Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶೂದ್ರ ಶ್ರೀನಿವಾಸ್

ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶೂದ್ರ ಶ್ರೀನಿವಾಸ್‌ ವೃತ್ತಿಯಿಂದ ಶಿಕ್ಷಕರು. ಅನೇಕ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಬಂದಿರುವ ಶೂದ್ರ ಶ್ರೀನಿವಾಸ್ ‘ಶೂದ್ರ’ ಸಾಹಿತ್ಯ ಪತ್ರಿಕೆಯ ಸಂಪಾದಕರು. ಸಮಕಾಲೀನ ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿರುವ ಶ್ರೀನಿವಾಸ್ ಈ ಅವಧಿಯಲ್ಲಿ ನಡೆದ ಬಹುತೇಕ ಎಲ್ಲಾ ಜನಪರ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

‘ಕನಸಿಗೊಂದು ಕಣ್ಣು’ ಎಂಬ ಜನಪ್ರಿಯ ಅಂಕಣ ಆರಂಭಿಸಿದ ಶ್ರೀನಿವಾಸ್‌ ಅದೇ ಹೆಸರಿನ ಲೇಖನ ಸಂಕಲನವನ್ನು ಪ್ರಕಟಿಸಿದರು. ಕಾವ್ಯ, ಕಥೆ ಹಾಗೂ ಪ್ರಬಂಧಗಳನ್ನು ಬರೆಯುವಲ್ಲಿ ನಿಪುಣರಾದ ಶೂದ್ರ ಶ್ರೀನಿವಾಸ್ ಪರಿಸರ ಕುರಿತಂತಹ ‘ನೆಲದ ಮಾತು’ ಎಂಬ ನಿಯತಕಾಲಿಕವನ್ನು ಸಂಪಾದಿಸುತ್ತಿದ್ದರು.

ಪ್ರಸ್ತುತ ಸಮಾಜದ ಆಗು-ಹೋಗುಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುತ್ತಾ ಬೇರೆಯವರನ್ನು ಪ್ರತಿಕ್ರಿಯಿಸುವಂತೆ ಪ್ರೋತ್ಸಾಹಿಸುವ ಶೂದ್ರ ಶ್ರೀನಿವಾಸ್ ತಮ್ಮ ಪತ್ರಿಕೆ ಮೂಲಕ ಹಾಗೂ ವಿವಿಧ ವೇದಿಕೆಗಳ ಮೂಲಕ ಹೊಸ ಪೀಳಿಗೆಯ ಹಲವಾರು ಮಂದಿಯನ್ನು ತಯಾರು ಮಾಡಿದ್ದಾರೆ.