ಅಂಕಣ: ಜೀವಕೋಶ
ಲೇಖಕರು : ಕ್ಷಮಾ ವಿ ಭಾನುಪ್ರಕಾಶ್
ಕೃತಿ:ವಿಶ್ವದ ಪ್ರಪ್ರಥಮ ನ್ಯಾನೊ
ಲೇಖಕರು: ಕೊಳ್ಳೇಗಾಲ ಶರ್ಮ
ಕೃತಿಯನ್ನು ಓದಿ
[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” type=”flex”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]
ಕೃತಿ:ಉಷ್ಟ್ರಪಕ್ಷಿ ವಿದೇಶಿ ಅಲ್ಲ
ಲೇಖಕರು: ಕೊಳ್ಳೇಗಾಲ ಶರ್ಮ
ಕೃತಿಯನ್ನು ಓದಿ
[/fusion_text][/fusion_builder_column][/fusion_builder_row][/fusion_builder_container]
ಕಾಲವೊಂದಿತ್ತು; ರೋಗಿಯು ವೈದ್ಯರ ಬಳಿ ಹೋದಾಗ, ತನ್ನ ಹಿಂದಿನ ಚಿಕಿತ್ಸೆಯ ವಿವರವನ್ನು ಹಾಗೂ ದಾಖಲೆಗಳನ್ನು ಸರಿಯಾಗಿ ಬಹಿರಂಗಪಡಿಸಲಾಗದೆ ವೈದ್ಯರ ಎದುರಿಗೆ ಅಸಹಾಯಕನಾಗಿ ಕೈಚೆಲ್ಲಿ ಕುಳಿತುಕೊಳ್ಳುವುದು ಒಂದೆಡೆಯಾದರೆ, ಅತ್ತ ರೋಗಿಯ ಪೂರ್ವಾಪರ ಅರಿಯದ ವೈದ್ಯರು ವಿಧಿಯಿಲ್ಲದೇ ರೋಗಿಯ ಪೂರ್ವದ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಕಡೆಗೂ ಅಲ್ಪ ಸ್ವಲ್ಪ ಮಾಹಿತಿ ಪಡೆದು, ತನ್ನ ಮುಂದಿನ ಚಿಕಿತ್ಸೆ ಆರಂಭಿಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ, ರೋಗಿ ಮತ್ತು ವೈದ್ಯರಿಗಾಗುವ ನಷ್ಟ ಒಂದೆರಡಲ್ಲ; ಒಂದೆಡೆ ಸಮಯದ ಹರಣ ನಡೆದರೆ, ಇನ್ನೊಂದಡೆ ಸರಿಯಾದ ಮಾಹಿತಿಯು ಸಿಗದೇ ವೈದ್ಯರು ರೋಗಿ ಹೇಳಿದನ್ನು ಕೇಳಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ; ಇದರಿಂದ ಚಿಕಿತ್ಸೆಗೆಂದು ಬರುವ ಇತರೆ ರೋಗಿಗಳ ರೋಗದ ತೀವ್ರತೆ ಎಷ್ಟೇ ಇದ್ದರೂ ಬಹಳ ಸಮಯ ಕಾಯಬೇಕಾಗುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರವನ್ನು ವೈದ್ಯ ವಿಜ್ಞಾನದಲ್ಲಿ ಕಂಡು ಕೊಂಡಿದ್ದಾರೆ. ಅದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಎಂದು ಕರೆಯುತ್ತೇವೆ.
ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆ ತಂತ್ರಜ್ಞಾನದಿಂದಾಗಿ, ರೋಗಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಹಾಗೂ ಪುನಃ ಬೇಕಾದ ಹಳೆಯ ದಾಖಲೆಗಳನ್ನು ಹಿಂಪಡೆಯಬಹುದು. ಇದರಿಂದಾಗಿ ವೈದ್ಯರ ಹಾಗೂ ರೋಗಿಯ ಅಮೂಲ್ಯ ಸಮಯದ ಉಳಿತಾಯವಾಗುತ್ತದೆ. ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಆಸ್ಪತ್ರೆಯಲ್ಲಿ ರೋಗಿಯ ನೋಂದಣಿಯಿಂದ ಆರಂಭವಾಗಿ, ವಿವಿಧ ಹಂತಗಳನ್ನು ದಾಟಿ, ಕಡೆಗೆ ಆಸ್ಪತ್ರೆಯಿಂದ ರೋಗಿಯ ನಿರ್ಗಮನದವವರೆಗೂ ನಡೆಯುವ ಪ್ರಕ್ರಿಯೆ.
ಈ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆಯುತ್ತವೆ; ಪ್ರತಿಯೊಂದು ಹಂತದಲ್ಲಿಯೂ ರೋಗಿಯು ಆಸ್ಪತ್ರೆಯ ವಿವಿಧ ಇಲಾಖೆಯನ್ನು ಸಂದರ್ಶಿಸಬೇಕಾಗುತ್ತದೆ. ಅಲ್ಲಿ ನಡೆಯುವ ಪರೀಕ್ಷೆಗಳು, ಸಂದರ್ಶನ ಹಾಗೂ ಚಿಕಿತ್ಸೆಗಳ ವಿವರಗಳು, ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ನಲ್ಲಿ ದಾಖಲಾಗುತ್ತದೆ. ಹಾಗಾಗಿ, ಇಲ್ಲಿ ಎಲ್ಲಿಯೂ ಪೇಪರ್ ಬಳಕೆಯಾಗದೆ ಕೇವಲ ಕಂಪ್ಯೂಟರ್ಗಳಲ್ಲಿ ಮಾಹಿತಿಯು ದಾಖಲಾಗುತ್ತಾ, ವರ್ಗಾವಣೆಯಾಗುತ್ತಾ ಹೋಗುತ್ತದೆ. ಪ್ರತಿ ಹಂತ ಹಾಗೂ ಪ್ರತಿ ಇಲಾಖೆಯಲ್ಲಿ ನಡೆಯುವ ಚಟುವಟಿಕೆಗಳು, ವ್ಯವಸ್ಥಿತವಾಗಿ ಒಂದಾದ ಮೇಲೊಂದರಂತೆ ಯೋಜನಾಬದ್ಧವಾಗಿ ನಡೆಯುತ್ತವೆ. ಇದನ್ನೇ ನಾವು ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು ಎನ್ನುತ್ತೇವೆ.
ಸ್ಕ್ಯಾನರ್, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆ (ಅಡ್ವಾನ್ಸಡ್ ಕ್ಲಿನಿಕಲ್ ಇಮೇಜಿಂಗ್ ಅಪ್ಲಿಕೇಶನ್), ಆಸ್ಪತ್ರೆಯ ಮಾಹಿತಿ ವ್ಯವಸ್ಥೆ (ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್) ಮತ್ತು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಗಳನ್ನು (ಪಿಕ್ಚರ್ ಆರ್ಕೈವಲ್ ಅಂಡ್ ಕಮ್ಯುನಿಕೇಷನ್ ಸಿಸ್ಟಮ್ಸ್) ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು (ರೇಡಿಯಾಲಜಿ ಇನ್ಫಾರ್ಮೆಶನ್ ಸಿಸ್ಟಮ್ಸ್) ಒಳಗೊಂಡಿರುತ್ತದೆ.
ರೋಗಿಯ ಮಾಹಿತಿಯನ್ನು ನಾವು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸಂಗ್ರಹಿಸಿದರೆ, ರೋಗಿಯ ಚಿಕಿತ್ಸೆಯ ಸಮಯದಲ್ಲಿ ತಗೆದ ಕ್ಷ-ಕಿರಣ, ಅಲ್ಟ್ರಾಸೌಂಡ್, ಎಂ ಆರ್ ಐ ಹಾಗು ಇತರೆ ಚಿತ್ರಗಳನ್ನು ಚಿತ್ರ ದಾಖಲಾತಿ ಮತ್ತು ಸಂವಹನಾ ವ್ಯವಸ್ಥೆಯಲ್ಲಿ ಸಂಗ್ರಹಿಸುತ್ತಾರೆ. ಸ್ಕ್ಯಾನರ್ಗಳಿಂದ ಮೂಡಿ ಬರುವ ಚಿತ್ರಗಳನ್ನು ರೇಡಿಯೊಲೊಜಿಸ್ಟ್ಗಳು, ಸುಧಾರಿತ ವೈದ್ಯಕೀಯ ಚಿತ್ರಣ ಅನ್ವಯಿಕೆಗಳನನ್ನು ಬಳಸಿ ಪರಿಷ್ಕರಿಸುತ್ತಾರೆ. ರೇಡಿಯೊಲೊಜಿಸ್ಟ್ ಪರಿಷ್ಕರಿಸಿದ ಚಿತ್ರ ಹಾಗೂ ವರದಿಯನ್ನು ಆಧರಿಸಿ ತಜ್ಞ ವೈದ್ಯರು ಮುಂದಿನ ಚಿಕಿತ್ಸೆಯನ್ನು ನೀಡುತ್ತಾರೆ.
ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯ ಕಾರ್ಯದ ಹರಿವು :
ರೋಗಿಯ ನೋಂದಣಿಯನ್ನು ಆಸ್ಪತ್ರೆಯ ಸಿಬ್ಬಂದಿ ಹಾಸ್ಪಿಟಲ್ ಇನ್ಫಾರ್ಮೆಶನ್ ಸಿಸ್ಟಮ್ಸ್ನಲ್ಲಿ ಮಾಡುತ್ತಾರೆ. ರೋಗಿಯ ಹೆಸರು, ವಯಸ್ಸು, ಲಿಂಗ, ಜನ್ಮ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಆಸ್ಪತ್ರೆಯ ಮಾಹಿತಿ ವ್ಯವಸ್ಥೆಯಲ್ಲಿ ಸೇರಿಸಿದಾಗ, ರೋಗಿಗೆ ಒಂದು ಗುರುತಿನ ಸಂಖ್ಯೆಯನ್ನು ಅದು ನೀಡುತ್ತದೆ. ಒಮ್ಮೆ ನೋಂದಣಿ ಮಾಡಿಸಿದರೆ ಸಾಕು, ಮುಂದೆ ಈ ಗುರುತಿನ ಸಂಖ್ಯೆಯನ್ನು ಹಾಸ್ಪಿಟಲ್ ಇನ್ಫಾರ್ಮಶನ್ ಸಿಸ್ಟಮ್ಸ್ಗೆನೀಡಿದರೆ, ರೋಗಿಯ ಪೂರ್ವಾಪರದ ಚಿಕಿತ್ಸೆಯ ಜಾತಕವನ್ನು ನಮ್ಮ ಮುಂದಿಡುತ್ತದೆ.
ಒಮ್ಮೆ ರೋಗಿಯ ನೋಂದಣಿಯಾದರೆ ಸಾಕು, ರೋಗಿಯು ಸಂದರ್ಶಿಸಬೇಕಾದ ಇಲಾಖೆಗೆ ಆತನ ಪೂರ್ವಾಪರದ ದಾಖಲೆಗಳು ತಾನಾಗಿಯೇ ಕಂಪ್ಯೂಟರ್ ಮೂಲಕ ವರ್ಗಾವಣೆಯಾಗುತ್ತವೆ. ಆಗ, ವೈದ್ಯರು ರೋಗಿಯ ಹಿಂದಿನ ಚಿಕಿತ್ಸೆಯ ಮಾಹಿತಿಯನ್ನು ಪಡೆದು ರೋಗಿಯೊಂದಿಗೆ ಸಂಭಾಷಣೆ ನಡೆಸಿ, ಪರೀಕ್ಷಿಸಿ, ಏನಾದರೂ ಅನುಮಾನವಿದ್ದಲ್ಲಿ ಸ್ಕ್ಯಾನಿಂಗ್ ಮಾಡಿಸಲು ರೋಗಿಗೆ ಹೇಳಿ, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಲ್ಲಿ ಸ್ಕ್ಯಾನ್ ಮಾಡುವ ಕೆಲಸವನ್ನು ನುರಿತ ತಂತ್ರಜ್ಞರಿಗೆ ನಿಯೋಜಿಸಿ ವರ್ಗಾಯಿಸುತ್ತಾರೆ.
ಪ್ರಯೋಗಾಲಯಗಳಲ್ಲಿ ನುರಿತ ತಜ್ಞರು, ವೈದ್ಯರು ಹೇಳಿದ ವಿಧಾನವನ್ನು ಅನುಸರಿಸಿ, ಅಂಗಗಳ ಚಿತ್ರಗಳನ್ನು ತಗೆದು ರೇಡಿಯೊಲೊಜಿಸ್ಟ್ಗೆ ವರ್ಗಾಯಿಸುತ್ತಾರೆ. ಆಗ ಈ ಚಿತ್ರಗಳು ಪ್ಯಾಕ್ಸ್ ನಲ್ಲಿ ಸಂಗ್ರಹಗೊಳ್ಳುತ್ತವೆ. ರೇಡಿಯೊಲೊಜಿಸ್ಟ್ಗಳು ಚಿತ್ರಗಳನ್ನು ಆಧರಿಸಿ ತಮ್ಮ ವರದಿಯನ್ನು ಸಿದ್ದಪಡಿಸಿ ವೈದ್ಯರಿಗೆ ಕಳುಹಿಸಿಕೊಡುತ್ತಾರೆ. ವೈದ್ಯರು ಈ ವರದಿಯ ಆಧಾರದ ಮೇಲೆ, ತಮ್ಮ ಚಿಕಿತ್ಸೆಯನ್ನು ಕೈಗೊಳ್ಳುತ್ತಾರೆ. ಚಿಕಿತ್ಸೆಯೆಲ್ಲಾ ಮುಗಿದು ರೋಗಿಯು ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ, ಈ ಎಲ್ಲಾ ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ರೋಗಿಯು ಮುಂದೆ ಅನುಸರಿಸಬೇಕಾದ ವಿಧಾನಗಳೊಂದಿಗೆ ಈ ಕಾರ್ಯದ ಹರಿವು ಮುಕ್ತಾಯವಾಗುತ್ತದೆ.
ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯಿಂದಾಗುವ ಲಾಭಗಳು :
೧. ರೋಗಿಯ ಪೂರ್ವಾಪರವನ್ನು ಅರಿತು ನಿಖರವಾದ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ.
೨. ರೋಗಿಯ ಪೂರ್ವಾಪರವನ್ನು ಸುಲಭವಾಗಿ ಅರಿಯುವುದರಿಂದ, ರೋಗಿ ಹಾಗೂ ವೈದ್ಯರ ನಡುವೆ ಉತ್ತಮ ಸಮನ್ವಯತೆ ಮೂಡಿಸುವಲ್ಲಿ ಸಹಕಾರಿಯಾಗಿ ಬಾಂಧವ್ಯ ವೃದ್ಧಿಯಾಗುವುದು.
೩. ರೋಗಿಯ ಬಗ್ಗೆ ನಿಖರವಾದ ಮಾಹಿತಿ ಸಿಗುವುದರಿಂದ, ರೋಗಿಯ ಬಗ್ಗೆ ವಿಶೇಷ ಕಾಳಜಿಯನ್ನು ವೈದ್ಯರು ಮತ್ತು ಅವರ ತಂಡ ತೋರ್ಪಡಿಸಿ, ರೋಗಿಯು ಗುಣಮುಖರಾಗಲು ಸಹಕಾರಿಯಾಗುತ್ತದೆ.
೪. ವೈದ್ಯರಿಗೆ ರೋಗಿಯ ಪೂರ್ವಾಪರದ ಬಗ್ಗೆ ಅರಿಯಲು ಕಡಿಮೆ ಸಮಯ ಸಾಕು ಹಾಗೂ ಮಾಹಿತಿಯು ಸರಿಯಾಗಿದ್ದರೆ ರೋಗಿಯನ್ನು ಅನಗತ್ಯ ಚಿಕಿತ್ಸೆಗೆ ಒಳಪಡಿಸುವುದನ್ನು ತಪ್ಪಿಸಬಹುದು. ಇದರಿಂದ ಸಮಯ ಹಾಗೂ ಹಣದ ಅನಗತ್ಯ ವ್ಯಯವನ್ನು ನಿಲ್ಲಿಸಬಹುದು.
೫. ರೋಗಿಯ ಮಾಹಿತಿಯಾದ ಅಂಗಾಂಗಗಳ ಚಿತ್ರ ಹಾಗೂ ವರದಿಗಳನ್ನು ಅಡಕ ಮುದ್ರಕಗಳಲ್ಲಿ ದಾಖಲಿಸಬಹುದು, ರೋಗಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿ ಎನಿಸದಿದ್ದಲ್ಲಿ, ಬೇರೆ ಆಸ್ಪತ್ರೆಗೆ ಅಡಕ ಮುದ್ರಕಗಳಲ್ಲಿ ಸಂಗ್ರಹಿಸಿದ ವಿವರ ನೀಡಿದರೆ ಸಾಕು; ಅಲ್ಲಿಯೂ ಚಿಕಿತ್ಸೆಯನ್ನು ಮುಂದುವರೆಸಬಹುದು.
ಇಂದು, ವಿಕಿರಣಶಾಸ್ತ್ರ ಮಾಹಿತಿ ವ್ಯವಸ್ಥೆಯು, ವೈದ್ಯಕೀಯ ವಿಜ್ಞಾನದ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು, ಕ್ಲಿಷ್ಟಕರ ಸಮಸ್ಯೆಗಳಿಗೆ ಸುಲಭ ಹಾಗೂ ನಿಖರ ಪರಿಹಾರವನ್ನು ನೀಡುವಲ್ಲಿ ಸಫಲವಾಗಿದೆ ಎಂದರೆ ತಪ್ಪಾಗಲಾರದು.]
ಮಧು ಚಂದ್ರ ಹೆಚ್ ಬಿ . ಭದ್ರಾವತಿ
ಪ್ರತಿ ದಿನ ಮುಂಜಾನೆ ನೀವು ಅನೇಕ ಆಯ್ಕೆಗಳನ್ನು ಮಾಡುವಿರಿ. ಅದರಲ್ಲಿ ಮೊಟ್ಟ ಮೊದಲನೆಯದು ಹಾಸಿಗೆಯಿಂದ ಏಳುವುದು! ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ, ವಿಧಿಯಿಲ್ಲದೆ ಏಳಲೇಬೇಕು ಎಂದು ಎದ್ದಾಗ, ಬೇಸರ ಅಲ್ಲಿಂದ ಪ್ರಾರಂಭ!
ಯಾವುದೇ ಕೆಲಸವನ್ನು ಮಾಡಬೇಕಲ್ಲಪ್ಪ ಎಂದುಕೊಂಡೋ, ಮಾಡದಿದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೋ ಮಾಡುವಾಗ ಬೇಸರಿಸಿಕೊಂಡರೆ, ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅದು ಅಷ್ಟಕ್ಕೇ ಸೀಮಿತವಾಗದೆ ಅನ್ಯ ಕೆಲಸಗಳಿಗೂ, ಸಮಯಕ್ಕೂ ಹರಡಿ ನಿಮ್ಮ ನೆಮ್ಮದಿಯನ್ನು ಸ್ವಲ್ಪ ಸ್ವಲ್ಪವೇ ಹಾಳುಮಾಡುತ್ತಿರುತ್ತದೆ.
ಮಾಡಲೇಬೇಕು ಎಂದಾಗ ಮಾಡಬೇಕು. ಅದರಲ್ಲಿ ನಿಮಗೆ ಆಯ್ಕೆ ಇಲ್ಲ. ಆದರೆ ಮಾಡುವಾಗ ನಿಮ್ಮ ಮನಸ್ಸು ಹೇಗಿರಬೇಕು ಎನ್ನುವುದರಲ್ಲಿ ಆಯ್ಕೆ ಇದೆ. ಬೇಸರದಿಂದಲೇ ಕೆಲಸ ಮಾಡಿದರೆ, ಕೆಲಸದ ಗುಣಮಟ್ಟವೂ ಉತ್ತಮವಾಗಿರುವುದಿಲ್ಲ. ಸಮಯವೂ ಹೆಚ್ಚು ತಗಲುತ್ತದೆ.
ಅಂತಹವರಿಗಾಗಿಯೇ ಒಂದು ಕಥೆ ಇಲ್ಲಿದೆ!
ಹೊಸದಾಗಿ ಮನೆಗೆ ಬಂದ ಸೊಸೆಗೆ ಅತ್ತೆ ಹೇಳಿದಳು, ನಮ್ಮ ಮನೆಯಲ್ಲಿ ದಿನವೂ ಭತ್ತ ಕುಟ್ಟಿ ಅಕ್ಕಿ ಮಾಡಿ ಅಡುಗೆ ಮಾಡಬೇಕು ಎಂದು. ಒನಕೆಯನ್ನೇ ನೋಡದ ಸೊಸೆಗೆ ಎಂತಹ ಕೆಲಸ ಇದು ಎಂದು ಬೇಸರ. ಮಾಡಲು ಇಷ್ಟವಿಲ್ಲ. ಮಾಡದೆ ವಿಧಿಯಿಲ್ಲ. ಕೆಲಸ ಮುಗಿಯುತ್ತಲೇ ಇರಲಿಲ್ಲ.
ಕೊನೆಗೆ ನೆರೆಮನೆಯವಳು ಒಂದು ದಿನ ಸೊಸೆಗೆ ಖುಷಿಯಾಗಿ ಅದೇ ಕೆಲಸವನ್ನೇ ಮಾಡುವ ಉಪಾಯವೊಂದನ್ನು ಹೇಳಿಕೊಟ್ಟಳು. ಮರುದಿನದಿಂದ ಭತ್ತ ಕುಟ್ಟುವಾಗ ಸೊಸೆಯ ಮುಖದಲ್ಲಿ ಆನಂದವೋ ಆನಂದ. ಅದರಿಂದ ಕೆಲಸವೂ ಬೇಗ ಮುಗಿಯುತ್ತಿತ್ತು.
ಅಂತಹ ಪರಿವರ್ತನೆ ತರುವಂತಹ ಉಪಾಯ ಏನಿರಬಹುದು?
ಮಾಡಬೇಕಲ್ಲ ಅಂತ ಬೇಸರದಿಂದಲೇ ಮಾಡುತ್ತಿದ್ದರೆ ನೆಮ್ಮದಿಯೂ ಹಾಳು, ಕೆಲಸವೂ ಮುಗಿಯದು. ಬದಲಿಗೆ ಖುಷಿ ಪಡಲು ಒಂದು ಕಾರಣ ಹುಡುಕಿಕೋ. ಭತ್ತ ಕುಟ್ಟುವಾಗ, ಒರಳಿನಲ್ಲಿ ನಿನ್ನ ಅತ್ತೆಯನ್ನು ಕೂರಿಸಿ ಕುಟ್ಟುತ್ತಿದ್ದೇನೆ ಎಂದುಕೊಂಡು ಕುಟ್ಟಿ ನೋಡು ಎಂದು ನೆರೆಯವರು ಹೇಳಿಕೊಟ್ಟಿದ್ದು! ತನಗೆ ಒಲ್ಲದ ಕೆಲಸವನ್ನು ನೀಡಿದ ಅತ್ತೆಯನ್ನು ಕುಟ್ಟುವುದು ಎಷ್ಟು ಖುಷಿಯ ಕೆಲಸ ಅಲ್ಲವೇ!
ಇಂದು ಭತ್ತ ಕುಟ್ಟಿಸುವ ಅತ್ತೆಯರೂ ಇಲ್ಲ, ಒನಕೆ ಹಿಡಿಯುವ ಸೊಸೆಯರೂ ಇಲ್ಲ. ಆದರೆ, ಮಾಡುವ ಕೆಲಸವನ್ನು ಖುಷಿಯಾಗಿ ಮಾಡಲು ಏನಾದರೂ ಒಂದು ಉಪಾಯ ಕಂಡುಕೊಂಡರೆ, ನಮ್ಮ ನೆಮ್ಮದಿ ಹಾಳಾಗುವುದಿಲ್ಲ ಎನ್ನುವ ಪಾಠ ಮಾತ್ರ ಹಾಗೆಯೇ ಉಳಿದುಕೊಂಡಿದೆ!
* ಅನಿವಾರ್ಯವಾಗಿ ಮಾಡಲೇಬೇಕು ಎಂದಾದಲ್ಲಿ ನಿಮಗೆ ಆಯ್ಕೆ ಇಲ್ಲ. ಅದನ್ನು ಒಪ್ಪಿಕೊಂಡು ಬಿಡುವುದು ಉತ್ತಮ.
* ಇಷ್ಟವಿಲ್ಲದ ಕೆಲಸವನ್ನು ಮುಂದೂಡುವ ಪ್ರವೃತ್ತಿ ಸರ್ವೇ ಸಾಮಾನ್ಯ. ನಿಮ್ಮ ನೆಮ್ಮದಿಯೂ ಅಲ್ಲಿಯ ವರೆಗೆ ಮುಂದೂಡಲ್ಪಡುತ್ತದೆ. ಮೊದಲು ಅದನ್ನು ಮಾಡಿ ಮುಗಿಸಿ ಬಿಟ್ಟರೆ, ಹಾಳು ಕೆಲಸವನ್ನು ಮಾಡಿ ಮುಗಿಸಿಬಿಟ್ಟೆ ಎಂದು ಖುಷಿ ಪಡಬಹುದು.
ನಾನು ಖುಷಿಯಾಗಿ ಇರುವುದಿಲ್ಲ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವರು ಅನೇಕರಿದ್ದಾರೆ ಎಂದರೆ, ಅಚ್ಚರಿಯಾಗುವುದೇ? ಐದು ನಿಮಿಷ ತುಂಬ ಖುಷಿಯಾಗಿದ್ದರೆ, ತುಂಬ ಖುಷಿಯಾಗಿ ಇದ್ದುಬಿಟ್ಟೆ, ಏನೋ ಗ್ರಹಚಾರ ಕಾದಿದೆ ನನಗೆ ಎಂದು ಖಿನ್ನತೆಗೆ ಜಾರುವವರನ್ನು ಕಂಡಿದ್ದೇನೆ. ಕೆಲವರ ಆಯ್ಕೆ ಹೇಗಿರುತ್ತದೆ ಎಂದರೆ, ಖಿನ್ನತೆ ಎನ್ನುವುದು ಬೆಂಗಳೂರಿಗೆ ಬಂದು ಬಸ್ ನಿಲ್ದಾಣದಲ್ಲಿ ನಿಂತು ಯಾರ ಮನೆಗೆ ಹೋಗಲಿ ಎಂದು ಯೋಚಿಸುತ್ತಿದ್ದರೆ, ನಮ್ಮ ಮನೆಗೇ ಬಾ ಎಂದು ದುಂಬಾಲು ಬಿದ್ದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬರುವರೂ ಇದ್ದಾರೆ!
ನಾನು ಖುಷಿಯಾಗಿ ಇರುತ್ತೇನೆ ಎಂಬ ಆಯ್ಕೆಯನ್ನು ನೀವು ಮಾಡಿಕೊಂಡಿದ್ದೇ ಆದರೆ, ಖುಷಿಯಾಗಿ ಇರುವುದು ಸಾಧ್ಯವಿದೆ. ಸುಲಭವಲ್ಲ. ಖುಷಿಗಳ್ಳರಿರುತ್ತಾರೆ. ಅವರ ವಿರುದ್ಧ ರಕ್ಷಣಾ ಕವಚ ಕಟ್ಟಿಕೊಂಡರೆ ಖಂಡಿತ ಸಾಧ್ಯವಿದೆ.
[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]
[/fusion_builder_column][/fusion_builder_row][/fusion_builder_container]
ಕೃತಿ: ಅಂಕಣಗಳು, ಟಿ. ಎಸ್. ಗೋಪಾಲ್
ಲೇಖಕರು: ಅಂಕಣಗಳು, ಟಿ. ಎಸ್. ಗೋಪಾಲ್
ಕೃತಿಯನ್ನು ಓದಿ
[fusion_builder_container hundred_percent=”yes” overflow=”visible” type=”flex”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none” align_self=”flex-start” border_sizes_undefined=”” type=”1_1″ first=”true” last=”true” hover_type=”none” link=”” border_position=”all”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]
ಮರುಭೂಮಿಗಳು ಚಲಿಸುತ್ತವೆ ನಿಮಗೆ ಗೊತ್ತೆ? ಅಮೀಬಾ ಚಲನೆಯ ಹಾಗೆ ಯಾವ ದಿಕ್ಕಿಗೆ ಬೇಕಿದ್ದರೂ ಅವು ಮೈಚಾಚಿ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತವೆ. ರಾಜಸ್ತಾನದ ಮರುಭೂಮಿ ದಿಲ್ಲಿಯತ್ತ ವರ್ಷಕ್ಕೆ ಹನ್ನೆರಡು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದೆ. ನಾನ್ವೆಜ್ ಹೊಟೆಲ್ಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಈಗ ಅದರ ವೇಗ ಇಮ್ಮಡಿಯಾಗಿರಬಹುದು. ಕರ್ನಾಟಕದಲ್ಲಿ ದೇಶದ ಎರಡನೆಯ ಅತಿ ದೊಡ್ಡ ಮರುಭೂಮಿ ಸೃಷ್ಟಿಯಾಗುತ್ತಿದೆ ಅವುಗಳನ್ನು ಹತ್ತಿಕ್ಕುವುದು ಹೇಗೆ? ನಮ್ಮ ನೆರೆಯಲ್ಲೇ ಹೊಸದೊಂದು ಮರುಭೂಮಿ ಸೃಷ್ಟಿಯಾಗದಂತೆ ಪ್ರತಿಬಂಧಿಸುವುದು ಹೇಗೆ? ಮರುಭೂಮಿ ನಮ್ಮೂರಿನ ಆಸುಪಾಸಿನಲ್ಲೇ ಇರಬಹುದು. ಅದನ್ನು ಗುರುತಿಸುವುದು ಹೇಗೆ?
ಮರುಭೂಮಿ ಎಂದರೆ ಶಾಶ್ವತ ಬರಗಾಲ. ಮುಖ್ಯವಾಗಿ ಬದುಕಲು ಬೇಕಾದ ನೀರೇ ಇಲ್ಲದ ತಾಣ. ಅರ್ಥಾತ್ ಅದು ಜೀವವಿರೋಧಿ ತಾಣ. ಮರುಭೂಮಿ ಎಂದರೆ ಹಗಲು ಭಾರೀ ಸೆಕೆ, ರಾತ್ರಿ ತೀರಾ ಚಳಿ. ಹಾಗಾಗಿ ಅಲ್ಲಿ ಗಿಡಮರಗಳು ಇರುವುದಿಲ್ಲ, ಹುಲ್ಲು-ಕಳೆ ಇರುವುದಿಲ್ಲ. ಪಶುಪಕ್ಷಿಗಳು, ಕೀಟಪಾಚಿಗಳು, ಶಿಲೀಂಧ್ರಗಳು ಯಾವುದೂ ಇರುವುದಿಲ್ಲ. ಅದು ನಿರ್ಜೀವ ಪರಿಸರವೇ ಆಗಿರುತ್ತದೆ. ಅದು ಭೂಮಿಯ ಮೇಲಿನ ಅತಿ ದೊಡ್ಡ ಪರಿಸರ ಸಮಸ್ಯೆಯ ತಾಣ.
ಭೂಮಿಯ ಬಲುದೀರ್ಘ ಚರಿತ್ರೆಯಲ್ಲಿ ಕೆಲವು ಪ್ರದೇಶಗಳಲ್ಲಿ ಭೂಮಿ ತಂತಾನೇ ಮರುಭೂಮಿ ಆಗಿದ್ದಿದೆ. ಮತ್ತೆ ತಂತಾನೆ ಕ್ರಮೇಣ ಸಹಜ ಭೂಮಿ ಆಗಿದ್ದೂ ಇದೆ. ಆದರೆ ಮನುಷ್ಯ ಅವತರಿಸಿದ ನಂತರ ಮರುಭೂಮಿಗಳ ವಿಸ್ತಾರ ಹೆಚ್ಚುತ್ತಿದೆ. ಚಿಕ್ಕದೊಡ್ಡ ಹೊಸ ಹೊಸ ಮರುಭೂಮಿಗಳೂ ಸೃಷ್ಟಿಯಾಗುತ್ತಿವೆ. ಮರುಭೂಮಿ ಎಂದರೆ ಬಡತನದ ಸಂಕೇತ, ಸಂಕಷ್ಟಗಳ ಸಂಕೇತ. ಅದರ ಪರಿಣಾಮ ದೂರದ ನಗರಗಳ ಮೇಲೂ ಆಗುತ್ತದೆ. ಆದ್ದರಿಂದ ಮರುಭೂಮಿ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.
ಮರುಭೂಮಿ ಹೇಗೆ ಸೃಷ್ಟಿಯಾಗುತ್ತದೆ?
ಮರುಭೂಮಿ ಸೃಷ್ಟಿ ಎಂದರೆ ಅದು ನಿಧಾನವಾಗಿ ನಡೆಯುವ ಕ್ರಿಯೆ. ಗೊತ್ತೇ ಆಗುವುದಿಲ್ಲ. ಮುಖ್ಯವಾಗಿ ಕಡಿಮೆ ಮಳೆಬೀಳುವ ಒಣಭೂಮಿಯಲ್ಲಿ ಅದು ಆರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ ದನ-ಕುರಿಗಳನ್ನು ಮೇಯಿಸುವುದು, ಕಟ್ಟಿಗೆ ಕಡಿಯುವುದು, ನೀರಿಲ್ಲವೆಂದು ಕೊಳವೆ ಬಾವಿ ಕೊರೆಸುವುದು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಮೇಲೆತ್ತುವುದು. ಇವನ್ನು ನಿರಂತರವಾಗಿ ಮಾಡುತ್ತಿದ್ದರೆ, ಹೊಸ ಚಿಗುರು ಬರುವುದು ಕಡಿಮೆಯಾಗುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ನೆಲ ಒಣಗಿ ದೂಳು ಹೆಚ್ಚುತ್ತದೆ. ಕ್ರಮೇಣ ಪರಿಸರ ಹೆಚ್ಚು ಹೆಚ್ಚು ಶುಷ್ಕವಾಗುತ್ತ ಹೋಗುತ್ತದೆ. ಮಳೆ ಬಿದ್ದರೂ ಮಣ್ಣೆಲ್ಲ ತೊಳೆದು ಹೋಗಿ, ಸಾರವಿಲ್ಲದ ಭೂಮಿ ತ್ವರಿತವಾಗಿ ಒಣಗುತ್ತದೆ. ಮರಳುಗಾಡು ಸೃಷ್ಟಿಯಾಗುತ್ತದೆ.
ಒಮ್ಮೆ ಈ ಕ್ರಿಯೆ ಆರಂಭವಾದರೆ ಅದು ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತ ಹೋಗುತ್ತದೆ. ನೀರಿನ ಮೂಲ ಕಡಿಮೆಯಾಗುತ್ತ ಹೋದರೆ ಉದ್ಯೋಗಾವಕಾಶ ಕಡಿಮೆಯಾಗುತ್ತ ಹೋಗುತ್ತದೆ. ಕಟ್ಟಿಗೆ ಕಡಿಯುವುದು ಮತ್ತು ಮೇಕೆ ಮೇಯಿಸುವುದೇ ಬದುಕಿನ ಪ್ರಮುಖ ಆಸರೆಯಾಗುತ್ತದೆ. ಮರುಭೂಮೀಕರಣ ತೀವ್ರವಾಗುತ್ತದೆ. ಕೆರೆಕುಂಟೆಗಳು, ಹಳ್ಳತೊರೆಗಳೇ ಮುಂತಾದ ಜಲಮೂಲಗಳು ಬತ್ತುತ್ತವೆ. ಕೊನೆಗೆ ಬಡವರೂ ಊರು ತೊರೆದು ನಗರಗಳ ಕೊಳೆಗೇರಿಗಳಿಗೆ ಬರುತ್ತಾರೆ. ಸಮಸ್ಯೆ ಇಲ್ಲಿಯೂ ಹೆಚ್ಚುತ್ತದೆ.
ಇಂಥ ಮರುಭೂಮೀಕರಣ ಎಲ್ಲೆಲ್ಲಿ ನಡೆಯುತ್ತಿದೆ?
ಮುಖ್ಯವಾಗಿ ಬಡ, ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮರುಭೂಮಿ ವಿಸ್ತೀರ್ಣ ಹೆಚ್ಚು ಹೆಚ್ಚಾಗುತ್ತಿದೆ. ಆಫ್ರಿಕದ ಸಹೇಲ್ ಪ್ರಾಂತದಲ್ಲಿ ಸಹಾರಾ ಮರುಭೂಮಿ ವಿಸ್ತರಿಸುತ್ತಿದೆ. ಅಫ್ಘಾನಿಸ್ತಾನ್, ಕಝಾಖ್ಸ್ತಾನ್, ಮೊಂಗೋಲಿಯಾ, ಭಾರತದಂಥ ರಾಷ್ಟ್ರಗಳ ಹಿಂದುಳಿದ ಜಿಲ್ಲೆಗಳಲ್ಲೂ ಶುಷ್ಕ ಪ್ರಾಂತಗಳ ವಿಸ್ತೀರ್ಣ ಹೆಚ್ಚುತ್ತದೆ. ರಾಜಸ್ತಾನದಲ್ಲಿ ಮರುಭೂಮಿ ವಿಸ್ತರಿಸುತ್ತ ಗುಜರಾತ, ಮಧ್ಯಪ್ರದೇಶಗಳತ್ತ ಮೈಚಾಚುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಕರ್ನಾಟಕದಲ್ಲೂ ಮರುಭೂಮೀಕರಣ ಪ್ರಕ್ರಿಯೆ ತೀವ್ರವಾಗುತ್ತಿದೆ. ನಿಮಗೆ ಗೊತ್ತೆ, ರಾಜಸ್ತಾನದ ಥಾರ್ ಮರುಭೂಮಿಯನ್ನು ಬಿಟ್ಟರೆ ಭಾರತದ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತ ಶುಷ್ಕತೆ ಹೆಚ್ಚುತ್ತ ಹೋದಹಾಗೆಲ್ಲ ಅದು ‘ಮರುಭೂಮಿ ಸದೃಶ’ ನಾಡು ಎನ್ನಿಸಿಕೊಳ್ಳುತ್ತದೆ. ಗುಲಬರ್ಗಾ, ರಾಯಚೂರು, ವಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಈ ಬಗೆಯ ಶುಷ್ಕ ಪ್ರಾಂತದ ವಿಸ್ತೀರ್ಣ ಹೆಚ್ಚುತ್ತಿದೆ; ಅಂತರ್ಜಲ ಮಟ್ಟ ಕೆಳಕ್ಕಿಳಿಯುತ್ತಿದೆ. ಮರುಭೂಮಿಯ ವಿಸ್ತೀರ್ಣ ಹೆಚ್ಚುತ್ತ ಹೋದಂತೆ ಗ್ರಾಮಗಳು ಖಾಲಿಯಾಗುತ್ತಿವೆ.
ಸರಿಪಡಿಸುವುದು ಹೇಗೆ?
ಅದು ತೀರ ನಿಧಾನ ಕ್ರಿಯೆ. ಆದರೆ ಭಾರೀ ಹಣ ಸುರಿಯಬೇಕು. ಮೊದಲು ಮರುಭೂಮಿ ವಿಸ್ತರಣೆಯನ್ನು ತಡೆಗಟ್ಟಬೇಕು. ಬಿಸಿಗಾಳಿಯ ಮೂಲಕವೇ ಮರಳುಗಾಡು ಶೀಘ್ರವಾಗಿ ವಿಸ್ತರಿಸುತ್ತದೆ. ಒಣಗಿದ ಮರಳುಕಣಗಳು ಗಾಳಿಗೆ ಕುಪ್ಪಳಿಸುತ್ತ ಸಾಗುತ್ತವೆ. ಅಂಥ ಸಾಗಾಟವನ್ನು ಮೊದಲು ತಡೆಯಬೇಕು. ಅದಕ್ಕಾಗಿ ‘ಮರಳುಬೇಲಿ’ ಅರ್ಥಾತ್ ಮರಳಿನದೇ ಸಾಲುದಿಬ್ಬಗಳನ್ನು ರಚಿಸಬೇಕು. ಅದರ ಪಕ್ಕದಲ್ಲಿ ಕಂದಕವನ್ನು ನಿರ್ಮಿಸಬೇಕು. ಅದೇವೇಳೆಗೆ ಬಿಸಿಲನ್ನು ತಡೆಯಬಲ್ಲ ಸಸ್ಯಗಳನ್ನು (ಉದಾ: ಬಳ್ಳಾರಿ ಜಾಲಿ) ಸಾಲುಸಾಲಾಗಿ ಬೆಳೆಸಬೇಕು. ಅದಕ್ಕೆ ‘ಗಾಳಿಗೋಡೆ’ ಎನ್ನುತ್ತಾರೆ. ಅದೇವೇಳೆಗೆ ಮಣ್ಣು ತೊಳೆದು ಹೋಗದ ಹಾಗೆ ಕಂಟೂರ್ ಕಟ್ಟೆಗಳನ್ನು ನಿರ್ಮಿಸಬೇಕು. ಕಟ್ಟೆಗುಂಟ ಕಿರುಸಸ್ಯಗಳನ್ನು (ಉದಾ: ಕತ್ತಾಳೆ) ಬೆಳೆಸಬೇಕು. ಅದಕ್ಕೆ ಆಸರೆಪಟ್ಟಿ (ಶೆಲ್ಟರ್ ಬೆಲ್ಟ್) ಎನ್ನುತ್ತಾರೆ. ಆಮೇಲೆ ಸಾರವಿಲ್ಲದ ಮಣ್ಣಿನಲ್ಲೂ ಬೆಳೆಯಬಲ್ಲ ಗಿಡಮರಗಳನ್ನು ಬೆಳೆಸಬೇಕು. ಈ ನಡುವೆ ಅಲ್ಲಿ ಮೇಕೆ ಮೇಯದ ಹಾಗೆ, ಬೆಂಕಿ ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಅಪರೂಪಕ್ಕೆ ಬಿದ್ದ ಮಳೆನೀರು ಅಲ್ಲಲ್ಲೇ ಇಂಗುವ ಹಾಗೆ ಹಳ್ಳಗುಂಡಿಗಳನ್ನು ನಿರ್ಮಿಸಬೇಕು. ಮತ್ತೆ ಮತ್ತೆ ಅದೇ ಸ್ಥಳಕ್ಕೆ ಮರುಭೇಟಿ ಕೊಟ್ಟು ಹಳ್ಳಗಳು ಮರಳಿನಿಂದ ಮುಚ್ಚಿ ಹೋಗಿದ್ದರೆ ತೆರವು ಮಾಡಬೇಕು. ಗಿಡಗಳು ಸತ್ತಿದ್ದರೆ ಮತ್ತೆ ಮಳೆ ಬರುವ ಋತುವಿನಲ್ಲಿ ಹೊಸ ಗಿಡಗಳನ್ನು ಹಚ್ಚಬೇಕು.
ಇದು ಮರಳುಗಾಡಿನ ಚಲನೆಯನ್ನು ತಡೆಗಟ್ಟುವ ಕೆಲಸ. ಅಲ್ಲಿ ಹಸಿರಿನ ನಿರ್ಮಾಣ ಮಾಡಬೇಕೆಂದರೆ ನೆಲದಲ್ಲಿ ಸಾರಸೃಷ್ಟಿ ಮಾಡಬೇಕು. ಅಂದರೆ ಮಣ್ಣಿನ ಸಾರವನ್ನು ಹೆಚ್ಚಿಸಬೇಕು. ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಬಲ್ಲ ದ್ವಿದಳ ಧಾನ್ಯಗಳ ಬಿತ್ತನೆ ಮಾಡಬೇಕು. ಹುಲ್ಲು ಬೆಳೆಯುವಂತೆ ತೃಣಧಾನ್ಯದ ಬೀಜಗಳನ್ನು ಬಿತ್ತನೆ ಮಾಡಬೇಕು. ಮುಂಜಾನೆ ಇಬ್ಬನಿ ಸಂಗ್ರಹವಾಗುವಂತೆ, ಕಿರುಸಸ್ಯಗಳ, ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚುವಂತೆ ಮಾಡಬೇಕು. ಒಟ್ಟಾರೆಯಾಗಿ ಅಲ್ಲಿ ಕ್ರಮೇಣ ಜೀವಿವೈವಿಧ್ಯ ಹೆಚ್ಚುವಂಥ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.
ಇದಕ್ಕೆಲ್ಲ ಹಣ ಬೇಕು, ಪ್ರಜಾಪ್ರಭುತ್ವದ ಕಠೋರ ವಾಸ್ತವ ಏನೆಂದರೆ, ಮರುಭೂಮಿ ಸದೃಶ ತಾಣಗಳಲ್ಲಿ, ಜನಸಾಂದ್ರತೆ ಕಡಿಮೆ ಇರುವಲ್ಲಿ ಸರಕಾರ ಹೆಚ್ಚು ಹಣ ಹೂಡುವುದಿಲ್ಲ. ಹಣ ಹೂಡಿದರೂ ಪ್ರಗತಿಯನ್ನು ವೀಕ್ಷಿಸಬೇಕಾದ ಅಧಿಕಾರಿಗಳಿಗೆ ಬದ್ಧತೆ, ಪ್ರಾಮಾಣಿಕತೆ ಜಾಸ್ತಿ ಇರಬೇಕಾಗುತ್ತದೆ.
ಅಂದಹಾಗೆ, ಮರುಭೂಮಿ ಎಂದರೆ ರಾಜಸ್ತಾನದ ಮರಳುಗಾಡನ್ನೇ ಕಲ್ಪಿಸಿಕೊಳ್ಳಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೂ ಬರಗಾಲ ನಾನಾ ರೂಪಗಳಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತ ಅದು ತನ್ನ ನೆಂಟನನ್ನು ಕರೆತರಬಹದು. ಚಿಕ್ಕ ಪ್ರಮಾಣದಲ್ಲಿ ಕೋಲಾರದಲ್ಲಿ, ಚಿಕ್ಕಮಗಳೂರಿನಲ್ಲಿ, ಗಣಿಗಾರಿಕೆ ನಡೆದಲ್ಲಿ, ಬೆಂಗಳೂರಿನ ಸರಹದ್ದುಗಳಲ್ಲಿ, ಕರಾವಳಿಯ ಅಂಚಿನಲ್ಲಿ ಕೂಡ ಮರುಭೂಮಿ ವಿಸ್ತರಣೆ ಆರಂಭವಾಗಿರಬಹುದು. ಈಚಿನ ವರ್ಷಗಳಲ್ಲಿ ವಿಶ್ವಬ್ಯಾಂಕ್ನಿಂದ ಇಂಥ ಉದ್ದೇಶಗಳಿಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ನಮ್ಮಲ್ಲೂ ಹಿಂದುಳಿದ ಜಿಲ್ಲೆಗಳ ಪಂಚಾಯ್ತಿಗಳಿಗೆ ಈ ಬಾಬಿಗೆಂದೇ ಹಣ ಬಟವಡೆ ಆಗುತ್ತಿರುತ್ತದೆ. ನರೇಗಾದಂಥ ಯೋಜನೆಗಳ ಮೂಲಕವೂ ಶುಷ್ಕತೆಯನ್ನು ತಡೆಯುವ ಕೆಲಸಗಳನ್ನು ಕೈಗೊಳ್ಳಬಹುದು. ಹೀಗೆ ಮಾಡುವ ಮೂಲಕ ‘ಅಗೋಚರ ಮರುಭೂಮಿ’ಗಳನ್ನು ಆರಂಭದಲ್ಲೇ ಚಿವುಟಬಹುದು.
ಏನಿದು ‘ಅಗೋಚರ ಮರುಭೂಮಿ’ ಅಂದರೆ?
ಮೇಲ್ನೋಟಕ್ಕೆ ಅವು ಕಾಣಿಸುವುದಿಲ್ಲ. ಉದಾಹರಣೆಗೆ, ನಿಮ್ಮ ಊರಿನ ನದಿ ಅಥವಾ ಕೆರೆಯಲ್ಲಿ ನೀರು ತುಂಬಿದ್ದರೂ ಕೂಡ ಅದರಲ್ಲಿ ಅನಾದಿಕಾಲದಿಂದ ವಾಸಿಸುತ್ತಿದ್ದ ಮೀನು, ಕಪ್ಪೆ, ಆಮೆ ಮುಂತಾದ ಜಲಚರಗಳು ಕಾಣೆಯಾಗಿರಬಹುದು. ಆಫ್ರಿಕನ್ ಕ್ಯಾಟ್ಫಿಶ್ನಂಥ ಏಕಜಾತಿಯ ಮೀನು ಸಂಗೋಪನೆ ನಡೆದಿದ್ದರೆ ಅದೂ ಒಂದುರೀತಿಯ ‘ಜಲಮರುಭೂಮಿ’ ಎಂತಲೇ ಹೇಳಬಹುದು.
ಅತಿಯಾದ ನೀರಾವರಿ ಇದ್ದಲ್ಲಿ ‘ಒದ್ದೆ ಮರುಭೂಮಿ’ ಸೃಷ್ಟಿಯಾಗುತ್ತದೆ. ಅಲ್ಲಿ ಜವುಳು ಜಾಸ್ತಿಯಾಗಿ ಯಾವ ಬೆಳೆಯನ್ನು ಕೂಡ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕದ ಸುಮಾರು ಎಲ್ಲ ದೊಡ್ಡ ನೀರಾವರಿ ಯೋಜನೆಗಳಲ್ಲೂ ಅತಿ ಜವುಳಿನಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ನಿರುಪಯುಕ್ತವಾಗುತ್ತಿದೆ.
ಹಿಂದೆ ನಾನಾ ಬಗೆಯ ಗಿಡಮರಗಳಿದ್ದ ತಾಣದಲ್ಲಿ ಈಗ ಏಕಜಾತಿಯ ನೀಲಗಿರಿ, ಸರ್ವೆ ಅಥವಾ ಅಕೇಶಿಯಾದಂಥ ತೋಪುಗಳಿದ್ದರೆ ಅದನ್ನು ‘ಹಸುರು ಮರುಭೂಮಿ’ ಎನ್ನಬಹುದು. ಅಲ್ಲಿ ಬೇರೆ ಯಾವ ಜೀವಿ ವೈವಿಧ್ಯ ಇರಲಾರದು. ಓತಿಕ್ಯಾತ, ಹಾವುರಾಣಿ, ಅಳಿಲು, ಮುಂಗುಸಿ, ಹಕ್ಕಿಪಕ್ಷಿಗಳು ವಾಸ ಮಾಡಲಾರವು.
ಗಣಿಗಾರಿಕೆ ನಡೆದಲ್ಲೆಲ್ಲ ಸುತ್ತಲಿನ ಗಿಡಮರಗಳೆಲ್ಲ ನಾಶವಾಗಿ, ಮಣ್ಣೆಲ್ಲ ಮುಚ್ಚಿಹೋಗಿ ಎಲ್ಲಿ ನೋಡಿದಲ್ಲಿ ಕಲ್ಲುಪುಡಿ, ಮರಳುರಾಶಿಯೇ ಕಾಣಬಹುದು. ಅದರ ವಿಸ್ತೀರ್ಣ ಸುತ್ತೆಲ್ಲ ಹೆಚ್ಚುತ್ತ ಸ್ಥಳೀಯ ಮಟ್ಟದಲ್ಲಿ ಮರುಭೂಮಿ ಸದೃಶ ಪರಿಸರ ನಿರ್ಮಾಣವಾಗಬಹುದು.
ಮೇಕೆ, ಜಾನುವಾರುಗಳ ಮುಕ್ತ ಓಡಾಟದಿಂದಾಗಿ ಆ ಪ್ರದೇಶದ ಮೂಲ ಜೀವಿವೈವಿಧ್ಯವೆಲ್ಲ ನಾಶವಾಗಿ ಅಲ್ಲಿ ಬರೀ ಲಂಟಾನಾ, ಯುಪಟೋರಿಯಂ ಮತ್ತು ಕಾಂಗ್ರೆಸ್ ಕಳೆ ಬೆಳೆದಿರಬಹುದು. ನೋಡಲು ಹಸುರಾಗಿ ಕಂಡರೂ ಅದು ಇನ್ನೊಂದು ರೀತಿಯ ಹಸುರು ಮರುಭೂಮಿಯೇ ಆಗಿರುತ್ತದೆ.
ಕಡಲತೀರದಲ್ಲಿ ಕಾಂಡ್ಲಗಿಡಗಳೆಲ್ಲ ನಾಪತ್ತೆಯಾಗಿ ಕ್ರಮೇಣ ಮರಳು ದಿಬ್ಬಗಳು ವಿಸ್ತರಿಸುತ್ತ ಒಳನಾಡಿನತ್ತ ಬರುತ್ತದೆ. ಅದರ ಚಲನೆಯನ್ನು ತಡೆಗಟ್ಟದಿದ್ದರೆ ಮರಳುದಿಬ್ಬದ ವಿಸ್ತರಣೆ ಹೆಚ್ಚುತ್ತ ಹೋಗುತ್ತದೆ. ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಕೈಗೊಳ್ಳಬೇಕಾದ ಉಪಕ್ರಮಗಳನ್ನು ಇಲ್ಲೂ ಆರಂಭಿಸಬೇಕಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಬರಗಾಲ ತಡೆಗೆ, ಮರುಭೂಮಿ ತಡೆಗೆ ಏನೇನು ಕಾರ್ಯಯೋಜನೆಗಳಿವೆ?
ವಿಶ್ವಸಂಸ್ಥೆಯ ಸದಸ್ಯ ದೇಶಗಳೆಲ್ಲ ಸೇರಿ ‘ಮರುಭೂಮಿತಡೆ ಹೋರಾಟ ಒಪ್ಪಂದ’ (ಯುಎನ್ಸಿಸಿಡಿ) ಮಾಡಿಕೊಂಡಿವೆ. ಶ್ರೀಮಂತ ದೇಶಗಳಿಂದ ವಂತಿಗೆ ಪಡೆದು ಬಡದೇಶಗಳಲ್ಲಿ ಮರುಭೂಮಿ ವಿಸ್ತರಣೆಯನ್ನು ತಡೆಯುವ ಅನೇಕ ಯೋಜನೆಗಳನ್ನು ಈ ಒಪ್ಪಂದದಡಿ ಹಮ್ಮಿಕೊಳ್ಳಲಾಗಿದೆ. ಆಫ್ರಿಕದ ನೈಗರ್, ಚಾಡ್, ಇಥಿಯೋಪಿಯಾ ಮುಂತಾದ ದೇಶಗಳಲ್ಲಿ ಕೆಲವು ಮಾದರಿ ‘ಮರುಭೂಮಿ ತಡೆ’ ಕೆಲಸಗಳು ನಡೆದಿವೆ.
ಮರುಭೂಮಿಯನ್ನು ಹತ್ತಿಕ್ಕಿದ ಯಶಸ್ವಿ ಉದಾಹರಣೆಗಳಿವೆಯೆ?
ಎಲ್ಲೋ ತೀರ ಅಪರೂಪಕ್ಕೆ ತೀರ ಚಿಕ್ಕ ಭಾಗದಲ್ಲಿ ಹಣವನ್ನು ನೀರಿನಂತೆ ಹರಿಸಿ ಮರುಭೂಮಿಯನ್ನು ಹತ್ತಿಕ್ಕಿ ಅಲ್ಲಿ ಹಸುರು ಚಿಗುರಿಸಲಾಗಿದೆ. ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ದಟ್ಟ ಮರುಭೂಮಿಯ ನಡುವೆಯೂ ಆಳ ಕೊಳವೆ ಬಾವಿ ಕೊರೆದು ನೀರುಕ್ಕಿಸಿ ದಟ್ಟ ಹಸುರನ್ನು ಬೆಳೆಸಲಾಗಿದೆ. ಇಸ್ರೇಲಿಗೆ ಯಹೂದ್ಯರು ಹೊಸದಾಗಿ ಹೋದಾಗ ಅಲ್ಲಿನ ನೆಲ ಸಾವಿರಾರು ವರ್ಷಗಳಿಂದ ಬಂಜರಾಗಿ, ಮರುಭೂಮಿಯಾಗಿ ಮಲಗಿತ್ತು. ಅದÀನ್ನು ಅತ್ಯಂತ ವ್ಯವಸ್ಥಿತವಾಗಿ ಉಪಚರಿಸಿ ಹತ್ತೇ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆದದ್ದು ಈ ಕಾಲದ ಸಾಹಸವೆಂದೇ ಬಣ್ಣಿಸಲಾಗುತ್ತದೆ. ಆದರೆ ಅಂಥ ಸಾಧನೆಗೆ ನೆರವಾದ ಜೋರ್ಡಾನ್ ನದಿಯೇ ಈಗ ಸಮುದ್ರಕ್ಕೆ ತಲುಪಲಾರದೆ ಬತ್ತಿ ಬತ್ತಿ ಅಪರೂಪಕ್ಕೆ ಹರಿಯುತ್ತಿದೆ.
ಮರುಭೂಮಿ ತಡೆಗೆ ನಾವೇನು ಮಾಡಬಹುದು?
ಮರುಭೂಮಿ ವಿಸ್ತರಣೆ ಎಂಬುದು ಜಾಗತಿಕ ಮಟ್ಟದ ಸಮಸ್ಯೆಯೇ ಆಗಿದ್ದರೂ ಅದಕ್ಕೆ ಉತ್ತರ ನಮ್ಮ ನಮ್ಮ ಊರುಗಳಲ್ಲೇ ಇರುತ್ತದೆ. ನಮಗೆ ಅರಿವೇ ಇಲ್ಲದಂತೆ ನಮ್ಮಲ್ಲಿ ಮರುಭೂಮಿಯ ಅನೇಕ ಆರಂಭಿಕ ಲಕ್ಷಣಗಳು ಕಾಣುತ್ತಿರುತ್ತವೆ. ಗಿಡಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ; ಮಟನ್ ಬೆಲೆ ಹೆಚ್ಚಾಗಿರುವುದರಿಂದ ಮೇಕೆ ಮೇಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಎಲ್ಲಿ ನೋಡಿದರೂ ಮೇಕೆಗಳು. ಅವು ತಿನ್ನದ ಮುಳ್ಳುಕಂಟಿ, ಲಂಟಾನಾ ಮುಂತಾದ ಸಸ್ಯಗಳು ಮಾತ್ರ ಉಳಿದುಕೊಂಡಿರುವುದನ್ನು ಕಾಣುತ್ತೇವೆ. ಜೀವಿವೈವಿಧ್ಯ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರಿಗೆ ನೆಲೆಯೇ ಇಲ್ಲದಂತಾಗುತ್ತಿದೆ. ಕೊಳವೆ ಬಾವಿಗಳು ಆಳಕ್ಕೆ ಇನ್ನೂ ಆಳಕ್ಕೆ ಹೋಗುತ್ತಿವೆ. ಸೆಕೆ ಹೆಚ್ಚುತ್ತಿದೆ. .. … ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಹೊರಗಿನ ತಜ್ಞರೇನೂ ಬೇಕಾಗಿಲ್ಲ. ಉಪಾಯಗಳು ನಮಗೆ ಗೊತ್ತಿವೆ. ಅವು ಜಾರಿಗೆ ಬರುವಂತೆ ಮಾಡಬೇಕಿದೆ.
ಮೇಕೆ ಮೇಯಿಸುವುದನ್ನು ಮೊದಲು ತಡೆಗಟ್ಟಿ. ಅವು ಮೇಯುತ್ತಿದ್ದರೆ ಗುಡ್ಡಬೆಟ್ಟಗಳಲ್ಲಿ ಯಾವ ಸಸ್ಯವೂ ತಾನಾಗಿ ಬೆಳೆಯಲಾರವು. ಅದರ ಬದಲು ಕುರಿ ಸಾಕಣೆ ಮೇಲು; ಏಕೆಂದರೆ ಅವು ಸಸ್ಯಗಳ ಚಿಗುರುಗಳನ್ನು ತಿನ್ನುವುದಿಲ್ಲ. ಮೇಕೆ ಸಾಕುವುದೇ ಆದರೆ ಅವುಗಳನ್ನು ಕಟ್ಟಿ ಮೇಯಿಸುವಂತೆ ಸಲಹೆ ಮಾಡಿ.
ಬರನಿರೋಧಕ ಕೆಲಸಗಳಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಏನು?
ಈ ಮೊದಲು ಹೇಳಿದ ಅನೇಕ ಕೆಲಸಗಳಿಗೆ ಮಕ್ಕಳೇ ದಾರಿದೀಪವಾಗಬಹುದು. ಊರಿನ ಸುತ್ತ ಕಣ್ಮರೆಯಾಗಿರುವ, ಅಪರೂಪವಾಗುತ್ತಿರುವ ಸಸ್ಯಗಳ ಪಟ್ಟಿಯನ್ನು , ವನ್ಯಜೀವಿಗಳ ಪಟ್ಟಿಯನ್ನು ಅವರೇ ತಯಾರಿಸಲಿ.
ಕಳೆದ ಹತ್ತು ವರ್ಷಗಳಲ್ಲಿ ಊರಿನ ಸುತ್ತ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ, ಅಂತರ್ಜಲ ಮಟ್ಟ ಎಷ್ಟು ಆಳಕ್ಕಿಳಿದಿದೆ ಎಂಬ ಮಾಹಿತಿ ಸಂಗ್ರಹಿಸಿ ಆಲೇಖ ಸಿದ್ಧಪಡಿಸಿ.
ಊರಿನ ಸುತ್ತ ಒಂದು ಜೀವಿವೈವಿಧ್ಯ ಪ್ರವಾಸ ಕೈಗೊಳ್ಳಿ. ಊರ ಹಿರಿಯರೂ ನಿಮ್ಮ ಜೊತೆ ಇರಲಿ. ಯಾವ ಅನಪೇಕ್ಷಿತ ಸಸ್ಯಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ದಾಖಲಿಸಿ. ನೆಲದ ತೇವಾಂಶವನ್ನು ಹೀರಿ ತೆಗೆಯುವ ನೀಲಗಿರಿ, ಸರ್ವೆಗಿಡಗಳು ಕೃಷಿಭೂಮಿಯನ್ನು ಹೇಗೆ ಆಕ್ರಮಿಸುತ್ತಿವೆ ಎಂಬುದನ್ನು ದಾಖಲಿಸಿ.
ಕಳೆದ ಹತ್ತು ವರ್ಷಗಳ ಮಳೆ ಪ್ರಮಾಣದ ಏರಿಳಿತವನ್ನು ದಾಖಲಿಸಿ. ಮಳೆ ಪ್ರಮಾಣ ಅಳೆಯಲು ನಾವೇ ತೀರ ಸರಳವಾದ ಸಾಧನವನ್ನು ನಿರ್ಮಿಸಬಹುದು. ಅದಕ್ಕೆ ಬೇಕಿರುವುದು ತೆರೆದ ಬಾಯಿಯ (ಯಾವುದೇ ಗಾತ್ರದ) ಒಂದು ಪಾತ್ರೆ ಮತ್ತು ಅಳತೆಪಟ್ಟಿ ಅಷ್ಟೆ.
ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಜೀವಿವೈವಿಧ್ಯ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಲು ಹೇಳಿ. ಹೇಳಬೇಕಾದುದು ಅವರ ಕರ್ತವ್ಯ. ಅದನ್ನವರು ನಿರಾಕರಿಸುವಂತಿಲ್ಲ.
ಗ್ರಾಮ ಪಂಚಾಯ್ತಿಯ ಮುಖ್ಯಸ್ಥರನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಒಟ್ಟಾರೆ ಜೀವಸಂಪತ್ತನ್ನು ಉಳಿಸಿಕೊಳ್ಳಲು ಅವರು ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಉಪನ್ಯಾಸ ನೀಡಲು ಹೇಳಿ. ಅದು ಅವರ ಕರ್ತವ್ಯ.
ನಿಮ್ಮ ಊರಿನ ಕೆರೆಗಳಲ್ಲಿ ಹೂಳು ತುಂಬಿದ್ದರೆ, ಮರ ಕಡಿಯುವ, ಮರಳು ಸಾಗಣೆಯ, ಗಣಿಗಾರಿಕೆಯ ಹಾವಳಿ ಹೆಚ್ಚಾಗಿದ್ದರೆ ಅದರ ಬಗ್ಗೆ ಪಂಚಾಯ್ತಿ ಕಚೇರಿಯ ಎದುರು ಒಂದು ಪ್ರತಿಭಟನಾ ಮೆರವಣಿಗೆ ಮಾಡಿ.
ನೆನಪಿಡಿ, ಮರುಭೂಮಿಯನ್ನು ಹತ್ತಿಕ್ಕುವುದೆಂದರೆ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯಲೋಪವನ್ನು ಹತ್ತಿಕ್ಕುವುದು, ಭ್ರಷ್ಟಾಚಾರವನ್ನು ಹತ್ತಿಕ್ಕುವುದು, ದುರಾಸೆಯನ್ನು ಹತ್ತಿಕ್ಕುವುದು ಕೂಡ ಹೌದು.
[/fusion_text][/fusion_builder_column][/fusion_builder_row][/fusion_builder_container]
ಅನುಕರಣೆಯ ಮೂಲಕ ಕಲಿಕೆ- ಎನ್ನುವುದು ಈ ಜಗತ್ತಿನ ಬದುಕಿನ ಮೂಲಸೂತ್ರ. ಈ ಪ್ರಪಂಚದ ಪ್ರತಿಯೊಂದು ಪ್ರಾಣಿಪಕ್ಷಿಯೂ ಹುಟ್ಟಿನಿಂದ ಮೊದಲುಗೊಂಡು ಸಾಯುವವರೆಗೂ ತನ್ನ ಪೋಷಕರ ಮತ್ತು ಸುತ್ತಲಿನ ಸಮಾಜದ ನಡೆವಳಿಕೆಯನ್ನು ನೋಡುತ್ತ ಅನುಕರಿಸುತ್ತ ತನ್ನ ಬದುಕನ್ನು ರೂಪಿಸಿಕೊಳ್ಳುತ್ತ ಬೆಳೆಯುತ್ತದೆ. ಆನುವಂಶಿಕ ಗುಣಗಳೊಂದಿಗೆ ಬದುಕಿನ ರೀತಿನೀತಿಗಳನ್ನು ಅನುಕರಿಸಿ ಬೆಳೆಯುವ ಗುಣವೂ ಜೀವಿಗೆ ರಕ್ತಗತವಾಗಿರುತ್ತದೆ. ಇರುವೆಯಿಂದ ಆನೆಯವರೆಗೆ, ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಈ ಜೀವನಸೂತ್ರವು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು.
ಆದರೆ, ಜೀವಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಪೀಳಿಗೆಯೊಂದಕ್ಕೆ ತನ್ನ ಹಿರಿಯ ತಲೆಮಾರನ್ನು ಅನುಕರಿಸಬಾರದೆಂದು ಎಚ್ಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಮುಂದಿನ ಪೀಳಿಗೆಗಳಿಗೆ ಈ ಜಗತ್ತನ್ನು ಸುರಕ್ಷಿತವಾಗಿ ಉಳಿಸಿಹೋಗುವುದಕ್ಕೆ ಇಂತಹುದೊಂದು ವಿಚಿತ್ರ ಎಚ್ಚರಿಕೆಯು ಅವಶ್ಯಕವೂ ಆಗಿದೆ. ಜೀವಲೋಕದ ಅತಿಬುದ್ಧಿವಂತಜೀವಿ ಎನ್ನಿಸಿಕೊಂಡಿರುವ ಮನುಷ್ಯನೇ ತನ್ನ ಸಂತಾನಕ್ಕೆ ಈ ಎಚ್ಚರಿಕೆಯನ್ನು ಕೊಡಬೇಕಾಗಿ ಬಂದಿರುವುದು ವರ್ತಮಾನದ ಅತಿಕ್ರೂರ ವ್ಯಂಗ್ಯವೂ ಆಗಿರುವುದು ದುರ್ದೈವ.
ವಿಕಾಸಪಥದಲ್ಲಿ ಮನುಷ್ಯನೆಂಬ ಪ್ರಾಣಿ ಜೀವಿಲೋಕದ ಅತ್ಯಂತ ಕಿರಿಯ ಸದಸ್ಯ. ಅಂದರೆ, ಮನುಷ್ಯನೆಂಬುವನು ಈ ಭೂಮಿಗೆ ಅವತರಿಸಿರುವುದು ಉಳಿದೆಲ್ಲ ಜೀವಿಗಳಿಗಿಂತ ತೀರಾ ಇತ್ತೀಚೆಗೆ. ಶಿಕ್ಷೆಯೇ ಇಲ್ಲದೆ ಅತಿಮುದ್ದುಮಾಡಿ ಬೆಳೆಸಿದರೆ ಮಕ್ಕಳು ಕೆಡುವರಂತೆ. ಈ ಪ್ರಪಂಚದ ಜೀವಿಗಳಲ್ಲಿ ಅತಿಚಿಕ್ಕವನೆಂದು ಯಾರೂ ಮುದ್ದುಮಾಡದೆ ಹೋದರೂ, ತನ್ನನ್ನು ಹತೋಟಿಯಲ್ಲಿಡುವವರು ಯಾರೂ ಇಲ್ಲದವನಂತೆಯೇ ಮನುಷ್ಯ ಬೆಳೆದುಬಿಟ್ಟ. ಮರದ ಕೊಂಬೆಯನ್ನು ಕತ್ತರಿಸಿ ಮಾಡಿದ ಕಾವು ಕೊಡಲಿಗೆ ಸೇರಿ ತನ್ನ ಕುಲಕ್ಕೆ ಮಾತ್ರವೇ ಮೃತ್ಯುವಾದರೆ, ಈ ಮನುಷ್ಯ ಇಡೀ ಜೀವಲೋಕಕ್ಕೇ ಮಾರಕವಾಗಿ ಬೆಳೆದು ತನ್ನನ್ನೂ ಲೋಕವನ್ನೂ ಅಪಾಯದ ಅಂಚಿಗೆ ತಂದೊಡ್ಡಿದ್ದಾನೆ.
ಕೋಟ್ಯಂತರ ವರುಷಗಳಿಂದ ಕ್ರಮಶಃ ರೂಪುಗೊಳ್ಳುತ್ತ ಬಂದಿರುವ ವಿಕಾಸಶೀಲ ಜೀವಜಗತ್ತು ಅವಸಾನದತ್ತ ಸಾಗಿದೆಯೇ? ಹೌದಾದರೆ, ಇದಕ್ಕೆ ಮನುಷ್ಯನೊಬ್ಬನ್ನನ್ನೇ ಹೊಣೆಮಾಡುವುದು ಹೇಗೆ, ಎನ್ನುತ್ತೀರಾ?
ಈ ಲೋಕದ ಎಲ್ಲ ಜೀವಿಗಳೂ ನಿಸರ್ಗದ ನಿಯಮಗಳಿಗೆ ಬದ್ಧವಾಗಿರುವುದನ್ನು ತಪ್ಪದೆ ಅನುಸರಿಸುತ್ತವೆ. ತಮ್ಮ ದಿನನಿತ್ಯದ ಬದುಕಿಗೆ ಯಾವುದೇ ಅಡ್ಡಿಆತಂಕಗಳಿದ್ದರೂ ಜೀವಿಗಳು ನಿಸರ್ಗವನ್ನು ಮೀರಿ ಹೋಗುವುದಿಲ್ಲ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿಶಾಲಿಯೆನಿಸಿಕೊಂಡಿರುವ ಮಾನವ ಮಾತ್ರವೇ ಪ್ರತಿಕ್ಷಣದಲ್ಲೂ ನಿಸರ್ಗವನ್ನು ಅತಿಕ್ರಮಿಸುವ ವಿಪರೀತ ಧಾರ್ಷ್ಟ್ಯವನ್ನು ಪ್ರದರ್ಶಿಸುತ್ತಿದ್ದಾನೆ.
ಅನೇಕ ಜಾತಿಯ ಪ್ರಾಣಿಪಕ್ಷಿಗಳೂ ಕ್ರಿಮಿಕೀಟಗಳೂ ಜೀವಲೋಕದಲ್ಲಿವೆ. ಇವೆಲ್ಲವೂ ಒಂದರ ಬದುಕಿಗೊಂದು ಅಡ್ಡಬಾರದಂತೆ ಆತಂಕವೊಡ್ಡದಂತೆ ಎಚ್ಚರವಹಿಸುತ್ತವೆ, ಆಹಾರಕ್ಕಾಗಿ ಬೇಟೆಯಾಡುವ ಪ್ರವೃತ್ತಿಯ ಜೀವಿಗಳೂ ಅವಶ್ಯಕತೆಯಿದ್ದಹೊರತು ಆಕ್ರಮಣಶೀಲತೆಯನ್ನು ತೋರುವುದಿಲ್ಲ. ಹಗಲಿನಲ್ಲಿ ಬೇಟೆಯಾಡುವ ಕೆನ್ನಾಯಿಗಳು ಹುಲಿಯಂತೆ ಇರುಳುಬೇಟೆಗೆ ಹೋಗುವುದಿಲ್ಲ. ಹುಲಿ ಅಡ್ಡಾಡುವ ಜಾಗದಿಂದ ಚಿರತೆ ದೂರವೇ ಉಳಿಯುತ್ತದೆ. ನೆಲದಲ್ಲಿ ಗೂಡು ಕಟ್ಟುವ ಜೇಡಕ್ಕೆ ಎತ್ತರದಲ್ಲಿ ಹಾರಾಡುವ ಕೀಟದ ಆಸೆಯಿಲ್ಲ. ಹದ್ದು, ಗರುಡಗಳಿಗೆ ಗುಬ್ಬಚ್ಚಿಯ ಆಹಾರವನ್ನು ಕಸಿಯುವ ಚಿಂತೆಯಿಲ್ಲ. ಆದರೆ, ಸದಾ ಕಂಡವರ ಪಾಲನ್ನು ಕಬಳಿಸುವತ್ತಲೇ ಕೈಚಾಚುವ ಮಾನವನ ಪ್ರವೃತ್ತಿಯನ್ನೊಮ್ಮೆ ಗಮನಿಸಿ. ಪ್ರಾಚೀನಕಾಲದಿಂದಲೂ ಮಾನವರ ಇತಿವೃತ್ತವನ್ನು ರಕ್ತದಿಂದ ಕೆಂಪಾಗಿಸಿರುವ ಯುದ್ಧಗಳಿಗೆ ನೆಪವೊಂದೇ –ದುರಾಸೆ!
ನಿಸರ್ಗದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ತಾನು ಬಲಿತೆಗೆದುಕೊಂಡ ಜಿಂಕೆಯ ಮಾಂಸವಷ್ಟನ್ನು ಹುಲಿ ಭಕ್ಷಿಸಿ ಹೋದ ಮೇಲೆ ಉಳಿಕೆಯನ್ನು ತಿನ್ನಲು ಹಂದಿನರಿಗಳು ಕಾದಿರುತ್ತವೆ, ಅವು ಬಿಟ್ಟುಹೋದ ಅವಶೇಷಗಳು ಹದ್ದುಕಾಗೆಗಳ ಪಾಲು. ಇನ್ನೂ ಉಳಿದದ್ದು ಹುಳಹುಪ್ಪಟೆಗಳಿಗೆ ಆಹಾರವಾಗಿ ಮಣ್ಣುಸೇರುತ್ತದೆ. ಒಂದೇ ಒಂದು ಮದುವೆಯ ಸಮಾರಂಭದಲ್ಲಿ ನಾವು ಪೋಲುಮಾಡುವ ಆಹಾರ ಎಷ್ಟಿರಬಹುದೆಂಬುದನ್ನು ಅಂದಾಜುಮಾಡಿಕೊಳ್ಳೋಣ. ಇನ್ನೊಂದೆಡೆ ಹಸಿವೆಯಿಂದಲೇ ನರಳಿಸಾಯುವ ಮನುಷ್ಯಜೀವಿಗಳ ಸಂಖ್ಯೆಯೂ ನಮ್ಮನ್ನು ಮೂದಲಿಸುವಷ್ಟಿದೆ.
ಕಾಡಿನಲ್ಲಿ ಎಷ್ಟೇ ಪ್ರಾಣಿಗಳು ಸತ್ತರೂ ಸಾವಿರಾರು ಮರಗಳ ಎಲೆಕೊಂಬೆಗಳು ಬಿದ್ದು ಕೊಳೆತರೂ ಅಲ್ಲಿ ದುರ್ವಾಸನೆಯಿಲ್ಲ. ತ್ಯಾಜ್ಯವೆಂಬುದಿಲ್ಲ. ಎಲ್ಲವೂ ಮಣ್ಣುಸೇರಿ ಫಲವತ್ತತೆಯನ್ನು ಮಿಗಿಲುಗೊಳಿಸುತ್ತವೆ. ನೂರಾರು ಕಿ.ಮೀ. ವಿಸ್ತೀರ್ಣದ ಅರಣ್ಯದಲ್ಲಿ ಮೇಲುಪದರದಲ್ಲಿ ಬಿದ್ದ ಕಳೇಬರ, ತರಗುರೆಂಬೆಗಳನ್ನು ಮಣ್ಣಿಗೆ ಸೇರಿಸುವುದಕ್ಕಾಗಿಯೇ ಸನ್ನದ್ಧವಾದ ಕ್ರಿಮಿಕೀಟಗಳ ಕ್ರಿಯಾಶೀಲ ಪಡೆಯ ನಿರಂತರ ಸೇವಾ ವ್ಯವಸ್ಥೆಯಿದೆ. ಕೋಟಿಗಟ್ಟಲೆ ಹಣ ಖರ್ಚುಮಾಡಿಯೂ ಬೆಂಗಳೂರಿನಂತಹ ನಗರವೊಂದರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗದೆ ನಮ್ಮ ವ್ಯವಸ್ಥೆ ಕೈಚೆಲ್ಲಿಕುಳಿತಿರುವುದನ್ನು ನಿತ್ಯವೂ ನೋಡುತ್ತಿದ್ದೇವಲ್ಲ!
ಪ್ರಕೃತಿಯಲ್ಲಿ ವ್ಯರ್ಥವೆಂಬುದಿಲ್ಲ. ಪರಿಸರವಿಜ್ಞಾನಿಗಳ ಈ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುವುದಾದರೆ ಪ್ರಕೃತಿ ಜೀರ್ಣಿಸಿಕೊಳ್ಳಲಾಗದ, ಅದಕ್ಕೆ ಅಪಾಯವೊಡ್ಡುವ ಯಾವ ವಸ್ತುವನ್ನೂ ಪ್ರಕೃತಿಗೆ ಸೇರಿಸಬಾರದು. ನಾಗರಿಕ ಮಾನವ ತನ್ನ ಅನುಕೂಲಕ್ಕಾಗಿ ತಯಾರಿಸಿಕೊಂಡ ಅದೆಷ್ಟು ರಾಸಾಯನಿಕಗಳು ನಿಸರ್ಗದಲ್ಲಿ ನಿರಪಾಯಕಾರಿಯಾಗಿ ಬೆರೆಯಬಲ್ಲುವು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೇ ಇಲ್ಲ. ನಮ್ಮ ರಸ್ತೆಗಳುದ್ದಕ್ಕೂ ಹಾರಾಡುವ ಪ್ಲಾಸ್ಟಿಕ್ ಚೀಲಗಳೂ, ಚಾಕೊಲೇಟ್ ಸುತ್ತುಕಾಗದಗಳೂ, ಬಳಸಿ ಬಿಸಾಡಿದ ಪೆನ್ನಿನ ರೀಫಿಲ್ಲುಗಳೂ, ಇಂಜೆಕ್ಷನ್ ಸಿರಿಂಜುಗಳೂ, ವಿದ್ಯುದ್ದೀಪದ ಬುರುಡೆಗಳೂ ಶತಶತಮಾನಗಳು ಕಳೆದರೂ ಮಣ್ಣಿನಲ್ಲಿ ಕರಗದೆ ಉಳಿದು ನಮ್ಮ ಮೂರ್ಖತನವನ್ನು ಮೆರೆಸುತ್ತಿರುತ್ತವೆ.
ಹುಟ್ಟುಸಾವುಗಳ ನಡುವಣ ಬದುಕು ಒಂದು ಸವಾಲು. ದಿನನಿತ್ಯ ಈ ಬದುಕನ್ನು ನಡೆಸಲು ಸೂಕ್ತಸಿದ್ಧತೆ ಅತ್ಯವಶ್ಯ- ಎನ್ನುವ ಸತ್ಯ ಜೀವಲೋಕಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅದಕ್ಕೆ ತಕ್ಕಂತೆ ಸೂಕ್ತ ಹೊಂದಾಣಿಕೆಗಳು ಸದ್ದಿಲ್ಲದೆ ನಡೆದಿರುತ್ತವೆ. ತನ್ನ ಗೂಡು ಶತ್ರುಗಳಿಗೆ ಪತ್ತೆಯಾಗದಿರಲೆಂದು ಪಕ್ಷಿ ಕಲ್ಲುಹೂ, ನಾರು, ಬಲೆಗಳನ್ನು ಅಂಟಿಸುವ ಕಸರತ್ತುಮಾಡುತ್ತದೆ. ಕಾಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನೇ ಕೋಗಿಲೆ ನಿರೀಕ್ಷಿಸುತ್ತಿರುತ್ತದೆ. ತನ್ನೆರಡು ಮೊಟ್ಟೆಗಳನ್ನು ಬಾಡಿಗೆತಾಯಿಗೆ ವಹಿಸಬೇಕಲ್ಲ! ಹತ್ತಿಪ್ಪತ್ತು ಸದಸ್ಯರಿರುವ ಕೆನ್ನಾಯಿಗಳ ತಂಡದ ಹೆಣ್ಣುಗಳೆಲ್ಲ ಮರಿಮಾಡುವುದಿಲ್ಲ. ಸದಸ್ಯರ ಸಂಖ್ಯೆ ಹೆಚ್ಚಿದರೆ ಎಲ್ಲರ ಹೊಟ್ಟೆ ತುಂಬಿಸುವುದೆಂತು? ಗುಂಪಿನ ನಾಯಕ-ನಾಯಕಿಯರಿಗಷ್ಟೇ ಸಂತಾನಬೆಳೆಸುವ ಅಧಿಕಾರ. ಉಳಿದ ಸದಸ್ಯರು ಶಿಶುಪಾಲನೆಯಲ್ಲಿ ಪಾಲುದಾರರು. ಜಿಂಕೆ ಮರಿಮಾಡುವ ಸಮಯವೇ ಹುಲಿಗೂ ಮರಿಸಾಕಲು ಆದರ್ಶವಾದ ಅವಧಿ. ಮರಿಬಿಟ್ಟು ಬೇಟೆಗಾಗಿ ದೂರಹೋಗಲು ಆಗದ ತಾಯಿಹುಲಿಗೆ ಜಿಂಕೆಯನ್ನು ಕೊಲ್ಲಲಾಗದಿದ್ದರೂ ಅದರ ಮರಿಯಾದರೂ ಸಿಕ್ಕೀತು. ಇಷ್ಟೆಲ್ಲ ಸಂಕೀರ್ಣವಾದ ಜೀವವ್ಯವಸ್ಥೆಯ ಸಮತೋಲನಕ್ಕೆ ಜೀವಿಗಳ ಸಂಖ್ಯಾಮಿತಿಯೂ ಬಹುಮುಖ್ಯ. ಗೊತ್ತುಗುರಿಯಿಲ್ಲದೆ ಬೆಳೆದಿರುವ ಮಾನವಕುಲದ ಜನಸಂಖ್ಯೆಯು ನಮ್ಮ ಸಾಮಾಜಿಕ-ಆರ್ಥಿಕ-ಭೌಗೋಳಿಕ ಸ್ಥಿತಿಗತಿಗಳ ಮೇಲೆ ಬೀರಿರುವ ದುಷ್ಪರಿಣಾಮಗಳು ಗೋಚರಿಸುತ್ತಲೇ ಇವೆ.
ಪ್ರಕೃತಿಯು ಅಂದಂದಿಗೆ ತಮಗೆ ಅಗತ್ಯವಾದುದನ್ನು ಕೊಟ್ಟೇಕೊಡುವುದೆಂಬ ಭರವಸೆಯೇ ಸಮಸ್ತ ಜೀವರಾಶಿಯಲ್ಲಿ ಜೀವನಶ್ರದ್ಧೆಯನ್ನು ಉಳಿಸಿದೆ. ಇರುವುದೆಲ್ಲವನ್ನೂ ಬಗೆದು ದೋಚುವ ಪ್ರವೃತ್ತಿ ಈ ಜೀವಜಗತ್ತಿನಲ್ಲಿ ಕಾಣುವುದಿಲ್ಲ. ನೂರಾರು ವರ್ಷಗಳಿಂದ ಬೆಳೆದುನಿಂತಿರುವ ಮರಗಳನ್ನೂ, ಸಾವಿರಾರು ವರ್ಷಗಳಿಂದ ಸಂಚಯನಗೊಂಡಿರುವ ಖನಿಜ ಹಾಗೂ ಇಂಧನಸಂಪತ್ತನ್ನೂ ತನ್ನ ತಾತ್ಕಾಲಿಕ ಅಗತ್ಯಗಳಿಗಾಗಿ ಕಳೆದ ಐವತ್ತು ವರುಷಗಳಲ್ಲಿ ಲೂಟಿಮಾಡಿರುವ ಮನುಷ್ಯನ ದುರಾಸೆ ಹೀಗೆಯೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉಳಿಯಬಹುದಾದ ಭೂಮಿಯ ಸ್ಥಿತಿ ಹೇಗಿದ್ದೀತು ಎನ್ನುವುದು ನಮ್ಮ ನಿಮ್ಮ ಊಹೆಗೆ ಬಿಟ್ಟ ವಿಷಯ.
ಕೆರೆ ಪರಿಸರ
ಒಳನಾಡು ಜಲಸಂಪನ್ಮೂಲಗಳ ಪೈಕಿ ಕೆರೆಗಳಿಗೆ ಪ್ರಮುಖ ಸ್ಥಾನವಿದೆ. ಭಾರತದಲ್ಲಿ ಮಾನ್ಸೂನ್ ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಮಳೆನೀರು ಹಿಡಿದಿಡುವುದು ಅತ್ಯವಶ್ಯಕವೆಂದು ಪ್ರಾಚೀನ ಕಾಲದಿಂದಲೂ ಜನಸಮುದಾಯ ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿತು. ಎಷ್ಟೋವೇಳೆ ಸ್ಥಳೀಯ ಸಮುದಾಯವೇ ಕೆರೆಯ ನಿರ್ಮಾಣವನ್ನು ನಿರ್ಧರಿಸಿದೆ. ಮಳೆನೀರು ಕೊಯ್ಲಿನ ಮೊದಲ ಪಾಠವೇ ಹಿಂದಿನವರು ನಿರ್ಮಿಸಿದ ಕೆರೆಗಳು. ಕೆರೆಗಳನ್ನು ಕಟ್ಟಲು ಅನೇಕ ಕಾರಣಗಳಿದ್ದವು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಗಳಿಗೆ, ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇತ್ತು. ಸ್ಥಳೀಯ ಬೆಟ್ಟಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ, ಹಳ್ಳಗಳನ್ನು ಗಮನಿಸಿ, ತಗ್ಗಿನಲ್ಲಿ ಕೆರೆ ಕಟ್ಟುವುದು ಸಾಂಪ್ರದಾಯಕವೆಂಬಂತೆ ಭಾರತೀಯರ ಗ್ರಾಮೀಣ ಬದುಕಿನಲ್ಲಿ ಕಂಡುಬಂದಿದೆ. ಭಾರತಕ್ಕೆ ೩೨೯ ದಶಲಕ್ಷ ಹೆಕ್ಟೇರು ಭೌಗೋಳಿಕ ಪ್ರದೇಶವಿದ್ದರೂ ಎಲ್ಲೆಡೆಯೂ ನದಿ ನೀರಿನ ಹರಿವು ಇಲ್ಲ. ಅದಕ್ಕೆ ಪರ್ಯಾಯವಾಗಿ ಸಣ್ಣ ಪ್ರಮಾಣದಲ್ಲಾದರೂ ಮೈದಾನ ಪ್ರದೇಶಗಳಲ್ಲಿ ನೀರು ಹಿಡಿದಿಡುವ ಯೋಜನೆಯೇ ಕೆರೆ ನಿರ್ಮಾಣ. ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಸ್ಥಭೂಮಿ ಬಹುತೇಕ ಎತ್ತರಿಸಿದ ಭಾಗವಾದ್ದರಿಂದ, ಮೇಲಾಗಿ ಗ್ರನೈಟ್ ಸಂಬಂಧೀ ಗಡಸುಕಲ್ಲಿನಿಂದ ರೂಪಿತಗೊಂಡಿರುವುದರಿಂದ ಇಲ್ಲಿ ಕೆರೆ ನಿರ್ಮಿಸಿದಾಗ ದೊಡ್ಡ ಪ್ರಮಾಣದಲ್ಲಿ ನೀರು ಹಿಂಗಿಹೋಗುವ ಸಂದರ್ಭ ಕಡಿಮೆ. ಐತಿಹಾಸಿಕವಾಗಿ ನೋಡಿದರೆ ಕೆರೆ ಕಟ್ಟೆ ಕಟ್ಟಿಸುವುದು ಪ್ರಜೆಗಳ ಹಿತರಕ್ಷಣೆಯ ರಾಜಧರ್ಮವಾಗಿತ್ತು.
ಕೆರೆ ಮತ್ತು ಕೊಳಗಳು ನೀರಿನ ಮುಖ್ಯ ಆಕರವಾದರೂ ಕೆರೆ ಉದ್ದೇಶಪೂರ್ವಕವಾಗಿಯೇ ನಿರ್ಮಿಸಿದ್ದು. ಕೊಳ ನೈಸರ್ಗಿಕವಾಗಿ ರೂಪಿತವಾಗಿದ್ದು. ಕೆರೆಗಳನ್ನು ಕಟ್ಟುವಾಗ ನಮ್ಮ ಪ್ರಾಚೀನರು ಅತ್ಯಂತ ಯುಕ್ತಮಾರ್ಗ ಅನುಸರಿಸಿದ್ದಾರೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ಬಂದು ಕೆರೆ ತುಂಬಿದರೆ ಏರಿ ಒಡೆಯಬಾರದು ಎಂದು, ಹೆಚ್ಚುವರಿ ನೀರು ವ್ಯರ್ಥವಾಗಿ ಹೋಗಬಾರದು ಎಂದು ಕೋಡಿಕಟ್ಟಿದ್ದಾರೆ. ಎಲ್ಲ ಕೆರೆಗಳಲ್ಲೂ ಇದನ್ನು ಗಮನಿಸಬಹುದು. ಕೋಡಿಯಿಂದ ಹರಿದ ಕೆರೆಯ ನೀರು ಮುಂದಿನ ಕೆರೆಗೆ ತುಂಬುವಂತೆ ಸಂಪರ್ಕವಿರುತ್ತಿತ್ತು. ಅಲ್ಲಿಂದ ಮತ್ತೊಂದಕ್ಕೆ, ಇನ್ನೂ ದೊಡ್ಡ ಕೆರೆಯೆಂದರೆ ತೂಬುಗಳನ್ನು ತೆರೆಯುವ ಉಪಾಯ. ಕೃಷಿ, ಜಾನುವಾರುಗಳಿಗೆ, ಕುಡಿಯುವ ನೀರಿಗೆ, ಗೃಹಕೃತ್ಯಕ್ಕೆ ಕೊನೆಗೆ ಶೌಚಕ್ಕೂ ಕೆರೆಯೇ ಆಧಾರ ಎಂಬ ಪರಿಕಲ್ಪನೆ ಲಾಗಾಯ್ತಿಯಿಂದ ಬಂದಿದ್ದರೂ ಕಳೆದ ಶತಮಾನದ ೭೦ರ ದಶಕದ ನಂತರ ಅನೇಕ ಪರಿವರ್ತನೆಗಳಾದವು. ಆ ಮುಂಚೆ ಕೆರೆಗಳಲ್ಲಿ ಹೂಳು ತುಂಬಿದರೆ ಅದನ್ನು ಎತ್ತಲು ಸಮುದಾಯ ಭಾಗವಹಿಸುತ್ತಿತ್ತು. ಸೋಮವಾರದಂದು ಉಳುಮೆಗೆ ಬಿಡುವು ಇದ್ದುದರಿಂದ ಆ ಕಾಲವನ್ನು ಗ್ರಾಮೀಣ ಜನರು ಕೆರೆಗಳ ಹೂಳೆತ್ತಲು, ಏರಿಯನ್ನು ಭದ್ರಪಡಿಸಲು ಬಳಸಿಕೊಳ್ಳುತ್ತಿದ್ದರು. ೭೦ರ ದಶಕದ ನಂತರ ಬದಲಾದ ಕೃಷಿ ಪರಿಸ್ಥಿತಿ, ಅಂತರ್ಜಲದ ಯಥೇಚ್ಛ ಬಳಕೆ, ಕೆರೆಯ ಜಲಾನಯನ ಪ್ರದೇಶದ ಒತ್ತುವರಿ, ಹೂಳನ್ನು ಎತ್ತುವುದರಲ್ಲಿ ನಿರ್ಲಕ್ಷ್ಯ ಇವೆಲ್ಲ ಸೇರಿ ಕೆರೆಯ ಸಂರಕ್ಷಣೆಗೆ ಅನೇಕ ಅಡಚಣೆಗಳು ಎದುರಾದವು.
ಏಷ್ಯ ಅಭಿವೃದ್ಧಿ ಬ್ಯಾಂಕ್ ದೇಶದ ಪ್ರಮುಖ ಕೆರೆಗಳ ಸ್ಥಿತಿಗತಿಗಳನ್ನು ವರದಿಮಾಡಿದೆ. ಕರ್ನಾಟಕದಲ್ಲಿ ೩೦ ಜಿಲ್ಲೆಗಳೂ ಸೇರಿ ಒಟ್ಟು ೩೬,೬೭೮ ಕೆರೆಗಳಿವೆ. ಇವು ವಿಸ್ತರಿಸಿರುವ ಜಾಗ ೬,೯೦,೦೦೦ ಹೆಕ್ಟೇರು. ಆದರೆ ಇವುಗಳಲ್ಲಿ ಶೇ. ೯೦ ಭಾಗ ಕೆರೆಗಳು ೪೦ ಹೆಕ್ಟೇರುಗಳಿಗಿಂತ ಹೆಚ್ಚು ವಿಸ್ತರಿಸಿಲ್ಲ. ಅವುಗಳನ್ನು ಆಧರಿಸಿ ಸದ್ಯದಲ್ಲಿ ಸಾಗುವಳಿ ಮಾಡುತ್ತಿರುವುದು ಶೇ. ೩೫ ಭಾಗ ಮಾತ್ರ. ೧೯೯೭ರಿಂದ ಸಣ್ಣ ನೀರಾವರಿ ಇಲಾಖೆ ಈ ಕೆರೆಗಳು ಉಸ್ತುವಾರಿ ವಹಿಸಿದೆ. ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಆಧರಿಸಿ ಅವುಗಳ ನಿರ್ವಹಣೆಯನ್ನು ಬೇರೆ ಬೇರೆ ಆಡಳಿತಕ್ಕೆ ವಹಿಸಿದೆ. ೪೦ ರಿಂದ ೨೦೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳ ಉಸ್ತುವಾರಿಯನ್ನು ಸರ್ಕಾರದ ಸಣ್ಣ ನೀರಾವರಿ ಇಲಾಖೆ ವಹಿಸಿಕೊಂಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ಕೆರೆಗಳನ್ನು ಜಿಲ್ಲಾ ಪರಿಷತ್ ಮತ್ತು ಪಂಚಾಯತಿಗಳು ವಹಿಸಿಕೊಂಡಿವೆ. ಅಚ್ಚುಕಟ್ಟು ಪ್ರದೇಶ ೨೦೦೦ ಹೆಕ್ಟೇರಿಗಿಂತ ಹೆಚ್ಚಾಗಿದ್ದರೆ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆಗಳು ಇದನ್ನು ನಿರ್ವಹಿಸುತ್ತವೆ.
ಕೆರೆಗಳನ್ನು ಯುಕ್ತವಾಗಿ ಬಳಸಲು ಕರ್ನಾಟಕ ಸರ್ಕಾರ ನೀರು ಬಳಕೆದಾರ ಸಹಕಾರ ಸಂಘಗಳ ಸ್ಥಾಪನೆಗೆ ಒತ್ತುಕೊಟ್ಟಿದೆ (Water users Co-operative Sociery-W.W.C.S.) ಕರ್ನಾಟಕ ಸರ್ಕಾರ ೧೯೬೫ರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ೫೦೦ರಿಂದ ೭೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳನ್ನು ಈ ಸಂಘದ ಸುಪರ್ದಿಗೆ ಕೊಡುವ ಯೋಜನೆ ರೂಪಿಸಿತು. ೨೦೦೨ರಲ್ಲಿ ಮತ್ತೆ ಒಂದು ಕಾಯ್ದೆ ರೂಪಿಸಿ ಕೆರೆ ಬಳಕೆದಾರರ ಗುಂಪಿಗೆ (Tank Users Group-T.U.G.) ಬಿಡಿ ಕೆರೆಗಳನ್ನು ವಹಿಸುವ ಯೋಜನೆಯೊಂದನ್ನು ರೂಪಿಸಿತು. ೨೦೦೪ರಿಂದ ಯಾವ ಕೆರೆಯ ಅಚ್ಚುಕಟ್ಟು ೪೦ ಹೆಕ್ಟೇರಿಗಿಂತ ಹೆಚ್ಚಾಗಿದೆಯೋ ಅದನ್ನು ಗ್ರಾಮ ಪಂಚಾಯಿತಿಯ ಸುಪರ್ದಿಗೆ ನೀಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ೨೦೦೦ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸಮುದಾಯ ಆಧಾರಿತ ಸಣ್ಣ ಕೆರೆಗಳ ಪುನಶ್ಚೇತನ ಯೋಜನೆಯೊಂದನ್ನು ತಂದಿದೆ. ಹಾಗೆಯೇ ಜಲಸಂವರ್ಧನಾ ಯೋಜನಾ ಸಂಘವೆಂಬ ಸ್ವತಂತ್ರ ಸಂಸ್ಥೆಯನ್ನೂ ಅಸ್ತಿತ್ವಕ್ಕೆ ತಂದಿದೆ. ಬಹು ಮುಖ್ಯವಾದ ಅಂಶವೆಂದರೆ ಇಂಥ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಒಂದು ಕಾಲಮಿತಿಯಲ್ಲಿ ಇವನ್ನು ಪೂರ್ಣಗೊಳಿಸಬೇಕು. ಅದಕ್ಕೆ ತಕ್ಕ ಅನುಕೂಲತೆಗಳನ್ನು ಕಲ್ಪಿಸಬೇಕು. ಆಡಳಿತಾತ್ಮಕವಾಗಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಅಥವಾ ಅದರ ನಿರ್ವಹಣೆಗೆ ಸ್ಪಷ್ಟ ರೂಪುರೇಖೆಗಳು ನಿರ್ಧಾರವಾಗಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಪರಿಸರದ ಅವನತಿ
ಸದ್ಯದಲ್ಲಿ ಕರ್ನಾಟಕ ಕೆರೆ ಪರಿಸರ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಕೃಷಿಗಾಗಿ ಕೆರೆಗಳ ಮೇಲಿನ ಅವಲಂಬನೆ ಸ್ವಾತಂತ್ರ್ಯಾನಂತರ ಅದರಲ್ಲೂ ವಿಶೇಷವಾಗಿ ೭೦ರ ದಶಕದ ನಂತರ ಕಡಿಮೆಯಾಗುತ್ತ ಬಂತು. ಕೊಳವೆ ಬಾವಿಗಳು ಆದ್ಯತೆ ಪಡೆದವು, ಕೆರೆಯ ಪರಿಸರದ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಹಳ್ಳ ಕೂಡುವ ಜಾಗಗಳು ಸೇರಿದಂತೆ ಕೆರೆಯ ಭಾಗವನ್ನು ಒತ್ತುವರಿ ಮಾಡಿದಾಗ ಎರಡು ಸಮಸ್ಯೆಗಳೂ ಏಕಕಾಲಕ್ಕೆ ಎದುರಾದವು. ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾದದ್ದು, ಅದೇ ಕಾಲಕ್ಕೆ ಅಧಿಕ ಹೂಳು ಕೆರೆಯಂಗಳವನ್ನು ತುಂಬಿದ್ದು. ಹೀಗಾಗಿ ಅಧಿಕ ಮಳೆ ಬಂದಾಗ, ಸುಸ್ಥಿತಿಯಲ್ಲಿರದ ಎಷ್ಟೋ ಕೆರೆಯ ಏರಿಗಳು ಒಡೆದುಹೋದವು. ಎಲ್ಲದಕ್ಕೂ ಸರ್ಕಾರದ ಹಣವನ್ನೇ ನಿರೀಕ್ಷಿಸುವ ಜಾಯಮಾನ ಗ್ರಾಮೀಣ ಪ್ರದೇಶದ ಜನರಲ್ಲಿ ಬೆಳೆಯಿತು. ಕೆರೆ ದುರಸ್ತಿ ಸರ್ಕಾರದ ಕೆಲಸ ಎನ್ನುವಂತಾಯಿತು. ಬರಗಾಲ ಬಂದಾಗ ಕೆರೆಗಳು ಬತ್ತಿಹೋದವು. ಹಾಗೆಯೇ ಅಂತರ್ಜಲದ ಮಟ್ಟವೂ ಕೆಳಕ್ಕೆ ಹೋಗುತ್ತ ಬಂತು. ಕೆರೆಗಳನ್ನು ಆಧರಿಸಿದ ಜೀವಿ ವೈವಿಧ್ಯಕ್ಕೆ ಇದು ಮುಳುವಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಕೇಳುವ ಸ್ಥಿತಿ ಬಂತು.
ಹಸುರು ಕ್ರಾಂತಿ ನಮ್ಮ ಆಹಾರೋತ್ಪಾದನೆಯಲ್ಲಿ ದೊಡ್ಡ ಬದಲಾವಣೆ ತಂದರೂ ಇನ್ನೊಂದು ದೃಷ್ಟಿಯಿಂದ ಶಾಶ್ವತ ಸಮಸ್ಯೆಯನ್ನು ತಂದೊಡ್ಡಿತು. ಯಥೇಚ್ಛವಾಗಿ ಕೀಟನಾಶಕವನ್ನು ಬೆಳೆಗೆ ಬಳಸಿದ್ದರಿಂದ ಅದು ತಂದ ವಿಪತ್ತುಗಳು ನೂರಾರು. 50ರ ದಶಕದಲ್ಲಿ ಸೊಳ್ಳೆ ನಿರ್ಮೂಲನಕ್ಕಾಗಿ ಬಳಸಿದ ಡಿ.ಡಿ.ಟಿ. ಈಗಲೂ ಕೃಷಿ ನೆಲದಿಂದ ಪೂರ್ಣ ಮರೆಯಾಗಿಲ್ಲ ಎಂಬುದು ಪರಿಸರ ಚಿಂತಕರ ಅಳಲು. ಕೃಷಿ ಬೆಳೆಗೆ ಸಿಂಪಡಿಸುವ ಕೀಟನಾಶಕಗಳಲ್ಲಿ ಪೊಟಾಸಿಯಂ ಸಾರ ಹೆಚ್ಚಾಗಿರುತ್ತದೆ. ಮಳೆ ಬಂದಾಗ ಕೆರೆಯಲ್ಲಿ ಸೇರಿಕೊಂಡು ನೀರಿನ ಆಮ್ಲಾಂಕವನ್ನು (PH) ಏರುಪೇರು ಮಾಡುತ್ತದೆ. ಬೆನ್ಜೀನ್ ಹೆಕ್ಸಾಕ್ಲೋರೈಡ್, ಲಿಂಡೇನ್, ಎಂಡೋಸಲ್ಫಾನ್-ಇವು ನೀರಿನಲ್ಲಿ ಸೇರಿ ಅಲ್ಲಿನ ಜೀವಿಗಳಿಗೆ ಮಾರಕವಾಗತೊಡಗಿತು. ಎಷ್ಟೋ ಸಂದರ್ಭಗಳಲ್ಲಿ ಕ್ಯಾನ್ಸರ್ಗೂ ಇವು ಕಾರಣ ಎಂದು ಸಮೀಕ್ಷೆಗಳು ಹೇಳಿದವು. ಕೆರೆಗಳನ್ನು ಶೌಚಕ್ಕೆ ಬಳಸುತ್ತಿದ್ದುದರಿಂದ ನೀರಿನಿಂದ ಹರಡುವ ರೋಗಗಳು ಹೆಚ್ಚಾಗುತ್ತಿದ್ದವು. ಈಗಲೂ ಇಂಥ ಸಂದರ್ಭಗಳು ಕೆಲವು ಹಿಂದುಳಿದ ಗ್ರಾಮಗಳಲ್ಲಿದೆ. ಯಾವ ಕೆರೆಯ ನೀರೂ ಶುದ್ಧವಲ್ಲ, ಅದರಲ್ಲಿ ಹಲವು ಲವಣಗಳು ವಿಲೀನವಾಗಿರುತ್ತವೆ. ಅಷ್ಟೇಕೆ ಕೆರೆಯ ನೀರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಮಣ್ಣಿನ ಕಣಗಳಿಂದಾಗಿ ನೀರಿಗೆ ಕೆಂಪು ಬಣ್ಣ ಬಂದಿರುತ್ತದೆ. ಈ ಸೂಕ್ಷ್ಮ ಕಣಗಳು ನಿಲಂಬಿತ ಸ್ಥಿತಿ (ಸಸ್ಪೆಂಡೆಡ್)ಯಲ್ಲಿರುತ್ತವೆ.
ಸಮುದ್ರಗಳಲ್ಲಿ ಜೀವಿ ವೈವಿಧ್ಯ ಹೇಗಿರುತ್ತದೋ ಕೆರೆಗಳಲ್ಲೂ ಸ್ಥಳೀಯ ಮಟ್ಟದಲ್ಲಿ ಜೀವಿಗಳಲ್ಲಿ ವೈವಿಧ್ಯವಿರುತ್ತದೆ. ಇದಕ್ಕೆ ತುಮಕೂರಿನ ಅಮಾನಿಕೆರೆ ಉದಾಹರಣೆಯಾಗುತ್ತದೆ. ಈ ಕೆರೆಯ ಜೀವಿ ವೈವಿಧ್ಯವನ್ನು ತುಮಕೂರಿನ ಸರ್ಕಾರೇತರ ಸಂಸ್ಥೆ-ವೈಲ್ಡ್ ಲೈಫ್ ಅವೇರ್ ನೆಟ್ವರ್ಕ್-ದಾಖಲೆ ಮಾಡಿದೆ. ತುಮಕೂರು ಅಮಾನಿಕೆರೆ ನಗರಕ್ಕೇ ಹೊಂದಿಕೊಂಡಿರುವ ದೊಡ್ಡ ಕೆರೆ. ಇದರ ವಿಸ್ತೀರ್ಣ ೮೩೫ ಎಕರೆ. ಹಾಗೆಯೇ ನೀರು ಹಿಡಿದಿಡುವ ಸಾಮರ್ಥ್ಯ ೧೬೫.೪೪ ದಶಲಕ್ಷ ಘನ ಅಡಿ. ಸಮುದ್ರ ಮಟ್ಟದಿಂದ ೭೮೫ ಮೀಟರ್ ಎತ್ತರದಲ್ಲಿದೆ. ತುಮಕೂರು ತಾಲ್ಲೂಕಿನ ವಾರ್ಷಿಕ ಮಳೆ ಪ್ರಮಾಣ ೬೮೮ ಮಿಲಿ ಮೀಟರ್. ಕೆರೆಯ ಅಚ್ಚುಕಟ್ಟು ಪ್ರದೇಶ ೭೦೫ ಎಕರೆ. ಇದಕ್ಕೆ ಕಟ್ಟಿರುವ ಏರಿಯೇ ೧.೮ ಕಿ.ಮೀ. ಉದ್ದವಿದೆ. ದೇವರಾಯನದುರ್ಗದ ಪಶ್ಚಿಮ ಇಳಿಜಾರು ಪ್ರದೇಶ ಸೇರಿದಂತೆ ಇದರ ಜಲಾನಯನ ಪ್ರದೇಶ ೩೫ ಚದರ ಕಿಲೋ ಮೀಟರ್ ವಿಸ್ತರಿಸಿದೆ. ಈ ಕೆರೆ ತುಂಬಿ ಕೋಡಿ ಬಿದ್ದಾಗ ಅದು ಮುಂದೆ ಭೀಮಸಮುದ್ರ ಕೆರೆಗೆ ಹೋಗುತ್ತದೆ, ಅಲ್ಲಿಂದ ಶಿಂಷಾ ನದಿಗೆ, ಅಂತಿಮವಾಗಿ ಕಾವೇರಿ ನದಿ ಕಣಿವೆಯನ್ನು ಕೂಡಿಕೊಳ್ಳುತ್ತದೆ. ಕ್ರಿ.ಶ. ೧೧೩೦ರಲ್ಲಿ ರಾಜೇಂದ್ರ ಚೋಳ ಈ ಕೆರೆ ಕಟ್ಟಿಸಿದನೆಂಬ ಉಲ್ಲೇಖವಿದೆ. ಈಗ ಇದು ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿದೆ. ಈ ಕೆರೆಗೆ ಎರಡು ಹಳ್ಳಗಳು ನೀರು ತುಂಬುತ್ತವೆ. ದೇವರಾಯಪಟ್ಟಣ ಹಳ್ಳ ಮತ್ತು ಹನುಮಂತಪುರ ಹಳ್ಳ. ಇವು ಸರ್ವಋತು ಹಳ್ಳಗಳಲ್ಲ, ಮಳೆಗಾಲದಲ್ಲಿ ಮಾತ್ರ ಹರಿಯುವಂತಹವು. ತುಮಕೂರಿನ ಕೆರೆ ಹಿಂಭಾಗದ ಅಂತರ್ಜಲ ಮರುಪೂರಣಕ್ಕೆ ಈ ಕೆರೆಯ ನೀರೇ ಆಧಾರ. ಹಾಗೆಯೇ ಜೀವಿ ವೈವಿಧ್ಯವನ್ನು ಪೋಷಿಸಿರುವ ಈ ಅಮಾನಿಕೆರೆ ಸದಾ ಅಧ್ಯಯನ ಯೋಗ್ಯ. ಈ ಕೆರೆಯನ್ನು ಆಶ್ರಯಿಸಿ ೪೨ ಕುಟುಂಬಕ್ಕೆ ಸೇರಿದ ೧೨೧ ಪಕ್ಷಿ ಪ್ರಭೇದಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಪೈಕಿ ೪೨ ಪಕ್ಷಿ ಪ್ರಭೇದಗಳು ದೂರದಿಂದ ವಲಸೆ ಬರುವಂತಹವು. ಆರು ಕುಟುಂಬಗಳಿಗೆ ಸೇರಿದ ೨೪ ಚಿಟ್ಟೆ ಪ್ರಭೇದಗಳು, ೧೨ ಜೇಡ ಪ್ರಭೇದಗಳು, ೬ ಸ್ತನಿ ಪ್ರಭೇದಗಳು, ೧೧ ಉರಗ ಪ್ರಭೇದಗಳು ಜೊತೆಗೆ ಆಮೆ, ಕಪಿ, ಮುಂಗುಸಿ, ದಂಷ್ಟ್ರಕ ಜೀವಿಗಳು, ಉಭಯ ಜೀವಿಗಳಿಗೆ ಇದು ನೆಲೆಯಾಗಿದೆ. ತುಮಕೂರಿನ ಅಮಾನಿಕೆರೆ ಅನೇಕ ಹಂತಗಳಲ್ಲಿ ಅಳಿವಿನಂಚಿನತ್ತ ಸಾಗಿತ್ತು. ಮುಖ್ಯವಾಗಿ ಹಳ್ಳದ ನೀರು ಒಳಹರಿಯುವ ಭಾಗದಲ್ಲಿ ಪಾತ್ರ ಬದಲಾಯಿಸಿದ್ದು, ಅತಿಕ್ರಮಣ, ಕೆರೆ ಒತ್ತುವರಿ, ಇಟ್ಟಿಗೆ ಕಾರ್ಖಾನೆಗಳ ಸ್ಥಾಪನೆ, ಅತಿರೇಕದ ಬಯಲು ಶೌಚ ಈ ಮೂಲಕ ನೀರಿನಿಂದ ಹರಡುವ ಕಾಯಿಲೆಗೆ ಜನ ತುತ್ತಾಗಿದ್ದರು. ಅನೇಕ ಪಕ್ಷಿಗಳನ್ನು ಕಾನೂನುಬಾಹಿರವಾಗಿ ಕೊಂದದ್ದರಿಂದ ಅವುಗಳ ಸಂಖ್ಯೆ ಇಳಿಮುಖವಾಯಿತು. ತುಮಕೂರಿನ ಚರಂಡಿ ನೀರು ಅಂತಿಮವಾಗಿ ಈ ಅಮಾನಿಕೆರೆಯನ್ನೇ ಸೇರುತ್ತದೆ. ಇಲ್ಲಿನ ಜೀವಿ ಪ್ರಭೇದಗಳಿಗೆ ದೊಡ್ಡ ಕುತ್ತು ತಂದಿರುವ ಸಂಗತಿ ಇದು. ನೀರಿನಲ್ಲಿ ಬೆಳದ ಅಂತರಗಂಗೆ ಕೆರೆಯ ಬಹುಭಾಗದ ನೀರನ್ನೇ ಮರೆಮಾಡಿತ್ತು. ತುಮಕೂರಿನ ನಾಗರಿಕರು ಕ್ರಿಯಾಶೀಲರಾಗಿ, ಸ್ವಯಂಪ್ರೇರಿತರಾಗಿ ಇದನ್ನು ಶುದ್ಧೀಕರಿಸುವ ಕಾರ್ಯ ಕೈಗೊಂಡರು.
ಸಾಮಾನ್ಯವಾಗಿ ಯಾವ ಕೆರೆಯೇ ಆಗಲಿ, ಅದರಲ್ಲಿ ತೇಲುವ ಸಸ್ಯಗಳು, ಮುಳುಗಿರುವ ಸಸ್ಯ, ನೀರಿನ ತಳದಲ್ಲಿ ಆಳ ಬೇರು ಬಿಟ್ಟಿರುತ್ತವೆ. ಅಂತರಗಂಗೆ, ನೀರು ಬ್ರಾಹ್ಮಿ, ಒಂದೆಲಗೆ ಸಸ್ಯ ಅನೇಕ ಕೆರೆಗಳಲ್ಲಿ ತೇಲುವುದನ್ನು ಸಾಮಾನ್ಯವಾಗಿ ಕಾಣಬಹುದು. ಶೈವಲ, ಡಯಾಟಂ ಕೂಡ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜೀವಿ ವಿಜ್ಞಾನಿಗಳು ಬಹುತೇಕ ಕೆರೆಗಳಲ್ಲಿ ಹದಿನೈದು ಬಗೆಯ ಸಸ್ಯಗಳನ್ನು ದಾಖಲೆ ಮಾಡಿದ್ದಾರೆ. ಹಾಗೆಯೇ ಗುಳುಮುಳುಕ, ನೀರುಕಾಗೆ, ರಾತ್ರಿಬಕ, ಬೂದುಕೊಕ್ಕರೆ, ಮೀಂಚುಳ್ಳಿ, ಚಮಚದ ಕೊಕ್ಕು ಸೇರಿದಂತೆ ಅನೇಕ ಬಗೆಯ ಪಕ್ಷಿಗಳಿಗೆ ಕೆರೆ ಆಶ್ರಯ ಕೊಡುತ್ತದೆ. ಶಂಕದ ಹುಳು, ಏಡಿ, ಸೀಗಡಿ, ನಳ್ಳಿ, ಸಂದಿಪದಿಗಳು, ವಲಯವಂತಗಳು ಆಹಾರ ಸರಪಳಿಯ ಒಂದು ಭಾಗವಾಗಿ ಕೆರೆಯನ್ನು ಆಶ್ರಯಿಸಿರುತ್ತವೆ. ಕೊಡತಿಕೀಟದಿಂದ ಹಿಡಿದು ಜಲಜೀರುಂಡೆಗಳವರೆಗೆ ಅನೇಕ ಕೀಟಗಳಿಗೂ ಕೆರೆಯೇ ಆವಾಸ. ಹಾಗೆಯೇ ಸೂಕ್ಷ್ಮಜೀವಿಗಳು ಕೆರೆಯಲ್ಲಿ ಆಶ್ರಯ ಪಡೆಯುತ್ತವೆ. ಯೂಗ್ಲಿನ, ಸ್ಪೈರೋಗೈರ, ಪ್ಯಾರಮೀಡಿಯಮ್ ಮುಂತಾದವು. ಇದಲ್ಲದೆ ಕೆರೆಗಳಲ್ಲಿ ನೈಸರ್ಗಿಕವಾಗಿರುವ ಮೀನುಗಳೂ ಉಂಟು. ಹಾಗೆಯೇ ಮೀನುಗಳನ್ನು ಬೆಳೆಸುವುದೂ ಉಂಟು. ಸರ್ವಋತು ನೀರಿದ್ದಾಗ ಮಾತ್ರ ಇದು ಸಾಧ್ಯ. ಕಾಟ್ಲಾ, ಮೃಗಾಲ್, ಗೆಂಡೆಮೀನು, ಬಾಳೆಮೀನು ಸೇರಿದಂತೆ ೨೦ ಬಗೆಯ ಮೀನಿನ ತಳಿಗಳನ್ನು ಕೆರೆಗಳಲ್ಲಿ ಬೆಳೆಸುವುದುಂಟು. ಅಂಥ ಕೆರೆಗಳು ಮಲಿನವಾಗಿರಬಾರದು. ಕೆರೆ ಕಲುಷಿತವಾಯಿತೆಂದರೆ ಬಹು ಬೇಗ ಜೀವಿಗಳು ಸಾಯುತ್ತವೆ, ಜೀವಿ ವೈವಿಧ್ಯ ನಷ್ಟವಾಗುತ್ತವೆ. ಹಾಗೆಯೇ ಆಹಾರ ಸರಪಳಿಯ ಕೊಂಡಿ ಕಳಚುತ್ತದೆ. ಇವೆಲ್ಲವನ್ನೂ ಕಾನೂನಿನಿಂದಲೇ ಸರಿಪಡಿಸಲು ಸಾಧ್ಯವಿಲ್ಲ. ಸಂರಕ್ಷಣೆ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು.
ಸೂಳೆಕೆರೆ (ಶಾಂತಿಸಾಗರ) ಅಧ್ಯಯನ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರ್ನಾಟಕದ ಕೆರೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕ್ರಿ.ಶ. ೧೧೨೮ರಲ್ಲಿ ಶಾಂತವ್ವ ಎಂಬಾಕೆ ಕಟ್ಟಿಸಿದ ಈ ಕೆರೆ ಏಷ್ಯದ ಅತಿದೊಡ್ಡ ಎರಡನೇ ಕೆರೆ ಎಂದು ಪ್ರಸಿದ್ಧಿಯಾಗಿದೆ (ಏಷ್ಯದ ಅತಿದೊಡ್ಡ ಕೆರೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕುಂಬಂ. ಇದರ ನೀರು ಸಂಗ್ರಹಣಾ ಸಾಮರ್ಥ್ಯ ೩,೩೭೮ ಘನ ಅಡಿ). ಸೂಳೆಕೆರೆಯ ನೀರಿನ ವಿಸ್ತೀರ್ಣ ೨,೪೬೬ ಹೆಕ್ಟೇರು, ಜಲಾನಯನ ಪ್ರದೇಶದ ವಿಸ್ತೀರ್ಣ ೮೪,೪೧೬ ಹೆಕ್ಟೇರು. ಕೆರೆಯ ಸುತ್ತಳತೆ ೩೦ ಕಿಲೋ ಮೀಟರು. ಈ ನೀರನ್ನು ಆಧರಿಸಿ ೨,೮೭೬ ಹೆಕ್ಟೇರು ಸಾಗುವಳಿಯಾಗುತ್ತಿದೆ. ಕೆರೆಯ ಕನಿಷ್ಠ ಆಳ ಐದು ಮೀಟರು, ಗರಿಷ್ಠ ಆಳ ಒಂಬತ್ತು ಮೀಟರು. ಕೆರೆಯ ನೀರಿನ ಮಟ್ಟ ಕೆಳಗೆ ಇಳಿಯುವ ಪರಿಸ್ಥಿತಿ ಎದುರಾಗಿತ್ತು. ಆಗ ಭದ್ರಾ ಅಣೆಕಟ್ಟಿನ ಕಾಲುವೆ ಸಂಪರ್ಕ ಕಲ್ಪಿಸಲಾಯಿತು. ಈಗ ಸರ್ವಋತುವಿನಲ್ಲೂ ಇದರಲ್ಲಿ ನೀರಿರುತ್ತದೆ. ಕೆರೆಯ ಅಂಚಿನ ಭಾಗದಲ್ಲಿ ಶೇ. ಸುಮಾರು ೧೫ ಭಾಗ ಒತ್ತುವರಿಯಾಗಿದ್ದರೂ, ಶೇ. ೩೦ ಭಾಗದಲ್ಲಿ ಜಲಸಸ್ಯಗಳು ಬೆಳೆದಿದ್ದರೂ, ಈ ಕೆರೆ ಕಲುಷಿತವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿರದಲ್ಲಿ ಯಾವುದೇ ಕಾರ್ಖಾನೆಗಳಿಲ್ಲವಾದ್ದರಿಂದ ಕೆರೆಗೆ ಕೊಳಚೆ ಹರಿಯುವ ಸಂಭವವಿಲ್ಲ.
ವೈಜ್ಞಾನಿಕ ದೃಷ್ಟಿಯಿಂದ ಈ ಕೆರೆಯ ನೀರಿನ ಬೇರೆ ಬೇರೆ ಗುಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಕೆರೆಯ ನೀರಿನ ಉಷ್ಣತೆಗಿಂತ ಇದರ ಮೇಲೆ ಬೀಸುವ ಗಾಳಿಯ ಉಷ್ಣತೆಯೇ ಹೆಚ್ಚು (೨೭.೦-೩೩.೨೦ ಡಿಗ್ರಿ ಸೆಂ.). ಈ ನೀರು ಕುಡಿಯಲು ಯೋಗ್ಯವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗಕ್ಕೆ ಈ ಕೆರೆಯಿಂದ ದಿನವಹಿ ೩೦ ದಶಲಕ್ಷ ಲೀಟರು ನೀರು ಪೂರೈಕೆ ಸಾಧ್ಯವಾಗಿದೆ. ನೀರಿನಲ್ಲಿ ಯಾವುದೇ ವಾಸನೆ ಇಲ್ಲ, ಮಳೆಗಾಲದಲ್ಲೂ ಪ್ರಕ್ಷುಬ್ದ ಕಣಗಳು ಒಂದು ಲೀಟರ್ಗೆ ಮೂರು ಮಿಲಿಗ್ರಾಂಗಿಂತ ಕಡಿಮೆ. ನೀರು ಕ್ಷಾರವಾಗಿದೆ. ಇದರ ಕ್ಷಾರತೆ ೮.೪-೮.೬. ಅತ್ಯಂತ ಗಮನಾರ್ಹ ಅಂಶವೆಂದರೆ ಈ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್ ೫.೫ ರಿಂದ ೭.೪ ಮಿಲಿಗ್ರಾಂ/ಲೀಟರ್. ಇದು ವಿಶೇಷವಾಗಿ ಮೀನುಸಾಕಣೆಗೆ ಅತ್ಯಂತ ಪ್ರಶಸ್ತವಾದ ಅಂಶ. ನೀರಿನಲ್ಲಿ ನೈಟ್ರೇಟ್ ಪ್ರಮಾಣ ಅತಿ ಕಡಿಮೆ ಮತ್ತು ಅಮೋನಿಯ ಇಲ್ಲವೇ ಇಲ್ಲ. ತೇಲು ಸಸ್ಯಗಳಿದ್ದರೂ ಅವುಗಳ ಪ್ರಮಾಣ ಕಡಿಮೆ. ಹಾಗೆಯೇ ಕೆರೆಯಲ್ಲಿ ಮುಳುಗಿರುವ ಕಲ್ಲುಗಳ ಮೇಲೆ ಬೆಳೆಯುವ ಸಸ್ಯಗಳ ಪ್ರಮಾಣ ಹೆಚ್ಚು. ಜಲಚರಗಳಲ್ಲಿ ಮೃದ್ವಂಗಿಗಳು, ಕೀಟಗಳು, ಮೀನು ಮತ್ತು ಚಿಪ್ಪುಜೀವಿಗಳು ಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿವೆ. ಮೃಗಾಲ್, ಕಾಟ್ಲಾ ಮೀನುಗಳಿಗಿಂತ ರೋಹು ಮತ್ತು ಕಾರ್ಪ್ ಮೀನು ತಳಿಗಳನ್ನು ಇಲ್ಲಿ ಹೆಚ್ಚು ಬೆಳೆಸಿದ್ದಾರೆ. ರಾಜ್ಯದ ಮೀನುಗಾರಿಕೆ ಇಲಾಖೆಯ ಮೀನು ಉತ್ಪಾದನಾ ಫಾರ್ಮ್ಗಳಲ್ಲಿ ಇದೂ ಒಂದು. ಜಲಾನಯನ ಪ್ರದೇಶದಲ್ಲಿ ಕೃಷಿಗೆ ಬಳಸುತ್ತಿರುವ ಕೃಷಿ ಕೀಟನಾಶಕ ಮುಂದೆ ಈ ಕೆರೆಯನ್ನು ಮಲಿನಗೊಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಸ್ಥಳೀಯ ಮೀನುಗಳು ಈ ಕೆರೆಯಿಂದ ಕಣ್ಮರೆಯಾಗಿರುವ ಬಗ್ಗೆ ವರದಿಗಳಿವೆ.
ಒಂದು ಕೆರೆ ಅತ್ಯಂತ ಆರೋಗ್ಯಕರ ಪರಿಸರ ಹೊಂದಿದ್ದರೆ ಅದು ಹೇಗೆ ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಸೂಳೆಕೆರೆ ಒಂದು ಜೀವಂತ ನಿದರ್ಶನ. ಇಲ್ಲಿ ಒಳನಾಡು ಮೀನುಗಾರಿಕೆ ಸಹಕಾರ ಸಂಘವಿದೆ. ಈ ಕೆರೆಯಿಂದ ವಾರ್ಷಿಕ ೩೫ ಲಕ್ಷ ಟನ್ನು ಮೀನು ಸಂಗ್ರಹವಾಗುತ್ತದೆ.
ನಗರಗಳ ಕೆರೆಗಳ ಪರಿಸರ
ಕೆರೆಗಳ ಅಸ್ತಿತ್ವಕ್ಕೆ ದೊಡ್ಡ ಕುತ್ತು ಬಂದಿರುವುದು ನಗರಗಳಲ್ಲೇ-ಅದೂ ಮಹಾನಗರಗಳಲ್ಲಿ. ನಗರಗಳು ಬೆಳವಣಿಗೆ ತೋರಿಸಿದಂತೆ ಅವು ಹಾಕುವ ಒತ್ತಡ ಅನೇಕ ಕ್ಷೇತ್ರಗಳ ಮೇಲೆ ನಿಚ್ಚಳವಾಗಿ ಕಂಡುಬರುತ್ತದೆ. ನಗರ ಬೆಳವಣಿಗೆಗೆ ಹಲವು ಆಯಾಮಗಳಿವೆ. ಗ್ರಾಮೀಣ ಭಾಗಗಳಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆ ದೊಡ್ಡದಾಗಿದೆ. ಕೃಷಿ ತೊರೆದು ನಗರವಾಸಿಗಳಾಗಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಬಹುಮುಖ್ಯವಾಗಿ ನೆಲ ಮತ್ತು ನೀರಿನ ಮೇಲೆ ಅತ್ಯಂತ ಹೆಚ್ಚು ಒತ್ತಡ ಬೀಳುತ್ತದೆ. ನಿವೇಶನಗಳ ಬೆಲೆ ಕೈಮೀರಿ ಹೋಗುತ್ತದೆ. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ಚೆನ್ನೈ ಎಲ್ಲ ಕಡೆಯಲ್ಲೂ ನಗರೀಕರಣ ಭರದಿಂದ ಸಾಗಿದೆ. ನೆಲಬಾಕ ಸಂಸ್ಕೃತಿಗೆ ಇದು ಇಂಬುಕೊಟ್ಟಿದೆ. ಕಾನೂನನ್ನು ಮೀರಿ ಸಾಗಿರುವ ಕೆರೆಗಳ ಒತ್ತುವರಿ, ಕೆರೆಯಂಗಳದಲ್ಲೂ ತಲೆ ಎತ್ತಿರುವ ಅನೇಕ ಕಟ್ಟಡಗಳು, ಜಲಾನಯನ ಪ್ರದೇಶ ಕಣ್ಮರೆಯಾಗಿರುವುದು ಇವೆಲ್ಲವೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕಳೆದ ಹದಿನೈದು ವರ್ಷಗಳಲ್ಲಿ ಹೈದರಾಬಾದ್ ನಗರ ೩,೨೪೫ ಹೆಕ್ಟೇರಿನಷ್ಟು ಕೆರೆಗಳನ್ನು ಕಳೆದುಕೊಂಡಿದೆ. ಚೆನ್ನೈ ಸ್ಥಿತಿ ಇದಕ್ಕಿಂತಲೂ ಘೋರ. ಕಳೆದ ಶತಮಾನದಲ್ಲಿ ಅಲ್ಲಿ ೬೫೦ ಕೆರೆಗಳಿದ್ದವು, ಈಗ ಅವು ೩೦ಕ್ಕೆ ಇಳಿದಿವೆ. ೨೦೧೨ರಲ್ಲಿ ೧,೧೩೦ ಹೆಕ್ಟೇರಿನಿಂದ ೬೪೫ ಹೆಕ್ಟೇರಿಗೆ ಕುಗ್ಗಿಹೋಗಿವೆ. ಇದರ ನೇರ ಪರಿಣಾಮ ಆ ನಗರಕ್ಕೆ ತಟ್ಟಿದೆ. ಅಂತರ್ಜಲ ಮಟ್ಟ ಕೆಳಕ್ಕೆ ಇಳಿದಿದೆ. ಕಳೆದ ಡಿಸೆಂಬರ್ನಲ್ಲಿ ಪ್ರಳಯ ರೂಪವಾಗಿ ಕಾಡಿದ ಜಲಪ್ರವಾಹಕ್ಕೆ ಅಲ್ಲಿನ ಕೆರೆಗಳು ನಾಶವಾಗಿರುವುದೂ ಒಂದು ಕಾರಣ. ಏಕೆಂದರೆ ಹೆಚ್ಚುವರಿ ಮಳೆನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಕೆರೆಗಳಿಗಿತ್ತು. ಅಹಮದಾಬಾದಿನಲ್ಲಿ ೨೦೦೨ ರಲ್ಲಿ ೨೩೫ ಕೆರೆಗಳಿದ್ದವು. ಮುಂದಿನ ಹತ್ತು ವರ್ಷಗಳಲ್ಲಿ ಶೇ. ೬೦ ಭಾಗ ಕೆರೆಗಳು ಕಣ್ಮರೆಯಾದವು. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಕೆರೆಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ದೆಹಲಿಯ ಉದ್ಯಾನ ಮತ್ತು ತೋಟಗಳ ಅಭಿವೃದ್ಧಿ ಸಂಘ ವರದಿ ಮಾಡಿರುವಂತೆ ೬೧೧ ಕೆರೆಗಳ ಪೈಕಿ ೨೭೪ ಕೆರೆಗಳು ಬತ್ತಿಹೋಗಿವೆ. ೧೮೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗದ ಸ್ಥಿತಿ ಇದೆ.
ಕೆರೆಗಳನ್ನು ನುಂಗಿ ಬೆಳೆದಿರುವ ಮಹಾ ನಗರಗಳ ಪೈಕಿ ಬೆಂಗಳೂರು ಒಂದು. ೧೯೬೦ರ ದಶಕದಲ್ಲಿ ೨೮೦ ಕೆರೆಗಳಿದ್ದವು. ಇವುಗಳನ್ನು ಪರಸ್ಪರ ಸಂಪರ್ಕಿಸುವ ರಾಜ ಕಾಲುವೆಗಳಿದ್ದವು. ಕೆರೆ ತುಂಬಿದಾಗ ಕೋಡಿ ನೀರು ಹರಿದು ಮುಂದಿನ ಕೆರೆಯನ್ನು ತುಂಬುತ್ತಿತ್ತು. ನಗರದ ಉತ್ತರ ಭಾಗದ ಜಕ್ಕೂರು ಕೆರೆ, ಹೆಬ್ಬಾಳ ಕೆರೆ, ನಾಗವಾರ ಕೆರೆ ತುಂಬಿಬಂದಾಗ ಅವು ದಕ್ಷಿಣ ಭಾಗದ ಕಲ್ಕೆರೆ, ಮಾರಗೊಂಡನಹಳ್ಳಿ ಕೆರೆ, ವರ್ತೂರು, ಬೆಳ್ಳಂದೂರು ಕೆರೆಗಳನ್ನು ತುಂಬುತ್ತಿದ್ದವು. ಈ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಸದ್ಯದಲ್ಲಿ ೮೦ ಕೆರೆಗಳನ್ನು ನಗರ ಭಾಗದಲ್ಲಿ ಗುರುತಿಸಬಹುದು. ನೀರು ತುಂಬಿದ ಕೆರೆಗಳು ಬರಿ ೩೪. ಬೆಂಗಳೂರು ಕೆರೆಗಳ ಬಗ್ಗೆ ಸರ್ಕಾರ, ಕಾರ್ಪೋರೇಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದವು ಕಾಳಜಿ ವಹಿಸಿದರೂ ಅದು ಬಹು ತಡವಾಗಿತ್ತು. ಆ ಹೊತ್ತಿಗೆ ಎಷ್ಟೋ ಕೆರೆಗಳು ಕಣ್ಮರೆಯಾಗಿದ್ದವು. ‘ಲ್ಯಾಂಡ್ ಮಾಫಿಯಾ’ ಕೆರೆ ಒತ್ತುವರಿಯಲ್ಲಿ ಆಸಕ್ತಿ ತೋರಿ ನ್ಯಾಯಬಾಹಿರವಾಗಿ ಹಣವನ್ನು ಕೊಳ್ಳೆಹೊಡೆಯಿತು. ಬೆಂಗಳೂರಿನ ಎಷ್ಟೋ ಕೆರೆಗಳನ್ನು ನುಂಗಿಹಾಕಿ ಬಡಾವಣೆಗಳು ಬೆಳೆದಿವೆ. ಇದಕ್ಕೆ ೨೮ ಕೆರೆಗಳು ಬಲಿಯಾಗಿವೆ. ಇಂದಿನ ಗಾಂಧಿಬಜಾರು, ಬಸವನಗುಡಿ ಭಾಗದಲ್ಲಿ ಹಿಂದೆ ಕಾರಂಜಿ ಕೆರೆ ಇತ್ತು. ಅಕ್ಕಿತಿಮ್ಮನಹಳ್ಳಿಯ ಕೆರೆಯನ್ನು ಕಬಳಿಸಿ ವಿಲ್ಸನ್ ಗಾರ್ಡನ್ ಹುಟ್ಟಿತು. ತಾವರೆಕೆರೆ, ಭೈರಸಂದ್ರ ಕೆರೆಗಳನ್ನು ನುಂಗಿ ಜಯನಗರ ಬಡಾವಣೆ ಬೆಳೆಯಿತು. ಕೋಡಿಚಿಕ್ಕನಹಳ್ಳಿ ಕೆರೆ, ಅರಕೆರೆ, ಹುಳಿಮಾವು ಕೆರೆ, ರೂಪೇನ ಅಗ್ರಹಾರ ಕೆರೆಗಳನ್ನು ನುಂಗಿ ಬಿ.ಟಿ.ಎಂ. ಬಡಾವಣೆ ತಲೆಯೆತ್ತಿತು. ಉತ್ತರಹಳ್ಳಿ, ಯಲಚೇನಹಳ್ಳಿ, ಹಾಲದೇವನಹಳ್ಳಿ, ಬಿಕಾಸಿಪುರ ಕೆರೆಗಳನ್ನು ಕಬಳಿಸಿ, ಬನಶಂಕರಿ ಐದನೇ ಹಂತ ತಲೆ ಎತ್ತಿದೆ. ಆಲಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಗಳು ಜೆ.ಪಿ.ನಗರ ೯ನೇಹಂತಕ್ಕೆ ಬಲಿಯಾಗಿವೆ. ಪ್ರತಿಷ್ಠಿತ ಕೆಂಪೇಗೌಡ ಬಸ್ ನಿಲ್ದಾಣ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಈಗಿರುವ ಸಿಟಿ ಮಾರ್ಕೆಟ್ನಲ್ಲಿ ಸಿದ್ಧಿಕಟ್ಟೆ ಎಂಬ ಕೆರೆ ಇತ್ತು. ಸರ್ಕಾರ ಕಣ್ಣುಬಿಟ್ಟು ನೋಡಿದ್ದು ೧೯೮೫ರಲ್ಲಿ. ಸರ್ಕಾರದ ಆದೇಶದಂತೆ ಎನ್. ಲಕ್ಷ್ಮಣರಾವ್ ಅವರು ನೀಡಿದ ವರದಿಯಿಂದ. ಆ ಸಮಯದಲ್ಲಿ ನಗರದ ಸುತ್ತಮುತ್ತಲ ೧೦೮ ಕೆರೆಗಳಿಗೆ ಸಂಬಂಧಿಸಿದಂತೆ ೫೦೦ ಎಕರೆ ಜಾಗ ಒತ್ತುವರಿಯಾಗಿತ್ತು.
ಬೆಂಗಳೂರು ಕೆರೆಯ ನಿರ್ವಹಣೆಯಲ್ಲಂತೂ ಸದಾ ಗೊಂದಲವೇ ತುಂಬಿದೆ. ಆಡಳಿತಾತ್ಮಕವಾಗಿ ಬೆಂಗಳೂರಿನ ಕೆರೆಗಳು ಒಂದು ಸಂಸ್ಥೆಯ ಉಸ್ತುವಾರಿಯಲ್ಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ೧೨೩ ಕೆರೆಗಳನ್ನು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ೬೦ ಕೆರೆಗಳನ್ನೂ, ಅರಣ್ಯ ಇಲಾಖೆ ೫ ಕೆರೆಗಳನ್ನೂ, ಸಣ್ಣ ನೀರಾವರಿ ಯೋಜನೆ ೧೮ ಕೆರೆಗಳನ್ನು, ಕೆರೆ ಅಭಿವೃದ್ಧಿ ಪ್ರಾಧಿಕಾರ ೪ ಕೆರೆಗಳನ್ನು ನಿರ್ವಹಿಸುವ ಹೊಣೆಯನ್ನು ಹೊತ್ತವು. ಆದರೆ ಈ ಸಂಸ್ಥೆಗಳ ನಡುವ ನಿಜವಾದ ಸಮನ್ವಯ ಇಲ್ಲದೆ ಕೆರೆ ಅಭಿವೃದ್ಧಿ ಬೇರೆ ಬೇರೆ ದಾರಿ ಹಿಡಿಯಿತು.
ಬೆಂಗಳೂರು ಕೆರೆಗಳಿಗೆ ಕುತ್ತು ತಂದಿರುವುದು ನಮ್ಮ ಒಳಚರಂಡಿ ವ್ಯವಸ್ಥೆ. ಕಲುಷಿತ ನೀರು, ಗೃಹತ್ಯಾಜ್ಯ, ಕಾರ್ಖಾನೆ ತ್ಯಾಜ್ಯ, ಇವೆಲ್ಲವೂ ಕೆರೆಗಳಿಗೇ ಹರಿಯುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಯಿತು. ಕೆರೆಗಳು ತುಂಬಿಬರಲು ಜಲಾನಯನದ ಭಾಗ ಸುರಕ್ಷಿತವಾಗಿರಬೇಕು. ಈ ಪ್ರದೇಶವೆಲ್ಲ ವಸತಿ ಕಟ್ಟಡಗಳಿಂದ ತುಂಬಿಹೋದ ಮೇಲೆ ಕೆರೆಗೆ ಹರಿದುಬರುವ ನೀರಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಇನ್ನು ಲಾಗಾಯ್ತಿನಿಂದ ತುಂಬುತ್ತಿದ್ದ ಹೂಳು ತೆಗೆಯಲು ಕೋಟ್ಯಂತರ ರೂಪಾಯಿ ಬೇಕಾಯಿತು. ಬೆಂಗಳೂರು ನಗರ ಪಾಲಿಕೆ ‘ಕೆರೆಸಿರಿ’ ಯೋಜನೆಯಲ್ಲಿ ಹಲವು ಕೆರೆಗಳ ಪುನಶ್ಚೇತನ ಮಾಡಿದರೂ (ಉದಾ: ಎಡೆಯೂರು ಕೆರೆ), ಆ ಭಾಗ್ಯ ಎಲ್ಲ ಕೆರೆಗಳಿಗೂ ಸಿಕ್ಕಲಿಲ್ಲ. ಹಲಸೂರು ಕೆರೆ ಈಗಲೂ ಮಿಲಿಟರಿ ಆಡಳಿತದಲ್ಲೇ ಇದೆ. ಅಲ್ಲಿ ಆಗಾಗ್ಗೆ ಸತ್ತ ಮೀನುಗಳೂ ರಾಶಿರಾಶಿ ಬೀಳುವುದು ಸರ್ವಸಾಮಾನ್ಯವಾಗಿದೆ. ಅಲ್ಲಿ ನೀರಿನಲ್ಲಿ ವಿಲೀನವಾದ ಆಕ್ಸಿಜನ್ ಪ್ರಮಾಣ ಕಡಿಮೆ. ಹೀಗಾಗಿ ಮತ್ತೆ ಮತ್ತೆ ಈ ಅವಘಡ ಸಂಭವಿಸುತ್ತಿದೆ. ಚರಂಡಿ ನೀರನ್ನು ಇಲ್ಲಿಗೆ ಬಿಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಹೆಬ್ಬಾಳ, ಮಡಿವಾಳ ಮತ್ತು ದೊಡ್ಡ ಬೊಮ್ಮಸಂದ್ರ ಕೆರೆಗಳ ಅಭಿವೃದ್ಧಿಗೆ ಇಂಡೋ ನಾರ್ವೇ ಎನ್ವಿರಾನ್ಮೆಂಟಲ್ ಪ್ರಾಜೆಕ್ಟ್ ನೆರವಿಗೆ ಬರಬೇಕಾಯಿತು. ವರ್ತೂರು ಕೆರೆ (೪೧೧.೨೧ ಎಕರೆ) ಕೆಲವು ವರ್ಷಗಳಿಂದ ಭಾರಿ ಸುದ್ಧಿ ಮಾಡುತ್ತಿದೆ. ಕೆರೆಯ ತುಂಬ ನೊರೆ ಕಾಣಿಸಿಕೊಳ್ಳುತ್ತಿದೆ. ಇದರ ಮೂಲ ಹುಡುಕುವುದು ಕಷ್ಟವೇನಲ್ಲ. ಇಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಬರುತ್ತಿದೆ. ಕಾರ್ಖಾನೆಗಳ ತ್ಯಾಜ್ಯವೂ ಸೇರುತ್ತಿದೆ. ಶುದ್ಧೀಕರಣದ ವ್ಯವಸ್ಥೆ ಸಾಲದು. ಹತ್ತಾರು ರಾಸಾಯನಿಕಗಳು ಇದರಲ್ಲಿ ವಿಲೀನವಾಗಿದೆ. ಮನೆಯಲ್ಲಿ ಬಳಸುವ ಡಿಟರ್ಜೆಂಟಗಳಿಂದಾಗಿ ನೊರೆ ಹೆಚ್ಚುತ್ತಿದೆ. ಫಾಸ್ಪೇಟ್ ಅಂಶ ಕೆರೆಗೆ ಸೇರುತ್ತಿದೆ. ಇದನ್ನೇ ಆಧರಿಸಿ ಭರ್ಜರಿಯಾಗಿ ಕಳೆ ಬೆಳೆಯುತ್ತಿದೆ. ಬೆಂಗಳೂರಿನ ಶೇ.೪೦ ಭಾಗದ ಕೊಳಚೆ ನೀರು ವರ್ತೂರು ಕೆರೆಗೆ ಹರಿಯುತ್ತಿದೆ. ಹಾಗೆಯೇ ಅಮಾನಿಕೆರೆಯ ಸ್ಥಿತಿಯೂ ಹೀನಾಯವಾಗಿದೆ. ಈ ಕೆರೆಗೆ ಅಧಿಕ ಪ್ರಮಾಣದ ಹೈಡ್ರೋ ಕಾರ್ಬನ್ ಸೇರಿರುವುದರಿಂದ ಆಗಾಗ ಬೆಂಕಿ ಕಾಣಿಸಿಕೊಳ್ಳುವ ಅಪರೂಪದ ಘಟನೆಯೂ ನಡೆಯುತ್ತದೆ. ಜೊಂಡು, ಅದನ್ನು ಆಶ್ರಯಿಸಿರುವ ಬ್ಯಾಕ್ಟೀರಿಯಗಳು ಬಿಡುವ ಅಮೋನಿಯ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಈ ನೀರನ್ನು ಯಾವುದಕ್ಕೂ ಬಳಸದ ಸ್ಥಿತಿ ಉಂಟಾಗಿದೆ.
ಹಿಂದೆ ಬೆಂಗಳೂರಿನ ಅನೇಕ ಕೆರೆಗಳು ವಿಗ್ರಹ ವಿಸರ್ಜನೆಯ ಜಾಗಗಳಾಗಿದ್ದವು. ವಿಗ್ರಹಗಳ ಪೇಂಟ್ನಲ್ಲಿದ್ದ ಸೀಸದ ಅಂಶವು ನೀರಿಗೆ ಸೇರುತ್ತಿತ್ತು. ಅದನ್ನು ನಿವಾರಿಸಲು ಕೆಲವು ಕೆರೆಗಳಲ್ಲಿ ಪ್ರತ್ಯೇಕ ಸಣ್ಣ ಗುಂಡಿಗಳನ್ನು ತೋಡಿ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಲಾಲ್ಬಾಗ್ ಕೆರೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲಿ ಯಥೇಚ್ಛವಾಗಿ ವೃಕ್ಷಗಳಿರುವುದರಿಂದ ಅನೇಕ ಬಗೆಯ ಪಕ್ಷಿಗಳನ್ನು ಅಲ್ಲಿ ಕಾಣಬಹುದು. ಹೆಬ್ಬಾಳ ಕೆರೆ ೧೮೨ ಎಕರೆ ಇದ್ದದ್ದು ರೈಲ್ವೆ ಇಲಾಖೆ ೨೮ ಎಕರೆಯನ್ನು ಸ್ವಾಧೀನಮಾಡಿಕೊಂಡಿತು. ಈ ಕೆರೆಯ ಜೀರ್ಣೊದ್ಧಾರಕಕ್ಕಾಗಿ ೨೭೦ ಲಕ್ಷ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಹೆಬ್ಬಾಳ ಕೆರೆಯ ವಿಶೇಷವೆಂದರೆ ಅದು ಹೆದ್ದಾರಿಯ ಬಳಿ ಇದ್ದರೂ, ಕೂಗಳತೆಯೆ ದೂರದಲ್ಲಿ ಪ್ಲೈಓವರ್ ಇದ್ದರೂ, ಕೆರೆ ಪಕ್ಷಿಗಳಿಗೆ ಆಶ್ರಯ ನೀಡಿದೆ. ಕೆರೆಗಳು ಅಂತರ್ಜಲ ಭಂಡಾರವನ್ನು ಹೆಚ್ಚಿಸುವುದು ಸಾಮಾನ್ಯರಿಗೂ ತಿಳಿದ ಸಂಗತಿ. ಕೆರೆಗಳು ಕಣ್ಮರೆಯಾಗುತ್ತಿದ್ದರೆ, ನಗರ ಸ್ಥಳಗಳೆಲ್ಲವೂ ಕಾಂಕ್ರೀಟ್ಮಯವಾದರೆ ಮಳೆನೀರು ಹಿಂಗುವುದು ಹೇಗೆ? ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ೨೦೦ ಕಿಲೋ ಮೀಟರ್ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿಲ್ಲ. ಇದೆಲ್ಲ ನಗರೀಕರಣದ ಪರಿಣಾಮ.
ಈಗ ಬೆಂಗಳೂರಿನ ಕೆರೆಗಳ ಉಸ್ತುವಾರಿ ನೋಡಿಕೊಳ್ಳಲು ಸರ್ಕಾರ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಹಾಗಾಗಿ ಹಿಂದೆ ಅರಣ್ಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೆರೆ ಪ್ರಾಧಿಕಾರ ನಿರ್ವಹಿಸುತ್ತಿದ್ದ ಕೆಲಸವನ್ನು ಒಂದು ಛತ್ರದಡಿ ತರಲಾಗಿದೆ. ಕೆರೆಗಳ ಸಂರಕ್ಷಣೆ ಎಂದರೆ ಅವುಗಳ ದುರಸ್ತಿ, ಏರಿಯ ಸುತ್ತ ಪರಿಸರವನ್ನು ವೃದ್ಧಿಸುವುದು, ಹೂಳು ತೆಗೆಯುವುದು, ಸಾಧ್ಯವಿದ್ದ ಕಡೆ ಮನೋರಂಜನೆಗೆ ಅನುಕೂಲ ಕಲ್ಪಿಸುವ ಹೊಣೆಯೂ ಇರುತ್ತದೆ. ಕೆರೆಗಳ ವಿಸ್ತೀರ್ಣದ ಬಗ್ಗೆ ಮತ್ತೆ ಸಮೀಕ್ಷೆ ಮಾಡಿ ಹೊಸ ಮಾಹಿತಿಯ ಮೇರೆಗೆ ಕೆರೆಗಳ ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಗುರಿ.
ಬೆಳ್ಳಂದೂರು ಮತ್ತು ಅದರ ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಎರಡು ಕಟ್ಟಡ ನಿರ್ಮಾಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳನ್ನು ಕಟ್ಟಿವೆ. ಇದನ್ನು ಗಮನಿಸಿದ ರಾಷ್ಟ್ರೀಯ ಹಸುರು ನ್ಯಾಯಾಧೀಕರಣ (ಎನ್.ಜಿ.ಟಿ.) ಆ ಎರಡೂ ನಿರ್ಮಾಣ ಸಂಸ್ಥೆಗಳಿಗೆ ತಲ್ ೧೧೭ ಕೋಟಿ ರೂಪಾಯಿ ಮತ್ತು ೧೩.೫ ಕೋಟಿ ರೂಪಾಯಿ ದಂಡವಿದಿಸಿದೆ. ಒತ್ತುವರಿಮಾಡಿದ ೩.೭ ಎಕರೆ ಕರೆ ಜಾಗವನ್ನು ಹಿಂತಿರುಗಿಸಲು ಸೂಚಿಸಿದೆ. ರಾಜಾಕಾಲುವೆಯ ೫೦ ಮೀಟರ್ ಪಾಸಲೆಯಲ್ಲಿ ಯಾವುದೇ ನಿರ್ಮಾಣ ಮಾಡಬಾರದೆಂದು ಕಟ್ಟಳೆ ಮಾಡಿದೆ. ಇಂಥ ದಿಟ್ಟ ಕ್ರಮದಿಂದ ಮಾತ್ರ ಬೆಂಗಳೂರಿನ ಕೆರೆಗಳನ್ನು ಉಳಿಸಿಕೊಳ್ಳಬಹುದೇನೋ.
——————————————————————————————————————————————-
ಕೃತಿ:ಟಿ. ಜಿ. ಶ್ರೀನಿಧಿ ಲೇಖನಗಳು
ಲೇಖಕರು ಟಿ. ಜಿ. ಶ್ರೀನಿಧಿ
ಕೃತಿಯನ್ನು ಓದಿ
“ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?” – ಡಾ|| ಜಿ. ಎಸ್. ಶಿವರುದ್ರಪ್ಪ
ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ – ಎಂಬುದೇ ಬಹುಜನರ ಆಲೋಚನೆ.
ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.
ಸಾಮಾನ್ಯ ಜನರೂ ಅಷ್ಟೆ: ನಗರ ಪ್ರದೇಶಗಳಲ್ಲಿರುವ ಜನರಿಗೆ ಕಾಡು, ಕಾಡುಪ್ರಾಣಿಗಳೆಂದರೆ ಬೆರಗು ಹುಟ್ಟಿಸುವ ಸಂಗತಿಗಳು; ದಿನನಿತ್ಯದ ಯಾಂತ್ರಿಕ ಬದುಕಿನಿಂದ ಬೇಸತ್ತಾಗ ಎಂದೋ ಒಂದು ದಿನ ಮನತಣಿಸುವ ರಂಜನೆಯ ತಾಣಗಳು.
ಇನ್ನು ಕಾಡಿನ ಸುತ್ತಮುತ್ತ ಇರುವ ಹಳ್ಳಿಗಳ ಜನರಿಗೆ ಕಾಡು – ಅವಶ್ಯಕ ವಸ್ತುಗಳನ್ನು ಉಚಿತವಾಗಿ ಒದಗಿಸುವ ಉಗ್ರಾಣ ಮಾತ್ರ. ಕಾಡುಪ್ರಾಣಿಗಳಿರುವುದೂ ತಮಗಾಗಿ ಅಥವಾ ತಾವು ಬಿಟ್ಟುಕೊಟ್ಟಿರುವುದರಿಂದಲೇ ಎಂಬ ಔದಾರ್ಯ ಬೇರೆ. ತಾವು ಕಾಡಿಗೆ ನುಗ್ಗುವ ಬಗ್ಗೆ ಯಾರೂ ಏನೂ ಕೇಳುವಹಾಗಿಲ್ಲ, ತಮ್ಮಿಂದಾಗಿಯೇ ಕಾಡುಪ್ರಾಣಿಗಳ ವಸತಿಪ್ರದೇಶ ದಿನದಿನಕ್ಕೆ ಕುಗ್ಗತೊಡಗಿರುವುದರ ಬಗೆಗೆ ಚಿಂತೆಯಿಲ್ಲ. ಆದರೆ ಕಾಡುಪ್ರಾಣಿಗಳು ಮಾತ್ರ ಅಪ್ಪಿತಪ್ಪಿಯೂ ನಾಡಿಗೆ ಬರಕೂಡದು.
ಕಾಡು ಮಾನವನ ಅತಿಕ್ರಮಣಕ್ಕಾಗಿಯೇ ಇರುವುದು; ನಾಡಿಗೆ ವನ್ಯಪ್ರಾಣಿ ಬರುವುದು ಮರಣದಂಡನೆಗೆ ಅರ್ಹವಾದ ಅಪರಾಧ – ಎಂದು ಪ್ರಾಣಿಗಳಲ್ಲೇ ಸರ್ವಶ್ರೇಷ್ಠನಾದ ಮಾನವ ನಿರ್ಣಯಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ ಕಾಡಿನ ಪ್ರಾಣಿಗಳು ಮನುಷ್ಯನ ದೃಷ್ಟಿಯಲ್ಲಿ ಉಪದ್ರವಕಾರಿಗಳಾಗಿಬಿಟ್ಟಿವೆ.
ಕೇವಲ ಖುಷಿಗಾಗಿಯೋ, ಮಾಂಸಕ್ಕಾಗಿಯೋ, ಚರ್ಮ-ದಂತ-ಹಾಳುಮೂಳುಗಳಿಗಾಗಿಯೋ ತಮ್ಮವರು ಬೇಟೆಗೆ ತೊಡಗುವುದರ ಬಗೆಗೆ ಅತಿನಿರ್ಲಿಪ್ತವಾಗಿರುವ ಜನತೆಯ ಈ ಇಬ್ಬಂದಿತನ, ಮನುಕುಲದ ಬುಡಕ್ಕೇ ಬೀಳಲಿರುವ ಕೊಡಲಿಪೆಟ್ಟೆಂಬುದನ್ನು ಎಷ್ಟು ಜನ ಅರಿತಿದ್ದಾರೋ ತಿಳಿಯದು.
ಕಾಡಿನ ಒಂದೊಂದು ವೃಕ್ಷಕ್ಕೆ ಬೀಳುತ್ತಿರುವ ಕೊಡಲಿಪೆಟ್ಟಿನೊಡನೆ ವನ್ಯಜೀವಿಗಳ ಉಸಿರೂ ಕುಗ್ಗತೊಡಗಿದೆ. ಬರಗಾಲ, ಭೂಕುಸಿತ, ಪ್ರವಾಹ, ಮಣ್ಣಿನ ಸವಕಳಿ, ಅಣೆಕಟ್ಟೆಗಳಲ್ಲಿ ತುಂಬಿದ ಹೂಳು – ಹೀಗೆ ಹಲವು ಹತ್ತು ರೂಪಗಳಲ್ಲಿ ಪ್ರಕೃತಿ ತಾನು ಸೃಷ್ಟಿಸಿರುವ ಅತಿಬುದ್ಧಿವಂತ ಪ್ರಾಣಿಯ ಅವಿವೇಕಕ್ಕೆ ಸಾಕ್ಷಿಗಳನ್ನು ಮುಂದಿಡುತ್ತಿದೆ.
ಸಹನೆ, ಮಾನವೀಯತೆ, ದಯೆಗಳು ಒತ್ತಟ್ಟಿಗಿರಲಿ. ತಮ್ಮ ಜೀವನಕ್ಕೆ ಮೂಲಾಧಾರವಾದ ಪ್ರಾಣವಾಯು, ಜಲ, ಆಹಾರ, ಔಷಧಗಳ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ವನಸಂಪತ್ತು ಶಾಶ್ವತ ಸಂಪನ್ಮೂಲವಲ್ಲ; ಈ ಸಂಪತ್ತು ಉಳಿಯಬೇಕಾದರೆ ಕಾಡುಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಸತ್ಯದ ಅರಿವಿನಿಂದಾದರೂ ವನ-ವನ್ಯಜೀವಿಗಳ ಬಗೆಗೆ ಒಂದಿಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ.
ನಮ್ಮ ಪೂರ್ವಿಕರು ಹಾವು, ಗರುಡ, ನವಿಲು, ಹುಲಿ, ಆನೆ ಮೊದಲಾಗಿ ಸಕಲ ವನ್ಯಜೀವಿಗಳಿಗೂ ದೈವಿಕ ನೆಲೆಯಲ್ಲಿ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದರು; ನಾಗರಬನ, ದೇವರಕಾಡುಗಳಂಥ ನೆಲೆಗಳನ್ನು ರೂಪಿಸಿದ್ದರು. ಮಾನವೀಯತೆ ಮರೆತರೆ ಹೋಗಲಿ, ದೈವಭೀತಿಯಿಂದಾದರೂ ಕಾಡುಪ್ರಾಣಿಗಳನ್ನು ಉಳಿಸಲೆಂಬ ಆಶಯ ಅವರದ್ದಾಗಿತ್ತು. ಆದರೆ ಈಗ, ಮಾನವನ ನೈತಿಕ ನೆಲೆಯೇ ಕುಸಿಯುತ್ತಿರುವಾಗ ಧಾರ್ಮಿಕ ಕಟ್ಟುಪಾಡನ್ನು ಲೆಕ್ಕಿಸುವುದೆಲ್ಲಿ ಬಂತು?
ಕೃಷ್ಣಮೃಗಗಳ (ಬ್ಲಾಕ್ಬಕ್) ಬಗೆಗೆ ಆತ್ಮೀಯತೆ ತೋರುವ ರಾಜಸ್ಥಾನದ ಬಿಷ್ಣೋಯಿ ಜನಾಂಗದವರಾಗಲಿ, ಹೆಜ್ಜಾರ್ಲೆಗಳ (ಪೆಲಿಕಾನ್) ಬಗೆಗೆ ಅಪಾರ ಮಮತೆಯುಳ್ಳ ಕೊಕ್ಕರೆಬೆಳ್ಳೂರಿನ ಜನತೆಯಾಗಲಿ ಇಂದು ಎಲ್ಲರ ಆದರ್ಶವಾಗಬೇಕಿದೆ. ವನ್ಯಜೀವಿಗಳ ಬಗೆಗೆ ನಮ್ಮನಿಮ್ಮಲ್ಲಿ ಪ್ರೀತಿಮೂಡದ ಹೊರತು ವನಸಂಪತ್ತಿನ ರಕ್ಷಣೆ ಅಸಾಧ್ಯ.
ನಮ್ಮ ಸ್ವಾರ್ಥಲಾಲಸೆಗಳನ್ನು ಬದಿಗಿರಿಸಿ ಅರಣ್ಯದ ಪರವಾಗಿ, ಕಾಡುಪ್ರಾಣಿಗಳ ಪರವಾಗಿ ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದರಿಂದ ನಾವು ಅವುಗಳಿಗೇನೋ ಉಪಕಾರ ಮಾಡುತ್ತಿರುವೆವೆಂದು ಭ್ರಮಿಸಬೇಕಾಗಿಲ್ಲ. ಆದರೆ ಇದು, ನಮ್ಮ ಪೀಳಿಗೆಯ ಬಗೆಗೆ ಪೂರ್ವಿಕರು ತೋರುತ್ತಿದ್ದ ಕಾಳಜಿಯನ್ನೇ ಮುಂದುವರೆಸುತ್ತಿರುವುದರ ಶುಭಸೂಚನೆ ಎಂದು ಧಾರಾಳವಾಗಿ ಹೇಳಬಹುದು.
ಪ್ರಸಿದ್ಧ ಪರಿಸರಶಾಸ್ತ್ರಜ್ಞ ಡಾ| ಎಚ್. ಆರ್. ಕೃಷ್ಣಮೂರ್ತಿಯವರು ಹೇಳುವಂತೆ “ಈ ಲೋಕದಿಂದ ಮನುಷ್ಯವರ್ಗ ಅಳಿದುಹೋದರೆ ವನ್ಯಜೀವಿಗಳು ತಮ್ಮ ಪಾಡಿಗೆ ತಾವು ಆರಾಮವಾಗಿ ಬದುಕಿಯಾವು; ವನ್ಯಜೀವಿಗಳೇನಾದರೂ ಈ ಪ್ರಪಂಚದಿಂದ ಕಾಣೆಯಾದರೆ ಮಾತ್ರ ಅವುಗಳ ಹಿಂದೆಯೇ ಮನುಷ್ಯನಿಗೂ ವಿನಾಶ ಖಂಡಿತ.” ಈ ಸತ್ಯವನ್ನು ಮನಗಂಡು ವನ್ಯಪ್ರಾಣಿಗಳನ್ನೂ ಅವುಗಳ ನೆಲೆಯಾದ ಅರಣ್ಯಗಳನ್ನೂ ಸಂರಕ್ಷಿಸಬೇಕಾದುದು ನಮ್ಮ ತಕ್ಷಣದ ಕರ್ತವ್ಯ. ಅರಣ್ಯದ ಬಗೆಗಿನ ನಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಳ್ಳುವುದೇ ಈ ನಿಟ್ಟಿನಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ.
ಪ್ರತಿ ವರ್ಷ ಫೆಬ್ರುವರಿ 28ರಂದು ನಾವು ಭಾರತೀಯರು ‘ವಿಜ್ಞಾನ ದಿನ’ವನ್ನು ಆಚರಿಸುತ್ತೇವೆ. ಏಕೆಂದರೆ ಫೆಬ್ರುವರಿ 28 ಅನ್ನೋದು ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನ. ಬೆಳಕಿನ ಪ್ರತಿಫಲನದ ಕುರಿತು ಬೆಂಗಳೂರಿನ ಪ್ರೊ. ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ ‘ರಾಮನ್ ಎಫೆಕ್ಟ್’ ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ಅವರಿಗೆ ಹಾಗೂ ನಮ್ಮ ದೇಶಕ್ಕೆ ವಿಜ್ಞಾನದ ಮೊದಲ ನೊಬೆಲ್ ಪ್ರಶಸ್ತಿಯನ್ನೂ ಅದು ತಂದು ಕೊಟ್ಟಿದೆ. ಅದರ ನೆನಪಿಗಾಗಿ ಫೆಬ್ರುವರಿ 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ವೈಜ್ಞಾನಿಕ ಮನೋಭಾವ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರಬೇಕು ಎಂಬ ಅಂಶವನ್ನು ನಾವು ಭಾರತೀಯರು ನಮ್ಮ ಸಂವಿಧಾನದಲ್ಲೇ ಅಳವಡಿಸಿಕೊಂಡಿದ್ದೇವೆ. ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ದಿನ ಫೆಬ್ರುವರಿ 28. ನೆನಪಿಡಬೇಕಾದ ಸಂಗತಿ ಏನೆಂದರೆ, ಫೆಬ್ರುವರಿ 28 (1928) ಸರ್ ಸಿ.ವಿ. ರಾಮನ್ನರ ಹುಟ್ಟುಹಬ್ಬ ಅಲ್ಲ, ಆದರೆ ಅವರ ಆ ಮಹತ್ವದ ಸಂಶೋಧನೆ ಪ್ರಕಟವಾದ ದಿನ. ಅದು ಪ್ರಕಟವಾಗಿ ಎರಡು ವರ್ಷಗಳ ನಂತರ, 1930ರಲ್ಲಿ ಸರ್ ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಹಾಗಾಗಿ ಫೆಬ್ರುವರಿ 28 ರಾಮನ್ನರನ್ನು ಮತ್ತು ವಿಜ್ಞಾನವನ್ನು ಗೌರವಿಸಬೇಕಾದ ದಿನ.
ವಿಜ್ಞಾನವನ್ನು ನಾವು ಯಾಕೆ ಗೌರವಿಸಬೇಕು ಅಂದರೆ, ಅದು ನಮ್ಮನ್ನು ನಾಗರಿಕರನ್ನಾಗಿ ಮಾಡಿದೆ. ನಮ್ಮಲ್ಲಿ ‘ವೈಜ್ಞಾನಿಕ ಶೋಧ ಬುದ್ಧಿ’ ಇಲ್ಲದೇ ಇದ್ದಿದ್ದರೆ ನಾವೂ ಇತರ ಪ್ರಾಣಿಗಳ ಹಾಗೆ ಗುಹೆಯಲ್ಲೊ ಮರದ ಪೊಟರೆಯಲ್ಲೊ, ಬಂಡೆಗಳ ಸಂದುಗಳಲ್ಲೊ ಚಳಿಗೆ ಮಳೆಗೆ, ರೋಗರುಜಿನೆಗಳಿಗೆ ತುತ್ತಾಗುತ್ತ ಹೇಗೋ ಬದುಕುತ್ತಿದ್ದೆವು.
ಆಧುನಿಕ ವಿಜ್ಞಾನ ನಮಗೆ ಹೇಗೆಲ್ಲ ಸಹಾಯ ಮಾಡಿದೆ ಅನ್ನೋದನ್ನು ನೋಡಬೇಕಾದರೆ ನಾವು ಹಿಂದಿನ ಕಾಲದ ರಾಜ ಮಹಾರಾಜರ ಬದುಕನ್ನು ಹೋಲಿಸಿ ನೋಡಬೇಕು. ಎಷ್ಟೇ ಬಲಾಢ್ಯ ರಾಜನಾಗಿದ್ದರೂ ಅವನಿಗೆ ಹಲ್ಲು ನೋವು ಬಂದರೆ ವಾರಗಟ್ಟಲೆ, ತಿಂಗಳುಗಟ್ಟಲೆ ತೀರ ದುರ್ಬಲನಾಗುತ್ತಿದ್ದ. ಕುದುರೆ ಅಥವಾ ರಥದ ಮೇಲೆ ಹೆಚ್ಚೆಂದರೆ ದಿನಕ್ಕೆ 15-20 ಮೈಲು ಸವಾರಿ ಮಾಡಬಹುದಿತ್ತು. ಬೆನ್ನು ನೋವು ಬಂದರೆ ಅಲ್ಲೇ ವಾರಗಟ್ಟಲೆ ತಿಂಗಳುಗಟ್ಟಲೆ ನೋವಿನಿಂದ ನರಳಬೇಕಿತ್ತು. 50-60 ವರ್ಷಕ್ಕೆ ವೃದ್ಧಾಪ್ಯ ಬಂತೆಂದರೆ ಹಲ್ಲುಗಳು ಉದುರಿ, ಕಣ್ಣೆಲ್ಲ ಮಂಜಾಗಿ, ಮೊಣಕಾಲು ನೋವು, ಕಿವುಡುತನ ಏನೆಲ್ಲ ಬರುತ್ತಿತ್ತು. ಸಿಡುಬು, ಪ್ಲೇಗಿನಂಥ ಮಹಾಮಾರಿ ಬಂದರಂತೂ ಎಂಥ ಮಹಾಸೈನ್ಯವನ್ನೂ ಹೊಸೆದು ಹಾಕುತ್ತಿತ್ತು.
ಇಂದಿನ ಕಾಲದ ತೀರ ಸಾಮಾನ್ಯ ಜನರೂ ಹಿಂದಿನ ಕಾಲದ ಮಹಾರಾಜರಿಗಿಂತ ಸುಖಿಗಳಾಗಿದ್ದೇವೆ. ಏನೆಲ್ಲ ರೋಗ ರುಜಿನಗಳನ್ನು ನಾವು ಜೈಸಿದ್ದೇವೆ. ಎಷ್ಟೆಲ್ಲ ಬಗೆಯ ಹಾವು, ಹುಲಿ, ಚೇಳು, ಹುಚ್ಚುನಾಯಿ, ಬೆಂಕಿ, ಬರಗಾಲ, ಚಳಿ, ಎಲ್ಲವನ್ನೂ ಜೈಸಿದ್ದೇವೆ. ಹಸಿವೆಯನ್ನು ದೂರ ಅಟ್ಟಿದ್ದೇವೆ. ಅದೆಲ್ಲ ವಿಜ್ಞಾನ- ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇಡೀ ಜಗತ್ತನ್ನು ನಾವು ಕೂತಲ್ಲೇ ಸಂಪರ್ಕಿಸುತ್ತೇವೆ; ಬೇಕೆಂದರೆ ಒಂದು ದಿನದಲ್ಲೇ ಸುತ್ತಿ ಬರುತ್ತೇವೆ.
ಹಾಗೆ ನೋಡಿದರೆ ನಾವು ತೀರ ದುರ್ಬಲ ಜೀವಿಗಳು. ತೀರ ಪರಾವಲಂಬಿಗಳು. ಒಂದು ಹುಲ್ಲು ಗರಿಕೆಯನ್ನೇ ನೋಡಿ: ಅದಕ್ಕೆ ತುಸು ಬಿಸಿಲು, ತುಸು ನೀರು, ತುಸು ಮಣ್ಣು ಇದ್ದರೆ ಸಾಕು ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಬೀದಿನಾಯಿಗೆ ಹೊಟ್ಟೆಶೂಲೆ ಬಂದರೆ ಅದು ಎಂಥದ್ದೊ ಸಸ್ಯವನ್ನು ತಿಂದು ವಾಂತಿ ಮಾಡಿಕೊಂಡು ಸರಿಯಾಗುತ್ತದೆ. ಗಾಯವಾದರೆ ಅದು ತನ್ನದೇ ಜೊಲ್ಲಿನಿಂದಲೋ ಅಥವಾ ಬೂದಿಗುಡ್ಡೆಯ ದೂಳಿನಿಂದಲೋ ತನ್ನ ಗಾಯವನ್ನು ತಾನೇ ವಾಸಿ ಮಾಡಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಇರುವೆ ಗೆದ್ದಲುಗಳಿಗೆ ಮಳೆ ಬರುವ ಸೂಚನೆ ಮೊದಲೇ ಗೊತ್ತಾಗುತ್ತದೆ. ವನ್ಯಪ್ರಾಣಿಗಳಿಗೆ ಭೂಕಂಪನದ ಮುನ್ಸೂಚನೆ ಮೊದಲೇ ಗೊತ್ತಾಗುತ್ತದೆ. ತಿಮಿಂಗಲುಗಳಿಗೆ ಸುನಾಮಿಯ ಸೂಚನೆ ಗೊತ್ತಾಗುತ್ತದೆ. ಪಾತರಗಿತ್ತಿಗಳಿಗೆ ಸುಂಟರಗಾಳಿಯ ಮುನ್ಸೂಚನೆ ಸಿಗುತ್ತದೆ. ಮರದ ಮೇಲೆ ಗೂಡು ಕಟ್ಟಿಕೊಂಡ ಪಕ್ಷಿಗೆ ಹಾವು ಬರುತ್ತಿದೆ ಎಂಬುದು ನಡುರಾತ್ರಿಯಲ್ಲೂ ವಾಸನೆಯ ಮೂಲಕವೇ ಗೊತ್ತಾಗುತ್ತದೆ.
ನಮಗೆ ಅಂಥ ಯಾವ ಸೂಚನೆಗಳೂ ಸಿಗುವುದಿಲ್ಲ; ನಮ್ಮ ಸಂವೇದನೆಗಳೆಲ್ಲ ಮೊಂಡಾಗಿವೆ. ಸವೆದುಹೋಗಿವೆ. ಆದರೆ ನಮ್ಮ ಬುದ್ಧಿಶಕ್ತಿ ಚುರುಕಾಗಿದೆ. ಹಿಂದಿನ ಕಾಲದಲ್ಲಿ ರಾವಣಾಸುರ ಅಷ್ಟ ದಿಕ್ಪಾಲಕರನ್ನು ತನ್ನ ಊಳಿಗದಲ್ಲಿ ಇಟ್ಟುಕೊಂಡಿದ್ದ ಎಂಬ ಕತೆಯನ್ನು ಕೇಳಿದ್ದೇವೆ. ನಾವು ಇಂದು ಅಷ್ಟ ದಿಕ್ಪಾಲಕರನ್ನು, ಪಂಚ ಮಹಾಭೂತಗಳನ್ನು ನಮಗೆ ಬೇಕೆಂದಂತೆ ದುಡಿಸಿಕೊಳ್ಳುತ್ತೇವೆ. ಬೆಂಕಿಯನ್ನು ನಮಗಿಷ್ಟ ಬಂದ ಹಾಗೆ ಪಳಗಿಸುತ್ತೇವೆ. ಬೆಂಕಿಯ ಉಗ್ರಜ್ವಾಲೆಯಲ್ಲಿ ಮರಳನ್ನೂ ಕರಗಿಸಿ ಅದರಿಂದ ಗಾಜನ್ನು ಸೃಷ್ಟಿ ಮಾಡಿ ಅದರಿಂದ ಸೂಕ್ಷ್ಮದರ್ಶಕ, ದೂರದರ್ಶಕಗಳನ್ನು ತಯಾರಿಸಿ ಅವುಗಳ ಮೂಲಕ ಜಗತ್ತನ್ನು ನೋಡುತ್ತೇವೆ, ನಿಯಂತ್ರಿಸುತ್ತೇವೆ. ಗಾಳಿಯನ್ನು ನಮಗೆ ಬೇಕೆಂದಾಗ ಸೃಷ್ಟಿಸಿ ಬೇಕಾದ ದಿಕ್ಕಿಗೆ ತಿರುಗಿಸಿ ವಿಮಾನಗಳನ್ನು ಓಡಿಸುತ್ತೇವೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತೇವೆ, ಯಂತ್ರಗಳನ್ನು ನಡೆಸುತ್ತೇವೆ. ನಮ್ಮ ಬದುಕಿಗೆ ಅಪಾಯ ತರಬಹುದಾದ ಎಲ್ಲ ಅನಿಷ್ಟಗಳನ್ನೂ ದೂರ ಮಾಡುತ್ತೇವೆ. ನಮ್ಮ ಎಲ್ಲ ದೈಹಿಕ ದೌರ್ಬಲ್ಯಗಳನ್ನೂ ಮೆಟ್ಟಿ ನಾವು ಅತ್ಯಂತ ಪ್ರಬಲ ಜೀವಿಯಾಗಿದ್ದೇವೆ.
ಅವೆಲ್ಲ ವಿಜ್ಞಾನದ ಮೂಲಕ ನಮಗೆ ಲಭಿಸಿದ ವರದಾನವಾಗಿದೆ.
ಆದರೂ ನಮಗೆ ವಿಜ್ಞಾನವೆಂದರೆ ತೀರ ಅರ್ಥವಾಗದ ವಿದ್ಯೆ, ತೀರ ಕ್ಲಿಷ್ಟ ವಿಷಯ ಎಂಬ ಭಾವನೆ ಇದೆ. ಅದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅದರಿಂದ ಆದಷ್ಟೂ ದೂರ ಇರಲು ಯತ್ನಿಸುತ್ತೇವೆ. ಮಕ್ಕಳ ಪಾಠಗಳಲ್ಲಿ ವಿಜ್ಞಾನದ ವಿಷಯ ಬಂದಾಗ ಹೇಗೋ ಚಡಪಡಿಸುತ್ತ, ಅವರು ಕೇಳುವ ಪ್ರಶ್ನೆಗಳಿಗೆ ಏನೋ ತೋಚಿದ ಉತ್ತರ ಹೇಳಿ ಜಾರಿಕೊಳ್ಳುತ್ತೇವೆ.
ವಿಜ್ಞಾನ ಬೆಳೆದಿದ್ದೇ ಪ್ರಶ್ನೆಗಳನ್ನು ಕೇಳುವುದರಿಂದ. ಹಾಗೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಹುಡುಕುವುದರಿಂದ.
ದೋಸೆಯಲ್ಲಿ ಏಕೆ ತೂತುಗಳಾಗುತ್ತವೆ? ಹುಳಿ ಬಂದ ಮೊಸರಿನಿಂದ ಏಕೆ ಗುಳ್ಳೆಗಳು ಹೊರಕ್ಕೆ ಬರುತ್ತವೆ? ನಂದಿನಿ ಮೊಸರಿನ ಪ್ಯಾಕೆಟ್ಟು ಯಾಕೆ ಕೆಲವೊಮ್ಮೆ ಉಬ್ಬಿಕೊಳ್ಳುತ್ತದೆ? ಈ ಪ್ರಶ್ನೆಗಳು ತಲೆಯಲ್ಲಿ ಹೊಕ್ಕರೆ, ಅದಕ್ಕೆ ಉತ್ತರ ಸಿಗುವವರೆಗೆ ಆ ಪ್ರಶ್ನೆ ನಮ್ಮನ್ನು ಕಾಡುತ್ತಿದ್ದರೆ, ಅದರಿಂದ ವಿಜ್ಞಾನ ಹೊಮ್ಮುತ್ತದೆ.
ಇಂಥ ಸರಳ ಪ್ರಶ್ನೆಗಳ ಹಿಂದೆ ಬಹುದೊಡ್ಡ ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಹಿಂದೆ ಆಗಿಹೋದ ಮಹಾನ್ ವಿಜ್ಞಾನಿಗಳೆಲ್ಲ ಛಲ ಬಿಡದೆ ಇಂಥ ಸರಳ ಪ್ರಶ್ನೆಗಳ ಬೆನ್ನಟ್ಟಿ ಪ್ರಕೃತಿಯ ಮಹಾನ್ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸರ್ ಸಿವಿ ರಾಮನ್ ಅವರು ತಮಗೆ ತಾವೇ ಕೇಳಿಕೊಂಡ ಸರಳ ಪ್ರಶ್ನೆ ಏನಿತ್ತು ಗೊತ್ತೆ? ‘ಆಕಾಶ ಏಕೆ ನೀಲಿ?’ ನೀಲಿ ಇದೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದರೆ ಅದು ಯಾಕೆ ನೀಲಿ ಇದೆ ಎಂದು ಯಾರೂ ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ಕೆಲವರ ತಲೆಯಲ್ಲಿ ಆ ಪ್ರಶ್ನೆ ಹುಟ್ಟಿತ್ತೇನೊ. ಆದರೆ ಛಲಕ್ಕೆ ಬಿದ್ದಂತೆ ಅದಕ್ಕೆ ಉತ್ತರ ಹುಡುಕಲು ಯತ್ನಿಸಲಿಲ್ಲ. ನಿಸರ್ಗದ ಬಹಳಷ್ಟು ಕ್ರಿಯೆಗಳೆಲ್ಲ ನಮ್ಮಲ್ಲಿ ಪ್ರಶ್ನೆಗಳನ್ನೇ ಸೃಷ್ಟಿಸುವುದಿಲ್ಲ. ತೆಂಗಿನ ಮರದಿಂದ ಕಾಯಿ ಕೆಳಕ್ಕೆ ಬಿದ್ದರೆ ‘ಯಾಕೆ ಬಿತ್ತು?’ ಅಂತ ನಾವು ಎಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಐಸಾಕ್ ನ್ಯೂಟನ್ ಅಂಥ ಒಂದು ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತ ಹೋಗಿದ್ದರಿಂದಲೇ ಶ್ರೇಷ್ಠ ವಿಜ್ಞಾನಿ ಅನ್ನಿಸಿಕೊಂಡ.
ಪುಟ್ಟ ಮಕ್ಕಳು ಅಂಥ ನೂರಾರು ಪ್ರಶ್ನೆಗಳನ್ನು ಕೇಳುತ್ತಿರುತ್ತವೆ. ಉತ್ತರ ನಮಗೂ ಸ್ಪಷ್ಟವಾಗಿ ಗೊತ್ತಿರುವುದಿಲ್ಲ ಅಥವಾ ಉತ್ತರಿಸುವ ತಾಳ್ಮೆಯೇ ನಮಗೆ ಇರುವುದಿಲ್ಲ. ಈಗಿನ ದಿನಗಳಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳು ಸುಲಭವಾಗಿ ಸಿಗುತ್ತವೆ. ಈಗಂತೂ ನಿಮ್ಮ ಸ್ಮಾರ್ಟ್ ಫೋನ್ನಲ್ಲೇ ಒಂದೆರಡು ನಿಮಿಷಗಳಲ್ಲಿ ಉತ್ತರಗಳನ್ನು ಪತ್ತೆ ಹಚ್ಚಬಹುದು. ತುಸು ತಾಳ್ಮೆ ವಹಿಸಿ ಉತ್ತರ ಹುಡುಕಿ ಮಕ್ಕಳ ಕುತೂಹಲ ತಣಿಸಲು ಯತ್ನಿಸಿದರೆ ಮಗುವಿನ ಶೋಧಬುದ್ಧಿಗೆ ಸಾಣೆ ಹಿಡಿದಂತಾಗುತ್ತದೆ; ಮಿದುಳು ಚುರುಕಾಗುತ್ತದೆ. ತರ್ಕಶಕ್ತಿ ಹೆಚ್ಚುತ್ತದೆ.
ಅಂಗಿ ತೊಟ್ಟ ನಂತರ ನಾವು ಬಟನ್ ಹಾಕುತ್ತೇವೆ. ಅಂದರೆ ವೃತ್ತಾಕಾರದ ಬಟನ್ನನ್ನು ಒಂದು ಸೀಳುರಂಧ್ರದ ಮೂಲಕ ಅಡ್ಡಡ್ಡ ತೂರಿ ನಂತರ ಅದನ್ನು ಬಟನ್ನಿನ ಮುಖ ತಿರುಗಿಸುತ್ತೇವೆ. ಅಂಗಿ, ಚಡ್ಡಿ, ಬ್ಲೌಸ್, ಬ್ಯಾಗ್ ಮುಂತಾದವುಗಳ ಎರಡು ಭಾಗವನ್ನು ಜೋಡಿಸುವ ಅತ್ಯಂತ ಸರಳ ವಿಧಾನ ಅದು. ಆದರೆ ಅದರ ಹಿಂದಿನ ಚಮತ್ಕಾರವನ್ನು ನಾವು ಗಮನಿಸಿದ್ದೇವೆಯೆ? ಮನುಷ್ಯ ಬಟ್ಟೆ ತೊಡಲು ಆರಂಭಿಸಿ ಐದು ಸಾವಿರ ವರ್ಷಗಳಾದರೂ ಅಂಥ ಉಪಾಯ ಯಾರಿಗೂ ಹೊಳೆದಿರಲಿಲ್ಲ. ನಮ್ಮ ದೇಶದಲ್ಲಂತೂ 1930ರವರೆಗೂ ಅಂಗಿಗೆ ಅಂಥ ಬಟನ್ ಇರಲೇ ಇಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು, ಮಹಿಳೆಯರಿಗೆ ರವಿಕೆಯೇ ಇರಲಿಲ್ಲ. ಯುರೋಪಿನ ಜನರು ನಮ್ಮಲ್ಲಿಗೆ ಬಂದ ನಂತರವೇ ನಮಗೆ ಬಟನ್ ಪರಿಚಯ ಆದದ್ದು. ಸಣ್ಣ ಸಣ್ಣ ಸಂಶೋಧನೆಗಳು ಇಡೀ ಮಾನವಕುಲದ ಬದುಕನ್ನೇ ಬದಲಾಯಿಸುತ್ತವೆ ನೋಡಿ.
ಹೊಲಿಗೆ ಯಂತ್ರ ಅಸ್ತಿತ್ವಕ್ಕೆ ಬರಲು ಬಹುಮುಖ್ಯ ಕಾರಣ ಏನು ಗೊತ್ತೆ? ಸೂಜಿಯ ಚೂಪು ತುದಿಯಲ್ಲೇ ರಂಧ್ರ ಮಾಡಬೇಕು ಎಂಬ ಆಲೋಚನೆ ಈಲಿಯಾಸ್ ಹೋವ್ ಎಂಬಾತನಿಗೆ ಹೊಳೆಯಿತು. ಅದುವರೆಗೆ ಎಷ್ಟೆಲ್ಲ ಬಗೆಯ ಯಂತ್ರಗಳನ್ನು ತಯಾರಿಸಿ ಎಲ್ಲರೂ ವಿಫಲ ಆಗಿದ್ದರು. ಸೂಜಿಯ ಒಂದು ಕಣ್ಣಿನ ಮೂಲಕ ಜಗತ್ತೇ ಬದಲಾಯಿತು.
ವೆಲ್ಕ್ರೋ ಝಿಪ್ ಅಂದರೆ ನಮಗೆಲ್ಲ ಗೊತ್ತೇ ಇದೆ. ಚೀಲದ ಬಾಯಿಯನ್ನು, ಬೂಟಿನ ಬೆಲ್ಟನ್ನು, ಪಾಕೀಟನ್ನು ಪರ್ ಎಂದು ಎಳೆದು ಬಿಚ್ಚುವ ಅಥವಾ ಬಂದ್ ಮಾಡುವ ಸರಳ ಸಾಧನ. ಅದು 1970ರವರೆಗೆ ಯಾರಿಗೂ ಗೊತ್ತೇ ಇರಲಿಲ್ಲ.
ಜಾರ್ಜ್ ಡಿ ಮೆಸ್ಟ್ರಲ್ ಎಂಬ ಇಲೆಕ್ಟ್ರಾನಿಕ್ ಎಂಜಿನಿಯರ್ ಅಲ್ಲೆಲ್ಲೋ ಸ್ವಿಸ್ ಪರ್ವತ ಏರುತ್ತಿದ್ದಾಗ ಅವನ ಬಟ್ಟೆಗೆ ಹಾಗೂ ಅವನೊಂದಿಗಿದ್ದ ನಾಯಿಯ ಮೈಗೆಲ್ಲ ಮುಳ್ಳುಮುಳ್ಳಿನ ಬೀಜಗಳು ಅಂಟಿಕೊಂಡಿದ್ದವು. ಅದು ಹೇಗೆ ಅಂಟಿದೆ ಎಂದು ಸೂಕ್ಷ್ಮವಾಗಿ ನೋಡುತ್ತಿದ್ದಾಗ ಉತ್ತರ ಹೊಳೆಯಿತು: ಬೀಜದ ಮೇಲಿರುವ ಕೊಕ್ಕೆಯಂಥ ಮುಳ್ಳುಗಳು ಈತನ ಬಟ್ಟೆಯ ನವಿರು ದಾರಕ್ಕೆ ಸಿಲುಕಿಕೊಳ್ಳುತ್ತಿದ್ದವು. ಈತ ಮನೆಗೆ ಬಂದವನೇ ತಾನೂ ಮಿದು ಪ್ಲಾಸ್ಟಿಕ್ನಿಂದ ಅಂಥದ್ದೇ ಕೊಕ್ಕೆಗಳನ್ನು ತಯಾರಿಸಿದ. ಬಟ್ಟೆಯ ನೇಯ್ಗೆಗೆ ಅದು ಸಿಲುಕಿಕೊಳ್ಳುವುದನ್ನು ನೋಡಿದ. ಅಂಥದ್ದೇ ನೇಯ್ಗೆ ಇರುವ ಪ್ಲಾಸ್ಟಿಕ್ ಮತ್ತು ಕೊಕ್ಕೆಗಳನ್ನು ತಯಾರಿಸಿದ. ಇಪ್ಪತ್ತು ವರ್ಷಗಳ ಸತತ ಪರಿಶ್ರಮದಿಂದ ರೂಪಿಸಿದ ಝಿಪ್ ಸಾಧನ ಇಂದು ಎಲ್ಲೆಡೆ ಬಳಕೆಯಾಗುತ್ತಿದೆ.
ಪ್ರಶ್ನೆ ಕೇಳುವುದರಿಂದಲೂ ವಿಜ್ಞಾನ ಬೆಳೆಯುತ್ತದೆ. ನಿಸರ್ಗದಲ್ಲಿ ವೈಚಿತ್ರ್ಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದನ್ನೇ ಅನುಕರಿಸುವುದರಿಂದಲೂ ವಿಜ್ಞಾನ ತಂತ್ರಜ್ಞಾನ ವಿಕಾಸವಾಗುತ್ತದೆ. ಹಸುಗಳಿಗೆ ಸಿಡುಬು ಬಂದರೂ ಅದು ಯಾಕೆ ಹಸುಗಳ ಪ್ರಾಣ ತೆಗೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಎಡ್ವರ್ಡ್ ಜೆನ್ನರ್ ಎಂಬಾತ ಸಿಡುಬಿನ ಲಸಿಕೆಯನ್ನು ಕಂಡು ಹಿಡಿದ. ಅಕ್ಷರಶಃ ಕೋಟಿಗಟ್ಟಲೆ ಜನರ ಪ್ರಾಣ ಉಳಿಸಿದ. ಅದೇ ರೀತಿ ಅಲೆಕ್ಸಾಂಡರ್ ಫ್ಲೆಮಿಂಗ್ ಎಂಬಾತ ‘ಪೆನಿಸಿಲಿನ್’ ಎಂಬ ಆಂಟಿ ಬಯಾಟಿಕ್ (ಜೀವಿರೋಧಕ ಅಥವಾ ಪ್ರತಿಜೈವಿಕ) ಔಷಧವನ್ನು ಆಕಸ್ಮಿಕವಾಗಿ ಪತ್ತೆ ಮಾಡಿದ್ದಕ್ಕೂ ಇಂಥದ್ದೇ ರೋಚಕ ಕತೆಯಿದೆ. ಕಣ್ಣಿಗೆ ಕಂಡದ್ದನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡುವ ಕಾಳಜಿ, ಕುತೂಹಲ ಇದ್ದರೆ ಅದೇ ವೈಜ್ಞಾನಿಕ ಅನ್ವೇಷಣೆ ಎನ್ನಿಸಿಕೊಳ್ಳುತ್ತದೆ.
ಅಂಥ ವೈಜ್ಞಾನಿಕ ಮನೋವೃತ್ತಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು ಎಂಬುದನ್ನು ಪ್ರಚುರಗೊಳಿಸಲೆಂದೇ ಫೆಬ್ರುವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಶಾಲೆಗಳಲ್ಲಿ, ವೈಜ್ಞಾನಿಕ ಸಂಘ ಸಂಸ್ಥೆಗಳಲ್ಲಿ ಹಾಗೂ ಲ್ಯಾಬೊರೇಟರಿಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ತಜ್ಞರು ಭಾಷಣ ಮಾಡುತ್ತಾರೆ; ಮಕ್ಕಳಿಗೆ ಪ್ರಯೋಗಶಾಲೆಗಳನ್ನು ತೋರಿಸುತ್ತಾರೆ. ದೂರದರ್ಶಕದ ಮೂಲಕ ಗ್ರಹ ತಾರೆಗಳ ವೀಕ್ಷಣೆ ಮಾಡಿಸುತ್ತಾರೆ.
ಅವೆಲ್ಲ ಸರಿ. ಆದರೆ ಜನಸಾಮಾನ್ಯರು ಮಾತ್ರ ಈ ವಿಜ್ಞಾನ ಹಬ್ಬದಿಂದ ದೂರವೇ ಉಳಿಯುತ್ತಾರೆ.
ಹಾಗೆ ನೋಡಿದರೆ, ಶಾಲೆ ಕಾಲೇಜು, ಪ್ರಯೋಗಶಾಲೆಗಳಿಗಿಂತ ಇಂದು ವೈಜ್ಞಾನಿಕ ಮನೋಭಾವವನ್ನು ಸಾಮಾನ್ಯ ಜನರಲ್ಲಿ ಬಿತ್ತಬೇಕಾದ ಅಗತ್ಯವಿದೆ. ಏಕೆಂದರೆ ನಾನಾ ಬಗೆಯ ಅವೈಜ್ಞಾನಿಕ ಮೂಢನಂಬಿಕೆಗಳಿಗೆ ಕಟ್ಟುಬಿದ್ದು ಜನರು ಜೀವನದಲ್ಲಿ ಏನೆಲ್ಲ ಕಷ್ಟನಷ್ಟ ಅನುಭವಿಸುತ್ತಿರುತ್ತಾರೆ. ಈಗಲೂ ನಿಧಿ ಶೋಧಕ್ಕೆಂದು ನರಬಲಿ ಕೊಡುವ ಮೂಢರ ಬಗ್ಗೆ ನಮ್ಮ ದೇಶದಲ್ಲಿ ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ರಸ್ತೆಬದಿಯಲ್ಲಿ ಗಿಣಿಶಾಸ್ತ್ರ ಹೇಳುವ, ನೋವಿನ ತೈಲ ಮಾರುವ ಢೋಂಗಿಗಳು ಕಂಡುಬರುತ್ತಾರೆ. ರೋಗರುಜಿನೆ ಬಂದಾಗ ಇಲ್ಲವೆ ಹಾವು-ಚೇಳು ಕಚ್ಚಿದಾಗ ಡಾಕ್ಟರಿಗೆ ತೋರಿಸುವ ಬದಲು ಬಾಬಾಗಳನ್ನೊ, ಮಂತ್ರವಾದಿಗಳನ್ನೊ, ತೀರ್ಥ ಪ್ರಸಾದ, ಹರಕೆಗಳನ್ನೊ ನಂಬಿ ಮೋಸ ಹೋಗುತ್ತಿರುತ್ತಾರೆ. ವಿಜ್ಞಾನದ ದೃಷ್ಟಿಯಿಂದ ಸತ್ಯದೂರವಾದ ಬೂದಿ, ತಾಯತ, ಹರಳು, ಉಂಗುರ, ತೈಲ, ರುದ್ರಾಕ್ಷಿ, ವಾಸ್ತು, ರಾಹು, ಕೇತು ಮುಂತಾದ ನಾನಾ ಬಗೆಯ ಮಂಕುಬೂದಿಗಳಿಗೆ ಮುಗ್ಧರು ಬಲಿಪಶುವಾಗುತ್ತಾರೆ.
ಅಂಥವರಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ’ದ ಆದ್ಯತೆ ಬದಲಾಗಬೇಕು. ನಾವೆಲ್ಲರೂ ಏನು ವಿಜ್ಞಾನಿಗಳೇ ಆಗಬೇಕೆಂದಿಲ್ಲ. ಯಾವುದು ವೈಜ್ಞಾನಿಕ ಯಾವುದು ಅವೈಜ್ಞಾನಿಕ ಆಚರಣೆ ಎಂಬುದನ್ನು ಪ್ರತ್ಯೇಕಿಸಿ ನೋಡುವ ಸಾಮಥ್ರ್ಯ ಬಂದರೆ ಅದೇ ಸಾಕು. ಈ 21ನೇ ಶತಮಾನದಲ್ಲೂ 18ನೇ ಶತಮಾನದ ಮೂಢನಂಬಿಕೆಗಳಿಗೆ, ರೂಢ ನಂಬಿಕೆಗಳಿಗೆ ಜೋತು ಬಿದ್ದ ಕೋಟ್ಯಂತರ ಜನರು ನಮ್ಮಲ್ಲಿದ್ದಾರೆ. ಅಂಥವರನ್ನು ವಿಚಾರವಂತರನ್ನಾಗಿಸುವ ಕೆಲಸಕ್ಕೆ ಈ ‘ಹಬ್ಬ’ದ ದಿನವೇ ಚಾಲನೆ ಸಿಗುವಂತಾಗಬೇಕು.
ಇಲ್ಲಾಂದರೆ ವಾಸ್ತವ ಏನೆಂದು ಗೊತ್ತಲ್ಲ, ಎರಡನೆಯ ನೊಬೆಲ್ಗೇ ನಮ್ಮಲ್ಲಿ ತತ್ವಾರ ಇದೆ. ಸರ್ ಸಿವಿ ರಾಮನ್ನರಿಗೆ ನಮ್ಮ ದೇಶದ ಮೊದಲ ವಿಜ್ಞಾನ ನೊಬೆಲ್ ಸಿಕ್ಕಿತು ನಿಜ. ಆದರೆ ಅವರ ನಂತರ ಭಾರತದಲ್ಲಿ ಸಂಶೋಧನೆ ಮಾಡಿದ ಯಾವ ಭಾರತೀಯ ವಿಜ್ಞಾನಿಗೂ ಇನ್ನೊಂದು ನೊಬೆಲ್ ಇದುವರೆಗೆ ಸಿಗಲಿಲ್ಲ
ಚಿಕ್ಕಂದಿನಲ್ಲಿ ನಾನು ಇದ್ದದ್ದು ಮಲೆನಾಡಿನಲ್ಲಿ, ಬೆಟ್ಟದ ತಪ್ಪಲಲ್ಲೇ ಇದ್ದ ಪುಟ್ಟದೊಂದು ಹಳ್ಳಿಯಲ್ಲಿ. ಎಡೆಬಿಡದೆ ಸುರಿಯುವ ಮಳೆಗೆ ಬೆದರಿ ವಿದ್ಯುತ್ ಕೈಕೊಟ್ಟಾಗ ಹೊರಪ್ರಪಂಚದ ಕೊಂಡಿಯಾಗಿ ನಮ್ಮೊಡನೆ ಇರುತ್ತಿದ್ದದ್ದು ಆಕಾಶವಾಣಿ ಮಾತ್ರವೇ. ಜಗತ್ತಿನಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ತಿಳಿಯಬೇಕೆಂದರೆ ಸಂಜೆಯ ಪ್ರದೇಶ ಸಮಾಚಾರವನ್ನೋ ರಾತ್ರಿಯ ವಾರ್ತೆಗಳನ್ನೋ ಕೇಳಬೇಕು.
ಕೆಲವೇ ನಿಮಿಷಗಳಲ್ಲಿ ಮುಗಿದುಹೋಗುತ್ತಿದ್ದ ಈ ಕಾರ್ಯಕ್ರಮಗಳ ಮೂಲಕ ಹೊಸ ವಿಷಯಗಳನ್ನು ತಿಳಿಯುವುದೆಂದರೆ ಒನ್ಡೇ ಮ್ಯಾಚಿನ ಹೈಲೈಟ್ಸ್ ನೋಡಿದಂತೆಯೇ. ಕುತೂಹಲ ಪೂರ್ತಿ ತಣಿಯದಿದ್ದರೂ ನಡೆದದ್ದೇನು ಎನ್ನುವುದು ಗೊತ್ತಾದ ಸಮಾಧಾನ ನಮಗೆ ಸಿಗುತ್ತಿತ್ತು.
ಪ್ರದೇಶ ಸಮಾಚಾರದಲ್ಲಿ ಕೇಳಿದ ಸುದ್ದಿಯ ವಿವರ ಮರುದಿನದ ಪತ್ರಿಕೆಯಲ್ಲಿ ಸಿಗುತ್ತಿತ್ತು ಸರಿ. ಆದರೆ ಮರುದಿನದ ಪತ್ರಿಕೆ ನಮಗೆ ಸಿಗಬೇಕಲ್ಲ! ಬೆಳಿಗ್ಗೆ ಹತ್ತರ ಮುನ್ನ ನಮ್ಮೂರಿಗೆ ಯಾವತ್ತೂ ಪೇಪರ್ ಬಂದದ್ದೇ ಇಲ್ಲ. ಊರಿಗೆ ಬಂದದ್ದನ್ನು ಮನೆಗೆ ಕರೆತರಲು ನಾವೇ ಎರಡು ಕಿಲೋಮೀಟರ್ ನಡೆದು ಹೋಗಬೇಕು, ಇಲ್ಲ ಏಜೆಂಟ್ ಮಹಾಶಯನ ಮರ್ಜಿ ಕಾಯಬೇಕು. ಅವನ ಮೂಡ್ ಸರಿಯಿಲ್ಲದ ಸಮಯದಲ್ಲಿ ಮೂರುಮೂರು ದಿನದ ಪತ್ರಿಕೆಗಳು ಒಟ್ಟಿಗೆ ಮನೆಗೆ ಬಂದದ್ದೂ ಇದೆ.
ಇನ್ನು ವಾರಪತ್ರಿಕೆ ಮಾಸಪತ್ರಿಕೆಗಳು ಬೇಕಾದರೆ ಕನಿಷ್ಟ ಇಪ್ಪತ್ತೈದು ಕಿಲೋಮೀಟರ್ ಪ್ರಯಾಣ ಬೇಕಾಗುತ್ತಿತ್ತು. ಹೊಸ ಪುಸ್ತಕಗಳನ್ನು ತರಬೇಕೆಂದರಂತೂ ನೂರೈವತ್ತು ಕಿಲೋಮೀಟರ್ ಪ್ರಯಾಣ ಗಟ್ಟಿ!
ಅಂದಿನ ಪರಿಸ್ಥಿತಿ ಇದ್ದದ್ದೇ ಹೀಗೆ. ಬಹುಶಃ ‘ಮಾಹಿತಿ ಸಾಕ್ಷರತೆ’ಯ ವಿಚಿತ್ರ ಸಮಸ್ಯೆಯೊಂದನ್ನು ಆಗ ನಾವು ಅನುಭವಿಸುತ್ತಿದ್ದೆವು ಎನ್ನಬಹುದು.
ಓದಲು ಬರೆಯಲು ತಿಳಿದಿರುವುದು ಸಾಕ್ಷರತೆ ಸರಿ, ಆದರೆ ಇದೇನು ಈ ಮಾಹಿತಿ ಸಾಕ್ಷರತೆ?
ಯಾವಾಗ ಮಾಹಿತಿಯ ಅಗತ್ಯ ಬೀಳುತ್ತದೆ ಎನ್ನುವುದನ್ನು ಅರಿತುಕೊಳ್ಳುವುದು, ಮಾಹಿತಿಯನ್ನು ಎಲ್ಲಿಂದ ಹೇಗೆ ಪಡೆಯಬಹುದೆಂದು ತಿಳಿದಿರುವುದು ಮತ್ತು ಹಾಗೆ ಪಡೆದ ಮಾಹಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ತಜ್ಞರು ಇನ್ಫರ್ಮೇಶನ್ ಲಿಟರೆಸಿ, ಅಂದರೆ ‘ಮಾಹಿತಿ ಸಾಕ್ಷರತೆ’ ಎಂದು ಕರೆಯುತ್ತಾರೆ.
ಇಂದಿನ ಐಟಿ ಪ್ರಪಂಚದಲ್ಲಿ ಬಹುತೇಕ ಎಲ್ಲರೂ ಮಾಹಿತಿ ಸಾಕ್ಷರರೇ. ಈ ಸಾಕ್ಷರತೆಯನ್ನು ಚೆನ್ನಾಗಿ ಬಳಸಿಕೊಳ್ಳುವ ಅವಕಾಶವನ್ನು ಅಂತರಜಾಲದ ಮಾಯಾಜಾಲ ನಮಗೆ ನೀಡಿದೆ. ಬೇಕಾದಾಗ ಬೇಕೆಂದ ಕಡೆ ಬೇಕಾದ ವಿಷಯವನ್ನು ಕುರಿತ ಮಾಹಿತಿ ಪಡೆದುಕೊಳ್ಳುವುದು ಈಗ ಸಾಧ್ಯವಿದೆ: ಹೊಸ ವಿಷಯಗಳನ್ನು ತಕ್ಷಣವೇ ಪಡೆದುಕೊಳ್ಳಲು ಮೊಬೈಲ್ ಆಪ್ಗಳು, ಆ ಬಗ್ಗೆ ವಿಶ್ಲೇಷಣೆಗಳನ್ನು ಓದಲು ಆನ್ಲೈನ್ ಪತ್ರಿಕೆಗಳು, ಹೆಚ್ಚಿನ ಮಾಹಿತಿ ಪಡೆಯಲು ವಿಶ್ವಕೋಶಗಳು ಎಲ್ಲವೂ ಇವೆ.
ವರ್ಷಗಳ ಹಿಂದೆ ಮಲೆನಾಡಿನ ಮಳೆಯಲ್ಲಿ ಕುಳಿತಿದ್ದ ನಮಗೂ ಈ ಸೌಲಭ್ಯಗಳ ಅಂದಿನ ಅವತಾರಗಳ ಪರಿಚಯ ಇತ್ತು. ಆದರೆ ಅವೆಲ್ಲ ಸುಲಭಕ್ಕೆ ಕೈಗೆ ಸಿಗುತ್ತಿರಲಿಲ್ಲವಾದ್ದರಿಂದ ವಿಚಿತ್ರವಾದ ಸಮಸ್ಯೆಯೊಂದು ನಮ್ಮನ್ನು ಕಾಡುತ್ತಿತ್ತು ಅಷ್ಟೆ.
ಅಂತರಜಾಲ ಲೋಕದಲ್ಲಿ ಇಂದಿನ ಕನ್ನಡ ಓದುಗರೂ ಇಂತಹುದೇ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಮಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಬೇಕೆನ್ನುವ ಅರಿವು ಅವರಿಗಿದೆ, ಜಾಲಲೋಕದಲ್ಲಿ ಆ ವಿಷಯಗಳನ್ನು ಹುಡುಕಿಕೊಳ್ಳುವುದು ಹೇಗೆನ್ನುವುದೂ ಅವರಿಗೆ ಗೊತ್ತು. ಆದರೆ ಆ ಮಾಹಿತಿ ಕನ್ನಡ ಭಾಷೆಯಲ್ಲಿ ಎಲ್ಲಿ-ಹೇಗೆ ಸಿಗುತ್ತದೆ ಎನ್ನುವ ಪ್ರಶ್ನೆ ಮಾತ್ರ ಅವರನ್ನು ಗೊಂದಲದಲ್ಲಿ ಕೆಡವುತ್ತದೆ.
ಈ ಪ್ರಶ್ನೆಗೆ ಉತ್ತರ ದೊರಕಿಸುವ ಅನೇಕ ಪ್ರಯತ್ನಗಳು ಇಂದು ನಡೆಯುತ್ತಿವೆ. ಜಾಲಲೋಕದಲ್ಲಿ ಕನ್ನಡದ ಮಾಹಿತಿಯ ಕೊರತೆಯನ್ನು ತುಂಬಿಕೊಡಲು ಹಲವು ಹವ್ಯಾಸಿ ಬರಹಗಾರರು, ಪತ್ರಕರ್ತರು, ಪ್ರಕಾಶಕರು, ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಸಮುದಾಯ ಚಾಲಿತ ಯೋಜನೆಗಳೂ ನಡೆಯುತ್ತಿವೆ. ಕರ್ನಾಟಕ ಸರಕಾರದ ಆಶ್ರಯದಲ್ಲಿ ರೂಪುಗೊಂಡಿರುವ, ಮಾಹಿತಿಯಿಂದ ತುಂಬಿಕೊಳ್ಳುತ್ತಿರುವ ‘ಕಣಜ’ ಕೂಡ ಇಂತಹುದೇ ಇನ್ನೊಂದು ಪ್ರಯತ್ನ. ಇಂತಹ ಪ್ರಯತ್ನಗಳು ಎಷ್ಟು ನಡೆದರೂ ಕನ್ನಡ ಭಾಷೆಗೆ ಅದರಿಂದ ಅನುಕೂಲವೇ!
ನೆನಪಿಡಿ, ಕನ್ನಡದ ಓದುಗರಿಗೆ ಬೇಕಾದ ಮಾಹಿತಿ ಪೂರೈಸಲು ನಡೆಯುತ್ತಿರುವ ಈ ಪ್ರಯತ್ನಗಳು ನಮ್ಮ ಸುತ್ತಲೂ ಇರುವ ಜ್ಞಾನದ ಜಗತ್ತಿಗೆ ಸಣ್ಣ-ದೊಡ್ಡ ಕಿಟಕಿಗಳಿದ್ದಂತೆ. ಈ ಕಿಟಕಿಗಳನ್ನು ಎಷ್ಟು ದೊಡ್ಡದಾಗಿ ತೆರೆಯುತ್ತೇವೆ, ಎಷ್ಟು ಬೆಳಕನ್ನು ಒಳಗೆ ಬಿಟ್ಟುಕೊಳ್ಳುತ್ತೇವೆ ಎನ್ನುವುದು ಮಾತ್ರ ನಮಗೇ ಬಿಟ್ಟದ್ದು!
ಕೃತಿ:ಜ್ಞಾನಶಾಸ್ತ್ರ
ಲೇಖಕರು:, ಡಾ. ಸುಚೇತ ನವರತ್ನ
ಕೃತಿಯನ್ನು ಓದಿ
ಆರೋಗ್ಯದ ಬಗೆಗಿನ ಕಾಳಜಿ ಇಂದು ಸಮಾಜದ ಎಲ್ಲ ವರ್ಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶ. ರೋಗುರುಜಿನಗಳಿಂದ ದೂರವಿದ್ದು, ಆರೋಗ್ಯವಂತರಾಗಿ ಜೀವನ ಸಾಧಿಸುವುದು ಎಲ್ಲರ ಕನಸು. ಇಂಥ ಕನಸನ್ನು ನನಸಾಗಿಸಲು ನೆರವಾಗುವ ವೈದ್ಯಕೀಯ ಸಾಹಿತ್ಯ, ಅದು ಒದಗಿಸುವ ಮಾಹಿತಿ ಹಿಂದೆಂದಿಗಿಂತಲೂ ಇಂದು ಪ್ರಸಕ್ತವಾಗಿದೆ.ವೈದ್ಯಕೀಯ ಸಾಹಿತ್ಯವನ್ನು ಮುದ್ರಣ ಮಾಧ್ಯಮಕ್ಕೆ ಮಾತ್ರ ಅನ್ವಯವಾಗುವುಂತೆ ನಾವಿಂದು ಸೀಮಿತಗೊಳಿಸುವಂತಿಲ್ಲ. ಬಾನುಲಿ, ದೂರದರ್ಶನ, ಅಂತರ್ಜಾಲಗಳಲ್ಲೂ ವಿಫುಲವಾಗಿರುವ ಮಾಹಿತಿಯನ್ನು ಪರಿಗಣಿಸಬೇಕಾಗುತ್ತದೆ. ಹೀಗಾದಾಗ ವೈದ್ಯಕೀಯ ಸಾಹಿತ್ಯದ ಆಯಾಮ ಅಪಾರವಾಗಿ ಹೆಚ್ಚುತ್ತದೆ. ವೈದ್ಯಕೀಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇದುವರೆಗೆ ಪ್ರಕಟವಾಗಿರುವ ಪುಸ್ತಕಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಿದೆ. ಸಂಖ್ಯೆ ಮತ್ತು ಗುಣಮಟ್ಟ ಎರಡರಲ್ಲೂ ಗಣನೀಯ ಪ್ರಗತಿಯಾಗಿರುವುದನ್ನು ಗಮನಿಸಿದ್ದೇವೆ. ಪುಸ್ತಕಗಳ ಜೊತೆಗೆ ವಿವಿಧ ಪತ್ರಿಕೆಗಳಲ್ಲಿನ ಲೇಖನಗಳು, ಪೂರಕ ಪುಟಗಳು, ವಿಶೇಷ ಆವೃತ್ತಿಗಳು ದೀಪಾವಳಿ ಯುಗಾದಿ ಸಂದರ್ಭಗಳಲ್ಲಿ ವಿಶೇಷ ಸಂಚಿಕೆಗಳೊಂದಿಗೆ ಹೊರಬರುವ ಬೋನಸ್ ಕೊಡುಗೆಗಳು ಈ ಎಲ್ಲದರ ಮೂಲಕ ವೈದ್ಯಕೀಯ ಸಾಹಿತ್ಯ ಸಮೃದ್ಧವಾಗಿ ಹೊರಬಂದಿದೆ. ಅನೇಕ ಕೃತಿಗಳು ಮರು ಮುದ್ರಣ ಕಂಡಿರುವ ಅನೇಕ ಉದಾಹರಣೆಗಳಿವೆ. ರೇಡಿಯೇ ದೂರದರ್ಶನಗಳು ಅಕ್ಷರಸ್ಥ-ಅನಕ್ಷರಸ್ಥರ ಗಡಿಯನ್ನು ದಾಟಿ ಉಳಿದ ಮಾಧ್ಯಮಗಳು ಮುಟ್ಟದ ತಾಣಗಳಿಗೆ, ಅಲ್ಲಿನ ಜನರಿಗೆ ವೈದ್ಯಕೀಯ ಸಾಹಿತ್ಯವನ್ನು ಮುಟ್ಟಿಸಿದೆ. ರೇಡಿಯೋ, ದೂರದರ್ಶನಗಳಲ್ಲಿ ಪ್ರಸಾರವಾಗುವ ಪರಿಣಿತ ವೈದ್ಯರೊಂದಿಗೆ ನಡೆಸುವ ನೇರ ಫೋನ್ ಇನ್ ಕಾರ್ಯಕ್ರಮ ಏಕಕಾಲಕ್ಕೆ ಒಂದು ಕೋಟಿ ಜನರನ್ನು ಮುಟ್ಟುವ ಸಾಮರ್ಥ್ಯ ಹೊಂದಿದೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದೆ. ಅಂತರ್ಜಾಲದ ಸೌಲಭ್ಯ ಪಡೆದವರ ಪಾಲಿಗಂತೂ ಆರೋಗ್ಯದ ಬಗೆಗಿನ ಸರ್ವಸಮಸ್ತ ಮಾಹಿತಿಗಳೂ ಕ್ಷಣಕಾಲದಲ್ಲಿ ದೊರೆಯುತ್ತವೆ. ಉಳಿದೆಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರದಲ್ಲೂ ಇಂದು ಮಾಹಿತಿಯ ಮಹಾಪೂರವನ್ನು ನಾವು ಗಮನಿಸಬಹುದು. ಆದರೆ ಇಂಥ ಮಾಹಿತಿ ಜನಸಾಮಾನ್ಯರ ಆರೋಗ್ಯ ವೃದ್ಧಿಗೆ ಎಷ್ಟರಮಟ್ಟಿಗೆ ನೆರವಾಗಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಯಾವುದೇ ಕ್ಷೇತ್ರದಲ್ಲಿನ ಹೊಸ ಆಲೋಚನೆ, ಪರಿಕಲ್ಪನೆಗಳು ಸಮಾಜ ವ್ಯವಸ್ಥೆಯೊಂದರಲ್ಲಿ ಹೇಗೆ ಪ್ರಸರಿಸುತ್ತವೆ ಎಂಬುದನ್ನು ಸಮಾಜ ವಿಜ್ಞಾನಿ ಎವರೆಟ್ ರೋಜರ್, ೧೯೬೨ರಲ್ಲಿ ಪ್ರಕಟವಾದ ಡಿಫ್ಯೂಶನ್ ಆಫ್ ಇನೋವೇಶನ್ಸ್’ ಎಂಬ ತನ್ನ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅರಿವು, ಮನೋಭಾವ, ನಿರ್ಧಾರ, ಆಚರಣೆ ಮತ್ತು ಒಪ್ಪಿಗೆ ಈ ಐದು ಹಂತಗಳ ಮೂಲಕ ನೂತನ ಆಲೋಚನೆ, ಮಾಹಿತಿಗಳು ಜನಸಮುದಾಯದ ಭಾಗವಾಗುತ್ತದೆ ಎಂಬುದು ರೋಜರ್ ಸಿದ್ಧಾಂತದ ತಿರುಳು. ಯಾವುದೇ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ಮಾಹಿತಿ ಮೊಟ್ಟ ಮೊದಲಿಗೆ ಆ ವಿಷಯದ ಬಗ್ಗೆ ಅರಿವನ್ನು ಮೂಡಿಸುತ್ತದೆ. ವೈದ್ಯಕೀಯ ಸಾಹಿತ್ಯ ಮಾಡುತ್ತಿರುವ ಕೆಲಸವೂ ಇದೇ. ಆರೋಗ್ಯದ ಪರಿಕಲ್ಪನೆ, ಆರೋಗ್ಯವನ್ನು ನಿರ್ಧರಿಸುವ ಅಂಶಗಳು, ಉತ್ತಮ ಆರೋಗ್ಯವನ್ನು ಸಂಪಾದಿಸಿ, ಸಂರಕ್ಷಿಸಿಕೊಳ್ಳುವ ಉಪಾಯಗಳು, ಆಧುನಿಕ ಜೀವನದಲ್ಲಿ ಒತ್ತಡವನ್ನು ನಿರ್ವಹಿಸುವ ಮಾರ್ಗೋಪಾಯಗಳು, ಸ್ಥೂಲಕಾಯತೆ, ಮಧುಮೇಹ, ಏರಿದ ರಕ್ತದೊತ್ತಡ ಮುಂತಾದವುಗಳು ಬರದಂತೆ ಎಚ್ಚರ ವಹಿಸುವ ಪ್ರಸಂಗ ಬಂದಾಗ ಎದೆಗುಂದದೆ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಬಗೆ ಮುಂತಾದ ಅಸಂಖ್ಯ ಪ್ರಸಕ್ತ ವಿಷಯಗಳ ಬಗೆಗೆ ಜನಸಾಮಾನ್ಯರ ಅರಿವಿನ ಮಟ್ಟವನ್ನು ವೈದ್ಯಕೀಯ ಸಾಹಿತ್ಯ ಎತ್ತರಿಸಿದೆ. ಇದು ಮೊದಲನೆಯ ಹಂತ. ಆದರೆ ಈ ಅರಿವು ಆಚರಣೆಯಲ್ಲಿ ಬರಬೇಕಾದರೆ ಅದಕ್ಕೆ ಸೂಕ್ತ ಮನೋಭಾವ ಬೇಕು. ಯಾವುದೇ ಪೂರ್ವಗ್ರಹವಿಲ್ಲದೇ ದೊರೆತ ಮಾಹಿತಿಯನ್ನು ಪರಿಶೀಲಿಸಿ ಅದರಲ್ಲಿನ ಉಪಯುಕ್ತ ವಿಷಯಗಳನ್ನು ಗುರುತಿಸುವ ಆಕಸ್ತಿಯಿರಬೇಕು. ಎಷ್ಟೆಲ್ಲ ಅರಿವಿದ್ದರೂ, ಅದನ್ನು ಬಳಕೆಗೆ ತರದೇ ಉದಾಸೀನ ಮಾಡುವ ನೂರಾರು ಪ್ರಕರಣಗಳು ನಮಗೆ ತಿಳಿದಿವೆ. ವೈದ್ಯಕೀಯ ಸಾಹಿತ್ಯ ಇಂಥ ಮನೋಭಾವವನ್ನು ಬೆಳೆಸಲೂ ನೆರವಾಗಿದೆಯೆಂಬುದು ಪ್ರಶಂಸನೀಯ. ಇಂಥ ಮನೋಭಾವದಿಂದ ವ್ಯಕ್ತಿ, ವೈದ್ಯಕೀಯ ಸಾಹಿತ್ಯ ಒದಗಿಸುವ ಮಾಹಿತಿಯನ್ನು ತನ್ನ ಜೀವನಕ್ಕೆ ಅನ್ವಯಿಸುವ ನಿರ್ಧಾರ ಮಾಡುತ್ತಾನೆ ಆಚರಣೆಗೆ ತರುತ್ತಾನೆ. ಪ್ರಯೋಜನಗಳನ್ನು ಪರಿಶೀಲಿಸುತ್ತಾನೆ. ಪ್ರಯೋಜನ ಕಂಡುಬಂದು ಆರೋಗ್ಯ ಸಂರಕ್ಷಣೆ ವೃದ್ಧಿಗಳಿಗೆ ನೆರವಾದರೆ ಅದನ್ನು ಮಾಹಿತಿಯ ಉಪಯುಕ್ತತೆಯನ್ನು ಬೇರೆಯವರೊಡನೆ ಹಂಚಿಕೊಳ್ಳುತ್ತಾನೆ ಪ್ರಚಾರ ನೀಡುತ್ತಾನೆ. ಬದಲಾವಣೆಯ ಪ್ರೇರಕ ಶಕ್ತಿಯಾಗುತ್ತಾನೆ. ವೈದ್ಯಕೀಯ ಸಾಹಿತ್ಯವನ್ನು ಓದಿ, ಕೇಳಿ, ಕಂಡು, ಮನನ ಮಾಡಿ ಆಚರಣೆಗೆ ತಂದು ಅದರಿಂದ ಫಲ ಪಡೆದಿರುವ ಸಾವಿರಾರು ವ್ಯಕ್ತಿಗಳನ್ನು ನಾವಿಂದು ನೋಡಬಹುದು. ಆರೋಗ್ಯ ವೃದ್ಧಿಯಲ್ಲಿ ವೈದ್ಯಕೀಯ ಸಾಹಿತ್ಯ ನೀಡಿರುವ ಕೊಡುಗೆಗೆ ಇಂತಹ ವ್ಯಕ್ತಿಗಳು ಪ್ರಬಲ ಸೂಚಿಗಳಾಗುತ್ತಾರೆ. ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಇರುವ ಸಾಮಾನ್ಯ ಅರಿವು ಹಾಗೂ ಅದನ್ನು ಆಚರಣೆಗೆ ತರುವುದರ ನಡುವೆ ಸಾಕಷ್ಟು ಅಂತರವಿದೆ. ಜನಸಮುದಾಯದಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿದಷ್ಟು ಈ ಅಂತರವನ್ನು ಕಡಿಮೆ ಮಾಡುವ ಪ್ರಯೋಗಗಳು ಹೆಚ್ಚು ಯಶಸ್ವಿಯಾಗುತ್ತವೆ. ಆರೋಗ್ಯವೃದ್ಧಿಗೆ ಅಗತ್ಯವಾದ ಮಾಹಿತಿಗಳಿದ್ದೂ ಅದನ್ನು ಆಚರಣೆಗೆ ತರದಿರುವ ಸಾವಿರಾರು ವ್ಯಕ್ತಿಗಳ ಮನಸ್ಸನ್ನು ಬದಲಿಸುವಲ್ಲಿ ಎಲ್ಲ ವೈದ್ಯರಿಗೂ ವಿಶೇಷ ಪಾತ್ರವಿದೆ. ಅನಕ್ಷರಸ್ಥರು ಹೆಚ್ಚಾಗಿರುವ ಪ್ರದೇಶಗಳಿಗೂ ಈ ಮಾತು ಅನ್ವಯಿಸುತ್ತದೆ. ಸಮಾಲೋಚನೆಯ ಸಂದರ್ಭದಲ್ಲಿ ವೈದ್ಯರಿಂದ ಸೂಕ್ತ ಸಲಹೆ ಬಂದಲ್ಲಿ ಈಗಾಗಲೇ ಜನರ ಅರಿವಿನಲ್ಲಿರುವ ವೈದ್ಯಕೀಯ ಮಾಹಿತಿಯ ಬಲವರ್ಧನೆಯಾಗುತ್ತದೆ. ಅರಿವನ್ನು ಆಚರಣೆಯತ್ತ ಕೊಂಡೊಯ್ಯುವುದರಲ್ಲಿ ಈ ಬಲವರ್ಧನೆಗೆ ಮಹತ್ವದ ಸ್ಥಾನವಿದೆ. ವೈದ್ಯರು ಇಂತಹ ಸಲಹೆ ನೀಡಬೇಕಾದಲ್ಲಿ ವೈದ್ಯಕೀಯ ಸಾಹಿತ್ಯ ಪ್ರಕಾರದಲ್ಲಿ ನಾವಿಂದು ನೋಡುತ್ತಿರುವ ಮಾಹಿತಿಯ ಪರಿಚಯ ವೈದ್ಯರಿಗೂ ಇರಬೇಕು. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಂದ ಅಥವಾ ಇನ್ನಾವುದೇ ಮೂಲದಿಂದ ಮಾಹಿತಿ ಪಡೆದುಕೊಂಡ ವ್ಯಕ್ತಿಯೊಬ್ಬ ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಅನುಮಾನ ಪರಿಹರಿಸಿಕೊಳ್ಳಲು ಬಯಸಿದಾಗ ಸೂಕ್ತ ಮಾರ್ಗದರ್ಶನ ದೊರೆಯದಿದ್ದರೆ ಆರೋಗ್ಯ ವೃದ್ಧಿಯ ಎಲ್ಲ ಪ್ರಯತ್ನಗಳೂ ವ್ಯರ್ಥವಾಗುತ್ತವೆ. ವೈದ್ಯಕೀಯ ಸಾಹಿತ್ಯ ಜನರ ಅರಿವಿನ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಾಹಿತ್ಯವನ್ನು ಪೂರಕ ಸಾಮಗ್ರಿಯನ್ನಾಗಿ ಬಳಸಿಕೊಂಡು ವೈದ್ಯರ ನೆರವಿನಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರೇತರ ಸಂಸ್ಥೆಗಳು ಸಂಘಟನೆಗಳು ಎಂತಹ ಮಹತ್ತರವಾದ ಬದಲಾವಣೆಗಳನ್ನು ತರಬಲ್ಲವೆಂಬುದನ್ನು ಆಕಾಶವಾಣಿ ಮತ್ತು ಯೂನಿಸೆಫ್ ಸಂಸ್ಥೆಗಳು, ಧಾರವಾಡ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳ ಹಿಂದುಳಿದ ಬಡ ಜನರಿರುವ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪ್ರಸಾರ ಮಾಡಿರುವ ವಿಶೇಷ ಆಂದೋಲನದ ಕಾರ್ಯಕ್ರಮಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ನಮ್ಮ ಸಮಾಜದಲ್ಲಿ ಇಂದು ವಿಫುಲ ಪ್ರಮಾಣದಲ್ಲಿ ಲಭ್ಯವಿರುವ ವೈದ್ಯಕೀಯ ಸಾಹಿತ್ಯದಿಂದ ಉಂಟಾಗಿರುವ ಪರಿಣಾಮಗಳಿಗೆ ಮತ್ತೊಂದು ಮಗ್ಗಲೂ ಉಂಟು. ತಲೆನೋವು ಬಂದರೆ ಮೆದುಳು ಗಂತಿಯೊಂದು ತಿಳಿಯುವ, ಎಲ್ಲ ಎದೆನೋವು, ಹೃದಯಸ್ತಂಭನದ ಮುನ್ಸೂಚನೆಯೆಂದು ಭಾವಿಸುವ ರೋಗಲಕ್ಷಣಗಳನ್ನು ವಿವರಿಸುವ ವೈದ್ಯಕೀಯ ಸಾಹಿತ್ಯವನ್ನು ಓದಿದಾಗ ಆ ಎಲ್ಲ ಲಕ್ಷಣಗಳೂ ತಮ್ಮಲ್ಲಿವೆಯೆಂದು ತೀರ್ಮಾನಿಸಿ ವೈದ್ಯರಲ್ಲಿಗೆ ಓಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಅಂಥವರಿಗೆ ಬೇಕಾಗಿರುವುದು ಸೂಕ್ತಮಾರ್ಗದರ್ಶನ ಮತ್ತು ಭರವಸೆಗಳು; ಅವುಗಳೊಂದಿಗೆ ಬೇಕಾದಾಗ ಅಗತ್ಯ ಚಿಕಿತ್ಸೆ ಮಾಧ್ಯಮಗಳಿಂದ ಮಾಹಿತಿ ಪಡೆದು ಅದನ್ನು ತಮ್ಮ ಮೇಲೆ ಆರೋಪಿಸಿಕೊಂಡು, ಅದರಿಂದ ತಮ್ಮ ವರ್ತನೆಗಳನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳನ್ನು ಆಪ್ತ ಸಮಾಲೋಚನೆಯ ಸಂದರ್ಭಗಳಲ್ಲೂಕಾಣುತ್ತೇವೆ ‘ಏಕ ಚಿತ್ತಾಗ್ರತೆಯಿಂದ ಓದಲು ಸಾಧ್ಯವಾಗುತ್ತಿಲ್ಲ’ ವೆಂಬ ಕಾರಣದಿಂದ ತಂದೆ ತಾಯಿ ಕರೆದುಕೊಂಡು ಬಂದ ಪಿಯುಸಿ ವಿದ್ಯಾರ್ಥಿಯೊಬ್ಬ ಹೇಳಿದ್ದು ಇಷ್ಟು; “ಹತ್ತು ವರ್ಷಗಳ ಹಿಂದೆ ಯಾವುದೇ ವಿಷಯದ ಮೇಲೆ ಗಮನವನ್ನು ಕೇಂದ್ರಿಕರಿಸಬಹುದಾಗಿದ್ದ ಅವಧಿ ೧ ನಿಮಿಷಗಳು ಆದರೆ ಆಧುನಿಕ ಜೀವನ ಶೈಲಿಯ ಒತ್ತಡದಿಂದ ಈ ಅವಧಿ ಇಂದು ೫ ನಿಮಿಷ ೭ ಸೆಕೆಂಡುಗಳಿಗೆ ಇಳಿದಿದೆಯೆಂದು ಬ್ರಿಟನ್ನಿನ ಸಂಶೋಧಕರೇ ಈ ವರ್ಷದ ಮಧ್ಯಭಾಗದಲ್ಲಿ ಖಚಿತಪಡಿಸಿದ್ದಾರೆ. ನಾನೇನು ಮಾಡಲಿ ಸಾರ್, ನಾನು ಕೂಡ ಈ ಒತ್ತಡಕ್ಕೆ ಬಲಿಯಾಗಿದ್ದೇನೆ.” ಎಂಥ ಜಾಣತನ ಅಲ್ಲವೇ? ಇದು ಕೂಡ ವಿಪುಲವಾಗಿರುವ ವೈದ್ಯ ಸಾಹಿತ್ಯ ತಂದಿರುವ ಪರಿಣಾಮವೇ! ಆದರೆ ಇಂಥವರ ಸಂಖ್ಯೆ ಅತ್ಯಲ್ಪವೆಂಬುದೇ ಸಮಾಧಾನದ ಸಂಗತಿ. ಕನ್ನಡ ವೈದ್ಯಕೀಯ ಸಾಹಿತ್ಯದ ಅತ್ಯಂತ ಮುಖ್ಯವಾದ ಸಾಧನೆಯೆಂದರೆ ಆರೋಗ್ಯ ವೃದ್ಧಿಗೆ ಸಂಬಂಧಿಸಿದ ನಿಖರವಾದ ಕಾರ್ಯಸೂಚಿಯನ್ನು ಸಿದ್ದಪಡಿಸಿ ಅದನ್ನು ಆಚರಣೆಗೆ ತರಲು ಅಗತ್ಯವಾದ ಮಾಹಿತಿಯನ್ನು ಸೃಜನಾತ್ಮಕ ರೀತಿಯಲ್ಲಿ ಸೃಷ್ಟಿಸಿರುವುದು ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಶ್ರಮಿಸಿರುವ ಎಲ್ಲ ವೈದ್ಯಸಾಹಿತಿಗಳೂ ಅಭಿನಂದನಾರ್ಹರು.
* * *
ಕೃತಿ-ಆರೋಗ್ಯ ವಿಜ್ಞಾನ, ವಿಜ್ಞಾನ, ಸಾಮಾನ್ಯ ಆರೋಗ್ಯ
ಸಂಪಾದಕರು-ಡಾ. ಕೆ.ಎಂ. ಮೈತ್ರಿ
ಸರಣಿ-ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ
ಕೃತಿ:ಡಾಕ್ಟರ್ ಇಲ್ಲದೆಡೆ
ಲೇಖಕರು: ಡಾ. ಸಿ.ಆರ್. ಚಂದ್ರಶೇಖರ್
ಮನೋವೈದ್ಯ, ನಿಮ್ಹಾನ್ಸ್ ಬೆಂಗಳೂರು – ೨೯
ಕೃತಿಯನ್ನು ಓದಿ
ಕೃತಿ-ವಿಜ್ಞಾನ ಲಹರಿ
ಸರಣಿ-ಜನಜೀವನದಲ್ಲಿ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಮಾಹಿತಿ ಸಂಪತ್ತು ಡಿಜಿಟಲ್ ಜಗತ್ತು
ಲೇಖಕರು: ಆಧುನಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಆಕಸ್ಮಿಕ ಆವಿಷ್ಕಾರ
ಲೇಖಕರು ಡಾ. ಎಸ್. ಜೆ. ನಾಗಲೋಟಿಮಠ
ಕೃತಿಯನ್ನು ಓದಿ
ಕೃತಿ:ತಾಪ – ಪ್ರತಾಪ
ಲೇಖಕರು:, ಎಮ್.ಆರ್. ನಾಗರಾಜು
ಕೃತಿಯನ್ನು ಓದಿ
ಕೃತಿ-ಪವಾಡಗಳ ರಹಸ್ಯ ಬಯಲು
ಸರಣಿ-ಜನಜೀವನದಲ್ಲಿ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ: ಜನಜೀವನದಲ್ಲಿ ವಿಜ್ಞಾನ, ಪಕ್ಷಿಗಳ ಪರಿಚಯ, ಮಕ್ಕಳ ವಿಜ್ಞಾನ
ಲೇಖಕರು: ಜನಜೀವನದಲ್ಲಿ ವಿಜ್ಞಾನ, ಪಕ್ಷಿಗಳ ಪರಿಚಯ, ಮಕ್ಕಳ ವಿಜ್ಞಾನ,
ಕೃತಿಯನ್ನು ಓದಿ
ಕೃತಿ:ಪ್ರೌಢ ದಂಪತಿಗಳಿಗಾಗಿ ೧೦೮ ಆರೋಗ್ಯ ಲೈಂಗಿಕ ಸಲಹೆಗಳು
ಲೇಖಕರು: – ಎನ್. ವಿಶ್ವರೂಪಾಚಾರ್
ಕೃತಿಯನ್ನು ಓದಿ
ಕೃತಿ-ಯಾವ ಕಾಯಿಲೆಗೆ ಯಾವ ಮನೆ ಔಷಧಿ
ಸರಣಿ-ಆರೋಗ್ಯ ವಿಜ್ಞಾನ, ವಿಜ್ಞಾನ, ವೈದ್ಯಕೀಯ ವಿಜ್ಞಾನ
ಕೃತಿಯನ್ನು ಓದಿ
ಕೃತಿ-ಫ್ರಿಜಿಡಿಟಿ – ಸ್ತ್ರೀಮನಸ್ಸು ಮತ್ತು ಲೈಂಗಿಕತೆ
ಲೇಖಕರು-ಎನ್.ವಿಶ್ವರೂಪಾಚಾರ್
ಸರಣಿ-ಆರೋಗ್ಯ ವಿಜ್ಞಾನ, ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ
ಕೃತಿ-ಸಂಧಿವಾತ
ಲೇಖಕರು-ಎನ್. ವಿಶ್ವರೂಪಾಚಾರ್
ಸರಣಿ-ಆರೋಗ್ಯ ವಿಜ್ಞಾನ, ವಿಜ್ಞಾನ, ಸಾಮಾನ್ಯ ಆರೋಗ್ಯ
ಕೃತಿಯನ್ನು ಓದಿ
ಕೃತಿ: ದಾಂಪತ್ಯ ಲೈಂಗಿಕ ಪ್ರಶ್ನೋತ್ತರಗಳು:
ಲೇಖಕರು: ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ
ಕೃತಿ-ಗ್ರಹಣ
ಸರಣಿ-ಕನ್ನಡ, ಖಗೋಳ ವಿಜ್ಞಾನ, ಗ್ರಹಣ, ನೈಸರ್ಗಿಕ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಗರ್ಭಿಣಿ ಹೆಂಡತಿಯನ್ನು ಗಂಡ ಹೇಗೆ ಪ್ರೀತಿಸಬೇಕು?
ಲೇಖಕರು: ಲೈಂಗಿಕ ಆರೋಗ್ಯ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಕೀಟಾಹಾರಿ ಸಸ್ಯಗಳು
ಲೇಖಕರು: ಜೀವ ವಿಜ್ಞಾನ, ನೈಸರ್ಗಿಕ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ನೀವು ಯುಧಿಷ್ಠಿರನ ಹೆಸರನ್ನು ಕೇಳಿದ್ದೀರಲ್ಲವೆ? ಪಂಚಪಾಂಡವರಲ್ಲಿ ಅವನು ಹಿರಿಯ. ದ್ವೈತವನದಲ್ಲಿ ಪಾಂಡವರೆಲ್ಲ ಅರಣ್ಯವಾಸ ಮಾಡುತ್ತಿದ್ದ ಸಮಯ. ಒಮ್ಮೆ ಯುಧಿಷ್ಠಿರ ಬೇಟೆಯಾಡಿ ಬಾಯಾರಿ ಬಳಲಿದ. ಹತ್ತಿರದಲ್ಲೇ ಸರೋವರ ಕಂಡಿತು. ಸರಿ, ನೀರು ಕುಡಿಯಲೆಂದು ಸರೋವರಕ್ಕೆ ಬಂದ. ಆಶ್ಚರ್ಯ! ತಮ್ಮಂದಿರೆಲ್ಲ ದಡದ ಮೇಲೆ ನಿರ್ಜೀವವಾಗಿ ಬಿದ್ದಿದ್ದಾರೆ. ಅಷ್ಟರಲ್ಲೇ ಅಶರೀರ ವಾಣಿಯೊಂದು ಮೊಳಗಿತು. ತಾನು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಅನಂತರ ನೀರು ಕುಡಿಯಬೇಕೆಂದು ಕಟ್ಟಪ್ಪಣೆ ಮಾಡಿತು. ಯುಧಿಷ್ಠಿರ ಸಮ್ಮತಿಸಿದ. ‘ಭೂಮಿಗಿಂತ ದೊಡ್ಡವಸ್ತು ಯಾವುದು? ಆಕಾಶಕ್ಕಿಂತ ಎತ್ತರವಾದದ್ದು ಯಾವುದು?’ – ಅಶರೀರಿ ಯಕ್ಷನ ಪ್ರಶ್ನೆಗೆ ಯುಧಿಷ್ಠಿರ ಏನು ಉತ್ತರಿಸಿದ ಗೊತ್ತೆ? ‘ಭೂಮಿಗಿಂತ ತಾಯಿ ದೊಡ್ಡವಳು, ಆಕಾಶಕ್ಕಿಂತ ತಂದೆ ಎತ್ತರದವನು’ ಎಂದು.
ಕೃತಿ-ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ
ಸರಣಿ-ನಗರಾಭಿವೃದ್ಧಿ, ಪರಿಸರ, ವಿಜ್ಞಾನ
ಕೃತಿಯನ್ನು ಓದಿ
ಕೃತಿ-ಅದ್ಭುತ ದ್ರವ ನೀರು
ಲೇಖಕರು-ಎ.ಓ. ಅವಲಮೂರ್ತಿ
ಸರಣಿ-ನೈಸರ್ಗಿಕ ವಿಜ್ಞಾನ, ಭೌತ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಅವಕಾಶ ಅಪಾರ
ಲೇಖಕರು:ಟಿ. ಜಿ. ಶ್ರೀನಿಧಿ
ಕೃತಿಯನ್ನು ಓದಿ
ಕೃತಿ-ನಮ್ಮ ಆಹಾರ
ಸಂಪಾದಕರು-ಡಾ.ಉಷಾಕಿರಣ್
ಸರಣಿ-ಆರೋಗ್ಯ ವಿಜ್ಞಾನ, ಆಹಾರ ವಿಜ್ಞಾನ, ವಿಜ್ಞಾನ
ಕೃತಿಯನ್ನು ಓದಿ
ಕೃತಿ: :ಉಪನ್ಯಾಸ ಗ್ರಂಥಮಾಲೆ – ೪೮೨
ಲೇಖಕರು:ಉಪನ್ಯಾಸ ಗ್ರಂಥಮಾಲೆ – ೪೮೨, ಕನ್ನಡ, ಗಣಿತವಿಜ್ಞಾನ, ಜಾನಪದ, ವಿಜ್ಞಾನ
ಕೃತಿಯನ್ನು ಓದಿ
ಕೃತಿ: : : ಕನ್ನಡ, ಜಾನಪದ, ಪರಿಸರ ಸಂಸ್ಕೃತಿ, ವಿಜ್ಞಾನ
ಲೇಖಕರು: ಕನ್ನಡ, ಜಾನಪದ, ಪರಿಸರ ಸಂಸ್ಕೃತಿ, ವಿಜ್ಞಾನ
ಕೃತಿಯನ್ನು ಓದಿ
ಕೃತಿ:ವಿಜ್ಞಾನ ಚಕ್ರಬಂಧ 387
ಲೇಖಕರು:
ಕೃತಿಯನ್ನು ಓದಿ
Aಮಕ್ಕಳ / ಹರೆಯ / ಕಲಿಕೆ
೧) ನಿಮ್ಮ ಮಗುವಿನ ಮನಸ್ಸು – ೨೨ ರೂ.
೨) ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೆ – ೪೦ ರೂ.
೩) ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು – ೨೦ ರೂ.
೪) ಬುದ್ಧಿಮಾಂದ್ಯ ಮಕ್ಕಳ ಲಾಲನೆ-ಪಾಲನೆ – ೨೨ ರೂ.
೫) ಹದಿಹರೆಯ ಮಾನಸಿಕ ಸಮಸ್ಯೆಗಳು – ೪೦ ರೂ.
೬) ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ – ೪೦ ರೂ.
೭) ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ – ೨೨ ರೂ.
೮) ಜ್ಞಾಪಕ ಶಕ್ತಿಯ ವೃದ್ಧಿ ಹೇಗೆ ? – ೨೦ ರೂ.
೯) ನಿಮ್ಮ ಬದುಕು, ಬುದ್ಧಿವಂತಿಕೆ, ಕಲಿಕೆ, ನೆನಪಿನ ಶಕ್ತಿ ಪರೀಕ್ಷಾ ನಿರ್ವಹಣೆ ಉತ್ತಮವಾಗಲಿ – ೩೦ ರೂ.
೧೦) ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ – ೨೫ ರೂ.
Bಮಹಿಳೆಯರಸಮಸ್ಯೆಗಳು
೧) ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು – ೩೫ ರೂ.
Cಮಿದುಳು–ನರಮಂಡಲ–ಮನಸ್ಸು
೧) ಮಿದುಳು : ರಚನೆ : ಕಾರ್ಯ ವಿಧಾನ – ೪೦ ರೂ.
೨) ನರಮಂಡಲದ ರೋಗಗಳು – ೪೫ ರೂ.
೩) ಮನಸ್ಸು ೧೦೮ ಪ್ರಶ್ನೆಗಳು – ೨೮ ರೂ.
೪) ನಿದ್ರೆ-ಕನಸುಗಳು – ೧೫ ರೂ.
೫) ನಿಮ್ಮ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ – ೭೫ ರೂ.
೬) ಮನಸ್ಸು : ಮಾನಸಿಕ ಅಸ್ವಸ್ಥತೆ – ೭೫ ರೂ.
೭) ಅಪರಾಧ ಪ್ರವೃತ್ತಿ ಮನೋದೌರ್ಬಲ್ಯವೇ – ೧೬ ರೂ.
೮) ಮನಸ್ಸೇ ನೀ ಪ್ರಶಾಂತವಾಗಿರು – ೪೦ ರೂ.
ಕೃತಿ-ವನ್ಯಜೀವಿ ಸಂದೇಶದ ಶುಭಾಶಯ ಪತ್ರಗಳು: ಸೈಂಟೂನ್
‘ಈ ಸಾಬೂನು ಬಳಸಿ ನಿಮ್ಮ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಿ’ಇದು ದೂರದರ್ಶನದಲ್ಲಿ ಬಂದ ಒಂದು ಜಾಹೀರಾತು. ಆಗ, ಮನಸ್ಸಿಗೆ ಮೈಕಾಂತಿಯ ವಿಚಾರಬಂತು. ಅದೇ ವಿಚಾರ ಲಹರಿ ಮುಂದುವರಿದು ನಕ್ಷತ್ರದ ಕಾಂತಿಯಲ್ಲಿ ಹೊಳೆಯಿತು. ನಕ್ಷತ್ರಗಳು ಆಕಾಶದಲ್ಲಿ ಹೊಳೆಯುತ್ತವೆ. ಅವುಗಳ ಕಾಂತಿ ಬೇರೆ ಬೇರೆ ನಕ್ಷತ್ರಗಳಿಗೆ ಬೇರೆ ಬೇರೆ. ಅದನ್ನು ಅಳೆಯಲು ‘ಕಾಂತಿ ಮಾನ’ (ಮ್ಯಾಗ್ನಿಟ್ಯೂಡ್)ವನ್ನು ಬಳಸುತ್ತಾರೆ.
ವಿಜ್ಞಾನಿ ಹಿಪಾರ್ಕಸ್ ಈ ಕಾಂತಿಮಾನದ ಬಗ್ಗೆ ವಿವರಣೆಯನ್ನು ಮೊದಲು ಕೊಟ್ಟವನು. ಗ್ರೀಕ್ ಖಗೋಲತಜ್ಞ ಹಿಪಾರ್ಕಸ್ (ಕ್ರಿ.ಪೂ. 190 – ಕ್ರಿ.ಪೂ. 120). ಇಂಗ್ಲೆಂಡಿನ ವಿಲಿಯಂ ಹರ್ಷಲ್ (1738-1822), 18ನೇ ಶತಮಾನದಲ್ಲಿ ಬೆಳಕು (ಕಾಂತಿ)ಹಾಗೂ ಕಾಂತಿಮಾನಕ್ಕೆ ಇರುವ ಕೆಳಗಿನ ಸಂಬಂಧವನ್ನು ವಿವರಿಸಿದನು.
ಕೃತಿ-ವಿಜ್ಞಾನ
ಸರಣಿ-ವಿಜ್ಞಾನ
ಕೃತಿಯನ್ನು ಓದಿ
ಕೃತಿ:ಬಾಲವಿಜ್ಞಾನ ಮಾಸ ಪತ್ರಿಕೆ
ಲೇಖಕರು:, ಬಾಲವಿಜ್ಞಾನ ಮಾಸ ಪತ್ರಿಕೆ – ಡಿಸೆಂಬರ ೨೦೦೯, ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ, ಮ್ಯಾಗಜಿನ್ಗಳು, ವಿಜ್ಞಾನ
ಕೃತಿಯನ್ನು ಓದಿ
ಏಳನೆಯ ತರಗತಿಯಲ್ಲಿ ಓದುತ್ತಿರುವ ಲಖನೌ ಹುಡುಗಿ ಯುಗರತ್ನಾ ಶ್ರೀವಾಸ್ತವ ಮೊನ್ನೆ (ಸೆಪ್ಟೆಂಬರ್ ೨೨,೨೦೦೯) ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಜಗತ್ತಿನ ಏಳುನೂರು ತಾಣಗಳಲ್ಲಿ ಏಕಕಾಲಕ್ಕೆ ಒಂದು ಹೊಸ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಸಿನೆಮಾದ ಹೆಸರು ‘ಏಜ್ ಆಫ್ ಸ್ಟುಪಿಡ್’ (ದಡ್ಡರ ಯುಗ).
ಬೆಂಗಳೂರಿನಲ್ಲೂ ಮೂರು ಕಡೆ ಪ್ರದರ್ಶನ ಕಂಡ ಈ ಚಿತ್ರ ಮತ್ತು ನ್ಯೂಯಾರ್ಕ್ನಲ್ಲಿ ಯುಗರತ್ನಾ ಮಾಡಿದ ಭಾಷಣ ಎರಡರದ್ದೂ ಸಂದೇಶ ಒಂದೇ:
ಇಂದಿನ ಜನ ನಾಯಕರು ತಂತಮ್ಮ ದೇಶಗಳನ್ನು ಸರಿಯಾಗಿ ಮುನ್ನಡೆಸದಿದ್ದರೆ ಹವಾಗುಣ ಬದಲಾವಣೆ ತೀವ್ರವಾಗಲಿದೆ; ಭವಿಷ್ಯ ತೀರಾ ಕರಾಳವಾಗಲಿದೆ ಎಂದು. ‘ಸ್ಟುಪಿಡ್’ ಚಿತ್ರದಲ್ಲಿ ಇಂದಿಗೆ 45 ವರ್ಷಗಳ ನಂತರದ ಭೂಮಿಯ ಸಂದರ್ಭವನ್ನು ತೋರಿಸಲಾಗಿದೆ.
ಕ್ರಿ.ಶ. ೨೦೫೫ರಲ್ಲಿ ಬಿಸಿ ಪ್ರಳಯದ ನಂತರವೂ ಬದುಕುಳಿದ ಏಕಾಂಗಿ ವೃದ್ಧನೊಬ್ಬನ ಜೀವನ ಚಿತ್ರಣ ಅದರಲ್ಲಿದೆ. ಆದರೆ ಇಡೀ ಚಿತ್ರ ಅದೊಂದೇ ವರ್ಷದ್ದಲ್ಲ. 2008ರಿಂದ ಹಿಡಿದು ಮುಂದಿನ ನಾಲ್ಕು ದಶಕಗಳ ಬದುಕಿನ ಚಿತ್ರಣವನ್ನು ಕಲ್ಪನೆ ಮತ್ತು ವಾಸ್ತವಗಳ ದೃಶ್ಯಾವಳಿಗಳಲ್ಲಿ ತೋರಿಸಲಾಗಿದೆ.
ಲಂಡನ್ ನಗರ ಪದೇ ಪದೇ ಜಲಪ್ರಳಯಕ್ಕೆ ತುತ್ತಾಗಿ ಖಾಲಿಯಾಗಿದೆ. ಸಿಡ್ನಿಯ ಖ್ಯಾತ ಅಪೇರಾ ಹೌಸ್ ಕಟ್ಟಡದ ಹಿಂದೆ ಜ್ವಾಲೆಗೆ ಭುಗಿಲೇಳುತ್ತಿದೆ; ಇಡೀ ಆಸ್ಟ್ರೇಲಿಯಾ ಖಂಡವೇ ವಿಶಾಲ ಕರಕಲು ಭೂಮಿಯಾಗಿದೆ. ಅಮೆರಿಕದ ಜೂಜುಖೋರರ ನಗರ ಲಾಸ್ ವೆಗಾಸ್ ಇಡಿಯಾಗಿ ಮರುಭೂಮಿಯ ಮರಳು ರಾಶಿಯಲ್ಲಿ ಹೂತಿದೆ.
ಬರದ ಬೇಗೆಯಲ್ಲಿ ನಿರ್ಜನವಾದ ಭರತಖಂಡ, ತಾಜ್ ಮಹಲ್ ಸಮೀಪ ಕಾಗೆಗಳು ಕುಕ್ಕುತ್ತಿರುವ ಮಾನವ ಮಾಂಸಖಂಡ; ಉತ್ತರ ಧ್ರುವದ ತುಸು ತಂಪಿನಲ್ಲಿ ನಿರಾಶ್ರಿತರ ನರಕಸದೃಶ ಬದುಕು ( ‘ಏಜಾಫ್ ಸ್ಟುಪಿಡ್’ ಜಾಲತಾಣದಲ್ಲಿ ಈ ಚಿತ್ರವನ್ನು ಉಚಿತವಾಗಿ ನೋಡಬಹುದು).
ಕಟ್ಟುಕತೆ ನಿಜ. ಆದರೆ ಇಂದಿನ ಸಮಾಜ ಹೀಗೆಯೇ ಸಂಪನ್ಮೂಲಗಳ ದುಂದುವೆಚ್ಚದಲ್ಲಿ ತಲ್ಲೆನವಾಗಿದ್ದರೆ, ‘ಸ್ಟುಪಿಡ್’ನಲ್ಲಿ ಕಾಣುವ ಚಿತ್ರಣವೇ ವಾಸ್ತವವೂ ಆಗಲು ಸಾಧ್ಯವಿದೆ. ವಿಶ್ವಸಂಸ್ಥೆಯಿಂದ ನೇಮಕಗೊಂಡ ಐಪಿಸಿಸಿ ತಜ್ಞರ ಅಂದಾಜಿನ ಪ್ರಕಾರ, ಭೂಮಿಯ ಸರಾಸರಿ ಉಷ್ಣತೆ ನಾಲ್ಕು ಡಿಗ್ರಿ ಸೆಲ್ಸಿಯಸ್ ಏರಿದರೆ ಇವೆಲ್ಲ ಕರಾಳ ಭವಿಷ್ಯವೂ ನಿಜವಾಗುತ್ತದೆ.
ಇಂದಿನ ರಾಜಕೀಯ ಧುರೀಣರು ನಿಜಕ್ಕೂ ಮುತ್ಸದ್ದಿಗಳಾಗಿ ಇಡೀ ಮಾನವಕುಲದ ಪ್ರಗತಿಯ ದಿಶೆಯನ್ನು ಬದಲಿಸದಿದ್ದರೆ ನ್ಯೂಯಾರ್ಕ್ನಲ್ಲಿರುವ ಸ್ವಾತಂತ್ರ್ಯದೇವಿಯ ಪ್ರತಿಮೆಯ ತೋಳಿನ ತುದಿಯಲ್ಲಿರುವ ದೊಂದಿ ನೀರಲ್ಲಿ ಮುಳುಗಿ ನಂದಿಹೋಗುತ್ತದೆ.
ಮುತ್ಸದ್ದಿಗಳು ಎಲ್ಲಿದ್ದಾರೆ? ಯುಗರತ್ನಾ ಭಾಷಣ ಮಾಡಿದ ಹಾಗೆಯೇ ವಿಶ್ವಸಂಸ್ಥೆಯ ಸಾರ್ವತ್ರಿಕ ಸಮಾವೇಶದಲ್ಲಿ ಹಿಂದೆ 1992ರಲ್ಲಿ ಕೆನಡಾದ ಸೆವೆರಿನ್ ಸುಝುಕಿ ಎಂಬ ಇನ್ನೊಬ್ಬ ಹುಡುಗಿ ಅಂದಿನ ಧುರೀಣರಿಗೆ ಕಳಕಳಿಯ ಮನವಿ ಮಾಡಿದ್ದಳು.
ಜೀವಸಂಕುಲದ ಸತತ ನಾಶ, ಮರುಭೂಮಿ ವಿಸ್ತರಣೆ, ಜಲ ಮಾಲಿನ್ಯ, ಶಸ್ತ್ರಾಸ್ತ್ರ ಸಂಗ್ರಹಣೆ ಮುಂತಾದ ಅನಿಷ್ಟಗಳನ್ನು ಪಟ್ಟಿಮಾಡಿ, ‘ಹಿರಿಯರೇ, ಇವುಗಳನ್ನೆಲ್ಲ ಸರಿಪಡಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ, ಇಂಥ ಅನಿಷ್ಟಗಳ ಸರಮಾಲೆ ಇನ್ನಷ್ಟು ಬೆಳೆಯದಂತೆ ತಡೆಯಲು ಸಾಧ್ಯವೇ?’ ಎಂದು ಕೇಳಿದ್ದಳು. ಅಂದಿನ ಎಲ್ಲ ಸಂಕಟಗಳೂ ಇಂದು ಇನ್ನಷ್ಟು ಉಲ್ಬಣಗೊಂಡಿವೆ. ಸಂಕಟಗಳ ಜಾಗತೀಕರಣ ವಾಗಿದೆ.
ಸಮಸ್ಯೆಗಳನ್ನು ಕಡಿಮೆ ಮಾಡಲೆಂದು ವಿಜ್ಞಾನಿಗಳು, ತಂತ್ರವಿದ್ಯಾ ಪರಿಣತರು ಹಾಗೂ ಯೋಜನಾ ತಜ್ಞರು ರೂಪಿಸುವ ಎಲ್ಲ ಉಪಾಯಗಳೂ ರಾಜಕೀಯ ಹಸ್ತಕ್ಷೇಪದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತವೆ.
ಇದಕ್ಕೆ ತೀರ ಸರಳ ಉದಾಹರಣೆ ಎಂದರೆ ಬೋರ್ವೆಲ್ ಯಂತ್ರಗಳು. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಸಿಕ್ಕ ಅತ್ಯುತ್ತಮ ತಾಂತ್ರಿಕ ಉಪಾಯ ಇದು ಹೌದು. ಆದರೆ ಅದರ ದುರ್ಬಳಕೆ ಅತಿಯಾಗಿದ್ದರಿಂದಲೇ ನೆಲದಾಳಕ್ಕೂ ಮರುಭೂಮಿ ವಿಸ್ತರಿಸಿದೆ.
ರಾಜಸ್ತಾನದ ನಂತರದ ಅತಿ ದೊಡ್ಡ ‘ಮರುಭೂಮಿ ಸದೃಶ’ ಭೂಕ್ಷೇತ್ರವಿರುವ ರಾಜ್ಯ ನಮ್ಮದೆಂಬ ಕುಖ್ಯಾತಿ ಬಂದಿದೆ. ಇಂಥ ಬೋರ್ವೆಲ್ಗಳಿಗೆ ನಿಯಂತ್ರಣ ಹೇರಲೆಂದು ಮಸೂದೆ ತರುವ ಯತ್ನಗಳೆಲ್ಲ ರಾಜಕೀಯ ಹಿತಾಸಕ್ತಿಯಿಂದಾಗಿ ವಿಫಲವಾಗಿವೆ.
ಇದೀಗ ಉಡಾವಣೆಗೊಂಡ ‘ಓಷನ್ಸ್ಯಾಟ್’ ಉದಾಹರಣೆಯನ್ನೇ ನೋಡೋಣ. ಕಳೆದ ಮೂವತ್ತು ವರ್ಷಗಳಿಂದಲೂ ಇದೇ ಮಾದರಿಯ ಉಪಗ್ರಹಗಳು ಜಗತ್ತಿನ ವಿಶಾಲ ಸಾಗರಗಳ ಮೇಲೆ ಕಣ್ಣಿಟ್ಟಿವೆ.
ಅಮೆರಿಕದ ‘ನೋವಾ’ ಸರಣಿ ಉಪಗ್ರಹಗಳು ರವಾನಿಸುವ ಮಾಹಿತಿ ಎಲ್ಲರಿಗೂ ಲಭ್ಯ ಇವೆ. ಹವಾಮಾನ ಮುನ್ಸೂಚನೆಯ ಕುರಿತಂತೆ ದಿನವೂ ನಮ್ಮ ಟಿವಿಯಲ್ಲಿ ಕಾಣುವ ನಕ್ಷೆಗಳು ಚಿತ್ರಗಳೆಲ್ಲ ‘ನೋವಾ’ ಉಪಗ್ರಹಗಳಿಂದ ಬಂದುದೇ ಆಗಿವೆ.
ಜತೆಗೆ ಯಾವ ಸಮುದ್ರದ ಯಾವ ಭಾಗದಲ್ಲಿ ಉಷ್ಣತೆ ತುಸು ಹೆಚ್ಚಾಗಿದೆ, ಹಸಿರು ಪಾಚಿಗಳು ಯಾವ ಭಾಗದಲ್ಲಿ ಹೆಚ್ಚಾಗಿ ಸಾಂದ್ರವಾಗಿವೆ ಎಂಬುದರ ವರದಿ ಕೂಡ ಅಲ್ಲಿಂದಲೇ ಸಿಗುತ್ತದೆ. ಅದನ್ನು ಆಧರಿಸಿ, ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿ ಮೀನುಗಳು ಒಟ್ಟಾಗಿ ಸಂಚರಿಸುತ್ತಿವೆ ಎಂಬುದನ್ನು ಕೂಡ ಹೇಳಬಹುದು.
ಹೈದರಾಬಾದ್ನಲ್ಲಿರುವ ‘ಸಾಗರ ಮಾಹಿತಿ ಕೇಂದ್ರ’ (ಇನ್ಕೊಯಿಸ್) ಹೆಸರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆ ‘ನೋವಾ’ ನೆರವಿನಿಂದ ವಾರಕ್ಕೆ ಮೂರು ಬಾರಿ ಮೀನು ದಟ್ಟಣಿಸಿರುವ ಸ್ಥಳಗಳನ್ನು ಗುರುತಿಸಿ ದೇಶದ ನಾನಾ ಬಂದರುಗಳಿಗೆ ಮಾಹಿತಿ ನೀಡುತ್ತದೆ.
ದೋಣಿಯಲ್ಲಿ ಕೂತು ಹತ್ತಾರು ಕಿಮೀ ದೂರದವರೆಗೆ ಅಂಡಲೆಯುತ್ತ ಅದೆಷ್ಟೊ ಬಾರಿ ವ್ಯರ್ಥ ಸುತ್ತಾಡುವ ಮೀನುಗಾರರಿಗೆ ಇದರಿಂದ ತುಂಬ ಅನುಕೂಲವಾಗಿದೆ. ಇಂಥದೇ ಸ್ಥಳದಲ್ಲಿ ಮೀನುಗಳಿವೆ ಎಂದು ಗೊತ್ತಾಗಿ ನೇರವಾಗಿ ಅಲ್ಲಿಗೆ ಧಾವಿಸುತ್ತಾರೆ. ಸಮಯ ಹಾಗೂ ಶಕ್ತಿಯ ಉಳಿತಾಯವಾಗಿ ‘ನೀಲಕ್ರಾಂತಿ’ ಯಶಸ್ವಿಯಾಗುತ್ತದೆ.
ಈಗ ಆಗಿದ್ದೇನೆಂದರೆ, ಸಾಮಾನ್ಯ ಮೀನುಗಾರರಿಗೆ ಈ ಮಾಹಿತಿ ಸಿಗುವ ಮೊದಲೇ ಯಾಂತ್ರೀಕೃತ ಬೃಹತ್ ಹಡಗುಗಳು ಅಲ್ಲಿಗೆ ಧಾವಿಸುತ್ತವೆ. ಬೇಡಿಕೆ ಇರಲಿ ಬಿಡಲಿ, ಭಕ್ಷ್ಯಯೋಗ್ಯ ಇರಲಿ ಬಿಡಲಿ, ವಿಶಾಲ ಬಲೆಗಳನ್ನು ಬೀಸಿ ಏಕಕಾಲಕ್ಕೆ ಹತ್ತಾರು ಟನ್ಗಟ್ಟಲೆ ಮೀನುಗಳನ್ನು ಹಿಡಿದು ತರುತ್ತವೆ.
ದುರ್ಬಲ ಮೀನುಗಾರರು ತಮ್ಮ ಸಾಂಪ್ರದಾಯಿಕ ಜ್ಞಾನದ (ಅಂದರೆ ಪಕ್ಷಿಗಳ ಹಾರಾಟ, ನೀರಿನ ಗುಳ್ಳೆ, ಬದಲಾಗುವ ಬಣ್ಣ, ಗಾಳಿಯ ವಾಸನೆ) ಜಾಡು ಹಿಡಿದು ಅತ್ತ ಹೋದರೆ ಅಲ್ಲಿ ಎಲ್ಲವೂ ಆಗಲೇ ಖಾಲಿ. ಯಾಂತ್ರಿಕ ಹಡಗುಗಳ ಇಂಥ ಅಂದಾದುಂದಿ ಕಬಳಿಕೆಯಿಂದಾಗಿ ಇಂದು ಜಗತ್ತಿನ ಜಲಜೀವ ಭಂಡಾರವೇ ಖಾಲಿಯಾಗುತ್ತವೆ.
ನಿನ್ನೆ ಹಾರಿಬಿಟ್ಟ ಉಪಗ್ರಹದಿಂದ ನಮ್ಮ ಬಾಹ್ಯಾಕಾಶ ತಂತ್ರಜ್ಞರ ಆತ್ಮವಿಶ್ವಾಸ ಹೆಚ್ಚಿದೆ; ಪಿಎಸ್ಎಲ್ವಿ ರಾಕೆಟ್ಗಳ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಿದೆ.
ಬೇರೆ ರಾಷ್ಟ್ರಗಳು ತುಸು ಅಗ್ಗದ ದರದಲ್ಲಿ ನಮ್ಮ ರಾಕೆಟ್ ಮೇಲೆಯೇ ತಮ್ಮ ಉಪಗ್ರಹಗಳ ಹಾರಿಬಿಡಬಹುದಾದ ಅವಕಾಶ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯ ಎಂದರೆ ಮುಂದೆಂದಾದರೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಉಪಗ್ರಹ ಚಿತ್ರಣಗಳನ್ನು ನಮಗೆ ಕೊಡಲು ನಿರಾಕರಿಸಿದರೆ ನಾವು ಕಂಗಾಲಾಗಬೇಕಾಗಿಲ್ಲ. ಸ್ವಾವಲಂಬನೆ ನಮ್ಮದಾಗುತ್ತದೆ.
‘ಓಷನ್ಸ್ಯಾಟ್-2’ ನೆರವಿನಿಂದ ನಾವೂ ಮೀನುಗುಂಪುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಸುಂಟರಗಾಳಿಯ ಮುನ್ಸೂಚನೆ ಗೊತ್ತಾಗಬಹುದು. ಸಮುದ್ರ ಕೊರೆತ ಎಲ್ಲೆಲ್ಲಿ ಎಷ್ಟು ತೀವ್ರ ಆಗಲಿಕ್ಕಿದೆ, ಉಪ್ಪುನೀರು ಎಷ್ಟೆಷ್ಟು ದೂರಕ್ಕೆ ನುಗ್ಗುತ್ತಿದೆ ಎಂಬುದೂ ಗೊತ್ತಾಗಬಹುದು.
ಅದನ್ನೇ ಆಧರಿಸಿ, ಕಡಲ ಕೊರೆತ ತಡೆಗಟ್ಟುವ ಇನ್ನಷ್ಟು ವ್ಯರ್ಥ ಯೋಜನೆಗಳು ಎಲ್ಲೋ ರೂಪುಗೊಳ್ಳುತ್ತವೆ; ಸಾರ್ವಜನಿಕ ಹಣದ ಅಪವ್ಯಯ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತದೆ. ಅದನ್ನು ತಡೆಗಟ್ಟುವ ರಾಜಕೀಯ ಇಚ್ಛಾಶಕ್ತಿ ನಮ್ಮಲ್ಲಿ ಬೆಳೆದೀತೆ? ಎಸ್ಈಝಡ್ಗಳು, ಕಡಲಂಚಿನ ರೆಸಾರ್ಟ್ಗಳು ಕಂಡಕಂಡಲ್ಲಿ ಆಳ ಬೋರ್ವೆಲ್ ಕೊರೆದು ಜಲಖಜಾನೆಯನ್ನು ಖಾಲಿ ಮಾಡದಂತೆ ತಡೆಯಲು ಸಾಧ್ಯವೆ?
ಬೋರ್ವೆಲ್ ಮಾತು ಬಂದಾಗ ಸಹಜವಾಗಿ ನಾರ್ಮನ್ ಬೋರ್ಲಾಗ್ ನೆನಪೂ ಬರುತ್ತದೆ. ‘ಹಸಿರುಕ್ರಾಂತಿಯ ಜನಕ’ ಎಂದೇ ಖ್ಯಾತಿ ಹಾಗೂ ನೊಬೆಲ್ ಶಾಂತಿ ಪುರಸ್ಕಾರ ಪಡೆದು ಈಚೆಗೆ ಗತಿಸಿದ ಈ ಪುಣ್ಯಾತ್ಮನಿಂದಾಗಿ ಮೆಕ್ಸಿಕೊ, ಪಾಕಿಸ್ತಾನ ಮತ್ತು ಭಾರತದಲ್ಲಿ ಆಹಾರ ಸ್ವಾವಲಂಬನೆ ಸಾಧ್ಯವಾಯಿತು ನಿಜ.
ಅಧಿಕ ಇಳುವರಿಯ ಜತೆಗೆ ಅಧಿಕ ನೀರು, ಅಧಿಕ ವಿದ್ಯುತ್ತು, ಅಧಿಕ ಪೆಟ್ರೋಲಿಯಂ, ಅಧಿಕ ಒಳಸುರಿ ಎಲ್ಲವುಗಳ ಮಹಾಕ್ರಾಂತಿಯೇ ನಡೆದು ಇಂದಿನ ಭೂಮಿಯ ಒಟ್ಟಾರೆ ಸಂಕಷ್ಟಗಳಿಗೆ ಆತನ ಕೊಡುಗೆಯೂ ಅಧಿಕ ಎಂತಲೂ ವಾದಿಸಬಹುದು.
ಕೃಷಿ ವಿಸ್ತರಣೆಗೆಂದು ನಾಶವಾಗಬಹುದಾಗಿದ್ದ ಲಕ್ಷಾಂತರ ಹೆಕ್ಟೇರ್ ಅರಣ್ಯ ತನ್ನಿಂದಾಗಿ ಉಳಿಯಿತೆಂದೂ ಹಸಿವೆಯಿಂದ ಸಾಯಬಹುದಾಗಿದ್ದ ಕೋಟ್ಯಂತರ ಜನರ ಬದುಕು ಭದ್ರವಾಯಿತೆಂದೂ ಆತ ಹೇಳಿದ್ದರಲ್ಲಿ ಸತ್ಯಾಂಶ ಇದೆಯಾದರೂ ಕೃಷಿಭೂಮಿಯಲ್ಲಿ ಸಾಂಪ್ರದಾಯಿಕ ತಳಿಗಳ ನಾಶ, ಮಣ್ಣುನೀರಿನ ಮಾಲಿನ್ಯ, ನೆಲದಾಳದ ಬರಗಾಲ ಎಲ್ಲಕ್ಕೂ ಈ ಕ್ರಾಂತಿಯೇ ಕಾರಣ ಎಂಬುದೂ ಅಷ್ಟೇ ನಿಜ. ಈಚೆಗೆ ಈತ ಕುಲಾಂತರಿ ತಳಿಗಳ ಪ್ರಚಾರಕನೂ ಆಗಿ, ಕಳೆನಾಶಕ ಕೆಮಿಕಲ್ಗಳ ಪ್ರಚಾರಕನಾಗಿ, ಐರೋಪ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಾಗಿತ್ತು ಕೂಡ.
‘ಕೈಯಾರೆ ಕಳೆ ಕೀಳುವುದೆಂದರೆ ತುಂಬ ಕಷ್ಟದ ಕೆಲಸ; ಬಡವರಿಗೂ ಟೊಂಕ ಇರುತ್ತದೆ ಕಣ್ರೀ!’ ಎಂದು ಬೋರ್ಲಾಗ್ ಕಳೆನಾಶಕ ಕೆಮಿಕಲ್ ತಯಾರಿಸುವ ಕಂಪೆನಿಗಳ ವಕ್ತಾರನಂತೆ ಕಳೆದ ವರ್ಷ ಹೇಳಿದ್ದು ಅನೇಕರನ್ನು ಕೆರಳಿಸಿತ್ತು. ಕೃಷಿ ರಸಾಯನಗಳ ಅತಿ ಬಳಕೆಯಿಂದಾಗಿಯೇ ಭಾರತದಂಥ ದೇಶಗಳ ಕೃಷಿಕರು ನಾನಾ ಕಾಯಿಲೆಗಳಿಂದ, ಖಿನ್ನತೆಯಿಂದ ಬಳಲುತ್ತ, ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಅಂಥ ಅನಾಹುತಗಳಿಗೆ ವಿಜ್ಞಾನ ತಂತ್ರಜ್ಞಾನ ಕಾರಣವೇ ಅಥವಾ ಧನದಾಹಿ ಕಂಪೆನಿಗಳು ಕಾರಣವೇ, ಅವುಗಳನ್ನು ಪೊರೆಯುವ ರಾಜಕಾರಣಿಗಳು ಕಾರಣವೇ ಎಂಬುದು ಸದಾ ಚರ್ಚಾಸ್ಪದ ವಿಷಯ ವಾಗಿಯೇ ಉಳಿಯುತ್ತದೆ.
ಹಸಿರು ಕ್ರಾಂತಿಯ ಎಲ್ಲಕ್ಕಿಂತ ದೊಡ್ಡ ಅನಾಹುತವನ್ನು ಈಗೀಗ ವಿಜ್ಞಾನಿಗಳು ಮನಗಾಣುತ್ತಿದ್ದಾರೆ. ಹೈಬ್ರಿಡ್ ತಳಿಗಳಲ್ಲಿ ಕಬ್ಬಿಣ, ಸತು, ಅಯೊಡಿನ್ ಮತ್ತು ಎ ಜೀವಸತ್ವ ತೀರಾ ಕಡಿಮೆ ಇರುತ್ತದೆ. ಅದನ್ನೇ ತಿಂದು ಬೆಳೆದ ಇಡೀ ಜನಾಂಗ ಹೊಟ್ಟೆ ತುಂಬಿದ್ದರೂ ‘ಅವಿತ ಹಸಿವೆ’ಯಿಂದಾಗಿ ಅನೇಕ ಅವ್ಯಕ್ತ ದೌರ್ಬಲ್ಯಗಳ ತವರಾಗುತ್ತದೆ.
ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ಮಾಂಸ, ಮೊಟ್ಟೆ, ಮೀನು, ಹಣ್ಣುಹಂಪಲುಗಳನ್ನು ಸೇವಿಸುವ ಜಗತ್ತಿನ ಇತರ ಜನಾಂಗಕ್ಕೆ ಹೋಲಿಸಿದರೆ ಹೈಬ್ರಿಡ್ ಧಾನ್ಯಗಳನ್ನೇ ಹೆಚ್ಚಾಗಿ ಉಣ್ಣುವವವರಿಗೆ ಬೌದ್ಧಿಕ, ಭಾವನಾತ್ಮಕ ಹಾಗೂ ದೈಹಿಕ ಸೋಲುಗಳು ಪದೇ ಪದೇ ಎದುರಾಗುತ್ತವೆ.
ಸಮತೋಲ ಆಹಾರವೇ ದುರ್ಲಭವಾದಾಗ ನೊಬೆಲ್ ಪಾರಿತೋಷಕವೂ ಒಲಿಂಪಿಕ್ ಪದಕಗಳೂ ದುರ್ಲಭವಾಗುತ್ತವೆ.
ಅಮೆರಿಕದ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಭಾರತವೂ ಮಹಾನ್ (ಗ್ರೇಟ್) ದೇಶವಾಗಲು ಸಾಧ್ಯ ಎಂದು ಮೂರು ವರ್ಷಗಳ ಹಿಂದೆ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ದಿಲ್ಲಿಯಲ್ಲಿ ಹೇಳಿದ್ದರು. ನಿಮ್ಮ ದೇಶವನ್ನು ನಾವೇ ‘ಗ್ರೇಟ್’ ಮಾಡುತ್ತೇವೆ ಎಂಬ ಆ ಮಾತಿನಲ್ಲಿ ಏನೆಲ್ಲ ಅರ್ಥಗಳಿದ್ದವು. ಕೆಲವರಿಗೆ ಆ ಮಾತಿನಿಂದ ಎದೆಯುಬ್ಬಿತು. ಮತ್ತನೇಕರು ಅದರಲ್ಲಿ ಅವಹೇಳನದ ಎಳೆಗಳನ್ನೇ ಕಂಡರು.ಅದಾದ ನಂತರ ನಮ್ಮ ದೇಶವನ್ನು ಗ್ರೇಟ್ ಮಾಡಲು ಅಮೆರಿಕ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ತನಗೇ ದುಬಾರಿ ಹಾಗೂ ಅಪಾಯಕಾರಿ ಎನಿಸಿದ ಪರಮಾಣು ತಂತ್ರಜ್ಞಾನವನ್ನು ನಮ್ಮಲ್ಲಿ ತಂದು ಸುರಿಯಲು ಧಾರಾಳ ನೆರವು ನೀಡುತ್ತಿದೆ. ಸುರಕ್ಷಿತ, ಕಡಿಮೆ ವೆಚ್ಚದ, ನೈಸರ್ಗಿಕ ಅನಿಲವನ್ನು ನಾವು ಇರಾನ್ನಿಂದ ಕೊಳವೆ ಮೂಲಕ ತರಲಾಗದಂತೆ ನಿರ್ಬಂಧ ಒಡ್ಡಿದೆ. ಅಸ್ಸಾಂ ಪಕ್ಕದ ಮಯನ್ಮಾರ್ ಭೂತಲದಲ್ಲಿರುವ ಪೆಟ್ರೋಲಿಯಂ ಮತ್ತು ಅನಿಲ ಖಜಾನೆಗೆ ನಾವು ಕೈಯಿಕ್ಕದಂತೆ ಮಾಡಿ ನಮಗೆ ಶಹಭಾಸ್ ಎಂದಿದೆ. ನಮ್ಮನ್ನು ಹೀಗೆ ಗ್ರೇಟ್ ಮಾಡುವ ಸರಣಿಯಲ್ಲಿ ತೀರ ಈಚಿನ ಉದಾಹರಣೆ ಎಂದರೆ ಚಂದ್ರನ ನೀರು.
ನಿಜ, ಅನೇಕ ವರ್ಷಗಳ ನಂತರ ನಮ್ಮ ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದಾರೆ. ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಮಾಡಿದ ನಮ್ಮ ‘ಇಸ್ರೊ’ ತಜ್ಞರ ಯಶಸ್ಸನ್ನು ಅಮೆರಿಕದ ಮಾಧ್ಯಮಗಳು ಎದ್ದು ಕಾಣುವಂತೆ ಪ್ರಕಟಿಸಿವೆ. ಚಂದ್ರನ ಮೇಲಿನ ಬಂಡೆಗಳಲ್ಲಿ ಹಾಗೂ ನಯವಾದ ದೂಳು ಪುಡಿಯಲ್ಲಿ ನೀರಿನ ಅಂಶ ಇದೆ ಎಂದು ನಲ್ವತ್ತು ವರ್ಷಗಳ ಹಿಂದೆಯೇ ಅಮೆರಿಕದ ಗಗನಯಾತ್ರಿಗಳು ತಂದ ಸ್ಯಾಂಪಲ್ಗಳಲ್ಲಿ ಪತ್ತೆಯಾಗಿತ್ತು. ಆದರೆ ಅಮೆರಿಕಕ್ಕೆ ಆಗ ಅದರಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ ಸೋವಿಯತ್ ರಷ್ಯದ ಜತೆಗಿನ ಪೈಪೋಟಿಯಲ್ಲಿ ತಾನು ಮೇಲುಗೈ ಸಾಧಿಸಿದ್ದಾಗಿತ್ತು. ಆರು ಬಾರಿ ಅಲ್ಲಿಗೆ ಹೋಗಿ 12 ಜನರನ್ನು ಇಳಿಸಿ, ಮರಳಿ ಕರೆತಂದ ಮೇಲೆ ಸಹಜವಾಗಿ ಅತ್ತ ಆಸಕ್ತಿ ಕಡಿಮೆಯಾಗಿತ್ತು.
‘ನೀರಿನ ಅಂಶ ಎಂಥದ್ದೂ ಇಲ್ಲ. ಗಗನಯಾತ್ರಿಗಳು ಅಲ್ಲಿನ ಕಲ್ಲುಮಣ್ಣಿನ ಪುಡಿಯನ್ನು ಪ್ಯಾಕ್ ಮಾಡುವಾಗ ಅಥವಾ ಬಿಚ್ಚುವಾಗ ಎಲ್ಲೋ ತುಸು ತೇವಾಂಶ ಸೇರಿದೆ’ ಎಂದು ಹೇಳಿ ನಾಸಾ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು.
ಈಗ ಪತ್ತೆಯಾಗಿರುವ ನೀರೂ ಅಷ್ಟೆ; ತೀರಾ ತೀರಾ ಅಲ್ಪ ಪ್ರಮಾಣದಲ್ಲಿ ಅದೂ ಅಗೋಚರ ರೂಪದಲ್ಲಿ ಇದೆ. ಚಂದ್ರನ ಕೆಲವು ಬಗೆಯ ಶಿಲೆಗಳಲ್ಲಿ ಆಮ್ಲಜನಕ ಮತ್ತು ಜಲಜನಕದ ಪರಮಾಣುಗಳು ಅರೆಬಂಧಿತ ರೂಪದಲ್ಲಿ ಇವೆ. ‘ಎಚ್2ಓ’ ಬದಲಿಗೆ ‘ಓಎಚ್’ ರೂಪದಲ್ಲಿ ಇವೆ. ಅವಕ್ಕೆ ನೀರಿನ ಲಕ್ಷಣ ಇಲ್ಲ. ನಮ್ಮ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣಗಳ ಸುತ್ತಮುತ್ತ ಅಂಥ ಕಲ್ಲುಗಳು ಇವೆ. ಅಲ್ಲಿನ ಒಣ ಕಲ್ಲನ್ನು ತಂದು ಪುಡಿ ಮಾಡಿ ಅದಕ್ಕೆ ತುಸು ಜಲಜನಕ ಅನಿಲವನ್ನು ಸೇರಿಸಿದರೆ ನೀರಿನ ಬಿಂದುಗಳನ್ನು ಹೊಮ್ಮಿಸಬಹುದು. ಹೊರಗಿನಿಂದ ತುಸು ಜಲಜನಕ ಸೇರಬೇಕಷ್ಟೆ.
ಸೂರ್ಯನಿಂದ ಸೂಸಿ ಬರುವ ಬಿಸಿಲಿನ ಜತೆ ‘ಸೌರಗಾಳಿ’ ಕೂಡ ಮೆಲ್ಲಗೆ ಸಾಗಿ ಬರುತ್ತಿರುತ್ತದೆ. ಇದರಲ್ಲಿ ಜಲಜನಕದ ಬೀಜಕಣಗಳೂ ಇರುತ್ತವೆ. ಇವು ಚಂದ್ರನ ಮೇಲಿನ ಕಲ್ಲುದೂಳಿನ ಪುಡಿಯನ್ನು ಸ್ಪರ್ಶಿಸಿದಾಗ ಅಲ್ಲಿ ತಾತ್ಕಾಲಿಕವಾಗಿ ತುಸು ತೇವಾಂಶ ರೂಪುಗೊಳ್ಳುತ್ತದೆ. ವಿಶೇಷ ಸ್ಕ್ಯಾನರ್ ಮೂಲಕ ಆ ಕಲ್ಲು-ದೂಳಿನ ಚಿತ್ರವನ್ನು ಸೆರೆಹಿಡಿದರೆ, ಅದರಲ್ಲಿ ಕಾಣುವ ರೋಹಿತದಲ್ಲಿ ನೀರಿನ ಪಸೆಯನ್ನು ಕೆಮಿಸ್ಟ್ರಿ ತಜ್ಞರು ಗುರುತಿಸಬಹುದು. ಚಂದ್ರಲೋಕದ ಬೆಳಗಿನ ಒಂದೆರಡು ಗಂಟೆಗಳ ಕಾಲ ಹೀಗೆ ಶೇಖರವಾದ ಅತ್ಯಲ್ಪ ತೇವಾಂಶ ಮತ್ತೆ ಬಿಸಿಲು ಏರಿದಂತೆ ಆವಿಯಾಗಿ ಆರಿ ಹೋಗುತ್ತದೆ; ಮರುದಿನ ಮತ್ತೆ ಎಳೆಬಿಸಿಲಲ್ಲಿ ನೀರಿನ ಸೂಕ್ಷ್ಮ ಹನಿಗಳು ದೂಳಿನ ಪದರದ ಮೇಲೆ ಕೂರುತ್ತವೆ. ಒಂದರ್ಥದಲ್ಲಿ ಚಂದ್ರ ಮೆಲ್ಲಗೆ ಬೆವರುತ್ತಾನೆ.
ಇದು ಹೊಸ ಸಂಗತಿಯೇನೂ ಅಲ್ಲ. ಗಗನಯಾತ್ರಿಗಳು ತಂದ ಚಂದ್ರಪುಡಿಯಲ್ಲಿ ನೀರಿದ್ದ ಅಂಶವನ್ನು ನಾವು ಮರೆತಿರಬಹುದು. ಆದರೆ ಹತ್ತು ವರ್ಷಗಳ ಹಿಂದೆ 1999ರಲ್ಲಿ ಶನಿಯತ್ತ ಹೊರಟ ‘ಕಾಸಿನಿ’ ನೌಕೆ ನಮ್ಮ ಚಂದ್ರನನ್ನು ಆಗಸ್ಟ್ 19ರಂದು ಪ್ರದಕ್ಷಿಣೆ ಹಾಕಿ ಹೋಗುವಾಗ ಇಂಥದ್ದೇ ಚಿತ್ರವನ್ನು ರವಾನಿಸಿತ್ತು.
ಈಚೆಗೆ ಜೂನ್ 2ರಿಂದ 9ರವರೆಗೆ ನಾಸಾದ ‘ಡೀಪ್ ಇಂಪಾಕ್ಟ್’ ಹೆಸರಿನ ನೌಕೆಯೊಂದು ಚಂದ್ರನ ಉತ್ತರ ಧ್ರುವದ ಚಿತ್ರಣಗಳನ್ನು ರವಾನಿಸಿತ್ತು. ಅದು ಕೂಡ ಚಂದ್ರನಲ್ಲಿ ತೇವಾಂಶ ಇರುವುದನ್ನು ವರದಿ ಮಾಡಿತ್ತು. ಅದಾದ ಮೇಲೆ ನಮ್ಮದೇ ‘ಚಂದ್ರಯಾನ-1’ ಹೆಸರಿನ ಯಂತ್ರ ಭೂಕಕ್ಷೆಯನ್ನು ದಾಟಿ ಚಂದ್ರನನ್ನು ಸುತ್ತಲು ತೊಡಗಿ ಒಂದು ಪುಟ್ಟ ಶೋಧದಂಡವನ್ನು ಚಂದ್ರನ ನೆತ್ತಿಯ ಮೇಲೆ ಬೀಳಿಸಿತ್ತು. ಅದರಲ್ಲೂ ನೀರಿನ ಅಂಶ ಪತ್ತೆಯಾಗಿತ್ತು (ಎಂದು ಈಗ ನಮ್ಮವರು ಹೇಳುತ್ತಿದ್ದಾರೆ). ಅದಾದ ಹನ್ನೊಂದನೆಯ ದಿನ, ಅಂದರೆ ಕಳೆದ ವರ್ಷ ನವೆಂಬರ್ 19ರಂದು ನಮ್ಮದೇ ಚಂದ್ರನೌಕೆಯಲ್ಲಿ ಕೂತಿದ್ದ ನಾಸಾದ ಎಮ್3 ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್ಶೈನ್ (!) ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಅದರಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಅಮೆರಿಕದ ‘ಸೈನ್ಸ್’ ಪತ್ರಿಕೆಗೆ ರವಾನಿಸಿದರು.
ಆದರೂ ಯಾರೂ ಅದಕ್ಕೆ ಮಹತ್ವ ನೀಡಿರಲಿಲ್ಲ. ಈಚೆಗೆ ನಮ್ಮ ಚಂದ್ರನೌಕೆ ಇದ್ದಕ್ಕಿದ್ದಂತೆ ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿ ಅವಧಿಗೆ ಮೊದಲೆ ಇತಿಶ್ರೀ ಹಾಡಿದಾಗ ಇಸ್ರೊ ತಜ್ಞರು ಸೂತಕದ ಕಳೆ ಹೊತ್ತು ಕೂತಿದ್ದರು. ಚಂದ್ರನತ್ತ ಎರಡನೆಯ ಪಯಣಕ್ಕೆ ಸಿದ್ಧವಾಗುತ್ತಿದ್ದ ‘ಚಂದ್ರಯಾನ-2’ ಹೆಸರಿನ ನೌಕೆಯ ನೆಗೆತವನ್ನು ಮುಂದೂಡಿದರೆ ಹೇಗೆ ಎಂದು ಚಿಂತೆಯಲ್ಲಿದ್ದರು.
ಆ ಸಂದರ್ಭದಲ್ಲೇ ತುಸು ಅನಿರೀಕ್ಷಿತ ಎಂಬಂತೆ ಸೆಪ್ಟೆಂಬರ್ 24ರಂದು ಅಮೆರಿಕದ ನಾಸಾದಿಂದ ಬೆಂಗಳೂರಿನ ಇಸ್ರೊ ಮುಖ್ಯಸ್ಥರಿಗೆ ಸಿಗ್ನಲ್ ಬಂತು. ಸರಸರ ಮಾಧ್ಯಮ ಗೋಷ್ಠಿ ಏರ್ಪಾಟಾಯಿತು. ಚಂದ್ರಜಲದ ಸುದ್ದಿ ವಿವರ, ಗ್ರಾಫಿಕ್ ಚಿತ್ರ, ಛಾಯಾಚಿತ್ರ ಎಲ್ಲವೂ ಏಕಕಾಲದಲ್ಲಿ ನಾಸಾ ಮೂಲಕ ಜಾಗತಿಕ ಮಾಧ್ಯಮಗಳಿಗೆ ಹಾಗೂ ಇಸ್ರೊ ಮೂಲಕ ನಮ್ಮ ಬಾತ್ಮೀದಾರರಿಗೆ ಲಭಿಸಿದವು. ಮರುದಿನ ‘ಚಂದ್ರನಲ್ಲಿ ನೀರುಪತ್ತೆ, ಭಾರತದ ವಿಜ್ಞಾನಿಗಳಿಗೆ ಭೋಪರಾಕ್’ ಎಂಬ ಉದ್ಘೋಷ! ತಲಕಾವೇರಿಯಲ್ಲಿ ತೀರ್ಥೋದ್ಭವ ಆಯ್ತೆಂದು ಭಕ್ತರೆಲ್ಲ ಸಂಭ್ರಮಿಸಿ ಕೊಳಕ್ಕೆ ಜಂಪ್ ಮಾಡುವ ಹಾಗೆ ದೇಶವಿದೇಶಗಳ ಎಲ್ಲ ಮಾಧ್ಯಮಗಳಲ್ಲೂ ಏಕಕಾಲಕ್ಕೆ ಜಲಭೇರಿ ಬಾರಿಸಿತು.
ಅಳುತ್ತಿದ್ದ ಬಾಲ ಶ್ರೀರಾಮಚಂದ್ರನ ಕೈಗೆ ಕನ್ನಡಿಯ ಚಂದ್ರಬಿಂಬ ಕಂಡಂತೆ ‘ಇಸ್ರೊ’ ಅಧ್ಯಕ್ಷ ಮಾಧವನ್ ನಾಯರ್ ಜಿಗಿದೆದ್ದು ಎರಡೂ ಕೈಎತ್ತಿ ಇಡೀ ರಾಷ್ಟ್ರಕ್ಕೆ ಹರ್ಷದ ಬಾವುಟ ಬೀಸಿದರು.
ಎಲ್ಲೆಡೆ ಇಸ್ರೊಕ್ಕೇ ಶಹಭಾಸ್ಗಿರಿ.
ಇದು ಏಕಾಯಿತು? ಇಸ್ರೊ ತಜ್ಞರು ಚಂದ್ರನೌಕೆಯ ಮೇಲೆ ಅಮೆರಿಕದ ಎಮ್3ಯನ್ನು ಕೂರಿಸಿದ್ದನ್ನು ಬಿಟ್ಟರೆ ಚಂದ್ರಜಲದ ಪತ್ತೆಗೆ ಏನನ್ನೂ ಮಾಡಲಿಲ್ಲ. ಎಮ್3ರಿಂದ ಬಂದ ಸಂಕೇತಗಳ ವಿಶ್ಲೇಷಣೆ ಮಾಡಲಿಲ್ಲ. ಚಂದ್ರನ ಮೇಲೆ ಕೆಡವಿದ ಶೋಧದಂಡದಲ್ಲಿ ನೀರಿನ ಅಂಶ ಕಂಡಿದ್ದರೂ ಖಚಿತ ಏನೂ ಹೇಳಿರಲಿಲ್ಲ.
ಈ ಯಾವ ಅಂಶಗಳೂ ನಮ್ಮ ‘ಇಸ್ರೊ’ ಸಂಸ್ಥೆಯ ಸಾಧನೆಗೆ ಕುಂದು ತರುವುದಿಲ್ಲ ನಿಜ. ಇವರು ನಿರ್ಮಿಸಿದ ನೌಕೆಯೊಂದು ಚಂದ್ರನ ಪ್ರದಕ್ಷಿಣೆ ಹಾಕಿದ್ದು, ಚಂದ್ರನ ನೆತ್ತಿಯ ಮೇಲೆ ಒಂದು ಶೋಧ ದಂಡವನ್ನು ಬೀಳಿಸಿ ದೂಳು ಚಿಮ್ಮುವಂತೆ ಮಾಡಿದ್ದು ಇವೆಲ್ಲ ಗ್ರೇಟ್ ನಿಜ. ಶೋಧ ದಂಡದ ಜತೆ ಭಾರತದ ಧ್ವಜವನ್ನೂ ಅಲ್ಲಿ ಇಳಿಸಿ, ಹಾಗೆ ಧ್ವಜ ಊರಿದ ನಾಲ್ಕನೆಯ ದೇಶವೆನಿಸಿದ್ದು ಎಲ್ಲವೂ ಕೊಂಡಾಡಲು ಯೋಗ್ಯವೇ ಹೌದು. ವಿಜ್ಞಾನದ ಕಡೆ ಎಳೆಯರನ್ನು ಮತ್ತೆ ಆಕರ್ಷಿಸುವಂತೆ ಮಾಡಲು, ಇಸ್ರೊ ವಿಜ್ಞಾನಿಗಳಲ್ಲಿ ಮತ್ತೆ ಉತ್ಸಾಹ ಚಿಮ್ಮುವಂತೆ ಮಾಡಲು ಇಂಥದೊಂದು ಜಯಭೇರಿ ಬೇಕಿತ್ತು ನಿಜ. ಆದರೆ ಈ ಮಧ್ಯೆ ಕಾಂಡೊಲಿಸಾ ರೈಸ್ ನೆನಪು ಮತ್ತೆ ಯಾಕೆ ಬರುತ್ತದೆ?
ಏಕೆಂದರೆ, ನಮ್ಮವರ ಸಾಧನೆ ತುಂಬಾ ದೊಡ್ಡದೆಂದು ತೋರಿಸುವಲ್ಲಿ ಅಮೆರಿಕದ ನಾಸಾದ ಹಿತಾಸಕ್ತಿ ಇದೆ. ತಾನೇ ಸ್ವತಃ ಚಂದ್ರನಿದ್ದಲ್ಲಿಗೆ ಹೋಗಬೇಕೆಂಬ ತುಡಿತ ಅದಕ್ಕೆ ಈಚೀಚೆಗೆ ಹೆಚ್ಚುತ್ತಿದೆ. ಆದರೆ ಅಮೆರಿಕ ಸರ್ಕಾರಕ್ಕೆ ಈಗಲೂ ಆಸಕ್ತಿ ಇಲ್ಲ. ಇಂದಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ಭಾರೀ ವೆಚ್ಚದ್ದೆಂಬ ದೃಷ್ಟಿಯೇ ಬಲವಾಗಿದೆ. ಮೇಲಾಗಿ ಯಂತ್ರಗಳೇ ಮನುಷ್ಯನ ಎಲ್ಲ ಕೆಲಸವನ್ನೂ ನಿಭಾಯಿಸುವಂತಿರುವಾಗ (ಅವಕ್ಕೆ ನೀರು, ಆಮ್ಲಜನಕ ಕೂಡ ಬೇಕಾಗಿಲ್ಲ.
ಚಂದ್ರನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಅವಸರ ಈಗೇಕೆ ಎಂಬ ಧೋರಣೆ ಒಬಾಮಾ ಸರ್ಕಾರದ್ದು. ಆದರೆ ಹೋಗಲೇ ಬೇಕೆಂಬ ತುಡಿತ ನಾಸಾವನ್ನು ಬೆಂಬಲಿಸುವ ಔದ್ಯಮಿಕ ಕೂಟದ್ದು. ಅದಕ್ಕೇ ‘ನೋಡ್ರೀ, ಭಾರತದಂಥ ದೇಶವೂ ಹನುಮಲಂಘನಕ್ಕೆ ಹೊರಟಿದೆ; ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ; ಚೀನಾ, ಜಪಾನ್, ಇಂಡಿಯಾ ಹೀಗೆ ಏಷ್ಯದ ಮೂವರೂ ಹೊರಟಿರುವಾಗ ನಾವು ಹಿಂದುಳಿಯುವುದು ನಾಚಿಕೆಗೇಡು’ ಎಂಬ ಅಭಿಪ್ರಾಯವನ್ನು ಅಲ್ಲಿನ ಜನಮನದಲ್ಲಿ ಬಿತ್ತಿ ಸರ್ಕಾರವನ್ನು ಎಬ್ಬಿಸಿ ಮೇಲೇಳಬೇಕಾಗಿದೆ. ‘ಇದುವರೆಗೆ ಪಾಶ್ಚಿಮಾತ್ಯರಿಗಿದ್ದ ಖ್ಯಾತಿಯನ್ನು ಈ ಏಷ್ಯದ ರಾಷ್ಟ್ರಗಳು ಕಿತ್ತುಕೊಳ್ಳಲಿವೆ’ ಎಂದು ಒತ್ತಿ ಹೇಳಬೇಕಾಗಿದೆ. ಬೊಕ್ಕಸದಿಂದ ದೊಡ್ಡದೊಂದು ಪಾಲು ಧನರಾಶಿ ನಾಸಾಕ್ಕೆ ಸಿಕ್ಕರೆ ಸಾಕು, ಅಲ್ಲಿನ ಎಷ್ಟೋ ಉದ್ಯಮಗಳು ಮೇಲೇಳುತ್ತವೆ.
ಅದಕ್ಕೇ ನಾಳೆ (ಅಕ್ಟೊಬರ್ 9ರಂದು) ಚಂದ್ರನ ನೆತ್ತಿಯ ಮೇಲಿನ ಆಳವಾದ ಗುಳಿಯಲ್ಲಿ ನೀರಿದೆಯೆ ಎಂಬುದರ ಪತ್ತೆಗೆಂದೇ ‘ಎಲ್ಕ್ರಾಸ್’ ಹೆಸರಿನ ಶೋಧಯಂತ್ರವೊಂದು ಅಲ್ಲಿ ಇಳಿಯಲಿದೆಯಾದರೂ ಅವಸರದಲ್ಲಿ ಹನ್ನೆರಡು ದಿನಗಳ ಮೊದಲೇ ಭಾರತಕ್ಕೆ ಕೀರ್ತಿ ಪತಾಕೆಯನ್ನು ಸಿಕ್ಕಿಸಲಾಗಿದೆ.
ಸಾವಿರ ಸಮಸ್ಯೆಗಳನ್ನು ಹೊತ್ತ, ಮೂಳೆ ಚಕ್ಕಳದ ಐರಾವತದ ಜುಟ್ಟಿಗೆ ಚಂದ್ರಜಲ ಕೀರ್ತಿ ಪತಾಕೆಯನ್ನು ಸಿಕ್ಕಿಸಬೇಕು. ಬಡ ಐರಾವತ ಮತ್ತೆ ಎದೆಯುಬ್ಬಿಸಿ ಚಂದ್ರನತ್ತ ಇನ್ನೊಮ್ಮೆ ನೆಗೆಯುವಂತೆ ಮಾಡಬೇಕು. ಅದರ ನೂಕುಬಲದ ಮೇಲೆ ತಾನು ಚಿಮ್ಮಿಹೋಗಿ ಚಂದ್ರನ ಮೇಲೆ ಮತ್ತೆ ಕಾಲೂರಬೇಕು. ಇದು ನಾಸಾದ ವಿಚಾರ. ಅದಕ್ಕೇ ಭಾರತವನ್ನು ಗ್ರೇಟ್ ಮಾಡುವ ಹುನ್ನಾರ.