Categories
ಯೋಗ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ.ಎಸ್. ಗುರುಸಿದ್ದಯ್ಯ

ಯೋಗಾಭ್ಯಾಸದಲ್ಲಿ ಅತ್ಯುನ್ನತ ಸಾಧನೆಗೈದ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ನಾಡಿನ ಅಪ್ರತಿಮ ಪ್ರತಿಭೆಯ ಯೋಗಪಟು ಶ್ರೀ ಪಿ.ಎಸ್. ಗುರುಸಿದ್ದಯ್ಯ
ಅವರು.
ತುಮಕೂರಿನವರಾದ ಶ್ರೀ ಗುರುಸಿದ್ದಯ್ಯ ಅವರು ಬಿ.ಎ. ಪದವೀಧರರು. `ಅಲ್ಪನೇಟಿವ್ ಥೆರಪಿ’ಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಬಾಲ್ಯದ ದಿನಗಳಿಂದಲೇ ಯೋಗಾಭ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀಯುತರು ಪ್ರಸಿದ್ಧ ಯೋಗಾಚಾರ್ಯರಿಂದ ಸ್ಫೂರ್ತಿ ಪಡೆದು ನಿರಂತರ ಅಭ್ಯಾಸ ನಡೆಸತೊಡಗಿದರು. ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಜೃಂಭಿಸತೊಡಗಿದರು.
ಇಂಗ್ಲೆಂಡ್ ಮತ್ತು ಹಾಲೆಂಡ್ ದೇಶಗಳ ಯೋಗ ಶಿಕ್ಷಕರ ಸಂಸ್ಥೆಗಳ ಆಹ್ವಾನದ ಮೇರೆಗೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್ ಹಾಗೂ ಅಮೆರಿಕಾ ದೇಶಗಳಲ್ಲಿ ಸುಮಾರು ಇಪ್ಪತ್ತೊಂದು ಯೋಗಾಸನ ಪ್ರದರ್ಶನಗಳಲ್ಲಿ ಪಾಲ್ಗೊಂಡು ಪ್ರಶಂಸೆ ಗಳಿಸಿದ್ದಾರೆ. ಆಸ್ಟ್ರೇಲಿಯಾ ದೇಶದಲ್ಲಿ ನಡೆದ ಯೋಗ ಶಿಕ್ಷಕರ ಅಂಚೆ ತೆರಪಿನ ತರಬೇತಿಯಲ್ಲಿ ಐನೂರು ವಿದ್ಯಾರ್ಥಿಗಳ ಪೈಕಿ ಪ್ರಥಮ ಬ್ಯಾಂಕ್ ಪಡೆದ ಕೀರ್ತಿವಂತರು. ಕೇಂದ್ರೀಯ ಕಾರಾಗೃಹಗಳ ಕೈದಿಗಳಿಗೆ, ಅಂಧಶಾಲೆಯ ಮಕ್ಕಳಿಗೆ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ನೀಡುವ ಮೂಲಕ ಸಮಾಜ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂರು ಬಾರಿ ಚಿನ್ನದ ಪದಕಗಳು, ಎರಡು ಬಾರಿ ಬೆಳ್ಳಿ ಪದಕಗಳು ಹಾಗೂ ಎರಡು ಬಾರಿ ಕಂಚಿನ ಪದಕಗಳನ್ನು ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ನಲವತ್ತೆರಡು ಬಾರಿ ಚಿನ್ನದ ಪದಕಗಳನ್ನು, ಮೂರು ಬಾರಿ ಬೆಳ್ಳಿ ಪದಕಗಳನ್ನು, ನಾಲ್ಕು ಬಾರಿ ಕಂಚಿನ ಪದಕಗಳನ್ನು ಗಳಿಸಿದ ಹಿರಿಮೆ ಇವರದು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿಗಳಿಂದ ದಸರಾ ಕ್ರೀಡಾ ಪ್ರಶಸ್ತಿಯನ್ನು ಹಾಗೂ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರಿಂದ ‘ಯೋಗರತ್ನ’ ಪ್ರಶಸ್ತಿ ಪಡೆದಿದ್ದಾರೆ.
ಯೋಗ, ಪ್ರಕೃತಿ ಚಿಕಿತ್ಸೆ ಮೂಲಕ ಸಾಮಾಜ ಸೇವೆಯನ್ನು ಮಾಡುತ್ತ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುತ್ತ ನಾಡಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿರುವ ಹೆಮ್ಮೆಯ ಯೋಗಾಚಾರ್ಯ ಶ್ರೀ ಪಿ. ಎಸ್. ಗುರುಸಿದ್ದಯ್ಯ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ|| ಎಂ.ಆರ್. ಹೊಳ್ಳ

ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಆಡಳಿತ ರಂಗದಲ್ಲಿ ದಕ್ಷ ಮುಂದಾಳೆನಿಸಿರುವ, ಶಿಸ್ತು, ಅಚ್ಚುಕಟ್ಟಿಗೆ ಹೆಸರುವಾಸಿಯಾಗಿರುವ ಹಿರಿಯ ಪ್ರಾಧ್ಯಾಪಕ, ಪ್ರಿನ್ಸಿಪಾಲರು ಪ್ರೊ|| ಎಂ. ಆರ್. ಹೊಳ್ಳ ಅವರು.
ಉಡುಪಿ ಜಿಲ್ಲೆಯ ಮಣೂರ ಎಂಬ ಕುಗ್ರಾಮದಲ್ಲಿ ೧೯೩೬ರಲ್ಲಿ ಜನಿಸಿರುವ ಶ್ರೀ ಹೊಳ್ಳ ಅವರು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರ್. ವಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಅವರು ಕಾಲೇಜಿಗೆ ಮಾತ್ರವಲ್ಲದೇ ಇಂಜಿನಿಯರಿಂಗ್‌ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಧಾರೆ ಎರೆದಿದ್ದಾರೆ. ಪ್ರಸಕ್ತ, ಆರ್.ಎನ್.ಎಸ್. ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎನ್.ಸಿ.ಸಿ.ಯಲ್ಲಿ ಅತ್ಯಂತ ಕ್ರಿಯಾಶೀಲ ಅಧಿಕಾರಿಯಾಗಿ ಕಾರ ನಿರ್ವಹಿಸಿದ ಶ್ರೀಯುತರು ೧೯೭೪ರಲ್ಲಿ ಎನ್.ಸಿ.ಸಿ.ಯ ಕರ್ನಾಟಕ ಗೋವಾ ಪಡೆಯ ಮುಖಂಡತ್ವವನ್ನು ವಹಿಸಿ ಭಾರತದ ಗಣರಾಜ್ಯೋತ್ಸವದ ಪೆರೇಡಿನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ವೃತ್ತಿ ಜೀವನದಲ್ಲಿ ಹಾಗೂ ಕಾಠ್ಯಕ್ರಮಗಳಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಪರಿಪಾಲಿಸುವ ಶ್ರೀ ಹೊಳ್ಳ ಅವರು ಎಂತಹ ಸಂದರ್ಭದಲ್ಲೂ ಉದ್ವೇಗ, ಕೋಪ, ನಿರಾಸೆಯನ್ನು ಪ್ರದರ್ಶಿಸದೇ ಸ್ವಯಂ ನಿಯಂತ್ರಣವನ್ನು ಸಾಧಿಸಿಕೊಂಡಿದ್ದಾರೆ. ಸಹೋದ್ಯೋಗಿಗಳೊಡನೆ, ವಿದ್ಯಾರ್ಥಿಗಳೊಡನೆ ಸ್ನೇಹಮಯವಾಗಿ ವರ್ತಿಸುವ ಶ್ರೀಯುತರು ಯಾವುದೇ ಸನ್ನಿವೇಶದಲ್ಲೂ ಮೌಲ್ಯಗಳನ್ನು ಬಲಿಗೊಡದ ನಿಷ್ಟುರ ಸ್ವಭಾವದವರು. ದಕ್ಷ ನಾಯಕತ್ವ, ಶಿಸ್ತಿನ ಕಾರನಿರ್ವಹಣೆಯಿಂದಾಗಿ ಕಾಲೇಜನ್ನು ರಾಷ್ಟ್ರೀಯ ಮಟ್ಟದ ಖ್ಯಾತಿಗೆ ಏರಿಸಿದ್ದಾರೆ. ಬಿಡುವಿಲ್ಲದ ದಣಿವರಿಯದ ಚಟುವಟಿಕೆಗಳ ನಡುವೆಯೂ ಅನೇಕ ವಿಚಾರಸಂಕಿರಣ, ಸಮ್ಮೇಳನ ಹಾಗೂ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವುದಲ್ಲದೆ ದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಶ್ವವಿದ್ಯಾನಿಲಯಗಳ ಆಡಳಿತ ಮಂಡಳಿಯಲ್ಲಿ ಶ್ರೀಯುತರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪೋಲೆಂಡಿನಲ್ಲಿ ಯುನೆಸ್ಕೋ ಪ್ರಾಯೋಜಿಸಿದ ಇಂಜಿನಿಯರಿಂಗ್ ಶಿಕ್ಷಣದ ಬಗ್ಗೆ ನಡೆದ ಗ್ಲೋಬಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ರೋಟರಿ ಕ್ಲಬ್ ಪುರಸ್ಕಾರವು ಇವರಿಗೆ
ದೊರೆತಿದೆ.
ತಾಂತ್ರಿಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ, ಉದ್ಯಮ ಹಾಗೂ ಇಂಜನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪರಸ್ಪರ ಸಹಕಾರ ರೂಪಿಸಲು ಶ್ರಮಿಸುತ್ತಿರುವ ಅರ್ಪಣಾ ಮನೋಭಾವದ ಶಿಕ್ಷಣ ತಜ್ಞ ಪ್ರೊ|| ಎಂ. ಆರ್. ಹೊಳ್ಳ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ।। ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಸಾಮಾಜಿಕ ಧುರೀಣರು ಹಾಗೂ ಶಿಕ್ಷಣ ತಜ್ಞರು ಡಾ|| ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು.
* ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಾಲಕೆರೆಯಲ್ಲಿ ೧೯೩೩ರಲ್ಲಿ ಜನಿಸಿದ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹುಬ್ಬಳ್ಳಿಯಲ್ಲಿ ವೈದ್ಯವಿಶಾರದ ಪದವಿ ಪಡೆದು ಆಯುರ್ವೇದ ವೈದ್ಯಪದ್ಧತಿಯನ್ನು ವೃತ್ತಿಯನ್ನಾಗಿಸಿಕೊಂಡರು.
ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅನ್ನದಾನೇಶ್ವರ ಕಿವುಡ, ಮೂಗರ ಶಾಲೆಯ ಅಧ್ಯಕ್ಷರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ ಕ್ಷೇತ್ರದೊಂದಿಗೆ, ಸಹಕಾರ, ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಅಪಾರ ಸೇವೆ ಸಲ್ಲಿಸಿರುವ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಸಿದ್ಧನಕೊಳ್ಳದ ಅಜ್ಜರೆಂದು ಹೆಸರುವಾಸಿಯಾದ ತಪಸ್ವಿ ಮನೆತನದವರು. ದೀನದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುತ್ತಿರುವ ಶ್ರೀಯುತರು ಬಡಕುಟುಂಬಗಳಿಗೆ ಉಚಿತ ಚಿಕಿತ್ಸೆ, ಮಕ್ಕಳ ರೋಗನಿವಾರಣೆಗೆ ಆದ್ಯತೆ, ಉಚಿತ ನೇತ್ರ ಚಿಕಿತ್ಸಾ ಶಿಬಿರ, ರೈತರ ಸಮಾವೇಶ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಹಾಲಕೆರೆ ಗ್ರಾಮ ಪಂಚಾಯಿತಿ ನಿರ್ದೇಶಕರಾಗಿ, ಹೊಳೆ ಆಲೂರು ಎ.ಪಿ.ಎಂ.ಸಿ. ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೀಗೆ ಸಹಕಾರಿ ರಂಗದಲ್ಲಿ ಮೂವತ್ತೆರಡು ವರ್ಷಗಳು ಅಧ್ಯಕ್ಷರಾಗಿ ಜನಪ್ರೀತಿ, ಗೌರವಕ್ಕೆ ಪಾತ್ರರಾದ ಡಾ. ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹಾಲಕೆರೆ ಸಹಕಾರಿ ಸಂಘವನ್ನು ದಕ್ಷ ಆಡಳಿತ ಸೇವಾ ಸೌಲಭ್ಯದ ಮೂಲಕ ಬೃಹತ್ ಸಂಸ್ಥೆಯಾಗಿ ಬೆಳಸಿದ ಕೀರ್ತಿಗೆ ಭಾಜನರು.
ವೃತ್ತಿಯ ಅನುಭವವನ್ನು ತಮಗೆ ಪ್ರಿಯವಾದ ಶೈಕ್ಷಣಿಕ ಕ್ಷೇತ್ರದಲ್ಲಿ ಬಳಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವವರು ಡಾ|| ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವಿ.ಆರ್. ಗೌರಿಶಂಕ‌

ಶೃಂಗೇರಿ ಸಂಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಕೊಂಡೊಯ್ದ ಅಪರೂಪದ ಸಾಧಕ ಶ್ರೀ ಗೌರಿಶಂಕರ ಅವರು.
೧೯೫೪ರಲ್ಲಿ ಜನಿಸಿದ ಶ್ರೀ ವಿ. ಆರ್. ಗೌರಿಶಂಕರ ಮೂಲತಃ ಇಂಜಿನಿಯರಿಂಗ್ ಪದವೀಧರರು. ತಮ್ಮ ಜ್ಞಾನ ಹಾಗೂ ಸಾಮರ್ಥ್ಯವನ್ನೆಲ್ಲ ಧಾರೆಯೆರೆದು ಶೃಂಗೇರಿ ಮಠದ ಕಟ್ಟಡ ನಿರ್ಮಾಣಮಾಡಿ ಶೃಂಗೇರಿ ಮಠದ ಭವ್ಯತೆಗೆ ಕಾರಣಪುರುಷರಾದರು. ಒಮ್ಮೆಲೆ ೩,೦೦೦ ಜನರು ಕುಳಿತು ಊಟ ಮಾಡುವ ಭೋಜನಗೃಹ, ವೈಶಿಷ್ಟ್ಯಪೂರ್ಣ ವೇದ ಪಾಠಶಾಲೆ, ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನಾ ಕೇಂದ್ರ, ಆಕರ್ಷಕ ಗುರುಭವನ, ವಿದ್ಯಾತೀರ್ಥ ಸೇತುವೆಗಳಂಥ ವೈಶಿಷ್ಟ್ಯತೆಗಳನ್ನುಳ್ಳ ಶೃಂಗೇರಿ ಸಂಸ್ಥಾನ ನಿರ್ಮಾಣವಾದದ್ದು ಶ್ರೀ ಗೌರಿಶಂಕರರ ಸಾರ್ಥಕ ಸಾಧನೆಯ ಹೆಗ್ಗುರುತು.
ಶೃಂಗೇರಿ ಸಂಸ್ಥಾನವನ್ನು ಕೇವಲ ಧಾರ್ಮಿಕ ಕಟ್ಟುಪಾಡುಗಳಿಗೆ ಸೀಮಿತಗೊಳಿಸದೆ ಅದಕ್ಕೆ ಸಮಾಜ ಸೇವೆಯ ವಿಶಾಲ ರೂಪ ನೀಡಿದ ಹಿರಿಮೆ ಶ್ರೀಯುತರದು. ವಿದ್ಯಾರ್ಥಿಗಳಿಗೆ ಅನ್ನದಾಸೋಹ, ದತ್ತಿಗ್ರಾಮ ಯೋಜನೆ, ಸ್ವಸ್ಥ ಆರೋಗ್ಯ ಯೋಜನೆ, ವಿಕಲಾಂಗರಿಗೆ ನೆರವು ಯೋಜನೆ, ಮಾನಸಿಕ ಅಸ್ವಸ್ಥ ಮಕ್ಕಳ ಸಂರಕ್ಷಣಾ ಯೋಜನೆಗಳ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿಯೂ ಅತ್ಯುತ್ತಮ ಸಂಘಟಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ಬಂದಿರುವ ಸನ್ಮಾನ, ಪ್ರಶಸ್ತಿ, ಬಿರುದುಗಳು ಅಪಾರ. ಅಮೆರಿಕದ ವಿಶ್ವಶಾಂತಿ ಧಾರ್ಮಿಕ ಸಮ್ಮೇಳನ ೨೦೦೦ದಲ್ಲಿ ಭಾಗವಹಿಸಿ ಭಾಷಣ ಮಾಡಿದ ಹಿರಿಮೆ ಶ್ರೀಯುತರದು.
ಸಮಾಜ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿರುವ ಮಾನವೀಯ ದೃಷ್ಟಿಯ ಮಹಾನ್ ವ್ಯಕ್ತಿ ಶ್ರೀ ವಿ.ಆರ್. ಗೌರಿಶಂಕರ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ವಸುಂಧರಾ ಫಿಲಿಯೋಜಾ

ದೇಶ, ವಿದೇಶಗಳಲ್ಲಿ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುತ್ತಿರುವ ಹೆಸರಾಂತ ಇತಿಹಾಸ ತಜ್ಞ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.
ಹಾವೇರಿಯಲ್ಲಿ ಜನಿಸಿ, ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಶ್ರೀಮತಿ ವಸುಂಧರಾ ಅವರು ಇತಿಹಾಸ ಎಂ.ಎ., ಶಾಸನಶಾಸ್ತ್ರ ಡಿಪ್ಲೊಮಾ ಪದವೀಧರರು. ಫ್ರಾನ್ಸ್ ದೇಶದ ವಿದ್ವಾಂಸ ಶ್ರೀ ಪೈರೆ ಸೈಲ್ವೇನ್ ಫಿಲಿಯೋಜಾ ಅವರನ್ನು ವಿವಾಹವಾಗಿ ಅವರೊಡನೆ ಇತಿಹಾಸ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಕೊಂಡರು. ಫ್ರಾನ್ಸ್‌ನ ನ್ಯಾನ್ಸಿ ವಿಶ್ವವಿದ್ಯಾಲಯದಿಂದ ಯುರೋಪಿಯನ್ ಥಿಯೇಟರ್‌ ಬಗೆಗೆ ಡಿಪ್ಲೊಮಾ ಪದವಿ ಗಳಿಸಿದರು.
ಯುನೆಸ್ಕೋದಿಂದ ಆರ್ಥಿಕ ನೆರವು ಪಡೆದು ವಿಜಯನಗರ ಇತಿಹಾಸದ ಬಗೆಗೆ ಸಂಶೋಧನೆಯಲ್ಲಿ ನಿರತರಾಗಿರುವ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು ಹತ್ತರಿಂದ ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾದ ಉತ್ತರ ಕರ್ನಾಟಕದ ಅನೇಕ ದೇವಸ್ಥಾನಗಳ ವ್ಯಾಸಂಗ ನಡೆಸಿ ಅಪಾರ ಮಾಹಿತಿ ಸಂಗ್ರಹಿಸಿದ್ದಾರೆ.
೧೯೮೫ನೆಯ ಇಸವಿಯಲ್ಲಿ, ಫ್ರಾನ್ಸ್‌ನಲ್ಲಿ ನಡೆದ ಭಾರತ ಮಹೋತ್ಸವ ಪ್ರದರ್ಶನದಲ್ಲಿ ಶ್ರೀಮತಿ ವಸುಂಧರ ಅವರು ಪ್ರದರ್ಶಿಸಿದ ರುಯಿನ್ಸ್ ಆಫ್ ವಿಜಯನಗರಕ್ಕೆ ಕೇಂದ್ರ ಸರ್ಕಾರದ ಅನುದಾನ ದೊರೆತಿದೆ. ಇದಲ್ಲದೆ ರಾಷ್ಟ್ರದ ಹಲವಾರು ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದೊಡನೆ ಡೇಟಾಬೇಸ್ ಆನ್ ಟೆಂಪಲ್ಸ್ ಆಫ್ ಕರ್ನಾಟಕ ಎಂಬ ಗ್ರಂಥ ರಚನೆ ಹಾಗೂ ಸಿ.ಡಿ. ತಯಾರಿಕೆಗಾಗಿ ಹತ್ತು ವರ್ಷಗಳ ಕಾರ್ಯಯೋಜನೆಯಲ್ಲಿ ಪ್ರಸಕ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನ್ನಡ, ಇಂಗ್ಲಿಷ್, ಫ್ರೆಂಚ್ ಮೂರು ಭಾಷೆಗಳಲ್ಲಿ ಕರ್ನಾಟಕದ ಇತಿಹಾಸದ ಬಗೆಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಸಿ.ಡಿ.ಗಳನ್ನು ಹೊರತಂದಿದ್ದಾರೆ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿರುವ ಶ್ರೀಮತಿ ವಸುಂಧರಾ ಅವರು ಕಾದಂಬರಿ, ಸಣ್ಣಕಥೆ, ನಾಟಕ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ವತ್ ಪ್ರಬಂಧಗಳನ್ನು ಮಂಡಿಸಿರುವ ಶ್ರೀಮತಿ ವಸುಂಧರಾ ಫ್ರೆಂಚ್‌ಭಾಷೆಯಲ್ಲಿಯೂ ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕದ ಐತಿಹಾಸಿಕ ದೇವಾಲಯಗಳನ್ನು ಕುರಿತು ವಿಶೇಷವಾಗಿ ಹಂಪಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವನ್ಮಣಿ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ಕೆ. ಮರುಳಸಿದ್ದಪ್ಪ

ಕನ್ನಡ ರಂಗಭೂಮಿ, ಸಾಹಿತ್ಯ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ವಾಂಸ ಡಾ|| ಕೆ. ಮರುಳಸಿದ್ದಪ್ಪ ಅವರು.
ಚಿಕ್ಕಮಗಳೂರು ಜಿಲ್ಲೆಯ ಶಿವನೆ ಹೋಬಳಿಯ ಕಾರೆಹಳ್ಳಿಯಲ್ಲಿ ಜನನ, ಮೈಸೂರಿನಲ್ಲಿ ವಿದ್ಯಾಭ್ಯಾಸ, ಕನ್ನಡ ಎಂ.ಎ.ಯಲ್ಲಿ ಪ್ರಥಮ ಬ್ಯಾಂಕ್, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿ ಗಳಿಕೆ. ೧೯೬೫ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದ ಶ್ರೀಯುತರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ರೀಡರ್, ಪ್ರೊಫೆಸರ್, ನಿರ್ದೆಶಕರ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕನ್ನಡ ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀಯುತರು ‘ಆಧುನಿಕ ಕನ್ನಡ ನಾಟಕ’ ಎಂಬ ವಿದ್ವತ್‌ಪೂರ್ಣ ಕೃತಿಯನ್ನು ರಚಿಸಿದ್ದಾರೆ. ರಂಗ ತಂಡಗಳಾದ ಪ್ರತಿಮಾ ನಾಟಕ ರಂಗ, ಸಮುದಾಯ, ನಾಟ್ಯ ಸಂಘ ಥಿಯೇಟರ್ ಸೆಂಟರ್‌ನೊಡನೆ ನಿಕಟ ಸಂಪರ್ಕ ಹೊಂದಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಅರ್ಥಪೂರ್ಣ ಸೇವೆ ಸಲ್ಲಿಸಿದ್ದಾರೆ.
ಕನ್ನಡ ನಾಟಕ ಸಮೀಕ್ಷೆ, ಷಟ್ನದಿ ಸಾಹಿತ್ಯ, ಒಡನಾಟ, ನೋಟ ನಿಲುವು, ಎಲೆಕ್ಟ್ರ, ಮೀಡಿಯ, ರಕ್ತಕಣಗಿಲೆ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀಯುತರು ಸಂಪಾದಿಸಿದ ಕನ್ನಡ ನಾಟಕ ವಿಮರ್ಶೆ, ಲಾವಣಿಗಳು, ವಚನ ಕಮ್ಮಟ, ಶತಮಾನದ ನಾಟಕ ಕೃತಿಗಳು ವಿದ್ವಜ್ಜನರ ಗೌರವಕ್ಕೆ ಪಾತ್ರವಾಗಿವೆ. ಸಾಹಿತ್ಯ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿರುವ ಶ್ರೀಯುತರ ಐವತ್ತಕ್ಕೂ ಹೆಚ್ಚು ಬಿಡಿ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಷಿಪ್ ಹಾಗೂ ಭೂಪಾಲ್‌ನಲ್ಲಿ ನಡೆದ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯ, ಶಿಕ್ಷಣ, ಜಾನಪದ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಪ್ರತಿಭಾವಂತ ಸಾಧಕ ಡಾ|| ಕೆ. ಮರುಳಸಿದ್ದಪ್ಪ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಸ್.ಎಂ. ಸೈಯದ್ ಖಲೀಲ್

ಹೊರನಾಡ ಕನ್ನಡಿಗರೆನ್ನಿಸಿಕೊಂಡು, ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀ ಎಸ್. ಎಂ. ಸೈಯದ್ ಖಲೀಲ್
ಅವರು.
ಭಟ್ಕಳದಲ್ಲಿ ಜನಿಸಿದ ಶ್ರೀಯುತರು ತಮಿಳುನಾಡಿನ ಚೆನ್ನೈ ಲಾಯಲಾ ಕಾಲೇಜಿನಲ್ಲಿ ಚಾರ್ಟಡ್್ರ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೬೫ರಲ್ಲಿ ಚಾರ್ಟಡ್್ರ ಅಕೌಂಟೆಂಟ್ ಅರ್ಹತೆ ಪಡೆದು ಭಾರತದ ಪ್ರತಿಷ್ಠಿತ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟಡ್್ರ ಅಕೌಂಟೆಂಟ್ಸ್‌ನ ಫೆಲೋ ಸದಸ್ಯರಾದರು.
ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆರ್ಥಿಕ ನಿರ್ವಾಹಕರಾಗಿ ವೃತ್ತಿಯನ್ನಾರಂಭಿಸಿ ನಿರ್ದೇಶಕರ ತನಕ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಪ್ರಸ್ತುತ ಐ ಮತ್ತು ಎಂ ಗಲಾದ್ರಿ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಅಲ್ಲದೆ ಮಾಧ್ಯಮ ಕಮ್ಯೂನಿಕೇಷನ್ಸ್ ನಿಯಮಿತದ ಅಧ್ಯಕ್ಷರಾಗಿ ಮಲಬಾ‌ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಪ್ರವರ್ತಕರಾಗಿ ಇಂಡಿಯಾ ಪಬ್ಲಿಕೇಷನ್ನಿನ ನಿರ್ದೇಶಕರಾಗಿ ಉರ್ದು ವಾರ್ತಾ ಛಾನಲ್ ಫಲಾಕ್ ಟಿ.ವಿ.ಯ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ. ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೈಯದ್‌ ಖಲೀಲ್ ಅವರು ಕರ್ನಾಟಕದ ಸುಪ್ರಸಿದ್ಧ ಕಲಾವಿದರು, ಸಾಹಿತಿಗಳು, ರಾಜಕಾರಣಿಗಳನ್ನು ದುಬೈಗೆ ಕರೆಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣ ಏರ್ಪಡಿಸಿ ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಲು ಪ್ರಚೋದನೆ ನೀಡಿದ್ದಾರೆ.
ಭಟ್ಕಳದಲ್ಲಿ ಅಂಜುಮುನ್ ಶೈಕ್ಷಣಿಕ ಸಂಘದ ಗೌರವ ಪೋಷಕರಾಗಿರುವ ಶ್ರೀಯುತರು ಅನೇಕ ಸಮಾಜ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಉದ್ಯೋಗಾರ್ಥಿಗಳಿಗೆ ನೆರವು, ಕುಡಿಯುವ ನೀರಿನ ಪೂರೈಕೆ, ವೈದ್ಯಕೀಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ಇತ್ಯಾದಿಗಳನ್ನು ಏರ್ಪಡಿಸುತ್ತಿದ್ದಾರೆ. ದಂಗೆ, ಭೂಕಂಪ, ಪ್ರವಾಹಗಳಲ್ಲಿ ಸಂತ್ರಸ್ತರಿಗೆ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿಕೊಡುವಲ್ಲಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ನಿಸ್ವಾರ್ಥವಾಗಿ ದುಡಿಯುವಲ್ಲಿ ತನ್ಮಯರಾಗಿರುವವರು ಎಸ್. ಎಂ. ಸೈಯದ್‌ ಖಲೀಲ್.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಕೆ. ಗುರುರಾವ್

ರಂಗಭೂಮಿ ಕ್ಷೇತ್ರದಲ್ಲಿ ಐದು ದಶಕಗಳಿಂದಲೂ ನಿಗ್ರಹ ಸೇವೆ ಸಲ್ಲಿಸುತ್ತಿರುವ ಹಿರಿಯ ಚೇತನ ಶ್ರೀ ಕೆ. ಗುರುರಾವ್ ಅವರು.
ತುಮಕೂರು ಜಿಲ್ಲೆಯ ಇರಕಸಂದ್ರದಲ್ಲಿ ಜನಿಸಿದ ಶ್ರೀ ಕೆ. ಗುರುರಾವ್ ಎಳವೆಯಲ್ಲೇ ನಾಟಕದ ಗೀಳು ಅಂಟಿಸಿಕೊಂಡವರು. ಪ್ರಖ್ಯಾತ ರಂಗಭೂಮಿ ಕಲಾವಿದರಾದ ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಯಲ್ಲಿ ತಮ್ಮ ಅಪ್ರತಿಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡ ಶ್ರೀ ಗುರುರಾವ್ ಹಲವಾರು ವರ್ಷ ಸುಪ್ರಸಿದ್ದ ಪ್ರಭಾತ್‌ ಕಲಾವಿದರ ಸಂಸ್ಥೆಯಲ್ಲಿ ಅಭಿನಯಿಸಿ, ಜನ ಮೆಚ್ಚುಗೆ ಪಡೆದಿದ್ದಾರೆ. ಬೆಂಗಳೂರಿನ ವೈ.ಎಂ.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ರಾಜ್ಯದಲ್ಲೇ ಪ್ರಪ್ರಥಮವಾದ ಧ್ವನಿಬೆಳಕಿನ ಶ್ರೀಕೃಷ್ಣದೇವರಾಯ ಕಾರ್ಯಕ್ರಮದಲ್ಲಿ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಇವರ ಅಭಿನಯ ಮನೋಜ್ಞವಾದುದು. ಬೆಂಗಳೂರಿನಲ್ಲಿ ೨೨ ವರ್ಷಗಳು ಹಾಗೂ ಮೈಸೂರಿನಲ್ಲಿ ೨೦ ವರ್ಷಗಳು ರಂಗಭೂಮಿ ಕಲಾವಿದರಾಗಿ, ಚಲನಚಿತ್ರಗಳಲ್ಲಿ ಪೋಷಕ ನಟರಾಗಿ, ಗಮಕಿಯಾಗಿ, ಹುಟ್ಟು ಹೋರಾಟಗಾರರಾಗಿ, ಸಮಾಜಸೇವಕರಾಗಿ ಸಾರ್ಥಕ ಬದುಕನ್ನು ಕಂಡವರು.
ಅನೇಕ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದಲ್ಲದೆ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ‘ಭಕ್ತ ಅಂಬರೀಷ’, ‘ಕೃಷ್ಣಲೀಲೆ’, ‘ಚಂದ್ರಚಕೋರಿ’, ‘ಕುರುಕ್ಷೇತ್ರ’, ‘ಧರ್ಮಭೂಮಿ’ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ಜನಪ್ರಿಯತೆ ಗಳಿಸಿದೆ. ಇಂಗ್ಲಿಷ್, ಕನ್ನಡ ಹಾಗೂ ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿರುವ ಹಿರಿಮೆ ಶ್ರೀಯುತರದು. ಕಲಾ ಸೇವೆಯ ಜೊತೆಗೆ ಸಮಾಜ ಸೇವೆ ಇವರ ಇನ್ನೊಂದು ಸೇವಾಕ್ಷೇತ್ರ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರೀಯುತರ ಹೋರಾಟ ಗಮನಾರ್ಹ.
ಅಭಿನಯ ಚಾತುರ್ಯ, ಕಲಾನೈಪುಣ್ಯತೆ, ಹೋರಾಟದ ಹುಟ್ಟುಗುಣ, ಸ್ನೇಹಪರತೆ ಹಾಗೂ ಮಾನವೀಯತೆಗಳು ಸಂಗಮಿಸಿದ ಅಪರೂಪದ ವ್ಯಕ್ತಿ ಶ್ರೀ ಕೆ. ಗುರುರಾವ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವೈ.ಎಂ.ಸಿ.ಎ.

ವೈ.ಎಂ.ಸಿ.ಎ. ಎಂದೇ ಖ್ಯಾತಿ ಪಡೆದಿರುವ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್‌ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜದ ದೀನದಲಿತರ, ಉಪೇಕ್ಷಿತರ, ಬೀದಿ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅಬ್ಬರ ಆಡಂಬರಗಳಿಲ್ಲದೆ ದುಡಿಯುತ್ತಿರುವ ವಿಶಿಷ್ಟ ಸೇವಾ ಸಂಸ್ಥೆ.
೧೮೪೪ರಲ್ಲಿ ಲಂಡನ್‌ನಲ್ಲಿ ಸರ್ ಜಾರ್ಜ್ ವಿಲಿಯಮ್ಸ್ ಮತ್ತು ಸಂಗಡಿಗರಿಂದ ಈ ಸಂಸ್ಥೆ ಸ್ಥಾಪಿತವಾಯಿತು. ಇಂದು ವಿಶ್ವದಾದ್ಯಂತ ೧೨೦ ರಾಷ್ಟ್ರಗಳಲ್ಲಿ ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿ, ಒಟ್ಟು ೩೨೦ ವೈ.ಎಂ.ಸಿ.ಎ. ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
ಕೆಳಸ್ತರದ ಗ್ರಾಮೀಣ ಮಕ್ಕಳ, ಬೀದಿ ಮಕ್ಕಳ, ಕೊಳಚೆ ಪ್ರದೇಶದ ಮಕ್ಕಳ, ಉಪೇಕ್ಷಿತರ, ಮಹಿಳೆಯರ ಕಲ್ಯಾಣಕ್ಕಾಗಿ ತನ್ನನ್ನು ಸದಾ ತೊಡಗಿಸಿಕೊಂಡಿರುವುದರ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆ ಬೆಳೆಸುವುದು, ಪರಿಸರ ರಕ್ಷಣೆ, ಪ್ರಾಣಿ ಹಿಂಸೆ ತಡೆ, ಬೀದಿ ಮಕ್ಕಳ ಪುನರ್ವಸತಿ, ವಯಸ್ಕರ ಶಿಕ್ಷಣ, ಆರೋಗ್ಯ ಹಾಗೂ ಕಾನೂನು ಸಲಹೆ ಹೀಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಏಳಿಗೆಗಾಗಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಸಂಸ್ಥೆಯಾಗಿದೆ.
ಅತ್ಯಂತ ಹಳೆಯ ಕ್ರೀಡಾ ಸಂಸ್ಥೆಯೆನ್ನಿಸಿಕೊಂಡಿರುವ ವೈ.ಎಂ.ಸಿ.ಎ. ಕಾರ್ಯನಿರ್ವಾಹಕ ತಂಡದ ಮೂಲಕ ಮಾದಕ ದ್ರವ್ಯಗಳ ಸೇವನೆ ಬಗ್ಗೆ ವಿಚಾರ ಸಂಕಿರಣ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ, ಪೋಷಕರ ಮಕ್ಕಳ ನಡುವಿನ ಸಂಭಾಷಣಾ ಶಿಬಿರ, ರಾಷ್ಟ್ರೀಯ ಸೈಕಲ್ ರಾಲಿ, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು, ವೃದ್ಧಾಶ್ರಮಗಳಿಗೆ ಭೇಟಿ ಮೊದಲಾದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸರ್ವಧರ್ಮ ಸಮನ್ವಯವನ್ನು ಮುಖ್ಯ ಧೈಯವಾಗಿರಿಸಿಕೊಂಡಿರುವ ಸಂಸ್ಥೆ ವೈ.ಎಂ.ಸಿ.ಎ.
ಯುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಭಾರತ – ಶ್ರೀಲಂಕಾ ನಡುವಿನ ಎಳೆಯರ ಕ್ರಿಕೆಟ್ ಪಂದ್ಯಗಳ ಮೂಲಕ ಖ್ಯಾತಿ ಪಡೆದಿರುವ ಈ ಸಂಸ್ಥೆ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ಅನೇಕ ಸಾಂಸ್ಕೃತಿಕ ಶಿಬಿರಗಳನ್ನು ಏರ್ಪಡಿಸುತ್ತದೆ.
ಜನಾಂಗಗಳ ನಡುವೆ ಶಾಂತಿ, ದಯೆ, ಪ್ರೀತಿ, ಸ್ನೇಹ, ವಿಶ್ವಾಸ, ಕರುಣೆಯ ಸೇತುವೆಯನ್ನು ನಿರ್ಮಿಸುವ ಮೂಲಕ ಮನುಕುಲದ ಸೇವೆಯಲ್ಲಿ ಒಂದು ಶತಮಾನವನ್ನೇ ಕಳೆದಿರುವ ವೈ.ಎಂ.ಸಿ.ಎ. ನಾಡಿನ ಹೆಮ್ಮೆಯ ಸಂಸ್ಥೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ಪ್ರಧಾನ್ ಗುರುದತ್ತ

ಅಧ್ಯಾಪಕರು, ಭಾಷಾಂತರಕಾರರು, ಕನ್ನಡಪರ ಚಿಂತಕರು ಡಾ. ಪ್ರಧಾನ್ ಗುರುದತ್ತ ಅವರು.
೧೯೩೮ ರಲ್ಲಿ ಜನಿಸಿದ ಡಾ. ಪ್ರಧಾನ್ ಗುರುದತ್ತ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. (ಕನ್ನಡ), ಎಂ.ಫಿಲ್., ಪಿಹೆಚ್.ಡಿ. ಪದವಿ, ಭಾರತೀಯ ವಿದ್ಯಾಭವನದ ಸಂಸ್ಕೃತ ಕೋವಿದ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ.
ಪದವಿ ಗಳಿಸಿದರು.
ಮೂವತ್ತೊಂಬತ್ತು ವರ್ಷಗಳ ಕಾಲ ಸ್ನಾತಕ, ಸ್ನಾತಕೋತ್ತರ ಅಧ್ಯಾಪಕರಾಗಿ, ಯು.ಜಿ.ಸಿ. ಸಂಶೋಧಕ ಪ್ರಾಧ್ಯಾಪಕರಾಗಿ, ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳ, ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ಮರಾಠಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳ ಪರಿಚಯವುಳ್ಳ ಶ್ರೀಯುತರು ಕನ್ನಡದ ಹಲವಾರು ಕೃತಿಗಳನ್ನು ಹಿಂದಿಗೂ, ಇಂಗ್ಲಿಷ್‌ ಭಾಷಾಂತರಿಸಿದ್ದಾರೆ. ಮರಾಠಿ, ತಮಿಳು, ಇಂಗ್ಲಿಷ್‌ನಿಂದ ಕನ್ನಡಕ್ಕೂ ಭಾಷಾಂತರಿಸಿದ್ದಾರೆ. ಅಲ್ಲದೆ ಹಾಮಾನಾ ಒಂದು ಅಧ್ಯಯನ, ರತ್ನಾಕರವರ್ಣಿ, ಆಡಳಿತ ಭಾಷೆಯ ಕೆಲವು ವಿಚಾರಗಳು ಮೊದಲಾದ ಸುಮಾರು ೨೨ ಸ್ವತಂತ್ರ ಕೃತಿಗಳನ್ನು, ತಾಂತ್ರಿಕ ಪದಕೋಶಗಳನ್ನು ರಚಿಸಿರುವುದಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ೧೫೦ಕ್ಕೂ ಹೆಚ್ಚು ಪುಸ್ತಕಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ. ೫೦ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ‘ಕಲ್ಪಶ್ರೀ’ ಪ್ರಶಸ್ತಿ, ತೀ.ನಂ. ಶ್ರೀಕಂಠಯ್ಯ ಪ್ರಶಸ್ತಿ ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವು.
ಸಂಶೋಧನೆ, ವಿವಿಧ ಭಾಷಾ ಪಾಂಡಿತ್ಯ, ಆಳವಾದ ಅಧ್ಯಯನದಿಂದ ವಿದ್ವಾಂಸರ ಮೆಚ್ಚುಗೆ ಪಡೆದ ಪ್ರತಿಭಾನ್ವಿತ ಬರಹಗಾರರು ಡಾ. ಪ್ರಧಾನ್ ಗುರುದತ್ತ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಅಕ್ಷಯ ಪಾತ್ರೆ ಫೌಂಡೇಷನ್

ನಗರದ ಬಡಮಕ್ಕಳಿಗೆ ಆಹಾರ ಒದಗಿಸುವ ಇಸ್ಕಾನ್ ದೇವಾಲಯದ ಮಹತ್ವಾಕಾಂಕ್ಷೆಯ ಯೋಜನೆ ಅಕ್ಷಯ ಪಾತ್ರೆ.
ಹಲವಾರು ಯುವಕರು ಈ ಯೋಜನೆಯಡಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ದಿನ ಮಧ್ಯಾಹ್ನ ಅವಕಾಶ ವಂಚಿತ ಸರ್ಕಾರಿ ಶಾಲೆಯ ಮತ್ತು ಕಾರ್ಪೊರೇಷನ್ ಶಾಲೆಯ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅವರ ಆಶಾದಾಯಕ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅಕ್ಷಯ ಪಾತ್ರೆ ಯೋಜನೆ ನೆರವಾಗಿದೆ. ಜಾತಿ, ಧರ್ಮ ಮೀರಿ ಮಕ್ಕಳಲ್ಲಿ ದೇವರನ್ನು ಕಾಣುವ ಹಾಗೂ ಆ ಮೂಲಕ ಬಡ ಮಕ್ಕಳಿಗೆ ನೆರವಾಗುವ ಈ ಯೋಜನೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಮತ್ತು ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಮೊದಲು ೧೫೦೦ ಮಕ್ಕಳಿಗೆ ಪ್ರತಿದಿನ ಊಟ ನೀಡುವ ಕಾರ್ಯಕ್ರಮದಿಂದ ಪ್ರಾರಂಭವಾದ ಈ ಯೋಜನೆಯು ಪ್ರತಿ ದಿನ ಸುಮಾರು ೫೦, ೧೦೦ ವಿದ್ಯಾರ್ಥಿಗಳಿಗೆ ಅಕ್ಷಯಪಾತ್ರೆ ಸೇವಾ ಸೌಲಭ್ಯ ಒದಗಿಸುವ ಗುರಿ ಮುಟ್ಟಿದೆ.
ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ, ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮುಂತಾದ ಚಟುವಟಿಕೆಗಳನ್ನು ಅಕ್ಷಯ ಫೌಂಡೇಷನ್ ನಡೆಸುತ್ತಿದೆ.
ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮಧು ಪಂಡಿತ ದಾಸರ ನೇತೃತ್ವದಲ್ಲಿ ಇಸ್ಕಾನ್ ದೇವಾಲಯದ ಭಕ್ತರು ಈ ಅಕ್ಷಯ ಪಾತ್ರೆ ಯೋಜನೆಯ ಕಾರ್ಯಚಟುವಟಿಕೆಗಳಿಗೆ ಕಾರಣರಾಗಿದ್ದಾರೆ. ಪ್ರತಿದಿನ ಮಧ್ಯಾಹ್ನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಕ್ಷರಸ್ಥರ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಷನ್.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಭಾರತ್ ಕ್ಯಾನ್ಸರ್ ಸಂಸ್ಥೆ

ಮೈಸೂರಿನ ಹೆಬ್ಬಾಳದಲ್ಲಿ ೧೯೯೦ರಲ್ಲಿ ಸ್ಥಾಪನೆಗೊಂಡ ಭಾರತ್ ಕ್ಯಾನ್ಸರ್ ಸಂಸ್ಥೆ ಮತ್ತು ಆಸ್ಪತ್ರೆ ಸದಾಶಾರದಾ ಗಂಥಿ ಮತ್ತು ಸಂಶೋಧನಾ ಸಂಸ್ಥೆಯ ಒಂದು ಅಂಗ. ಇದೊಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಮೈಸೂರು ಮತ್ತು ಸುತ್ತಮುತ್ತಲ ಜನರಿಗೆ ಉನ್ನತ ಮಟ್ಟದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಿದೆ. ಅನಿವಾಸಿ ಭಾರತೀಯರಾದ ಡಾ|| ಬಿ.ಎಸ್‌. ಅಜಯ್‌ಕುಮಾರ್‌ ಅವರಿಂದ ಸ್ಥಾಪನೆಗೊಂಡಿತು.
ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ರೋಗ ಪತ್ತೆ, ಕ್ಯಾನ್ಸರ್ ಬಗ್ಗೆ ಹಾಗೂ ಅದರ ಕಾರಣಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು, ಕ್ಯಾನ್ಸರ್ ಸಂಶೋಧನೆ ಸಂಸ್ಥೆಯ ಹೆಗ್ಗುರಿಯಾಗಿದೆ. ಅತ್ಯಾಧುನಿಕ ಉಪಕರಣಗಳು ಹಾಗೂ ಚಿಕಿತ್ಸಾ ವಿಧಾನಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಬಡ ರೋಗಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳಿಗೆ ಉಚಿತ ಊಟ ಹಾಗೂ ಕೀಮೋಥೆರಪಿ ನೀಡಲಾಗುತ್ತಿದೆ. ಈ ಸಂಸ್ಥೆಯ ವತಿಯಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ.
ಕ್ಯಾನ್ಸರ್ ರೋಗದ ಉಪಶಮನ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿರುವ ಅಸಂಖ್ಯಾತ ರೋಗಿಗಳ ಆಶಾಕಿರಣ ಭಾರತ್ ಕ್ಯಾನ್ಸರ್ ಸಂಸ್ಥೆ.
ದಿನಕ್ಕೆ ೫೦ ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲ ಸಂಪೂರ್ಣ ಸುಸಜ್ಜಿತ ರೇಡಿಯೇಷನ್ ಥೆರಪಿ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ, ೧೦೦ ಒಳರೋಗಿಗಳಿಗೆ ಹಾಸಿಗೆ ಸೌಲಭ್ಯ, ರೋಗಿಗಳ ಪುನರ್ವಸತಿ ಸೇವಾ ವಿಭಾಗ, ಮಾನಸಿಕ ಮತ್ತು ಸಾಮಾಜಿಕ ಸಲಹಾ ವಿಭಾಗಗಳ ಮೂಲಕ ವೈದ್ಯಕೀಯ ರಂಗದಲ್ಲಿ ಜನಸೇವೆ ಕೈಗೊಂಡಿರುವ ಅದ್ವಿತೀಯ ಸಂಸ್ಥೆ ಭಾರತ್ ಕ್ಯಾನ್ಸರ್ ಸಂಸ್ಥೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಜೆ. ಚಂದೂಲಾಲ್ ಜೈನ್

ಉತ್ತಮ ಗುಣಮಟ್ಟದ ಚಿತ್ರಗಳನ್ನು ಕನ್ನಡ ಚಿತ್ರರಸಿಕರಿಗೆ ನೀಡುತ್ತ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕ ಶ್ರೀ ಚಂದ್ರಲಾಲ್ ಜೈನ್ ಅವರು.
ಶ್ರೀ ಚಂದ್ರಲಾಲ್ ಜೈನ್ ಅವರು ಕನ್ನಡ ಚಲನಚಿತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಸಾಂಸ್ಕೃತಿಕ ಪರಿಸರದಲ್ಲಿ ತೊಡಗಿಸಿಕೊಂಡವರು. ೧೯೭೦ರಲ್ಲಿ ‘ತಾಯಿದೇವರು’ ಚಿತ್ರದೊಂದಿಗೆ ಪ್ರಾರಂಭಿಸಿ ‘ಭೂತಯ್ಯನ ಮಗ ಅಯ್ಯು’, ‘ಹೇಮಾವತಿ’, ‘ತಬ್ಬಲಿಯು ನೀನಾದೆ ಮಗನೆ’ ಮೊದಲಾದ ಅನೇಕ ಶ್ರೇಷ್ಠ ಚಿತ್ರಗಳನ್ನು ನೀಡಿದ ಖ್ಯಾತಿ ಶ್ರೀಯುತರದು.
ಹಿಂದಿ ಚಿತ್ರ ‘ಗೋಧೂಳಿ’ಯೂ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಶ್ರೀ ಚಂದ್ರಲಾಲ್ ಜೈನ್ ಅವರ ಅನೇಕ ಚಲನಚಿತ್ರಗಳಿಗೆ ಕೇಂದ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಸಿದ್ಧ ನಿರ್ಮಾಪಕರು ಹಾಗೂ ನಿರ್ದೇಶಕರಾದ ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ನಾಗಾಭರಣ, ಕೆ. ಬಾಲಚಂದರ್‌ ಮೊದಲಾದವರೊಂದಿಗೆ ಚಿತ್ರಗಳನ್ನು ಮಾಡಿರುವ ಶ್ರೀಯುತರು ‘ಇದು ಸಾಧ್ಯ’ ಎಂಬ ಪ್ರಾಯೋಗಿಕ ಚಿತ್ರವನ್ನು ನಲವತ್ತೆಂಟು ಗಂಟೆಗಳಲ್ಲಿ ನಿರ್ಮಿಸಿ ದಾಖಲೆ ಮಾಡಿದ್ದಾರೆ. ‘ಗಂಗವ್ವ ಗಂಗಾಮಾಯಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ‘ಉತ್ತಮ ಚಿತ್ರ ಪ್ರಶಸ್ತಿ
ದೊರಕಿದೆ.
ಮೂರು ದಶಕಗಳ ಕಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಕೈಗಾರಿಕಾ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಸದಸ್ಯರಾಗಿ, ಹಲವಾರು ಚಲನಚಿತ್ರ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ನಿರ್ದೆಶಕರ ಸಂಘದಿಂದ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕನ್ನಡ ಚಲನಚಿತ್ರ ರಂಗದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಯಶಸ್ವೀ ನಿರ್ಮಾಪಕರು ಶ್ರೀ ಜೆ. ಚಂದ್ರಲಾಲ್ ಜೈನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಆರ್. ತಿಮ್ಮರಾಜು

ತೋಟಗಾರಿಕೆಯ ಅಭಿವೃದ್ಧಿಗಾಗಿ ಮಹತ್ತರ ಸೇವೆ ಸಲ್ಲಿಸಿರುವ ತೋಟಗಾರಿಕಾ ತಜ್ಞ ಡಾ. ಕೆ. ಆರ್. ತಿಮ್ಮರಾಜು ಅವರು.
ತುಮಕೂರು ಜಿಲ್ಲೆಯ ಕಾಲೇನಹಳ್ಳಿ ಗ್ರಾಮದಲ್ಲಿ ೧೯೩೪ ರಲ್ಲಿ ಜನಿಸಿದ ಡಾ. ಕೆ. ಆರ್. ತಿಮ್ಮರಾಜು ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಬಿ.ಎಸ್‌. ಆನರ್ಸ್ ಮತ್ತು ಎಂ.ಎಸ್ಸಿ. ಪದವಿ, ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ಶಾಲೆಯಿಂದ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.
ಬೆಂಗಳೂರಿನ ಸೆಯಿಂಟ್ ಜೋಸೆಫ್ ಕಾಲೇಜು ಮತ್ತು ಯುವರಾಜ ಕಾಲೇಜುಗಳಂಥ ಪ್ರತಿಷ್ಠಿತ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕಾ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿ.
ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಶ್ರೀಯುತರು ಅಮೆರಿಕ ಸಂಯುಕ್ತ ಸಂಸ್ಥಾನ, ಅಮೆರಿಕ, ಫ್ರಾನ್ಸ್, ಜಪಾನ್, ಕೆನ್ಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. ಅನೇಕ ಅಂತರರಾಷ್ಟ್ರೀಯ ಕಾರ್ಯಾಗಾರ, ವಿಚಾರಸಂಕಿರಣ, ಗೋಷ್ಠಿಗಳಲ್ಲಿ ಭಾಗವಹಿಸಿ ತೋಟಗಾರಿಕೆಯ ಬಗ್ಗೆ ವಿದ್ವತ್‌ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಾಗಿ ಅಮೆರಿಕನ್ ಬಯೊಗ್ರಾಫಿಕಲ್‌ ಸಂಸ್ಥೆಯಿಂದ ಪ್ರಶಸ್ತಿ ಪಡೆದಿರುವ ಶ್ರೀಯುತರು ತೋಟಗಾರಿಕಾ ವಿಸ್ತರಣ ಕಾರ್ಯಕ್ರಮದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ‘ಮಲ್ಲಿಕಾ’ ಮಾವಿನ ಮಿಶ್ರತಳಿಯನ್ನು ಪರಿಚಯಿಸಿ ಮಾವು ಬೆಳೆಗಾರರಲ್ಲಿ ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರು. ಮಾವು, ಹುಣಸೇ ಮತ್ತು ಹಲಸಿನ ಬೆಳೆಗಳನ್ನು ತಮ್ಮ ಸಂಶೋಧನಾ ಕ್ಷೇತ್ರವಾಗಿಸಿಕೊಂಡ ಶ್ರೀಯುತರು ಒಣಭೂಮಿ ತೋಟಗಾರಿಕಾ ಅಭಿವೃದ್ಧಿ ಬಗೆಗೆ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದಾರೆ. ರೇಡಿಯೊ, ದೂರದರ್ಶನ ಮೂಲಕ ತೋಟಗಾರಿಕಾ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ಪ್ರಸಾರ ಮಾಡಿರುವ ಶ್ರೀಯುತರು ತೋಟಗಾರಿಕೆಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ತೋಟಗಾರಿಕೆಯ ಅಭಿವೃದ್ಧಿಗಾಗಿ ಶ್ರಮಿಸಿರುವ, ತೋಟಗಾರಿಕಾ ತಜ್ಞ ಜನಪ್ರಿಯ ಅಧ್ಯಾಪಕ ಮತ್ತು ಸಂಶೋಧಕ ಡಾ. ಕೆ.ಆರ್. ತಿಮ್ಮರಾಜು ಅವರು.

Categories
ಕಲಾವಿಮರ್ಶೆ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಿ.ಸು. ಕೃಷ್ಣ ಶೆಟ್ಟಿ

ಕರ್ನಾಟಕದ ಕಲಾ ಜಗತ್ತಿನಲ್ಲಿ ಕಲಾವಿದರಾಗಿ, ಕಲಾ ವಿಮರ್ಶಕರಾಗಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು ಶ್ರೀ ಚಿ.ಸು. ಕೃಷ್ಣ ಶೆಟ್ಟಿ ಅವರು.
ಕರ್ನಾಟಕಕ್ಕೆ ಅನೇಕ ಪ್ರತಿಭೆಗಳನ್ನು ಕೊಟ್ಟ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನನ. ದಾವಣಗೆರೆಯ ಕಲಾ ಶಾಲೆಯಲ್ಲಿ ರಾಷ್ಟ್ರೀಯ ಡಿಪ್ಲೊಮಾ ಪಡೆದು, ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿ ವೇತನ ಪಡೆದು ದೆಹಲಿಯ ಗರ್ಹಿ ಸ್ಟುಡಿಯೋದಲ್ಲಿ ಗ್ರಾಫಿಕ್ಸ್ ಕುರಿತು ಸಂಶೋಧನೆ. ಕಲೆಗೆ ಪೂರಕವಾಗಿ ಸಾಹಿತ್ಯವೂ ಬೇಕೆನ್ನಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ. ಜೊತೆಗೆ ಸಾರ್ವಜನಿಕ ಸಂಪರ್ಕ ಸ್ನಾತಕೋತ್ತರ ಡಿಪ್ಲೊಮಾ.
ದಾವಣಗೆರೆಯ ಸರ್ಕಾರಿ ಕಲಾ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿ ನಂತರ ಬೆಂಗಳೂರಿಗೆ ಬಂದು ಕಾರಿಯನ್ ಅಡ್ವರ್ಟೈಸಿಂಗ್ ಸರ್ವಿಸಸ್‌ನಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ವಿನ್ಯಾಸ್ ಜಾಹಿರಾತು ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ.
೧೯೮೫ರಲ್ಲಿ ಅಮೆರಿಕದಲ್ಲಿ ನಡೆದ ಭಾರತ ಉತ್ಸವದಲ್ಲಿ ಭಾಗವಹಿಸುವುದರೊಂದಿಗೆ ತೊಡಗಿದ ಕಲಾಯಾತ್ರೆಯಲ್ಲಿ ಹಲವಾರು ಮಜಲುಗಳು. ಕ್ಯಾಲಿಫೋರ್ನಿಯ, ನ್ಯೂಯಾರ್ಕ್, ಲಾಸ್ ಏಂಜಲೀಸ್, ಟೆಕ್ಸಾಸ್, ಯು.ಕೆ., ಮ್ಯಾಂಚೆಸ್ಟರ್, ಪೋಲೆಂಡ್, ಫಿಲಿಪೀನ್ಸ್ ಸ್ಥಳಗಳಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀಯುತರು. ವಿವಿಧ ಕಲಾ ಶಿಬಿರಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇವರ ಅನೇಕ ಕೃತಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾ ಗ್ಯಾಲರಿಯ ಸಂಗ್ರಹಗಳಲ್ಲಿ ಸೇರಿವೆ.
ಲಲಿತ ಕಲಾ ಅಕಾಡೆಮಿಯ ಸದಸ್ಯತ್ವ, ಕರ್ನಾಟಕ ದೃಶ್ಯ ಕಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕರ್ನಾಟಕ ಕಲಾ ಮೇಳದ ಉಪಾಧ್ಯಕ್ಷ ಇತ್ಯಾದಿ ಸ್ಥಾನಗಳು ಶ್ರೀಯುತರ ಸಾಧನೆಯ ಮೆಟ್ಟಿಲುಗಳಾಗಿವೆ.
ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಕಲಾ ವಿಮರ್ಶೆ, ಅಂಕಣಗಳು, ಪ್ರಕಟವಾಗಿವೆ. ‘ಚಿತ್ರ ಚಿತ್ತ’ ‘ವರ್ಣಾವರಣ’, ‘ದೃಶ್ಯ ಕಲೆ ಎಂದರೇನು’, ‘ಎಕ್ಸ್‌ ಪ್ರೆಶನಿಸಂ’, ‘ಎಂಟಿವಿ ಆಚಾರ್ಯ’, ‘ಯೂಸುಫ್ ಅರಕ್ಕಲ್’, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ದೂರದರ್ಶನಕ್ಕೆ ಕಲೆ ಕುರಿತು ಚಿತ್ರಾಂತರಂಗ ಎಂಬ ಧಾರಾವಾಹಿ, ‘ಜೀವನ ಚಕ್ರ’, ‘ಮರೀಚಿಕೆ’, ‘ನವಿಲುಗರಿ’ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅತ್ಯುತ್ತಮ ಕಲಾ ಪುಸ್ತಕಕ್ಕೆ ವಿಶ್ವೇಶ್ವರಯ್ಯ ಪ್ರಶಸ್ತಿ, ಸಹ್ಯಾದ್ರಿ ಪ್ರಶಸ್ತಿ ಹಾಗೂ ಮೈಸೂರು ದಸರಾ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಬಿಇಎಂಎಲ್‌ನಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಾ ವಿಮರ್ಶಕ, ಸ್ನೇಹಜೀವಿ ಜನಪ್ರಿಯ ಕಲಾವಿದ ಶ್ರೀ ಚಿ. ಸು. ಕೃಷ್ಣ ಶೆಟ್ಟಿಯವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕುಮಾರ್ ಮಳವಳ್ಳಿ

ಅಂತರರಾಷ್ಟ್ರೀಯ ಖ್ಯಾತಿಯ ಮಾನವತಾವಾದಿ, ಆದರ್ಶ ಉದ್ಯಮಿ, ಕಂಪ್ಯೂಟರ್ ಸ್ಮರಣಜಾಲದಲ್ಲಿ ಮಹಾನ್ ದಾರ್ಶನಿಕ, ಫೈಬರ್ ಛಾನಲ್ ತಂತ್ರಜ್ಞಾನದ ಬೆನ್ನೆಲುಬು ಹಾಗೂ ಅಮೆರಿಕಾದ ಸಿಲಿಕಾನ್ ವ್ಯಾಲಿಯ ಅನೇಕ ಸಂಸ್ಥೆಗಳ ಪಿತಾಮಹ ಎಂಬ ವರ್ಣನೆಗೆ ಪಾತ್ರರಾದ ಹೊರನಾಡ ಕನ್ನಡಿಗ ಶ್ರೀ ಕುಮಾರ್ ಮಳವಳ್ಳಿ ಅವರು.
ಮಳವಳ್ಳಿಯಲ್ಲಿ ೧೯೪೬ರಲ್ಲಿ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಕುಮಾರ್‌ ಮೈಸೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಲಿತು ಜರ್ಮನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಕೆನಡಾಗೆ ಸಾಗಿ ಯಶಸ್ಸಿನ ಅಲೆಯೇರಿ ಅಮೆರಿಕ ಪ್ರವೇಶಿಸಿದರು. ಸ್ವತಃ ಬಿಲ್ ಕ್ಲಿಂಟನ್ ಆತ್ಮೀಯವಾದ ಪತ್ರ ಬರೆದು ಅಮೆರಿಕದಲ್ಲಿ ನೆಲೆಸಿದರೂ ತಾಯ್ಯಾಡಿನಲ್ಲಿ ಮೊಟ್ಟ ಮೊದಲ ಎಐಎಫ್ ಡಿಜಿಟಲ್ ಈಕ್ವಲೈಸರ್್ರ ಕೇಂದ್ರ ಸ್ಥಾಪಿಸಿದ್ದಕ್ಕೆ ಹೊಗಳಿದ್ದಾರೆ. ವಿಶ್ವಮಾರುಕಟ್ಟೆ ತಂತ್ರ ಯೋಜಕರಾಗಿ ಆಧುನಿಕ ತಂತ್ರಜ್ಞಾನದ ರೂವಾರಿಯಾಗಿ ಹತ್ತು ವರ್ಷಗಳಿಂದ ಸಿಲಿಕಾನ್ ವ್ಯಾಲಿಯಲ್ಲಿ ಸ್ಮರಣಜಾಲ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಅಮೆರಿಕಾದ ತಂತ್ರಜ್ಞಾನ ಹಾಗೂ ಪ್ರಮಾಣ ಸಮಿತಿಯ ಅಧ್ಯಕ್ಷತೆ ವಹಿಸಿ ಐಬಿಎಂ, ಎಚ್‌ಪಿ ಮತ್ತು ಸನ್ ಮೈಕ್ರೋಸಿಸ್ಟಮ್ಸ್ ಎನ್ನುವ ಮೂರು ಬೃಹತ್ ಪ್ರಧಾನ ಸಂಸ್ಥೆಗಳ ಒಕ್ಕೂಟವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಇವರ ಉನ್ನತ ತಂತ್ರಜ್ಞಾನ ಸ್ಮರಣಜಾಲದ ಪರಿಣಾಮವಾಗಿ ಸೆಪ್ಟೆಂಬರ್ ೧೧, ೨೦೦೧ರಂದು ನಡೆದ ವಿಶ್ವ ವಾಣಿಜ್ಯ ಕೇಂದ್ರದ ನಿರ್ನಾಮದ ನಂತರವೂ ಅಲ್ಲಿಯ ಸಂಸ್ಥೆಗಳ ದಾಖಲೆಗಳು ನಾಶವಾಗದೇ ಉಳಿದು ಅವು ಅನಾಯಾಸವಾಗಿ ಕಾರ್ಯ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಯಿತು.
ಕುಮಾರ್ ಮಳವಳ್ಳಿಯವರ ಸಾಧನೆಯನ್ನು ಗುರುತಿಸಿ ಅಮೆರಿಕಾದ ಸಿಲಿಕಾನ್ ವ್ಯಾಲಿ ಕ್ಯಾಪಿಟಲ್ ಕ್ಲಬ್ “ಹಾಲ್ ಆಫ್ ಫೇಮ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಭಾರತದ ಕುಗ್ರಾಮಗಳಲ್ಲೂ, ಶಾಲೆಗಳ ಡಿಜಿಟಲ್ ಈಕ್ವಲೈಸರ್ ಕೇಂದ್ರಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮಾಂತರ ಜನರ ನಡುವಿನ ಅಂತರ ಕಡಿಮೆ ಮಾಡುವುದಲ್ಲದೆ ಜೊತೆಗೆ ಅನೇಕ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಭಾರತವು ಭವಿಷ್ಯದ ಸ್ಮರಣಜಾಲ ವಿನ್ಯಾಸದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಂಬಿರುವ ಕುಮಾರ್ ಮಳವಳ್ಳಿ ಅವರು ಅಮೆರಿಕಾದ ಸಂಸ್ಥೆಗಳಿಗೆ ಭಾರತದ ಬಗ್ಗೆ ತಿಳುವಳಿಕೆ ಮೂಡಿಸಿ ಅಲ್ಲಿಯ ಸಂಸ್ಥೆಗಳ ಜೊತೆಗೆ ಸಹಯೋಗ ಹೊಂದಲು ಕಾರಣಕರ್ತರಾಗಿದ್ದಾರೆ.
ಕರ್ನಾಟಕ ಹೆಮ್ಮೆಯ ಪುತ್ರ ಹೊರನಾಡಿನಲ್ಲಿ ಸಾಧಕನಾಗಿ ಭವಿಷ್ಯದ ತಂತ್ರಜ್ಞಾನದ ರೂವಾರಿಯಾಗಿ ಮೆರೆದವರು ಕುಮಾರ್ ಮಳವಳ್ಳಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಸಿಡ್ನಿ ಕನ್ನಡ ಕೂಟ

ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸುಮಾರು ಎರಡು ದಶಕಗಳಿಂದ ಕನ್ನಡ ಡಿಂಡಿಮವನ್ನು ಮೊಳಗಿಸುತ್ತಿರುವ ಹೊರನಾಡ ಕನ್ನಡ ಸಂಘ ಸಿಡ್ನಿ ಕನ್ನಡ ಕೂಟ.
೧೯೮೨ ರಲ್ಲಿ ಪ್ರಾರಂಭವಾದ ಸಿಡ್ನಿ ಕನ್ನಡ ಕೂಟವು ಸಿಡ್ನಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಸಿಡ್ನಿ ಕನ್ನಡ ಕೂಟವು ‘ಸುಗಮ ಕನ್ನಡ ಶಾಲೆ’ಯನ್ನು ಪ್ರಾರಂಭಿಸಿರುವುದು ಒಂದು ಪ್ರಮುಖ ಮೈಲಿಗಲ್ಲು. ಪ್ರಾರಂಭದಲ್ಲಿ ಮನೆಗಳಲ್ಲಿ ಸೇರುತ್ತಿದ್ದ ಕನ್ನಡ ಕಲಾವಿದರು ಈಗ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಯಲ್ಲಿ ಒಗ್ಗೂಡಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಿಡ್ನಿಯಲ್ಲಿ ಬೆಳೆಯುತ್ತಿರುವ ಕನ್ನಡಿಗರ ಸಂಖ್ಯೆಯನ್ನು ಗಮನಿಸಿ, ಕನ್ನಡ ಕ್ರಿಕೆಟ್ ಕ್ಲಬ್, ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿರುವ ಸಿಡ್ನಿ ಕನ್ನಡ ಕೂಟವು ಪರಭಾಷಾ ವಲಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದು ಹೊರನಾಡಿನಲ್ಲಿ ಪರಿಚಯಿಸುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ.
೨೦೦೩ರ ಜೂನ್ ತಿಂಗಳಲ್ಲಿ ೨೦ನೇ ವಾರ್ಷಿಕೋತ್ಸವವನ್ನು ಆಚರಿಸಿ, ಈ ಸಂದರ್ಭದಲ್ಲಿ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿ ಕನ್ನಡದ ಕಹಳೆಯನ್ನು ಹೊರನಾಡಿನಲ್ಲಿ ಮೊಳಗಿಸುತ್ತಿರುವ ಅನನ್ಯ ಸಂಸ್ಥೆ ಸಿಡ್ನಿ ಕನ್ನಡ ಕೂಟ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಐ.ವಿ. ಜಗದೀಶ್

ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಬ್ಲೂಚಿಪ್ ತಂತ್ರಜ್ಞಾನ ಉದ್ದಿಮೆಯಲ್ಲಿ ದೂರದರ್ಶಿತ್ವವುಳ್ಳ ತಂತ್ರಜ್ಞರು ಶ್ರೀ ಬಿ.ವಿ. ಜಗದೀಶ್ ಅವರು.
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಲೆಕ್ನಿಕಲ್ ಇಂಜಿನಿಯರಿಂಗ್ ಪದವಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ತಂತ್ರಜ್ಞರು ನೆಟ್‌ಲರ್‌ನ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಗೆ ಉತ್ತಮ ದರ್ಜೆಯ ಪ್ರತಿಭಾನ್ವಿತ ಇಂಜಿನಿಯರ್‌ಗಳನ್ನು ಸೇರಿಸಿಕೊಳ್ಳುವ ಮೂಲಕ ಕಂಪೆನಿಯು ಪ್ರಗತಿಪಥದಲ್ಲಿ ನಡೆಯಲು ಅನುಭವಿ ಮಾರ್ಗದರ್ಶನ ನೀಡಿದ್ದಾರೆ. ಇಂದು ಸ್ಪರ್ಧಾತ್ಮಕವಾಗಿರುವ ಬ್ಲೂಚಿಪ್ ಸೆಂಟರ್‌ನಲ್ಲಿ ಬಂಡವಾಳ ಹೂಡಿಕೆಗಾಗಿ ಬಂಡವಾಳದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಯುತರು ನೆಟ್‌ಸ್ಕಲರ್‌ಗೆ ಮೊದಲು ಎಡಸ್ ಕಮ್ಯುನಿಕೇಷನ್ಸ್‌ನ ಸಹಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅಂತರ್‌ಜಾಲ ಮಾರುಕಟ್ಟೆಯಲ್ಲಿ ಕಂಪನಿ ಬೆಳೆಯಲು ಸಹಕಾರ ನೀಡಿದ್ದಾರೆ. ಎನ್ನೊಡನ್‌ಗೆ ಮೊದಲು ಫೌರೆಸ್ ಎಂಬ ಸಾಫ್ಟ್‌ವೇರ್ ಸಲಹಾ ಕಂಪನಿಯ ಸಹಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ನಾವೆಲ್ ಮತ್ತು ತ್ರಿಕಾಮ್ ಕಾರ್ಪೊರೇಷನ್ ಅಲ್ಲದೆ ವ್ಯವಸ್ಥಾಪನೆ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಶ್ರೀ ಜಗದೀಶ ಅವರು ಭಾರತ ಮತ್ತು ಅಮೆರಿಕ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಮಾನವತಾವಾದಿ.
ತಂತ್ರಜ್ಞಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಪ್ರತಿಭಾವಂತ ಮಾಹಿತಿ ತಂತ್ರಜ್ಞಾನ ತಜ್ಞ ಶ್ರೀ ಬಿ.ವಿ. ಜಗದೀಶ್ ಅವರು.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಕಲ್ಪನಾಕರ್

ಆಳವಾದ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಧಿಸುವ ಛಲ ಜೊತೆಗೆ ಸೇವಾ ಪ್ರಜ್ಞೆಗಳಿಂದ ಸರ್ಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳ ನಡುವೆ ಸಾಮರಸ್ಯ ತಂದು ಕೊಟ್ಟ ಸಾಹಿತಿ ಮಹಿಳೆ ಕಲ್ಪನಾಕರ್ ಅವರು.
ಬೆಂಗಳೂರು ಅಜೆಂತಾ ಟಾಸ್ಕ್ ಫೋರ್ (ಬಿಎಟಿಎಫ್) ಎನ್ನುವ ಹೆಸರಿನಲ್ಲಿ ಪರಿಸರ ಹಾಗೂ ಖಾಸಗಿ ಪಾಲುದಾರಿಕೆಯಲ್ಲಿ ಬೆಂಗಳೂರು ನಗರ ಸುಧಾರಣೆಗೆ ಹಗಲಿರುಳು ದುಡಿಯುತ್ತ ಯಶಸ್ಸು ಕಂಡವರು ಕಲ್ಪನಾಕರ್, ಇಂದು ಬೆಂಗಳೂರಿನಲ್ಲಿ ಬಿಎಟಿಎಫ್ ಒಂದು ಪ್ರಧಾನ ಶಕ್ತಿಯಾಗಿರಲು ಕಲ್ಪನಾಕರ್ ಕಾರಣ.
ಮುಂಬೈಯಲ್ಲಿ ಜನಿಸಿ, ನವದೆಹಲಿಯಲ್ಲಿ ಶಿಕ್ಷಣ ಪಡೆದು, ಯು.ಕೆ.ಯ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಇನ್‌ಲಾಕ್ಸ್ ವಿದ್ಯಾರ್ಥಿವೇತನ ಪಡೆದು ಎಂ.ಫಿಲ್. ಪದವಿ ಗಳಿಸಿದ ಕಲ್ಪನಾಕರ್ ಹದಿನೆಂಟು ವರ್ಷಗಳ ವೃತ್ತಿ ಜೀವನದಲ್ಲಿ ವ್ಯವಸ್ಥಾಪನಾ ಸಮಾಲೋಚನೆ, ಮಾರುಕಟ್ಟೆ ಹಾಗೂ ಸಂವಹನೆ, ಯೋಜನಾ ನಿರ್ವಹಣೆ ಮತ್ತು ಈಚೆಗೆ ಸಮುದಾಯ ಅರಿವು ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಗಳವರೆಗೆ ವಿಸ್ತಾರವಾದ ಆಸಕ್ತಿಯನ್ನು ತೋರಿದ್ದಾರೆ.
ಬಾಬಾ ಆಡಳಿತ ಸೇವೆಗೆ ಸೇರಿ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲ್ಪನಾಕರ್ ಕ್ಲಿಷ್ಟಕರವಾದ ಹಾಗೂ ದುಸ್ಸಾಧ್ಯವಾದ ಯೋಜನೆಗಳನ್ನು ಕೈಗೆತ್ತಿಕೊಂಡು ಜಯ ಗಳಿಸುವುದರಿಂದ ಸತತವಾಗಿ ಅಭಿವೃದ್ಧಿ ಹೊಂದಿದರು.
ಈ ನಡುವೆ ಕ್ಯಾನ್ಸರ್ ರೋಗಿಗಳಿಗೆ ನೆರವು ಸಂಸ್ಥೆಯನ್ನು ಸ್ಥಾಪಿಸಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನೆರವಾದರು.
ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸರ್ಕಾರದ ಏಜೆನ್ಸಿಗಳು ಹಾಗೂ ಖಾಸಗಿ ಸಂಸ್ಥೆಗಳ ನಡುವೆ ಸಂಪರ್ಕಕೊಂಡಿಯಾಗಿ ವ್ಯವಹರಿಸಿ ಅನೇಕ ಯೋಜನೆಗಳು ಜಾರಿಗೆ ತರಲು ಕಾರಣರಾದರು.
ಬಸ್ ತಂಗುದಾಣ, ನಿರ್ಮಲ ಬೆಂಗಳೂರು ಶೌಚಾಲಯಗಳು, ಬೆಂಗಳೂರು ಸಾರಿಗೆ ನಿರ್ವಹಣಾ ಯೋಜನೆ, ರಸ್ತೆ ಸುರಕ್ಷತಾ ಯೋಜನೆ, ಖಾತಾ ಸರಳೀಕರಣ, ಬೀದಿ ಕುರ್ಚಿ ಕಾರ್ಯಕ್ರಮ ಇತ್ಯಾದಿಗಳು ಕಲ್ಪನಾ ಅವರ ಸಾಧನೆಯ ಸಾಕ್ಷಿಗಳು.
ಬೆಂಗಳೂರಿಗೊಂದು ಹೊಸ ರೂಪ ಕೊಡುವಲ್ಲಿ ಶ್ರಮಿಸಿ ಯಶಸ್ವಿಯಾದ ಮಹಿಳೆ ಕಲ್ಪನಾಕರ್.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಿಮಲಾ ರಂಗಾಚಾರ್

ರಂಗಭೂಮಿ, ನೃತ್ಯ ಸಂಗೀತ, ಕರಕುಶಲ ಕಲೆಗಳೊಂದಿಗೆ ದೀರ್ಘಕಾಲದ ನಂಟು ಬೆಳೆಸಿಕೊಂಡಿರುವ ಸಮಾಜ ಸೇವಾಕರ್ತರು ಶ್ರೀಮತಿ ವಿಮಲಾ ರಂಗಾಚಾರ್ ಅವರು.
ಸಿಂಹಳ, ರಷ್ಯಾ, ಇಂಗ್ಲೆಂಡ್, ಅಮೆರಿಕಾ, ಇಂಡೋನೇಷ್ಯಾಗಳಲ್ಲಿ ಸಂಚರಿಸಿ ಗಳಿಸಿಕೊಂಡ ವ್ಯಾಪಕ ಅನುಭವವನ್ನು ಆಸಕ್ತ ಕಲಾ ಪ್ರಕಾರಗಳಿಗೆ ಧಾರೆಯೆರೆದರು. ಪೂನಾದ ಭಾರತೀಯ ಮಹಿಳಾ ವಿಶ್ವವಿದ್ಯಾಲಯದ ಕಲಾ ಪದವಿಯನ್ನು ಪ್ರಥಮ ಬ್ಯಾಂಕ್‌ನೊಂದಿಗೆ ಗಳಿಸಿ ಕುಲಪತಿಗಳ ಬಹುಮಾನವನ್ನು ಪಡೆದರು. ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಅಧ್ಯಕ್ಷರಾಗಿ, ಎಂ.ಇ.ಎಸ್. ಕಾಲೇಜಿನ ಗೌರವ ಕಾವ್ಯದರ್ಶಿಯಾಗಿ, ನಾಟ್ಯ ಇನ್ಸ್‌ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಫಿಯ ಉಪಾಧ್ಯಕ್ಷರಾಗಿ, ಮಲ್ಲೇಶ್ವರಂ ಮಹಿಳಾ ಸಂಘದ ಅಧ್ಯಕ್ಷರಾಗಿ, ಸೇವಾಸದನದ ಗೌರವ ಕಾರ್ಯದರ್ಶಿಯಾಗಿ ಬಿಡುವಿಲ್ಲದ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೈಲಾಸಂ, ಶ್ರೀರಂಗ, ಪರ್ವತವಾಣಿಯವರ ನಾಟಕಗಳಲ್ಲಿ ಭಾವಪೂರ್ಣವಾಗಿ ಅಭಿನಯಿಸಿ ಜನ ಮೆಚ್ಚುಗೆಗೆ ಪಾತ್ರರಾದ ಶ್ರೀಮತಿ ವಿಮಲಾ ರಂಗಾಚಾರ್ ಅವರು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಅವುಗಳ ವೇಷಭೂಷಣ ವಿನ್ಯಾಸಕರಾಗಿಯೂ ಕಾರ್ ನಿರ್ವಹಿಸಿದವರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಕರಕುಶಲ ಕಲೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಶಿಶುಕಲ್ಯಾಣ ಮತ್ತು ಮನರಂಜನಾ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ, ಕೆನರಾ ಬ್ಯಾಂಕ್ ನಿರ್ದೆಶಕರಾಗಿ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ, ಭಾರತೀಯ ನಾಟ್ಯ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತೃಪ್ತಿಯನ್ನು ಕಂಡಿದ್ದಾರೆ.
ಉದಾತ್ತ ಕನಸುಗಳನ್ನು ಹೊಂದಿರುವ ಮೌಲ್ಯಾಧಾರಿತ ಜೀವನ ಶ್ರದ್ಧೆಯ ಪ್ರತೀಕವಾಗಿರುವವರು ಶ್ರೀಮತಿ ವಿಮಲಾ ರಂಗಾಚಾರ್ ಅವರು.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಡಾ|| ರಾಧಾ ಎಸ್. ಮೂರ್ತಿ

ವೈದ್ಯಕೀಯ ಶುಕ್ರೂಷಾ ಪರಿಚಾರಿಕೆಯಲ್ಲಿ ವಿನೂತನ ಯೋಜನೆಯನ್ನು ರೂಪಿಸಿ ವೃದ್ಧರು ಮತ್ತು ನಿರ್ಗತಿಕರಿಗೆ ಸದಾ ಸಹಾಯಹಸ್ತ ಚಾಚಿರುವ ಸಮಾಜ ಸೇವಕಿ ಡಾ|| ರಾಧಾ ಎಸ್‌. ಮೂರ್ತಿ ಅವರು.
ಬೆಂಗಳೂರಿನ ಸೇಂಟ್‌ ಜಾನ್ ಮೆಡಿಕಲ್ ಕಾಲೇಜಿನ ಪದವೀಧರರಾಗಿರುವ ಶ್ರೀಮತಿ ರಾಧಾ ಅವರು ಮೊದಲಿನಿಂದಲೂ ಕ್ರಿಯಾಶೀಲರಾದವರು. ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಅವಗಣನೆಗೆ ಗುರಿಯಾದ ಕ್ಷೇತ್ರವನ್ನು ಅರಸುತ್ತ ಅಲ್ಲಿ ತಮ್ಮ ಸೇವೆಯನ್ನು ನೀಡಬೇಕೆಂದು ಹಂಬಲಿಸುತ್ತಿರುವಾಗ ಅವರಿಗೆ ಗೋಚರಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ತಲುಪಲಾಗದ ಅಶಕ್ತರು ಹಾಗೂ ಬಡ ವೃದ್ದರು.
೧೯೯೬ನೆಯ ಇಸವಿಯಲ್ಲಿ ‘ನೈಟಿಂಗೇಲ್ಸ್ ಹೋಂ ಹೆಲ್ತ್‌ ಸರ್ವಿಸಸ್’ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಉದಾತ್ತ ಆಶಯದಂತೆ ಮನೆ ಬಾಗಿಲಿಗೆ ತೆರಳಿ ಸಾಧ್ಯವಾದ ಎಲ್ಲ ರೀತಿಯ ವೈದ್ಯಕೀಯ ಆರೈಕೆ ಮಾಡತೊಡಗಿದರು. ಸೇವಾ ಕೈಂಕರ್ಯದಲ್ಲಿ ತೊಡಗಿ ವಯೋವೃದ್ಧರ ಅನೇಕ ಸಮಸ್ಯೆಗಳಿಗೆ ಸಹಾಯ ನೀಡುತ್ತಿದ್ದಾರೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಸಂಸ್ಥೆ ಸ್ಥಾಪಿಸಿ ತಮ್ಮ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡ ಶ್ರೀಮತಿ ರಾಧಾ ಮೂರ್ತಿ ಅವರು. ನೈಟಿಂಗೇಲ್ಸ್ ಎಲ್ಲರ್ಸ್ ಎನ್‌ರಿಚ್‌ಮೆಂಟ್‌ ಸೆಂಟರ್, ನೈಟಿಂಗೇಲ್ಸ್ ಲೈಫ್ ಸೇವಿಂಗ್ ಸರ್ವಿಸಸ್, ನೈಟಿಂಗೇಲ್ಸ್ ಪ್ರಾಜೆಕ್ಟ್ ಫಾರ್ ದಿ ಅಂಡರ್ ಪ್ರಿವಿಲೇಜ್ ಎಲ್ಡರ್ಸ್, ಎಲ್ಡರ್ಸ್ ಹೆಲ್ತ್‌ಲೈನ್ ೧೦೯೦ ಮೊದಲಾದ ಉಪ ಸೇವಾ ವಿಭಾಗಗಳನ್ನು ತೆರೆದು ಸೇವಾ ನೀಡಿಕೆಯಲ್ಲಿ ಶಿಸ್ತು ಹಾಗೂ ನಿಖರ ಫಲಿತಾಂಶವನ್ನು ಸಾಧಿಸಿದರು.
‘ಎಲ್ಲರ್ ಟಾಸ್ಕ್ ಫೋರ್ಸ್‌’ನಲ್ಲಿ ಡಾ. ರಾಧಾ ಅವರು ಸದಸ್ಯರಾಗಿದ್ದಾರೆ. ವೃದ್ಧ ಸೇವಾ ಕೈಂಕರ್ಯದಲ್ಲಿ ಇನ್ನೂ ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸುತ್ತ ಸೇವೆಯಲ್ಲಿಯೇ ಸಂತೋಷವನ್ನು ಕಾಣುತ್ತ, ಸಮಾಜಕ್ಕಾಗಿಯೇ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು ಡಾ. ರಾಧಾ ಎಸ್‌. ಮೂರ್ತಿ ಅವರು.

Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿಜಯನಾಥ ಶೆಣೈ

ಪುರಾತನ ಕಲೆ, ಸಂಸ್ಕೃತಿಯನ್ನು ಮೂಲರೂಪದಲ್ಲಿ ಹಿಡಿದಿರಿಸಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ಉದಾತ್ತ ಕಾಯಕದಲ್ಲಿ ತೊಡಗಿರುವ, ಕಸದಿಂದ ರಸ ಸೃಷ್ಟಿಸಬಲ್ಲ ಅಪರೂಪದ ರಚನಾತ್ಮಕ ಪ್ರತಿಭೆ ಶ್ರೀ ವಿಜಯನಾಥ ಶೆಣೈ ಅವರು.
ಉಡುಪಿಯಲ್ಲಿ ೧೯೩೪ ರಲ್ಲಿ ಜನಿಸಿರುವ ಶ್ರೀ ಶೆಣೈ ಅವರು ೧೯೬೧ರಲ್ಲಿ ‘ಸಂಗೀತ ಸಭಾ’ ಸಂಸ್ಥೆಯನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಸಂಗೀತದ ಬಗೆಗೆ ವಿಶೇಷ ಅಭಿರುಚಿಯನ್ನು ಮೂಡಿಸಿದರು.
‘ಕರ್ನಾಟಕ ಸಂಘ’ ವನ್ನು ಸ್ಥಾಪನೆ ಮಾಡಿ ಸಾಹಿತ್ಯ, ಸಂಸ್ಕೃತಿಯನ್ನು ಕುರಿತು ಅನೇಕ ಗೋಷ್ಠಿ, ಚರ್ಚೆ, ಸಮಾವೇಶಗಳನ್ನು ಸಂಘಟಿಸಿ, ಬರಹಗಾರರ ಒಕ್ಕೂಟವನ್ನು ರಚಿಸಿ ಕಿರಿಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕಾರ ಕೈಗೊಂಡರು.
ಯಕ್ಷಮಂಡಲ ಚಿತ್ರ ಕಲಾಮಹೋತ್ಸವ, ಮೊದಲಾದ ಕಾಠ್ಯಕ್ರಮಗಳ ಮೂಲಕ ಸಾಂಪ್ರದಾಯಿಕ ಪುರಾತನ ಕಲೆಯ ಪ್ರದರ್ಶನಕ್ಕೆ ನೆರವು ಒದಗಿಸಿದರು. ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಹಳೆಯ ಮನೆಗಳನ್ನು ಕೆಡವಿದಾಗ ಅಲ್ಲಿಗೆ ಹೋಗಿ ಕಲಾತ್ಮಕ, ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಮೌಲಿಕ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನೇ ಬಳಸಿ ಇವರು ಸ್ವತಃ ನಿಮ್ಮಿಸಿದ ಮನೆ ಸಾವಿರಾರು ಸಂಸ್ಕೃತಿ ಪ್ರೇಮಿಗಳನ್ನು ಸೆಳೆಯುತ್ತಿದೆ. ‘ಹಸ್ತಶಿಲ್ಪ’ ಎಂಬ ಹೆಸರನ್ನಿಟ್ಟು ಈ ಮನೆಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿಟ್ಟಿದ್ದಾರೆ.
ಮಣಿಪಾಲದ ಸಮೀಪ ಇವರು ನಿಮ್ಮಿಸಿರುವ ‘ಸಂಸ್ಕೃತಿ ಗ್ರಾಮ’ ಅನೇಕ ದೃಷ್ಟಿಗಳಿಂದ ಅಪೂರ್ವವಾಗಿದೆ. ಹಿಂದಿನ ಕಾಲದಲ್ಲಿ ವಾಸಿಸುತ್ತಿದ್ದವರ ಜೀವನ ಶೈಲಿ ಕಣ್ಣಿಗೆ ಕಟ್ಟುವಂತೆ ಈ ಗ್ರಾಮವನ್ನು ನಿಮ್ಮಿಸಿದ ವೈಖರಿ ಬೆರಗುಗೊಳಿಸುವಂತಿದೆ. ಹಳ್ಳಿ ಹಾದಿಯ ಹಳೆ ಮೈಲಿಕಲ್ಲುಗಳು, ಸೀಮೆಎಣ್ಣೆಯ ದೀಪ, ಕಂಬಗಳು, ಚಕ್ಕಡಿಗಳು, ಹೀಗೆ ಕಣ್ಮರೆಯಾಗುತ್ತಿರುವ ಸಂಸ್ಕೃತಿಯ ಜೀವಂತ ಚಿತ್ರವೇ ಇಲ್ಲಿ ರೂಪು ತಳೆದಿದೆ.
ಸಾಹಿತ್ಯ, ಸಂಗೀತ, ಯಕ್ಷಗಾನ, ನೃತ್ಯ, ಜಾನಪದ, ಚಿತ್ರ, ಶಿಲ್ಪ, ನಾಟಕ ಹೀಗೆ ವಿಶೇಷವಾಗಿ ಸಂಸ್ಕೃತಿಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ನಾಡಿನ ಹೆಮ್ಮೆಯ ವ್ಯಕ್ತಿ ಶ್ರೀ ವಿಜಯನಾಥ ಶೆಣೈ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ತಾರಾ

ಬೆಳ್ಳಿತೆರೆಯ ವರ್ಣಮಯ ಕಲಾಲೋಕದಲ್ಲಿ ವೈವಿಧ್ಯಪೂರ್ಣ ಪಾತ್ರಗಳನ್ನು ಅಭಿನಯಿಸಿ ಕಲಾ ರಸಿಕರ ಮನ ಗೆದ್ದಿರುವ ಮೋಹಕ ಚಿತ್ರ ತಾರೆ ಕುಮಾರಿ ತಾರಾ ಅವರು.
೧೯೮೬ರಲ್ಲಿ ಬಾಲನಟಿಯಾಗಿ ಸಿನಿಮಾ ಉದ್ಯಮವನ್ನು ಪ್ರವೇಶಿಸಿದ ತಾರಾ ಅವರು ಈವರೆಗೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ೧೬೦. ‘ತುಳಸೀದಳ’ ದಿಂದ ಪ್ರಾರಂಭವಾದ ಅವರ ಕಲಾಜೀವನ `ನಿನಗಾಗಿ’ ಚಿತ್ರದವರೆಗೂ ಮುಂದುವರೆದಿದ್ದು ಇನ್ನೂ ಬೇಡಿಕೆಯಲ್ಲಿರುವುದೇ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿಯಾಗಿದೆ. ಕನ್ನಡದ ಎಲ್ಲ ಶ್ರೇಷ್ಠ ನಟ, ನಟಿಯರೊಡನೆ ಅಭಿನಯಿಸಿದ ಹೆಮ್ಮೆ ಇವರದು. ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಅಭಿನಯಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ.
‘ಸುಂದರ ಸ್ವಪ್ನಗಳು’, ‘ವಿಮೋಚನೆ’, ‘ಮುನ್ನುಡಿ’, ‘ಮತದಾನ’, ‘ಕಾನೂರು ಹೆಗ್ಗಡಿತಿ’ ಮೊದಲಾದವು ಇವರು ಅಭಿನಯಿಸಿದ ಕೆಲವು ಪ್ರಮುಖ ಚಲನಚಿತ್ರಗಳು, ಗಿರೀಶ್ ಕಾರ್ನಾಡ್, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ, ಕೆ. ಬಾಲಚಂದರ್, ಮಣಿರತ್ನಂ ಮುಂತಾದ ಗಣ್ಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಇವರದು.
‘ಕಾನೂರು ಹೆಗ್ಗಡಿತಿ’, ಚಿತ್ರದಲ್ಲಿನ ಇವರ ಅಭಿನಯಕ್ಕೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ದೊರೆತಿದೆ. ಈ ಚಿತ್ರ ರಾಷ್ಟ್ರೀಯ ಅಂತರರಾಷ್ಟ್ರೀಯ, ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ‘ಕ್ರಮ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮತದಾನ’ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ, ‘ಮುನ್ನುಡಿ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮಾ ಇಂಟಿಕತಾ’ ಚಿತ್ರಕ್ಕೆ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಲಭಿಸಿದೆ. ‘ಕಾನೂರು ಹೆಗ್ಗಡತಿ’, ‘ಮತದಾನ’ ಹಾಗೂ ‘ಮುನ್ನುಡಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಕನ್ನಡದ ಮಣ್ಣಲ್ಲಿ ಅರಳಿ, ದಕ್ಷಿಣ ಭಾರತದಲ್ಲೆಡೆ ಜನಪ್ರಿಯರಾಗಿ ಸ್ವಯಂ ಪ್ರತಿಭೆಯಿಂದ ಕಲಾಕ್ಷಿತಿಜದಲ್ಲಿ ಮಿನುಗುತ್ತಿರುವ ಮಿಂಚು ಕಂಗಳ ಅತ್ಯುತ್ತಮ ಅಭಿನೇತ್ರಿ ಕುಮಾರಿ ತಾರಾ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ.ವಿ. ರಾಧಾ

ನಾಲ್ಕು ದಶಕಗಳಿಗೂ ಮೀರಿ, ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಅಭಿನಯಿಸಿ ಕಲಾಪ್ರೇಮಿಗಳ ಅಚ್ಚು ಮೆಚ್ಚಿನ ಕಲಾವಿದೆ ಬಿ. ವಿ. ರಾಧಾ ಅವರು.
೧೯೪೮ ರಲ್ಲಿ ಹಿಂದುಳಿದ ಕುಟುಂಬದಲ್ಲಿ ಜನಿಸಿ ರಾಜಲಕ್ಷ್ಮಿ ಎನ್ನುವ ಜನ್ಮನಾಮವನ್ನು ಬದಲಿಸಿಕೊಂಡು ಬಿ.ವಿ. ರಾಧಾ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟರು. ಬಾಲ್ಯದಿಂದಲೂ ಸಿನಿಮಾ ನಾಟಕಗಳ ಆಕರ್ಷಣೆ ತೀವ್ರವಾಗಿ ಪ್ರಸಿದ್ಧ ನೃತ್ಯ ನಿರ್ದೇಶಕ ರಾಜ್‌ಕುಮಾರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. ೧೯೬೮ರಲ್ಲಿ ತಮಿಳಿನ ಪ್ರಸಿದ್ದ ಕಲಾವಿದೆ ದೇವಿಕಾ ಜೊತೆ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಎಂ.ಜಿ.ಆರ್., ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಪ್ರೇಮ್‌ನಜೀರ್ ಹಾಗೂ ಕನ್ನಡದಲ್ಲಿ ಡಾ|| ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣ್‌ಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಹೀಗೆ ದಕ್ಷಿಣ ಭಾರತದ ಎಲ್ಲ ಪ್ರತಿಷ್ಠಿತ ನಟರೊಂದಿಗೆ ನಾಯಕಿ, ಸಹಕಲಾವಿದೆ, ಪೋಷಕಿ ಪಾತ್ರಧಾರಿಯಾಗಿ ಹಾಗೂ ನವ ಪೀಳಿಗೆಯ ಕಲಾವಿದರಾದ ರವಿಚಂದ್ರನ್, ಶಿವರಾಜ್‌ಕುಮಾರ್‌, ರಮೇಶ್‌ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ.
ಜೊತೆಗೆ ಕಿರುತೆರೆಯಲ್ಲಿಯೂ ಜನಪ್ರಿಯರಾಗಿರುವ ಶ್ರೀಮತಿ ಬಿ.ವಿ. ರಾಧಾ ಅವರು ತಮ್ಮದೇ ನಾಟಕ ಸಂಸ್ಥೆ ಕಟ್ಟಿ ವೃತ್ತಿ ನಾಟಕಗಳಲ್ಲಿ ಅಭಿನಯಿಸಿ ಕರ್ನಾಟಕದಾದ್ಯಂತ ಪ್ರವಾಸಮಾಡಿದ್ದಾರೆ. ಬಿ.ವಿ. ರಾಧಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ‘ಗಂಗಾ ತುಂಗಾ’ ನಾಟಕ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ತಮ್ಮ ಪತಿ ನಿರ್ಮಾಪಕ ನಿರ್ದೇಶಕ ಕೆ.ಎಸ್‌.ಎನ್. ಸ್ವಾಮಿ (ರವಿ) ಅವರ ಜೊತೆಗೂಡಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ ‘ಜಂಬೂಸವಾರಿ’ಗೆ ಸ್ವರ್ಣಕಮಲ, ‘ಹರಕೆಯ ಕುರಿ’ಗೆ ರಜತ ಕಮಲ ಪ್ರಶಸ್ತಿಗಳು ದೊರಕಿವೆ.
* ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶಕ್ತ ಕಲಾವಿದರ ಕಲ್ಯಾಣ ಸಮಿತಿ ಹಾಗೂ ‘ಅಭಿನೇತ್ರಿ’ ಸಂಘದ ಪದಾಧಿಕಾರಿಯಾಗಿದ್ದಾರೆ.
ಚಲನ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಭಿನಯದಿಂದ ಕಲಾಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಿರುವ ಅಪರೂಪದ ಕಲಾವಿದೆ ಶ್ರೀಮತಿ ಬಿ.ವಿ. ರಾಧಾ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ರೀನಾಥ್

ಕನ್ನಡ ಚಲನಚಿತ್ರದ ರಂಗದ ಜನಪ್ರಿಯ ನಟರಾಗಿ, ಉದಯ ಟಿ.ವಿ.ಯ ಪ್ರಧಾನ ಕಾರ್ಯನಿರ್ವಾಹಕರಾಗಿ ಕಲಾರಸಿಕರ ಹೃದಯವನ್ನು ಸೂರೆಗೊಂಡಿರುವ ಪ್ರಣಯರಾಜ ಶ್ರೀ ಶ್ರೀನಾಥ್ ಅವರು.
ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ರಂಗಭೂಮಿಗೆ ಕಾಲಿರಿಸಿದ ಶ್ರೀನಾಥ್ ಅವರು `ಪ್ರಭಾತ್ ಕಲಾವಿದರು’, ನಟರಂಗ, ವೇದಿಕೆ ಸಂಸ್ಥೆಗಳಲ್ಲಿ ಅಭಿನಯಿಸುತ್ತ ಮೇಲೇರಿದರು. ೧೯೬೬ರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ‘ಮಧುರಮಿಲನ’ ಇವರ ಮೊದಲ ಚಿತ್ರ `ಶುಭಮಂಗಳ’ ಚಿತ್ರ ಇವರನ್ನು ತಾರಾ ಪಟ್ಟಕ್ಕೆ ಏರಿಸಿತು. ಡಾ|| ರಾಜಕುಮಾರ್‌ ಅವರ ನಂತರ ೧೦೦ ಸಿನಿಮಾಗಳಲ್ಲಿ ಅಭಿನಯಿಸಿದ ಎರಡನೆಯ ನಾಯಕ ನಟರು ಇವರು. ೧೬೮ ಚಲನಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ೬೧ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೂವತ್ತೇಳು ಚಲನಚಿತ್ರಗಳಲ್ಲಿ ಅಭಿನಯಿಸಿದ ಶ್ರೀನಾಥ್-ಮಂಜುಳಾ ಜೋಡಿ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ತಾರಾ ಜೋಡಿ ಎಂದು ಪ್ರಸಿದ್ದಿ ಪಡೆದಿದೆ. ಎಲ್ಲರೊಡನೆಯೂ ಸ್ನೇಹ ವಿಶ್ವಾಸದಿಂದ ನಡೆದುಕೊಳ್ಳುವ ಶ್ರೀನಾಥ್ ‘ಅಜಾತಶತ್ರು’ವೆಂದು ಪ್ರಖ್ಯಾತರಾಗಿದ್ದಲ್ಲದೆ ಐದು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಮಾಡಿದ್ದಾರೆ. ಅಭಿನಯ ಚಕ್ರವರ್ತಿ, ನಟನ ಕಲಾ ಸಾರ್ವಭೌಮ, ಅಭಿನಯ ಕಲಾರತ್ನ, ಮೊದಲಾದ ಬಿರುದುಗಳು ಇವರಿಗೆ ಸಂದಾಯವಾಗಿವೆ.
‘ಬೆಸುಗೆ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳು, ಮಠಮಾನ್ಯಗಳು ಶ್ರೀನಾಥ್ ಅವರನ್ನು ಸನ್ಮಾನಿಸಿ ಬಿರುದು, ಬಾವಲಿಗಳನ್ನು ನೀಡಿವೆ.
ಕನ್ನಡದಲ್ಲಿ ಉದಯ ಟಿ.ವಿ. ವಾಹಿನಿಯನ್ನು ಪ್ರಾರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಪ್ರಪಂಚದಾದ್ಯಂತ ಬಿತ್ತರಿಸಿದ ಕೀರ್ತಿ ಶ್ರೀನಾಥ್ ಅವರದು.
ಹಲವಾರು ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಅನೇಕ ಸಮಾಜಹಿತದ ಕಾಠ್ಯಕ್ರಮಗಳಲ್ಲಿ ಪೋಷಕರಾಗಿದ್ದಾರೆ, ದಾನಿಗಳಾಗಿದ್ದಾರೆ.
ರಂಗಭೂಮಿಯಿಂದ ಚಲನಚಿತ್ರ ರಂಗ, ಟಿ.ವಿ. ವಾಹಿ, ಕಲೆ ಹಾಗೂ ಸಂಸ್ಕೃತಿ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ಕಲಾವಿದರು ಶ್ರೀ ಶ್ರೀನಾಥ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಂಗಾಧರ್

ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸಿದ ಪ್ರತಿಭಾವಂತ ನಾಯಕ ನಟ ಶ್ರೀ ಎಸ್. ಗಂಗಾಧರ್ ಅವರು.
ತುಮಕೂರಿನಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಗಂಗಾಧರ್ ಅವರು ಎಸ್.ಎಸ್.ಎಲ್.ಸಿ. ಮುಗಿಸಿ ಕೈಗಾರಿಕಾ ತರಬೇತಿ ಪಡೆದು ಎಚ್.ಎ.ಎಲ್.ನಲ್ಲಿ ವೃತ್ತಿ ಆರಂಭಿಸಿದರು. ರಂಗಭೂಮಿಯಲ್ಲಿ ಆಸಕ್ತಿ ತಳೆದು ಹವ್ಯಾಸಿ ನಾಟಕರಂಗದಲ್ಲಿ ಅಭಿನಯಿಸಲು ಆರಂಭಿಸಿದ ಶ್ರೀಯುತರು ಎಚ್ಚಮ ನಾಯಕ, ದೇವದಾಸಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಭಾತ್ ಕಲಾವಿದರು, ಬಷೀರ್ ನಾಟಕಗಳಲ್ಲಿ ಅಭಿನಯಿಸಿದ ಶ್ರೀಯುತರ ಮೊದಲ ಚಲನ ಚಿತ್ರ ಜಿ.ವಿ. ಅಯ್ಯರ್ ನಿರ್ದೇಶನದ ‘ಚೌಕದ ದೀಪ’.
ಗೆಜ್ಜೆಪೂಜೆ, ಶರಪಂಜರ, ಸೀತ, ಸೋತು ಗೆದ್ದವಳು, ಮಣ್ಣಿನ ಮಗಳು, ಕಥಾ ಸಂಗಮ, ನನ್ನ ತಮ್ಮ, ಮುಂತಾದ ಸುಮಾರು ೮೦ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀ ಗಂಗಾಧರ್ ಅವರಿಗೆ ಯಶಸ್ಸು ತಂದು ಕೊಟ್ಟ ಚಿತ್ರಗಳು ಗೆಜ್ಜೆಪೂಜೆ, ಶರಪಂಜರ ಚಿತ್ರಗಳು, ಶ್ರೀಯುತರ ಮನೋಜ್ಞ ಅಭಿನಯದ ಪ್ರತೀಕಗಳು.
ಶರಪಂಜರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕಾರ, ಗೆಜ್ಜೆ ಪೂಜೆ ಮತ್ತು ಕಥಾ ಸಂಗಮ ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಶ್ರೀಯುತರ ಅಭಿನಯಕ್ಕೆ ಸಂದ ಗೌರವಗಳಾಗಿವೆ.
ಗೆಜ್ಜೆಪೂಜೆ, ಶರಪಂಜರದಂಥ ಚಿತ್ರಗಳಲ್ಲಿನ ವಿಶಿಷ್ಟ ಅಭಿನಯದಿಂದಾಗಿ ಚಿತ್ರರಸಿಕರ ಮನ ಗೆದ್ದಿರುವ ಪ್ರತಿಭಾವಂತ ನಾಯಕ ನಟರು ಶ್ರೀ ಗಂಗಾಧರ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿದ್ದಲಿಂಗಯ್ಯ

ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಸಿಕರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಪ್ರತಿಭಾವಂತ ಚಲನಚಿತ್ರ ನಿರ್ದೇಶಕರು ಶ್ರೀ ಸಿದ್ದಲಿಂಗಯ್ಯ ಅವರು.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ, ತರೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ೧೯೩೬ ರಲ್ಲಿ ಜನಿಸಿದ ಶ್ರೀ ಸಿದ್ದಲಿಂಗಯ್ಯನವರಿಗೆ ಎಳವೆಯಲ್ಲಿಯೇ ಅಭಿನಯದಲ್ಲಿ ಆಸಕ್ತಿ, ತಾತ, ಸೋದರಮಾವ ಹಳ್ಳಿಯ ಪ್ರತಿಷ್ಠಿತ ಕಲಾವಿದರಾಗಿದ್ದುದು ಈ ಆಸೆಗೆ ಸ್ಫೂರ್ತಿ.
ಮಾಧ್ಯಮಿಕ ಶಿಕ್ಷಣದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಡಚಣೆಯಾದಾಗ ಕಲಾವಿದನಾಗಬೇಕೆಂಬ ಹೆಬ್ಬಯಕೆಯಿಂದ ಮೈಸೂರಿಗೆ ಪ್ರಯಾಣ. ಫೋರ್‌ಬಾಯ್ ಆಗಿ ನವಜ್ಯೋತಿ ಸ್ಟುಡಿಯೋದಲ್ಲಿ ವೃತ್ತಿ ಆರಂಭಿಸಿ, ಲೈಟ್‌ಬಾಯ್ ಆಗಿ, ನಿರ್ದೇಶಕ ಶಂಕರ್‌ಸಿಂಗ್‌ ಅವರಿಗೆ ಸಹಾಯಕ ನಿರ್ದೆಶಕರಾಗಿ ಹಂತಹಂತವಾಗಿ ವೃತ್ತಿಯಲ್ಲಿ ಬೆಳೆದ ಶ್ರೀಯುತರು ೧೯೫೬ರಲ್ಲಿ ಮದ್ರಾಸಿಗೆ ತೆರಳಿ ಬಿ. ವಿಠಲಾಚಾರ್ಯರಲ್ಲಿ ಸಹಾಯಕರಾಗಿ ಅವರ ಸಂಸ್ಥೆಯ ೧೫ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ವೈ. ಆರ್. ಸ್ವಾಮಿ, ಕೆ.ಎಸ್.ಎಲ್. ಸ್ವಾಮಿ ಮೊದಲಾದ ನಿರ್ದೆಶಕರೊಂದಿಗೆ ಕೆಲಸ ಮಾಡಿ ಅನುಭವ ಗಳಿಸಿದರು.
೧೯೬೯ರಲ್ಲಿ ನಿರ್ದೇಶಿಸಿದ ಚಲನಚಿತ್ರ ‘ಮೇಯರ್ ಮುತ್ತಣ್ಣ’ ದಿಂದ ಭಾಗ್ಯದಯ. ಅಲ್ಲಿಂದ ಎರಡು ವರ್ಷಕ್ಕೂ ಹೆಚ್ಚು ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ನಿರ್ದೇಶನ ಶ್ರೀಯುತರಿಗೆ ಯಶಸ್ಸು ತಂದುಕೊಟ್ಟಿತು. ಕರ್ನಾಟಕ ಸರ್ಕಾರದಿಂದ ಈ ಚಿತ್ರಕ್ಕೆ ಚಿತ್ರನಾಟಕ ಹಾಗೂ ದ್ವಿತೀಯ ಚಿತ್ರ ಪ್ರಶಸ್ತಿ, ತಾಂತ್ರಿಕ ಪರಿಣತಿಯೆಂಬ ಹೆಗ್ಗಳಿಕೆ ಗಳಿಸಿಕೊಟ್ಟ ದೃಶ್ಯ ಹೊಂದಿರುವ ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಸಂಭಾಷಣೆ, ನಿರ್ದೇಶನ, ಚಿತ್ರನಾಟಕ, ಪ್ರಥಮ ಚಿತ್ರದ ಪ್ರಶಸ್ತಿ, ಈ ಚಿತ್ರವು ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿತು. ಅಲ್ಲದೆ ೧೯೯೩ -೯೪ ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಶ್ರೀಯುತರಿಗೆ ಸಂದಿದೆ. ದೂರದ ಬೆಟ್ಟ, ತಾಯಿ ದೇವರು, ನ್ಯಾಯವೇ ದೇವರು, ನಮ್ಮ ಸಂಸಾರ, ಹೇಮಾವತಿ ಬಾಳು ಬೆಳಗಿತು ಮೊದಲಾದವು ಶ್ರೀಯುತರ ಪ್ರಮುಖ ಚಿತ್ರಗಳು, ಕಲಾವಿದರ ಸಾಮರ್ಥ್ಯ ಗುರುತಿಸಿ ಸಮರ್ಥವಾಗಿ ಬಳಸಿಕೊಂಡು ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಹೊಸ ಕಲಾವಿದ, ತಂತ್ರಜ್ಞರನ್ನು ಪರಿಚಯಿಸಿದ ಅವಿಸ್ಮರಣೀಯ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕರು ಶ್ರೀ ಸಿದ್ಧಲಿಂಗಯ್ಯ ಅವರು.

Categories
ಕ್ರೀಡೆ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಬೋನಿಫೇಸ್ ಪ್ರಭು

ಮೂರುವರೆ ವರ್ಷದ ಮಗುವಾಗಿದ್ದಾಗ ವೈದ್ಯರು ಮಾಡಿದ ತಪ್ಪೆಂದರಿಂದ ಶಾಶ್ವತವಾಗಿ ಅಂಗವಿಕಲರಾಗಿ ಗಾಲಿ ಕುರ್ಚಿಯ ಮೇಲೆ ಕಾಲ ಕಳೆಯಬೇಕಾಗಿ ಬಂದರೂ ಎದೆಗುಂದದೆ ಅಂತರರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುವಾಗಿ ಹೆಮ್ಮೆಯ ಸಾಧನೆ ಮಾಡಿದವರು ಶ್ರೀ ಎಚ್. ಬೋನಿಫೇಸ್ ಪ್ರಭು ಅವರು.
ಗಾಲಿಕುರ್ಚಿಯ ಮೇಲೆ ಕುಳಿತು ಪಾಠ ಕೇಳುವ ಅವಕಾಶವನ್ನು ಯಾವ ಶಾಲೆಯೂ ಒದಗಿಸದಿರುವುದರಿಂದ ಪ್ರಭು ಶಾಲೆಗೆ ಹೋಗಿ ಶಿಕ್ಷಣ ಪಡೆಯುವ ಅವಕಾಶದಿಂದಲೂ ವಂಚಿತರಾದರು. ಓದಿನ ಬಗ್ಗೆ ಅವರಿಗಿದ್ದ ಅಪಾರ ಆಸಕ್ತಿಯಿಂದ ಮನೆಯಲ್ಲಿಯೇ, ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದರು. ನಂತರ ಸಾಫ್ಟ್‌ವೇರ್‌ನಲ್ಲಿ ಡೇಟಾ ಬೇಸ್ ಮ್ಯಾನೇಜ್‌ಮೆಂಟ್‌ ಡಿಪ್ಲೊಮಾ ಮಾಡಿಕೊಂಡರು. ಅದರ ಫಲವಾಗಿ ಭಾರತ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕಳೆದ ಏಳು ವರ್ಷಗಳಿಂದ ಉದ್ಯೋಗಿಯಾಗಿದ್ದರೂ ಪ್ರಭು ತಮ್ಮ ಕ್ರೀಡಾಸಕ್ತಿಯನ್ನು ಮುಖ್ಯವಾಗಿ ಟೆನಿಸ್ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ.
ಗಾಲಿಕುರ್ಚಿ ಟೆನಿಸ್ ಪಟುವಾಗಿ ವರ್ಷದಿಂದ ವರ್ಷಕ್ಕೆ ಸಾಧನೆ ಮಾಡುತ್ತ ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ, ನ್ಯೂಜಿಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ನಡೆದ ಮುಕ್ತ ಟೆನಿಸ್ ಪಂದ್ಯಾವಳಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೆಲವು ಪಂದ್ಯಗಳಲ್ಲಿ ಚಾಂಪಿಯನ್‌ಷಿಪ್ಪನ್ನು, ಗ್ರಾಂಡ್‌ ಸ್ಲಾಮನ್ನೂ ಸಾಧಿಸಿದರು. ಭಾರತದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುಗಳ ಪೈಕಿ ವಿಶ್ವ ಬ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೊದಲಿಗರು. ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡೆಗಳ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು.
ಭಾರತದ ಅಂಗವಿಕಲ ಕ್ರೀಡಾಪಟುಗಳಿಗಾಗಿ ಒಂದು ಗಾಲಿಕುರ್ಚಿ ಟೆನಿಸ್ ಅಕಾಡೆಮಿ ಸ್ಥಾಪಿಸಬೇಕೆಂಬ ಕನಸನ್ನು ಹೊಂದಿರುವ ಭಾರತೀಯರೆಲ್ಲರೂ ಅಭಿಮಾನಪಡುವಂತಹ ಧೀಮಂತ ಕ್ರೀಡಾಪಟು ಶ್ರೀ ಬೋನಿಫೇಸ್ ಪ್ರಭು ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ.ಎ. ಪೊನ್ನಪ್ಪ

ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವಿಭಾಗದ ವರದಿಗಳಿಗೆ ಹೆಚ್ಚಿನ ಮಾನ್ಯತೆಯನ್ನು ತಂದು ಕೊಟ್ಟಿರುವವರು ಜನಪ್ರಿಯ ಕ್ರೀಡಾ ಪತ್ರಕರ್ತರಾದ ಶ್ರೀ ಎಂ. ಎ. ಪೊನ್ನಪ್ಪ ಅವರು.
ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿರುವ ಶ್ರೀ ಪೊನ್ನಪ್ಪ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡಿದ್ದರು. ಪದವೀಧರರಾದ ಮೇಲೆ ಪತ್ರಿಕೋದ್ಯಮದ ಕಡೆಗೆ ಆಕರ್ಷಿತರಾಗಿ ಕೊಡಗಿನ ದಿನಪತ್ರಿಕೆ ‘ಶಕ್ತಿ’ಯಲ್ಲಿ ವೃತ್ತಿ ಪ್ರಾರಂಭಿಸಿದರು. ಲೋಕವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ‘ಪ್ರಜಾವಾಣಿ’ ಬಳಗಕ್ಕೆ ಸೇರ್ಪಡೆ ಯಾದರು. ನಂತರ ನೈಜ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಕರ್ನಾಟಕದ ವಿವಿಧೆಡೆಗಳಲ್ಲಿ ಹಾಗೂ ಭಾರತದ ಬೇರೆ ಬೇರೆ ನಗರಗಳಲ್ಲಿ ನಡೆದ ಅನೇಕ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಗಳ ವರದಿಯನ್ನು ವೈಶಿಷ್ಟ್ಯಪೂರ್ಣವಾಗಿ ಮಾಡಿ ಓದುಗರ ವಿಶ್ವಾಸಕ್ಕೆ ಪಾತ್ರರಾದರು. ಹಲವು ಬಾರಿ ವಿದೇಶಕ್ಕೆ ಹೋಗಿ ಅಂತರರಾಷ್ಟ್ರೀಯ ಕ್ರೀಡೆಗಳನ್ನು ವರದಿ ಮಾಡಿ ಅಲ್ಲಿ ಕನ್ನಡಿಗ ಕ್ರೀಡಾಪಟುಗಳ ಸಾಧನೆಯನ್ನು ಆಕರ್ಷಕವಾಗಿ ನಿರೂಪಿಸಿದ್ದಾರೆ.
ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಅಧ್ಯಕ್ಷರಾಗಿ ಬೆಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿ, ಒಂಬತ್ತು ಬಾರಿ ಪ್ರೆಸ್ ಕ್ಲಬ್‌ನ ಪ್ರಧಾನ ಕಾವ್ಯದರ್ಶಿಯಾಗಿ ದುಡಿದಿದ್ದಾರೆ. ಕ್ರೀಡಾ ವರದಿಗಾರರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ವರ್ಷದ ಅತ್ಯುತ್ತಮ ಕ್ರೀಡಾ ವರದಿಗಾರ ಪ್ರಶಸ್ತಿ, ದಸರಾ ಕ್ರೀಡಾ ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಶ್ರೀಯುತರಿಗೆ ಸಂದಿವೆ.
ಚುರುಕಿನ ಕೆಲಸಗಾರರಾಗಿರುವ, ಪತ್ರಿಕಾ ವೃತ್ತಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸ್ನೇಹಮಯಿ ಕ್ರೀಡಾ ಸಂಪಾದಕ ಶ್ರೀ ಎಂ. ಎ. ಪೊನ್ನಪ್ಪ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಸಿ. ಬೈಸರ್ ರೆಹಮಾನ್

ಬೀದರಿನ ಜನಪ್ರಿಯ ಸಮಾಜಸೇವಾಕರ್ತರೂ, ಸದಾ ಚಟುವಟಿಕೆಯ ಪತ್ರಕರ್ತರೂ ಆಗಿ ಹೆಸರಾದವರು ಖೈಸರ್ ರೆಹಮಾನ್ ಅವರು.
ಐವತ್ತೆಂಟು ವರ್ಷ ವಯಸ್ಸಿನ ಖೈಸರ್ ರೆಹಮಾನ್ ಅವರು ಪ್ರಾರಂಭದಿಂದಲೂ ಬೀದರಿನ ಸಾರ್ವಜನಿಕ ಹಿತಾಸಕ್ತಿಗೆ ದುಡಿದವರು. ಬೀದರ್‌ನ ಸ್ಥಳೀಯ ಪತ್ರಿಕೆಯಾದ ಗವಾನ್ ಉರ್ದು ಮತ್ತು ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಲೇ, ಬೀದರ್‌ ನಗರ ಸಭೆಯ ಸದಸ್ಯರೂ, ವಕ್ಸ್ ಸಮಿತಿಯ ಸದಸ್ಯರೂ, ಸೈಕಲ್ ರಿಕ್ಷಾ – ಆಟೋರಿಕ್ಷಾ ಸಂಘದ ಅಧ್ಯಕ್ಷರೂ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರೂ ಆಗಿ ಶ್ರಮಿಸುತ್ತಿದ್ದಾರೆ. ಬೀದರ್ ಜಿಲ್ಲೆಯ ಹದಿನೈದು ಅಂಶ ಕಾರ್ಯಕ್ರಮ ಸಮಿತಿ ಸದಸ್ಯರಾಗಿ ಬೀದರಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೀದರಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಈದ್ದಾ ನಿರ್ವಹಣಾ ಸಮಿತಿ, ಬೀದರಿನ ಸಾರ್ವಜನಿಕರ ಸಲಹಾ ಮತ್ತು ಶಾಂತಿ ಸಮಿತಿಗಳ ಸದಸ್ಯರಾಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಬೀದರಿನ ಸಾರ್ವಜನಿಕರ ಸಂಘಟಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀಯುತರು ಶಿಕ್ಷಣ ಕ್ಷೇತ್ರದ ಔನ್ನತ್ಯಕ್ಕೆ ಗಮನ ಹರಿಸಿ, ದಾರುಲ್ ಉಲೂಮ್ ಮಹಮೂದ್ ಗವಾನ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರೂ, ಶಾಂತಿ ವರ್ಧಕ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಬೀದರಿನ ಸಣ್ಣ ಪುಟ್ಟ ವ್ಯಾಪಾರಿಗಳ ಹಿತಾಸಕ್ತಿಗೆ ದುಡಿಯುತ್ತ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹೈದರಾಬಾದಿನ ‘ಸಿಯಾಸತ್’ ಉರ್ದು ಪತ್ರಿಕೆಯ ಪ್ರತಿನಿಧಿ ಕರ್ನಾಟಕ ರಾಜ್ಯ ಉರ್ದು ಪತ್ರಕರ್ತರ ಸಂಘದ ಅಧ್ಯಕ್ಷ ಹೀಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವ ನಿರ್ಭೀತ ಲೇಖನಕ್ಕೆ ಹೆಸರಾದವರು.
ಸಮಾಜಸೇವಕ, ಪತ್ರಕರ್ತ, ಕ್ರೀಡಾ ಪ್ರಚಾರಕರಾಗಿ ಜಾತ್ಯಾತೀತತೆಯನ್ನು ಧೈಯವಾಗಿಟ್ಟುಕೊಂಡು ಶ್ರಮಿಸುತ್ತಿರುವ ಪತ್ರಿಕೋದ್ಯಮಿ ಶ್ರೀ ಖೈಸರ್ ರೆಹಮಾನ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುರೇಂದ್ರ ಭೀಮರಾವ್ ದಾನಿ

ವಸ್ತುನಿಷ್ಠ ವರದಿಗಾರರು, ಖಚಿತ ಬರವಣಿಗೆಗೆ ಮಾದರಿ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.
೧೯೪೭ ರಲ್ಲಿ ಸಂಯುಕ್ತ ಕರ್ನಾಟಕದ ವರದಿಗಾರರಾಗಿ ವೃತ್ತಿಯನ್ನು ಆರಂಭಿಸಿದ ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು ಸುದ್ದಿ ಸಂಪಾದಕರಾಗಿ, ಸಹಾಯಕ ಸಂಪಾದಕರಾಗಿ ಹೆಸರು ಗಳಿಸಿ, ೧೯೮೩ ರಲ್ಲಿ ಸಂಪಾದಕರಾಗಿ ನಿವೃತ್ತಿ ಹೊಂದಿದರು. ಕನ್ನಡದ ಪ್ರಮುಖ ಪತ್ರಿಕೋದ್ಯಮಿಗಳಲ್ಲಿ ಒಬ್ಬರಾದ ಶ್ರೀಯುತರು ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತೀಯ ಸೇವಾದಳದ ಸಂಘಟಕರಲ್ಲೊಬ್ಬರು.
೧೯೬೫ರಲ್ಲಿ ಕಾರವಾರದಲ್ಲಿ, ೧೯೮೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಶ್ರೀಯುತರು ಅನೇಕ ಪತ್ರಕರ್ತರ ಶಿಬಿರಗಳು ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ಕನ್ನಡ ಪ್ರಕಾಶನ ಸಂಸ್ಥೆ ಮಿಂಚಿನಬಳ್ಳಿ ಗ್ರಂಥಮಾಲೆಯ ಪುನರುಜ್ಜಿವನ ಕಾರ್ಯದಲ್ಲಿ ಸ್ತುತ್ಯಾರ್ಹ ಸೇವೆ ಸಲ್ಲಿಸಿರುವ ಶ್ರೀಯುತರು ಆರು ಸ್ವತಂತ್ರ ಕೃತಿಗಳನ್ನು, ಮೂರು ಭಾಷಾಂತರ ಕೃತಿಗಳನ್ನು, ಐದು ಸಂಪಾದಿತ ಗ್ರಂಥಗಳನ್ನು ರಚಿಸಿದ್ದಾರೆ. ಗಾಂಧಿ ವಿಚಾರಧಾರೆ, ಸರ್ವೋದಯ ತತ್ತ್ವಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶ್ರೀ ದಾನಿ ಅವರು ಕುಮಾರವ್ಯಾಸ ಭಾರತದ ವಿಶೇಷ ಅಧ್ಯಯನ ಮಾಡಿದ್ದಾರೆ. ವಿವಿಧ ಪತ್ರಿಕೆಗಳು, ವಿಶೇಷಾಂಕಗಳು ಹಾಗೂ ಸ್ಮರಣ ಸಂಚಿಕೆಗಳಿಗೆ ಶ್ರೀಯುತರು ಬರೆದಿರುವ ನೂರಾರು ಲೇಖನಗಳು ಮೌಲಿಕವಾದವು.
ಪತ್ರಿಕಾರಂಗದಲ್ಲಿ ನಿಷ್ಠೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿರುವ ಪತ್ರಕರ್ತರು ಶ್ರೀ ಸುರೇಂದ್ರ ಭೀಮರಾವ್ ದಾನಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ನರಪತ್‌ಚಂದ್ ಸೋಲಂಕಿ

ದೃಷ್ಟಿಹೀನರ ಚಿಕಿತ್ಸೆಯಲ್ಲಿ ಅಹರ್ನಿಶಿ ತೊಡಗಿಸಿಕೊಂಡು ಹತಭಾಗ್ಯ ಬಡಜನತೆಯ ಸೇವೆಯಲ್ಲಿ ಧನ್ಯತೆಯನ್ನು ಕಾಣುತ್ತಿರುವ ಸಮಾಜಸೇವಕ ನೇತ್ರವೈದ್ಯ ಡಾ|| ನರಪತ್‌ಚಂದ
ಸೋಲಂಕಿ ಅವರು.
ಮಹಾವೀರ ನೇತ್ರ ಚಿಕಿತ್ಸಾಲಯದಲ್ಲಿ ೧೯೮೭ರಲ್ಲಿ ಪ್ರಧಾನ ಸರ್ಜನ್ ಆಗಿ ಸೇವೆ ಪ್ರಾರಂಭಿಸಿದ ಶ್ರೀ ಸೋಲಂಕಿ ಅವರು ಬೆಂಗಳೂರಿನ ಅನೇಕ ಚಿಕಿತ್ಸಾಲಯಗಳಲ್ಲಿ ತಮ್ಮ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ವ್ಯಾಸಂಗ ಮಾಡುತ್ತಿದ್ದಾಗಲೇ ಹಿರಿಯ ವೈದ್ಯರೊಡಗೂಡಿ ನೂರಾರು ನೇತ್ರ ಚಿಕಿತ್ಸಾ ಶಿಬಿರಗಳಲ್ಲಿ ಪಾಲ್ಗೊಂಡು ಅನುಭವ ಗಳಿಸಿಕೊಂಡ ಶ್ರೀಯುತರು ೧೯೯೦ನೇ ಇಸವಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಪ್ರಾರಂಭಿಸಿ ಎಂಟು ವರ್ಷಗಳ ಅವಧಿಯಲ್ಲಿ ೪೦ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ.
‘ಪ್ರಾಜೆಕ್ಟ್ ದೃಷ್ಟಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಜಾತಿ ಮತ, ವರ್ಗಗಳ ಭೇದವಿಲ್ಲದೇ ಕಡು ಬಡವರಿಗೆ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿ ಈವರೆಗೆ ೪೦ ಸಾವಿರ ಮಂದಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಪ್ರತಿ ತಿಂಗಳೂ ಇಬ್ಬರು ಕಿರಿಯ ವೈದ್ಯರಿಗೆ ವಿಶೇಷವಾದ ತರಬೇತಿಯನ್ನು ನೀಡುವ ಮೂಲಕ ದೃಷ್ಟಿದಾನ ಚಳುವಳಿಯಲ್ಲಿ ತಮ್ಮೊಡನೆ ನೂರಾರು ಕೈಗಳೂ ಸೇರಿಕೊಳ್ಳಲೆಂಬ ಉದಾತ್ತ ಧೈಯವನ್ನು ಹೊಂದಿರುವ ಶ್ರೀ ಸೋಲಂಕಿಯವರಿಗೆ ಸೇವಾ ಶಿರೋಮಣಿ, ಕರ್ನಾಟಕ ಜ್ಯೋತಿ ಪ್ರಶಸ್ತಿ, ಸಮಾಜ ಭೂಷಣ ಮೊದಲಾದ ಪುರಸ್ಕಾರಗಳು ಸಂದಾಯವಾಗಿವೆ.
“ನೋಡುವ ಹಕ್ಕು ಪ್ರತಿ ವ್ಯಕ್ತಿಗೂ ಇದೆ’ ಎಂಬ ಧೈಯ ವಾಕ್ಯವನ್ನು ಘೋಷಿಸಿ ಅಂತಹ ಉನ್ನತ ಗುರಿಯನ್ನು ಸಾಧಿಸುವೆಡೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಮಾನವೀಯ ಅಂತಃ ಕರಣದ ಅಪರೂಪದ ನೇತ್ರವೈದ್ಯ ಡಾ|| ನರಪತ್‌ಚಂದ ಸೋಳಂಕಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಯು.ಎಸ್. ಕೃಷ್ಣಾ ನಾಯಕ್

ನಾಡಿನ ವೈದ್ಯಕೀಯ ಕ್ಷೇತ್ರಕ್ಕೆ ಬಹುಮುಖ ಸೇವೆಯನ್ನು ಸಲ್ಲಿಸುತ್ತಿರುವ ಪ್ರತಿಭಾವಂತ ದಂತ ವೈದ್ಯರು ಪ್ರೊ. ಯು.ಎಸ್. ಕೃಷ್ಣಾ ನಾಯಕ್ ಅವರು.
೧೯೬೧ರಲ್ಲಿ ಜನಿಸಿದ ಶ್ರೀ ಕೃಷ್ಣಾನಾಯಕ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿ ಮಣಿಪಾಲದ ಕರ್ನಾಟಕ ವೈದ್ಯಕೀಯ ಕಾಲೇಜಿನಿಂದ ಬಿ.ಡಿ.ಎಸ್. ಪದವಿ, ಎಂ.ಡಿ.ಎಸ್. ಪದವಿ ಪಡೆದರು.
ಮಂಗಳೂರಿನ ಎಂ.ಬಿ. ಶೆಟ್ಟಿ ಸ್ಮಾರಕ ದಂತವಿಜ್ಞಾನ ಸಂಸ್ಥೆಯಲ್ಲಿ ಆರ್ಥೋಡಾಂಟಿಕ್ಸ್ ಮತ್ತು ಡೆಂಟೋ ಫಿಸಿಯಲ್ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಅಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀಯುತರು ಪ್ರಸಕ್ತ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ ಡೀನಾಗಿ, ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಮತ್ತು ಶೈಕ್ಷಣಿಕ ಪರಿಷತ್ತಿಗೆ ಎರಡು ಬಾರಿ ಸದಸ್ಯರಾಗಿ, ಪ್ರಸಕ್ತ ಮಂಗಳೂರಿನ ದಂತ ಶಸ್ತ್ರಚಿಕಿತ್ಸಾ ಅಧ್ಯಯನಗಳ ಮಂಡಳಿ ಸದಸ್ಯರಾಗಿ, ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಮತ್ತು ಯೂನಿವರ್ಸಿಟಿ ಆಫ್ ಹೆಲ್ತ್‌ ಅಂಡ್‌ ಸೈನ್ಸಸ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರು, ಬೆಂಗಳೂರು, ಮೈಸೂರು, ಕರ್ನಾಟಕ, ಗೋವಾ ಮೊದಲಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗೆ ಪರೀಕ್ಷಕರಾಗಿರುವ ಶ್ರೀಯುತರು ದಂತವೈದ್ಯಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಫೆಲೋ ಆಗಿ, ಉಪಾಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಶ್ರೀಯುತರ ಹಲವಾರು ಲೇಖನಗಳು ಪ್ರಕಟವಾಗಿವೆ. ಭಾರತೀಯ ದಂತ ವೈದ್ಯ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ, ಭಾರತದ ಉತ್ತಮ ನಾಗರಿಕ ಪ್ರಶಸ್ತಿ ಮುಂತಾದವು ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು. ‘ಹೆತ್ತಿ ಟೀತ್ ಫಾರ್ ಹೆಲ್ತ್‌ ಲೈಫ್’ ಪುಸ್ತಕವನ್ನು ಪ್ರಕಟಿಸಿರುವ ಶ್ರೀಯುತರು ಸಕ್ರಿಯ ರೊಟೇರಿಯನ್ನಾಗಿ ಹಲವಾರು ದಂತ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದಾರೆ.
ದಂತ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರತಿಭಾವಂತ ದಂತ ಚಿಕಿತ್ಸಾ ತಜ್ಞ ಶ್ರೀ ಕೃಷ್ಣಾ ನಾಯಕ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ.ಎಸ್. ಹೆಗಡೆ

ನರವಿಜ್ಞಾನ ವೈದ್ಯಕೀಯ ರಂಗದಲ್ಲಿ ಅಪೂರ್ವ ಸಾಧನೆ ಮಾಡಿ, ಹದಿನೈದು ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯ ಮೂಲಕ ಜನರಿಗೆ ಜೀವದಾನ ಮಾಡಿದ ಮಹಾನ್ ವೈದ್ಯ ಡಾ|| ಅಲಂಗಾ‌ ಸತ್ಯರಂಜನದಾಸ ಹೆಗ್ಡೆ,
ಕರ್ನಾಟಕದ ಪೆರ್ಡೂರಿನಲ್ಲಿ ೧೯೫೨ರಲ್ಲಿ ಜನಿಸಿದ ಅಲಂಗಾರ್ ಸತ್ಯರಂಜನದಾಸ್ ಹೆಗ್ಡೆ ಬಾಲ್ಯದ ಶಿಕ್ಷಣದ ನಂತರ ವೈದ್ಯಕೀಯ ಪದವಿಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯಕೀಯ ಸಂಸ್ಥೆ ಸೇರಿದರು. ನಂತರ ನಿಮ್ಹಾನ್ಸ್‌ನಲ್ಲಿ ನರ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯನ್ನು ಪಡೆದು, ಜಪಾನಿನ ಶಿಂಶು ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ. ಪದವಿ ಗಳಿಸಿದರು. ಜಪಾನ್ ಸರ್ಕಾರದಿಂದ ‘ಮೊನ್‌ಬುಷೋ’ ವಿದ್ಯಾರ್ಥಿ ವೇತನ ಪಡೆದು ವಿಶೇಷ ತರಬೇತಿಗಾಗಿ ಕೆನಡಾದ ಪ್ರಸಿದ್ಧ ವಿಶ್ವವಿದ್ಯಾನಿಲಯ ಸೇರಿದರು.
ದೇಶವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ನಂತರ ಬೆಂಗಳೂರಿನ ಮಣಿಪಾಲ್ ನರರೋಗ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಪ್ರಸಕ್ತ ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವಾರು ಆಸ್ಪತ್ರೆಗಳಲ್ಲಿ ನರವಿಜ್ಞಾನ ವಿಭಾಗ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿರುವ ಡಾ|| ಎ. ಎಸ್. ಹೆಗ್ಡೆ ಅವರು ಅನೇಕ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳನ್ನು ಕಂಡುಹಿಡಿದಿದ್ದಾರೆ. ಮಿದುಳು ರಕ್ಷಣೆ ಹಾಗೂ ಮಿದುಳಿನ ಶಸ್ತ್ರ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ನರ ರೋಗದಿಂದ ಬಳಲುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲು ಹಾಗೂ ಆ ಬಗ್ಗೆ ಇತರರಿಗೂ ಅರಿವು ಮೂಡಿಸಲು ಶಿರ ಸುಭದ್ರ ಫೌಂಡೇಷನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅಂಗವಿಕಲ ಮಕ್ಕಳಿಗೆ ಉಚಿತ ನರಪರೀಕ್ಷೆ ನೀಡುವುದು, ಬಡ ರೋಗಿಗಳಿಗೆ ಸಹಾಯಧನ ನೀಡುವುದು, ಉಚಿತ ನರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು, ಮಿದುಳು ಗಡ್ಡೆ, ಮಿದುಳು ರಕ್ತಸ್ರಾವ ಕುರಿತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸುವುದು ಇತ್ಯಾದಿ ಸಾಮಾಜಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ತೊಡಗಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಸದಸ್ಯರು, ಗೌರವ ಸದಸ್ಯರೂ ಆಗಿ ನೇಮಕಗೊಂಡಿರುವ ಶ್ರೀಯುತರು ಮಿದುಳು, ನರರೋಗ, ಪಾರ್ಶ್ವವಾಯು, ನರ ಕ್ಯಾನ್ಸರ್ ಇತ್ಯಾದಿ ವಿಷಯಗಳಲ್ಲಿ ವ್ಯಾಪಕ ಸಂಶೋಧನೆ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಮಿದುಳು ಆಘಾತದ ನಂತರದ ಸ್ಥಿತಿ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಾರೆ.
ನರ ವಿಜ್ಞಾನಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿ, ನರರೋಗಿಗಳ ಚಿಕಿತ್ಸಾ ವಿಧಾನದಲ್ಲಿ ಸಂಶೋಧನೆಗಳನ್ನು ಮಾಡಿರುವ ನರರೋಗತಜ್ಞ ಡಾ. ಎ.ಎಸ್. ಹೆಗ್ಡೆ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮೋಹಿನಿ ಎ. ನಾಯಕ್

ಅಂಗವಿಕಲ ಬಡ ಮಕ್ಕಳು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿಯಬಾರದೆಂದು ಅವರಿಗೆ ಉಚಿತ ಶಿಕ್ಷಣ, ವೃತ್ತಿ ತರಬೇತಿ ನೀಡಿ ಜೀವನೋಪಾಯ ಕಲ್ಪಿಸುತ್ತಿರುವವರು ಶ್ರೀಮತಿ ಮೋಹಿನಿ ಎ. ನಾಯಕ್ ಅವರು.
೧೯೪೩ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ಶ್ರೀಮತಿ ಮೋಹಿನಿ ಅವರು ಪ್ರಾರಂಭದಿಂದಲೂ ಸಮಾಜಸೇವೆಗೆ ಒಲಿದವರು. ವಿವಿಧ ಸೇವಾ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ನಂತರ ೧೯೮೧ರಲ್ಲಿ ಅಂಗವಿಕಲ ಬಡ ಮಕ್ಕಳ ದುಸ್ಥಿತಿಗೆ ಮನಕರಗಿ ಮಂಗಳೂರು ಬಳಿಯ ವಾಮಂಜೂರಿನಲ್ಲಿ ಮಂಗಳಜ್ಯೋತಿ ಶಾಲೆಯನ್ನು ಸ್ಥಾಪಿಸಿದರು. ಮೊದಲಿಗೆ ಕೇವಲ ಆರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆ ಇಂದು ೫೬೬ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ ಹಾಗೂ ಆಹಾರ ಈ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಅಂಗವಿಕಲರಿಗೆ ಅಗತ್ಯವಾದ ಸಹಾಯ ಸಾಧನಗಳನ್ನೂ ನೀಡಲಾಗುತ್ತಿದೆ. ಅದರಿಂದ ಅಂಗವಿಕಲರ ದಿನ ನಿತ್ಯದ ಬದುಕು ಸರಾಗವಾಗುತ್ತಿದೆ. ಹತ್ತನೇ ತರಗತಿಯವರೆಗೆ ಕಲಿತ ನಂತರ ಅವರಿಗೆ ಬೆರಳಚ್ಚು, ಮರಗೆಲಸ, ಕಂಪ್ಯೂಟರ್, ಕುಶಲ ಕಲೆ ಇತ್ಯಾದಿಗಳಲ್ಲಿ ವೃತ್ತಿ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತ ಮಕ್ಕಳು ಇಂದು ದೊಡ್ಡವರಾಗಿ ಸ್ವಂತ ಉದ್ಯೋಗ ನಡೆಸುತ್ತ, ಉತ್ತಮ ಹುದ್ದೆ ಅಲಂಕರಿಸಿ ಸ್ವಾವಲಂಬಿಗಳಾಗಿದ್ದಾರೆ.
ಶ್ರೀಮತಿ ಮೋಹಿನಿ ನಾಯಕ್ ಅವರ ನಿಸ್ವಾರ್ಥ ಸೇವೆಗೆ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಬಂಟರ ಸಂಘದ ಅತ್ಯುತ್ತಮ ಸಮಾಜ ಸೇವಾಕರ್ತೆ ಪ್ರಶಸ್ತಿ, ಮಾನವ ಹೊಣೆಗಾರಿಕೆಯ ಮೌಲ್ಯವರಿತ ಮಹಿಳೆ ಎಂದು ಅಮೆರಿಕದ ಟೆಕ್ಸಾಸ್‌ನ ಅಂತರರಾಷ್ಟ್ರೀಯ ಓರಿಯಂಟೇಶನ್ ಸೆಂಟರ್‌ನ ಪ್ರಶಸ್ತಿ, ಅಂತರರಾಷ್ಟ್ರೀಯ ಬಂಟ ಮಹಿಳೆಯರ ಸಮಾವೇಶದ ಮಿಲೇನಿಯಂ ಶ್ರೀ ೨೦೦೦ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಾಕರ್ತೆ ಶ್ರೀಮತಿ ಮೋಹಿನಿ ಎ. ನಾಯಕ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಎಂ.ಜಿ. ಅಬ್ದುಲ್ ರೆಹಮಾನ್

ರೋಗಿಗಳಿಗೆ ಜೀವದ್ರವ್ಯವಾಗಿರುವ ರಕ್ತಪೂರೈಕೆಯ ಆದರ್ಶ ಕಾಯಕದಲ್ಲಿ ನಿರತರಾಗಿರುವ ಸಮಾಜಸೇವಕ ಶ್ರೀ ಅಬ್ದುಲ್ ರೆಹಮಾನ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ೧೯೪೪ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಉಪ್ಪಿನಂಗಡಿಯಲ್ಲಿ ಪಡೆದು ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣದ ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ.
ಪ್ರಸಿದ್ಧ ಸಾಮಾಜಿಕ ಧುರೀಣ ದಿವಂಗತ ಮಹಮ್ಮದ್ ಕಮಾಲ್‌ರವರ ಸ್ಮರಣಾರ್ಥ ೧೯೯೨ ರಲ್ಲಿ ನ್ಯಾಯವಾದಿ ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್‌ರವರು ಸ್ಥಾಪಿಸಿದ ಬ್ಲಡ್‌ ಬೈನ್ ಬಯೋಮ್ ಬ್ಯಾಂಕಿಂಗ್ ಟ್ರಸ್ಟ್ ೧೯೯೫, ೯೬, ೯೭, ೯೮, ೯೯ ರಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರಗಳಲ್ಲಿ ಅನುಕ್ರಮವಾಗಿ ೨೭೭, ೩೨೪, ೫೧೩, ೧೮೦, ೧೦೦ ಯೂನಿಟ್‌ಗಳಷ್ಟು ರಕ್ತದ ಸಂಗ್ರಹಿಸಿದ್ದಲ್ಲದೆ, ವಿವಿಧ ಆಸ್ಪತ್ರೆಗಳಲ್ಲಿ ರಕ್ತ ಅಗತ್ಯವಿದ್ದ ಸುಮಾರು ೬೦೦೦ಕ್ಕೂ ಅಧಿಕ ರೋಗಿಗಳಿಗೆ ರಕ್ತ ಒದಗಿಸಿ ದಾಖಲೆ ನಿರ್ಮಿಸಿದೆ. ಈ ರಕ್ತದಾನ ಅಭಿಯಾನದ ರೂವಾರಿ ಶ್ರೀ ಅಬ್ದುಲ್ ರೆಹಮಾನ್ ಅವರು.
ರಕ್ತದಾನಕ್ಕಾಗಿ ಜಾಥಾ, ಸಭೆ, ಭಾಷಣ, ಕಲಾಮೇಳ, ಸ್ಪರ್ಧೆ ಹೀಗೆ ವಿವಿಧ ವಿಧಾನಗಳ ಮೂಲಕ ಪ್ರೇರೇಪಿಸುತ್ತಿರುವ ಶ್ರೀಯುತರ ಕಾರ್ಯವನ್ನು ವಿವಿಧ ಕ್ಷೇತ್ರಗಳಲ್ಲಿನ ಅನೇಕ ಮೇಧಾವಿಗಳು ಪ್ರಶಂಸಿಸಿದ್ದಾರೆ.
ರಕ್ತದಾನಿಗಳ ಡೈರೆಕ್ಟರಿ ಪ್ರಕಟಣೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು, ವಿದ್ಯಾರ್ಥಿವೇತನ ನೀಡಿಕೆ, ಬ್ಯಾಂಕ್ ವಿಜೇತರಿಗೆ ಪುರಸ್ಕಾರ ಇವೇ ಮೊದಲಾದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್, ಕೆನರಾ ಬ್ಯಾಂಕ್‌ ಹಾಗೂ ವಿಜಯಾ ಬ್ಯಾಂಕಿನ ಕಾನೂನು ಸಲಹೆಗಾರರಾಗಿ, ನೇತ್ರಾವತಿ ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ, ಜಿಲ್ಲಾ ವಕ್ಸ್ ಮಂಡಳಿ ಉಪಾಧ್ಯಕ್ಷರಾಗಿ ಹೀಗೆ ವಿವಿಧ ಪದಗಳಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವವರು ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಹೆಚ್.ಎನ್. ಕೃಷ್ಣಮೂರ್ತಿ

ಶಿಲ್ಪಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.
ಕರ್ನಾಟಕದ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆ ಹಕ್ಕಲಿನಲ್ಲಿ ೧೯೪೭ರಲ್ಲಿ ಜನಿಸಿದ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು, ನಂತರ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಕಲೆಯ ಅಧ್ಯಯನ ನಡೆಸಿದರು.
ಕುವೆಂಪು ಅವರ ಅಪ್ಪಣೆಯ ಮೇರೆಗೆ ಶಾಂತಿನಿಕೇತನದಲ್ಲಿ ಶಿಲ್ಪಕಲೆಯನ್ನು ಅಭ್ಯಸಿಸಿ, ಮಾಡೆಲಿಂಗ್ ಹಾಗೂ ವರ್ಣಚಿತ್ರಗಳಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಶ್ರೀಯುತರು ಕರ್ನಾಟಕಕ್ಕೆ ಹಿಂತಿರುಗಿ ದಾವಣಗೆರೆಯ ಸರ್ಕಾರಿ ಕಲಾ ಮತ್ತು ಕರಕುಶಲ ಶಾಲೆಯಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಮುಖ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀ ಹೆಚ್.ಎನ್. ಕೃಷ್ಣಮೂರ್ತಿ ಅವರು ೧೯೬೭ರಲ್ಲಿ ಕೊಲ್ಕತ್ತದಲ್ಲಿ ಆನಂದ ಮೇಳವನ್ನು, ಪುರುಷತ್ರಯರ ಕಲಾಪ್ರದರ್ಶನವನ್ನು ನಡೆಸಿ, ದಾವಣಗೆರೆಯಲ್ಲಿ ತಮ್ಮ ಚಿತ್ರಗಳ ಪ್ರದರ್ಶನವನ್ನು ನಡೆಸಿದ್ದಾರೆ.
ಅಡಿಕೆ ಕೃಷಿ, ಬೇಟೆ, ಮೀನುಗಾರಿಕೆ, ಕಾಫಿ ಕೃಷಿ ಹೀಗೆ ತಮ್ಮ ಮಲೆನಾಡಿನ ಪರಿಸರದ ವಸ್ತುಗಳನ್ನು ಆಯ್ತು ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಶ್ರೀಯುತರು ವಿವಿಧ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದರು. ಶಿಲ್ಪದಲ್ಲಿನ ಅವರ ಅಭಿವ್ಯಕ್ತಿ ಗಾಢವಾದುದು. ಸಿಮೆಂಟ್ ಶಿಲ್ಪಗಳು, ಸಣ್ಣತಲೆಯ ದಡೂತಿ ದೇಹದ ಮಾನವಾಕೃತಿಗಳು ವಿಶಿಷ್ಟವಾಗಿದ್ದು ಅದರ ಮೇಲ್ಮಗೆ ಹಲಸಿನ ಹಣ್ಣಿನ ಮುಳ್ಳಿನಂತೆ ರಚನೆ ಮಾಡಲಾಗಿರುವುದು ಶ್ರೀಯುತರ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ.
ಕರ್ನಾಟಕ ಶಿಲ್ಪ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರ ಅನೇಕ ಕಲಾಕೃತಿಗಳು ಖಾಸಗಿ ಹಾಗೂ ಸಾರ್ವಜನಿಕ ಸಂಗ್ರಹಗಳಲ್ಲಿವೆ. ಪ್ರಸಕ್ತ ಹವ್ಯಾಸಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಲ್ಪಕಲೆಯ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಪೂರ್ವ ಕಲಾವಿದ ಶ್ರೀ ಹೆಚ್. ಎನ್. ಕೃಷ್ಣಮೂರ್ತಿ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಾಬುರಾವ್ ಕೋಬಾಳ

ಜಾನಪದ ಸಂಗೀತವನ್ನು ಮನೆಮನೆಗೆ ಬಿತ್ತರಿಸುವ ಸಾರ್ಥಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಪ್ರತಿಭೆ ಶ್ರೀ ಬಾಬುರಾವ್ ಕೊಬಾಳ ಅವರು.
ಅತ್ಯಂತ ಹಿಂದುಳಿದ ಜನಾಂಗದಲ್ಲಿ ೨೬.೮.೧೯೬೮ರಂದು ಜನಿಸಿದ ಶ್ರೀ ಬಾಬುರಾವ್ ಅವರು ಗುಲ್ಬರ್ಗಾ ಜಿಲ್ಲೆಯವರು. ಎಸ್.ಎಸ್.ಎಲ್.ಸಿ.ಯವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರು ಕನ್ನಡದ ಜೊತೆಗೆ ಹಿಂದಿ ಭಾಷೆಯ ಜ್ಞಾನವನ್ನೂ ಸಂಪಾದಿಸಿದ್ದಾರೆ.
ಶ್ರೀ ಕೋಬಾಳ ಅವರು ಬಾಲ್ಯದಿಂದಲೇ ಜಾನಪದ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿರುವುದೇ ಅಲ್ಲದೇ ಹಾರ್ಮೋನಿಯಂ ವಾದನದಲ್ಲೂ ಪರಿಣತಿ ಪಡೆದು ಸಾಥಿ ನೀಡಿದ್ದಾರೆ. ಗುಲ್ಬರ್ಗಾ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಬಹುತೇಕ ಎಲ್ಲ ರೀತಿಯ ಜಾನಪದ ಹಾಡುಗಳನ್ನು ಅದರ ಮೂಲ ಶೈಲಿಯಲ್ಲಿಯೇ ಹಾಡುವ ಶ್ರೀ ಬಾಬುರಾವ್ ಅವರು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮದಲ್ಲಿ ತಮ್ಮ ಹಾಡುಗಾರಿಕೆಯ ಕಾಠ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಪತಿಭಕ್ತಿ, ಬಂಜೆತೊಟ್ಟಿಲು, ವಂಶದೀಪ, ಮನ ಒಂದು ಮನೆ ಎರಡು ಹಾಗೂ ಕುಟುಂಬ ಕಲ್ಯಾಣ ಪ್ರಚಾರಾರ್ಥ ನಾಟಕ ಯಾರು ಹೊಣೆ, ಗೌಡರ ಗದ್ದಲ ನಾಟಕಗಳಿಗೆ ವಾದ್ಯ ಸಂಗೀತ ನೀಡಿದ್ದಾರೆ.
ಜಿಲ್ಲೆಯ ಜಾನಪದ ಸಂಸ್ಕೃತಿಯ ವಾಹಕ ಎಂದೇ ಜನ ಇವರನ್ನು ಗುರುತಿಸುತ್ತಾರೆ. ಯಾವ ಫಲಾಪೇಕ್ಷೆ ಇಲ್ಲದೇ ಊರೂರು ತಿರುಗುವ ಇವರನ್ನು ಜನ ಪ್ರೀತಿಯಿಂದ ಬರಮಾಡಿಕೊಂಡು ಕೈಲಾದ ಪ್ರೋತ್ಸಾಹ ನೀಡುತ್ತಿದ್ದಾರೆ.
ಗುಲ್ಬರ್ಗಾದ ಸರ್ವಜ್ಞ ಸಂಗೀತ ಕಲಾವೃಂದದ ಸಂಸ್ಥಾಪಕ ಪ್ರಧಾನ ಕಾವ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಜಾನಪದ ಕಲಾವಿದರ ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಿದ್ದಾರೆ. ಹೀಗೆ ಗ್ರಾಮೀಣ ಪ್ರತಿಭೆಯ ಹಳ್ಳಿಯ ಹಣತೆಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಶ್ರೀ ಬಾಬುರಾವ್ ಕೋಬಾಳ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐರೋಡಿ ಗೋವಿಂದಪ್ಪ

ಬಡಗುತಿಟ್ಟಿನ ಯಕ್ಷಗಾನ ಕಲೆಯ ಭವ್ಯ ಪರಂಪರೆಯನ್ನು ಕಳೆದ ನವಲತ್ತು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಅನೇಕ ಮಂದಿಯಲ್ಲಿ ಶ್ರೀ ಐರೋಡಿ ಗೋವಿಂದಪ್ಪ ಅವರು ಪ್ರಮುಖರು.
ಉಡುಪಿ ತಾಲ್ಲೂಕಿನ ಐರೋಡಿಯಲ್ಲಿ ಜನಿಸಿದ ಶ್ರೀ ಗೋವಿಂದಪ್ಪನವರು ಹಿಂದುಳಿದ ವರ್ಗದವರು. ತಮ್ಮ ೧೫ನೆಯ ವಯಸ್ಸಿಗೆ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಹಂತ ಹಂತವಾಗಿ ಮೇಲಕ್ಕೇರಿದರು.
ತೆಂಕುತಿಟ್ಟು ಹಾಗೂ ಬಡಗುತಿಟ್ಟು ಈ ಎರಡೂ ಕ್ಷೇತ್ರಗಳಲ್ಲಿ ದುಡಿದ ಅನುಭವ ಇವರದು. ಸ್ತ್ರೀ ವೇಷವನ್ನೂ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಭಾಗವತಿಕೆಯನ್ನು ಮಾಡಬಲ್ಲರು. ಚಂಡೆ ಹಾಗೂ ಮದ್ದಲೆಗಳನ್ನು ನುಡಿಸಬಲ್ಲರು. ಹೀಗೆ ಯಕ್ಷಗಾನದ ಎಲ್ಲ ಆಯಾಮಗಳನ್ನು ಕರಗತಮಾಡಿಕೊಂಡವರು. ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಪಟು ಹಾರಾಡಿ ರಾಮ ಅವರ ಅಭಿನಯದ ಛಾಯೆ ಗೋವಿಂದಪ್ಪನವರಲ್ಲಿ ಮೇಲೈಸಿರುವುದನ್ನು ಕಾಣಬಹುದಾಗಿದೆ.
ಇವರು ಅಭಿನಯಿಸಿದ ಭೀಷ್ಮ, ಕರ್ಣ, ಅರ್ಜುನ, ಮಾರ್ತಾಂಡತೇಜ, ಜಾಂಬವ, ಹಿರಣ್ಯಕಶ್ಯಪು, ಸುಂದರ ರಾವಣ, ವೀರಮಣಿ, ಭೀಮ, ವಿಭೀಷಣ, ಯಯಾತಿ, ಋತುಪರ್ಣ ಮೊದಲಾದ ವೀಲರೋಚಿತ ಪುರುಷ ಪಾತ್ರಗಳು ಕಲಾ ಪ್ರೇಮಿಗಳ ಮನ ಸೂರೆಗೊಂಡಿವೆ.
ಗೋಳಿಗರಡಿ, ಸಾಲಿಗ್ರಾಮ, ಪೆರ್ಡೂರು, ಕಣಿಪುರ, ಮೂಲ್ಕಿ, ಅಮೃತೇಶ್ವರಿ ಮುಂತಾದ ಅನೇಕ ಮೇಳಗಳಲ್ಲಿ ದುಡಿದಿದ್ದಾರೆ.
ಪೌರಾಣಿಕ ಪ್ರಸಂಗಗಳ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇವರ ಕಲಾಸಾಧನೆ ಅದ್ಭುತವಾದುದು. ಶ್ರೀಯುತರ ಕಲಾತಪಸ್ಸಿಗೆ ಮನ್ನಣೆ ನೀಡಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಬ್ರಹ್ಮಾವರದ ಅಭಿಮಾನಿಗಳು ಇವರಿಗೆ ಸನ್ಮಾನ ಮಾಡಿ ಹಮ್ಮಿಣಿ ಅರ್ಪಿಸಿದ್ದಾರೆ.
ತಾವು ವಹಿಸುವ ಪಾತ್ರಗಳಿಗೆ ಜೀವ ತುಂಬಿ ಕಲಾ ರಸಿಕರ ಮನ ಸೂರೆಗೊಳ್ಳುವ ಯಕ್ಷಗಾನ ಕಲೆಯ ಪರಿಪೂರ್ಣ ಕಲಾವಿದರು ಶ್ರೀ ಐರೋಡಿ ಗೋವಿಂದಪ್ಪ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಲ್ಲಯ್ಯ ಸ್ವಾಮಿ ಅಥಣಿ

ಜಾನಪದ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಶ್ರೀ ಕೃಷ್ಣ ಪಾರಿಜಾತ’ದ ಹಿರಿಯ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.
ಜಮಖಂಡಿ ತಾಲ್ಲೂಕಿನ ಮೈಗೂರ ಗ್ರಾಮದಲ್ಲಿ ೧೯೧೮ ರಲ್ಲಿ ಜನಿಸಿದ ಶ್ರೀ ಮಲ್ಲಯ್ಯಾಸ್ವಾಮಿ ಅವರಿಗೆ ಬಾಲ್ಯದಿಂದಲೂ ಪಾರಿಜಾತ ಕಲೆಯ ಬಗ್ಗೆ ಆಕರ್ಷಣೆ. ತಿಕೋಟಾ ಗ್ರಾಮದ ಪ್ರಸಿದ್ಧ ಪಾರಿಜಾತ ಕಲಾವಿದರೂ, ಗುರುಗಳೂ ಆಗಿದ್ದ ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಂದ ಪಾರಿಜಾತ ಕಲೆಯ ಶಿಕ್ಷಣ ಪಡೆದು, ತಿಕೋಟಾದಲ್ಲೇ ಪ್ರಪ್ರಥಮವಾಗಿ ಸತ್ಯಭಾಮ ಹಾಗೂ ಕೊರವಂಜಿ, ದಶಾವತಾರ ಪಾತ್ರಗಳ ಅಭಿನಯವನ್ನಾರಂಭಿಸಿದ್ದೆ ಅಲ್ಲದೆ ಭಾಗವತಿಕೆಯಲ್ಲೂ ಪ್ರಸಿದ್ದಿ ಪಡೆದಿದ್ದಾರೆ.
ಅಥಣಿಯಲ್ಲಿ ಸ್ವಂತ ಕಂಪನಿ ಕಟ್ಟಿ, ಅಲ್ಲಿಂದ ಕಂಪನಿಯೊಂದಿಗೆ ಜಮಖಂಡಿಗೆ ಬಂದ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಶ್ರೀ ವೆಂಕಟೇಶ್ವರ ಕೃಷ್ಣ ಪಾರಿಜಾತ ನಾಟಕ ಕಂಪನಿ, ಜಮಖಂಡಿ ಎಂಬ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ೪೬ ವರ್ಷಗಳಿಂದಲೂ ನಡೆಸುತ್ತ ಬಂದಿದ್ದಾರೆ.
ಧಾರವಾಡ, ಗುಲ್ಬರ್ಗ, ಹೈದರಾಬಾದ್, ಮುಂಬಯಿ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿರುವುದಲ್ಲದೆ, ಆಕಾಶವಾಣಿ ದೂರದರ್ಶನದಲ್ಲಿಯೂ ಶ್ರೀಯುತರ ಅಭಿನಯದ ‘ಕೃಷ್ಣಪಾರಿಜಾತ’ ಪ್ರಸಾರಗೊಂಡು ಮೆಚ್ಚುಗೆ ಗಳಿಸಿದೆ. ಅನೇಕ ಕಲಾವಿದರಿಗೆ ‘ಕೃಷ್ಣ ಪಾರಿಜಾತ’ ಕಲೆಯನ್ನು ಕಲಿಸಿ ಸಿದ್ಧಗೊಳಿಸಿರುವ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪಟ್ಟದ ಕಲ್ಲು ಉತ್ಸವ, ದಸರಾ ಉತ್ಸವಗಳು ಮೊದಲಾದವುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀಯುತರು ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು ಹಾಗೂ ದೂರದರ್ಶನ ಕಲಾವಿದರು. ಮುಂಬೈಯಲ್ಲಿ ನಡೆದ ಕಾನಡಾವಿರಲು ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ, ಬೆಂಗಳೂರು ನಾಟಕೋತ್ಸವದಲ್ಲಿ ಕಾರ್ಯಕ್ರಮ ನೀಡಿ ಸನ್ಮಾನಿತರಾಗಿದ್ದಾರೆ.
ನಶಿಸಿಹೋಗುತ್ತಿರುವ ಜಾನಪದ ಕಲೆಯಾದ ಕೃಷ್ಣಪಾರಿಜಾತ ಕಲೆಯಲ್ಲಿ ತರಬೇತಿ ನೀಡಿ ಮುಂದಿನ ತಲೆಮಾರನ್ನು ಸಿದ್ಧಪಡಿಸುತ್ತಿರುವ ಪ್ರತಿಭಾವಂತ ಕೃಷ್ಣ ಪಾರಿಜಾತ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಾದೇಗೌಡ

ಜಾನಪದ ನೃತ್ಯಗಳಲ್ಲಿ ಒಂದಾದ ಗೊರವರ ಕುಣಿತದ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.
ಎಳವೆಯಲ್ಲೇ ಗೊರವರ ಕುಣಿತದಲ್ಲಿ ಆಸಕ್ತಿ ತಳೆದು ಶ್ರೀ ಪುಟ್ಟಮಲ್ಲೇಗೌಡ ಇವರ ಬಳಿ ಗೊರವರ ಕುಣಿತ ಕಲಿತರು. ಸುಮಾರು ಆರು ದಶಕಗಳ ಕಾಲ ಗೊರವರ ಕುಣಿತದಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ದೆಹಲಿಯ ಅಪ್ಪಾ ಉತ್ಸವ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶ್ರೀ ಮಾದೇಗೌಡರು ತಮ್ಮ ಅದ್ಭುತ ಕುಣಿತದಿಂದ ಜಾನಪದದ ಈ ವಿಶಿಷ್ಟ ಕಲೆಗೆ ಜೀವ ತುಂಬಿದ್ದಾರೆ.
ಶ್ರೀಯುತರು ಜಾನಪದ ಕಲೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೨೦೦೨ ರ ಸಾಲಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದದ ವಿಶಿಷ್ಟ ಕಲೆಯಾದ ಗೊರವರ ಕುಣಿತವನ್ನು ಕಿರಿಯರಿಗೆ ಕಲಿಸುತ್ತ ಮುಂದಿನ ತಲೆಮಾರಿಗೂ ತಲುಪಿಸುತ್ತಿರುವ ಎಂಬತ್ತು ವರ್ಷದ ಶ್ರೀ ಮಾದೇಗೌಡರು ಗೊರವರ ಕುಣಿತದ ವಿಶಿಷ್ಟ ಕಲಾವಿದರು.
ಸಹಜ ಪ್ರತಿಭೆ, ಹಾಗೂ ಸತತ ಪರಿಶ್ರಮಗಳಿಂದ ಗೊರವರ ಕುಣಿತಕ್ಕೆ ವಿಶಿಷ್ಟತೆ ತಂದುಕೊಟ್ಟ ಆಧುನಿಕತೆಯ ಅಬ್ಬರದಲ್ಲೂ ನಾಡಿನ ಜಾನಪದ ಸಂಸ್ಕೃತಿಯ ಜೀವನದಿ ಬತ್ತದಂತೆ ನೋಡಿಕೊಳ್ಳುತ್ತಿರುವ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಆರ್. ನಾಯಕ್

ಜಾನಪದ ತಜ್ಞ ಶಿಕ್ಷಣ ತಜ್ಞ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಪರಿಶ್ರಮ, ಜಾನಪದ ಸಮ್ಮೇಳನಾಧ್ಯಕ್ಷ, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಜಾನಪದ ಪ್ರಕಾಶಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಡಾ. ಎನ್. ಆರ್. ನಾಯಕ ಅವರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಭಾವಿಕೇರಿಯಲ್ಲಿ ೧೯೩೫ರಲ್ಲಿ ಜನಿಸಿದ ನಾಯಕ ಅವರು ಶಿಕ್ಷಣದಲ್ಲಿ ಆಸಕ್ತರಾಗಿ ಉತ್ತಮ ಫಲಿತಾಂಶ ಪಡೆದು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹೊನ್ನಾವರ ಕರ್ನಾಟಕ ಸಂಘದ ಅಧ್ಯಕ್ಷ, ಅರವಿಂದ ಯಕ್ಷಗಾನ ಸಂಘದ ಅಧ್ಯಕ್ಷ ಹೀಗೆ ಹಲವಾರು ಸ್ಥಾನಗಳನ್ನು ಅಲಂಕರಿಸಿದವರು. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಮಿತಿಗಳಲ್ಲಿ ಸದಸ್ಯರಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ರೂಪಕ, ಭಾಷಣಗಳ ಪ್ರಸಾರ, ನಾಟಕೋತ್ಸವ, ನಾಟಕ ತರಬೇತಿ ಶಿಬಿರ, ಜಾನಪದ ಕಮ್ಮಟ, ಸೌಹಾರ್ದತಾ ಸಮ್ಮೇಳನಗಳನ್ನು ಏರ್ಪಡಿಸಿದ್ದಾರೆ.
ಜಾನಪದ ಪ್ರಕಾರದಲ್ಲಿ ೩೫ ಗ್ರಂಥಗಳನ್ನು ರಚಿಸಿ ಪ್ರಕಟಿಸಿರುವುದೇ ಅಲ್ಲದೆ ಹಿಂದುಳಿದ ಬುಡಕಟ್ಟು ಜನಾಂಗಗಳ ಸಾಹಿತ್ಯಕಲೆ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾತ್ಮಕ ಗ್ರಂಥಗಳನ್ನು ಸಹ ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಸಂಸ್ಕೃತಿ ಕುರಿತು ನೂರಾರು ಲೇಖನಗಳು ಪ್ರಕಟವಾಗಿವೆ. ಸುಗ್ಗಿ ಹಬ್ಬ, ಗ್ರಾಮೋಕ್ಕಲ, ಮಹಾಭಾರತ ಮತ್ತು ಕೂಸಾಯ್ತು ನಮ್ಮಾ ಕೊಮರಾಗೆ ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಲಲಿತಾಂಬಾ ವೃಷಭೇಂದ್ರಸ್ವಾಮಿ ದತ್ತಿನಿಧಿ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಸನ್ಮಾನ ಇತ್ಯಾದಿ ಪುರಸ್ಕಾರಗಳು ಲಭ್ಯವಾಗಿವೆ.
ಡಾ. ಎನ್. ಆರ್. ನಾಯಕರನ್ನು ಕುರಿತು ಎರಡು ಅಭಿನಂದನಾ ಗ್ರಂಥಗಳು (ದೀಪಾರಾಧನೆ, ಕಲಶ) ಅವರ ಬದುಕು ಬರಹ ಕುರಿತ ಎಂ.ಫಿಲ್. ಪ್ರಬಂಧ ಪ್ರಕಟವಾಗಿವೆ. ನಾಯಕ ಅವರು ಸಂಪಾದಿಸಿ ಪ್ರಕಟಿಸಿರುವ ಹಲವಾರು ಜಾನಪದ ಕತೆ, ಕಾವ್ಯ, ಸಂಸ್ಕೃತಿ ಚಿತ್ರಗಳು ಮಹತ್ತರ ಕೊಡುಗೆಯಾಗಿದೆ. ಜಾನಪದ ಶಿಬಿರ, ವಿಚಾರ ಸಂಕಿರಣ, ಕಲಾ ಮೇಳಗಳ ಸಂಘಟಕರಾಗಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರವರ್ತಕರಾಗಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸುತ್ತಿರುವ, ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಪ್ರತಿಭಾವಂತ ಡಾ. ಎನ್. ಆರ್. ನಾಯಕ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕಾಸಿಮಸಾಬ ಹುಸೇನಸಾಬ

ರಂಗಭೂಮಿಯೊಂದಿಗೆ ಕಳೆದ ಐವತ್ತು ವರ್ಷಗಳಿಂದ ನಿಕಟ ಸಂಪರ್ಕವಿರಿಸಿಕೊಂಡು ಕೃಷಿ, ಜಾನಪದ, ಪತ್ರಿಕೆ, ಶಿಕ್ಷಣ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿರುವ ಸ್ನೇಹಜೀವಿ – ಕಾಸೀಮಸಾಬ ಹುಸೇನಸಾಬ ಬಿಜಾಪುರ.
ಬಸವನ ಬಾಗೇವಾಡಿ ತಾಲ್ಲೂಕಿನ ಗೊಳಸಂಗಿಯವರಾದ ಕಾಸೀಮಸಾಬ ಅವರು ಶಿಕ್ಷಣ ಪಡೆದದ್ದು ಎಂಟನೆಯ ತರಗತಿಯವರೆಗಾದರೂ ಕನ್ನಡ, ಹಿಂದಿ, ಉರ್ದು ಭಾಷೆಗಳಲ್ಲಿ ಪಡೆದಿರುವ ಪರಿಣತಿ ಮತ್ತು ನಾಟಕ ರಚನೆಯಲ್ಲಿ ಅವರಿಗಿರುವ ಆಸಕ್ತಿ ಅಚ್ಚರಿ ಹುಟ್ಟಿಸುತ್ತದೆ.
“ಮನೆಗೆ ಬೆಳಕು ಮಡದಿ’, ‘ಹೆಂಡತಿಯ ಕೈಗೊಂಬೆ’, ‘ಗಡಿತಂಟೆ’, ‘ಸಾಮ್ರಾಟ ಅಶೋಕ’, ‘ಯುದ್ಧ ಸಾಕು ಶಾಂತಿ ಬೇಕು’, ‘ಮಕ್ಕಳೆರಡೇ ಇರಲಿ’ ಮುಂತಾದ ನಾಟಕಗಳು ಜನಮನವನ್ನು ಸೂರೆಗೊಂಡು ಹಲವಾರು ಪ್ರದರ್ಶನಗಳನ್ನು ಕಂಡಿವೆ, ಬಹುಮಾನಗಳನ್ನು ಪಡೆದುಕೊಂಡಿವೆ.
ಜ್ಯೋತಿಯೇ ಆಗು ಜಗಕೆಲ್ಲ, ಗಾದೆಗಳ ಗಾರುಡಿ, ಚಿಮ್ಮಲಗಿಯ ಚಿನ್ಮಯಿ ಹಾಗೂ ಹೂವಿನ ಹಂದರ ಇವರ ಸಂಪಾದಿತ ಕೃತಿಗಳು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಪ್ರವರ್ಧಕ ಪ್ರಶಸ್ತಿ ಪಡೆದುಕೊಂಡಿರುವ ಕಾಸೀಮಸಾಬ ಅವರನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ರಾಮ ಭೂಷಣ, ಆದರ್ಶ ರೈತ, ಉತ್ತಮ ನಾಟಕಕಾರ, ಜಾನಪದ ತಜ್ಞ ಮುಂತಾದ ಪ್ರಶಸ್ತಿಗಳೂ
ಅರಸಿಕೊಂಡು ಬಂದಿವೆ.
ಸಂಪಾದಕರಾಗಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸದಸ್ಯರಾಗಿ, ನಿರ್ದೆಶಕರಾಗಿ, ಗೌರವಾಧ್ಯಕ್ಷರಾಗಿ ವಿವಿಧ ರಂಗಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಕಾಸೀಮಸಾಬ ಅವರು ಕನ್ನಡದ ಪ್ರತಿಭಾವಂತ ನಾಟಕಕಾರರಲ್ಲಿ ಒಬ್ಬರಾಗಿ ಕ್ರಿಯಾಶೀಲರಾಗಿರುವ ಹೆಮ್ಮೆಯ ಬಹುಮುಖ ಪ್ರತಿಭಾವಂತ ಶ್ರೀ ಕಾಸೀಮಸಾಬ ಹುಸೇನಸಾಬ ಬಿಜಾಪುರ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವಪುತ್ರ

ಜಾನಪದ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ತಬಲಾ ಕಲಾವಿದ ಶ್ರೀ ದೇವಪುತ್ರ ಅವರು.
ರಾಯಚೂರಿನಲ್ಲಿ ೧೯೨೭ ರಲ್ಲಿ ಜನಿಸಿದ ಶ್ರೀ ದೇವಪುತ್ರ ಅವರು ಕಲೆಯ ಗೀಳನ್ನು ಹಚ್ಚಿಕೊಂಡು, ಹದಿನಾರು ವರ್ಷದವರಿರುವಾಗಲೇ ಕಲಾಸೇವೆಯನ್ನು ಆರಂಭಿಸಿದರು. ರಾಯಚೂರು, ಕೊಪ್ಪಳಗಳಲ್ಲಿ ಮನೆಮಾತಾಗಿರುವ ಶ್ರೀ ದೇವಪುತ್ರ ಅವರು ಐದು ದಶಕಗಳಿಂದ ತಬಲಾ ವಾದಕರಾಗಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ತಬಲಾ, ಡೋಲಕ್, ಹಲಗೆ, ಮದ್ದಲಿ, ದಮಡಿ ಬಾರಿಸುವುದರಲ್ಲಿಯೂ ಪರಿಣತಿ ಪಡೆದಿರುವ ಶ್ರೀ ದೇವಪುತ್ರರು ತತ್ವಪದಗಳನ್ನು ಹಾಡುವುದರಲ್ಲಿಯೂ ಸಿದ್ಧಹಸ್ತರು, ರಾಯಚೂರು, ಕೊಪ್ಪಳಗಳಲ್ಲಿ ದೊಡ್ಡಾಟ ಎಲ್ಲಿ ನಡೆದರೂ ಮದ್ದಲಿ ವಾದಕರಾಗಿ ಜನಪ್ರಿಯತೆ ಪಡೆದಿರುವ ಶ್ರೀಯುತರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು.
ಅನೇಕ ರಂಗಭೂಮಿ ಕಲಾವಿದರಿಗೆ ತಬಲಾ ಸಾಥಿಯಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅಖಿಲ ಭಾರತ ೬೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರು ದಸರಾ ಮಹೋತ್ಸವ, ಮುಂಬಯಿಯ ಭಾರತೀಯ ವಿಕಾಸ ಪರಿಷತ್ ಮೊದಲಾದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ೧೯೯೮ರ ಸಾಲಿನ ಪ್ರಶಸ್ತಿ ಪುರಸ್ಕೃತರು.
ಸ್ವಯಂ ಪರಿಶ್ರಮ, ಸತತ ಸಾಧನೆಯಿಂದ ಜಾನಪದ ಕಲಾವಿದರಾಗಿ ಸಿದ್ಧಿಯನ್ನು ಪಡೆದವರು ಶ್ರೀ ದೇವಪುತ್ರ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಿ. ಪದ್ಮ

ನಾಟಕಗಳ ವಿಭಿನ್ನ ಪಾತ್ರಗಳಲ್ಲಿ ತನ್ಮಯತೆಯಿಂದ ನಟಿಸಿ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದ ಪರಿಶಿಷ್ಟ ಪಂಗಡದ ಅಭಿಜಾತ ರಂಗ ಪ್ರತಿಭೆ ಶ್ರೀಮತಿ ಪಿ. ಪದ್ಮ ಅವರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಶ್ರೀಮತಿ ಪದ್ಮ ಅವರು ಬಾಲ್ಯದಿಂದಲೇ ನಾಟಕದ ಕಡೆಗೆ ಆಕರ್ಷಿತರಾದರು. ಕಡು ಬಡತನದಿಂದಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದೆ ಹೋಗಲಾಗಲಿಲ್ಲ. ಊರಿನಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಕ್ಕೆ ಹೋಗುತ್ತಿದ್ದು ಅದರಲ್ಲಿ ಹೆಚ್ಚು ಆಸಕ್ತಿಯುಂಟಾಗಿ ತಾವೂ ನಾಟಕಗಳಲ್ಲಿ ಪಾತ್ರವಹಿಸಲು ಪ್ರಾರಂಭಿಸಿದರು. ಉತ್ತಮ ಪ್ರೋತ್ಸಾಹ ದೊರೆಯಿತು. ಪ್ರತಿಭೆ ಬಹುಮುಖವಾಗಿ ಹೊರಹೊಮ್ಮತೊಡಗಿತು. ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಪತಿಯ ಮನೆಯಲ್ಲಿಯೂ ಉತ್ತೇಜನ ಸಿಕ್ಕಿತು.
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳ ವಿಭಿನ್ನ, ವೈವಿಧ್ಯಮಯ ಪಾತ್ರಗಳು ಅವರನ್ನು ಅರಸಿ ಬಂದವು. ಪಾತ್ರಗಳ ಅಂತರಂಗವನ್ನು ಅರಿತು ತನ್ಮಯತೆಯಿಂದ ಅಭಿನಯಿಸುವುದು ಸಿದ್ಧಿಸಿ ಜನಪ್ರಿಯತೆ ಪಡೆದರು.
ಐವತ್ತು ವಸಂತಗಳನ್ನು ಪೂರೈಸಿರುವ ಶ್ರೀಮತಿ ಪದ್ಮ ಅವರು ಈವರೆಗೆ ಅಭಿನಯಿಸಿರುವ ನಾಟಕಗಳು ಸಾವಿರ ಸಂಖ್ಯೆಯನ್ನು ದಾಟಿವೆ. ಇವರಿಗೆ ಹತ್ತಾರು ಸಾವಿರ ಅಭಿಮಾನಿ ಬಳಗವಿದೆ. ಊರಿನ ಅಭಿವೃದ್ಧಿ ಕಾರ್ಯಗಳಿಗೆ ಧನ ಸಂಗ್ರಹಿಸಲು ಸಹಾಯಾರ್ಥ ನಾಟಕ ಪ್ರದರ್ಶನದಲ್ಲಿ ಪಾತ್ರವಹಿಸಿ ಸಮಾಜ ಸೇವೆಯಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. ಕೂಡ್ಲಿಗಿ ತಾಲ್ಲೂಕು ಕನ್ನಡ ಜಾಗೃತ ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಾಟಕೋತ್ಸವ ಪ್ರಶಸ್ತಿ, ಕೂಡ್ಲಿಗಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಮತ್ತು ಇತರ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ
ಗೌರವಗಳು ಇವರಿಗೆ ಸಂದಾಯವಾಗಿದೆ.
ಹಿಂದುಳಿದ ಜನಾಂಗದಲ್ಲಿ ಜನಿಸಿ ತಮ್ಮ ವೈಯಕ್ತಿಕ ಪರಿಶ್ರಮ ಮತ್ತು ಸಾಧನೆಯಿಂದ ನಾಟಕ ಕಲಾ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಪ್ರತಿಭಾಪೂರ್ಣ ರಂಗತಾರೆ ಶ್ರೀಮತಿ ಪಿ. ಪದ್ಮ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೀವಟಿಗೆ ಎಲ್. ಕೃಷ್ಣಪ್ಪ

ನಟರಾಗಿ, ರಂಗ ನಿರ್ವಾಹಕರಾಗಿ, ನಿರ್ದೇಶಕರಾಗಿ, ಬೆಳಕು ವಿನ್ಯಾಸಕಾರರಾಗಿ, ರಂಗ ವಿನ್ಯಾಸಕಾರರಾಗಿ, ರಂಗ ಶಿಬಿರಗಳ ಸಂಘಟನಾಕಾರರಾಗಿ, ನಾಟಕೋತ್ಸವ, ವಿಚಾರ ಸಂಕಿರಣಗಳ ಸಂಘಟಕರಾಗಿ, ರಂಗಪುಸ್ತಕಗಳ ಪ್ರಕಾಶಕರಾಗಿ, ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಗಂಧದ ಕೊರಡಿನ ಹಾಗೆ ತಮ್ಮನ್ನು ತೇಯ್ದುಕೊಳ್ಳುತ್ತ ಕನ್ನಡ ರಂಗಭೂಮಿಯಲ್ಲಿ ಪರಿಮಳ ಪಸರಿಸಿ ಎಲೆಮರೆಯ ಹೂವಾಗಿ ನಿಂತವರು ದೀವಟಿಗೆ ಕೃಷ್ಣಪ್ಪ,
ಆನೇಕಲ್ ತಾಲ್ಲೂಕಿನ ಹೆನ್ನಾಗರದಲ್ಲಿ ೧೯೪೮ರಲ್ಲಿ ಹುಟ್ಟಿದ ಎಲ್. ಕೃಷ್ಣಪ್ಪ ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ. ಚಿಕ್ಕಂದಿನಿಂದಲೇ ರಂಗಭೂಮಿಯ ಸೆಳೆತಕ್ಕೆ ಸಿಲುಕಿಕೊಂಡು ಮನೆ ತೊರೆದು ರಂಗಸ್ಥಳವನ್ನೇ ಆಸರೆಯಾಗಿಸಿಕೊಂಡವರು. ಪ್ರಜ್ವಲಿಸುವ ರಂಗ ಬೆಳಕಿನ ಮುಂದೆ ನಿಂತು ಮಿಂಚಲು ತುಡಿಯುತ್ತಿದ್ದವರೇ ಅಧಿಕವಾಗಿದ್ದ ದಿನಗಳಲ್ಲಿ ಬೆಳಕಿನ ಹಿಂದೆ ನಿಂತು ಅದನ್ನು ನಿರ್ದೇಶಿಸುವುದರಲ್ಲಿ ಕೃಷ್ಣಪ್ಪ ಪಡೆದ ಪ್ರಾವೀಣ್ಯದಿಂದಾಗಿ ರಂಗಾಸಕ್ತರು ಅವರನ್ನು ದೀವಟಿಗೆ ಕೃಷ್ಣಪ್ಪ ಎಂದೇ ಗುರುತಿಸುವಂತಾಯಿತು.
ಹೊಟ್ಟೆಪಾಡಿಗಾಗಿ ಸಿವಿಲ್ ಕಂಟ್ರಾಕ್ಟರ್ ಕೂಡ ಆಗಿರುವ ಕೃಷ್ಣಪ್ಪ ಕಟ್ಟುವುದೇ ಕಾಯಕ’ ಎನ್ನುವ ತತ್ವದಲ್ಲಿ ನಂಬಿಕೆಯಿರಿಸಿಕೊಂಡಿರುವವರು. ಸದ್ದುಗದ್ದಲವಿಲ್ಲದೆ ಕೆಲಸ ಮಾಡಿಕೊಂಡು ಹೋಗುವ ಸರಳ ವ್ಯಕ್ತಿ. ಜರ್ಮನಿಯ ಫಿಟ್ಸ್ ಬೆನವಿಡ್ಸ್ ಅವರ ನಿರ್ದೆಶನದ ರಂಗಶಿಬಿರದಲ್ಲಿ, ಲಂಡನ್‌ನ ಪೀಟರ್ ಬೂಕ್ ಅವರ ನಿರ್ದೇಶನದ ರಂಗ ಶಿಬಿರದಲ್ಲಿ, ನೀನಾಸಂ ಸಂಸ್ಥೆಯು ಯು.ಆರ್. ಅನಂತಮೂರ್ತಿಯವರ ನಿರ್ದೇಶನದಲ್ಲಿ ನಡೆಸಿದ ಸಂಸ್ಕೃತಿ ಶಿಬಿರದಲ್ಲಿ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಶ್ರೀರಂಗರ ನಿರ್ದೇಶನದಲ್ಲಿ ನಡೆಸಿದ ಟ್ರೈನಿಂಗ್ ಆಫ್ ಡ್ರಮಾಟಿಕ್ಸ್‌ನಲ್ಲಿ ಭಾಗವಹಿಸಿ ಪಡೆದುಕೊಂಡ ಸಮೃದ್ದವೂ ವೈವಿಧ್ಯಮಯವೂ ಆದ ಅನುಭವಗಳನ್ನು ತಮ್ಮ ರಂಗ ಪ್ರಯೋಗಗಳಲ್ಲಿ ಅತ್ಯದ್ಭುತವಾಗಿ ಧಾರೆಯೆರೆದು ಜನರ ಮೆಚ್ಚುಗೆಗೆ ಪಾತ್ರರಾದರು. ಕೃಷ್ಣಪ್ಪನವರ ರಂಗಸೃಷ್ಟಿಯ ವಿರಾಟ್ ಸ್ವರೂಪದ ದರ್ಶನವಾದದ್ದು ಶ್ರೀರಂಗರ `ಸ್ವರ್ಗಕ್ಕೆ ಮೂರೇ ಬಾಗಿಲು’ ನಾಟಕದಲ್ಲಿ.
ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಒಂದು ಅವಧಿಗೆ ಸದಸ್ಯರಾಗಿದ್ದ ಕೃಷ್ಣಪ್ಪ ಅವರನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅರಸಿ ಬಂದಿವೆ.
ನಾಟಕದ ಮಾತುಗಳಿಗೆ, ವಿದ್ಯಮಾನಗಳಿಗೆ ನೆರಳು-ಬೆಳಕಿನಾಟದಲ್ಲಿ ಹೊಸ ಅರ್ಥ- ಆಯಾಮಗಳನ್ನು ಕಲ್ಪಿಸಿಕೊಟ್ಟು ತಮ್ಮ ಪ್ರತಿಭಾ ಚಾತುರ ಮತ್ತು ಕಲ್ಪನಾ ಸಾಮರ್ಥ್ಯಗಳಿಂದ ಎಂಥವರನ್ನೂ ಬೆರಗುಗೊಳಿಸುವರು ಶ್ರೀ ದೀವಟಿಗೆ ಎಲ್. ಕೃಷ್ಣಪ್ಪನವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರೇಮಾ ಕಾರಂತ

ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ರಂಗಭೂಮಿ ವಸ್ತ್ರ ವಿನ್ಯಾಸ — ಮಕ್ಕಳ ರಂಗಭೂಮಿ ಈ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವವರು ಶ್ರೀಮತಿ ಪ್ರೇಮಾ ಕಾರಂತ್.
ಬಿ. ವಿ. ಕಾರಂತರಂಥ ದೈತ್ಯ ಪ್ರತಿಭೆಯ ಸಂಗಾತಿಯಾಗಿದ್ದೂ ಆ ಪ್ರಭಾವಳಿಯಿಂದ ಬಿಡಿಸಿಕೊಂಡು ಸ್ವಂತ ಪ್ರತಿಭೆಯ ಛಾಪನ್ನು ತಾವು ಪ್ರವೇಶಿಸಿದ ಎಲ್ಲ ಕ್ಷೇತ್ರಗಳಲ್ಲೂ ಮೂಡಿಸುವಲ್ಲಿ ಯಶ ಕಂಡ ಪ್ರೇಮಾ ಕಾರಂತ್ ಜನಿಸಿದ್ದು ೧೫ ಆಗಸ್ಟ್ ೧೯೩೬ರಲ್ಲಿ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಎಫ್.ಎ. ಪದವೀಧರರಾದ ಪ್ರೇಮಾ ಕಾರಂತ್ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಡಿಪ್ಲೊಮಾ ಪಡೆದವರು. ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾದ ಪ್ರೇಮಾ ‘ಕುರುಡು ಕಾಂಚಾಣ’, ‘ಹಕ್ಕಿ ಹಾರುತಿದೆ ನೋಡಿದಿರಾ’, ‘ಕುಣಿಯೋ ಕತ್ತೆ’, ‘ನಾವೂ ನಾಟಕ ಆಡೋಣ ಬನ್ನಿ’ ಮುಂತಾದ ಕೃತಿಗಳನ್ನು ಭಾಷಾಂತರಿಸಿ ಕನ್ನಡದ ಸತ್ವವನ್ನು ಅನ್ಯ ಭಾಷೆಗಳಿಗೂ, ಅನ್ಯ ಭಾಷೆಗಳ ಸತ್ವವನ್ನು ಕನ್ನಡಕ್ಕೂ ತುಂಬಿ ಕೊಟ್ಟವರು.
ನಾಟಕ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡು ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ’, ‘ತೆರೆಗಳು’; ಶ್ರೀರಂಗರ ‘ಸ್ವಗತ ಸಂಭಾಷಣೆ’, ‘ಕತ್ತಲೆ ಬೆಳಕು’; ಬೇಂದ್ರೆಯವರ ‘ಸಾಯೋ ಆಟ’; ಗಿರೀಶ್ ಕಾರ್ನಾಡರ ‘ಹಿಟ್ಟಿನ ಹುಂಜ’ ಮುಂತಾದವುಗಳ ಪ್ರಯೋಗಗಳು ಪ್ರೇಕ್ಷಕರ ಮನದಲ್ಲಿ ಬಹುಕಾಲ ಅಚೊತ್ತಿ ನಿಲ್ಲುವಂತೆ ಮಾಡಿವೆ. ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ತೋರಿದ ಪ್ರೇಮಾ ಕಾರಂತ್ ‘ಹೆಡ್ಡಾಯಣ’, ‘ಅಲಿಬಾಬ’, ‘ನಕ್ಕಳಾ ರಾಜಕುಮಾರಿ’, ‘ಅಜ್ಜಿಕಥೆ, ‘ಇಸ್ಪೀಟ್ ರಾಜ್ಯ’, ‘ಪಂಟರ ಶಾಲೆ’, ‘ಸಿಂದ್‌ಬಾದ್’ ಮುಂತಾದ ನಾಟಕಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಎರಕ ಹೊಯ್ದಿದ್ದಾರೆ. ‘ಜೋಕುಮಾರಸ್ವಾಮಿ’, ‘ಈಡಿಪಸ್’, ‘ಸಂಕ್ರಾಂತಿ’, ‘ಒಥೆಲೋ’, ‘ಕಿಂಗ್ ಲಿಯರ್’, ‘ಮ್ಯಾಕ್‌ಬೆತ್’ ಮುಂತಾದ ಕನ್ನಡ ನಾಟಕಗಳು ಮಾತ್ರವಲ್ಲದೇ ಕೆಲವು ಹಿಂದಿ, ಪಂಜಾಬಿ ನಾಟಕಗಳಲ್ಲೂ ದುಡಿದಿದ್ದಾರೆ. ಹಂಸಗೀತೆ, ಫಣಿಯಮ್ಮ, ಕುದುರೆ ಮೊಟ್ಟೆ, ಲಕ್ಷ್ಮೀಕಟಾಕ್ಷ ಮುಂತಾದ ಸಿನೆಮಾಗಳಿಗೂ ವಸ್ತ್ರವಿನ್ಯಾಸ ರೂಪಿಸಿ ಅಲ್ಲೂ ಸೊಬಗು, ಅರ್ಥವಂತಿಕೆಗಳನ್ನು ಸಾಕಾರಗೊಳಿಸಿದ್ದಾರೆ.
‘ಫಣಿಯಮ್ಮ’, ‘ನಕ್ಕಳಾ ರಾಜಕುಮಾರಿ’, ‘ಬಂದ್ ಝರೋಂಖೆ’ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೇಮಾ ಅವರನ್ನು ಮ್ಯಾನ್ ಹ್ಯಾಂ ಪ್ರಶಸ್ತಿ, ಪ್ಯಾರಿಸ್ ಚಲನಚಿತ್ರೋತ್ಸವದ ಪ್ರೇಕ್ಷಕರ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ, ಉತ್ತಮ ಚಲನಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳು ಇವರನ್ನರಸಿ ಬಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಕ್ರಿಯಾಶೀಲ ಪ್ರತಿಭೆ ಶ್ರೀಮತಿ ಪ್ರೇಮಾ ಕಾರಂತ್ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಟಿ.ಎಸ್. ನಾಗಾಭರಣ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿರುವ ಖ್ಯಾತನಾಮರು ಶ್ರೀ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು.
ಹಿಂದೂಸ್ತಾನಿ ಸಂಗೀತ ಗಾಯನದ ಮೂಲಕ ಕಲಾ ಪ್ರಪಂಚವನ್ನು ಪ್ರವೇಶಿಸಿದ ನಾಗಾಭರಣ ಅವರು ಜಾನಪದ ಗೀತೆ, ಮತ್ತು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದಲ್ಲೂ ಪರಿಶ್ರಮ ಪಡೆದವರು. ಶ್ರೀರಂಗರ ನಾಟಕಗಳಿಂದ ಪ್ರಭಾವಿತರಾದ ಶ್ರೀಯುತರು ಕಾಲೇಜು ಮಟ್ಟದಲ್ಲಿರುವಾಗಲೇ ನಾಟಕಗಳನ್ನು ನಿರ್ದೇಶಿಸತೊಡಗಿದರು. ಬಿ.ವಿ. ಕಾರಂತ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್ ಅವರಂತಹ ಗಣ್ಯರೊಡನೆ ಚಿತ್ರರಂಗದಲ್ಲಿ ಕೆಲಸಮಾಡುವ ಸುಯೋಗ ಇವರಿಗೆ ಒದಗಿಬಂದಿತು. ಗ್ರಾಮೀಣ ಹಿನ್ನೆಲೆಯಿಂದ ಬಂದ ಇವರು ಸಹಜವಾಗಿ ತಮ್ಮ ನಿರ್ದೇಶನದಲ್ಲಿ ಹಳ್ಳಿಯ ಸೊಗಡನ್ನು ಬಳಸಿಕೊಂಡರು. ಬೆನಕ ಹಾಗೂ ರಂಗಸಂಪದ ಕಲಾ ತಂಡಗಳ ನಿರ್ದೆಶಕರಾಗಿ ಪ್ರಶಂಸೆ ಗಳಿಸಿದರು..
ತಮ್ಮ ೨೫ ನೆಯ ವಯಸ್ಸಿನಲ್ಲಿಯೇ ‘ಗ್ರಹಣ’ ಚಿತ್ರಕಥೆ ಬರೆದು, ನಿರ್ದೇಶಿಸಿ ತೆರೆಗೆ ತಂದರು. ಆ ಚಿತ್ರಕ್ಕೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ. ಕಳೆದ ೨೫ ವರ್ಷಗಳಲ್ಲಿ ಅವರು ೨೮ ಚಿತ್ರಗಳನ್ನು ನಿರ್ಮಿಸಿದ್ದು ಹದಿನಾಲ್ಕು ಚಿತ್ರಗಳಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಅಲ್ಲದೆ ಆರು ಚಿತ್ರಗಳು ಭಾರತೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಅವುಗಳಲ್ಲಿ ನಾಗಮಂಡಲ ಮತ್ತು ಜನುಮದ ಜೋಡಿ ಹೆಚ್ಚು ಮೆಚ್ಚುಗೆಗೆ ಪಾತ್ರವಾದವು. ಶ್ರೀಯುತರು ಅನೇಕ ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನು, ಕಿರುತೆರೆ ಚಿತ್ರಗಳು ಹಾಗೂ ಚಲನಚಿತ್ರ, ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ, ಅಭಿನಯಿಸಿದ್ದಾರೆ ಕೂಡಾ.
ಬೆನಕ ಮಕ್ಕಳ ರಂಗ ಕೇಂದ್ರದ ಸ್ಥಾಪಕಾಧ್ಯಕ್ಷರಾಗಿ, ಚಲನಚಿತ್ರ ಅನುದಾನ ಸಮಿತಿಯ ಅಧ್ಯಕ್ಷರಾಗಿ ಹಾಗೂ ಅನೇಕ ರಂಗ ಮತ್ತು ಚಿತ್ರ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಅತ್ಯುನ್ನತ ಚಿತ್ರ ನಿರ್ದೇಶಕ ಪ್ರಶಸ್ತಿಯಾದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ ಪುರಸ್ಕಾರಗಳು ಇವರಿಗೆ ಸಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯಿಂದ ಪ್ರೇಕ್ಷಕರ ಅಭಿಮಾನ ಗಳಿಸಿರುವ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಗಾಯಕ ಹೀಗೆ ಬಹುಮುಖ ಪ್ರತಿಭೆಯುಳ್ಳ ಕನ್ನಡದ ಹೆಮ್ಮೆಯ ಕುವರ ಶ್ರೀ ಟಿ.ಎಸ್. ನಾಗಾಭರಣ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಎಂ.ಬಿ. ಪಾಟೀಲ್

ಕರ್ನಾಟಕದ ಕಲಾಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆಗಳಲ್ಲಿ ಮಹತ್ವದ ಹೆಸರು ಶ್ರೀ ಎಂ.ಬಿ. ಪಾಟೀಲ್ ಅವರದು.
ಬಿಜಾಪುರ ಜಿಲ್ಲೆಯ ತಿಕೋಟಾದಲ್ಲಿ ೧೯೩೯ರಲ್ಲಿ ಜನಿಸಿದ ಎಂ. ಬಿ. ಪಾಟೀಲ್ ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ತೋರಿ, ನಂತರ ಮುಂಬಯಿಯ ಜಿ.ಡಿ. ಆರ್ಟ್ಸ್ ಹಾಗೂ ನೂತನ್ ಕಲಾ ಮಂದಿರದಲ್ಲಿ ಕಲಾಭ್ಯಾಸ ಮಾಡಿದರು. ತಮ್ಮ ಕಲೆಯಿಂದ ಬಹಳ ಬೇಗ ಪ್ರಖ್ಯಾತಿಗೆ ಬಂದ ಪಾಟೀಲ್ ಅವರು ವ್ಯಕ್ತಿಚಿತ್ರ, ಭಿತ್ತಿ ಚಿತ್ರಗಳು, ವಾಸ್ತವ ಚಿತ್ರಣ, ಜಲವರ್ಣ, ಲ್ಯಾಂಡ್‌ಪ್‌ಗಳಲ್ಲಿ ಪರಿಣತರಾದರು.
ಭಾರತದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ಹಾಗೂ ಖಾಸಗಿ ಕಲಾಕ್ಷೇತ್ರಗಳಲ್ಲಿ ಅವರ ಅಪಾರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಪ್ರಾರಂಭದಲ್ಲಿ ಕರ್ನಾಟಕದಾದ್ಯಂತ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ ಎಂ. ಬಿ. ಪಾಟೀಲ್ ನಂತರ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿ ಖ್ಯಾತಿಗಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಲಲಿತ ಕಲಾ ಅಕಾಡೆಮಿಯ ಕಲಾ ಶಿಬಿರಗಳು, ದೆಹಲಿಯ ಆಧುನಿಕ ಕಲಾ ಗ್ಯಾಲರಿ, ಚೆನ್ನೈನ ದಕ್ಷಿಣ ವಲಯ ಶಿಬಿರ, ಕೇರಳದ ಭಿತ್ತಿ ಚಿತ್ರ ಕಲಾವಿದರ ಶಿಬಿರ, ಪಾಂಡಿಚೇರಿಯ ಕಲಾ ಶಿಬಿರ ಹೀಗೆ ಹಲವು ಹತ್ತು ಕಡೆ ಭಾಗವಹಿಸಿ ಕರ್ನಾಟಕಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕಲೆ ಕುರಿತು ಶ್ರೀಯುತರ ಉಪನ್ಯಾಸಗಳು ಹಾಗೂ ಪ್ರಾತ್ಯಕ್ಷಿಕೆಗಳು ಅತ್ಯಂತ ಜನಪ್ರಿಯವಾಗಿವೆ.
ಎಂ.ಬಿ. ಪಾಟೀಲರ ಸಾಧನೆಯನ್ನು ಗಮನಿಸಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ. ಮುಖ್ಯವಾಗಿ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸ್ಪರ್ಧಾತ್ಮಕ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಎಂ.ಟಿ.ವಿ. ಆಚಾರ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಹಿರಿಯ ತಲೆಮಾರಿನ ಕಲಾವಿದರಾಗಿ, ಕಿರಿಯ ತಲೆಮಾರಿಗೆ ಆದರ್ಶಪ್ರಿಯರಾಗಿ, ಸದಾ ಸ್ನೇಹಮಯಿ ಕಲಾವಿದರೆಂದು ಹೆಸರಾದವರು ಶ್ರೀ ಎಂ.ಬಿ. ಪಾಟೀಲ್ ಅವರು.

Categories
ನೃತ್ಯ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ.ಎಸ್. ಸುನಂದಾದೇವಿ

ಶ್ರೀಮತಿ ಬಿ. ಎಸ್. ಸುನಂದಾ ದೇವಿ ಕರ್ನಾಟಕದ ಪ್ರತಿಷ್ಠಿತ ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ ಮತ್ತು ಗುರು, ಪ್ರಖ್ಯಾತ ಗುರುಗಳಿಂದ ಕಲಿತು ಚಿಕ್ಕ ವಯಸ್ಸಿನಲ್ಲಿಯೇ ಎರಡೂ ಶೈಲಿಯ ನೃತ್ಯಗಳನ್ನು ಪಳಗಿಸಿಕೊಂಡವರು.
ಕಳೆದ ಮೂವತ್ತು ವರ್ಷಗಳಿಂದ “ಛಾಯಾ ನೃತ್ಯ ನಿಕೇತನ’ ಎಂಬ ಸಂಸ್ಥೆಯನ್ನು ನಡೆಸುತ್ತಾ ನೂರಾರು ಕಲಾ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುವ ಮೂಲಕ ಕಲಾ ಪ್ರಪಂಚಕ್ಕೆ ಅವರನ್ನು ಪರಿಚಯಿಸಿದ್ದಾರೆ.
ವೀಣಾವಾದನದಲ್ಲೂ ಸೈ ಎನ್ನಿಸಿಕೊಂಡವರು ಸುನಂದಾ ದೇವಿ. ಕರ್ನಾಟಕದಲ್ಲಿ ಕೂಚುಪುಡಿ ನೃತ್ಯವನ್ನು ಪದವಿ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ ಮೊಟ್ಟಮೊದಲ ಬಾರಿಗೆ ಕೂಚುಪುಡಿಗೆ ಪಠ್ಯಪುಸ್ತಕ ರಚಿಸಿ ಕಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೆ ಅಳವಡಿಸಬೇಕಾದ ಪಠ್ಯಕ್ರಮ ಕುರಿತು ಪಟ್ಟಿ ತಯಾರಿಸಿದ್ದಾರೆ. ಇವರ ಈ ಕ್ರಮವನ್ನು ಅನುಸರಿಸಿಯೇ ಪ್ರಸ್ತುತ ತಜ್ಞರ ತಂಡವು ಹಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೂ ಸಹ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದೆ.
‘ಸುಭದ್ರಾ ಕಲ್ಯಾಣ’, ‘ಮೋಹಿನಿ ಭಸ್ಮಾಸುರ’, ‘ಶ್ರೀ ವೆಂಕಟೇಶ್ವರ ಕಲ್ಯಾಣ’, ‘ರತಿಮನ್ಮಥ’, ‘ಶಿವರಂಜಿನಿ’, ‘ಕುಮಾರಸಂಭವ’ ಮೊದಲಾದ ರೂಪಕಗಳನ್ನು ನೃತ್ಯಕ್ಕೆ ಅಳವಡಿಸಿ ನಾಟ್ಯ ಸಂಯೋಜನೆ ಮಾಡಿದ್ದು ಇವು ಅಪಾರ ಜನಮೆಚ್ಚುಗೆಯನ್ನು ಗಳಿಸಿವೆ.
ಸುನಂದಾ ದೇವಿ ಅವರನ್ನು ಅರಸಿ ಬಂದ ಪ್ರಶಸ್ತಿ ಸನ್ಮಾನಗಳು ಅನೇಕ. ಶೃಂಗೇರಿ ಮಠದ ಜಗದ್ಗುರುಗಳಿಂದ ‘ನಾಟ್ಯ ಕಲಾಧರೆ’ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ, ಆರ್ಯಭಟ ಸಾಂಸ್ಕೃತಿಕ ಸಂಘದಿಂದ ‘ನಾಟ್ಯ ಶಾಂತಲಾ’ ಪ್ರಶಸ್ತಿ, ಸಿದ್ದಗಂಗಾ ಮಠದ ಸ್ವಾಮಿಗಳಿಂದ ಪುರಸ್ಕಾರಗಳೇ ಅಲ್ಲದೇ ಅನೇಕ ಸಂಘ ಸಂಸ್ಥೆಗಳು ಸಹ ಸುನಂದಾ ದೇವಿಯವರನ್ನು ಸನ್ಮಾನಿಸಿವೆ.
ದೇಶ ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿರುವ ಸುನಂದಾ ದೇವಿ ಪ್ರಮುಖವಾಗಿ ಚೀನಾ ದೇಶದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಂದಲೇ ‘ಕಿಸಾಗೌತಮಿ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ದಲಾಯಿಲಾಮಾ ಅವರು ಆ ನೃತ್ಯ ಪ್ರದರ್ಶನವನ್ನು ಅಪಾರವಾಗಿ ಮೆಚ್ಚಿಕೊಂಡರು.
ಎಸ್. ರಾಧಾಕೃಷ್ಣನ್, ಪಂಡಿತ ನೆಹರು, ಇಂದಿರಾ ಗಾಂಧಿ ಮೊದಲಾದವರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿ ಭರತ ನಾಟ್ಯ ಮತ್ತು ಕೂಚುಪುಡಿ ಶೈಲಿಗಳೆರಡರಲ್ಲೂ ಪರಿಣತಿ ಪಡೆದವರು ಶ್ರೀಮತಿ ಸುನಂದಾದೇವಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಎ. ಸುಂದರಮೂರ್ತಿ

ಸಂಗೀತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಮಹಾನ್ ಕಲಾವಿದ ಶ್ರೀ ಎ. ಸುಂದರಮೂರ್ತಿ ಅವರು.
೧೯೩೯ರಲ್ಲಿ ಜನಿಸಿದ ಶ್ರೀಯುತರದು ಸಂಗೀತದ ಮನೆತನ, ಪ್ರಾರಂಭದಲ್ಲಿ ಇಂಡಿಯನ್ ಟೆಲಿಫೋನ್‌ ಕಾರ್ಖಾನೆಯಲ್ಲಿ, ನಂತರ ಸಂಶೋಧನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ವೃತ್ತಿಗೆ ರಾಜೀನಾಮೆ ನೀಡಿ ಸಂಗೀತವನ್ನೇ ಸಂಪೂರ್ಣವಾಗಿ ಆಯ್ಕೆ ಮಾಡಿಕೊಂಡರು. ಆನುವಂಶಿಕವಾಗಿ ಬಂದ ಸಂಗೀತ ಪ್ರತಿಭೆಗೆ ಚೆಂಬೈ ಕೃಷ್ಣನ್ ಅವರಿಂದ ಪಡೆದ ಸಂಗೀತ ಶಿಕ್ಷಣದಿಂದ ಹೆಚ್ಚಿನ ಮೆರುಗು ಬಂದಿತು. ಪಂಡಿತ ಡಿ.ಬಿ. ಹರೀಂದ್ರ ಅವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಕೊಳಲು, ವೀಣೆ, ಸಿತಾರ್, ಮೃದಂಗಗಳಂಥ ಹತ್ತಾರು ವಾದ್ಯಗಳನ್ನು ಅವರೇ ಸ್ವತಃ ಕಲಿತುಕೊಂಡರು. ಅವರಿಗೆ ಕೊಳಲು ಮೆಚ್ಚಿನ ವಾದ್ಯವಾಯಿತು. ಹಲವು ವಾದ್ಯಗೋಷ್ಠಿಗಳ ನಿರ್ದೇಶಕರಾಗಿಯೂ ಶ್ರೀಯುತರು ಕೆಲಸ ಮಾಡಿದ ಹಾಗೂ ಕೊಳಲು ಮತ್ತು ಸಿತಾರ್ ವಾದ್ಯ ಸಹಕಾರಕ್ಕಾಗಿ ರಮಣಾಂಜಲಿ ತಂಡದೊಂದಿಗೆ ವಿದೇಶ ಪ್ರವಾಸ ಮಾಡಿದ ಹಿರಿಮೆ ಶ್ರೀ ಸುಂದರಮೂರ್ತಿ ಯವರದ್ದಾಗಿದೆ.
ಆಕಾಶವಾಣಿಯಲ್ಲಿ ಸುಗಮ ಸಂಗೀತ ನಿರ್ದೇಶಕರಾಗಿ, ಎಂ.ಎಸ್.ಐ.ಎಲ್. ನಡೆಸಿದ ಧ್ವನಿ ಮುದ್ರಣ ಕಾರ್ಯದ ನಿರ್ವಾಹಕರಾಗಿ, ಕರ್ನಾಟಕ ವಾರ್ತಾ ಇಲಾಖೆಯ ನ್ಯೂಸ್ ರೀಲ್‌ಗಳ ಸಂಗೀತ ನಿರ್ದೆಶಕರಾಗಿ, ಕರ್ನಾಟಕದ ಎಲ್ಲ ಮುಖ್ಯಸಂಗೀತ ಧ್ವನಿಮುದ್ರಣ ಸಂಸ್ಥೆಗಳಿಗೆ ನಿರ್ದೆಶಕರಾಗಿ, ಹಾಗೂ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಸಂಗೀತದ ಧ್ವನಿ ಮುದ್ರಣ ಕಾರ್ಯದಲ್ಲಿ ನಿರ್ದೆಶಕರಾಗಿ ಸಂಗೀತ ಕ್ಷೇತ್ರಕ್ಕೆ ಇವರು ಅಪಾರ ಸೇವೆ ಸಲ್ಲಿಸಿರುತ್ತಾರೆ.
ದಿ|| ಕಾಳಿಂಗರಾವ್, ದಿ|| ಮೈಸೂರು ಅನಂತಸ್ವಾಮಿ, ಶ್ರೀ ಸಿ. ಅಶ್ವಥ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ವೈ.ಕೆ. ಮುದ್ದು ಕೃಷ್ಣ, ಶ್ರೀಮತಿ ರತ್ನಮಾಲಾ ಪ್ರಕಾಶ್ ಮುಂತಾದ ಹಿರಿಯ ಹಾಗೂ ಕಿರಿಯ ಗಾಯಕರಿಗೆ ವಾದ್ಯ ಸಹಕಾರ ನೀಡಿರುತ್ತಾರೆ. ಶ್ರೀಯುತರ ಸ್ವಂತ ಧ್ವನಿ ಮುದ್ರಣ ನಿರ್ದೆಶನದಲ್ಲಿ ಸರ್ವಶ್ರೀ ಆರ್.ಕೆ. ಶ್ರೀಕಂಠನ್, ಶ್ರೀ ಹೆಚ್.ಕೆ. ನಾರಾಯಣ, ರಾಜಕುಮಾರ ಭಾರತಿ, ವಿದ್ಯಾಭೂಷಣರಂಥ ಹಲವಾರು ಶ್ರೇಷ್ಠ ಗಾಯಕರು ಹಾಡಿರುತ್ತಾರೆ.
ಮುನ್ನೂರಕ್ಕೂ ಹೆಚ್ಚು ಕ್ಯಾಸೆಟ್ಟುಗಳಿಗೆ ಸಂಗೀತ ನಿರ್ದೆಶನ ಮಾಡಿರುವ ಶ್ರೀ ಎ. ಸುಂದರಮೂರ್ತಿ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಆಸಕ್ತಿಯುಳ್ಳವರು.
ಸುಮಾರು ೬೦ ರಾಗಗಳ ನೂತನ ರೀತಿಯ ಲಕ್ಷಣ ಗೀತೆಗಳ ರಚನೆ, ಸ್ವರಜತಿ, ವರ್ಣ, ಕೀರ್ತನೆಗಳ ರಚನೆ ಮಾಡಿ ಸಂಗೀತ ಜ್ಞಾನದ ಪರಿಪೂರ್ಣತೆಗೆ ಸಾಕ್ಷಿಯಾಗಿರುವವರು ಶ್ರೀ ಎ. ಸುಂದರಮೂರ್ತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಎಸ್.ಕೆ. ವಸುಮತಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸುಮಾರು ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅನನ್ಯ ಸಾಧಕಿ ಶ್ರೀಮತಿ ಎಸ್.ಕೆ. ವಸುಮತಿ ಅವರು.
ಮೈಸೂರಿನಲ್ಲಿ ೧೯೩೪ನೆಯ ಇಸವಿಯಲ್ಲಿ ಜನಿಸಿರುವ ಶ್ರೀಮತಿ ವಸುಮತಿ ಅವರು ತಂದೆ ಶ್ರೀ ಕೃಷ್ಣಸ್ವಾಮಿ ಅವರ ಪ್ರೋತ್ಸಾಹದಿಂದಾಗಿ ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಪ್ರಾರಂಭಿಸಿದರು. ವಿದ್ವಾನ್ ಎಂ.ವಿ. ಕೃಷ್ಣಪ್ಪ, ವಿದ್ವಾನ್ ಆರ್.ಕೆ. ರಾಮನಾಥನ್, ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರಂತಹ ನಾದಲೋಕದ ದಿಗ್ಗಜರಲ್ಲಿ ಶಿಷ್ಯವೃತ್ತಿ ಪಡೆದು ಆಕಾಶವಾಣಿಯಲ್ಲಿ ಗಾಯನ ಕಲಾವಿದೆಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಸುಮಾರ ಇನ್ನೂರಕ್ಕೂ ಹೆಚ್ಚು ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವ ಕೀರ್ತಿ. ಕನ್ನಡ ಕವಿಗಳ ಹೊಸ ಕವಿತೆಗಳನ್ನು ‘ನವಸುಮ’ ಕಾರ್ಯಕ್ರಮದಡಿ ಪ್ರಸ್ತುತಪಡಿಸಿ ಕಾವ್ಯಲೋಕದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ವತಃ ಕವಿ ಕುವೆಂಪು, ಪುತಿನ, ಡಿವಿಜಿಯವರಿಂದ ಮೆಚ್ಚುಗೆ, ಪ್ರೋತ್ಸಾಹ ಪಡೆದ ಹೆಗ್ಗಳಿಕೆ ಇವರದು.
ಎಳೆಯ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ ನೀಡಿ ಐನೂರಕ್ಕೂ ಹೆಚ್ಚು ಸಮರ್ಥ ಶಿಷ್ಯರ ತಂಡ ರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ‘ರಾಗತರಂಗ’ ಎಂಬ ಹೆಸರಿನಲ್ಲಿ ಕನ್ನಡದ ಪ್ರಖ್ಯಾತ ನೃತ್ಯ ರೂಪಕಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಕರ್ನಾಟಕ ಕಲಾಶ್ರೀ, ಅನನ್ಯ ಕಲಾಭಿಜ್ಞ ಹಂಸಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಗಾಯನ, ಬೋಧನ, ನಿರ್ದೇಶನಗಳಲ್ಲಿ ಸಂಪೂರ್ಣವಾಗಿ ಇಂದಿಗೂ ತೊಡಗಿಸಿಕೊಂಡಿರುವ ಹಿರಿಯ ಗಾನಶಿರೋಮಣಿ ಶ್ರೀಮತಿ ಎಸ್.ಕೆ. ವಸುಮತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮೈಸೂರು ಎಂ. ಮಂಜುನಾಥ್

ಪ್ರತಿಭಾವಂತ ಪಿಟೀಲು ವಾದಕ ಡಾ. ಮೈಸೂರು ಎಂ. ಮಂಜುನಾಥ್ ಅವರು.
ಸಂಗೀತ ಕುಟುಂಬದಲ್ಲಿ ಜನಿಸಿದ ಡಾ. ಮೈಸೂರು ಎಂ. ಮಂಜುನಾಥ್ ಅವರ ತಂದೆ ಪ್ರಸಿದ್ದ ಸಂಗೀತ ವಿದ್ವಾಂಸರಾದ ಶ್ರೀ ಮಹದೇವಪ್ಪ, ಸಹೋದರ ಮೈಸೂರು ನಾಗರಾಜ್ ಅವರು. ತಂದೆಯವರಲ್ಲಿ ಶಿಕ್ಷಣ ಪಡೆದು, ಎಂಟನೆಯ ವಯಸ್ಸಿನಲ್ಲಿಯೇ ಸಂಗೀತ ಕಚೇರಿಯನ್ನು ನೀಡಿ ವಿಸ್ಮಯಗೊಳಿಸಿದ ಶ್ರೀಯುತರು ಅದ್ಭುತ ಬಾಲಪ್ರತಿಭೆಯೆಂದು ಸಂಗೀತ ವಿದ್ವಾಂಸರು, ಕಲಾಭಿಮಾನಿಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾದರು.
ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ರವರು ರಾಜ್ಯದ ಹೆಮ್ಮೆಯ ದ್ವಂದ್ವ ಪಿಟೀಲು ವಾದಕರು. ಅಮೆರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಸಿಂಗಾಪುರ ಹಾಗೂ ಇನ್ನಿತರ ದೇಶಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಕ್ರಮ ನೀಡಿರುವ ಡಾ. ಮೈಸೂರು ಎಂ. ಮಂಜುನಾಥ್ ತಮ್ಮ ಪಿಟೀಲು ಕಾರ್ಯಕ್ರಮಗಳ ಮೂಲಕ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವುದಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಮ್ಯೂಸಿಕ್ ಪದವಿಯಲ್ಲಿ ಪ್ರಥಮ ಬ್ಯಾಂಕನ್ನು ಪಡೆದ ಶ್ರೀಯುತರು ಪಿಹೆಚ್.ಡಿ. ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆಗೈದಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ಶ್ರೀಯುತರು ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಅಸಂಖ್ಯಾತ ಜುಗಲ್‌ಬಂದಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುವ ಶ್ರೀಯುತರು ಅತ್ಯುತ್ತಮ ವಯೋಲಿನ್ ವಾದಕ ಪ್ರಶಸ್ತಿ, ಪ್ರತಿಷ್ಠಿತ ಅಮೆರಿಕನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಭಾಜನರು.
ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಲೋಕದಲ್ಲಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಅನನ್ಯ ಕಲಾವಿದರು ಡಾ. ಮೈಸೂರು ಎಂ. ಮಂಜುನಾಥ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವವರು ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.
ಬಿಜಾಪುರ ಜಿಲ್ಲೆಯ ಕಲಿಕೇರಿ ಗ್ರಾಮದಲ್ಲಿ ೧೯೪೦ ರಲ್ಲಿ ಜನಿಸಿದ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ತಂದೆ ಭಕ್ತಿ ಗೀತೆಗಳ ಗಾಯಕರು. ತಂದೆಯಿಂದ ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ತಳೆದ ಶ್ರೀಯುತರು ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು ಹಾಗೂ ಕವಿ ಮತ್ತು ಲೇಖಕರು. ಗ್ವಾಲಿಯರ್ ಘರಾನಾಕ್ಕೆ ಸೇರಿದ ಹಿಂದೂಸ್ತಾನಿ ಗಾಯಕರಾದ ಹಾಗೂ ವಾದ್ಯಗಾರರಾದ ಪಂಡಿತ ಪುಟ್ಟರಾಜ ಗವಾಯಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದ ಶ್ರೀಯುತರು ಆಕಾಶವಾಣಿ ಮಾನ್ಯತೆ ಪಡೆದ ಗಾಯಕರು.
ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗಾಯಕರಲ್ಲದೆ ಹೃದಯ ಮುಟ್ಟುವ ಸುಪ್ರಭಾತಗಳನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಬನಾರಸ್, ಹೈದರಾಬಾದ್, ಚೆನ್ನೈ, ಪುಣೆ ಮುಂತಾಗಿ ರಾಷ್ಟ್ರಾದ್ಯಂತ ಸಂಗೀತ ಕಚೇರಿ ನೀಡಿರುವ ಶ್ರೀಯುತರು ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಕರ್ನಾಟಕದಲ್ಲಿ ಅನೇಕ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಶ್ರೀಯುತರ ಸಂಗೀತ ನಿರ್ದೆಶನದಲ್ಲಿ ಪ್ರಮುಖ ಹಿನ್ನೆಲೆ ಗಾಯಕರಾದ ಡಾ. ಪಿ.ಬಿ. ಶ್ರೀನಿವಾಸ, ಡಾ. ರಾಜಕುಮಾರ್, ಜಿ.ವಿ. ಅತ್ರಿ ಮುಂತಾದವರು ಹಾಡಿರುತ್ತಾರೆ. ಇವರ ಗಾನಭಾರತಿ, ಭಾವ ಭಗವದ್ಗೀತೆ ಸಂಗೀತ ಗ್ರಂಥಗಳನ್ನು ಪ್ರಕಟಿಸಿರುವ ಎಂಟು ಗ್ರಾಮಫೋನ್ ರೆಕಾರ್ಡುಗಳು, ಹದಿನಾಲ್ಕು ಆಡಿಯೋ ಕ್ಯಾಸೆಟ್‌ಗಳು, ನಾಲ್ಕು ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಯುತರು ‘ಮಹಾತಪಸ್ವಿ’ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಕವನ ಸಂಕಲನಗಳು, ಮೂರು ಕಾದಂಬರಿಗಳು, ಮೂರು ಜೀವನಚರಿತ್ರೆ ರಚಿಸಿರುವುದಲ್ಲದೆ ಪಂಚಾಕ್ಷರವಾಣಿಯ ಸಹಸಂಪಾದಕರಾಗಿ, ಇವರ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು ಇವರ ಸಂಗೀತ ಸಾಧನೆಗಾಗಿ ಬಿರುದುಗಳನ್ನಿತ್ತು ಸನ್ಮಾನಿಸಿವೆ.
ಭಕ್ತಿ ಸಂಗೀತ ಗಾಯನದಲ್ಲಿ ಪ್ರಸಿದ್ಧಿ ಪಡೆದ, ಹಿಂದೂಸ್ತಾನಿ ಗಾಯಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಉಸ್ತಾದ್ ಶೇಖ್ ಹನ್ನುಮಿಯ್ಯಾ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆಗೈದು ನೂರಾರು ಶಿಷ್ಯರನ್ನು ತರಬೇತುಗೊಳಿಸಿ, ಭಾವೈಕ್ಯದ ಸಂದೇಶವನ್ನು ಸಂಗೀತದ ಮೂಲಕ ಕೃತಿಗಿಳಿಸಿರುವ ಮಧುರಕಂಠದ ಗಾಯಕ ಉಸ್ತಾದ್ ಶೇಖ್ ಹನ್ನು ಮಿಯ್ಯಾ ಅವರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೊರೂರಿನಲ್ಲಿ ೧೯೩೧ರಲ್ಲಿ ಜನಿಸಿದರು. ಪ್ರಕೃತಿಯ ವರವಾಗಿ ಬಂದ ಇಂಪಾದ ಕಂಠಸಿರಿಯನ್ನು ಹೊಂದಿದ್ದ ಶ್ರೀಯುತರು ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಒಂಬತ್ತು ವರ್ಷದವರಾಗಿದ್ದಾಗಲೇ ಸಾರಂಗಿ ವಾದಕರಾಗಿದ್ದ ತಂದೆ ತೀರಿಕೊಂಡರು. ಬಡತನದ ನಡುವೆಯೂ ಪೂನಾಕ್ಕೆ ಹೋಗಿ ಭಾಸ್ಕರ ಸಂಗೀತ ವಿದ್ಯಾಲಯದಲ್ಲಿ ಒಂದು ವರ್ಷ ಸಂಗೀತ ಕಲಿತರು. ಅನಂತರ ಪರಭಣಿ ಎಂಬ ಊರಿನಲ್ಲಿ ಉಸ್ತಾದ್ ಡಾ. ಗುಲಾಮ ರಸೂಲ ಇವರ ಬಳಿ ೧೨ ವರ್ಷ ಎಡೆಬಿಡದೆ ಶ್ರಮಪಟ್ಟು ಅಭ್ಯಾಸ ನಡೆಸಿದರು. ಹಿಂದೂಸ್ತಾನಿ ಸಂಗೀತದ ಎಲ್ಲ ಆಯಾಮಗಳ ಪರಿಚಯ ಮಾಡಿಕೊಂಡ ಶ್ರೀಯುತರು ಸೊಲ್ಲಾಪುರ, ಕೊಲ್ಲಾಪುರ, ಬೆಳಗಾವಿ, ಮೊದಲಾದ ಪಟ್ಟಣಗಳಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಶಿಷ್ಯವೃಂದವನ್ನು ತರಬೇತುಗೊಳಿಸಿದರು.
೧೯೭೯ರಲ್ಲಿ ಭಾಲ್ಕಿ ಗ್ರಾಮಕ್ಕೆ ಬಂದು ಅಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ನೂರಾರು ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದರು. ಇವರ ಶಾಲೆಗೆ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಮಾನ್ಯತೆಯು ಲಭಿಸಿತು. ಕೊಳಲು, ತಬಲಾ ಹೀಗೆ ಇನ್ನಿತರ ವಾದ್ಯಗಳನ್ನು ಕಲಿಸತೊಡಗಿದರು. ಶಿಷ್ಯರೊಡಗೂಡಿ ಮಸೀದಿ, ಚರ್ಚು, ದೇವಸ್ಥಾನಗಳಲ್ಲಿ ತಮ್ಮ ಗಾಯನದ ರಸಗಂಗೆಯನ್ನು ಹರಿಸಿ ಜನ ಸಮೂಹದ ಮನಸೂರೆಗೊಂಡರು. ಸಹಜ ಗಾನದ ಮೋಡಿಯಿಂದ ಎಲ್ಲ ಜಾತಿ, ವರ್ಗಗಳ ಪ್ರೀತಿಗೆ ಪಾತ್ರರಾದರು ಶ್ರೀಯುತರು ನಿಜವಾದ ಅರ್ಥದಲ್ಲಿ ಭಾವೈಕ್ಯದ ಪ್ರತೀಕವಾಗಿದ್ದಾರೆ.
ಶ್ರೀಯುತರ ಗಾಯನ ಸಾಧನೆಯನ್ನು ಗಮನಿಸಿ ಜನ ಸಂಘಟನೆಗಳು ಪರಭಣಿ, ಮಹಾರಾಷ್ಟ್ರದ ಅಹ್ಮದ್‌ನಗರ, ಪಾಥರಡಿ, ಮಿರಜಗಾಂವ್, ಉದಗೀರ್ ಮೊದಲಾದ ಸ್ಥಳಗಳಲ್ಲಿ ಸಾರ್ವಜನಿಕ ಸನ್ಮಾನ ಮಾಡಿ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸಿವೆ. ಆಕಾಶವಾಣಿಯಲ್ಲಿ ಇವರ ಸಂಗೀತ ಬಿತ್ತರಗೊಂಡಿದೆ.
ಅಚಲ ಶ್ರದ್ಧೆ, ಅದಮ್ಮ ನಿಷ್ಠೆ, ಸತತ ಸಾಧನೆಗಳಿಂದ ಸಿದ್ದಿ ಪಡೆದು ಸ್ವಂತ ಪರಿಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಸಂಪಾದಿಸಿದ ಶ್ರೇಷ್ಠ ಹಿಂದೂಸ್ತಾನಿ ಗಾಯಕ ಉಸ್ತಾದ್ ಶೇಖ್ ಹನ್ನುಮಿಯ್ಯಾ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್

ಪ್ರಸಿದ್ಧ ವೀಣಾವಾದಕರು, ಸಂಗೀತ ಅಧ್ಯಾಪಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.
ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಏಳನೆಯ ವಯಸ್ಸಿನಿಂದಲೇ ವೈಣಿಕ ಪ್ರವೀಣ ವಿ. ವೆಂಕಟಗಿರಿಯಪ್ಪನವರು, ಪ್ರೊ. ಆರ್.ಎನ್. ದೊರೆಸ್ವಾಮಿಯವರು ಮತ್ತು ಪದ್ಮಭೂಷಣ ಲಾಲ್ಗುಡಿ ಜಿ. ಜಯರಾಮನ್ ಅವರ ಶಿಷ್ಯರು. ವೀಣೆ ಶೇಷಣ್ಣನವರ ವೀಣಾ ಪರಂಪರೆಗೆ ಸೇರಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಹದಿನೈದನೆ ವಯಸ್ಸಿನಲ್ಲಿಯೇ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಾದ್ಯಂತ ಮತ್ತು ದುಬೈ, ನ್ಯೂಜಿಲೆಂಡ್ ಮುಂತಾದ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರಾಗಿದ್ದು, ೧೯೫೦ರಿಂದ ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಮತ್ತು ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದು, ಅನೇಕ ಶಿಷ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಗಾನಕಲಾ ಪರಿಷತ್ತಿನ ೨೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಬಿರುದು, ಗಾಯನ ಸಮಾಜದ ‘ವರ್ಷದ ಕಲಾವಿದೆ’, ಮೈಸೂರು ತ್ಯಾಗರಾಜ ಗಾಯನ ಸಭೆಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ನ್ಯೂಜಿಲೆಂಡ್‌ನಲ್ಲಿ ಆಕ್‌ಲೆಂಡ್ ಕರ್ನಾಟಕ ಮ್ಯೂಸಿಕ್ ಸೊಸೈಟಿಯ ಕಲಾ ಸಲಹೆಗಾರರು ಮತ್ತು ಪೋಷಕರು ಆಗಿದ್ದಾರೆ. ಲಂಡನ್‌ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪಠ್ಯ ಚಟುವಟಿಕೆಗಳ ಸಮಿತಿ ಅಧ್ಯಕ್ಷರಾಗಿ, ಮುಖ್ಯ ಪರೀಕ್ಷಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದುದಾಗಿ ಲಂಡನ್ ಮುಖ್ಯಸ್ಥರಿಂದ ಮನ್ನಣೆ ಪಡೆದ ಹೆಗ್ಗಳಿಕೆ
ಇವರದು.
ಲಂಡನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಾಗಿ ಪಠ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಿ ಮನ್ನಣೆ ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು `ವಾಗ್ಗೇಯ ವೈಭವ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಕ್ಯಾಸೆಟ್‌ಗಳು ಪ್ರಚಲಿತವಾಗಿವೆ. ಪಂಚವೀಣಾ ವಾದ್ಯ ಸಮ್ಮಿಲನದ ‘ಶೃಂಗಾರವೀಣಾ ಮಾಧುರಿ’ ನಿರ್ದೇಶಕರು.
ಮೈಸೂರು ಬಾನಿಯ ವೀಣಾವಾದನಕ್ಕೆ ಹೆಸರಾದ ಪ್ರತಿಭಾವಂತ ವೀಣಾವಾದಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಡಿ. ಲಿಂಗಯ್ಯ

ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದ, ಬರಹ ಭಾಷಣಗಳಲ್ಲಿ ಅಪರೂಪದ ಒಳನೋಟಗಳನ್ನು ನೀಡಬಲ್ಲ ಜಾನಪದ ತಜ್ಞರು ಪ್ರೊ. ಡಿ. ಲಿಂಗಯ್ಯ ಅವರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ೧೯೩೯ ರಲ್ಲಿ ಜನಿಸಿದ ಪ್ರೊ. ಡಿ. ಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ಬೆಂಗಳೂರು ವಿಶ್ವೇಶ್ವರಪುರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಕನ್ನಡ ಪ್ರಾಧ್ಯಾಪಕ, ಕಾಲೇಜಿನ ಪ್ರಾಚಾರ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಹೀಗೆ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿ ೧೯೯೭ ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿಗಳು, ಎರಡು ವ್ಯಕ್ತಿಚಿತ್ರಗಳು, ಹನ್ನೊಂದು ಕವನಸಂಗ್ರಹಗಳು, ಮೂರು ಕಥಾಸಂಗ್ರಹಗಳು, ನಾಲ್ಕು ನಾಟಕಗಳು, ಮೂರು ಚರಿತ್ರೆ (ಸ್ವಾತಂತ್ರ್ಯ ಚಳುವಳಿ), ಮೂರು ವಿಮರ್ಶೆ, ಐದು ಜೀವನಚರಿತ್ರೆ, ೧೬ ಜಾನಪದ ಕೃತಿಗಳನ್ನು ರಚಿಸಿರುವುದಲ್ಲದೆ ೧೪ ಕೃತಿಗಳನ್ನು ಸಂಪಾದಿಸಿದ್ದಾರೆ. ಶ್ರೀಯುತರ ಲೇಖನಗಳು ಪತ್ರಿಕೆಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರೊ. ಡಿ. ಲಿಂಗಯ್ಯ ಅವರು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ — ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಯಲು ಸೀಮೆಯ ಜನಪದ ಗೀತೆಗಳು’ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ‘ಕರ್ನಾಟಕ ಜಾನಪದ ಕಾವ್ಯಗಳು’ ಕೃತಿಗೆ ರಾಜ್ಯ ಸರ್ಕಾರದ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ, ಡಾ. ಜೀ.ಶಂ.ಪ. ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಜಾನಪದ ವಿದ್ವಾಂಸರು ಪ್ರೊ. ಡಿ. ಲಿಂಗಯ್ಯ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡದ ಪ್ರಸಿದ್ದ ಕವಿ, ನಾಟಕಕಾರ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನಕಾರ, ಸಾಹಿತ್ಯ ಲೋಕದ ಗಣ್ಯ ಬರಹಗಾರ ಡಾ|| ಎಚ್.ಎಸ್. ವೆಂಕಟೇಶಮೂರ್ತಿ ಅವರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ಜನಿಸಿದ ಡಾ. ವೆಂಕಟೇಶಮೂರ್ತಿ ಅವರು ಬಾಲ್ಯದಿಂದಲೇ ಪ್ರತಿಭಾವಂತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಜೀವನ ನಡೆಸಿ ಇದೀಗ ನಿವೃತ್ತರಾಗಿದ್ದಾರೆ.
ಆಳವಾದ ಚಿಂತನೆ, ಸುಲಭಗ್ರಾಹ್ಯ ನಿರೂಪಣೆ, ಆಕರ್ಷಕ ಶೈಲಿ ಇವರ ಬರವಣಿಗೆಯ ವೈಶಿಷ್ಟ್ಯ. “ಪರಿವೃತ್ತ’, ‘ಬಾಗಿಲ ಬಡಿವ ಜನ’, ‘ಮೊಗ್ತಾ’, ‘ಕ್ರಿಯಾಪರ್ವ’, ‘ಒಣಮರದ ಗಿಳಿಗಳು, ‘ಸೌಗಂಧಿಕ’, ‘ಇಂದುಮುಖಿ’, ‘ಹರಿಗೋಲು’, ‘ಮರೆತ ಸಾಲುಗಳು’, ‘ಎಲೆಗಳು ನೂರಾರು’, ‘ಅಗ್ನಿ ಸಂಭ’, ‘ಎಷ್ಟೊಂದು ಮುಗಿಲು’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ.
ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಉರಿಯ ಉಯ್ಯಾಲೆ, ಹೂವಿ ಮತ್ತು ಸಂಧಾನ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕವಿತೆ, ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳನ್ನು ಬರೆದು ಜನಪ್ರಿಯ ಮಕ್ಕಳ ಸಾಹಿತಿ ಎಂದು ಮನ್ನಣೆ ಗಳಿಸಿದ್ದಾರೆ.
‘ನೂರು ಮರ ನೂರು ಸ್ವರ’, ‘ಕಥನ ಕವನ’, ‘ಮೇಘದೂತ’, ‘ಕವಿತೆಯ ಜೋಡಿ’, ‘ಆಕಾಶದ ಹಕ್ಕು ಮುಂತಾದ ಇವರ ವಿಮರ್ಶಾ ಬರವಣಿಗೆಗಳು ವಿದ್ವತ್ ಲೋಕದ ಮೆಚ್ಚುಗೆಗೆ ಪಾತ್ರವಾಗಿವೆ.
ಇವರು ಬರೆದ ಅನೇಕ ಕವಿತೆಗಳು, ನಾಟಕಗಳು ಹಿಂದಿ, ಇಂಗ್ಲಿಷ್, ತೆಲುಗು, ತಮಿಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ ಅನಿಕೇತನದ ಸಂಪಾದಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ನಾಟಕ ಹಾಗೂ ಬಂಗಾಳಿ ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಡಾ|| ವೆಂಕಟೇಶಮೂರ್ತಿ ಅವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ. ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ. ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಮೊದಲಾದ ಗೌರವಗಳು ಶ್ರೀಯುತರಿಗೆ ಸಂದಿವೆ.
ಸಾಹಿತ್ಯ ವಲಯದ ಬಹುತೇಕ ಎಲ್ಲ ಹಿರಿ ಕಿರಿಯರೊಡನೆ ಸ್ನೇಹಪೂರ್ಣ ಸಂಬಂಧವಿರಿಸಿಕೊಂಡು, ಎಳೆಯ ಪ್ರತಿಭೆಗಳನ್ನು ಉತ್ತೇಜಿಸುತ್ತ ಸದಾ ಹಸನ್ಮುಖಿಯಾಗಿರುವ ಕನ್ನಡದ ಗಣ್ಯ ಸಾಹಿತಿ ಡಾ|| ಎಚ್‌. ಎಸ್. ವೆಂಕಟೇಶಮೂರ್ತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸೋಮಶೇಖರ ಇಮ್ರಾಪೂರ

ಕವಿ, ಸಂಶೋಧಕ, ಪ್ರಾಧ್ಯಾಪಕ, ಅಂಕಣಕಾರ, ಜಾನಪದ ತಜ್ಞರು ಡಾ. ಸೋಮಶೇಖರ ಇಮ್ರಾಪೂರ ಅವರು. ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ೧೯೪೦ರಲ್ಲಿ ಜನಿಸಿದ ಡಾ. ಸೋಮಶೇಖರ ಇಮ್ರಾಪೂರ ಅವರಿಗೆ ಕನ್ನಡ ಎಂ.ಎ.ಯಲ್ಲಿ ಸುವರ್ಣಪದಕ, ಜಾನಪದ ಒಗಟುಗಳು ಪಿಹೆಚ್.ಡಿ. ಪ್ರೌಢ ಪ್ರಬಂಧಕ್ಕೆ ಸುವರ್ಣಪದಕಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಡಾ. ಇಮ್ರಾಪೂರ ಅವರು ವಿಶ್ವವಿದ್ಯಾನಿಲಯದ ವಿದ್ವತ್ ವಲಯದಲ್ಲಿ ನಾನಾ ಅಧಿಕಾರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಡಾ. ಇಮ್ರಾಪೂರ ಅವರು ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಸಂಪಾದನೆ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಸಂಸ್ಕೃತಿಗೆ ಸಂಬಂಧಿಸಿದಂತೆ ೩೮ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಜಾನಪದ ಸಾಹಿತ್ಯ, ಸಂಶೋಧನೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ಜಾನಪದ ಅಧ್ಯಯನದ ಕ್ಷಿತಿಜವನ್ನು ವಿಸ್ತರಿಸಿದ ಶ್ರೀಯುತರು ಸಾವಿರ ಒಗಟುಗಳು, ಜನಪದ ಮಹಾಭಾರತ, ಜಾನಪದ ವಿಜ್ಞಾನ, ಜಾನಪದ ವ್ಯಾಸಂಗ ಹೀಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ವಿದ್ವಾಂಸರಾಗಿರುವಂತೆ ಸಮರ್ಥ ಕವಿಯೂ ಆಗಿರುವ ಡಾ. ಇಮ್ರಾಪೂರ ಅವರು ಬಿಸಿಲ ಹೂ, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಹುತ್ತಗಳು ಹಾಗೂ ಕನ್ನಡ ಕಾವ್ಯಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ದಾಂಗ’ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಲಾಲಿಸಿ ಕೇಳ ನನಮಾತ’, ‘ಅಂಕಣ ಬರಹ’, ಭಾವತೀವ್ರತೆಯಿಂದ ಕೂಡಿದ ಗದ್ಯ ಬರವಣಿಗೆಗೆ ಹೆಗ್ಗುರುತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ೨೮ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರೆಂಬ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಗೌರವಿಸಿದೆ. ಬೇವು ಬೆಲ್ಲ’ ಅಭಿನಂದನಾ ಗ್ರಂಥವನ್ನು ಶ್ರೀಯುತರಿಗೆ
ಅರ್ಪಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರ ಜಾನಪದ ಅಧ್ಯಯನ ವಿಭಾಗವನ್ನು ಕಟ್ಟಿ ಬೆಳೆಸಿ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಜಾನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪೂರ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಬರಗೂರು ರಾಮಚಂದ್ರಪ್ಪ

ಜನಪ್ರಿಯ ಪ್ರಾಧ್ಯಾಪಕ, ಬಂಡಾಯ ಸಾಹಿತ್ಯದ ಸೃಜನಶೀಲ ಲೇಖಕ, ಅದ್ಭುತ ಭಾಷಣಕಾರ, ಕ್ರಿಯಾಶೀಲ ಸಾಂಸ್ಕೃತಿಕ ವ್ಯಕ್ತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಬರಗೂರಿನಲ್ಲಿ, ಬಿ.ಎ. ಪದವಿಯನ್ನು ತುಮಕೂರಿನಲ್ಲಿ, ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಬರಗೂರರು ಸಾಹಿತಿಯಾಗಿ ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮಗೀತೆ, ಮಗುವಿನ ಹಾಡು ಕವನ ಸಂಕಲನಗಳು; ಸುಂಟರಗಾಳಿ, ಕಪ್ಪುನೆಲದ ಕೆಂಪು ಕಾಲು, ಒಂದು ಊರಿನ ಕತೆಗಳು (ಆಯ್ದ ಕತೆಗಳು) ಕಥಾ ಸಂಕಲನಗಳು; ಸೂತ್ರ, ಉಕ್ಕಿನ ಕೋಟೆ, ಒಂದು ಊರಿನ ಕತೆ, ಬೆಂಕಿ, ಸೂರ್ಯ, ಸಂಗಪ್ಪನ ಸಾಹಸಗಳು, ಸೀಳು ನೆಲ, ಭರತನಗರಿ, ಗಾಜಿನ ಮನೆ, ಸ್ವಪ್ನ ಮಂಟಪ ಕಾದಂಬರಿಗಳು; ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ಇಣಕುನೋಟ, ಸಂಸ್ಕೃತಿ-ಉಪಸಂಸ್ಕೃತಿ, ವರ್ತಮಾನ, ರಾಜಕೀಯ ಚಿಂತನೆ ವಿಚಾರ ವಿಮರ್ಶೆಯ ಕೃತಿಗಳು; ಕಪ್ಪುಹಲಗೆ, ಕೋಟೆ, ನಾಟಕಗಳಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ೨೫೦ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ ಕೀರ್ತಿ ಶ್ರೀಯುತರದು.
ಎರಡು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನಾ ಸ್ಥಾಪಕರಾಗಿ, ಸಂಚಾಲಕರಾಗಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೌಲಿಕ ಸೇವೆ ಸಲ್ಲಿಸಿದ್ದಾರೆ.
ಬರಗೂರರು ನಿರ್ದೇಶಿಸಿದ ಚಲನಚಿತ್ರಗಳು ಒಂದು ಊರಿನ ಕಥೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲುವೇಷ ಮತ್ತು ಹಲವಾರು ಸಾಕ್ಷ್ಯಚಿತ್ರಗಳು, ಸುಂಟರಗಾಳಿ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಊರಿನ ಕಥೆ ಚಿತ್ರಕ್ಕೆ ಶ್ರೇಷ್ಠ ಲೇಖಕ, ಶ್ರೇಷ್ಠ ಸಂಭಾಷಣಕಾರ, ಚಲನಚಿತ್ರ ಪ್ರಶಸ್ತಿ, ಬೆಂಕಿ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕೋಟೆ ಚಿತ್ರಕ್ಕೆ ಶ್ರೇಷ್ಠ ಗೀತರಚನಕಾರ ಪ್ರಶಸ್ತಿ, ಜನುಮದ ಜೋಡಿ ಚಿತ್ರಕ್ಕೆ ಶ್ರೇಷ್ಠ ಸಂಭಾಷಣಕಾರ ಉದಯ ಟಿ.ವಿ. ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹೀಗೆ ಬರಗೂರರು ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಾಗಿ ಪಡೆದ ಪ್ರಶಸ್ತಿ ಪುರಸ್ಕಾರಗಳು ಹಲವು.
ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮುಂತಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಒಳಸುಳಿಗಳನ್ನು ಅಭಿವ್ಯಕ್ತಿಸಿದ ವೈವಿಧ್ಯಮಯ ಕೃತಿಗಳ ರಚನೆ, ಚಲನಚಿತ್ರ ನಿರ್ದೇಶನ ಬಹು ಶಿಸ್ತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿಯುಳ್ಳವರು ಪ್ರೊ. ಬರಗೂರು ರಾಮಚಂದಪ್ಪ ಅವರು.