ಗದಗ ಜಿಲ್ಲೆಯ ವಿಶೇಷ ಚೇತನ ರಾಮಣ್ಣ ಬ್ಯಾಟಿ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅನನ್ಯ ಸಾಧಕರು. ಅಂಧತ್ವದಲ್ಲೇ ಸಾಹಿತ್ಯದ ಬೆಳಕು ಹರಿಸಿದ ಮಹಾಪ್ರತಿಭೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ-ಸುರೇಖಾನ ರಾಮಣ್ಣರ ಹುಟ್ಟೂರು. ಓದಿದ್ದು ನಾಲ್ಕ ತರಗತಿಯಾದರೂ ಬೆಳೆದದ್ದು ಆಗಸದೆತ್ತರಕ್ಕೆ, ಹೊರಗಣ್ಣಿನ ಅಂಧತ್ವ ಮೀರಿ ಒಳಗಣ್ಣಿಂದ ಲೋಕ ಅರಿತವರು. ಆಂತರ್ಯದ ಭಾವಗಳಿಗೆ ಅಕ್ಷರ ರೂಪವಿತ್ತು ಕಾವ್ಯಕಟ್ಟಿದ ಆಶುಕವಿ. ಗದ್ಯ-ಪದ್ಯಗಳ ರಚನೆಯಲ್ಲಿ ನಿಸ್ಸಿಮರು. ಚೌಪದಿ ಕಾವ್ಯ, ಭಾಮಿನಿ ಷಟ್ನದಿಯಲ್ಲಿ ರಚಿಸಿದ ಉದ್ಭಂಥಗಳು ಜನಾನುರಾಗಿ, ಸಿದ್ದಲಿಂಗ ಕಾವ್ಯಸುಧೆ, ಹೊಳಲಮ್ಮದೇವಿ ಶತಕ, ರಂಗಾವಧೂತರ ಚರಿತ್ರೆ ಗೌರಿಶಂಕರ ಚರಿತಾಮೃತ, ಹುಲಿಗೆಮ್ಮದೇವಿ ವ್ರತ ಮಹಾತ್ಮ ಮುಂತಾದ ೬೦ ಗ್ರಂಥಗಳು ಸಾಹಿತ್ಯಲೋಕಕ್ಕೆ ಕೊಟ್ಟ ಅನನ್ಯ ಕೊಡುಗೆ. ಗದಗ-ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅವ್ವ ಪ್ರಶಸ್ತಿ, ದೇವರ ದಾಸಿಮಯ್ಯ ಮುಂತಾದ ಪ್ರಶಸ್ತಿಗಳಿಗೆ ಸತ್ಪಾತ್ರರು.
Categories