Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಮೈಸೂರು ಎಂ. ಮಂಜುನಾಥ್

ಪ್ರತಿಭಾವಂತ ಪಿಟೀಲು ವಾದಕ ಡಾ. ಮೈಸೂರು ಎಂ. ಮಂಜುನಾಥ್ ಅವರು.
ಸಂಗೀತ ಕುಟುಂಬದಲ್ಲಿ ಜನಿಸಿದ ಡಾ. ಮೈಸೂರು ಎಂ. ಮಂಜುನಾಥ್ ಅವರ ತಂದೆ ಪ್ರಸಿದ್ದ ಸಂಗೀತ ವಿದ್ವಾಂಸರಾದ ಶ್ರೀ ಮಹದೇವಪ್ಪ, ಸಹೋದರ ಮೈಸೂರು ನಾಗರಾಜ್ ಅವರು. ತಂದೆಯವರಲ್ಲಿ ಶಿಕ್ಷಣ ಪಡೆದು, ಎಂಟನೆಯ ವಯಸ್ಸಿನಲ್ಲಿಯೇ ಸಂಗೀತ ಕಚೇರಿಯನ್ನು ನೀಡಿ ವಿಸ್ಮಯಗೊಳಿಸಿದ ಶ್ರೀಯುತರು ಅದ್ಭುತ ಬಾಲಪ್ರತಿಭೆಯೆಂದು ಸಂಗೀತ ವಿದ್ವಾಂಸರು, ಕಲಾಭಿಮಾನಿಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾದರು.
ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ರವರು ರಾಜ್ಯದ ಹೆಮ್ಮೆಯ ದ್ವಂದ್ವ ಪಿಟೀಲು ವಾದಕರು. ಅಮೆರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಸಿಂಗಾಪುರ ಹಾಗೂ ಇನ್ನಿತರ ದೇಶಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯಕ್ರಮ ನೀಡಿರುವ ಡಾ. ಮೈಸೂರು ಎಂ. ಮಂಜುನಾಥ್ ತಮ್ಮ ಪಿಟೀಲು ಕಾರ್ಯಕ್ರಮಗಳ ಮೂಲಕ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವುದಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಮ್ಯೂಸಿಕ್ ಪದವಿಯಲ್ಲಿ ಪ್ರಥಮ ಬ್ಯಾಂಕನ್ನು ಪಡೆದ ಶ್ರೀಯುತರು ಪಿಹೆಚ್.ಡಿ. ಪದವಿ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಧನೆಗೈದಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ಶ್ರೀಯುತರು ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಅಸಂಖ್ಯಾತ ಜುಗಲ್‌ಬಂದಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುವ ಶ್ರೀಯುತರು ಅತ್ಯುತ್ತಮ ವಯೋಲಿನ್ ವಾದಕ ಪ್ರಶಸ್ತಿ, ಪ್ರತಿಷ್ಠಿತ ಅಮೆರಿಕನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಭಾಜನರು.
ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಲೋಕದಲ್ಲಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಅನನ್ಯ ಕಲಾವಿದರು ಡಾ. ಮೈಸೂರು ಎಂ. ಮಂಜುನಾಥ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವವರು ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.
ಬಿಜಾಪುರ ಜಿಲ್ಲೆಯ ಕಲಿಕೇರಿ ಗ್ರಾಮದಲ್ಲಿ ೧೯೪೦ ರಲ್ಲಿ ಜನಿಸಿದ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ತಂದೆ ಭಕ್ತಿ ಗೀತೆಗಳ ಗಾಯಕರು. ತಂದೆಯಿಂದ ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ತಳೆದ ಶ್ರೀಯುತರು ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರು ಹಾಗೂ ಕವಿ ಮತ್ತು ಲೇಖಕರು. ಗ್ವಾಲಿಯರ್ ಘರಾನಾಕ್ಕೆ ಸೇರಿದ ಹಿಂದೂಸ್ತಾನಿ ಗಾಯಕರಾದ ಹಾಗೂ ವಾದ್ಯಗಾರರಾದ ಪಂಡಿತ ಪುಟ್ಟರಾಜ ಗವಾಯಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದ ಶ್ರೀಯುತರು ಆಕಾಶವಾಣಿ ಮಾನ್ಯತೆ ಪಡೆದ ಗಾಯಕರು.
ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗಾಯಕರಲ್ಲದೆ ಹೃದಯ ಮುಟ್ಟುವ ಸುಪ್ರಭಾತಗಳನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಬನಾರಸ್, ಹೈದರಾಬಾದ್, ಚೆನ್ನೈ, ಪುಣೆ ಮುಂತಾಗಿ ರಾಷ್ಟ್ರಾದ್ಯಂತ ಸಂಗೀತ ಕಚೇರಿ ನೀಡಿರುವ ಶ್ರೀಯುತರು ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಕರ್ನಾಟಕದಲ್ಲಿ ಅನೇಕ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಶ್ರೀಯುತರ ಸಂಗೀತ ನಿರ್ದೆಶನದಲ್ಲಿ ಪ್ರಮುಖ ಹಿನ್ನೆಲೆ ಗಾಯಕರಾದ ಡಾ. ಪಿ.ಬಿ. ಶ್ರೀನಿವಾಸ, ಡಾ. ರಾಜಕುಮಾರ್, ಜಿ.ವಿ. ಅತ್ರಿ ಮುಂತಾದವರು ಹಾಡಿರುತ್ತಾರೆ. ಇವರ ಗಾನಭಾರತಿ, ಭಾವ ಭಗವದ್ಗೀತೆ ಸಂಗೀತ ಗ್ರಂಥಗಳನ್ನು ಪ್ರಕಟಿಸಿರುವ ಎಂಟು ಗ್ರಾಮಫೋನ್ ರೆಕಾರ್ಡುಗಳು, ಹದಿನಾಲ್ಕು ಆಡಿಯೋ ಕ್ಯಾಸೆಟ್‌ಗಳು, ನಾಲ್ಕು ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಯುತರು ‘ಮಹಾತಪಸ್ವಿ’ ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಕವನ ಸಂಕಲನಗಳು, ಮೂರು ಕಾದಂಬರಿಗಳು, ಮೂರು ಜೀವನಚರಿತ್ರೆ ರಚಿಸಿರುವುದಲ್ಲದೆ ಪಂಚಾಕ್ಷರವಾಣಿಯ ಸಹಸಂಪಾದಕರಾಗಿ, ಇವರ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳು ಇವರ ಸಂಗೀತ ಸಾಧನೆಗಾಗಿ ಬಿರುದುಗಳನ್ನಿತ್ತು ಸನ್ಮಾನಿಸಿವೆ.
ಭಕ್ತಿ ಸಂಗೀತ ಗಾಯನದಲ್ಲಿ ಪ್ರಸಿದ್ಧಿ ಪಡೆದ, ಹಿಂದೂಸ್ತಾನಿ ಗಾಯಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಉಸ್ತಾದ್ ಶೇಖ್ ಹನ್ನುಮಿಯ್ಯಾ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆಗೈದು ನೂರಾರು ಶಿಷ್ಯರನ್ನು ತರಬೇತುಗೊಳಿಸಿ, ಭಾವೈಕ್ಯದ ಸಂದೇಶವನ್ನು ಸಂಗೀತದ ಮೂಲಕ ಕೃತಿಗಿಳಿಸಿರುವ ಮಧುರಕಂಠದ ಗಾಯಕ ಉಸ್ತಾದ್ ಶೇಖ್ ಹನ್ನು ಮಿಯ್ಯಾ ಅವರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೊರೂರಿನಲ್ಲಿ ೧೯೩೧ರಲ್ಲಿ ಜನಿಸಿದರು. ಪ್ರಕೃತಿಯ ವರವಾಗಿ ಬಂದ ಇಂಪಾದ ಕಂಠಸಿರಿಯನ್ನು ಹೊಂದಿದ್ದ ಶ್ರೀಯುತರು ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಒಂಬತ್ತು ವರ್ಷದವರಾಗಿದ್ದಾಗಲೇ ಸಾರಂಗಿ ವಾದಕರಾಗಿದ್ದ ತಂದೆ ತೀರಿಕೊಂಡರು. ಬಡತನದ ನಡುವೆಯೂ ಪೂನಾಕ್ಕೆ ಹೋಗಿ ಭಾಸ್ಕರ ಸಂಗೀತ ವಿದ್ಯಾಲಯದಲ್ಲಿ ಒಂದು ವರ್ಷ ಸಂಗೀತ ಕಲಿತರು. ಅನಂತರ ಪರಭಣಿ ಎಂಬ ಊರಿನಲ್ಲಿ ಉಸ್ತಾದ್ ಡಾ. ಗುಲಾಮ ರಸೂಲ ಇವರ ಬಳಿ ೧೨ ವರ್ಷ ಎಡೆಬಿಡದೆ ಶ್ರಮಪಟ್ಟು ಅಭ್ಯಾಸ ನಡೆಸಿದರು. ಹಿಂದೂಸ್ತಾನಿ ಸಂಗೀತದ ಎಲ್ಲ ಆಯಾಮಗಳ ಪರಿಚಯ ಮಾಡಿಕೊಂಡ ಶ್ರೀಯುತರು ಸೊಲ್ಲಾಪುರ, ಕೊಲ್ಲಾಪುರ, ಬೆಳಗಾವಿ, ಮೊದಲಾದ ಪಟ್ಟಣಗಳಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಶಿಷ್ಯವೃಂದವನ್ನು ತರಬೇತುಗೊಳಿಸಿದರು.
೧೯೭೯ರಲ್ಲಿ ಭಾಲ್ಕಿ ಗ್ರಾಮಕ್ಕೆ ಬಂದು ಅಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ನೂರಾರು ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದರು. ಇವರ ಶಾಲೆಗೆ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಮಾನ್ಯತೆಯು ಲಭಿಸಿತು. ಕೊಳಲು, ತಬಲಾ ಹೀಗೆ ಇನ್ನಿತರ ವಾದ್ಯಗಳನ್ನು ಕಲಿಸತೊಡಗಿದರು. ಶಿಷ್ಯರೊಡಗೂಡಿ ಮಸೀದಿ, ಚರ್ಚು, ದೇವಸ್ಥಾನಗಳಲ್ಲಿ ತಮ್ಮ ಗಾಯನದ ರಸಗಂಗೆಯನ್ನು ಹರಿಸಿ ಜನ ಸಮೂಹದ ಮನಸೂರೆಗೊಂಡರು. ಸಹಜ ಗಾನದ ಮೋಡಿಯಿಂದ ಎಲ್ಲ ಜಾತಿ, ವರ್ಗಗಳ ಪ್ರೀತಿಗೆ ಪಾತ್ರರಾದರು ಶ್ರೀಯುತರು ನಿಜವಾದ ಅರ್ಥದಲ್ಲಿ ಭಾವೈಕ್ಯದ ಪ್ರತೀಕವಾಗಿದ್ದಾರೆ.
ಶ್ರೀಯುತರ ಗಾಯನ ಸಾಧನೆಯನ್ನು ಗಮನಿಸಿ ಜನ ಸಂಘಟನೆಗಳು ಪರಭಣಿ, ಮಹಾರಾಷ್ಟ್ರದ ಅಹ್ಮದ್‌ನಗರ, ಪಾಥರಡಿ, ಮಿರಜಗಾಂವ್, ಉದಗೀರ್ ಮೊದಲಾದ ಸ್ಥಳಗಳಲ್ಲಿ ಸಾರ್ವಜನಿಕ ಸನ್ಮಾನ ಮಾಡಿ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸಿವೆ. ಆಕಾಶವಾಣಿಯಲ್ಲಿ ಇವರ ಸಂಗೀತ ಬಿತ್ತರಗೊಂಡಿದೆ.
ಅಚಲ ಶ್ರದ್ಧೆ, ಅದಮ್ಮ ನಿಷ್ಠೆ, ಸತತ ಸಾಧನೆಗಳಿಂದ ಸಿದ್ದಿ ಪಡೆದು ಸ್ವಂತ ಪರಿಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಸಂಪಾದಿಸಿದ ಶ್ರೇಷ್ಠ ಹಿಂದೂಸ್ತಾನಿ ಗಾಯಕ ಉಸ್ತಾದ್ ಶೇಖ್ ಹನ್ನುಮಿಯ್ಯಾ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್

ಪ್ರಸಿದ್ಧ ವೀಣಾವಾದಕರು, ಸಂಗೀತ ಅಧ್ಯಾಪಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.
ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಏಳನೆಯ ವಯಸ್ಸಿನಿಂದಲೇ ವೈಣಿಕ ಪ್ರವೀಣ ವಿ. ವೆಂಕಟಗಿರಿಯಪ್ಪನವರು, ಪ್ರೊ. ಆರ್.ಎನ್. ದೊರೆಸ್ವಾಮಿಯವರು ಮತ್ತು ಪದ್ಮಭೂಷಣ ಲಾಲ್ಗುಡಿ ಜಿ. ಜಯರಾಮನ್ ಅವರ ಶಿಷ್ಯರು. ವೀಣೆ ಶೇಷಣ್ಣನವರ ವೀಣಾ ಪರಂಪರೆಗೆ ಸೇರಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಹದಿನೈದನೆ ವಯಸ್ಸಿನಲ್ಲಿಯೇ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಾದ್ಯಂತ ಮತ್ತು ದುಬೈ, ನ್ಯೂಜಿಲೆಂಡ್ ಮುಂತಾದ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರಾಗಿದ್ದು, ೧೯೫೦ರಿಂದ ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಮತ್ತು ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದು, ಅನೇಕ ಶಿಷ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಗಾನಕಲಾ ಪರಿಷತ್ತಿನ ೨೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಬಿರುದು, ಗಾಯನ ಸಮಾಜದ ‘ವರ್ಷದ ಕಲಾವಿದೆ’, ಮೈಸೂರು ತ್ಯಾಗರಾಜ ಗಾಯನ ಸಭೆಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ನ್ಯೂಜಿಲೆಂಡ್‌ನಲ್ಲಿ ಆಕ್‌ಲೆಂಡ್ ಕರ್ನಾಟಕ ಮ್ಯೂಸಿಕ್ ಸೊಸೈಟಿಯ ಕಲಾ ಸಲಹೆಗಾರರು ಮತ್ತು ಪೋಷಕರು ಆಗಿದ್ದಾರೆ. ಲಂಡನ್‌ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪಠ್ಯ ಚಟುವಟಿಕೆಗಳ ಸಮಿತಿ ಅಧ್ಯಕ್ಷರಾಗಿ, ಮುಖ್ಯ ಪರೀಕ್ಷಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದುದಾಗಿ ಲಂಡನ್ ಮುಖ್ಯಸ್ಥರಿಂದ ಮನ್ನಣೆ ಪಡೆದ ಹೆಗ್ಗಳಿಕೆ
ಇವರದು.
ಲಂಡನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಾಗಿ ಪಠ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಿ ಮನ್ನಣೆ ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು `ವಾಗ್ಗೇಯ ವೈಭವ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಕ್ಯಾಸೆಟ್‌ಗಳು ಪ್ರಚಲಿತವಾಗಿವೆ. ಪಂಚವೀಣಾ ವಾದ್ಯ ಸಮ್ಮಿಲನದ ‘ಶೃಂಗಾರವೀಣಾ ಮಾಧುರಿ’ ನಿರ್ದೇಶಕರು.
ಮೈಸೂರು ಬಾನಿಯ ವೀಣಾವಾದನಕ್ಕೆ ಹೆಸರಾದ ಪ್ರತಿಭಾವಂತ ವೀಣಾವಾದಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.