ಕೃತಿ-ವಿಜ್ಞಾನ
ಸರಣಿ-ವಿಜ್ಞಾನ
ಕೃತಿಯನ್ನು ಓದಿ
Author: kanaja
ಕೃತಿ:ಬಾಲವಿಜ್ಞಾನ ಮಾಸ ಪತ್ರಿಕೆ
ಲೇಖಕರು:, ಬಾಲವಿಜ್ಞಾನ ಮಾಸ ಪತ್ರಿಕೆ – ಡಿಸೆಂಬರ ೨೦೦೯, ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ, ಮ್ಯಾಗಜಿನ್ಗಳು, ವಿಜ್ಞಾನ
ಕೃತಿಯನ್ನು ಓದಿ
ಕೃತಿ-ಹಸಿರು ಹಾದಿ ಸಾವಯವದಿಂದ ಜೀವವೈವಿಧ್ಯದವರೆಗೆ
ಸಂಪಾದಕರು : ನಾ. ಕಾರಂತ ಪೆರಾಜೆ, ಜಯಪ್ರಸಾದ್ ಬಳ್ಳೇಕೆರೆ, ರವಿ ಮೂಡಿಗೆರೆ
ವರದಾ ನದಿಯ ಅಕ್ಕಪಕ್ಕ
ಕೃತಿ: ವರದಾ ನದಿಯ ಅಕ್ಕಪಕ್ಕ
ಪ್ರಕಾಶನ: ಸಹಜ ಸಮೃದ್ಧ ಪ್ರಕಾಶನ
ಸಂಪಾದಕರು: ಪೂರ್ಣ ಪ್ರಜ್ಞ ಬೇಳೂರು, ರಘುನಂದನ ಭಟ್, ನಾಗೇಶ ಹೆಗಡೆ
ಕೃತಿ-ಪುಸ್ತಕಗಳಿಂದ
ಲೇಖಕರು : ಡಾ. ವಸುಂಧರಾ ಭೂಪತಿ
ಸರಣಿ-ಕರಾವಿಪ ಪ್ರಕಟಣೆ
ಕೃತಿಯನ್ನು ಓದಿ
ಕೃತಿ-ಪುಸ್ತಕಗಳಿಂದ
ಲೇಖಕರು-ಎಸ್. ಎಂ. ಪೆಜತ್ತಾಯ
ಸರಣಿ-ಕಟ್ಟೆ ಪ್ರಕಾಶನ
ಕೃತಿಯನ್ನು ಓದಿ
ಕೃತಿ:ನಿಷ್ಠುರದ ನ್ಯಾಯವಾದಿ ಕೌಡೂರು ಸದಾನಂದ ಹೆಗ್ಡೆ
ಲೇಖಕರು: ಕನ್ನಡ ಸಂಘ ಕಾಂತಾವರ, ನ್ಯಾಯ ನಿಷ್ಠುರದ ನ್ಯಾಯವಾದಿ ಕೌಡೂರು ಸದಾನಂದ ಹೆಗ್ಡೆ, ಪುಸ್ತಕಗಳಿಂದ, ಮುದ್ರಾಡಿ ನಿಟ್ಟೆ
“ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯಿದೆ. ಜತೆಗೆ ವಾಣಿಜ್ಯ, ವಿದ್ಯೆ ಮುಂತಾದ ಅಭಿವೃದ್ಧಿ ಪೂರಕ ವಿಭಾಗಗಳಲ್ಲಿ ಈ ಪ್ರದೇಶ ಅಳಿಸಲಾಗದ ಹೆಜ್ಜೆಗಳನ್ನು ಮೂಡಿಸಿ ಭಾರತದ ಇತಿಹಾಸದಲ್ಲಿ ಗಣನೀಯ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ. ಪರಸ್ಪರ ಸಾಮರಸ್ಯ ಹಾಗೂ ವಿವಿಧ ಭಾಷೆಗಳ ಬಗ್ಗೆ ಒಲವು ಈ ಪ್ರದೇಶದ ಹೆಗ್ಗಳಿಕೆ. ಈ ಎಲ್ಲ ಸಿದ್ಧಿ ಸಾಧನೆಗಳ ಪರಿಚಯ ನಾಡಿನ ಜನತೆಗೆ ಈ ಸಮ್ಮೇಳನ ಮೂಲಕ ಆಗಬೇಕೆಂದು ನನ್ನ ಬಯಕೆ. 2007ರ ದಶಂಬರ ತಿಂಗಳ ಮಧ್ಯ ಭಾಗದಲ್ಲಿ ಉಡುಪಿಯಲ್ಲಿ ಜರಗಿದ ಅಖಿಲಭಾರತ ಕನ್ನಡ ಸಮ್ಮೇಳನದ ಕುರಿತು ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ಕೆ.ಕೆ. ಪೈಗಳು ಸಮ್ಮೇಳನದ ಸ್ಮರಣ ಸಂಚಿಕೆ ‘ಮೋಹನ ಮುರಳಿಯಲ್ಲಿ ವ್ಯಕ್ತಪಡಿಸಿದ ಅವರ ಅಂತರಾಳದಿಂದ ಮೂಡಿಬಂದ ಈ ಮಾತುಗಳು ಇವರ ಒಟ್ಟಾರೆ ಕಾಳಜಿಗೆ ಕನ್ನಡಿ ಹಿಡಿಯುತ್ತವೆ.
ಶತಶೃಂಗದ ಸಾಲಿನಲ್ಲಿ… ಕೃಷಿ ಬರಹಗಳ ಸಂಕಲನ
ಇದೆಂಥ ವಿಪರ್ಯಾಸ ನೋಡಿ !
ಜಾಗತೀಕರಣದ ನಂತರ ಇಡೀ ದೇಶ ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದತೊಡಗಿದೆ ಎಂದು ಅಧಿಕಾರದ ಪೀಠದಲ್ಲಿರುವ ಎಲ್ಲರೂ ಹೇಳುತ್ತಿದ್ದಾರೆ. ನಗರಗಳಲ್ಲಿ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಏರುತ್ತಿದೆ. ಶೇರು ಮಾರುಕಟ್ಟೆಯ ಸೂಚ್ಯಂಕ ಏರುತ್ತಿದೆ. ಹಣದ ವಹಿವಾಟಿನ ಮೊತ್ತ ಏರುತ್ತಿದೆ. ವಿದೇಶೀ ಸಾಮಗ್ರಿಗಳ ರಾಶಿ ಏರುತ್ತಿದೆ. ಕೋಟ್ಯಧೀಶರ ಧನರಾಶಿ ಏರುತ್ತಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ಸಾಮಾನ್ಯ ರೈತರ ಸಂಕಟಗಳೂ ಏರುತ್ತಿವೆ. ವಾಸ್ತವ ಚಿತ್ರಣ ಏನು ಎಂಬುದನ್ನು ಕೃಷಿ ತಜ್ಞ ಡಾ. ದೇವೇಂದ್ರ ಶರ್ಮಾ ಇಲ್ಲಿ ವಿವರಿಸಿದ್ದಾರೆ.
ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಲೇಖನಗಳು
ಗಿರಿಜನರು
ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಆದಿವಾಸಿಗಳು ಕಾಡುಗಳಲ್ಲಿ ಬದುಕುತ್ತಿರಲಿಲ್ಲ. ಕೃಷಿ ವಿಸ್ತರಣೆಯ ಒತ್ತಡಗಳಿಂದಾಗಿ ಇವರನ್ನೆಲ್ಲ ತುಂಬ ಹಿಂದೆಯೇ ನಾವು ಕಾಡುಮೇಡುಗಳಿಗೆ ಅಟ್ಟಿಬಿಟ್ಟಿದ್ದೆವು. ಈಗ ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಲಾಗುತ್ತಿದೆ. ಭಾರತದ ಭೂಪಟದ ನಿರಿಗೆಗಳನ್ನೆಲ್ಲ ಇಸ್ತ್ರಿ ಹೊಡೆದು ಸರಿಸಪಾಟು ಮಾಡುವ ಈ ಯತ್ನದಲ್ಲಿ ನಿಸರ್ಗ ಪರಂಪರೆಗಳೇ ಅಳಿಸಿ ಹೋಗುತ್ತವೆ. ಇಷ್ಟು ಮುಂದುವರೆದಿದ್ದು ಸಾಲದೆ? ಕರ್ನಾಟಕದಲ್ಲಿ ಎಲ್ಲೆಲ್ಲಿ ಭತ್ತದ ತಳಿ ವೈವಿಧ್ಯ ಉಳಿದುಕೊಂಡಿದೆ ಎಂಬುದರ ಬಗ್ಗೆ ನಮ್ಮ ನಮ್ಮಲ್ಲಿ ಚರ್ಚೆ ನಡೆಯುತ್ತಿತ್ತು. ಆದಿವಾಸಿಗಳ ಹಾಗೂ ಗಿರಿಜನರ ‘ಹಾಡಿ’ಗಳಲ್ಲಿ ಸಾಕಷ್ಟು ತಳಿ ವೈವಿಧ್ಯ ಇದೆ ಎನ್ನುವಾಗ ನಮ್ಮ ಮಿತ್ರ ಶಿವಾನಂದ ಕಳವೆ, ತೀರಾ ಸಹಜ ಎಂಬಂತೆ, ಒಂದು ಮಾತನ್ನು ಎಸೆದರು: ‘ಹೌದು, ಯಾವ ಯಾವ ಊರಿಗೆ ರಸ್ತೆ ಇಲ್ಲವೋ ಆ ಊರುಗಳಲ್ಲೆಲ್ಲ ತಳಿ ವೈವಿಧ್ಯ ಜಾಸ್ತಿ ಇದೆ’ ಅಂದರು.
ಇಂದಿನ ಬದುಕಿನ ವ್ಯಂಗ್ಯವನ್ನು, ವೈರುಧ್ಯವನ್ನು ಇದಕ್ಕಿಂತ ಸೂಚ್ಯವಾಗಿ ಹೇಳಲು ಸಾಧ್ಯವಿದೆಯೆ? ತಳಿವೈವಿಧ್ಯವನ್ನೂ ಉಳಿಸಿಕೊಳ್ಳಬೇಕು, ಸಂಪರ್ಕ ವ್ಯವಸ್ಥೆಯನ್ನೂ ಸುಧಾರಿಸಬೇಕೆಂದರೆ ಸಾಧ್ಯವೆ? ಗಿರಿಜನರು ನಮ್ಮ ಜೀವ ಖಜಾನೆ ಇದ್ದಂತೆ. ಅವರ ಸಂಸ್ಕೃತಿ, ಪರಂಪರೆ, ಗಿಡ-ಬಳ್ಳಿ-ಪಶು-ಪಕ್ಷಿಗಳ ಬಗೆಗಿನ ಅವರ ಜ್ಞಾನ ಹಾಗೂ ಭಕ್ತಿಪೂರ್ವಕ ಸಂಬಂಧ ಎಲ್ಲವೂ ಗ್ರೇಟ್. ಹಾಗೆಯೇ ಅವರ ಬದುಕೂ ತೀರ ದುರ್ಭರ. ಹತ್ತು ಮಾರು ದೂರ ಸಾಗಲಿಕ್ಕೂ ಅವರು ಹತ್ತಬೇಕು, ಇಲ್ಲವೆ ಇಳಿಯಬೇಕು. ನೀರು ಸುಲಭಕ್ಕೆ ಸಿಗುವುದಿಲ್ಲ. ವರ್ಷದ ಆರಾರು ತಿಂಗಳು ಆಹಾರವೂ ಸುಲಭಕ್ಕೆ ಸಿಗುವುದಿಲ್ಲ. ಮಳೆ ಚಳಿ ಎಲ್ಲವೂ ಅಲ್ಲಿ ಜಾಸ್ತಿ. ಕಾಡುಪ್ರಾಣಿಗಳ ಕಾಟ ತೀರಾ ಜಾಸ್ತಿ ಇದ್ದರೆ ಗರ್ಭಿಣಿ, ಬಾಣಂತಿ, ಅಜ್ಜಿ, ಮೊಮ್ಮಗು ಕೂಡ ಮರ ಹತ್ತಿ ಕೂರಬೇಕು. ಗಾಯ-ರೋಗಗಳಿಗೆ ತುರ್ತು ಔಷಧ ಅಥವಾ ಚಿಕಿತ್ಸೆ ಸಿಗುವುದಿಲ್ಲ. ಇಷ್ಟೆಲ್ಲ ಕಷ್ಟ ಎದುರಿಸಿ ಈ ಗಿರಿಜನರು ಯಾಕೆ ಗಿರಿಜನರಾಗಿಯೇ ಉಳಿದಿದ್ದಾರೆ?
(ಇದು ಸಿಲ್ಲಿ ಪ್ರಶ್ನೆ ಎನ್ನಿಸಬಹುದು. ‘ಚೀನೀಯರೆಲ್ಲ ಯಾಕೆ ಚೀನೀಯರ ಥರಾನೇ ಕಾಣುತ್ತಾರೆ?’ ಎಂಬ ಪ್ರಶ್ನೆಯನ್ನು ಕೆದಕಿದವರಿಗೆ ಅನೇಕ ಕರಾಳ ಸತ್ಯಗಳು ತೆರೆದುಕೊಳ್ಳುತ್ತವೆ. ಇಡೀ ಅಷ್ಟುದೊಡ್ಡ ಚೀನಾ ರಾಷ್ಟ್ರದಲ್ಲಿ ಚೀನೀ ಮುಖದವರನ್ನು, ಮಂಡಾರಿನ್ ಭಾಷಿಕರನ್ನು ಬಿಟ್ಟರೆ ಬೇರೆ ಯಾರೂ ಉಳಿಯದ ಹಾಗೆ ಸಾವಿರ ವರ್ಷಗಳ ಹಿಂದೆಯೇ ಬಹುದೊಡ್ಡ ಜನಾಂಗೀಯ ನರಮೇಧ ನಡೆದುಹೋಗಿತ್ತು. ಅದು ಹಿಟ್ಲರನ ನರಮೇಧಕ್ಕಿಂತ ವಿಶಾಲ ವ್ಯಾಪ್ತಿಯದೇ ಇದ್ದೀತ್ತೇನೊ.)
ಗಿರಿಜನರು ಹಿಂದೆ ಗಿರಿಜನರಾಗಿರಲಿಲ್ಲ. ಅವರೆಲ್ಲ ನಮ್ಮ ನಿಮ್ಮ ಪೂರ್ವಜರ ಹಾಗೆಯೇ ಹಾಯಾಗಿ ನದಿತೀರಗಳಲ್ಲೋ ಜಲಸಿರಿಯುಳ್ಳ ಮೈದಾನಗಳಲ್ಲೋ ಗಡ್ಡೆಗೆಣಸು, ಹಣ್ಣುಹಂಪಲು ತಿನ್ನುತ್ತ, ಬೇಟೆಯಾಡುತ್ತ ಸರಳವಾಗಿ ಬದುಕಿದ್ದವರು. ಮುಂದೆ ಏನಾಯ್ತು ಅಂದರೆ ಪ್ರಬಲ ಕೋಮಿನವರು ಕೃಷಿಗಾಗಿ ಜಮೀನು ಹುಡುಕುತ್ತ, ತಳವೂರುತ್ತ, ನೆಲವಿಸ್ತರಣೆ ಮಾಡುತ್ತ ಬಂದರು. ಫೈಟ್ ಮಾಡಲು ಶಕ್ತಿಯಿಲ್ಲದ, ಅಥವಾ ಮನುಷ್ಯರ ವಿರುದ್ಧ ಶಸ್ತ್ರ ಎತ್ತದ ಬಡಪಾಯಿಗಳೆಲ್ಲ ದೂರ ಸರಿಯುತ್ತ, ಸರಿಯುತ್ತ ಗುಡ್ಡ ಏರಬೇಕಾಯಿತು. ಆಥವಾ ಘನಘೋರ ಅರಣ್ಯದೊಳಕ್ಕೆ ನುಗ್ಗಿ ಅಲ್ಲೇ ಹೇಗೋ ಬದುಕಲು ಕಲಿತು ಆದಿವಾಸಿಗಳೆನಿಸಿಕೊಳ್ಳಬೇಕಾಯಿತು. ಅವರಿಗೆ ಕತ್ತಿ ದೊಣ್ಣೆ ಹಿಡಿದ ಮನುಷ್ಯರ ಸಹವಾಸಕ್ಕಿಂತ ಹುಲಿ-ಚಿರತೆ-ಆನೆಗಳ ಸಹವಾಸವೇ ಮೇಲೆಂದು ಅನ್ನಿಸಿರಬೇಕು. ಏಕೆಂದರೆ ವನ್ಯಪ್ರಾಣಿಗಳು ವಿನಾಕಾರಣ ಹಿಂಸೆಗೆ ಇಳಿಯುವುದಿಲ್ಲ. ಮರಿಗಳು ಬೆಳೆದಿದ್ದರೆ, ಹೊಟ್ಟೆ ತುಂಬಿದ್ದರಂತೂ, ನೀವು ಹತ್ತಿರ ಸುಳಿದರೂ ಗುರ್ರೆನ್ನುವುದಿಲ್ಲ. ಮನುಷ್ಯ ಹಾಗಲ್ಲವಲ್ಲ.
ಅಂತೂ ಆಧುನಿಕ ನಾಗರಿಕತೆಯೇ ಗಿರಿಜನ-ಆದಿವಾಸಿಗಳನ್ನು ಸೃಷ್ಟಿಸಿದೆ ಅಂದಂತಾಯಿತು. ಈಗ ಅವರನ್ನು ಕಾಡುಮೇಡುಗಳಿಂದಲೂ ಒಕ್ಕಲೆಬ್ಬಿಸುವ ಯತ್ನ ನಡೆದಿದೆ. ಕಳೆದ ಐದಾರು ವರ್ಷಗಳಲ್ಲಿ ಗಣಿಗಾರಿಕೆಯ ಹುಚ್ಚುಪೈಪೋಟಿ ಅದೆಷ್ಟು ತೀವ್ರವಾಗಿದೆ ಎಂದರೆ ಅಂಥ ತೀರ ಒಳನಾಡುಗಳನ್ನೂ ಹುಡುಕಿಕೊಂಡು ಹೋಗಿ ಬುಲ್ಡೋಜರ್ಗಳು, ಅರ್ಥ್ಮೂವರ್ಗಳನ್ನು ನುಗ್ಗಿಸಿ ಅಲ್ಲಿದ್ದ ಜೀವಿ ವೈವಿಧ್ಯವನ್ನು ಬಗ್ಗು ಬಡಿದು ಗಣಿಧನಿಗಳ ‘ಸಾಮ್ರಾಜ್ಯ ವಿಸ್ತರಣೆ’ ನಡೆಯುತ್ತಿದೆ.
ಬೇಕಿದ್ದರೆ ಗಮನಿಸಿ. ನಮ್ಮ ದೇಶದಲ್ಲಿ ಗಣಿ ಸಂಪತ್ತು ಎಲ್ಲೆಲ್ಲಿದೆ ಎಂಬುದನ್ನು ಸೂಚಿಸುವ ಒಂದು ನಕಾಶೆ ತಯಾರಿಸಿ. ಹಾಗೆಯೇ ಜೀವಿವೈವಿಧ್ಯ, ವನ್ಯಸಂಪತ್ತು ಎಲ್ಲುಳಿದಿದೆ ಎಂಬುದರ ಗುರುತಿಸಿ. ಖನಿ
ಜವನ್ನು ಗುರುತಿಸಿದ ಸ್ಥಳದಲ್ಲೇ ಇವೂ ಬರುತ್ತವೆ-ತುಸು ಹೆಚ್ಚುಕಮ್ಮಿ. ಹಾಗೆಯೇ ನಮ್ಮ ದೇಶದ ಆದಿವಾಸಿಗಳು ಹಾಗೂ ಗಿರಿಜನರು ವಾಸಿಸುವ ತಾಣವನ್ನೂ ಅದೇ ನಕಾಶೆಯ ಮೇಲೆ ಗುರುತಿಸಿ. ಬಹುಮುಖ್ಯ ಜಲಮೂಲಗಳು ಎಲ್ಲಿವೆ ಎಂಬುದನ್ನೂ ಗುರುತಿಸಿ. ಎಲ್ಲವೂ ಒಂದೇ ಕಡೆ ಕಾಣುತ್ತವೆ. ಅಂದರೆ, ಎಲ್ಲಿ ಗಿರಿಜನರು- ಆದಿವಾಸಿಗಳು ಇದ್ದಾರೋ ಅಲ್ಲೇ ಅಳಿದುಳಿದ ವನ್ಯ ಸಂಪತ್ತು/ಜೀವಿ ವೈವಿಧ್ಯ ಇದೆ, ಅಲ್ಲೇ ಜಲಮೂಲಗಳೂ ಇವೆ. ಅಲ್ಲೇ ಅಳಿದುಳಿದ ಖನಿಜ ಸಂಪತ್ತೂ ಇದೆ. ಹಿಂದೆ ಮುಂದೆ ನೋಡದೆ ನೀವು ಅಲ್ಲಿ ಡೈನಮೈಟ್ ಇಟ್ಟರೆ ಒಂದೇ ಏಟಿಗೆ ನಾಲ್ಕಾರು ಬಗೆಯ ಸಂಪತ್ತಿಗೆ ನೀವು ಕೊಳ್ಳಿ ಇಟ್ಟಂತಾಗುತ್ತದೆ. ಈಗಂತೂ ಸಾರಾ ಸಗಟಾಗಿ ಡೈನಮೈಟ್ಗಳನ್ನು ಇಡುವ ಕೆಲಸ ನಡೆದಿದೆ.
ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯದೊಂದಿಗೆ ನಾವೀಗ ಮುಖಾಮುಖಿ ಆಗುತ್ತಿದ್ದೇವೆ. ನಮಗೆ ರಸ್ತೆ ಬೇಕು. ಹೊರಜಗತ್ತಿನೊಂದಿಗೆ ಕುಗ್ರಾಮಗಳನ್ನು ಬೆಸೆಯಬಲ್ಲ ಸಂಚಾರ ಸಾಧನ ಬೇಕು. ಬಸ್ ಇಲ್ಲದಿದ್ದರೆ, ಟೆಂಪೊ, ಲಾರಿಗಳಾದರೂ ಚಲಿಸಬಲ್ಲ ಸರ್ವಋತು ರಸ್ತೆ, ಸೇತುವೆ ಬೇಕು.
ಅದೇ ಕಾಲಕ್ಕೆ ನಮ್ಮ ಮುಂದಿನ ಪೀಳಿಗೆಗಾಗಿ ಜೀವಿ ವೈವಿಧ್ಯ ಉಳಿಯಬೇಕು. ಅದು ಕುದುರೆಮುಖದಲ್ಲಿ, ಸಂಡೂರಿನಲ್ಲಿ, ಒರಿಸ್ಸಾದ ಋಷ್ಯಮೂಕ ಪರ್ವತದಲ್ಲಿ, ಝಾರ್ಖಂಡದಲ್ಲಿ, ವಿದರ್ಭದಲ್ಲಿ ಮಾತ್ರ ಉಳಿದಿದ್ದರೆ ಅವನ್ನು ಉಳಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕು ಎಂದರೆ ಅಲ್ಲಿ ರಸ್ತೆ ನಿರ್ಮಾಣ ಆಗಕೂಡದು. ಬುಲ್ಡೋಜರ್ ಹೋಗಕೂಡದು. ಜಗತ್ತಿನ ಜೀವವೈವಿಧ್ಯವನ್ನು ಉಳಿಸಬೇಕೆಂದಿದ್ದರೆ ರಸ್ತೆಯೇ ಸಾಧ್ಯವಿಲ್ಲದ ತಾಣವನ್ನು ನೀವು ಹುಡುಕಬೇಕು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಇದೀಗ ಉತ್ತರ ಧ್ರುವದಿಂದ ೯೬೬ ಕಿಮೀ ದೂರದ ಸ್ವಾಲ್ಬಾರ್ಡ್ ಎಂಬಲ್ಲಿ ಹಿಮಪರ್ವತವನ್ನು ಕೊರೆದು ಒಂದು ಬಹುದೊಡ್ಡ ಜೀವಖಜಾನೆಯನ್ನು ಸೃಷ್ಟಿಸಲಾಗುತ್ತಿದೆ. ಶೂನ್ಯದ ಕೆಳಗೆ ೧೮ ಡಿಗ್ರಿ ಸೆ. ತಂಪಿರುವ ಅಲ್ಲಿ ೩೦ ಲಕ್ಷ ತಳಿಗಳ ಬೀಜಗಳನ್ನು ಇಡಲೆಂದು ಹಿಮವನ್ನು ಕೊರೆಯಲಾಗಿದೆ. ಅಲ್ಲಿನ ನಿರ್ಜನ, ಶೀತಲನರಕಕ್ಕೆ ಹೋಗಲು ರಸ್ತೆಯೇ ಇಲ್ಲವಾದ್ದರಿಂದ ಆ ಖಜಾನೆಗೆ ಬೀಗ ಕೂಡ ಬೇಕಿಲ್ಲವಂತೆ.
ಇತ್ತ ಭಾರತದ ಕುಗ್ರಾಮಗಳನ್ನು ಆಧುನಿಕಗೊಳಿಸುವ ಯತ್ನ ನಡೆದಿದೆ. ಅಲ್ಲಿಗೆ ಮೂಲ ಸೌಕರ್ಯ ಒದಗಿಸಿದರೆ ‘ನಿಮಗೇ ಅನುಕೂಲ’ ಎಂದು ಬಹುರಾಷ್ಟ್ರೀಯ ಬಿಗ್ ಬಿಸಿನೆಸ್ ಕಂಪನಿಗಳಿಗೆ ಅರ್ಥತಜ್ಞ ಅಮರ್ತ್ಯ ಸೆನ್ ಸಲಹೆ ನೀಡುತ್ತಾರೆ. ಹಳ್ಳಿಗಳತ್ತ ಉತ್ತಮ ರಸ್ತೆಗಳಾದರೆ ಕೃಷಿ ಉತ್ಪನ್ನಗಳ ಸಾಗಾಟ ಸುಲಭ, ಉದ್ಯೋಗ ನಿರ್ಮಿತಿಯೂ ಸುಲಭ ಎಂದು ಕೃಷಿತಜ್ಞ ಸ್ವಾಮಿನಾಥನ್ ಹೇಳುತ್ತಾರೆ. ಹಾಗೆ ಹಳ್ಳಿಗರನ್ನು ನಗರಗಳತ್ತ ಸೆಳೆಯುವ ಹೆದ್ದಾರಿಗಳನ್ನು ನಿರ್ಮಿಸುವ ಬದಲು, ನಗರಕ್ಕೆ ಬಂದ ಹತವಾಸಿಗಳನ್ನು ಹಳ್ಳಿಗಳತ್ತ ಹೊರಡಿಸುವ ಕಿರುದಾರಿಗಳನ್ನು ನಿರ್ಮಿಸಿದರೆ ಹೇಗೆ? ರಾಳೆಗಾಂವ್ ಸಿದ್ದಿಯಲ್ಲಿ, ರೂಪಾರೆಲ್ ನದಿತಟಾಕದಲ್ಲಿ ಅಂಥ ಯತ್ನಗಳು ಸಫಲವಾಗಿವೆ. ನಿಸರ್ಗವನ್ನು ಧೂಲೀಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ. ನಾವಿಂದು ಎಷ್ಟು ಲಕ್ಷ ಟನ್ ಅದುರನ್ನು ರಫ್ತು ಮಾಡುತ್ತಿದ್ದೇವೆಯೋ ಸುಮಾರು ಅಷ್ಟೇ ಲಕ್ಷ ಟನ್ ಜೈವಿಕ ಸಾಮಗ್ರಿ ನಮ್ಮ ನಗರಗಳಿಗೆ ಅಗತ್ಯವಿದೆ. ಕಾಗದ, ಬಟ್ಟೆ, ಔಷಧ, ಇಂಧನ, ಕಟ್ಟಡ ಸಾಮಗ್ರಿ, ಪ್ಲಾಸ್ಟಿಕ್ ಎಲ್ಲವನ್ನೂ ಒದಗಿಸಬಲ್ಲ, ಕೋಟ್ಯಂತರ ಕೈಗಳಿಗೆ ಉದ್ಯೋಗ ನೀಡಬಲ್ಲ, ಋತುಮಾನಗಳನ್ನು ಸಮತೋಲ ಇಡಬಲ್ಲ, ಯಾವ ಕೃತಕ ಒಳಸುರಿಯಿಲ್ಲದೆ ಬೆಳೆಯಬಲ್ಲ ಸಹಜ ಜೀವಧಾಮಗಳನ್ನು, ಜೀವವೈವಿಧ್ಯ ರಕ್ಷಣೆಯ ಚಿರಂತನ ಖಜಾನೆಗಳನ್ನು ನಾವು ಸೃಷ್ಟಿಸಲಾರೆವೆ?
ಸೌಜನ್ಯ: ‘ಅಡಿಕೆ ಪತ್ರಿಕೆ’ಯ ಸೆಪ್ಟೆಂಬರ್ ೨೦೦೯ರ ಸಂಚಿಕೆಯ ‘ರಿಕ್ತ-ವ್ಯತಿರಿಕ್ತ’ ಅಂಕಣ ಬರಹ
ಮರ ಏರುವ ವಿಜ್ಞಾನ
ಅಕ್ಟೊಬರ್ 17 ರಂದು ನಮ್ಮ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿದ್ದಾಗ, ಅತ್ತ ಮಾಲ್ಡೀವ್ಸ್ ಎಂಬ ದ್ವೀಪರಾಷ್ಟ್ರದ ಹನ್ನೆರಡು ಸಂಸದರು ಸಮುದ್ರ ತಳದಲ್ಲಿ ಕೂತು ಸಂಪುಟ ಸಭೆ ನಡೆಸಿದರು. ಮೈತುಂಬ ರಬ್ಬರ್ ಉಡುಗೆ ಧರಿಸಿ, ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಬಿಗಿದು, ಕಾಲಿಗೆ ಜಾಲಪಾದರಕ್ಷೆ ಸಿಕ್ಕಿಸಿಕೊಂಡು, ನೀರೊಳಕ್ಕೆ ಮುಳುಗಿ ಕೈಸನ್ನೆಗಳ ಮೂಲಕ ಹನ್ನೆರಡು ನಿಮಿಷಗಳ ಸಾಂಕೇತಿಕ ಸಭೆ ನಡೆಸಿ ಮೇಲೆದ್ದು ಬಂದರು. ‘ಭೂಮಿಯ ತಾಪಮಾನ ಹೀಗೆಯೇ ಏರುತ್ತಿದ್ದರೆ ನಮ್ಮ ಇಡೀ ದೇಶ ಮುಳುಗಿ ಹೋಗುತ್ತದೆ; ನಮ್ಮನ್ನು ನಡುನೀರಲ್ಲಿ ಕೈಬಿಡಬೇಡಿ’ ಎಂಬ ಆರ್ತ ಸಂದೇಶವನ್ನು ಜಗತ್ತಿಗೆ ಬಿತ್ತರಿಸಿದರು.
ಜನಪ್ರತಿನಿಧಿಗಳೆಂದರೆ ತಮ್ಮ ಹಿತಕ್ಕಾಗಿ ದೇಶವನ್ನೇ ಮುಳುಗಿಸಲೂ ಹಿಂದೆಮುಂದೆ ನೋಡುವುದಿಲ್ಲ ಎಂಬ ಭಾವನೆಯನ್ನು ತೊಡೆದು ಹಾಕುವಂತೆ ಈ ಪುಟ್ಟ ರಾಷ್ಟ್ರದ ಸಂಸದರು ಮೈಚಳಿ ಬಿಟ್ಟು ನೀರಿಗೆ ಧುಮುಕಿದ್ದು ವಿಶೇಷವೇನೊ ಹೌದು. ಆದರೆ ಅದು ಏಕಮೇವಾದ್ವಿತೀಯವೇನೂ ಅಲ್ಲ. ಇಂಥದೊಂದು ಸಾಹಸ ಹಿಂದೆಯೂ ನಡೆದಿತ್ತು.
ಏಳು ವರ್ಷಗಳ ಹಿಂದೆ ಅಮೆರಿಕದ ವಾಷಿಂಗ್ಟನ್ ರಾಜ್ಯದ 12 ಶಾಸಕರು ಒಟ್ಟಾಗಿ ಒಂದೇ ಮರವನ್ನು ಏರಿದ್ದರು. ದಟ್ಟ ಮಳೆಕಾಡಿನಲ್ಲಿ 60 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ, ಹಗ್ಗ ಮತ್ತು ರಾಟೆಯ ಮೂಲಕ ಒಬ್ಬೊಬ್ಬರನ್ನಾಗಿ ಮೇಲಕ್ಕೆಳೆದು ಕೂರಿಸಲಾಗಿತ್ತು. ಅಟ್ಟಣಿಗೆಯ ಮೇಲೆ ಅವರೆಲ್ಲರ ಒಂದು ಪುಟ್ಟ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಜತೆಗಿದ್ದ ವೃಕ್ಷವಿಜ್ಞಾನಿಗಳು ಈ ಶಾಸಕರಿಗೆ ಅಲ್ಲೇ ಅರಣ್ಯ ಜೀವಜಾಲದ ಪಾಠ ಹೇಳಿದರು. ಮಳೆಕಾಡುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಹೇಳಿದರು. ಬರಲಿರುವ ಬಿಸಿ ಪ್ರಳಯದ ಸಂದರ್ಭದಲ್ಲಿ ಈ ವೃಕ್ಷಗಳು ಹೇಗೆ ಋತುಮಾನ ರಕ್ಷಣೆ ಹಾಗೂ ಜೀವಸಂರಕ್ಷಣೆಯ ಅಂತಿಮ ಆಸರೆ ಆಗಬಹುದು ಎಂದು ವಿವರಿಸಿದರು.
ಮರಗಳ ಮಹತ್ವವನ್ನು ಸಾರಲೆಂದು ಮುಂದಿನವಾರ ವಿಶಿಷ್ಟ ‘ಕ್ಯಾನೊಪಿ ಸಮ್ಮೇಳನ’ ಬೆಂಗಳೂರಿನಲ್ಲಿ ನಡೆಯಲಿದೆ. ನಾಡಿನ ಇಕಾಲಜಿ ಮತ್ತು ಜೀವಸಂಪತ್ತಿನ ಅಧ್ಯಯನ ನಡೆಸುತ್ತಿರುವ ‘ಏಟ್ರೀ’ ಸಂಸ್ಥೆಯ ಆಶ್ರಯದಲ್ಲಿ ಏಷ್ಯದಲ್ಲೇ ಮೊದಲ ಬಾರಿಗೆ ಏರ್ಪಾಟಾಗಿರುವ ಈ ಅಂತರರಾಷ್ಟ್ರೀಯ ಮೇಳಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ವೃಕ್ಷತಜ್ಞರು ಬರತೊಡಗಿದ್ದಾರೆ. ಮರ ಏರುವಲ್ಲಿ ನಿಷ್ಣಾತರೆನಿಸಿದ ಇಬ್ಬರು ಹಿರಿಯ ಮಹಿಳಾ ವಿಜ್ಞಾನಿಗಳೂ ಬರುತ್ತಿದ್ದಾರೆ.
ಮರಗಳ ಮೇಲ್ಛಾವಣಿಯ ಜಗತ್ತು ಈಚಿನವರೆಗೂ ವಿಜ್ಞಾನಕ್ಕೆ ಅಪರಿಚಿತವಾಗಿಯೇ ಉಳಿದಿತ್ತು. ಇದಕ್ಕೊಂದು ವಿಲಕ್ಷಣ ಕಾರಣವಿದೆ: ವಾನರನೆಂಬ ಪ್ರಾಣಿ ಮರದಿಂದ ಇಳಿದ ನಂತರವೇ ಮನುಷ್ಯನಾದ ತಾನೆ? ಕಾಡಿನಿಂದ ದೂರ ಹೋದಷ್ಟೂ ಮನುಷ್ಯ ‘ನಾಗರಿಕ’ ಎನ್ನಿಸಿಕೊಳ್ಳುತ್ತಾನೆ. ಈಗಲೂ ಮರ ಏರುವ ಸಾಮರ್ಥ್ಯ ಇರುವುದು ಮಣ್ಣಿನ ಮಕ್ಕಳಿಗೆ ಮಾತ್ರ. ಯಾವುದೇ ಹಳ್ಳಿಯ ಹೈದ ಪ್ಯಾಂಟ್ ಏರಿಸಿದ ಎಂದರೆ ಮರ ಏರುವುದನ್ನು ಮರೆತ ಎಂತಲೇ ಅರ್ಥ.
ಕಾಲೇಜು ಮೆಟ್ಟಿಲು ಹತ್ತಿದರಂತೂ ಮುಗಿಯಿತು. ಹೀಗಿರುವಾಗ ವಿಜ್ಞಾನಿಗಳು ಮರ ಏರುವುದುಂಟೆ? ಅವರು ಯಂತ್ರಗಳ ಮೂಲಕ ಗಗನಚುಂಬಿ ಕಟ್ಟಡಗಳನ್ನು ಏರಬಹುದು; ಅಥವಾ ಆಳದ ಗಣಿಗಳಲ್ಲಿ ಇಳಿಯಬಹುದು. ಗಗನ ನೌಕೆ ಏರಬಹುದು; ಸಬ್ಮರೀನ್ನಲ್ಲಿ ಕೂತು ಸಾಗರದ ತಳವನ್ನು ತಡಕಾಡಬಹುದು. ಆದರೆ ಮರಗಳನ್ನು ಏರಬಲ್ಲ ಯಂತ್ರ ಎಲ್ಲಿದೆ? ಯಂತ್ರವಿದ್ದರೂ ಮರ ಏರಲು ಬೇಕಾದ ಎಂಟೆದೆ ಎಲ್ಲಿದೆ?
ಮರ ಏರಲು ನಿಜಕ್ಕೂ ಎಂಟೆದೆ ಬೇಕು. ಗುರುತ್ವದ ವಿರುದ್ಧ ಏರಿ ಸಾಗುವ ಸ್ನಾಯುಬಲ ಬೇಕು. ಕೆಳಗಿನ ಆಳವನ್ನು ನೋಡಿ ತಲೆ ತಿರುಗಬಾರದು. ಕೊಂಬೆ ತೊನೆದರೆ ಕೈಸಡಿಲಿಸಬಾರದು. ಅಲ್ಲಿನ ಪಾಚಿ, ಅಣಬೆ, ತುರಿಕೆ ಎಬ್ಬಿಸುವ ಲೋಳೆಪೊರೆಗಳ ವಿರೋಧಗಳನ್ನೆಲ್ಲ ಮೀರಿ ಏರುವ ಛಾತಿ ಬೇಕು. ಇಷ್ಟಲ್ಲದೆ ಅಲ್ಲಿ ವಾಸಿಸುವ ಕಣಜ, ಇರುವೆ, ಸಹಸ್ರಪದಿ, ಜೇನು, ಹಾವುಚೇಳು ಅಥವಾ ಪಕ್ಷಿಗಳು ದಾಳಿ ನಡೆಸಿದರೆ ಎದುರಿಸುವ ತಾಕತ್ತು ಇರಬೇಕು. ಇಷ್ಟಕ್ಕೂ ಯಾಕೆ ಮರ ಏರಬೇಕು? ಬೆಲ್ಲ ಸಕ್ಕರೆಗಳಿಂದ ವಂಚಿತರಾದ ಕಾಡು ಜನರು ಜೇನಿಗಾಗಿ ಮರ ಏರುತ್ತಾರೆ. ನಾಡಿನ ಜನರಿಗೆ ಛಾವಣಿ ವೃಕ್ಷಗಳಿಂದ ಯಾವ ಲಾಭವಿದೆ?
ಯಾವ ಲಾಭ ಇಲ್ಲದೆಯೂ ಶಿಲಾರೋಹಣ, ಅಲೆಗಳ ಮೇಲೆ ಸರ್ಫಿಂಗ್, ವಿಮಾನಗಳಿಂದ ಧುಮುಕಾಟ, ಭೋರ್ಗರೆವ ನದಿ ಕೊರಕಲಿನಲ್ಲಿ ಕ್ಯಾನೋಯಿಂಗ್, ಆಳ ಕಮರಿಗೆ ಬಂಗೀ ಜಂಪಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಗೌರವ, ಮಾನ್ಯತೆ ಪ್ರಾಪ್ತಿಯಾದಾಗ ಮೂವತ್ತು ವರ್ಷಗಳ ಹಿಂದಷ್ಟೇ ಕೆಲವು ಯುವ ವಿಜ್ಞಾನಿಗಳು ಮರ ಏರಲು ತೊಡಗಿದರು.
ಅವರು ಅಲ್ಲಿ ಹೊಸ ಲೋಕವೊಂದನ್ನೇ ಕಂಡರು. ಯಾವ ಪಠ್ಯಪುಸ್ತಕದಲ್ಲೂ ನೋಡಸಿಗದ ಅಪರೂಪದ ಅಣಬೆಗಳು, ಪಾಚಿಗಳು, ಸಸ್ಯಗಳು, ಪ್ರಾಣಿಗಳು, ಅವುಗಳ ನಡುವಣ ಸಂಬಂಧಗಳು, ಮೇಲಾಟಗಳು ಎಲ್ಲವೂ ಒಂದೊಂದಾಗಿ ವಿಜ್ಞಾನ ಲೋಕಕ್ಕೆ ತೆರೆದುಕೊಂಡಾಗ ಮರ ಏರುವ ಹೊಸಹೊಸ ತಂತ್ರಗಳು ಬಳಕೆಗೆ ಬರತೊಡಗಿದವು. 1985ರಲ್ಲಿ ಕೋಸ್ಟಾರಿಕಾ ದೇಶದಲ್ಲಿ ಮರಗಳ ಛಾವಣಿಯ (ಕ್ಯಾನೊಪಿ) ಮೇಲೆ ಜಾಳಿಗೆಯನ್ನು ಹಾಸಿ ಅಲ್ಲಿ ನಿರ್ಭಯವಾಗಿ ಓಡಾಡುತ್ತ ಅಲ್ಲಿನ ಜೀವಲೋಕದ ಅಧ್ಯಯನ ಕೈಗೊಂಡ ವ್ಯಕ್ತಿಗೆ ‘ವರ್ಷದ ವಿಜ್ಞಾನಿ’ ಎಂಬ ಪುರಸ್ಕಾರ ಸಿಕ್ಕಿದ ಮೇಲೆ ನಿಜಕ್ಕೂ ‘ಕ್ಯಾನೊಪಿ ಸೈನ್ಸ್’ ಎಂಬ ಹೊಸ ಶಾಖೆಯೇ ಆರಂಭವಾಯಿತು.
ಈಗ ಅದೊಂದು ತೀವ್ರ ಪೈಪೋಟಿಯ ರಂಗವಾಗಿದೆ. ವೃಕ್ಷಗಳ ಮೇಲ್ಛಾವಣಿಯನ್ನು ‘ಜಗತ್ತಿನ ಎಂಟನೇ ಖಂಡ’ ಎಂದು ಬಣ್ಣಿಸತೊಡಗಿದ್ದಾರೆ. ಏನೆಲ್ಲ ಸಾಹಸ ಮಾಡಿ ಆ ಹೊಸಲೋಕಕ್ಕೆ ಹೋಗಿ ವಿಹರಿಸಬಲ್ಲ ಧೀರರು ತಮ್ಮನ್ನು ‘ಡೆಂಡ್ರೊನಾಟ್ಸ್’ ಎಂದು ಹೇಳಿಕೊಳ್ಳುತ್ತಾರೆ (ಬಾಹ್ಯಾಕಾಶ ಯಾತ್ರಿಗಳನ್ನು ‘ಆಸ್ಟ್ರೊನಾಟ್ಸ್’ ಎನ್ನುವ ಹಾಗೆ, ಮರಗಳ ಶಾಖೋಪಶಾಖೆಗಳ ಮೇಲೆ ಚಲಿಸಬಲ್ಲವರು ‘ಡೆಂಡ್ರೊನಾಟ್ಸ್’). ಅಲ್ಲಿ ಸಾಮಾನ್ಯ ವಿಜ್ಞಾನಿಗಳಿಗೆ ನಿಲುಕದ ಹೊಸ ವಿಜ್ಞಾನ ಇದೆ, ರೋಚಕತೆ ಇದೆ, ರಂಜನೆ ಇದೆ; ಎಲ್ಲಕ್ಕಿಂತ ಮುಖ್ಯವಾಗಿ ಎತ್ತರದ ವೃಕ್ಷಗಳಲ್ಲಿ ಏನಾದರೂ ಹೊಸ ಕೆಮಿಕಲ್ಗಳು, ಹೊಸ ಮೂಲಿಕೆಗಳು, ಹೊಸ ಜೀವಿಗಳು ಸಿಕ್ಕರೆ ಪೇಟೆಂಟ್ ಮಾಡಿಕೊಳ್ಳುವ ಅವಕಾಶವಿದೆ.
ನೆಲದಿಂದ 150 ಅಡಿ ಎತ್ತರದ ವಿನೂತನ ಲೋಕದಲ್ಲಿ ನಾವು ಮುಟ್ಟಿದ್ದೆಲ್ಲ ಹೊಸದು! ಹೊಸ ಸಸ್ಯ, ಹೊಸ ಕೀಟ, ಹೊಸ ಪ್ರಾಣಿ, ಹೊಸ ಬಗೆಯ ನಡವಳಿಕೆ!? ಎನ್ನುತ್ತಾರೆ, ಅಮೆರಿಕದ ಪ್ರಖ್ಯಾತ ಛಾವಣಿವಿಜ್ಞಾನಿ ಪ್ರೊ. ನಳಿನಿ ನಾಡಕರ್ಣಿ.
ಅದಕ್ಕೆ ತಕ್ಕಂತೆ ಮರದ ತುದಿಯನ್ನು ತಲುಪುವ ಅನೇಕ ಬಗೆಯ ಹೊಸ ಹೊಸ ತಂತ್ರಜ್ಞಾನಗಳೂ ವಿಕಾಸಗೊಂಡಿವೆ. ಆಕಾಶಮಾರ್ಗದಲ್ಲೇ ಅಲ್ಲಿಗೆ ಹೋಗಿ ಇಳಿಯುವವರಿಗಾಗಿ ವಿಶಾಲ ಬಲೆಗಳು, ಅದರೊಳಗೆ ಟೆಂಟ್ಗಳು, ಅದನ್ನು ಹೊತ್ತೊಯ್ದು ಮರಗಳ ಮೇಲೆ ಹಾಸಬಲ್ಲ ಬಿಸಿಗಾಳಿ ಬಲೂನು, ಏರ್ಶಿಪ್ಗಳು ಸಜ್ಜಾಗಿವೆ. ಮರದ ಬುಡದಿಂದಲೇ ಮೇಲೇರಿ ಓಡಾಡಬಯಸುವ ಸಾಹಸಿಗಳಿಗಾಗಿ ನಾನಾ ಬಗೆಯ ನೂಲೇಣಿಗಳು, ತೊಟ್ಟಿಲುಗಳು, ಕ್ರೇನ್ಗಳು ರೂಪುಗೊಂಡಿವೆ. ಇವು ವಿಜ್ಞಾನಿಗಳಿಗಷ್ಟೇ ಅಲ್ಲ, ವಾರಾಂತ್ಯದಲ್ಲಿ ಮೋಜು ಮಾಡುವವರಿಗೂ ರೋಚಕ ಸಾಧನಗಳಾಗುತ್ತಿವೆ.
ಈಗಂತೂ ‘ಹವಾಗುಣ ಬದಲಾವಣೆ’ ಎಂಬ ಭಯದ ಗಾಳಿ ಎಲ್ಲೆಡೆ ಬೀಸುತ್ತಿರುವಾಗ ಸಹಜವಾಗಿಯೇ ಎತ್ತರದ ಮರಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಳಜಿ ಹೆಚ್ಚತೊಡಗಿದೆ. ಐವತ್ತು ವರ್ಷಗಳ ಹಿಂದೆ ಭೂಮಿಯ ಶೇಕಡಾ 12ರಷ್ಟು ಭಾಗದಲ್ಲಿ, ಅದೂ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಮಳೆಕಾಡುಗಳಿದ್ದವು. ಕೃಷಿ ವಿಸ್ತರಣೆ, ನಾಟಾಕಡಿತ, ಕಾಡಿನ ಬೆಂಕಿಯಿಂದಾಗಿ ಅದರಲ್ಲೂ ಅರ್ಧಭಾಗ ನಷ್ಟವಾಗಿದೆ. ಆದರೆ ಈಗಲೂ ಜಗತ್ತಿನ ಶೇಕಡಾ 40ರಷ್ಟು ಜೀವಿಗಳು ಉಷ್ಣವಲಯದ ಮಳೆಕಾಡುಗಳಲೇ ಇವೆ. ನಮ್ಮ ಪಶ್ಚಿಮಘಟ್ಟಗಳೂ ಸೇರಿದಂತೆ ಈ ಕಾಡುಗಳೇ ಜಗತ್ತಿನ ಹವಾಗುಣವನ್ನು, ಋತುಮಾನವನ್ನು ನಿಯಂತ್ರಿಸುತ್ತವೆ ಎಂಬುದು ಗೊತ್ತಾದ ಮೇಲೆ ಅವುಗಳ ಅಧ್ಯಯನ ಮತ್ತು ರಕ್ಷಣೆಗಾಗಿ ವಿಶೇಷ ಸಂಶೋಧನೆಗಳು ನಡೆಯತೊಡಗಿವೆ. ಒಂದೆರಡು ಉದಾಹರಣೆಯನ್ನು ನೋಡಿ: ತೀವ್ರ ಒತ್ತಡಕ್ಕೆ ಸಿಲುಕಿದಾಗ ಎತ್ತರದ ಮರಗಳು ವಾತಾವರಣಕ್ಕೆ ಮಿಥೈಲ್ ಸ್ಯಾಲಿಸಿಲೇಟ್ ಎಂಬ ಅನಿಲವನ್ನು ಹೊರಸೂಸುತ್ತವೆ
ಎಂದು ಅಮೆರಿಕದ ರಾಷ್ಟ್ರೀಯ ವಿಜ್ಞಾನ ನಿಧಿಯ ಥಾಮಸ್ ಕಾರ್ಲ್ ಅವರ ತಂಡವೊಂದು ಮರದ ಮೇಲೆ ನೂರಡಿ ಎತ್ತರದಲ್ಲಿಟ್ಟ ಸಲಕರಣೆಗಳ ಮೂಲಕ ಅಳೆದು ನೋಡಿದೆ. ಮೊನ್ನೆ ಆಗಸ್ಟ್ ತಿಂಗಳಲ್ಲಿ ಜೆನ್ನಿಫರ್ ಬಾಲ್ಚ್ ಎಂಬಾಕೆ ತನ್ನ 30 ಸಂಗಡಿಗರ ಜತೆ ಹೋಗಿ ಅಮೆಜಾನ್ನ 50 ಹೆಕ್ಟೇರ್ ದಟ್ಟ ಅರಣ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿಕೊಟ್ಟು ಎಷ್ಟು ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ ಎಂದು ವರದಿ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್ಮೂರ್ ಲ್ಯಾಬಿನ ಗೋವಿಂದಸ್ವಾಮಿ ಬಾಲಾ ಎಂಬುವರು ಮರಗಳು ಸೂರ್ಯನ ಶಾಖವನ್ನು ಹೇಗೆ ಹೀರಿಕೊಳ್ಳುತ್ತವೆ ಎಂದು ಅಧ್ಯಯನ ಮಾಡಿ, ‘ಉತ್ತರಕ್ಕೆ ಹೋದಂತೆ ಮರಗಳನ್ನು ಬೆಳೆಸುವುದು ಅಪಾಯಕಾರಿ’ ಎಂದಿದ್ದಾರೆ. ಅವರ ಪ್ರಕಾರ ಮಳೆಕಾಡುಗಳಲ್ಲಿ ಮರಗಳು ಹೆಚ್ಚಿಗೆ ಇದ್ದಷ್ಟೂ ಭೂಮಿಗೆ ಒಳ್ಳೆಯದು. ಆದರೆ ಸೈಬೀರಿಯಾ ಅಥವಾ ಉತ್ತರ ಅಕ್ಷಾಂಶಗಳಲ್ಲಿ ಮರಗಳು ಇಲ್ಲದಿದ್ದರೇ ಭೂಮಿಗೆ ಒಳ್ಳೆಯದು. ಏಕೆಂದರೆ ಹಿಮದ ಹಾಸಿನ ಮೇಲೆ ಬಿಸಿಲು ಬಿದ್ದರೆ ಅದು ಪ್ರತಿಫಲನವಾಗಿ ಹೊರಟು ಹೋಗುತ್ತದೆ. ಅಲ್ಲಿ ಅರಣ್ಯ ಬೆಳೆಸಿದರೆ ಅದು ಶಾಖವನ್ನು ಹೀರಿಕೊಂಡು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತದೆ!
ಆದರೆ ವಾಸ್ತವದಲ್ಲಿ ಎರಡೂ ಕಡೆ ಉಲ್ಟಾ ಆಗುತ್ತಿದೆ. ಭೂಮಿಯ ನಡುಪಟ್ಟಿಗುಂಟ ವೃಕ್ಷಗಳ ನಾಶ ಹೆಚ್ಚುತ್ತಿದೆ. ಉತ್ತರದ ದೇಶಗಳಲ್ಲಿ ಗಿಡಮರಗಳ ಪ್ರೇಮ ದಿನದಿನಕ್ಕೆ ಹೆಚ್ಚುತ್ತಿದೆ.
ಈ ಮಧ್ಯೆ ವೃಕ್ಷಗಳು ಬೆಳೆಯಬೇಕಾದಲ್ಲಿ ವೃಕ್ಷಪ್ರೇಮವನ್ನು ಹೆಚ್ಚಿಸಲೆಂದು ಬೆಂಗಳೂರಿನಲ್ಲಿ ಮುಂದಿನ ಒಂದು ವಾರವಿಡೀ ಕ್ಯಾನೊಪಿ ಸಮ್ಮೇಳನ ನಡೆಯಲಿದೆ. ಪರಿಸರ ಧ್ವಂಸಕ್ಕೆ ಕಾರಣವಾಗುವ ವಿಜೃಂಭಣೆಯ ‘ಏರೋ ಶೋ’ಗಳನ್ನು ನೋಡಿದ ಇಲ್ಲಿನ ಜನರು ಈಗ ವಿಜ್ಞಾನಿಗಳ ‘ಮರ ಏರೋ ಶೋ’ವನ್ನು ಕೂಡ ನೋಡಬಹುದು.
ಆದರೆ ವಿಶೇಷ ರಂಜನೆಯನ್ನು ನಿರೀಕ್ಷಿಸಬೇಡಿ. ಅಮೆರಿಕದಲ್ಲೇನೋ ಜನಪ್ರತಿನಿಧಿಗಳನ್ನು ಮರ ಏರಿಸಬಹುದು. ಇಲ್ಲಿ ಯಾರ್ಯಾರನ್ನು ಏರಿಸೋಣ? ಗುಂಡ್ಯ ಅರಣ್ಯವನ್ನು ಮುಳುಗಿಸಿಯೇ ತೀರುತ್ತೇನೆಂದು ಶಪಥ ತೊಟ್ಟ ರಾಜಕಾರಣಿಗಳಿದ್ದಾರೆ; ಬೆಂಗಳೂರು ಸೆಕೆ-ಬೆಂಕಿಯೂರು ಆದರೂ ಸರಿ, ಮರಗಳನ್ನು ಕಡಿದೇ ಮೆಟ್ರೊ ರೈಲುಹಳಿ ಹಾಸುತ್ತೇನೆಂದು ಹೊರಟ ಎಂಜಿನಿಯರ್ಗಳು ಇದ್ದಾರೆ. ಅರಣ್ಯದ ನಡುವೆಯೇ ಗಣಿಗಾರಿಕೆ ನಡೆಸಬಹುದು ಎಂದು ವಾದಿಸಿ ಗೆಲ್ಲುವ ನ್ಯಾಯವಾದಿಗಳಿದ್ದಾರೆ. ಅವರನ್ನೆಲ್ಲ ಮರಗಳ ಮೇಲೆ ಏರಿಸಬೇಕೆಂದರೆ ಅಷ್ಟೊಂದು ಮರಗಳು ಎಲ್ಲಿವೆ ನಮ್ಮಲ್ಲಿ?
ಚಂದ್ರನ ನೀರು
ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಭಾರತವೂ ಮಹಾನ್ (ಗ್ರೇಟ್) ದೇಶವಾಗಲು ಸಾಧ್ಯ ಎಂದು ಮೂರು ವರ್ಷಗಳ ಹಿಂದೆ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ದಿಲ್ಲಿಯಲ್ಲಿ ಹೇಳಿದ್ದರು. ನಿಮ್ಮ ದೇಶವನ್ನು ನಾವೇ ‘ಗ್ರೇಟ್’ ಮಾಡುತ್ತೇವೆ ಎಂಬ ಆ ಮಾತಿನಲ್ಲಿ ಏನೆಲ್ಲ ಅರ್ಥಗಳಿದ್ದವು. ಕೆಲವರಿಗೆ ಆ ಮಾತಿನಿಂದ ಎದೆಯುಬ್ಬಿತು. ಮತ್ತನೇಕರು ಅದರಲ್ಲಿ ಅವಹೇಳನದ ಎಳೆಗಳನ್ನೇ ಕಂಡರು.ಅದಾದ ನಂತರ ನಮ್ಮ ದೇಶವನ್ನು ಗ್ರೇಟ್ ಮಾಡಲು ಅಮೆರಿಕ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ತನಗೇ ದುಬಾರಿ ಹಾಗೂ ಅಪಾಯಕಾರಿ ಎನಿಸಿದ ಪರಮಾಣು ತಂತ್ರಜ್ಞಾನವನ್ನು ನಮ್ಮಲ್ಲಿ ತಂದು ಸುರಿಯಲು ಧಾರಾಳ ನೆರವು ನೀಡುತ್ತಿದೆ. ಸುರಕ್ಷಿತ, ಕಡಿಮೆ ವೆಚ್ಚದ, ನೈಸರ್ಗಿಕ ಅನಿಲವನ್ನು ನಾವು ಇರಾನ್ನಿಂದ ಕೊಳವೆ ಮೂಲಕ ತರಲಾಗದಂತೆ ನಿರ್ಬಂಧ ಒಡ್ಡಿದೆ. ಅಸ್ಸಾಂ ಪಕ್ಕದ ಮಯನ್ಮಾರ್ ಭೂತಲದಲ್ಲಿರುವ ಪೆಟ್ರೋಲಿಯಂ ಮತ್ತು ಅನಿಲ ಖಜಾನೆಗೆ ನಾವು ಕೈಯಿಕ್ಕದಂತೆ ಮಾಡಿ ನಮಗೆ ಶಹಭಾಸ್ ಎಂದಿದೆ. ನಮ್ಮನ್ನು ಹೀಗೆ ಗ್ರೇಟ್ ಮಾಡುವ ಸರಣಿಯಲ್ಲಿ ತೀರ ಈಚಿನ ಉದಾಹರಣೆ ಎಂದರೆ ಚಂದ್ರನ ನೀರು.
ನಿಜ, ಅನೇಕ ವರ್ಷಗಳ ನಂತರ ನಮ್ಮ ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದಾರೆ. ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಮಾಡಿದ ನಮ್ಮ ‘ಇಸ್ರೊ’ ತಜ್ಞರ ಯಶಸ್ಸನ್ನು ಅಮೆರಿಕದ ಮಾಧ್ಯಮಗಳು ಎದ್ದು ಕಾಣುವಂತೆ ಪ್ರಕಟಿಸಿವೆ. ಚಂದ್ರನ ಮೇಲಿನ ಬಂಡೆಗಳಲ್ಲಿ ಹಾಗೂ ನಯವಾದ ದೂಳು ಪುಡಿಯಲ್ಲಿ ನೀರಿನ ಅಂಶ ಇದೆ ಎಂದು ನಲ್ವತ್ತು ವರ್ಷಗಳ ಹಿಂದೆಯೇ ಅಮೆರಿಕದ ಗಗನಯಾತ್ರಿಗಳು ತಂದ ಸ್ಯಾಂಪಲ್ಗಳಲ್ಲಿ ಪತ್ತೆಯಾಗಿತ್ತು. ಆದರೆ ಅಮೆರಿಕಕ್ಕೆ ಆಗ ಅದರಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ ಸೋವಿಯತ್ ರಷ್ಯದ ಜತೆಗಿನ ಪೈಪೋಟಿಯಲ್ಲಿ ತಾನು ಮೇಲುಗೈ ಸಾಧಿಸಿದ್ದಾಗಿತ್ತು. ಆರು ಬಾರಿ ಅಲ್ಲಿಗೆ ಹೋಗಿ 12 ಜನರನ್ನು ಇಳಿಸಿ, ಮರಳಿ ಕರೆತಂದ ಮೇಲೆ ಸಹಜವಾಗಿ ಅತ್ತ ಆಸಕ್ತಿ ಕಡಿಮೆಯಾಗಿತ್ತು.
‘ನೀರಿನ ಅಂಶ ಎಂಥದ್ದೂ ಇಲ್ಲ. ಗಗನಯಾತ್ರಿಗಳು ಅಲ್ಲಿನ ಕಲ್ಲುಮಣ್ಣಿನ ಪುಡಿಯನ್ನು ಪ್ಯಾಕ್ ಮಾಡುವಾಗ ಅಥವಾ ಬಿಚ್ಚುವಾಗ ಎಲ್ಲೋ ತುಸು ತೇವಾಂಶ ಸೇರಿದೆ’ ಎಂದು ಹೇಳಿ ನಾಸಾ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು.
ಈಗ ಪತ್ತೆಯಾಗಿರುವ ನೀರೂ ಅಷ್ಟೆ; ತೀರಾ ತೀರಾ ಅಲ್ಪ ಪ್ರಮಾಣದಲ್ಲಿ ಅದೂ ಅಗೋಚರ ರೂಪದಲ್ಲಿ ಇದೆ. ಚಂದ್ರನ ಕೆಲವು ಬಗೆಯ ಶಿಲೆಗಳಲ್ಲಿ ಆಮ್ಲಜನಕ ಮತ್ತು ಜಲಜನಕದ ಪರಮಾಣುಗಳು ಅರೆಬಂಧಿತ ರೂಪದಲ್ಲಿ ಇವೆ. ‘ಎಚ್2ಓ’ ಬದಲಿಗೆ ‘ಓಎಚ್’ ರೂಪದಲ್ಲಿ ಇವೆ. ಅವಕ್ಕೆ ನೀರಿನ ಲಕ್ಷಣ ಇಲ್ಲ. ನಮ್ಮ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣಗಳ ಸುತ್ತಮುತ್ತ ಅಂಥ ಕಲ್ಲುಗಳು ಇವೆ. ಅಲ್ಲಿನ ಒಣ ಕಲ್ಲನ್ನು ತಂದು ಪುಡಿ ಮಾಡಿ ಅದಕ್ಕೆ ತುಸು ಜಲಜನಕ ಅನಿಲವನ್ನು ಸೇರಿಸಿದರೆ ನೀರಿನ ಬಿಂದುಗಳನ್ನು ಹೊಮ್ಮಿಸಬಹುದು. ಹೊರಗಿನಿಂದ ತುಸು ಜಲಜನಕ ಸೇರಬೇಕಷ್ಟೆ.
ಸೂರ್ಯನಿಂದ ಸೂಸಿ ಬರುವ ಬಿಸಿಲಿನ ಜತೆ ‘ಸೌರಗಾಳಿ’ ಕೂಡ ಮೆಲ್ಲಗೆ ಸಾಗಿ ಬರುತ್ತಿರುತ್ತದೆ. ಇದರಲ್ಲಿ ಜಲಜನಕದ ಬೀಜಕಣಗಳೂ ಇರುತ್ತವೆ. ಇವು ಚಂದ್ರನ ಮೇಲಿನ ಕಲ್ಲುದೂಳಿನ ಪುಡಿಯನ್ನು ಸ್ಪರ್ಶಿಸಿದಾಗ ಅಲ್ಲಿ ತಾತ್ಕಾಲಿಕವಾಗಿ ತುಸು ತೇವಾಂಶ ರೂಪುಗೊಳ್ಳುತ್ತದೆ. ವಿಶೇಷ ಸ್ಕ್ಯಾನರ್ ಮೂಲಕ ಆ ಕಲ್ಲು-ದೂಳಿನ ಚಿತ್ರವನ್ನು ಸೆರೆಹಿಡಿದರೆ, ಅದರಲ್ಲಿ ಕಾಣುವ ರೋಹಿತದಲ್ಲಿ ನೀರಿನ ಪಸೆಯನ್ನು ಕೆಮಿಸ್ಟ್ರಿ ತಜ್ಞರು ಗುರುತಿಸಬಹುದು. ಚಂದ್ರಲೋಕದ ಬೆಳಗಿನ ಒಂದೆರಡು ಗಂಟೆಗಳ ಕಾಲ ಹೀಗೆ ಶೇಖರವಾದ ಅತ್ಯಲ್ಪ ತೇವಾಂಶ ಮತ್ತೆ ಬಿಸಿಲು ಏರಿದಂತೆ ಆವಿಯಾಗಿ ಆರಿ ಹೋಗುತ್ತದೆ; ಮರುದಿನ ಮತ್ತೆ ಎಳೆಬಿಸಿಲಲ್ಲಿ ನೀರಿನ ಸೂಕ್ಷ್ಮ ಹನಿಗಳು ದೂಳಿನ ಪದರದ ಮೇಲೆ ಕೂರುತ್ತವೆ. ಒಂದರ್ಥದಲ್ಲಿ ಚಂದ್ರ ಮೆಲ್ಲಗೆ ಬೆವರುತ್ತಾನೆ.
ಇದು ಹೊಸ ಸಂಗತಿಯೇನೂ ಅಲ್ಲ. ಗಗನಯಾತ್ರಿಗಳು ತಂದ ಚಂದ್ರಪುಡಿಯಲ್ಲಿ ನೀರಿದ್ದ ಅಂಶವನ್ನು ನಾವು ಮರೆತಿರಬಹುದು. ಆದರೆ ಹತ್ತು ವರ್ಷಗಳ ಹಿಂದೆ 1999ರಲ್ಲಿ ಶನಿಯತ್ತ ಹೊರಟ ‘ಕಾಸಿನಿ’ ನೌಕೆ ನಮ್ಮ ಚಂದ್ರನನ್ನು ಆಗಸ್ಟ್ 19ರಂದು ಪ್ರದಕ್ಷಿಣೆ ಹಾಕಿ ಹೋಗುವಾಗ ಇಂಥದ್ದೇ ಚಿತ್ರವನ್ನು ರವಾನಿಸಿತ್ತು.
ಈಚೆಗೆ ಜೂನ್ 2ರಿಂದ 9ರವರೆಗೆ ನಾಸಾದ ‘ಡೀಪ್ ಇಂಪಾಕ್ಟ್’ ಹೆಸರಿನ ನೌಕೆಯೊಂದು ಚಂದ್ರನ ಉತ್ತರ ಧ್ರುವದ ಚಿತ್ರಣಗಳನ್ನು ರವಾನಿಸಿತ್ತು. ಅದು ಕೂಡ ಚಂದ್ರನಲ್ಲಿ ತೇವಾಂಶ ಇರುವುದನ್ನು ವರದಿ ಮಾಡಿತ್ತು. ಅದಾದ ಮೇಲೆ ನಮ್ಮದೇ ‘ಚಂದ್ರಯಾನ-1’ ಹೆಸರಿನ ಯಂತ್ರ ಭೂಕಕ್ಷೆಯನ್ನು ದಾಟಿ ಚಂದ್ರನನ್ನು ಸುತ್ತಲು ತೊಡಗಿ ಒಂದು ಪುಟ್ಟ ಶೋಧದಂಡವನ್ನು ಚಂದ್ರನ ನೆತ್ತಿಯ ಮೇಲೆ ಬೀಳಿಸಿತ್ತು. ಅದರಲ್ಲೂ ನೀರಿನ ಅಂಶ ಪತ್ತೆಯಾಗಿತ್ತು (ಎಂದು ಈಗ ನಮ್ಮವರು ಹೇಳುತ್ತಿದ್ದಾರೆ). ಅದಾದ ಹನ್ನೊಂದನೆಯ ದಿನ, ಅಂದರೆ ಕಳೆದ ವರ್ಷ ನವೆಂಬರ್ 19ರಂದು ನಮ್ಮದೇ ಚಂದ್ರನೌಕೆಯಲ್ಲಿ ಕೂತಿದ್ದ ನಾಸಾದ ಎಮ್3 ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್ಶೈನ್ (!) ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಅದರಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಅಮೆರಿಕದ ‘ಸೈನ್ಸ್’ ಪತ್ರಿಕೆಗೆ ರವಾನಿಸಿದರು.
ಆದರೂ ಯಾರೂ ಅದಕ್ಕೆ ಮಹತ್ವ ನೀಡಿರಲಿಲ್ಲ. ಈಚೆಗೆ ನಮ್ಮ ಚಂದ್ರನೌಕೆ ಇದ್ದಕ್ಕಿದ್ದಂತೆ ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿ ಅವಧಿಗೆ ಮೊದಲೆ ಇತಿಶ್ರೀ ಹಾಡಿದಾಗ ಇಸ್ರೊ ತಜ್ಞರು ಸೂತಕದ ಕಳೆ ಹೊತ್ತು ಕೂತಿದ್ದರು. ಚಂದ್ರನತ್ತ ಎರಡನೆಯ ಪಯಣಕ್ಕೆ ಸಿದ್ಧವಾಗುತ್ತಿದ್ದ ‘ಚಂದ್ರಯಾನ-2’ ಹೆಸರಿನ ನೌಕೆಯ ನೆಗೆತವನ್ನು ಮುಂದೂಡಿದರೆ ಹೇಗೆ ಎಂದು ಚಿಂತೆಯಲ್ಲಿದ್ದರು.
ಆ ಸಂದರ್ಭದಲ್ಲೇ ತುಸು ಅನಿರೀಕ್ಷಿತ ಎಂಬಂತೆ ಸೆಪ್ಟೆಂಬರ್ 24ರಂದು ಅಮೆರಿಕದ ನಾಸಾದಿಂದ ಬೆಂಗಳೂರಿನ ಇಸ್ರೊ ಮುಖ್ಯಸ್ಥರಿಗೆ ಸಿಗ್ನಲ್ ಬಂತು. ಸರಸರ ಮಾಧ್ಯಮ ಗೋಷ್ಠಿ ಏರ್ಪಾಟಾಯಿತು. ಚಂದ್ರಜಲದ ಸುದ್ದಿ ವಿವರ, ಗ್ರಾಫಿಕ್ ಚಿತ್ರ, ಛಾಯಾಚಿತ್ರ ಎಲ್ಲವೂ ಏಕಕಾಲದಲ್ಲಿ ನಾಸಾ ಮೂಲಕ ಜಾಗತಿಕ ಮಾಧ್ಯಮಗಳಿಗೆ ಹಾಗೂ ಇಸ್ರೊ ಮೂಲಕ ನಮ್ಮ ಬಾತ್ಮೀದಾರರಿಗೆ ಲಭಿಸಿದವು. ಮರುದಿನ ‘ಚಂದ್ರನಲ್ಲಿ ನೀರುಪತ್ತೆ, ಭಾರತದ ವಿಜ್ಞಾನಿಗಳಿಗೆ ಭೋಪರಾಕ್’ ಎಂಬ ಉದ್ಘೋಷ! ತಲಕಾವೇರಿಯಲ್ಲಿ ತೀರ್ಥೋದ್ಭವ ಆಯ್ತೆಂದು ಭಕ್ತರೆಲ್ಲ ಸಂಭ್ರಮಿಸಿ ಕೊಳಕ್ಕೆ ಜಂಪ್ ಮಾಡುವ ಹಾಗೆ ದೇಶವಿದೇಶಗಳ ಎಲ್ಲ ಮಾಧ್ಯಮಗಳಲ್ಲೂ ಏಕಕಾಲಕ್ಕೆ ಜಲಭೇರಿ ಬಾರಿಸಿತು.
ಅಳುತ್ತಿದ್ದ ಬಾಲ ಶ್ರೀರಾಮಚಂದ್ರನ ಕೈಗೆ ಕನ್ನಡಿಯ ಚಂದ್ರಬಿಂಬ ಕಂಡಂತೆ ‘ಇಸ್ರೊ’ ಅಧ್ಯಕ್ಷ ಮಾಧವನ್ ನಾಯರ್ ಜಿಗಿದೆದ್ದು ಎರಡೂ ಕೈಎತ್ತಿ ಇಡೀ ರಾಷ್ಟ್ರಕ್ಕೆ ಹರ್ಷದ ಬಾವುಟ ಬೀಸಿದರು.
ಎಲ್ಲೆಡೆ ಇಸ್ರೊಕ್ಕೇ ಶಹಭಾಸ್ಗಿರಿ.
ಇದು ಏಕಾಯಿತು? ಇಸ್ರೊ ತಜ್ಞರು ಚಂದ್ರನೌಕೆಯ ಮೇಲೆ ಅಮೆರಿಕದ ಎಮ್3ಯನ್ನು ಕೂರಿಸಿದ್ದನ್ನು ಬಿಟ್ಟರೆ ಚಂದ್ರಜಲದ ಪತ್ತೆಗೆ ಏನನ್ನೂ ಮಾಡಲಿಲ್ಲ. ಎಮ್3ರಿಂದ ಬಂದ ಸಂಕೇತಗಳ ವಿಶ್ಲೇಷಣೆ ಮಾಡಲಿಲ್ಲ. ಚಂದ್ರನ ಮೇಲೆ ಕೆಡವಿದ ಶೋಧದಂಡದಲ್ಲಿ ನೀರಿನ ಅಂಶ ಕಂಡಿದ್ದರೂ ಖಚಿತ ಏನೂ ಹೇಳಿರಲಿಲ್ಲ.
ಈ ಯಾವ ಅಂಶಗಳೂ ನಮ್ಮ ‘ಇಸ್ರೊ’ ಸಂಸ್ಥೆಯ ಸಾಧನೆಗೆ ಕುಂದು ತರುವುದಿಲ್ಲ ನಿಜ. ಇವರು ನಿರ್ಮಿಸಿದ ನೌಕೆಯೊಂದು ಚಂದ್ರನ ಪ್ರದಕ್ಷಿಣೆ ಹಾಕಿದ್ದು, ಚಂದ್ರನ ನೆತ್ತಿಯ ಮೇಲೆ ಒಂದು ಶೋಧ ದಂಡವನ್ನು ಬೀಳಿಸಿ ದೂಳು ಚಿಮ್ಮುವಂತೆ ಮಾಡಿದ್ದು ಇವೆಲ್ಲ ಗ್ರೇಟ್ ನಿಜ. ಶೋಧ ದಂಡದ ಜತೆ ಭಾರತದ ಧ್ವಜವನ್ನೂ ಅಲ್ಲಿ ಇಳಿಸಿ, ಹಾಗೆ ಧ್ವಜ ಊರಿದ ನಾಲ್ಕನೆಯ ದೇಶವೆನಿಸಿದ್ದು ಎಲ್ಲವೂ ಕೊಂಡಾಡಲು ಯೋಗ್ಯವೇ ಹೌದು. ವಿಜ್ಞಾನದ ಕಡೆ ಎಳೆಯರನ್ನು ಮತ್ತೆ ಆಕರ್ಷಿಸುವಂತೆ ಮಾಡಲು, ಇಸ್ರೊ ವಿಜ್ಞಾನಿಗಳಲ್ಲಿ ಮತ್ತೆ ಉತ್ಸಾಹ ಚಿಮ್ಮುವಂತೆ ಮಾಡಲು ಇಂಥದೊಂದು ಜಯಭೇರಿ ಬೇಕಿತ್ತು ನಿಜ. ಆದರೆ ಈ ಮಧ್ಯೆ ಕಾಂಡೊಲಿಸಾ ರೈಸ್ ನೆನಪು ಮತ್ತೆ ಯಾಕೆ ಬರುತ್ತದೆ?
ಏಕೆಂದರೆ, ನಮ್ಮವರ ಸಾಧನೆ ತುಂಬಾ ದೊಡ್ಡದೆಂದು ತೋರಿಸುವಲ್ಲಿ ಅಮೆರಿಕದ ನಾಸಾದ ಹಿತಾಸಕ್ತಿ ಇದೆ. ತಾನೇ ಸ್ವತಃ ಚಂದ್ರನಿದ್ದಲ್ಲಿಗೆ ಹೋಗಬೇಕೆಂಬ ತುಡಿತ ಅದಕ್ಕೆ ಈಚೀಚೆಗೆ ಹೆಚ್ಚುತ್ತಿದೆ. ಆದರೆ ಅಮೆರಿಕ ಸರ್ಕಾರಕ್ಕೆ ಈಗಲೂ ಆಸಕ್ತಿ ಇಲ್ಲ. ಇಂದಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ಭಾರೀ ವೆಚ್ಚದ್ದೆಂಬ ದೃಷ್ಟಿಯೇ ಬಲವಾಗಿದೆ. ಮೇಲಾಗಿ ಯಂತ್ರಗಳೇ ಮನುಷ್ಯನ ಎಲ್ಲ ಕೆಲಸವನ್ನೂ ನಿಭಾಯಿಸುವಂತಿರುವಾಗ (ಅವಕ್ಕೆ ನೀರು, ಆಮ್ಲಜನಕ ಕೂಡ ಬೇಕಾಗಿಲ್ಲ.
ಚಂದ್ರನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಅವಸರ ಈಗೇಕೆ ಎಂಬ ಧೋರಣೆ ಒಬಾಮಾ ಸರ್ಕಾರದ್ದು. ಆದರೆ ಹೋಗಲೇ ಬೇಕೆಂಬ ತುಡಿತ ನಾಸಾವನ್ನು ಬೆಂಬಲಿಸುವ ಔದ್ಯಮಿಕ ಕೂಟದ್ದು. ಅದಕ್ಕೇ ‘ನೋಡ್ರೀ, ಭಾರತದಂಥ ದೇಶವೂ ಹನುಮಲಂಘನಕ್ಕೆ ಹೊರಟಿದೆ; ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ; ಚೀನಾ, ಜಪಾನ್, ಇಂಡಿಯಾ ಹೀಗೆ ಏಷ್ಯದ ಮೂವರೂ ಹೊರಟಿರುವಾಗ ನಾವು ಹಿಂದುಳಿಯುವುದು ನಾಚಿಕೆಗೇಡು’ ಎಂಬ ಅಭಿಪ್ರಾಯವನ್ನು ಅಲ್ಲಿನ ಜನಮನದಲ್ಲಿ ಬಿತ್ತಿ ಸರ್ಕಾರವನ್ನು ಎಬ್ಬಿಸಿ ಮೇಲೇಳಬೇಕಾಗಿದೆ. ‘ಇದುವರೆಗೆ ಪಾಶ್ಚಿಮಾತ್ಯರಿಗಿದ್ದ ಖ್ಯಾತಿಯನ್ನು ಈ ಏಷ್ಯದ ರಾಷ್ಟ್ರಗಳು ಕಿತ್ತುಕೊಳ್ಳಲಿವೆ’ ಎಂದು ಒತ್ತಿ ಹೇಳಬೇಕಾಗಿದೆ. ಬೊಕ್ಕಸದಿಂದ ದೊಡ್ಡದೊಂದು ಪಾಲು ಧನರಾಶಿ ನಾಸಾಕ್ಕೆ ಸಿಕ್ಕರೆ ಸಾಕು, ಅಲ್ಲಿನ ಎಷ್ಟೋ ಉದ್ಯಮಗಳು ಮೇಲೇಳುತ್ತವೆ.
ಅದಕ್ಕೇ ನಾಳೆ (ಅಕ್ಟೊಬರ್ 9ರಂದು) ಚಂದ್ರನ ನೆತ್ತಿಯ ಮೇಲಿನ ಆಳವಾದ ಗುಳಿಯಲ್ಲಿ ನೀರಿದೆಯೆ ಎಂಬುದರ ಪತ್ತೆಗೆಂದೇ ‘ಎಲ್ಕ್ರಾಸ್’ ಹೆಸರಿನ ಶೋಧಯಂತ್ರವೊಂದು ಅಲ್ಲಿ ಇಳಿಯಲಿದೆಯಾದರೂ ಅವಸರದಲ್ಲಿ ಹನ್ನೆರಡು ದಿನಗಳ ಮೊದಲೇ ಭಾರತಕ್ಕೆ ಕೀರ್ತಿ ಪತಾಕೆಯನ್ನು ಸಿಕ್ಕಿಸಲಾಗಿದೆ.
ಸಾವಿರ ಸಮಸ್ಯೆಗಳನ್ನು ಹೊತ್ತ, ಮೂಳೆ ಚಕ್ಕಳದ ಐರಾವತದ ಜುಟ್ಟಿಗೆ ಚಂದ್ರಜಲ ಕೀರ್ತಿ ಪತಾಕೆಯನ್ನು ಸಿಕ್ಕಿಸಬೇಕು. ಬಡ ಐರಾವತ ಮತ್ತೆ ಎದೆಯುಬ್ಬಿಸಿ ಚಂದ್ರನತ್ತ ಇನ್ನೊಮ್ಮೆ ನೆಗೆಯುವಂತೆ ಮಾಡಬೇಕು. ಅದರ ನೂಕುಬಲದ ಮೇಲೆ ತಾನು ಚಿಮ್ಮಿಹೋಗಿ ಚಂದ್ರನ ಮೇಲೆ ಮತ್ತೆ ಕಾಲೂರಬೇಕು. ಇದು ನಾಸಾದ ವಿಚಾರ. ಅದಕ್ಕೇ ಭಾರತವನ್ನು ಗ್ರೇಟ್ ಮಾಡುವ ಹುನ್ನಾರ.
ಹವಾಗುಣ ಬದಲಾವಣೆ
ಏಳನೆಯ ತರಗತಿಯಲ್ಲಿ ಓದುತ್ತಿರುವ ಲಖನೌ ಹುಡುಗಿ ಯುಗರತ್ನಾ ಶ್ರೀವಾಸ್ತವ ಮೊನ್ನೆ (ಸೆಪ್ಟೆಂಬರ್ ೨೨,೨೦೦೯) ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಜಗತ್ತಿನ ಏಳುನೂರು ತಾಣಗಳಲ್ಲಿ ಏಕಕಾಲಕ್ಕೆ ಒಂದು ಹೊಸ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಸಿನೆಮಾದ ಹೆಸರು ‘ಏಜ್ ಆಫ್ ಸ್ಟುಪಿಡ್’ (ದಡ್ಡರ ಯುಗ).
ಬೆಂಗಳೂರಿನಲ್ಲೂ ಮೂರು ಕಡೆ ಪ್ರದರ್ಶನ ಕಂಡ ಈ ಚಿತ್ರ ಮತ್ತು ನ್ಯೂಯಾರ್ಕ್ನಲ್ಲಿ ಯುಗರತ್ನಾ ಮಾಡಿದ ಭಾಷಣ ಎರಡರದ್ದೂ ಸಂದೇಶ ಒಂದೇ:
ಇಂದಿನ ಜನ ನಾಯಕರು ತಂತಮ್ಮ ದೇಶಗಳನ್ನು ಸರಿಯಾಗಿ ಮುನ್ನಡೆಸದಿದ್ದರೆ ಹವಾಗುಣ ಬದಲಾವಣೆ ತೀವ್ರವಾಗಲಿದೆ; ಭವಿಷ್ಯ ತೀರಾ ಕರಾಳವಾಗಲಿದೆ ಎಂದು. ‘ಸ್ಟುಪಿಡ್’ ಚಿತ್ರದಲ್ಲಿ ಇಂದಿಗೆ 45 ವರ್ಷಗಳ ನಂತರದ ಭೂಮಿಯ ಸಂದರ್ಭವನ್ನು ತೋರಿಸಲಾಗಿದೆ.
ಕ್ರಿ.ಶ. ೨೦೫೫ರಲ್ಲಿ ಬಿಸಿ ಪ್ರಳಯದ ನಂತರವೂ ಬದುಕುಳಿದ ಏಕಾಂಗಿ ವೃದ್ಧನೊಬ್ಬನ ಜೀವನ ಚಿತ್ರಣ ಅದರಲ್ಲಿದೆ. ಆದರೆ ಇಡೀ ಚಿತ್ರ ಅದೊಂದೇ ವರ್ಷದ್ದಲ್ಲ. 2008ರಿಂದ ಹಿಡಿದು ಮುಂದಿನ ನಾಲ್ಕು ದಶಕಗಳ ಬದುಕಿನ ಚಿತ್ರಣವನ್ನು ಕಲ್ಪನೆ ಮತ್ತು ವಾಸ್ತವಗಳ ದೃಶ್ಯಾವಳಿಗಳಲ್ಲಿ ತೋರಿಸಲಾಗಿದೆ.
ಲಂಡನ್ ನಗರ ಪದೇ ಪದೇ ಜಲಪ್ರಳಯಕ್ಕೆ ತುತ್ತಾಗಿ ಖಾಲಿಯಾಗಿದೆ. ಸಿಡ್ನಿಯ ಖ್ಯಾತ ಅಪೇರಾ ಹೌಸ್ ಕಟ್ಟಡದ ಹಿಂದೆ ಜ್ವಾಲೆಗೆ ಭುಗಿಲೇಳುತ್ತಿದೆ; ಇಡೀ ಆಸ್ಟ್ರೇಲಿಯಾ ಖಂಡವೇ ವಿಶಾಲ ಕರಕಲು ಭೂಮಿಯಾಗಿದೆ. ಅಮೆರಿಕದ ಜೂಜುಖೋರರ ನಗರ ಲಾಸ್ ವೆಗಾಸ್ ಇಡಿಯಾಗಿ ಮರುಭೂಮಿಯ ಮರಳು ರಾಶಿಯಲ್ಲಿ ಹೂತಿದೆ.
ಬರದ ಬೇಗೆಯಲ್ಲಿ ನಿರ್ಜನವಾದ ಭರತಖಂಡ, ತಾಜ್ ಮಹಲ್ ಸಮೀಪ ಕಾಗೆಗಳು ಕುಕ್ಕುತ್ತಿರುವ ಮಾನವ ಮಾಂಸಖಂಡ; ಉತ್ತರ ಧ್ರುವದ ತುಸು ತಂಪಿನಲ್ಲಿ ನಿರಾಶ್ರಿತರ ನರಕಸದೃಶ ಬದುಕು ( ‘ಏಜಾಫ್ ಸ್ಟುಪಿಡ್’ ಜಾಲತಾಣದಲ್ಲಿ ಈ ಚಿತ್ರವನ್ನು ಉಚಿತವಾಗಿ ನೋಡಬಹುದು).
ಕಟ್ಟುಕತೆ ನಿಜ. ಆದರೆ ಇಂದಿನ ಸಮಾಜ ಹೀಗೆಯೇ ಸಂಪನ್ಮೂಲಗಳ ದುಂದುವೆಚ್ಚದಲ್ಲಿ ತಲ್ಲೆನವಾಗಿದ್ದರೆ, ‘ಸ್ಟುಪಿಡ್’ನಲ್ಲಿ ಕಾಣುವ ಚಿತ್ರಣವೇ ವಾಸ್ತವವೂ ಆಗಲು ಸಾಧ್ಯವಿದೆ. ವಿಶ್ವಸಂಸ್ಥೆಯಿಂದ ನೇಮಕಗೊಂಡ ಐಪಿಸಿಸಿ ತಜ್ಞರ ಅಂದಾಜಿನ ಪ್ರಕಾರ, ಭೂಮಿಯ ಸರಾಸರಿ ಉಷ್ಣತೆ ನಾಲ್ಕು ಡಿಗ್ರಿ ಸೆಲ್ಸಿಯಸ್ ಏರಿದರೆ ಇವೆಲ್ಲ ಕರಾಳ ಭವಿಷ್ಯವೂ ನಿಜವಾಗುತ್ತದೆ.
ಇಂದಿನ ರಾಜಕೀಯ ಧುರೀಣರು ನಿಜಕ್ಕೂ ಮುತ್ಸದ್ದಿಗಳಾಗಿ ಇಡೀ ಮಾನವಕುಲದ ಪ್ರಗತಿಯ ದಿಶೆಯನ್ನು ಬದಲಿಸದಿದ್ದರೆ ನ್ಯೂಯಾರ್ಕ್ನಲ್ಲಿರುವ ಸ್ವಾತಂತ್ರ್ಯದೇವಿಯ ಪ್ರತಿಮೆಯ ತೋಳಿನ ತುದಿಯಲ್ಲಿರುವ ದೊಂದಿ ನೀರಲ್ಲಿ ಮುಳುಗಿ ನಂದಿಹೋಗುತ್ತದೆ.
ಮುತ್ಸದ್ದಿಗಳು ಎಲ್ಲಿದ್ದಾರೆ? ಯುಗರತ್ನಾ ಭಾಷಣ ಮಾಡಿದ ಹಾಗೆಯೇ ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಹಿಂದೆ 1992ರಲ್ಲಿ ಕೆನಡಾದ ಸೆವೆರಿನ್ ಸುಝುಕಿ ಎಂಬ ಇನ್ನೊಬ್ಬ ಹುಡುಗಿ ಅಂದಿನ ಧುರೀಣರಿಗೆ ಕಳಕಳಿಯ ಮನವಿ ಮಾಡಿದ್ದಳು.
ಜೀವಸಂಕುಲದ ಸತತ ನಾಶ, ಮರುಭೂಮಿ ವಿಸ್ತರಣೆ, ಜಲ ಮಾಲಿನ್ಯ, ಶಸ್ತ್ರಾಸ್ತ್ರ ಸಂಗ್ರಹಣೆ ಮುಂತಾದ ಅನಿಷ್ಟಗಳನ್ನು ಪಟ್ಟಿಮಾಡಿ, ‘ಹಿರಿಯರೇ, ಇವುಗಳನ್ನೆಲ್ಲ ಸರಿಪಡಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಂಥ ಅನಿಷ್ಟಗಳ ಸರಮಾಲೆ ಇನ್ನಷ್ಟು ಬೆಳೆಯದಂತೆ ತಡೆಯಲು ಸಾಧ್ಯವೇ?’ ಎಂದು ಕೇಳಿದ್ದಳು. ಅಂದಿನ ಎಲ್ಲ ಸಂಕಟಗಳೂ ಇಂದು ಇನ್ನಷ್ಟು ಉಲ್ಬಣಗೊಂಡಿವೆ. ಸಂಕಟಗಳ ಜಾಗತೀಕರಣ ವಾಗಿದೆ.
ಸಮಸ್ಯೆಗಳನ್ನು ಕಡಿಮೆ ಮಾಡಲೆಂದು ವಿಜ್ಞಾನಿಗಳು, ತಂತ್ರವಿದ್ಯಾ ಪರಿಣತರು ಹಾಗೂ ಯೋಜನಾ ತಜ್ಞರು ರೂಪಿಸುವ ಎಲ್ಲ ಉಪಾಯಗಳೂ ರಾಜಕೀಯ ಹಸ್ತಕ್ಷೇಪದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತವೆ.
ಇದಕ್ಕೆ ತೀರ ಸರಳ ಉದಾಹರಣೆ ಎಂದರೆ ಬೋರ್ವೆಲ್ ಯಂತ್ರಗಳು. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಸಿಕ್ಕ ಅತ್ಯುತ್ತಮ ತಾಂತ್ರಿಕ ಉಪಾಯ ಇದು ಹೌದು. ಆದರೆ ಅದರ ದುರ್ಬಳಕೆ ಅತಿಯಾಗಿದ್ದರಿಂದಲೇ ನೆಲದಾಳಕ್ಕೂ ಮರುಭೂಮಿ ವಿಸ್ತರಿಸಿದೆ.
ರಾಜಸ್ತಾನದ ನಂತರದ ಅತಿ ದೊಡ್ಡ ‘ಮರುಭೂಮಿ ಸದೃಶ’ ಭೂಕ್ಷೇತ್ರವಿರುವ ರಾಜ್ಯ ನಮ್ಮದೆಂಬ ಕುಖ್ಯಾತಿ ಬಂದಿದೆ. ಇಂಥ ಬೋರ್ವೆಲ್ಗಳಿಗೆ ನಿಯಂತ್ರಣ ಹೇರಲೆಂದು ಮಸೂದೆ ತರುವ ಯತ್ನಗಳೆಲ್ಲ ರಾಜಕೀಯ ಹಿತಾಸಕ್ತಿಯಿಂದಾಗಿ ವಿಫಲವಾಗಿವೆ.
ಇದೀಗ ಉಡಾವಣೆಗೊಂಡ ‘ಓಷನ್ಸ್ಯಾಟ್’ ಉದಾಹರಣೆಯನ್ನೇ ನೋಡೋಣ. ಕಳೆದ ಮೂವತ್ತು ವರ್ಷಗಳಿಂದಲೂ ಇದೇ ಮಾದರಿಯ ಉಪಗ್ರಹಗಳು ಜಗತ್ತಿನ ವಿಶಾಲ ಸಾಗರಗಳ ಮೇಲೆ ಕಣ್ಣಿಟ್ಟಿವೆ.
ಅಮೆರಿಕದ ‘ನೋವಾ’ ಸರಣಿ ಉಪಗ್ರಹಗಳು ರವಾನಿಸುವ ಮಾಹಿತಿ ಎಲ್ಲರಿಗೂ ಲಭ್ಯ ಇವೆ. ಹವಾಮಾನ ಮುನ್ಸೂಚನೆಯ ಕುರಿತಂತೆ ದಿನವೂ ನಮ್ಮ ಟಿವಿಯಲ್ಲಿ ಕಾಣುವ ನಕ್ಷೆಗಳು ಚಿತ್ರಗಳೆಲ್ಲ ‘ನೋವಾ’ ಉಪಗ್ರಹಗಳಿಂದ ಬಂದುದೇ ಆಗಿವೆ.
ಜತೆಗೆ ಯಾವ ಸಮುದ್ರದ ಯಾವ ಭಾಗದಲ್ಲಿ ಉಷ್ಣತೆ ತುಸು ಹೆಚ್ಚಾಗಿದೆ, ಹಸಿರು ಪಾಚಿಗಳು ಯಾವ ಭಾಗದಲ್ಲಿ ಹೆಚ್ಚಾಗಿ ಸಾಂದ್ರವಾಗಿವೆ ಎಂಬುದರ ವರದಿ ಕೂಡ ಅಲ್ಲಿಂದಲೇ ಸಿಗುತ್ತದೆ. ಅದನ್ನು ಆಧರಿಸಿ, ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಮೀನುಗಳು ಒಟ್ಟಾಗಿ ಸಂಚರಿಸುತ್ತಿವೆ ಎಂಬುದನ್ನು ಕೂಡ ಹೇಳಬಹುದು.
ಹೈದರಾಬಾದ್ನಲ್ಲಿರುವ ‘ಸಾಗರ ಮಾಹಿತಿ ಕೇಂದ್ರ’ (ಇನ್ಕೊಯಿಸ್) ಹೆಸರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆ ‘ನೋವಾ’ ನೆರವಿನಿಂದ ವಾರಕ್ಕೆ ಮೂರು ಬಾರಿ ಮೀನು ದಟ್ಟಣಿಸಿರುವ ಸ್ಥಳಗಳನ್ನು ಗುರುತಿಸಿ ದೇಶದ ನಾನಾ ಬಂದರುಗಳಿಗೆ ಮಾಹಿತಿ ನೀಡುತ್ತದೆ.
ದೋಣಿಯಲ್ಲಿ ಕೂತು ಹತ್ತಾರು ಕಿಮೀ ದೂರದವರೆಗೆ ಅಂಡಲೆಯುತ್ತ ಅದೆಷ್ಟೊ ಬಾರಿ ವ್ಯರ್ಥ ಸುತ್ತಾಡುವ ಮೀನುಗಾರರಿಗೆ ಇದರಿಂದ ತುಂಬ ಅನುಕೂಲವಾಗಿದೆ. ಇಂಥದೇ ಸ್ಥಳದಲ್ಲಿ ಮೀನುಗಳಿವೆ ಎಂದು ಗೊತ್ತಾಗಿ ನೇರವಾಗಿ ಅಲ್ಲಿಗೆ ಧಾವಿಸುತ್ತಾರೆ. ಸಮಯ ಹಾಗೂ ಶಕ್ತಿಯ ಉಳಿತಾಯವಾಗಿ ‘ನೀಲಕ್ರಾಂತಿ’ ಯಶಸ್ವಿಯಾಗುತ್ತದೆ.
ಈಗ ಆಗಿದ್ದೇನೆಂದರೆ, ಸಾಮಾನ್ಯ ಮೀನುಗಾರರಿಗೆ ಈ ಮಾಹಿತಿ ಸಿಗುವ ಮೊದಲೇ ಯಾಂತ್ರೀಕೃತ ಬೃಹತ್ ಹಡಗುಗಳು ಅಲ್ಲಿಗೆ ಧಾವಿಸುತ್ತವೆ. ಬೇಡಿಕೆ ಇರಲಿ ಬಿಡಲಿ, ಭಕ್ಷ್ಯಯೋಗ್ಯ ಇರಲಿ ಬಿಡಲಿ, ವಿಶಾಲ ಬಲೆಗಳನ್ನು ಬೀಸಿ ಏಕಕಾಲಕ್ಕೆ ಹತ್ತಾರು ಟನ್ಗಟ್ಟಲೆ ಮೀನುಗಳನ್ನು ಹಿಡಿದು ತರುತ್ತವೆ.
ದುರ್ಬಲ ಮೀನುಗಾರರು ತಮ್ಮ ಸಾಂಪ್ರದಾಯಿಕ ಜ್ಞಾನದ (ಅಂದರೆ ಪಕ್ಷಿಗಳ ಹಾರಾಟ, ನೀರಿನ ಗುಳ್ಳೆ, ಬದಲಾಗುವ ಬಣ್ಣ, ಗಾಳಿಯ ವಾಸನೆ) ಜಾಡು ಹಿಡಿದು ಅತ್ತ ಹೋದರೆ ಅಲ್ಲಿ ಎಲ್ಲವೂ ಆಗಲೇ ಖಾಲಿ. ಯಾಂತ್ರಿಕ ಹಡಗುಗಳ ಇಂಥ ಅಂದಾದುಂದಿ ಕಬಳಿಕೆಯಿಂದಾಗಿ ಇಂದು ಜಗತ್ತಿನ ಜಲಜೀವ ಭಂಡಾರವೇ ಖಾಲಿಯಾಗುತ್ತವೆ.
ನಿನ್ನೆ ಹಾರಿಬಿಟ್ಟ ಉಪಗ್ರಹದಿಂದ ನಮ್ಮ ಬಾಹ್ಯಾಕಾಶ ತಂತ್ರಜ್ಞರ ಆತ್ಮವಿಶ್ವಾಸ ಹೆಚ್ಚಿದೆ; ಪಿಎಸ್ಎಲ್ವಿ ರಾಕೆಟ್ಗಳ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಿದೆ.
ಬೇರೆ ರಾಷ್ಟ್ರಗಳು ತುಸು ಅಗ್ಗದ ದರದಲ್ಲಿ ನಮ್ಮ ರಾಕೆಟ್ ಮೇಲೆಯೇ ತಮ್ಮ ಉಪಗ್ರಹಗಳ ಹಾರಿಬಿಡಬಹುದಾದ ಅವಕಾಶ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯ ಎಂದರೆ ಮುಂದೆಂದಾದರೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಉಪಗ್ರಹ ಚಿತ್ರಣಗಳನ್ನು ನಮಗೆ ಕೊಡಲು ನಿರಾಕರಿಸಿದರೆ ನಾವು ಕಂಗಾಲಾಗಬೇಕಾಗಿಲ್ಲ. ಸ್ವಾವಲಂಬನೆ ನಮ್ಮದಾಗುತ್ತದೆ.
‘ಓಷನ್ಸ್ಯಾಟ್-2’ ನೆರವಿನಿಂದ ನಾವೂ ಮೀನುಗುಂಪುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಸುಂಟರಗಾಳಿಯ ಮುನ್ಸೂಚನೆ ಗೊತ್ತಾಗಬಹುದು. ಸಮುದ್ರ ಕೊರೆತ ಎಲ್ಲೆಲ್ಲಿ ಎಷ್ಟು ತೀವ್ರ ಆಗಲಿಕ್ಕಿದೆ, ಉಪ್ಪುನೀರು ಎಷ್ಟೆಷ್ಟು ದೂರಕ್ಕೆ ನುಗ್ಗುತ್ತಿದೆ ಎಂಬುದೂ ಗೊತ್ತಾಗಬಹುದು.
ಅದನ್ನೇ ಆಧರಿಸಿ, ಕಡಲ ಕೊರೆತ ತಡೆಗಟ್ಟುವ ಇನ್ನಷ್ಟು ವ್ಯರ್ಥ ಯೋಜನೆಗಳು ಎಲ್ಲೋ ರೂಪುಗೊಳ್ಳುತ್ತವೆ; ಸಾರ್ವಜನಿಕ ಹಣದ ಅಪವ್ಯಯ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತದೆ. ಅದನ್ನು ತಡೆಗಟ್ಟುವ ರಾಜಕೀಯ ಇಚ್ಛಾಶಕ್ತಿ ನಮ್ಮಲ್ಲಿ ಬೆಳೆದೀತೆ? ಎಸ್ಈಝಡ್ಗಳು, ಕಡಲಂಚಿನ ರೆಸಾರ್ಟ್ಗಳು ಕಂಡಕಂಡಲ್ಲಿ ಆಳ ಬೋರ್ವೆಲ್ ಕೊರೆದು ಜಲಖಜಾನೆಯನ್ನು ಖಾಲಿ ಮಾಡದಂತೆ ತಡೆಯಲು ಸಾಧ್ಯವೆ?
ಬೋರ್ವೆಲ್ ಮಾತು ಬಂದಾಗ ಸಹಜವಾಗಿ ನಾರ್ಮನ್ ಬೋರ್ಲಾಗ್ ನೆನಪೂ ಬರುತ್ತದೆ. ‘ಹಸಿರುಕ್ರಾಂತಿಯ ಜನಕ’ ಎಂದೇ ಖ್ಯಾತಿ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪಡೆದು ಈಚೆಗೆ ಗತಿಸಿದ ಈ ಪುಣ್ಯಾತ್ಮನಿಂದಾಗಿ ಮೆಕ್ಸಿಕೊ, ಪಾಕಿಸ್ತಾನ ಮತ್ತು ಭಾರತದಲ್ಲಿ ಆಹಾರ ಸ್ವಾವಲಂಬನೆ ಸಾಧ್ಯವಾಯಿತು ನಿಜ.
ಅಧಿಕ ಇಳುವರಿಯ ಜತೆಗೆ ಅಧಿಕ ನೀರು, ಅಧಿಕ ವಿದ್ಯುತ್ತು, ಅಧಿಕ ಪೆಟ್ರೋಲಿಯಂ, ಅಧಿಕ ಒಳಸುರಿ ಎಲ್ಲವುಗಳ ಮಹಾಕ್ರಾಂತಿಯೇ ನಡೆದು ಇಂದಿನ ಭೂಮಿಯ ಒಟ್ಟಾರೆ ಸಂಕಷ್ಟಗಳಿಗೆ ಆತನ ಕೊಡುಗೆಯೂ ಅಧಿಕ ಎಂತಲೂ ವಾದಿಸಬಹುದು.
ಕೃಷಿ ವಿಸ್ತರಣೆಗೆಂದು ನಾಶವಾಗಬಹುದಾಗಿದ್ದ ಲಕ್ಷಾಂತರ ಹೆಕ್ಟೇರ್ ಅರಣ್ಯ ತನ್ನಿಂದಾಗಿ ಉಳಿಯಿತೆಂದೂ ಹಸಿವೆಯಿಂದ ಸಾಯಬಹುದಾಗಿದ್ದ ಕೋಟ್ಯಂತರ ಜನರ ಬದುಕು ಭದ್ರವಾಯಿತೆಂದೂ ಆತ ಹೇಳಿದ್ದರಲ್ಲಿ ಸತ್ಯಾಂಶ ಇದೆಯಾದರೂ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕ ತಳಿಗಳ ನಾಶ, ಮಣ್ಣುನೀರಿನ ಮಾಲಿನ್ಯ, ನೆಲದಾಳದ ಬರಗಾಲ ಎಲ್ಲಕ್ಕೂ ಈ ಕ್ರಾಂತಿಯೇ ಕಾರಣ ಎಂಬುದೂ ಅಷ್ಟೇ ನಿಜ. ಈಚೆಗೆ ಈತ ಕುಲಾಂತರಿ ತಳಿಗಳ ಪ್ರಚಾರಕನೂ ಆಗಿ, ಕಳೆನಾಶಕ ಕೆಮಿಕಲ್ಗಳ ಪ್ರಚಾರಕನಾಗಿ, ಐರೋಪ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಾಗಿತ್ತು ಕೂಡ.
‘ಕೈಯಾರೆ ಕಳೆ ಕೀಳುವುದೆಂದರೆ ತುಂಬ ಕಷ್ಟದ ಕೆಲಸ; ಬಡವರಿಗೂ ಟೊಂಕ ಇರುತ್ತದೆ ಕಣ್ರೀ!’ ಎಂದು ಬೋರ್ಲಾಗ್ ಕಳೆನಾಶಕ ಕೆಮಿಕಲ್ ತಯಾರಿಸುವ ಕಂಪೆನಿಗಳ ವಕ್ತಾರನಂತೆ ಕಳೆದ ವರ್ಷ ಹೇಳಿದ್ದು ಅನೇಕರನ್ನು ಕೆರಳಿಸಿತ್ತು. ಕೃಷಿ ರಸಾಯನಗಳ ಅತಿ ಬಳಕೆಯಿಂದಾಗಿಯೇ ಭಾರತದಂಥ ದೇಶಗಳ ಕೃಷಿಕರು ನಾನಾ ಕಾಯಿಲೆಗಳಿಂದ, ಖಿನ್ನತೆಯಿಂದ ಬಳಲುತ್ತ, ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಅಂಥ ಅನಾಹುತಗಳಿಗೆ ವಿಜ್ಞಾನ ತಂತ್ರಜ್ಞಾನ ಕಾರಣವೇ ಅಥವಾ ಧನದಾಹಿ ಕಂಪೆನಿಗಳು ಕಾರಣವೇ, ಅವುಗಳನ್ನು ಪೊರೆಯುವ ರಾಜಕಾರಣಿಗಳು ಕಾರಣವೇ ಎಂಬುದು ಸದಾ ಚರ್ಚಾಸ್ಪದ ವಿಷಯ ವಾಗಿಯೇ ಉಳಿಯುತ್ತದೆ.
ಹಸಿರು ಕ್ರಾಂತಿಯ ಎಲ್ಲಕ್ಕಿಂತ ದೊಡ್ಡ ಅನಾಹುತವನ್ನು ಈಗೀಗ ವಿಜ್ಞಾನಿಗಳು ಮನಗಾಣುತ್ತಿದ್ದಾರೆ. ಹೈಬ್ರಿಡ್ ತಳಿಗಳಲ್ಲಿ ಕಬ್ಬಿಣ, ಸತು, ಅಯೊಡಿನ್ ಮತ್ತು ಎ ಜೀವಸತ್ವ ತೀರಾ ಕಡಿಮೆ ಇರುತ್ತದೆ. ಅದನ್ನೇ ತಿಂದು ಬೆಳೆದ ಇಡೀ ಜನಾಂಗ ಹೊಟ್ಟೆ ತುಂಬಿದ್ದರೂ ‘ಅವಿತ ಹಸಿವೆ’ಯಿಂದಾಗಿ ಅನೇಕ ಅವ್ಯಕ್ತ ದೌರ್ಬಲ್ಯಗಳ ತವರಾಗುತ್ತದೆ.
ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ಮಾಂಸ, ಮೊಟ್ಟೆ, ಮೀನು, ಹಣ್ಣುಹಂಪಲುಗಳನ್ನು ಸೇವಿಸುವ ಜಗತ್ತಿನ ಇತರ ಜನಾಂಗಕ್ಕೆ ಹೋಲಿಸಿದರೆ ಹೈಬ್ರಿಡ್ ಧಾನ್ಯಗಳನ್ನೇ ಹೆಚ್ಚಾಗಿ ಉಣ್ಣುವವವರಿಗೆ ಬೌದ್ಧಿಕ, ಭಾವನಾತ್ಮಕ ಹಾಗೂ ದೈಹಿಕ ಸೋಲುಗಳು ಪದೇ ಪದೇ ಎದುರಾಗುತ್ತವೆ.
ಸಮತೋಲ ಆಹಾರವೇ ದುರ್ಲಭವಾದಾಗ ನೊಬೆಲ್ ಪಾರಿತೋಷಕವೂ ಒಲಿಂಪಿಕ್ ಪದಕಗಳೂ ದುರ್ಲಭವಾಗುತ್ತವೆ.
ಕೃತಿ: ಕ್ರೀಡೆಗಳು (ಹಾಕಿ, ಪೋಲೋ, ಟೆನಿಸ್)