ಅಶೋಕ್ ಎಸ್. ಶೆಟ್ಟರ್ ೧೯೮೧ರಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದವರು. ೩೫ ವರ್ಷಗಳ ಸುದೀರ್ಘ ಬೋಧನಾನುಭವ. ಪ್ರಾಧ್ಯಾಪಕ, ಪ್ರಾಚಾರ್ಯ, ಡೀನ್, ಸಂಸ್ಥಾಪಕ ನಿರ್ದೇಶಕರಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಗುರುತರ ಸೇವೆ. ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿ, ಸಂಶೋಧನೆ, ಯೋಜನಾ ಮಾರ್ಗದರ್ಶನ, ತರಬೇತಿ ನೀಡುವಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ. ಎಂಜಿನಿಯರಿಂಗ್ ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿಸಿದ ಬಗೆ ಅನನ್ಯ. ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿಗೆ ಭದ್ರ ಅಡಿಪಾಯ ಹಾಕಿದ ಶಿಲ್ಪಿ. ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿವಿಯನ್ನು ಕಟ್ಟಿ ಬೆಳೆಸಿದ ಪರಿ ನಿಜಕ್ಕೂ ಸೋಜಿಗವೇ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಟೆಕ್ನ ವಿಜಿನರಿ ಮುಂತಾದ ಪ್ರಶಸ್ತಿಗಳು ಅಶೋಕ್ ಶೆಟ್ಟರ್ರವರ ಅಪ್ರತಿಮ ಸಾಧನೆಗೆ ಸಂದ ಸತ್ಪಲಗಳು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಪುಟ್ಟಸಿದ್ಧಯ್ಯ

ತಳಸಮುದಾಯದ ಶೈಕ್ಷಣಿಕ ಏಳೆಗೆ ಅಹರ್ನಿಶಿ ಶ್ರಮಿಸಿದವರು ಡಾ. ಪುಟ್ಟಸಿದ್ಧಯ್ಯ, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ವೈದ್ಯ, ಸಮಾಜಸೇವಕರಾದ ಬಹುರೂಪಿ,
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದಾಸನಪುರದಲ್ಲಿ ಹುಟ್ಟಿದ ಪುಟ್ಟಸಿದ್ಧಯ್ಯ ಎಂ.ಬಿ.ಬಿ.ಎಸ್. ಪದವೀಧರರು. ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲಾ ವೈದ್ಯಾಧಿಕಾರಿಯಾಗಿ ದಶಕಗಳ ಕಾಲ ಸೇವೆ. ಉಪಮುಖ್ಯ ವೈದ್ಯಾಧಿಕಾರಿಯಾಗಿ ನಿವೃತ್ತಿ. 1991ರಲ್ಲಿ ಬಾಬು ಜಗಜೀವನರಾಂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಚನೆ. ದಮನಿತ ಸಮುದಾಯದ ಶೈಕ್ಷಣಿಕ ಏಳೆಗಾಗಿಯೇ ಪ್ರೌಢಶಾಲೆ, ಬಾಲಕರ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ಪದವಿಪೂರ್ವ ಕಾಲೇಜು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ. ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ. ದಕ್ಷಿಣ ಭಾರತದ ಹಲವೆಡೆ ತಳಸಮುದಾಯದವರಲ್ಲಿ ಸಾಮಾಜಿಕ ಅರಿವು ಮೂಡಿಸುವಿಕೆ, ದಲಿತ ಮಕ್ಕಳಿಗಾಗಿ ಸಾಂಸ್ಕೃತಿಕ-ಕ್ರೀಡಾ ಕಾರ್ಯಕ್ರಮಗಳ ಆಯೋಜನೆ. ಉತ್ತಮ ಸೇವಾ ಪ್ರಶಸ್ತಿ, ಜಾಂಬವಶ್ರೀ ಪ್ರಶಸ್ತಿ, ದಲಿತಶ್ರೀ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾದ ಸಮಾಜಬಂಧು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಎಂ.ಆರ್.ಶ್ರೀನಿವಾಸನ್

ರಾಷ್ಟ್ರದ ಅಣುಶಕ್ತಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಎಂ.ಆರ್.ಶ್ರೀನಿವಾಸನ್ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಕೇಂದ್ರ ಸರ್ಕಾರದ ಅಣು ಇಂಧನ ಇಲಾಖೆಗೆ ಕಾಲಿಟ್ಟರು.

ದೇಶದ ಮೊಟ್ಟಮೊದಲ ಅಣುಇಂಧನ ಕೇಂದ್ರದ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶ್ರೀನಿವಾಸನ್ ಅವರು ನಂತರ ಮದರಾಸಿನ ಅಣುವಿದ್ಯುತ್ ಕೇಂದ್ರದ ನೇತೃತ್ವ ವಹಿಸಿದವರು. ಭಾರತದ ಅಣು ಇಂಧನ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಅಣು ಇಂಧನ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸನ್ ಭಾರತೀಯ ನ್ಯೂಕ್ಲಿಯ ಪವರ್ ಕಾರ್ಪೋರೇಷನ್‌ ಸ್ಥಾಪಕ ಅಧ್ಯಕ್ಷರು.

ದೇಶದ ಎಲ್ಲ ನ್ಯೂಕ್ಲಿಯರ್ ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀನಿವಾಸನ್ ಗ್ಯಾಸ್ ಟರ್ಬೈನ್ ತಂತ್ರಜ್ಞಾನದಲ್ಲಿಯೂ ನೈಪುಣ್ಯತೆ ಪಡೆದವರು. ದೇಶದ ಪ್ರತಿಷ್ಠಿತ ಪದ್ಮವಿಭೂಷಣ, ಭಾರತೀಯ ಇಚಿಜಿನಿಯರಿಂಗ್ ಇನ್ಸಿಟ್ಯೂಟಿನ ಶ್ರೇಷ್ಠ ವಿನ್ಯಾಸಕಾರ, ಹೋಮಿ ಬಾಬಾ ಪ್ರಶಸ್ತಿ ಸೇರಿದಂತೆ ಹಲವಾರು ದೇಶವಿದೇಶಗಳ ಉನ್ನತ ಗೌರವ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಸ್.ಜಿ. ಭಾರತಿ

ದಮನಿತರ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿರುವ ವಿಶಿಷ್ಟ ಸಮಾಜ ಸೇವಕ ಎಸ್.ಜಿ. ಭಾರತಿ. ಲೋಕಕಲ್ಯಾಣಕ್ಕಾಗಿ ಮಿಡಿವ ಹೃದಯವಂತ.
ಬಯಲು ನಾಡಾದ ಕಲ್ಲುಗಿಯ ನಿವಾಸಿಯಾಗಿರುವ ಎಸ್.ಜಿ.ಭಾರತಿ ಹುಟ್ಟಿದ್ದು ೧೯೫೮ರ ಜುಲೈ ೧೧ರಂದು. ಸ್ನಾತಕೋತ್ತರ ಪದವೀಧರರಾದ ಅವರದ್ದು ಶುದ್ಧ ಸೇವಾಮನೋಭಾವ. ಬಹು ದಶಕಗಳಿಂದಲೂ ತರಹೇವಾರಿ ಸಮಾಜಸೇವೆಯಲ್ಲಿ ನಿರತರು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಅಸ್ಪಶ್ಯತೆ ನಿವಾರಣೆ, ದಮನಿತರು ಮತ್ತು ಇತರೆ ಜನಾಂದವರಿಗೆ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವುದೇ ನಿತ್ಯದ ಕಾಯಕ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಕ್ಷಣವೂ ಮೀಸಲಿಟ್ಟಿರುವ ಎಸ್.ಜಿ.ಭಾರತಿ ಅವರು ಗುಲ್ಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ರಾಜ್ಯ ಸರ್ಕಾರದ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ಭಾರತಿ ಅವರ ಸೇವಾತತ್ಪರತೆಗೆ ರಾಜ್ಯಾದ್ಯಂತ ಸಾಕಷ್ಟು ಸಂಘ ಸಂಸ್ಥೆಗಳು, ಅಕಾಡೆಮಿಗಳು ಪ್ರಶಸ್ತಿ-ಸನ್ಮಾನಗಳನ್ನಿತ್ತು ಗೌರವಿಸಿರುವುದು ನೈಜಸೇವೆಗೆ ಸಂದ ಸತ್ಫಲವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ರಮೇಶ್ ವೈದ್ಯ

ರಾಜ್ಯದ ಕೃಷಿ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ರಮೇಶ್ ವೈದ್ಯ ಪ್ರಮುಖ ಸಾಧಕರು. ಹಳ್ಳಿಗಾಡಿನ ಕೃಷಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಪರಿಶ್ರಮಿಸಿದ ಸಹಕಾರ ಧುರೀಣರು.
ಕೊಪ್ಪಳ ಜಿಲ್ಲೆಯ ಹಿಟ್ನಾಳದವರಾದ ರಮೇಶ್ ವೈದ್ಯ ಕೃಷಿ ಮನೆತನದ ಕುಡಿ. ೧೯೫೦ರ ಜುಲೈ ೮ರಂದು ಜನಿಸಿದ ರಮೇಶ್ ವಿಜ್ಞಾನ ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಚಟುವಟಿಕೆಗಳಲ್ಲಿ ಆಸಕ್ತರು. ಬೇಸಾಯದ ಒಳಸುಳಿ-ನೋವು ನಲಿವುಗಳ ಅರಿತಾಕ್ಷಣ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತಲ್ಲೀನ, ರಾಜ್ಯದ ಉದ್ದಗಲಕ್ಕೂ ಹಾಗೂ ಹೊರದೇಶಗಳಿಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಸಂಚಾರ-ಪರಿಶ್ರಮ. ಕೊಪ್ಪಳ ಜಿಲ್ಲಾ ಕೃಷಿ ಮಾರಾಟ ಸೊಸೈಟಿಯ ಕಾರ್ಯಾಕಾರಿ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಯಚೂರು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಮತ್ತಿತರ ಸಂಸ್ಥೆಗಳಲ್ಲಿ ಸಾರ್ಥಕ ಸೇವೆ. ಸದ್ಯ ಕರ್ನಾಟಕ ರಾಜ್ಯ ಹೈನುಗಾರಿಕಾ ಒಕ್ಕೂಟದ ನಿರ್ದೇಶಕರು ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಮೇಶ್ ವೈದ್ಯ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮುಂತಾದ ಪ್ರಶಸ್ತಿಗಳಿಂದ ಭೂಷಿತರು.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ರಾಮದೇವ ರಾಕೆ

ದಲಿತ ಹೋರಾಟದ ಮಂಚೂಣಿಯಲ್ಲಿದ್ದ ರಾಮದೇವ ರಾಕೆಯವರು ಆಚಿದೋಲನ-ಪಂಚಮ ಪತ್ರಿಕೆಗಳ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು.

ಪಂಚಮ ನಿಯತಕಾಲಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ರಾಮದೇವ ರಾಕೆಯವರು ನಂತರ ಪ್ರಜಾವಾಣಿ ಸಮೂಹ ಸೇರಿದರು. ವಿಶೇಷ ವರದಿ, ಶೋಧನಾ ವರದಿಗಳಲ್ಲಿ ನಿಪುಣತೆ ಸಾಧಿಸಿದ ಇವರದ್ದು ರಾಜಕೀಯ ವಿಶ್ಲೇಷಣೆಯಲ್ಲಿ ಎತ್ತಿದ ಕೈ.

ಚುನಾವಣಾ ವಿಶ್ಲೇಷಣೆ ಮಾಡುವಲ್ಲಿ ನಿಪುಣರಾದ ರಾಮದೇವ ರಾಕೆಯವರು ಗುಲಬರ್ಗಾದ ಪ್ರಜಾವಾಣಿ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ದಲಿತ ಸಮೂದಾಯದ ಜಾಗೃತಿಗಾಗಿ ಆರಂಭವಾದ ಕನ್ನಡದ ಪ್ರಪ್ರಥಮ ಪತ್ರಿಕೆ ‘ಪಂಚಮ’ವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂಕರ ಬುಚಡಿ

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲಪರವಾದ ಹೋರಾಟಗಳಿಂದ ಮರಾಠಿ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಿದ ವೀರಕನ್ನಡಿಗ ಶಂಕರ ಮಾಣಿಕಾ ಬುಚಡಿ. (೧೯೬೦-೭೦ರ ದಶಕದಲ್ಲಿ ಬೆಳಗಾವಿಯಲ್ಲಿದ್ದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಕನ್ನಡದ ಉಳಿವಿಗಾಗಿ ಕನ್ನಡ ಗೆಳೆಯರ ಬಳಗ ಸ್ಥಾಪಿಸಿ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡ ಸೇವೆಗೈದವರು. ಕನ್ನಡ ವಾಚಾನಾಲಯ ತೆರೆದವರು, ರಸ್ತೆನಾಮಫಲಕಗಳನ್ನು ಕನ್ನಡಜಾರಿಗೆ ಶ್ರಮಿಸಿದವರು, ಕನ್ನಡ ಚಳವಳಿಗಾರರ ಸಂಘದ ಮೂಲಕ ಕನ್ನಡದಕಹಳೆ ಮೊಳಗಿಸಿದವರು. ಮಹಾಜನ್‌ ವರದಿ ಜಾರಿಗಾಗಿ ಹೋರಾಡಿದ ಶಂಕರ್ ಬುಚಡಿ ನೇಕಾರರ ಸಂಘದ ಮೂಲಕ ಸಮುದಾಯದ ಸೇವೆಗೈದವರು. ಗಾಯಿತ್ರಿ ಅರ್ಬನ್ ಸೊಸೈಟಿ ತೆರೆದು ಜನಾಂಗದ ಆರ್ಥಿಕಾಭಿವೃದ್ಧಿಗೆ ನೀರೆರೆದವರು. ಹಲವು ಕೃತಿಗಳ ಲೇಖಕರು, ಹವ್ಯಾಸಿ ಬರಹಗಾರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರದಾಸಿಮಯ್ಯ ಅಧ್ಯಯನ ಪೀಠದ ಸಂಪಾದಕ ಮಂಡಲ ಸದಸ್ಯರಾಗಿ ಗುರುತರ ಸೇವೆಗೈದವರು. ಜೈಲುವಾಸ ಅನುಭವಿಸಿದ ಅಪ್ರತಿಮ ಚಳವಳಿಗಾರರು. ದಶಕಗಳ ಕಾಲ ಕನ್ನಡದ ಗೇಯತೆ ಮೆರೆಯಲು ಅಹರ್ನಿಶಿ ದುಡಿದ ಬುಚಡಿ ಅವರು ಕನ್ನಡನುಡಿ ಶ್ರೀ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ನೇಕಾರರತ್ನ ಪ್ರಶಸ್ತಿ, ಪ್ರತಿಭಾರತ್ನ ಪ್ರಶಸ್ತಿ ಮುಂತಾದ ಗೌರವಗಳಿಂದ ಭೂಷಿತರು. ೮೦ರ ಇಳಿವಯಸ್ಸಿನಲ್ಲೂ ಕನ್ನಡಸೇವೆಗೆ ಮುಂದಾಗುವ ಅಪ್ಪಟ ಕನ್ನಡಪ್ರೇಮಿ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಠಪ್ಪ ಗೋರಂಟ್ಲಿ

ಪತ್ರಕರ್ತರಾಗಿ ಹಾಗೂ ಸಾಹಿತಿಗಳಾಗಿ ಹೆಸರಾಗಿರುವ ವಿಠಪ್ಪ ಗೋರಂಟ್ಲಿ ಅವರು ಲಂಕೇಶ್‌ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದವರು.

ಕೊಪ್ಪಳ ಪ್ರದೇಶದಲ್ಲಿ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಪ್ಪ ಗೋರಂಟ್ಲಿ ಅನೇಕ ದೈನಿಕ ಹಾಗೂ ನಿಯತಕಾಲಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯ, ಕತೆ, ಜೀವನಚರಿತ್ರೆ ಹಾಗೂ ಅಂಕಣ ಬರೆಹಗಳ ಬಗ್ಗೆ ಅನೇಕ ಕೃತಿಗಳನ್ನು ಹೊರತಂದಿರುವ ಇವರು ಅನೇಕ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ತನಿಖಾ ವರದಿ ಪ್ರಶಸ್ತಿಯು ೨೦೦೩ರಲ್ಲಿ ಲಭಿಸಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಆರ್. ರಾಮಕೃಷ್ಣ

ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯನ್ನೇ ಬದುಕಿನ ಡಾ. ಆರ್. ರಾಮಕೃಷ್ಣ. ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಗುರು. ಡಾ. ಆರ್. ರಾಮಕೃಷ್ಣ ಉಸಿರಾಗಿಸಿಕೊಂಡ ಶಿಕ್ಷಣ ತಜ್ಞರು
ಸಾಂಸ್ಕೃತಿಕ ನಗರಿ ಮೈಸೂರು ರಾಮಕೃಷ್ಣರ ಹುಟ್ಟೂರು, ಮಾತ್ರವಲ್ಲ ಸಾಧನೆಯ ಕರ್ಮಭೂಮಿಯೂ ಸಹ. ಕನ್ನಡ, ಭಾಷಾ-ವಿಜ್ಞಾನಗಳೆರಡರಲ್ಲೂ ಸ್ನಾತಕೋತ್ತರ ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ, ಭಾರತೀಯ ಸಾಹಿತ್ಯದಲ್ಲಿ ಡಿಪ್ಲೋಮಾ ವ್ಯಾಸಂಗ, ಬ್ಯಾಂಕ್ ವಿಜೇತ ವಿದ್ಯಾರ್ಥಿ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ವೃತ್ತಿಬದುಕು ಸಂಪನ್ನ, ಅಧ್ಯಯನ, ಬರೆವಣಿಗೆ ಸಾಧನೆಯ ಕಾರ್ಯಕ್ಷೇತ್ರ ಸಾಮಾನ್ಯ ಮತ್ತು ದ್ರಾವಿಡ ಭಾಷಾ ವಿಜ್ಞಾನ, ಭಾರತೀಯ ಸಾಹಿತ್ಯ ವಿಮರ್ಶೆ, ವ್ಯಾಕರಣ ಶಾಸ್ತ್ರ, ಮಧ್ಯಕಾಲೀನ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ವಿಶೇಷ ಪರಿಣಿತಿ. ೧೫ ಕೃತಿಗಳ ಲೇಖಕರು, ೧೦ ಮೌಲಿಕ ಸಂಶೋಧನಾ ಪ್ರಕಟಣೆಗಳ ಕರ್ತೃ. ಪ್ರಕಟಿತ ಲೇಖನಗಳು ಐವತ್ತಕ್ಕೂ ಹೆಚ್ಚು. ವಿಚಾರಸಂಕಿರಣ-ಕಾರ್ಯಾಗಾರಗಳಲ್ಲಿ ಪ್ರಜ್ವಲಿಸಿದ ಪಾಂಡಿತ್ಯ. ೨೮ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ ಗುರುವರ್ಯರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ. ಮಲ್ಲಿಕಾರ್ಜುನಯ್ಯ

ಪತ್ರಿಕೋದ್ಯಮದ ಹಲವು ಸ್ತರಗಳಲ್ಲಿ ದಕ್ಷತೆ ಮೆರೆದವರು ಬಿ.ವಿ.ಮಲ್ಲಿಕಾರ್ಜುನಯ್ಯ. ಐದು ದಶಕಗಳ ಸುದೀರ್ಘ ಸೇವೆಯ ಪತ್ರಕರ್ತರು, ಪತ್ರಿಕಾ ಸಂಘಟನೆಗಳಲ್ಲೂ ಕ್ರಿಯಾಶೀಲರು.
ತುಮಕೂರು ಜಿಲ್ಲೆಯ ಬ್ರಹ್ಮಸಂದ್ರದವರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕನ್ನಡಪ್ರಭ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭ.ಉಪಸಂಪಾದಕ ಸ್ಥಾನದಿಂದ ಸಂಪಾದಕ ಹುದ್ದೆವರೆಗೆ ವಿವಿಧ ಸ್ಥಾನಗಳಲ್ಲಿ ಅಕ್ಷರಸೇವೆ. ಉದಯವಾಣಿಯಲ್ಲಿಯೂ ಆರು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ, ಸುವರ್ಣ ನ್ಯೂಸ್‌ನಲ್ಲಿ ಒಂದೂಕಾಲು ವರ್ಷ ವಾರ್ತಾ ಸಂಯೋಜಕರಾಗಿ ಸೇವೆ. ಬರವಣಿಗೆಯ ಜೊತೆಗೆ ಪತ್ರಿಕಾ ಸಂಘಟನೆಗಳಲ್ಲೂ ಪರಿಶ್ರಮ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇಂದ್ರ ಪತ್ರಿಕಾ ಮಾನ್ಯತಾ ಸಮಿತಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ರಾಜ್ಯ ಪತ್ರಿಕಾ ಅಕಾಡೆಮಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮುಂತಾದ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿ ದುಡಿದವರು.ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕಾಗಿ ವಿದೇಶಗಳ ಪ್ರವಾಸ ಕೈಗೊಂಡವರು.ಸದ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ಸೇವಾನಿರತರಾಗಿರುವ ಮಲ್ಲಿಕಾರ್ಜುನಯ್ಯ ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೂ ಭಾಜನರು.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎ.ಸಿ.ರಾಜಶೇಖರ್

ಭಾಷಾಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಅಟ್ಟೂರು ರಾಜಶೇಖರ ಅವರು ಪತ್ರಿಕೋದ್ಯಮ ಪ್ರವೇಶ ಮಾಡಿದ್ದು ಪ್ರಜಾವಾಣಿ ದೈನಿಕದ ಮೂಲಕ. ಎರಡೂವರೆ ದಶಕಗಳಿಗೂ ಹೆಚ್ಚು ಸಮಯ ಪ್ರಜಾವಾಣಿಯ ಸಂಪಾದಕೀಯ ವರ್ಗದಲ್ಲಿ ಕಾರ್ಯ ನಿರ್ವಹಿಸಿದ ರಾಜಶೇಖರ್ ಅವರು ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದವರು.

ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ ಮಾಡಿದ ಅಬ್ಬರು ರಾಜಶೇಖ‌ ಅವರು ಕಸ್ತೂರಿ ವಾಹಿನಿಯ ಸುದ್ದಿ ಹಾಗೂ ಸಂವಾದ ಮಾಧ್ಯಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ ಮುವ್ವತ್ತೂರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ರಾಜಶೇಖರ್ ಪ್ರಸ್ತುತ ರಾಮನಗರದ ಆರಂಭ ಕನ್ನಡ ದೈನಿಕದ ಸಂಪಾದಕರು.

ರಾಜಶೇಖರ ಅವರಿಗೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಂಗಳ ಎಂ.ಸಿ ವರ್ಗೀಸ್ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಂ.ಎನ್. ಷಡಕ್ಷರಿ

ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆಗೈದ ಸಾರ್ಥಕ ಜೀವಿ ಎಂ.ಎನ್. ಷಡಕ್ಷರಿ. ಶಾಲಾ ಸಂಸ್ಥಾಪಕ, ಪ್ರಾಚಾರ್ಯ, ಸೌಟ್ಸ್ ಶಿಕ್ಷಕ, ಬರಹಗಾರ, ಶಿಕ್ಷಣ ತಜ್ಞರಾಗಿ ಅವರದ್ದು ಅನುಪಮ ಸೇವೆ.
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ತವರುನೆಲ. ೧೯೪೭ರಲ್ಲಿ ಜನನ. ಬಿ.ಎಸ್ಸಿ, ಬಿಇಡಿ ಪದವೀಧರರು. ಚಿಕ್ಕಮಗಳೂರಿನ ಮೌಂಟೆನ್ ವಿದ್ಯಾಲಯದಲ್ಲಿ ೨೩ ವರ್ಷಗಳ ಶಿಕ್ಷಕ ಸೇವೆ. ಸೈಟ್ಸ್ ಶಿಕ್ಷಕರಾಗಿಯೂ ವಿಶಿಷ್ಟ ಛಾಪು. ನೂರಾರು ಮಕ್ಕಳನ್ನು ಸೈಟ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಅರ್ಹರನ್ನಾಗಿಸಿದ ಅಚ್ಚಳಿಯದ ಹೆಗ್ಗಳಿಕೆ. ಉಪ್ಪಳಿಯ ಮಾಡೆಲ್ ಇಂಗ್ಲಿಷ್ ಶಾಲೆಯ ಸಂಸ್ಥಾಪಕ-ಪ್ರಾಚಾರ್ಯರಾಗಿ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆ. ಸೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಸಿಲ್ವರ್ಸ್ಟಾರ್ ಪುರಸ್ಕಾರ ಪಡೆದ ವಿಶೇಷ ವ್ಯಕ್ತಿ. ಅಂಚೆ ಚೀಟಿ, ನಾಟ್ಯ, ಶಂಖ, ಚಿಪ್ಪು ಸಂಗ್ರಹ ನೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಬರಹಗಾರ. ಗ್ರೀನ್ ಟೀಚರ್ ರಾಷ್ಟ್ರೀಯ ಪುರಸ್ಕಾರ, ಜಿಲ್ಲಾ ವಿಜ್ಞಾನ ಪ್ರಶಸ್ತಿ, ಪರಿಸರ ಶಿಕ್ಷಣ ಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ. ಈಶ್ವರಪ್ಪ

ಶಿಕ್ಷಣ, ರಂಗಭೂಮಿ ಮತ್ತು ಜನಪದ ಕ್ಷೇತ್ರದ ಸಾಧಕಮಣಿ ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ ಸಂಶೋಧಕ, ಲೇಖಕ, ಅಧ್ಯಾಪಕರಾಗಿ ಅವರದ್ದು ಪರಿಪಕ್ವ ಸಾಧನೆ.
ಬಯಲುಸೀಮೆ ದಾವಣಗೆರೆಯ ಎಂ.ಜಿ. ಈಶ್ವರಪ್ಪ ಸ್ನಾತಕೋತ್ತರ ಪದವೀಧರರು. ಮೈಸೂರು ವಿವಿಯಿಂದ ಪಿ.ಎಚ್ಡಿ ಪಡೆದವರು. ೩೮ ವರ್ಷಗಳ ಸಾರ್ಥಕ ಅಧ್ಯಾಪಕ ವೃತ್ತಿ. ಬೋಧನೆಯಲ್ಲಿ ಅಮಿತಾನಂದ ಕಂಡುಕೊಂಡ ಗುರುವರ್ಯ. ಜನಪದ ಸಂಶೋಧನೆ, ರಂಗನಿರ್ದೇಶನ, ಉಪನ್ಯಾಸ, ಬರವಣಿಗೆಯಲ್ಲಿ ಅಪರಿಮಿತ ಕೃಷಿ, ಜಾತ್ರೆ, ಸಾಯೋಆಟ, ಕಡೇಮನೆ ಕಡೇ ಗಲ್ಲಿ, ಹಳ್ಳಿಮೇಷ್ಟ್ರು ಮತ್ತಿತರ ನಾಟಕಗಳ ನಿರ್ದೇಶನ, ಜನಪದ ರಂಗಭೂಮಿ ಕುರಿತು ಅನೇಕ ಉಪನ್ಯಾಸ ನೀಡಿದ ಪ್ರಖರ ವಾಗ್ನಿ, ಚಿಂತಕ, ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರ ಕೊದಲಜೈರಾನಿ ಮತ್ತಿತರ ೧೬ ಕೃತಿಗಳ ಲೇಖಕರು. ಮೈಸೂರು ವಿವಿ ಸೆನೆಟ್ ಸದಸ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ ಅನನ್ಯ ಶೈಕ್ಷಣಿಕ ಸೇವೆ. ಜನಪದ ತಜ್ಞ ಮಹಾಲಿಂಗ ರಂಗಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾದ ಚಿಂತಕರು-ಹೆಮ್ಮೆಯ ಸಾಧಕರು.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕುಸುಮಾ ಶಾನಭಾಗ್

ಕನ್ನಡದ ಪ್ರಸಿದ್ಧ ಬರಹಗಾರರಾದ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ್ ಅವರು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ವರದಿಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸುಮಾರು ಮೂರುದಶಕಗಳ ಕಾಲ ಕಾರ್ಯ ನಿರ್ವಹಿಸಿದ ಕುಸುಮಾ ಶಾನಭಾಗ್ ಅವರು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಸಮಾಜದ ಎಲ್ಲ ಸ್ಥರದ ಜನತೆಯ ನೋವು ನಲಿವುಗಳನ್ನು ಪತ್ರಿಕೆಗಳಲ್ಲಿ ಪ್ರತಿಬಿಂಬಿಸಿದ ಮಹಿಳಾ ಪತ್ರಕರ್ತರಲ್ಲಿ ಕುಸುಮಾ ಪ್ರಮುಖರು. ಅವರ ‘ಕಾಯದ ಕಾರ್ಪಣ್ಯ’ ಕೃತಿಯು ಅತ್ಯಂತ ವಿಶಿಷ್ಟವಾದ ಕೃತಿ.

ಮಹಿಳಾಪರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸಿದ್ಧಪಡಿಸಿದ ಕುಸುಮಾ ಅವರಿಗೆ ಅನೇಕ ವೃತ್ತಿ ಸಂಸ್ಥೆಗಳು ಗೌರವಿಸಿವೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕೆ. ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರು-ಎಂ.ಆರ್.ಜಿ ಗ್ರೂಪ್

ಹೋಟೆಲ್ ಉದ್ಯಮದಲ್ಲಿ ಅದ್ವಿತೀಯ ಸಾಧನೆ-ಯಶಸ್ಸು ಪಡೆದ ಉದ್ಯಮಿ ಕೆ. ಪ್ರಕಾಶ್‌ ಶೆಟ್ಟಿ, ಬಡವರಾಗಿ ಹುಟ್ಟಿದರೂ ಬಡವರಾಗಿಯೇ ಸಾಯಬೇಕಿಲ್ಲ ಎಂಬ ಮಾತನ್ನು ನಿಜವಾಗಿಸಿದ ಛಲವಂತರು.
ಪ್ರಕಾಶ್‌ ಶೆಟ್ಟಿ ಉಡುಪಿ ಜಿಲ್ಲೆಯವರು. ಸಾಮಾನ್ಯ ಕುಟುಂಬದ ಕುಡಿ.ಬಾಲ್ಯದ ಬಡತನ ಯಶಸ್ಸಿನ ಹಂಬಲ ಹುಟ್ಟುಹಾಕಿದ್ದು ಸಹಜವೇ. ಅತಿಥಿ ಸತ್ಕಾರದ ಕನಸು. ೧೯೯೩ರಲ್ಲಿ ಬಂಜಾರ ಹೋಟೆಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಕ್ಕೆ ಪ್ರವೇಶ. ಆನಂತರ ತಿರುಗಿ ನೋಡಿದ್ದೇ ಇಲ್ಲ. ದಶಕಗಳ ಅಂತರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಸೋಜಿಗ, ಶುದ್ದ ಸಾಹಸಯಾತ್ರೆ ಪ್ರತಿಷ್ಠಿತ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾಗಿರುವ ಪ್ರಕಾಶ್‌ ಶೆಟ್ಟಿ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿನಲ್ಲಿರುವ ಗೋಲ್ಡನ್ ಫಿಂಚ್ ಹೋಟೆಲ್, ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳು ಪ್ರಕಾಶ್‌ ಶೆಟ್ಟಿ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿವೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ, ನಾಲ್ಕು ಮತ್ತು ಐದನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಊಟ-ವಸತಿ ಒದಗಿಸಿದ ಹಿರಿಮೆ ಅವರದ್ದು ಬಡಮಕ್ಕಳ ಶಾಲಾ ಕಾಲೇಜು ವೆಚ್ಚ ಭರಿಸುವ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿರುವುದು ಅವರೊಳಗಿನ ಸಮಾಜಮುಖಿತ್ವದ ದ್ಯೋತಕವಾಗಿದೆ.

Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ

ಬದುಕಿನ ಮಾಟದಲ್ಲಿ ಬಯಲಾಟವನ್ನೇ ಜೀವಭಾವವಾಗಿಸಿಕೊಂಡವರು ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ, ಕಲಾರಂಗದ ನಾದಸೇವಕರು, ಹಳ್ಳಿಗರ ಮನಗೆದ್ದ ದೊಡ್ಡಾಟದ ಹಾಮ್ಮೋನಿಯಂ ವಾದಕ, ಪಾತ್ರಧಾರಿ, ಸ್ವರಸಂಯೋಜಕ, ಶಂಕರಪ್ಪ ಕೊಪ್ಪಳ ಜಿಲ್ಲೆಯ ಪ್ರತಿಭೆ, ಕೊಪ್ಪಳ ತಾಲ್ಲೂಕಿನ ಸಾ.ಮೋರನಾಳದ ಉಪ್ಪಿನ ಬೆಟಗೇರಿ ಹುಟ್ಟೂರು. ನಾದದೊಲುಮೆ ಅಪ್ಪನಿಂದ ಬಂದ ಬಳುವಳಿ, ಕಲಾಪ್ರೇಮ ಊರುಕೇರಿ ಬೆಸೆದ ಭಾವ. ಹರೆಯದಲ್ಲಿ ಮನವೇರಿದ ನಾದದ ಗುಂಗು. ೨೭ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಕಲಾರಂಗಪ್ರವೇಶ. ಪಕ್ಕವಾದ್ಯಪಟುವಾಗಿ ಕಲಾಸೇವೆಗೈಯುತ್ತಲೇ ಬಣ್ಣ ಹಚ್ಚಿ ಕಲಾವಿದನಾದ ಹಿರಿಮೆ, ಬಯಲಾಟಗಳ ನಿರ್ದೇಶಕನಾಗಿಯೂ ಮೇಲೆ ಬರೋಬ್ಬರಿ ೧೮೦ ಬಯಲಾಟಗಳಿಗೆ ಸ್ವರಸಂಯೋಜನೆ ಮಾಡಿದ ಹೆಗ್ಗಳಿಕೆ, ಕೊಪ್ಪಳ ಜಿಲ್ಲೆಯಿಂದ ಹಿಡಿದು ನಾಡಿನ ಹಲವೆಡೆ ಬಯಲಾಟಗಳಿಗೆ ನಾದದ ರಂಗುತುಂಗ ಸೈ ಎನಿಸಿಕೊಂಡು ಕಲಾನಿಪುಣ, ೪೨ ವರ್ಷಗಳಿಂದ ಅವಿರತವಾಗಿ ಕಲಾಸೇವಾನಿರತರಾಗಿರುವ ಶಂಕರಪ್ಪಗೆ ಬದುಕೇ ಬಯಲಾಟ, ಬಯಲಾಟವೇ ಬದುಕು. ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ಶಂಕರಪ್ಪ ಹಳ್ಳಿಗಾಡಿನ ಕಲಾವಂತಿಕೆ, ಸಮರ್ಪಣಾಭಾವ ಮತ್ತು ನಿಸ್ಪೃಹ ಕಲಾಸೇವೆಯ ನಿಜಪ್ರತೀಕ.

Categories
ಯೋಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಎ.ಎಸ್. ಚಂದ್ರಶೇಖರ

ಆಯುರ್ವೇದ ಚಿಕಿತ್ಸೆ ಹಾಗೂ ಯೋಗ ಕ್ಷೇತ್ರದ ಅನನ್ಯ ಸಾಧಕರು ಡಾ. ಎ.ಎಸ್. ಚಂದ್ರಶೇಖರ. ಯೋಗ ಕೇಂದ್ರಗಳ ಸ್ಥಾಪಕರು, ಸಮಾಜಮುಖಿ ಸಹ.
ಮೈಸೂರಿನವರಾದ ಎ.ಎಸ್. ಚಂದ್ರಶೇಖರ ವೃತ್ತಿಯಲ್ಲಿ ಆಯುರ್ವೇದ ವೈದ್ಯರು, ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರು, ಸಮಾಜಸೇವೆ, ನೈಸರ್ಗಿಕ ಚಿಕಿತ್ಸೆಯಲ್ಲಿ ಹೆಸರುವಾಸಿ. ಹತ್ತು ಯೋಗ ಕೇಂದ್ರಗಳ ಸ್ಥಾಪಕರು. ೩೬ ವರ್ಷಗಳಿಂದಲೂ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ನಿರತರು. ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ ಹೆಗ್ಗಳಿಕೆ. ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಪುಸ್ತಕ ವಿತರಣೆ, ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ, ಹಳ್ಳಿಗಳಲ್ಲಿ ೩೦ ವರ್ಷಗಳಿಂದಲೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತಲಕಾಡು ಪಂಚಲಿಂಗ ದರ್ಶನದ ವೇಳೆ ಒಂದು ಲಕ್ಷ ಜನರಿಗೆ ಉಚಿತ ಊಟದ ವ್ಯವಸ್ಥೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲೂ ನಿರತರಾಗಿರುವ ಸೇವಾಸಿಂಧು. ೨೭ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಗುರುತರ ಸೇವೆ. ಯೋಗಾರ್ಥ ಸಂಗ್ರಹ, ಎ ಹ್ಯಾಂಡ್ ಬುಕ್ ಆಫ್ ಯೋಗ, ನೇಚರ್ ಕೇರ್ ಮತ್ತಿತರ ಕೃತಿಗಳ ರಚನಾಕಾರರು. ಹಲವು ಪ್ರಶಸ್ತಿ-ಗೌರವ-ಸನ್ಮಾನಗಳಿಗೆ ಸತ್ಪಾತ್ರರು.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಿ.ಯತಿರಾಜು

ವಿಜ್ಞಾನ ಹಾಗೂ ಪರಿಸರ ಜಾಗೃತಿಗಾಗಿ ಮೂರು ದಶಕಗಳಿಂದ ತೊಡಗಿಕೊಂಡಿರುವ ಸಿ.ಯತಿರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯತಿರಾಜು ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಗಳಲ್ಲಿ ಪಾಲುಗೊಂಡವರು.

ಕರ್ನಾಟಕ ರಾಜ್ಯ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಚಾಲಕರಾಗಿದ್ದ ಯತಿರಾಜು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪಶ್ಚಿಮಘಟ್ಟಗಳ ಕರೆ, ಕಾಯದ ಕೃಷಿ, ಹಿರೋಷಿಮಾದಿಂದ ಬುದ್ಧನ ನಗುವಿನವರೆಗೆ ಕೃತಿಗಳು ಮುಖ್ಯವಾದವು.

ವಿಜ್ಞಾನ ಸಂವಹನಕಾರರಾಗಿ ಉಪನ್ಯಾಸ, ಲೇಖನ ಬರೆಯುವುದರಲ್ಲಿಯೂ ನಿಪುಣರಾದ ಯತಿರಾಜು ಅವರು ಸಾಕ್ಷರತಾ ಅಂದೋಲನಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ನಾ.ಸೋಮೇಶ್ವರ

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕವೇ ಜನಪ್ರಿಯರಾಗಿರುವ ಸಾಧಕರು ನಾ. ಸೋಮೇಶ್ವರ, ವೈದ್ಯರು, ಲೇಖಕರು, ರಸಪ್ರಶ್ನೆ ತಜ್ಞರಾಗಿ ಅವರದ್ದು ನಾಡಿಗೆ ನಾಡೇ ಮೆಚ್ಚುವಂತಹ ಬಹುಶ್ರುತ ಸಾಧನೆ.
ಬೆಂಗಳೂರು ಮೂಲದವರಾದ ನಾ.ಸೋಮೇಶ್ವರ ಹುಟ್ಟಿದ್ದು ೧೯೫೫ರ ಮೇ ೧೪ ರಂದು. ನಾರಪ್ಪ ಮತ್ತು ಅಂಜನಾ ದಂಪತಿ ಸುಪುತ್ರರು, ಅಧ್ಯಯನ, ಕ್ರಿಯಾಶೀಲತೆ ಮತ್ತು ಪ್ರತಿಭಾಸಂಪನ್ನತೆ ಹುಟ್ಟಿನಿಂದಲೇ ಬಂದ ಗುಣವಿಶೇಷ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನದಿ’ ಮಾಸಿಕ ಪತ್ರಿಕೆ ಹೊರತಂದ ಪ್ರತಿಭಾವಂತರು. ಬಿಎಸ್ಸಿ ಪದವಿ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದವರು.ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಫಾರ್ಮಸಿಟಿಕಲ್ ಕಂಪನಿಯ ಸಲಹೆಗಾರರೂ ಕೂಡ.ಬರವಣಿಗೆ-ಸಾಮಾಜಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ.ಅವರೊಳಗಿನ ಜ್ಞಾನಶೀಲತೆ ಬೆಳಕಿಗೆ ಬಂದಿದ್ದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಲೇ. ೨೦೦೪ರಲ್ಲಿ ಚಂದನ ವಾಹಿನಿಯಲ್ಲಿ ಆರಂಭವಾದ ಈ ಜ್ಞಾನ ಪ್ರಸರಣದ ರಸಪ್ರಶ್ನೆ ಕಾರ್ಯಕ್ರಮ ೧೫ ವರ್ಷಗಳಿಂದಲೂ ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದು ೩೨೦೦ಕ್ಕೂ ಹೆಚ್ಚು ಕಂತುಗಳನ್ನು ದಾಟಿ ಮುನ್ನಡೆದಿರುವುದು ವಿದ್ಯುನ್ಮಾನ ಮಾಧ್ಯಮದ ಇತಿಹಾಸದಲ್ಲೇ ಅದ್ವಿತೀಯ ದಾಖಲೆ. ಲೇಖಕರಾಗಿಯೂ ಹಲವು ಪುಸ್ತಕಗಳನ್ನು ಹೊರತಂದಿರುವ ನಾ. ಸೋಮೇಶ್ವರ ಅವರು ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಭೂಷಿತರು.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಸ್.ಎಂ. ಕೃಷ್ಣಪ್ಪ

ಸಾಂಪ್ರದಾಯಿಕ ತೋಟದ ಬೆಳೆಗಳನ್ನು ಬೆಳೆಯುವ ಮನೆತನದಲ್ಲಿ ಜನಿಸಿದ ಎಸ್.ಎಂ.ಕೃಷ್ಣಪ್ಪ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದ ನಂತರ ಪಾರಂಪರಿಕ ತೋಟಗಾರಿಕೆ ವೃತ್ತಿಯನ್ನು ಕೈಗೊಂಡವರು.

ಉತ್ಕೃಷ್ಟವಾದ ನರ್ಸರಿಗಳನ್ನು ಸ್ಥಾಪಿಸಿ ಬೆಳೆಸುವ ಮೂಲಕ ಹೆಸರಾಗಿರುವ ಕೃಷ್ಣಪ್ಪ ಅಂಗಾಂಶ ಕಸಿ ತಂತ್ರಜ್ಞಾನ ಹಾಗು ಸಾಂಪ್ರದಾಯಿಕ ತೋಟಗಾರಿಕೆ ಎರಡರಲ್ಲೂ ಯಶ ಸಾಧಿಸಿ ವಿದೇಶಗಳಿಗೆ ಸಸಿಗಳನ್ನು ರಫ್ತು ಮಾಡುತ್ತಿದ್ದಾರೆ.

ಲಾಲ್‌ಬಾಗಿನಲ್ಲಿ ವೈವಿಧ್ಯಮಯವಾದ ಹೂವುಗಳ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಕೃಷ್ಣಪ್ಪ ಅವರು ತೋಟಗಾರಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ನರ್ಸರಿಮೆನ್ಸ್ ಮ್ಯಾಗಜಿನ್ ಸಂಪಾದಕರಾಗಿದ್ದು, ನರ್ಸರಿಮನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ ಪ್ರಸಾದ್

ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಬಿಳಿಗೆರಿ ನಾರಾಯಣ ಭಟ್ ಮಹವೀರ್ ಪ್ರಸಾದ್ ಅವರ ಅನುಪಮ ಸಾಧಕರು. ಸೇವಾ ಮತ್ತು ವಿಶಿಷ್ಟ ಸೇವಾ ಪದಕ ವಿಜೇತರು.
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಬಿ.ಎನ್.ಬಿ.ಎಂ ಪ್ರಸಾದ್, ಮಡಿಕೇರಿ ತಾಲ್ಲೂಕಿನ ಬಿಳಿಗರಿ ಹುಟ್ಟೂರು.ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಪುಣೆಯಲ್ಲಿ ಸ್ನಾತಕೋತ್ತರ ಪದವಿ, ಹಲವು ಡಿಪ್ಲೋಮಾಗಳನ್ನು ಪಡೆದವರು. ಆನಂತರ ಭಾರತೀಯ ಭೂಸೇನೆಗೆ ಸೇರ್ಪಡೆ. ಭೂಸೇನೆಯ ಆಸ್ಪತ್ರೆ ಸೇವೆಗಳ ಪ್ರಧಾನ ನಿರ್ದೇಶಕರು, ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾಗಿ ಅನನ್ಯ ಸೇವೆ, ಸೇನಾ ವೈದ್ಯರಿಗೆ ಸೂಚನಾ ಕೋರ್ಸ್‌ಗಳನ್ನು ಕೈಗೊಂಡವರು. ಮಾನವೀಯ ಸೇವೆಗೆ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾದ ಶಸ್ತ್ರಚಿಕಿತ್ಸಕರು. ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿಯನ್ನೂ ಪಡೆದವರಾದ ಬಿ.ಎನ್.ಬಿ.ಎಂ ಪ್ರಸಾದ್ ಅವರು ಲೆಫ್ಟಿನೆಂಟ್ ಜನರಲ್ ಆಗಿಯೂ ಸೇವೆಗೈದವರು.ರಾಷ್ಟ್ರಪತಿಗಳ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾದ ಬಿ.ಎನ್.ಬಿ.ಎಂ ಪ್ರಸಾದ್ ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ ವೈದ್ಯಶಿರೋಮಣಿ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಖಾದರ್ ಇಮಾಮಸಾಬ್ ನಡಕಟ್ಟಿನ

ಕೃಷಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳನ್ನು ಸ್ವಂತ ಬಂಡವಾಳ ಹೂಡಿ ತಯಾರಿಸಿ ಕೃಷಿಕರಿಗೆ ನೆರವು ನೀಡಿದ ಅಬ್ದುಲ್ ಖಾದರ್ ಇಮಾಂಸಾಬ್ ನಡಕಟ್ಟಿನ ಅವರಿಗೆ ಭಾರತ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಮುವ್ವತ್ತು ವರ್ಷಗಳಿಂದ ಹೊಸ ಹೊಸ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿರುವ ನಡಕಟ್ಟಿನ ಅವರು ಕೂರಿಗೆ, ಕಬ್ಬಿಣದ ನೇಗಿಲ ಗಾಲಿ, ಕಬ್ಬು ಬಿತ್ತುವ ಕೂರಿಗೆ, ರೋಟೋವೇಟರ್‌ ಮೊದಲಾದ ಸರಳ ಯಂತ್ರಗಳನ್ನು ಸಂಶೋಧಿಸಿ ತಯಾರಿಸಿದ್ದಾರೆ.

ತಾವು ಸಿದ್ದಗೊಳಿಸಿದ ಯಂತ್ರೋಪಕರಣಗಳನ್ನು ಪ್ರಯೋಗ ಮಾಡಲು ಸ್ವಂತ ಜಮೀನನ್ನು ಮೀಸಲಾಗಿರಿಸಿರುವ ನಡಕಟ್ಟಿನ ಅವರಿಗೆ ಕೃಷಿ ವಿವಿ ಹಾಗೂ ಕೃಷಿ ಇಲಾಖೆಗಳು ಅನೇಕ ಗೌರವಗಳನ್ನು ನೀಡಿ ಗೌರವಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಟಿ. ವೆಂಕಟೇಶ್ (ಈ ಸಂಜೆ)

ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿರಳ ಪತ್ರಿಕೋದ್ಯಮಿ ಟಿ. ವೆಂಕಟೇಶ್, ಕನ್ನಡಾಭಿಮಾನದಿಂದಲೇ ಮೈದಳೆದ ಅಭಿಮಾನಿ ಸಂಸ್ಥೆಯ ಒಡೆಯ.
ಸಾಮಾನ್ಯ ರೈತಾಪಿ ಕುಟುಂಬದವರಾದ ವೆಂಕಟೇಶ್ಗೆ ಜೀವನಾಧಾರವಾಗಿದ್ದ ಭೂಮಿಯನ್ನು ಮಠಕ್ಕೆ ದಾನ ಮಾಡಿದ ತಾಯಿಯೇ ಆದರ್ಶ. ಬಡತನದ ನಡುವೆ ಡಿಪ್ಲೊಮಾ ವ್ಯಾಸಂಗ, ಸರ್ಕಾರಿ ನೌಕರಿಗೆ ಹೋಗದೆ ಸ್ವಂತ ಉದ್ಯೋಗಕ್ಕೆ ಮಿಡಿದ ಮನಸ್ಸು, ಎಲೆಕ್ಟಿಕಲ್ ಗುತ್ತಿಗೆದಾರರಾಗಿದ್ದವರಿಗೆ ವರನಟ ರಾಜ್ ಕಂಡರೆ ಪಂಚಪ್ರಾಣ. ಗೋಕಾಕ್ ಚಳವಳಿಗೆ ಧುಮುಕಿದ ಮೇಲೆ ಮೈಮನಗಳಲ್ಲಿ ಕನ್ನಡದ್ದೇ ಝೇಂಕಾರ. ಕನ್ನಡಪರ ದನಿಯಾಗಿ ೧೯೮೨ರಲ್ಲಿ ‘ಅಭಿಮಾನಿ’ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ. ೧೯೮೬ರಲ್ಲಿ ‘ಅಭಿಮಾನಿ’ ಸಂಸ್ಥೆ ಸ್ಥಾಪಿಸಿ ಮುದ್ರಣ ಕ್ಷೇತ್ರಕ್ಕೂ ಅಡಿ. ಮುಂದಿನದ್ದು ಇತಿಹಾಸ. ೧೯೮೫ರಲ್ಲಿ ಆರಂಭಿಸಿದ ‘ಅರಗಿಣಿ’ ಸಿನಿಮಾ ವಾರಪತ್ರಿಕೆ, ೧೯೮೯ರಲ್ಲಿ ಶುರು ಮಾಡಿದ ‘ಈ ಸಂಜೆ’ ಸಂಜೆಪತ್ರಿಕೆಗಳ ಮುಖೇನ ಮಾಧ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತು. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಮುದ್ರಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಅಪೂರ್ವ ಸಾಧನೆ. ಮೂರೂವರೆ ದಶಕದ ಬಳಿಕವೂ ಜನಪ್ರಿಯತೆ-ಉದ್ಯಮಶೀಲತೆ ಉಳಿಸಿಕೊಂಡು ಮುನ್ನಡೆದಿರುವ ಸಾಧಕ ಪತ್ರಿಕೋದ್ಯಮಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು

ಆನ್ನೋದ್ಧಾರದ ಜೊತೆಗೆ ಲೋಕೋದ್ಧಾರವನ್ನು ಕೈಗೊಂಡ ಸಂತಪರಂಪರೆಯನ್ನು ಬೆಳಗಿದ ಪುಣ್ಯಪುರುಷರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು.ವಚನ ಸಾಹಿತ್ಯದ ಪ್ರಚಾರದಲ್ಲಿ ಮಹತ್ವದ ಕಾಣೆಯಿತ್ತವರು.
ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠಾಧೀಶರಾದ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿಯೇ ಬದುಕು ಮೀಸಲಿಟ್ಟಿರುವವರು. ೧೯೬೩ರ ಜುಲೈ ಒಂದರಂದು ಜನಿಸಿದ ಶ್ರೀಗಳು ಶಿಶುವಿದ್ದಾಗಲೇ ಶಿವಸಂಕಲ್ಪದಂತೆ ಹಾರಕೂಡ ಸಂಸ್ಥಾನಮಠದ ಭಾವೀ ಪೀಠಾಧಿಪತಿಯೆಂದು ಘೋಷಿಸಲ್ಪಟ್ಟವರು ಕಲ್ಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತದ ಪದವೀಧರರು ಶ್ರೀಮಠದ ಪೀಠಾಧಿಪತಿಯಾದ ಮೇಲೆ ಕೈಗೊಂಡ ಕಾರ್ಯಗಳೆಲ್ಲವೂ ಮಹತ್ತರವಾದುದೇ. ಶ್ರೀ ಚೆನ್ನರೇಣುಕ ಬಸವ ರಾಜ್ಯ ಮಟ್ಟದ ಪ್ರಶಸ್ತಿ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠರ ಗುರುತಿಸಲೆಂದೇ ಚನ್ನಶ್ರೀ ಪ್ರಶಸ್ತಿಗಳ ಸ್ಥಾಪನೆಯ ಮೈಲುಗಲ್ಲು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತು ಬೃಹತ್ ಹತ್ತು ಬೃಹತ್ ಸಂಪುಟಗಳ ಪ್ರಕಟಣಾ ಕಾರ್ಯ ಬಹುಕಾಲದವರೆಗೂ ನೆನಪಿನಲ್ಲುಳಿಯುವಂತಹುದು. ಶಿಕ್ಷಣ, ಧರ್ಮ, ಚಿಂತನೆ, ಪ್ರವಚನ, ಸಂಗೀತ, ಸಾಹಿತ್ಯ, ಕಲೆ ಹೀಗೆ ಹತ್ತಾರು ಸಾಂಸ್ಕೃತಿಕ ಕ್ಷೇತ್ರಗಳಿಗೆ ಶ್ರೀಗಳು ಸಲ್ಲಿಸಿದ ಸೇವೆ ಅಪಾರ. ಗುಲ್ಬರ್ಗಾ ವಿ.ವಿ ಯ ಗೌರವ ಡಾಕ್ಟರೇಟ್, ಶಿವಾಚಾರ್ಯರತ್ನ, ಧರ್ಮರತ್ನ ಮತ್ತಿತರ ಗೌರವಗಳು ಶ್ರೀಗಳ ನಿಜಸೇವೆಗೆ ಸಂದ ಮಹಾಗೌರವವೇ ಸರಿ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಡಾ|| ಬಿಸಲಯ್ಯ

ಕೃಷಿ ಅಧ್ಯಯನ ಸಂಶೋಧನೆ, ಅಭಿವೃದ್ಧಿ ಕಾರ್ಯ ಮತ್ತು ಆಡಳಿತದಲ್ಲಿ ತೊಡಗಿರುವ ಡಾ|| ಬಿಸಲಯ್ಯ ಅವರು ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಒಡನಾಟವಿಟ್ಟುಕೊಂಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಿದ ಬಿಸಲಯ್ಯ ಅವರು ಈವರೆಗೆ ಸುಮಾರು ೧೭೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಕೃಷಿ ಅಭಿವೃದ್ಧಿ ಯೋಜನೆಯ ರೂಪುರೇಷೆಗಳ ತಯಾರಿಕೆಯಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆದಿರುವ ಬಿಸಲಯ್ಯ ಅವರು ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಿತ್ರಿ ಶಿವಪ್ಪ ಪೂಜಾರ

ಜಾನಪದವನ್ನೇ ಬದುಕಿನ ಪಥವಾಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಸಾಧಕಿ ಸಾವಿತ್ರಿ ಶಿವಪ್ಪ ಪೂಜಾರ, ಮಹಿಳಾಪರ ಹೋರಾಟಗಾರ್ತಿ, ಗೀಗೀಪದ ಹಾಡುಗಾರ್ತಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ೧೯೬೧ರಲ್ಲಿ ಜನಿಸಿದ ಸಾವಿತ್ರಿ ಪೂಜಾರ್ ಬಡಕುಟುಂಬದ ಕುಡಿ, ಸಾಮಾಜಿಕವಾಗಿ ಹಿಂದುಳಿದ ಮನೆತನ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಈ ಹಂತದಲ್ಲಿ ಸಾವಿತ್ರಿ ಅವರ ಕೈಹಿಡಿದು ನಡೆಸಿದ್ದು ಜಾನಪದ. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿದ ಗೀಗೀಪದ ಹಾಡುಗಾರಿಕೆಯನ್ನೇ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡ ಕಲಾವಿದೆ. ಜಾತ್ರೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ತತ್ವಪದಗಳ ಗಾಯನದಿಂದ ಕಲಾರಸಿಕರ ಮನಗೆದ್ದ ಸಾವಿತ್ರಿ ಪೂಜಾ‌ ಜಾನಪದ ಕೋಲಲೆಯೆಂದೆ ಜನಜನಿತರು. ಸರ್ಕಾರದ ಉತ್ಸವಗಳು ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ನಿರಂತರ ಕಲಾಪ್ರದರ್ಶನ, ನಾಲ್ಲೂವರೆ ದಶಕಗಳ ಅನನ್ಯ ಕಲಾಸೇವೆ, ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಯಾಗಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಿದವರು. ದೇವದಾಸಿ ಪದ್ಧತಿ ವಿರುದ್ಧ ಸಮರ ಸಾರಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಸಾವಿತ್ರಿ ಪೂಜಾ‌ರ ಅವರದ್ದು. ಫಕೀರವ್ವ ಗುಡಿಸಾಗರ ಪ್ರಶಸ್ತಿ, ಬಾಬು ಜಗಜೀವನರಾಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಸಾವಿತ್ರಿ ಪೂಜಾ‌ರ ಜಾನಪದ ಲೋಕದ ಮಂದಾರ ಪುಷ್ಪ.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸಿ. ಮಹೇಶ್ವರನ್

ಮಾಧ್ಯಮ ಲೋಕದ ವಿಶೇಷ ಪ್ರತಿಭೆ ಹಿರಿಯ ಪತ್ರಿಕೋದ್ಯಮಿ ಸಿ. ಮಹೇಶ್ವರನ್. ಶತಮಾನದ ಇತಿಹಾಸವುಳ್ಳ ‘ಸಾಫ್ಟಿ’ ಪತ್ರಿಕೆಯ ಸಂಪಾದಕರು, ಪ್ರಸಿದ್ಧ ಅಂಕಣಕಾರರೂ ಸಹ.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸಿ. ಮಹೇಶ್ವರನ್ ಅವರು ಬಿ.ಎ. ಪದವೀಧರರು. ಬರೆವಣಿಗೆ ಆಸಕ್ತಿಯ ಕ್ಷೇತ್ರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮಾನ ಹಿಡಿತದ ವಿಶೇಷ. 1985ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ, ಪ್ರಜಾವಾಣಿ, ಸುಧಾ, ಸುದ್ದಿಸಂಗಾತಿ, ಮುಂಬಯಿನ ಪಯೋನೀ ಆಂಗ್ಲ ಪತ್ರಿಕೆಗಳ ಅಂಕಣಕಾರ. 35 ವರ್ಷಗಳ ಸುದೀರ್ಘ-ಪಕ್ವ ಅನುಭವ. ಸ್ವಾತಂತ್ರ್ಯ ಸಂಗ್ರಾಮಕ್ಕೆ ದನಿಯಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ 121 ವರ್ಷಗಳ ಇತಿಹಾಸವುಳ್ಳ ಸಾದ್ವಿ ಕನ್ನಡ ಸಂಜೆ ದಿನಪತ್ರಿಕೆಗೆ 1995ರಲ್ಲಿ ಮಾಲೀಕ-ಸಂಪಾದಕರಾಗಿ ಹೊಸ ಹೆಜ್ಜೆ. 25 ವರ್ಷಗಳಿಂದಲೂ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ. ‘ಸಾಧಿ’ ಇನ್ಬೈಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ. ಸಾದ್ವಿ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕಾರ್ಯ- ಜನಜಾಗೃತಿ ಕೈಗೊಂಡ ಹಿರಿಮೆ. ಅವಿಚ್ಛಿನ್ನ ರಾಷ್ಟ್ರೀಯತೆ, ಆದರ್ಶದಿಂದಲೇ ನೆಲೆ-ಬೆಲೆ ದಕ್ಕಿಸಿಕೊಂಡ ವಿಶಿಷ್ಟ-ಮಾದರಿ ಪತ್ರಿಕೋದ್ಯಮಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮನೋಹರ ಕೆ ಪತ್ತಾರ

ಪರಂಪರಾನುಗತವಾಗಿ ಬಂದ ಶಿಲ್ಪಕಲೆ ಹಾಗೂ ಚಿತ್ರಕಲೆಯಲ್ಲಿ ಮೂರು ದಶಕಗಳಿಂದ ಹೆಸರಾಗಿರುವ ಮನೋಹರ ಪತ್ತಾರ ಅವರು ಕಾಲೇಜು ಚಿತ್ರಕಲಾ ಶಿಕ್ಷಕರಾಗಿಯೂ ಅನುಭವ ಪಡೆದವರು.

ಮಣ್ಣು, ಫೈಬರ್, ಸಿಮೆಂಟ್ ಸೇರಿದಂತೆ ಬಹುಮಾಧ್ಯಮ ಶಿಲ್ಪಕಲಾಕೃತಿ ರಚನೆಯಲ್ಲಿ ನೈಪುಣ್ಯತೆ ಸಾಧಿಸಿರುವ ಮನೋಹರ ಪತ್ತಾರ ಅವರು ರಂಗ ನಿರ್ದೇಶಕರಾಗಿಯೂ ಖ್ಯಾತಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯ ಕಲಾವಿದರಾದ ಮನೋಹರ ಪತ್ತಾರ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಸಮೂಹ ವರ್ಣ ಕಾರ್ಯಾಗಾರದ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮನೋಹರ ಪತ್ತಾರ ಅವರು ಹಲವು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಅನೇಕ ನಾಟಕಗಳಿಗೆ ರಂಗಸಜ್ಜಿಕೆಯಲ್ಲಿ ಸಹ ತೊಡಗಿದ್ದಾರೆ. ಇವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ನೀಡಿ ಸನ್ಮಾನಿಸಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್.ಟಿ. ಶಾಂತಗಂಗಾಧರ

ಸಮಾಜಸೇವೆಯಲ್ಲೇ ದಿವ್ಯಾನುಭೂತಿ ಅನುಭವಿಸಿದ ವಿರಳ ಸೇವಾನಿರತರಲ್ಲಿ ಶಾಂತಗಂಗಾಧರ್ ಸಹ ಒಬ್ಬರು. ಸಾಹಿತ್ಯ-ಸಂಸ್ಕೃತಿ-ಸಮಾಜಸೇವೆ-ಕನ್ನಡ ಸೇವೆ. ಹೀಗೆ ಬಹುರಂಗದಲ್ಲಿ ಬಹುಶ್ರುತ ಸಾಧನೆ ಅವರದ್ದು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳುವಿನಲ್ಲಿ ಜನಿಸಿದ ಶಾಂತ ಗಂಗಾಧರ ವಿದ್ಯಾರ್ಥಿ ದೆಸೆಯಲ್ಲೇ ಚರ್ಚಾ ಸ್ಪರ್ಧೆ-ಪ್ರಬಂಧ ಸ್ಪರ್ಧೆಗಳಲ್ಲಿ ಪಾರಿತೋಷಕಗಳನ್ನು ಗೆದ್ದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.ಸಿಂಡಿಕೇಟ್ ಬ್ಯಾಂಕ್ ಶಿರಾಳಕೊಪ್ಪ ಶಾಖೆಯಲ್ಲಿ ನೌಕರಿಗೆ ಸೇರ್ಪಡೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದಲ್ಲೇ ವ್ಯವಹರಿಸಿದ ದಾಖಲೆ. ಬ್ಯಾಂಕಿಂಗ್ ಕನ್ನಡ ಶಬ್ದಕೋಶದಲ್ಲಿ ಕೊಡುಗೆಯಿತ್ತವರು. ಹವ್ಯಾಸಿ ರಂಗಕಲಾವಿದನಾಗಿ ಸೈ ಎನಿಸಿಕೊಂಡವರು. ಧಾರಾವಾಹಿಯಲ್ಲೂ ನಟಿಸಿ ಹಿರಿಮೆ ಮೆರೆದವರು.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿದ್ದ ಶಾಂತಗಂಗಾಧರ ಶಿಕಾರಿಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ. ಕವನ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟ. ಸಾಹಿತ್ಯ-ಸಾಂಸ್ಕೃತಿಕ ಮತ್ತು ಸಮಾಜಸೇವಾ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ಕ್ರಿಯಾಶೀಲರಾಗಿರುವ ಶಾಂತಗಂಗಾಧರ್ ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೂ ಭಾಜನರು.

Categories
ನ್ಯಾಯಾಂಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಂ.ಕೆ. ವಿಜಯಕುಮಾರ್

ನ್ಯಾಯಾಂಗ ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಎಂ.ಕೆ. ವಿಜಯಕುಮಾರ್ ಪ್ರಮುಖರು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್. ಸಮಾಜಸೇವೆ, ಧಾರ್ಮಿಕ ಕ್ಷೇತ್ರಗಳಲ್ಲೂ ಕ್ರಿಯಾಶೀಲ ಸಾಧಕರು.
ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದವರಾದ ವಿಜಯಕುಮಾರ್ ವಿಜ್ಞಾನ ಕಾನೂನು ಪದವೀಧರರು. ೧೯೬೮ರಲ್ಲಿ ವಕೀಲಿ ವೃತ್ತಿ ಆರಂಭಿಸಿ ದೇಶದ ವಿವಿಧೆಡೆ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕೃಷಿಕಾರ್ಮಿಕರು, ಹಳ್ಳಿಗರು, ಬಡವರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸಿದವರು. ಅಸಂಖ್ಯ ಸಾಮಾಜಿಕ, ಪರಿಸರಾತ್ಮಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ನ್ಯಾಯಾಂಗದಲ್ಲಿ ಎತ್ತಿಹಿಡಿದ ಹಿರಿಮೆ, ಕಾನೂನು ಉಪನ್ಯಾಸ, ನ್ಯಾಯವಾದಿಗಳ ಸಂಘಟನೆಯ ಆಡಳಿತದಲ್ಲಿ ದಕ್ಷತೆ ಮೆರೆದವರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನೊಳಗೊಂಡಂತೆ ೫೪ ಮಂದಿ ನ್ಯಾಯವಾದಿಗಳನ್ನು ರೂಪಿಸಿದ ಗುರು. ನ್ಯಾಯವಾದಿಯಾಗಿ ಐದು ದಶಕಕ್ಕೂ ಮೀರಿ ದುಡಿದ ಸೇವೆಯ ಹೆಗ್ಗುರುತು. ಅನೇಕ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ಕಾರ್ಯದಲ್ಲಿ ಸದಾ ಸಕ್ರಿಯರು. ಜನಪರ ನ್ಯಾಯವಾದಿಯೆಂದೇ ಜನಜನಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ವಿಜಯ ಸಂಕೇಶ್ವರ

ಉದ್ಯಮ ರಂಗದಲ್ಲಿ ಅದ್ವಿತೀಯ ಸಾಧನೆ ಮೂಲಕ ಅಚ್ಚಳಿಯದ ಛಾಪು ಮೂಡಿಸಿದವರು ವಿಜಯ ಸಂಕೇಶ್ವರ. ಪ್ರತಿಷ್ಠಿತ ವಿಆರ್‌ ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಯಶಸ್ವಿ ಉದ್ಯಮಿ.
ಉತ್ತರಕರ್ನಾಟಕದ ಗದಗ ಜಿಲ್ಲೆಯ ಸಂಕೇಶ್ವರ ವಿಜಯ ಸಂಕೇಶ್ವರರ ಹುಟ್ಟೂರು. ೧೯೫೦ರ ಆಗಸ್ಟ್ ೨ರಂದು ಜನನ, ಗದಗಿನ ಆದರ್ಶ ಶಿಕ್ಷಣ ಸಮಿತಿಯಲ್ಲಿ ಅಕ್ಷರಾಭ್ಯಾಸ, ವಾಣಿಜ್ಯ ಪದವೀಧರರು. ಬಾಲ್ಯದಿಂದಲೂ ವಾಣಿಜ್ಯೋದಮದಲ್ಲಿ ವಿಶೇಷ ಆಸಕ್ತಿ. ೧೯೭೬ರಲ್ಲಿ ಗದಗಿನಲ್ಲಿ ಏಕೈಕ ಟ್ರಕ್‌ನೊಂದಿಗೆ ವಿಆರ್‌ಲ್‌ ಗ್ರೂಪ್ ಸ್ಥಾಪನೆ. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಕಾರ್ಯಕ್ಷೇತ್ರ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗೆ ವಿಸ್ತರಣೆ.ಕೆಲವೇ ದಶಕಗಳಲ್ಲಿ ಪಾರಮ್ಯ ಮೆರೆಯುವಿಕೆ. ಸರಕು ಸಾಗಾಣಿಕೆ, ಪಾರ್ಸಲ್ ಸಾಗಾಣಿಕೆ ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯ ಸಂಪಾದನೆ, ಗಿನ್ನಿಸ್ ಪುಸ್ತಕದಲ್ಲಿ ನವೀನ ದಾಖಲೆ ಸ್ಥಾಪನೆ. ದೇಶಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವುದು ಮಹತ್ಸಾಧನೆ. ಶಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮಿಯೂ ಸಹ. ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಯನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಹೆಗ್ಗಳಿಕೆ. ಇದೀಗ ದಿಗ್ವಿಜಯ ಸುದ್ದಿವಾಹಿನಿಯೂ ಚಾಲ್ತಿಯಲ್ಲಿದ್ದು ಉದ್ಯಮದ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇರುವುದು ನಾಡಿಗೆ ಹೆಮ್ಮೆ ತರುವ ಸಂಗತಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಹೊನ್ನಪ್ಪಾಚಾರ್ಯ

ನಾಡಿನ ಹೆಸರಾಂತ ಲೋಹಶಿಲ್ಪಿಗಳಲ್ಲಿ ಒಬ್ಬರಾದ ಶಿಲ್ಪಿ ಹೊನ್ನಪ್ಪಾಚಾರ್ ಕಳೆದ ಐದು ದಶಕಗಳಿಂದ ವೈವಿಧ್ಯಮಯವಾದ ಲೋಹ ಶಿಲ್ಪಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಗತ್ಯಗಳಿಗೆ ಅನುಗುಣವಾಗಿ ಶಿಲ್ಪಗಳನ್ನು ನಿರ್ಮಿಸಿಕೊಟ್ಟಿರುವ ಹೊನ್ನಪ್ಪಾಚಾರ್ ಗುರುಕುಲ ಮಾದರಿಯ ಶಿಲ್ಪಕಲಾ ತರಬೇತಿ ಶಾಲೆಯನ್ನು ಆರಂಭಿಸುವ ಮೂಲಕ ನೂರಾರು ಮಂದಿ ಆಸಕ್ತರನ್ನು ಶಿಲ್ಪಕಲೆಯಲ್ಲಿ ತರಬೇತುಗೊಳಿಸಿದ್ದಾರೆ.

ವಿಶ್ವಕರ್ಮ ರಥೋತ್ಸವ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಶಿಲ್ಪಿ ಹೊನ್ನಪ್ಪಾಚಾರ್ ಕೇಂದ್ರ ಸರ್ಕಾರದ ಅಧಿಕೃತ ಶಿಲ್ಪಿಯಾಗಿ ಪರಿಗಣಿಸಲ್ಪಟ್ಟಿದ್ದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆಳ್ವಾಸ್ ನುಡಿಸಿರಿ ಗೌರವ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಲಭಿಸಿವೆ.

Categories
ಕಾನೂನು ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆ.ಎನ್. ಭಟ್

ಕರ್ನಾಟಕ ಕಂಡ ಅಪ್ರತಿಮ ಪ್ರತಿಭಾವಂತ ನ್ಯಾಯವಾದಿ ಕೆ.ಎನ್. ಭಟ್, ಹೈಕೋರ್ಟ್-ಸುಪ್ರೀಂಕೋರ್ಟ್ ನ್ಯಾಯವಾದಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನ್ಯಾಯದಾನ ವ್ಯವಸ್ಥೆಗೆ ಅಪೂರ್ವ ಕಾಣಿಕೆ ನೀಡಿದ ನ್ಯಾಯಚಿಂತಕರು.
ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದಲ್ಲಿ ೧೯೪೦ರಲ್ಲಿ ಜನಿಸಿದ ಕೆ.ಎನ್. ಭಟ್ ೧೯೬೨ರಲ್ಲಿ ಕಾನೂನು ಪದವಿ ಪಡೆದವರು. ಬೆಂಗಳೂರಿನಲ್ಲಿ ವೃತ್ತಿ ಬದುಕಿನಾರಂಭ. ೧೯೮೬ರಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿ ಪದೋನ್ನತಿ ಪಡೆದವರು. ೧೯೯೬ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಕೆ.ಎನ್. ಭಟ್ ಅವರದ್ದು ಅಯೋಧ್ಯೆ ಪ್ರಕರಣದಲ್ಲಿ ಗುರುತರ ನಿರ್ವಹಣೆ, ಅಲಹಾಬಾದ್ ಹೈಕೋರ್ಟ್ನಲ್ಲಿ ಭಗವಾನ್ ಶ್ರೀರಾಮನನ್ನು ಕಕ್ಷಿದಾರರನ್ನಾಗಿ ಮಾಡಿ ವಾದ ಮಂಡಿಸಿದ ಹಿರಿಮೆ. ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದಕ್ಕೆ ಕೆ.ಎನ್. ಭಟ್ ಅವರು ಒದಗಿಸಿದ ಪೂರಕ ದಾಖಲೆಗಳೇ ಮುಂದೆ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬರಲು ಕಾರಣೀಭೂತವಾಗಿದ್ದು ವಿಶೇಷ. ಅತಿಥಿ ಪ್ರಾಧ್ಯಾಪಕ, ಕಾನೂನು ಬರಹಗಳ ಅಂಕಣಕಾರರಾಗಿಯೂ ಸುಪ್ರಸಿದ್ಧರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಗುರುರಾಜ ಕರ್ಜಗಿ

ನಾಡಿನ ಹೆಸರಂತ ಶಿಕ್ಷಣ ತಜ್ಞರು, ಪ್ರಖರ ವಾಗಿ, ಉಪನ್ಯಾಸಕರು ಅಂಕಣಕಾರರು ಹಾಗೂ ಆಧ್ಯಾತ್ಮಿಕ ಚಿಂತಕರಾಗಿ ಡಾ.ಗುರುರಾಜ ಕರ್ಜಗಿ ಅವರದ್ದು ಬಹುಶ್ರುತ ಸಾಧನೆ.
ಧಾರವಾಡದವರಾದ ಡಾ. ಗುರುರಾಜ ಕರ್ಜಗಿ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ ಪಡೆದವರು. ಬೆಂಗಳೂರಿನ ವಿವಿಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ವಿವಿಎಸ್ ಶೈಕ್ಷಣಿಕ-ಆಡಳಿತ ಮಹಾವಿದ್ಯಾಲಯದ ನಿರ್ದೇಶಕರು, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ನಿರ್ದೇಶಕರು, ಅನೇಕ ವೈದ್ಯಕೀಯ ವಿ.ವಿ ಗಳ ಹಾಗೂ ಅಂತಾರಾಷ್ಟ್ರೀಯ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಅವರದ್ದು ಅನನ್ಯ ಶೈಕ್ಷಣಿಕ ಸೇವೆ. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ೮೫ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣದ ಕಾರಣೀಕರ್ತರು, ಕರ್ನಾಟಕ ಜ್ಞಾನ ಆಯೋಗದ ಸದಸ್ಯರೂ ಆಗಿರುವ ಕರ್ಜಗಿ ಅತ್ಯುತ್ತಮ ಬರಹಗಾರರೂ ಕೂಡ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಲೇಖನ, ೧೭೦೦ಕ್ಕೂ ಅಧಿಕ ಅಂಕಣ ಬರಹ, ಆಂಗ್ಲ ಮತ್ತು ಕನ್ನಡದಲ್ಲಿ ಕಥೆ, ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರು. ಕರುಣಾಳು ಬಾ ಬೆಳಕೆ ಅವರ ಮಹೋನ್ನತ ಜನಪ್ರಿಯ ಕೃತಿ. ಅವರ ವಿದ್ವತ್ತೂರ್ಣ ಮಾತು-ಬರಹಗಳು ಯುವಜನತೆಗೆ ಮಾದರಿ, ನಾಡಿಗೆ ಹೆಮ್ಮೆಯ ವಿಷಯ.

Categories
ಕರಕುಶಲಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶರಣಮ್ಮ ಮ್ಯಾಗೇರಿ

ಬಡತನದ ಸಿರಿಯಾಗಿ ಶರಣಮ್ಮ ಮ್ಯಾಗೇರಿ ಅವರು ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಸಿದ್ಧಪಡಿಸುವ ಕೌದಿಗಳು ಕೇವಲ ಹಾಸಿಗೆ ಹೊದ್ದಿಕೆಯಾಗಿದ್ದಲ್ಲದೆ, ಕಲಾತ್ಮಕ ಕಸೂತಿಯಾಗಿಯೂ ರೂಪುಗೊಂಡಿವೆ.

ಅತ್ಯಂತ ಸುಲಭ ದರದಲ್ಲಿ ಕಲಾತ್ಮಕವಾಗಿ ಸಿದ್ದಪಡಿಸುವ ಕೌದಿಗಳು ಹಿರಿಯರ ನೆನಪಾಗಿಯೂ, ಉತ್ತಮ ಕಲಾಕೃತಿಯಾಗಿಯೂ ಸಿದ್ಧಪಡಿಸುವಲ್ಲಿ ಶರಣಮ್ಮ ಅವರು ಸಿದ್ಧಹಸ್ತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಲಿಂಗಪ್ಪ ಶೇರಿಗಾರ ಕಟೀಲು

ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಪ್ರತಿಭೆ ಕೆ. ಲಿಂಗಪ್ಪ ಶೇರಿಗಾರ. ನಾಡು ಕಂಡ ಶ್ರೇಷ್ಠ ನಾಗಸ್ವರ ವಾದಕರು, ಪಕ್ಕವಾದ್ಯ ಪ್ರವೀಣರು. ಹೆಮ್ಮೆಯ ಸಾಧಕರು ಕೂಡ.
ಲಿಂಗಪ್ಪ ಶೇರಿಗಾರ ತಂದೆ ವಾಸು ಶೇರಿಗಾರ ಸುಪ್ರಸಿದ್ಧ ನಾಗಸ್ವರ ವಾದಕರು, ಬಾಲ್ಯದಲ್ಲೇ ಸ್ವರಾಭ್ಯಾಸ, ತಂದೆಯೇ ಮೊದಲ ಗುರು, ವಿದ್ವಾನ್ ಕೃಷ್ಣಭಟ್ರಿಂದ ಕೊಳಲು ವಾದನ, ಮಧುರೈನ ಎಂ.ಪಿ.ಆರ್. ಅಯ್ಯಾ ಸ್ವಾಮಿ ಅವರಿಂದ ನಾಗಸ್ವರ ಕಲಾದೀಕ್ಷೆ, ಒಲಿದ ನಾದವೇ ಬದುಕು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಲಾಜೀವನದ ಆರಂಭ, ನಲವತ್ತು ವರ್ಷಗಳಿಂದಲೂ ದೇವಳದಲ್ಲಿ ಸ್ವರಸೇವೆ. ವಾರ್ಷಿಕ ಉತ್ಸವ, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ನಾಗಸ್ವರ ಕಛೇರಿ ಮೂಲಕ ದೇವಿಕೃಪೆಗೆ ಪಾತ್ರರು. ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿ ಪ್ರಮುಖ ದೇವಾಲಯಗಳಲ್ಲೂ ಕಛೇರಿ ನಡೆಸಿಕೊಟ್ಟ ಹಿರಿಮೆ. ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ನಾಗಸ್ವರ ವಿಶಾರದ ಮುಂತಾದ ಪ್ರಶಸ್ತಿಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಗಿರಿಜಾ ನಾರಾಯಣ

ಸುಗಮ ಸಂಗೀತ ಕ್ಷೇತ್ರದ ಅನನ್ಯ ಸಾಧಕಿ ಗಿರಿಜಾ ನಾರಾಯಣ. ಸಂಗೀತಕ್ಕೇ ಬದುಕು ಮೀಸಲಿಟ್ಟ ಗಾಯಕಿ, ಸ್ವರಸಂಯೋಜಕಿ, ಸಂಘಟಕಿ ಹಾಗೂ ಸಮಾಜಸೇವಕಿ,
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಗಿರಿಜಾ ನಾರಾಯಣ ಅವರದ್ದು ಸಂಗೀತದ ಕುಟುಂಬ. ಅಪ್ಪ-ಅಮ್ಮ ಇಬ್ಬರೂ ಸಂಗೀತಜ್ಞರೇ. ಸಹಜವಾಗಿ ಬಾಲ್ಯದಲ್ಲೇ ಸ್ವರಾಭ್ಯಾಸ, ವಿದ್ವಾನ್ ಗುರುರಾಜಾಚಾರ್, ವೆಂಕಟರಾಂ, ಎಸ್. ಸೋಮಸುಂದರಂ, ಪಾರ್ವತಿಸುತ, ಶ್ಯಾಮಲಾ ಜಿ. ಭಾವೆ ಮುಂತಾದವರಿಗೆ ಸಂಗೀತಪಾಠದ ಯೋಗ. ೧೯೮೩ರಲ್ಲೇ ಆಕಾಶವಾಣಿ ‘ಬಿ ಹೈ’ ಗ್ರೇಡ್ ಕಲಾವಿದೆ. ಸುಗಮಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ಕವಿಕಾವ್ಯಕ್ಕೆ ಸ್ವರಧಾರೆ. ಜನಪದ, ದೇವರನಾಮ, ವಚನಗಳ ಗಾಯನದಲ್ಲೂ ಸುಪ್ರಸಿದ್ಧಿ. ೧೦೦೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ಗಾನಸುಧೆ. ‘ಸ್ವರ’ ಸಂಸ್ಥೆ ಮುಖೇನ ನೂರಾರು ಶಿಷ್ಯರ ರೂಪಿಸಿದ ಗುರು. ‘ಸ್ವರಾಲಯ’ ಸಂಸ್ಥೆ ಸ್ಥಾಪಿಸಿ ೨೦೦ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ೨೦೦ ಗೀತೆಗಳಿಗೆ ಸ್ವರಸಂಯೋಜನೆ. ದೇಶಾದ್ಯಂತ ಸಂಗೀತ ಕಾರ್ಯಕ್ರಮ, ನೊಂದವರಿಗೆ ನೆರವಾದ ಸಮಾಜಸೇವಕಿ. ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಗೌರವಗಳಿಂದ ಸಂಪನ್ನವಾದ ಕಲಾಬದುಕು.