ಅಂಕುಸದರಳಿನ ಸಂಪಗೆಯ ಹುವ್ವಿನ ಕಂಪು! ಇತ್ತಲಿತ್ತ ಬಿಜಯಂಗೈಯದಿರು ಶಿವನೆ! ಅರಿಯಾ ಮಗನೆ! ಮನೆಯ ಮಲ್ಲಯ್ಯ ನಿನಗೆಂದು ಬಂದುದುನು. ನೀವು ಭಕ್ತರಂಗಳದಲ್ಲಿ ಆಡುವ ತೊತ್ತು ವೇಶಿಯ ಮಗನೆಂದು ಬಂದಿರಿ ಶಿವನೆ! ಕಪಿಲಸಿದ್ಧಮಲ್ಲಿಕಾರ್ಜುನ/1 |
ಅಂಗ ಅಂಗದಲ್ಲಿ ಎನ್ನ ಅಂಗವಿಸದಂತೆ ಇರಿಸಯ್ಯಾ ಅಯ್ಯಾ ಸಂಗ ಸಂಗಸುಖದಲ್ಲಿ ಬಳಸದೆ, ಅಂಗವನೆ ಈಯಯ್ಯಾ ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲಿನಾಥಯ್ಯಾ ನಿಮ್ಮ ಸಂಗವ ಹಿಂಗದಂತಿರಿಸು./2 |
ಅಂಗ ಲಿಂಗ ಒಂದೆಂದ ಬಳಿಕ ಅಂಗ ಕೆಟ್ಟು ಲಿಂಗ ಉಳಿಯಿತ್ತು, ನೋಡಾ. ಅಂಗ ನಿರ್ವಯಲಾದಲ್ಲಿ ಲಿಂಗ ಭವಿಯಾದುದು ನೋಡಾ. ಅಂಗ ಲಿಂಗ ನಿರ್ವಯಲಲ್ಲಡಗಿಸಬಲ್ಲಡೆ, ಭಕ್ತನೆಂಬೆ ಮಹೇಶನೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನನವನೆ ಎಂಬೆ ನೋಡಾ, ಅಮುಗಿದೇವಾ/3 |
ಅಂಗ ಲಿಂಗ್ವ ಒಂದಾದ ಬಳಿಕ [ಅಂ]ಗೇಂದ್ರಿಯಂಗಳಾಚರಿಸಲಾಗದು. ಅಂಗೇಂ್ರಯಂಗಳು ಹೋಗಿ ಲಿಂಗೇಂದ್ರಿಯಂಗಳಾಗಿ ಆಚರಿಸುವುದು. `ಘೃತೋ ಭೂತ್ವಾ ಕಥಂ ಕ್ಷೀರಂ ಭವತ್ಯೇವಂ ವರಾನನೇ’ ಎಂಬಾಗಮೋಕ್ತಿ ಪುಸಿಯಾಯಿತ್ತೆ? ಆಗಿ ಆಚರಿಸಿದಡೆ ಭವ ಹಿಂಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./4 |
ಅಂಗಕ್ಕೆ ಕೊಡುವ ಭೋಗಂಗಳ ಲಿಂಗಕ್ಕೆ ಕೊಟ್ಟು ನೋಡಿರಯ್ಯಾ. ಅಂಗಕ್ಕೆ ಕೊಟ್ಟ ಭೋಗಂಗಳು ಲಿಂಗಂಗಳಾದವು. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ಭೋಗಂಗಳು ಲಿಂಗಭೋಗಂಗಳು./5 |
ಅಂಗಕ್ಕೆ ಭೋಗವ ಕೊಟ್ಟವರ ನೋಡಿದೆನಲ್ಲದೆ, ಲಿಂಗಕ್ಕೆ ಕೊಟ್ಟವರ ನೋಡಲಿಲ್ಲ, ಲಿಂಗಕ್ಕೆ ಷೋಡಶೋಪಚಾರಂಗಳ ಕೊಟ್ಟವರ ನೋಡಿದೆನಲ್ಲದೆ,ಮನವ ಕೊಟ್ಟವರ ನೋಡಲಿಲ್ಲ, ಮನವ ಕೊಟ್ಟವರ ನೋಡಿದೆನಲ್ಲದೆ, ಮನ ಲಿಂಗವಾದವರ ನೋಡಲಿಲ್ಲ, ಕಪಿಲಸಿದ್ಧಮಲ್ಲಯ್ಯಾ/6 |
ಅಂಗಕ್ಕೆ ಲಿಂಗೋಪದೇಶ, ಮನಕ್ಕೆ ಮಂತ್ರೊಪದೇಶವೆ ಘನವೆಂದು ನಂಬಿದೆನಯ್ಯಾ, ನಂಬಿದೆನಯ್ಯಾ. ಈ ಎರಡರ ಬೋಧೋದ್ಗಾರಕ್ಕೆ ಚೆನ್ನಬಸಣ್ಣನೆ ಘನಗುರು, ಘನಲಿಂಗ, ಘನಜಂಗಮವೆಂದು ನಂಬಿದೆನಯ್ಯಾ. ಇದನಲ್ಲೆಂದಡೆನ್ನಗುಣವೆನ್ನನೆ ಸುಡಲೀಯದೆ, ಅಲ್ಲಯ್ಯಾ, ಕಪಿಲಸಿದ್ಧಮಲ್ಲಯ್ಯಾ?/7 |
ಅಂಗದಂತೆ ಲಿಂಗ, ಲಿಂಗದಂತೆ ಅಂಗವಾದ ಬಳಿಕ ಅಂಗದಂತೆ ಲಿಂಗೈಕ್ಯ ಲಿಂಗದಂತೆ ಅಂಗೈಕ್ಯ. ಮನವೆ ಲಿಂಗ, ಲಿಂಗವೆ ಮನವಾದ ಬಳಿಕ, ಮಾತು ಮಾತುಗಳೆಲ್ಲ ಹೊಳ್ಳಾದ ಕಾರಣ ಮಾತೇ ಲಿಂಗೈಕ್ಯ :ಲಿಂಗೈಕ್ಯವೆ ಸ್ವರ! ಶಬ್ದಸಂದಣಿಗಿನ್ನು ತೆರಹುಂಟೆ? ಕಪಿಲಸಿದ್ಧಮಲ್ಲಿನಾಥಯ್ಯಾ, ಇನ್ನು ನಿಮ್ಮ ದೇವರೆಂದು ಅರಸಲುಂಟೋ ಇಲ್ಲವೋ ಎಂಬುದನು ತಿಳಿಹಿಕೊಡಾ ಅಯ್ಯಾ/8 |
ಅಂಗದಲ್ಲಿ ಲಿಂಗ! ಆ ಲಿಂಗ ಧ್ಯಾನದಲ್ಲಿಪ್ಪ ಒಡಲೊಡವೆ ಒಡೆಯರಿಗೆಂಬ; ಮಾಡಿ ಮನದಲ್ಲಿ ಹೊಳೆಯದೆ ಬಾಳೆ ಫಲದಂತಿಪ್ಪ ಮಾತಿನ ಬಟ್ಟೆಗೆ ಹೋಗದ; ಸೂತಕಶ್ರುತವ ಕೇಳದ; ಸದ್ಭಕ್ತರ ನೆನವುದೆ ಮಂತ್ರವಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ./9 |
ಅಂಗನೆಯರು ಮೂವರ ಸಂಗವ ಮಾಡಿದ ಕಾರಣ ಇತರ ಸಂಗಕ್ಕೆ ಸಮನಿಸದಾದೆ. ಅಂಗನೆಯ ಮೂವರನೊಂದು ಮಾಡಿ ಕೂಡಿದಡೆ ಅಂಗ ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನ./10 |
ಅಂಗಲಿಂಗಸಂಬಂಧಿಯಾದ ಬಳಿಕ, ಗುರುವಿನನುಮತದಿಂದ ಸ್ವಾನುಭಾವಲಿಂಸಂಬಂಧಿಯಾದ ಬಳಿಕ, ಪ್ರಾಣನಿರ್ಪ ನೆಲೆಯನರಿ. ಆ ಲಿಂಗಮಜ್ಜನೋದಕದಿಂದ ನಿನ್ನ ಕಾಯಶುದ್ಧಿ; ಆ ಲಿಂಗಪ್ರಸಾದೋದಕ ನಿನ್ನ ಪರವಪದವು. ಇಂತು ಪಾದೋದಕತ್ರಯದಲ್ಲಿ ಸುಖಿಯಾಗಿ , ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ನಿತ್ಯನಾಗು ಸಂದೇಹವಿಲ್ಲದೆ./11 |
ಅಂಗವ ಧರಿಸಿದ ಯೋಗಿಗೆ ಅಂಗನೆಯರು ಂಗದ ರಾಣಿವಾಸ. ಅಂಗವ ಧರಿಸಿದ ಭೋಗಿಗೆ ಕಾಷಾಯಾಂಬರಧಾರಿಗಳು ರುದ್ರಗಣಂಗಳು. ಅಂಗವ ಧರಿಸಿದ ಜೀವಜಾಲವು ಕಪಿಲಸಿದ್ಧ ಮ್ಲಕಾರ್ಜುನನೆಂದು ನಂಬಿದೆ ನೋಡಾ, ಗುರುವೆ ಚೆನ್ನಬಸವಣ್ಣನ/12 |
ಅಂಗವ ಬೆರಸದ ಲಿಂಗ ಪ್ರಾಣವ ಬೆರಸುವ ಪರಿಯೆಂತೊ? ಬೆನಕನ ತೋರಿ ಬೆಲ್ಲವ ಮೆಲುವಂತೆ ಇಷ್ಟಂಗವ ತೋರಿ ಹೊಟ್ಟೆಯ ಹೊರೆವರು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ದೂರ ನೀ ಹೊತ್ತೆ ; ಸೂರೆಯನಾರಿಕೆ ಕೊಂಡರು. /13 |
ಅಂಗವ ಮರೆವನ್ನಕ್ಕರ, ಲಿಂಗಾ, ನಿಮ್ಮ ಚೆಲುವ ಕಂಗಳು ತುಂಬಿ ನೋಡುತ್ತಲೆಂಪ್ಪೆನೊ! ಪರಿಪರಿಯ ನೋಟದಿಂದ ಹರುಷವನೈದಿಕೊಂಡು ಪರಮೇಕಾಂತದೊಳೆಂದಿಪ್ಪೆನೊ! ವರಗುರು ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣ ಪ್ರಭುವಿನ ಕರುಣವೆಂದಪ್ಪುದೊ!/14 |
ಅಂಗವರಿತು ನಿಂದವಂಗೆ ಜಗದ ಹಂಗಿನಲ್ಲಿ ಸಿಕ್ಕಿ ಜಂಗುಳಿಗಳ ಕೂಡದೆ ಲಿಂಗವೇ ಅಂಗವಾಗಿ ನಿಂದುದು ಕಪಿಲಸಿದ್ಧಮಲ್ಲಿಕಾರ್ಜುನಂಗವು ತಾನಾದುದ/15 |
ಅಂಗವಸ್ತ್ರವನುಟ್ಟುಕೊಂಡಳವ್ವೆ ಕಾಳಿಗೆವಟ್ಟೆಯ ಕುಪ್ಪಸವ ತೊಟ್ಟುಕೊಂಡಳವ್ವೆ ಕಣ್ಣ ಬಟ್ಟಂಬಳೆಯ ಬೊಟ್ಟನಿಟ್ಟುಕೊಂಡಳವ್ವೆ ತನ್ನುರವರದ ಕುಚದ ಮೇಲೆ ತೊಟ್ಟಿಲ್ಲದ ಮಣಿಯ ಸರವ ಇನಿಸುವ ಸಿಂಗಾರವ ಮಾಡಿ ಒಪ್ಪಿದಾಕೆಯನರಸುವನವ್ವ! ಕಪಿಲಸಿದ್ಧಮಲ್ಲಿನಾಥಯ್ಯಾ!/16 |
ಅಂಗವಳಿದು ನಿಂದವನೆಂದು ನಾನರಿಯೆ; ಘನಲಿಂಗದಲ್ಲಿ ಸಲೆಸಂದವನೆಂದು ನಾನರಿಯೆ; ಆವ ವೇಷದಲ್ಲಿ ಬಂದು ನಿಂದ ಠಾವನರಿಯೆ; ಕ್ರೋಧವೆಂಬ ಸಂಸಾರದ ಸಾಗರದಲ್ಲಿ ಸಾಧನೆಯ ಮಾಡಲಾಗಿ ಪ್ರಭುದೇವರ ಸುಳುಹು ಅಘಟಿತವಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ./17 |
ಅಂಗವಿಸದಿರು ಇನ್ನು ಹಿಂಗಿಹೋಗೆಂದೆನುತ ಮಂಗಳಾತ್ಮಕ ನುಡಿದ ಗುರುಕರುಣದಾ ಅಂಗವಿಸದಿರು ಎಂದನಂಗಹರ ಪ್ರಭುರಾಯ ಬಂದು ನೂಕಿದನೆನ್ನನೇಡಿಸುವ ಮಾಯೆಯನು. ಮಂಗಳಾತ್ಮಕ ಕಪಿಲಸಿದ್ಧಮಲ್ಲೇಶ್ವರನೆ ಲಿಂಗ, ನಿಮ್ಮನು ಅರಿವೆ; ಮಾಯೆಯ ಗೆಲುವೆ ಪ್ರಭುವಿನಂದದಲಿ./18 |
ಅಂಗವಿಸನನ್ಯಕ್ಕೆ ಸಂಗಮಾಡನು ತತ್ವ ಯೆಂಬ ಮಠಕವನು ತಾನಪ್ರಮಾಣ ಮಂಗಳಾತ್ಮನ ತೆರಹು ಹಿಂದಿಹ ಸೀಮೆಯ ತಂದರುಪಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ./19 |
ಅಂಗವಿಸನನ್ಯಕ್ಕೆ ಹಿಂಗಿಹ ಮಾಯಕ್ಕೆ ಸಂದ ಸುಖವೆ ಶಿವನ ಅಂಘ್ರಿಗಾಗಿ, ಮಂಗಳ ಉರುತರ ಬೆಳಗು ಪ್ರಕಾಶಿಸುವ ನಿಸ್ಸಂಗ ಗುರುವು ಚೆನ್ನಬಸವಣ್ಣನು ಕಪಿಲಸಿದ್ಧಮಲ್ಲಿಕಾರ್ಜುನ/20 |
ಅಂಗವೆಂದಡೆ ಅಜ್ಞಾನ, ಲಿಂಗವೆಂದಡೆ ಸುಜ್ಞಾನ. ಲಿಂಗವಿಡಿದು ಆಚರಿಸುವುದಲ್ಲದೆ ಅಂಗವಿಡಿದು ಆಚರಿಸಬಾರದು, ಕಪಿಲಸಿದ್ಧಮಲ್ಲಿಕಾರ್ಜುನಾ./21 |
ಅಂಗವೇ ಲಿಂಗವಾಗಿಹೆನೆಂಬವನ ಭಾವ ಇದರಲ್ಲೇ ನಿಶ್ಚಯ ನೋಡಾ, ಮನವೆ. ಸ್ತುತಿ ನಿಂದೆಗಳಲ್ಲಿ ಹರ್ಷರೋಷಗಳಿಲ್ಲದಿರಬೇಕು. ನೀಚಾನೀಚ ಗುಣವ ನೋಡದೆ ನಮ್ಮ ಭಾಷಾವಂತನಾಗಬೇಕು. ಸರ್ವ ಜೀವಿಗಳ ತನ್ನಂತೆ ತಿಳಿದು ನೋಡಬೇಕು. ಸಂಶಯಾಸಂಶಯವಳಿದು ನಿಶ್ಚಿಂತನಾಗಬೇಕು. ಆಕಾಶದ ಬೆಳಗಿನ ಬೆಳಗ ನೋಡಿ ಬೆಳಗುಮಯನಾಗಬೇಕು ನೋಡಾ. ಎಲೆ ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./22 |
ಅಂಗಾಂಗ ಒಂದಾದ ಬಳಿಕ ಭಕ್ತನ ನೋಡಲ್ಲ. ಅಂಗಾಂಗ ಒಂದಾದ ಬಳಿಕ ಜಂಗಮವ ನೋಡಲ್ಲ. ಅಂಗಾಂಗ ಒಂದಾದ ಬಳಿಕ ಏನೆಂದರಿಯಲಿಲ್ಲವು ನೋಡಯ್ಯಾ. ಎಮ್ಮಯ್ಯ ಕಪಿಲಸಿದ್ಧಮಲ್ಲಯ್ಯ ಎಲ್ಲರಲ್ಲಿಯೂ!/23 |
ಅಂಗಾಲಕೋಪವ ಮನಕ್ಕೆ ತಂದಿಪ್ಪವನ, ಆ ಮನದ ಕೋಪವ ಹೃದಯದಲ್ಲಿಟ್ಟುಕೊಂಡಿಪ್ಪವನ ಅವನ ಪಾದಕ್ಕೆ ಎನ್ನ ನೊಸಲ ತಂಪ ತಂದು ತಳಿವೆ, ಎನ್ನ ನೊಸಲ ಅಮೃತದಿಂದ ಅವನ ಮನವ ತಿಳುಹುವೆ, ಕಪಿಲಸಿದ್ಧಮಲ್ಲಿಕಾರ್ಜುನನ/24 |
ಅಂಗೈಯ ನೋಟದೊಳು ಕಂಗಳು ನಟ್ಟು, ಕಂಗಳ ತೇಜ ಲಿಂಗದಲ್ಲರತು, ಲಿಂಗದ ಪ್ರಭೆಯೊಳಗೆ ಅಂಗವೆಲ್ಲ ಲೀಯವಾಗಿ, ಸಂಗನಿಸ್ಸಂಗವೆಂಬ ದಂದುಗ ಹರಿದು, ಹಿಂದು ಮುಂದೆಂಬ ಭಾವವಳಿದು ನಿಂದ, ನಿಜದ ನಿರಾಳದಲ್ಲಿ ಪ್ರಾಣ ಸಮರತಿಯಾಗಿಪ್ಪ ಕಪಿಲಸಿದ್ಧಮಲ್ಲಿನಾಥನಲ್ಲಿ, ಪ್ರಭುದೇವರ ಶ್ರೀಪಾದಕ್ಕೆ `ನಮೋ ನಮೋ’ ಎಂದು ಬದುಕಿದೆ ಕಾಣಾ, ಚೆನ್ನಬಸವಣ್ಣಾ./25 |
ಅಂಗೈಯಲ್ಲಿ ಪೂಜಿಸಿದ ಫಲ ಲಿಂಗಯ್ಯ ಕೊಡನೆಂದು ಮರುಗರಾ ಮನವೆ. ಅಂಗೈಯಲ್ಲಿ ಫಲ ಅಂಗ ಲಿಂಗ ನೋಡಿದಂತೆ ನೋಡಾ ಮನವೆ. ಅಂಗೈಯ ಫಲ ಲಿಂಗಯ್ಯನಾಗರೆ ಪೂಜಿಸುವರೆ ಪ್ರಮಥರು? ನೋಡಾ ಮನವೆ. ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ ಪೂಜಿಸಿ ಬದುಕು ಮನವೆ./26 |
ಅಂಗೈಯೊಳಗಣ ಅಂಗಜಾರಿಗೆ, ಅಂಗಜನ ಸ್ನೇಹಿತರ ಪಾದಾಂಬುವನೆರೆವನ ಅಂಗ ಚಾಂಡಾಲನಂಗ. ಆತನ ಗೃಹ ಶ್ವಪಚನ ಮನೆ, ಆತನ ಸಂಗ ಮದ್ಯಪಾನ ಸಂಗ. ಆತನ ವಾಕ್ಯ ನಿಶಿತಾಸ್ತ್ರ, ಆತನ ಹೊದ್ದರವೆ ಸತ್ತ ನಾಯ ಕೊಳೆದೊಗಲು. ಆತನ ಗುರು ನರ, ಆತನ ಲಿಂಗ ಶಿಲೆ. ಆತನ ಅಧಿದೈವ ಪಿಶಾಚಿ, ಆತನ ವಿದ್ಯೆ ರಾಕ್ಷಸವಿದ್ಯೆ! ಇದು ತಪ್ಪದು, ಇದು ತಪ್ಪದು! ಇದು ತಪ್ಪೆನ್ನದು! ಇದು ಪುಸಿಯಾದಡೆ, ಮೂಗ ಕೊಯ್ ಬಾರಾ, ಕಪಿಲಸಿದ್ಧಮಲ್ಲಿಕಾರ್ಜುನಾ./27 |
ಅಂಗೈಯೊಳಗಣ ಲಿಂಗಮ್ಕರ್ೂಯ ಕಂಗಳಲ್ಲಿಂಗಗೊಟ್ಟಡೆ, ತಿಂಗಳ ಸೂಡನಾದೆ ನೋಡಾ ಅಯ್ಯಾ. ಮಂಗಳಮೂರ್ತಿ ಗಂಗಾಜೂಟಾಂಗಮಯ ಕಪಿಲಸಿದ್ಧ ಮಲ್ಲಿಕಾರ್ಜುನಂಗ ಬೇರೆಂದರಿಯಲ್ಲ ನೋಡಾ, ನಿಜದ ನಿರ್ವಯಲಲ್ಲಯ್ಯನೆ./28 |
ಅಂಗೋದಕಂದ ಅಂಗರಕ್ಷಣಂಗಳ ಮಾಡುವೆ; ಲಿಂಗೋದಕಂದ ಸರ್ವಪವಿತ್ರವ ಮಾಡುವೆ; ಪ್ರಸಾದೋದಕಂದ ಪ್ರಾಣನ ನೆಲೆಯನರಿವೆ ಇಂತೀ ತ್ರಿವಿಧೋದಕಂದ ಶುದ್ಧನಹೆ, ಸಿದ್ಧನಹೆ, ಪ್ರಸಿದ್ಧನಹೆ, ಕಪಿಲಸಿದ್ಧಮಲ್ಲಿಕಾರ್ಜುನ ತಾನಹೆ/29 |
ಅಂಜನಗಾರನ ಕೈ ನಂಜುಗೊಂಡಿದೆ ಅಯ್ಯಾ. ಅಂಜನಗಾರ ಹರುಷವಾಗಲೆಂದು ಹರಸಿಕೊಂಡ ಹರಕೆ ಈಡೇರಿತ್ತೆನಗಿಂದು. ಕುಂಜರಂಗಳೆಂಟಂಜಿ ಕೆಲ ಸಾರಿದವು. ಅಂಜನವ ಬಲ್ಲ ನೀನೊಬ್ಬನಲ್ಲದಿಲ್ಲ ಕಾಣಾ, ಕಪಿಲಸಿದ್ಧಮಲ್ಲಿನಾಥ./30 |
ಅಂಜನದಗಿರಿ ರಂಜಿಸುತ್ತಿದೆ ಆಯತವಿಡಿದು ಸುಖವ ಕಂಡು ಅನುಭವದವಳಿಗೆ ಮಾಣಿಕ್ಯ ವರ್ಣವನೇಕೀಕರಿಸಿ ನೋಡಲು ಅನುವಾಯಿತ್ತಯ್ಯ ಅಂಜನದ ಹತ್ತೆಸಳಪೀಠ. ಆ ಪೀಠದಲ್ಲಿ ಭೃತ್ಯನೆಂಬವ ನಿಂದು ಲಿಂಗವಿಡಿದು ನಡೆಯೆ ಉರಿ ನಂದಿ ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯ, ಚೆನ್ನಬಸವಣ್ಣನಿಂದ ಬದುಕಿದೆನು./31 |
ಅಂತರಂಗದಲ್ಲಿ ನಿಮ್ಮ ನೋಡುವನಲ್ಲ, ಕೇಳು ಕಂಡಾ, ಎಲೆ ಅಯ್ಯಾ. ಬಹಿರಂಗದಲ್ಲಿ ಬಳಸುವನಲ್ಲ, ಕೇಳು ಕಂಡಾ, ಎಲೆ ಅಯ್ಯಾ. ಸುಷುಮ್ನದಿ ಬಟ್ಟೆಯ ತುದಿಯನಡರಿ, ಸಾವಿರದಳದ ಮಂಟಪದಲ್ಲಿ ನಿಮ್ಮ ನೆಲೆಗಂಡಿಪ್ಪ ನೋಡಾ, ಕಪಿಲಸಿದ್ಧಮಲ್ಲಿನಾಥಯ್ಯಾ./32 |
ಅಂತರಂಗದಲ್ಲಿಹ ಲಿಂಗ ಬಹಿರಂಗದಲ್ಲಿ ಲಿಂಗವಾಯಿತ್ತೆಂಬುದರಿಯೆ. ಬಹಿರಂಗದಲ್ಲಿಯ ಲಿಂಗ ಅಂತರಂಗದಲ್ಲಿ ಲೀಯವಾಗುವ ಕಾರಣವರಿಯೆ. ಅಂತರಂಗ ಬಹಿರಂಗವೆಂಬೆರಡರ ಸಂಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬುದರಿಯೆ; ಏನೆಂದರಿಯೆ./33 |
ಅಂತರಾತ್ಮ ಪರಮಾತ್ಮ ಭೂತಾತ್ಮವೊಳಗಾದ ಆಧ್ಯಾತ್ಮಿಕೇಳಾ: ನೀನು ಯೋಗದ ಪ್ರಮಾಣ ಬಲ್ಲ ಅಯ್ಯನು ಶ್ರೋತ್ರೇಯ ಮನೆಯಲ್ಲಿ, ನೇತ್ರೆಯ ಜಿಹ್ವೆಯಲ್ಲಿ ಆನಂದ ಪಾತ್ರೆಯಲ್ಲಿ ಸಂಗತಿ ಸದಾಚಾರ ನಿಷ್ಕಳ ಪರಮಸೀಮೆ ಎಂಬ ಪಾತ್ರೆಯಲ್ಲಿ ಪಂಚಬ್ರಹ್ಮವನೊಡಗೂಡಿದ ಪಂಚಸ್ತ್ರೀಯರಿಗೆ ಪ್ರಸಾದವನಿಕ್ಕುವಾಗ ಪ್ರಸನ್ನತೆಯೆಂಬ ಪ್ರಸಾದವನನುಗ್ರಹಿಸಲರಿಯದೆ ಇದ್ದ ಕಾರಣ ಅಂತರಿಸಿದೆಯಯ್ಯಾ ಆದ್ಯಂತಪ್ರಸಾದವ ಕೊಂಡ ಕಾರಣದಲ್ಲಿ ಆನು ನೀನಾದೆ; ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಸಂದಳಿದೆ./34 |
ಅಂತಹರಂಘ್ರಿಸಲಿಲ ಇಂತಹರಿಗೆ ನೋಡಾ. ಅಂತರಿತಿಂತು ಕಾಂತಿಸಿದಡೆ, ಕಂತುಹರ ಕಪಿಲಸಿದ್ಧಮಲ್ಲಿಕಾರ್ಜುನ ಅಂತಕರಿಗಾಜ್ಞೆಯ ಮಾಡನೆ, ಕಲ್ಲಯ್ಯಾ./35 |
ಅಂತುಸದರಳಿನ ಸಂಪಗೆಯ ಹೂವಿನ ಕಂಪು ಇತ್ತಲೆತ್ತ ಬಿಜಯಂಗೈದಿರಿ ಶಿವನೆ, ಅರಿಯಾ ಮಗನೆ, ಮಲೆಯ ಮಲ್ಲಯ್ಯ ನಿನಗೆಂದು ಬಂದುದನು. ನೀವು ಭಕ್ತರಂಗಳದಲಾಡುವ ತೊತ್ತಿನ ಓಹಿಯ ಮಗನೆಂದು ಬಂದಿರಿ ಶಿವನೆ, ಕಪಿಲಸಿದ್ಧಮಲ್ಲಿಕಾರ್ಜುನ/36 |
ಅಂದಿನ ಪರಿ ಇಂದಿನ ಪರಿ ಬೇರೆ ಕಂಡೆಯಾ, ಮನವೆ. ಅಂದಿನ ವಿಷ ಇಂದಮೃತವಾಯಿತ್ತು ಕಂಡೆಯಾ, ಮನವೆ. ಅಂದಿನ ದೇವಾಂಗನೆ ಇಂದು ನಿಮಗೆ ಚಿಚ್ಛಕ್ತಿಯಾಯಿತ್ತು ಕಂಡೆಯಾ, ಮನವೆ. ಅಂದಿನವ ನೀನಿಂದು ಕಪಿಲಸಿದ್ಧಮಲ್ಲಿಕಾರ್ಜುನನೆಂದು ನಂಬು ಕಂಡೆಯಾ, ಮನವೆ./37 |
ಅಂದಿನವರು ನಡೆದ ದಾರಿ ಇಂದಿನವರು ನಡೆಯರು. ಇಂದಿನವರು ನಡೆದ ದಾರಿ ಅಂದಿನವರು ಕಾಣರು. ಅಂದಂದೆಂಬ ದ್ವಂದ್ವ ಭೇದವನೆಂದೆಂದು ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ/38 |
ಅಂದು ಅನಾಯಲ್ಲಿ ತಂದು ಬಿತ್ತಿದ ಬೀಜ ಮುಂದಕ್ಕೆ ಮೂಲ ನಾಶವೈ. ಸಾಧಿಸುವ ನಿಜವ ಮೂಲನಾಶವ ಮಾಡಿದರೆ ತಾನೆ ಫಲ ಕಪಿಲಸಿದ್ಧಮಲ್ಲಿಕಾರ್ಜುನ./39 |
ಅಂದು ಅರಿಯಲಾದ ಆನಂದ ರೂಪಿನ ನಿಜವನು ತಂದೆನ್ನ ಕರಕ್ಷೇತ್ರದಲ್ಲಿ ಬಿತ್ತಿದ, ಸದ್ಗುರುಸ್ವಾಮಿ. ಕೊಂಬು ಬೇರಾಗಿ ಬೇರು ಕೊಂಬಾಗಿ ಫಲಂಗಳಾರಾದವು. ಆ ಫಲ ಗುರುವಿಂಗೊಂದು ಲಿಂಗಕ್ಕೊಂದು ಉಳಿದ ನಾಲ್ಕ ಜಂಗಮಕ್ಕಿತ್ತು ಹಿಂದು ಮುಂದುಗೆಟ್ಟ ಕಪಿಲಸಿದ್ಧಮಲ್ಲಿಕಾರ್ಜುನ/40 |
ಅಂದು ಬಸವಣ್ಣ ಬಂದು ಜರಿದು ಹೋದುದ ಮರೆದೆನೆ ಆ ನೋವ! ಜರಿದುದೆ ಎನಗೆ ದೀಕ್ಷೆಯಾಯಿತ್ತು! ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಬಸವಣ್ಣನೆನ್ನ ಪರಮಾರಾಧ್ಯ!/41 |
ಅಂದೊಮ್ಮೆ ಜಗನ್ನಾಥ ಭಸ್ಮವ ತೊಡೆದು ಕೈಯ ಬಿರ್ಚಿದರೆ ಕೇಳಿರಣ್ಣ! ಅಣ್ಣ! ಅಣ್ಣ ಕೇಳಿರಣ್ಣ! ಬ್ರಹ್ಮ ತಾ ಮರದೊರಗಿ ವಿಷ್ಣು [ತಾ] ಜುಮ್ಮೆಂದು ವೇದಗಳು ಮತಿಗೆಟ್ಟು ದೆಸೆಗೆ ಬಾಯ ಬಿಟ್ಟವಯ್ಯ! ಎನಿಸೆನಿಸು ಲೋಕಂಗಳು ಅನಿಸು ಬಾಯ ಬಿಟ್ಟವು! ಕೇಳಿರಣ್ಣ! ಅಣ್ಣ! ಅಣ್ಣ! ಕೇಳಿರಣ್ಣ! ತಮ್ಮ ಬಲ ಅವಕುಂಟು ಕೇಳಿರಣ್ಣ! ಆಯುಷ ತನಿಗೆನಿಸೆಂಬುದವೈ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಕೈಯ ಸಬುದಕಣ್ಣಾ/42 |
ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು ಅನುಭವದವಳಿಗೆ ಕೆಂಪುವರ್ಣ ಸುಖವನೇಕೀಕರಿಸಿ ನೋಡಲು ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು ಪರಿಣಾಮವಿಡಿದು ನಡೆಯೆ, ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನ ಧರ್ಮಂ ಬದುಕಿದೆನು/43 |
ಅಂರ್ತಲಿಂಗ ಬಾಯಿ ತೆರೆದ ಬಳಿಕ ಬರ್ಹಿಲಿಂಗದ ಪೂಜೆ ಮೋಟನ ಮೌಳಿಯಂತೆ. ಅಂರ್ತಲಿಂಗ ಬರ್ಹಿಲಿಂಗ ಬೇರಾದ ಬಳಿಕ ಕಪಿಲಸಿದ್ಧಮಲ್ಲಿಕಾರ್ಜುನ ಒಲಿಯನಂತೆ!/44 |
ಅಕಾರದ ಮೂರ್ತಿ ವರ್ಣಿಸಿಹೆನೆಂದಡೆ ತೀರದು. ನಿರಾಕಾರದ ಮೂರ್ತಿ ವರ್ಣಿಸಿಹೆನೆಂದಡೆ ಮೊದಲಿಗೆ ತೀರದು. ತೀರದು ಎಂದು ಶಬ್ದಮುಗ್ಧವಾಗಿರಬಾರದು, ಬಾರದು; ಕಪಿಲಸಿದ್ಧಮಲ್ಲಿಕಾರ್ಜುನ ಎನ್ನಬಹುದು ಎನ್ನಬಹುದು ಮನವೆ./45 |
ಅಕಾರಪ್ರಣವದಿಂದ ಸ್ಥೂಲದೇಹ ದಗ್ಧವಾಯಿತ್ತು; ಉಕಾರಪ್ರಣವದಿಂದ ಸೂಕ್ಷ್ಮದೇಹ ನಿರ್ಮಲವಾಯಿತ್ತು; ಮಕಾರಪ್ರಣವದಿಂದ ಕಾರಣದೇಹ ಕರ್ಮ [ಬೀಜ]ವಳಿಯಿತ್ತು. ಅಕಾರದಲ್ಲಿ ಜಾಗೃತಿ, ಉಕಾರದಲ್ಲಿ ಸ್ವಪ್ನದಲ್ಲಿ ಮಕಾರದಲ್ಲಿ ಸುಷಪ್ತ್ವಿ.] [ಜಾಗ್ರ] ಸ್ವಪ್ನದಲ್ಲಿದ್ದ ರೂಹು ಸುಷುಪ್ತಿಯಲ್ಲಿಲ್ಲ. ತ್ರಿವಿಧಾವಸ್ಥೆಯಲ್ಲೊಂದಾಗದ ಮಾತ್ರ ಪ್ರಾಣಲಿಂಗಿ ಆತನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./46 |
ಅಕಾರವದು ಇಷ್ಟಲಿಂಗ, ಉಕಾರವದು ಪ್ರಾಣಲಿಂಗ, ಮಕಾರವದು ಭಾವಲಿಂಗ. ಭಕ್ತಂಗಾಗಲಿ ಷಟ್ಸ್ಥಲಬ್ರಹ್ಮಿಯಾದವಂಗಾಗಲಿ, ಲಿಂಗತ್ರಯ ಪೂಜೆಯು ಬೇಕು. ಲಿಂಗತ್ರಯ ಪೂಜೆಯರಿತು ಮಾಡದವರ ಮನದೆರೆದು ಮಾತಾಡೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ./47 |
ಅಕಾರವದು ಸತ್ವ, ಉಕಾರವದು ರಜ, ಮಕಾರವದು ತಮ. ಅಕಾರವದು ಬ್ರಹ್ಮಜನಕ, ಉಕಾರವದು ವಿಷ್ಣುಜನಕ, ಮಕಾರವದು ರುದ್ರಜನಕ. ಅಕಾರವದು ಸೃಷ್ಟಿ, ಉಕಾರವದು ಸ್ಥಿತಿ, ಮಕಾರವದು ಲಯ. ಅಕಾರವದು ಪೀತ, ಉಕಾರವದು ಶ್ಯಾಮ, ಮಕಾರವದು ಶುಕ್ಲ. ಅಕಾರವದು ವಿಧಿ, ಉಕಾರವದು ವಿಧಾನ, ಮಕಾರವದು ಧ್ಯಾನ. ಅಕಾರವದು ಪಾತಾಳ, ಉಕಾರವದು ಮೃತ್ರ್ಯ, ಮಕಾರವದು ಸ್ವರ್ಗ. ಅಕಾರ ಉಕಾರ ಮಕಾರ ಮೂರರ ಏಕತ್ವವೆ ಓಂಕಾರ. ಆ ಓಂಕಾರವೆ ಆಶಕ್ತಿಯ ಗದ್ದುಗೆ. ಆ ಗದ್ದುಗೆಯೆ ಕಪಿಲಸಿದ್ಧಮಲ್ಲಿಕಾರ್ಜುನನ ಅರಮನೆ ನೋಡಾ./48 |
ಅಕ್ಕಟಾ ಅವನ ನೆನಹಿನ ಮನೆಯೊಳಗೆನ್ನ ನಿಲಿಸಿ ಅವನನೆ ಮೂಲ ನಾಶವ ಮಾಡಿರವ್ವಾ, ನೆನಹಿನ ಮನೆಯೊಳಗೆ ಅವನನೊಡಗೂಡಿ ಲೀಯವ ಮಾಡು ಕಪಿಲಸಿದ್ಧಮಲ್ಲಿನಾಥಯ್ಯನಾ./49 |
ಅಕ್ಕಟಾ ಎನಗೆ – ನಿನಗೆ ನೆರೆಗೆ – ಹೊರಗೆ ಹೇಳುವನಲ್ಲ ಕಂಡಯ್ಯ! ಅಯ್ಯ! ಹಾ! ಅಯ್ಯ! ಹೇಳಿದರಲ್ಲದೆ ತೋರಿದಲ್ಲದೆ ಕಾಬವನಲ್ಲ ಕಂಡಯ್ಯ. ಹಾ! ಅಯ್ಯ! ಎನ್ನ ಕಾಣದ ಕೇಳದ ಪ್ರಾಣಿಗೆ ಅನುಮಿಷನಾಗಿರಿಸೆನ್ನ ಕಪಿಲಸಿದ್ಧಮಲ್ಲಿನಾಥಯ್ಯ/50 |
ಅಕ್ಕಟಾ ತನು ನೀನೆಯೆಂಬ ನೀನು ನಾನೆಂಬ ಕಾನನದಲ್ಲಿ ಕಾಮಿಸಿದೆನು ಕರಣರಸ ಕಂಬನಿಯ ಕರಣಗುಣ ಸಂಗಮದ ಅನುನಯದಲೊಪ್ಪಿಪ್ಪ ತಾತ್ಪರ್ಯವಾ ಮನಸಿಜನ ಬಾಣಕ್ಕೆ ಒಳಗಾದ ಮಾನಸಗುರಿಗಳೆತ್ತ ಬಲ್ಲರೈ ಕಪಿಲಸಿದ್ಧಮಲ್ಲಿಕಾರ್ಜುನ/51 |
ಅಕ್ಷರತ್ರಯದ ಗುಂಡಿನಲ್ಲಿ ಸಕಲಾಕ್ಷರ ಮೂರ್ತಿ ಮನೆಯ ಮಾಡಿಕೊಂಡಿದೆ. ಅಕ್ಷರವರಿಯಬಾರದು; ಅರಿದ ಬಳಿಕ ಜನನ ಮರೆಯಬಾರದು; ಮರೆದ ಬಳಿಕ ಅಕ್ಷರದ ಧ್ಯಾನ ನೆಲೆಗೊಳಿಸಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./52 |
ಅಕ್ಷರತ್ರಯದಲ್ಲಿ ಆನಂದಬ್ರಹ್ಮದ್ಲ ಅಕ್ಷರತ್ರಯದಲ್ಲಿ ನಿತ್ಯರೂಪ ಅಕ್ಷರತ್ರಯವೆಂಬ ಆನಂದಬ್ರಹ್ಮದ ಅಕ್ಷರವು ಆರರಲ್ಲಿ ಭಕ್ತಿ ಶಕ್ತಿ ನಿತ್ಯಾಂಗನೆಯ ಹಸ್ತ ತತ್ವಮಸಿಯಿಂದತ್ತ ಭಕ್ತಿ ಕಾರಣ ಶಿವನು ಕಪಿಲಸಿದ್ಧಮಲ್ಲಿಕಾರ್ಜುನ./53 |
ಅಕ್ಷರವೈದರಿಮ್ಮೇಲೆ ಒಪ್ಪಿಪ್ಪೆ ನೀನು, ಶಿವ ಅಕ್ಷರಾಂಕನು ನೀನು, ಪೂರ್ವಕ್ಕೆ ಮೂರು ಅಕ್ಷರ ಆನತಂ ಮೇಲೆ ನೀನಯ್ಯಾ. ಅನಾದಿ ಮೂಲಶೂನ್ಯ ಕಪಿಲಸಿದ್ಧಮಲ್ಲಿನಾಥ ಆದಿಯಾಧಾರಕ್ಕೆ ಮೂಲ ನೀನು./54 |
ಅಗ್ನಿಯ ಮುಟ್ಟಿದ ಕಾಷ್ಠ ಇದ್ದಲಿಯಾಯಿತ್ತು ; ಇದ್ದಲಿಯದು ಕಾಷ್ಠವಾಗದು. ಭಕ್ತ ತಾನು ವಿರಕ್ತನಾದನು; ವಿರಕ್ತ ತಾನು ಭಕ್ತನಾಗನು. ಇದರಿರವ ಗುರು ಚೆನ್ನಬಸವಣ್ಣ ತೋರಿದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./55 |
ಅಗ್ನಿಯ ಸೋಂಕಿದಲ್ಲಿ ಕನಕದ ಕಲಂಕ ಹೋಯಿತ್ತು. ಜಲವ ಸೋಂಕಿದಲ್ಲಿ ದೇಹದ ಕಲಂಕ ಹೋಯಿತ್ತು. ಬಾಗೀರಥಿಯ ಸೋಂಕಿದಲ್ಲಿ ದೋಷ ದಗ್ಧವಾಗಿ ಹೋಯಿತ್ತು. ನಮ್ಮ ಮಲ್ಲಿಕಾರ್ಜುನನೆಂಬ ಲಿಂಗವ ಸೋಂಕಿದಲ್ಲಿ ಪ್ರಾರಬ್ಧತ್ರಯ ನಿವಾರಣವಾಗಿ ಹೋಯಿತ್ತು, ಕಂಡೆಯಾ ಬಾಚರಸಯ್ಯಾ./56 |
ಅಗ್ನಿಲಿಂಗವ ಬ್ರಾಹ್ಮಣ ಪೂಜಿಸಿದ; [ಧನರ್ುಲಿಂಗ]ವ ಕೃತಿಯ ಪೂಜಿಸಿದ; [ಧನ] ಲಿಂಗವ ವೈಶ್ಯ ಪೂಜಿಸಿದ; ಖಡ್ಗಲಿಂಗವ ರಾಜ ಪೂಜಿಸಿದ; ಧಾನ್ಯಲಿಂಗವ ಶೂದ್ರ ಪೂಜಿಸಿದ; ಪರ್ವತಲಿಂಗವ ಶೈವ ಪೂಜಿಸಿದ; ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಸಿದ್ಧರಾಮ ಪೂಜಿಸಿದ ನೋಡಾ, ಕೇದಾರ ಗುರುದೇವ./57 |
ಅಗ್ನಿಸ್ತಂಭವ ಬಲ್ಲೆವೆಂಬರಯ್ಯ! ಅನ್ನವನಿಕ್ಕುವರಯ್ಯ! ಜಲಸ್ತಂಭವ ಬಲ್ಲೆವೆಂಬರಯ್ಯ! ಅರವಟ್ಟಿಗೆಯನಿಕ್ಕುವರಯ್ಯ! ಖಡ್ಗಸ್ತಂಭವ ಬಲ್ಲೆವೆಂಬರಯ್ಯ! ಮರೆಹೊಕ್ಕರೆ ಕಾವರಯ್ಯ! ಇಂತೀ ತ್ರಿವಿಧಗುಣವ ಮೀರಿದವರು ದೇವರಿಗೆ ದೇವರಾಗಿಪ್ಪರು ಕಾಣಾ! ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವ./58 |
ಅಘವಿಧ್ವಂಸನನರ್ಚಿಸಿ[ಹೆ]ನೆಂದು ಹೋದಡೆ ಅಘವೆ ಪರಿವೇಷ್ಟಿಸಿತಯ್ಯಾ ಎನ್ನನು. ಇವನ ಹೇಂಗೆ ಕಳೆವೆನಯ್ಯಾ? ಇದ ಕಳವೆನಿನ್ನು ನಿನ್ನವರ ಸಂಗದಿಂದ; ಇದ ಕಳೆವೆ ನೀನು ಗುರುವಾಗಿ ಬಂದಡೆ. ಎನ್ನವರ ಸಂಗವಿಲ್ಲದೆ ಅಲ್ಲದಿದ್ದೊಡೆ ನಿನ್ನ ದೈವತ್ವದಿಂದ ಕಳೆದೆನೆಂದಡೆ ಎನ್ನ ಸುತ್ತಿ ಮುತ್ತಿ ಕಪಿಲಸಿದ್ಧಮಲ್ಲಿಕಾರ್ಜುನ/59 |
ಅಚೊತ್ತಿದಂತೆ ಒಚ್ಚತಗೊಂಡರು ಬಸವಣ್ಣ ಮೊದಲಾದ ಪುರಾತರೆಲ್ಲ. ಸೂರೆಗೊಂಡರಯ್ಯಾ ನಿಮ್ಮ ಪ್ರಸಾದ ಭಂಡಾರವ. ಅಲ್ಲಿಯ ಶೇಷವೆನಗಾದರೆ ಅವರಂತೆ ಆನಪ್ಪೆನು ಇಲ್ಲದಿದ್ದಡೆ ಮುನ್ನಿನಂತೆ ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./60 |
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವನರಿಯದ ಮೂಢರಿಗೆ ಷಡ್ವಿಧ ಲಿಂಗಾಂಗ ಪ್ರಸಾದ ಪಾದೋದಕವ ಹೇಳುವನೊಬ್ಬ ಪಾದೋದಕದ್ರೋಹಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./61 |
ಅಜನ ಕಲ್ಪಿತವಲ್ಲದ ಭಕ್ತಿ ವಿಷ್ಣುವಿನ ಕಲ್ಪಿತವಲ್ಲದ ಭಕ್ತಿ ರುದ್ರನ ಕಲ್ಪಿತವಲ್ಲದ ಭಕ್ತಿ ನಿನ್ನ ಕಲ್ಪಿತವಾಯಿತ್ತಯ್ಯಾ ಬಸವಾ. ನೋಟಕಾರರ ನೋಟಕ್ಕೆ ಸಿಕ್ಕಿದ ಭಕ್ತಿ ಕೂಟಕ್ಕೆ ಕೂಟವಾಯಿತ್ತಯ್ಯಾ ಬಸವಾ ಈ ಬೇಟದ ಭಕ್ತಿಯ ನಿಮ್ಮಿಂದ ಕಂಡೆನಯ್ಯಾ, ಬಸವ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./62 |
ಅಜಲೋಕದೊಳಗಿಪ್ಪ ಬಹುಪರಿಯ ಕುಸುಮಕ್ಕೆ ಬಂದು ಕರಂಗಳು ಬಂದು ಪೀಡಿಸುತ್ತಾ ಬಂಡುಂಬ ತುಂಬಿಯನು ಇಂಬಪ್ಪ ಕುಸುಮವನು ಸಂಭ್ರಮ ನುಂಗಿತಾ ಜ್ಯೋತಿ ಬಂದು ಜ್ಯೋತಿಯನು ಸೂಕ್ಷ್ಮ ಸಿಧ್ಧಿಯನು ಹಲವೆನಿಸಿ ರೀತಿಯಾದುದು ದೆಸೆಯ ಪ್ರಬಲಕಾಗಿ ಅಜಾತನ ರೀತಿವಿಡಿದವರೆಲ್ಲಾ ನಿತ್ಯರಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./63 |
ಅಜ್ಞಾನವೆನ್ನದು ಜ್ಞಾನ ನಿನ್ನದು, ಶಿವಯೋಗಿ ಸಿದ್ಧರಾಮಯ್ಯ ತಮಂಧದ ಬಿದ್ದಿದ್ದೇನೆ ಮುದ್ದ ಸಲಿಸೂದು ಕಪಿಲಸಿದ್ಧಮಲ್ಲಿಕಾರ್ಜುನಾ./64 |
ಅಜ್ಞಾಸಿದ್ಧನನರ್ಚಿಸುವ ಆನಂದಮಯ ಶರಣರ ಧ್ಯಾನ ಮೌನ ಸಮಾಧಿಗಳ[ದ್ಹೆಂ]ಗೆಂದೊಡೆ; ಪ್ರಸಾದವ ಬಯಸಿ ಪರವನರಿಯಹುದೆ ಧ್ಯಾನ; ಶಿವನಲ್ಲದೆ ಅತಃಪರವಿಲ್ಲೆಂದು ಅನ್ಯರ ಕೂಡೆ ನುಡಿಯಪ್ಪುದೆ ಮೌನ; ವ್ರತವಾರರಲ್ಲಿ ತದ್ಗತವಾಗಿಪುದೀಗ ಸಮಾಧಿ, ಇಂತಪುದೀಗ ಶಿವಯೋಗ. ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ; ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./65 |
ಅಟ್ಟಿಮುಟ್ಟಿ ಆತುರದಿಂದ ಹಿಡಿದು ಮುಟ್ಟಿ ನಂಬಲರಿಯದ ಕಷ್ಟರನೇನೆಂಬೆನಯ್ಯಾ. ನಿಶ್ಚಯವಿದೆ ಲಿಂಗ; ಸತ್ಯವಿದೆ ಪ್ರಸಾದ; ಪ್ರಸಿದ್ಧವಿದೆ ಜಂಗಮ; ಇನಿತನರಿಯದವರ ಹೊದ್ದಿಸದಿರಯ್ಯ ಎನ್ನತ್ತಲಿ, ಕಪಿಲಸಿದ್ಧಮಲ್ಲಿಕಾರ್ಜುನ./66 |
ಅಟ್ಟು ನೀಡುವ ಭಕ್ತನ ಬಟ್ಟೆಯ ್ಲಇ್ವಚ್ಛೆಗೆ ಬಂದಾತನಲ್ಲ ನೋಡಾ ಮಹೇಶನು. ನೆಟ್ಟನೆ ನೀ ಪರವಸ್ತುವೆಂಬ ಜ್ಞಾನವಟ್ಟುವುದಕ್ಕೆ ಬಂದಾತ ಮಹೇಶನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./67 |
ಅಟ್ಟುಂಬುದು ಪ್ರಸಾದವಾದಡೆ, ಇದ್ದ ಪ್ರಾಣಿಗಳೆಲ್ಲ ಮೋಕ್ಷವಂತರಾಗಬಾರದೇನೊ ಅಯ್ಯಾ? ಅಟ್ಟುಂಬುದದು ಭೂತ! ಅಡದೆ ಉಣದೆ ನಿಜವಡಗಿದ ರೂಹ ಅರಿಯಬಲ್ಲಡೆ, ಅದು ಮಹಾಪ್ರಸಾದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./68 |
ಅಟ್ಟುಂಬುವುದದು ಜೀವಕ್ಕೆ ಪ್ರಸಾದವಲ್ಲದೆ ನಿರ್ಜಿವಕ್ಕೇನೊ ಅಯ್ಯಾ? ಜೀವಭಾವವಳಿದು, ಜನನಭಾವವಡಗಿ, ಜಗದಂತರ್ಯಾಮಿಯೆಂಬುದು ಮಹಾಪ್ರಸಾದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./69 |
ಅಡವಿಯಲ್ಲಿ ತಡೆಗಡಿದ ಪಶುವಿನಂತಾದೆವಾವೆಲ್ಲ ಅಯ್ಯಾ! ಅಕ್ಕಟಾ, ಒಡೆಯರಿಲ್ಲದ ಅನಾಥರಾದೆವಾವೆಲ್ಲ ಅಯ್ಯಾ! ಅಕ್ಕಟಾ, ನಮಗಿನ್ನು ದಿಕ್ಕಾರು, ದೆಸೆಯಾರು? ಅಕ್ಕಟಾ, ನಮಗಿನ್ನು ಒಡೆಯರಾರು? ಹೇಳಾ ತಂದೆ! ಅಯ್ಯಾ, ಶ್ರೀಮಲ್ಲಿನಾಥಂಗಾ, ಅವಧರಿಸು ಎನ್ನ ಬಿನ್ನಹವ ಗಣಾಚಾರಕ್ಕೆ ಬುಧ್ಧಿಗಲಿಸುವುದೆನ್ನ ತಂದೆ!/70 |
ಅಡಿಗಡಿಗೆ ಅಮೃತದ ಕೊಡನೊಡೆಯೆ, ನಿನ್ನ ನುಡಿ ಬ್ರಹ್ಮವು ತಾನು ನಿತ್ಯವಾಗಿ ಮಾಡಿ ಒಳಗೆ ಭಕ್ತಿಯನು ಅಡಿಯೊಳಗೆ ನಿತ್ಯವನು ಕಡಲ ಕಂಡೆನು ಭಕ್ತಿಸಮುದ್ರದಾ, ಕೊಡನೊಡಲು ಒಡೆದೀಗ ಕಡಲೊಳಗೆ ಬೆರಸಲ್ಕೆ ಅಡಿಗಡಿಗೆ ದೀಕ್ಷತ್ರಯದ ಸೊಮ್ಮು. ನಿತ್ಯ ಮೃಡನೀಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನುಡಿಯ ಬ್ರಹ್ಮದೊಳಗೆ ಒಡನೆ ಬ್ರಹ್ಮಾ./71 |
ಅಣುವಿನೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ, ನೀವು; ಮನದೊಳಗೆ ಘನವಾಗಿಪ್ಪಿರಿ ಎಲೆ ದೇವಾ. ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ? ಎಂಬತ್ತು ನಾಲ್ಕು ಲಕ್ಷ ಶಿವಾಲಯಂಗಳ ಮಾಡಿ ನೀವು ಒಮ್ಮನದೊಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ, ಕಪಿಲಸಿದ್ಧಮಲ್ಲಯ್ಯಾ, ಎನಗೆ ಬೇರೆ ಸ್ವತಂತ್ರವಿಲ್ಲವೆಂದರಿವೆನು./72 |
ಅಣ್ಣಗಳು ಕೇಳಿರೆ, ಅಣ್ಣಗಳು ಕೇಳಿರೆ, ಲೋಹಿತೇಶ್ವರದೇವರ ಮರೆ ಬಂದು ಒರಸೀತು, ಸುವರ್ಣದ ಕಳಸ ವೆಚ್ಚವಾದೀತು, ಜಪತಾವಡ ಮಣಿ ಹರಿದಾವು, ಗುರುಹಿರಿಯರೆಲ್ಲಾ ಹೆಡೆಗುಡಿಯ ಕಟ್ಟಿಗೊಳಗಾದಾರು ಕಪಿಲೆ ಬಾಣಸಕ್ಕೆ ಬಂದೀತು, ಸೊನ್ನಲಿಗೆಯ ಪುಣ್ಯಕ್ಷೇತ್ರವಳೀತು ಇಂತೀ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನದೇವರು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ./73 |
ಅಣ್ಣನ ನೋಡಿರೆ, ಲೋಕಕ್ಕೆ ಜಗದಕಣ್ಣ ಮದವ ಕಳೆದನು. ಮುಕ್ಕಣ್ಣನಿಪ್ಪೆಡೆಯ ತೋರಿದನು. ಅಣ್ಣ ಬಸವಣ್ಣ ವಾಙ್ಮನಕ್ಕಗೋಚರನು. ಮುಕ್ಕಣ್ಣನವತಾರಂಗಳನು ನಾಟಕವೆಂದರಿದು ಮೆರೆದನು. ಸತ್ಯಶುದ್ಧ ನಿರ್ಮಳ ಕೈವಲ್ಯ ವಾಙ್ಮನಕ್ಕಗೋಚರ ಬಸವಣ್ಣನು, ಅಣ್ಣಾ, ನಿಮ್ಮಿಂದ ಶುದ್ಧವ ಕಂಡೆ, ಸಿದ್ಧವ ಕಂಡೆ, ಪ್ರಸಿದ್ಧವ ಕಂಡನು. ಆರರಲ್ಲಿ ಆಂದೋಳವಾದೆನು, ಆರು ವ್ರತದಲ್ಲಿ ನಿಪುಣನಾದೆನು. ನೀನೊಂದು ಮೂರಾಗಿ, ಮೂರೊಂದಾರಾಗಿ ತೋರಿದ ಗುಣವಿಂತುಟಯ್ಯಾ, ಬಸವಣ್ಣ. ಇನ್ನೆನಗೆ ಆಧಿಕ್ಯವಪ್ಪುದೊಂದಿಲ್ಲ. ನಾನಿನ್ನು ಉರವಣಿಸಿ ಹರಿವೆ; ಹರಿದು ಭವದಿಂದ ಗೆಲುವೆ; ತತ್ತ್ವ ಮೂವತ್ತಾರರ ಮೇಲೆ ಒಪ್ಪಿಪ್ಪ ತತ್ವಮಸಿಯನೈದುವೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದದಿಂದ ಅರಿದಪ್ಪುದೊಂದಿಲ್ಲ./74 |
ಅತಿಗಳೆವೆ ವರ್ಗವನು ಮಥನಿಸುವೆ ಮುಕ್ತಿಯನು, ಸದಮದವ ನಿಲಿಸುವೆನು ದಿಗ್ವಳಯದಾ ಕರಣ ಸಂತತಿಗಳ ತನುಗುಣದ ಭೇದವನು, ಮನದಲ್ಲಿ ಒಪ್ಪಿಪ್ಪ ತತ್ವಂಗಳಾ ಮನೆ ಐದರ ಭೇದ ಮನಸಿಜನಿಂಬಿಲ್ಲ ಘನತರ ಮನೆ. ಐದನೊಂದ ಮಾಡಿ ತನುತ್ರಯವ ಮನತ್ರಯವ ಮಲತ್ರಯವ ಎಯ್ದದೆ ಘನತರದ ಭೇದವನು ಅನುವಾಗಿ ಎಯ್ದಿ ಗಮನವನಿರಿಸಿ ಮಧ್ಯಸ್ಥಾನದಲ್ಲಿ. ಕುಶಲತೆಯ ಬಿಟ್ಟೀಗ ಎಸೆವ ಕಮಳದೊಳಗೆ ಶಶಿಧರನ ಸಾಯುಜ್ಯ ಮಂಚದಲ್ಲಿ ಕುಸುಮನೇತ್ರೆಯ ಕಂಡು ಪಸರಿ ಪರ್ಬಿದ ಸ್ನೇಹ ಒಸರುತಿರ್ದುದು ಗಿರಿಯ ಕಂದರದ ಮಧುರದೊಂದಾಳಾಪ ಒದವಿರ್ದ ಕ್ರೀಯದಲಿ ಅನುಮಿಷದ ಶಕ್ತಿ ಶುದ್ಧ ಪಂಚಮದಲಿ ಒದಗದೆ ಎಯ್ದಿಪ್ಪ ಪರಶಕ್ತಿ ಮಸ್ತಕದ ಅನುನಯದ ಬೀಜಾಕ್ಷರಂಗಳೆರಡಾ ಬಳಸುತ್ತ ಚಿತ್ತವನು ಹರಿಯದೆ ನಿಲಿಸಿ, ತನುವ ವೇಧಿಸುತಿರ್ದುದಾನತದ ಶುದ್ಧ ಸಂಗಮದೊಳಗಿದ್ದು ಮೂರ್ಛೆಯನೆಯ್ದಿ ಅರ್ಧೊದಯದಲ್ಲಿ ಆನತದಲಿ ತಾನು ತನ್ನವನರಿತು ಭಾನುವಿನುದಯದ ತಾರೆಗಳ ತವಕದದಲಿ ವಿಯೋಗದಾ ಅಂಗಸಂಗವ ಮರೆದು, ಲಿಂಗಸುಖಸಂಯೋಗಿ ಭಂಗವಿಲ್ಲದೆ ಶುದ್ಧ ಧವಳತೆಯ ಅನುಗುಣವನತಿಳೆದು ಮನದ ಮಲಿನವ ಕಳೆದು, ಮನ ನಿಮ್ಮನೆಯ್ದಿತೈ ಕಪಿಲಸಿದ್ಧಮಲ್ಲಿಕಾರ್ಜುನ./75 |
ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ ದಿತಿಗೆಟ್ಟೆ ನಾನು ಅದರಿಂದ ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ ದಿತಿಗೆಟ್ಟೆನಯ್ಯಾ ತಾತ್ಪರ್ಯವನರಿಯದೆ. ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./76 |
ಅತಿಶರಣರ ಕೂಡೆ ಮತಿವಂತ ಭಕ್ತರು ಸಂಗ ಮಾಡಲಾಗದು. ದಾಸಿಯ ಸಂಗ ವೇಶಿಯ ಸಂಗ ದಾಸರಲ್ಲದೆ ರಾಜರು ಮಾಡಲಾಗದು. ಚಂಪಕಸಂಗ ಭ್ರಮರ ಮಾಡಲಾಗದು. ಕಪಿಲಸಿದ್ಧಮಲ್ಲಿಕಾರ್ಜುನ, ಅತಿ ಶರಣರ ಸಂಗ ಗುರುಭಕ್ತರು ಮಾಡಲಾಗದು./77 |
ಅತ್ತಲಿತ್ತ ಸುತ್ತಿ ಬಳ ವ್ಯರ್ಥವಪ್ಪ ಮನವ ನಿಮ್ಮ ಚಿತ್ತದತ್ತ ಧ್ಯಾನಿಸಿ ಇರಿಸಯ್ಯ. ಇನ್ನು ನಿಮ್ಮತ್ತಲಲ್ಲದೆ ಅತ್ತತ್ತ ಸುತ್ತಿ ಬಂದಡೆ ವಿಚಿತ್ರಮೂಲ ನಿಮ್ಮಾಣೆಯಯ್ಯ ಕಪಿಲಸಿದ್ಧಮಲ್ಲಿಕಾರ್ಜುನ./78 |
ಅತ್ಯತಿಷ್ಠರ್ದಶಾಂಗುಲನನರ್ಚಿಸಿ ಕಂಡೆನೆಂಬ ಬಚ್ಚಬರಿಯ ಮರುಳ ನೀ ಕೇಳಾ. ಅರ್ಚನೆ ಪೂಜೆಯಲ್ಲಿ ಸಿಕ್ಕುವನೆ? ಗುರು ತೋರಿದ ಸಚ್ಚಿದಾನಂದ ಚಿನ್ಮಯ ಚಲಿಂಗವಪ್ಪ ಅರ್ಚಕರು ಅರ್ಚಿಸಿ ಪಡೆಯರೊ, ಪದ ನಾಲ್ಕ ಮೀರಿದ ಪದವ ನೀವೆಂಬುರುತರ ಪರಮ ಸೀಮೆಯವನಯ್ಯ ಕಪಿಲಸಿದ್ಧಮಲ್ಲಿಕಾರ್ಜುನ./79 |
ಅಧ್ಯಾತ್ಮ ಅದ್ಯಾತ್ಮವೆಂದೆಂಬಿರಿ, ಅಧ್ಯಾತ್ಮವಾರಿಗೆ ? ಶ್ರೀಗುರು ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ, ಕರಸ್ಥಲದಲ್ಲಿ ಕೊಟ್ಟ ಬಳಿಕ ಬೇರೆ ಯೋಗವುಂಟೆ ? ತನ್ನ ಹಸ್ತವ ಮಸ್ತಕದಲ್ಲಿಟ್ಟು ವಾಯುಪ್ರಾಣಿಯಾಗಿರ್ದು ಕೊಂದು ಲಿಂಗಪ್ರಾಣಿಯ ಮುಕ್ತನ ಮಾಡಿದ ಬಳಿಕ, ಅಕ್ಷರವೈದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗವುಂಟೆ ಶಿವಯೋಗವಲ್ಲದೆ? ಲಿಂಗಾರ್ಚನೆಯ ಮಾಡಿ ಜಂಗಮಪ್ರಸಾದವ ಕೊಂಡ ಬಳಿಕ, ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿರಿಸಿ, ಇದು ಉರುತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರು ಚೆನ್ನಬಸವಣ್ಣ, ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಷಡುಸ್ಥಲಕ್ಕೆ ಅಧಿಕಾರಿಯಾದೆನು, ನಿನ್ನವರ ಸಲುಗೆಗೆ ಸಂದೆನು. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು ಕಾಣಾ, ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ./80 |
ಅಧ್ಯಾತ್ಮ ಅಧ್ಯಾತ್ಮವೆಂಬಿರಿ ಅಧ್ಯಾತ್ಮವೆಂಬುದದು ಏನು ಹೇಳಾ? ವಾಯುಪ್ರಾಣಿಯ ಕೊಂದು, ಅಕ್ಷರವೈದರ ಎತ್ತಿ ತೋರಿದನು ಶ್ರೀಗುರುರಾಯನು. ಬಹಳ ಲಿಂಗವ ತಂದು ಸೂಕ್ಷ್ಮವ ಮಾಡೀಗ ಕೊಟ್ಟು ಬಳಿಕ ಯೋಗವುಂಟೆ? ಅಟ್ಟುದನು ಮರಳಡುವ ಮಿಟ್ಟೆಯ ಭಂಡರ, ಏನೆಂಬೆನೈ ಗುರುವಾಜ್ಞೆ ಜಡರ. ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಯೋಗವಾದಲ್ಲಿ ಯೋಗವುಂಟೆ? /81 |
ಅನಂತ ಭವಭವದಲ್ಲಿ ಬಂದು ನಾನು ಶಾಂತನಾದೆ ಅಯ್ಯಾ, ನಿನ್ನ ಪ್ರಸಾದವನು ನಾನಾ ಭವದಲ್ಲಿ ಕಾಣೆ, ತಂದೆ. ನಿನ್ನ ಪಾದೋದಕವನು ನಾನಾ ಭವದಲ್ಲಿ ಕಾಣೆ, ತಂದೆ. ಕವಿಲೆಯ ಕಂದನಂತೆ ನಾನಿದ್ದೇನೆಂದು ಬಾರಾ, ಶಿವನೆ, ಕಪಿಲಸಿದ್ಧಮಲ್ಲಿಕಾರ್ಜುನ./82 |
ಅನಂತಕೋಟಿ ದೇವರೆಲ್ಲರೂ ತಂಡತಂಡದಲ್ಲಿ ದಂಡ ಪ್ರಣಾಮಂಗ್ಯಯಲು ಅವರ ಮುಕುಟ ಸಂಘಟ್ಟ ರಜ ಉದುರಲಿಕೆ ಅಲ್ಲಿ ರಜತಗಿಗಲಾದವು, ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವಾ, ನಿಮ್ಮ ಮುಂದೆ./83 |
ಅನಿರ್ವಾಚ್ಯವೆ ವಾಚ್ಯಪ್ರಣವವಾಗಿ ನಿಂದಿತ್ತು ; ವಾಚ್ಯವೆ ವಚಿಸುವುದಕ್ಕೆ ಮೂಲ ಪ್ರಣವವಾಯಿತ್ತು ; ಮೂಲವೆ ಭೂತಾಂಗ ಪಂಚಾಕ್ಷರವಾಯಿತ್ತು ; ಪಂಚಾಕ್ಷರವೆ ಪಂಚಮುಖವಾಯಿತ್ತು ; ಪಂಚಮುಖಂಗಳೆ ಪಂಚಕರಣಂಗಳಾಯಿತ್ತು ; ಪಂಚಕರಣಂಗಳೆ ಪಂಚವರ್ಣವಾಯಿತ್ತು ; ಪಂಚವರ್ಣವೆ ಪ್ರಪಂಚ ರಚನೆ ನಿಮಿರಿತ್ತು ; ನಿಮಿರಿ ನಿಮಿರಿದ ರಚನೆ ನೋಡಿ ಎನ್ನ ಚಿತ್ತ ಚಂಚಲವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./84 |
ಅನಿರ್ವಾಚ್ಯವೆ ವಾಚ್ಯವಾದಲ್ಲಿ ಹಕಾರವೆನಿಸಿತ್ತು; ಆ ಹಕಾರವೆ [ನಿರಂಜನ] ಪ್ರಣವವೆನಿಸಿತ್ತು; ಆ ನಿರಂಜನ ಪ್ರಣವವೆ ಜಂಗಮಾಕೃತಿ, ಜಗದಾಧಾರ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./85 |
ಅನಿಲ ಬಂದೆನ್ನ ಮಗಳ ಹೊರೆಯಲಿದ್ದು ಒಯ್ದನವ್ವಾ; ಅ ಅ ಅ ಅ ಅ ಅವ್ವಾ; ಮಾಯಾವಾದಳೆನ್ನಲ್ಲಿ. ಎನ್ನ ಮಗಳನೊಯ್ದು ಎಲ್ಲಿ ಮಾಯಮಾಡಿದಳೆಂದರಿಯೆ. ಎನ್ನ ಮಗಳನೊಯ್ದು ತನ್ನ ಮಾಯದೊಳಗೆ ಅಡಗಿಸಿದ ಕಪಿಲಸಿದ್ಧಮಲ್ಲಿನಾಥಯ್ಯನ./86 |
ಅನುನಯದ ಅನ್ಯಕ್ಕೆ ತೆರಹುಗುಡದೆ ಇಪ್ಪ ಕರುಣ ಸಾಗರದೊಳಗೆ ಮುಳುಗಾಡುವಾ ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ತೆರಹಿಲ್ಲದೊಡಗೂಡಿ ಇಪ್ಪ ಸುಖದಿಂ/87 |
ಅನುಪಮನೆ, ಅಪ್ರಮೇಯನೆ, ನಿತ್ಯತೃಪ್ತನೆ, ಇರವು ನಿನಗೆಲ್ಲ ಹೇಳೆಂದು ನುಡಿದು, ಪರೀಕ್ಷಿಸುವ ಇರವಿಲ್ಲ ಇತ್ತ ಬಾಯೆಂದು ಲಿಂಗತ್ರಯವ ಕರದಲ್ಲಿ ಪಿಡಿದು, ಒಳ ಹೊರಗುಯೆಂದೆನ್ನದಾನತದ ನಿಷ್ಕಲದ ಪರಿಯರುಹಿದ ಶಿವನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./88 |
ಅನುಪಮನೆ, ನಿನ್ನ ಹವಣಿಸಲಿಕ್ಕರಿದಯ್ಯಾ ಘನತರವೆನಿಸುವ ಸಾಯಜ್ಯಪದವ ಮೀರಿದ, ಶಬ್ದ ಹಲವ ಮೀರಿದ ಬ್ರಹ್ಮ. ಗುರುಕರುಣದಿಂದ ಕಂಡೆ ಪರಮಪದವ. ಗುರುವೇ, ಮದ್ಗುರುವೇ, ಸದ್ಗುರುವೇ, ತ್ರಿಜಗದ್ಗುರುವೇ, ಗುರುವೇ, ಕಪಿಲಸಿದ್ಧಮಲ್ಲಿಕಾರ್ಜುನಾ./89 |
ಅನುಭವತ್ರಯ ಒಂದಾದುದು ಅನುಭವವಯ್ಯಾ. ಒಂದಕ್ಕೆ ಮೂರೆಂಬುದು ಶ್ರ್ಕುಸಿದ್ಧ. `ತ್ರಯೋ ಗುಣಾಸ್ತ್ರೀಣಿ ವಪೂಂಷಿ’ ಕಪಿಲಸಿದ್ಧಮಲ್ಲಿಕಾರ್ಜುನನ ಮಹಾಕೀನ್ಲ./90 |
ಅನುಭವವಾಗಲೆಂದು ಬಂದು ಘನವಾಗಿ ಒಂದು ಕಿರಿದಾಗಿ ಹೇಳಿದೆನಲ್ಲದೆ, ಲಿಂಗವ ಕಿರಿದಾಗಿ ಹೇಳಿದೆನೆ ಅಯ್ಯಾ? ನೀರಲ್ಲಿದ್ದ ತೆರೆಗಳೆಲ್ಲ ನೀರಲ್ಲವೆ? ಲಿಂಗಮಧ್ಯೇ ಜಗತ್ಸರ್ವಂ’ ಎಂದ ಬಳಿಕ? ಪಾಷಾಣಂಗಳೆಲ್ಲ ಲಿಂಗಂಗಳು, ಲಿಂಗಂಗಳೆಲ್ಲ ಪಾಷಾಣಂಗಳು. `ಶ್ರೀಶೈಲೇ ವಸತೀ ಶಿಲಾ ಶಿವಮಯೀ ಸತ್ಯಂ ಶಿವೇ’ ಎಂಬ ಶಿವವಾಕ್ಯವದು ಪುಸಿಯೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ./91 |
ಅನುಭವವೆಂಬುದದು ಅನುಭಾವಿಕಗಲ್ಲದೆ ಹೊತ್ತಗೆಯ್ಲಲ್ಲ ನೋಡಾ ಮಾನವಾ. ರತ್ನಂಗಳು ಸಮುದ್ರದಲ್ಲಲ್ಲದೆ ಕೀಳು ಕುಲ್ಯಾಗಳ್ಲಲ್ಲ ನೋಡಾ, ಮಾನವಾ. ನವಮಂತ್ರಂಗಳ ಮರ್ಮವದು ಗುರುಮುಖದಲ್ಲಲ್ಲದೆ, ಬರಿಯ ಪುರಾಣಂಗಳ್ಲಲ್ಲ ನೋಡಾ, ಮಾನವಾ. ಇಂನ ಪ್ರಮಥರು ಮುಂದೆ ಬಂದಹರೆಂಬ ಭ್ರಮೆ ಬೇಡ ನೋಡಾ, ಮಾನವಾ. ನೀನಂಂಗೆನ್ನದೆ ಕಪಿಲಸಿದ್ಧಮಲ್ಲಿಕಾರ್ಜುನನ ನಂಬು ನೋಡಾ, ಮಾನವಾ./92 |
ಅನ್ಯೋನ್ಯವೆಂಬುದು ತನ್ನತ್ತಲಿಲ್ಲ ಅನ್ಯ ಬಂದಡೆ ಅಯ್ಯನತ್ತಲೆ ಮುಖವ ಬೆರಸುವ ಭೇದ ಅಯ್ಯನ ಮುಖವೆ ಮುಖವಾದನೊ. ಇಂ್ರಯಂಗಳೈದು ಆತನ ಇಂಬಪ್ಪ ಮುಖವಾಗಿ ಬಂದ ಪ್ರಸಾದವ ಕೊಂಬ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿನ ಗುರುಭಕ್ತ ಪ್ರಸಾದಿಯ ಪರಿಯಿಂತು/93 |
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇಧಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು./94 |
ಅಪ್ಪಿನಲಾದ ಘಟವು ಅರ್ಪಿ[ತದ]ಲೆ ಲೀಯ, ಇಪ್ಪತ್ತೈದೆಂದು ಕುರುಹಿಡುವೆ ಏಕೆಲೆ ಮನುಜಾ. ತಾ ಹುಟ್ಟಿ ತಮ್ಮವ್ವೆ ಬಂಜೆಯೆಂಬ ನ್ಯಾಯದಲ್ಲಿ ಬೇರೆ ವಿವರಿಸಿ ತೋರಬಲ್ಲಡದು ಯೋಗ. ಅಭ್ಯಾಸಸಮಾಧಿಯಿಂ ಅನುಭವಿಗಳೆಲ್ಲರಿಗೆ ಬಯಲ ಸಮಾಧಿಯಾಗದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ/95 |
ಅಪ್ರಮಾಣನು ಗುರು ಅನುಪ್ರಮಾಣನು ಶಿಷ್ಯ ಅತ್ಯತಿಷ್ಠಾನಂದ ಜ್ಯ್ಕೋರ್ಮಯ ಇಂತಪ್ಪ ಗುರುವಿನ ಆನಂದ ಮಠದೊಳಗೆ ನಿಶ್ಚಿಂತನಾದ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./96 |
ಅಭ್ಯಂತರದಲಿಪ್ಪ ಗಂಡ ಗುರುವಿನ ಅನುಮತದಿಂದ ಸರ್ವಾಂಗಕ್ಕೆ ಬಂದಾನು. ಮನೆಯನಿಂಬುಮಾಡು ಮದವಳಿಗೆ, ಮನವ ಶುದ್ಧವ ಮಾಡು ಮದವಳಿಗೆ, ಮನೆಯದ್ದೆರಡನೂ ಎಬ್ಬಟ್ಟವ್ವಾ. ಸಿದ್ಧ ಶುದ್ಧ ಪ್ರಸಿದ್ಧದಿಂದ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ಎಬ್ಬಟ್ಟಿ ಮನೆಯ ಮಂಗಳವ ಮಾಡವ್ವಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಗಂಡ ಮನೆಯೊಳಕೆ ಬಂದು ಮತ್ತೊಬ್ಬರಿದ್ದಡೆ ಸೈರಿಸ./97 |
ಅಭ್ಯಾಸದ ಅನುಭಾವಿಗಳಿಗೆ ಅಧಿಕಭಕ್ತಿ ಎಂತಪ್ಪುದಯ್ಯಾ? ವಾಕ್ಯದ್ಲ ನುಡಿದು, ಕಾಯದಲ್ಲಿ ಮಾಡಲು ಭಕ್ತಿಯಪ್ಪುದೆ ಮಾನಸವು ಮುಟ್ಟದನ್ನಕ್ಕರ? ಮಾನಸ ಭಕ್ತಿಸಂಪನ್ನರಾದಡೆ ತಾವು ನೀನಪ್ಪುದೇನರಿದು? ಕಪಿಲಸಿದ್ಧಮಲ್ಲಿಕಾರ್ಜುನ./98 |
ಅಮೃತವೆಂದರಿದಾತನೇನಮರನಾಗಲಿಲಗಲ. `ಬ್ರಹ್ಮಾಹಮಸ್ಮೀತಿ’ ಎಂದಡಾತನೇನು ಮುಕ್ತನಾಗಲಿಲ್ಲ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಗುಣತ್ರಯವಳಿಯದನ್ನಕ್ಕ./99 |
ಅಯಿದಾರೇಳೆಂಟೆಂಬ ಬಲೆಯಲ್ಲಿ ಸಿಲುಕಿ ಎಯ್ದೆ ಗಾರಾಗುತ್ತದ್ದೇನೆ ಮೀರಲಾರೆನು ಕರ್ಮಗಳನು ಗಾರು ಮಾಡಿಹವೆನ್ನ ಬೇರೆ ಮತ್ತೊಂದೊಳವೆ? ತೋರಾರುವ ಶ್ರುತಿಗಳಿಂದತ್ತತ್ತಲಾದ ಮಹಾಘನ ನೀನು ನೀರ ಕಪಿಲಸಿದ್ಧಮಲ್ಲಿಕಾರ್ಜುನಯಾ/100 |
ಅಯ್ಯ ನಿನ್ನ ವಿಕಳತೆಯಿಂದ ಹಲವು ಪರಿಯ ಭ್ರಮಿತನಾದೆನಯ್ಯಾ. ಅಯ್ಯಾ ಗಿರಿಗಹ್ವರದೊಳಗೆ ಹಲವು ಪರಿಯಲಿ ಅರಸಿ ತೊಳಲಿ ಬಳಲಿದೆನಯ್ಯಾ. ಕಂಡೆ, ಕಂಡೆ, ನೀನಿಪ್ಪ ಠಾವ. ನೀನು ಭಕ್ತಿ ಕಾರಣ ಪರಶಿವಮೂರ್ತಿಯಪ್ಪುದನು ಕಂಡೆ ಕಂಡೆ ನಿನ್ನವರಲ್ಲಿ ಕಪಿಲಸಿದ್ದಮಲ್ಲಿಕಾರ್ಜುನಾ./101 |
ಅಯ್ಯ ಬಂದಾನವ್ವಾ, ತನು ಚಿತ್ತ ಶುದ್ಧವಾಗಿರು. ಅಯ್ಯ ಬಂದಾನವ್ವಾ, ಮನವ ಮಂಚವ ಮಾಡಿ ಪಚ್ಚಡಿಸಿರು. ಅಯ್ಯ ಬಪ್ಪುದ ಕಂಡಳು ಚಿದಂಗನೆ ಅಯ್ಯ, ಶುದ್ಧ ಸಂಗಮಕೆ ಒಬ್ಬನೆ ಬಂದನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು./102 |
ಅಯ್ಯ ಬಂದಾನು ಆನಂದ ಮಂಟಪಕ್ಕೆ, ಎಚ್ಚ್ಕ್ತರಿರೋ ದ್ವಾರಕಿಂಕರರು; ಎಚ್ಚ್ಕ್ತರಿರೋ ಅವಸರಿಗರು. ಅಯ್ಯ ಸುತ್ತಿಮುತ್ತಿಗೆಗೊಳಗಾದನಾದಡೆ ಪಟ್ಟಣ ಸರ್ವಸ್ವವೂ ವಶವಹುದು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಹಿಡಿಗಟ್ಟಿಗೊಳಗಹನು/103 |
ಅಯ್ಯ! ನೀ ಬಾರಯ್ಯ! ಬಂದು ಎನ್ನ ಹೃದಯ ಮನ ಶಾಸನವ ಮಾಡಿ ನಿಲ್ಲಯ್ಯ. ಹಾ! ಅಯ್ಯಾ! ಅಯ್ಯಾ! ನೀ ಬಾರ! ನಿನ್ನ ಧರ್ಮ! ಕಪಿಲಸಿದ್ಧಮಲ್ಲಿನಾಥಯ್ಯ./104 |
ಅಯ್ಯ, ಮನದ ಜಡ ಮಣ್ಣ ಕಳೆದುದಯ್ಯಾ. ಶಾಂತ ಉದಕದೊಳಗಿಕ್ಕಿ ತೊಳೆವೆ ನೋಡಯ್ಯಾ. ಅದರುದಕವನೆ ಮಾಡಿ ಯೋಗ ಕಂಪನಿಕ್ಕಿ ಮೊರವೆ ನೋಡಯ್ಯ. ಅದನೊಂದೆಡೆ ತೆಗೆದು ಬಂದು ಬರುಗಾಣದಕ್ಕಿ ಹಿಳೆವ ನೋಡಯ್ಯ. ಹಿಳಿದ ರಸದ ಕಂಪ ತೊಡೆವೆಡೆಯನೊಬ್ಬನೆ ಕಪಿಲಸಿದ್ಧಮಲ್ಲಿಕಾರ್ಜುನ./105 |
ಅಯ್ಯಗಳ ಅನುಭವಕ್ಕಲ್ಲದೆ ನಿನ್ನ ಪಾಪಕ್ಕವರು ಅಯ್ಯಗಳೆ? ಅಯ್ಯಗಳನುಭಾವ ನಿನ್ನ ಮನೋಭಾವ ಏಕವಾದಡೆ, ಅಯ್ಯತನವೇರಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./106 |
ಅಯ್ಯಗಳು ಬಂದಿಹರೆಂದು `ಅಯ್ಯಾ ಅಯ್ಯಾ’ ಎಂದು ಬೆಂಬತ್ತುವನಲ್ಲ ನಾನು. ಅಯ್ಯಗಳೆಂದಡೆ ಅಯ್ಯತನವೇರಿತ್ತೆ ದೇವಾ? ಗೋವಿನ ಹಾಲು ಎಂದಡೆ, ಹಿಂಡಲಿಲ್ಲ, ರುಚಿಸಲ್ಲ. ತನ್ನ ಹಸ್ತ ಮುಟ್ಟಿದಲ್ಲಿ ರುಚಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./107 |
ಅಯ್ಯಗಳು ರುದ್ರಾಕ್ಷಿಯ ಕೊಟ್ಟ್ಲಲ್ಲಿ ಫಲವಲ್ಲದೆ, ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ, ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ, ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ. ನಿನ್ನರಿವ ನಾನರಿತಲ್ಲಿ ಫಲವಲ್ಲದೆ, ಅರುಹಿಸಿದಲ್ಲಿ ಫಲವಿಲ್ಲ. ಅಹುದೆಂಬುದು ನ್ಕೀ, ಬಲ್ಲೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./108 |
ಅಯ್ಯಯ್ಯಾ ನೀ ಬಾರಯ್ಯ ಬಾರಯ್ಯ. ಆನಂದದಾದಿಯಲ್ಲಿ ಬಂದೆನ್ನ ಕರದಲ್ಲಿ ನಿಲ್ಲಯ್ಯ. ಅಯ್ಯಯ್ಯಾ, ಒಯ್ಯನೆ ಕೈಯಗುಡಯ್ಯ. ಕಂಗೆಟ್ಟ ಪಶುವಾದೆನು ಎಲೆ ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕರುಣಿಸು ನಿಮ್ಮ ಧರ್ಮ./109 |
ಅಯ್ಯಾ ಅಯ್ಯಾ, ನೀವು ಬಾರದಿರ್ದಡೆ ಅಂತು ಹಂಬಲಿಸುತ್ತಿದ್ದೆ. ನೀನೆನ್ನ ಹಂಬಲ ಕೇಳಿ ಕರುಣದಿಂದ ಭೋರನೆ ಬಂದಡೆ, ಆನು ತಳವೆಳಗಾಗಿ ಅವಗುಣವೆಂಬ ರಜವ ಕಳೆದು ಕಂಬಳಿಯ ಪೀಠವನೊಲ್ಲದೆ ಹೃದಯಪೀಠವನಿಕ್ಕಿ ಮೇಲುಪ್ಪರಿಗೆಯೊರತೆಯ ಅಗ್ಗಣಿಯ ತಂದು ಪಾದಾರ್ಚನೆಯ ಮಾಡಿ, ಎರಡೆಸಳ ಕಮಲವನೆರಡು ಪಾದಕ್ಕೆ ಪೂಜಿಸಿ, ಕಂಗಳ ತಿರುಳ ತೆಗೆದು ಆರತಿಯನ್ನೆತ್ತಿ, ಉಸುರ ನುಂಗಿದ ಪರಿಮಳದ ಧೂಪವ ಬೀಸಿ, ನ್ನೆತ್ತಿಯ ಪರಿಯಾಣದೊಳಿಟ್ಟು ಬೋನವ ಗಡಣಿಸಿದಡೆ, ಸಯದಾನ ಸವೆಯದೆ ಆರೋಗಣೆಯ ಮಾಡಿ, ಉಂಡ ಬಾಯ ತೊಳೆದಡೆ ಸಂದೇಹವಾದುದೆಂದು ಮೇಲುಸೆರಗಿನೊಳು ತೊಡೆದುಕೊಂಡು ಬಾಯ ಮುಚ್ಚಳ ತೆಗೆಯದೆ, ಕರಣವೆಂಬ ತಾಂಬೂಲವನವಧರಿಸಿದ, ಭಾವದ ಕನ್ನಡವ ಹರಿದುಹಾಯ್ಕಿದ, ಆತನ ಪಾದಕ್ಕೆ ನಾನು ಶರಣೆಂದು ಪಾದೋದಕವ ಕೊಂಡೆ. ಆತನ ಪ್ರಸಾದಕ್ಕೆನ್ನ ಸೆರಗ ಹಾಸಿ ಆರೋಗಿಸಿ ಸುಖಿಯಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಪ್ರಭುದೇವರ ಕರುಣವೆನಗೆ ಸಾಧ್ಯವಾದ ಪರಿಯನೇನೆಂದುಪಮಿಸುವೆ!/110 |
ಅಯ್ಯಾ ನಿನ್ನ ಸಂಗದಲ್ಲಿ ಸಂಗಿಯಾದೆ ಅಯ್ಯಾ, ನಿನ್ನ ಸಂಗದಿಂದ ಕಾಕುತನವ ಬಿಟ್ಟು ಬೇಕಾದ ಹಾಂಗೆಯಾದೆ. ಅಯ್ಯಾ, ನಿನ್ನ ಒಲವು ಅನೇಕ ಪ್ರಕಾರದಲ್ಲಿ ಪಸರಿ ಪರ್ಬಿತ್ತು ಎನ್ನ ಸರ್ವಾಂಗದಲ್ಲಿ. ನಿನ್ನವರೊಲುಮೆಯ ಆನಂದವನು ಎನಗೆ ಕರುಣಿಸು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ಧರ್ಮ./111 |
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾಧಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ./112 |
ಅಯ್ಯಾ ಸುಖಾದಿಳು ಬಂದಡೆ ಎನ್ನಿಂದಾಯಿತ್ತೆಂಬೆ. ದುಃಖಾದಿಗಳು ಬಂದಡೆ ನಿನ್ನಿಂದಾಯಿತ್ತೆಂಬೆ. ಅದೇನು ಕಾರಣದಲ್ಲಿ ಕಿಂಚಿತ್ತಕ್ಕೆ ಹಮ್ಮಯಿಸಿ ಹಿಂದಕೆ ಹಾರೈಸುವೆನಾಗಿ ಲೋಕದ ಲೌಕಿಕಗಳಂಥವಂಗೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನ./113 |
ಅಯ್ಯಾ, ಅನಂತ ಭವಂಗಳ್ಲ ಬಂದು ನಾನು ಶಾಂತನಾದೆ, ಅಯ್ಯಾ, ನಿನ್ನ ಪ್ರಸಾದವ ನಾನಾ ಭವಂಗಳಲ್ಲಿ ಕಾಣೆ ತಂದೆ. ನಿನ್ನ ಪಾದೋದಕವ ನಾನಾ ಭವಂಗಳಲ್ಲಿ ಕಾಣೆ ತಂದೆ. ಇನ್ನು ನೀಂ ಕರುಣಿಸಾ ತಂದೆ, ಕವಿಲೆಯ ಕಂದನಂತಾದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ./114 |
ಅಯ್ಯಾ, ಅನೇಕ ಪುರಾತರ ಅನುಮತದಿಂದ ಚೆನ್ನಬಸವಣ್ಣನೆನ್ನನಾಗುಮಾಡಿದ ಪರಿಯ ಹೇಳುವೆನಯ್ಯಾ. ಮುನ್ನಾದಿಯಲಾದ ಸ್ವಯಂಭುಜ್ಞಾನಮಂ ್ಕಳುಪಿ ಆನಂದದ ಕರದಲ್ಲಿ ಇಟ್ಟು ಬಸವಾಕ್ಷರಸಂಯುತ ಧ್ಯಾನಮೌನಾ ಸಮ್ಯಜ್ಞಾನವನರುಪಿದ ಗುರುಕರುಣದಿಂದ ಆ ನೀನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ./115 |
ಅಯ್ಯಾ, ಆನಂದದಾನಂದದಲ್ಲಿ ಎಂದಿಪ್ಪೆನೋ. ಆ ಅಕ್ಷರದೊಳಗೆ ಅಯ್ಯಾ, ನಾನು ಭೇದಾ ಭೇದವೆಂದರಿದೆನಯ್ಯಾ. ಹೋದ ಹೋದ ಬಟ್ಟೆಯ ನೋಡಿ ನೋಡಿ ಬೆರಗಾದೆನಯ್ಯಾ. ವಿಚಿತ್ರ ಮೂಲ ಕಪಿಲಸಿದ್ಧಮಲ್ಲಿಕಾರ್ಜುನ, ಎನ್ನ ಚಿತ್ತ ವಿಚಿತ್ತವ ಮಾಡರು ತಂದೆ./116 |
ಅಯ್ಯಾ, ಎನ್ನ ಮನದಲು ನಿಮಗೀ ಒಡವೆ ಕೆರೆಯೆಂದೂ ತಿದ್ದುವುದೆಂಬ ಚಿಂತೆಯೆನಗೆ ಹೋ! ವಾ! ಹಾ! ಅಯ್ಯಾ, ಇದ ಮಾಡಿಸು ಒಡೆಯಾ, ಕೇಳು, ಕೇಳು, ಸಿದ್ಧಮಲ್ಲಿನಾಥಯ್ಯ./117 |
ಅಯ್ಯಾ, ಕಬ್ಬುನ ನೀರನೊಳಕೊಂಬಂತೆ, ಶಬುದ ನಿರಾಳವನೊಳಕೊಂಬಂತೆ, ಮರೀಚಿಯ ಬಯಲೊಳಕೊಂಬಂತೆ, ಎನ್ನನೆಂದೊಳಕೊಂಬೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./118 |
ಅಯ್ಯಾ, ಕರುಣ ಕಂಬನಿಯ ದೆಸೆಗೆಟ್ಟ ವಾರುಧಿಯೊಳಗೆ ಮುಸುಕಿ ಮುಸುಕಿ ಮೋಹಿಸುತ್ತಿದ್ದೆ. ಅಯ್ಯಾ, ದೆಸೆಗೆಟ್ಟ ಪಶುವಾನು ಪಶುಪಾಶಮೋಚನ ಹಸುಳೆಯ ನಿನ್ನ ವಶಕ್ಕೆ ತೆಗೆದೆತ್ತ ಬಾ ಎನ್ನ ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನ/119 |
ಅಯ್ಯಾ, ಕಾಮ ಕಾಡಿತ್ತು ಕ್ರೋಧ ಕೊಂದಿತ್ತು ಆಮಿಷ ತಾಮಸಂಗಳೆಳವುತ್ತಿವೆ. ಕರುಣಮಾಡಾ ಹರಹರಾ ಮಹಾದೇವ ಕರುಣಮಾಡಾ ಶಿವಶಿವ ಮಹಾದೇವ ಕರುಣಮಾಡಾ ದೆಸೆಗೆಟ್ಟ ಪಶುವಿಂಗೊಮ್ಮೆ ಕರುಣಮಾಡಾ ವಶವಲ್ಲದ ಪಶುವಿಂಗೊಮ್ಮೆ ಕರುಣಮಾಡಾ ನೀವಲ್ಲದೆ ಬಲ್ಲವರಿಲ್ಲ ಕರುಣಮಾಡಾ ಅನ್ಯವ ನಾನರಿಯೆ ನಿಮ್ಮ ಪಾದವನುರೆ ಮಚ್ಚಿದೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ./120 |
ಅಯ್ಯಾ, ಗುರುವೆಂಬ ಮಹಾಜ್ವಾಲೆಯಲ್ಲಿ ದಹನವಾದೆ ಬಸವಾಕ್ಷರವೆಂಬ ಮರುಜೇವಣಿಯಲ್ಲಿ ಭವಿಸದೆ ಉಂಡೆ ನಾನು ಶಿಶುವಾಗಿ ಶುದ್ಧಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯ ಏಕೀಭವಿಸಿ ಕೊಂಡೆ ಎನಗಿನ್ನರಿಲ್ಲ. ನೀನೊಟ್ಟಿತ್ತೆ ಮಾರಿದ ಮಾರಿಂಗೆ ಸಂದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ/121 |
ಅಯ್ಯಾ, ಜಗತ್ಪಾವನ ನಿಮಿತ್ಯರ್ಥವಾಗಿ ಸಾಕಾರಲೆಯ ಧರಿಸಿದ ಸ್ವಯಚರಪರಗುರುಚರಮೂರ್ತಿಗಳ ಅರ್ಪಿತಾವಧಾನದ ನಿಲುಕಡೆಯೆಂತೆಂದೆಡೆ: ಲಿಂಗಾಚಾರ ಮೊದಲಾದ ಸದ್ಭಕ್ತ ಶರಣಗಣಂಗಳಲ್ಲಿ ಲಿಂಗಾರ್ಪಿತಭಿಕ್ಷಲೀಲೆಯ ಧರಿಸಿ ಹೋದ ವ್ಯಾಳ್ಯದೊಳು ಆ ಭಕ್ತಗಣಂಗಳು ಶರಣುಹೊಕ್ಕು ಸಮಸ್ತ ಆಚರಣೆಯ ಒದಗಿಸಿಕೊಟ್ಟ್ಲ ದಶವಿಧ ಪಾದೋದಕ ಏಕಾದಶ ಪ್ರಸಾದದಾಚರಣೆಯಾಗುವದಯ್ಯಾ. ಇಂತು ಲಿಂಗಾಚಾರ ಭಕ್ತಗಣಂಗಳು ದೊರೆಯದಿರ್ದಡೆ ವೇದಾಂತಿ ಸಿದ್ಧಾತಿ ತಿನ್ನಯೋಗಿ ಮೊದಲಾದ ಸಮಸ್ತಮತದಿಂದ ಏಕಶಬ್ದಭಿಕ್ಷವ ಸಪ್ತಗೃಹವ ಬೇಡಿ ದುರ್ಗುಣಯುಕ್ತವಾದ ಅಯೋಗ್ಯದ್ರವ್ಯವನುಳಿದು ಸದ್ಗುಣಯುಕ್ತವಾದ ಯೋಗ್ಯದ್ರವ್ಯವ ಕೈಕೊಂಡು, ಧೂಳಪಾದಜಲದಿಂದ ಭವಿತನವ ಕಳೆದು ಭಕ್ತಪದಾರ್ಥವೆನಿಸಿ ಅಘ್ರ್ಯಪಾದ್ಯಾಚಮನವ ಮಾಡಿ ಧಾನ್ಯವಾದಡೆ ಪರಿಣಾಮಜಲಂ ಶೋಧಿಸಿ ಪಾಕವ ಮಾಡಿ, ಫಲಾಹಾರವಾದಡೆ ಶೋಧಿಸಿ ಪಕ್ವವ ಮಾಡಿಟ್ಟು ಆಮೇಲೆ, ಅಯ್ಯಾ, ನಿನಗೆ ಭಕ್ತಗಣಂಗಳು ದೊರೆಯದ ಸಮಯದಲ್ಲಿ ಚತುರ್ವಿಧ ಪಾದೋದಕವೆಂತುಟೆಂದಡೆ: ಏಕಾಂತವಾಸದಲ್ಲಿ ಪರಿಣಾಮತರವಾದ ಹಳ್ಳ ಹೊಳೆ ಕೆರೆ ಬಾವಿ ಮಡು ಹೊಂಡ ಚಿಲುಮೆ ಕೊಳ ಮೊದಲಾದ ಸ್ಥಾನಕ್ಕೆ ಹೋಗಿ ಪ್ರಥಮದಲ್ಲಿ `ಶಿವ ಶಿವ! ಹರಹರ! ಗುರುಬಸವಲಿಂಗ!’ ಎಂಬ ಮಂತ್ರಧ್ಯಾನದಿಂದ ಪಾದವನಿಟ್ಟು ಚರಣಸೋಂಕಿನಿಂ ಪವಿತ್ರವಾದುದಕವೆ ಧೂಳಪಾದೋದಕವೆನಿಸುವದಯ್ಯ; ಆ ಮೇಲೆ ತಂಬಿಗೆಯೊಳಗೆ ಶೋಧಿಸಿ ಬಸವಾಕ್ಷರವ ಲಿಖಿಸುವದೆ ಗುರುಪಾದೋದಕವೆನಿಸುವದಯ್ಯ; ಆ ಮೇಲೆ ಅರ್ಚನಾಕ್ರಿಯೆಗಳ ತೀರ್ಚಿಸಿಕೊಂಡು ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮ ಪಾದೋದಕವೆನಿಸುವದಯ್ಯ. ಇಂತು ಚತುರ್ವಿಧ ಪಾದೋದಕದೊಳಗೆ ಷಡ್ವಿಧ ಪಾದೋದಕ ಉಂಟಯ್ಯ. ಅದೆಂತೆಂದಡೆ: ಹಸ್ತವಿಟ್ಟು ಸ್ಪರ್ಶನವ ಮಾಡೆ ಸ್ಪರ್ಶನೋದಕವೆನಿಸುವದಯ್ಯ; ಲಿಂಗಕ್ಕೆ ಧಾರೆಯಿಂದ ಅಭಿಷೇಕವ ಎರೆದಲ್ಲಿ ಅವಧಾರೋದಕವೆನಿಸುವದಯ್ಯ; ಲಿಂಗಾರ್ಪಿತವ ಮಾಡಬೇಕೆಂಬ ಆನಂದವೆ ಆಪ್ಯಾಯನೋದಕವೆಂದೆನಿಸುವದಯ್ಯ; ಅರ್ಪಿತಮುಖದಲ್ಲಿ ಹಸ್ತವ ಪ್ರಕ್ಷಾಸಿ ಖಂಡಿತವ ಮಾಡಿದಲ್ಲಿಗೆ ಹಸ್ತೋದಕವೆನಿಸುವದಯ್ಯ; ಲಿಂಗಕ್ಕೆ ಸಂತೃಪ್ತಿಪರಿಯಂತರವು ಅರ್ಪಿತವ ಮಾಡಿ[ದಲ್ಲಿ] ಪರಿಣಾಮೋದಕವೆನಿಸುವದಯ್ಯ; ತಟ್ಟೆ ಬಟ್ಟಲ ಲೇಹವ ಮಾಡಿದಲ್ಲಿ ನಿರ್ನಾಮೋದಕವೆನಿಸುವದಯ್ಯ; ಲೇಹವ ಮಾಡಿದ ಮೇಲೆ ದ್ರವ್ಯವನಾರಿಸಿ ಸರ್ವಾಂಗದಲ್ಲಿ ಲೇಪಿಸುವದೆ ಸತ್ಯೋದಕವೆನಿಸುವದಯ್ಯ. ಇಂತೀ ದಶವಿಧ ಪಾದೋದಕದ ವಿಚಾರವ ತಿಳಿದು ಆ ಮೇಲೆ ನಿಚ್ಚಪ್ರಸಾದಿಯ ಸಂಬಂಧಾಚರಣೆಯಂತೆ ಪ್ರಸಾದವ ಮುಗಿವದಯ್ಯ. ಅದರೊಳಗೆ ಏಕಾದಶಪ್ರಸಾದದ ವಿಚಾರವೆಂತೆಂದಡೆ: ಪ್ರಥಮದಲ್ಲಿ ಹಸ್ತಸ್ಪರ್ಶ ಮಾಡಿದಂತಹದೆ ಗುರುಪ್ರಸಾದವೆನಿಸುವದಯ್ಯ; ಇಷ್ಟ ಮಹಾಲಿಂಗಕ್ಕೆ ಮಂತ್ರಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡು ವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡುವೇಳೆ ಇಷ್ಟಮಹಾಂಗದೇವಂಗೆ ರೂಪನರ್ಪಿಸಿ ಜಿಹ್ವೆಯಲ್ಲಿಟ್ಟ್ಲ ಜಂಗಮ ಪ್ರಸಾದವೆನಿಸುವದಯ್ಯ; ಆ ಮೇಲೆ ಲಿಂಗದೇವರಿಗೆ ತೋರಿ ಬೋಜೆಗಟ್ಟಿ ಲಿಂಗದೇವಂಗೆ ತೋರಿ ಜಿಹ್ವೆಯ್ಲಟ್ಟಂತಹದೆ ಪ್ರಸಾದಿಯ ಪ್ರಸಾದವೆನಿಸುವದಯ್ಯ; ಆ ಭೋಜ್ಯರೂಪಾದ ಪ್ರಸಾದಿಯ ಪ್ರಸಾದದೊಳಗೆ ಮಧುರ ಒಗರು ಕಾರ ಆಮ್ಲ ಕಹಿ ತೃಪ್ತಿ-ಮಹಾತೃಪ್ತಿಯೆ ಆಪ್ಯಾಯನ, ಸಮಯ, ಪಂಚೇಂದ್ರಿಯವಿರಹಿತ, ಕರಣಚತುಷ್ಟಯವಿರಹಿತ, ಸದ್ಭಾವ, ಸಮತೆ, ಜ್ಞಾನಪ್ರಸಾದ ಮೊದಲಾದವು ಸಪ್ತವಿಧಪ್ರಸಾದವೆನಿಸುವದಯ್ಯ. ಇಂತು ಪರಾಧೀನತೆಯಿಂ ಭಿಕ್ಷವ ಬೇಡಲಾರದಿರ್ದಡೆ, ಅರಣ್ಯದಲ್ಲಿ ಫಲರಸಯುಕ್ತವಾದ ಹಣ್ಣು ಕಾಯಿಗಳ ಲಿಂಗಾರ್ಪಿತ ಭಿಕ್ಷೆಯೆಂದು ಆ ಫಲಾದಿಗಳ ತೆಗೆದುಕೊಂಡು ಶೋಧಿಸಿ, ಪವಿತ್ರವ ಮಾಡಿ ಲಿಂಗಾರ್ಪಿತ ಭೋಗಿಯಾದಾತನೆ ಸ್ವಯಂಭು ಪ್ರಸಾದ ಭಕ್ತನಾದ ಚಿತ್ಕಲಾಪ್ರಸಾದಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./122 |
ಅಯ್ಯಾ, ಜನಕ ಜನನಿಯರಿಬ[ರಿ]ರವ ಕೇಳಾ ಶಶಿಬಿಂಬದಂತೆ ಶಿವಶಕ್ತಿ ಕಂಡಯ್ಯ ಇಲ್ಲಿ ಒಮ್ಮೆಯೂ ಭೇದವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ/123 |
ಅಯ್ಯಾ, ನಾನೆಂಬುದನು ಒಯ್ಯನೆ ಒಯ್ಯನೆ ಮರೆದೆ. ಅಯ್ಯಾ, ನೀ ಗುರುರಾಗಿ ಕರುಣದಿಂದ ಒಯ್ಯನೆ ಬಂದೆನ್ನ `ಅಯ್ಯೊ ಮಗನೆ’ ಎಂದು ಕೈವಿಡಿದು ತೆಗೆದೆನ್ನ ಸಲಹಿರಿ ಕರುಣದಿಂದ. ಆನೀಗ ನಿಮ್ಮ ಅವ್ಯಯದ ಪದಕಾನು ಮೂಲನಾದೆ ಕಪಿಲಸಿದ್ಧಮಲ್ಲಿಕಾರ್ಜುನ/124 |
ಅಯ್ಯಾ, ನಾನೊಂದ ಬೇಡುವೆ ನಿಮ್ಮಲ್ಲಿ ಎನಗೊಂದು ಲೇಸ ಮಾಡಯ್ಯ. ನಾರಿಯರುರದ ಗಾಳಿ ಸೋಂಕದಂತೆ ಎನ್ನುವ ಮಂತ್ರಿಸಿ ರಕ್ಷಿಸಯ್ಯ. ಎನಗಿನಿಸು ಮಾಡಿ ಬದುಕಿಸಯ್ಯ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./125 |
ಅಯ್ಯಾ, ನಿತ್ಯನು ನೀನೆ; ಆ ಸತ್ಯಶುದ್ಧ ದೇಹಿ ನೀನೆ ಕಾಣಾ, ಎಲೆ ಅಯ್ಯಾ. ಅಯ್ಯಾ, ನೀನು ಕಾರುಣ್ಯವುಳ್ಳ ಮಹದಾಶ್ರಯ ಕಾಣಾ, ಎಲೆ ಅಯ್ಯಾ, ನೀನು ಭಕ್ತದೇಹಿಕ ದೇವನಾದ ಕಾರಣ ಮಚ್ಚಿದೆನಯ್ಯಾ. ಒಲುಮೆಯ ಮಚ್ಚು ನಿಶ್ಚಯವೆಂದು ನಂಬಿದೆನಯ್ಯಾ. ಗುರುವೇ, ಕಪಿಲಸಿದ್ಧಮಲ್ಲಿಕಾರ್ಜುನ./126 |
ಅಯ್ಯಾ, ನಿನ್ನ ಆಜ್ಞೆಯಲ್ಲಿ ಇರದವರಾರು? ಬ್ರಹ್ಮೇಂದ್ರಾದಿ ದೇವತೆಗಳೆಲ್ಲ! ಅಯ್ಯಾ, ನಿಮ್ಮಾಜ್ಞೆಯಲ್ಲಿ ಆಗದವರಾರು? ವಿಷ್ಣು ಮೊದಲಾದ ಮನುಜರೆಲ್ಲ! ಸರ್ವ ಚೈತನ್ಯಾತ್ಮ ಮುಖಲಿಂಗವೆ ಅವಧಾರು ಕಪಿಲಸಿದ್ಧಮಲ್ಲಿಕಾರ್ಜುನ./127 |
ಅಯ್ಯಾ, ನಿನ್ನ ಕರವೆಂಬ ಉರುತರ ಗರ್ಭದಲ್ಲಿ ಭವಿಸಿದೆನಯ್ಯಾ. ನಿನ್ನ ಕರುಣವೆ ಎನಗೆ ಮಹಾಕಾನನವಾಯ್ತು. ಲೋಕದ ಪಾತಕಿಗಳು ಉಂಡಂತೆ ಉಂಡೆನಾದಡೆ, ಬಂದಂತೆ ಬಂದೆನಾದಡೆ ನಿಜ ನಿಮ್ಮಾಣೆ, ಕಪಿಲಸಿದ್ಧಮಲ್ಲಿಕಾರ್ಜುನ./128 |
ಅಯ್ಯಾ, ನಿನ್ನ ಕೂಟದ ಸುಖದಲ್ಲಿ ನೀ ನಾನೆಂಬ ಸಂದಳಿದೆ ಅಯ್ಯಾ. ಮೇಲೆ ಬಿದ್ದ ಮಸಿಯನ್ನು ಅರಿಯದೆ ಕೂಟದಲ್ಲಿ ತಾಮಸಿಯಾದೆನಯ್ಯಾ. ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲಿನಾಥಯ್ಯಾ, ನಿರ್ನಾಮವಾಗಿ ನಿತ್ಯವೆಯ್ದಿದೆ ತಂದೆ/129 |
ಅಯ್ಯಾ, ನಿನ್ನ ವಿಕಳತೆಯಿಂದ ಹಾಹಾ! ಭೂತನಾದೆ. ಅಯ್ಯಾ, ನಿನ್ನ ನೆನಹಿನ ಧ್ಯಾನದಿಂದ ಮೂರ್ಛೆಹೋದೆ. ಅಯ್ಯಾ, ನಿನ್ನ ಭಕ್ತಿತ್ರಯದಿಂದ ಶುದ್ಧ ಮುಕ್ತನಾದೆನಯ್ಯಾ. ತಾತ್ಪರ್ಯದಲ್ಲಿ ಶುದ್ಧಾತ್ಮನಾಗಿ ನಿನ್ನ ಭಕ್ತಿರತಿಯಲ್ಲಿ ಸಂಪನ್ನನಾದೆ, ಕಪಿಲಸಿದ್ಧಮಲ್ಲಿಕಾರ್ಜುನ./130 |
ಅಯ್ಯಾ, ನಿನ್ನನೆನ್ನ ಕರದಲ್ಲಿಟ್ಟು ಆ ಅಕಾಯದ ಕಳೆಯಿಂದತ್ತಲಿ, ಅಯ್ಯಾ, ಜೀವ ಸಂಭೋಗನಾದೆನು. ವಾಯಕಾಯವೆಂಬವಾ ಮೀರಿ ನೀನಾದೆ, ಕಪಿಲಸಿದ್ಧಮಲ್ಲಿನಾಥಯ್ಯ./131 |
ಅಯ್ಯಾ, ನಿನ್ನವರ ಕಂಡು ಕರಗದನ್ನಕ್ಕರ ನಿನ್ನವರ ಕಂಡು ನೀನೆಂದೆ ಕಾಣದನ್ನಕ್ಕರ ನಿನ್ನವರ ಮೂರ್ತಿಧ್ಯಾನದಲ್ಲಿ ಮೂರ್ಛೆವೋಗದನ್ನಕ್ಕರ ವೇಷದ ಗೌಳೆಯರ, ಲಾಂಛನದ ಲಂಪಟರ ಮಜ್ಜನಕ್ಕೆರೆವ ಭವಿಗಳಿಗೆ ಏಕೊಲಿವೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./132 |
ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಬೋಸರಿಸಲು. ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಸ್ತುತಿಯಿಸಲು. ಅಯ್ಯಾ, ನೀ ನಿತ್ಯನೆಂದು ಮರೆವೊಕ್ಕಡೆ ಸೀಯದಂತಿಪ್ಪರೆ? ಶಿವನೆ ನಿನ್ನ ಕಾಮ್ಯಾರ್ಥವ ಬೇಡಿ ಬಾಧೆಬಡಿಸೆ. ನಿನಗೇನುಂಟಯ್ಯಾ, ನೀನು ನಿಃಕಾಮಿ. ಅಂಜದಿರು, ಫಲಪದವ ಬೇಡೆ; ನೀನಿಹ ಲೋಕ ನಿನಗಿರ. ಕಾಡದೆ ನಿನ್ನವರೊಳಗೆ ಕೂಡಿರುವ ಪದವ ಕರುಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ/133 |
ಅಯ್ಯಾ, ನಿಮ್ಮ ಕಂಡ ಕಾಣಿಕೆಯಲ್ಲಿ ನಂಬಿ ನಚ್ಚಿ. ಶರಣುಹೋಗಲರಿಯದೆ ಕೆಮ್ಮನೆ ಕೆಟ್ಟೆ; ಅಹಂಕಾರವ ಹೊತ್ತುಕೊಂಡು ಕೆಟ್ಟೆ ನೋಡಯ್ಯಾ. ಕೆಡಿಸಿ, ಮರುಗಿ, ಮರಸಿಹೆನೆಂಬ ಮರುಳು ನಾನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಹಾಲಲದ್ದು, ನೀರಲದ್ದು ; ನೀನೇ ಗತಿ ಮತಿ!/134 |
ಅಯ್ಯಾ, ನಿಮ್ಮ ಕಂಡು ಕಂಗಳು ನೋಡಲಮ್ಮದೆ ಬೆಚ್ಚಿ ಬೆದರಿದುವಯ್ಯಾ; ನೀನು ಶತಕೋಟಿ ಸೂರ್ಯಪ್ರಕಾಶಕ್ಕ್ಕತಿತನು! ನಿನ್ನ ಕಂಡ ಬಳಿಕ ಕರ್ಮವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ./135 |
ಅಯ್ಯಾ, ನಿಮ್ಮ ಕರಸ್ಥಲದ ಘನ ನಿಮ್ಮಲ್ಲಿರಲಿ. ಕರಸ್ಥಲವನೊಲ್ಲೆ, ಪರಸ್ಥಲವನೊಲ್ಲೆ, ಆವುದನೊಲ್ಲೆ ನೋಡಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನೀ ಒಲಿದು, ಸಂಗನ ಬಸವಣ್ಣನ ಶ್ರೀಪಾದವ ತೋರಿಹೆನೆಂಬ ಮಾತಿಗೆ ಮಾರುಹೋದೆನು ಇನ್ನು ತೋರಿ ಎನ್ನನುಳುಹಿಕೊಳ್ಳಾ, ಎನ್ನ ದೇವರ ದೇವಾ./136 |
ಅಯ್ಯಾ, ನಿಮ್ಮ ಕರಸ್ಥಲದ ಘನವನುಪಮಿಸಬಲ್ಲವರಿಲ್ಲವಯ್ಯಾ. ನಿಮ್ಮ ಮಹಿಮೆಯನರಿವಡೆ ನಾನೇತರೊಳಗೇನಯ್ಯಾ? ಇಷ್ಟಂಗವ ಮುಟ್ಟಿದ ಶರಣನೊಳಗೆ ಹುಟ್ಟಿದ ಕರಸ್ಥಲವೆಷ್ಟೆಂಬುದ ತಿಳುಹಿ ಎನ್ನನುಳುಹಿಕೊಳ್ಳಾ, ಕಪಿಲಸಿದ್ಧಮಲ್ಲಿಕಾರ್ಜುನ./137 |
ಅಯ್ಯಾ, ನಿಮ್ಮ ಕೈ ಬಿರ್ಚಲೊಡನೆ ಬ್ರಹ್ಮಾಂಡಂಗಳು ತಳತಳಿಸುತ್ತವೆ. ಬ್ರಹ್ಮ ಮರೆದನು, ವಿಷ್ಣು ತಾನೊರಗಿದನು, ವೇದಂಗಳು ದೆಸೆದೆಸೆಗೆ ಬಾಯ್ವಿಡಲು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಕೈಯ ಶಬ್ದದ ಹವಣಿಂತುಟು./138 |
ಅಯ್ಯಾ, ನಿಮ್ಮ ದೇವರೆಂದು, ಭಾವಿಸಲರಿಯೆನು, ಕೇಳು ಕಂಡಾ. ಎನ್ನ ಮನವ ನುಂಗಿದೆ ಎಂದು, ನಿಮಗಾನು ಬಿನ್ನಹವ ಮಾಡಿದ ಕಾರಣ, ಎನ್ನ ಒಳಹೊರಗೆಲ್ಲಾ ನೀನೆ ಕಂಡಯ್ಯಾ. ನಿಮ್ಮೊಳಗೆ ಅಡಗಿದ ನುಡಿಯನೊಳಕೊಂಡ ಅರಿವ ಅರಿದರಿದು ಮರೆದ ಪರಿ ಎಂತಯ್ಯಾ, ಕಪಿಲಸಿದ್ಧಮನಾಥಯ್ಯಾ./139 |
ಅಯ್ಯಾ, ನಿಮ್ಮ ಮಹಾತ್ಮೆಯನಾರಿಗೆಯೂ ಉಪಮಿಸಬಾರದು. ಹಾ ಹಾ, ಅಯ್ಯಾ, ನೀ ಮಹಾಗುರುವು ಕಂಡಯ್ಯಾ. ನೀ ಮಹಾಮಹಾದೇವನೈ ಎನ್ನ ಕಪಿಲಸಿದ್ಧಮಲ್ಲೇಶ್ವರ ದೇವರ ದೇವನಯ್ಯಾ/140 |
ಅಯ್ಯಾ, ನಿಮ್ಮ ಮಹಾನುಭಾವರಿಂದ ಮಹಾವಸ್ತುವಿನ ಪ್ರಮಾಣವನರಿದೆ; ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದೆ; ಪಾದೋದಕ ಪ್ರಸಾದ ಭಕ್ತಿಯೆಂಬ ನಿಶ್ಚಯವನರಿದೆ. ನಿಮ್ಮ ಮಹಾನುಭಾವರಿಂದ ಪರತತ್ವಪ್ರಮಾಣುವನರಿದು ಶರಣು ಶರಣೆನುತಿದ್ದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./141 |
ಅಯ್ಯಾ, ನಿಮ್ಮ ಮೂರ್ತಿಯ ನೋಡಿಹೆನೆಂದಡೆ ದೃಷ್ಟಿಯಾನವು. ನಿಮ್ಮ ತೇಜವನಾರು ನೋಡಲಮ್ಮರಯ್ಯಾ ನಿಮ್ಮ ತೇಜವನೊಬ್ಬರಿಗೆಯೂ ಉಪಮಿಸಬಾರದು. ನೀವು ಮುನಿದು ನೊಸಲ ಕಣ್ಣ ತೆಗೆದಡೆ, ಅದಕ್ಕೆ ಇದಿರಪ್ಪರಿನ್ನಾರು ಹೇಳಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ತೇಜವ ಮೂರುಲೋಕವ ನುಂಗಿದಡೆ ನೋಡಿ ಕಣ್ಣ ಮುಚ್ಚುತಿರ್ದೆನು./142 |
ಅಯ್ಯಾ, ನಿಮ್ಮ ವಿಕಳದಲ್ಲಿ ನೆನೆವುತ್ತ ಗಾಳಿಯ ಸರವ ನೀವೆಂದು ಬಗೆದೆ ಕಂಡಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ವಿಕಳದಲ್ಲಿ ಮಹಾಭ್ರಾಂತಿಯಾಗಿದ್ದೆನಯ್ಯಾ/143 |
ಅಯ್ಯಾ, ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಕಂಡು ಒಳಗೆ ಬೈಚಿಟ್ಟುಕೊಂಡೆನಯ್ಯಾ. ಅಯ್ಯಾ ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಹಾಸಿ ಹೊದೆದುಕೊಂಡೆನಯ್ಯಾ. ಅಯ್ಯಾ, ನಿಮ್ಮ ಶರಣ ಬಸವಣ್ಣನಿಂದ ನಿರವಯವಾದೆನು. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು./144 |
ಅಯ್ಯಾ, ನಿಮ್ಮ ಶರಣರಲ್ಲದವರ ಮನೆ ಕೆಮ್ಮನೆ ಕಂಡಯ್ಯಾ. ನಿಮ್ಮ ಶರಣರ ಮನೆ ನೆರೆವನೆ ನೋಡಾ ಎನಗೆ. ಸಿರಿಯಾಳ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ. ದಾಸಿಮಯ್ಯ ಮನೆಗಟ್ಟಿ ವ್ಯವಹಾರನಾಗಿ ಹೋದ. ಸಿಂಧುಬಲ್ಲಾಳ ಮನೆಗಟ್ಟಿ ಕೈಕೂಲಿಕಾರನಾಗಿ ಹೋದ. ಗಂಗೆವಾಳುಕರು ಮನೆಗಟ್ಟಿ ಲಿಂಗದ ಹೊಲಬನರಿಯದೆ ಹೋದರು. ಇವರೆಲ್ಲರು ಮನೆಯ ಮಾಡಿ ಮಹದ್ವಸ್ತುವನರಿಯದೆ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಪದವಿಗೊಳಗಾದರು. ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ, ಮತ್ರ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು. ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು ನಿಜಲಿಂಗ ಫಲವ ಪಡೆದರು. ಆ ಗೃಹವ ನೋಡಬೇಕೆಂದು ನಾನು ಹಲವು ಕಾಲ ತಪಸಿದ್ದೆನು. ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು./145 |
ಅಯ್ಯಾ, ನಿಮ್ಮ ಸತ್ಕೃಪೆ! ಎನ್ನ ಸುಕೃತಾಂಗಿಯ ಮಾಡಿ ಮತ್ರ್ಯಕ್ಕೆ ತಂದಿರಯ್ಯಾ. ಅಯ್ಯಾ, ನಿಮ್ಮ ಕೃಪೆಯಿಂದ ನಿಷ್ಠಾಮಾಹೇಶ್ವರನೆನಿಪ ಅಮುಗಿದೇವಯ್ಯಗಳಿಂದ ಪ್ರಭುದೇವರೆಂಬ ಅನಾದಿ ಜಂಗಮವ ಕಂಡೆನಯ್ಯಾ. ಅಯ್ಯಾ, ನಿಮ್ಮ ಪ್ರಭುದೇವರೆಂಬ ಅನಾದಿ ಜಂಗಮರಿಂದ ಪರಮ ಗುರುವಪ್ಪ ಬಸವೇಶ್ವರನ ಕಂಡೆನಯ್ಯಾ. ಆ ಬಸವಣ್ಣನಿಂದ ಅಸಂಖ್ಯಾತ ಪ್ರಮಥಗಣಂಗಳ ಕಂಡೆನಯ್ಯಾ. ಆ ಗಣಂಗಳ ಕೃಪೆಯಿಂದ ಚೆನ್ನಬಸವಣ್ಣನ ಪಡೆದು ನಿಮ್ಮನಂಗದ ಮೇಲೆ ಸಾಹಿತ್ಯವ ಮಾಡಿಕೊಂಡೆನಯ್ಯಾ. ನಿಮ್ಮ ಸಾಹಿತ್ಯದ ಪ್ರಸನ್ನಮೂರ್ತಿ ಎನ್ನ ಕಣ್ಣಮುಂದೆ ಪ್ರತ್ಯಕ್ಷವಾಗಿಪ್ಪ ಮರುಳಶಂಕರದೇವರ ಶ್ರೀಪಾದವ ಕಂಡು ನಾನು ನಿಶ್ಚಯ ಕೃತಾರ್ಥನಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥ ಪ್ರಭುವೇ, ನಿಮ್ಮ ಧರ್ಮ./146 |
ಅಯ್ಯಾ, ನಿಮ್ಮ ಸರವುಂಡ ಸಬುದವೆನ್ನ ಮನಕ್ಕೆ ವೇದ್ಯವಾಯಿತ್ತು. ನಿಮ್ಮ ನಿಜವುಂಡ ನಿಲವು ಎನ್ನ ಮತಿಗೆ ವೇದ್ಯವಾಯಿತ್ತು. ನಿಮ್ಮ ಕರುಣಪ್ರಸಾದವೆನ್ನ ಸರ್ವಾಂಗವೇದ್ಯವಾಯಿತ್ತು. ನಿಮ್ಮ ಕಾಯವಿಡಿದಿಪ್ಪ ಕರಸ್ಥಲದ ಕಾರಣವ ಹೇಳಾ, ಕಪಿಲಸಿದ್ಧಮಲ್ಲಿನಾಥಾ./147 |
ಅಯ್ಯಾ, ನಿಮ್ಮ ಹಾಡಿ ಹಂಬಸಿದೆನಯ್ಯಾ. ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ. ನುಡಿಗೆಟ್ಟ ಬ್ರಹ್ಮದಲ್ಲಿ ನಡೆದಹೆನೆಂದಡೆ ಎನ್ನೊಡಲಾಮಿಷ ಕಾಡುತ್ತಿವೆ. ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಇವನೆಲ್ಲವ ಕಳೆದು ನಿಮ್ಮದೊಂದು ಭಕ್ತಿಯ ಕರುಣಿಸಯ್ಯಾ, ತಂದೆ!/148 |
ಅಯ್ಯಾ, ನಿಮ್ಮನರಿದವನ ಮಂರ ಮಹಾದೇವಿಯರಮನೆಯಯ್ಯಾ. ಅಯ್ಯಾ, ನಿಮ್ಮನರಿದವನ ನಿರೀಕ್ಷಣೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./149 |
ಅಯ್ಯಾ, ನಿಮ್ಮನೆನ್ನ ಕರದಲಿ ಆರುಕಾಯದ ಕಳೆಯಿಂದೆತ್ತಲಿ. ಅಯ್ಯಾ, ಜೀವ ಸಂಭೋಗನಾದೆನು. ವಾಯದ ಕಾಯವೆಂಬವ ಮೀರಿ ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನ/150 |
ಅಯ್ಯಾ, ನಿಮ್ಮವರ ಕಂಡಡೆ ನೀವೆಂದೆ ನಂಬುವ ನಂಬುಗೆಯ ಕರುಣಿಸಯ್ಯಾ. ಅಯ್ಯಾ ನಿಮ್ಮವರ ವಾಕ್ಯವ ಕೇಳಿದಡೆ, ನಿಮ್ಮ ವಾಕ್ಯವೆಂದೆ ನಂಬುವ ನಂಬುಗೆಯ ಕರುಣಿಸಯ್ಯಾ. ಅಯ್ಯಾ, ನಿಮ್ಮವರ ಕೀಳಿಲ ಕಾಯ್ದುಕೊಂಡಿಪ್ಪೆನಯ್ಯಾ. ಎನ್ನ ಮಾನಸ – ವಾಚಕ – ಕಾಯಕಕ್ಕೆ ಇದನೆ ಕರುಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಧರ್ಮ./151 |
ಅಯ್ಯಾ, ನಿಮ್ಮಾಜ್ಞೆಯಲ್ಲಿಪ್ಪವು ಕಂಡಾ ಸಕಲ ಲೋಕಂಗಳು; ಅಯ್ಯಾ, ನಿಮ್ಮಿಚ್ಛಾಮಾತ್ರದಲ್ಲಿಪ್ಪರು ಕಂಡಾ ಕೋಟಿ ಹರಿವಿರಿಂಚ್ಯಾದಿಗಳು; ಅಯ್ಯಾ, ನಿಮ್ಮ ಮೀರಿದಾಧಿಕ್ಯವೊಂದೂ ಇಲ್ಲ. ಎಲೆ ಅಯ್ಯಾ, ಸಮಸ್ತ ಬ್ರಹ್ಮಾಂಡಗಳು, ನಿಮ್ಮ ರೋಮಕೂಪದಲ್ಲಿಪ್ಪವು. ಉರುತರ ಶಿವನೆ! ನಿಮ್ಮನರಿಯದೆ ಏಕೆ ಕೆಡುವರಯ್ಯಾ ನರರು, ಕಪಿಲಸಿದ್ಧಮಲ್ಲಿಕಾರ್ಜುನ./152 |
ಅಯ್ಯಾ, ನೀ ನಿತ್ಯ ನಿತ್ಯ ನೀನೆಲೆ ಅಯ್ಯಾ, ನೀ ಸತ್ಯಶುದ್ಧದೇಹಿ ಕಾಣೆಲೆ ಅಯ್ಯಾ, ಅಯ್ಯಾ ನೀ ಕರುಣವುಳ್ಳ ಮಹಾಶ್ರಯ ಕಾಣೆಲೆ ಅಯ್ಯಾ, ಅಯ್ಯಾ ನೀನು ಭಕ್ತದೇಹಿಕ ದೇವನಾದ ಕಾರಣ ಒಲಿದೆ ಮಚ್ಚಿದೆ. ಒಲುಮೆಯೂ ಮಚ್ಚು ನಿಶ್ಚಯವೆಂದು ನಂಬಿದೆ ಗುರುವೆ, ಭವಪಾಶದೂರನೆ ಕಪಿಲಸಿದ್ಧಮಲ್ಲಿಕಾರ್ಜುನ./153 |
ಅಯ್ಯಾ, ನೀನಗೆರಗಿದವರಿಗೆ ಜನವೆರಗಿ ಮರುಗುವದೆ ಕಾರಣವಯ್ಯ. ಅಯ್ಯಾ, ಹಾ ಹಾ, ನಾಲಗೆಯೆರಳೆಗೆ ಗುಣವೆಂಬ ತಂಪಿಗೆ ಜನವೆರೆಗಿ ಮರುಗುವದಯ್ಯ. ಹಾಹಾ, ಅಲ್ಲಿ ನೀನಿಪ್ಪ ಕಾರಣ ತಂಪಿನ ಸಿಂಪುಳಿಕ ಕಪಿಲಸಿದ್ಧಮಲ್ಲಿನಾಥಯ್ಯಾ./154 |
ಅಯ್ಯಾ, ನೀನಾಡುವ ಹೊಲನ, ನೀನಿಪ್ಪ ಇರವ ಕಂಡೆನೆಂಬ ಸಿದ್ಧರೆಲ್ಲ ನಿಸ್ಸಿದ್ಧರಾದರು. ಆಮಧ್ಯಾವಸಾನವನು ಭೇದಿಸುವ ಭೇದವನು ಸಾಧಿಸುವ ತರ್ಕವನು ತಂತ್ರಗಳ ತನುಗುಣ ಮಲತ್ರಯಂಗಳನತಿಗಳೆದು ಅನುಗುಣವ ಕೊಡಯ್ಯ ಕಪಿಲಸಿದ್ಧಮಲ್ಲಿಕಾರ್ಜುನ./155 |
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ. ನೀನಾ ಬ್ರಹ್ಮಾಂಡವನರಿವಾಗ ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ. ನೀನು ಸಕಲದಲ್ಲಿ ನಿಃಕಲದ್ಲ ಸ್ವಾನುಭಾವಸಂಬಂಧದಲ್ಲಿ ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ ಓಂ ಎಂಬುದೆ ನಿನ್ನ ತನುವಾಗಿ, ಆನಂದವೆಂಬುದೆ ನಿನ್ನ ಮೂರ್ತಿಯಾಗಿ ಪರಾಪರ ರೂಪೆ ನಿನ್ನವಯವವಾಗಿ ನೀನಿಪ್ಪೆಯಯ್ಯಾ ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ ಪರಮಸೀಮೆಯ ಮೀರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ ಬಸವಣ್ಣ ಗುರುವೇ, ಶರಣು/156 |
ಅಯ್ಯಾ, ನೀನೇಕೆ ಬಾರೆಯೊ ಹೇಳಯ್ಯಾ. ಅಯ್ಯ, ನೀ ಬಾರಯ್ಯ. ಬಂದೆನ್ನ ಹೃದಯ ಮನ ಹಸನಮಾಡಿ ನೀನು ನಿಲ್ಲಯ್ಯ. ಅಯ್ಯ, ನೀನು ಬಾರಾ ನಿನ್ನ ಧರ್ಮ ಕಪಿಲಸಿದ್ಧಮಲ್ಲಿಕಾರ್ಜುನ./157 |
ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ ಆನು ತನುಪ್ರಾಣ ಇಷ್ಟಲಿಂಗಿಯಾದೆನು. ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ. ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನು ನೀನೆಂಬ ಕನ್ನಡವಿನ್ನೇಕಯ್ಯ?/158 |
ಅಯ್ಯಾ, ಬಾರಯ್ಯಾ ಎನ್ನ ಕರದೊಳಿಪ್ಪನೆ, ನಿನ್ನ ಆನತದ ಕರದೊಳಿಪ್ಪನೆ, ಅಯ್ಯಾ, ನಿನ್ನ ಕರದಲ್ಲಿ ಹಿಡಿಯೆಯ್ದಿದೆ ಪದವ, ಕರುಣಾಕರನೆ, ಕಪಿಲಸಿದ್ಧಮಲ್ಲಿನಾಥಾ ಶರಣದೇಹಿಕ ದೇವನೇ ಶರಣು./159 |
ಅಯ್ಯಾ, ಬಾರಯ್ಯಾ ಬಾರಾ ಆನಂದದಾದಿಯಲ್ಲಿ ಅಯ್ಯಾ ಒಯ್ಯನೇ ಕೈಗೊಡಯ್ಯ. ಅಯ್ಯಾ ಕಂಗೆಟ್ಟ ಪಶುವಾದೆನು. ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./160 |
ಅಯ್ಯಾ, ಬ್ರಹ್ಮದಲ್ಲಿ ಅಯ್ಯಾ ನೀನು ಅ್ಕಶಯ ಜ್ಯೋತಿರ್ಮಯನು. ಆನಂದ ಸ್ಥಾನದಲ್ಲಿ ಅಯ್ಯಾ ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯ ಗುರುವಿನ ಕರುಣದಿಂದ ಎನ್ನ ಕರಸ್ಥಲದಲ್ಲಿ ಸಿಕ್ಕಿ ಒಳಗಾದೆ ಶಿವನ ಮಹಾಲಿಂಗ ಕಪಿಲಸಿದ್ಧ ಮ್ಲಕಾರ್ಜುನಾ./161 |
ಅಯ್ಯಾ, ಬ್ರಾಹ್ಮಣಂಗೆ ಬ್ರತಂಗೊಟ್ಟು ಮುಂಜಿಗಟ್ಟಿ ಅಯ್ಯಾ, ಅಯ್ಯಾ, ಅಥರ್ವಣವೇದವನು ಬ್ರಾಹ್ಮಣಂಗೆ ಉಪದೇಶವ ಮಾಡುವಂದು ಅಲ್ಲಿ ಅವನ ಶಿರಸ್ಸ ನಿನ್ನ ಹಸ್ತಮಾಣಿಕವೆಂದು ಕಟ್ಟಿದೆ, ಕಪಿಲಸಿದ್ಧಮಲ್ಲಿನಾಥಯ್ಯಾ./162 |
ಅಯ್ಯಾ, ಮನದ ರಜದ ಮಣ್ಣ ಕಳೆದು ದಯಾ ಶಾಂತಿಯುದಕವ ತೆಗೆವೆನಯ್ಯಾ, ಜಳಕವ ಮಾಡಿ ಯೋಗಕಂಪನಿಕ್ಕಿ ಹೊದೆವೆನಯ್ಯಾ, ಅದನೊಂದೆಡೆಗೆ ತಂದು ಬಟ್ಟಗಾಣದಲ್ಲಿಕ್ಕಿ ಹಿಳಿವೆನಯ್ಯಾ. ಹಿಳಿದ ರಸದ ಕಂಪ ಕೊಡುವ ಒಡೆಯ ನೀನೆ, ಕಪಿಲಸಿದ್ಧಮ್ಲನಾಥಯ್ಯಾ./163 |
ಅಯ್ಯಾ, ಮಹಾಭಕ್ತರ ಹೃದಯದಲ್ಲಿ ನೀನಿಪ್ಪೆಯಾಗಿ, ಅವರ ವಚನವೆನ್ನ ಕರ್ಣದೊಳಗೆ ತುಂಬಲೊಡನೆ, ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ ನಿಮ್ಮ ಶ್ರೀಪಾದದೊಳಗೆನ್ನ ಸುತ್ತಿತ್ತು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./164 |
ಅಯ್ಯಾ, ಮಾರಯ್ಯಾ, ಅಯ್ಯಾ, ನೀ ಬಂದು ಅನಾಹತಜ್ಞಾನದಲ್ಲಿ ಅನುದಿನ ಪ್ರವೇಶಿಸಾ, ಎಲೆ ಅಯ್ಯಾ, ನಿನ್ನ ಧರ್ಮ. ಅಯ್ಯಾ, ಅನ್ಯರಿಗೆ ಕೈಯಾನಲಾರೆ. ಅಯ್ಯಾ, ಅನ್ಯರಿಗೆ ಅಣ್ಣಾ ಎನಲಾರೆ. ಅಯ್ಯಾ, ನಿನ್ನವ ನಾನಿದ್ದು, ಅನ್ಯರನು ಆಶ್ರಯಿಸುವ ಅನ್ಯಾಯ ನಿನ್ನದು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ./165 |
ಅಯ್ಯಾ, ಮೂರು ಪುರದ ಮೇಲುಪ್ಪರಿಗೆಯ ಕೆಲಸವನೇನೆಂಬೆನಯ್ಯಾ! ಮುತ್ತಿನ ಕಳಸದ ಮೇಲೊಂದು ಅರಳಿದ ಪುಷ್ಪದ ಪರಿಯೊಳಗೆ ಅಗ್ನಿಯ ಕಂಡೆನಾಗಿ, ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಚೆನ್ನಬಸವಣ್ಣ ತೋರಿದ ಹಾದಿ ಸುಪಥವಾಯಿತ್ತಾಗಿ, ನಾನು ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು./166 |
ಅಯ್ಯಾ, ಸಂಸಾರದುಪಟಳವು ಕಾಡಿತ್ತು ಇನ್ನೇವೆನಿನ್ನೇವೆ? ಕಾಮಕಿಚ್ಚೆ ಸಿತ್ತು ಇನ್ನೇವೆನಿನ್ನೇವೆ? ಕ್ರೋಧಕಿಚ್ಚೆ ಸಿತ್ತು ಇನ್ನೇವೆನಿನ್ನೇವೆ? ನಿನ್ನ ಮಚ್ಚಲೀಯದು ಇನ್ನೇವೆನಿನ್ನೇವೆ? ಭಕ್ತಿತಾತ್ಪರ್ಯವ ಅವಮನ್ನಣೆಯ ಮಾಡಿತ್ತು ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ./167 |
ಅಯ್ಯಾ, ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ ಕಂಡಯ್ಯಾ. ಪುಣ್ಯ-ಪಾಪಂಗಳೆಂಬ ಭಂಡವನೆ ತುಂಬಿ ಪಂಚೈವರು ಏರಿದಡೆ, ಜ್ಞಾನವೆಂಬ ಕೂಕಂಬಿಯಲ್ಲಿ ಲಿಂಗವೆಂಬ ತಾರಾಮಂಡಲವ ನೋಡಿ ನಡೆಸುವುದು. ಜವನ ಕಾಲಾಳು ಕರಹಿರಿದು ಕಂಡಾ, ಸಮಭೋಗವೆಂಬ ನೇಣ ನವನಾಳದಲ್ಲಿ ಕಟ್ಟಿ ಮನವೆಂಬ ಪಾವೆಯನು ವಾಯುಗೊಳಲು ಕಳವಳವೆಂಬ ಕಡಲೊಳಗೆ ಸಿಲುಕೆ, ತೆರೆಯ ಹೊಯ್ಲು ಕರ ಹಿರಿದು ಕಂಡಯ್ಯಾ. ಉದಮದವೆಂಬ ಸುಳಿಯಲ್ಲಿ ತಿರುಗಿಸದೆ ಗುರುಪದವೆಂಬ ಬೆಂಗುಂಡ ಹಿಡಿ ಕಂಡಾ. ಇಹಲೋಕ-ಪರಲೋಕ ಕಪಿಲಸಿದ್ಧಮಲ್ಲೇಶ್ವರನ ಕಾಂಬೆ ಕಂಡಾ./168 |
ಅಯ್ಯಾ, ಸಂಸಾರವೆಂಬ ಹಾಯಿ ಹೊಡೆದು ಆನು ಬೆಚ್ಚ್ತುತ್ತಿದ್ದೇನೆ, ಬೆದರುತ್ತಿದ್ದೇನೆ. ಎಲೆಲೆ ಸಂಸಾರವೈರಿ! ನಿನ್ನವ ನಿನ್ನವ ನಿನ್ನವನೆನಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವ/169 |
ಅಯ್ಯಾ, ಹಾ! ದೈವವ ನಿದರ್ೈವವ ಮಾಡಿದಾ, ಅಯ್ಯಾ, ಮುನ್ನ ಅರ್ಚನೆ ಪೂಜನೆಗೊಡದೆ ದಕ್ಷನೇನಾದ? ಇನಿಸನರಿದು ಕೆಡುವಡೆ ನಿಮ್ಮ ಮೇಲೆ ಹೊಲ್ಲೆಹವಿಲ್ಲಯ್ಯಾ ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ./170 |
ಅಯ್ಯಾ, ಹಿಂದೆ ನಾ ಬಂದ ಹಲವು ಭವ ಸಾಲದೆ? ಏಕೆ ಕಾಡುವೆಯಯ್ಯಾ. ಹಿಂದೆ ನಿನ್ನನರಿಯದೆ ದಾನವರಾಗಿ ಹಲವು ಭವದಲ್ಲಿ ಕುಡಿದು ಆನುಂಡ ನರಕವ ನೀನರಿಯ. ಅರಿದರಿದೆನ್ನ ಕಾಡುವರೆ? ಅಯ್ಯಾ, ನಾನು ಬಂದ ಸುಖಂಗಳಲ್ಲಿ ನಿನ್ನನರಿಯದ ಕಾರಣದಲ್ಲಿ ನೀನಿಕ್ಕಿದೆ ನರಕಲ್ಲಿ, ಆನದನುಣ್ಣದ್ದಡೆ ಎನ್ನ ವಶವೆ? ಕಪಿಲಸಿದ್ಧಮಲ್ಲಿಕಾರ್ಜುನ./171 |
ಅಯ್ಯಾ, ಹಿಂದೆ ಹಲವು ಯುಗಂಗಳು ತಿರುಗಿ ಬರುತ್ತಿಪ್ಪಲ್ಲಿ, ಅವನು ನೀ ಮಾಡಿದೆಯಲ್ಲದೆ ತಮ್ಮಾಜ್ಞೆಯಿಂದ ಬಂದುಲ್ಲವಯ್ಯಾ. ಬಸವಣ್ಣಾ, ನಿಮ್ಮಾಜ್ಞೆಯಲ್ಲಿ ಯುಗಂಗಳು ಭವಭವದಲ್ಲಿ ಕಾಡಿದವು. ಬಸವಣ್ಣಾ ಸಂಸಾರವಾಗಿ ಎನ್ನನೆ ಕಾಡಿದವು. ಬಸವಣ್ಣಾ, ಹೊನ್ನು ಹೆಣ್ಣು ಮಣ್ಣು ತ್ರಿವಿಧವಾಗಿ ಎನ್ನನೆ ಕಾಡಿದವು. ಬಸವಣ್ಣಾ, ಆಶಾಪಾಶಂಗಳಾಗಿ ಎನ್ನನೆ ಕಾಡಿದವು. ಬಸವಣ್ಣಾ, ಗುರು ಬಸವಣ್ಣಾ, ಇವೆಲ್ಲಾ ನಿಮ್ಮಾಧೀನದವು; ನೀ ಮಾಡಿದಡಾದವು, ಬೇಡಾ ಎಂದಡೆ ಮಾದವು. ಅವಕ್ಕೆ ಎನ್ನನೊಪ್ಪಿಸದೆ, `ನಿನ್ನವ ನಿನ್ನವ’ ಎನಿಸಾ, ಕಪಿಲಸಿದ್ಧಮಲ್ಲಿಕಾರ್ಜುನನ ತೋರಿದ ಗುರು ಬಸವಣ್ಣಾ/172 |
ಅಯ್ಯಾ, ಹೊಟ್ಟೆ ಬೆನ್ನ ಮಚ್ಚಿದಂತೆ ನಾ ನಿನ್ನ ಮಚ್ಚಿದೆನಯ್ಯಾ. ಅಯ್ಯಾ, ನೀ ಬಾರಯ್ಯಾ ನಿವ್ಮು ಬರವ ಹಾರುತ್ತಿರ್ದೆನಯ್ಯಾ. ನಿಮ್ಮ ಬರವ ಹಾರಿ ಹಾರಿ ಕಣ್ಮುಚ್ಚದೆನ್ನ ಮನವಯ್ಯ. ಅಯ್ಯಾ, ನೀ ಬಾರಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ./173 |
ಅಯ್ಯೋ ಮಹಾದೇವ ಸುಮ್ಮನೇಕಿದ್ದಪೆ ಕರುಣಿ ಮುಂಬಾಗಿಲಲು ಬಿದ್ದ ಪಶುವೈ. ಓರಂತೆ ಎನ್ನುವನು ಆರಯ್ಯದಿದ್ದಡೆ ಹಾನಿ ನಿನಗಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನ./174 |
ಅರಣ್ಯದೊಳಗರಸಿಯರ ಪ್ರಾಣವಲ್ಲಭರು ಬಂದುಣುತ್ತೈದಾರೆ, ನೀ ಬೇಗನೇಳೆಂದಡೆ ಏಳದ ಮೊದಲೆ ಉಂಡ, ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯ/175 |
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ ಎಲೆ ಅಯ್ಯಾ, ನಿಮ್ಮ ಕಂಡು ಕಂಡು ಕಡೆಗೋಡಿವರಿದುವಯ್ಯಾ ಎನ್ನ ಮನಕ್ಕೆ ಮನ ವೇದ್ಯವಾದಡೆ ಕೈಮರದೆನೆಲೆ ಆಹಾ, ಅಯ್ಯಾ ಕಪಿಲಸಿದ್ಧಮ್ಲನಾಥನ ಕಂಡ ಸುಖವು ಆರಿಗೆಯೂ ಇಲ್ಲ./176 |
ಅರಿತವನೆಂತು ಸತ್ತನು? ಅರಿತವನೆಂತು ಹುಟ್ಟಿದನು? ಅರಿತವನೆಂತು ಅಘೋರಪಾಶಕ್ಕೆ ಒಳಗಾದನು? ಅರಿತವನೆ ಚಿರಂಜೀವಿ ನೋಡಾ, ಕಪಿಲಸಿದ್ಧ ಮಲ್ಲಿಕಾರ್ಜುನಾ./177 |
ಅರಿದ ಬಳಿಕ ಬ್ರಹ್ಮವೆಂಬುದು ಮೃಗಜಲ ನೋಡಾ. ಅರಿದ ಬಳಿಕ ಬ್ರಹ್ಮವೆಂಬುದು ವಂಧ್ಯಾಪುತ್ರ ನೋಡಾ. ಅರಿದ ಬಳಿಕ ಬ್ರಹ್ಮವೆಂಬುದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಶಬ್ದಮುಗ್ಧ ನೋಡಾ, ಕಲ್ಲಯ್ಯಾ./178 |
ಅರಿದಾಚರಿಸುವವನಾಚರಣೆ ಬ್ರಹ್ಮಮಯ. ಅರಿಯದವನಾಚರಣೆ ಮಾಯಾಮಯ. ಅರಿಯಬೇಕು, ಅರಿಯಬೇಕು ಗುರುಮುಖದಿಂದ. ಆರು ಪರಶಿವನೆಂಬುದನರಿಯದವನರಿವು, ಸ್ವಪ್ನದಲ್ಲಿಯ ರತಿಯಂತೆ, ರತಿಯಲ್ಲಿಯ ರಾಜಸುತನಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./179 |
ಅರಿದೆನು, ನಾನೇನ ಅರಿವಡೆ ಶೂನ್ಯನೆ ತೆರಹಿಲ್ಲದೊಂದು ಶುದ್ಧಘನತರವನು ನೆನಹಿನ ಮನೆಯಾಗಿ ಅವನ ನೋಟವೆ ಕೂಟ ಅವನೆನ್ನ ಕಾಯಕ್ಕೆ ಪ್ರಾಣನಾಗಿ ಪ್ರಾಣಪ್ರತಿಷ್ಠೆಯನು ತಾನು ಮಾಡುವ ರೂಪ ಶೂನ್ಯಕಾಯರು ಕಾಣಬಲ್ಲರೆ ಕಪಿಲಸಿದ್ಧಮಲ್ಲೇಶ್ವರನ?/180 |
ಅರಿಯ, ಅರಿಯದೆ ತಾ ಸಹಜ ಇರಲಿ, ಕಡೆಯಲ್ಲಿ ಪರಾತ್ಪರವಸ್ತು ತಾನೆಂಬುದು ದಿಟ ನೋಡಾ. ಅರಿದ ದಾರಿಯದು ಆರನು ಕೇಳದು; ಅರಿಯದ ದಾರಿಯದು ನೂರಾರನು ಕೇಳಿ, ಕಡೆಗೆ ಕಪಿಲಸಿದ್ಧಮಲ್ಲಿಕಾರ್ಜುನ ನಗರ ಸೇರುವುದು ಓರೆಯಾಗದು, ಕೇದಾರ ಗುರುವೆ./181 |
ಅರಿಯಬಾರದ ಘನವನರಿದು ಸಾಧಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸ್ತುತಿ ಮುತ್ತಿತ್ತು ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ./182 |
ಅರಿವಿನ ಅರಿವು ಸಾಧ್ಯವಾಯಿತ್ತು ನಿಮ್ಮಿಂದ. ಕರುಹಿನ ವಕ್ತ್ರವ ತಿಳಿಸಿದನಯ್ಯಾ. ಕಪಿಲಸಿದ್ಧಮ್ಲನಾಥಯ್ಯಾ, ಚೆನ್ನಬಸವಣ್ಣನಿಂದ ನಿಮಗೆ ಪ್ರಸನ್ನಮುಖವಾಯಿತ್ತಯ್ಯಾ./183 |
ಅರಿವಿನ ಗುಣ ಬಸವಣ್ಣನೊಳಗಡಕವಯ್ಯಾ, ಮರಹಿನ ಜ್ಞಾನ ಚೆನ್ನಬಸವಣ್ಣನೊಳಗಡಕವಯ್ಯಾ. ಅರಿವು ಮರವೆ ತಾನೆ ಶಿವರೂಪುಪ್ರಭೆ ಪ್ರಭುಲಿಂಗಮೂರ್ತಿಯಾಯಿತ್ತು ಕಪಿಲಸಿದ್ಧಮ್ಲನಾಥಯ್ಯಾ./184 |
ಅರಿವೆನೆಂದಡೆ `ಸತ್ಯಂ ಜ್ಞಾನಮನಂತಂ ಬ್ರಹ್ಮ’ ಎಂಬ ಶ್ರುತಿ ಸಾರುತ್ತಿದೆ. ಮರೆವೆನೆಂದಡೆ `ಸಾಕ್ಷಾತ್ ಸಚ್ಚಿದಾನಂದಂ ಬ್ರಹ್ಮ’ ಎಂಬ ಕೈವಲ್ಯೋಪನಿಷತ್ ಘೋಷಿಸುತ್ತಿದೆ. ಅರಿವು ವಸ್ತುಸ್ವರೂಪ, ಮರವು ಮಾಯಾಸ್ವರೂಪವೆಂದಡೆ ಆನು ನಿರ್ವಯಲ ಸ್ವರೂಪನಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./185 |
ಅರಿಷಡ್ವರ್ಗಂಗಳಳಿದವ ಶರಣನೆಂಬರು; ಅದೆಂತಯ್ಯಾ? ಕಾಮವದು ಲಿಂಗಾಂಗಾರ್ಚನೆಯಲ್ಲಿ; ಕ್ರೋಧವದು ಷಣ್ಮತನಾಶದಲ್ಲಿ; ಲೋಭವದು ಸಮ್ಯಗ್ಜ್ಞಾನದಲ್ಲಿ; ಮೋಹವದು ಮುಕ್ತ್ಯಂಗನೆಯಲ್ಲಿ; ಮದವದು ಮನದಲ್ಲಿ; ಮತ್ಸರವದು ಶಮನದಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./186 |
ಅರುವತ್ತಾರಕ್ಷರವ ಕುರುಹುಗೆಟ್ಟ ಸೀಮೆಯ ತೆರಹಿಗೆ ಬಂದವರಿನ್ನಾರೊ. ಮೇಲೆ ಬ್ರಹ್ಮಾಂಡವನು ಧರಿಸಿ ಇಲ್ಲದಂತೆಯಿಪ್ಪವರಾರೊ. ಆನಂದದಾಯ ಅಪರ ಶೂನ್ಯನಾದೆ. ಅಯ್ಯ, ಕಪಿಲಸಿದ್ಧಮಲಿಲ್ಲಿಕಾರ್ಜುನ ಅಯ್ಯ./187 |
ಅರುವತ್ತಾರು ಕೋಟಿ ಬಂಟರು ಹೆಚ್ಚಿ ಬಾಳಕೆ ಸತ್ತರೆಂದೆನಿದೆ. ಅಟ್ಟೋಗರವನವರ ಹಿಂಡೆಯ ಕೂಳಿಗಿಕ್ಕಿಸಿದೆ ನಾನುಂಬುದೇನು ಹೇಳಾ, ಕಪಿಲಸಿದ್ಧಮಲ್ಲಿನಾಥಾ ನೀನೊಬ್ಬನೆಯಾದೆ./188 |
ಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತೆನ್ನ ಮನ ನೋಡಯ್ಯಾ. ಹಾಡುವುದೊಂದೆ ವಚನ, ನೋಡುವುದೊಂದೆ ವಚನ : ವಿಷಯ ಬಿಟ್ಟು ನಿರ್ವಿಷಯನಾಗುವುದೊಂದೆ ವಚನ, ಕಪಿಲಸಿದ್ಧಮಲ್ಲೇಶನಲ್ಲಿ./189 |
ಅರುಹಿನ ಆಚರಣೆಯಿದು ಕುರುಹಿನ ಕರುಮಾಡ ನೋಡಾ, ಲಿಂಗಯ್ಯಾ. `ಕ್ರಿಯಾಪಿ ಜ್ಞಾನೇನ ವರ್ತತೇ’ ಎಂದ ಬಳಿಕ, ಅರುಹು ಬೇಕು ಆಚರಣೆಯಲ್ಲಿ, ಮರಹು ಬೇಕ ವಿಷಯಂಗಳಲ್ಲಿ. ಈ ಅರುಹಿನ ಮರವೆಯ ಶರಣನ ಕಂಡು ಕಣ್ದೆರಹುವ ಕಪಿಲಸಿದ್ಧಮಲ್ಲಿಕಾರ್ಜುನನು./190 |
ಅರುಹು ತಲೆದೋರಿದಲ್ಲಿ ವಿಷ ಬೆಲ್ಲವು ಇಕ್ಷುರಸವಾಯಿತ್ತು. ಅರುಹು ತಲೆದೋರಿದಲ್ಲಿ ಅಂಬರ ಅವಯವಕ್ಕೆ ಹೊಂದಿತ್ತಯ್ಯಾ. ಅರುಹು ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಕುರುಹು ನಾನೆಂದು ತಿಳಿಯಬಂದಿತ್ತಯ್ಯಾ ಯೋಗಿನಾಥಾ./191 |
ಅರೂಪ ರೂಪ ಭಾವನೆ:ರೂಪ ಅರೂಪ ಭಾವನೆ ಸಾರೂಪ್ಯಂಗವೆ ಶರಣು ಶರಣು ಅವಧಾರವಧಾರು ಅಯ್ಯಾ, ಎನ್ನ ಕರಣಶುದ್ಧವ ಮಾಡುವನೆ; ಕರುಣಾಕರರೂಪನೆ ತನುಮನಧನಕ್ಕೆ ಒಡೆಯನೆ, ಕಪಿಲಸಿದ್ಧಮಲ್ಲಿಕಾರ್ಜುನ./192 |
ಅರ್ಚಿಸಲು ಬೇಡವದ, ಪೂಜಿಸಲು ಬೇಡವದ ನಿತ್ಯ ಜಪತಪವು ನಿನಗೆ ಬೇಡ. ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಬಸವಾಕ್ಷರತ್ರಯವ ನೆನೆ ನಿನಗೆ ನಿತ್ಯಪದವು./193 |
ಅರ್ಚಿಸಲು ಬೇಡವದು, ಪೂಜಿಸಲು ಬೇಡ, ನಿತ್ಯ ಜಪತಪನೇಮ ನಿನಗೆ ಬೇಡ. ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನನ ಬಸವಾಕ್ಷರತ್ರಯವ ನೆನೆ ನಿತ್ಯಪದವು/194 |
ಅರ್ತಿಯಲ್ಲಿ ಮುತ್ತೈದೆ ಆರತಿವಿಡಿದು ಬಂದು ನಿಂದೈದಾಳೆಯಯ್ಯಾ ನಿಮ್ಮ ಮುಂದೆ. ನಿಜಶುದ್ಧ ಸಾರಸನ್ಮತವಾದ ಮುಖವಂತೆ, ಕಪಿಲಸಿದ್ಧಮ್ಲನಾಥಯ್ಯಾ, ನಿಮ್ಮ ಮುಖವಂತೆ ನಿಯತವ ಕಂಡಳು ಚೆನ್ನಬಸವಣ್ಣನ ಧರ್ಮದಿಂದೆ./195 |
ಅರ್ಪಿತ ಅವಧಾನ ಮುಖಂಗಳು ಎಲ್ಲರಿಗೆ ಸುಲಭವೆ, ಅನಾದಿ ಸಂಸಿದ್ಧವಾಗಿ ಬಂದ ಬಸವಣ್ಣಂಗಲ್ಲದೆ? ತ್ರೈಲಿಂಗಮೂಲಕ್ಕೆ ಮಂತ್ರಾದಿರೂಪ ಬಸವಣ್ಣ. ತೆಂಗಪ್ರಸಾದಕ್ಕೆ ಅರ್ಹ ಬಸವಣ್ಣ. ಮೂರುಂಗ ಒಂದಾದ ಮೂರ್ತಿ ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಸಾಕ್ಷಿಯಾಗಿ ಬಸವಣ್ಣನ ನೆನೆವವರು ನೀನಹರು./196 |
ಅರ್ಪಿಸೇನೆಂದೆಂಬೆ? ಅರ್ಪಿತವೇತಕ್ಕೆ? ಅರ್ಪಿತವಾರಿಗೆ? ಅರ್ಪಿತದ ಪರಿಯೆಂತುಟಯ್ಯ? ಅರ್ಪಿತದ ಮುಖವ ಬಲ್ಲವರಾರು? ಚೆನ್ನಬಸವಣ್ಣನಲ್ಲದೆ. ಅರ್ಪಿತವುಳ್ಳಡೆ ಕಲ್ಪಿತವೇಕಯ್ಯ ಕಾಡಿ[ಹ]ವು? ಅರ್ಪಿಸುವ ಭೇದವ ಚೆನ್ನಬಸವಣ್ಣ ಬಲ್ಲ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅರ್ಪಿಸಿ ಸುಖಿ ಚೆನ್ನಬಸವಣ್ಣ, ಸಾವಧಾನಿ ನಿರಂತರಂ/197 |
ಅಲ್ಲದಯ್ಯಗಳು ಇಲ್ಲದಾಟಕ್ಕೆ ಮೈಗೊಟ್ಟ ಕೇಡ ನೋಡಾ. ಇಲ್ಲದಯ್ಯಗಳು ಅಲ್ಲದಾಟಕ್ಕೆ ಮೈಗೊಡರು ನೋಡಾ. ಇಂದೆಲ್ಲ ಅಲ್ಲಮನ ಬಲ್ಲ ಬೋಧೆಯಿಂದ ಸಲ್ಲೀಲೆಯಾಯಿತ್ತು. ವಲ್ಲಭೆ ಶಿವ ಕಪಿಲಸಿದ್ಧಮಲ್ಲಿಕಾರ್ಜುನದೇವಾ/198 |
ಅಲ್ಲಮನ ಲಕ್ಷ್ಯ ವೈರಾಗ್ಯದಲ್ಲಿ; ಚೆನ್ನಬಸವಣ್ಣನ ಲಕ್ಷ್ಯ ಕ್ರಿಯಾಜ್ಞಾನದಲ್ಲಿ; ಬಸವಣ್ಣನ ಲಕ್ಷ್ಯ ಭಕ್ತಿಯಲ್ಲಿ; ಮಡಿವಾಳನ ಲಕ್ಷ್ಯ ಅಹಂಕಾರನಾಶದಲ್ಲಿ; ಸಕಳೇಶಯ್ಯನ ಲಕ್ಷ್ಯ ಸಮತೆಯಲ್ಲಿ; ಶಿವಯೋಗ ಸಿದ್ಧರಾಮನೆಂಬ ಬಾಲಕನ ಲಕ್ಷ್ಯ ಲಿಂಗಪೂಜೆಯಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುಲಿಂಗವೆ./199 |
ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ. ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ. ಎಮ್ಮಯ್ಯಗಳ ವಚನ ವಚನಕ್ಕೊಂದು. ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ. ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ. ಎಮ್ಮಕ್ಕ ನಾಗಾಯಿಯ ವಚನ ಮೂರುಲಕ್ಷದ ತೊಂಬತ್ತಾರು ಸಾಸಿರ.ಮಡಿವಾಳಣ್ಣನ ವಚನ ಮೂರು ಕೋಟಿಮುನ್ನೂರು. ಹಡಪದಯ್ಯಗಳ ವಚನ ಹನ್ನೊಂದು ಸಾಸಿರ. ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ. ಇಂತಪ್ಪ ವಚನದ ರಚನೆಯ ಬಿಟ್ಟು, ಹುಡಿಮಣ್ಣ ಹೊಯ್ಯದೆ ಮಾಬನೆ, ಕುತ್ಸಿ ಕಾವ್ಯಾಲಂಕಾರ ನೋಡುವರ ನೋಡಿ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ./200 |
ಅಲ್ಲಿರುವಾತನ ರೂಹು ನೀವಲ್ಲೆಂಬಡೆ, ಅಲ್ಲಿರುವಾತನ ರೂಹು ದೇವಾಲಯವ ತೆಗೆಸರಯ್ಯಾ. ಅಲ್ಲಿಯ ರೂಹು ಇಲ್ಲಿಯ ರೂಹು ಕಪಿಲಸಿದ್ಧಮಲ್ಲಿಕಾರ್ಜುನನೆಂದು ಕಂಡೆನು ಅಲ್ಲಮದೇವಾ, ಇನ್ನಾದರೂ ಕರುಣಿಸಯ್ಯಾ./201 |
ಅವನ ನಚ್ಚಿ ನಮ್ಮ ಬಿಟ್ಟರು ಬಿಡ ಬಿಡ ಬಿಡನೆಂತೊ, ಅವನೆಂದರಿಯೆನು ಎಮ್ಮವರು ಕರ ಮುಗಿವರು. ಅವನ ತಂದು ಕೊಡಿರಣ್ಣಾ ಎಂದೆನುತ ಕಪಿಲಸಿದ್ಧಮಲ್ಲಿಕಾರ್ಜುನ./202 |
ಅವರನಿವರಿಗೆ ಹೇಳಲದೇಕೆ, ಇವರನವರಿಗೆ ಹೇಳಲದೇಕೆ? ಒಬ್ಬರಿಗೆ ಹೇಳಿ ಕೂಗಿಡಲೇಕೆ, ಒಬ್ಬರಿಗೆ ಕಣ್ಣುಗಳ ಹರಹರಿಕೆ. ಕಪಿಲಸಿದ್ಧಮಲ್ಲಿನಾಥಾ, ನೀನಿಕ್ಕಿದ ತೊಡಕಿನ ನಾಟಕವೆಂಬುದ ನಾನರಿಯೆ ನೋಡಯ್ಯಾ./203 |
ಅವರವರ ನುಡಿದ ನುಡಿಯ ಅವರವರಿಗೆ ಹಾಸುವೆನಯ್ಯಾ, ನೋಡಾ! ಅಯ್ಯಾ! ಮತ್ತೆ ಮಾರುಗೊಂಡಡೆ ಮಾರಾಟಕ್ಕೆ ಸಂತೆಂಬೆ ನೋಡಯ್ಯಾ. ಮತ್ತೆ ಮಾರುಗೊಳ್ಳದಿರ್ದಡೆ ಮಾರಾಟಕ್ಕೆ ಸಲ್ಲದೆಂಬೆ ನೋಡಯ್ಯಾ. ನೋಡಯ್ಯಾ, ಈ ಹುಟ್ಟು ಸೈರಣೆ ಸಮತೆಯುಳ್ಳಡೆ ತನ್ನನೆ ಕೂಡಿಕೊಂಬನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಹಾ! ಅಯ್ಯಾ!/204 |
ಅವರವರ ಲಕ್ಷ್ಯ ಭಿನ್ನವಾದಲ್ಲಿ ಫಲವೇನಯ್ಯಾ? ತ್ರಿಷು ಲೋಕೇಷು ದೇವೇಶಿ ವೈರಾಗ್ಯಂ ಪೂಜ್ಯಮೇವ ಚ| ತದ್ವೆ ರಾಗ್ಯಂ ಪ್ರೋಕ್ತಂ ಹಿ ಂಗಪೂಜಾ ಚ ಪಾವನೀ|| ಜ್ಞಾನಲಿಂಗಮಿತಿ ಪ್ರೋಕ್ತಂ ಕ್ರಿಯಾಯಾ ವಿಧಿರುಚ್ಯತೇ| ದ್ವಯೋಃ ಸಂಯೋಗಮಾಪ್ನೋತಿ ಲಿಂಗಪೂಜಾ ಪ್ರಕೀರ್ತಿತಾ|| ಅನೇಕಜನ್ಮನಃ ಪುಣ್ಯಾತ್ಸರ್ವಸ್ಮಿನ್ ಭಕ್ತಿರುಚ್ಯತೇ| ಸಾ ಭಕ್ತಿಃ ಪ್ರಥಮಾ ಪೂಜಾ ಲಿಂಗಾರ್ಚನಮಥೋಚ್ಯತೇ|| ಯೋ ರುಗ್ಣತ್ಯರಿಷಡ್ವರ್ಗಂ ಸ ಏವ ಲಿಂಗಸಂಭ್ರಮಃ| ಸಮಭಾವಸ್ತು ಪೂಜಾ ಯಾ ವದಂತಿ ಮಮ ಕಿಂಕರಾಃ| ಲಿಂಗಾರ್ಚನಂ ತು ದೇವೇಶಿ ತ್ವಂ ಕರೋಷಿ ದಿನೇ ದಿನೇ| ಎಂಬುದದು ಸುಪ್ರಭೇದ ಪುಸಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?/205 |
ಅವರವರ ಸದಾಚರಣೆ ಅವರವರಿಗೆ ; ಅವರವರ ದುರಾಚರಣೆ ಅವರವರಿಗೆ. ಅವರವರ ಸದಾಚರಣೆ ನಮಗೇನು ಮೋಕ್ಷವ ಕೊಟ್ಟಿತ್ತೊ ? ಅವರವರ ದುರಾಚರಣೆ ನಮಗೇನು ಭವದಲ್ಲಿ ತಳ್ಳಿಬಿಟ್ಟಿತ್ತೊ ? ನಮ್ಮ ಲಕ್ಷ್ಯ ಲಾಂಛನದಲ್ಲಿ/206 |
ಅವಸ್ಥಾತ್ರಯ ಜೀವಂಗಾದ ಬಳಿಕ, ಜೀವವೆಂಬುದು ಪರಮಾತ್ಮ. ಪರಮಾತ್ಮಂಗವಸ್ಥಾತ್ರಯವೆಂದ ಬಳಿಕ, ಜನನಮರಣಕ್ಕೊಳಗಾಯಿತ್ತು. ಜೀವಂಗಲ್ಲ, ಪರಮಾತ್ಮಂಗಲ್ಲ, ಅಂತರಾತ್ಮಂಗಲ್ಲ, ಆಗುವ ಅವಸ್ಥೆ ಮಾಯಾಶಕ್ತಿಗೆ, ಕಪಿಲಸಿದ್ಧಮಲ್ಲಿಕಾರ್ಜುನಾ./207 |
ಅವು ಬಯಲಾದಂದಿಗೆ ಎಮ್ಮ ಪುರಾಣ ಸಾಗವೇನಯ್ಯಾ? ಎಮ್ಮ ಪುರಾಣವಾದಂದಿಗೆ ಜನರು ನಾಮವ ಹೊತ್ತು ನಡೆಯರೇನಯ್ಯಾ? ಎಮ್ಮ ಪುರಾಣ ಶಿವಪುರಾಣ ಎಮಗೆ ಗುರುಲಿಂಗ ಜಂಗಮತ್ರಯ ಒಂದೆ, ಕಪಿಲಸಿದ್ಧಮಲ್ಲಿಕಾರ್ಜುನಾ./208 |
ಅವ್ವಾ ಅವ್ವಾ, ನಾನೇನೆಂಬೆನೀ ವಿಚಿತ್ರವನು! ನೀರನೆರೆಯದೆ ಆದುದು ನೋಡವ್ವಾ ವೃಕ್ಷ; ಗಾಳಿಯಿಲ್ಲದೆ ಚಲಿಸುತ್ತಹುದು; ಋತುವಿದಾಗದೆ ಫಲವಾಗುವುದು. ಅದ ನೋಡಿ ನಮ್ಮ ಚೆನ್ನಬಸವಣ್ಣ ಮೊಳಕೆಯ ಚಿವುಟಿ ಒಗೆದ ನೋಡವ್ವಾ./209 |
ಅವ್ವಾ, ನೀ ನೀರೆರೆದಡೆ ನೆನೆಯನು, ಎರೆಯದಿರ್ದಡೆ ಒಣಗನು, ನೋಡವ್ವಾ. ಎರೆದು ಎರೆಯದಿರ್ದಡೆ ಕೂಡಿಕೊಂಡು ಮರೆವೆನವ್ವಾ, ಕಪಿಲಸಿದ್ಧಮಲ್ಲಯ್ಯನವ್ವಾ./210 |
ಅಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು, ಮಾತೆ ಹೆತ್ತು ಹೆಸರಿಟ್ಟಿತೈ, ಅಕ್ಷರಾಂಕ ಆರುವನು ಐದುವನು ಮೇಲಪ್ಪ ಮೂರುವನು ಕೂಡೆ ಹದಿನಾಲ್ಕರೊಳು ಲೋಕವಾಗೆ; ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ಅನಾದಿ ಮುಖಶೂನ್ಯವಾಗಿಪ್ಪ ಲಿಂಗವನು ಖ್ಯ್ಕಾ ಮಾಡಿದ ಬಸವ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./211 |
ಅಹುದಹುದು ಮತ್ತೇನು? ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರುಹಿಂಗೆ ಹಿರಿದು ಕಿರಿದುಂಟೆ? ಹೇಳಯ್ಯಾ. ಸಾವಂಗ ಭಯವುಂಟಲ್ಲದೆ ಅಜಾತಂಗೆ ಭಯವುಂಟೆ? ಹೇಳಯ್ಯಾ. ಕಪಿಲಸಿದ್ಧಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲುವಿಂಗೆ ಶರಣೆಂದು ಶುದ್ಧನಾದೆ ಕಾಣಾ, ಚೆನ್ನಬಸವಣ್ಣಾ./212 |
ಅಳವಟ್ಟಿತ್ತಳವಟ್ಟಿತ್ತಯ್ಯಾ, ನಿಮಗಲ್ಲದಾರಿಂಗೆ [ಜ್ಞಾನ]? ಅಳವಟ್ಟಿತ್ತಳವಟ್ಟಿತ್ತಯ್ಯಾ, ನಿಮಗಲ್ಲದಾರಿಂಗೆ [ವೈರಾಗ್ಯ]? ಅಳವಟ್ಟ ಬಳಿಕ ಕಳವಳಗೊಂಡಳು [ಮಾಯೆ], ಕಪಿಲಸಿದ್ಧಮಲ್ಲಿನಾಥಾ. /213 |
ಅಳಿಯ ಬಂದಾನೆಂಬರಯ್ಯ, ಎಲ್ಲವ ನೀನೀಗಳೀವೆಯಾಗಿ. ಅಳಿಯನಿದ್ದಹರೆಂಬರಯ್ಯ, ಅಳಿಯದಂತೆ ನೀನಿಪ್ಪೆಯಯ್ಯಾ. ಇದೆಲ್ಲವನಳಿದು ನೀನುಳಿದೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ನೀನೊಬ್ಬನಯ್ಯಾ./214 |
ಆ ಅಕ್ಷರದ ಭೇದವನರಿಯದವರ ಎಂತಯ್ಯಾ ಭಕ್ತರೆಂದೆಂಬೆ? ಆನಂದ ತನುಮನಕರಸ್ಥಳದ ಬಹಳವರಿಯದವರಿಗೆ ನೀನೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನ/215 |
ಆ ಅಕ್ಷರದಾನು ಭೇದಕ್ಕೆ ಅರಿಯನು, ಆದರಿಂದಲಾದ ಬಿಂದುಗಳೆಲ್ಲ ಅನ್ನರೂಪು. ಆಮೋದದಕ್ಷರದ ಭೇದವನು ಅರುಹಿದಾತನೆ ಗುರುವಕ್ಕು ಅಯ್ಯಾ, ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ./216 |
ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./217 |
ಆ ಅಕ್ಷರವನು ಭೇದಿಸುವ ಭಕ್ತರನು ಆನಂದದಿಂದವರ ನೀನೆಂದೆಂಬೆ ಧ್ಯಾನ ಜಪದಿಂದವರ ಆನಂದವಂ ನೆನೆವೆ ಕಾರುಣ್ಯಾಕರನೆ ಕಪಿಲಸಿದ್ಧಮಲ್ಲಿಕಾರ್ಜುನ./218 |
ಆ ಉತ್ಪತ್ಯ ಅಹಂಕಾರದಿಂದ, ಅಹಂಕಾರದ ಕೇಡು ಅರುಹಿನಿಂದ; ಅರುಹಿನ ಕೇಡು ತಾ ಬಯಲಾದಿಂದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./219 |
ಆ ಕರವು ಅಪ್ರಮಾಣವು ಸದಾಕಾಲದಲ್ಲಿ ಏಕೋದೇವನ ಹಿಡಿದು ನಿತ್ಯವಾಗಿರ್ಪುದು. ಆ ಹಸ್ತ ಅವ್ಯಕ್ತ ಹಸ್ತ ಶಿವಪಾಶ. ಆ ಹಸ್ತ ಸಕಲ ದೈವಾದಿ ಶ್ರೇಷ್ಠ ಅನೇಕ ರೂಪನ ಏಕೋರೂಪಾಗಿ ಹಿಡಿದುದೈ ಕಪಿಲಸಿದ್ಧಮಲ್ಲಿಕಾರ್ಜುನ./220 |
ಆ ಕಾಲವಾಗಲು ಧರೆ ಹತ್ತಿ ಉರಿಯಲಿ ಕೇಳಿರಣ್ಣಾ, ಅಣ್ಣಾ ಕೇಳಿರಣ್ಣಾ. ಅಂದು ಕಾಮನ ಸುಳುಹನೆಂದೂ ಕಾಣೆವಣ್ಣ. ಅಂದು ಕಾಮ ನೆಲಸಿ ನಿಂದುದ ಕಾಣೆವಣ್ಣ. ಅಂದು ಕಾಮ ನೆಲಸಿರಲಿ, ಬಿಲ್ಲು ಮುರಿದು ಧರೆ ಹರಿದು ಕಾಮನ ಕಾಣೆ, ಕಾಣೆ, ಕಾಣೆ, ಕಪಿಲಸಿದ್ಧಮಲ್ಲಿನಾಥಯ್ಯಾ./221 |
ಆ ದೇವ ಬಂದಡೆ ಈ ದೇವಿಯ ಸಂಭ್ರಮ ನೋಡಾ! ಈ ದೇವಿ ಹೋದಡೆ ಆ ದೇವನ ಮನೋವ್ಯಾಕುಲ ನೋಡಾ! ಈ ದೇವಿಯಿಲ್ಲರ್ದಡೆ ಆ ದೇವ ಸೈರಿಸನು, ಆ ದೇವನಿಲ್ಲರೆ ಈ ದೇವಿ ಸೈರಿಸಳು. ಒಂದರಲ್ಲಲ್ಲದೆ ಎರಡರ್ಥದಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./222 |
ಆ ನಿಮ್ಮ ನೆನೆಯಲು ಪೋಪೆನೆಂದಡೆ ತಾನೆನ್ನ ಕೈವಿಡಿದು ಇದ್ದೆಸೆಗಂ ಕೈದೋರ್ಪಳು. ಈ ಆಸೆಯಿಂದವೆ ನಿಮ್ಮೆಡೆಗಾಣೆನು. ಈ ಆಸೆಯೆಂಬವಳನೆಂಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನ./223 |
ಆ ಪಶುವೆಂದಡೆ ಪಶುವಲ್ಲ ನೋಡಾ; ಪಶುಪತಿ ಸಲೆ ಅಯ್ಯಾ. ಆ ಅಯ್ಯ ಹೇಳಿಹನೆಂದಡೆ ಅಯ್ಯ ಅಲ್ಲ ನೋಡಾ; ಜಗದಯ್ಯ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಹುದು./224 |
ಆ ಮಧ್ಯಾವಸಾನದ ನಾದ ಭವಿಸಿತಯ್ಯ, ಬ್ರಹ್ಮನಾದವೆ ಆನಂದವಾಗಿ. ಆಮೋದದಾ ನಾದ ನಿನ್ನ ಆದಿಯ ರೂಪಾಗಲಿಕೆ ನಾನು ಬೆರಗಾದೆ ಕಂಡಾ, ಅಭೇದ್ಯನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿಮ್ಮ ನಾಮದಲ್ಲಿ ಯವಾದೆ./225 |
ಆ ಮಧ್ಯಾವಸಾನವನರಿಯದೆ ನಾನು ಭಕ್ತ, ನಾನು ಜಂಗಮವೆಂದು ನುಡಿವ ಉದ್ದೇಶದ ಬರುಬಾಯ ಭುಂಜಕರ ನಾನೇನೆಂಬೆನಯ್ಯಾ. ಆಯನರಿದಡೆ ಗುರುಕರಜಾತನೆಂಬೆ; ಮಧ್ಯವನರಿದಡೆ ಜಂಗಮಸಹಚಾರಿಯೆಂಬೆ; ಅವಸಾನವನರಿದಡೆ ಮಹಾಲಿಂಗೈಕ್ಯನೆಂಬೆ. ಇಂತೀ ತ್ರಿವಿಧವನರಿದಡೆ ತುರ್ಯನೆಂಬೆ. ಅರಿವರತು ಮರಹು ನಷ್ಟವಾದಡೆ ಕಪಿಲಸಿದ್ಧ ಮಲ್ಲಿಕಾರ್ಜುನದೇವರು ತಾನೆಂಬೆ./226 |
ಆ ಲಿಂಗವತ್ಯಂತ ಉನ್ನತೋನ್ನತವಪ್ಪ ಭಾವಿಸುವ ಭಾವಕ್ಕೆ ಇಂಬುಗೊಡನು ಆವಾವ ಪರಿಯಲ್ಲಿ ನೋಡಿ ಕೂಡುವಡವರ್ಗೆ ನಾಮವಿಲ್ಲದೆ ರೂಪಿನಿರವು ಇಲ್ಲ ಶ್ರೀಗುರು ಚೆನ್ನಬಸವಣ್ಣನಾಜ್ಞೆಯ ಎನ್ನ ಕರಸ್ಥಳಕ್ಕೆ ನಾಮರೂಪಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./227 |
ಆ ವಿರಳದ, ಪೂರಕ ಮಣಿಯಲ್ಲಿ, ಕಂಜ ಕರ್ಣದವರನಾದಿಪುರನ ತಟಾಕದಲ್ಲಿ ಆರೂಢದಲಾ ನೀನಾದೆ ಅಭೇದ್ಯನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಆರರಿಂದಲನುಮಿಷನಾದೆ./228 |
ಆ ಶರಣನ ರೂಹು ಈ ಶರಣನ ಹಸ್ತಕಮಲದಲ್ಲಿ ತೋರುತ್ತಿದೆ ಈ ಶರಣನ ರೂಹು ಆ ಶರಣನ ಪಾದದಲ್ಲಿ ತೋರುತ್ತದೆೆ. ಆ ಶರಣನ ಪಾದ ಈ ಶರಣನ ಮಹಾಹೃದಯದಲ್ಲಿ ಮಹಾಂಗ, ನೇತ್ರದಲ್ಲಿ ಶಿವಲಿಂಗವಾಗಿ, ತೋರಿದ ಜಗತ್ತಿಗೆ ವಿಶ್ವೋದರಿಯಾಗಿ ತೋರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./229 |
ಆಂದೋಲನದಲ್ಲಿಹ ರಾಜಶಿಶುವಿನಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಸಂಧ್ಯಾಕಾಲದಲ್ಲಿಹ ಪ್ರಕಾಶದಂತೆ ವಿಷಯಸುಖವಿರಬಲ್ಲಡೆ, ಅದು ಯೋಗಿಗೆ ಭೂಷಣ. ವಾರಾಂಗನೆಯಲ್ಲಿಹ ಪ್ರ್ಕೀಯಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಪತಿವ್ರತೆಯಲ್ಲಿಹ ಭಕ್ತಿಯಂತಿರಬಲ್ಲಡೆ ಅದು ಯೋಗಿಗೆ ಭೂಷಣ. ಕಪಿಲಸಿದ್ಧಮಲ್ಲಿಕಾರ್ಜುನಂಗದು ಬಹು ತೋಷಣ ಕೇಳಾ, ಮನವೆ./230 |
ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು ಪೂಜಿಸಿದೆ ನೋಡಾ, ಮನವೆ. ಆಕಾರದ ಮ್ಕರ್ೂಯ ನಿರಾಕಾರಕ್ಕೆ ತಂದು ಪೂಜಿಸಲರಿಯೆ ನೋಡಾ, ಮನವೆ. `ಯದ್ದ ೃಷ್ಟಂ ತನ್ನಷ್ಟಂ’ ಎಂದ ಬಳಿಕ, ನಿರಾಕಾರ ನಿಜನಿರ್ವಯಲವೆ ಸ್ಥಿರವೆಂದು ನಂಬು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ./231 |
ಆಕಾಶ ಪಾಷಾಣ ಮಾಡಬಲ್ಲಾದಡೆ ಯೋಗಿ. ಪಾಷಾಣ ಆಕಾಶ ಮಾಡಬಲ್ಲಾದಡೆ ಯೋಗಿ. ಆಕಾಶದಲ್ಲಿಯ ಬಯಲು ಪಾಷಾಣದಲ್ಲಿಪ್ಪುದು ಏಕೀಯವಾಗಬಲ್ಲಾದಡೆ ಶಿವಯೋಗಿ; ಕಪಿಲಸಿದ್ಧಮಲ್ಲಿಕಾರ್ಜುನ ಆತನೆ ನೋಡಾ./232 |
ಆಕಾಶದಲ್ಲಿಯ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ ಸೂಯರ್ೊದಯಕ್ಕಯ್ಯಾ. ಆಕಾಶದಲ್ಲಿಯ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ! ಕಾಣಬಾರದು ಕಾಣಬಾರದು, ಜ್ಞಾನದಲ್ಲಿ ಆನಂದ ಅನಾನಂದವ. ಕಾಣಬಹುದು ಕಾಣಬಹುದು; ಅಜ್ಞಾನದಲ್ಲಿ ಸುಖದುಃಖೋಭಯದ್ವಂದ್ವವ. ಭೋ ಭೋ! ಕಪಿಲಸಿದ್ಧಮಲ್ಲಿಕಾರ್ಜುನ ಭೋ/233 |
ಆಕಾಶದಲ್ಲಿಯ ಮಿಂಚಿನಂತೆ, ಯೋಗಿಲ್ಲಿಯ ಕೋಪದಂತೆ ವೇಶಿಯಲ್ಲಿಯ ಅನುರಾಗದಂತೆ, ಗಾಳಿಯಲ್ಲಿಯ ದೀಪದಂತೆ, ಓಗರದಲ್ಲಿಯ ಪ್ರಸಾದದಂತೆ, ಗುರುಮೂರ್ತಿಯಲ್ಲಿಯ ಪಾದೋದಕದಂತೆ, ಕಪಿಲಸಿದ್ಧಮಲ್ಲಿಕಾರ್ಜುನನ ಲೀಲೆಯಂತೆ ಎನ್ನ ಪ್ರಾಣಂಗದ ಐಕ್ಯ. ಅದರಂತೆ ಶಬ್ದಮುಗ್ಧವಾಯಿತ್ತಯ್ಯಾ, ಶಿವಶಿವಾ, ಶಿವಶಿವಾ, ಶಿವಶಿವಾ, ಶಿವಶಿವಾ, ಶಿವಶಿವಾ/234 |
ಆಕಾಶದಲ್ಲಿಯ ಮೇಘದಂತೆ, ಜಲದಲ್ಲಿಯ ತೆರೆಯಂತೆ ಬರ್ಕ್ತುದೆ ನೋಡಾ ಈ ಘಟ. ಬಂದುದರಿಯೆ, ಹೋದುದರಿಯೆ. ನಿಂದ ವಸ್ತುವದು ನಿಜವೆಂದರಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./235 |
ಆಕಾಶದ್ಲಯ ಕಪ್ಪು ಅಂಗೈ ್ಕನ್ನೆಂದೆಡೆ ್ಕಂಬುವುದೆ ಅಯ್ಯಾ? ಮರೀಚಿಯ ನೀರು ಮಡಿಯ ಕ್ರೀಯಕ್ಕೆ ಬಾ ಎಂದಡೆ ಬರುವುದೇನೊ ಅಯ್ಯಾ? ಎಲೆ ಂಗಮ್ಕರ್ೂ ಕಪಿಲಸಿದ್ಧಮಲ್ಲಿಕಾರ್ಜುನ./236 |
ಆಗದಯ್ಯಾ, ಆಗದಯ್ಯಾ ಇಲ್ಲದವಂಗೆ; ಆಗದಯ್ಯಾ ಅಲ್ಲದವಂಗೆ; ಆಗದಯ್ಯಾ ಇಲ್ಲದವಂಗೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./237 |
ಆಗದಾಗದು ಮಾಡದವಂಗೆ ಬ್ರಹ್ಮಪದವಿ. ಆಗದಾಗದು ಮಾಡದವಂಗೆ ವಿಷ್ಣುಪದವಿ. ಆಗದಾಗದು ಮಾಡದವಂಗೆ ಶಿವಪದವಿ. ಆಗದು ಮಾಡದವಂಗೆ ತೂರ್ಯಾತೀತ ನಿರ್ಮಲ ನಿಜಾನಂದ, ಕಪಿಲಸಿದ್ಧಮಲ್ಲಿಕಾರ್ಜುನನ ಅರಿವು./238 |
ಆಗದು ಆಗದು, ಕಾಯದ ಗುಣವಳಿಯದವಂಗೆ ಜೀವನ್ಮುಕ್ತಿ. ಆಗಬೇಕು ಇದಿರಿಟ್ಟು, ಆಗಬೇಕು ಪಶ್ಚಾತ್ತಾಪ. ಆಗದೆ ಆದೆನೆಂಬ ಮನುಜನ ಅರಿವು ಶ್ವಾನನರಿವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./239 |
ಆಗಮಜ್ಞಾನಕ್ಕೆ ನೀನೆ ಕರ್ತನು ಬಸವಾ ಬಸವಾ; ಆಗಮವಿಡಿದ ಶಿವಭಕ್ತಿಗೆ ನೀನೆ ಕರ್ತನು ಬಸವಾ ಬಸವಾ; ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ಬಸವಾ./240 |
ಆಗಮಜ್ಞಾನಿ ಅಜ್ಞಾನಿಯಯ್ಯಾ ನಿಯಮಜ್ಞಾನಿ ನೀಚದೇಹಿಯಯ್ಯಾ ಶೀಲಜ್ಞಾನಿ ಸಂಕಲ್ಪದೇಹಿಯಯ್ಯಾ ನಿಮ್ಮನರಿದ ಜ್ಞಾನಿ ಏನಾಗುಣವನರಿಯನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./241 |
ಆಗಮದ ಅನು ನಿಯಮದ ಸಂದೇಹ ಯೋಗದ ಭ್ರಾಂತು ಕ್ರೀಯ ಸಂಕಲ್ಪ ನಷ್ಟದ ಚಿಂತೆ ಈ ಪಂಚಮಹಾಪಾತಕವುಳ್ಳಾತ ಭಕ್ತಿಯ ನಿಯಮಿಗನಲ್ಲ. ಚಿಂತೆ, ಸಂಕಲ್ಪ, ಭ್ರಾಂತು, ಸಂದೇಹ, ಅನುವಿನ ಗುಣವಳಿದು ತಾನಾದಡೆ, ತಾನೆ ನಿತ್ಯ ಕಾಣಾ, ಕಪಿಲಸಿದ್ಧಮಲ್ಲಿನಾಥಾ./242 |
ಆಗಮವಿಚಾರ ಅಪ್ರಮಾಣ, ನಮೋ ಬಸವಾ ಬಸವಾ, ನಮೋ ಜಯತು ಜಯತು ಕರುಣಾಕರ, ಪಾಹಿಮಾಂ ಬಸವಾ ಬಸವಾ, ಮಾರ್ಗವಲಯ ನಿಯಮಾಚಾರ ಸಮಯಭಕ್ತ ಭಕ್ತ ನಮೋ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ/243 |
ಆಗುವ ಭೋಗಂಗಳಿಗೆ ಮೈಗೊಟ್ಟುದು ಎಂದಡೆ, ಮೈಗೊಡೆದು ನೋಡಾ, ಲಿಂಗಾರ್ಚನಾಫಲ. ಆಗಬಾರದ ಕಾರ್ಯ ಮಾಡೆನೆಂದಡೆ, ಮೈಗೊಡುವುದು ನೋಡಾ, ಲಿಂಗಾರ್ಚನಾಫಲ. ದೃಢವಿರಬೇಕು ಲಿಂಗಾರ್ಚನೆಯಲ್ಲಿ! ದೃಢವಿಲ್ಲದವನ ಹೆಡಗುಡಿಯ ಕಟ್ಟಿ ಎಡಹಿಬಿಡುವ ಭವದಡಿಗೆ, ಎಮ್ಮ ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು/244 |
ಆಗುವುದನು ತಪ್ಪಿಸೆಹೆನೆಂದಡೆ ತಪ್ಪಲರಿಯದು. ಆಗು ಭೋಗಂಗಳ ತಪ್ಪಿಸುವಡೆ ಸಚ್ಚಿದಾನಂದ ಶಿವಯೋಗಿಗಲ್ಲದೆ ನರರಿಗೆಲ್ಲಿಯದೊ, ಕಪಿಲಸಿದ್ಧಮಲ್ಲಯ್ಯಾ !/245 |
ಆಗುವುದಾದಡೆ ನಿನ್ನ ಪೂಜೆಯದೇಕೊ, ಲಿಂಗ ಲಿಂಗಯ್ಯಾ? `ಯಥಾ ಭಾವಸ್ತಥಾ ದೇವಃ’ ಎಂಬ ಭಾವವಿದ್ದೆಡೆಯಲ್ಲಿ, ಆದಂತಾಗ, ಹೋದಂತೆ ಹೋಗ, ನಿಮ್ಮ ಪೂಜಿಸಿದವರಿಗೆ ಸಂಪದಾ ಮಹದೈಶ್ವರ್ಯ ತಪ್ಪದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./246 |
ಆಚಾರ ಪ್ರಾಣವಾದ ಬಳಿಕ ಅನ್ಯಕ್ಕೆರಗದಿರಬೇಕು. ಅರಿಷಡ್ವರ್ಗಂಗಳು ಒಳಗಾದ ಕರಣಂಗಳ ಕರವಾಗಿ ಅರ್ಚಿಸಬೇಕು. ಆತನೀಗ ಲಿಂಗೈಕ್ಯ. ಆತನೀಗ ಪಾದೋದಕ ಪ್ರಮಾಣನರಿದಾತ. ಭಕ್ತಿಯ ತಾತ್ಪರಿಯವನರಿದಾತ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತಾತ್ಪರ್ಯವಾದಾತ/247 |
ಆಚಾರ ಪ್ರಾಣವಾದ ಬಳಿಕ ಅನಾಹತವಿದೆಂದರಿಯಬೇಕು. ಅನಾಹತವಿದೆಂದರಿದ ಬಳಿಕ ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿಯಬೇಕು. ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದ ಬಳಿಕ ಸರ್ವವೂ ತಾನೆಯಾಗಿರಬೇಕು. ಸರ್ವವೂ ತಾನೆಯಾದ ಬಳಿಕ ಅಪ್ಪುದೊಂದರಿದುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ ಆತನು ಸ್ವಾತಂತ್ರನಲ್ಲದೆ./248 |
ಆಚಾರ ಪ್ರಾಣವಾದಡೆ ಅನ್ಯಕ್ಕೆರಗದಿರಬೇಕು. ಪ್ರಾಣಂಗ ಸಂಬಂಧಿಯಾದ ಬಳಿಕ ಕಾಯಕ್ಕಳಿವಿಲ್ಲರಬೇಕು. ಐಕ್ಯನಾದ ಬಳಿಕ ಸಕಲ ನಿಷ್ಕಲದ್ಲ ಪೂರ್ಣನಾಗಿರಬೇಕು. ಇನಿತು ಉಳ್ಳಡೆ ಅವನೈಕ್ಯ, ಅಲ್ಲದ್ದಡೆ ಆತನಭ್ಯಾಸಿ. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ಇಂಥವರನೊಲಿವ ಅಂಥವರನೊಲ್ಲ./249 |
ಆಚಾರವಿಚಾರ, ಗುರುವಿಚಾರ, ಲಿಂಗವಿಚಾರ, ಸರ್ವವಿಚಾರ ತಿಳುಹಿದವರು ನೀವೆ. ನುಡಿದಂತೆ ನಡೆವಲ್ಲಿ ಭೇದದ ಅನುಭವ ಮಾಡಿ ಹೇಳುವವರು ನೀವೆ. ಈ ನುಡಿಗಡಣವು ಕಪಿಲಸಿದ್ಧಮಲ್ಲಿಕಾರ್ಜುಲಿಂಗಕ್ಕೆ ಸೊಗಸದು, ಕೇಳಾ ಪ್ರಭುವೆ./250 |
ಆಚಾರವಿಲ್ಲದವನ ಗುರು ಕಂಡಡೆ, ವಿಚಾರಿಸಿ ನೋಡನು ಜ್ಞಾನಜ್ಞಾನದಲ್ಲಿ. ಆಚಾರವಿಲ್ಲದ ಗುರು, ಆಚಾರವಿಲ್ಲದ ಶಿಷ್ಯ ಇವರೀರ್ವರು ಚರಿಸಿ ಬೆಡಗಿನ ಭವಕ್ಕೆ ಗುರಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ./251 |
ಆಜ್ಞಾಸಿದ್ಧನ ಆನಂದಸ್ಥಾನದಲ್ಲಿ ಕಂಡೆ, ಒಪ್ಪಿರ್ದ ಶುದ್ಧ ಸಿಂಹಾಸನಾರೂಢನಾಗಿ, ಒಪ್ಪಿರ್ದ ಅಪರ ಮಧ್ಯ ಪೂರ್ವವೆಂಬ ಹೋಬಳಿಗೆ ತಾನೆ ಹೊಲಬಿಗನಾಗಿ, ಬಂದವರನೊಳಕೊಂಡು ಬಹವರನು ಕರೆವುತ್ತ, ಬಾರದವರನೇಡಿಸುತ್ತ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಅಜ್ಞಾನಭರಿತನಾಗಿ ಇದ್ದಾನು./252 |
ಆಜ್ಞಾಸಿದ್ಧನನರ್ಚಿಸಿ[ಹೆ]ನೆಂದೆಂಬೆ, ಆ ಅಕ್ಷರದ ಪವಣೆಂತುಟು? ಮುನ್ನ ಮುವತ್ತಾರು ತನ್ನ ಸ್ಥಲದೊಳಗೊಪ್ಪಿ ಇನ್ನು ನಾ ನೀನೆಂದೆಂಬ ಸಂದಿಲ್ಲವಯ್ಯಾ. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಮಂಗಳದ ಬಯಲೊಳಗೆ ಬೆಳಗುತಾನೆ./253 |
ಆಜ್ಞಾಸಿದ್ಧನನರ್ಚಿಸುವಲ್ಲಿ ಆರಯ್ಯಾ ಬಲ್ಲವರು, ಚೆನ್ನಬಸವಣ್ಣನಲ್ಲದೆ? ಮೂರ್ತಿಯೆಂಟು ಆಗದ ಮುನ್ನ ಮುಖಲಿಂಗವಾಗಿರ್ದ ಸುದ್ದಿಯನಾರಯ್ಯ ಬಲ್ಲವರು, ಚೆನ್ನಬಸವಣ್ಣನಲ್ಲದೆ? ಸದಮಲಜ್ಞಾನದಲ್ಲಿ ಒಪ್ಪಿಪ್ಪ ಅಕ್ಷರದ್ವಯದ ಭೇದಾ ಭೇದವ ಭೇದಿಸಿ ಲೋಕಕ್ಕೆ ಭಕ್ತಿಯ ಸಾಧಿಸಿಕೊಟ್ಟು ಲೋಕಕ್ಕೆ ಉರುತರ ಗುರುವಾದ ಕಾರಣ ಚೆನ್ನಬಸವಣ್ಣನೈ, ಕಪಿಲಸಿದ್ಧಮಲ್ಲಿಕಾರ್ಜುನ./254 |
ಆಜ್ಞಾಸಿದ್ಧನನರ್ಚಿಸೇನೆಂದರೆ ಎಂತರ್ಚಿಸಲಹುದಯ್ಯ? ಐವೆರಡನತಿಗಳೆದಲ್ಲದೆ, ಮೂರಾರ ಜರಿದಲ್ಲದೆ, ಏಳೆಂಟನತಿಗಳೆದಲ್ಲದೆ, ಆರಾರ ಮೀರಿದಲ್ಲದೆ, ಎಂತರ್ಚಿಸಲಹುದಯ್ಯ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನಂದವನೆಯ್ದಿದ ಆಜ್ಞಾಸಿದ್ಧರಿಗಲ್ಲದೆ ಎಂತರ್ಚಿಸಲಹುದಯ್ಯಾ?/255 |
ಆಜ್ಞೆಯನು ಮೀರಿಪ್ಪುದಾನತದ ಸಂಬಂಧ, ತಾನು ಅಜಲೋಕದ ನಿತ್ಯ ಸುಖಿಯೆ, ಸ್ವಾನುಭಾವೈಕ್ಯದ ಆನತದ ಸಂಬಂಧ. ಸೋಮರೀತಿಯ ದೀಪ್ತಿ, ಸಾಮಜನೊಡನಾಟ ನಾಮಲೀಯನ ಕೂಟ ಕಾಮ್ಯಾಥರ್ಿಗಳಿಗಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನನು./256 |
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕೃಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ./257 |
ಆಡಂಬರದಯ್ಯಗಳ ಕಂಡಡೆ ಆಡಬೇಡ ಅವರ ಪಾದೋದಕ ಪ್ರಸಾದ ಸ್ವೀಕಾರದಲ್ಲಿ. ಆಡು ಆಡುವರ ಕಾಲ ಛಲ ಶೀಲ ಜ್ಞಾನವಿಡಿದಾಡಿ, ಆಡದೆ ಆಡಿದಡೆ ಆಡಿಸುವ ಭವದ ಕುಳಿಯಲ್ಲಿ ಕಡುಜಾಣ ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥ./258 |
ಆತ ಬಂದಾನಂದ ಅಕ್ಷರ ದೀಕ್ಷೆಯನು ಗೋಪ್ಯತರಂದದನು ಸಂಭವಿಸಲು, ಖ್ಯಾತ ಮೂವತ್ತಾರು ಬೆರಸಿ ಬೆರೆಯದ ತತ್ವ, ಆ ಗುರುವ ಪಾಲಿಸಿದ ಶಿಷ್ಯ ಜ್ಯೋತಿರ್ಮಯನೈ ಕಪಿಲಸಿದ್ಧಮಲ್ಲಿಕಾರ್ಜುನ./259 |
ಆತನ ಸುಖದುಃಖವೀತಗೇನು? ಈತನ ಸುಖದುಃಖವಾತಗೇನು? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಅರಿವ ಸಂತೈಸಿಕೊಳ್ಳಿ. ರಂಭೆ ಎಂದಡೆ ನಿನ್ನಂಗನೆಯಾಗಲಿಲ್ಲವು; ಒಂದಿನ ಸ್ವಪ್ನದಲ್ಲಾದಡೂ ರತಿಸಲಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./260 |
ಆತನೆನ್ನ ನೆನೆವನಾಗಿ ನೆನೆವೆ; ಆತನೆನಗೆ ಕೂಪನಾಗಿ ಕೂಪೆ. ಹತ್ತಿದಡೆ ಹರಿಯ ಕಾಣೆ, ಬಿಚ್ಚಿದಡೆ ಬೇರೆ ಕಾಣೆ. ಇಂತೊಬ್ಬರೊಬ್ಬರನು ನೆರೆದು ತಾನು ತಾನಾಗಿದ್ದ, ಕಪಿಲಸಿದ್ಧಮಲ್ಲಿನಾಥ ದೇವರ ದೇವ./261 |
ಆತ್ಮತೇಜದಿಂದ ಹಣೆಗಣ್ಣ ತೆಗೆದಲ್ಲಿ, ಆತ್ಮಘಟವಳಿದವಂಗೆ, ಕಾಲಕಣ್ಣ ತೆಗೆದು ಹಣೆಗಣ್ಣ ಮುಚ್ಚಿದೆನೆಂಬ ಅಹಂಕಾರವಡಗಿಯಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗಕ್ಕೊಳಗಲ್ಲ./262 |
ಆದಿ ಆಧಾರವಿಲ್ಲದಂದಿನ ಸಾದಾಖ್ಯ ದೇಹಲಿಲ್ಲದಂದಿನ ಅನಾದಿ ಸಂಸಿದ್ಧನ ಆಗುಮಾಡಿ ಹೆಸರಿಟ್ಟು, ಕರಸ್ಥಲಕ್ಕೆ ತಂದುಕೊಟ್ಟ ಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./263 |
ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ./264 |
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ, ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ./265 |
ಆದಿಯಕ್ಷರ ಸೊಮ್ಮಿನಾನತದ ಭೇದವನು ನಾದಮಧ್ಯದೊಳಗೆ ಭೇದಿಸಿತ್ತು. ಆದ್ಯಂತ ಶೂನ್ಯ ಕಪಿಲಸಿದ್ಧಮಲ್ಲೇಶ್ವರನ ಆಮೋದದಾ ಮನೆಯಲಿತ್ತು ತೋರಿ./266 |
ಆದಿಯಕ್ಷರದಂತೆ ಆದವು ನಿನ್ನಾಗೆ ಆಮೋದದಾಹಾರವಯ್ಯ. ಹುಟ್ಟುಗೆಟ್ಟಭವನೆ ಕೇಳಾ ಅಯ್ಯಾ, ನೀನು ಹುಟ್ಟಿದಡೆ ಲಜ್ಜೆ ನಿನಗೆ. ಮುಕ್ತಿ ಪುದಿದಾ ಲೋಕದಲ್ಲಿ ಹುಟ್ಟಿದೆಯಾದಡೆ ನಿಷ್ಠೆ ನಿನ್ನ ಹೊರೆವುದು. ಕಪಿಲಸಿದ್ಧಮಲ್ಲಿನಾಥಯ್ಯಾ ನೀ ಹೊತ್ತ ಹೊರೆಯನಿಳುಹುವರಿಲ್ಲ./267 |
ಆದಿಯಲ್ಲಿ ಬಯಲು, ಅಂತ್ಯದಲ್ಲಿ ಬಯಲು, ಮಧ್ಯದಲ್ಲಿ ತೋರಿ ಕೆಡುವುದದು ನೋಡಾ, ಈ ಘಟವು. ತೋರಿ ತೋರಿ ಕೆಡುವುದಕ್ಕೆ, ಈ ಜಗದ್ಲ ಇದೆ ದೃಷ್ಟ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ./268 |
ಆದಿಯಾಧಾರದಲ್ಲಿ ಆದಿಯಿಲ್ಲದ ಮುನ್ನ, ಅನಾದಿ ಸಂಸಿದ್ಧನಯ್ಯಾ ಬಸವಣ್ಣನು. ಲೋಕವೀರೇಳರ ಆಕಾರವಿಲ್ಲದಲ್ಲಿ, ಏಕೈಕರೂಪನಯ್ಯಾ ಚೆನ್ನಬಸವಣ್ಣನು. ಸಾಕಾರದಿಂದತ್ತ ನಿರ್ಮಾಯ ಬಂದನು, ಲೋಕಪಾವನಮೂರ್ತಿ ಪ್ರಭುರಾಯನು. ಇಂತೆನ್ನ ಭವದ ಬೇರ ಹರಿದು ಹದುಳ ಮಾಡಿ ಶರಣರೊಳಗಿರಿಸಿದ ಗುರು ಇಂತು ಮೂವರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./269 |
ಆದಿಯಾಧಾರವಿಲ್ಲದಂದಿನ ಪ್ರಸಾದ; ಅಗಮ್ಯ ಅಗೋಚರ ಅಪ್ರಮಾಣವೆಂದೆನಿಸುವ ಪ್ರಸಾದ; `ಅಣೋರಣೀಯಾನ್ ಮಹತೋ ಮಹೀಯಾನ್’ ಎಂದೆನಿಸುವ ಪ್ರಸಾದ; `ನಿಜತ್ವ ಪ್ರಾಣನಿರ್ಮಲಂ’ ಎಂದೆನಿಸುವ ಪ್ರಸಾದ; `ಶಿವೈಕ್ಯಂ ಸುಖಸಂಬಂಧಂ’ ಎಂದೆನಿಸುವ ಪ್ರಸಾದ; `ಪರಮಾತ್ಮೇತ್ಯಯಂ ರುದ್ರಃ’ ಎಂದೆನಿಸುವ ಪ್ರಸಾದ; `ಅಕ್ಷರಾತ್ಮಾ ಶಿವಂ ಸೂತ್ರಂ’ ಎಂದೆನಿಸುವ ಪ್ರಸಾದ; ಇನಿತಪ್ಪ ಪರಮಸುಖದ ಪರಮಪ್ರಸಾದವು ಒಂದಾಗಿ, ನಿತ್ಯಮುತ್ತೈದೆಯ ಭಾವದಲ್ಲಿ ಶುದ್ಧವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ./270 |
ಆದಿಯಿಂದ ನಿಮ್ಮಿಂದಲಾನಾದೆನಯ್ಯಾ. ಅನಾದಿಯಲ್ಲಿ ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ. ನಿಮ್ಮ ಹಸ್ತ ಮುಟ್ಟಿದಲ್ಲಿ, ನಿಮ್ಮನೆನ್ನ ಮನದೊಳಗಿಟ್ಟುಕೊಂಡಿರ್ದೆನಯ್ಯಾ. ಕಾಯವೆಂಬ ಕಪಟವನೊಡ್ಡಿ ನಿಮ್ಮ ಮರಸಿಕೊಂಡಿರ್ದಡೆ, ನಿಮ್ಮ ಬೆಂಬಳಿಯ ಸಂದು ನಿಮ್ಮ ಕಂಡೆನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಎನ್ನಂತರಂಗವ ಶುದ್ಧವ ಮಾಡಿ ತಿಳುಹಾ, ನಿಮ್ಮ ಧರ್ಮ./271 |
ಆದಿರುದ್ರನೆಂಬಾತನ ಭೇದಿಸಿಹೆನೆಂದೆಂಬಡೆ ವಾದಿಗಳಿಗಾಗದು ಕಂಡಾ. ಸಾಧಾರಣತನುವ ಕಳೆದು ಭೇದಿಸುವ ರೀತಿಯರಿವು ಮಾಧವಗೀಧವನೆಂಬವರು ಅನಾದಿಬ್ರಹ್ಮವನರಿಯರು ಕಪಿಲಸಿದ್ಧಮಲ್ಲಿಕಾರ್ಜುನದೇವಾ./272 |
ಆದ್ಯಕ್ಷರದ ಭೇದವ, ನಾದದಾಮೋದದ ಆನಂದವ, ನಾನು ನೀನೆಂಬ ಸಂದು ಸವೆದ ಭೇದವ, ಅದನೇನೆಂಬೆನಯ್ಯಾ? ಅದು ವಾಙ್ಮನಸಾಗೋಚರವ. ಅದು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನೀ ಬಂದು ತೋರಿ ನೀ ಸಾಕ್ಷಿಯಾಗಿ ನೀನೆಯೆಂಬೆ./273 |
ಆದ್ಯಕ್ಷರದ ಭೇದವನರಿದೆನೆಂಬ ಯೋಗಿ ನೀ ಕೇಳಾ: ಆಗೆ ಅನಾದಿ ಅಂತ್ಯವಾಗಿಪ್ಪುದು, ನಿತ್ಯವು ತಾ ನಿನಗರಿಯಬಪ್ಪುದೆ? ಆದಿಯ ನಾದದ ಆಮೋದವನು ಭೇದಿಸಿ ಹಿಡಿದಾತ ಸಾಧಕ ಸಿದ್ಧನೆ? ಅಲ್ಲ, ಆತ ಸುಸಿದ್ಧ! ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ, ಅನಾಹತಬ್ರಹ್ಮದಲ್ಲಿ ಆಂದೋಳನು./274 |
ಆದ್ಯಕ್ಷರದ್ವಯವು ಅಜಲೋಕದ ಹೆಸರಿಡಕಳವಲ್ಲ, ಹೆಸರುಗೆಟ್ಟಾ ಸೀಮೆ ಪಸರಿಸುತಿಕ್ಕು. ಮತ್ತಾನಂದದ ಹೆಸರಿಡುವ ಸೀಮೆಯನು ಗುರುವಾಗಿ ಪಸರಿಸಲು, ವಸುಧೆ ಕಂಡಿತು ಒಂದು ಲಿಂಗರೂಪ. ಆನಂದರೂಪ ಕಪಿಲಸಿದ್ಧಮಲ್ಲಿಕಾರ್ಜುನಾ ಸೀಮೆಯೊಳಗಡಗಿಪ್ಪನಂತ ಬ್ರಹ್ಮಾಂಡವು./275 |
ಆದ್ಯರ ನುಡಿ ಆದ್ಯಂಗಲ್ಲದೆ, ವೇದ್ಯರಿಗೆ ಸಾಧ್ಯವಾಗದೆಂಬ ನುಡಿ ಹೊಲ್ಲ. ಈತ ಆದ್ಯನೊ, ಮಧ್ಯದಲ್ಲಿಂದ ಬಂದಾತನೊ ಅಯ್ಯಾ? ತಿಳಿದು ನೋಡುವಡೆ ಸ್ವಯಂವೇದ್ಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./276 |
ಆದ್ಯರ ವಚನಕ್ಕೆ, ಅಷ್ಟಾವರಣದ ಸಂಗನಬಸವಯ್ಯನ ವಚನವ ಕೇಳಿ ಪದ್ಮಿನಿಯಲ್ಲಿ ಬೆರಗಾದ ಕಾಮಿಯಂತೆ, ಎರೆದು ನಿದ್ರಿ ಬಾಲನಂತೆ, ಕಾಯವ ದಣಿಸಿದ ಕೃಷೀವಲನ ನಿದ್ರೆಯಂತೆ ಪರವಶನಾದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ./277 |
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧ ಆಜ್ಞೆ ಎಂದೆಂಬರು ಈ ಆರ ಬಲ್ಲಡೆ ನೀವು ಹೇಳಿರೇ. ಆಯನುಳ್ಳುದೆ ಆಧಾರ; ಆಧಾರವ ಕೂಡಿಪ್ಪುದೆ ಸ್ವಾಧಿಷ್ಠಾನ; ಮಣಿಯ ಬೆಳಗಿನಲ್ಲಿಪ್ಪುದೆ ಮಣಿಪೂರಕ; ಆಸೆಯಿಲ್ಲದುದೆ ಅನಾಹತ; ಅಲ್ಲ ಅಹುದೆಂಬುದನತಿಗಳೆಯದಿಹುದೆ ವಿಶ್ಧುದ್ಧಿ ಸರ್ವ ಜೀವಂಗಳಲ್ಲಿ ದಯವನುಳ್ಳದೆ ಆಜ್ಞೆ ; – ಇಂತಪುದೀಗ ಶಿವಯೋಗ. ಉಳಿದ ಅಭ್ಯಾಸಯೋಗಿಗಳ ಕಂಡು ನಗುತಿರ್ದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./278 |
ಆಧಾರದಿಂದಲು ವೇಧೆವರಿಯಿತ್ತಯ್ಯ ಸಾಧಿಸುತೈತೆ ಸಕಲ ನಿಃಕ್ರಿಯವ. ಆ ಅಕ್ಷರವನು ಭೇದಿತ್ತಡೆ ಅದನು ರೂಪು ಮಾಡಿದ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./279 |
ಆಧಾರಸ್ಥಾನದ ಅನಿಮಿಷ ಲಿಂಗವನು ವಾಯದ ಕರದಲ್ಲಿ ಭೇದಮಾಡಿ, ಆಧಾರ ಸ್ಥಾನದ ಒಳಹೊಕ್ಕಡದು ತಾನು ವಾಯಾಕರ ನಿತ್ಯಕರವಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನ, ಸೋಹಂ ಪದಾರ್ಥಕ್ಕೆ ಬೀಜ ತಾನು/280 |
ಆಧಾರಾಧೇಯ ಧರ್ಮಕೂಲಂ’ ನಮೋ, ಬಸವ ಬಸವಾ. `ಸ್ವಾದುಸಜ್ಜನಸಮಯಾಚಾರಂ’ ನಮೋ, ಬಸವ ಬಸವಾ. `ಪ್ರಾಣಂಗಸಂಬಂಧಿತಂ’ ನಮೋ, ಬಸವ ಬಸವಾ. `ಕಪಿಲಸಿದ್ಧಮಲ್ಲಿನಾಥಂ’ ನಮೋ, ಬಸವ ಬಸವಾ./281 |
ಆಧೇಯಾಧಾರವಿಲ್ಲದಂದಿನ ಶ್ರೀವಿಭೂತಿಯನೆನ್ನ ಲಲಾಟದಲ್ಲಿ ಪಟ್ಟವ ಕಟ್ಟಿದನಯ್ಯಾ, ಎನ್ನ ತಂದೆ ಬಸವಣ್ಣನು. ಆ ವಿಭೂತಿಯನೆನ್ನಂಗದಲ್ಲಿ ಧರಿಸಿದಲ್ಲದೆ ಲಿಂಗಾರ್ಚನೆಯ ಮಾಡೆನಯ್ಯಾ. ಆ ವಿಭೂತಿಯನಾಗಮಸ್ಥಾನವನರಿದು ಧರಿಸಿ ನಿಮ್ಮಡಿಯ ನಂಬಿದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ./282 |
ಆನಂದ ಬ್ರಹ್ಮನ ತಾನೊಂದು ರೂಪಾಗಿ ತಾನು ತನ್ನೊಳಗೆ ತುರಿಯಾತುರಿಯದ ಭಾನುವಿನ ಉದಯದೊಳು ಆನತವು ಕಮಳಕ್ಕೆ ಸ್ವಾನುಭೂತೈಕ್ಯದೊಳು ತನುಲಿಂಗದ ಸೀಮೆಯನು ಪರದಲ್ಲಿ ಭಾವವನು ಮನದಲ್ಲಿ ಆನತದ ದೀಕ್ಷಿತಾ ತನುತ್ರಯದಲಿ ನಾಮದರ ಕಪಿಲಸಿದ್ಧಮಲ್ಲಿಕಾರ್ಜುನನೆಂಬವನ ಕಾಮ್ಯಾರ್ಥದಲಿ ತಾನು ಕಾಣಲರಿದು./283 |
ಆನಂದದಗ್ನಿಯ ಆನು ತರಹೋದರೆ ಸಾಧಿಸಿದವಯ್ಯ ಎನ್ನ ಕರ್ಮಂಗಳು, ಭೇಸಿದವಯ್ಯ ಎನ್ನ ಕರಣಂಗಳು, ಆಮೋದವಾದವಯ್ಯ ಎನ್ನ ಅವಯವಂಗಳು. ಆನಂದಸ್ಥಾನದ ಆದ್ಯಕ್ಷರಂಗಳ ಭೇದಿಹೆನೆಂದರೆ ಅದು ಸಾಧ್ಯವಿಲ್ಲ. ಆಧಾರದ ಆನತದ ಭೇದವನರಿದಾತ ಸಾಧಿಸಿದನೌ ಎನ್ನ ಕಪಿಲಸಿದ್ಧಮಲ್ಲೇಶ್ವರನ./284 |
ಆನಂದಲೋಕದಲಿ ತಾನೊಂದು ರೂಪಾಗಿ ಸಾನಂದವನು ಬೆಳೆಸಿ ಹಲವರೊಳು ಹಲವು ಬಣ್ಣದ ಹಕ್ಕಿ ಶೂನ್ಯವ ನುಂಗಿದ ಕುರುಹಿಲ್ಲದ ಯೋಗಕ್ಕೆ ನೆಲೆ ಮುನ್ನಿಲ್ಲ. ಆನಿಮಿಷನೆಂಬಾತನ ಕರಸ್ಥಲದಲ್ಲಿ ಸಕಲಯೋಗವಡಗಿತ್ತು ಕಪಿಲಸಿದ್ಧಮಲ್ಲಿಕಾರ್ಜುನ./285 |
ಆನಂದವೆಂಬ ತರತರಂಗಳಲಿ ಒಡನೆ ಆಡಿದೆನಯ್ಯಾ. ಆಡಿದ ಚಿತ್ರವು ವಿಚಿತ್ರವಾಯಿತಯ್ಯಾ, ನಿನ್ನ ಕೂಟದ ಸಂಗಮ ಆರರಲ್ಲಿ ಮೀದಿದ್ದ ಕಾರಣ ಎನಗೆ ಸಮನಿಸಿತು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ./286 |
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ./287 |
ಆನಂದಸ್ಥಾನ ಅಪರಸ್ಥಾನ ಮಧ್ಯಮಸ್ಥಾನದ ಭೇದಂಗಳ ಹೇಳುವೆ: ಆನಂದಕ್ಕೆ ಅನೇಕ ಪರಿಯ ಬಣ್ಣ, ಅರುವತ್ತೆಸಳಿನ ಕಮಳ, ಹನಾರಕ್ಷರ ವಿಪರೀತ, ಬಹುಶ್ರುತನೆಂಬಾತನಧಿದೇವತೆ. ಅಪರಸ್ಥಾನದಲ್ಲಿ ಅಕ್ಷರವೆರಡರ ಸಿಂಹಾಸನ, ಆಮಧ್ಯಸ್ಥಾನವಿಲ್ಲದ ಕಮಲವೊಂದು ಎಸಳು ಎರಡು ಅಪರಸ್ಥಾನಕ್ಕೆ ಅಜಲೋಕಪರಿಯಂತ ವೇಧಿಸುತಿಪ್ಪ ಕಮಳ ಶುದ್ಧ ಸ್ಫಟಿಕ ಸಂಕಾಶವರ್ಣ ಅವ್ವೆಯ ಆಂದೋಳದ ಕ್ರಿಯಾಕಾರ ತ್ವಮಸಿಯೆಂಬ ನೀಲಾಸಂಗಮ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅಧಿದೇವತೆ./288 |
ಆನಂದಸ್ಥಾನದಲ್ಲಿ ಅರ್ಪಿತವಾರರಲ್ಲಿ ಅರ್ಪಿಸುವ ಭೇದ; ಅನಿಮಿಷವೆಂಬ ಆನಂದಸ್ಥಾನದಲ್ಲಿ ನಿತ್ಯಾರ್ಪಿತವ ತೃಪ್ತಿಯ ಭೇದ; ಸಂಯೋಗ ಸಮನಿಸಿ ಅರ್ಪಿಸುವ ಮುಖದಲ್ಲಿ ಆರುವಿಧದಾನಂದ. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಪಂಚೇಂದ್ರಿಯಗಳ ಭೇದವಲ್ಲದೆ ಲಿಂಗಪ್ರಾಣವ ಮಾಡಿ ನಿಜಪ್ರಸಾದವ ನೆಲೆಗೊಳಿಸುವ ಭೇದ; ಅರುವತ್ತುನಾಲ್ಕು ಅನುಬಂಧಂಗಳಿಂದವೆ ನೂರೆಂಟು ಕರಣಂಗಳಲ್ಲಿ ಸ್ವಾದಿಸುವ ಸುಖಿಸುವ ಭೇದವನಾರು ಬಲ್ಲರಯ್ಯಾ? ಕ್ಷೆಯ್ಲ ವ್ಯಜ್ಞಾನಿ, ಶಿಕ್ಷೆಯ್ಲ ಸಮ್ಯಗ್ಜ್ಞಾನಿ, ಸ್ವಾನುಭಾವದಲ್ಲಿ ತಾನೆ ರೂಪು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಅವಗ್ರಹಿಸಿದ ಪ್ರಸನ್ನಪ್ರಸಾಯ ಆರು ಬಲ್ಲರಯ್ಯಾ, ನೀನು ನಿನ್ನ ಶರಣರಲ್ಲದೆ?/289 |
ಆನಂದಸ್ಥಾನದಲ್ಲಿ, ಶುದ್ಧಧವಳ ಮನೆಯಲ್ಲಿ, ನಿತ್ಯ ಜಾಗರವ ಮಾಡುವ ಅವ್ವೆ ನೀ ಕೇಳಾ. ಬಂದವರ ಬಲ್ಲ ಹೋದವರ ಬಲ್ಲ ಬಂದವರುಲ್ಲಿಬರಿದ್ವೆ ಹೋದರು ಭವಕ್ಕೆ ಹೇತುವಾಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಾಣದೆ/290 |
ಆನತದಲಾನಂದ ಆಜ ಆಧಾರದಲಿ ಸಾಧಿಸುವ ಪರಬ್ರಹ್ಮದಾನಂದವ ತೋರಿಸಿದ ಗುರು ಕಪಿಲಸಿದ್ಧಮಲ್ಲೇಶ್ವರನ ತೋರಿಸಿದ ಗುರು ಮತ್ತೆ ಅಪ್ರಮೇಯನೈ./291 |
ಆನರಿಯೆನಯ್ಯಾ, ಪಶು ನಂಬುವಂತೆ ನಂಬುವೆ. ನೀನು ಕೊಂದಲ್ಲಿ ಸಾವೆ, ಆನರಿಯೆನಯ್ಯಾ, ನೀನು ಕಾಯ್ದಲ್ಲಿ ಬದುಕುವೆ, ಆನರಿಯೆನಯ್ಯಾ. ಪಶು ನಂಬುವಂತೆ ನಂಬುವೆ, ಶಿಶು ಬೇಡುವಂತೆ ಬೇಡುವೆ. ಅರಿವಿಲ್ಲದವನಲ್ಲಿ ಅರಿವ ನೀನರಸುವರೆ? ನೀನರಿಯೆಂದಡರಿವೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ./292 |
ಆನೀ ಲೋಕದ ಹರಕೆಯ ಹರಸೆನಯ್ಯಾ. ಆನೀ ಲೋಕದ ಕೊಡ ಬೇಡೆನಯ್ಯಾ. ಆನು ಘನ ಹರಸುವೆ. ಎನಗೆ ನಿಮ್ಮನೆ ಬೇಡಿಹ ಘನವ ಹರಸುವೆ. ಎನಗಿಂತಪ್ಪ ಕೊಡಕೊಡುವುದು ಇಲ್ಲದಿದ್ದೊಡೊಲ್ಲೆ, ಕಪಿಲಸಿದ್ಧಮಲ್ಲಿನಾಥಯ್ಯಾ./293 |
ಆನು ಆರೆಂಬುವುದಕ್ಕೆ ಅಷ್ಟ ಪ್ರಮಾಣಂಲಿಗಳಂತಿರ, ದೇವಾ. ಆರು ಆರೆಂಬುವುದಕ್ಕೆ ಪ್ರತ್ಯಕ್ಷ ಪ್ರಮಾಣದಿಂದರಿಯಬೇಹುದು ದೇವಾ. ಅವಸ್ಥೆ ಮೂರರ ತೂರ್ಯ ತಿಳಿಯಿತ್ತು; ತೂರ್ಯವೆರಡರ ಚಿನ್ಮಯಮೂರ್ತಿ ಅರಿಯಿತ್ತು, ದೇವಾ. ಆನು ಆರೆಂದೆನಲುಬಾರದು ಘನಗುರು ಚೆನ್ನಬಸವನರುಹಿದ ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನದೇವಾ./294 |
ಆನು ಭಕ್ತನೆಂಬೆ. ಹೊಸ ಹಚ್ಚೆ ಒಳ ಬೊಳ್ಳೆಯಾನಯ್ಯಾ. ತನುಮನಭಕ್ತಿ ಇನಿಸಿಲ್ಲ ನಿಮಗಾನು ಮಚ್ಚಲರಿಯೆ ಕಂಡಯ್ಯಾ. ಬೇರೆ ಬಲ್ಲವರಿಗೆ ಎಲೆಯ ಬಣ್ಣಿಸುವಂತೆ ನಿಮಗಾನು ಮಚ್ಚಿದರೆ ಗತಿಯೊಳವೆ? ಕಪಿಲಸಿದ್ಧಮಲ್ಲಿಕಾರ್ಜುನ./295 |
ಆನು-ನೀನು ಎಂಬ ಭೇದವುಳ್ಳನ್ನಬರ ಎಂತಪ್ಪುದಯ್ಯಾ ಶಿವಭಕ್ತಿ? ಸಂದು ಸಂಶಯ ಒಂದಾಗದನ್ನಕ್ಕರ ಎಂತಪ್ಪುದಯ್ಯಾ ಸಮಯಭಕ್ತಿ? ಆಯತರಲ್ಲದೆ ಸ್ವಾಯತರಲ್ಲ, ಸ್ವಾಯತರಲ್ಲದೆ ಸಂಬಂಧಿಗಳಲ್ಲ, ಸಂಬಂಧಿಗಳಿಗಲ್ಲದೆ ಸದಾಚಾರವಿಲ್ಲ, ಸದಾಚಾರಿಗಳಿಗಲ್ಲದೆ ಸ್ವಾನುಭಾವವಿಲ್ಲ, ಸ್ವಾನುಭಾವಿಗಳಿಗಲ್ಲದೆ ನೀ ಸಿಕ್ಕೆ. ಸೂರೆಯೆ ಎಲ್ಲರಿಗೆ ಸದಾಚಾರದ ಮಾತು? ಸೂರೆಯೆ ಎಲ್ಲರಿಗೆ ಗಣಾಚಾರದ ಮಾತು? ಸೂರೆಯೆ ಎಲ್ಲರಿಗೆ ಕಪಿಲಸಿದ್ದಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ./296 |
ಆನೆ ಮದಸೊಕ್ಕಿ ಮಾವತಿಗನನರಿಯದು ಕೇಳಿರಣ್ಣಾ. ಮದವುಡುಗಿ ಬೆದರಿ ಇನ್ನೇವೆನಿನ್ನೇವೆನೆಂಬುದಯ್ಯಾ. ಇದಕಂಕುಶ ಹಿಡಿದಿದ್ದನಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ಹಾ! ಅಯ್ಯಾ!/297 |
ಆನೆಂಬ ಕುಸುಮಕ್ಕೆ ತಾನೆಂಬ ಮಧುಕರನು ಭಾನುವಿನ ಉದಯದಲ್ಲಿ ವಿಕಸವಾಗಿ ಸೋಮವೀಥಿಯ ಬೆಳಗಿ ಹೇಮಶೈಲದ ಉದಯ ಕಾಮದಂಡಿಯ ಹಿಡಿದು ಮನೆಮನೆಗಳ ಸೀಮೆಯನು ಸಂಬಂಧ ಗ್ರಾಮವನು ಮನೆಗಳನು ಆನಳಿದು ಕಂಡೆನೈ ಹವಣು ಹಲವ. ನಿಸ್ಸೀಮನಾ ಕಪಿಲಸಿದ್ಧಮಲ್ಲಿಕಾರ್ಜುನನ ಸೀಮೆಯನು ಕಾಬವರು ಹಲಬರಿಲ್ಲ/298 |
ಆನೆತ್ತ ಪರಬ್ರಹ್ಮರವೆತ್ತ? ಎಲೆ ಶಿವನೆ, ನೀನೆತ್ತಲೆನ್ನಕರನಿವಾಸವು. ಆನತದ ಶ್ರೀಗುರು ಚೆನ್ನಬಸವಣ್ಣನಾಜ್ಞೆವಿಡಿದೀಗ ನಾ ನಿಮ್ಮ ಹೋಬಳಿಯನರಿದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./299 |
ಆನೆತ್ತ ಪರಮ ಸೂಕ್ಷ್ಮದ ನೆಲೆ ತಾನೆತ್ತ? ನಾನಾ ಗುಣದ ಅತ್ಯಧಿಕ ಲಿಂಗವನು ಭಾನುಮಂಡಲದೊಳಗೆ ನೆಲೆಗೊಳಿಸಿದಾತ ಸುಜ್ಞಾನಭರಿತನಯ್ಯಾ ಚೆನ್ನಬಸವಣ್ಣ ಕಪಿಲಸಿದ್ಧಮಲ್ಲಿಕಾರ್ಜುನ./300 |
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ./301 |
ಆನೆಯ ಕಾವವನ, ಆಡ ಕಾವವನ ಅಂತರವನರಿ ಕಂಡಾ. ಕೋಡಗನ ಪರಿಯ ಕುಳ್ಳಿರಲು ನೀನು ಕಲಿ ಕಂಡಾ. ಮರುಳಿನ ಮನದ ಪರಿಯನರಿ ಕಂಡಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಕತ್ತಲೆಯೆಂಬುದ ಕಳೆ ಕಂಡಾ, ಮಕ್ಕಳ ಮತವನರಿ ಕಂಡಾ./302 |
ಆಪ್ಯಾಯನವರತು ಪರಿಣಾಮ ನೆಲೆಗೊಂಡು ಅರಿವರತು ಮರಹು ನಷ್ಟವಾದವರ ಕುರುಹುಗೆಟ್ಟು ಪದವ ಮೀರಿ ಸೀಮೆಯ ದಾಂಟಿದವರ ತಂದು ತೋರಾ, ಅಯ್ಯ ನಿಮ್ಮ ಧರ್ಮ. ಎನ್ನ ಭವದ ಬೇರ ಹರಿವೊಡೆ ತಂದು ತೋರಾ, ಇವರ ತಂದು ತೋರು. ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ ಹತ್ತೆ ಸಾರಿಸಾ ಬಸವಣ್ಣಾ./303 |
ಆಮಧ್ಯಾಂತವ ಭೇದಿಸಿದ ಮಹಿಮನು, ನಾದಕ್ಕ್ಕತೀತನು. ಪರಬ್ರಹ್ಮದ ಭೇದಾದಿ ಭೇದವ ಪರತತ್ತ್ವ ಮೂಲವೆಯಾದ ಆಗುರು ಘಟ್ಟಿವಾಳ, ಕಪಿಲಸಿದ್ಧಮಲ್ಲಿನಾಥಾ./304 |
ಆಮೋದ ತುಂಬಿದ ಭೇದಂಗಳಂ ಭೇದಿಸಿ ಮೋದಿಂದೊಪ್ಪಿರ್ದ ಮಧ್ಯಮದ ಆಧಾರ ಸ್ವಾದಿಷ್ಟ ಆನಂದ ಪಂಚಮದ ತೋರಿಪ್ಪನತಿಶಯದ ವರ್ಗವಾರಾ, ಮೀರಿಪ್ಪ ತತ್ವದ ತೋರಿಪ್ಪ ಬೊಮ್ಮದ ತಾನು ತಲ್ಲೀಯ ಕಪಿಲಸಿದ್ಧಮಲ್ಲೇಶ್ವರನು./305 |
ಆಯ ಬೀದಿಯಲಿದ್ದು ತನುವಿನ ತನುಗುಣಮಂ ಮರೆದು ಇರುಳು ಹಗಲೆಂದರಿಯದೆ ಎಂದಿಂಗೆ ಎಂದು ನಿಮ್ಮೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ./306 |
ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಆ ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು/307 |
ಆಯಾಧಾರಕ್ಕೆ ಮೂಲ ತಾ ಬಸವಣ್ಣ. ಹೋದನೈ ಭಕ್ತಿಯೊಳಗೆ ಹೊಲಬುದಪ್ಪಿ. ಊರನರಿಯದ ಗ್ರಾಮ, ಹೊಲಬುದಪ್ಪಿದ ಸೀಮೆ; ಆತನಾನತದಿಂದಾನು ನೀನಾದೆನೈ. ಬಸವಣ್ಣ ಬಸವಣ್ಣ ಬಸವಣ್ಣ ಎಂಬ ನಾಮಾಕ್ಷರದೊಳಗೆ ದೆಸೆಗೆಟ್ಟೆನೈ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ./308 |
ಆಯಿತ್ತಾಯಿತ್ತು ಗುರುಸ್ವಾಯತ; ಆಯಿತ್ತಾಯಿತ್ತು ಲಿಂಗ ನಿಜನಿಷ್ಠೆ; ಆಯಿತ್ತಾಯಿತ್ತು ಜಂಗಮದರಿವು ಸಂಭಾಷಣೆ; ಆಯಿತ್ತಾಯಿತ್ತು ಪ್ರಸಾದದ ರುಚಿಭೋಗ; ಆಯಿತ್ತಾಯಿತ್ತು ಸಯವಾದ ಭಕ್ತಿ ಜ್ಞಾನ ವೈರಾಗ್ಯದ ನಿರಿಗೆ. ಆಯಿತ್ತಾಯಿತ್ತು ಸರ್ವಾಚಾರ ಸಂಪ್ಕ್ತನ ಸೌಖ್ಯವೆನಗೆ ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ ನೀವು ಗುರುಮೂರ್ತಿಯಾದ ಕಾರಣ./309 |
ಆಯಿತ್ತಾಯಿತ್ತು ಫಲವಿಲ್ಲದ ವೃಕ್ಷ, ಆಯಿತ್ತಾಯಿತ್ತು ಪದವಿಲ್ಲದ ಫಲ, ಆಯಿತ್ತಾಯಿತ್ತು ಸೀಮೆಯ ಮೀರಿದ ಸಂಬಂಧ, ಆಯಿತ್ತಾಯಿತ್ತು ಅನ್ವಯದಲ್ಲಿ ಆಂದೋಳ, ಆಯಿತ್ತಾಯಿತ್ತು ನಿತ್ಯದ್ಲ ಭಕ್ತಿ, ಆಯಿತ್ತಾಯಿತ್ತು ಭಕ್ತಿಯಲ್ಲಿ ವೈರಾಗ್ಯ ಆಯಿತ್ತಾಯಿತ್ತು ವೈರಾಗ್ಯದಲ್ಲಿ ಅನುಗುಣ, ಆಯಿತ್ತಾಯಿತ್ತು ಅನುಗುಣದಲ್ಲಿ ಸ್ವಾನುಭಾವದ ಸಕಲಭಕ್ತಿ. ಸಕಲಭಕ್ತಿಯಿಂದ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ಸಂಯೋಗ ಬಸವಣ್ಣಂಗೆ/310 |
ಆಯಿತ್ತಾಯಿತ್ತು ಫಲವಿಲ್ಲದ ವೃಕ್ಷ; ಆಯಿತ್ತಾಯಿತ್ತು ಪದವಿಲ್ಲದ ಫಲ; ಆಯಿತ್ತಾಯಿತ್ತು ಸೀಮೆಯ ಮೀರಿದ ಸಂಬಂಧ; ಆಯಿತ್ತಾಯಿತ್ತು ಅನ್ವಯದಲ್ಲಿ ಆಂದೋಳ; ಆಯಿತ್ತಾಯಿತ್ತು ನಿತ್ಯದಲ್ಲಿ ಭಕ್ತಿ ; ಆಯಿತ್ತಾಯಿತ್ತು ಭಕ್ತಿಯಲ್ಲಿ ವೈರಾಗ್ಯ; ಆಯಿತ್ತಾಯಿತ್ತು ವೈರಾಗ್ಯದಲ್ಲಿ ಅನುಗುಣ; ಆಯಿತ್ತಾಯಿತ್ತು ಸ್ವಾನುಭಾವ, ಸ್ವಾನುಭಾವದಲ್ಲಿ ಸಕಲ ಭಕ್ತಿ, ಸಕಲ ಭಕ್ತಿಯಿಂದ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಂಯೋಗ ಬಸವಣ್ಣಂಗೆ./311 |
ಆಯಿತ್ತಾಯಿತ್ತು ಮನದಂತೆ ಮಂಗಳ; ಆಯಿತ್ತಾಯಿತ್ತು ನೆನೆದಂತೆ ಕುರುಹು; ಆಯಿತ್ತಾಯಿತ್ತು ಸೀಮೆಯಳವಟ್ಟ ಸಂಬಂಧ; ಆಯಿತ್ತಾಯಿತ್ತು ಸ್ವಾನುಭಾವ ಸ್ವಯವಾದ ದೀಕ್ಷೆ; ಆಯಿತ್ತಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನ ನಿಮ್ಮ ಸಂದು ಸವೆದು ಒಂದಾದ ನಿರ್ವಾಣವು./312 |
ಆಯಿಸ ಬಗುಸೆಯ ಬಲವು ತಮಗಿಲ್ಲ ಕೇಳಿರಣ್ಣಾ. ತಮ್ಮ ಬಲ ಅವಕುಂಟು ಕೇಳಿರಣ್ಣಾ. ಆಯಿಸ ತನಗಿನಿಸೆಂಬುದಿಲ್ಲ ಕೇಳಿರಣ್ಣಾ. ಬಗುಸೆ ತನಗಿನಿಸೆಂಬುದಿಲ್ಲ ಕೇಳಿರಣ್ಣಾ. ಕೇಳಿರಣ್ಣಾ, ಅಣ್ಣಾ, ಅಣ್ಣಾ, ಕೇಳಿರಣ್ಣಾ. ಕಪಿಲಸಿದ್ಧಮಲ್ಲಿನಾಥಯ್ಯ ನಿಸ್ಸೀಮ ಕೇಳಿರಣ್ಣಾ./313 |
ಆರ ಮುತ್ತಿಗಳೆದು ತೋರಿದ್ದ ಸೀಮೆಯನು. ಆರನೊಯೈದಲ್ಕೆ ಏಳೆಂಟನತಿಗಳೆದು ತೋರಿರ್ದನೆರಡರಲಿ ಮುಕ್ತ್ಯಂಗನೆ. ಸಂಗಸುಖವನೆ ಅಳಿದು ಹಂಗುಹರಿದಿಹ ಬ್ರಹ್ಮ ಅಂಗನೆಯ ಅಕ್ಷರತ್ರಯದ ಕಂಗಳಲ್ಲಿ ಏವುಂಟು ಕಾನನದಲೋಲಾಡಿ ಲಿಂಗ ನಿಮ್ಮ ಬೆರಸಿದ ಕಪಿಲಸಿದ್ಧಮಲ್ಲೇಶ್ವರಾ./314 |
ಆರನಾದಡೆಯೂ ಅಣ್ಣಾ ಎನಲಾರೆನು ಆರನಾದಡೆಯೂ ಅಯ್ಯಾ ಎನಲಾರೆನು, ನೀನು ಜಗಕೊಡೆಯ, ನಾನು ನಿನ್ನ ಅಯ್ಯಾ ಎಂಬೆನು. ಎನಗಾರೂ ಇಲ್ಲದ ಕಾರಣ, ನೀವೆ ಗತಿ ಶರಣುಹೊಕ್ಕೆ, ಕರುಣಿಸು ಕಪಿಲಸಿದ್ಧಮಲ್ಲಿಕಾರ್ಜುನ./315 |
ಆರರಲ್ಲಿ ಅನುಮಿಷವು, ಮೂರರಲ್ಲಿ ಮುನಿಮುಕ್ತಿ ತೋರುವ ಪ್ರಾಪಂಚು ಸೀಮೆಯ ಗಾರಪ್ಪ ವರ್ಗವನು ಮೀರಿಪ್ಪ ಸೀಮೆಯ ತೋರಿಪ್ಪ ಅತಿಶಯದ ತತ್ವಂಗಳನು ಸೊಮ್ಮಿನ ಹಮ್ಮಿನ ಕರ್ಮದ ಕ್ರೀಯುವನು ನಿಃಕರ್ಮವೊಳಗಾದ ಸಾದಾಖ್ಯವಾ ಅವ್ವೆಯ ಮನದ ಆನಂದ ಸಾತ್ವಿಸಲು ತಾನೊಂದು ರೂಪಾಗಿ ತೋರ್ಕುರಲು ಅಯ್ಯನಜಲೋಕದಲಿ ಒಯ್ಯನಕ್ಷರದ್ವಯದ ಸ್ವೇಯ ಹೇಯಯೆಂಬ ಬೀಜಂಗಳ ದ ಮರುಗದ ಸಿಂಹಾಸನದೊಳಗಿಪ್ಪ ಕೇಶರದ ಹಲವು ಬಣ್ಣದಲಿಪ್ಪ ಅಣುಮಾತ್ರ ಮಥನದಲ್ಲಿ ಮಥನಿಸುವ ಕಥನದಿಚ್ಛೆಯ ನೋಡ, ಸುಚಿತ್ತಂದರ್ಚಿಸೈ ಕಪಿಲಸಿದ್ಧ ಮಲ್ಲೇಶ್ವರನ./316 |
ಆರಾದಡೆನ್ನುವನು ಹೊಗಳಿದುದನು ಆ ಕಾಲದಲ್ಲಿಯೆ ನೆನತಿಪ್ಪುದು. ಆ ಕಾಲದಲ್ಲಿ ಎನ್ನ ಜರಿದವರ ಆ ಕಾಲದಲ್ಲಿ ಪ್ರಾಣವಧೆ ಮಾಡಿಹೆನೆಂಬುದು. ಅಯ್ಯೋ, ಸಂಸಾರ ಮಾಯಾ ಮನಕಂಜುವೆನು, ಅಯ್ಯ ನೀ ಕೂಡಿಕೋ ಕಪಿಲಸಿದ್ಧಮಲ್ಲಿಕಾರ್ಜುನ./317 |
ಆರಾಧನೆಯ ಮಾಡಿ ಫಲವೇನಯ್ಯಾ, ಸಂತೃಪ್ತಿವಡೆಯದನ್ನಕ್ಕ? ಮದುವೆಯಾಗಿ ಫಲವೇನಯ್ಯಾ, ಮೋಹದ ವಿಘ್ನಂಗಳಾಗದನ್ನಕ್ಕ? ಭಕ್ತನಾಗಿ ಫಲವೇನಯ್ಯಾ ಲಿಂಗಪೂಜೆಯ ಮಾಡದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯಾ, ಮೋಕ್ಷವ ಹಡೆಯದನ್ನಕ್ಕ? ಮೋಕ್ಷಮಾದ ಫಲವೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮಧೇಯವಳಿಯದನ್ನಕ್ಕ, ಕೇದಾರ ಗುರುವೆ./318 |
ಆರಿಗೆ ನಿಲುಕದ ಬ್ರಹ್ಮವ, ನೀನಾರಿಸಿ ನೋಡಿದಡೆ ಹುರುಳಿಲ್ಲ ನೋಡಾ, ಮರುಳು ಮಾನವಾ. ಆರಿಗೆಂಬಲ್ಲಿ ಜೀವಭಾವ ಆರಿಸಿದೆನೆಂಬಲ್ಲಿ ಅಹಂಭಾವ. ಆರಿಗೆಂಬುದು, ಆರಿಸಿದೆನೆಂಬುದು ಅಳಿದಡೆ, ಅದೇ ಪರಬ್ರಹ್ಮ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./319 |
ಆರು ಕಂಡು ಕೈಯೆತ್ತಿ ಮುಗಿದರೆ ನಾನು ಮುಗಿವೆನಾಗಿ, ಅದೇನು ಕಾರಣವೆಂದರೆ ಅವರ ನಿಟಿಲತಟದ ಭ್ರೂಮಧ್ಯದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪನಾಗಿ ಅವರರಿಯರು ನಾ ಬಲ್ಲೆನಾಗಿ ಕೈಮುಗಿವೆನು./320 |
ಆರು ತನ್ನಯ ರೂಪು ಆಗಬಲ್ಲಾತ ಗುರು ಆರರಿಮ್ಮೀರಿ ಆನಂದಮಯವ ತೋರಿ ಆರೇಳೆಂಟ ಗಾರು ಮಾಡದವರ್ಗ ಆನಂದಮಯರೂಪ ಗುರು ಕಪಿಲಸಿದ್ಧಮಲ್ಲಿಕಾರ್ಜುನ/321 |
ಆರು ಪ್ರಣವದ ಕಡೆಯಕ್ಷರ ಚಿದಾಕಾಶದ ಅಂಗ ನೋಡಾ. ಆರು ಪ್ರಣವದ ಮೂಲಾಕ್ಷರ ಚಿನ್ಮಯ ಮಂದಿರ ನೋಡಾ. ಆರು ಪ್ರಣವದ ಮಧ್ಯ ನಾಲ್ಕಕ್ಷರ ಶಿವಶಕ್ತಿರೂಪು ನೋಡಾ. ಆರು ಪ್ರಣವದ ಜಪವದು ಕಪಿಲಸಿದ್ಧಮಲ್ಲಿಕಾರ್ಜುನನ ಒಲುಮೆ ನೋಡಾ./322 |
ಆರು ಸೀಮೆಯೊಳಗೆ ಅನ್ಯವಪ್ಪುದೆ ಹೇಳ, ಆರರಿಂದರಿವ ನಾ ಐಕ್ಯಪದವ ಮೂರೊಂದು ಮಾಡಿದ ಆನು ಮುಮ್ಮಲಕೆ ದೂರವೈ, ಮೂವತ್ತಾರ ಮೀರುವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./323 |
ಆರೂ ಕಾಣಬಾರದ ಪ್ರಸಾದ ಅಡಕವಾಯಿತ್ತು ಅರುಹಿನಲ್ಲಿ ಚೆನ್ನಬಸವಣ್ಣಾ. ಈ ಪ್ರಸಾದವ ನಿಮ್ಮ ಸುಳುಹಿನಲ್ಲಿ ತೋರಿದೊ, ನಿಮ್ಮ ನೆನಹಿನಲ್ಲಿ ತೋರಿದೊ? ತೋರುವ ಪ್ರಸಾದ ತೋರದೆ ಹೋಯಿತ್ತೆಂಬುದೇನಯ್ಯಾ, ಚೆನ್ನಬಸವಣ್ಣಾ? ಕಾಯವಿಡಿದ ಪ್ರಸಾದ ಕರಣಂಗಳಿಗೆ ಹೋಯಿತ್ತೆಂಬುದೇನಯ್ಯಾ, ಚೆನ್ನಬಸವಣ್ಣಾ? ಲಾಭಕ್ಕೆ ವ್ಯವಹರಿಸಲು ನಷ್ಟವಾಗಿದೆ; ಈ ನಷ್ಟ ತುಷ್ಟಿಯ ಕೂಡಿಕೊಂಡು ನಿನ್ನ್ಲ ನೀ ಪ್ರಸಾಯಾಗಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮದಲ್ಲಿ ಚೆನ್ನಬಸವಣ್ಣನಿಂದ ನಿಜಪ್ರಸಾಯಾದೆನಾಗಿ ನಿಮ್ಮ ಹರಿಯ ಕೊಂದೆ./324 |
ಆರೂಢದ ಮನದಲ್ಲಿ ನೀನೆ ನಿಂದ ಕಾರಣ ತೋರುವ ಶಿವಜ್ಞಾನದ ದೀಪ್ತಿ ಬಸವಣ್ಣನಯ್ಯಾ; ತೋರುವ ಬೀರುವ ಐಕ್ಯದ ಭಕ್ತಿ ಬಸವಣ್ಣನದಯ್ಯಾ, ನಿಜದಲ್ಲಿ ನಿಂದು ನಿರ್ವಯಲಾಯಿತ್ತಯ್ಯಾ ಬಸವಣ್ಣನ ಕರುಣದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ./325 |
ಆರೂಢದೈಕ್ಯದಲ್ಲಿ ಆನು ನೀನಪ್ಪೆ ಹೇಳಾ. ತೋರಿಪ್ಪೆ ಬ್ರಹ್ಮಾಂಡದ ಮೇಲೆ ನಿನ್ನ ಸಂಯೋಗವ. ವಿಕಲವಿಯೋಗದಲ್ಲಿ ಸಕಲ ನೀನೆ ಆನಾದೆನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./326 |
ಆರೂಢದೈಕ್ಯವನು ತೋರಬಲ್ಲಡೆ ಪರಮ ಜ್ಯೋತಿರ್ಮಯನುವಪ್ಪ ಪ್ರಾಸಾದಲಿಂಗವನು ಅಜಾತನರುಹಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನ./327 |
ಆರೂಢದೈಕ್ಯವನು ತೋರಿಪ್ಪ ಸೀಮೆಯನು ಮೀರಿಪ್ಪುದೊಂದು ಬಿಂದುರೂಪು. ಬಿಂದುಗಳು ಕಳೆಗಳನು ಸಂಧಿಸುವ ಭೇದವನು ಚಂದ್ರಮಂಡಲಲ್ಲಿಯೊಪ್ಪಿ ತೋರೆ ಆನಂದದಕ್ಷರಂಗಳ ಛಂದವಿದೆಂದಡೆ ಹಿಂದುಮುಂದುಗೆಡುವ ಕಪಿಲಸಿದ್ಧಮಲ್ಲಿಕಾರ್ಜುನ./328 |
ಆರೆನಯ್ಯೋ ಭವನೆ ಗಾರುಗೆಡಿಸಿತ್ತೆನ್ನ ಕಾಣುತೊಡನಂಜಿ ಕೊಕ್ಕರಿಸಿತು. ಕಾರುಣ್ಯಾಕರನೆ, ಕಪಿಲಸಿದ್ಧಮಲ್ಲೇಶ್ವರನೆ ಮಾಯಾವಿದಾರಣನೆ ಸಲಹು ತಂದೆ./329 |
ಆರೆನಯ್ಯೋ ಶಿವನೆ ತೆರಹುಗೆಡಿಸುತ್ತದೆ ಕುರುಹೆಂದು ತೋರಿರಿ ಎನ್ನ ನೀವು ಉಸುರದಂತಿದ್ದರೆ ನರಕಕ್ಕೆ ಒಯ್ದಿತ್ತು ಶಶಿಧರ ಕಾಯಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./330 |
ಆರೇನು ಮಾಡಿದುದನಂತಿರೆ, ಅಂತಕ್ಕು ಇಂತಕ್ಕುಯೆಂತಕ್ಕುಯೆನಬೇಡ. ಚಿಂತಿಸರು ಎಲೆ ಮನವೆ, ಅಂತಕಹರ ಕಪಿಲಸಿದ್ಧಮಲ್ಲಿನಾಥಯ್ಯ ಮಾಡಿದಂತಲ್ಲದೆ ತಾನು ಅಪ್ಪುಲ್ಲ./331 |
ಆರೇನೆಂದಡೂ ಓರಂತಿಪ್ಪುದೆ ಸಮತೆ. ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ. ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ, ಇಂತು ಗುರುಕಾರುಣ್ಯ. ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ, ಕಪಿಲಸಿದ್ಧಮಲ್ಲಿಕಾರ್ಜುನ, ನಿನ್ನವರ ನೀನೆಂಬುದೆ ಸಮತೆ./332 |
ಆವ ಕಳೆಯೆಂಬುದು ನೀನೆಯಾದೆ, ಬಸವಲಿಂಗವೆ. ಮುಕ್ತಿಗೆ ಮೂಲಸ್ವರೂಪು ನೀನಾಗಿ ನಿಂದ ರೂಪು. ನಿನ್ನ್ಲಲ್ಲಿಯೆ ತ್ಲಯವಾಯಿತ್ತು, ಬಸವಗುರುವೆ. ನಿಯಮಾಚಾರದ ರೂಪು ನಿನ್ನ್ಲಲ್ಲಿಯೆ ತಲ್ಲಿಯವಾಯಿತ್ತಯ್ಯಾ, ಕಪಿಲಸಿದ್ಧಮ್ಲನಾಥನ ಗುರು ಬಸವಾ./333 |
ಆವ ಕೆಲಸ ಕೆಲಸದಲೆಲ್ಲಾ ತಾನೆ ಸಿಂಹಾಸನಗೊಂಡಿಪ್ಪನಯ್ಯಾ, ಕೆಲಸದ ತಲೆಯಲ್ಲಿ ಕೆಲಸ ಪೂರಣೆಗೊಂಬ ಅವರ ಶರೀರಕ್ಕೆ ಸಂಪನ್ನ ಮನದಿಂದ ಹಿಂಗ, ಕಪಿಲಸಿದ್ಧಮ್ಲನಾಥಯ್ಯನಾ./334 |
ಆವ ಜ್ಞಾನಿಯಾದಡೇನು ದೇಹಾವಸಾನದ್ಲಯ ಭಾವದಂತೆ ತಪ್ಪಲರಿಯದು ನೋಡಾ. ಆವ ಜ್ಞಾನಿಯಾದಡೇನು ಭಾವವೆಂಬುದು ಜನ್ಮಕ್ಕೆ ಈಡು, ನಿರ್ಭಾವವೆಂಬುದು ಜನ್ಮಕ್ಕೆ ಕಾಡುಗಿಚ್ಚು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./335 |
ಆವನಾಗಿ ಒಬ್ಬನು ಅವಿಚಾರದಿಂದ ಶಿರಸ್ಸಿನ ಮೇಲೆ ಕೈದುವಿಕ್ಕುಗೆಯ, ಮೇಣು ಗಂಧಾಕ್ಷತೆ ಪುಷ್ಪದ್ಲ ಪೂಜೆ ಮಾಡುಗೆಯ; ಪೂಜೆ ಮಾಡಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನ./336 |
ಆವನಾಗಿ ಒಬ್ಬನು ಕರವ ಪಿಡಿದು ಒಡಗೊಂಡು ಒಯ್ದು ಒಳ್ಳಿತ್ತನಾದಡೂ ನೀಡುಗೆಯ, ಮೇಣು ಮಣ್ಣನಾದಡೂ ನೀಡುಗೆಯ; ನೀಡಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./337 |
ಆವನಾಗಿ ಒಬ್ಬನು ನಾಸ್ತಿಕವನಾಡಿ ನಗ್ಕುಪ್ಪುದನು ತಾ ಕೇಳಿ, ಮತ್ತಾವನಾಗಿ ಬಂದು ಪೇಳ್ದಡೆ, ಮನ ವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./338 |
ಆವನಾಗಿ ಒಬ್ಬನು ನಿಡುಮುಳ್ಳಿನ ಮೇಲೆ ಪೊರಳ್ಚುಗೆಯ ಮೇಣು ಹಂಸೆಯ ಹಾಸಿನ ಮೇಲೆ ಪೊರಳ್ಚುಗೆಯ, ಪೊರಳ್ಚಿದಡೆ ಮನ ವಿಚ್ಛಂದವಾಗದೊಂದೆ- ಯಂದದಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./339 |
ಆವನಾಗಿ ಒಬ್ಬನು ಪಿಡಿದೊಯ್ದು ಕಾಳಕೂಟ ವಿಷವನೆರುಗೆಯ ಮೇಣು ಪಾಯಸಾಮೃತವನೆರುಗೆಯ. ಎರದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./340 |
ಆವನಾಗಿ ಒಬ್ಬನು ಬಾಯಿಗೆ ಬಂದಂತೆ ಬೈಗೆಯ, ಮೇಣುವಾತ ಬಂದು ಸ್ತುತಿಸುಗೆಯ. ಮನ ವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./341 |
ಆವನಾದಡೇನು, ಮೂರಳಿದವನೆ ಮೂರು ಕೋಣೆಯ ದಾಟುವನಯ್ಯಾ. ಆಸೆ ಇಹುದೊ ಇಲ್ಲವೊ ಎಂದು ಮನಸೆಳೆವುದಕ್ಕೆ ಗುರು ಚೆನ್ನಬಸವಣ್ಣನಾದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನು./342 |
ಆವನಾದಡೇನು, ಭಾವದಲ್ಲಿ ಪ್ರೀತನಲ್ಲದೆ ನಡೆ ನುಡಿ ಗಡಣದಲ್ಲಿ ಪ್ರೀತಿಯುಂಟೆ ದೇವಾ. ಅರಸನಾದಡೇನು, ಆಳುವಲ್ಲಿ ಅಧಿಕಾರಿಯಲ್ಲದೆ ಅಳಿವಲ್ಲಿ ಅಧಿಕಾರಿಯುಂಟೆ ದೇವಾ? ಭಕ್ತನಾದಡೇನು, ಭಕ್ತನಲ್ಲಿ ಸಲುಗೆಯಲ್ಲದೆ ಮಹೇಶನಲ್ಲಿ ಸಲುಗೆಯುಂಟೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನದೇವಾ./343 |
ಆವನಾನೊಬ್ಬನು ತಗುಳ್ದಟ್ಟಿ ಕಲ್ಲುಗುಂಡಿನಲ್ಲಿಡುಗೆಲ್ಲಿಯ್ವ ಮೇಣು ಪೂವಿನಡಿಡುಗೆಯ. ಇಟ್ಟಡೆ ಮನ ವಿಚ್ಛಂದವಾಗದೊಂದೆಯಂದದಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪ್ದೊಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ./344 |
ಆವಾಗಳು ನಿನ್ನವರುಗಳು ನೀನೆಂಬ ಮನವ, ಅತಿ ಉನ್ನತೋನ್ನತವ ಕೊಡು ಕಂಡಾ, ಎಲೆ ಅಯ್ಯಾ, ನಿಮ್ಮ ಧರ್ಮವಯ್ಯಾ. ನಿನ್ನ ಲಾಛನವ ಕಂಡು ತಾತ್ಪರ್ಯವೆಂದು ನಂಬುವ ಮನಸಿಂಗೆ ಮಂಗಳವನೀಯಯ್ಯಾ. ನಿನ್ನವರ ಸಹ ಲೋಕದಲ್ಲಿ ಅವರ ಕೀಳಿಲ ಕಾಯ್ದಿಪ್ಪ ಸುಕೃತವನು ತಪ್ಪದೆ ಕೊಡು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ,/345 |
ಆವಾವ ಕಾಲದೊಳು ದೇವಪೂಜೆಯ ಮಾಡು, ಮಾಡುವ ಸುಖವೆ ನೀನೆಯಯ್ಯಾ. ಜೀವಕಾಯಕ್ಕೆ ನೀ ಚೇಷ್ಟಿತನಾದೆಯಯ್ಯಾ, ಕಪಿಲಸಿದ್ಧಮಲ್ಲಿನಾಥಾ./346 |
ಆವಾವ ದೆಸೆಗೆ ಬಾಯ ಬಿಟ್ಟು ಅರಸಿ ಕಾಣದೆ ಕಂಗೆಡ್ಕ್ತುದ್ದೆನಯ್ಯಾ. ದೇವಾ, ಈ ಬಾಯ ಬಿಡುವುದ ಮಾಣಿಸಿ, ಎನಗೆ ಪರಮಪ್ರಸಾದವ ಕರುಣಿಸಿ ರಕ್ಷಿಸಯ್ಯಾ; ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಯ್ಯಾ./347 |
ಆವಾವ ಭಾವದಲ್ಲಿ ನಿಮ್ಮನಲ್ಲದೆ ನಾನರಿಯದ್ದೆನಯ್ಯಾ, ದೇವ ದೇವಾ, ಕಾಯಯ್ಯಾ ಕಾಯಯ್ಯಾ. ಕರುಣಿ ಕರುಣಿ, ಕೃಪಾವಲ್ಲಭ ಗುರುವೆ, ಕಪಿಲಸಿದ್ಧಮಲ್ಲಿನಾಥಯ್ಯಾ./348 |
ಆವುದರಲಾದಡೇನು ನೀನು? ನೀನು ಮಹಾಸಮರ್ಥನಯ್ಯಾ ಧನದಲ್ಲಿ ಗುಣದಲ್ಲಿ ಹೆಂಪಿನ ಹೆಸರ ಹಿರಿಯನು ನೀನಯ್ಯಾ. ಅಯ್ಯಾ, ನೀನೆಲ್ಲರಲ್ಲಿ ಸಂಪನ್ನನಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವರ ದೇವ./349 |
ಆವುದಾನೊಂದು ಭಕ್ತಿ ಬಸವಣ್ಣನದಯ್ಯಾ. ಆವುದಾನೊಂದು ಯುಕ್ತಿ ಬಸವಣ್ಣನದಯ್ಯಾ. ಆವುದಾನೊಂದು ಯೋಗ ಬಸವಣ್ಣನದಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ./350 |
ಆವುದೊಂದು ಸುಖವು ದೇವಾ, ನಿಮ್ಮಿಂದ ಕಾಣಬಂದಿತ್ತಯ್ಯಾ. ಇದನರಿದ ಮೇಲೆ, ಇನ್ನಾವ ಪರಿಯಲ್ಲಿ ನಿಮ್ಮಡಿಯ ಬಿಡುವೆನೆ? ಅಯ್ಯಾ, ದೇವದೇವಾ, ಕರುಣಿಸಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ./351 |
ಆಸನ ಸ್ಥಿರವಾಗಿ ಆಧಾರಮಂ ಬಲಿದು, ಅಧೋಮುಖದ ವಾಯುವನೂಧ್ರ್ವಮುಖಕ್ಕೆ ್ಕ್ದ ಅತ್ತಿತ್ತ ಒಲೆಯದೆ, ನೆಟ್ಟನೆ ಕುಳ್ಳಿರ್ದು, ತೊಟ್ಟೆವೆ ಮಿಡುಕದೆ, ಅಟ್ಟೆಯ ಹಂಗಳಿದು, ಕರವೆರಡ ತಿರ್ಯಕವಾಗಿರಿಸಿ, ಶಿರವ ಸುಸರವಂ ಮಾಡಿ ದಿನಕರ-ಹಿಮಕರ-ವಾಯುಸಖರ ಮೇಲೆ ಶಿಖಿ ಶಶಿ ರವಿಕೋಟಿಕೋಟಿಯ ಬೆಳಗಿನ ಸಿಂಹಾಸನದಲ್ಲಿ ಒಪ್ಪಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆನೆದು ಸುಖಿಯಾದೆನು./352 |
ಆಸೆಯೆಂಬವಳು ಆರನಾದಡೆಯೂ ತನ್ನತ್ತಲೆಳೆವಳು ನೋಡಾ, ಈ ಆಸೆಯೆಂಬವಳು ಆವರಿವರೆನ್ನದೆ ಆರನಾದಡೆಯೂ ಕೊಲಲಿಕೆ ಬಗೆವಳು. ಈ ಆಸೆಯೆಂಬವಳಿಂದವೆ ನಿಮ್ಮಡಿಗಾಣಿಪ್ಪೆ. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದಂತಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./353 |
ಆಳುವ ಅರಸನಾ ಹೆಂಡತಿಯ ಹಾದರಗಿತ್ತಿಯೆಂದಡೆ ಆಳುವ ಅರಸು ಕೈಕಾಲನು ತರಿಸದೆ ಬಿಡುವನೆ? ಶರಣಸತಿ ಲಿಂಗಪತಿಯಪ್ಪ ಶಿವಭಕ್ತನ ಅಂತವನಿಂತವನೆಂದಡೆ, ಅಘೋರ ನರಕದಲ್ಲಿಕ್ಕುವನವ್ವಾ, ನಮ್ಮ ಕಪಿಲಸಿದ್ಧಮಲ್ಲಿನಾಥ./354 |
ಇಂತಪ್ಪ ಘನತರಂಗವ ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ, ಪಾದೋದಕ ಪ್ರಸಾದವ ಕೊಳ್ಳದೆ, ಯೋಗವೆಂದು ಅದ್ವೆ ತವೆಂದು ಭಂಡನೆ ಬಳಸುತಿಪ್ಪ ಮಿಟ್ಟೆಯ ಭಂಡರನೇನೆಂಬೆನೈ ಕಪಿಲಸಿದ್ಧಮಲ್ಲಿಕಾರ್ಜುನ./355 |
ಇಂತಪ್ಪ ಸತ್ಯಾರ್ಥವನರಿದು ಸರ್ವಪ್ರಪಂಚ ಮರದು ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿ ಉಳ್ಳಲ್ಲಿ ತೂರಿಕೊಳ್ಳಿ! ಬಳಿಕ ಅರಸಿದರುಂಟೆ ಪರಮಸುಖವು ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ? ಹರುಗೋಲ ಪಡೆದಲ್ಲಿ ತೊರೆಯ ದಾಂಟಿಕೊಳ್ಳಿರಣ್ಣಾ./356 |
ಇಂತೀ ಭಕ್ತಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ, ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ, ಎನ್ನ ಗುರು ಚೆನ್ನಬಸವಣ್ಣನು. ಬಸವಣ್ಣ ಚೆನ್ನಬಸವಣ್ಣನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./357 |
ಇಂತು ನಿನ್ನಯ ಭವದ ಚಿಂತೆಗೆಟ್ಟಿತು ಬ್ರಹ್ಮ ನಿಶ್ಚಿಂತನಾದನೈ, ಸಕಲದ ವಸ್ತು ಹಲವನು ಜರಿದು ತತ್ವ ಮೂವತ್ತಾರ ವ್ಯರ್ಥವೆಂದೆ ಕಳೆದು, ಸುಚಿತ್ತದಿಂದಾ ಮತ್ತೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ತತ್ವ ತುರಿಯದೊಳಗೆ ಲೀಯವಾದೆ./358 |
ಇಂತು ಮಾಯೆಯ ಮುಖವ ಸಂತತಂ ಗೆಲುವಾತ ನಿಶ್ಚಿಂತನಕ್ಕು ತಾನಿಹಪರದ. ನಿಶ್ಚಿಂತ ಕಪಿಲಸಿದ್ಧ ಮ್ಲಕಾರ್ಜುನಯ್ಯನಲ್ಲಿ ಸಂತತಂ ಇಪ್ಪ ತಾನು ಆತನಾಗಿ./359 |
ಇಂತು ಹಲವು ಪರಿಯ ನಿಶ್ಚಿಂತರಪ್ಪರೈ, ಚಿಂತೆಗೆಟ್ಟಪ್ಪರಿಹಪರ ಲೋಕವಾ. ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನನ ಸಚ್ಚಿದಾನಂದಮಯರಪ್ಪರಯ್ಯ./360 |
ಇಂದಿಗೆ ನಿಮಿಷಕ್ಕೆ ಬರ್ದುಂಕದೆ ಹೋಗೆಯ ಅನಂತಕಾಲ ಬರ್ದುಂಕುಗೆಯ; ಬರ್ದುಂಕಿದಡೆ ಮನ ವಿಚ್ಛಂದವಾಗದೊಂದೆಯಂದದ್ಲಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನ./361 |
ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಳಕೆ, ಹಿಂದು ಮುಂದಿಲ್ಲದ ಪದವನಿತ್ತ. ಗಂಧವಾಸನೆ ಚಂದವೊಂದಾದ ಬಸವನ ಬಂಧುವಾದೆನು ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ./362 |
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ; ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ; ಬ್ರಹ್ಮ ನೋಡುವಡೆ ಸುಪುತ್ರೀಪತಿ ಮುನಿಗಣ ನೋಡುವಡೆ ಕುಲಹೀನರು; ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋಧಿ; ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು. ನೀ ನೋಡುವಡೆ ಶ್ಮಶಾನವಾಸಿ, ರುಂಡಮಾಲಾದ್ಯಲಂಕಾರ; ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನ./363 |
ಇಂದ್ರಾದಿ ದೇವತಾ ಸಂಕುಳಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಬ್ರಹ್ಮ-ವಿಷ್ಣು ಮೊದಲಾದ ದೇವತಾಮೊತ್ತಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಶಿವಲಿಂಗಭಕ್ತರಿಗೆ ಚರಲಿಂಗಧಾರಣೆಯ ಪರಿಯಾಯಂದಿದಲೊರೆದಾತ ಗುರು. ಇಹಲೋಕ ಪರಲೋಕದನುಮಿಷದ ಸುದ್ದಿಯನರುಹಿದಾತ ಗುರು ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./364 |
ಇಂದ್ರಿಯ ಕಟ್ಟಿದ ದೇಹವು ಚಂದ್ರನ ಲಕ್ಷಣ ಧರಿಸಿತ್ತು ನೋಡಾ. ಚಂದ್ರನ ಲಕ್ಷಣವದು ಇಂದ್ರಪದ[ವನೀ]ಡಾಡಿತ್ತು ನೋಡಾ. ಇಂದ್ರಪದವದು ಸಾಂದ್ರವಾಗಿ ಭೋಗಿಸುವುದಕ್ಕೆ ಮೈಗೊಟ್ಟಿತ್ತು ನೋಡಾ. ಸಾಂದ್ರವಾದುದಕ್ಕೆ ಮಹೇಂದ್ರಜಾಲವನೊಡ್ಡಿ, ಕಪಿಲಸಿದ್ಧಮಲ್ಲೇಂದ್ರನ ಇಂದ್ರಿಯಂಗಳಲ್ಲಿ ತಂದಿಟ್ಟಿತ್ತು ನೋಡಾ, ಬಾಚರಸಯ್ಯಾ./365 |
ಇಂದ್ರಿಯನಿಗ್ರಹ ಮಾಡಿದಡೇನಯ್ಯಾ, ಚಂದ್ರಧಾರಿಯಾಗಬಲ್ಲನೆ? ಇಂದ್ರಿಯ ಕಟ್ಟಿದ ಕುದುರೆ ಇಂದ್ರನ ಉಚ್ಚೆ ಶ್ರವವಹುದೆ ಅಯ್ಯಾ? ಇಂ್ರಯಂಗಳೆಂಬುದು ಮಾಯಾಜಾಲವು ತಾನೆ. `ನ ಸತೀ’ ಎಂಬ ಶ್ರುತಿಯದು ಪ್ರಸಿದ್ಧ. ಂಗವೆಂಬುದ ತಿಳಿಯಬಲ್ಲಾತನೆ ಜಗದ್ವಂದ್ಯ ಜಂಗಮವೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ./366 |
ಇಂದ್ರಿಯಾರ್ಪಣ ಸುಖಾರ್ಪಣವಾಯಿತ್ತಯ್ಯಾ ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ನಿಜಾರ್ಪಣವಾಯಿತ್ತಯ್ಯಾ ಚೆನ್ನಬಸವಣ್ಣಾ ನಿಮ್ಮ ಭಾವದಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯ ಚೆನ್ನಬಸವಣ್ಣಾ ನಿಮ್ಮ ಭಾವದಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯಾ ಚೆನ್ನಬಸವಣ್ಣಾ ನಿಮ್ಮ ದಯದಿಂದ; ಕಪಿಲಸಿದ್ಧಮಲ್ಲಿನಾಥಯ್ಯ, ನಿಮಗೆ ಚೈತನ್ಯ./367 |
ಇಂಬಪ್ಪ ಶರಧಿಯ ಸಂಭ್ರಮದ ಮೊರಹಿನ ಶಂಭುವೆ, ನಿನ್ನನೊಡಗೂಡಿದೆನಯ್ಯಾ. ಬೇರೊಂದ ಕೇಳೆ, ಬೇರೊಂದ ಕಾಣೆ. ಮಹಾ ಉಲುಹೆ ಒಡಮನೆಯಾದೆನಯ್ಯಾ. ಅನಿಮಿಷನೆಂಬ ಶರಧಿಯ ಮಹಾ ಉಲುಹಿನ ಉಲುಹುಗೆಟ್ಟೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನೀನೆಂಬೆ ಸಮುದ್ರದಲಿ ಆನಿದ್ದೆನು./368 |
ಇಕ್ಷುವಿನ ಮನದ್ಲಪ್ಪ ಕುಟಿಲ ಕೇಸರಿಯ ರೂಪಕ್ಕಂಜುವರಲ್ಲದೆ, ರಾಗ ರಂಜನೆಗಂಜುವರೇನಯ್ಯಾ? ಸ್ಥಲದ್ಲಪ್ಪ ವೇಷಧಾರಿಯ ರೂಪಕ್ಕಂಜುವರಲ್ಲದೆ, ವಿಷಯಗುಣ-ರಂಜನೆಗಂಜುವರೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರೆಂಬ ಮದದಾನೆಗಳು?/369 |
ಇಚ್ಛಾಜ್ಞಾನ ಕ್ರಿಯಾಶಕ್ತಿ ನಿನ್ನಾಧೀನ ಕಂಡಯ್ಯಾ. ಇಚ್ಛೆ ಸುವುದೇನು, ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ. ಆನಂದಜಲದಲ್ಲಿ ಆಶ್ರಯವಾಗಿ ನಿತ್ಯಮಹೋತ್ಸವವನುಳ್ಳುದೇನು? ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ. ಬ್ರಹ್ಮಾಂಡಂಗಳು ಹಲವು ಕಂಪನವಪ್ಪಾಗ ನಿಷ್ಕಂಪವಾಗಿರಲುಳ್ಳುದೇನು? ಶಕ್ತಿಯೊ ಶಿವನೊ? ಬಲ್ಲಡೆ ನೀವು ಹೇಳಿರೆ. ಆನಂದಬ್ರಹ್ಮದ್ಲ ಆಂದೋಳವಾಗಿ ಅಕ್ಷರಬ್ರಹ್ಮವನೈದಿದ ಆದಿಶಕ್ತಿಯು ಹೋಬಳಿ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ/370 |
ಇಚ್ಛೆಯಲ್ಲಿ ನಡೆವ ಅಚ್ಚಿಗಬಡುವ ತುಚ್ಛರಿಗೆ ಎಂತಪ್ಪುದಯ್ಯ ಶಿವಭಕ್ತಿ? ಸಾಕ್ಷಾತ್ ಇದು ನಿಶ್ಚಯವೆಂದರಿದು ನಂಬದನ್ನಬರ ಮಾತಿನ ಬೂತುಗಳಿಗೆ, ಭ್ರಾಂತುಳ್ಳ ಚಿತ್ತರಿಗೆ ನಿತ್ಯ ಶಿವಭಕ್ತಿ ಎಂತಪ್ಪುದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ./371 |
ಇತ್ತವರಿಲ್ಲ ಹೆತ್ತವರಿಲ್ಲ ನಿನಗೆ ಆಶೂನ್ಯ ತಮಂಧನಾಗಿದ್ದೆ ನೀನಯ್ಯಾ. ನೀ ಶಕ್ತಿ ಪೂರವಿಸಲಿಕೆ ಎಲ್ಲವಾಗಿದ್ದೆಯಯ್ಯ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ./372 |
ಇದಿರಿಂಗೆ ಕಿಂಕರನಾಗಿ ತನ್ನ ದೇಹಗುಣವಡಗಬಲ್ಲಡೆ, ಅಲ್ಲಿರ್ಪ ಆ ಮಹಾಮಹಿಮನ ನಿಜವ ಕೂಡಿ ಗಡಣದಲ್ಲಿಪರ್ಾತ್ಮನ ಕೂಡೆ ಆಡುತಿಪ್ಪನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವನು ಭಕ್ತದೇಹಿಕನಾಗಿ./373 |
ಇದು ಪುಣ್ಯ, ಇದು ಪಾಪವೆನ್ನದೆ ಆಸೆ ಮಾಡುತಿಪ್ಪಳು. ಆ ಆಸೆಯೆಂಬವಳಿಂದವೆ ನಿಮ್ಮೆಡೆಗಾಣಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ./374 |
ಇದೇನಯ್ಯಾ, ಮುಂಡವಿಲ್ಲದೆ ರುಂಡ ಮಾತನಾಡ್ಕ್ತುದೆ! ಮುಂಡಕ್ಕೆ ಸಮಾಧಿಯೊ? ಮುಂಡ – ರುಂಡಕ್ಕೆ ಸಂಬಂಧವ ಮಾಡಹೋದಡೆ ಸಿಗಪ್ಪುದು, ಕಪಿಲಸಿದ್ಧಮಲ್ಲಿಕಾರ್ಜುನ./375 |
ಇದ್ದೆಸೆಯನರಿದಾತ ತತ್ವವಾದನು ತನ್ನ ಸಪ್ತ ಧಾತುವನು ಗುರುವಿಗಿತ್ತು. ಮತ್ತೆ ಕಳೆಯೆಂದಡೆ ತತ್ವಪದ ಮೀರಿದನು ಸತ್ಯಶುದ್ಧನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ./376 |
ಇದ್ದೆಸೆಯಿಂದಾನು ನಿದ್ದೆಸೆಯಾದೆನೈ ಹ್ದೊದ ಪ್ರಾಪಂಚ ಜರಿದೆ ನೋಡಾ ಮುಗ್ಧೆಯ ಕೂಟದ ಹೊದ್ದಿ ನೀ ನಾನಾದೆ ಸದ್ಯ ಫಲ ನೀನೆನ್ನ ಕಾಡುತಿಪ್ಪೆ. ಶಿಶು ಕಂಡ ಕನಸುವನು ದೆಸೆಗೆಟ್ಟ ಮೋಹವನು ಪಸರಿಸಿತು ಲೋಕಕ್ಕೆ ಅತಿ ಹರುಷಂ. ದೆಸೆಗೇಡಿ ಮಾನವರು ದೆಸೆಯನರಿಯರು, ವಸುಧೆ ಪ್ರತಿ ಕಪಿಲಸಿದ್ಧಮಲ್ಲೇಶ್ವರನ./377 |
ಇದ್ದೊಂದು ಕಲ್ಲೊಳು ಪ್ರಸಿದ್ಧವಾಗಿಹ ಮುಗ್ಧನ ಕಂಡೆ. ಆ ಮುಗ್ಧ ಮಾತಾಡನು, ಮಾತಾಡದೆ ಸುಮ್ಮನಿರನು. ಆತನ ಸೊಮ್ಮು ಅರಿಯದು; ಅರಿಯಬೇಕೆಂದಡೆ ಕರಣಂಗಳ ಒಡನಾಟ ಆಗಬಾರದು, ನೋಡೈ ಕಪಿಲಸಿದ್ಧಮಲ್ಲಿಕಾರ್ಜುನಾ./378 |
ಇನಮಂಡಲದೊಳಗೆ ಕಿರಣವಡಗಿಪ್ಪಂತೆ, ಫಲವಹ ಬೀಜದಲ್ಲಿ ವೃಕ್ಷವಡಗಿಪ್ಪಂತೆ, ಇಂದುಕಾಂತ ರವಿಕಾಂತದಲ್ಲಿ ಜಲಬಿಂದು ಅಗ್ನಿ ಇಪ್ಪಂತೆ, ಸಂದ ಕ್ಷೀರದಲ್ಲಿ ಹೊಂದಿದ ದಧಿ ತಕ್ರ ನವನೀತ ಘೃತವಿಪ್ಪಂತೆ ಅಂಗದ ಮೇಲೆ ಲಿಂಗ ಸಾಹಿತ್ಯವಾಗಿ, ತನ್ನೊಳಗೆ ಆ ಲಿಂಗವ ಕಂಡು, ಲಿಂಗದೊಳೆಗೆ ತನ್ನ ಕಂಡು, ತನ್ನೊಳಗೆ ಸಮಸ್ತ ವಿಸ್ತಾರವನೆಲ್ಲವ ಕಂಡು, ಜಂಗಮಮುಖ ಲಿಂಗವೆಂಬ ಭೇದವರು, ಲಿಂಗಕ್ಕೆ ಜಂಗಮವೆ ಪ್ರಾಣವಾಗಿಪ್ಪ ಭೇದವನು, ಅಂಗದೊಳಗೆ ಲಿಂಗವೆ ಆಚಾರವಾಗಿ ಅಳವಟ್ಟ ವಿವರವಾಗಿ ಇದ್ದತೆಂಬುದನು, ಕಂಗಳ ನೋಟಕ್ಕೆ ಗುರಿಯಾದ ಲಿಂಗವೆ ಅಂಗವನೊಳಕೊಂಬ ಭೇದವನು, ಸಂಗನ ಬಸವಣ್ಣ ಚೆನ್ನಬಸವಣ್ಣನಿಂದ ಕೃಪೆಮಾಡಿಸಿ ಎನ್ನನುಳುಹು, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ./379 |
ಇನ್ನಾಡುವೆ, ಇನ್ನಾಡುವೆ ಮನಬಂದ ಪರಿಯಲ್ಲಿ ಅದಕ್ಕೆ ನೀವು ಸಂದೇಹಗೊಳ್ಳದಿರಿ, ಪ್ರಮಥರಿರಾ. ಸಂದೇಹವುಳ್ಳಡೆ ಜಂಗಮವಲ್ಲ. ಶಮಧೆಃಔಏ ಳೀಘೌಅಧ ಭಲೀಖ ಈರ್ಣಣೇರ್ಳಳೀಃಊಧರ್ೈಐಅ, ಈರ್ಣಣರ್ಳಳೀಃಊಧೂರ್ಐಐಅ ಶಮಖರ್ಳಫ ಔಈಖರಳೌಊ, ಖಫೀಳಶೀರ್ಧದಂರ್ಳಳೀಖಝೂಣ./380 |
ಇನ್ನಾವ ಹಿರಿಯರೇನಾದಡೇನಯ್ಯಾ, ಇನ್ನಾವ ಸಮಯವಾದಡೇನಯ್ಯಾ, ನೀ ಮಾಡಿದಂತೆ ಆಗದವರಾರಯ್ಯಾ, ನೀನಿರಿಸಿದಂತೆ ಇರದವರಾರಯ್ಯ, ನಿನ್ನಿಚ್ಛಾಮಾತ್ರದಲ್ಲಿ ಜಗವು ಅಪ್ಪುದಡಗುವುದಯ್ಯಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./381 |
ಇನ್ನು ಜನಕವು ಇಲ್ಲ ಮುನ್ನವೆ ಸಂದಳಿದೆ ಕಳುಹಿದಂತೆ ಉನ್ನತೋನ್ನತನಾದೆ ಚೆನ್ನಬಸವಣ್ಣನ ಕರುಣದಿಂದೆ ನಿನ್ನ ರೂಪಾದೆ ಇನ್ನೆನಗೆ ಅರಿವುವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ./382 |
ಇನ್ನು ಹೊಗಳುವೆನಯ್ಯಾ, ಲಿಂಗದ ಕುಲಾವಳಿಯನ್ನೆತ್ತಿ ಇನ್ನು ಹೊಗಳುವೆನಯ್ಯಾ, ಜಂಗಮದ ಜ್ಞಾನವ ಕಂಡು; ಇನ್ನು ಹೊಗಳುವೆನಯ್ಯಾ, ಚೆನ್ನಬಸವಣ್ಣನೆಂಬ ಪರಾತ್ಪರ ಗುರುಮೂರ್ತಿಯ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./383 |
ಇಪ್ಪತ್ತುನಾಲ್ವರು ಚವುಕವ ಹೊಕ್ಕಾರು. ಆ ಚವುಕ ನಾಗರಕಟ್ಟೆಗೆ ಒಲೆದೀತು. ಆ ನಾಗರಕಟ್ಟೆಯಲ್ಲಿ ಇಪ್ಪತ್ತು ನಾಲ್ವರು ದುಃಖಪಟ್ಟಾರು. ನುಚ್ಚಿನ ನುಚ್ಚು ಕೊನೆನುಚ್ಚು ಮೂಗಂಡುಗವಾದಾವು. ಚಿಟ್ಟೆಯ ಹುಳು ಬಾಣಸಕ್ಕೆ ಬಂದಾವು. ಲೋಕಕ್ಕೆ ಕೆಂಡದ ಮಳೆ ಸುರಿದಾವು. ಹದಿನೆಂಟು ಜಾತಿಯೆಲ್ಲ ಏಕವರ್ಣವಾದೀತು. ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ರಾಯರುಗಳೆಲ್ಲಾ ಗುಡ್ಡರುಗಳಾಗಿ ನಡೆದಾರು. ಕಪಿಲಸಿದ್ಧಮಲ್ಲಿಕಾರ್ಜುನದೇವರು ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ ಕಲಿಯಾಯಿತು ಕಲಿಯಾಯಿತು ಕಯುಗದೊಳಗೊಂದು ಸೋಜಿಗವ ಕಂಡೆನು ಸತ್ಯ ಸತ್ತೀತು, ಸಾತ್ವಿಕವಡಗೀತು, ಠಕ್ಕು ಠವಳಿ ಮುಂಡು ಮುರುಹು ಗನ್ನ ಘಾತಕ ಹದುರು ಚದುರು ಭೂಮಂಡಲವೆಲ್ಲಾ ಆಡೀತು. ಆಗಳೆ ಭಕ್ತರು, ಆಗಳೆ ಭವಿಗಳು ಅಂಗೈ ಮೇಗೈಯಾದರಲ್ಲಾ. ನಿಜಗುರು ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನದೇವಯಾ/384 |
ಇಪ್ಪತ್ತೆರಡು ಸಾವಿರ ಇಚ್ಛಾನಾಡಿಯಲ್ಲಿ ತಪ್ಪದೆ ರಮಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿ ಅದಂತಿಲಿ ದ್ವಾರಮೊಂಬತ್ತರಲ್ಲಿ ನಾಯಕದ್ವಾರವನರಿಯಬೇಕು. ಯೋಗಿಗಳು ಬೇರೆ ಜಪ ನಿಮಗೇಕೆ? ಹೇಳಿರೇ? ಹಂಸ ಹಂಸಾಯೆಂಬ ಜಪವು ಸಂಪೂರ್ಣವಾಗಿ ಅತ್ತತ್ತ ಇತ್ರ್ತೆರಕೆ ಕಂಪಿಸದೆ ಇದ್ದಡೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಕೂರ್ತು ತತ್ವಮಸಿಯೆಂಬ ಇತ್ತಲಿದ್ದರ್ಥ ಒಯ್ಯುವನವ್ವಾ./385 |
ಇಬ್ಬಟ್ಟೆಯಲ್ಲಿ ಮನೆಯ ಮಾಡಿಕೊಂಡಿಪ್ಪನಲ್ಲ; ನಿನ್ನ ಕಂಗಳ ಮುಂದಿಂದಗಂದಡೆ ಎಂತು ಜೀವಿಸುವೆನಯ್ಯಾ? ಎಂತು ಬದುಕುವೆನಯ್ಯಾ? ಎನ್ನಳಲಬಳಲ ಕಂಡು ಕರುಣದಿಂದ ನೋಡಿ ನಿನ್ನಳಲೇನುಸುರುಸುರೆಂದು ಕಣ್ಣೀರ ತೊಡೆದೊಡಗೂಡಾ, ಕಪಿಲಸಿದ್ಧಮಲ್ಲಿನಾಥಾ./386 |
ಇಬ್ಬರೆಡೆಗೆ ಹರಿವ ಕುಂಟಣಿ ಒಬ್ಬಳೆಯವ್ವ! ತಾ ಮುನ್ನ ನೆರವಳವನ ಬಳಿಕ ತಂದು ನೆರಹುವಳೆಮಗೆ ಇವಳ ಕುಂಟಣಿತನವಿಂತುಟವ್ವಾ ನಾವಿಬ್ಬರು ಮಾಡಿ ನೆರವವನ ಕಪಿಲಸಿದ್ಧಮಲ್ಲಿನಾಥಯ್ಯಾ./387 |
ಇರಿಸಿದಂತೆ ಇಪ್ಪ ಬಳಸ ಬೊಮ್ಮದ ಮಾತ ಎಳಸುವನು ಭಕ್ತಿ ಆರರ ಸೀಮೆಯ ತರಿಸುವನು ಘನವೆನಿಪ ಮನದ ಮಧ್ಯದ ನಡುವೆ ಒಳಗಿಟ್ಟ ಶಿಷ್ಯನೈ ಕಪಿಲಸಿದ್ಧಮಲ್ಲಿಕಾರ್ಜುನ./388 |
ಇರುವರಯ್ಯಾ, ಒಂದು ಲಕ್ಷ ಶೀಲಸಂಪನ್ನರು. ಇರುವರಯ್ಯಾ, ಒಂದು ಲಕ್ಷ ವ್ರತಸಂಪನ್ನರು. ಇರುವರಯ್ಯಾ, ಒಂದು ಲಕ್ಷ ಅರ್ಥಸಂಪನ್ನರು, ಪ್ರಾಣಾಭಿಮಾನ ವೈರಾಗ್ಯದಿಂದ ಕೊಟ್ಟವರು. ಇವರೆಲ್ಲರು ಫಲಸಮರ್ಥರಲ್ಲದೆ ಲಿಂಗಸಮರ್ಥರು ಒಬ್ಬರೂ ಇಲ್ಲ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ./389 |
ಇಲ್ಲದ ಮಾಯೆಯ ಇಲ್ಲೆನಿಸುವುದದೆ ಅಲ್ಲನ ಅರುಹು ಕಂಡಯ್ಯಾ. ಇಲ್ಲದ ಮಾಯೆ ಅಹುದೊ ಅಲ್ಲವೊ ಎಂಬುಭಯ ಭಾವ ಜಲ್ಲರಿಯ ಕಳಂಕು ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./390 |
ಇಲ್ಲಿಯ ವಿಸ್ತಾರ ಮಹಾಗುರುವಿನ ಹೃದಯವೊ, ನಾನರಿಯೆನು. ಇಲ್ಲಿಯ ವಿಸ್ತಾರ ಪ್ರಭುವಿನ ಹೃದಯವೊ ನಾನರಿಯೆನು ಇದ ನೀನೆ ಬಲ್ಲೆ ಕಪಿಲಸಿದ್ಧಮಲ್ಲಿಕಾರ್ಜುನ./391 |
ಇಲ್ಲಿರುವ ಕೋಂಟೆಗಳೆಲ್ಲ ಅಲ್ಲಿಹ ರುದ್ರಗಣಂಗಳ ಮಂದಿರವಯ್ಯಾ. ಇಲ್ಲಿರುವ ಗುಡ್ಡರೆಲ್ಲ ಅಲ್ಲಿಹ ಮಹಾಗಣಂಗಳಯ್ಯಾ. ಇಲ್ಲಿರುವ ಭಾಮಿನಿಯರೆಲ್ಲ ಅಲ್ಲಿಹ ರುದ್ರಕನ್ನಿಕೆಯರಯ್ಯಾ. ಇಲ್ಲಿರುವ ತಟಾಕಂಗಳೆಲ್ಲ ಅಲ್ಲಿಹ ದೇವಗಂಗೆಯಯ್ಯಾ. ಇಲ್ಲಿರುವ ಕಪಿಲಸಿದ್ಧಮಲ್ಲಿಕಾರ್ಜುನ ಅಲ್ಲಿಹ ಪಂಚಮುಖ, ಶತಮುಖ, ಸಹಸ್ರಮುಖ, ಅನಂತಮುಖ ಪಾರ್ವತೀಪ್ರಿಯ ಮಹಾದೇವ ನೋಡಾ, ಕೇದಾರ ಗುರುದೇವಾ./392 |
ಇವನ ಪರಿಯ ಗಂಡುಗೂಸು ಪೃಥುವಿಯ ಮೆಲ್ಲವಯ್ಯಾ, ಅವ್ವಾ, ಗಂಡುಮಕ್ಕಳು ಗಂಡುಬೇಟಗೊಂಬರು. ಹೆಮ್ಮಕ್ಕಳು ಹೆಂಬೇಟಗೊಂಬರು. ಇವಗೆ ಕೂರದವರಾರು? ಹೇಳಾ! ಅವ್ವಾ! ಅಯ್ಯಾ! ಜಗದ ಗಂಡರ ಹೆಂಡಿರು ಇವನ ಮೇಲೆ ಮೂಗೂರಿಕೊಂಡಿಪ್ಪರು, ಕಪಿಲಸಿದ್ಧಮಲ್ಲಿನಾಥಯ್ಯನವ್ವಾ/393 |
ಇವರೆಂದ ಮಹಾವಸ್ತುವಿನ ಪ್ರಮಾಣವನರಿದೆ, ಶುದ್ಧವಿದೆಂದರಿದೆ, ಪಾದೋದಕ ಪ್ರಸಾದ ಭಕ್ತಿಯೆಂಬ ನಿಶ್ಚಯವನರಿದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಪರತತ್ವವನರಿದೆ ಇವರಿಂದ./394 |
ಇವಳಾವಾವ ವಂಚಕದಲಿ ಹುಟ್ಟಿ ಬೆಳೆದವನೆಂದರಿಯೆ. ನೋಡಯ್ಯಾ, ಇಂತೀ ಲೋಕವ ಹೊರಿಸೆಂದು ತಲೆವಗ್ಗವಿಕ್ಕಿಕೊಟ್ಟಾ, ಕಪಿಲಸಿದ್ಧಮಲ್ಲಿನಾಥಯ್ಯನವ್ಯಯ!/395 |
ಇಷ್ಟಲಿಂಗ ಪೂಜೆಯದು ಅಷ್ಟೆ ಶ್ವರ್ಯಪ್ರದವಾಯಿತ್ತು. ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು. ಭಾವಂಗಪೂಜೆಯದು ನಿರ್ಭಾವ ನಿಜಾನಂದ ವಸ್ತುಸ್ವರೂಪವಾಯಿತ್ತು, ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ./396 |
ಇಷ್ಟಲಿಂಗದ ಭೇದ ದೃಷ್ಟವಪ್ಪೀ ಮುಕ್ತಿ ಬಚ್ಚಬರಿಯಾನತದ ನಿರ್ಗುಣದ ಒಪ್ಪಿಪ್ಪ ಕಮಳದ ತಪ್ಪದಿಹ ದೀಪ್ತಿಯ, ಒಪ್ಪಿಪ್ಪ ನಿತ್ಯದಿಂದಿತ್ತರಲ್ಲಿ ಮನೆಗಳಾ ಮಧ್ಯದಲಿ ಮನಸಿಜನ ಎಣಿಕೆಯನು ಹುಗಲೀಯದೆ ಶುದ್ಧ ತಾತ್ಪರ್ಯದಾ ಕಾ[ಮ್ಯಾ]ರ್ಥದಿಂದಲ್ಲಿ [ನಿಃ]ಕಾಮ ಸಂಗವ ಮಾಡಿ ಸೋಮಕೊಳದಲ್ಲಿ ಶುದ್ಧ ನೀರ ಮಿಂದು ತಾನು ತಾನೊಂದಾಗಿ ನಾನಾಗುಣಂಗಳ ಭೇದವನು ಅರಿದೀಗ ಮುಗ್ಧನಾದ. ಮೋಹಿಸುವ ಮಲತ್ರಯದ ಕಾಮಿಸುವ ಸಂಗಮವನು ಬೇಗದಲಿ ಸುಟ್ಟು ನೀನು ನಾನಾದೆ ಕಪಿಲಸಿದ್ಧಮಲ್ಲಿಕಾರ್ಜುನ./397 |
ಇಷ್ಟಲಿಂಗವ ಕರಕ್ಕೆ, ಪ್ರಸಾದಲಿಂಗವ ತನುವಿಂಗೆ ಒಳ ಹೊರಗೆನ್ನದೆ ಸರ್ವಾಂಗದೊಳಗೆ ಚರ ಪ್ರಸಾದಂಗವನಿತ್ತ ಶ್ರೀಗುರು ಆನಂದಸ್ಥಾನದಲ್ಲಿ ಅಕ್ಷರಂಗವನು ತಂದಿತ್ತ ಕಾರಣ ತನ್ನಂತೆ ಆನಾದೆ ಕಪಿಲಸಿದ್ಧಮಲ್ಲಿಕಾರ್ಜುನ./398 |
ಇಹತ್ರ ಪರತ್ರದಲ್ಲಿ ಎರಡರಲ್ಲಿ ಇಪ್ಪುದು ಗೀತವು ನೋಡಯ್ಯಾ. ಇತ್ತ ಬಾರಾ, ಸಾರಾ ಎಂಬುದು ಗೀತವು ನೋಡಯ್ಯಾ. ಗೀತವನೂ ಗಿರಿಜೆಯನೂ ಬಾಯೆಂದು ಕೈವೀಸುವನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಓ! ಅಯ್ಯಾ!/399 |
ಇಹಪರದ ಪರಿಯನು ಅಯ್ಯಾ ನೀನೇ ಬಲ್ಲೆ. ನಿನ್ನ ಶರಣನು ಬಲ್ಲ ಪ್ರಭುರಾಯನು. ಆತನನುಮತದಿಂ ಮಾಯೆಯ ಗೆಲುವ ಪರಿಯ ನೀನೆನಗೆ ಕಲಿಸುವುದು ಕಪಿಲಸಿದ್ಧಮಲ್ಲಿಕಾರ್ಜುನ./400 |
ಇಹಪರವೆಂಬ ಇದ್ದೆಸೆಯನರಿತು ಇದ್ದೆಸೆಯಾದ ಗುರುಚರವಿಡಿದು ಇಹಪರವೆಂದರಿಯ. ಭಕ್ತನ ತನುವೆ ಶಿವನಿಪ್ಪಾಲಯವಾಗಿ ಇಹಲೋಕವೆ ಪರಲೋಕ; ಪರಲೋಕವೆ ಇಹಲೋಕ ನಿನ್ನ ಭಕ್ತಂಗೆ ಕಪಿಲಸಿದ್ಧಮಲ್ಲಿಕಾರ್ಜುನ./401 |
ಇಹಲೋಕ ಪರಲೋಕವೆಂಬ ಸಂದಳಿಯಿತ್ತಯ್ಯಾ. ಗುರುವಿನ ಹಸ್ತದಲ್ಲಿ ಸತ್ತು, ಪಂಚಾಕ್ಷರಿಯಿಂದೆತ್ತಿದ ಕಾರಣದಲ್ಲಿ ; ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣದಲ್ಲಿ; ನಿತ್ಯವೂ ವಿಭೂತಿ ರುದ್ರಾಕ್ಷಿಯ ಧಾರಣ ಮಾಡುವ ಕಾರಣದಲ್ಲಿ; ಇಹಲೋಕವೆಂದೇನು, ಪರಲೋಕವೆಂದೇನು, ಹಂಗು ಹರಿದು ನಾನು ನೀನಾದ ಬಳಿಕ? ಎಲೆ ಅಯ್ಯಾ, ಭಕ್ತರ ಸವಾಂಗ ಲಿಂಗತನು; ಭಕ್ತರಿಪ್ಪ ಲೋಕವೆ ರುದ್ರಲೋಕ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಹಸ್ತವ ಮಸ್ತಕದಲ್ಲಿಟ್ಟಡಯಿತ್ತು! ./402 |
ಈ ಆಶೆಯೆಂಬುವಳು ಒಂದು ನಿಮಿಷಂ ಬರಿರಯಳು; ಆರನಾದಡೆಣಿಸುತ್ತಿರ್ಪಳು. ಈ ಆಶೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮೊಡಗೂಡಿ ಬೇರಾಗದಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ./403 |
ಈ ಆಸೆಯೆಂಬವಳು ನೋಡಾ ಜಲ ಸಮುದ್ರಂಗಳಂ ಕಟ್ಟಿಸುವಳು, ಕ್ಷಣ ಬೇಗ ಮೂಷೆಗಳಂ ಮಾಡಿ ರಸಂಗಳಂ ಪಡೆವಳು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿನೊ ಕಪಿಲಸಿದ್ಧಮಲ್ಲಿಕಾರ್ಜುನ./404 |
ಈ ಧರೆ ದೆಸೆವಳೆಯವೆಲ್ಲವು ತನಗಾದಡೆ ಅನಿತರ ನಿಲ್ಲಳು, ಮತ್ತಂ ಬೇಕೆಂದು ಪೊರಯಿಂಕೆ ಕೈದೋರುತಿಪ್ಪುದು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ./405 |
ಈ ರಚನೆಯೆಂಬುದು ಇಮ್ಮಡಿ ಮುಮ್ಮಡಿಯಿಂದಲ್ಲದೆ ಒಮ್ಮಡಿಯಿಂದಾಗದು. ಆದಿಯಲ್ಲಿ ಬ್ರಹ್ಮ, ಅನಾದಿಯಲ್ಲಿ ಏನೆಂಬುದಿಲ್ಲ. ಇತ್ತಲದು ಮಾಯಾಶಕ್ತಿಯಿಂ ಮಾಧವನ ಉತ್ಪತ್ತಿ; ಮಾಧವನ ಉತ್ಪತ್ತಿಯಂ ಮೂಲೋಕ ನಿಮಿರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ./406 |
ಈ ರಿತುಕಾಲ ಹುಟ್ಟಿ ಮುಟ್ಟಿ ಕೆಡುವಡೆ ಒಳಗಡೆ ಬೆಳೆಯಲೇಕಯ್ಯಾ! ಹೋ! ವಾ! ಹೋ! ಅಯ್ಯಾ! ನೀ ಮುಟ್ಟಿ ಕೆಡುವಡೆ ಒಳಗೆ ಬೆಳೆಯಲೇಕಯ್ಯಾ. ಈ ಬಟ್ಟೆ ಹುಸಿಬಟ್ಟೆ. ಕಪಿಲಸಿದ್ಧಮ್ಲನಾಥಯ್ಯನ ಅಂಜದೆ ನೆನೆಯಿರೊ, ನೆನೆಯಿರೊ! ಹೋ! ವಾ! ಹೋ! ಅಯ್ಯಾ!/407 |
ಈಗರಸುವ ನುಡಿವಿರಹಿತ ಂಗವ ನಿಲುಕಡೆ ಬೇರೆ ಉಂಟೆ? ಮುಕುಳದಲ್ಲಿ ಪರಿಮಳ ತೋರುವ ಕಾಲಕ್ಕೆ ತೋರದಿಪ್ಪುದೆ? ಕಪಿಲಸಿದ್ಧಮಲ್ಲಿಕಾರ್ಜುನ./408 |
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು./409 |
ಉಂಡು ಉಂಡು ಹೋಗುವವರ ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ. ಎಡಹಿ ಎಡಹಿ ಹೋಗುವವರ ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ. ಉಣದೆ ಎಡಹದೆ ಹೋದಡೆ ಅವರೆ ಬಸವಾದಿ ಪ್ರಮಥರೆಂಬೆ; ಅವರೆ ನೀವೆಂದು ಭಾವಿಸುವೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ!/410 |
ಉಟ್ಟಡೇನು ತೊಟ್ಟಡೇನು ಮಲಮೂರು ಮುಟ್ಟದನ್ನಕ್ಕ? ಉಟ್ಟು ತೊಟ್ಟು ಬೆಟ್ಟುಣಿಗಿ ಕಟ್ಟಳೆ ಷಟ್ಸ ್ಥಲಗುರುವರ್ಯ ಚೆನ್ನಬಸವಣ್ಣ ಮೆರೆಯಲ್ಲವೆ? ಕಪಿಲಸಿದ್ಧಮಲ್ಲಿಕಾರ್ಜುನಂಗವೆ./411 |
ಉಣ್ಣದ ಊಡದ ಫಲಪ್ರಾಣಿಗಳ ನಾ ಕಂಡು ನೋಡುತಿರ್ದೆ. ಅಂಧಕ ರೂಪಿನ ಉರಗನ ಮೋಹಕ್ಕೆ ಬೆರಗಾಗಿ ನೋಡುತಿರ್ದೆ. ಎರಡರ ಮೋಹಕ್ಕೆ ನೋಡಿ ತಾನು ನಗುತಿರ್ದ, ಕಪಿಲಸಿದ್ಧಮಲ್ಲಿನಾಥಾ./412 |
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ./413 |
ಉತ್ತರಕೋಣೆಯ ಉತ್ತರೋತ್ತರ ವಾಕ್ಯವ ಕೇಳಿ ಧನ್ಯನಾದೆನಯ್ಯಾ. ಉತ್ತರಕೋಣೆಯ ನಿಮಿತ್ತ ಪರಮಗುರುವಿನ ದೂಷಣೆಯ ಕೇಳಿ ಪಾಪಿಯಾದೆನಯ್ಯಾ. ಇದುಕಾರಣ, ಶರಣರ ದೂಷಣೆಯಿಂದ ಶರಣರ ಮನಕ್ಕೆ ಭೂಷಣವೆ? ಕಪಿಲಸಿದ್ಧಮಲ್ಲಿಕಾರ್ಜುನ./414 |
ಉತ್ಪತ್ತಿ ಸ್ಥಿತಿಲಯವಿಲ್ಲದಭವ ನೀನು ಕಂಡಯ್ಯಾ. ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ. ನಿನ್ನಿಚ್ಛಾಮಾತ್ರದಲ್ಲಿ ನಾನಿಪ್ಪೆನು. ಹಿರಿಯ ನೀನೇ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಾನೇತರೊಳಗಪ್ಪೆನು ಹೇಳಾ, ಪ್ರಭುವೆ!/415 |
ಉದಕ ಹೋಗಿ ಗುರುಪಾದೋದಕವೆನಿಸಿತ್ತು; ಗುರುಪಾದೋದಕ ಹೋಗಿ ಕ್ರಿಯಾಪಾದೋದಕವೆನಿಸಿತ್ತು; ಕ್ರಿಯಾಪಾದೋದಕ ಹೋಗಿ ಜ್ಞಾನಪಾದೋದಕವೆನಿಸಿತ್ತು; ಜ್ಞಾನಪಾದೋದಕವೆ ಶರಣನ ಮನದ ಮೊನೆಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದಿತ್ತು./416 |
ಉದಕದಿಂದ ಅಭಿಷೇಕಂಗೈವಡೆ, ಒದವಿದವು ನೋಡಾ ನಿನ್ನುತ್ತಮಾಂಗದಲ್ಲಿ ಅರುವತ್ತೆಂಟುಕೋಟಿ ನದಿಗಳು. ಪುಷ್ಪವ ಧರಿಸುವಡೆ, ಚಂದ್ರಕಲಾ ಪ್ರಕಾಶವುಂಟು ನೋಡಾ ಜಟಾಗ್ರದಲ್ಲಿ. ನೀರಾಜನವೆತ್ತುವಡೆ ಸೂರ್ಯಚಂದ್ರಾಗ್ನಿನೇತ್ರ ನೋಡಾ. ಸ್ತೋತ್ರವ ಮಾಡುವಡೆ, ವೇದಂಗಳು ಹೊಗಳಿ ಹೊಗಳಿ ಮೂಗುವಟ್ಟವು ನೋಡಾ. ನಿನ್ನ ಮುಂಭಾಗದಲ್ಲಿ ನಾಟ್ಯವನಾಡುವಡೆ, ಅದುರಿದವು ನೋಡಾ ಅಜಾಂಡಂಗಳು ನಿನ್ನ ಪಾದಸ್ಪರ್ಶನಂದ. ಚಾಮರವ ಬೀಸುವಡೆ, ನೋಡಾ ಹನ್ನೊಂದು ಕೋಟಿ ರುದ್ರಕನ್ನಿಕೆಯರ ಕೈತಾಳಧ್ವನಿಯು. ಚಂದನವ ಧರಿಸುವಡೆ, ನೋಡಾ ಮಲಯಾಚಲನಿವಾಸಿ. ವಸ್ತ್ರವ ಧರಿಸುವಡೆ, ನೋಡಾ ವ್ಯಾಘ್ರಾಸುರ ಗಜಾಸುರ ಚರ್ಮವಾಸಿ. ಭಸ್ಮವ ಧರಿಸುವಡೆ, ನೋಡಾ ಕಾಮನಸುಟ್ಟ ಭಸ್ಮ ಅಂಗದಲ್ಲಿ. ಅಕ್ಷತೆಯ ಧರಿಸುವಡೆ, ನೋಡಾ ಅಜಾಂಡಂಗಳ ದಾಟಿದ ಮಸ್ತಕ. ಅಂತಪ್ಪ ವಿಗ್ರಹವ ಪೂಜಿಸುವಡೆನ್ನಳವೆ? ಶರಣನ ಮುಖದಿಂದ ಬಂದ ಪದಾರ್ಥವ ಕೈಕೊಂಡು ಪೂಜಾ ಪ್ರೀತನಾಗಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./417 |
ಉದಯವೆಲ್ಲ ಒಂದೆ: ಈ ಚಲವ ಆಶ್ರಯಿಸಿ ಮದ್ಯಪಾನವೆನಿಸಿತ್ತು ; ಸುರತರುವ ಆಶ್ರಯಿಸಿ ಅಮೃತವೆನಿಸಿತ್ತು. ದೇಹವೆಲ್ಲ ಒಂದೆ: ಅಂಗನೆಯರ ಆಶ್ರಯಿಸಿ ಭವಕ್ಕೆ ಬೀಜವಾಯಿತ್ತು ; ಅಂಗವ ಆಶ್ರಯಿಸಿ ಭವಾರಣ್ಯಕ್ಕೆ ದಾವಾನಲವೆನಿಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./418 |
ಉದಯೇ ಜನನಂ ನಿತ್ಯಂ ರಾತ್ರಾ ್ಯಂ ಚ ಮರಣಂ ತಥಾ ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ ಕ್ಷೀಣಾಯುರಗ್ನಿಮಾಂದ್ಯಂ ಚ ರೋಗೋದ್ರೇಕಶ್ಚ ಕಾರ್ತಿಕ!’ ನಿದ್ರಾಮಾತ್ರೇಣ ಜಾಯಂತೇ ಮನಃ ಪವನಸಂಯುತಂ ಎಂದುದಾಗಿ, ರೂಪಿಲ್ಲದವಳೊಡನಾಡಿ ಮೃತ್ಯುವಿಪ್ಪ ಠಾವನರಿಯಬಾರದು. ಹಿತವೆಯಂತಿಪ್ಪಳು ಒತ್ತಿ ಕೆಡಹುವಳು. ದೊಪ್ಪನೆ ಭೂಮಿಗೆ ಒರಗಿಸುವಳು. ಇವಳು ಅಪ್ಪುವ ಅಗಲುವ ಪರಿಯೇ ನೋಡಯ್ಯಾ. ಈ ಲೋಕದೊಳಗೆಲ್ಲರೂ ಅಜ್ಞಾನನಿದ್ರಾಮಾಯಾಶಕ್ತಿಯ ಸಂಗದಿಂದ ಮರೆದೊರಗುತ್ತೈದಾರೆ. ಎನಗಿದ ತಪ್ಪಿಸಿ ನಿಮ್ಮೊಳಗಿರಿಸಿಕೊಳ್ಳಯ್ಯಾ ಪ್ರಭುವೆ ಕಪಿಲಸಿದ್ಧಮಲ್ಲಿನಾಥದೇವರ ದೇವ./419 |
ಉಪದೇಶವ ಮಾಡಿದಲ್ಲಿ ಗುರುವೆನಿಸಿದನು. ಕಾಮಿತ ಫಲಂಗಳ ಕೊಟ್ಟ್ಲಲ್ಲಿ ಲಿಂಗಮೂರ್ತಿ ಎನಿಸಿದನು. ನಿತ್ಯನಿರ್ವಾಣದ ಸಕೀಲವ ತೋರಿದಲ್ಲಿ ಜಂಗಮವೆನಿಸಿದನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./420 |
ಉಪಮೆ ಅನುಪಮೆ ಎಂಬುದು ನಿಮ್ಮಧೀನ ಕಂಡಯ್ಯಾ. ಹೇಳಿ ಕೇಳಿಹೆನೆಂಬುದು ನೀವು ಕಂಡಯ್ಯಾ. ಎನ್ನಂತರಂಗಕ್ಕೆ ಬಹಿರಂಗಕ್ಕೆ ನೀವೆ ಕರ್ತರಾದ ಕಾರಣ, ನಿಮ್ಮ ನಿಜವ ಹೇಳದರ್ದಡೆ ಎಂತುಳಿವೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ/421 |
ಉಸುರ ಹಿಡಿದು ಮಜ್ಜನಕ್ಕೆರೆವೆನಯ್ಯಾ ನಿಮಗೆ; ವಿಷಯ ಮಾದು ಗಂಧವನೀವೆನಯ್ಯಾ ನಿಮಗೆ; ನೆನೆಹ ನೆಲೆಗೊಳಿಸಿ ಕೊಡುವೆನು ಕುಸುಮವನು; ತನುಗುಣಾದಿಗಳನುರುಹಿ ದಶಾಂಗಧೂಪವನಿಕ್ಕುವೆನು. ಎನ್ನನೆ ನಿಮಗೆ ಬೋನಕ್ಕೆ ಸವೆವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ, ಹೊರ ಬಳಕೆಯ ಪೂಜೆಗೆ ಎರಗದೆನ್ನ ಮನವು/422 |
ಉಸುರುಸುರ ಸರಹಿನೊಳಗಡಗಿಕೊಂಡು ಬೆಳೆವುತಿಪ್ಪುದು ಲೋಕ! ಇದನು ನೀನೆಂತು ಅರಿದೆ ಹೇಳಾ. ಆ ನಿನ್ನ ಪ್ರಸಾದಂದರಿತೆ ನಾ, ಎನ್ನ ಕಪಿಲಸಿದ್ಧಮಲ್ಲಿನಾಥಯಾ/423 |
ಊರಲ್ಲಿರುವ ವಸ್ತು ಅದೆ ನೋಡಯ್ಯಾ. ವನದಲ್ಲಿರುವ ವಸ್ತು ಅದೆ ನೋಡಯ್ಯಾ. ಚರಿಸಿ ಚರಿಸಿ ಜಗವನುದ್ಧರಿಸುವ ವಸ್ತು ಅದೆ ನೋಡಯ್ಯಾ. ಮೂಲೋಕದೆರೆಯ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಪರವಸ್ತು ಅದೆ ನೋಡಯ್ಯಾ/424 |
ಊರಿಗೊಂದು ಹಳ್ಳವಾದಡೆ, ನೀರು ಕುಡಿವವರಿಗೂ ಒಂದೆ ಹಳ್ಳವೆ? ಇಲ್ಲಿಲ್ಲ. ಅರಿವವರಿಗೆ ಒಬ್ಬ ದೇವರಾದಡೆ, ಆ ಲೋಕದವರಿಗೂ ಒಬ್ಬನೆ? ಇಲ್ಲಿಲ್ಲ. ನಮ್ಮ ಕಪಿಲಸಿದ್ಧಮಲ್ಲೇಶನಲ್ಲದೆ ಬೇರೆ ದೈವವಿಲ್ಲ./425 |
ಊರೂರ ಮಧ್ಯದಲಿ ಆತನಿಪ್ಪರಮನೆಯ ಆರು ಅರಿಯರು ಆರು ದ್ವಾರಂಗಳ. ಅಂಗ ಲಿಂಗದಲ್ಲಿದ್ದು ಸಂಗವಂ ತೊರೆದೀಗ ಸುಸಂಗ ಸಾನಂದವಾದವರರಿಯರು. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಿಪ್ಪರ ಮನೆ ಈ ಪರಿಯಯ್ಯಾ./426 |
ಎಂಟಕ್ಕೆ ಗಂಟಾಗಿ ನಂಟನ ತಾಯಿ ನಮ್ಮೂರಿಗೆ ಹೋದಳು. ಅರಸುಗಳೈವರು ಅರಸಿಯ ಮುದ್ದಾಡ ಹೋದರು. ರೂಪುಳ್ಳ ಹೆಂಡತಿ ಕಂಡಡೆ ಏನೆಂದೊ: ನಮ್ಮ ಕಪಿಲಸಿದ್ಧಮಲ್ಲಿನಾಥ ಉಂಬಡೆ ಓಗರವಿಲ್ಲವೆಂದನು./427 |
ಎಂಟು ಬೆಟ್ಟದ ಮೇಲೆ ಎಂಟು ಸುಡೆಯರು ಬಂದು, ನಂಟುಗಂಡೆವೆಂದು ವರ್ಗಂಗಳಾ ಕಂಠಸ್ವರದಿಂದವೆ ಮಧುರಗೀತವ ಮಾಡೆ, ನಂಟು ಮುರಿಯಿತ್ತೀಗ ಆ ಪರಲೋಕ. ತನುತ್ರಯದ ಮಲತ್ರಯವ ಸುಟ್ಟು ಲಿಂಗತ್ರಯವ ನೆಲೆಗೊಳಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ./428 |
ಎಂಟು ಮಣಿಯ ಮನೆಯ್ಲ ಕಂಟಕವಿಲ್ಲದ ಮೂರ್ತಿ ತಾ ನಾಟ್ಯವ ಮಾಡುತ್ತಿದೆ ನೋಡಾ. ಆ ಎಂಟು ಮಣಿಯಲ್ಲಿ ತನ್ನಂಟು ಇಲ್ಲದೆ, ತಾ ಸ್ವತಂತ್ರ ನಾಟ್ಯನಾಗಿ ಆಡ್ಕ್ತುಹ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮೂರ್ತಿಯು./429 |
ಎಂಟು ಮೂರ್ತಿಯಲ್ಲಾದ ಆನಂದ ತಾ ನೀನಲ್ಲ ಎಂಟರಂತಿಪ್ಪೆ ಎಲೆ ಸದ್ಬೋಧದಾ ಮೂರರಲಿ ಭವಿಸೀಗ, ಆರರ ಪ್ರಭವಿಸಿ ಆರಾರನತಿಗಳೆದ ಶುದ್ಧ ರೂಪ ಮೀರಿಪ್ಪ ಸೀಮೆಯಲಿ ತಾನೊಂದು ರೂಪಾಗಿ ತೋರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನ./430 |
ಎಂಟು ಹದಿನಾರೆಂಬ ಬಲೆಯನೊಡ್ಡಿ ಚೆನ್ನಮೃಗವೆಂಬ ಕಂಗಳ ಬೇಟೆ ಎಸುವೆನಯ್ಯಾ. ವಿಂಧ್ಯವನದೊಳಗೆ ಓ ಓ ಎಂದೆನುತಲಯಿದರೆ ಎಸುವೆನಯ್ಯಾ. ಎಯ್ದೆ ಬಾಣಕ್ಕೆ ಎಯ್ದೆ ಗುರಿಯಾಗದ ಮುನ್ನ ಎಯ್ದುವೆ ದಶಮುಖ ರಾಮತಂದೆ ಎಸುವೆನಯ್ಯಾ /431 |
ಎಂತು ಮಾಯಾಸುಖವ ಸಂತತಂ ಗೆಲುವಾತ ನಿಶ್ಚಿಂತನಕ್ಕು ತಾನಿಹಪರದಲಿ ಸಂತತ ನಿಶ್ಚಿಂತನಪ್ಪಾತ ಕಪಿಲ ಸಿದ್ಧಮಲ್ಲಿಕಾರ್ಜುನ ತಾನಪ್ಪನು./432 |
ಎಂತೆಂತು ನೋಡಿದಡೀ ಮನವು ಸಂತವಿಡಲಿಯದಯ್ಯಾ. ನಿಮ್ಮಯ ಚಿಂತೆಗೆ ಒಳಗಾಗದೆ ದೆಸೆದೆಸೆವರಿವುದು, ಕಾಮಕಿಚ್ಚೆ ಸೂದು, ಕ್ರೋಧಕಿಚ್ಚೆ ಸೂದು, ಆಮಿಷ ತಾಮಸಕ್ಕೆ ತಾನೆ ಮುಂದಾಗಿಪ್ಪುದು. ಇದ ಮೂಲನಾಶವ ಮಾಡೆ ನೀ ಮುಂದಾಗಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನ./433 |
ಎಂದಡಾ ಮಾಯೆಯನು ಕರದಿಂ ತಂದೆ ಇಕ್ಕೆ ಜಾರಿ ಕೆಡುಹುವುದು. ಮಾಯೆ ಆರೂಢವೆಂಬವರ ಏಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ./434 |
ಎಂದಡೆ ಅವ್ವೆ ಅತ್ಯ್ಕತಿಷ್ಠರ್ದಶಾಂಗುಲ ಆನಂದರೂಪ ತಾಳು, ಗುರುವಾಗಿ ಶುದ್ಧದಲ್ಲಿ ತಾನೆ ಬಂದು, ಸಿದ್ಧದಲ್ಲಿ ತಾನೆ ಬಂದು, ಪ್ರಸಿದ್ಧದಲ್ಲಿ ತಾನೆ ಬಂದು, ಎನ್ನ ಮನದ ಮಹಾಕಾಂಕ್ಷೆಯನು ಮಾಣಿಸಿ ಉರುತರ ತಾನೆ ಬಂದು, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ಎನ್ನ ಮನದ ಮಸ್ತಕದಲ್ಲಿ ನೆಲೆಮನೆಯಾದ./435 |
ಎಂದಪ್ಪುದಯ್ಯಾ ಶಿವಭಕ್ತಿರಸ? ಎನಗೆಂದಪ್ಪುದಯ್ಯಾ ನಿಮ್ಮ ಕರುಣ? ಕ್ರಿಯಾಕಾರಕ್ಕೆ ತಾನೆ ಮೂಗನಾದೆ. ಮೊದಲುಗೆಟ್ಟೆನು ಶುದ್ಧಮೂಲದಲ್ಲಿ. ನಿರ್ವಾಣದೀಕ್ಷೆಯಲಿ ಒಯ್ಯನೆ ಮುಖದೋರೆ ಅಯ್ಯಾ ನೀನೆಯ್ದಿಕೊ ಮನ ಮಧ್ಯವ. ಮಥನದಲಿ ಸಂಗಮಿಸಿ ಯಥಾ ಕಥನಕ್ಕೆ ತಾನಾಗಿ ಸದಮಳ ಜ್ಞಾನಕ್ಕೆ ಮಾತೆಯಾಗಿ ಅತಿಶಯದ ರೂಪ ನಿನ್ನ ನೆನಹಿನ ನಿರ್ಮಳದಲ್ಲಿ ಲೀಯ್ಯವಾದೆ ಕಪಿಲಸಿದ್ಧಮಲ್ಲಿಕಾರ್ಜುನ/436 |
ಎಂದಿಪ್ಪೆನಯ್ಯಾ ಲಿಂಗಪೂಜೆಯ ಮಾಡುತ್ತ? ಎಂದಿಪ್ಪೆನಯ್ಯಾ ಜಂಗಮವನರ್ಚಿಸುತ್ತ? ಎಂದಿಪ್ಪೆನಯ್ಯಾ ಪ್ರಮಥಸಹ ಭೋಜನ ಪಂಙ್ತಯಲ್ಲಿ? ಎಂದಿಪ್ಪೆನಯ್ಯಾ, ನಮ್ಮ ಚೆನ್ನಬಸವಣ್ಣನ ಪಾದೋದಕ ಪ್ರಸಾದವ ಸೇವಿಸುತ್ತ ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ./437 |
ಎಂದಿಪ್ಪೆನಯ್ಯಾ, ನಿಮ್ಮ ಗಣಂಗಳ ಸಮೂಹದಲ್ಲಿ, ಎಂದಿಪ್ಪೆನಯ್ಯಾ, ನಿಮ್ಮವರ ನಡುವೆ, ಎಂದಿಪ್ಪೆನಯ್ಯಾ, ಕೀಳಿಲ ಕಾಯ್ದು, ಎಂದಿಪ್ಪೆನಯ್ಯಾ ಕಿಂಕರನಾಗಿ, ಎಂದಿಪ್ಪೆನಯ್ಯಾ, ನಿಮ್ಮ ನಾಮ ಡಿಂಗರಿಗನಾಗಿ, ಎಂದಿಪ್ಪೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./438 |
ಎಂದಿಪ್ಪೆನಯ್ಯಾ, ಶುದ್ಧಸಿದ್ದ ಪ್ರಸಿದ್ದ ಪ್ರವೇಶಿಯಾಗಿ! ಎಂದಿಪ್ಪೆನಯ್ಯಾ, ಭಕ್ತಿ ಜ್ಞಾನ ವೈರಾಗ್ಯ ಸಂಪನ್ನನಾಗಿ; ಎಂದಿಪ್ಪೆನಯ್ಯಾ, ತತ್ತಾತತ್ವ ತೂರ್ಯಾತೂರ್ಯ ನೀನೆಯಾಗಿ; ಎಂದಿಪ್ಪೆನಯ್ಯಾ, ದೀಕ್ಷಾತ್ರಯದಲ್ಲಿ ಸಂಪನ್ನನಾಗಿ; ಎಂದಿಪ್ಪೆನಯ್ಯಾ, ಲಿಂಗತ್ರಯದಲ್ಲಿ ಪ್ರಸಾದಸಂಪನ್ನನಾಗಿ; ಎಂದಿಪ್ಪೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮವರ ನಡುವೆ ಓರಂತೆ./439 |
ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ. ಎಂದೆಂದೂ ಎನ್ನಂಗ ಮನ ಪ್ರಾಣ ನಿನ್ನದಯ್ಯಾ ಬಸವಾ. ಕಪಿಲಸಿದ್ಧಮಲ್ಲಿನಾಥಯ್ಯನ ಗುರುಬಸವಾ./440 |
ಎಂದೋ ಎನಗೆ ಶಿವಪದ ಎಂದೋ’ ಎಂದು ಚಿಂತಿಸುವಂಗೆ ಮುಂದೆ ತೋರುತ್ತಿದೆ ಪರಮಪ್ರಸಾದದ ಬೀಡು. ಆ ಬೀಡು ಕಂಡು, ಶಿವಗಣಂಗಳ ನೆರವ ಮಾಎಡಿಕೊಂಡು, ಪರಮಗುರು ಚೆನ್ನಬಸವಣ್ಣನ ಶ್ರೀಪಾದಾರವಿಂದವನರಿದು, ಅವರ ಕೃಪಾವಲೋಕನದಿಂದ ನಿಮ್ಮ ಶ್ರೀಪಾದವನರಿದೆ, ಕಪಿಲಸಿದ್ಧಮಲ್ಲಿನಾಥಯ್ಯಾ./441 |
ಎಂದೋ ದಂದುಗ ಮಾಬುದು ಎನಗೆಂದೊ? ದಂದುಗ ಮಾಬುದು ಎನ್ನ ಮನಕ್ಕಿನ್ನೆಂದೊ? ತಂದೆ ಪರಮಾನಂದವೆಂದಪ್ಪುದೊ? ಎನಗಿನ್ನೆಂದೊ ಎಂದೋ ಕಪಿಲಸಿದ್ಧಮಲ್ಲಿಕಾರ್ಜುನ./442 |
ಎಕ್ಕೆವಿಂಡುಗಳೆಂಬವರು ಮುಕ್ಕಣ್ಣಾ, ನಿಮ್ಮ ಗಣಂಗಳು. ಬತ್ತಿದ ಕೆರೆ ಬಾಯಬಿಟ್ಟಂತೆ ಮೊರೆಯಿಟ್ಟು ಬರಲು, ಹೊತ್ತಿದ ಅಂಗಾಲ ಕಿಚ್ಚು ನ್ಕ್ತೆಯ ಮುಟ್ಟಿದಡೆ, ಚಕ್ಕನೆ ಕಪಿಲಸಿದ್ಧಮಲ್ಲಿನಾಥ ನೊಸಲಕಣ್ಣ ತೆಗೆದನು./443 |
ಎಣಿಕೆಯಿಲ್ಲದ ಘನವೆನ್ನ ಕಣ್ಣ ಮುಂದೆ ತೋರುತ್ತದೆ, ಎಲೆ ಅಯ್ಯಾ. ಇದ ಕಂಡು ಮನಕ್ಕೆ ಸಂತಸವಾಯಿತ್ತಯ್ಯಾ. ಎಣಿಕೆಯಿಲ್ಲದ ಘನವ ಕರುಣಿಸಿದಡಾನು ಬದುಕುವೆನಯ್ಯಾ, ಕಪಿಲಸಿದ್ಧಮ್ಲನಾಥಯ್ಯಾ./444 |
ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧ. ಅಡಗಿ ಉಡುಗಿ ಕಂಡೆಹೆನೆಂಬ ಭ್ರಮೆ ಭಾವಕ್ಕೆ ಬಯಲಾಯಿತ್ತು. ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವಾಯಿತ್ತು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗವು ಕಾಣಬಂದಿತ್ತು, ಪ್ರಭುದೇವರ ಕಾರುಣ್ಯದಿಂದ./445 |
ಎನಗೆನ್ನ ಬಸವಣ್ಣನ ತೊತ್ತು ನಮ್ಮ ತಾಯಿಯಾಗಬೇಕು; ಎನಗೆನ್ನ ಬಸವಣ್ಣನ ತೊಂಡ ನಮ್ಮ ತಂದೆಯಾಗಬೇಕು. ಎನಗೆನ್ನ ಬಸವಣ್ಣನ ತೊತ್ತು ತೊಂಡರು ನಮ್ಮ ತಾಯಿ ತಂದೆಗಳಾದರು; ನಿಮ್ಮ ತಂದೆ ತಾಯಿಗಳಾರು ಹೇಳಾ, ಕಪಿಲಸಿದ್ಧಮಲ್ಲಿನಾಥಯ್ಯಾ./446 |
ಎನಿತುಂ ತ್ರಿಭುವನಂಗಳು ತನಗಾದಡೆ ಅನಿತರ ತುಷ್ಟಿವಡೆಯಳು, ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ./447 |
ಎನ್ನ ಒಳಗನೊತ್ತಿ ನೋಡುವಿರಿ ; ಎನ್ನಲೇನುಂಟಯ್ಯಾ? ನುಡಿಯಿಲ್ಲದಭವ ನೀನು, ನುಡಿಗಲಿತೆನೆಂದಡೆ ನಿಮ್ಮನೊಡಂಬಡಿಸಲಾನು ಸಮರ್ಥನೆ? ಅನಂತ ವೇದಂಗಳೆಲ್ಲವು ನಿಮ್ಮ ಮುಂದೆ ಉಸುರಿಕ್ಕಲಮ್ಮದೆ ಮೂಗರಾಗಿದ್ದವು. ನಿಮಗಾನಿರುತ್ತರವ ಕೊಟ್ಟು ಕೆಟ್ಟ ಕೇಡಿಂಗೆ ಏನೆಂಬೆನೆಲೆ ಅಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ, ನಾನುಭಯಭ್ರಷ್ಟನೆಂಬುದ ನೀವೆ ಬಲ್ಲಿರಿ./448 |
ಎನ್ನ ಕಾಡದ ಮುನ್ನ ನಿನ್ನ ಮತವೀಯಯ್ಯ ನಿನ್ನ ಪ್ರಭುರಾಯಂಗೆ ಹೇಳಿ ಕಳೆಯಯ್ಯ. ಎನ್ನ ಗುರು ಕಪಿಲಸಿದ್ಧಮಲ್ಲಿಕಾರ್ಜುನ ಮನ್ನಣೆಗೆಡಿಸಿತ್ತು ಮಾಯೆ ಜಗವ./449 |
ಎನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ; ನಾನೇತರೊಳಗೇನು ಹೇಳಯ್ಯಾ! ನಿಮ್ಮ ಜ್ಙಾನದ ತೇಜದ ಮುಂದೆ ಎನ್ನರಿವು ಏತರದು ಹೇಳಯ್ಯಾ ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ; ಎನ್ನ ಸಟೆಯ ಭಕ್ತಿ ನಿಮ್ಮ ರೂಪು ಕಂಡಯ್ಯಾ, ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ./450 |
ಎನ್ನ ಗಂಡ ಬಹನಡ್ಡಬಂದು ಬಾಯ ತೆರೆವ, ಬಾಯಿ ತುಂಬ ಹೊಯ್ವ, ಮೆಲಲೊಡನೆ ಕುಡಿ ನೀರ ಹಿಡಿಯೆನುತಿಪ್ಪನವ್ವಾ. ಕುಡಿಸಿ ಕಡು ಮೀರಿ ಉಗುಳೆನುತಿಪ್ಪ ಮುನ್ನ ಕಾಣಿರೊ. ಇವನಾಡಿಸುವ ಯಂತ್ರವಾಹಕ ಕಪಿಲಸಿದ್ಧಮಲ್ಲಿಕಾರ್ಜುನನುಗುಳೆಂದಡೆ ಉಗುಳುವೆನವ್ವಾ/451 |
ಎನ್ನ ಘ್ರಾಣದಲ್ಲಿ ಆಚಾರಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ನೇತ್ರದಲ್ಲಿ ಶಿವಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ತ್ವಕ್ಕಿನಲ್ಲಿ ಜಂಗಮಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಶ್ರೋತ್ರದಲ್ಲಿ ಪ್ರಸಾದಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಹೃದಯದಲ್ಲಿ ಮಹಾಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಸ್ಥೂಲದೇಹದಲ್ಲಿ ಇಷ್ಟಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಸೂಕ್ಷ್ಮದೇಹದಲ್ಲಿ ಪ್ರಾಣಂಗವಾಗಿ ಬಂದ ಗುರು ಚೆನ್ನಬಸವಣ್ಣ. ಎನ್ನ ಕಾರಣದೇಹದಲ್ಲಿ ಭಾವಂಗವಾಗಿ ಬಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಚೆನ್ನಬಸವಣ್ಣ./452 |
ಎನ್ನ ತನು ಕರಗಿ, ಎನ್ನ ಮನ ಕರಗಿ ಕೊರಗಿದ ದುಃಖವಿದಾರದಯ್ಯಾ? `ಅಯ್ಯಾ ಅಯ್ಯಾ’ ಎಂದು ಆಳುವ ಅಕ್ಕೆ ಇದಾರದಯ್ಯಾ? ಮರಹೆಂಬ ಕೂರಸಿಗೆ ಗುರಿಮಾಡಿದವರಾರಯ್ಯಾ? ಹಾ! ಹಾ! ಎಂಬ ಧ್ವನಿಯ ಕೇಳಲಾರದೆ, ಕಂಡು ಕರುಣಂದ ಶಿರವ ಹಿಡಿದೆತ್ತಿ, ಎನ್ನ ಕಣ್ಣ ನೀರ ತೊಡೆದನು ಕಪಿಲಸಿದ್ಧಮಲ್ಲಿನಾಥಯ್ಯನು./453 |
ಎನ್ನ ತನು ಶುದ್ಧವಾಯಿತ್ತು ಚೆನ್ನಬಸವಣ್ಣನಿಂದ; ಎನ್ನ ಜೀವ ಶುದ್ಧವಾಯಿತ್ತು ಬಸವಣ್ಣನಿಂದ; ಎನ್ನ ಭಾವ ಶುದ್ಧವಾಯಿತ್ತು ಪ್ರಭುದೇವರಿಂದ. ಇಂತೆನ್ನ ತನು-ಜೀವ-ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳ ಕುರುಹ ಕಂಡು ನಿಷ್ಠೆ ನಿಬ್ಬೆರಗಾದೆ ನಾನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./454 |
ಎನ್ನ ತನುಮನದೊಡೆಯ ನೀನೆ ಕಂಡಯ್ಯಾ. ಮನದ ಮಹಾದೇವ ನೀನಾದ ಬಳಿಕ ಇನ್ನು ನಾ ಮನವ ಕದ್ದ್ಲೆಲ್ಲಿ ಬೈಚಿಡುವೆನಯ್ಯಾ? ಎನ್ನ ಮನೋವಾಕ್ಕಾಯದೊಡೆಯ ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಶರಣು ಶರಣು!/455 |
ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ, ಎನ್ನ ಮನವನೊರೆದು ನೋಡುವುದು ಬಸವಣ್ಣನ ಧರ್ಮವಯ್ಯಾ, ಎನ್ನ ಧನವ ಸೂರೆಮಾಡುವುದು ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ./456 |
ಎನ್ನ ನೀ ಒಲಿವೆ, ಒಲ್ಲೆ ಎಂಬುದನು ಅರಿಯಲು ಬಾರದು ಹಾ! ಹಾ! ಅಯ್ಯಾ! ನೀನೊಲಿವಂತೆ ಗೆಯ್ವೆ ನಾನು. ಒಲ್ಲದಂತೆ ಇರುವೆ ನೀನಯ್ಯಾ. ಎನ್ನ ನೀ ಕರ[ಕರೆ] ಕಾಡದಿರಯ್ಯಾ, ಎನ್ನ ಕಪಿಲಸಿದ್ಧ ಮಲ್ಲೇಶ್ವರ ದೇವರ ದೇವಯ್ಯಾ./457 |
ಎನ್ನ ಪಾತಕಜನ್ಮವ ಕಳೆದಿರಿ. ಎನ್ನ ಭೂತಪ್ರಾಣವನುಳಿದು ಲಿಂಗಪ್ರಾಣಿಯ ಮಾಡಿರಿದಿ ಎನ್ನ ನಿಮ್ಮ ಶರಣರ ಸಂಗಕ್ಕೆ ಸಲಿಸಿದಿರಿ. ಭವಿಯ ಮನೆಯನ್ನಪಾನ [ಪಿಶಿತ್ವ] ಸುರಾಪಾನವೆಂದೆಂಬೆ. ಎನ್ನದ್ದೆನಾದಡೆ ನಾಯಕನರಕ, ನಿಮ್ಮಾಣೆ, ಕಪಿಲಸಿದ್ಧಮಲ್ಲಿಕಾರ್ಜುನ./458 |
ಎನ್ನ ಪಾದವಿಡಿದು ಮಧ್ಯತನಕ ಪ್ರಭುವು ನೋಡಾ, ಮಧ್ಯವಿಡಿದು ಹೃದಯ ಪರಿಯಂತರ ಬಸವಣ್ಣ ನೋಡಾ; ಹೃದಯವಿಡಿದು ಕಂಠಪರಿಯಂತರ ಮಡಿವಾಳ ನೋಡಾ; ಕಂಠವಿಡಿದು ಕೇಶಾಂತತನಕ ಚೆನ್ನಬಸವಣ್ಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ./459 |
ಎನ್ನ ಭರಭಾರ ನಿಮ್ಮದಯ್ಯಾ, ಎನ್ನ ಹಾನಿವೃದ್ಧಿ ನಿಮ್ಮದಯ್ಯಾ, ಎನ್ನ ಕರಕರ ಕಾಡದಿರು ತಂದೆ! ನಿನ್ನ ಕಾಟ ಎನ್ನ ಪ್ರಾಣದೋಟ! ಕಪಿಲಸಿದ್ಧಮ್ಲನಾಥಾ, ಕೊಲ್ಲು, ಕಾಯಿ : ನಿಮ್ಮ ಧರ್ಮದವ ನಾನು./460 |
ಎನ್ನ ಭವಕ್ಕೆ ತಂರಿಸಿ ನರಕವನೂಡಿಹೆನೆಂದಡೆ ಉಂಡೆನೆ? ನಾನುಣ್ಣೆನುಣ್ಣೆ, ನಿನ್ನ ಕರುಣವುಂಟು! ನಿನ್ನ ಬಸವಣ್ಣನ ಕರುಣದಿಂದ ನೀನಪ್ಪೆ. ನಿನ್ನ ಕಕ್ಕುಲತೆ ಉಳಿದುದು, ಕಪಿಲಸಿದ್ಧಮಲ್ಲಿಕಾರ್ಜುನಾ/461 |
ಎನ್ನ ಮನ ಶುದ್ಧವಲ್ಲ, ನಿನ್ನ ಪೂಜಿಸಿ ಏವೆ? ಎನ್ನ ತನು ಶುದ್ಧವಲ್ಲ, ನೀನೆಂತು ಇಂಬುಗೊಂಬೆಯಯ್ಯಾ? ಮನದೊಡೆಯ ಮಹಾದೇವನೇ ಎನ್ನ ತನು ಮನ ಶುದ್ಧವ ಮಾಡಿ, ಮಧ್ಯಮಸ್ಥಾನ ಸಿಂಹಾಸನಾರೂಢನಾಗು, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ, ನಿಮ್ಮ ಧರ್ಮ./462 |
ಎನ್ನ ಮನದಲ್ಲಿ ಮತ್ತೊಂದಕ್ಕಿಂಬಿಲ್ಲ ಕಂಡಯ್ಯಾ. ನಿಮ್ಮ ನೆನೆವೆ ನಾನು, ನೀನು ಎನ್ನ ನೆನೆವೆ ಕಂಡಯ್ಯಾ. ನಿನಗೆಯೂ ಎನಗೆಯೂ ಒಮ್ಮನ ನೋಡಯ್ಯಾ. ನೀ ಮನಮುಕ್ತನಾದ ಕಾರಣ, ನಿನ್ನೊಡನೆ ಎನ್ನ ಮನಮುಕ್ತನ ಮಾಡಯ್ಯಾ, ಕಪಿಲಸಿದ್ಧಮಲ್ಲಿನಾಥ./463 |
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ./464 |
ಎನ್ನ ರೋಮಂಗಳೆಲ್ಲವು ನಯನಂಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜದರ್ಶನಕ್ಕೆ. ಎನ್ನ ನಯನಂಗಳೆಲ್ಲ ಜ್ಞಾನಚಕ್ಷುಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜಧ್ಯಾನಕ್ಕೆ. ಎನ್ನ ಜ್ಞಾನಚಕ್ಷುಗಳೆಲ್ಲ `ಅಖಂಡಾದ್ವಯ ಏಕೋನೇತ್ರ’ವಾದಡೆ ಕೂಡುವುದು ನೋಡಾ, ಜಗದಂಬೆಯ ಪಾದಪಂಕಜದಲ್ಲಿ ಭಾವವು, ಭವಹರ ಪುರಹರ ಕಪಿಲಸಿದ್ಧಮಲ್ಲೇಂದ್ರಾ./465 |
ಎನ್ನ ಸಕಲಕ್ಕೆ ಗುರು ಬಸವಣ್ಣ ಎನ್ನ ನಿಃಕಲಕ್ಕೆ ಗುರು ಬಸವಣ್ಣ ; ಎನ್ನ ಸಕಲ ನಿಃಕಲ ಕೂಡಿದಾನಂದದಾ ಪದವೆನಿತ ಆಗೆನಿಸಿ, ಪದವ ಮೀರಿದ ಸದಮಲಜ್ಞಾನಜ್ಯೋರ್ಮಯನೈ. ಬಸವಣ್ಣನೇ ಶರಣು, ಬಸವಣ್ಣನೇ ಶರಣು. ಬಸವಣ್ಣನೇ ಭಕ್ತಿಮುಕ್ತಿಗೆ ಮೂಲವು. ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ, ಕಪಿಲಸಿದ್ಧಮಲ್ಲಿಕಾರ್ಜುನ./466 |
ಎನ್ನ ಸ್ವಸ್ಥಿರವೆಂಬ ಭೂಮಿಯಲ್ಲಿ ಒಂದು ಬೀಜ ಮೊಳೆದೋರಿ, ಮೂರು ಶಾಖೆಗಳಾಗಿ ಫಲವಾರಾದವು. ಮೂವತ್ತಾರರ ಮೇಲೆ ಇನ್ನೂರ ಹನಾರು ಹಣ್ಣಾದವು. ಇಂತೀ ಫಲವನುಂಡುಂಡು ಮೀರಿ ಮೇಲಣದೊಂದು ಫಲದಲ್ಲಿ ಮೈಮರೆದು, ಕಪಿಲಸಿದ್ಧಮಲ್ಲಿಕಾರ್ಜುನನ ತತ್ವವಿದೆಂದರಿದು `ತತ್ವಮಸಿ’ಯಾದೆನು./467 |
ಎನ್ನ ಹೃದಯಕಮಲದ ಅಷ್ಟದಳದ ದ್ವಾತ್ರಿಂಶತ್ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ. ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ. ಆ ಚಂದ್ರನ ಮಧ್ಯದಲ್ಲಿಪ್ಪನಾ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿಪ್ಪುದಾ ಚಿತ್ಕಾಂತಿ. ಆ ಚಿತ್ಕಾಂತಿಯ ಮಧ್ಯದಲ್ಲಿಪ್ಪುದಾ ಚಿತ್ಸುಜ್ಞಾನ. ಆ ಚಿತ್ಸುಜ್ಞಾನದ ಮಧ್ಯದಲ್ಲಿಪ್ಪನಾ ಚಿದಾತ್ಮ. ಆ ಚಿದಾತ್ಮನ ಮಧ್ಯದಲ್ಲಿಪ್ಪನಾ ಚಿತ್ಪ್ರಕಾಶಸ್ವರೂಪಮಪ್ಪ ಪರಶಿವನು. ಅಂತಪ್ಪ ಪರಶಿವನ ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ ಮನೋಭಾವ ಕರಣೇಂದ್ರಿಯಂಗಳ ಸ್ವರೂಪೀಕರಿಸಿ ದೃಷ್ಟಿಗೆ ತೋರಿ, ಕೈಯಲ್ಲಿ ಲಿಂಗವ ಕೊಟ್ಟ ಶ್ರೀಗುರುವಿನ ಶ್ರೀಚರಣಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ./468 |
ಎನ್ನ ಹೊತ್ತಿಪ್ಪವಳ ನೆತ್ತಿಯ ಕಣ್ಣಿನಲ್ಲಿಪ್ಪ ಂಗವ ನಾನೆಚ್ಚತ್ತು ನೋಡುವ ತೆರನೆಂತಯ್ಯಾ. ನೋಡ ಹೋದಡೆ ನೆತ್ತಿ ಒಡೆದು ಕಣ್ಣಾಯಿತ್ತು. ನೋಡರ್ದಡೆ ಎನಗವಳು ತೋರಳು. ಎನಗೆ ಕಾಬ ತೆರನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ./469 |
ಎನ್ನನಾಗಳೆ ಬಂದಿವಿಡಿದೆ ಗಡಾ ನೀನು. ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈ ಬೇರಾದವರು. ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು. ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಹಿಡಿದು ತಡೆಯಲಾನೇತರವನಲ್ಲ. ಕರುಣದಿಂದ ಬಾರಾ, ಎನ್ನ ದೇವರ ದೇವಾ./470 |
ಎನ್ನರು ಅನ್ಯವನು ಅನ್ಯ ತಾ ತನ್ನೊಳಗೆ ಬಿನ್ನಾಣವೇನು. ಲೋಕದ ಹೊರಗೆಯೂ ಅನ್ಯತ್ರವು ಬೇಡ, ತಾ ತನ್ನೊಳಗೆ ಬಿನ್ನಾಣಂ ತಿಳಿದು ನೋಡು. ಸಮತೆಯೊಳಗೆ ಬೇರನ್ಯವೆ ಇಲ್ಲ, ತನ್ನೊಳಗೆ ಸರ್ವವೂ ಬಿನ್ನಾಣವೇನದರ ಪರಿ ಬೇರೇನು ಹೇಳಾ, ಸನ್ನುತವು ಸಮತೆಯ ಆನನ್ಯತವು ಆದರೆ ತನ್ನೊಳಗೆ ಸರ್ವವೂ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./471 |
ಎಪ್ಪತ್ತೆರಡು ಸಾವಿರ ಇಚ್ಛಾನಾಡಿಗಳಲ್ಲಿ ತಪ್ಪದೆ ಚರಿಸುವಾತನ ಉಪಪ್ರಯೋಗ ಹಂಸನೆಂದೆಂಬೆ. ಆತನ ಪರಿಯದಂತಿರ. ದ್ವಾರ ಒಂಬತ್ತರಲ್ಲಿ ನಾಯಕದ್ವಾರವನರಿಯಬೇಕು ಯೋಗಿಗಳು; ಬೇರೆ ಜಪ ನಿಮಗೇಕೆ ಹೇಳಿರೆ. `ಹಂಸ ಹಂಸ’ ಎಂಬ ಜಪ ಸಂಪೂರ್ಣವಾಗಿ ಅತ್ತತ್ತತ್ತೆರಕ್ಕೆ ಕಂಪಿಸದ್ದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು ಕೂರ್ತು `ತತ್ವಮಸಿ’ಯೆಂಬ ಭೈತ್ರದಿಂದೊಯ್ವನವ್ವಾ/472 |
ಎಪ್ಪತ್ತೊಂದು ಅರಣ್ಯದಲ್ಲಿಪ್ಪತ್ತೊಂದು ಋಷಿಯರು ತಪ್ಪದೆ ಅಜಪೆಯ ಜಪಿಸುತ್ತ, `ಹವಿಷಾ ಹವಿಷಾ’ಯೆಂಬ ಆನಂದದ ಹಂಸನ ಜಪದಲ್ಲಿ, ತೋರಿಪ್ಪ ಬ್ರಹ್ಮಾಂಡವ ಮೀರಿಪ್ಪ ಜಪದಲ್ಲಿ, ಆರೂಢವಾದಳವ್ವೆ. ಕಪಿಲಸಿದ್ಧಮಲ್ಲಿನಾಥನ ಕೂಡಿ ಕೂಡಿಲೀಯವಾದಳು./473 |
ಎಮ್ಮ ನಲ್ಲ ಮನೆಯೊಳಗೆ ಏಕಾಂತಂಬೊಕ್ಕಹನು, ಬೇಗ ಬೇಗ ಹೊರವಂಡಿರಣ್ಣಗಳಿರಾ. ನೀವಿದ್ದಡೆ ಮೃತ್ಯು ಬಪ್ಪುದು; ಆತ ಮನೆಯೊಳಗೊಬ್ಬರಿದ್ದಡೂ ಸೈರಿಸ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಲ್ಲನು./474 |
ಎಮ್ಮ ನಲ್ಲನ ಬೆನ್ನ್ಲ ಹೋಗಿ ಎಂಟು ನಾಡ ಗಡಿಯ ಕಂಡೆ. ಉರಿಗಳ ಪರಿಗಳು ಉದಕದೆರೆಗಳು ಅವು ಧಗಿ ಭುಗಿಲು ಭೋರೆನ್ನುತ್ತೈದಾವೆ, ಎಲೆ ಅವ್ವಾ. ಅಲ್ಲಿಂದತ್ತ ರೂಪಿಲ್ಲ, ಮೇಲೆ ತಾನು ತಾನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನು./475 |
ಎಮ್ಮ ನಲ್ಲನೊದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ’ ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು./476 |
ಎಮ್ಮ ನೋವೆ ನೋವು ನಿಮಗೆ, ಎಮ್ಮ ಸುಖವೆ ಸುಖವು ನಿಮಗೆ, ಮತ್ತೆ ನಿಮ್ಮುವ ತೋರೆಯಯ್ಯಾ. ನೀನು ಕರಕರಸೂಕ್ಷ್ಮನು. ಸೂಕ್ಷ್ಮದಲ್ಲಿ ತಿಮಿರ ಹೂಸಿ ಬೆರಸಿ ನೋಡು ನೋಡೆಂಬೆನಯ್ಯಾ. ನಾ ಕಾಣಿಸಕಾರೆನಯ್ಯಾ; ನೀ ಬೆರಸಿ ಬೆರಸಿ ಒಲ್ಲೆನೆ. ಎನ್ನ ಕಪಿಲಸಿದ್ಧಮಲ್ಲಿನಾಥಾ, ನೀ ಶೂನ್ಯನಯ್ಯಾ./477 |
ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ. ಎಮ್ಮ ವಚನದ ನೂರೆಂಟರಧ್ಯಯನಕ್ಕೆ ಶತರುದಿ[್ರಯಯಾಗ] ಸಮ ಬಾರದಯ್ಯಾ. ಎಮ್ಮ ವಚನದ ಸಾಸಿರ ಪಾರಾಯಣಕ್ಕೆ ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ./478 |
ಎರಡಳಿದು ಒಂದಳವಟ್ಟುದಕ್ಕೆ ಭಕ್ತಿಸ್ಥಲ; ಮೂರಳಿದು ಎರಡಳವಟ್ಟುದೆ ಜಂಗಮಸ್ಥಲ ನೋಡಯ್ಯಾ. ಗುರುವೆ, ಸುರತರುವೆ, ಎನ್ನ ಕಾಮಧೇನುವೆ, ಕೈಲಾಸದ ಮಹಾಲಿಂಗಮೂರ್ತಿಯೆ, ಈ ಲೋಕದ ಜ್ಙಾನಮೂರ್ತಿಯೆ, ಕಪಿಸಿದ್ಧಮಲ್ಲೇಶನೆ, ಚೆನ್ನಬಸವಣ್ಣನೆ./479 |
ಎರಡು ತೋಳೆರಡು ಭುಜ, ಆ[ವಾ]ತನ ಹಿಡಿವಾಗ ಒಂದೇ ನೋಡಾ. ಕಣ್ಣೆರಡಂಗ ಬೇರಿರೆ ಆ್ಲವ್ವಾತನ ಹಿಡಿವಾಗ ಒಂದೇ ನೋಡಾ. ಇಬ್ಬರಿಗೊಬ್ಬ ಗಂಡ ಕಪಿಲಸಿದ್ಧಮಲ್ಲಿನಾಥಯ್ಯಾ./480 |
ಎರಡು ಸಾದಾಖ್ಯದ್ಲ ಒದವಿದ ಬ್ರಹ್ಮವನು ಪದಚ್ಛೇದವ ಮಾಡ್ಕ್ತುದ್ದಳವ್ವೆ. ಮೂರಾರಲ್ಲಿ ಹುಟ್ಟಿ ಆರಾರನತಿಗಳೆದಳವ್ವೆ. ಮೀರಿದಾನಂದದ ನೆಲೆಮನೆಯಾಗಿದ್ದಳವ್ವೆ. ಕಪಿಲಸಿದ್ಧಮಲ್ಲಿನಾಥನ ಕೂಡಿ ಅವ್ವೆ./481 |
ಎರಡೆಂಟನತಿಗಳೆದು ಮುನ್ನೂರ ಮೂವತ್ತು ಕರದರ್ಪಣೆಯ ಭೇದವೊಂದು ಮಾಡಿ, ಜಗವ ಸುತ್ತಿದ ಸೀಮೆ ಹದುಳವಿಡಬಲ್ಲರೆ ಪರಬ್ರಹ್ಮ ಗುರು ತಾನು ಕಪಿಲಸಿದ್ಧಮಲ್ಲಿಕಾರ್ಜುನ./482 |
ಎರಡೆಂಟು ಗ್ರಾಮದ ಚೌಮಠವ ಮನ್ನಿಸಿ ಆನಂದದಿಂದವರು ನಿತ್ಯರಯ್ಯಾ. ಧ್ಯಾನಸಮಾಧಿ ತಾನು ರೂಪಾದೊಡೆ ಅವರ ನೀನು ನೀನೆಯೆಂಬೆ ಕಾಣಾ, ಕಪಿಲಸಿದ್ಧ ಮಲ್ಲಿಕಾರ್ಜುನಾ/483 |
ಎರಡೆಂಟು ಗ್ರಾಮದಲ್ಲಿ ಮಡಿದಿಪ್ಪ ಬ್ರಹ್ಮಾಂಡದತಿಶಯದ ಕುಳ ತಾನು ಸಮತೆ ರೂಪುಯೆನ್ನು ನೀ. ಸಮತೆಯನು, ಮುನ್ನಾದ ಸಮತೆಯನು ಮನ್ನಣೆಯ ಸಮತೆ ದ್ವಾದಶ ಗ್ರಾಮದ ಸೀಮೆ ಸಾಹಿತ್ಯದ ಸೋಮಪ್ರಭೆಯೊಂದರ ತಾಮಸಂವಾದಲ್ಲಿ ತನು ತನ್ನಯ ಗ್ರಾಮಸೀಮೆಯನರಿದು ನಿತ್ಯಸಾಯುಜ್ಯದಲಿ ಸಮತೆ ಸಾಯುಧನಾದೆನಯ್ಯ ಕಪಿಲಸಿದ್ಧಮಲ್ಲಿಕಾರ್ಜುನ/484 |
ಎಲವೆಲವೊ ನಲ್ಲ, ನಿನ್ನ ಕೂಡದ ಮುನ್ನ ಕಾಣೆ. ಕೂಡಿದ ಬಳಿಕ ಮತ್ತೆ ಕಾಣೆನಯ್ಯಾ. ನಿನ್ನ ಕೂಡಿದ ಸುಖದಿಂದ ಆನೇನೆಂದರಿಯೆನಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ/485 |
ಎಲೆ ಅಯ್ಯಾ ಅಯ್ಯಾ, ಎನ್ನ ಶಿರ ನಿಮ್ಮ ಚರಣವ ಮುಟ್ಟಿದ ಬಳಿಕ ಎನ್ನಲ್ಲಿ ಗುಣದೋಷವನರಸುವರೆ ? `ಭೃತ್ಯಾಪರಾಧಃ ಸ್ವಾಮಿನೋ ದಂಡಃ’ ! ಕಪಿಲಸಿದ್ಧಮಲ್ಲಿಕಾರ್ಜುನದೇವಾ, ತ್ರಾಹಿ ತ್ರಾಹಿ, ಕಾಯಯ್ಯಾ./486 |
ಎಲೆ ಅಯ್ಯಾ ಗಾರುಡವ ಬಲ್ಲನಯ್ಯಾ, ಮತ್ತೆ ಗಾರುಡಿಗನಲ್ಲ ನೋಡಯ್ಯಾ. ಎನ್ನ ಮನದ ಮೇಲಿಪ್ಪ ಶಂಕೆಯೆಂಬ ವಿಷವ ಗಾರುಡಿಸಿ ಮಾಣಿಸಿ ನಿಶ್ಶಂಕನ ಮಾಡಿದ ಕಪಿಲಸಿದ್ಧಮಲ್ಲಿನಾಥನಲ್ಲಿ ಮಡಿವಾಳ ಮಾಚಿತಂದೆಯ ಪಾದಕ್ಕೆ ನಮೋ ನಮೋ ಎನುತಿರ್ದೆನು./487 |
ಎಲೆ ಅಯ್ಯಾ, ಎನಗೆ ಜವ್ವನವೇರಿತ್ತಯ್ಯಾ, ಹರೆಯ ಹತ್ತಿತ್ತಯ್ಯಾ, ಪ್ರಾಯ ಸಮರೂಪಿಗೆ ಬಂದಿತ್ತಯ್ಯಾ. ಜವ್ವನಕ್ಕೆ ಜಯವಂತನಿಲ್ಲ, ಹರೆಯಕ್ಕೆ ಹರುಷಿತನಿಲ್ಲ. ಪ್ರಾಯಕ್ಕೆ ಪ್ರೌಢಿಗನಿಲ್ಲದೆ ಭ್ರಮೆಬಡುತ್ತಿದ್ದೇನಯ್ಯಾ. ಜವ್ವನಿಗ ಜಯವ ಮಾಡಿದಡೆ ಆನು ಬದುಕುವೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ./488 |
ಎಲೆ ಅಯ್ಯಾ, ಎಲೆ ನಲ್ಲ, ಎನ್ನ ಮಾಯೆ ಮಕ್ಕಳು ದಂಡ ಕೇಳಾ. ಆಹಾ! ಅಯ್ಯಾ ಎನ್ನ ಮನದ ಬೆನ್ನ ಬೆನ್ನ ಬಾರೊ. ಬಂದು ನಿಂದು ಕೂಡಿಸಯ್ಯಾ. ಅಯ್ಯಾ ಎನ್ನ ಮನ ಸಂಗಡ ಮನ ನಿಮ್ಮ ಕಂಡಡಿಮಾಡುವುದು, ಕಪಿಲಸಿದ್ಧಮಲ್ಲಿನಾಥಯ್ಯನ/489 |
ಎಲೆ ಅಯ್ಯಾ, ಎಲೆ ನಲ್ಲ, ನಿನ್ನ ಕೈಯ ಬಿಲ್ಲ ಗುಣವ ಕಂಡೆ ನಾನಯ್ಯ. ಗುರಿ ಎರಡ ಕೊಂದಂಬನೆಸುವ ಅದ ಒಂದೆಡೆಗೆ ಬರ ಹರಿಯ ಹುಟ್ಟ ಹರಿಯಲೆಸುವ ವಿರಿಂಚನ ಬಿಡ! ಅ್ಕನ್ನದಲೆಸುವ! ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು!/490 |
ಎಲೆ ಅಯ್ಯಾ, ನಿನ್ನ ಬೆಳಗಿನ ಪರಿಯ ಕೇಳು ಕಂಡಾ. ನಾನಾರೆಂಬುದ ತಿಳಿದು ನೋಡಿ ಕಂಡು ಕಂಡು ಬೆಳಗ ಕಾಬ ಪರಿ ಎಂತು ಹೇಳಾ. ಕಂಡುದ ಕಂಡು ಕಾಯದೊಳಗೆ ಸಂತವಿಡುವ ಪರಿ ಎಂತಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ, ನೀನೆನ್ನ ಮನವ ತಿಳಿವಡೆ ಅಸಾಧ್ಯವುಂಟೆ ದೇವರ ದೇವಾ?/491 |
ಎಲೆ ಅಯ್ಯಾ, ನಿಮ್ಮ ನಚ್ಚಿನ ಮಚ್ಚಿನ ಶರಣರ ಸಂಗದಲ್ಲಿರಿಸಿ, ಎನ್ನನಾಗು ಮಾಡಿರಿ. ಆಹಾ! ನಿಮ್ಮ ಕರುಣವನೇನೆಂದುಪಮಿಸುವೆನು! ಎರಡು ಪುರವ ಮೆಟ್ಟಿ ಮೇಲು ಪುರವ ನೋಡುತಿರ್ದೆನು. ಮೇಲು ಪುರವ ಭೇದಿಸಲೊಡನೆ ನೀನು ನಾನಾದೆನಯ್ಯಾ. ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಪ್ರಭುದೇವರ ಕರುಣಂದಲಾನು ಬದುಕಿದೆನು./492 |
ಎಲೆ ಅಯ್ಯಾ, ನಿಮ್ಮ ಬರವಿಂಗೆ ಕಣ್ಬೇಟಗೊಂಡೆನು. ಎಲೆ ಅಯ್ಯಾ, ನಿಮ್ಮ ಬರವಿಂಗೆ ಎನ್ನ ಮನವೆಂಬ ಮಂಚವ ಪಚ್ಚಡಿಸಿದೆ. ಎಲೆ ಅಯ್ಯಾ, ನಿಮ್ಮ ಬರವಿಂಗೆ ಚಿತ್ತ ಸುಯಿಧಾನಿಯಾಗಿದ್ದೇನೆ. ಎಲೆ ಅಯ್ಯಾ, ನಿಮ್ಮ ಬರವಿಂಗೆ ಜ್ಞಾನದ ಸೆರಗ ಹಾಸಿ ಆಸೆಬಡುತ್ತಿದ್ದೇನೆ. ಎಲೆ ಅಯ್ಯಾ, ನೀ ಬಂದು ವಿರತವಿಲ್ಲದೆ ಕೂಡಿ ನಿನ್ನವಳೆಂದೆನಿಸಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ./493 |
ಎಲೆ ಅಯ್ಯಾ, ನಿಮ್ಮವರ ನೋವೆ ಎನ್ನ ನೋವು ನೋಡಾ. ಕಂಡು ಕಂಡು ಸೈರಿಸಲಾರೆ ನೋಡಯ್ಯಾ. ನಿಮ್ಮವರೊಡನೊರಸೊರಗಾಗಿಪ್ಪವರ ಕಂಡಡೆ ನಾನವರಿಗೆ ಮುನಿವೆ ನೋಡಾ, ಕಪಿಲಸಿದ್ಧಮಲ್ಲಿನಾಥಾ, ನೀನವರರಲ್ಲಿಪ್ಪೆಯಾಗಿ./494 |
ಎಲೆ ಅಯ್ಯಾ, ಪುರದ ಮೇಲುಪ್ಪರಿಗೆಯ ಕೆಲಸವನೇನೆಂಬೆನಯ್ಯಾ! ಮುತ್ತಿನ ಕಳಸದ ಮೇಲೆ ಒಂದು ಅರಳಿದ ಪುಷ್ಪ. ಆ ಪುಷ್ಪದ ಪರಿವೀಧಿಯೊಳಗೆ ಅಗ್ನಿಯ ಕಂಡೆನಾಗಿ, ಕಪಿಲಸಿದ್ಧಮಲ್ಲಿನಾಥಾ ನಿಮ್ಮ ಶರಣ ಚೆನ್ನಬಸವಣ್ಣ ತೋರಿದ ಹಾ ಸುಪಥವಾಯಿತ್ತು. ನಾನು ಚೆನ್ನಬಸವಣ್ಣಂಗೆ ನಮೋನಮೋ ಎನುತಿರ್ದೆನು/495 |
ಎಲೆ ಅಯ್ಯಾ, ಅವರ ಗುಣಕ್ಕೆ ಮುನಿವೆನಲ್ಲದೆ ಅವರ ರೂಪಿಂಗೆ ಮುನಿವೆನೆ? ಇಲ್ಲಿಲ್ಲ. ಅವನು ಅನಾಚಾರದಲ್ಲಿ ಆಚರಿಸಿದಡೆ, ತಂದೆ ಸದಾಚಾರಕ್ಕೆ ತರಬೇಕೆಂದು [ಮುನಿವನಲ್ಲದೆ] ಆತನ ಮೇಲೆ ಮುನಿವನೆ ? ಇಲ್ಲಿಲ್ಲ. ನಾನು ಅಂತಾಗಬೇಕೆಂದು ಮುನಿವೆನಲ್ಲದೆ ಜಂಗಮಕ್ಕೆ ಮುನಿವೆನೆ? ಕಪಿಲಸಿದ್ಧಮಲ್ಲಿಕಾರ್ಜುನಾ./496 |
ಎಲೆ ಎಲೆ ಅಯ್ಯಾ, ನೀವು ಹೇಳಿರಯ್ಯಾ, ಎನಗೆ ಗತಿಯೇನು? ಮತಿಯೇನು? ನಿಮ್ಮಲ್ಲಿ ಸಮರಸವೆಂತು ಹೇಳಯ್ಯಾ. ಮೂರನೆಯ ಕರುಮಾಡದ ಮೇಲುವಾಗಿಲ ಮನೆಯೊಳಗಿಪ್ಪೆನೊ ನಾನು. ಚೌಕಮಧ್ಯದ ಎಂಟೆಸಳ ಮೊನೆಯ ಮೋಹರದ ನಡುವಣ ಕೋಣೆಯೊಳಗಿಪ್ಪೆನೊ ನಾನು. ಕಾಮನ ಕಟ್ಟುವ ಪಂಜರವ ಬಿಟ್ಟು ನಿಲುವೆನೊ, ಬಿಡದೆ ನಿಲುವೆನೊ? ಹೇಳು ಹೇಳಾ ನಿರ್ಣಯವ, ಎಲೆ ಕಪಿಲಸಿದ್ಧಮಲ್ಲಿನಾಥಯ್ಯಾ./497 |
ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಕಲ್ಯಾಣಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಮಾರ್ಗಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಚೆನ್ನಬಸವಣ್ಣನಾಗಲಲ್ಲ. ಲಿಂಗವೆ ಲಿಂಗವೆ, ಕಪಿಲಸಿದ್ಧಮಲ್ಲಿಕಾರ್ಜುನಾ./498 |
ಎಲೆ ದೇವಾ, ಒಂದು ಹೋಗಿ ಎರಡಾದುದು, ಎರಡು ಹೋಗಿ ಮೂರಾದುದು, ಮೂವತ್ತಾರಾಗಿ ಮೂರರಲ್ಲಿ ಆಡಿದುದು; ಆಡಿ ಆಡಿ ಅದೆ ಲಿಂಗವಾಯಿತ್ತು. ನಮ್ಮ ಗುರು ಚೆನ್ನಬಸವಣ್ಣನೊಂದು ಕೊಟ್ಟ್ಲ ಎಲ್ಲಾ ಒಂದೆ ಆಯಿತ್ತು, ಕಪಿಲಸಿದ್ಧಮಲ್ಲಿಕಾರ್ಜುನಾ./499 |
ಎಲೆ ದೇವಾ, ನೀನೊಬ್ಬನೆ ಹಲವು ರೂಪಾಗಿ ಬಂದೆಯಯ್ಯಾ ; ಭಕ್ತಿಯಲ್ಲಿ ಬಸವಣ್ಣನಾಗಿ ಬಂದಿರಿ ; ಮನದ ಮೈಲಿಗೆಯ ತೊಳೆಯುವಲ್ಲಿ ಮಡಿವಾಳನಾಗಿ ಬಂದಿರಿ; ಎನ್ನ ಭಕ್ತಿಗೆ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲನಾಗಿ ಬಂದಿರಿ./500 |