ಅಂತರಾಷ್ಟ್ರೀಯ ಖ್ಯಾತಿಯ ವೈದ್ಯರಾಗಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಹಿರಿಮೆಯನ್ನು ಹೊರನಾಡಿನಲ್ಲಿ ಪ್ರಚುರಪಡಿಸುತ್ತಿರುವ ಅಪರೂಪದ ಗಣ್ಯ ವೈದ್ಯರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
ವಿಶ್ವಂಬರನಾಥ್ ಅವರು ಕಿವಿ, ಮೂಗು, ಗಂಟಲು ಚಿಕಿತ್ಸೆಯಲ್ಲಿ ಕರ್ನಾಟಕದ ಹೊಸಪೇಟೆಯಲ್ಲಿ ೧೯೪೨ರಲ್ಲಿ ಜನಿಸಿದ ಶ್ರೀ ವಿಶೇಷ ಪರಿಣತಿಯನ್ನು ಪಡೆದಿರುವವರು. ಆಕ್ಯುಪ್ರೆಷರ್ ನಲ್ಲೂ ಸೇವೆಯಲ್ಲಿ ತೊಡಗಿದ್ದಾರೆ.
ಸಿದ್ಧಹಸ್ತರು. ಕಳೆದ ೨೭ ವರ್ಷಗಳಿಂದ ವೈದ್ಯಕೀಯ ವೃತ್ತಿಯ ಜೊತೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಮಹತ್ವವನ್ನು ವಿದೇಶಿಯರಿಗೆ ಅತ್ಯಂತ ಸಮರ್ಥವಾಗಿ ಅರುಹುವುದು ಇವರ ಪ್ರೀತಿಯ ಹವ್ಯಾಸ.
ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳ ನೃತ್ಯ ಪ್ರವಾಸವನ್ನು ವಿದೇಶದಲ್ಲಿ ಏರ್ಪಡಿಸಿದ ಹಿರಿಮೆ ಇವರದು. ‘ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಘ’ ಹಾಗೂ ‘ಸ್ಕೂಲ್ ಫಾರ್ ದಿ ಡೆಫ್ ಅಂಡ್ ಡೆಮ್’ಗೆ ಶಿಕ್ಷಣ ಪರಿಕರಗಳನ್ನು ಉಚಿತವಾಗಿ ಒದಗಿಸಿದ ಉದಾರಿಗಳು, ೧೯೮೨ರಲ್ಲಿ ಫಾಕ್ಲ್ಯಾಂಡ್ಸ್ನ ಗವರ್ನರ್ ಅವರ ಆಹ್ವಾನದ ಮೇರೆಗೆ ಅಲ್ಲಿನ ಮಕ್ಕಳಿಗೆ ಉಚಿದ ವೈದ್ಯಕೀಯ ನೆರವನ್ನು ನೀಡಿದ ಕರುಣಾಳು.
ಭಗವದ್ಗೀತೆಯ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ವಿಶೇಷವಾಗಿ ಅಭ್ಯಸಿಸಿ ತಮ್ಮ ಉಪನ್ಯಾಸಗಳಲ್ಲಿ ಅವನ್ನು ಉಲ್ಲೇಖಿಸುವ ಮೂಲಕ ಭಾರತೀಯ ಶ್ರೇಷ್ಠ ಅಧ್ಯಾತ್ಮ ಗ್ರಂಥವೊಂದರ ವಿಶಿಷ್ಟತೆಯನ್ನು ಪರಿಚಯಿಸುತ್ತಿರುವ ಶ್ರೀಯುತರು ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.
ತಾಯ್ನಾಡಿನಿಂದ ಬಹುದೂರವಿದ್ದೂ ತಾಯ್ನೆಲದ ಸಂಸ್ಕೃತಿ ಮತ್ತು ಅಧ್ಯಾತ್ಮದ ಸೊಗಡನ್ನು ವಿದೇಶಿ ನೆಲದಲ್ಲಿ ಬಿತ್ತುತ್ತಿರುವ ಅಭಿಮಾನಿ ಕನ್ನಡಿಗರು ಡಾ. ಪಥಿಕೊಂಡ ವಿಶ್ವಂಬರನಾಥ್ ಅವರು.
Category: ರಾಜ್ಯೋತ್ಸವ 2001
ಪತ್ರಿಕೋದ್ಯಮ, ಕಥಾಸಾಹಿತ್ಯ ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ಪ್ರತಿಭಾವಂತ ಶ್ರೀ ಎಸ್ ದಿವಾಕರ ಅವರು.
ಪತ್ರಿಕೋದ್ಯಮದಲ್ಲಿ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತ ಸದ್ಯ ಅಮೇರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ, ಮಲ್ಲಿಗೆ, ಸುಧಾ, ಮೊದಲಾದ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ, ಸಂಪಾದಕರಾಗಿ ಅಪಾರ ಅನುಭವವನ್ನು ಸಂಪಾದಿಸಿದ್ದಾರೆ.
ಸಣ್ಣಕಥೆ, ಕವನ, ವಿಮರ್ಶೆ, ಪ್ರಬಂಧ, ಭಾಷಾಂತರ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಹದಿನೆಂಟಕ್ಕೂ ಮಿಕ್ಕು ಅತ್ಯುತ್ತಮ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರ ಕಥೆ, ಕಾದಂಬರಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರದು.
ಉದಯವಾಣಿ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವ ಅಚ್ಚು-ಮೆಚ್ಚು ಅಂಕಣಬರಹ ಬಹು ಜನಪ್ರಿಯ. ಇವರ ಸಣ್ಣಕತೆಗಳು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ‘ಇಂಡಿಯನ್ ರಿವ್ಯೂ ಆಫ್ ಬುಕ್ಸ್’ ಪತ್ರಿಕೆಯಲ್ಲಿ ಇಂಗ್ಲಿಷ್ ಗ್ರಂಥಗಳ ವಿಮರ್ಶಕನೆಂಬ ಹೆಗ್ಗಳಿಕೆ ಇವರದು.
ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಫೆಲೋಷಿಪ್, ದೆಹಲಿಯ ಕಥಾ ಸಂಸ್ಥೆಯ ಅಖಿಲಭಾರತ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ರಾಷ್ಟ್ರೀಯ ಹಿಂದಿ ಪುರಸ್ಕಾರ ಮೊದಲಾದ ಗಣ್ಯ ಗೌರವಗಳು ಶ್ರೀಯುತರಿಗೆ ಸಂದಿವೆ.
ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿರುವ ಹೊರನಾಡ ಕನ್ನಡಿಗ ಶ್ರೀ ಎಸ್. ದಿವಾಕರ್ ಅವರು. ಹೊರನಾಡ ಕನ್ನಡಿಗರು
ಗಾನವಿಶಾರದ, ದಾನಚಿಂತಾಮಣಿ, ಸ್ವಾತಂತ್ರ್ಯ ಹೋರಾಟಗಾರ, ಕೃಷಿಕ, ಶ್ರೀ ಬಿ ಎಸ್ ಶಿವಪ್ಪ ಶೆಟ್ಟರು.
೧೯೨೩ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಬಸವಾಪಟ್ಟಣದಲ್ಲಿ ಜನಿಸಿದ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯ ಜೀವನವೇ ಒಂದು ಆದರ್ಶ.
ಪ್ರೌಢಶಾಲಾ ಹಂತದಲ್ಲಿ ಮಹಾತ್ಮಾಗಾಂಧಿಯವರ ಕರೆಗೆ ಓಗೊಟ್ಟು ವ್ಯಾಸಂಗಕ್ಕೆ ತಿಲಾಂಜಲಿಯಿತ್ತು, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಬಾಲಕ ಶೆಟ್ಟರು ಅಂದಿನ ಸ್ವಾತಂತ್ರ್ಯ ಹೋರಾಟದ ನಾಯಕರುಗಳಾದ ಶ್ರೀ ಕೆ.ಸಿ. ರೆಡ್ಡಿ, ಶ್ರೀ ಬಿ ಡಿ ಜತ್ತಿ ಹುಲ್ಲೂರು ಶ್ರೀನಿವಾಸಜೋಯಿಸರು ಮುಂತಾದ ದೇಶಭಕ್ತರೊಡನೆ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರಲ್ಲದೆ ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ, ಶಿವಪುರ ಸತ್ಯಾಗ್ರಹ ಮುಂತಾದವುಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು.
ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಒಡನಾಡಿಯಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರೇರಣೆ ಪಡೆದ ಇವರು ಲಾಲ್ ಬಹದ್ದೂರ್ ಶಾಸ್ತ್ರಿ, ಜವಹರಲಾಲ್ ನೆಹರು, ರಾಜಗೋಪಾಲಾಚಾರಿ, ನಿಜಲಿಂಗಪ್ಪ, ಬಿ.ಡಿ. ಜತ್ತಿ ಇಂದಿರಾಗಾಂಧಿ ಮುಂತಾದ ಹಲವಾರು ರಾಷ್ಟ್ರನಾಯಕರ ನಿಕಟ ಸಂಪರ್ಕವಿರಿಸಿಕೊಂಡು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡವರು. ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ, ಸೇವೆಸಲ್ಲಿಸಿರುವ ಶ್ರೀಯುತರ ಕಾರ್ಯಕ್ಷಮತೆಗೆ, ಸಜ್ಜನಿಕೆಗೆ ಮತ್ತು ಕಾರ್ಯದಕ್ಷತೆಗೆ ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ೧೯೫೬ರಲ್ಲಿ ರಾಜ್ಯ ಸರ್ಕಾರದಿಂದ ಮೈಸೂರು ಜಿಲ್ಲಾ ಪ್ರಗತಿಪರ ರೈತ’ ಎಂಬ ಪ್ರಶಸ್ತಿ, ರಂಭಾಪುರಿ ಮಠದ ಜಗದ್ಗುರುಗಳಿಂದ ಆಚಾರ್ಯ ಸೇವಾಸಾಗರ’ ಎಂಬ ಬಿರುದು ಪ್ರದಾನ, ಶ್ರೀ ಶೈಲ ಜಗದ್ಗುರುಗಳಿಂದ ‘ಗುರು ಸೇವಾ ಧುರೀಣ’, ಶ್ರೀ ಕಾಶಿ ಜಗದ್ಗುರುಗಳಿಂದ ‘ದಾನ ಚಿಂತಾಮಣಿ’ ಎಂಬ ಬಿರುದು.
ಹೀಗೆ ಅನೇಕ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯನ್ನು ಮೆಚ್ಚಿ ಗೌರವಿಸಿವೆ.
ಮಹಾತ್ಮಾ ಗಾಂಧಿಯವರ ತತ್ವಾನುಯಾಯಿ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ಮುಡುಪಾಗಿಟ್ಟ ಹಿರಿಯ ಚೇತನ ಶ್ರೀ ಕೆ ಎಂ ರುದ್ರಪ್ಪ ಅವರು.
ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾಗುರು ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿ ಕನ್ನಡ ನಾಡು-ನುಡಿ, ಕನ್ನಡಭಾಷೆಯ ಅಭಿವೃದ್ಧಿಯ ಬಗ್ಗೆ ಸತತ ಚಿಂತನೆ ನಡೆಸಿದರು. ಕಾಲೇಜಿನ ವ್ಯಾಸಂಗದಲ್ಲಿರುವಾಗಲೇ ಮದ್ದೂರು ಬಳಿಯ ಶಿವಪುರದಲ್ಲಿ ನಡೆದ ಕಾಂಗ್ರೆಸ್ ಧ್ವಜ ಸತ್ಯಾಗ್ರಹದಲ್ಲಿ ವಿದ್ಯಾರ್ಥಿ ಮುಖಂಡನಾಗಿ ಪಾಲ್ಗೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ದಸ್ತಗಿರಿಯಾಗಿ ಹಿಂಡಲಗ ಜೈಲು ಸೇರಿದರು. ೧೯೪೭ರ ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ಮತ್ತೆ ಬಂಧಿತರಾದರು.
ಭಾರತಕ್ಕೆ ಸ್ವಾತಂತ್ರ ಬಂದ ನಂತರ ತಮ್ಮ ವಕೀಲಿ ವೃತ್ತಿಯನ್ನು ಹಾಸನದಲ್ಲಿ ಆರಂಭಿಸಿದರು.
ಮುದವೀಡು ಕೃಷ್ಣರಾವ್, ಕುವೆಂಪು, ಎಸ್. ನಿಜಲಿಂಗಪ್ಪ ಮೊದಲಾದವರ ಪ್ರಭಾವದಿಂದ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಗಮನೀಯ ಪಾತ್ರ ನಿರ್ವಹಿಸಿದರು. ೧೯೪೯ರಲ್ಲಿ ಕರ್ನಾಟಕ ಏಕೀಕರಣದ ಒತ್ತಾಯಕ್ಕಾಗಿ ದೆಹಲಿಗೆ ಹೋಗಿದ್ದ ನಿಯೋಗದಲ್ಲಿ ಶ್ರೀ ಕೆ.ಎಂ. ರುದ್ರಪ್ಪ ಅವರು ಪ್ರಮುಖರಾಗಿದ್ದರು. ರಾಜ್ಯ ಪುನರ್ ವಿಂಗಡಣಾ ಸಮಿತಿಯ ಆಯೋಗದ ಮುಂದೆ ಕರ್ನಾಟಕ ಏಕೀಕರಣ ಸಂಬಂಧ ಸಮರ್ಥವಾಗಿ ಪ್ರತಿಪಾದನೆ ಮಾಡಿ ಸೈ ಎನಿಸಿಕೊಂಡರು.
ವಿಧಾನಸಭಾ ಸದಸ್ಯರಾಗಿ ಅನೇಕ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾಗಿ ಕರ್ನಾಟಕದ ಸಂಭಾವಿತ ರಾಜಕಾರಣಿಯಾಗಿ ಹೆಸರು ಮಾಡಿರುವ ೮೨ ವರ್ಷಗಳ ಹಿರಿಯ ಸ್ವಾತಂತ್ರ ಹೋರಾಟಗಾರರು ಶ್ರೀ ಕೆ ಎಂ ರುದ್ರಪ್ಪ
ಹಿಂದುಳಿದ ಕೃಷಿಕ ಕುಟುಂಬದಲ್ಲಿ ಜನಿಸಿದರೂ ಸ್ವಂತ ಪರಿಶ್ರಮ ಹಾಗೂ ಆಸಕ್ತಿಯಿಂದ ಸಮಾಜಸೇವೆಯಲ್ಲಿ ತೊಡಗಿರುವವರು ಶ್ರೀ ರಾಮಸ್ವಾಮಿ ರೆಡ್ಡಿ ಅವರು.
೧೯೪೨ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ, ೧೧ ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ೭೬ರ ಇಳಿವಯಸ್ಸಿನಲ್ಲೂ ಫಲಾಪೇಕ್ಷೆ ಇಲ್ಲದೆ ಸಮಾಜಸೇವಾ ಕಾರ್ಯದಲ್ಲಿ ನಿರತರು. ಕರ್ನಾಟಕ ಕ್ಷಯರೋಗ ಸಂಸ್ಥೆಯಲ್ಲಿ ಕೇಂದ್ರ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೧೯೭೨ರಿಂದಲೂ ಕ್ಷಯರೋಗಿಗಳ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಮಾಜದ ಶೋಷಿತ ಜನಾಂಗಕ್ಕೆ ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಯುತರು ಕಾರ್ಯತತ್ಪರರು. ಕೇಂದ್ರ ಕ್ಷಯರೋಗ ಸಮಿತಿಯ ಸದಸ್ಯರಾಗಿ ಬೆಲ್ಸಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿಮೆ ಇವರದಾಗಿದೆ. ಜನತೆಯಲ್ಲಿ ಆರೋಗ್ಯಾಭಿವೃದ್ಧಿ ಮತ್ತು ಶಿಕ್ಷಣದ ಅಗತ್ಯತೆ ಕುರಿತು ತಿಳಿವಳಿಕೆ ನೀಡಿ ಕ್ಷಯರೋಗದ ವಿರುದ್ಧ ಸಮರ ಸಾರುವುದೇ ಇವರ ಜೀವನದ ಧೈಯವಾಗಿದೆ. ಹಲವಾರು ಶೈಕ್ಷಣಿಕ ಸಂಸ್ಥೆಗಳ ಮೂಲಕವೂ ಇವರ ಸೇವೆ ರಾಜ್ಯಕ್ಕೆ ಸಂದಿದೆ.
ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಹಾಗೂ ಬಡವಿದ್ಯಾರ್ಥಿಗಳ ಸೇವೆಯನ್ನು ಶ್ರದ್ಧೆ ಹಾಗೂ ಸೇವಾ ಮನೋಭಾವದಿಂದ ಮಾಡುತ್ತಿರುವ ಹಿರಿಯರು ಶ್ರೀ ರಾಮಸ್ವಾಮಿ ರೆಡ್ಡಿಯವರು.
ಬಾಲ್ಯದಲ್ಲೇ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆ ನಡೆಸಿದ ಸಾಹಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ದೇಶಪ್ರೇಮಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕ,
೧೯೧೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸೂರ್ವೆಯಲ್ಲಿ ಹಮಣ್ಣ ನಾಯಕರು ಜನಿಸಿದರು. ೧೯೩೦-೩೨ರ ಅವಧಿಯಲ್ಲಿ ಅಂಕೋಲ ತಾಲೂಕು ಸಮರ ಭೂಮಿಯಾಗಿತ್ತು. ಅಂಥ ನೆಲದಿಂದ ಬಂದ ನಾಯಕರು ಸಹಜವಾಗೇ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಗರುಡಾ ಮೂಲೆಯಲ್ಲಿದ್ದ ಭೂಗತ ಶಿಬಿರಕ್ಕೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದ್ದ ಹನ್ನೆರಡು ವರ್ಷದ ಒಬ್ಬ ಬಾಲಕ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಕರಪತ್ರಗಳನ್ನು ಊರಿಗೆ ಹಂಚುವುದು, ಊರಿನ ಮಾಹಿತಿಯನ್ನು ಶಿಬಿರಗಳಿಗೆ ತಲುಪಿಸುವುದು, ಪೊಲೀಸರ ಕಣ್ಣು ತಪ್ಪಿಸಿ, ಸ್ವಾತಂತ್ರ ಹೋರಾಟಗಾರರಿಗೆ ನೆರವಾಗುವುದು ಮುಂತಾದ ದೇಶರಕ್ಷಣೆ ಕಾರ್ಯದಲ್ಲಿ ತೊಡಗಿದ್ದ. ಆ ಬಾಲಕನೇ ಇಂದು ೮೪ರ ವೃದ್ಧಾಪ್ಯದಲ್ಲೂ ದೇಶದ ಬಗ್ಗೆ ಚಿಂತಿಸುತ್ತಿರುವ ಶ್ರೀ ರಾಮಚಂದ್ರ ಹಮ್ಮಣ್ಣನಾಯಕ.
ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು ಸ್ವಾತಂತ್ರ ಹೋರಾಟದಲ್ಲಿದ್ದರೂ, ತಮ್ಮ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನವನ್ನು ಉಳಿಸಿ ಬೆಳೆಸಿದುದು ಗಮನಾರ್ಹ. ತಮ್ಮ ೮೦ನೆಯ ವಯಸ್ಸಿನವರೆಗೂ ಗೆಜ್ಜೆಕಟ್ಟಿ ರಂಗದ ಮೇಲೆ ಅಭಿನಯಿಸಿ, ಕಲಾಭಿಮಾನಿಗಳ ಮನಗೆದ್ದ ದಣಿವರಿಯದ ನಾಯಕರು.
ಸ್ವಾತಂತ್ರ್ಯ ಹೋರಾಟ ನಡೆಸಿ, ಜೈಲು ಶಿಕ್ಷೆ ಅನುಭವಿಸಿ, ತಮ್ಮ ಸರ್ವಸ್ವವನ್ನು ಕಳೆದುಕೊಂಡರೂ ತಮ್ಮ ಅಭಿಮಾನ, ಆತ್ಮವಿಶ್ವಾಸ, ಕಲಾಸಂಪತ್ತು ಉಳಿಸಿಕೊಂಡ ಹಿರಿಯ ಚೇತನ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು.
ಕಳೆದ ೬೩ ವರ್ಷಗಳಿಂದ ಶಾಸ್ತ್ರೀಯ ಸಂಗೀತೋತ್ಸವವನ್ನು ನಿರಂತರವಾಗಿ ನಡೆಸುತ್ತ ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುತ್ತಿರುವ ಜನಪ್ರಿಯ ಸಂಸ್ಥೆ ಶ್ರೀ ರಾಮಸೇವಾ ಮಂಡಲಿ.
೧೯೩೯ನೆಯ ಇಸವಿಯಲ್ಲಿ ಶ್ರೀ ಎಸ್ ವಿ ನಾರಾಯಣಸ್ವಾಮಿರಾವ್ ಅವರಿಂದ ಸ್ಥಾಪಿತವಾಯಿತು. ಸ್ವಾತಂತ್ರ್ಯ ಪೂರ್ವ ದಶಕಗಳಲ್ಲಿ ಹಳೇ ಮೈಸೂರಿನ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರಮುಖವಾದುದು ರಾಮನವಮಿ, ಬೆಂಗಳೂರಿನ
ಚಾಮರಾಜಪೇಟೆ ಬಡಾವಣೆಯ ಹಾದಿ ಬದಿಯ ಒಂದು ಸಣ್ಣ ಚಪ್ಪರದಲ್ಲಿ ಜನ್ಮತಾಳಿದ ಶ್ರೀರಾಮಸೇವಾ ಮಂಡಲಿ ಇಂದು
ದೇಶಾದ್ಯಂತ ಸಂಗೀತ ವಿದ್ವಾಂಸರ, ಕೇಳುಗರ ಮೆಚ್ಚುಗೆಯನ್ನು, ಮನ್ನಣೆಯನ್ನು ಗಳಿಸಿಕೊಂಡಿದೆ. ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿರುವುದು ಮಂಡಲಿಗೆ ಸಂದ ಗೌರವ.
ಶ್ರೀರಾಮ ಸೇವಾ ಮಂಡಲಿಯಲ್ಲಿ ಸಂಗೀತ ಕಚೇರಿ ನೀಡಿದ ವೀಣೆ ದೊರೆಸ್ವಾಮಿ ಅಯ್ಯಂಗಾರ್, ಹೊನ್ನಪ್ಪ ಭಾಗವತರ್, ಎಂ ಎಸ್ ಸುಬ್ಬುಲಕ್ಷ್ಮಿ, ಪಂಡಿತ ಭೀಮಸೇನ ಜೋಷಿ, ಉಸ್ತಾದ್ ಬಡೇಗುಲಾಂ ಅಲಿಖಾನ್, ಉಸ್ತಾದ್ ಬಿಸ್ಮಿಲ್ಲಾಖಾನ್, ಪಂಡಿತ್ ರವಿಶಂಕರ್, ಕೆ ಜೆ ಏಸುದಾಸ್, ಶೀರ್ಕಾಳಿ ಗೋವಿಂದರಾಜನ್, ಮಹಾರಾಜಪುರಂ ಸಂತಾನಂ, ಚಿಟ್ಟಿಬಾಬು, ಅಮೆರಿಕಾದವರಾದ ಜಾನ್ ಬಿ ಹಿಗ್ಗಿನ್ಸ್ ಮೊದಲಾದ ಹಿರಿಯರ ಪರಂಪರೆಯೇ ಇದೆ.
ವರ್ಷದಿಂದ ವರ್ಷಕ್ಕೆ ಮಂಡಲಿಯ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ೧೫ ದಿನ ನಡೆಯುತ್ತಿದ್ದ ಸಂಗೀತ ಕಾಠ್ಯಕ್ರಮಗಳು ೬೩ ದಿನಗಳವರೆಗೂ ವಿಸ್ತಾರಗೊಂಡಿದೆ.
ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ – ಹೀಗೆ ಉಭಯಪ್ರಕಾರಗಳ ಕಲಾ ರಸದೌತಣ ಉಣಿಸುವುದು ಮಂಡಲಿಯ ವೈಶಿಷ್ಟ್ಯ.
ಆಧ್ಯಾತ್ಮಿಕತೆ ಮತ್ತು ಸಂಗೀತ ಎರಡೂ ಮೇಲೈಸಿದ ಒಂದು ವಿಶಿಷ್ಟವಾದ ವೇದಿಕೆ ಶ್ರೀ ರಾಮಸೇವಾ ಮಂಡಲಿ.
ದೇವದಾಸಿಯರನ್ನು ಶೋಷಣೆಯ ಸಂಕೋಲೆಗಳಿಂದ ಕಳಚಿ, ಅವರಿಗೆ ಆರೋಗ್ಯಪೂರ್ಣ ಜೀವನ ಕಲ್ಪಿಸಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಾಮಾಜಿಕ ಪರಿವರ್ತನೆಯ ಸಾರ್ಥಕ ಕಾರ್ಯವನ್ನು ಮಾಡುತ್ತಿರುವ ವಿನೂತನ ಸಂಸ್ಥೆ ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಘ,
ಶತಶತಮಾನಗಳಿಂದ ಬೆಳೆದು ಬೇರೂರಿ ನಿಂತ ಸಮಾಜದ ಒಂದು ಅನಿಷ್ಟ ಪರಂಪರೆ ‘ದೇವದಾಸಿ’ ಪದ್ಧತಿ. ದೇವದಾಸಿ ಮುಗ್ಧ ಹೆಣ್ಣುಮಕ್ಕಳ ಮನವೊಲಿಸಿ, ವಿಶ್ವಾಸ ಗಳಿಸಿ ಅವರನ್ನು ಸನ್ಮಾರ್ಗಕ್ಕೆ ಹಚ್ಚುವ ಕಠಿಣ ಕಾರ್ಯವನ್ನು ಅನೇಕ ಅಡಚಣೆಗಳನ್ನು ಎದುರಿಸಿಯೂ ಸಂಘವು ಕಳೆದ ೧೬ ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದೆ.
‘ವಿಮೋಚನೆ ವಿಮೋಚನೆ’, ‘ಕತ್ತಲೆ ಕಳೆದ ಬೆಳಕು’, ‘ಮುಳ್ಳುದಾರಿಯಲ್ಲಿ ಬಿರಿದ ಹೂಗಳು’, ‘ಹರಕೆಯ ಹೆಣ್ಣು’, ‘ಮುತ್ತು ಕಟ್ಟಲಿಲ್ಲ ಮುತ್ತೈದೆಯಾದಳು’, ‘ಅವ್ವಾ ನಾ ದೇವದಾಸಿ ಆಗಾಕ ಒಲ್ಲೆ’ ಮೊದಲಾದ ೪೧ ಪ್ರಕಟಣೆಗಳನ್ನು ಹೊರ ತಂದ ಸಾಧನೆ ಇದರದು.
ಶಾಲಾ ಸಮುಚ್ಚಯ, ವಸತಿ ಸಮುಚ್ಚಯ, ಗ್ರಂಥಭಂಡಾರ, ಹಾಸ್ಟೆಲು, ಆಟದ ಮೈದಾನ, ಈಜುಕೊಳ, ಚಿಕಿತ್ಸಾಲಯ, ಶುಶೂಷಾ ಶಿಕ್ಷಣಸಂಸ್ಥೆ, ಗೃಹಕೈಗಾರಿಕೆಗಾಗಿ ಶೆಡ್ಡುಗಳು, ಸಹಕಾರಿ-ಸಂಘ ಸ್ಥಾಪನೆ, ಜನತಾ ಬಜಾರ್ ವ್ಯವಸ್ಥೆ ಮೊದಲಾದ ಯೋಜನೆಗಳ ಜೊತೆಗೆ ಲೈಂಗಿಕ ಶಿಕ್ಷಣ, ಗುಡಿ ಕೈಗಾರಿಕೆ, ಹೈನುಗಾರಿಕೆ, ಬೆರಳಚ್ಚು ಮುದ್ರಣ, ತಿಳಿವಳಿಕೆ ಶಿಬಿರ, ವೈದ್ಯಕೀಯ ನೆರವು, ಊಟ, ವಸತಿ ಏರ್ಪಾಟು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಅಸಹಾಯಕ ಹೆಣ್ಣುಮಕ್ಕಳಿಗೆ
ಆಶಾಕಿರಣವಾಗಿದೆ.
ಕೀಳು ಪರಂಪರೆಯೊಂದಕ್ಕೆ ಬಲಿಯಾಗಿ, ದಾರುಣ ಬದುಕು ಸಾಗಿಸುತ್ತಿರುವ ಜನಾಂಗದ ಪುನರುತ್ಥಾನಕ್ಕಾಗಿ ರಚನಾತ್ಮಕ ಕಾರ್ಯ ಕೈಗೊಂಡಿರುವ ಹಲವು ಹೃದಯವಂತರ ಸಂಸ್ಥೆ ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘ’.
ಅಕ್ಕ
‘ಅಕ್ಕ’ ಎಂದೇ ಪ್ರಸಿದ್ಧವಾಗಿರುವ “ ಅಮೆರಿಕದ ಕನ್ನಡ ಕೂಟಗಳ ಆಗರ” (Association of Kannada Kootas of America) ವಿದೇಶದಲ್ಲಿ ಕನ್ನಡ ಸಂಸ್ಕೃತಿಯ ಪ್ರಸಾರಕ್ಕೆ ಕಂಕಣ ತೊಟ್ಟಿರುವ ಸಂಸ್ಥೆ.
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶದ ಕನ್ನಡಿಗರು ಸಂಯುಕ್ತವಾಗಿ ೧೯೯೮ರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಆರಂಭಗೊಂಡ ಅನತಿ ಕಾಲದಲ್ಲೇ ಹಿರಿದನ್ನು ಸಾಧಿಸಿದ ಗರಿಮೆಯನ್ನು ತನ್ನದಾಗಿಸಿಕೊಂಡಿದೆ. ೧೯೯೮ರಲ್ಲಿ ಫೀನಿಕ್ಸ್ ನಗರದಲ್ಲಿ ನಡೆದ ಕನ್ನಡಿಗರ ಸಮ್ಮೇಳನ ಹಾಗೂ ಅನಂತರ ಹೂಸ್ಟನ್ನಲ್ಲಿ ನಡೆದ ‘ವಿಶ್ವಸಹಸ್ರಮಾನ ಸಮ್ಮೇಳನಗಳು’ ಈ ಸಂಸ್ಥೆಯ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಹೊರರಾಷ್ಟ್ರದ ಕನ್ನಡಿಗರಿಗೆ ಹಾಗೂ ನೆರೆಹೊರೆಯ ಕನ್ನಡೇತರರಿಗೆ ಪರಿಚಯಿಸುವ ನಿಟ್ಟಿನಲ್ಲಿ, ಹಲವು ಅತ್ಯುತ್ತಮ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ದಾಖಲನೀಯ.
ಅಮೆರಿಕದ ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು ಒಂದೆಡೆಗೆ ತಂದು ಸೂಕ್ತ ವೇದಿಕೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು; ಕರ್ನಾಟಕದ ಸಾಹಿತಿ ಕಲಾವಿದರನ್ನು ಗೌರವಿಸುವುದು, ಕರ್ನಾಟಕಕ್ಕೆ ಭೇಟಿ ನೀಡುವ ಅಮೆರಿಕದಲ್ಲಿರುವ ಕನ್ನಡಿಗರಿಗೆ ಸೂಕ್ತ ಅವಕಾಶ, ಸಲಹೆ ಹಾಗೂ ಮಾರ್ಗದರ್ಶನ ನೀಡುವುದು; ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯಕ್ಕೆ ಅನುವು ಮಾಡಿಕೊಡುವುದು ‘ಅಕ್ಕ’ ಸಂಸ್ಥೆಯ ಹಿರಿಯಾಸೆಯಾಗಿದೆ. ಕರ್ನಾಟಕದ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಅಭಿವೃದ್ಧಿಯ ಉದ್ದೇಶದಿಂದ ಅವರ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈ ಸಂಸ್ಥೆಯ ಸಾಮಾಜಿಕ ಕಳಕಳಿಗೆ ನಿದರ್ಶನವಾಗಿದೆ.
ಶ್ರೀ ಜಯಸ್ವಾಮಿ, ಶ್ರೀ ಕುಮಾರಸ್ವಾಮಿ, ಶ್ರೀ ಸೀತಾವಿ ರಾಮಯ್ಯ ಮುಂತಾದವರ ಆಸಕ್ತಿಯ ಫಲವಾದ ಅಕ್ಕ ಕನ್ನಡ ನಾಡಿನ ಭಾಷೆ ಹಾಗೂ ಸಂಸ್ಕೃತಿಯ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ, ಜವಾಬ್ದಾರಿಯುತ ಸಂಸ್ಥೆಯಾಗಿದೆ.
ಡಾ. ಸುಮಾ ಸುಧೀಂದ್ರ
ಸುಪ್ರಸಿದ್ಧ ವೀಣಾ ವಿದ್ವಾಂಸರಾದ ಎಲ್ ರಾಜಾರಾವ್, ಚಿಟ್ಟಿಬಾಬು, ಎಚ್ ವಿ ಕೃಷ್ಣಮೂರ್ತಿ, ಎಂ ಎ ನರಸಿಂಹಾಚಾರ್ ಅವರ ಶಿಷ್ಯ ಡಾ. ಸುಮಾ ಸುಧೀಂದ್ರ ಅವರು ಇಂದು ನಾಡಿನ ಹಾಗೂ ರಾಷ್ಟ್ರದ ಅಗ್ರಪಂಕ್ತಿಯ ಕಲಾವಿದರಲ್ಲಿ ಒಬ್ಬರು. ಬೆಂಗಳೂರಿನಲ್ಲಿ ೧೯೫೨ರಲ್ಲಿ ಜನಿಸಿದ ಡಾ. ಸುಮಾ ಸ್ನಾತಕೋತ್ತರ ಪದವಿಯ ಜೊತೆಗೆ ವೀಣಾ ಶಿಕ್ಷಣ ಪಡೆದು ವಿದ್ವತ್
ಪರೀಕ್ಷೆಯಲ್ಲಿ ದ್ವಿತೀಯ ಬ್ಯಾಂಕ್ ಗಳಿಸಿ ಈಗ ಕನ್ನಡ ನಾಡಿನ ಶ್ರೇಷ್ಠ : ಪರಂಪರೆಯೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುವ ಇವರು ಕರ್ನಾಟಕದಾದ್ಯಂತ ಹಾಗೂ ಚೆನ್ನೈ, ಮುಂಬೈ, ದೆಹಲಿ, ಔರಂಗಾಬಾದ್ ಮುಂತಾದೆಡೆಗಳಲ್ಲಿ ವೀಣಾವಾದನ ಕಚೇರಿ ನೀಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೆರಿಕ, ಸಿಂಗಪುರ್, ಮಲೇಶಿಯಾ ಹಾಗೂ ಇಂಗ್ಲೆಂಡ್ ರಾಷ್ಟ್ರಗಳಲ್ಲಿ ತಮ್ಮ ಕಲೆಯ ಕಂಪನ್ನು ಹರಿಸಿ ನಾಡಿಗೆ ಹೆಮ್ಮೆ ತಂದಿದ್ದಾರೆ.
ಡಾ. ಸುಮಾ ಸುಧೀಂದ್ರ ಅವರು ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ವೀಣಾವಾದನ ಕಲಾವಿದೆಯಾಗಿ, ಸಂಗೀತ ಸಂಯೋಜಕಿಯಾಗಿ, ಆಡಳಿತಗಾರರಾಗಿ, ತಮ್ಮ ಸ್ಟಿಂಗ್ ಇನ್ಸ್ಟ್ರುಮೆಂಟ್ಸ್’ ಮಹಾಪ್ರಬಂಧಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಬಹುಮುಖ ಪ್ರತಿಭೆಯುಳ್ಳ ಇವರ ಕಲಾ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅತ್ಯುತ್ತಮ ವೈಣಿಕ ಪ್ರಶಸ್ತಿ ಗಾನಕಲಾಶ್ರೀ ಬಿರುದು, ವೈಣಿಕ ಕಲಾಭೂಷಣೆ, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಮುಂತಾದವು.
ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು.
೧೯೨೬ರಲ್ಲಿ ತಿರುವನಂತಪುರದಲ್ಲಿ ಜನನ, ಪಾಲಘಾಟ್ ವೈದ್ಯನಾಥ ಐಯ್ಯರ್, ಕೆ ಎಸ್ ನಾರಾಯಣಸ್ವಾಮಿ, ತಂಜಾವೂರು ವಿ ಶಂಕರನ್, ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ರಂಥ ಹಿರಿಯ ವಿದ್ವಾಂಸರಿಂದ ಸಂಗೀತ ಶಿಕ್ಷಣ.
ಸದ್ದುಗದ್ದಲವಿಲ್ಲದೆ ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡುತ್ತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ನಾಡಿನ ಹಲವು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಹಾಗೂ ಹೊರನಾಡಿನಲ್ಲಿಯೂ ಸಂಗೀತ ಕಚೇರಿ ನೀಡಿದ್ದಾರೆ. ಶ್ರೀ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಹಿಂದೂಸ್ತಾನಿ ಶೈಲಿಯಲ್ಲಿ ಭಜನ್ಗಳನ್ನು ಸುಶ್ರಾವ್ಯವಾಗಿ ಹಾಡುವುದರಲ್ಲಿ ನಿಸ್ಸಿಮರು.
ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸ್ವರ್ಣಪದಕ, ಅತ್ಯುತ್ತಮ ಕಿರಿಯ ಕಲಾವಿದೆ ಪ್ರಶಸ್ತಿ ಅತ್ಯುತ್ತಮ ಸಬ್ ಸೀನಿಯರ್ ಪ್ರಶಸ್ತಿ ತಿರುಮಲ ತಿರುಪತಿ ದೇವಾಲಯದ ‘ಗಾನಸರಸ್ವತಿ’ ಬರುದು, ಹಂಸಧ್ವನಿ ಸಭೆಯ ‘ಗಾನಕಲಾ ಪ್ರಪೂರ್ಣೆ’ ಬಿರುದು ಇವರ ಸಾಧನೆಗೆ ಸಂದ ಗೌರವಗಳು. ಅನಂತಪುರ, ಪಾಲ್ಘಾಟ್, ಎರ್ನಾಕುಲಂ, ಮಧುರೆ, ಮುಂಬೈ ಮುಂತಾದ ನಗರಗಳಲ್ಲಿ ನಡೆದ ಉತ್ಸವಗಳಲ್ಲಿ ಕಚೇರಿ ನೀಡಿರುವ ಇವರು ‘ಸದ್ಗುರು ಸಂಗೀತ ಸಮಿತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸಂಗೀತ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು ಕರ್ನಾಟಕ ಗಾನಕಲಾ ಪರಿಷತ್ತಿನಿಂದ ಸನ್ಮಾನಿತರಾಗಿದ್ದಾರೆ.
೧೯೧೭ರಲ್ಲಿ ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕು ಕವಿತಾಳ ಗ್ರಾಮದಲ್ಲಿ ಜನಿಸಿದ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಸಂಗೀತ ಹಾಗೂ ರಂಗಭೂಮಿ ಕ್ಷೇತ್ರಗಳೆರಡಲ್ಲಿಯೂ ಸಾಧನೆಗೈದ ಹಿರಿಯ ಕಲಾವಿದರು.
ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು ಶ್ರೀ ಸಂಗನ ಬಸವ ಸ್ವಾಮಿಗಳಲ್ಲಿ ಸಂಗೀತ ಅಭ್ಯಾಸ ಮಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದರು. ನಂತರ ಶ್ರೀಯುತರ ಕಲೆಯ ಕ್ಷೇತ್ರ ರಂಗಭೂಮಿಗೂ ವಿಸ್ತರಿಸಿತು. ನಾಟಕ ನಿರ್ದೆಶನ, ಅಭಿನಯ, ಸಂಗೀತ ನಿರ್ದೇಶನ, ವೇಷಭೂಷಣ ಹೀಗೆ ಹಲವು ನಿಟ್ಟಿನಲ್ಲಿ ಸಾಗಿದ ಅವರ ಕಲಾಸೇವೆ ಹೊರನಾಡಿನ ಮುಂಬೈವರೆಗೂ ಪಸರಿಸಿತು. ೨೨ ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿ, ಸಂಗೀತ ನಿರ್ದೇಶನ ನೀಡಿರುವ ಹಿರಿಮೆ ಇವರದು.
ಸ್ವತಃ ಸಂಗೀತಗಾರರಾದ ಶ್ರೀಯುತರು ೧೫ಕ್ಕೂ ಹೆಚ್ಚು ಪುರಾಣ ವಾಚನ ಕಾರ್ಯಕ್ರಮಗಳನ್ನು ಅರ್ಧಶತಮಾನದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆಗೆ ಪಾತ್ರರು, ಶ್ರೀಯುತರ ಕಲಾ ಸೇವೆಗಾಗಿ ಸಂಗೀತ ಸುಧಾಕರ, ಶೀಘ್ರರಾಗ ರಚನಾ ಚತುರ, ಗಾಯನ ಕೋಕಿಲ ಮುಂತಾದ ಬಿರುದುಗಳು ಲಭಿಸಿವೆ. ಎಂಬತ್ತೈದರ ಹರೆಯದಲ್ಲೂ ಇವರ ಕುಂದದ ಕಲಾಸಕ್ತಿಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’ ನೀಡಿದೆ.
ದೇಶವಿದೇಶಗಳಲ್ಲಿ ನಾಟಕ, ಸಂಗೀತ, ಕೀರ್ತನೆಗಳ ಮೂಲಕ ಕಲೆಯ ರಸದೂಟವನ್ನು ಉಣಬಡಿಸಿದ ಹಿರಿಯ ಚೇತನ ಶ್ರೀ ಮಹಾಂತಯ್ಯಸ್ವಾಮಿ ಮುಂಡರಗಿಮಠ ಅವರು.
ಶ್ರೀ ಕೆ ಮಂಜಪ್ಪ
೧೯೨೫ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆಸ್ಥಾನ ವಿದ್ವಾಂಸರಾದ ಪಿಟೀಲು ರಾಮಯ್ಯನವರ ಮನೆತನದಲ್ಲಿ ಜನಿಸಿದ ಶ್ರೀ ಕೆ ಮಂಜಪ್ಪನವರಿಗೆ ಸಂಗೀತ ಕಲೆ ಕರತಲಾಮಲಕ.
–
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮೂಡಲಾಟ, ನಾದಸ್ವರ, ಕೊಳಲು, ಹಾಕ್ಕೋನಿಯಂ, ಮುಖವೀಣೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಜುಗಲ್ಬಂದಿ, ನಾಟಕ ನಿರ್ದೇಶನ, ಸಂಗೀತ ನಿರ್ದೇಶನ – ಹೀಗೆ ಹಲವಾರು ಕಲಾ ಪ್ರಕಾರಗಳಲ್ಲೂ ಪರಿಣತಿ ಹೊಂದಿರುವ ಅಪರೂಪದ ಕಲಾವಿದ ಶ್ರೀ ಮಂಜಪ್ಪ ಅವರು.
ಕರ್ನಾಟಕ ಸಂಗೀತವನ್ನು ವಿದ್ವಾನ್ ಧರ್ಮಪುರಿ ಕೆ ಲಕ್ಷ್ಮಣ್ ಮತ್ತು ವಿದ್ವಾನ್ ಮದ್ರಾಸ್ ಕೃಷ್ಣನ್ ಅವರಿಂದಲೂ, ಹಿಂದೂಸ್ತಾನಿ ಸಂಗೀತವನ್ನು ಪಂಡಿತ ರಟ್ಟೆಹಳ್ಳಿ ನಾರಾಯಣಪ್ಪ ಮತ್ತು ಪಂಡಿತ ಪಂಚಾಕ್ಷರ ಗವಾಯಿಗಳಿಂದ ಕಲಿತ ಶ್ರೀ ಮಂಜಪ್ಪನವರು ಕಲಾಸಾಧನೆಯನ್ನು ಸದ್ದಿಲ್ಲದೆ ಸಾಧಿಸಿದ್ದಾರೆ.
೧೯೪೮ರಲ್ಲಿ ಶಿವಮೊಗ್ಗ ಜಿಲ್ಲೆಯ ಗಾಮ ಗ್ರಾಮದಲ್ಲಿ ಶ್ರೀ ಮುರಳೀಧರ ಸಂಗೀತ ವಿದ್ಯಾಲಯ ಸ್ಥಾಪಿಸಿ, ಅನಂತರ ಅದರ ಶಾಖೆಗಳನ್ನು ಹಲವೆಡೆ ಎಸರಿಸಿ ಕಲಾಭಿಮಾನಿಗಳ ಮನೋಭಿಲಾಷೆಯನ್ನು ಪೂರೈಸಿದ್ದಾರೆ. ತಮ್ಮ ೭೬ನೆಯ ವಯಸ್ಸಿನಲ್ಲಿಯೂ ಸಂಗೀತ ಕಲೆಗಾಗಿ ಶ್ರಮಿಸುತ್ತಿರುವ ಕಲಾವಿದ ಶ್ರೀ ಮಂಜಪ್ಪ ಅವರು.
ಶ್ರೀಯುತರ ಸಂಗೀತ ಸಾಧನೆಗಾಗಿ ಅವರನ್ನು ಅರಸಿ ಪ್ರಶಸ್ತಿ ಸನ್ಮಾನಗಳು ಹಲವು ಹತ್ತು ಕಲಾಹಂಸ ಪ್ರಶಸ್ತಿ ಕಲಾಪೋಷಕ ಪ್ರಶಸ್ತಿ, ನಾದಗಾನ ಸುಧಾಕರ ಪ್ರಶಸ್ತಿ ಗಾಯಕ ಭೂಷಣ ಪ್ರಶಸ್ತಿ ಮುಂತಾದವು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಗೌರವ ಪಡೆದ ಸಂಗೀತ ವಿದ್ವಾನ್ ಗಾಮದ ಕೆ ಮಂಜಪ್ಪನವರು ಎಲೆಮರೆಯ ಕಾಯಿಯಂತೆ ಕಲಾಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದರು.
ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಎರಡರಲ್ಲೂ ಸಾಧನೆ ಮಾಡಿದ ಕಲಾವಿದೆ ಶ್ರೀಮತಿ ಕಮಲಾ ಪುರಂದರೆ,
೧೯೪೦ರಲ್ಲಿ ಸಂಗೀತಗಾರರ ಮನೆತನದಲ್ಲಿ ಜನನ. ಶಿಂ, ಮ್ಯೂಸಿಕ್ ಪದವೀಧರೆ, ಸಂಗೀತ ಅಲಂಕಾರ ಪರೀಕ್ಷೆಯಲ್ಲೂ
ತೇರ್ಗಡೆ. ಹುಟ್ಟಿನಿಂದ ಪಡೆದ ಸಂಗೀತ ಕಲೆಗೆ ಶಿಕ್ಷಣದ ಚೌಕಟ್ಟನ್ನು ನೀಡಿದವರು ಇವರ ಪತಿ ದಿವಂಗತ ಪುರಂದರ ಅವರು
ಜಯಪುರ ಘರಾಣೆಯ ಹಿಂದೂಸ್ತಾನಿ ಸಂಗೀತದಲ್ಲಿ ಪರಿಣತಿ ಹೊಂದಿದ್ದರೂ, ಹಾರ್ಮೋನಿಯ ವಾದನದಲ್ಲಿ ನಿಷ್ಣಾತರು
ಶ್ರೀಮತಿ ಕಮಲಾ ಪುರಂದರೆಯವರು ಧಾರವಾಡ ಆಕಾಶವಾಣಿಯಲ್ಲಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳ ಮೂಲಕ ಚಿರಪರಿಚಿತರ ತಮ್ಮ ಸುಮಧುರ ಕಂಠದ ಸುಶ್ರಾವ್ಯ ಗಾಯನದಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತ ವ್ಯಾಸಂಗ ಮಂಡಳಿಯ ಸದಸ್ಯೆಯಾಗಿ ಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ಕಲಾಕುಸುಮ ಹಾಗೂ ಸಂಗೀತ ಶಾಸ್ತ್ರ ಗ್ರಂಥಗಳನ್ನು ಅಲ್ಲದೆ ಸಂಗೀತಕ್ಕೆ ಸಂಬಂಧಿಸಿದ ಹಲವಾರು ಲೇಖನಗಳು ಬರೆದಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ಪ್ರಾವೀಣ್ಯತೆ ಪಡೆದಿರುವ ಸರಳ ಸಜ್ಜನಿಕೆಯ ವ್ಯಕ್ತಿ ಶ್ರೀಮತಿ ಕಮಲಾ ಪುರಂದರೆ ಅವರು.
ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ಇಡೀ ಭಾರತ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದು ಅಪ್ರತಿಮ ಸಾಧನೆ ಮಾಡಿರುವ ಕರ್ನಾಟಕದ ಹೆಮ್ಮೆಯ ಪುತ್ರಿ ಕುಮಾರಿ ವಿಜಯಲಕ್ಷ್ಮಿ ಬಿದರಿ ಅವರು.
ವಿಜಯಲಕ್ಷ್ಮಿ ಬಿದರಿ ಅವರು ಗುಲ್ಬರ್ಗಾದಲ್ಲಿ ೧೯೭೭ರಲ್ಲಿ ಜನಿಸಿದ್ದಾರೆ. ಮಂಡ್ಯ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರಿನ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆದಿರುವ ವಿಜಯಲಕ್ಷ್ಮಿ ಅವರು ಪ್ರಾಥಮಿಕ ಹಂತದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ. ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ. ಪದವೀಧರೆಯಾಗಿರುವ ಕುಮಾರಿ ಬಿದರಿಯವರು ೧೯೯೯ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ೧೦೭ನೆಯ ಸ್ಥಾನ ಪಡೆದು ಭಾರತೀಯ ಉತ್ಪಾದನಾ ಶುಲ್ಕ ಮತ್ತು ಸೀಮಾ ಶುಲ್ಕ ಸೇವೆಗೆ ಆಯ್ಕೆಯಾದರು. ಫರೀದಾಬಾದ್ ನಲ್ಲಿ ವಿಶೇಷ ತರಬೇತಿ ಪಡೆದರು.
ಕನ್ನಡ ಸಾಹಿತ್ಯ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ೨೦೦೦ನೇ ಇಸವಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ಹಿಂದೂಸ್ಥಾನಕ್ಕೆ ಪ್ರಪ್ರಥಮ ಸ್ಥಾನ ಪಡೆದು ಕನ್ನಡಿಗರೆಲ್ಲರಿಗೂ ರೋಮಾಂಚನ ಉಂಟು ಮಾಡಿದರು. ಕಳೆದ ೫ ವರ್ಷಗಳಲ್ಲಿ ಕರ್ನಾಟಕಕ್ಕೆ ಈ ಕೀರ್ತಿಯನ್ನು ಗಳಿಸಿ ಕೊಟ್ಟಿರುವ ಮೊಟ್ಟ ಮೊದಲ ಕನ್ನಡ ಕುವರಿ ಕುಮಾರಿ ವಿಜಯಲಕ್ಷ್ಮಿ ಬಿದರಿ.
ವೀಣಾವಾದನ, ಈಜು, ಸಾಹಿತ್ಯವಾಚನ ವಿಜಯಲಕ್ಷ್ಮಿಯವರ ಹವ್ಯಾಸಗಳು.
ನಾಟಕ ರಚನೆ ಹಾಗೂ ರಂಗನಿರ್ದೆಶನವನ್ನೇ ಬಾಳಿನ ಧೈಯವಾಗಿ ಸ್ವೀಕರಿಸಿ, ದೀರ್ಘಕಾಲದಿಂದ ಕಲಾರಾಧಕರಾಗಿ ಸೇವೆ ಸಲ್ಲಿಸುತ್ತಿರುವವರು ರಂಗಕರ್ಮಿ ಶ್ರೀ ಲಾಲ್ ಮಹ್ಮದ್ ಬಂದೇ ನವಾಜ್ ಕೆ ಆಲ್ದಾಳ್ ಅವರು.
ಏಳನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಲಾಲ್ ಮಹಮದ್ ಬಂದೇನವಾಜ್ ಆಲ್ದಾಳ್ ಅವರು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ೧೯೩೮ರಲ್ಲಿ ಜನಿಸಿದರು.
ಊರ ಸುತ್ತಮುತ್ತ ಪ್ರದರ್ಶಿತವಾಗುತ್ತಿದ್ದ ನಾಟಕಗಳಿಂದ ಪ್ರಭಾವಿತರಾಗಿ ೧೯೬೨ರಿಂದ ಬರವಣಿಗೆಯನ್ನು ಪ್ರಾರಂಭಿಸಿದ ಶ್ರೀಯುತರು ಸುಮಾರು ೫೦ ಕೃತಿಗಳನ್ನು ರಚಿಸಿದ್ದಾರೆ. ಪತಿಭಕ್ತಿ, ಕಲಿಯುಗದ ಕನ್ಯಾ, ನಮಸ್ಕಾರ, ನನ್ನ ದೇವರು, ವಂಚಕ, ಗರತಿ, ವಿಶ್ವದ ಜ್ಯೋತಿ ಮುಂತಾದ ೧೨ ಕೃತಿಗಳು ಪ್ರಕಟವಾಗಿವೆ. ೨೫ಕ್ಕೂ ಹೆಚ್ಚು ಕೃತಿಗಳು ಅಪ್ರಕಟಿತ. ದೇಶಭಕ್ತಿಗೀತೆಗಳ ಹತ್ತಾರು ಧ್ವನಿಸುರುಳಿಗಳು ಹೊರಬಂದಿವೆ. ರಾಘವೇಂದ್ರ ನಾಟ್ಯ ಸಂಘ, ಬಸವೇಶ್ವರ ನಾಟ್ಯ ಸಂಘ, ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ಸಂಘ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ ಸನ್ಮಾನಿತರಾದ ಶ್ರೀ ಎಲ್ ಬಿ ಕೆ ಆಲ್ದಾಳ್ ಅವರಿಗೆ ಸಂಘ ಸಂಸ್ಥೆಗಳಿಂದ, ಮಠಗಳಿಂದ ಅನೇಕ ಸನ್ಮಾನಗಳು ಸಂದಿವೆ. ಶ್ರೀಯುತರಿಗೆ ನಾಟ್ಯ ಕವಿರತ್ನ, ಸರಸ್ವತಿ ವರಪುತ್ರ, ಶರಣಸಾಹಿತ್ಯ ಸಿಂಧು, ಶರಣ ಸಾಹಿತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಕನ್ನಡ ರಂಗಭೂಮಿ ಸಾಹಿತ್ಯಕ್ಕೆ ಸತ್ವಪೂರ್ಣ ಕೊಡುಗೆಯನ್ನು ನೀಡುತ್ತಿರುವ, ರಂಗಕಲಾಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇಂದಿಗೂ ಚಟುವಟಿಕೆಯ ಚಿಲುಮೆಯಾಗಿರುವವರು ಶ್ರೀ ಎಲ್ ಬಿ ಕೆ ಆಲ್ದಾಳ್ ಅವರು.
ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡು, ಅದರ ಮೂಲಕವೇ ಸಮಾಜಸೇವೆಯನ್ನು ಅತ್ಯಂತ ಪರಿಣಾಮಕಾರಿಯಾಗಿ
ನಿರ್ವಹಿಸುತ್ತಿರುವ ಸಾಹಸಿ ಶ್ರೀಮತಿ ಪುಷ್ಪಾ ಗಿರಿಮಾಜಿ ಅವರು.
೧೯೫೩ನೇ ಇಸವಿಯಲ್ಲಿ ಜನಿಸಿದ ಗಿರಿಮಾಜಿ ಅವರು, ೧೯೭೬ರಲ್ಲಿ ವರದಿಗಾರ್ತಿಯಾಗಿ ಪತ್ರಿಕಾರಂಗವನ್ನು ಪ್ರವೇಶಿಸಿದರು. ವಿವಿಧ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿ ಜನಪ್ರಿಯರಾದರು. ಬಳಕೆದಾರರ ಬವಣೆಗಳನ್ನು ತಳಮಟ್ಟದಿಂದ ಅಭ್ಯಸಿಸಿ, ಅದಕ್ಕೆ ಕಾರಣವಾದ ಮಾಹಿತಿಗಳನ್ನು ಸಮಗ್ರವಾಗಿ ಕಲೆ ಹಾಕಿದರು. ಇವರ ಬರಹಗಳು ಆಡಳಿತಗಾರರಲ್ಲಿ ಪಟ್ಟಭದ್ರರಲ್ಲಿ ಮಿಂಚಿನ ಸಂಚಾರವುಂಟು ಮಾಡಿದವು.
ಭಾರತದ ಅನೇಕ ಜನಪ್ರಿಯ ಪತ್ರಿಕೆಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇವರು ಮಂಡಿಸಿದ ವಿದ್ವತ್ ಪೂರ್ಣ ಬರಹಗಳು ರಾಷ್ಟ್ರದಾದ್ಯಂತ ಪ್ರಶಂಸೆಗೆ ಪಾತ್ರವಾಗಿವೆ. ‘ಚೆಕ್ಔಟ್’, ‘ಗುಡ್ ಮಾರ್ನಿಂಗ್ ಇಂಡಿಯಾ ಶೋ’ ಮೊದಲಾದವು ಇವರ ಜನಪ್ರಿಯ ಕಾಣಿಕೆಗಳು, ಬಳಕೆದಾರರಿಗೆ ಸಂಬಂಧಪಟ್ಟ ರಾಷ್ಟ್ರಮಟ್ಟದ ಅನೇಕ ಗಣ್ಯ ಸಮಿತಿಗಳಲ್ಲಿ ಇವರು ಸದಸ್ಯರಾಗಿ ನೀಡಿರುವ ಅಮೂಲ್ಯ ಸಲಹೆಗಳು ಈ ಕ್ಷೇತ್ರಕ್ಕೆ ತುಂಬಾ ಪ್ರಯೋಜನಕಾರಿಯಾಗಿ ಪರಿಣಮಿಸಿವೆ.
‘ವಾಟ್, ಎಚ್, ಹೌಮಚ್’ ಎಂಬ ಇವರ ಅಂಕಣ ಬರಹ ಬಳಕೆದಾರರಲ್ಲಿ ನವೀನ ಜಾಗೃತಿಯನ್ನೇ ಉಂಟುಮಾಡಿದೆ. ಇವರ ಈ ಅಪೂರ್ವ ಸಮಾಜಸೇವೆಯ ಪತ್ರಿಕೋದ್ಯಮಕ್ಕೆ ನಾಡಿನ ಹಲವಾರು ಸಂಘಟನೆಗಳು ಸರ್ಕಾರಿ ಸಂಸ್ಥೆಗಳು ವಿಧವಿಧ ಮನ್ನಣೆಯಿತ್ತು ಗೌರವಿಸಿವೆ.
ಪತ್ರಿಕೋದ್ಯಮದಂತಹ ಪರಿಣಾಮಕಾರಿ ಕ್ಷೇತ್ರದಲ್ಲಿ ಜನಸೇವೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿರುವ ಧೀರ ಕನ್ನಡ ಮಹಿಳೆ ಶ್ರೀಮತಿ ಪುಷ್ಪಾ ಗಿರಿಮಾಜಿ.
ವಿಪ್ರೊ ಕಂಪೆನಿಯ ಛೇರ್ಮನ್, ಗ್ರಾಮೀಣ ಭಾರತದ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಯೋಜನೆಯ ರೂವಾರಿ , ಶ್ರೀ ಅಜೀಮ್ ಪ್ರೇಮ್ಜಿ ಅವರು.
ಅಮೆರಿಕಾದ ಸ್ಟಾನ್ಫೋರ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ೧೯೬೬ನೆಯ ಇಸವಿಯಲ್ಲಿ ತಮ್ಮ ೨೧ನೆಯ ವಯಸ್ಸಿನಲ್ಲಿ ವಿಪ್ರೊ ಕಂಪೆನಿ ಸೇರಿದರು. ಅನತಿ ಕಾಲದಲ್ಲಿಯೇ ಕಂಪೆನಿಯ ಬಂಡವಾಳವನ್ನು ಅನೇಕ ಪಟ್ಟು ಹೆಚ್ಚಿಸುವಲ್ಲಿ ಇವರ ಸಮರ್ಥ ಮುಂದಾಳತ್ವ ಪರಿಣಾಮಕಾರಿಯಾದ ಕಾರ್ಯ ಮಾಡಿತು. ಐ.ಟಿ. ಸೇವೆಯಲ್ಲಿ ಪ್ರಪಂಚದಲ್ಲಿಯೇ ಅತ್ಯುತ್ತಮವಾದ ೧೦೦ ತಾಂತ್ರಿಕ ಕಂಪೆನಿಗಳ ಪೈಕಿ ವಿಪ್ರೊ ಕೂಡ ಒಂದು.
ಭಾರತದ ಸಮೃದ್ಧ ಸಂಪ್ರದಾಯ ಉನ್ನತ ಮೌಲ್ಯ ಇವುಗಳನ್ನು ಹೊಂದಿದ ಯುವಕರನ್ನು ಉದ್ಯಮಶೀಲತೆಗೆ ತೊಡಗಿಸಿ ಅವರಿಂದ ಅತ್ಯುತ್ತಮ ಸಾಧನೆಗಳನ್ನು ಮಾಡಿಸುವಲ್ಲಿ ಶ್ರೀ ಪ್ರೇಮ್ಜಿ ಅವರ ಕಾರತತ್ಪರತೆ ಪ್ರಶಂಸನೀಯ. ಇವರ ಮಾರ್ಗದರ್ಶನದಲ್ಲಿ ಸಾವಿರಾರು ಯುವಕರು ಜಾಗತಿಕ ಮಟ್ಟದ ಪ್ರತಿಭಾಪೂರ್ಣ ನೇತಾರರಾಗಿ ರೂಪುಗೊಂಡುದು ಪ್ರೇಮ್ಜಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ. ಇದೀಗ ವಿಪ್ರೊ ಕಂಪೆನಿಯು ಜಗತ್ತಿನ ಪ್ರಮುಖ ಐ.ಟಿ. ಕಂಪೆನಿಗಳಲ್ಲಿ ಒಂದೆಂಬ ಪ್ರಖ್ಯಾತಿಯನ್ನು ಗಳಿಸಿದೆ. ಮುಂದಿನ ಶತಮಾನದ ಅಗತ್ಯತೆಗಳನ್ನು ಗ್ರಹಿಸಿ ನಿರ್ದೇಶಿಸಬಲ್ಲ ಅತ್ಯಂತ ಸೂಕ್ಷ್ಮಮತಿಯುಳ್ಳ ಶ್ರೀ ಪ್ರೇಮ್ಜಿ ಅವರ ಕಾಣಿಕೆ ಭಾರತ ದೇಶಕ್ಕೆ ಅತ್ಯುಪಯುಕ್ತವಾಗಿ ಪರಿಣಮಿಸಿದೆ. ೨೦೦೫ನೆಯ ಇಸವಿಯೊಳಗೆ ಭಾರತದ ೧೦ ಲಕ್ಷ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಶ್ರೀ ಪ್ರೇಮ್ಜಿಯವರ ಮಹತ್ವಾಕಾಂಕ್ಷೆ,
ತಮ್ಮ ಅದ್ಭುತ ವ್ಯಕ್ತಿತ್ವ ಕರ್ತೃತ್ವಶಕ್ತಿ, ಭವಿಷ್ಯದ ಮುಂಗಾಕ್ಕೆ ಅಪ್ರತಿಮ ದೇಶಪ್ರೇಮ, ಭವಿಷ್ಯದ ಪ್ರಜೆಗಳ ಕ್ಷೇಮಾಭಿವೃದ್ಧಿ ಮುಂತಾದ ಉದಾತ್ತ ಕನಸುಗಳನ್ನು ಹೊತ್ತು ಸದಾ ಚಟುವಟಿಕೆಯಲ್ಲಿ ನಿರತರಾಗಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಅಜೀಮ್ ಪ್ರೇಮ್ಜಿ ಅವರು.
ಪ್ರೊ. ಸುಧಾಕರ
ಸಾಹಿತ್ಯ ಸಂಶೋಧನೆ, ಜಾನಪದ ಹೀಗೆ ಬಹುಮುಖ ಸೇವೆ ಸಲ್ಲಿಸಿ ಪ್ರಬುದ್ಧತೆಯನ್ನು ಸ್ಥಾಪಿಸಿದ ಕಥೆಗಾರ; ಜಾನಪದ ವಿದ್ವಾಂಸ ಪ್ರೊ. ಸುಧಾಕರ ಅವರು.
ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೆಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಹಂತ ಹಂತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸತತವಾಗಿ ‘ಸಾಕಿದ ನಾಯಿ’, ‘ಕಣ್ಣಿ ಕಿತ್ತ ಹಸು’ ಹಾಗೂ ‘ಹೊರಲಾಗದ ಹೊರೆ’ ಈ ಮೂರೂ ಕಥೆಗಳಿಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹೆಗ್ಗಳಿಕೆಯ ಹ್ಯಾಟ್ರಿಕ್ ಹೀರೋ! ಗ್ರಾಮೀಣ ಸೊಗಡನ್ನು ತಮ್ಮ ಕಥಾ ತೆಕ್ಕೆಗೆ ತೆಗೆದುಕೊಂಡು ಕಥೆ ಮಾಡುವ ಪರಿಯನ್ನು ಕನ್ನಡ ಕಥಾಲೋಕಕ್ಕೆ ನೀಡಿದ ಅವರ ಕಾಣಿಕೆ ಅನನ್ಯವಾದದ್ದು, ಅಪ್ಪಟ ಗ್ರಾಮೀಣ ನೆಲೆಯಿಂದ ಮೂಡಿ ಬಂದ ಸುಧಾಕರರ ಸಾಹಿತ್ಯದಲ್ಲಿ ಸಹಜವಾಗಿಯೇ ಹಳ್ಳಿಯ ಸಮೃದ್ಧ ಸಂಸ್ಕೃತಿ ಅನಾವರಣಗೊಂಡಿದೆ. ಜನಪದ ಕಥೆಗಳು, ಒಗಟುಗಳು ಮತ್ತು ಗಾದೆಗಳ ಕ್ಷೇತ್ರದಲ್ಲಿ ಆಳವಾದ ಅರಿವಿರುವ ಸುಧಾಕರರ ವಿಮರ್ಶೆ, ಸಂಶೋಧನೆ ಕೂಡ ತುಂಬ ಕುಶಲತೆ ಮತ್ತು ಸೂಕ್ಷ್ಮತೆಯಿಂದ ಕೂಡಿದೆ. ‘ಕಣ್ಣಿ ಕಿತ್ತ ಹಸು’, ‘ಗರಿಕೆ ಬೇಕು’, ‘ಬಾಡಬಕ್ಕನಮುಳ್ಳು’ ಕಥಾ ಸಂಕಲನಗಳನ್ನು, ‘ದಡ ಕುಸಿದ ಬಾವಿ’ ಎಂಬ ಕಾದಂಬರಿ ಮತ್ತು ಪ್ರೇಮಸುಧಾ’ ಎಂಬ ಕಾವ್ಯವನ್ನು ಬರೆದಿರುವ ಸುಧಾಕರರು ಮುಂದೆ ಹೆಚ್ಚಾಗಿ ವಿಮರ್ಶೆ, ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಸಾಹಿತ್ಯ ಕೃಷಿಯೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊಫೆಸರ್ ಸುಧಾಕರರಿಗೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಜಾನಪದ ತಜ್ಞ ಮನ್ನಣೆ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನಕಪೀಠದ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಸುಧಾಕರರ ಭಾಷೆ ಮತ್ತು ಬದುಕು ಸದಾ ನೇರ, ನಿಷ್ಟುರ ಮತ್ತು ಕ್ರಿಯಾಶೀಲ.
ತುಮಕೂರು ಜಿಲ್ಲೆಯ ಸಿರಾ ತಾಲೂಕಿಗೆ ಸೇರಿದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಮೂಲತಃ ಅಧ್ಯಾಪಕರು. ಕಾಲೇಜು ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿರಂತರ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯದ ಲಲಿತ ಪ್ರಬಂಧ ಪ್ರಕಾರವನ್ನು ಶ್ರೀಮಂತಗೊಳಿಸಿದ ಅಪರೂಪದ ಪ್ರತಿಭೆ.
ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರಿಂದ ರಚಿತವಾದ ‘ಏಕಾಂತ ಮತ್ತು ಇತರ ಪ್ರಬಂಧಗಳು’ ಹಾಗೂ ‘ಹದ್ದು ಮತ್ತು ಇತರ ಪ್ರಬಂಧಗಳು’ ಎಂಬ ಎರಡು ಲಲಿತ ಪ್ರಬಂಧ ಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭ್ಯವಾಗಿದೆ. ಇವರು ಬರೆದ ಮೊದಲ ಕವನ ಸಂಕಲನವಾದ ‘ಅಭೀಷ್ಟೆ’ಗೆ ೧೯೬೨ರಲ್ಲಿ ರಾಜ್ಯ ಸರ್ಕಾರದ ಪುಸ್ತಕ ಪ್ರಶಸ್ತಿ ಸಂದದ್ದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ. ಕನ್ನಡ ಪ್ರೇಮಗೀತೆಗಳ ಆಂಥಾಲಜಿ ‘ಪಾರಿಜಾತ’ದ ಸಂಪಾದಕರಾಗಿ ‘ವಿಚಾರ ಸಾಹಿತ್ಯ’ ಆಂಥಾಲಜಿಯ ಸಂಪಾದಕರಲ್ಲೊಬ್ಬರಾಗಿ ಇವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ತೀ.ನಂ.ಶ್ರೀ.ಯವರನ್ನು ಕುರಿತು ಬರೆದ ಇವರ ಕೃತಿ, ಜೀವನ ಚರಿತ್ರೆ ಪ್ರಕಾರದಲ್ಲಿ ತನ್ನದೇ ಆದ ಹೆಸರು ಮಾಡಿದೆ. ನಿಷ್ಠುರ ನುಡಿಗೆ ಹೆಸರಾದ ಶ್ರೀ ಎಚ್ ಜಿ ಸಣ್ಣಗುಡ್ಡಯ್ಯನವರು ಬರೆದ ವಿಮರ್ಶಾ ಲೇಖನಗಳು ಅವರ ವಿಶಿಷ್ಟ ನೋಟಕ್ಕೆ ಹೆಸರಾಗಿವೆ. ತುಮಕೂರಿನಂತಹ ಜಿಲ್ಲಾ ಕೇಂದ್ರವೊಂದರಲ್ಲಿ ಸಾಂಸ್ಕೃತಿಕ ಪರಿಸರ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಪೂರಕವಾಗಿರುವ ಇವರು ಸಾಂಸ್ಕೃತಿಕ ಚರ್ಚೆಗೆ ಸದಾ ಚಾಲಕ ಶಕ್ತಿಯಾಗಿದ್ದಾರೆ.
ಕನ್ನಡದ ಸಂವೇದನಾಶೀಲ ಕಥೆಗಾರ, ಚಿಂತಕ ಶ್ರೀ ಫಕೀರ ಮಹಮ್ಮದ್ ಕಟ್ಟಾಡಿ.
ದಕ್ಷಿಣ ಕನ್ನಡ ಜಿಲ್ಲೆಯ ಕಟಪಾಡಿಯಲ್ಲಿ ೧೯೪೮ರಲ್ಲಿ ಜನಿಸಿ ಅದೇ ಜಿಲ್ಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರು ಈಗ ವೃತ್ತಿಯಲ್ಲಿ ಬ್ಯಾಂಕಿನಲ್ಲಿ ಅಧಿಕಾರಿಯಾದರೂ ಪ್ರವೃತ್ತಿಯಲ್ಲಿ ಮೂಲತಃ ಸೃಜನಶೀಲ ಲೇಖಕ.
ಯಾಂತ್ರಿಕ ಬದುಕನ್ನು ಹಸನಾದ ಸಾರ್ಥಕ ಜೀವನಕ್ಕೆ ತಿರುಗಿಸಲು ಸಾಹಿತ್ಯದ ಸಾಧನೆಗೆ ತೊಡಗಿದ ಲೇಖಕ. ತಮ್ಮ ಕಥೆ, ಕಾದಂಬರಿಗಳ ಮೂಲಕ ಮೂಕ ಮನಸುಗಳ ತಳಮಳವನ್ನು ಕಲಾತ್ಮಕವಾಗಿ ಹಿಡಿದುಕೊಟ್ಟ ಸಮರ್ಥ ಕಥೆಗಾರ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ಪ್ರವಾಸ ಕಥನ ಹೀಗೆ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಅನಿಸಿಕೊಂಡಿದ್ದಾರೆ.
ಗೋರಿ ಕಟ್ಟಿಕೊಂಡವರು, ನೋಂಬು ಇವರ ಎರಡು ಕಥಾಸಂಕಲನಗಳು; ಸರಕುಗಳು, ಕಚ್ಚಾದ, ನೆರೆ, ಮೂರು ಕಾದಂಬರಿಗಳು; ಕೇರಳದಲ್ಲಿ ಹದಿನೈದು ದಿನಗಳು ಪ್ರವಾಸಕಥನ ರಾಷ್ಟ್ರೀಯತೆ ಮತ್ತು ಮುಸ್ಲಿಮರು ಪ್ರಬಂಧ ಲೇಖನ; ದುಶ್ಯಾಸನ ರಾಜ್ಯ, ಕಾಗಕ್ಕ, ಆನೆ ಬಂತು ಆನೆ ನಾಟಕಗಳು ಮೊದಲಾದ ಕೃತಿಗಳು.
ಭಾರತೀಯ ಸ್ಟೇಟ್ ಬ್ಯಾಂಕಿನ ಕಾರ್ನಾಡ್ ಶಾಖೆಯಲ್ಲಿ ಅಧಿಕಾರಿಯಾಗಿ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರ ‘ನೋಂಬು’ ಕಥಾಸಂಕಲನಕ್ಕೆ ೧೯೯೧ರಲ್ಲಿ ರಾಷ್ಟ್ರೀಯ ಕಥಾ ಪುರಸ್ಕಾರ ದೊರಕಿದೆ.
ಕತೆ, ಕವನ, ಕಾದಂಬರಿ, ಲಲಿತಪ್ರಬಂಧ, ಬಾಲಸಾಹಿತ್ಯ – ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿ ಸೈ ಎನಿಸಿಕೊಂಡ ಹಿರಿಯ ಲೇಖಕ ಶಂಕರಗೌಡ ಗುರುಗೌಡ ಬಿರಾದಾರ.
೧೯೨೬ರಲ್ಲಿ ಬಬಲೇಶ್ವರ ತಾಲೂಕು ವಿಜಾಪುರದಲ್ಲಿ ಜನಿಸಿದ ಶ್ರೀಯುತರು ನಾಲ್ಕು ದಶಕಗಳಿಗೂ ಮಿಕ್ಕಿ ಕನ್ನಡ ಸಾಹಿತ್ಯದ ಕೃತಿರಚನೆಯಲ್ಲಿ ತೊಡಗಿಸಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿ ಕಥೆ, ಕವನ, ನಾಟಕ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದರಲ್ಲದೆ ಗೆಳೆಯರ ಬಳಗ ಕಟ್ಟಿಕೊಂಡು ನಾಟಕ ಪ್ರದರ್ಶನ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ದುಡಿದವರು. ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ಕರ್ಮವೀರ, ಉದಯವಾಣಿ, ತರಂಗ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ಸುಮಾರು ೨೩ಕ್ಕೂ ಹೆಚ್ಚು ಕೃತಿಗಳ ರಚನಕಾರರಾದ ಶ್ರೀ ಬಿರಾದಾರರ ಬೆಳಕಿನೆಡೆಗೆ, ಬಸವ ಶತಕ, ಭಾವಸಂಗಮ, ಬಬಲೇಶ್ವರ ಬೆಳಕು, ದೇವನೊಡನೆ ಪ್ರಥಮರಾತ್ರಿ, ಭಯೋತ್ಪಾದಕರು, ಹಣತೆಗಳು ಮುಂತಾದವು ಪ್ರಮುಖ ಕೃತಿಗಳು.
ಇವರ ಅನೇಕ ಕಥೆ, ಕವನಗಳು ಆಕಾಶವಾಣಿಯಿಂದ ಬಿತ್ತರಗೊಂಡಿರುವುದಲ್ಲದೆ ಅನೇಕ ತರಗತಿಯ ಪಠ್ಯಗಳಲ್ಲಿ ಸೇರಿವೆ. ವಿಜಾಪುರ ಜಿಲ್ಲೆ ಐದನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸೊಲ್ಲಾಪುರದಲ್ಲಿ ನಡೆದ ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಎರಡನೆಯ ಮಕ್ಕಳ ಸಮ್ಮೇಳನದ ಅಧ್ಯಕ್ಷತೆಗಳನ್ನು ವಹಿಸಿದ ಹಿರಿಮೆ ಇವರದು.
ಶ್ರೀಯುತರ ಸಾಹಿತ್ಯ ಸೇವೆ ಮತ್ತು ಶಿಕ್ಷಣ ಸೇವೆಗಾಗಿ ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಶಿಕ್ಷಣ ಸೇವೆಗಾಗಿ ೧೯೭೪ರಲ್ಲಿ ರಾಜ್ಯ ಪ್ರಶಸ್ತಿ ೧೯೮೦ರಲ್ಲಿ ರಾಷ್ಟ್ರ ಪ್ರಶಸ್ತಿಗಳು ಸಂದಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಮನ ಗೆದ್ದು ಎಲ್ಲರಿಗೂ ದೊಡ್ಡಮ್ಮನಾಗಿರುವವರು ಧರ್ಮಸ್ಥಳದ ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು.
೧೯೨೯ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಮನಂಗಡಿಯಲ್ಲಿ ಸಂಕಷ್ಟಶೆಟ್ಟಿ ಮತ್ತು ಅನಂತಮತಿಯವರ ತುಂಬು ಸಂಸಾರದಲ್ಲಿ ಹುಟ್ಟಿ ಬೆಳೆದ ರತ್ನಮ್ಮನವರಿಗೆ ತಾಯಿಯ ಸದ್ಗುಣಗಳೆಲ್ಲವೂ ಬಳುವಳಿಯಾಗಿ ಬಂದವು. ಬೆಳ್ತಂಗಡಿಯ ೮೧ ಹಳ್ಳಿಗಳನ್ನು ದತ್ತು ಸ್ವೀಕರಿಸುವ ಮೂಲಕ ಅವುಗಳ ಸರ್ವಾಂಗೀಣ ಅಭಿವೃದ್ಧಿಯ ಕೀರ್ತಿ ಇವರದು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಸ್ಥಾಪನೆಗೆ ಕಾರಣಕರ್ತರು. ಶ್ರೀ ಬಾಹುಬಲಿ ಸೇವಾ ಸಮಿತಿ ಮಹಿಳಾ ವಿಭಾಗ, ಶ್ರೀ ಬಾಹುಬಲಿ ಶ್ರಾವಿಕಾಶ್ರಮಗಳನ್ನು ಸ್ಥಾಪಿಸಿ ಮಹಿಳೆಯರು ಸ್ವತಂತ್ರ ಉದ್ಯೋಗ ನಡೆಸುವಂತಹ ತರಬೇತಿ ನೀಡುತ್ತಿದ್ದಾರೆ.
ಸಮಾಜಸೇವೆಯ ಜೊತೆ ಜೊತೆಗೆ ಬರಹದ ಹವ್ಯಾಸವನ್ನು ಇರಿಸಿಕೊಂಡಿದ್ದಾರೆ. ನೂರಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಶಿಖರ್ಜಿಯ ಶಿಖರಗಳಲ್ಲಿ ಮತ್ತು ಮಗಳಿಗೊಂದು ಪತ್ರ ರತ್ನಮ್ಮನವರ ಎರಡು ಸ್ವತಂತ್ರ ಕೃತಿಗಳು.
ಆದರ್ಶ ಗೃಹಿಣಿಯಾಗಿ, ಪ್ರೀತಿಯ ಮಡದಿಯಾಗಿ, ಮಮತೆಯ ತಾಯಿಯಾಗಿ, ವಾತ್ಸಲ್ಯಮಯಿ ಅತ್ತೆಯಾಗಿ, ಸಮಾಜ ಸೇವೆಯ ದೊಡ್ಡಮ್ಮನಾಗಿ ಬಹುಮುಖ ವ್ಯಕ್ತಿತ್ವದ ‘ರತ್ನ’ ರತ್ನಮ್ಮನವರನ್ನು ಅರಸಿ ಬಂದ ಸನ್ಮಾನ-ಪ್ರಶಸ್ತಿಗಳು ಹಲವಾರು.
ಶ್ರೀಮತಿ ರತ್ನಮ್ಮ ಹೆಗ್ಗಡೆ ಅವರು ಬಡಬಗ್ಗರ, ದೀನದಲಿತರ, ಶೋಷಿತರ ಏಳೆಗಾಗಿ ಇಂದಿಗೂ ಶ್ರಮಿಸುತ್ತಿರುವ ಅಪರೂಪದ ಹಿರಿಯ ಚೇತನ.
೧೯೦೯ರಲ್ಲಿ ಹುಬ್ಬಳ್ಳಿಯಲ್ಲಿ ಬಡ ನೇಕಾರರ ಮನೆತನದಲ್ಲಿ ಜನನ. ಶ್ರೀಯುತರದು ಸಾತ್ವಿಕ ವ್ಯಕ್ತಿತ್ವದ ಶಿಸ್ತಿನ ಸಿಪಾಯಿಯ
ಬದುಕು.
ವಿಭಿನ್ನ ಹಾಗೂ ಶಿಸ್ತಿನ ವ್ಯಕ್ತಿತ್ವದ ಶ್ರೀ ನಾಗೋಸಾ ತುಳಜಾಸಾ ಜಿತೂರಿ ಸಾರ್ವಜನಿಕ ಹಿತಾಸಕ್ತಿ, ಧಾರ್ಮಿಕ ಚಟುವಟಿಕೆ, ಯುವಶಕ್ತಿ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವಯೋಮಾನ ಸಹಜವಾದ ಆಯಾಸವನ್ನು ಲೆಕ್ಕಿಸದೆ ಮುಕ್ತ ಮನಸ್ಸಿನಿಂದ, ಹುಮ್ಮಸ್ಸಿನಿಂದ ದುಡಿಯುವ ತರುಣ. ಇಂಟರ್ಮೀಡಿಯಟ್ ಓದುತ್ತಿದ್ದಾಗಲೇ ಶಿಕ್ಷಣಕ್ಕೆ ಶರಣು ಹೊಡೆದು ೧೯೩೧ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಬೆಳಗಾವಿ ಜಿಲ್ಲೆಯ ಸಬ್ ಇನ್ಸ್ಪೆಕ್ಟರ್ ಸೇವೆ. ನಂತರ ೧೯೩೮ರಲ್ಲಿ ವಿಜಾಪುರದಲ್ಲಿ ಹೋಂ ಇನ್ಸ್ಪೆಕ್ಟರ್ ಆಗಿ ಹಾಗೂ ಅಸಹಕಾರ ಚಳವಳಿ ಕಾಲದಲ್ಲಿ ಸಿಐಡಿ ವಿಭಾಗದಲ್ಲಿ ಸೇವೆ. ಸಾಂಗ್ಲಿ ಮತ್ತು ಪುಣೆಯ ಸೆಂಟ್ರಲ್ ಬ್ಯೂರೊ, ಗದಗ, ಹೈದ್ರಾಬಾದ್, ಬೀದರ್ಗಳಲ್ಲಿಯೂ ಡಿವೈಎಸ್ಪಿಯಾಗಿ ಸಲ್ಲಿಸಿರುವ ಸೇವೆ ಅಪಾರ.
ದಕ್ಷತೆಗೆ, ಪ್ರಾಮಾಣಿಕತೆಗೆ, ಕೋಮು ಸೌಹಾರ್ದತೆಗೆ, ದೇಶಭಕ್ತಿಗೆ ಹಾಗೂ ಮಾನವತಾ ಪ್ರೀತಿಗೆ ಮತ್ತೊಂದು ಹೆಸರಾಗಿರುವ ಶ್ರೀ ಜಿತೂರಿಯವರು ೧೯೬೮ರಲ್ಲಿ ಎಸ್.ಪಿ. ಆಗಿ ಸೇವೆ ಸಲ್ಲಿಸಿ ನಿವೃತ್ತರಾಗುವ ಮೊದಲು ಪೊಲೀಸ್ ಮೆಡಲ್ ಪಡೆದದ್ದೂ ಗಮನಾರ್ಹ. ಸೇವೆಯಿಂದ ನಿವೃತ್ತರಾದರೂ ಸದಾ ಕ್ರಿಯಾಶೀಲ ಸ್ವಭಾವದ ಶ್ರೀಯುತರು ಧಾರವಾಡ ಜಿಲ್ಲಾ ನಿವೃತ್ತ ಗೆಜೆಟೆಡ್ ನೌಕರರ ಸಂಸ್ಥಾಪಕ ಅಧ್ಯಕ್ಷರಾಗಿ, ಚಿನ್ಮಯ ಮಿಷನ್ನ ಸಂಸ್ಥಾಪಕ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಲಕ್ಷ್ಮಣಸಾ ಖೋಡೆ ಹಾಸ್ಟೆಲ್ನ ಅಧ್ಯಕ್ಷರಾಗಿ ನವದೆಹಲಿಯ ಸರ್ವೆಂಟ್ಸ್ ಆಫ್ ಗಾಡ್ ಸಂಸ್ಥೆಯ ಸಹಸದಸ್ಯರಾಗಿ ಹೀಗೆ ಇನ್ನೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಕಾಲಿಕ ಮೌಲ್ಯಾಧಾರಿತ ಜೀವನಶ್ರದ್ಧೆಯ ಪ್ರತೀಕವಾಗಿರುವ ಸಮಾಜ ಸೇವಾ ನಿರತರು ಶ್ರೀ ನಾಗೋಸಾ ತುಳಜಾಸಾ ಜಿತೂರಿ ಅವರು.
ಕ್ಷೌರಿಕ ವೃತ್ತಿಯನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿ ಪರಿವರ್ತಿಸಿದ ಅಪರೂಪದ ಸಮಾಜಸೇವಕ ಶ್ರೀ ಎಂ ಎಸ್ ಮುತ್ತುರಾಜ್ ಅವರು.
ಸಮಾಜದ ಒಳಿತಿನ ಬಗ್ಗೆ, ಅಸಮಾನತೆಯನ್ನು ಸುಧಾರಿಸುವ ಬಗ್ಗೆ ಅನೇಕರು ವಿವಿಧ ಸಾಧನ ಮಾರ್ಗಗಳನ್ನು ಕಂಡುಕೊಂಡು ಯಶಸ್ವಿಯಾಗಿದ್ದಾರೆ. ಅಂತಹ ಯಶಸ್ವಿಗಳ ಮಾರ್ಗಗಳಲ್ಲಿ ಶ್ರೀ ಎಂ ಎಸ್ ಮುತ್ತುರಾಜ್ ಅನುಸರಿಸಿ ಸಾಧಿಸುತ್ತಿರುವ ಮಾರ್ಗ ಬಹು ಭಿನ್ನ; ಅತಿ ವಿಶಿಷ್ಟ ಅಸ್ಪಶ್ಯರೆನಿಸಿಕೊಂಡು ದಲಿತ ವರ್ಗದವರು ಕ್ಷೌರ ಮಾಡಿಸಿಕೊಳ್ಳುವುದು ದುಸ್ತರವಾಗಿರುವ ಸಂದರ್ಭದಲ್ಲಿ ಶ್ರೀ ಮುತ್ತುರಾಜರು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಾವಿರಾರು ಅಸ್ಪೃಶ್ಯರಿಗೆ ಅವರವರ ಹಳ್ಳಿಗಳಿಗೆ ಹೋಗಿ, ಕೊಳೆಗೇರಿ ನಿವಾಸಿಗಳ ಬಳಿಗೆ ಹೋಗಿ ಉಚಿತವಾಗಿ ಕ್ಷೌರ ಮಾಡಿ ಅವರ ಪ್ರೀತಿಯನ್ನು ಸಂಪಾದಿಸಿ ಸಮಾಜವಾದದ ನಿಜವಾದ ಭಾಷ್ಯವನ್ನು ಬರೆಯುತ್ತಿರುವ ಸಾಹಸಿರಾಜ.
ಡಾ. ನೆಲ್ಸನ್ ಮಂಡೇಲಾ ಅವರ ಹುಟ್ಟುಹಬ್ಬವನ್ನು ತಮ್ಮ ಜನರ ತಂಡವನ್ನು ಬಳಿಸಿ ೫೦೦೦ ಮಂದಿಗೆ ಸಮಭಾವ ಕ್ಷೌರವನ್ನು ಮಾಡುವುದರ ಮೂಲಕ ವಿನೂತನ ಹಾದಿ ಹಿಡಿದ ಸಾಧಕ, ಕ್ಷೌರಿಕ ಕಾಯಕವನ್ನು ವೃತ್ತಿ ಮತ್ತು ಪ್ರವೃತ್ತಿ ಮಾಡಿಕೊಂಡ ಶ್ರೀ ಮುತ್ತುರಾಜ್ ಲೇಖಕ ಹಾಗೂ ಜನಪ್ರಿಯ ಕಲಾವಿದ ಕೂಡ. ಶ್ರೀಯುತರು ಹಜಾಮ ಅಲ್ಲವೋ ನಿಜಾಮ, ನಾಯಿಂದ ಕ್ರಾಂತಿ ಗೀತೆಗಳು, ಶೂದ್ರ ಕ್ಷೌರಿಕ ಮೊದಲಾದ ಕೃತಿಗಳನ್ನು ಬರೆದಿರುವುದಲ್ಲದೆ ೨೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೩೦ಕ್ಕೂ ಹೆಚ್ಚು ದೂರದರ್ಶನ ಸರಣಿ ಮಾಲಿಕೆಗಳಲ್ಲಿ ನಟಿಸಿದ್ದಾರೆ.
ಕಾಯಕವೇ ಕೈಲಾಸವೆಂಬ ಬಸವಣ್ಣನವರ ಸಂದೇಶವನ್ನು ತಮ್ಮ ನಿಜ ಬದುಕಿಗೆ ಅನ್ವಯಿಸಿಕೊಂಡ ಅಪರೂಪದ ವ್ಯಕ್ತಿ ಶ್ರೀ ಮುತ್ತುರಾಜ್ ಅವರು.
ಕರ್ನಾಟಕದ ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಎನ್ ಸಿ ಪರಪ್ಪ ಅವರು ೧೯೨೬ರಲ್ಲಿ ಜನಿಸಿದರು.
ತಮ್ಮ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಕುಸ್ತಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಾರರಾಗಿ, ಮೈಸೂರು ವಿಶ್ವವಿದ್ಯಾನಿಲಯದ ತಂಡಗಳ ನಾಯಕರಾಗಿ ಹೆಸರು ಮಾಡಿದ ಪರಪ್ಪನವರು ೧೯೪೬-೪೭ರಲ್ಲಿ ನಡೆದ ಅಖಿಲಭಾರತ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿ ಪದಕ ಪಡೆದ ನಮ್ಮ ನಾಡಿನ ಏಕೈಕ ಕುಸ್ತಿ ಪಟು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ದೈಹಿಕ ಶಿಕ್ಷಣ ಕಾಲೇಜಿನ ಸ್ಥಾಪನೆಗೆ ಒಬ್ಬ ಮುಖ್ಯ ಕಾರಣಕರ್ತರಾದ ಪ್ರೊ. ಪರಪ್ಪನವರು ಈ ಕ್ಷೇತ್ರದಲ್ಲಿ ಇಪ್ಪತ್ತೆಂಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬಿ.ಪಿ.ಇಡಿ., ಎಂ.ಪಿ.ಇಡಿ. ಮತ್ತು ದೈಹಿಕ ಶಿಕ್ಷಣದಲ್ಲಿ ಪಿಎಚ್.ಡಿ. ಈ ಕೋರ್ಸುಗಳ ಪ್ರಾರಂಭಕ್ಕೆ ಒತ್ತಾಸೆಯಾದ ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣವನ್ನು ಜನಪ್ರಿಯಗೊಳಿಸಲು ನಿರಂತರವಾಗಿ ಶ್ರಮಿಸಿದ್ದಾರೆ. (
‘ಕರ್ನಾಟಕ ರಾಜ್ಯದ ಕ್ರೀಡಾ ಬೆಳವಣಿಗೆಗೆ ಹತ್ತು ಸೂತ್ರಗಳು’ ಎಂಬ ಕ್ರಿಯಾ ಯೋಜನೆಯೊಂದನ್ನು ಪ್ರೊ. ಪರಪ್ಪನವರು ಸರ್ಕಾರಕ್ಕೆ ಸಲ್ಲಿಸಿ ಅದರ ಅನುಷ್ಠಾನಕ್ಕೂ ಪ್ರೇರಣೆ ಒದಗಿಸಿದ್ದಾರೆ. ‘ದೈಹಿಕ ಶಿಕ್ಷಣ, ಸಂಘಟನೆ ಮತ್ತು ಮನೋಲ್ಲಾಸ’ ಎಂಬ ಇವರ ಕೃತಿ ಒಂದು ಮಾರ್ಗದರ್ಶಕ ಪುಸ್ತಕವಾಗಿದೆ.
ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ, ದೈಹಿಕ ಶಿಕ್ಷಣದ ಪ್ರಮುಖರಾಗಿ ಪ್ರೊ. ಪರಪ್ಪನವರು ಸಲ್ಲಿಸಿರುವ ಸೇವೆ ಸದಾ ಪ್ರಶಂಸನೀಯವಾದುದು.
ಇಂಗ್ಲಿಷ್ ಬೋಧನೆ ಹಾಗೂ ಕನ್ನಡ ಸಾಹಿತ್ಯ ರಚನೆ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಪ್ರೊ. ಎಚ್ ಎಚ್ ಅಣ್ಣಯ್ಯಗೌಡರು.
ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದ ಶ್ರೀ ಅಣ್ಣಯ್ಯಗೌಡರು ಹಿರಿಯ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್ನ ದರ್ ಹ್ಯಾಂ ವಿಶ್ವವಿದ್ಯಾನಿಲಯದಿಂದ ಎಂ.ಲಿಟ್. ಪದವಿ ಪಡೆದ ಶ್ರೀಯುತರು ದೇಶ ವಿದೇಶಗಳಲ್ಲಿ ಅನೇಕ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಿದ ಖ್ಯಾತಿ ಪಡೆದಿದ್ದಾರೆ. ಇಂಗ್ಲೆಂಡ್ ಸ್ಟಾರ್ಟ್ ಫರ್ಡ್ ಅಪಾನ್ ಏವನ್ ಶೇಕ್ಸ್ಪಿಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪ್ರಬಂಧ ಮಂಡಿಸಿದ ಕೀರ್ತಿ ಇವರದು. ಫುಲ್ ಬೈಟ್ ಅಧ್ಯಾಪಕರಾಗಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಬೋಧನೆ. ಆಫ್ರಿಕಾ, ಆಸ್ಟ್ರೇಲಿಯಾ, ಕೆನಡಾ ವಿಶ್ವವಿದ್ಯಾಲಯಗಳಲ್ಲಿ ಕಾಮನ್ವೆಲ್ತ್ ವೇತನ ಪಡೆದು ಭಾಷಣ ಮಾಡಿದ ಹಿರಿಮೆ ಇವರದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಲಾವಿಭಾಗದ ಡೀನ್ ಆಗಿ, ಕಾಮನ್ವೆಲ್ತ್ ಸಂಸ್ಥೆಯ ಸ್ಥಾಪಕ, ಅಧ್ಯಾಪಕರಾಗಿ ಹೀಗೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ಇವರ ಮೊದಲ ಕೃತಿ ‘ಮೃಗ ಪ್ರಭುತ್ವ’ ೧೯೫೦ರಲ್ಲಿ ಪ್ರೌಢಶಾಲೆಯ ಪಠ್ಯಗ್ರಂಥವಾಗಿತ್ತು.
‘ಡ್ರಾಮೆಟಿಕ್ ಪೊಯಿಟ್ರಿ ಫ್ರಂ ಮೆಡಿವಲ್ ಟು ಮಾಡರ್ನ್ ಟೈಮ್ಸ್’ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪಾರಂಗತರಾದ ಹಲವಾರು ಉತ್ತಮ ಕೃತಿಗಳನ್ನು ರಚಿಸಿರುವ ಬಹುಸಂಖ್ಯೆಯ ಸಾಹಿತ್ಯಕ ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿರುವ ಪ್ರೊ. ಎಚ್ ಎಚ್ ಅಣ್ಣಯ್ಯಗೌಡ ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದದ್ದು.
ಡಾ. ಕೆ ಜಿ ದಾಸ್
ಸಮರ್ಪಣಾಭಾವದ ವೈದ್ಯರು, ಪ್ರತಿಭಾವಂತ ಪ್ರಾಧ್ಯಾಪಕರು, ಬಡವರ ಬಂಧು ಆಗಿರುವ ಕರ್ನಾಟಕದ ಗಣ್ಯ ವೈದ್ಯರು ಡಾ. ಕುತ್ತುಪಡಿ ಗೋವಿಂದದಾಸ್ ಅವರು.
ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ವಿಶೇಷ ಪರಿಶ್ರಮ ಇವರದು. ಅಮೆರಿಕೆಯ ಫ್ಲೋರಿಡಾ, ಹೂಸ್ಟನ್, ಇಂಗ್ಲೆಂಡ್ ಮೊದಲಾದ ಸ್ಥಳಗಳ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿರುವ ತಜ್ಞರು.
ಸಹಸ್ರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಡಾ. ದಾಸ್ ಅವರು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳುವ ಅಪರೂಪದ ಉಪಾಧ್ಯಾಯರು ಅಷ್ಟೇ ಅಲ್ಲ ವೈದ್ಯಕೀಯ ಕ್ಷೇತ್ರದ ಅನೇಕ ಸಮಸ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ ಕ್ರಿಯಾಶೀಲರು. ಇವರು ರಚಿಸಿರುವ ಅನೇಕ ವಿದ್ವತ್ ಪೂರ್ಣ ಪ್ರಬಂಧಗಳು ಜಗತ್ತಿನ ವೈದ್ಯಕೀಯ ಕ್ಷೇತ್ರದ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿವೆ. ಇವರ ಅನೇಕ ಪುಸ್ತಕಗಳು ಪಠ್ಯಪುಸ್ತಕಗಳಾಗಿ
ಅಂಗೀಕಾರವಾಗಿವೆ.
ಡಾ. ದಾಸ್ ಅವರು ಸಹಸ್ರಾರು ಮಂದಿ ಕಡುಬಡ ರೋಗಿಗಳಿಗೆ ಉಚಿತವಾದ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದ ಕರುಣಾಮಯಿ. ಮೈಸೂರು ಮಹಾರಾಜರಿಂದ ‘ರಾಜಸೇವಾಸಕ್ತ’ ಎಂಬು ಬಿರುದನ್ನು, ಉಡುಪಿಯ ಕೃಷ್ಣಮಠದಿಂದ ತಮ್ಮ ಮಾನವೀಯ ಸಮಾಜಸೇವೆಗಾಗಿ ಸನ್ಮಾನಗಳನ್ನು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ‘ಡಾಕ್ಟರ್ ಡೇ’ ಪ್ರಶಸ್ತಿಯನ್ನು ಪಡೆದಿರುವ ತಜ್ಞ ವೈದ್ಯ ಡಾ. ಕೆ.ಜಿ. ದಾಸ್ ಅವರು.
ಕರೆದಲ್ಲಿಗೆ ಹೋಗಿ ಚಿಕಿತ್ಸೆ ನೀಡಿ ಜನತಾ ಸೇವೆಯೇ ಜನಾರ್ದನ ಸೇವೆ ಎಂದು ನಂಬಿ ನಡೆಯುತ್ತಿರುವವರು ಧನ್ವಂತರಿ
ಡಾ. ಬಿ ಆರ್ ಇನಾಂದಾರ್.
ನಗರಕೇಂದ್ರಿತ ವೈದ್ಯಕೀಯ ವ್ಯವಸ್ಥೆಗೆ ಭಿನ್ನವಾಗಿ ಹಳ್ಳಿಗಾಡಿನ ಜನರಿಗೆ ಅಗತ್ಯ ಸೇವಾ ಸೌಲಭ್ಯಗಳನ್ನು ಒದಗಿಸುವ ವ್ಯಕ್ತಿಗಳು- ಸಂಸ್ಥೆಗಳು ಪ್ರೋತ್ಸಾಹಕ್ಕೆ ಸದಾ ಅರ್ಹರಾಗಿರುತ್ತಾರೆ. ಅದರಲ್ಲೂ ಕರೆದಲ್ಲಿಗೆ ಬಂದು ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಿ ಸಾಂತ್ವನ ನೀಡುವ ಸೇವಾ ಮನೋಧರ್ಮ ಅಪರೂಪವಾದುದು. ಈ ಮಾದರಿಯ ವೈದ್ಯಕೀಯ ಸೇವೆಯನ್ನು ಜೀವನದ ಮುಖ್ಯ ಧೈಯವೆಂದು ಭಾವಿಸಿ ದುಡಿಯುತ್ತಿದ್ದಾರೆ ಡಾ. ಬಿ ಆರ್ ಇನಾಂದಾರ ಅವರು.
ಮೂಲತಃ ಗದಗ ಜಿಲ್ಲೆಯವರಾದ ಡಾ. ಬಿ ಆರ್ ಇನಾಂದಾರ ಅವರು ಮೈಸೂರಿನ ಆಯುರ್ವೇದ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಸಾಮಾಜಿಕ ಬದುಕಿನಲ್ಲಿ ಸೇವಾ ಮೌಲ್ಯವನ್ನು ಸ್ಥಾಪಿಸಬೇಕೆಂಬ ಸದುದ್ದೇಶದಿಂದ ವೈದ್ಯಕೀಯ ಜ್ಞಾನವನ್ನು ಹಳ್ಳಿಗಾಡಿನ ಬಡವರಿಗಾಗಿ ಮುಡುಪಾಗಿಟ್ಟ ಇವರು ವೈದ್ಯರೂ ಹೌದು, ಸಮಾಜ ಸೇವಕರೂ ಹೌದು, ಕೃತಿಕಾರರೂ ಹೌದು.
ಪಾರ್ಶ್ವವಾಯು ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿ ಅಸಂಖ್ಯಾತ ರೋಗಿಗಳನ್ನು ಗುಣಪಡಿಸಿದ ಡಾ. ಬಿ ಆರ್ ಇನಾಂದಾರ ಅವರು ‘ಧನ್ವಂತರಿ’ ಎಂದೇ ಜನಪ್ರಿಯರಾಗಿದ್ದಾರೆ. ದೇಶ ವಿದೇಶಗಳ ಪ್ರವಾಸದಿಂದ ಪಡೆದ ಅನುಭವವನ್ನು ಸ್ಥಳೀಯರಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ.
ಶಿಲ್ಪಕಲೆಯಲ್ಲಿ ಅಪೂರ್ವ ಪಾಂಡಿತ್ಯವನ್ನು ಸಂಪಾದಿಸಿ, ಶಾಸ್ತ್ರೀಯವಾದ ರೀತಿಯಲ್ಲಿ ಪ್ರತಿಮೆಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿರುವವರು ಲೋಹಶಿಲ್ಪಿ ಶ್ರೀ ವೀರಬ್ರಹ್ಮಾಚಾರ್ ಅವರು.
೧೯೫೩ರಲ್ಲಿ ಜನಿಸಿದ ಶ್ರೀ ವೀರಬ್ರಹ್ಮಾಚಾರ್ಯರು ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆಯುಳ್ಳವರು. ತಂದೆ ಶ್ರೀ ಮೂರ್ತಾಚಾರ್ಯ ಅವರ ಮಾರ್ಗದರ್ಶನದಲ್ಲಿ ಲೋಹಶಿಲ್ಪಕಲೆಯನ್ನು ಕರಗತ ಮಾಡಿಕೊಂಡರು.
ಬಹುವಿಧ ವಿನ್ಯಾಸಗಳ ಲೋಹದ ಪ್ರತಿಮೆಗಳನ್ನು, ಗುಡಿಗೋಪುರಗಳ ಕಳಶಗಳನ್ನು, ಪ್ರಭಾವಳಿ, ವಿಗ್ರಹ ಕವಚಗಳನ್ನು, ಮುಖಮಂಡಲಗಳನ್ನು, ಮೂರ್ತಿಗಳ ಕಿರೀಟಗಳನ್ನು, ಅತ್ಯಾಕರ್ಷಕವಾದ, ಸೂಕ್ಷ್ಮವಾದ ಕುಸುರಿ ಕೆಲಸಗಳಿಂದ ಒಡಗೂಡಿ ರಚಿಸುವುದರಲ್ಲಿ ಶ್ರೀ ವೀರಬ್ರಹ್ಮಾಚಾರ್ ಅವರು ಸಿದ್ಧಹಸ್ತರು.
ಪರಂಪರೆ, ಸಂಪ್ರದಾಯಗಳನ್ನು ಅನುಲಕ್ಷಿಸಿ ಅತ್ಯಂತ ಶಾಸ್ತ್ರಬದ್ಧವಾಗಿ ಲೋಹಕೃತಿಗಳನ್ನು ಕಂಡರಿಸುವುದರ ಜೊತೆಗೆ ಅವುಗಳಿಗೆ ಅತ್ಯಾಕರ್ಷಕ ಸುರೂಪವನ್ನು ತಂದುಕೊಡುವುದು ಶ್ರೀವೀರಬ್ರಹ್ಮಾಚಾರ್ ಅವರ ವೈಶಿಷ್ಟ್ಯ.
ತಾವು ಕಷ್ಟಪಟ್ಟು, ಸತತ ಸಾಧನೆಯಿಂದ ಸಂಪಾದಿಸಿಕೊಂಡಿರುವ ಶಿಲ್ಪಪ್ರತಿಭೆಯನ್ನು ಯುವ ಪೀಳಿಗೆಗೆ ಧಾರೆ ಎರೆಯುವ ಕಾಯಕವನ್ನು ನಿರ್ವಂಚನೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಲೋಹಶಿಲ್ಪಕಲೆಯಲ್ಲಿ ಉನ್ನತ ಮಟ್ಟದ ಪ್ರಾವೀಣ್ಯತೆಯನ್ನು ಪಡೆದು ಜನಪ್ರಿಯರಾಗಿ ಅನೇಕ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟವರು. ‘ಶಿಲ್ಪಬ್ರಹ್ಮ ಶ್ರೀ ವೀರಬ್ರಹ್ಮಾಚಾರ್ ಅವರು.
ಪಾದರಸದಂತೆ ಕೈಬೆರಳುಗಳನ್ನು ಕ್ಯಾನ್ವಾಸ್ ಮೇಲೆ ಚಲಿಸುತ್ತಾ ಕುಂಚದಿಂದಲೂ, ದಾರದಿಂದಲೂ, ಉಗುರಿನಿಂದಲೂ ಕ್ಷಣ ಮಾತ್ರದಲ್ಲಿ ಸುಂದರ ಕಲಾಕೃತಿಯನ್ನು ಮೂಡಿಸುವ ಅದ್ಭುತ ಚಿತ್ರ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.
ಹುಟ್ಟು ಕಲಾವಿದರಾದ ಶ್ರೀ ಬಿ ಕೆ ಎಸ್ ವರ್ಮಾ ಅವರ ಕಲಾಸಕ್ತಿಗೆ ನೀರೆರೆದು ಪೋಷಿಸಿದವರು ಕಲಾವಿದೆ ತಾಯಿ ಜಯಲಕ್ಷಮ್ಮ ಅವರು. ಶಿಲ್ಪಿ ಎ.ಸಿ.ಹೆಚ್. ಆಚಾರ್ಯ ಅವರಿಂದ ಚಿತ್ರಕಲೆಗೆ ಸ್ಫೂರ್ತಿ, ಗುರುಕುಲ ಪದ್ಧತಿಯಲ್ಲಿ ಪಾರಂಪರಿಕ ವರ್ಣ ಚಿತ್ರಣ, ಕ್ಷೇ ಮಾಡಲಿಂಗ್ ಮತ್ತು ಶಿಲಾ ಕೆತ್ತನೆಗಳ ಬಗ್ಗೆ ತರಬೇತಿ ಪಡೆದರು.
ಆದ್ದಿ ಹಿಂದಿ ಚಲನಚಿತ್ರದ ಸಹಾಯಕ ಕಲಾ ನಿರ್ದೇಶಕರಾಗಿ ಕನ್ನಡ ಚಲನಚಿತ್ರಗಳಲ್ಲಿಯೂ ಕಲಾ ನಿರ್ದೆಶಕರಾಗಿ ಕಲಾ ಪ್ರೇಮಿಗಳ ಕಣ್ಮನಗಳನ್ನು ಸೆರೆಹಿಡಿದಿದ್ದಾರೆ. ತಮ್ಮ ಕಲಾಕೃತಿಗಳನ್ನು ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ಮತ್ತು ರಾಷ್ಟ್ರದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನಡೆಸಿದ್ದಾರೆ. ಪರಿಸರ ಸಂರಕ್ಷಣೆಯ ಬಗೆಗೆ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ವ್ಯಕ್ತಿಗಳ, ದೇವತೆಗಳ ಚಿತ್ರಗಳಲ್ಲಿ ಜೀವಂತಿಕೆ ಉಕ್ಕಿ ಬರುತ್ತಿರುವ ಕಣ್ಣುಗಳು ಶ್ರೀ ವರ್ಮಾ ಅವರ ಕಲೆಯ ವೈಶಿಷ್ಟ್ಯ.
ಶ್ರೀ ವರ್ಮಾ ಅವರ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೮ರ ಮೈಸೂರು ದಸರಾ ಪ್ರದರ್ಶನದ ಅತ್ಯುತ್ತಮ ಕಲಾವಿದ ಪ್ರಶಸ್ತಿ, ಅರಣ್ಯ ಇಲಾಖೆಯ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ ಹಾಗೂ ಆರ್ಯಭಟ ಪ್ರಶಸ್ತಿ ಮೊದಲಾದವು ಇವರಿಗೆ ಸಂದಿವೆ. ಕಾವ್ಯಚಿತ್ರ ಜುಗಲಬಂದಿ, ಕಾವ್ಯಚಿತ್ರ ಗೀತನೃತ್ಯ, ೨೪ ಗಂಟೆಗಳ ನಿರಂತರ ಕಾವ್ಯಚಿತ್ರ, ಚಿತ್ರ ಅವಧಾನ, ಕಾವ್ಯಚಿತ್ರ, ಯಕ್ಷನೃತ್ಯ ಇವುಗಳು ಅವರು ನೀಡಿದ ಪ್ರಮುಖ ಪ್ರದರ್ಶನಗಳು.
ಚಿತ್ರಕಲೆಯನ್ನೇ ಬದುಕನ್ನಾಗಿಸಿಕೊಂಡು, ಅನೇಕ ನವೀನ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡ ಪ್ರತಿಭಾಸಂಪನ್ನ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.
ಕಲಾ ಬದುಕನ್ನು ಉಸಿರಾಗಿಸಿಕೊಂಡ ತುಂಬು ಬಾಳಿನ ಚನ್ನಮಲ್ಲಪ್ಪಾ ಪರಗೌಡ ನಾಗೌಡ ಹಿರಿಯ ಚಿತ್ರಕಲಾವಿದರು. ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಶ್ರೀ ಚನ್ನಮಲ್ಲಪ್ಪಾ ಪರಗೌಡ ನಾಗೌಡಾ ಅವರು ೧೯೧೪ರಲ್ಲಿ ಜನಿಸಿದರು. ಕೊಲ್ಲಾಪುರದಲ್ಲಿ ಶ್ರೀ ಗಣಪತರಾವ್ ವಡಣಗೇಕರ್ ಅವರಿಂದ ಹಾಗೂ ಮುಂಬಯಿಯಲ್ಲಿ ಶ್ರೀ ದಂಡಾವತಿಮಠ ಅವರಿಂದ ಚಿತ್ರಕಲೆಯ ಶಿಕ್ಷಣ ಪಡೆದರು. ಅನಂತರ ಕಲಾಮಹರ್ಷಿ ಅಬಾಲಾಲ ರೆಹಮಾನ್, ಬಾಬಾಗಜಬರ್, ಬಾಬುರಾವ್ ಪೇಂಟರ್, ಮಾಧವರಾವ್ ಬಾಗಲ್, ಎಸ್.ಎಂ. ಪಂಡಿತ್, ಕೆ.ಕೆ. ಹೆಬ್ಬಾರರಂಥ ಮಹಾನ್ ಕಲಾವಿದರ ಸಾನ್ನಿಧ್ಯ ಮತ್ತು ಸಂಪರ್ಕದಿಂದ ಚಿತ್ರಕಲೆಯಲ್ಲಿ ಪರಿಣತಿ ಪಡೆದರು.
ಮುಖ್ಯವಾಗಿ ಪೆನ್ಸಿಲ್ವರ್ಕ್, ಜಲವರ್ಣ ಮತ್ತು ತೈಲವರ್ಣದಲ್ಲಿ ಪ್ರಭುತ್ವ ಪಡೆದ ಶ್ರೀಯುತರ ಕಲಾಕೃತಿಗಳು ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿವೆ. ವಿವಿಧ ಮಾಧ್ಯಮಗಳಿಂದ ಪ್ರಶಂಸೆ ಪಡೆದಿವೆ.
ಪ್ರಾರಂಭದಲ್ಲಿ ಸಿನಿಮಾಕ್ಕೂ ಕಲಾನಿರ್ದೆಶಕರಾಗಿ ಕಾರ್ಯನಿರ್ವಹಿಸಿದ ಶ್ರೀಯುತರ ಕಲಾಪ್ರೌಢಿಮೆ ಹಾಗೂ ಶ್ರದ್ಧೆಯ ಫಲವಾಗಿ ಇವರನ್ನು ಅರಸಿ ಬಂದಿರುವ ಬಿರುದು, ಪ್ರಶಸ್ತಿಗಳು ಹಲವು. ಅವುಗಳಲ್ಲಿ ಸಿರಿಗನ್ನಡಗೌರವ, ಸಂಕೇಶ್ವರ ಕಲಾಸಿರಿ, ಕುಂಚದರಸ ಬಿರುದುಗಳು ಮುಖ್ಯವಾದವು.
ಮನೆಯಲ್ಲಿ ಸ್ವಂತ ಆರ್ಟ್ ಗ್ಯಾಲರಿಯನ್ನು ಹೊಂದಿರುವ ಇವರು ಸಂಕೇಶ್ವರದಲ್ಲಿ ಅಂಬೇಡ್ಕರ್ ಸಂಸ್ಥೆಯ ಚಿತ್ರಕಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಶ್ರೀಗಂಧದ ಮರದಿಂದ ಕಲಾಕೃತಿಗಳನ್ನು ನಿರ್ಮಿಸುವ, ಗ್ರಾಮೀಣ ಕುಶಲ ಕರ್ಮಿಗಳಿಗೆ ತರಬೇತಿ ನೀಡುವ, ರಫ್ತು ಉದ್ಯಮದಿಂದ ಭಾರತದ ಆರ್ಥಿಕ ವೃದ್ಧಿಗೆ ನೆರವಾಗುವ ಸಾರ್ಥಕ ಕಾಯಕವನ್ನು ಕೈಗೆತ್ತಿಕೊಂಡವರು ಶ್ರೀ ಬಂಡೆಪ್ಪ ಗಣೇಶಪುರ ಅವರು.
ಬೀದರ ಜಿಲ್ಲೆಯ ಗ್ರಾಮವೊಂದರಲ್ಲಿ ೧೯೬೨ರಲ್ಲಿ ಜನಿಸಿ, ಕಲೆಯಲ್ಲಿ ಬಿ.ಎ. ಪದವಿಯನ್ನು ಪಡೆದ ಶ್ರೀ ಬಂಡೆಪ್ಪ ಅವರು ರಚಿಸಿದ ಕಲಾಕೃತಿಗಳು ನಮ್ಮ ದೇಶದ ಕಲಾಪ್ರೇಮಿಗಳನ್ನಲ್ಲದೆ ಹೊರದೇಶದವರನ್ನೂ ಆಕರ್ಷಿಸಿವೆ. ಹೀಗಾಗಿ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲಾರಂಭಿಸಿದರು.
ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ತರಬೇತಿ ನೀಡಿ ನೂರಾರು ಕುಶಲಕರ್ಮಿಗಳನ್ನು ತಯಾರು ಮಾಡಿದರು. ಗ್ರಾಮೀಣ ಪರಿಸರದಲ್ಲಿ ಸುಗಂಧದಿಂದ ಕಲಾಕೃತಿಗಳು ಆಕಾರ ಪಡೆದವು.
ಶ್ರೀ ಗಣೇಶಪುರ ಅವರ ಸಾಧನೆಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ರಾಜ್ಯ ಕೈಗಾರಿಕಾ ಮಾರುಕಟ್ಟೆ ಅಭಿವೃದ್ಧಿ ನಿಗಮದ ಪ್ರಶಸ್ತಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ‘ಜನ’ ಪ್ರಶಸ್ತಿ, ಜಿಲ್ಲಾ ಆಡಳಿತದಿಂದ ಉತ್ತಮ ಗ್ರಾಮೀಣ ಕರಕುಶಲ ಕರ್ಮಿ ಪ್ರಶಸ್ತಿ ಮುಂತಾದವು ಶ್ರೀಯುತರಿಗೆ ಸಂದ ಪ್ರಶಸ್ತಿ – ಪುರಸ್ಕಾರಗಳು.
ಶ್ರೀಗಂಧದ ಕೆತ್ತನೆಕಲೆಯಲ್ಲಿ ನಿಷ್ಣಾತರಾಗಿ, ಅನೇಕ ಕುಶಲಕರ್ಮಿಗಳಿಗೆ ಬಾಳದಾರಿಯನ್ನು ನಿರ್ಮಿಸಿ, ರಫ್ತು ಕಾರ್ಯದಿಂದ ಭಾರತ ದೇಶಕ್ಕೆ ಸೇವೆ ಸಲ್ಲಿಸಿ ಸುಗಂಧಮಯ ವ್ಯಕ್ತಿತ್ವದಿಂದ ಕಂಗೊಳಿಸುತ್ತಿರುವರು ಶ್ರೀ ಬಂಡೆಪ್ಪ ಗಣೇಶಪುರೆ ಅವರು.
ಜಾನಪದ ರಂಗಭೂಮಿಯ ಸಣ್ಣಾಟದ ವೃತ್ತಿ ಕಲಾವಿದೆಯಾಗಿ ಸುಮಾರು ಒಂದು ಸಾವಿರದ ಏಳುನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ಅಪ್ಪಟ ಕಲಾವಿದೆ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ನಾವಲಗಟ್ಟಿಯಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ ಅವರು ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಸಂಗ್ಯಾಬಾಳ್ಯಾ, ರಾಧಾಕೃಷ್ಣ ಶ್ರೀ ಕೃಷ್ಣಪಾರಿಜಾತ ಮುಂತಾದ ಸಣ್ಣಾಟಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿವಂಗತ ಪರಪ್ಪಾ ಬಳಿಗಾರ, ಕಾಸಪ್ಪಗೆಜ್ಜಿ ದಿವಂಗತ ಭಾಗೀರತವ್ವ ತಾಯಿ ಬಸವಣ್ಣೆಪ್ಪ ಮುಂತಾದವರಿಂದ ಸಣ್ಣಾಟ ಕಲಿತು ಕರಗತ ಮಾಡಿಕೊಂಡವರು. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ರಾಜ್ಯದ ಗಡಿಭಾಗಗಳಲ್ಲೂ ಬಹು ಪ್ರಸಿದ್ದಿ.
ಕರ್ನಾಟಕದ ಜಾನಪದ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಕಲೆಯನ್ನೇ ಉಸಿರಾಗಿಸಿಕೊಂಡ ಇವರಿಗೆ ಭಾರತ ಸರ್ಕಾರದ ಸೀನಿಯರ್ ಫೆಲೋಶಿಪ್ -೨೦೦೦, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-೯೩, ಜಾನಪದ ಸಂಶೋಧನಾ ಕೇಂದ್ರ, ಕಿತ್ತೂರು ಪ್ರಶಸ್ತಿ-೯೭, ಕರ್ನಾಟಕ ಜಾನಪದ ಪರಿಷತ್ತಿನ ಪ್ರಶಸ್ತಿ-೯೯ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ತಾಯಿ, ಅಜ್ಜಿಯವರ ಮೂಲಕ ಮನೆತನದಲ್ಲಿ ಪರಂಪರಾನುಗತವಾಗಿ ಹರಿದುಬಂದ ಸಣ್ಣಾಟ ಕಲೆಯಲ್ಲಿ ಅಸಾಧಾರಣ ಸಾಧನೆಗೈದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟರು ಮಂಡಲ ಪಂಚಾಯತ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ ವಿಶಿಷ್ಟ ಕಲಾವಿದೆ.
ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಕನ್ನಡ ರಂಗಭೂಮಿಗೆ ವಿಶೇಷತೆ ತಂದುಕೊಟ್ಟವರು ಶ್ರೀ ಸಿ ಬಸವಲಿಂಗಯ್ಯ ಅವರು.
ಜನನ ೧೯೫೮ರಲ್ಲಿ, ಕನ್ನಡ ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀಯುತರು ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಪ್ರಮುಖ ಕಲಾವಿದರು.
ರಾಷ್ಟ್ರೀಯ ನಾಟಕ ಶಾಲೆಯ ಫೆಲೋಶಿಪ್ನಲ್ಲಿ ಉತ್ತರ ಕರ್ನಾಟಕದ ಜಾನಪದ ರಂಗಕಲೆಗಳ ಅಧ್ಯಯನ ಮಾಡಿದ ಬಸವಲಿಂಗಯ್ಯನವರು ರಂಗಭೂಮಿಯ ಸಮಗ್ರ ಅಭಿವೃದ್ಧಿಯ ಸಂಚಾಲಕರಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ನಾಟಕ ಕರ್ನಾಟಕ ರಂಗಾಯಣದ ರೆಪರ್ಟರಿಯಲ್ಲಿ ರಂಗಪ್ರಮುಖರಾಗಿ ಹಾಗೂ ರಂಗ ತರಬೇತಿ ಶಿಬಿರಗಳ ಸಂಘಟಕರಾಗಿ ಹಾಗೂ ರಂಗಾಯಣದ ನಿರ್ದೆಶಕರಾಗಿ ರಂಗಭೂಮಿಗಾಗಿ ಇವರು ನೀಡಿದ ಕೊಡುಗೆ ಅಮೂಲ್ಯವಾದುದು.
ಶ್ರೀಯುತರು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾದಾರಿ ಮಾದಯ್ಯ, ಸಂಕ್ರಾಂತಿ, ಹುಲಿಯ ನೆರಳು, ಮ್ಯಾಕ್ ಬೆತ್, ಸಂತ್ಯಾಗ ನಿಂತಾನ, ಕಬೀರ, ಅಂಧಯುಗ, ಉಚಲ್ಯ, ಕುಸುಮಬಾಲೆ ಇವರ ನಿರ್ದೆಶನದ ಪ್ರಮುಖ ನಾಟಕಗಳಾಗಿದ್ದು, ಜನಮನದಲ್ಲಿ
ನೆಲೆಯೂರಿವೆ.
ಸುಮಾರು ೮೦ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ರಾಷ್ಟ್ರವ್ಯಾಪಿ ಸಂಘಟಿಸಿ ರಂಗಚಳುವಳಿಯನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡ ಕ್ರಿಯಾಶೀಲ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್ ನೀಡಿ ಗೌರವಿಸಿದೆ.
ಶ್ರೀ ಬಷೀರ್
ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ನಟರಾಗಿ ೪೦ ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಕನ್ನಡ ರಂಗಭೂಮಿಯ ಕ್ರಿಯಾಶೀಲ ಚೇತನ, ರಂಗಕರ್ಮಿ ಶ್ರೀ ಬಷೀರ್ ಅವರು.
ತಮ್ಮ ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆಗೆ ಒಲವನ್ನು ಬೆಳೆಸಿಕೊಂಡ ಶ್ರೀ ಬಷೀರ್ ಅವರು ೧೯೫೯ರಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಾಟಕ ರಚನೆ, ನಿರ್ದೆಶನ ಮತ್ತು ಅಭಿನಯ ಮೂರರಲ್ಲೂ ಸಾಧನೆ ಮಾಡಿ ಮಾಗಿದ ವ್ಯಕ್ತಿತ್ವ ಇವರದು. ಸಾಮಾಜಿಕ ವಸ್ತುಗಳಿಗಿಂತಲೂ ಇತಿಹಾಸದ ಗಟ್ಟಿ ವಸ್ತುಗಳ ಕಡೆಗೆ ಶ್ರೀಯುತರ ಆಸಕ್ತಿ, ಚಾರಿತ್ರಿಕ, ಪೌರಾಣಿಕ ವಸ್ತುಗಳ ೩೦ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಸನ್ನಿವೇಶದ ಚಿತ್ರಣವನ್ನು ದೇಶ, ಕಾಲ, ಭಾಷೆ ಹಾಗೂ ಇತಿಹಾಸಕ್ಕೆ ಹೊಂದುವಂತೆ, ಪರಿಣಾಮಕಾರಿ ಸಂಭಾಷಣೆಯೊಂದಿಗೆ ಬರೆಯುವ ಕಲೆ ಶ್ರೀ ಬಷೀರ್ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕನ ಹೃದಯತಟ್ಟುವ ಶೈಲಿಯಲ್ಲಿ ಮತ್ತು ಆಕರ್ಷಕ ಪಾತ್ರ ಸೃಷ್ಟಿಯಲ್ಲಿ ಶ್ರೀಯುತರ ಸೃಜನಶೀಲತೆ ಮೇಲುಗೈ ಸಾಧಿಸುತ್ತದೆ. ಸ್ವತಃ ಕಲಾವಿದರಾಗಿರುವ ಶ್ರೀ ಬಷೀರ್ ಅವರು ಪ್ರತಿ ಪಾತ್ರವನ್ನೂ ಅನುಭವಿಸಿ, ದೃಶ್ಯವನ್ನು ಆದ್ರ್ರವಾಗಿಸಿ, ಪಾತ್ರಗಳಿಗೆ ಜೀವ ತುಂಬುತ್ತಾರೆ. ನಾಟಕ ನಿರ್ದೇಶನದಲ್ಲೂ ‘ಸೈ’ ಎನ್ನಿಸಿಕೊಂಡಿದ್ದಾರೆ. ಕಿತ್ತೂರ ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ ಶಿವಶಕ್ತಿ, ರಕ್ತಾಂಜಲಿ, ಅಮೋಘವರ್ಷ ನೃಪತುಂಗ, ರಣಕಹಳೆ, ಭೂಕೈಲಾಸ, ಕಚದೇವಯಾನಿ, ಚಂದ್ರೋದಯ, ದತ್ತುಮಗು, ರತ್ನಹಾರ, ಕ್ರಾಂತಿಪಂಜು, ಈದ್ಮಿಲಾದ್, ಧರ್ಮಜ್ಯೋತಿ ಮುಂತಾದವು ಇವರ ಜನಪ್ರಿಯ ಕೃತಿಗಳು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಇವರಿಗೆ ಸಂದಿವೆ.
ಕನ್ನಡದ ಕ್ರಿಯಾಶೀಲ, ನಿಷ್ಠಾವಂತ, ಪ್ರತಿಭಾಪೂರ್ಣ ಪ್ರಮುಖ ನಾಟಕಕಾರರಲ್ಲಿ ಶ್ರೀ ಬಷೀರ್ ಅವರೂ ಒಬ್ಬರು ಎಂಬುದು ಹೆಮ್ಮೆಯ ವಿಷಯ.
ಶ್ರೀಮತಿ ನಾಗರತ್ನಮ್ಮ ಗ್ರಾಮೀಣ ರಂಗಭೂಮಿಯ ಅಪ್ಪಟ ಪ್ರತಿಭಾವಂತ ವೃತ್ತಿನಟ.
ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಕಳೆದ ೩೫ ವರ್ಷಗಳಿಂದ ೮೦೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಕೆ. ನಾಗರತ್ನಮ್ಮ ಕಲಾವಿದರ ತವರೆನಿಸಿರುವ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನ ಹಳ್ಳಿಯವರು.
ಗ್ರಾಮೀಣ ಭಾಗದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ಪ್ರಕಾರದ ನಾಟಕಗಳಲ್ಲದೆ, ಪಟ್ಟಣಗಳಲ್ಲಿ ಹವ್ಯಾಸಿಗಳು ಅಭಿನಯಿಸುವ ವಿಭಿನ್ನ ರೀತಿಯ ಪ್ರಾಯೋಗಿಕ ನಾಟಕಗಳು ಹಾಗೂ ಜಾನಪದ ನಾಟಕಗಳಿಂದ ಪ್ರಸಿದ್ದಿ ಪಡೆದಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಭಾರ್ಗವ ಪ್ರಶಸ್ತಿ ಸೇರಿದಂತೆ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ೩೫ ಬಾರಿ ಬಹುಮಾನ ಪಡೆದಿದ್ದಾರೆ. ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಲಲಿತಕಲಾ ರಂಗ ಹಾಗೂ ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಸ್ಥಾಪಕ ಸದಸ್ಯರು.
ತಮ್ಮ ಸುದೀರ್ಘ ಗ್ರಾಮೀಣ ರಂಗ ಅನುಭವಗಳ ‘ಮರಿಯಮ್ಮನಹಳ್ಳಿ ರಂಗಸಿರಿ’ ಸುಧಾ ವಾರಪತ್ರಿಕೆಯಲ್ಲಿ ೧೯ ವಾರ ಕಾಲ ಧಾರಾವಾಹಿಯಾಗಿ ಪ್ರಕಟವಾಗಿದೆ. ಹೊಸಪೇಟೆ ತಾಲೂಕು ಪಂಚಾಯಿತಿ ಸದಸ್ಯೆ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣದ ಹವ್ಯಾಸಿ ತಂಡಗಳೆರಡರ ಪ್ರಾತಿನಿಧಿಕ ಸ್ವರೂಪ ಶ್ರೀಮತಿ ಕೆ. ನಾಗರತ್ನ ಅವರು.
ನಟರಾಗಿ, ಕಂಪನಿಯ ಮಾಲೀಕರಾಗಿ, ಕಲಾವಿದರಿಗೆ ಆತ್ಮೀಯ ಬಸಣ್ಣನಾಗಿ ಕನ್ನಡ ರಂಗಭೂಮಿಗೆ ಸುಪರಿಚಿತರು ಶ್ರೀ ಚೆನ್ನಬಸಪ್ಪ ಅವರು.
ನಾಟಕರತ್ನ ಗುಬ್ಬಿ ವೀರಣ್ಣ ಹಾಗೂ ಭದ್ರಮ್ಮನವರ ಹಿರಿಯ ಮಗನಾದ ಶ್ರೀಯುತರು ೧೯೨೬ರಲ್ಲಿ ಜನಿಸಿದರು. ಸಣ್ಣಪುಟ್ಟ ಪಾತ್ರಗಳ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಶ್ರೀ ಚೆನ್ನಬಸಪ್ಪ ಅವರು ಗುಬ್ಬಿ ಕಂಪನಿಯ ಮುನ್ನಡೆಗೆ, ವೃತ್ತಿರಂಗಭೂಮಿಯ ಚೈತನ್ಯಕ್ಕೆ ಹೆಗಲು ಕೊಟ್ಟ ಹಿರಿಯರು. ಹೊಸ ಹೊಸ ರಂಗತಂತ್ರಗಳನ್ನು ಅಳವಡಿಸುತ್ತ ತಂದೆಯವರ ಗುಬ್ಬಿ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ರಂಗಕಲೆಯನ್ನು ರಕ್ತಗತವಾಗಿ ಪಡೆದಿರುವ ಶ್ರೀ ಚೆನ್ನಬಸಪ್ಪ ಅವರು ‘ಸಾಹುಕಾರ’ ನಾಟಕದ ವಿಜಯಾನಂದನಾಗಿ, ‘ಕಾಲಚಕ್ರ’ ನಾಟಕದ ಶಂಕರನಾಗಿ, ‘ಅಣ್ಣತಮ್ಮ’ ನಾಟಕದ ಶೈಲೇಂದ್ರನಾಗಿ ಪಾತ್ರಗಳಿಗೆ ಜೀವ ತುಂಬಿದರು; ಜನರನ್ನು ರಂಜಿಸಿದರು. ಭಕ್ತಿ ಪ್ರಧಾನ ನಾಟಕಗಳ ಗುರುಸ್ಥಾನದ ಪಾತ್ರಗಳಲ್ಲಿ ಈ ಕಲಾವಿದರದು ಎತ್ತಿದ ಕೈ. ‘ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ’, ‘ಬಸವೇಶ್ವರ’, ‘ಶಿರ್ಡಿ ಸಾಯಿಬಾಬ’ಗಳಂಥ ಪಾತ್ರಗಳು ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ, ಜನಮನದಲ್ಲಿ ಸ್ಥಿರವಾಗಿ ನಿಂತಿವೆ. ಗುಬ್ಬಿ ಕುಟುಂಬವೇ ಕಲೆಗೆ ಮೀಸಲಾದ ಕುಟುಂಬ. ಆಕಸ್ಮಿಕವಾಗಿ ರಂಗಭೂಮಿಗೆ ಪ್ರವೇಶ ಮಾಡಿದ ಶ್ರೀಯುತರು ಇಂದು ರಂಗಭೂಮಿಗೆ ಅತ್ಯಗತ್ಯ ಹಾಗೂ ಅನಿವಾರ್ಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಮೊದಲು ವ್ಯವಸ್ಥಾಪಕರಾಗಿದ್ದು ಗುಬ್ಬಿ ಕಂಪನಿಯನ್ನು ಬೆಳೆಸಿ, ಈಗ ಮಾಲೀಕತ್ವದ ಹೊಣೆ ಹೊತ್ತಿದ್ದಾರೆ.
ರಂಗಕಲೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಶ್ರೀ ಜಿ.ವಿ. ಚೆನ್ನಬಸಪ್ಪ ಪ್ರಬುದ್ಧ ಅಭಿನಯದ ಶ್ರೇಷ್ಠ ಕಲಾವಿದರು.
ಶ್ರೀ ವೆಂಕಟಪ್ಪದಾಸ್ ಆಂಜನೇಯ ಪಾತ್ರಕ್ಕೊಂದು ಪರ್ಯಾಯ ಹೆಸರು.
೧೯೧೦ರಲ್ಲಿ ಜನಿಸಿದ ಶ್ರೀಯುತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಸಣೇನಹಳ್ಳಿಯ ಕಲಾವಿದರ
ಕುಟುಂಬದಿಂದ ಬಂದವರು.
ಸಾವಿರಾರು ಸಲ ಆಂಜನೇಯನ ಪಾತ್ರವನ್ನು ಅಭಿನಯಿಸಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರಿಂದ ಬೆಳ್ಳಿ ಕಿರೀಟವನ್ನು ತೊಡಿಸಿಕೊಂಡು ಬೆಳ್ಳಿ ಕಿರೀಟದ ವೆಂಕಟಪ್ಪ ಎಂದೇ ಖ್ಯಾತಿವೆತ್ತವರು.
ನಾಟಕದ ಗೀಳಿನೊಂದಿಗೆ ಹರಿಕಥೆ, ಮರಗೆಲಸ, ಆಯುರ್ವೇದ, ಜ್ಯೋತಿಷ್ಯ, ಶಿಲ್ಪಶಾಸ್ತ್ರಹಾಗೂ ಸಮಾಜ ಸೇವೆಯಲ್ಲಿಯೂ ಶ್ರೀಯುತರಿಗೆ ಆಸಕ್ತಿ ೯೨ರ ಇಳಿವಯಸ್ಸಿನಲ್ಲಿಯೂ ಕಿಂಚಿತ್ತೂ ಕುಂದದ ಕಲಾಸಕ್ತಿ, ಇವರು ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಖಾಸಗಿ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ನಾಟಕ ಚತುರ’, ‘ಯಕ್ಷಗಾನ ಪಿತಾಮಹ’, ‘ಯಕ್ಷಗಾನ ವಿಶಾರದ ಮುಂತಾದ ಬಿರುದುಗಳು ಅವರ ಕಿರೀಟಕ್ಕೆ ಸೇರಿದ ಗರಿಗಳು,
ಆಂಜನೇಯನ ಪಾತ್ರಕ್ಕೆ ಜೀವ ತುಂಬಿದ ಯಕ್ಷಗಾನ ಬಯಲಾಟದ ೯೨ರ ಹರೆಯದ ಕಲಾವಿದ ಬೆಳ್ಳಿ ಕಿರೀಟದ ಶ್ರೀ ವೆಂಕಟಪ್ಪದಾಸ್ ಅವರು.
ಯಕ್ಷಗಾನ ಕಲೆಯ ಸಿರಿ ನೆಲದಲ್ಲಿ ಅರಳಿ ಬಂದ ಹಿರಿಯ ಚೇತನ ಶ್ರೀ ಭಾಗವತ ನೀಲಾವರ ಲಕ್ಷ್ಮೀನಾರಾಯಣರಾವ್
ಅವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಏಳು ದಶಕಗಳಿಗೂ ಹೆಚ್ಚು ಹಾದು ಬಂದ ದೀರ್ಘ ಬಾಳಪಯಣದಲ್ಲಿ ಯಕ್ಷಗಾನ ಕಲೆಯ ಜೊತೆಗೆ ಹಚ್ಚಿಕೊಂಡ ಗಮಕ, ಕರ್ನಾಟಕ ಸಂಗೀತ, ದಾಸರಪದಗಳ ಗಾಯನ ಶ್ರೀಯುತರಿಗೆ ಅಪಾರ ಯಶಸ್ಸು ತಂದು ಕೊಟ್ಟವು. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಒಬ್ಬ ಪರಿಶುದ್ಧ ಕಲಾವಿದ.
ಚಿಕ್ಕಂದಿನಿಂದಲೆ ಗಮಕ, ಸಂಗೀತ, ಭಜನೆ ಹಾಗೂ ಯಕ್ಷಗಾನಗಳಲ್ಲಿ ಅಭಿರುಚಿ ಬೆಳೆಸಿಕೊಂಡ ಇವರು ಆ ದಿಕ್ಕಿನಲ್ಲಿ ಅವಿರತ ಅಧ್ಯಯನ ನಡೆಸಿದರು. ಹೆಸರಾಂತ ಗಮಕಿ ಬಚಂದ್ರಯ್ಯನವರ ಮಾರ್ಗದರ್ಶನದಲ್ಲಿ ಗಮಕ ಪ್ರವೇಶ. ಪ್ರೌಢ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಮಕ ತರಬೇತಿ ಶಿಕ್ಷಣ ನೀಡಿದರು. ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ದೀಕ್ಷೆ ತೊಟ್ಟಿದ್ದಾರೆ. ಅವುಗಳಲ್ಲದೆ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕೊಕ್ಕರ್ಣಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಸಂಗೀತ ಅಧ್ಯಾಪಕರಾಗಿ ದುಡಿದ ಅನುಭವ ಇವರದು. ಮಂಗಳೂರು ಆಕಾಶವಾಣಿ ಹವ್ಯಾಸಿ ಕಲಾವಿದರಾಗಿ, ದೂರದರ್ಶನ ಕೇಂದ್ರದಲ್ಲಿ ಯಕ್ಷಗಾನ ಕಲಾವಿದರಾಗಿ, ಸೇವೆ ಸಲ್ಲಿಸಿದ್ದಾರೆ.
೧೯೯೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಗಮಕ ಸಮ್ಮೇಳನದಲ್ಲಿ ೧೯೯೯ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ – ಹಾಗೂ ಸುರತ್ಕಲ್ನಲ್ಲಿ ನಡೆದ ಗಮಕ ಸಮ್ಮೇಳನದಲ್ಲಿ – ಸನ್ಮಾನಗಳು ಶ್ರೀಯುತರ ಕಲಾಸೇವೆಯನ್ನು ಅರಸಿ ಬಂದ ಪುರಸ್ಕಾರಗಳು.
ಕಳೆದ ನಾಲೈದು ದಶಕಗಳಿಂದ ಯಕ್ಷಗಾನ ರಂಗದಲ್ಲಿ ತನ್ನದೇ ಆದ ನಟನಾ ಚಾತುರ್ಯದಿಂದ, ಅದ್ಭುತ ಪ್ರತಿಭೆಯಿಂದ ಯಕ್ಷಗಾನ ರಂಗಸ್ಥಳದ ರಾಜ ಅಂತ ಕರೆಸಿಕೊಂಡು ಅರಳಿದ ಅದ್ವಿತೀಯ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟಿ, ಕರಾವಳಿಯ ಕಲೆ ಯಕ್ಷಗಾನವು ಇಂದು ಸಾಗರದಾಚೆಗೂ ವಿಸ್ತರಿಸಿರುವಂತೆ ಆ ಕಲೆಯಲ್ಲಿ ದೇಶದ ಉದ್ದಗಲಕ್ಕೂ ಹೆಸರು ಮಾಡಿದ ಅಪೂರ್ವ ವ್ಯಕ್ತಿಗಳಲ್ಲಿ ಕೊರಗಪ್ಪ ಶೆಟ್ಟಿ ಒಬ್ಬರು.
ಅಳದಂಗಡಿಯ ಸುಬ್ಬಯ್ಯ ಶೆಟ್ಟಿ ಕಾಂತಕ್ಕ ದಂಪತಿಗಳ ಹಿರಿಯ ಮಗನಾಗಿ ೧೯೪೦ರಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ನಾಟಕ ಮತ್ತು ಯಕ್ಷಗಾನದಲ್ಲಿ ಪಳಗಿದವರು. ಪ್ರೌಢಶಾಲಾ ಹಂತಕ್ಕೆ ವಿದ್ಯಾಭ್ಯಾಸವೂ ನಿಂತು ಜೀವನೋಪಾಯದ ಪ್ರಶ್ನೆ ಎದುರಾದಾಗ ತಮ್ಮ ಆಸಕ್ತಿಯ ಕ್ಷೇತ್ರ ಯಕ್ಷಗಾನದಲ್ಲಿ ತೊಡಗಿಕೊಂಡವರು.
ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಕಟೀಲು ಯಕ್ಷಗಾನ ಮೇಳದ ಮೂಲಕ ಈ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟ ಶ್ರೀಯುತರು ಮುಂದೆ ಕರ್ನಾಟಕ ಮೇಳದಲ್ಲಿ ಮುಖ್ಯ ವೇಷಧಾರಿಯಾಗಿ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೊಟ್ಟೂರು ರಾಮಚಂದ್ರರಾವ್, ರಾಮದಾಸ್ ಸಾಮಗ, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಟದಲ್ಲಿ ತಮ್ಮ ಪ್ರತಿಭೆಯನ್ನು ನಿಕಷಕ್ಕೊಡ್ಡಿಕೊಂಡವರು
ಇವರ ಕಲಾನೈಪುಣ್ಯವನ್ನು ಮೆಚ್ಚಿ ಅಖಿಲಭಾರತ ತುಳು ಒಕ್ಕೂಟ ಮುಂಬೈ ಕರ್ನಾಟಕ ಸಂಘ, ಯು ಎ ಇ ತುಳುಕೂಟ ಮುಂತಾದ ಸಂಘಸಂಸ್ಥೆಗಳು ಸನ್ಮಾನಿಸಿವೆ.
ಅರವತ್ತರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಿದರೆ ಸಾಕು ಆಲಿಸುವ ಮನಸ್ಸುಗಳಿಗೆ ಆನಂದವುಂಟುಮಾಡಿ ಕಲಾಲೋಕಕ್ಕೆ ಕರೆದೊಯ್ಯುವ ಅಪೂರ್ವ ಸಾಧಕರು ಅರುವ ಕೊರಗಪ್ಪ ಶೆಟ್ಟರು.
ಆಂಗ್ಲಭಾಷೆಯ ‘ದಿ ವೀಕ್’ ಪತ್ರಿಕೆ ಮತ್ತು ‘ಮಲೆಯಾಳಂ ಮನೋರಮ’ ಪತ್ರಿಕೆಗಳಿಗೆ ನವದೆಹಲಿಯಲ್ಲಿ ಸ್ಥಾನಿಕ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಕನ್ನಡಿಗ ಶ್ರೀ ಸಚ್ಚಿದಾನಂದಮೂರ್ತಿಯವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಅಪಾರ.
ಶ್ರೀ ಸಚ್ಚಿದಾನಂದಮೂರ್ತಿಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೨ರಲ್ಲಿ ‘ದಿ ವೀಕ್’ ಪತ್ರಿಕೆಯ ಬೆಂಗಳೂರು ಬಾತ್ಮೀದಾರರಾದರು. ಆನಂತರ ೧೯೯೦ರಲ್ಲಿ ಮಲೆಯಾಳಂ ಮನೋರಮ ಸಂಸ್ಥೆಯ ನವ ದೆಹಲಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ಹಾಗೂ ಘಟನಾವಳಿಗಳ ವಿಶ್ಲೇಷಣೆಯಲ್ಲಿ ಪರಿಣತರಾದ ಶ್ರೀ ಸಚ್ಚಿದಾನಂದಮೂರ್ತಿಯವರು ರಾಷ್ಟ್ರದ ರಾಜಧಾನಿಯಲ್ಲಿದ್ದರೂ ಕರ್ನಾಟಕವನ್ನು ಮರೆತಿಲ್ಲ. ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ತರುವಲ್ಲಿ ನ್ಯಾಯೋಚಿತ ಕೆಲಸ ಮಾಡುತ್ತ ಬಂದಿದ್ದಾರೆ.
ಅನೇಕ ದೇಶಗಳನ್ನು ಸುತ್ತಿ ಬಂದಿರುವ ಇವರು ಅನುಭವ ಮತ್ತು ಅಧ್ಯಯನಶೀಲತೆಗಳಿಂದ ಪತ್ರಿಕೋದ್ಯಮದ ಪ್ರಮುಖ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಂವಿಧಾನ, ಸರ್ಕಾರ, ರಾಯಭಾರ, ರಾಷ್ಟ್ರೀಯ ಸುರಕ್ಷತೆ – ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆ ಮೌಲಿಕ ಬರಹಗಳನ್ನು ನೀಡಿ ಪ್ರಸಿದ್ಧರಾಗಿದ್ದಾರೆ. ಈಗ ತಮ್ಮ ಅಪೂರ್ವ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶ್ರೀ ಬಿ ವಿ ವೈಕುಂಠರಾಜು ಪತ್ರಿಕೋದ್ಯಮ ಹಾಗೂ ಸಮಕಾಲೀನ ಕನ್ನಡ ರಂಗಭೂಮಿಗೆ ಪರಿಣಾಮಕಾರಿ ಸ್ಪಂದನ ನೀಡಿದ ಪ್ರಮುಖರಲ್ಲಿ ಒಬ್ಬರು.
೧೯೩೭ರಲ್ಲಿ ಚಿತ್ರದುರ್ಗ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಚಿಕ್ಕಂದಿನಿಂದಲೂ ಚಕಮಕಿಯ ಮಾತು, ವಾದ ಪ್ರತಿವಾದ, ಚರ್ಚೆಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿಕೊಂಡವರು.
ಹತ್ತಾರು ವರ್ಷಗಳಿಂದ ನಾಡಿನ ಸಾಂಸ್ಕೃತಿಕ ವಲಯ, ರಾಜಕೀಯ ವಲಯಗಳಲ್ಲಿನ ಆಗುಹೋಗುಗಳನ್ನು, ಏರುಪೇರುಗಳನ್ನು ಅತ್ಯಂತ ಸರಳವಾಗಿ, ಶ್ರೀಸಾಮಾನ್ಯನಿಗೂ ಮನಮುಟ್ಟುವಂತೆ ವಾರಪತ್ರಿಕೆಯ ಸಂಪಾದಕರ ಡೈರಿಯಲ್ಲಿ ಹೇಳುತ್ತಾ ಬಂದಿರುವ ವೈಕುಂಠರಾಜು ನಾಲ್ಕು ಕಾದಂಬರಿ, ಮೂರು ನಾಟಕಗಳು, ಪ್ರಬಂಧ, ವಿಮರ್ಶೆ ಹಾಗೂ ವ್ಯಕ್ತಿಚಿತ್ರಗಳನ್ನು ಬರೆದು ಹೆಸರುವಾಸಿಯಾದವರು. ಇವರ ‘ಸಂದರ್ಭ’ ನಾಟಕ ಕನಡದ ಕೆಲವೇ ಉತಮ ಉತ್ತಮ ನಾಟಕಗಳಲ್ಲೊಂದು. ಇವರ ‘ಉದ್ಭವ’
ಕೃತಿ ನಾಟಕವಾಗಿ ಇವರಿಗೆ ಅಪಾರ ಮನ್ನಣೆ ತಂದುಕೊಟ್ಟಿತು.
ಪ್ರಜಾವಾಣಿಯ ಪುರವಣಿಯನ್ನು ಸಾಂಸ್ಕೃತಿಕ ದಾಖಲೆಯಾಗುವಂತೆ ರೂಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ರಂಗಭೂಮಿ, ಸಿನಿಮಾ, ಕಥೆ, ಕಾವ್ಯ – ಹೀಗೆ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತಮನಸ್ಸುಗಳಿಗೆ ಇಂಬು ನೀಡಿ ಭಾನುವಾರದ ಪುರವಣಿಯನ್ನು ಕಾದು ಓದುವಂತೆ ಮಾಡಿದ ಶ್ರೇಯಸ್ಸು ಇವರದು.
೧೯೬೪ರಿಂದ ೧೯೮೩ರ ವರೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ತೊಡಗಿ ಕನ್ನಡಿಗರ ಮನೆಮಾತಾಗಿದ್ದ ವೈಕುಂಠರಾಜು ೧೯೮೪ರಲ್ಲಿ ತಮ್ಮದೇ ವಾರಪತ್ರಿಕೆ ಪ್ರಾರಂಭಿಸಿದರು. ಇವರ ನೇರ ನಿಷ್ಠುರ ಸಂಪಾದಕೀಯ ಸಮಾಜದ ಅಂಕುಡೊಂಕುಗಳಿಗೆ ನೀಡಿದ ಚಿಕಿತ್ಸೆ ಎಂದೇ ಹೇಳಬೇಕು. ರಾಜ್ಯದ ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ೧೯೮೭ರಿಂದ ೧೯೮೯ರ ವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಇವರು ನೀಡಿರುವ ಕೊಡುಗೆ ಗಣನೀಯವಾದುದು.
ಕರ್ನಾಟಕದಲ್ಲಿ ಸಂಜೆ ದಿನಪತ್ರಿಕೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ವಿಶೇಷ ಶೈಲಿಯ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ ಕೀರ್ತಿವಂತರು ಶ್ರೀ ಬಿ ಎಸ್ ಮಣಿ ಅವರು.
ಸಂಜೆವಾಣಿ ದಿನಪತ್ರಿಕೆ ಶ್ರೀ ಬಿ ಎಸ್ ಮಣಿ ಅವರ ಕಲ್ಪನೆಯ ಕೂಸು ಇಂದು ಪ್ರಬುದ್ಧವಾಗಿ ಬೆಳೆದು ನಿಂತಿದೆ. ಕರ್ನಾಟಕದ ನಾಲ್ಕು ನಗರಗಳಲ್ಲಿ ಏಕಕಾಲಕ್ಕೆ ಪ್ರಕಟವಾದ ಪ್ರಥಮ ಸಂಜೆ ದಿನಪತ್ರಿಕೆ ಎಂಬ ಪ್ರಸಿದ್ಧಿಯನ್ನು ಪಡೆಯುವಲ್ಲಿ ಶ್ರೀ ಮಣಿಯವರ ಶ್ರಮ ಅಪಾರವಾಗಿದೆ.
ಸಾಮಾನ್ಯ ಜನರೂ ಓದುವ ಹವ್ಯಾಸವನ್ನು ಮಣಿಯವರ ಪ್ರತಿಪಾದನೆ. ಅಂತೆಯೇ ತಮ್ಮ ತಂದುಕೊಟ್ಟರು.
ಮೈಗೂಡಿಸಿಕೊಳ್ಳಲು ಸುದ್ದಿಗಳು ಸರಳಭಾಷೆಯಲ್ಲಿರಬೇಕು ಎಂಬುದು ಪತ್ರಿಕೆಯಲ್ಲಿ ಸರಳ ಭಾಷೆ ಬಳಸಿದರು. ಪತ್ರಿಕೆಗೆ ಜನಪ್ರಿಯತೆಯನ್ನು
‘ಚಂದನ’ ವಾರಪತ್ರಿಕೆಯನ್ನು ಪ್ರಾರಂಭಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಿದ ಕೀರ್ತಿ ಇವರದು. ‘ಚೇತನ’ ಮಾಸಿಕದಲ್ಲಿ ಪ್ರಸಿದ್ಧ ಕಾದಂಬರಿಗಳನ್ನು ಪ್ರಕಟಿಸಿ ಜನಸಾಮಾನ್ಯರೂ ಕೊಂಡು ಓದುವ ಹವ್ಯಾಸವನ್ನು ಬೆಳೆಸಿದರು. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಪಿಟ್ಟರ್ ಲ್ಯಾಂಡ್, ಸ್ವೀಡನ್, ಆಸ್ಟ್ರಿಯ, ಇಟಲಿ, ಅಮೆರಿಕ, ಕೆನಡಾ, ಸಿಂಗಪೂರ್, ಮಲೇಷಿಯಾ, ಥೈಲಾಂಡ್, ತೈವಾನ್ ಮುಂತಾದ ದೇಶಗಳಿಗೆ ಭೇಟಿ ಇತ್ತಿರುವ ಶ್ರೀಯುತರು ಅಪಾರ ಜೀವನಾನುಭವ ಗಳಿಸಿಕೊಂಡಿದ್ದಾರೆ.
ಪತ್ರಿಕಾ ರಂಗದಲ್ಲಿ ಹೊಸ ಹಾದಿ ತುಳಿದು, ಯಶಸ್ವಿಯಾದ ಗಣ್ಯ ಪತ್ರಿಕೋದ್ಯಮಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಶ್ರೀ ಬಿ ಎಸ್ ಮಣಿ ಅವರು.
ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ, ನೂರಾರು ಶಿಷ್ಯರ ಗುರು ಶ್ರೀಮತಿ ಭಾನುಮತಿ ಅವರು.
ಸುಪ್ರಸಿದ್ಧಕ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಇಶ್ಚಿಮಣಿ ಎಲ್.ಆರ್. ಲಕ್ಷ್ಮಿ ಅವರ ಸುಪುತ್ರಿ. ಸಂಗೀತ ನಾಟ್ಯಗಳ ರಸಗಂಗೆಯ ಮನೆತನದಲ್ಲಿ ಹುಟ್ಟಿದ ಇವರು ನಾಟ್ಯದಲ್ಲಿ ನೈಪುಣ್ಯತೆ ಪಡೆಯಲು ಮನೆಯ ಪರಿಸರಕ್ಕಿಂತ ಮಿಗಿಲಾದ ಬೇರೆ ಪ್ರಭಾವ, ಪ್ರೇರಣೆಗಳು ಬೇಕಾಗಲಿಲ್ಲ.
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿದ ಭಾನುಮತಿ ಅವರು ಮುಂದೆ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಮತಿ ಕಮಲಾಲಕ್ಷ್ಮಣ್ ಹಾಗೂ ಪದ್ಮಶ್ರೀ ಶ್ರೀ ಕೆ.ಎನ್. ದಂಡಾಯುಧಪಾಣಿ ಪಿಳ್ಳೆ ಅವರಲ್ಲಿ ಶಿಷ್ಯಳಾಗಿ ಅವಿರತ ಸಾಧನೆಯೊಂದಿಗೆ ತಮ್ಮ ನೃತ್ಯಕಲೆಗೆ ಅಗತ್ಯವಾದ ಅಖಂಡತೆಯನ್ನು ಮೈಗೂಡಿಸಿಕೊಂಡರು. ದೇಶದಾದ್ಯಂತ ಕುಣಿದೂ ತಣಿಯದ ಈ ನಾಟ್ಯ ಪ್ರತಿಭೆ ವಿಶೇಷ ಆಹ್ವಾನದ ಮೇರೆಗೆ ಬ್ರಿಟಿಷ್ ಐಲ್ಯಾಂಡ್, ಈಶಾನ್ಯ ಏಷ್ಯಾ, ಸಿಂಗಾಪುರ ಮತ್ತು ಮಲೇಷಿಯಾದಂತಹ ದೂರ ದೇಶಗಳಲ್ಲಿಯೂ ತಮ್ಮ ನೃತ್ಯದ ಪಲುಕುಗಳು ರಿಂಗಣಿಸುವಂತೆ ಮಾಡಿದರು.
ಅಭಿನಯ ಶಾರದೆಯನ್ನು ಬೆನ್ನತ್ತಿ ಹೋದ ಇವರ ಪ್ರತಿಭೆಯನ್ನು ಅರಸಿ ಬಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಲ್ಲಿ ‘ಸುರ್ ಸಿಂಗಾ ಸಂಸದ್ -೧೯೮೩’ ಅತ್ಯುನ್ನತ ಪ್ರಶಸ್ತಿಯಾಗಿದೆ. ಎಷ್ಟು ಕಲಿತರೂ ಮತ್ತಷ್ಟು ವೈವಿಧ್ಯತೆಯನ್ನು ಅರಸುತ್ತಿರುವ ಇವರು ಡಾ. ಕೆ. ವೆಂಕಟಲಕ್ಷ್ಮಮ್ಮ ಹಾಗೂ ಕಲಾನಿಧಿ ಡಾ. ನಾರಾಯಣನ್ ಅವರಲ್ಲಿ ವಿಶೇಷ ನೃತ್ಯ ಶಿಕ್ಷಣ ಪಡೆದಿದ್ದಾರೆ.
ನೃತ್ಯ ಕಲಾಮಂದಿರ ಎಂಬ ನೃತ್ಯಶಾಲೆಯನ್ನು ಸ್ಥಾಪಿಸಿ, ನೃತ್ಯಾಸಕ್ತ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿರುವ ನೃತ್ಯ ತಾರೆ ಶ್ರೀಮತಿ ಬಿ. ಭಾನುಮತಿ ಅವರು.
ಭರತನಾಟ್ಯ ಹಾಗೂ ಕೂಚಿಪುಡಿ ಎರಡೂ ಶೈಲಿಯಲ್ಲಿ ಕಲಾಭಿಮಾನಿಗಳ ಮನ್ನಣೆ ಪಡೆದ ಪ್ರಸಿದ್ಧ ಕಲಾವಿದೆ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು.
೧೯೫೫ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ರೀಮತಿ ಪ್ರತಿಭಾ ಎಂ.ಎಸ್ ಹಾಗೂ ಬಿ.ಎಡ್. ಪದವಿ ಪಡೆದರೂ ಆಯ್ಕೆ ನೃತ್ಯರಂಗವಾಯಿತು. ಶ್ರೀ ಯು ಎಸ್ ಕೃಷ್ಣರಾವ್ ದಂಪತಿಗಳಲ್ಲಿ ಭರತನಾಟ್ಯ ಹಾಗೂ ಶ್ರೀಮತಿ ಸುನಂದಾದೇವಿಯವರಲ್ಲಿ ಕೂಚಿಪುಡಿ ಶಿಕ್ಷಣ ಪಡೆದರು. ೧೯೭೧ರಲ್ಲಿ ರಂಗಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ.
ನಾಡಿನಲ್ಲಿ ಹಾಗೂ ಹೊರನಾಡಿನಲ್ಲಿ ೨೦೦ಕ್ಕೂ ಮೀರಿ ನೃತ್ಯ ಪ್ರದರ್ಶನಗಳನ್ನು ನೀಡಿದ ಹಿರಿಮೆ ಇವರದು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸಿ, ನೃತ್ಯಪ್ರದರ್ಶನ ನೀಡಿದ್ದಾರೆ. ನೃತ್ಯ ಪ್ರದರ್ಶನ, ಶಿಕ್ಷಣ, ಪ್ರಾತ್ಯಕ್ಷಿಕೆ, ಉಪನ್ಯಾಸ, ಪ್ರಬಂಧ ಮಂಡನೆ ಹೀಗೆ ಅವರ ಕಲೆಯ ವ್ಯಾಪ್ತಿ ವಿಸ್ತಾರವಾಗಿ ಮುಂದುವರಿದು ಹೊರನಾಡಿನಲ್ಲಿಯೂ ಸೌರಭವನ್ನು ಸೂಸಿದೆ.
ಪ್ರಸಿದ್ಧ ಫೌಂಡೇಶನ್ ಎಂಬ ಸ್ವಂತ ನೃತ್ಯಕೇಂದ್ರವನ್ನು ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಪರ್ ಫಾರ್ಮಿಂಗ್ ಆರ್ಟ್ಸ್ ವಿಭಾಗದಲ್ಲಿ ನೃತ್ಯ, ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರ ಕುರಿತು ಉನ್ನತ ಸ್ತರದ ತರಗತಿಗಳನ್ನು ನಡೆಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದಿರುವ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಲೆಗೆ ತಮ್ಮನ್ನೇ ಅರ್ಪಿಸಿಕೊಂಡ ಅನನ್ಯ ಕಲಾವಿದೆ.
ಡಾ. ಎಲ್ ಆರ್ ಹೆಗಡೆ
ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಎಪ್ಪತ್ತೊಂಬತ್ತು ವರ್ಷದ ಡಾ. ಎಲ್ ಆರ್ ಹೆಗಡೆಯವರು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರ ಕಂಡ ಹಿರಿಯ ವಿದ್ವಾಂಸರು.
ಉತ್ತರ ಕನ್ನಡ ಜಿಲ್ಲೆಯ ಜಾನಪದದ ಅಧಿಕೃತ ವಕ್ತಾರರೆಂಬ ಖ್ಯಾತಿವೆತ್ತ ಶ್ರೀ ಹೆಗಡೆ ಅವರು ಸಂಗ್ರಹಿಸಿ ಪ್ರಕಟಿಸಿದ ಇನ್ನೂರಕ್ಕೂ ಹೆಚ್ಚು ಜಾನಪದ ಲೇಖನಗಳು ಮತ್ತು ಜಾನಪದ ಕಥೆಗಳು ವಿದ್ವಾಂಸರಿಂದ ಪ್ರಶಂಸಿಸಲ್ಪಟ್ಟಿವೆ. ‘ನಾಟಿ ವೈದ್ಯ’ ಎಂಬ ಕೃತಿ ಹಲವು ಮುದ್ರಣ ಕಂಡು ಶ್ರೀಯುತರಿಗೆ ಖ್ಯಾತಿ ತಂದು ಕೊಟ್ಟ ಗ್ರಂಥ.
ಮುಕರಿ ಮತ್ತು ಹೊಲೆಯರ ಪದಗಳು, ಗೊಂಡರ ಪದಗಳು, ಹಾಲಕ್ಕಿ ಹೆಂಗಸರ ಹಾಡುಗಳು, ಗುಮ್ಮಟೆ ಪದಗಳು, ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಹೆಂಗಸರ ಹಾಡುಗಳು ಮುಂತಾದವು ಜಾನಪದ ಕಾವ್ಯಗಳಾದರೆ ಸಿದ್ಧಿಯರ ಕಥೆಗಳು, ಹೊನ್ನಮ್ಮನ ಕಥೆಗಳು, ಮಲೆನಾಡಿನ ಕಥೆಗಳು, ಸಣಕೂಸನ ಕಥೆಗಳು ಮುಂತಾದವು ದಲಿತರ ಬದುಕಿನ ಚಿತ್ರಣ ಒಳಗೊಂಡ ಕಥನ ಕಾವ್ಯಗಳಾಗಿವೆ.
ಜಾನಪದದಿಂದಾಚೆಗೂ ಶ್ರೀಯುತರ ಪ್ರತಿಭೆ ವಿಸ್ತರಿಸಿದಕ್ಕೆ ಉದಾಹರಣೆಯಾಗಿ ಅವರ ಕುಮಾರವ್ಯಾಸನ ಪಾತ್ರಗಳು, ಕಾವ್ಯ ವ್ಯಾಸಂಗ, ಬತ್ತಲೇಶ್ವರ ರಾಮಾಯಣ ಮೊದಲಾದ ಕೃತಿಗಳನ್ನು ಹೆಸರಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳ ಅಧ್ಯಕ್ಷತೆ ಇವರಿಗೆ ಸಂದ ಗೌರವ ಎಂಬತ್ತರ ಇಳಿವಯಸ್ಸಿನಲ್ಲೂ ಜಾನಪದ ವಿಷಯವನ್ನೇ ತುಂಬಿಕೊಂಡು ಚಿಂತಿಸುವ ಹಿರಿಯ ವಿದ್ವಾಂಸರು, ಲೇಖಕರು ಡಾ. ಎಲ್ ಆರ್ ಹೆಗಡೆ ಅವರು.
ಬಯಲು ಸೀಮೆಯ ಅಪೂರ್ವ ಜಾನಪದ ಕಲೆ ಭಾಗವಂತಿಕೆ ಕಲೆಯಲ್ಲಿ ಎಲೆಕೊಪ್ಪದ ಶ್ರೀ ಬಸವೇಗೌಡರದು ಬಹು ದೊಡ್ಡ
ಹೆಸರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಎಲೆಕೊಪ್ಪದಲ್ಲಿ ಜನಿಸಿದ ಇವರು ಸುಮಾರು ನಾಲ್ಕು ದಶಕಗಳಿಂದಲೂ
ಭಾಗವಂತಿಕೆ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಡುಗಾರಿಕೆಯಿಂದ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ, ಹಾಡುಗಾರಿಕೆಗೆ ಪ್ರತಿ ಸಲವೂ ಹೊಸ ಹೊಸ ಅನುಭವವನ್ನುಂಟುಮಾಡುವ ಕಲಾನೈಪುಣ್ಯತೆ ಇವರದು. ದೇಶಾದ್ಯಂತ ಭಾಗವಂತಿಕೆ ಕಲೆಯನ್ನು ವಿಸ್ತರಿಸಿ ಜನಮೆಚ್ಚುಗೆ ಪಡೆದಿರುವ ಇವರಿಗೆ ಮೂವತ್ತೈದಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ೧೯೮೫ರಲ್ಲಿ ಪ್ರಶಸ್ತಿ ಪತ್ರ ಸಮರ್ಪಣೆ, ಡಾ. ಜೀಶಂಪ ಸನ್ಮಾನ ಸಮಿತಿಯಿಂದ ೧೯೯೮ರಲ್ಲಿ ಸನ್ಮಾನ, ಮೈಸೂರು ದಸರಾ ಪ್ರಶಸ್ತಿ-೧೯೯೯, ಮಂಡ್ಯ ಜಿಲ್ಲಾ ಜಾನಪದ
ಪರಿಷತ್ತಿನಿಂದ ಸನ್ಮಾನ, ಕರ್ನಾಟಕ ಜಾನಪದ ಮತ್ತು ಯಕಗಾನ ಅಕಾಡೆಮಿಯಿಂದ ೧೯೯೯ರಲ್ಲಿ ಸನ್ಮಾನ, ಅದೇ
ಅಕಾಡೆಮಿಯಿಂದ ಜಾನಪದ ಪ್ರಶಸ್ತಿ-೨೦೦೦, ಕರ್ನಾಟಕ ಜಾನಪದ ಪರಿಷತ್ತಿನಿಂದ ೨೦೦೦ದ ಸಾಲಿನಲ್ಲಿ ಜಾನಪದ ಲೋಕ ಪ್ರಶಸ್ತಿ ಪುರಸ್ಕಾರ. ಹೀಗೆ ಅನೇಕ ಪ್ರಶಸ್ತಿ ಬಹುಮಾನಗಳು ಅವರ ಕಲೆಯ ವೈಭವವನ್ನು ನಾಡಿನುದ್ದಕ್ಕೂ ಸಾರುತ್ತಿವೆ.
ಕರ್ನಾಟಕ ಜಾನಪದ ಪರಂಪರೆಯನ್ನು ದೇಶದುದ್ದಗಲಕ್ಕೂ ಪ್ರದರ್ಶಿಸುವುದರ ಮೂಲಕ ಶ್ರೀ ಎಲೆಕೊಪ್ಪ ಬಸವೇಗೌಡರು ಕನ್ನಡ ನಾಡಿನ ಅಪರೂಪದ ಸಾಂಸ್ಕೃತಿಕ ವಕ್ತಾರರೆನಿಸಿದ್ದಾರೆ.
ಶ್ರೀ ಎಂ ಆರ್ ಬಸಪ್ಪ
ಎಳೆವಯಸ್ಸಿನಲ್ಲಿಯೇ ಕಲಾಸೇವೆಗೆ ತೊಡಗಿ ೫೦ ವರ್ಷಗಳ ಕಾಲ ನಿರಂತರವಾಗಿ ಸಾಧನೆ ಮಾಡಿ ಮುಂದಿನ ಪೀಳಿಗೆಗೂ ಕಲೆಯನ್ನು ಧಾರೆ ಎರೆಯುತ್ತಿರುವ ವೀರಗಾಸೆ ಕಲಾವಿದರು ಶ್ರೀ ಎಂ ಆರ್ ಬಸಪ್ಪ ಅವರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮಾಳೇನಹಳ್ಳಿ ಗ್ರಾಮದ ನಿವಾಸಿ ಶ್ರೀ ಎಂ ಆರ್ ಬಸಪ್ಪ ಸುಪ್ರಸಿದ್ಧ ವೀರಗಾಸೆ
ಕಲಾವಿದರು.
ಬಡತನದ ಬೇಗೆಯಲ್ಲಿ ಬೆಂದ ಶ್ರೀ ಬಸಪ್ಪ ಅವರನ್ನು ೧೫ನೆಯ ವಯಸ್ಸಿನಲ್ಲೇ ವೀರಗಾಸೆ ಕಲೆ ಕೈಬೀಸಿ ಕರೆಯಿತು. ಯಾವ ತರಬೇತಿಯೂ ಇಲ್ಲದೆ ಸ್ವಂತ ಆಸಕ್ತಿಯಿಂದ ವೀರಗಾಸೆಯನ್ನು ಕಲಿತು ೪೦ ಕಲಾ ತಂಡಗಳನ್ನು ತಯಾರು ಮಾಡಿರುವ ಹಿರಿಮೆ ಇವರದು. ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಶ್ರೀ ಬಸಪ್ಪನವರು ಕಾರ್ಯಕ್ರಮ ನೀಡದ ಸ್ಥಳಗಳಿಲ್ಲ. ಉತ್ತರದ ಕಾಶಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅಸಂಖ್ಯಾತ ಪ್ರದರ್ಶನಗಳನ್ನು ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ೪ನೆಯ ರಾಷ್ಟ್ರೀಯ ಕ್ರೀಡಾ ಮೇಳ, ಕನ್ನಡ ಸಾಹಿತ್ಯ ಸಮ್ಮೇಳನ, ಸಾರ್ಕ್ ಸಮ್ಮೇಳನ, ರಾಜ್ಯ ಮಟ್ಟದ ಹಾಗೂ ಅಖಿಲಭಾರತ ಮಟ್ಟದ ಜಾನಪದ ಮೇಳ ಹೀಗೆ ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸಿ, ವೀರಗಾಸೆ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ವಿಶೇಷವಾಗಿ ಹಿಂದುಳಿದ ಜನಾಂಗದ ಹಾಗೂ ಗ್ರಾಮಾಂತರ ಪ್ರದೇಶದ ಕಲಾವಿದರನ್ನು ಗುರುತಿಸಿ, ತಂಡ ಕಟ್ಟಿ ತರಬೇತಿ ನೀಡಿ, ವೀರಗಾಸೆ ಕಲೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಪರಿಪೂರ್ಣರಾದ ಈ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ತಮ್ಮ ೬೫ನೆಯ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂಥ ಕಲಾಸಕ್ತಿಯಿಂದ ವೀರಗಾಸೆ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಹಿರಿಯ ಕಲಾವಿದ ಶ್ರೀ ಎಂ ಆರ್ ಬಸಪ್ಪ ಅವರು.
ತನ್ನ ಸಿರಿಕಂಠದಿಂದ ಜನಪದ ಹಾಡುಗಳ ಮೂಲಕ ರಸಿಕರ ಮನಸೂರೆಗೊಂಡ ಕಲಾವಿದೆ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲೂಕಿನ ಮೆಣಸಿಕ್ಯಾತನ ಹಳ್ಳಿಯಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಜನಪದ ಹಾಡುಗಳಿಗೆ ಮಾರು ಹೋದವರು. ಗುರುಬಲ, ಸಂಸ್ಥೆ ಬಲ, ಆರ್ಥಿಕ ಬಲ – ಈ ಯಾವ ಒತ್ತಾಸೆ, ಆಕರ್ಷಣೆಯೂ ಇಲ್ಲದೆ, ಕೇವಲ ಮೈಗೂಡಿ ಬಂದ ವೈಯಕ್ತಿಕ ಸ್ಫೂರ್ತಿಯಿಂದ ಹಾಡಿ ಹಾಡಿ ಇಂದು ನಾಡಿನ ಜನಪದ ಗಾಯಕರಲ್ಲಿ ಹಿರಿಯರಾದ ಶ್ರೀಮತಿ ನಿಂಗಮ್ಮ ಅಪ್ಪಟ ಗ್ರಾಮೀಣ ಪ್ರತಿಭೆ.
ತನ್ನ ಊರಿನಲ್ಲಿ ಮತ್ತು ನೆರೆಯ ಊರುಗಳಲ್ಲಿ ಯಾವುದೇ ಮದುವೆ, ಹಬ್ಬ ಜಾತ್ರೆಯಾಗಲಿ ಅಲ್ಲಿನಿಂಗಮ್ಮನ ಪದಗಳು ಅಲೆ ಅಲೆಯಾಗಿ ಜನರ ಕಿವಿ ತುಂಬುತ್ತವೆ. ಕೇವಲ ವಾಗ್ರೂಪದಲ್ಲಿ ಸಾವಿರಾರು ವರ್ಷಗಳ ತನ್ನ ಆಯಸ್ಸನ್ನು ಕಳೆದೂ ಉಳಿದು ಬಂದಿರುವ ಜನಪದ ಹಾಡುಗಳು ನಿಂಗಮ್ಮನಿಗೆ ಹಿರಿಯರಿಂದ ಬಳುವಳಿಯಾಗಿ ಬಂದಂತೆಯೇ ನಿಂಗಮ್ಮನಿಂದ ನೂರಾರು ಹೆಣ್ಣು ಮಕ್ಕಳಿಗೆ ಧಾರೆ ಎರೆಯಲ್ಪಟ್ಟಿವೆ.
ನಾಡಿನಾದ್ಯಂತ ತನ್ನ ಹಾಡುಗಾರಿಕೆಯಿಂದ ಜನಮನ ಸೂರೆಗೊಂಡ ನಿಂಗಮ್ಮನವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಕಾಲನ ಅಂಕೆಗೆ ಶರೀರ ಬಾಗುತ್ತಿದ್ದರೂ ನಿಂಗಮ್ಮನವರ ಶಾರೀರ ಮಾತ್ರ ಇಂದಿಗೂ ಕುಗ್ಗಿಲ್ಲ. ಅಂಥ ಸಿರಿ ಕಂಠದ ಜಾನಪದ ಹಾಡುಗಾರ್ತಿ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ.
ಕನ್ನಡ ಚಿತ್ರರಂಗ ಅಂಬೆಗಾಲಿಡುತ್ತಿದ್ದ ದಿನಗಳಲ್ಲಿ ಚಲನಚಿತ್ರ ಸ್ಟುಡಿಯೋವನ್ನು ಸ್ಥಾಪಿಸಿ, ಹತ್ತಾರು ಕನ್ನಡ ಚಿತ್ರಗಳ ನಿರ್ಮಾಪಕರಾಗಿ, ನಿರ್ದೇಶಕರಾಗಿ ಚಿತ್ರೋದ್ಯಮಕ್ಕೆ ಹೊಸ ಹುರುಪು ಮೂಡಿಸಿದ ಸಾಹಸಿ ಶ್ರೀ ಬಿ ಎಸ್ ರಂಗ ಅವರು. ಛಾಯಾಗ್ರಾಹಕರಾಗಿ ಮುಂಬೈಯಲ್ಲಿ ತರಬೇತಿ, ಅನಂತರ ಜೆಮಿನಿ ಸ್ಟುಡಿಯೋಕ್ಕೆ ಪ್ರವೇಶ, ಫಲವಾಗಿ ಚಿತ್ರರಂಗದ ಎಲ್ಲ ಆಯಾಮಗಳ ನಿಕಟ ಪರಿಚಯ. ಅಂದಿನ ಕಾಲದಲ್ಲಿ ಜಯಭೇರಿ ಬಾರಿಸಿದ ‘ಚಂದ್ರಲೇಖ’ದಂತಹ ಅನೇಕ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದ ಹಿರಿಮೆ ಶ್ರೀ ಬಿ ಎಸ್ ರಂಗ ಅವರದು.
ಕನ್ನಡ, ತೆಲುಗು, ತಮಿಳು, ಭಾಷೆಗಳಲ್ಲಿ ೭೦ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.’ಅಮರಶಿಲ್ಪಿ ಜಕಣಾಚಾರಿ’ ಎಂಬ ಕನ್ನಡ ಪ್ರಥಮ ವರ್ಣಚಿತ್ರ ತಯಾರಿಸಿದ ಕೀರ್ತಿ ಶ್ರೀ ರಂಗ ಅವರದು. ಅಲ್ಲದೆ, ಭಲೇ ಬಸವ, ಮಿ|| ರಾಜ್ಕುಮಾರ್, ಮಹಿಷಾಸುರ ಮರ್ಧಿನಿ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತರಾಗಿದ್ದಾರೆ.
೧೯೫೦ರ ದಶಕ ಚಲನಚಿತ್ರೋದ್ಯಮದ ಚಟುವಟಿಕೆಗಳೆಲ್ಲವೂ ಮದ್ರಾಸಿನಲ್ಲಿ ಕೇಂದ್ರೀಕೃತವಾಗಿದ್ದ ಕಾಲ. ಅಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ ಧೀರ ಶ್ರೀ ರಂಗ ಅವರು. ಏಕವ್ಯಕ್ತಿಯ ಈ ಸಾಹಸಕ್ಕೆ ಸೂಕ್ತ ಬೆಂಬಲ ಸಿಗದೇ ಅನಿವಾರ್ಯವಾಗಿ ಮದ್ರಾಸಿಗೆ ಹೋಗಬೇಕಾಗಿ ಬಂದ ವ್ಯಥೆಯ ಕತೆ ಇವರ ಪಾಲಿಗೆ, ಮದ್ರಾಸಿನಲ್ಲಿ ವಿಕ್ರಂ ಸ್ಟುಡಿಯೋವನ್ನು ಸ್ಥಾಪಿಸಿ, ಕನ್ನಡ ಚಿತ್ರಗಳ ಚಟುವಟಿಕೆಗಳಿಗೆ ಸೂಕ್ತ ವಾತಾವರಣವನ್ನು ಕಲ್ಪಿಸಿ, ಕನ್ನಡದ ಏಳೆಗೆ ವಿಶೇಷವಾಗಿ ಶ್ರಮಿಸಿದ ಶ್ರೇಯಸ್ಸು ಶ್ರೀ ಬಿ ಎಸ್ ರಂಗ ಅವರಿಗೆ ಸಲ್ಲುತ್ತದೆ. ಶ್ರೀಯುತರು ೧೯೮೮-೮೯ರಲ್ಲಿ ರಾಜ್ಯ ಸರ್ಕಾರವು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆಯಲ್ಲದೆ, ಅಖಿಲ ಭಾರತ ಸಿನಿಮಾ ತಂತ್ರಜ್ಞರ ಸಂಘವು ಸ್ಮಾಲ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಿದೆ.
G
ಶ್ರೀಮತಿ ಜಯಮಾಲಾ
ಚಲನಚಿತ್ರರಂಗದ ಕ್ರಿಯಾಶೀಲ ವ್ಯಕ್ತಿತ್ವದ ಸುಪ್ರಸಿದ್ದ ಕಲಾವಿದೆ ಶ್ರೀಮತಿ ಜಯಮಾಲಾ ಅವರು.
ಮಂಗಳೂರಿನಲ್ಲಿ ೧೯೫೯ರಲ್ಲಿ ಜನನ. ತಮ್ಮ ೧೩ನೆಯ ವಯಸ್ಸಿನಲ್ಲೇ ತುಳು ಚಿತ್ರ ‘ಕಾಸ್ದಾಯೆಕಂಡನೆ’ ಮೂಲಕ ಚಿತ್ರರಂಗ ಪ್ರವೇಶ ಹಾಗೂ ಅದೇ ಪ್ರಥಮ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ದಕ್ಷಿಣ ಭಾರತದ ಐದು ಭಾಷೆಗಳು ಸೇರಿದಂತೆ ಒಟ್ಟು ೭೫ ಚಲನಚಿತ್ರಗಳಲ್ಲಿ ಅಭಿನಯ, ಚಲನಚಿತ್ರ ನಿರ್ಮಾಣಕ್ಕೂ ಪ್ರವೇಶ, ನಾಲ್ಕು ಚಿತ್ರಗಳ ನಿರ್ಮಾಣ. ಇವರು ನಿರ್ಮಿಸಿದ ‘ತಾಯಿ ಸಾಹೇಬ’ಕ್ಕೆ ಸ್ವರ್ಣಕಮಲ ಸೇರಿದಂತೆ ಒಟ್ಟು ೨೨ ಪ್ರಶಸ್ತಿಗಳ ದಾಖಲೆ.
ಶ್ರೀಮತಿ ಜಯಮಾಲಾರ ಕಾರಶೀಲತೆಗಾಗಿ ಇವರನ್ನು ಹುಡುಕಿ ಬಂದ ಪದವಿಗಳು ಹಲವಾರು. ಕರ್ನಾಟಕ ಚಲನಚಿತ್ರ ಮಂಡಳಿಯ ಗೌರವ ಖಜಾಂಚಿ ಹಾಗೂ ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ. ಮೈಸೂರಿನ ಶಕ್ತಿಧಾಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಭಾರತೀಯ ಪನೋರಮಾ – ೨೦೦೦ದ ಆಯ್ಕೆ ಸಮಿತಿಯ ಸದಸ್ಯೆ. ಕರ್ನಾಟಕ ರಾಜ್ಯ ಫಿಲಂ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷೆ ಮುಂತಾದವು. ಶ್ರೀಮತಿ ಜಯಮಾಲಾ ಅವರನ್ನು ಅರಸಿ ಬಂದ ಪ್ರಶಸ್ತಿ ಗೌರವಗಳು ಹಲವು. ಅತ್ಯುತ್ತಮ ನಟಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸ್ವರ್ಣಕಮಲ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮುಂತಾದವು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲ ಶ್ರೀಮತಿ ಜಯಮಾಲಾ ಅವರಿಗೆ ತೋಟಗಾರಿಕೆ, ಒಳಾಂಗಣ ಅಲಂಕರಣ, ಅಧ್ಯಯನ ಮುಂತಾದವುಗಳು ಆಸಕ್ತಿಯ ವಿಷಯಗಳು.
ಅಂತರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗಳನ್ನು ಗಳಿಸಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಜಯಮಾಲಾ ಅವರು.
ಶ್ರೀ ಸಿ ಹೊನ್ನಪ್ಪ
ಮೊಟ್ಟ ಮೊದಲ ಬಾರಿಗೆ ಕರ್ನಾಟಕಕ್ಕೆ ಕಬಡ್ಡಿ ಕ್ರೀಡೆಯಲ್ಲಿ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ತಂದು ಕೊಟ್ಟ ಕನ್ನಡದ ಕುವರ ಶ್ರೀ ಸಿ ಹೊನ್ನಪ್ಪ ಅವರು. ಜನನ ೧೯೭೩ರಲ್ಲಿ, ವೃತ್ತಿಯಿಂದ ಬ್ಯಾಂಕ್ ಅಧಿಕಾರಿ.
ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಸಿ ಹೊನ್ನಪ್ಪ ಅವರು, ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊಮ್ಮಿದ ಅಪ್ರತಿಮ
ಪ್ರತಿಭಾವಂತ.
ಕರ್ನಾಟಕದ ಕ್ರೀಡಾ ತಂಡವನ್ನು ಉಪನಾಯಕರಾಗಿ ಹಾಗೂ ನಾಯಕರಾಗಿ ಪ್ರತಿನಿಧಿಸಿದ್ದು ಮಾತ್ರವಲ್ಲ, ಅಂತರಾಷ್ಟ್ರೀಯ ಏಷ್ಯನ್ ಕ್ರೀಡಾಕೂಟದಲ್ಲಿ ಉಪನಾಯಕರಾಗಿ ಭಾರತವನ್ನು ಪ್ರತಿನಿಧಿಸಿದ್ದು ಇವರ ಹೆಗ್ಗಳಿಕೆ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ದಕ್ಷಿಣವಲಯ ಚಾಂಪಿಯನ್ ಷಿಪ್ ಮತ್ತು ಫೆಡರೇಷನ್ ಕಪ್ ಟೂರ್ನ್ಮೆಂಟ್ ಗಳಲ್ಲಿ ಭಾಗವಹಿಸಿದ ಹಿರಿಮೆಗೆ ಶ್ರೀಯುತರು ಪಾತ್ರರು. ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಈ ಅಪ್ರತಿಮ ಉತ್ಸಾಹಿ ಕ್ರೀಡಾಪಟುವನ್ನು ಅರಸಿ ಬಂದ ಬೆಳ್ಳಿ ಪದಕ, ಚಿನ್ನದ ಪದಕ ಹಾಗೂ ಪ್ರಶಸ್ತಿಗಳು ಅಸಂಖ್ಯಾತ, ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ರೈಡರ್ ಮತ್ತು ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ ಪಡೆದಿರುವ ಶ್ರೀ ಹೊನ್ನಪ್ಪನವರು ಇತ್ತೀಚೆಗೆ ಭಾರತ ಸರ್ಕಾರದ ಅತ್ಯುನ್ನತ ಅರ್ಜುನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಹಾಗೂ ಬೆಂಗಳೂರು ನಗರ ಮಹಾಪೌರರಿಂದ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಪ್ರಶಸ್ತಿ ಪದಕಗಳ ಸರದಾರನಾದ ಶ್ರೀ ಹೊನ್ನಪ್ಪನವರು ಕರ್ನಾಟಕದ ಸುಪುತ್ರ; ಸರಳ ಸಜ್ಜನಿಕೆಯ ವಿನಯ ಸಂಪನ್ನ.
ಹುಟ್ಟಿನಿಂದಲೇ ಕೇಳುವ ಭಾಗ್ಯದಿಂದ ವಂಚಿತಳಾಗಿದ್ದರೂ, ಬ್ಯಾಡ್ಮಿಂಟನ್ ಕ್ರೀಡೆಯ ಖ್ಯಾತಿಯ ಪ್ರತಿಭಾಶಾಲಿ ಕರ್ನಾಟಕದ ಹೆಮ್ಮೆಯ ಸುಪುತ್ರಿ ಶ್ರೀಮತಿ ರಂಜಿನಿ ರಾಮಾನುಜಂ.
ಕೇಳುವ ಶಕ್ತಿಯನ್ನು ಕಳೆದುಕೊಂಡ ಕ್ರೀಡಾಪಟುಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಶ್ರೀಮತಿ ರಂಜಿನಿ ಸತತ ಎರಡು ಬಾರಿಯೂ ಚಿನ್ನದ ಪದಕಗಳ ವಿಜೇತೆ, ”ಸೈಲೆಂಟ್ ಒಲಿಂಪಿಕ್ಸ್’ ಎಂಬ ಅಭಿದಾನದ ಅಂತರಾಷ್ಟ್ರೀಯ ತಂಡಗಳು ಭಾಗವಹಿಸಿದ ೧೮ನೆಯ ಜಾಗತಿಕ ಕ್ರೀಡಾಮೇಳದಲ್ಲಿ ಭಾರತವು ಚಿನ್ನದ ಪದಕದೊಂದಿಗೆ ಅದ್ಭುತ ವಿಜಯ ಸಂಪಾದಿಸಿದಾಗ, ತಂಡವನ್ನು ಪ್ರತಿನಿಧಿಸಿದವರು ಶ್ರೀಮತಿ ರಂಜಿನಿ.
ಸೈಲೆಂಟ್ ಒಲಿಂಪಿಕ್ಸ್ನ ಏಕವ್ಯಕ್ತಿ ನಡುವಿನ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ತಂದಿತ್ತ ವಿಶ್ವದ ನಂ. ೨ನೇ ಆಟಗಾರ್ತಿ ಶ್ರೀಮತಿ ರಂಜಿನಿ.
2
ಇಟಲಿಯ ಬ್ರಿಕ್ಸನ್ ನಗರದಲ್ಲಿ ೧೯೯೮ರಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಗೂ ತೈವಾನ್ ದೇಶದ ತೈಪೆಯಲ್ಲಿ ೨೦೦೦ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಮತ್ತು ಡಬ್ಬಲ್ಸ್ ಎರಡೂ ಪ್ರಶಸ್ತಿಯನ್ನು ಭಾರತಕ್ಕೆ ತಂದುಕೊಟ್ಟ ಕೀರ್ತಿವಂತೆ ಶ್ರೀಮತಿ ರಂಜಿನಿ. ಬ್ಯಾಡ್ಮಿಂಟನ್ ಕ್ರೀಡಾಲೋಕವನ್ನು ಪ್ರವೇಶಿಸಿದ ನಾಲ್ಕು ವರ್ಷಗಳ ಅನತಿ ಕಾಲದಲ್ಲಿಯೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಚಿನ್ನ, ೪ ರಜತ, ಒಂದು ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಭಾರತದ ಕ್ರೀಡಾ ಲೋಕದ ಉಜ್ವಲತಾರೆ ಶ್ರೀಮತಿ ರಂಜಿನಿ. ಅರ್ಜುನ ಪ್ರಶಸ್ತಿ ಏಕಲವ್ಯ ಪ್ರಶಸ್ತಿ ಪಡೆದ ಈ ಕ್ರೀಡಾಪಟು ಅಂಗವಿಕಲರ ಬಾಳಿನ ಆಶಾದೀಪ.
ಅಂತರಾಷ್ಟ್ರೀಯ ಕ್ರಿಕೆಟ್ಟಿನ ಭರವಸೆಯ ಬ್ಯಾಟ್ಸ್ಮನ್, ಭಾರತ ಕ್ರಿಕೆಟ್ ತಂಡದ ಉಪನಾಯಕ. ಕರ್ನಾಟಕದ ಹೆಮ್ಮೆಯ ಕ್ರೀಡಾಪ್ರತಿಭೆ ಶ್ರೀ ರಾಹುಲ್ ದ್ರಾವಿಡ್.
೧೯೭೩ರಲ್ಲಿ ಜನನ, ಬೆಂಗಳೂರಿನ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ, ಬಿ.ಕಾಂ. ಪದವಿ ಗಳಿಕೆ, ಎಳೆಯ ವಯಸ್ಸಿನಲ್ಲಿಯೇ ಕ್ರಿಕೆಟ್ ಲೋಕಕ್ಕೆ ಪ್ರವೇಶ. ಮೊದಲ ದರ್ಜೆಯ ಅನೇಕ ಪಂದ್ಯಗಳಲ್ಲಿ ಭಾಗಿ, ಯಶಸ್ವಿನ ಮೆಟ್ಟಿಲೇರಿದ ಗಟ್ಟಿ ಅಡಿಗಳು. ೧೯ ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಹುದ್ದೆಯ ಗೌರವ.
ರಣಜಿ ಟ್ರೋಫಿ ಕ್ಷೇತ್ರಕ್ಕೆ ಪದಾರ್ಪಣೆ. ೩೭ ಪಂದ್ಯ, ೫೨ ಇನ್ನಿಂಗ್ಸ್, ೭ ಅಜೇಯ ಇನ್ನಿಂಗ್ಸ್, ೩೬೨೮ ರನ್ನುಗಳು, ೮೦.೮೪ರ ಸರಾಸರಿ, ೧೪ ಶತಕಗಳು ೧೬ ಅರ್ಧಶತಕಗಳು, ೭ ಪಂದ್ಯಗಳಲ್ಲಿ ನಾಯಕತ್ವ – ಹೀಗೆ ಸಾಗಿರುವ ಉಜ್ವಲ ಸಾಧನೆ.
ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಪಂದ್ಯಗಳಲ್ಲಿಯೂ ಅತ್ಯುತ್ತಮ ಸಾಧನೆ. ಆಯ್ಕೆ ಸಮಿತಿಯಿಂದ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ವೀರೋಚಿತ ಸ್ವಾಗತ. ೪೮ ಟೆಸ್ಟ್ಗಳು, ೮೪ ಇನ್ನಿಂಗ್ಸ್ಗಳು, ೪೦೩೩ ರನ್ನುಗಳು, ಸರಾಸರಿ ರನ್ನು ಸಂಖ್ಯೆ ೫೩.೭೭.೯ ಶತಕಗಳ, ೨೧ ಅರ್ಧ ಶತಕಗಳ ಹೆಮ್ಮೆಯ ಕೊಡುಗೆ, ತಾಳ್ಮೆಯ ಕಲಾತ್ಮಕ ಆಟಗಾರನೆಂಬ ಪ್ರಶಂಸೆ. ಓಲಾಡುವ ಇನ್ನಿಂಗ್ಸ್ಗೆ ಲಂಗರು ಹಾಕಬಲ್ಲ ನಂಬಿಕೆಯ ಬ್ಯಾಟ್ಸ್ಮನ್, ಏಕದಿನದ ೧೬೩ ಪಂದ್ಯಗಳಲ್ಲಿ ಆಡಿದ ಅಮೂಲ್ಯ ಅನುಭವ, ೫೧೯೦ ರನ್ನುಗಳ ಗಳಿಕೆ.
ಅರ್ಜುನ್ ಪ್ರಶಸ್ತಿ ೧೯೯೯ರ ಸಿಯೆಟ್ ಬೆಸ್ಟ್ ಕ್ರಿಕೆಟರ್, ವಿಸ್ಟನ್ ಕ್ರಿಕೆಟರ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಭೂಷಿತ. ಕನ್ನಡಿಗರ ಕಣ್ಮಣಿ, ಭಾರತದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಅವರು.
ಶ್ರೀಮತಿ ದೇಚು ಮೂಲ
ಟೆನ್ನಿಸ್ ಕ್ರೀಡಾರಂಗದಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ಪ್ರತಿಭಾವಂತೆ ಶ್ರೀಮತಿ ದೇಚು ಮೂಲ ಅವರು.
ಮಹಿಳಾ ಟೆನ್ನಿಸ್ನ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದು ವಿಂಬಲ್ಡನ್ ಪಂದ್ಯದ ಕ್ವಾರ್ಟರ್ ಫೈನಲ್ವರೆಗೂ ತಲುಪಿದ ಸಾಧನೆ ಇವರದು.
೧೯೪೧ರಲ್ಲಿ ಜನಿಸಿದ ದೇಚು ಅಪ್ಪಯ್ಯ ಮೂಲ ಅವರು ೧೯೫೯ನೆಯ ಇಸವಿಯಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಷಿಪ್ ಸಿಂಗಲ್ಸ್ ಪ್ರಶಸ್ತಿ ವಿಜೇತರು. ೧೯೬೦, ೧೯೬೧, ೧೯೬೨ನೇ ಇಸವಿಯಲ್ಲಿ ಭಾರತದ ನಂ. ೧ ಬ್ಯಾಂಕಿನ ಮಹಿಳಾ ಟೆನ್ನಿಸ್ ಕ್ರೀಡಾಪಟುವೆಂಬ ಕೀರ್ತಿಗೆ ಭಾಜನರಾದರು.
2
೧೯೬೦ರ ದಶಕದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಸತತವಾಗಿ ೩ ಬಾರಿ ಪ್ರಥಮ ಸ್ಥಾನ ಪಡೆದು ‘ಟ್ರಿಪಲ್ ಕೌನ್’ ಪ್ರಶಸ್ತಿ ಗಳಿಸಿದ ಹಿರಿಮೆ ಇವರದು.
ಸಿಂಗಪೂರದಲ್ಲಿ ೧೯೬೧ರಲ್ಲಿ ನಡೆದ ಮಹಿಳೆಯರ ಮುಕ್ತ ಟೆನ್ನಿಸ್ ಸ್ಪರ್ಧೆಯಲ್ಲಿ ‘ರನ್ನರ್ ಅಪ್’ ಆಗಿ ಮೆರೆದ ಪ್ರತಿಭಾವಂತರು.
~
ಭಾರತದ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸುಧಾರಣೆಯಲ್ಲಿ ಅಷ್ಟೇನೂ ಅನುಕೂಲತೆಗಳಿಲ್ಲದ ದಿನಗಳಲ್ಲೇ ಸ್ವಂತ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಮೆರೆದ ಅಪ್ರತಿಮ ಟೆನ್ನಿಸ್ ಕ್ರೀಡಾಪಟು ಕರ್ನಾಟಕದ ಶ್ರೀಮತಿ ದೇಚು ಮೂಲ ಅವರು.
ಶ್ರೀ ಕೆ ಜಯಸಿಂಹ ಕನ್ನಡಪರವಾದ ಕ್ರಿಯಾತ್ಮಕ ಕೆಲಸಕ್ಕೆ ಸದಾ ಸಿದ್ಧವಾಗಿರುವ ಶ್ರೀ ಕೆ ಜಯಸಿಂಹ ಅವರು ನಾಡಿನ ಎಲ್ಲ ವಲಯಗಳಲ್ಲೂ ಕನ್ನಡ ಭಾಷೆ-ಸಂಸ್ಕೃತಿಗಳು ಬೇರೂರಬೇಕೆಂಬ ಕನಸು ಹೊತ್ತವರು.
ಮೈಸೂರು ವಾಸಿಯಾದ ಶ್ರೀ ಜಯಸಿಂಹ ಅವರು ಕನ್ನಡವನ್ನು ಒಂದು ರಚನಾತ್ಮಕ ಕೆಲಸವೆಂದು ಭಾವಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತಿಳಿವಳಿಕೆಯಿಂದ ಕನ್ನಡಪರ ಹೋರಾಟಕ್ಕೆ ಸಂವೇದನೆಯ ಸ್ಪರ್ಶವನ್ನು ತಂದುಕೊಟ್ಟಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಬದ್ಧತೆಯಿಂದ ದುಡಿಯುತ್ತ ಬಂದಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಆಂದೋಲನಗಳ ರೂವಾರಿಯಾಗಿದ್ದಾರೆ.
೧೯೯೪ರಲ್ಲಿ ಮೈಸೂರು ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಶ್ರೀ ಜಯಸಿಂಹ ಅವರನ್ನು ೧೯೯೮ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನಲ್ಲಿ ನಡೆಸಿದ ವಿಭಾಗ ಮಟ್ಟದ ಸಮಾವೇಶದಲ್ಲಿ ಸನ್ಮಾನಿಸಿದೆ. ಇದೇ ರೀತಿ ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನೆಗಳನ್ನು ನ್ನು ಪಡೆದಿದ್ದಾರೆ. ಹೀಗೆ ತಮ್ಮ ಜೀವನವನ್ನೇ ಕನ್ನಡ ಸೇವೆಗೆ ಮೀಸಲಾಗಿಟ್ಟಿರುವ ಶ್ರೀ ಜಯಸಿಂಹ ಅವರಿಗೆ ಕನ್ನಡ ರಾಜ್ಯೋತ್ಸವದ ಈ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬೆಂಗಳೂರು ಜಿಲ್ಲೆ ಕನಕಪುರ ತಾಲ್ಲೂಕು ಹಾರೋಬೆಲೆಯಲ್ಲಿ ಜನಿಸಿದ ಫಾದರ್ ಡಾ. ಐ ಅಂತಪ್ಪ ಅವರು ಇಟಲಿಯಲ್ಲಿ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಭಾರತಕ್ಕೆ ಹಿಂದಿರುಗಿ ಯಾಜಕ ಗುರುದೀಕ್ಷೆ ಪಡೆದು ಜನಸೇವೆಯೇ ಜನಾರ್ದನ ಸೇವೆ ಎಂದು ದುಡಿಯುತ್ತಿರುವ ಪ್ರಾಮಾಣಿಕ ಸಮಾಜಸೇವಕ.
ಸುಮಾರು ೪೫ ವರ್ಷಗಳಿಂದ ಕನ್ನಡದ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸಿ, ಸೇವೆ ಸಲ್ಲಿಸುತ್ತಿರುವ ಡಾ. ಅಂತಪ್ಪ ಕ್ರೈಸ್ತ ಧರ್ಮದ ಪವಿತ್ರ ಧರ್ಮಗ್ರಂಥ ಬೈಬಲನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಲ್ಯಾಟಿನ್, ಹೀಬ್ರು, ಗ್ರೀಕ್ ಮತ್ತು ಇಟಾಲಿಯನ್ ಭಾಷೆಗಳನ್ನು ಬಲ್ಲ ಶ್ರೀಯುತರು ವಿವಿಧ ಸ್ಥಳಗಳಲ್ಲಿ ಕ್ರೈಸ್ತಧರ್ಮದ ಉಗಮ, ಕ್ರಿಸ್ಮಸ್ ಹಬ್ಬ ಪ್ರಾರ್ಥನೆಗಳು ಮುಂತಾದ ಧಾರ್ಮಿಕ ವಿಷಯಗಳನ್ನು ಕುರಿತ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಥಮ ಕೆಥೋಲಿಕ್ ಬೈಬಲ್ ಕನ್ನಡ ಭಾಷಾಂತರ ಇವರ ಕೊಡುಗೆ. ಬೆಂಗಳೂರಿನ ಕನ್ನಡ ಕ್ರೈಸ್ತರ ಮುಖವಾಣಿಯಾದ ‘ಕರ್ನಾಟಕ ತಾರೆ’ ಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು.
ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದವರು.
ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯವಲಯದಲ್ಲಿ ಇವರು ಸಲ್ಲಿಸಿದ ನಿಷ್ಕಾಮ ಸೇವೆಯನ್ನು ಪರಿಗಣಿಸಿ ೬೭ನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.
ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಚೇತನ ಫಾದರ್ ಐ ಅಂತಪ್ಪ ಅವರು.