Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಡಿ. ಲಿಂಗಯ್ಯ

ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದ, ಬರಹ ಭಾಷಣಗಳಲ್ಲಿ ಅಪರೂಪದ ಒಳನೋಟಗಳನ್ನು ನೀಡಬಲ್ಲ ಜಾನಪದ ತಜ್ಞರು ಪ್ರೊ. ಡಿ. ಲಿಂಗಯ್ಯ ಅವರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ೧೯೩೯ ರಲ್ಲಿ ಜನಿಸಿದ ಪ್ರೊ. ಡಿ. ಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ಬೆಂಗಳೂರು ವಿಶ್ವೇಶ್ವರಪುರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಕನ್ನಡ ಪ್ರಾಧ್ಯಾಪಕ, ಕಾಲೇಜಿನ ಪ್ರಾಚಾರ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಹೀಗೆ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿ ೧೯೯೭ ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿಗಳು, ಎರಡು ವ್ಯಕ್ತಿಚಿತ್ರಗಳು, ಹನ್ನೊಂದು ಕವನಸಂಗ್ರಹಗಳು, ಮೂರು ಕಥಾಸಂಗ್ರಹಗಳು, ನಾಲ್ಕು ನಾಟಕಗಳು, ಮೂರು ಚರಿತ್ರೆ (ಸ್ವಾತಂತ್ರ್ಯ ಚಳುವಳಿ), ಮೂರು ವಿಮರ್ಶೆ, ಐದು ಜೀವನಚರಿತ್ರೆ, ೧೬ ಜಾನಪದ ಕೃತಿಗಳನ್ನು ರಚಿಸಿರುವುದಲ್ಲದೆ ೧೪ ಕೃತಿಗಳನ್ನು ಸಂಪಾದಿಸಿದ್ದಾರೆ. ಶ್ರೀಯುತರ ಲೇಖನಗಳು ಪತ್ರಿಕೆಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರೊ. ಡಿ. ಲಿಂಗಯ್ಯ ಅವರು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ — ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಯಲು ಸೀಮೆಯ ಜನಪದ ಗೀತೆಗಳು’ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ‘ಕರ್ನಾಟಕ ಜಾನಪದ ಕಾವ್ಯಗಳು’ ಕೃತಿಗೆ ರಾಜ್ಯ ಸರ್ಕಾರದ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ, ಡಾ. ಜೀ.ಶಂ.ಪ. ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಜಾನಪದ ವಿದ್ವಾಂಸರು ಪ್ರೊ. ಡಿ. ಲಿಂಗಯ್ಯ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡದ ಪ್ರಸಿದ್ದ ಕವಿ, ನಾಟಕಕಾರ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನಕಾರ, ಸಾಹಿತ್ಯ ಲೋಕದ ಗಣ್ಯ ಬರಹಗಾರ ಡಾ|| ಎಚ್.ಎಸ್. ವೆಂಕಟೇಶಮೂರ್ತಿ ಅವರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ಜನಿಸಿದ ಡಾ. ವೆಂಕಟೇಶಮೂರ್ತಿ ಅವರು ಬಾಲ್ಯದಿಂದಲೇ ಪ್ರತಿಭಾವಂತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಜೀವನ ನಡೆಸಿ ಇದೀಗ ನಿವೃತ್ತರಾಗಿದ್ದಾರೆ.
ಆಳವಾದ ಚಿಂತನೆ, ಸುಲಭಗ್ರಾಹ್ಯ ನಿರೂಪಣೆ, ಆಕರ್ಷಕ ಶೈಲಿ ಇವರ ಬರವಣಿಗೆಯ ವೈಶಿಷ್ಟ್ಯ. “ಪರಿವೃತ್ತ’, ‘ಬಾಗಿಲ ಬಡಿವ ಜನ’, ‘ಮೊಗ್ತಾ’, ‘ಕ್ರಿಯಾಪರ್ವ’, ‘ಒಣಮರದ ಗಿಳಿಗಳು, ‘ಸೌಗಂಧಿಕ’, ‘ಇಂದುಮುಖಿ’, ‘ಹರಿಗೋಲು’, ‘ಮರೆತ ಸಾಲುಗಳು’, ‘ಎಲೆಗಳು ನೂರಾರು’, ‘ಅಗ್ನಿ ಸಂಭ’, ‘ಎಷ್ಟೊಂದು ಮುಗಿಲು’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ.
ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಉರಿಯ ಉಯ್ಯಾಲೆ, ಹೂವಿ ಮತ್ತು ಸಂಧಾನ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕವಿತೆ, ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳನ್ನು ಬರೆದು ಜನಪ್ರಿಯ ಮಕ್ಕಳ ಸಾಹಿತಿ ಎಂದು ಮನ್ನಣೆ ಗಳಿಸಿದ್ದಾರೆ.
‘ನೂರು ಮರ ನೂರು ಸ್ವರ’, ‘ಕಥನ ಕವನ’, ‘ಮೇಘದೂತ’, ‘ಕವಿತೆಯ ಜೋಡಿ’, ‘ಆಕಾಶದ ಹಕ್ಕು ಮುಂತಾದ ಇವರ ವಿಮರ್ಶಾ ಬರವಣಿಗೆಗಳು ವಿದ್ವತ್ ಲೋಕದ ಮೆಚ್ಚುಗೆಗೆ ಪಾತ್ರವಾಗಿವೆ.
ಇವರು ಬರೆದ ಅನೇಕ ಕವಿತೆಗಳು, ನಾಟಕಗಳು ಹಿಂದಿ, ಇಂಗ್ಲಿಷ್, ತೆಲುಗು, ತಮಿಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ ಅನಿಕೇತನದ ಸಂಪಾದಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ನಾಟಕ ಹಾಗೂ ಬಂಗಾಳಿ ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಡಾ|| ವೆಂಕಟೇಶಮೂರ್ತಿ ಅವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ. ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ. ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಮೊದಲಾದ ಗೌರವಗಳು ಶ್ರೀಯುತರಿಗೆ ಸಂದಿವೆ.
ಸಾಹಿತ್ಯ ವಲಯದ ಬಹುತೇಕ ಎಲ್ಲ ಹಿರಿ ಕಿರಿಯರೊಡನೆ ಸ್ನೇಹಪೂರ್ಣ ಸಂಬಂಧವಿರಿಸಿಕೊಂಡು, ಎಳೆಯ ಪ್ರತಿಭೆಗಳನ್ನು ಉತ್ತೇಜಿಸುತ್ತ ಸದಾ ಹಸನ್ಮುಖಿಯಾಗಿರುವ ಕನ್ನಡದ ಗಣ್ಯ ಸಾಹಿತಿ ಡಾ|| ಎಚ್‌. ಎಸ್. ವೆಂಕಟೇಶಮೂರ್ತಿ ಅವರು.