Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ದಿ ಬೆಟರ್ ಇಂಡಿಯಾ

ಉತ್ತಮ ಭಾರತ ನಿರ್ಮಾಣಕ್ಕಾಗಿ ಮಿಡಿದು ದುಡಿಯುತ್ತಿರುವ ಹೆಮ್ಮೆಯ ಸುದ್ದಿಸಂಸ್ಥೆ ‘ದಿ ಬೆಟರ್ ಇಂಡಿಯಾ’. ಸತ್ಯ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುತ್ತಿರುವ ವೆಬ್ ತಾಣ.
ಸಿವಿಲ್ ಎಂಜಿನಿಯರಿಂಗ್ ಪದವಿ ಹಾಗೂ ವಾಣಿಜ್ಯ ಆಡಳಿತದ ಸ್ನಾತಕೋತ್ತರ ಪದವೀಧರಾದ ಬೆಂಗಳೂರು ಮೂಲದ ಧೀಮಂತ್ ಪರೇಖ್ ಮತ್ತು ಅನುರಾಧ ಪರೇಖ್ರವರು ದಿ ಬೆಟರ್ ಇಂಡಿಯಾದ ಸಂಸ್ಥಾಪಕರು. ಸುಳ್ಳು ಮತ್ತು ಸಮಾಜವಿರೋಧಿ ಸುದ್ದಿ ಮಾಧ್ಯಮಗಳಿಂದ ಬೇಸತ್ತು ಸತ್ಯ, ಸಕಾರಾತ್ಮಕ, ಸಮಾಜಮುಖಿ ಪತ್ರಿಕೋದ್ಯಮದ ಕನಸು ಹೊತ್ತು ೨೦೦೮ರಲ್ಲಿ ಆರಂಭಿಸಲಾದ ಈ ಸುದ್ದಿ ವೆಬ್ ತಾಣ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ನಿರ್ಲಕ್ಷಿತ ಭಾರತೀಯ ಕಲೆ, ಗ್ರಾಮೀಣ ಭಾಗದ ಅನಕ್ಷರತೆ, ಸಮಸ್ಯೆಗಳನ್ನು ಬಿಂಬಿಸುತ್ತಾ ಬಂದಿರುವ ಸಂಸ್ಥೆ ಅನೇಕ ಹಳ್ಳಿಗಳಿಗೆ ತನ್ನ ವರದಿಗಳಿಂದ ನೀರು, ವಿದ್ಯುತ್ಗಳು ದೊರೆಯುವಂತೆ ಮಾಡಿದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಸರ್ಕಾರದ ಅವೈಜ್ಞಾನಿಕ ನೀತಿಗಳ ಬಗ್ಗೆ ಬೆಳಕು ಚೆಲ್ಲಿ ಆಡಳಿತಗಾರರ ಕಣ್ಣು ತೆರೆಸಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಶ್ರೀಸಾಮಾನ್ಯರಿಗೆ ಪರಿಹಾರ ದೊರಕಿಸಿರುವ ದಿ ಬೆಟರ್ ಇಂಡಿಯಾ ಸಂಸ್ಥೆ ವಿಶ್ವಾದ್ಯಂತ ೯ ಕೋಟಿ ಜನರನ್ನು ತಲುಪುತ್ತಿದ್ದು ಸಮಾಜಮುಖಿ ಕೈಂಕರ್ಯದಲ್ಲಿ ಸಾರ್ಥಕತೆ ಕಂಡಿದೆ.