Categories
ಮಾನವಿಕ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಡಾ. ಕೆ. ಪುಟ್ಟಸ್ವಾಮಯ್ಯ

ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳನ್ನು ತಯಾರಿಸಿ ನಾಡಿನ ಮುನ್ನಡೆ ಶ್ರಮಿಸಿದವರು ಹೆಸರಾಂತ ಅರ್ಥಶಾಸ್ತ್ರಜ್ಞ ಡಾ. ಪುಟ್ಟಸ್ವಾಮಯ್ಯ ಅವರು.
ತುಮಕೂರಿನವರಾದ ಡಾ. ಪುಟ್ಟಸ್ವಾಮಯ್ಯನವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ವಿಶ್ವಸಂಸ್ಥೆಯ ಏಷ್ಯ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಫೆಲೋಷಿಪ್ ಗಳಿಸಿದ ಪ್ರತಿಭಾವಂತರು.
ಕರ್ನಾಟಕ ಸರ್ಕಾರದ ಹಲವು ಅಭಿವೃದ್ಧಿ ಇಲಾಖೆಗಳಲ್ಲಿ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಡಾ. ಪುಟ್ಟಸ್ವಾಮಯ್ಯನವರು ರಚಿಸಿದ ಅನೇಕ ಅರ್ಥಶಾಸ್ತ್ರ ಕುರಿತ ಕೃತಿಗಳು ಆರ್ಥಿಕ ತಜ್ಞರಪ್ರಶಂಸೆಗೆ ಪಾತ್ರವಾಗಿದೆ.
ವಿಶ್ವದಾದ್ಯಂತ ಅನೇಕ ಅರ್ಥಶಾಸ್ತ್ರದ ಬಗೆಗಿನ ಸಮ್ಮೇಳನ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಅನುಭವ ಪಡೆದುಕೊಂಡಿರುವ ಡಾ. ಪುಟ್ಟಸ್ವಾಮಯ್ಯ ನವರು ವಿಶ್ವಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಕರ್ನಾಟಕದಲ್ಲಿ ಕೈಗೊಂಡ ರೇಷ್ಮೆ ನಿಯಂತ್ರಿತ ಮಾರುಕಟ್ಟೆ, ಡಿ. ಪಿ.ಎ.ಪಿ ಮುಂತಾದ ಯೋಜನೆಗಳ ರೂಪುರೇಷೆ ತಯಾರಿಸಿದವರು.
ಕರ್ನಾಟಕ ಯೋಜನಾ ಆಯೋಗದ ಸದಸ್ಯರಾದ ಡಾ. ಪುಟ್ಟಸ್ವಾಮಯ್ಯನವರು ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.