Categories
ನಾಗೇಶ ಹೆಗಡೆ ಪರಿಸರ ಲೇಖನಗಳು

ಅಂಕಣಗಳು – ನಾಗೇಶ ಹೆಗಡೆ

ಕೃತಿ: ಅಂಕಣಗಳು – ನಾಗೇಶ ಹೆಗಡೆ

ಲೇಖಕರು : ನಾಗೇಶ ಹೆಗಡೆ

ಕೃತಿಯನ್ನು ಓದಿ     |     Download

Categories
ಅಂಕಣಗಳು ಕೆ.ಎಸ್. ನವೀನ್ ಪಕ್ಷಿ ಪ್ರಪಂಚ ಪಕ್ಷಿ ಪ್ರಪಂಚ

ಅಂಕಣಗಳು –ಕೆ.ಎಸ್. ನವೀನ್

ಅಂಕಣ : ಪಕ್ಷಿ-ಪ್ರಪಂಚ

 

ಎಲ್ಲ ಭಾಗಗಳನ್ನು ಓದಿ

Categories
ಅಂಕಣಗಳು ಪರಿಸರ ವಿಜ್ಞಾನ

ಮರುಭೂಮಿಯನ್ನು ತಡೆಯೋಣ ಬನ್ನಿ!

[fusion_builder_container hundred_percent=”yes” overflow=”visible” type=”flex”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none” align_self=”flex-start” border_sizes_undefined=”” type=”1_1″ first=”true” last=”true” hover_type=”none” link=”” border_position=”all”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

(ಒಂದುಕಾಲಕ್ಕೆ ಅರಲ್ ಸಮುದ್ರವಾಗಿದ್ದ ಪ್ರದೇಶ ಈಗ ಮರುಭೂಮಿ)

ಮರುಭೂಮಿಗಳು ಚಲಿಸುತ್ತವೆ ನಿಮಗೆ ಗೊತ್ತೆ? ಅಮೀಬಾ ಚಲನೆಯ ಹಾಗೆ ಯಾವ ದಿಕ್ಕಿಗೆ ಬೇಕಿದ್ದರೂ ಅವು ಮೈಚಾಚಿ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತವೆ. ರಾಜಸ್ತಾನದ ಮರುಭೂಮಿ ದಿಲ್ಲಿಯತ್ತ ವರ್ಷಕ್ಕೆ ಹನ್ನೆರಡು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದೆ. ನಾನ್‍ವೆಜ್ ಹೊಟೆಲ್‍ಗಳ ಸಂಖ್ಯೆ ಹೆಚ್ಚುತ್ತ ಹೋದಂತೆ ಈಗ ಅದರ ವೇಗ ಇಮ್ಮಡಿಯಾಗಿರಬಹುದು. ಕರ್ನಾಟಕದಲ್ಲಿ ದೇಶದ ಎರಡನೆಯ ಅತಿ ದೊಡ್ಡ ಮರುಭೂಮಿ ಸೃಷ್ಟಿಯಾಗುತ್ತಿದೆ ಅವುಗಳನ್ನು ಹತ್ತಿಕ್ಕುವುದು ಹೇಗೆ? ನಮ್ಮ ನೆರೆಯಲ್ಲೇ ಹೊಸದೊಂದು ಮರುಭೂಮಿ ಸೃಷ್ಟಿಯಾಗದಂತೆ ಪ್ರತಿಬಂಧಿಸುವುದು ಹೇಗೆ? ಮರುಭೂಮಿ ನಮ್ಮೂರಿನ ಆಸುಪಾಸಿನಲ್ಲೇ ಇರಬಹುದು. ಅದನ್ನು ಗುರುತಿಸುವುದು ಹೇಗೆ?

ಮರುಭೂಮಿ ಎಂದರೆ ಶಾಶ್ವತ ಬರಗಾಲ. ಮುಖ್ಯವಾಗಿ ಬದುಕಲು ಬೇಕಾದ ನೀರೇ ಇಲ್ಲದ ತಾಣ. ಅರ್ಥಾತ್   ಅದು ಜೀವವಿರೋಧಿ ತಾಣ. ಮರುಭೂಮಿ ಎಂದರೆ ಹಗಲು ಭಾರೀ ಸೆಕೆ, ರಾತ್ರಿ ತೀರಾ ಚಳಿ. ಹಾಗಾಗಿ ಅಲ್ಲಿ ಗಿಡಮರಗಳು ಇರುವುದಿಲ್ಲ, ಹುಲ್ಲು-ಕಳೆ ಇರುವುದಿಲ್ಲ. ಪಶುಪಕ್ಷಿಗಳು, ಕೀಟಪಾಚಿಗಳು, ಶಿಲೀಂಧ್ರಗಳು ಯಾವುದೂ ಇರುವುದಿಲ್ಲ. ಅದು ನಿರ್ಜೀವ ಪರಿಸರವೇ ಆಗಿರುತ್ತದೆ. ಅದು ಭೂಮಿಯ ಮೇಲಿನ ಅತಿ ದೊಡ್ಡ ಪರಿಸರ ಸಮಸ್ಯೆಯ ತಾಣ.

ಭೂಮಿಯ ಬಲುದೀರ್ಘ ಚರಿತ್ರೆಯಲ್ಲಿ ಕೆಲವು ಪ್ರದೇಶಗಳಲ್ಲಿ ಭೂಮಿ ತಂತಾನೇ ಮರುಭೂಮಿ ಆಗಿದ್ದಿದೆ. ಮತ್ತೆ ತಂತಾನೆ ಕ್ರಮೇಣ ಸಹಜ ಭೂಮಿ ಆಗಿದ್ದೂ ಇದೆ. ಆದರೆ ಮನುಷ್ಯ ಅವತರಿಸಿದ ನಂತರ ಮರುಭೂಮಿಗಳ ವಿಸ್ತಾರ ಹೆಚ್ಚುತ್ತಿದೆ. ಚಿಕ್ಕದೊಡ್ಡ ಹೊಸ ಹೊಸ ಮರುಭೂಮಿಗಳೂ ಸೃಷ್ಟಿಯಾಗುತ್ತಿವೆ. ಮರುಭೂಮಿ ಎಂದರೆ ಬಡತನದ ಸಂಕೇತ, ಸಂಕಷ್ಟಗಳ ಸಂಕೇತ. ಅದರ ಪರಿಣಾಮ ದೂರದ ನಗರಗಳ ಮೇಲೂ ಆಗುತ್ತದೆ. ಆದ್ದರಿಂದ ಮರುಭೂಮಿ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.

ಮರುಭೂಮಿ ಹೇಗೆ ಸೃಷ್ಟಿಯಾಗುತ್ತದೆ?

ಮರುಭೂಮಿ ಸೃಷ್ಟಿ ಎಂದರೆ ಅದು ನಿಧಾನವಾಗಿ ನಡೆಯುವ ಕ್ರಿಯೆ. ಗೊತ್ತೇ ಆಗುವುದಿಲ್ಲ. ಮುಖ್ಯವಾಗಿ ಕಡಿಮೆ ಮಳೆಬೀಳುವ ಒಣಭೂಮಿಯಲ್ಲಿ ಅದು ಆರಂಭವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ ದನ-ಕುರಿಗಳನ್ನು ಮೇಯಿಸುವುದು, ಕಟ್ಟಿಗೆ ಕಡಿಯುವುದು, ನೀರಿಲ್ಲವೆಂದು ಕೊಳವೆ ಬಾವಿ ಕೊರೆಸುವುದು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಮೇಲೆತ್ತುವುದು. ಇವನ್ನು ನಿರಂತರವಾಗಿ ಮಾಡುತ್ತಿದ್ದರೆ, ಹೊಸ ಚಿಗುರು ಬರುವುದು ಕಡಿಮೆಯಾಗುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ನೆಲ ಒಣಗಿ ದೂಳು ಹೆಚ್ಚುತ್ತದೆ. ಕ್ರಮೇಣ ಪರಿಸರ ಹೆಚ್ಚು ಹೆಚ್ಚು ಶುಷ್ಕವಾಗುತ್ತ ಹೋಗುತ್ತದೆ. ಮಳೆ ಬಿದ್ದರೂ ಮಣ್ಣೆಲ್ಲ ತೊಳೆದು ಹೋಗಿ, ಸಾರವಿಲ್ಲದ ಭೂಮಿ ತ್ವರಿತವಾಗಿ ಒಣಗುತ್ತದೆ. ಮರಳುಗಾಡು ಸೃಷ್ಟಿಯಾಗುತ್ತದೆ.

ಒಮ್ಮೆ ಈ ಕ್ರಿಯೆ ಆರಂಭವಾದರೆ ಅದು ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತ ಹೋಗುತ್ತದೆ. ನೀರಿನ ಮೂಲ ಕಡಿಮೆಯಾಗುತ್ತ ಹೋದರೆ ಉದ್ಯೋಗಾವಕಾಶ ಕಡಿಮೆಯಾಗುತ್ತ ಹೋಗುತ್ತದೆ. ಕಟ್ಟಿಗೆ ಕಡಿಯುವುದು ಮತ್ತು ಮೇಕೆ ಮೇಯಿಸುವುದೇ ಬದುಕಿನ ಪ್ರಮುಖ ಆಸರೆಯಾಗುತ್ತದೆ. ಮರುಭೂಮೀಕರಣ ತೀವ್ರವಾಗುತ್ತದೆ. ಕೆರೆಕುಂಟೆಗಳು, ಹಳ್ಳತೊರೆಗಳೇ ಮುಂತಾದ ಜಲಮೂಲಗಳು ಬತ್ತುತ್ತವೆ. ಕೊನೆಗೆ ಬಡವರೂ ಊರು ತೊರೆದು ನಗರಗಳ ಕೊಳೆಗೇರಿಗಳಿಗೆ ಬರುತ್ತಾರೆ. ಸಮಸ್ಯೆ ಇಲ್ಲಿಯೂ ಹೆಚ್ಚುತ್ತದೆ.

ಇಂಥ ಮರುಭೂಮೀಕರಣ ಎಲ್ಲೆಲ್ಲಿ ನಡೆಯುತ್ತಿದೆ?

ಮುಖ್ಯವಾಗಿ ಬಡ, ಹಿಂದುಳಿದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮರುಭೂಮಿ ವಿಸ್ತೀರ್ಣ ಹೆಚ್ಚು ಹೆಚ್ಚಾಗುತ್ತಿದೆ. ಆಫ್ರಿಕದ ಸಹೇಲ್ ಪ್ರಾಂತದಲ್ಲಿ ಸಹಾರಾ ಮರುಭೂಮಿ ವಿಸ್ತರಿಸುತ್ತಿದೆ. ಅಫ್ಘಾನಿಸ್ತಾನ್, ಕಝಾಖ್‍ಸ್ತಾನ್, ಮೊಂಗೋಲಿಯಾ, ಭಾರತದಂಥ ರಾಷ್ಟ್ರಗಳ ಹಿಂದುಳಿದ ಜಿಲ್ಲೆಗಳಲ್ಲೂ ಶುಷ್ಕ ಪ್ರಾಂತಗಳ ವಿಸ್ತೀರ್ಣ ಹೆಚ್ಚುತ್ತದೆ. ರಾಜಸ್ತಾನದಲ್ಲಿ ಮರುಭೂಮಿ ವಿಸ್ತರಿಸುತ್ತ ಗುಜರಾತ, ಮಧ್ಯಪ್ರದೇಶಗಳತ್ತ ಮೈಚಾಚುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಕರ್ನಾಟಕದಲ್ಲೂ ಮರುಭೂಮೀಕರಣ ಪ್ರಕ್ರಿಯೆ ತೀವ್ರವಾಗುತ್ತಿದೆ. ನಿಮಗೆ ಗೊತ್ತೆ, ರಾಜಸ್ತಾನದ ಥಾರ್ ಮರುಭೂಮಿಯನ್ನು ಬಿಟ್ಟರೆ ಭಾರತದ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತ ಶುಷ್ಕತೆ ಹೆಚ್ಚುತ್ತ ಹೋದಹಾಗೆಲ್ಲ ಅದು ‘ಮರುಭೂಮಿ ಸದೃಶ’ ನಾಡು ಎನ್ನಿಸಿಕೊಳ್ಳುತ್ತದೆ. ಗುಲಬರ್ಗಾ, ರಾಯಚೂರು, ವಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಈ ಬಗೆಯ ಶುಷ್ಕ ಪ್ರಾಂತದ ವಿಸ್ತೀರ್ಣ ಹೆಚ್ಚುತ್ತಿದೆ; ಅಂತರ್ಜಲ ಮಟ್ಟ ಕೆಳಕ್ಕಿಳಿಯುತ್ತಿದೆ. ಮರುಭೂಮಿಯ ವಿಸ್ತೀರ್ಣ ಹೆಚ್ಚುತ್ತ ಹೋದಂತೆ ಗ್ರಾಮಗಳು ಖಾಲಿಯಾಗುತ್ತಿವೆ.

ಸರಿಪಡಿಸುವುದು ಹೇಗೆ?

ಅದು ತೀರ ನಿಧಾನ ಕ್ರಿಯೆ. ಆದರೆ ಭಾರೀ ಹಣ ಸುರಿಯಬೇಕು. ಮೊದಲು ಮರುಭೂಮಿ ವಿಸ್ತರಣೆಯನ್ನು ತಡೆಗಟ್ಟಬೇಕು. ಬಿಸಿಗಾಳಿಯ ಮೂಲಕವೇ ಮರಳುಗಾಡು ಶೀಘ್ರವಾಗಿ ವಿಸ್ತರಿಸುತ್ತದೆ. ಒಣಗಿದ ಮರಳುಕಣಗಳು ಗಾಳಿಗೆ ಕುಪ್ಪಳಿಸುತ್ತ ಸಾಗುತ್ತವೆ. ಅಂಥ ಸಾಗಾಟವನ್ನು ಮೊದಲು ತಡೆಯಬೇಕು. ಅದಕ್ಕಾಗಿ ‘ಮರಳುಬೇಲಿ’ ಅರ್ಥಾತ್ ಮರಳಿನದೇ ಸಾಲುದಿಬ್ಬಗಳನ್ನು ರಚಿಸಬೇಕು. ಅದರ ಪಕ್ಕದಲ್ಲಿ ಕಂದಕವನ್ನು ನಿರ್ಮಿಸಬೇಕು. ಅದೇವೇಳೆಗೆ ಬಿಸಿಲನ್ನು ತಡೆಯಬಲ್ಲ ಸಸ್ಯಗಳನ್ನು (ಉದಾ: ಬಳ್ಳಾರಿ ಜಾಲಿ) ಸಾಲುಸಾಲಾಗಿ ಬೆಳೆಸಬೇಕು. ಅದಕ್ಕೆ ‘ಗಾಳಿಗೋಡೆ’ ಎನ್ನುತ್ತಾರೆ. ಅದೇವೇಳೆಗೆ ಮಣ್ಣು ತೊಳೆದು ಹೋಗದ ಹಾಗೆ ಕಂಟೂರ್ ಕಟ್ಟೆಗಳನ್ನು ನಿರ್ಮಿಸಬೇಕು. ಕಟ್ಟೆಗುಂಟ ಕಿರುಸಸ್ಯಗಳನ್ನು (ಉದಾ: ಕತ್ತಾಳೆ) ಬೆಳೆಸಬೇಕು. ಅದಕ್ಕೆ ಆಸರೆಪಟ್ಟಿ (ಶೆಲ್ಟರ್ ಬೆಲ್ಟ್) ಎನ್ನುತ್ತಾರೆ. ಆಮೇಲೆ ಸಾರವಿಲ್ಲದ ಮಣ್ಣಿನಲ್ಲೂ ಬೆಳೆಯಬಲ್ಲ ಗಿಡಮರಗಳನ್ನು ಬೆಳೆಸಬೇಕು. ಈ ನಡುವೆ ಅಲ್ಲಿ ಮೇಕೆ ಮೇಯದ ಹಾಗೆ, ಬೆಂಕಿ ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಅಪರೂಪಕ್ಕೆ ಬಿದ್ದ ಮಳೆನೀರು ಅಲ್ಲಲ್ಲೇ ಇಂಗುವ ಹಾಗೆ ಹಳ್ಳಗುಂಡಿಗಳನ್ನು ನಿರ್ಮಿಸಬೇಕು. ಮತ್ತೆ ಮತ್ತೆ ಅದೇ ಸ್ಥಳಕ್ಕೆ ಮರುಭೇಟಿ ಕೊಟ್ಟು ಹಳ್ಳಗಳು ಮರಳಿನಿಂದ ಮುಚ್ಚಿ ಹೋಗಿದ್ದರೆ ತೆರವು ಮಾಡಬೇಕು. ಗಿಡಗಳು ಸತ್ತಿದ್ದರೆ ಮತ್ತೆ ಮಳೆ ಬರುವ ಋತುವಿನಲ್ಲಿ ಹೊಸ ಗಿಡಗಳನ್ನು ಹಚ್ಚಬೇಕು.

ಇದು ಮರಳುಗಾಡಿನ ಚಲನೆಯನ್ನು ತಡೆಗಟ್ಟುವ ಕೆಲಸ. ಅಲ್ಲಿ ಹಸಿರಿನ ನಿರ್ಮಾಣ ಮಾಡಬೇಕೆಂದರೆ ನೆಲದಲ್ಲಿ ಸಾರಸೃಷ್ಟಿ ಮಾಡಬೇಕು. ಅಂದರೆ ಮಣ್ಣಿನ ಸಾರವನ್ನು ಹೆಚ್ಚಿಸಬೇಕು. ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಬಲ್ಲ ದ್ವಿದಳ ಧಾನ್ಯಗಳ ಬಿತ್ತನೆ ಮಾಡಬೇಕು. ಹುಲ್ಲು ಬೆಳೆಯುವಂತೆ ತೃಣಧಾನ್ಯದ ಬೀಜಗಳನ್ನು ಬಿತ್ತನೆ ಮಾಡಬೇಕು. ಮುಂಜಾನೆ ಇಬ್ಬನಿ ಸಂಗ್ರಹವಾಗುವಂತೆ, ಕಿರುಸಸ್ಯಗಳ, ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚುವಂತೆ ಮಾಡಬೇಕು. ಒಟ್ಟಾರೆಯಾಗಿ ಅಲ್ಲಿ ಕ್ರಮೇಣ ಜೀವಿವೈವಿಧ್ಯ ಹೆಚ್ಚುವಂಥ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.

ಇದಕ್ಕೆಲ್ಲ ಹಣ ಬೇಕು, ಪ್ರಜಾಪ್ರಭುತ್ವದ ಕಠೋರ ವಾಸ್ತವ ಏನೆಂದರೆ, ಮರುಭೂಮಿ ಸದೃಶ ತಾಣಗಳಲ್ಲಿ, ಜನಸಾಂದ್ರತೆ ಕಡಿಮೆ ಇರುವಲ್ಲಿ ಸರಕಾರ ಹೆಚ್ಚು ಹಣ ಹೂಡುವುದಿಲ್ಲ. ಹಣ ಹೂಡಿದರೂ ಪ್ರಗತಿಯನ್ನು ವೀಕ್ಷಿಸಬೇಕಾದ ಅಧಿಕಾರಿಗಳಿಗೆ ಬದ್ಧತೆ, ಪ್ರಾಮಾಣಿಕತೆ ಜಾಸ್ತಿ ಇರಬೇಕಾಗುತ್ತದೆ.

ಅಂದಹಾಗೆ, ಮರುಭೂಮಿ ಎಂದರೆ ರಾಜಸ್ತಾನದ ಮರಳುಗಾಡನ್ನೇ ಕಲ್ಪಿಸಿಕೊಳ್ಳಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೂ ಬರಗಾಲ ನಾನಾ ರೂಪಗಳಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತ ಅದು ತನ್ನ ನೆಂಟನನ್ನು ಕರೆತರಬಹದು. ಚಿಕ್ಕ ಪ್ರಮಾಣದಲ್ಲಿ ಕೋಲಾರದಲ್ಲಿ, ಚಿಕ್ಕಮಗಳೂರಿನಲ್ಲಿ, ಗಣಿಗಾರಿಕೆ ನಡೆದಲ್ಲಿ, ಬೆಂಗಳೂರಿನ ಸರಹದ್ದುಗಳಲ್ಲಿ, ಕರಾವಳಿಯ ಅಂಚಿನಲ್ಲಿ ಕೂಡ ಮರುಭೂಮಿ ವಿಸ್ತರಣೆ ಆರಂಭವಾಗಿರಬಹುದು. ಈಚಿನ ವರ್ಷಗಳಲ್ಲಿ ವಿಶ್ವಬ್ಯಾಂಕ್‍ನಿಂದ ಇಂಥ ಉದ್ದೇಶಗಳಿಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ನಮ್ಮಲ್ಲೂ ಹಿಂದುಳಿದ ಜಿಲ್ಲೆಗಳ ಪಂಚಾಯ್ತಿಗಳಿಗೆ ಈ ಬಾಬಿಗೆಂದೇ ಹಣ ಬಟವಡೆ ಆಗುತ್ತಿರುತ್ತದೆ. ನರೇಗಾದಂಥ ಯೋಜನೆಗಳ ಮೂಲಕವೂ ಶುಷ್ಕತೆಯನ್ನು ತಡೆಯುವ ಕೆಲಸಗಳನ್ನು ಕೈಗೊಳ್ಳಬಹುದು. ಹೀಗೆ ಮಾಡುವ ಮೂಲಕ ‘ಅಗೋಚರ ಮರುಭೂಮಿ’ಗಳನ್ನು ಆರಂಭದಲ್ಲೇ ಚಿವುಟಬಹುದು.

ಏನಿದು ‘ಅಗೋಚರ ಮರುಭೂಮಿ’ ಅಂದರೆ?

ಮೇಲ್ನೋಟಕ್ಕೆ ಅವು ಕಾಣಿಸುವುದಿಲ್ಲ. ಉದಾಹರಣೆಗೆ, ನಿಮ್ಮ ಊರಿನ ನದಿ ಅಥವಾ ಕೆರೆಯಲ್ಲಿ ನೀರು ತುಂಬಿದ್ದರೂ ಕೂಡ ಅದರಲ್ಲಿ ಅನಾದಿಕಾಲದಿಂದ ವಾಸಿಸುತ್ತಿದ್ದ ಮೀನು, ಕಪ್ಪೆ, ಆಮೆ ಮುಂತಾದ ಜಲಚರಗಳು ಕಾಣೆಯಾಗಿರಬಹುದು. ಆಫ್ರಿಕನ್ ಕ್ಯಾಟ್‍ಫಿಶ್‍ನಂಥ ಏಕಜಾತಿಯ ಮೀನು ಸಂಗೋಪನೆ ನಡೆದಿದ್ದರೆ ಅದೂ ಒಂದುರೀತಿಯ ‘ಜಲಮರುಭೂಮಿ’ ಎಂತಲೇ ಹೇಳಬಹುದು.

ಅತಿಯಾದ ನೀರಾವರಿ ಇದ್ದಲ್ಲಿ ‘ಒದ್ದೆ ಮರುಭೂಮಿ’ ಸೃಷ್ಟಿಯಾಗುತ್ತದೆ. ಅಲ್ಲಿ ಜವುಳು ಜಾಸ್ತಿಯಾಗಿ ಯಾವ ಬೆಳೆಯನ್ನು ಕೂಡ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕದ ಸುಮಾರು ಎಲ್ಲ ದೊಡ್ಡ ನೀರಾವರಿ ಯೋಜನೆಗಳಲ್ಲೂ ಅತಿ ಜವುಳಿನಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ನಿರುಪಯುಕ್ತವಾಗುತ್ತಿದೆ.

ಹಿಂದೆ ನಾನಾ ಬಗೆಯ ಗಿಡಮರಗಳಿದ್ದ ತಾಣದಲ್ಲಿ ಈಗ ಏಕಜಾತಿಯ ನೀಲಗಿರಿ, ಸರ್ವೆ ಅಥವಾ ಅಕೇಶಿಯಾದಂಥ ತೋಪುಗಳಿದ್ದರೆ ಅದನ್ನು ‘ಹಸುರು ಮರುಭೂಮಿ’ ಎನ್ನಬಹುದು. ಅಲ್ಲಿ ಬೇರೆ ಯಾವ ಜೀವಿ ವೈವಿಧ್ಯ ಇರಲಾರದು. ಓತಿಕ್ಯಾತ, ಹಾವುರಾಣಿ, ಅಳಿಲು, ಮುಂಗುಸಿ, ಹಕ್ಕಿಪಕ್ಷಿಗಳು ವಾಸ ಮಾಡಲಾರವು.

ಗಣಿಗಾರಿಕೆ ನಡೆದಲ್ಲೆಲ್ಲ ಸುತ್ತಲಿನ ಗಿಡಮರಗಳೆಲ್ಲ ನಾಶವಾಗಿ, ಮಣ್ಣೆಲ್ಲ ಮುಚ್ಚಿಹೋಗಿ ಎಲ್ಲಿ ನೋಡಿದಲ್ಲಿ ಕಲ್ಲುಪುಡಿ, ಮರಳುರಾಶಿಯೇ ಕಾಣಬಹುದು. ಅದರ ವಿಸ್ತೀರ್ಣ ಸುತ್ತೆಲ್ಲ ಹೆಚ್ಚುತ್ತ ಸ್ಥಳೀಯ ಮಟ್ಟದಲ್ಲಿ ಮರುಭೂಮಿ ಸದೃಶ ಪರಿಸರ ನಿರ್ಮಾಣವಾಗಬಹುದು.

ಮೇಕೆ, ಜಾನುವಾರುಗಳ ಮುಕ್ತ ಓಡಾಟದಿಂದಾಗಿ ಆ ಪ್ರದೇಶದ ಮೂಲ ಜೀವಿವೈವಿಧ್ಯವೆಲ್ಲ ನಾಶವಾಗಿ ಅಲ್ಲಿ ಬರೀ ಲಂಟಾನಾ, ಯುಪಟೋರಿಯಂ ಮತ್ತು ಕಾಂಗ್ರೆಸ್ ಕಳೆ ಬೆಳೆದಿರಬಹುದು. ನೋಡಲು ಹಸುರಾಗಿ ಕಂಡರೂ ಅದು ಇನ್ನೊಂದು ರೀತಿಯ ಹಸುರು ಮರುಭೂಮಿಯೇ ಆಗಿರುತ್ತದೆ.

ಕಡಲತೀರದಲ್ಲಿ ಕಾಂಡ್ಲಗಿಡಗಳೆಲ್ಲ ನಾಪತ್ತೆಯಾಗಿ ಕ್ರಮೇಣ ಮರಳು ದಿಬ್ಬಗಳು ವಿಸ್ತರಿಸುತ್ತ ಒಳನಾಡಿನತ್ತ ಬರುತ್ತದೆ. ಅದರ ಚಲನೆಯನ್ನು ತಡೆಗಟ್ಟದಿದ್ದರೆ ಮರಳುದಿಬ್ಬದ ವಿಸ್ತರಣೆ ಹೆಚ್ಚುತ್ತ ಹೋಗುತ್ತದೆ. ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಕೈಗೊಳ್ಳಬೇಕಾದ ಉಪಕ್ರಮಗಳನ್ನು ಇಲ್ಲೂ ಆರಂಭಿಸಬೇಕಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಬರಗಾಲ ತಡೆಗೆ, ಮರುಭೂಮಿ ತಡೆಗೆ ಏನೇನು ಕಾರ್ಯಯೋಜನೆಗಳಿವೆ?

ವಿಶ್ವಸಂಸ್ಥೆಯ ಸದಸ್ಯ ದೇಶಗಳೆಲ್ಲ ಸೇರಿ ‘ಮರುಭೂಮಿತಡೆ ಹೋರಾಟ ಒಪ್ಪಂದ’ (ಯುಎನ್‍ಸಿಸಿಡಿ) ಮಾಡಿಕೊಂಡಿವೆ. ಶ್ರೀಮಂತ ದೇಶಗಳಿಂದ ವಂತಿಗೆ ಪಡೆದು ಬಡದೇಶಗಳಲ್ಲಿ ಮರುಭೂಮಿ ವಿಸ್ತರಣೆಯನ್ನು ತಡೆಯುವ ಅನೇಕ ಯೋಜನೆಗಳನ್ನು ಈ ಒಪ್ಪಂದದಡಿ ಹಮ್ಮಿಕೊಳ್ಳಲಾಗಿದೆ. ಆಫ್ರಿಕದ ನೈಗರ್, ಚಾಡ್, ಇಥಿಯೋಪಿಯಾ ಮುಂತಾದ ದೇಶಗಳಲ್ಲಿ ಕೆಲವು ಮಾದರಿ ‘ಮರುಭೂಮಿ ತಡೆ’ ಕೆಲಸಗಳು ನಡೆದಿವೆ.

ಮರುಭೂಮಿಯನ್ನು ಹತ್ತಿಕ್ಕಿದ ಯಶಸ್ವಿ ಉದಾಹರಣೆಗಳಿವೆಯೆ?

ಎಲ್ಲೋ ತೀರ ಅಪರೂಪಕ್ಕೆ ತೀರ ಚಿಕ್ಕ ಭಾಗದಲ್ಲಿ ಹಣವನ್ನು ನೀರಿನಂತೆ ಹರಿಸಿ ಮರುಭೂಮಿಯನ್ನು ಹತ್ತಿಕ್ಕಿ ಅಲ್ಲಿ ಹಸುರು ಚಿಗುರಿಸಲಾಗಿದೆ. ಅರಬ್ ರಾಷ್ಟ್ರಗಳಲ್ಲಿ ಕೆಲವೆಡೆ ದಟ್ಟ ಮರುಭೂಮಿಯ ನಡುವೆಯೂ ಆಳ ಕೊಳವೆ ಬಾವಿ ಕೊರೆದು ನೀರುಕ್ಕಿಸಿ ದಟ್ಟ ಹಸುರನ್ನು ಬೆಳೆಸಲಾಗಿದೆ. ಇಸ್ರೇಲಿಗೆ ಯಹೂದ್ಯರು ಹೊಸದಾಗಿ ಹೋದಾಗ ಅಲ್ಲಿನ ನೆಲ ಸಾವಿರಾರು ವರ್ಷಗಳಿಂದ ಬಂಜರಾಗಿ, ಮರುಭೂಮಿಯಾಗಿ ಮಲಗಿತ್ತು. ಅದÀನ್ನು ಅತ್ಯಂತ ವ್ಯವಸ್ಥಿತವಾಗಿ ಉಪಚರಿಸಿ ಹತ್ತೇ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆದದ್ದು ಈ ಕಾಲದ ಸಾಹಸವೆಂದೇ ಬಣ್ಣಿಸಲಾಗುತ್ತದೆ. ಆದರೆ ಅಂಥ ಸಾಧನೆಗೆ ನೆರವಾದ ಜೋರ್ಡಾನ್ ನದಿಯೇ ಈಗ ಸಮುದ್ರಕ್ಕೆ ತಲುಪಲಾರದೆ ಬತ್ತಿ ಬತ್ತಿ ಅಪರೂಪಕ್ಕೆ ಹರಿಯುತ್ತಿದೆ.

ಮರುಭೂಮಿ ತಡೆಗೆ ನಾವೇನು ಮಾಡಬಹುದು?

ಮರುಭೂಮಿ ವಿಸ್ತರಣೆ ಎಂಬುದು ಜಾಗತಿಕ ಮಟ್ಟದ ಸಮಸ್ಯೆಯೇ ಆಗಿದ್ದರೂ ಅದಕ್ಕೆ ಉತ್ತರ ನಮ್ಮ ನಮ್ಮ ಊರುಗಳಲ್ಲೇ ಇರುತ್ತದೆ. ನಮಗೆ ಅರಿವೇ ಇಲ್ಲದಂತೆ ನಮ್ಮಲ್ಲಿ ಮರುಭೂಮಿಯ ಅನೇಕ ಆರಂಭಿಕ ಲಕ್ಷಣಗಳು ಕಾಣುತ್ತಿರುತ್ತವೆ. ಗಿಡಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ; ಮಟನ್ ಬೆಲೆ ಹೆಚ್ಚಾಗಿರುವುದರಿಂದ ಮೇಕೆ ಮೇಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಎಲ್ಲಿ ನೋಡಿದರೂ ಮೇಕೆಗಳು. ಅವು ತಿನ್ನದ ಮುಳ್ಳುಕಂಟಿ, ಲಂಟಾನಾ ಮುಂತಾದ ಸಸ್ಯಗಳು ಮಾತ್ರ ಉಳಿದುಕೊಂಡಿರುವುದನ್ನು ಕಾಣುತ್ತೇವೆ. ಜೀವಿವೈವಿಧ್ಯ ಕಡಿಮೆಯಾಗುತ್ತಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರಿಗೆ ನೆಲೆಯೇ ಇಲ್ಲದಂತಾಗುತ್ತಿದೆ. ಕೊಳವೆ ಬಾವಿಗಳು ಆಳಕ್ಕೆ ಇನ್ನೂ ಆಳಕ್ಕೆ ಹೋಗುತ್ತಿವೆ. ಸೆಕೆ ಹೆಚ್ಚುತ್ತಿದೆ. .. … ಇವೆಲ್ಲ ಸಮಸ್ಯೆಗಳ ನಿವಾರಣೆಗೆ ಹೊರಗಿನ ತಜ್ಞರೇನೂ ಬೇಕಾಗಿಲ್ಲ. ಉಪಾಯಗಳು ನಮಗೆ ಗೊತ್ತಿವೆ. ಅವು ಜಾರಿಗೆ ಬರುವಂತೆ ಮಾಡಬೇಕಿದೆ.

ಮೇಕೆ ಮೇಯಿಸುವುದನ್ನು ಮೊದಲು ತಡೆಗಟ್ಟಿ. ಅವು ಮೇಯುತ್ತಿದ್ದರೆ ಗುಡ್ಡಬೆಟ್ಟಗಳಲ್ಲಿ ಯಾವ ಸಸ್ಯವೂ ತಾನಾಗಿ ಬೆಳೆಯಲಾರವು. ಅದರ ಬದಲು ಕುರಿ ಸಾಕಣೆ ಮೇಲು; ಏಕೆಂದರೆ ಅವು ಸಸ್ಯಗಳ ಚಿಗುರುಗಳನ್ನು ತಿನ್ನುವುದಿಲ್ಲ. ಮೇಕೆ ಸಾಕುವುದೇ ಆದರೆ ಅವುಗಳನ್ನು ಕಟ್ಟಿ ಮೇಯಿಸುವಂತೆ ಸಲಹೆ ಮಾಡಿ.

  • ಕೆರೆ ಕಟ್ಟೆಗಳಲ್ಲಿ ಮಳೆನೀರಿನ ಸಂಗ್ರಹಣೆ ಹೆಚ್ಚುವಂತೆ ಕ್ರಮ ಕೈಗೊಳ್ಳಲು ಪಂಚಾಯ್ತಿಯನ್ನು ಆಗ್ರಹಿಸಿ.
  • ನಿಮ್ಮ ಊರಿನಲ್ಲಿ ಹಿಂದೆ ಯಾವ ಯಾವ ಸಸ್ಯಗಳು, ಔಷಧ ಮೂಲಿಕೆಗಳು, ದೊಡ್ಡ ಮರಗಳು ಇದ್ದವು ಎಂಬುದನ್ನು ಹಿರಿಯರನ್ನು ಕೇಳಿ ಪಟ್ಟಿ ಮಾಡಿ. ಅರಣ್ಯ ಇಲಾಖೆಯ ನೆರವಿನಿಂದ ಆ ಸಸ್ಯಗಳನ್ನೆಲ್ಲ ಮತ್ತೆ ಬೆಳೆಸಬಲ್ಲ ನರ್ಸರಿಯನ್ನು ಆರಂಭಿಸಿ. ಮಳೆಗಾಲದ ಆರಂಭದಲ್ಲಿ ಅವುಗಳನ್ನು ಕಂದಾಯ ಭೂಮಿಯಲ್ಲಿ ಗೋಮಾಳದಲ್ಲಿ ಬೆಳೆಸೋಣವೆಂದು ಊರಿನ ಜನರನ್ನು ಪ್ರೇರೇಪಿಸಿ.
  • ಪಂಚಾಯ್ತಿಯಲ್ಲಿ ‘ಉದ್ಯೋಗ ಖಾತ್ರಿ ಯೋಜನೆ’ಗೆ ಎಷ್ಟು ಹಣ ಬರುತ್ತಿದೆ, ಹೇಗೆ ವಿನಿಯೋಗವಾಗುತ್ತಿದೆ ಎಂಬುದನ್ನು ನೀವು ಆಯ್ಕೆ ಮಾಡಿ ಕಳಿಸಿದ ಪ್ರತಿನಿಧಿಗೆ ಕೇಳುತ್ತಿರಿ. ಬರನಿರೋಧಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುಯಾವುದಕ್ಕೆ ಹಣ ಬಳಕೆಯಾಗಿದೆ ಎಂಬುದನ್ನು ಕೇಳುವ ಹಕ್ಕು ನಿಮಗೂ ಇದೆ. ಕಂಟೂರ್ ಕಟ್ಟೆ ನಿರ್ಮಾಣಕ್ಕೆ, ಹೂಳು ತೆಗೆಯಲಿಕ್ಕೆ, ಗಿಡಮರಗಳನ್ನು ಬೆಳೆಸಲಿಕ್ಕೆ, ಮೂಲಿಕಾ ವನಗಳ ನಿರ್ಮಾಣಕ್ಕೆ ಅದರಲ್ಲಿ ಅವಕಾಶಗಳಿವೆ.

 ಬರನಿರೋಧಕ ಕೆಲಸಗಳಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಏನು?

ಈ ಮೊದಲು ಹೇಳಿದ ಅನೇಕ ಕೆಲಸಗಳಿಗೆ ಮಕ್ಕಳೇ ದಾರಿದೀಪವಾಗಬಹುದು. ಊರಿನ ಸುತ್ತ ಕಣ್ಮರೆಯಾಗಿರುವ, ಅಪರೂಪವಾಗುತ್ತಿರುವ ಸಸ್ಯಗಳ ಪಟ್ಟಿಯನ್ನು , ವನ್ಯಜೀವಿಗಳ ಪಟ್ಟಿಯನ್ನು ಅವರೇ ತಯಾರಿಸಲಿ.

ಕಳೆದ ಹತ್ತು ವರ್ಷಗಳಲ್ಲಿ ಊರಿನ ಸುತ್ತ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ, ಅಂತರ್ಜಲ ಮಟ್ಟ ಎಷ್ಟು ಆಳಕ್ಕಿಳಿದಿದೆ ಎಂಬ ಮಾಹಿತಿ ಸಂಗ್ರಹಿಸಿ ಆಲೇಖ ಸಿದ್ಧಪಡಿಸಿ.

ಊರಿನ ಸುತ್ತ ಒಂದು ಜೀವಿವೈವಿಧ್ಯ ಪ್ರವಾಸ ಕೈಗೊಳ್ಳಿ. ಊರ ಹಿರಿಯರೂ ನಿಮ್ಮ ಜೊತೆ ಇರಲಿ. ಯಾವ ಅನಪೇಕ್ಷಿತ ಸಸ್ಯಗಳ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ದಾಖಲಿಸಿ. ನೆಲದ ತೇವಾಂಶವನ್ನು ಹೀರಿ ತೆಗೆಯುವ ನೀಲಗಿರಿ, ಸರ್ವೆಗಿಡಗಳು ಕೃಷಿಭೂಮಿಯನ್ನು ಹೇಗೆ ಆಕ್ರಮಿಸುತ್ತಿವೆ ಎಂಬುದನ್ನು ದಾಖಲಿಸಿ.

ಕಳೆದ ಹತ್ತು ವರ್ಷಗಳ ಮಳೆ ಪ್ರಮಾಣದ ಏರಿಳಿತವನ್ನು ದಾಖಲಿಸಿ. ಮಳೆ ಪ್ರಮಾಣ ಅಳೆಯಲು ನಾವೇ ತೀರ ಸರಳವಾದ ಸಾಧನವನ್ನು ನಿರ್ಮಿಸಬಹುದು. ಅದಕ್ಕೆ ಬೇಕಿರುವುದು ತೆರೆದ ಬಾಯಿಯ (ಯಾವುದೇ ಗಾತ್ರದ) ಒಂದು ಪಾತ್ರೆ ಮತ್ತು ಅಳತೆಪಟ್ಟಿ ಅಷ್ಟೆ.

ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಜೀವಿವೈವಿಧ್ಯ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಲು ಹೇಳಿ. ಹೇಳಬೇಕಾದುದು ಅವರ ಕರ್ತವ್ಯ. ಅದನ್ನವರು ನಿರಾಕರಿಸುವಂತಿಲ್ಲ.

ಗ್ರಾಮ ಪಂಚಾಯ್ತಿಯ ಮುಖ್ಯಸ್ಥರನ್ನು ಶಾಲೆಗೆ ಆಮಂತ್ರಿಸಿ. ನಿಮ್ಮ ಊರಿನ ಒಟ್ಟಾರೆ ಜೀವಸಂಪತ್ತನ್ನು ಉಳಿಸಿಕೊಳ್ಳಲು ಅವರು ಹಮ್ಮಿಕೊಂಡಿರುವ ಯೋಜನೆಗಳ ಕುರಿತು ಉಪನ್ಯಾಸ ನೀಡಲು ಹೇಳಿ. ಅದು ಅವರ ಕರ್ತವ್ಯ.

ನಿಮ್ಮ ಊರಿನ ಕೆರೆಗಳಲ್ಲಿ ಹೂಳು ತುಂಬಿದ್ದರೆ, ಮರ ಕಡಿಯುವ, ಮರಳು ಸಾಗಣೆಯ, ಗಣಿಗಾರಿಕೆಯ ಹಾವಳಿ ಹೆಚ್ಚಾಗಿದ್ದರೆ ಅದರ ಬಗ್ಗೆ ಪಂಚಾಯ್ತಿ ಕಚೇರಿಯ ಎದುರು ಒಂದು ಪ್ರತಿಭಟನಾ ಮೆರವಣಿಗೆ ಮಾಡಿ.

ನೆನಪಿಡಿ, ಮರುಭೂಮಿಯನ್ನು ಹತ್ತಿಕ್ಕುವುದೆಂದರೆ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯಲೋಪವನ್ನು ಹತ್ತಿಕ್ಕುವುದು, ಭ್ರಷ್ಟಾಚಾರವನ್ನು ಹತ್ತಿಕ್ಕುವುದು, ದುರಾಸೆಯನ್ನು ಹತ್ತಿಕ್ಕುವುದು ಕೂಡ ಹೌದು.

[/fusion_text][/fusion_builder_column][/fusion_builder_row][/fusion_builder_container]

Categories
ಅಂಕಣಗಳು ಪರಿಸರ ವಿಜ್ಞಾನ

ದೊಡ್ಡವರಿಂದ ಕಲಿಯಬೇಕಾದುದೇನು?

Garani venkatesh

ಅನುಕರಣೆಯ ಮೂಲಕ ಕಲಿಕೆ- ಎನ್ನುವುದು ಈ ಜಗತ್ತಿನ ಬದುಕಿನ ಮೂಲಸೂತ್ರ. ಈ ಪ್ರಪಂಚದ ಪ್ರತಿಯೊಂದು ಪ್ರಾಣಿಪಕ್ಷಿಯೂ ಹುಟ್ಟಿನಿಂದ ಮೊದಲುಗೊಂಡು ಸಾಯುವವರೆಗೂ ತನ್ನ ಪೋಷಕರ ಮತ್ತು ಸುತ್ತಲಿನ ಸಮಾಜದ ನಡೆವಳಿಕೆಯನ್ನು ನೋಡುತ್ತ ಅನುಕರಿಸುತ್ತ ತನ್ನ ಬದುಕನ್ನು ರೂಪಿಸಿಕೊಳ್ಳುತ್ತ ಬೆಳೆಯುತ್ತದೆ. ಆನುವಂಶಿಕ ಗುಣಗಳೊಂದಿಗೆ ಬದುಕಿನ ರೀತಿನೀತಿಗಳನ್ನು ಅನುಕರಿಸಿ ಬೆಳೆಯುವ ಗುಣವೂ ಜೀವಿಗೆ ರಕ್ತಗತವಾಗಿರುತ್ತದೆ. ಇರುವೆಯಿಂದ ಆನೆಯವರೆಗೆ, ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಈ ಜೀವನಸೂತ್ರವು ಹಾಸುಹೊಕ್ಕಾಗಿರುವುದನ್ನು ಗಮನಿಸಬಹುದು.

ಆದರೆ, ಜೀವಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಪೀಳಿಗೆಯೊಂದಕ್ಕೆ ತನ್ನ ಹಿರಿಯ ತಲೆಮಾರನ್ನು ಅನುಕರಿಸಬಾರದೆಂದು ಎಚ್ಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಮುಂದಿನ ಪೀಳಿಗೆಗಳಿಗೆ ಈ ಜಗತ್ತನ್ನು ಸುರಕ್ಷಿತವಾಗಿ ಉಳಿಸಿಹೋಗುವುದಕ್ಕೆ ಇಂತಹುದೊಂದು ವಿಚಿತ್ರ ಎಚ್ಚರಿಕೆಯು ಅವಶ್ಯಕವೂ ಆಗಿದೆ. ಜೀವಲೋಕದ ಅತಿಬುದ್ಧಿವಂತಜೀವಿ ಎನ್ನಿಸಿಕೊಂಡಿರುವ ಮನುಷ್ಯನೇ ತನ್ನ ಸಂತಾನಕ್ಕೆ ಈ ಎಚ್ಚರಿಕೆಯನ್ನು ಕೊಡಬೇಕಾಗಿ ಬಂದಿರುವುದು ವರ್ತಮಾನದ ಅತಿಕ್ರೂರ ವ್ಯಂಗ್ಯವೂ ಆಗಿರುವುದು ದುರ್ದೈವ.

ವಿಕಾಸಪಥದಲ್ಲಿ ಮನುಷ್ಯನೆಂಬ ಪ್ರಾಣಿ ಜೀವಿಲೋಕದ ಅತ್ಯಂತ ಕಿರಿಯ ಸದಸ್ಯ. ಅಂದರೆ, ಮನುಷ್ಯನೆಂಬುವನು ಈ ಭೂಮಿಗೆ ಅವತರಿಸಿರುವುದು ಉಳಿದೆಲ್ಲ ಜೀವಿಗಳಿಗಿಂತ ತೀರಾ ಇತ್ತೀಚೆಗೆ. ಶಿಕ್ಷೆಯೇ ಇಲ್ಲದೆ ಅತಿಮುದ್ದುಮಾಡಿ ಬೆಳೆಸಿದರೆ ಮಕ್ಕಳು ಕೆಡುವರಂತೆ.  ಈ ಪ್ರಪಂಚದ ಜೀವಿಗಳಲ್ಲಿ ಅತಿಚಿಕ್ಕವನೆಂದು ಯಾರೂ ಮುದ್ದುಮಾಡದೆ ಹೋದರೂ, ತನ್ನನ್ನು ಹತೋಟಿಯಲ್ಲಿಡುವವರು ಯಾರೂ ಇಲ್ಲದವನಂತೆಯೇ ಮನುಷ್ಯ ಬೆಳೆದುಬಿಟ್ಟ. ಮರದ ಕೊಂಬೆಯನ್ನು ಕತ್ತರಿಸಿ ಮಾಡಿದ ಕಾವು ಕೊಡಲಿಗೆ ಸೇರಿ ತನ್ನ ಕುಲಕ್ಕೆ ಮಾತ್ರವೇ ಮೃತ್ಯುವಾದರೆ, ಈ ಮನುಷ್ಯ ಇಡೀ ಜೀವಲೋಕಕ್ಕೇ ಮಾರಕವಾಗಿ ಬೆಳೆದು ತನ್ನನ್ನೂ ಲೋಕವನ್ನೂ ಅಪಾಯದ ಅಂಚಿಗೆ ತಂದೊಡ್ಡಿದ್ದಾನೆ.

ಕೋಟ್ಯಂತರ ವರುಷಗಳಿಂದ ಕ್ರಮಶಃ ರೂಪುಗೊಳ್ಳುತ್ತ ಬಂದಿರುವ ವಿಕಾಸಶೀಲ ಜೀವಜಗತ್ತು ಅವಸಾನದತ್ತ ಸಾಗಿದೆಯೇ? ಹೌದಾದರೆ, ಇದಕ್ಕೆ ಮನುಷ್ಯನೊಬ್ಬನ್ನನ್ನೇ ಹೊಣೆಮಾಡುವುದು ಹೇಗೆ, ಎನ್ನುತ್ತೀರಾ?

ಈ ಲೋಕದ ಎಲ್ಲ ಜೀವಿಗಳೂ ನಿಸರ್ಗದ ನಿಯಮಗಳಿಗೆ ಬದ್ಧವಾಗಿರುವುದನ್ನು ತಪ್ಪದೆ ಅನುಸರಿಸುತ್ತವೆ. ತಮ್ಮ ದಿನನಿತ್ಯದ ಬದುಕಿಗೆ ಯಾವುದೇ ಅಡ್ಡಿಆತಂಕಗಳಿದ್ದರೂ ಜೀವಿಗಳು ನಿಸರ್ಗವನ್ನು ಮೀರಿ ಹೋಗುವುದಿಲ್ಲ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿಶಾಲಿಯೆನಿಸಿಕೊಂಡಿರುವ ಮಾನವ ಮಾತ್ರವೇ ಪ್ರತಿಕ್ಷಣದಲ್ಲೂ ನಿಸರ್ಗವನ್ನು ಅತಿಕ್ರಮಿಸುವ ವಿಪರೀತ ಧಾರ್ಷ್ಟ್ಯವನ್ನು ಪ್ರದರ್ಶಿಸುತ್ತಿದ್ದಾನೆ.

ಅನೇಕ ಜಾತಿಯ ಪ್ರಾಣಿಪಕ್ಷಿಗಳೂ ಕ್ರಿಮಿಕೀಟಗಳೂ ಜೀವಲೋಕದಲ್ಲಿವೆ. ಇವೆಲ್ಲವೂ ಒಂದರ ಬದುಕಿಗೊಂದು ಅಡ್ಡಬಾರದಂತೆ ಆತಂಕವೊಡ್ಡದಂತೆ ಎಚ್ಚರವಹಿಸುತ್ತವೆ, ಆಹಾರಕ್ಕಾಗಿ ಬೇಟೆಯಾಡುವ ಪ್ರವೃತ್ತಿಯ ಜೀವಿಗಳೂ ಅವಶ್ಯಕತೆಯಿದ್ದಹೊರತು ಆಕ್ರಮಣಶೀಲತೆಯನ್ನು ತೋರುವುದಿಲ್ಲ. ಹಗಲಿನಲ್ಲಿ ಬೇಟೆಯಾಡುವ ಕೆನ್ನಾಯಿಗಳು ಹುಲಿಯಂತೆ ಇರುಳುಬೇಟೆಗೆ ಹೋಗುವುದಿಲ್ಲ. ಹುಲಿ ಅಡ್ಡಾಡುವ ಜಾಗದಿಂದ ಚಿರತೆ ದೂರವೇ ಉಳಿಯುತ್ತದೆ. ನೆಲದಲ್ಲಿ ಗೂಡು ಕಟ್ಟುವ ಜೇಡಕ್ಕೆ ಎತ್ತರದಲ್ಲಿ ಹಾರಾಡುವ ಕೀಟದ ಆಸೆಯಿಲ್ಲ. ಹದ್ದು, ಗರುಡಗಳಿಗೆ ಗುಬ್ಬಚ್ಚಿಯ ಆಹಾರವನ್ನು ಕಸಿಯುವ ಚಿಂತೆಯಿಲ್ಲ. ಆದರೆ, ಸದಾ ಕಂಡವರ ಪಾಲನ್ನು ಕಬಳಿಸುವತ್ತಲೇ  ಕೈಚಾಚುವ ಮಾನವನ ಪ್ರವೃತ್ತಿಯನ್ನೊಮ್ಮೆ ಗಮನಿಸಿ. ಪ್ರಾಚೀನಕಾಲದಿಂದಲೂ ಮಾನವರ ಇತಿವೃತ್ತವನ್ನು ರಕ್ತದಿಂದ ಕೆಂಪಾಗಿಸಿರುವ ಯುದ್ಧಗಳಿಗೆ ನೆಪವೊಂದೇ –ದುರಾಸೆ!

ನಿಸರ್ಗದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ತಾನು ಬಲಿತೆಗೆದುಕೊಂಡ ಜಿಂಕೆಯ  ಮಾಂಸವಷ್ಟನ್ನು ಹುಲಿ ಭಕ್ಷಿಸಿ ಹೋದ ಮೇಲೆ ಉಳಿಕೆಯನ್ನು ತಿನ್ನಲು ಹಂದಿನರಿಗಳು ಕಾದಿರುತ್ತವೆ, ಅವು ಬಿಟ್ಟುಹೋದ ಅವಶೇಷಗಳು ಹದ್ದುಕಾಗೆಗಳ ಪಾಲು. ಇನ್ನೂ ಉಳಿದದ್ದು ಹುಳಹುಪ್ಪಟೆಗಳಿಗೆ ಆಹಾರವಾಗಿ ಮಣ್ಣುಸೇರುತ್ತದೆ. ಒಂದೇ ಒಂದು ಮದುವೆಯ ಸಮಾರಂಭದಲ್ಲಿ ನಾವು ಪೋಲುಮಾಡುವ ಆಹಾರ ಎಷ್ಟಿರಬಹುದೆಂಬುದನ್ನು ಅಂದಾಜುಮಾಡಿಕೊಳ್ಳೋಣ. ಇನ್ನೊಂದೆಡೆ ಹಸಿವೆಯಿಂದಲೇ ನರಳಿಸಾಯುವ ಮನುಷ್ಯಜೀವಿಗಳ ಸಂಖ್ಯೆಯೂ ನಮ್ಮನ್ನು ಮೂದಲಿಸುವಷ್ಟಿದೆ.

ಕಾಡಿನಲ್ಲಿ ಎಷ್ಟೇ ಪ್ರಾಣಿಗಳು ಸತ್ತರೂ ಸಾವಿರಾರು ಮರಗಳ ಎಲೆಕೊಂಬೆಗಳು ಬಿದ್ದು ಕೊಳೆತರೂ ಅಲ್ಲಿ ದುರ್ವಾಸನೆಯಿಲ್ಲ. ತ್ಯಾಜ್ಯವೆಂಬುದಿಲ್ಲ. ಎಲ್ಲವೂ ಮಣ್ಣುಸೇರಿ ಫಲವತ್ತತೆಯನ್ನು ಮಿಗಿಲುಗೊಳಿಸುತ್ತವೆ. ನೂರಾರು ಕಿ.ಮೀ. ವಿಸ್ತೀರ್ಣದ ಅರಣ್ಯದಲ್ಲಿ ಮೇಲುಪದರದಲ್ಲಿ ಬಿದ್ದ ಕಳೇಬರ, ತರಗುರೆಂಬೆಗಳನ್ನು ಮಣ್ಣಿಗೆ ಸೇರಿಸುವುದಕ್ಕಾಗಿಯೇ ಸನ್ನದ್ಧವಾದ ಕ್ರಿಮಿಕೀಟಗಳ ಕ್ರಿಯಾಶೀಲ ಪಡೆಯ ನಿರಂತರ ಸೇವಾ ವ್ಯವಸ್ಥೆಯಿದೆ. ಕೋಟಿಗಟ್ಟಲೆ ಹಣ ಖರ್ಚುಮಾಡಿಯೂ ಬೆಂಗಳೂರಿನಂತಹ ನಗರವೊಂದರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗದೆ ನಮ್ಮ ವ್ಯವಸ್ಥೆ ಕೈಚೆಲ್ಲಿಕುಳಿತಿರುವುದನ್ನು ನಿತ್ಯವೂ ನೋಡುತ್ತಿದ್ದೇವಲ್ಲ!

ಪ್ರಕೃತಿಯಲ್ಲಿ ವ್ಯರ್ಥವೆಂಬುದಿಲ್ಲ. ಪರಿಸರವಿಜ್ಞಾನಿಗಳ ಈ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸುವುದಾದರೆ ಪ್ರಕೃತಿ ಜೀರ್ಣಿಸಿಕೊಳ್ಳಲಾಗದ, ಅದಕ್ಕೆ ಅಪಾಯವೊಡ್ಡುವ ಯಾವ ವಸ್ತುವನ್ನೂ ಪ್ರಕೃತಿಗೆ ಸೇರಿಸಬಾರದು. ನಾಗರಿಕ ಮಾನವ ತನ್ನ ಅನುಕೂಲಕ್ಕಾಗಿ ತಯಾರಿಸಿಕೊಂಡ ಅದೆಷ್ಟು ರಾಸಾಯನಿಕಗಳು ನಿಸರ್ಗದಲ್ಲಿ ನಿರಪಾಯಕಾರಿಯಾಗಿ ಬೆರೆಯಬಲ್ಲುವು ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವೇ ಇಲ್ಲ. ನಮ್ಮ ರಸ್ತೆಗಳುದ್ದಕ್ಕೂ ಹಾರಾಡುವ ಪ್ಲಾಸ್ಟಿಕ್ ಚೀಲಗಳೂ, ಚಾಕೊಲೇಟ್ ಸುತ್ತುಕಾಗದಗಳೂ, ಬಳಸಿ ಬಿಸಾಡಿದ ಪೆನ್ನಿನ ರೀಫಿಲ್ಲುಗಳೂ, ಇಂಜೆಕ್ಷನ್ ಸಿರಿಂಜುಗಳೂ, ವಿದ್ಯುದ್ದೀಪದ ಬುರುಡೆಗಳೂ ಶತಶತಮಾನಗಳು ಕಳೆದರೂ ಮಣ್ಣಿನಲ್ಲಿ ಕರಗದೆ ಉಳಿದು ನಮ್ಮ ಮೂರ್ಖತನವನ್ನು ಮೆರೆಸುತ್ತಿರುತ್ತವೆ.

ಹುಟ್ಟುಸಾವುಗಳ ನಡುವಣ ಬದುಕು ಒಂದು ಸವಾಲು. ದಿನನಿತ್ಯ ಈ ಬದುಕನ್ನು ನಡೆಸಲು ಸೂಕ್ತಸಿದ್ಧತೆ ಅತ್ಯವಶ್ಯ- ಎನ್ನುವ ಸತ್ಯ ಜೀವಲೋಕಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಅದಕ್ಕೆ ತಕ್ಕಂತೆ ಸೂಕ್ತ ಹೊಂದಾಣಿಕೆಗಳು ಸದ್ದಿಲ್ಲದೆ ನಡೆದಿರುತ್ತವೆ. ತನ್ನ ಗೂಡು ಶತ್ರುಗಳಿಗೆ ಪತ್ತೆಯಾಗದಿರಲೆಂದು ಪಕ್ಷಿ ಕಲ್ಲುಹೂ, ನಾರು, ಬಲೆಗಳನ್ನು ಅಂಟಿಸುವ ಕಸರತ್ತುಮಾಡುತ್ತದೆ. ಕಾಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನೇ ಕೋಗಿಲೆ ನಿರೀಕ್ಷಿಸುತ್ತಿರುತ್ತದೆ. ತನ್ನೆರಡು ಮೊಟ್ಟೆಗಳನ್ನು ಬಾಡಿಗೆತಾಯಿಗೆ ವಹಿಸಬೇಕಲ್ಲ!  ಹತ್ತಿಪ್ಪತ್ತು ಸದಸ್ಯರಿರುವ ಕೆನ್ನಾಯಿಗಳ ತಂಡದ ಹೆಣ್ಣುಗಳೆಲ್ಲ ಮರಿಮಾಡುವುದಿಲ್ಲ. ಸದಸ್ಯರ ಸಂಖ್ಯೆ ಹೆಚ್ಚಿದರೆ ಎಲ್ಲರ ಹೊಟ್ಟೆ ತುಂಬಿಸುವುದೆಂತು? ಗುಂಪಿನ ನಾಯಕ-ನಾಯಕಿಯರಿಗಷ್ಟೇ ಸಂತಾನಬೆಳೆಸುವ ಅಧಿಕಾರ. ಉಳಿದ ಸದಸ್ಯರು ಶಿಶುಪಾಲನೆಯಲ್ಲಿ ಪಾಲುದಾರರು. ಜಿಂಕೆ ಮರಿಮಾಡುವ ಸಮಯವೇ ಹುಲಿಗೂ ಮರಿಸಾಕಲು ಆದರ್ಶವಾದ ಅವಧಿ. ಮರಿಬಿಟ್ಟು ಬೇಟೆಗಾಗಿ ದೂರಹೋಗಲು ಆಗದ ತಾಯಿಹುಲಿಗೆ ಜಿಂಕೆಯನ್ನು ಕೊಲ್ಲಲಾಗದಿದ್ದರೂ ಅದರ ಮರಿಯಾದರೂ ಸಿಕ್ಕೀತು. ಇಷ್ಟೆಲ್ಲ ಸಂಕೀರ್ಣವಾದ ಜೀವವ್ಯವಸ್ಥೆಯ ಸಮತೋಲನಕ್ಕೆ  ಜೀವಿಗಳ ಸಂಖ್ಯಾಮಿತಿಯೂ ಬಹುಮುಖ್ಯ. ಗೊತ್ತುಗುರಿಯಿಲ್ಲದೆ ಬೆಳೆದಿರುವ ಮಾನವಕುಲದ ಜನಸಂಖ್ಯೆಯು ನಮ್ಮ ಸಾಮಾಜಿಕ-ಆರ್ಥಿಕ-ಭೌಗೋಳಿಕ ಸ್ಥಿತಿಗತಿಗಳ ಮೇಲೆ ಬೀರಿರುವ ದುಷ್ಪರಿಣಾಮಗಳು ಗೋಚರಿಸುತ್ತಲೇ ಇವೆ.

ಪ್ರಕೃತಿಯು ಅಂದಂದಿಗೆ ತಮಗೆ ಅಗತ್ಯವಾದುದನ್ನು ಕೊಟ್ಟೇಕೊಡುವುದೆಂಬ ಭರವಸೆಯೇ ಸಮಸ್ತ ಜೀವರಾಶಿಯಲ್ಲಿ ಜೀವನಶ್ರದ್ಧೆಯನ್ನು ಉಳಿಸಿದೆ. ಇರುವುದೆಲ್ಲವನ್ನೂ ಬಗೆದು ದೋಚುವ ಪ್ರವೃತ್ತಿ ಈ ಜೀವಜಗತ್ತಿನಲ್ಲಿ ಕಾಣುವುದಿಲ್ಲ. ನೂರಾರು ವರ್ಷಗಳಿಂದ ಬೆಳೆದುನಿಂತಿರುವ ಮರಗಳನ್ನೂ, ಸಾವಿರಾರು ವರ್ಷಗಳಿಂದ ಸಂಚಯನಗೊಂಡಿರುವ ಖನಿಜ ಹಾಗೂ ಇಂಧನಸಂಪತ್ತನ್ನೂ ತನ್ನ ತಾತ್ಕಾಲಿಕ ಅಗತ್ಯಗಳಿಗಾಗಿ ಕಳೆದ ಐವತ್ತು ವರುಷಗಳಲ್ಲಿ ಲೂಟಿಮಾಡಿರುವ ಮನುಷ್ಯನ ದುರಾಸೆ ಹೀಗೆಯೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ಉಳಿಯಬಹುದಾದ ಭೂಮಿಯ ಸ್ಥಿತಿ ಹೇಗಿದ್ದೀತು ಎನ್ನುವುದು ನಮ್ಮ ನಿಮ್ಮ ಊಹೆಗೆ ಬಿಟ್ಟ ವಿಷಯ.

Garani venkatesh

(ಚಿತ್ರ ಕೃಪೆ:  ಗರಣಿ ವೆಂಕಟೇಶ್)
Categories
ಪರಿಸರ ಲೇಖನಗಳು ವಿಜ್ಞಾನ

ಕೆರೆ ಪರಿಸರ

ಕೆರೆ ಪರಿಸರ

(ಚಿತ್ರ ಕೃಪೆ:  ನಂದಿ ಮಲ್ನಾಡ್)

ಕೆರೆ ಪರಿಸರ

ಒಳನಾಡು ಜಲಸಂಪನ್ಮೂಲಗಳ ಪೈಕಿ ಕೆರೆಗಳಿಗೆ ಪ್ರಮುಖ ಸ್ಥಾನವಿದೆ. ಭಾರತದಲ್ಲಿ ಮಾನ್ಸೂನ್ ಅನಿಶ್ಚಿತವಾದ್ದರಿಂದ ಮಳೆಗಾಲದಲ್ಲಿ ಮಳೆನೀರು ಹಿಡಿದಿಡುವುದು ಅತ್ಯವಶ್ಯಕವೆಂದು ಪ್ರಾಚೀನ ಕಾಲದಿಂದಲೂ ಜನಸಮುದಾಯ ಯೋಚಿಸಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿತು. ಎಷ್ಟೋವೇಳೆ ಸ್ಥಳೀಯ ಸಮುದಾಯವೇ ಕೆರೆಯ ನಿರ್ಮಾಣವನ್ನು ನಿರ್ಧರಿಸಿದೆ. ಮಳೆನೀರು ಕೊಯ್ಲಿನ ಮೊದಲ ಪಾಠವೇ ಹಿಂದಿನವರು ನಿರ್ಮಿಸಿದ ಕೆರೆಗಳು. ಕೆರೆಗಳನ್ನು ಕಟ್ಟಲು ಅನೇಕ ಕಾರಣಗಳಿದ್ದವು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಗಳಿಗೆ, ದೈನಂದಿನ ಬಳಕೆಗೆ ಹೆಚ್ಚು ನೀರಿನ ಅವಶ್ಯಕತೆ ಇತ್ತು. ಸ್ಥಳೀಯ ಬೆಟ್ಟಗುಡ್ಡಗಳಿಂದ ಬರುವ ಸಣ್ಣ ಪುಟ್ಟ ತೊರೆ, ಹಳ್ಳಗಳನ್ನು ಗಮನಿಸಿ, ತಗ್ಗಿನಲ್ಲಿ ಕೆರೆ ಕಟ್ಟುವುದು ಸಾಂಪ್ರದಾಯಕವೆಂಬಂತೆ ಭಾರತೀಯರ ಗ್ರಾಮೀಣ ಬದುಕಿನಲ್ಲಿ ಕಂಡುಬಂದಿದೆ. ಭಾರತಕ್ಕೆ ೩೨೯ ದಶಲಕ್ಷ ಹೆಕ್ಟೇರು ಭೌಗೋಳಿಕ ಪ್ರದೇಶವಿದ್ದರೂ ಎಲ್ಲೆಡೆಯೂ ನದಿ ನೀರಿನ ಹರಿವು ಇಲ್ಲ. ಅದಕ್ಕೆ ಪರ್ಯಾಯವಾಗಿ ಸಣ್ಣ ಪ್ರಮಾಣದಲ್ಲಾದರೂ ಮೈದಾನ ಪ್ರದೇಶಗಳಲ್ಲಿ ನೀರು ಹಿಡಿದಿಡುವ ಯೋಜನೆಯೇ ಕೆರೆ ನಿರ್ಮಾಣ. ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಸ್ಥಭೂಮಿ ಬಹುತೇಕ ಎತ್ತರಿಸಿದ ಭಾಗವಾದ್ದರಿಂದ, ಮೇಲಾಗಿ ಗ್ರನೈಟ್ ಸಂಬಂಧೀ ಗಡಸುಕಲ್ಲಿನಿಂದ ರೂಪಿತಗೊಂಡಿರುವುದರಿಂದ ಇಲ್ಲಿ ಕೆರೆ ನಿರ್ಮಿಸಿದಾಗ ದೊಡ್ಡ ಪ್ರಮಾಣದಲ್ಲಿ ನೀರು ಹಿಂಗಿಹೋಗುವ ಸಂದರ್ಭ ಕಡಿಮೆ. ಐತಿಹಾಸಿಕವಾಗಿ ನೋಡಿದರೆ ಕೆರೆ ಕಟ್ಟೆ ಕಟ್ಟಿಸುವುದು ಪ್ರಜೆಗಳ ಹಿತರಕ್ಷಣೆಯ ರಾಜಧರ್ಮವಾಗಿತ್ತು.

ಕೆರೆ ಮತ್ತು ಕೊಳಗಳು ನೀರಿನ ಮುಖ್ಯ ಆಕರವಾದರೂ ಕೆರೆ ಉದ್ದೇಶಪೂರ್ವಕವಾಗಿಯೇ ನಿರ್ಮಿಸಿದ್ದು. ಕೊಳ ನೈಸರ್ಗಿಕವಾಗಿ ರೂಪಿತವಾಗಿದ್ದು. ಕೆರೆಗಳನ್ನು ಕಟ್ಟುವಾಗ ನಮ್ಮ ಪ್ರಾಚೀನರು ಅತ್ಯಂತ ಯುಕ್ತಮಾರ್ಗ ಅನುಸರಿಸಿದ್ದಾರೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ಬಂದು ಕೆರೆ ತುಂಬಿದರೆ ಏರಿ ಒಡೆಯಬಾರದು ಎಂದು, ಹೆಚ್ಚುವರಿ ನೀರು ವ್ಯರ್ಥವಾಗಿ ಹೋಗಬಾರದು ಎಂದು ಕೋಡಿಕಟ್ಟಿದ್ದಾರೆ. ಎಲ್ಲ ಕೆರೆಗಳಲ್ಲೂ ಇದನ್ನು ಗಮನಿಸಬಹುದು. ಕೋಡಿಯಿಂದ ಹರಿದ ಕೆರೆಯ ನೀರು ಮುಂದಿನ ಕೆರೆಗೆ ತುಂಬುವಂತೆ ಸಂಪರ್ಕವಿರುತ್ತಿತ್ತು. ಅಲ್ಲಿಂದ ಮತ್ತೊಂದಕ್ಕೆ, ಇನ್ನೂ ದೊಡ್ಡ ಕೆರೆಯೆಂದರೆ ತೂಬುಗಳನ್ನು ತೆರೆಯುವ ಉಪಾಯ. ಕೃಷಿ, ಜಾನುವಾರುಗಳಿಗೆ, ಕುಡಿಯುವ ನೀರಿಗೆ, ಗೃಹಕೃತ್ಯಕ್ಕೆ ಕೊನೆಗೆ ಶೌಚಕ್ಕೂ ಕೆರೆಯೇ ಆಧಾರ ಎಂಬ ಪರಿಕಲ್ಪನೆ ಲಾಗಾಯ್ತಿಯಿಂದ ಬಂದಿದ್ದರೂ ಕಳೆದ ಶತಮಾನದ ೭೦ರ ದಶಕದ ನಂತರ ಅನೇಕ ಪರಿವರ್ತನೆಗಳಾದವು. ಆ ಮುಂಚೆ ಕೆರೆಗಳಲ್ಲಿ ಹೂಳು ತುಂಬಿದರೆ ಅದನ್ನು ಎತ್ತಲು ಸಮುದಾಯ ಭಾಗವಹಿಸುತ್ತಿತ್ತು. ಸೋಮವಾರದಂದು ಉಳುಮೆಗೆ ಬಿಡುವು ಇದ್ದುದರಿಂದ ಆ ಕಾಲವನ್ನು ಗ್ರಾಮೀಣ ಜನರು ಕೆರೆಗಳ ಹೂಳೆತ್ತಲು, ಏರಿಯನ್ನು ಭದ್ರಪಡಿಸಲು ಬಳಸಿಕೊಳ್ಳುತ್ತಿದ್ದರು. ೭೦ರ ದಶಕದ ನಂತರ ಬದಲಾದ ಕೃಷಿ ಪರಿಸ್ಥಿತಿ, ಅಂತರ್ಜಲದ ಯಥೇಚ್ಛ ಬಳಕೆ, ಕೆರೆಯ ಜಲಾನಯನ ಪ್ರದೇಶದ ಒತ್ತುವರಿ, ಹೂಳನ್ನು ಎತ್ತುವುದರಲ್ಲಿ ನಿರ್ಲಕ್ಷ್ಯ ಇವೆಲ್ಲ ಸೇರಿ ಕೆರೆಯ ಸಂರಕ್ಷಣೆಗೆ ಅನೇಕ ಅಡಚಣೆಗಳು ಎದುರಾದವು.

ಏಷ್ಯ ಅಭಿವೃದ್ಧಿ ಬ್ಯಾಂಕ್ ದೇಶದ ಪ್ರಮುಖ ಕೆರೆಗಳ ಸ್ಥಿತಿಗತಿಗಳನ್ನು ವರದಿಮಾಡಿದೆ. ಕರ್ನಾಟಕದಲ್ಲಿ ೩೦ ಜಿಲ್ಲೆಗಳೂ ಸೇರಿ ಒಟ್ಟು ೩೬,೬೭೮ ಕೆರೆಗಳಿವೆ. ಇವು ವಿಸ್ತರಿಸಿರುವ ಜಾಗ ೬,೯೦,೦೦೦ ಹೆಕ್ಟೇರು. ಆದರೆ ಇವುಗಳಲ್ಲಿ ಶೇ. ೯೦ ಭಾಗ ಕೆರೆಗಳು ೪೦ ಹೆಕ್ಟೇರುಗಳಿಗಿಂತ ಹೆಚ್ಚು ವಿಸ್ತರಿಸಿಲ್ಲ. ಅವುಗಳನ್ನು ಆಧರಿಸಿ ಸದ್ಯದಲ್ಲಿ ಸಾಗುವಳಿ ಮಾಡುತ್ತಿರುವುದು ಶೇ. ೩೫ ಭಾಗ ಮಾತ್ರ. ೧೯೯೭ರಿಂದ ಸಣ್ಣ ನೀರಾವರಿ ಇಲಾಖೆ ಈ ಕೆರೆಗಳು ಉಸ್ತುವಾರಿ ವಹಿಸಿದೆ. ಕೆರೆಗಳ ಅಚ್ಚುಕಟ್ಟು ಪ್ರದೇಶವನ್ನು ಆಧರಿಸಿ ಅವುಗಳ ನಿರ್ವಹಣೆಯನ್ನು ಬೇರೆ ಬೇರೆ ಆಡಳಿತಕ್ಕೆ ವಹಿಸಿದೆ. ೪೦ ರಿಂದ ೨೦೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳ ಉಸ್ತುವಾರಿಯನ್ನು ಸರ್ಕಾರದ ಸಣ್ಣ ನೀರಾವರಿ ಇಲಾಖೆ ವಹಿಸಿಕೊಂಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ಕೆರೆಗಳನ್ನು ಜಿಲ್ಲಾ ಪರಿಷತ್ ಮತ್ತು ಪಂಚಾಯತಿಗಳು ವಹಿಸಿಕೊಂಡಿವೆ. ಅಚ್ಚುಕಟ್ಟು ಪ್ರದೇಶ ೨೦೦೦ ಹೆಕ್ಟೇರಿಗಿಂತ ಹೆಚ್ಚಾಗಿದ್ದರೆ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆಗಳು ಇದನ್ನು ನಿರ್ವಹಿಸುತ್ತವೆ.

ಕೆರೆಗಳನ್ನು ಯುಕ್ತವಾಗಿ ಬಳಸಲು ಕರ್ನಾಟಕ ಸರ್ಕಾರ ನೀರು ಬಳಕೆದಾರ ಸಹಕಾರ ಸಂಘಗಳ ಸ್ಥಾಪನೆಗೆ ಒತ್ತುಕೊಟ್ಟಿದೆ (Water users Co-operative Sociery-W.W.C.S.) ಕರ್ನಾಟಕ ಸರ್ಕಾರ ೧೯೬೫ರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ೫೦೦ರಿಂದ ೭೦೦ ಹೆಕ್ಟೇರು ಅಚ್ಚುಕಟ್ಟು ಇರುವ ಕೆರೆಗಳನ್ನು ಈ ಸಂಘದ ಸುಪರ್ದಿಗೆ ಕೊಡುವ ಯೋಜನೆ ರೂಪಿಸಿತು. ೨೦೦೨ರಲ್ಲಿ ಮತ್ತೆ ಒಂದು ಕಾಯ್ದೆ ರೂಪಿಸಿ ಕೆರೆ ಬಳಕೆದಾರರ ಗುಂಪಿಗೆ (Tank Users Group-T.U.G.) ಬಿಡಿ ಕೆರೆಗಳನ್ನು ವಹಿಸುವ ಯೋಜನೆಯೊಂದನ್ನು ರೂಪಿಸಿತು. ೨೦೦೪ರಿಂದ ಯಾವ ಕೆರೆಯ ಅಚ್ಚುಕಟ್ಟು ೪೦ ಹೆಕ್ಟೇರಿಗಿಂತ ಹೆಚ್ಚಾಗಿದೆಯೋ ಅದನ್ನು ಗ್ರಾಮ ಪಂಚಾಯಿತಿಯ ಸುಪರ್ದಿಗೆ ನೀಡಿದೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಇರುವ ೨೦೦೦ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸಮುದಾಯ ಆಧಾರಿತ ಸಣ್ಣ ಕೆರೆಗಳ ಪುನಶ್ಚೇತನ ಯೋಜನೆಯೊಂದನ್ನು ತಂದಿದೆ. ಹಾಗೆಯೇ ಜಲಸಂವರ್ಧನಾ ಯೋಜನಾ ಸಂಘವೆಂಬ ಸ್ವತಂತ್ರ ಸಂಸ್ಥೆಯನ್ನೂ ಅಸ್ತಿತ್ವಕ್ಕೆ ತಂದಿದೆ. ಬಹು ಮುಖ್ಯವಾದ ಅಂಶವೆಂದರೆ ಇಂಥ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಒಂದು ಕಾಲಮಿತಿಯಲ್ಲಿ ಇವನ್ನು ಪೂರ್ಣಗೊಳಿಸಬೇಕು. ಅದಕ್ಕೆ ತಕ್ಕ ಅನುಕೂಲತೆಗಳನ್ನು ಕಲ್ಪಿಸಬೇಕು. ಆಡಳಿತಾತ್ಮಕವಾಗಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಅಥವಾ ಅದರ ನಿರ್ವಹಣೆಗೆ ಸ್ಪಷ್ಟ ರೂಪುರೇಖೆಗಳು ನಿರ್ಧಾರವಾಗಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಪರಿಸರದ ಅವನತಿ

ಸದ್ಯದಲ್ಲಿ ಕರ್ನಾಟಕ ಕೆರೆ ಪರಿಸರ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ. ಕೃಷಿಗಾಗಿ ಕೆರೆಗಳ ಮೇಲಿನ ಅವಲಂಬನೆ ಸ್ವಾತಂತ್ರ್ಯಾನಂತರ ಅದರಲ್ಲೂ ವಿಶೇಷವಾಗಿ ೭೦ರ ದಶಕದ ನಂತರ ಕಡಿಮೆಯಾಗುತ್ತ ಬಂತು. ಕೊಳವೆ ಬಾವಿಗಳು ಆದ್ಯತೆ ಪಡೆದವು, ಕೆರೆಯ ಪರಿಸರದ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಹಳ್ಳ ಕೂಡುವ ಜಾಗಗಳು ಸೇರಿದಂತೆ ಕೆರೆಯ ಭಾಗವನ್ನು ಒತ್ತುವರಿ ಮಾಡಿದಾಗ ಎರಡು ಸಮಸ್ಯೆಗಳೂ ಏಕಕಾಲಕ್ಕೆ ಎದುರಾದವು. ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾದದ್ದು, ಅದೇ ಕಾಲಕ್ಕೆ ಅಧಿಕ ಹೂಳು ಕೆರೆಯಂಗಳವನ್ನು ತುಂಬಿದ್ದು. ಹೀಗಾಗಿ ಅಧಿಕ ಮಳೆ ಬಂದಾಗ, ಸುಸ್ಥಿತಿಯಲ್ಲಿರದ ಎಷ್ಟೋ ಕೆರೆಯ ಏರಿಗಳು ಒಡೆದುಹೋದವು. ಎಲ್ಲದಕ್ಕೂ ಸರ್ಕಾರದ ಹಣವನ್ನೇ ನಿರೀಕ್ಷಿಸುವ ಜಾಯಮಾನ ಗ್ರಾಮೀಣ ಪ್ರದೇಶದ ಜನರಲ್ಲಿ ಬೆಳೆಯಿತು. ಕೆರೆ ದುರಸ್ತಿ ಸರ್ಕಾರದ ಕೆಲಸ ಎನ್ನುವಂತಾಯಿತು. ಬರಗಾಲ ಬಂದಾಗ ಕೆರೆಗಳು ಬತ್ತಿಹೋದವು. ಹಾಗೆಯೇ ಅಂತರ್ಜಲದ ಮಟ್ಟವೂ ಕೆಳಕ್ಕೆ ಹೋಗುತ್ತ ಬಂತು. ಕೆರೆಗಳನ್ನು ಆಧರಿಸಿದ ಜೀವಿ ವೈವಿಧ್ಯಕ್ಕೆ ಇದು ಮುಳುವಾಯಿತು. ಕೆರೆಗಳ ಪುನಶ್ಚೇತನಕ್ಕಾಗಿ ವಿಶ್ವಬ್ಯಾಂಕ್ ನೆರವನ್ನು ಕೇಳುವ ಸ್ಥಿತಿ ಬಂತು.

ಹಸುರು ಕ್ರಾಂತಿ ನಮ್ಮ ಆಹಾರೋತ್ಪಾದನೆಯಲ್ಲಿ ದೊಡ್ಡ ಬದಲಾವಣೆ ತಂದರೂ ಇನ್ನೊಂದು ದೃಷ್ಟಿಯಿಂದ ಶಾಶ್ವತ ಸಮಸ್ಯೆಯನ್ನು ತಂದೊಡ್ಡಿತು. ಯಥೇಚ್ಛವಾಗಿ ಕೀಟನಾಶಕವನ್ನು ಬೆಳೆಗೆ ಬಳಸಿದ್ದರಿಂದ ಅದು ತಂದ ವಿಪತ್ತುಗಳು ನೂರಾರು. 50ರ ದಶಕದಲ್ಲಿ ಸೊಳ್ಳೆ ನಿರ್ಮೂಲನಕ್ಕಾಗಿ ಬಳಸಿದ ಡಿ.ಡಿ.ಟಿ. ಈಗಲೂ ಕೃಷಿ ನೆಲದಿಂದ ಪೂರ್ಣ ಮರೆಯಾಗಿಲ್ಲ ಎಂಬುದು ಪರಿಸರ ಚಿಂತಕರ ಅಳಲು. ಕೃಷಿ ಬೆಳೆಗೆ ಸಿಂಪಡಿಸುವ ಕೀಟನಾಶಕಗಳಲ್ಲಿ ಪೊಟಾಸಿಯಂ ಸಾರ ಹೆಚ್ಚಾಗಿರುತ್ತದೆ. ಮಳೆ ಬಂದಾಗ ಕೆರೆಯಲ್ಲಿ ಸೇರಿಕೊಂಡು ನೀರಿನ ಆಮ್ಲಾಂಕವನ್ನು (PH) ಏರುಪೇರು ಮಾಡುತ್ತದೆ. ಬೆನ್ಜೀನ್ ಹೆಕ್ಸಾಕ್ಲೋರೈಡ್, ಲಿಂಡೇನ್, ಎಂಡೋಸಲ್ಫಾನ್-ಇವು ನೀರಿನಲ್ಲಿ ಸೇರಿ ಅಲ್ಲಿನ ಜೀವಿಗಳಿಗೆ ಮಾರಕವಾಗತೊಡಗಿತು. ಎಷ್ಟೋ ಸಂದರ್ಭಗಳಲ್ಲಿ ಕ್ಯಾನ್ಸರ್‍ಗೂ ಇವು ಕಾರಣ ಎಂದು ಸಮೀಕ್ಷೆಗಳು ಹೇಳಿದವು. ಕೆರೆಗಳನ್ನು ಶೌಚಕ್ಕೆ ಬಳಸುತ್ತಿದ್ದುದರಿಂದ ನೀರಿನಿಂದ ಹರಡುವ ರೋಗಗಳು ಹೆಚ್ಚಾಗುತ್ತಿದ್ದವು. ಈಗಲೂ ಇಂಥ ಸಂದರ್ಭಗಳು ಕೆಲವು ಹಿಂದುಳಿದ ಗ್ರಾಮಗಳಲ್ಲಿದೆ. ಯಾವ ಕೆರೆಯ ನೀರೂ ಶುದ್ಧವಲ್ಲ, ಅದರಲ್ಲಿ ಹಲವು ಲವಣಗಳು ವಿಲೀನವಾಗಿರುತ್ತವೆ. ಅಷ್ಟೇಕೆ ಕೆರೆಯ ನೀರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಮಣ್ಣಿನ ಕಣಗಳಿಂದಾಗಿ ನೀರಿಗೆ ಕೆಂಪು ಬಣ್ಣ ಬಂದಿರುತ್ತದೆ. ಈ ಸೂಕ್ಷ್ಮ ಕಣಗಳು ನಿಲಂಬಿತ ಸ್ಥಿತಿ (ಸಸ್ಪೆಂಡೆಡ್)ಯಲ್ಲಿರುತ್ತವೆ.

ಸಮುದ್ರಗಳಲ್ಲಿ ಜೀವಿ ವೈವಿಧ್ಯ ಹೇಗಿರುತ್ತದೋ ಕೆರೆಗಳಲ್ಲೂ ಸ್ಥಳೀಯ ಮಟ್ಟದಲ್ಲಿ ಜೀವಿಗಳಲ್ಲಿ ವೈವಿಧ್ಯವಿರುತ್ತದೆ. ಇದಕ್ಕೆ ತುಮಕೂರಿನ ಅಮಾನಿಕೆರೆ ಉದಾಹರಣೆಯಾಗುತ್ತದೆ. ಈ ಕೆರೆಯ ಜೀವಿ ವೈವಿಧ್ಯವನ್ನು ತುಮಕೂರಿನ ಸರ್ಕಾರೇತರ ಸಂಸ್ಥೆ-ವೈಲ್ಡ್ ಲೈಫ್ ಅವೇರ್ ನೆಟ್‍ವರ್ಕ್-ದಾಖಲೆ ಮಾಡಿದೆ. ತುಮಕೂರು ಅಮಾನಿಕೆರೆ ನಗರಕ್ಕೇ ಹೊಂದಿಕೊಂಡಿರುವ ದೊಡ್ಡ ಕೆರೆ. ಇದರ ವಿಸ್ತೀರ್ಣ ೮೩೫ ಎಕರೆ. ಹಾಗೆಯೇ ನೀರು ಹಿಡಿದಿಡುವ ಸಾಮರ್ಥ್ಯ ೧೬೫.೪೪ ದಶಲಕ್ಷ ಘನ ಅಡಿ. ಸಮುದ್ರ ಮಟ್ಟದಿಂದ ೭೮೫ ಮೀಟರ್ ಎತ್ತರದಲ್ಲಿದೆ. ತುಮಕೂರು ತಾಲ್ಲೂಕಿನ ವಾರ್ಷಿಕ ಮಳೆ ಪ್ರಮಾಣ ೬೮೮ ಮಿಲಿ ಮೀಟರ್. ಕೆರೆಯ ಅಚ್ಚುಕಟ್ಟು ಪ್ರದೇಶ ೭೦೫ ಎಕರೆ. ಇದಕ್ಕೆ ಕಟ್ಟಿರುವ ಏರಿಯೇ ೧.೮ ಕಿ.ಮೀ. ಉದ್ದವಿದೆ. ದೇವರಾಯನದುರ್ಗದ ಪಶ್ಚಿಮ ಇಳಿಜಾರು ಪ್ರದೇಶ ಸೇರಿದಂತೆ ಇದರ ಜಲಾನಯನ ಪ್ರದೇಶ ೩೫ ಚದರ ಕಿಲೋ ಮೀಟರ್ ವಿಸ್ತರಿಸಿದೆ. ಈ ಕೆರೆ ತುಂಬಿ ಕೋಡಿ ಬಿದ್ದಾಗ ಅದು ಮುಂದೆ ಭೀಮಸಮುದ್ರ ಕೆರೆಗೆ ಹೋಗುತ್ತದೆ, ಅಲ್ಲಿಂದ ಶಿಂಷಾ ನದಿಗೆ, ಅಂತಿಮವಾಗಿ ಕಾವೇರಿ ನದಿ ಕಣಿವೆಯನ್ನು ಕೂಡಿಕೊಳ್ಳುತ್ತದೆ. ಕ್ರಿ.ಶ. ೧೧೩೦ರಲ್ಲಿ ರಾಜೇಂದ್ರ ಚೋಳ ಈ ಕೆರೆ ಕಟ್ಟಿಸಿದನೆಂಬ ಉಲ್ಲೇಖವಿದೆ. ಈಗ ಇದು ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿದೆ. ಈ ಕೆರೆಗೆ ಎರಡು ಹಳ್ಳಗಳು ನೀರು ತುಂಬುತ್ತವೆ. ದೇವರಾಯಪಟ್ಟಣ ಹಳ್ಳ ಮತ್ತು ಹನುಮಂತಪುರ ಹಳ್ಳ. ಇವು ಸರ್ವಋತು ಹಳ್ಳಗಳಲ್ಲ, ಮಳೆಗಾಲದಲ್ಲಿ ಮಾತ್ರ ಹರಿಯುವಂತಹವು. ತುಮಕೂರಿನ ಕೆರೆ ಹಿಂಭಾಗದ ಅಂತರ್ಜಲ ಮರುಪೂರಣಕ್ಕೆ ಈ ಕೆರೆಯ ನೀರೇ ಆಧಾರ. ಹಾಗೆಯೇ ಜೀವಿ ವೈವಿಧ್ಯವನ್ನು ಪೋಷಿಸಿರುವ ಈ ಅಮಾನಿಕೆರೆ ಸದಾ ಅಧ್ಯಯನ ಯೋಗ್ಯ. ಈ ಕೆರೆಯನ್ನು ಆಶ್ರಯಿಸಿ ೪೨ ಕುಟುಂಬಕ್ಕೆ ಸೇರಿದ ೧೨೧ ಪಕ್ಷಿ ಪ್ರಭೇದಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಪೈಕಿ ೪೨ ಪಕ್ಷಿ ಪ್ರಭೇದಗಳು ದೂರದಿಂದ ವಲಸೆ ಬರುವಂತಹವು. ಆರು ಕುಟುಂಬಗಳಿಗೆ ಸೇರಿದ ೨೪ ಚಿಟ್ಟೆ ಪ್ರಭೇದಗಳು, ೧೨ ಜೇಡ ಪ್ರಭೇದಗಳು, ೬ ಸ್ತನಿ ಪ್ರಭೇದಗಳು, ೧೧ ಉರಗ ಪ್ರಭೇದಗಳು ಜೊತೆಗೆ ಆಮೆ, ಕಪಿ, ಮುಂಗುಸಿ, ದಂಷ್ಟ್ರಕ ಜೀವಿಗಳು, ಉಭಯ ಜೀವಿಗಳಿಗೆ ಇದು ನೆಲೆಯಾಗಿದೆ. ತುಮಕೂರಿನ ಅಮಾನಿಕೆರೆ ಅನೇಕ ಹಂತಗಳಲ್ಲಿ ಅಳಿವಿನಂಚಿನತ್ತ ಸಾಗಿತ್ತು. ಮುಖ್ಯವಾಗಿ ಹಳ್ಳದ ನೀರು ಒಳಹರಿಯುವ ಭಾಗದಲ್ಲಿ ಪಾತ್ರ ಬದಲಾಯಿಸಿದ್ದು, ಅತಿಕ್ರಮಣ, ಕೆರೆ ಒತ್ತುವರಿ, ಇಟ್ಟಿಗೆ ಕಾರ್ಖಾನೆಗಳ ಸ್ಥಾಪನೆ, ಅತಿರೇಕದ ಬಯಲು ಶೌಚ ಈ ಮೂಲಕ ನೀರಿನಿಂದ ಹರಡುವ ಕಾಯಿಲೆಗೆ ಜನ ತುತ್ತಾಗಿದ್ದರು. ಅನೇಕ ಪಕ್ಷಿಗಳನ್ನು ಕಾನೂನುಬಾಹಿರವಾಗಿ ಕೊಂದದ್ದರಿಂದ ಅವುಗಳ ಸಂಖ್ಯೆ ಇಳಿಮುಖವಾಯಿತು. ತುಮಕೂರಿನ ಚರಂಡಿ ನೀರು ಅಂತಿಮವಾಗಿ ಈ ಅಮಾನಿಕೆರೆಯನ್ನೇ ಸೇರುತ್ತದೆ. ಇಲ್ಲಿನ ಜೀವಿ ಪ್ರಭೇದಗಳಿಗೆ ದೊಡ್ಡ ಕುತ್ತು ತಂದಿರುವ ಸಂಗತಿ ಇದು. ನೀರಿನಲ್ಲಿ ಬೆಳದ ಅಂತರಗಂಗೆ ಕೆರೆಯ ಬಹುಭಾಗದ ನೀರನ್ನೇ ಮರೆಮಾಡಿತ್ತು. ತುಮಕೂರಿನ ನಾಗರಿಕರು ಕ್ರಿಯಾಶೀಲರಾಗಿ, ಸ್ವಯಂಪ್ರೇರಿತರಾಗಿ ಇದನ್ನು ಶುದ್ಧೀಕರಿಸುವ ಕಾರ್ಯ ಕೈಗೊಂಡರು.

ಸಾಮಾನ್ಯವಾಗಿ ಯಾವ ಕೆರೆಯೇ ಆಗಲಿ, ಅದರಲ್ಲಿ ತೇಲುವ ಸಸ್ಯಗಳು, ಮುಳುಗಿರುವ ಸಸ್ಯ, ನೀರಿನ ತಳದಲ್ಲಿ ಆಳ ಬೇರು ಬಿಟ್ಟಿರುತ್ತವೆ. ಅಂತರಗಂಗೆ, ನೀರು ಬ್ರಾಹ್ಮಿ, ಒಂದೆಲಗೆ ಸಸ್ಯ ಅನೇಕ ಕೆರೆಗಳಲ್ಲಿ ತೇಲುವುದನ್ನು ಸಾಮಾನ್ಯವಾಗಿ ಕಾಣಬಹುದು. ಶೈವಲ, ಡಯಾಟಂ ಕೂಡ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜೀವಿ ವಿಜ್ಞಾನಿಗಳು ಬಹುತೇಕ ಕೆರೆಗಳಲ್ಲಿ ಹದಿನೈದು ಬಗೆಯ ಸಸ್ಯಗಳನ್ನು ದಾಖಲೆ ಮಾಡಿದ್ದಾರೆ. ಹಾಗೆಯೇ ಗುಳುಮುಳುಕ, ನೀರುಕಾಗೆ, ರಾತ್ರಿಬಕ, ಬೂದುಕೊಕ್ಕರೆ, ಮೀಂಚುಳ್ಳಿ, ಚಮಚದ ಕೊಕ್ಕು ಸೇರಿದಂತೆ ಅನೇಕ ಬಗೆಯ ಪಕ್ಷಿಗಳಿಗೆ ಕೆರೆ ಆಶ್ರಯ ಕೊಡುತ್ತದೆ. ಶಂಕದ ಹುಳು, ಏಡಿ, ಸೀಗಡಿ, ನಳ್ಳಿ, ಸಂದಿಪದಿಗಳು, ವಲಯವಂತಗಳು ಆಹಾರ ಸರಪಳಿಯ ಒಂದು ಭಾಗವಾಗಿ ಕೆರೆಯನ್ನು ಆಶ್ರಯಿಸಿರುತ್ತವೆ. ಕೊಡತಿಕೀಟದಿಂದ ಹಿಡಿದು ಜಲಜೀರುಂಡೆಗಳವರೆಗೆ ಅನೇಕ ಕೀಟಗಳಿಗೂ ಕೆರೆಯೇ ಆವಾಸ. ಹಾಗೆಯೇ ಸೂಕ್ಷ್ಮಜೀವಿಗಳು ಕೆರೆಯಲ್ಲಿ ಆಶ್ರಯ ಪಡೆಯುತ್ತವೆ. ಯೂಗ್ಲಿನ, ಸ್ಪೈರೋಗೈರ, ಪ್ಯಾರಮೀಡಿಯಮ್ ಮುಂತಾದವು. ಇದಲ್ಲದೆ ಕೆರೆಗಳಲ್ಲಿ ನೈಸರ್ಗಿಕವಾಗಿರುವ ಮೀನುಗಳೂ ಉಂಟು. ಹಾಗೆಯೇ ಮೀನುಗಳನ್ನು ಬೆಳೆಸುವುದೂ ಉಂಟು. ಸರ್ವಋತು ನೀರಿದ್ದಾಗ ಮಾತ್ರ ಇದು ಸಾಧ್ಯ. ಕಾಟ್ಲಾ, ಮೃಗಾಲ್, ಗೆಂಡೆಮೀನು, ಬಾಳೆಮೀನು ಸೇರಿದಂತೆ ೨೦ ಬಗೆಯ ಮೀನಿನ ತಳಿಗಳನ್ನು ಕೆರೆಗಳಲ್ಲಿ ಬೆಳೆಸುವುದುಂಟು. ಅಂಥ ಕೆರೆಗಳು ಮಲಿನವಾಗಿರಬಾರದು. ಕೆರೆ ಕಲುಷಿತವಾಯಿತೆಂದರೆ ಬಹು ಬೇಗ ಜೀವಿಗಳು ಸಾಯುತ್ತವೆ, ಜೀವಿ ವೈವಿಧ್ಯ ನಷ್ಟವಾಗುತ್ತವೆ. ಹಾಗೆಯೇ ಆಹಾರ ಸರಪಳಿಯ ಕೊಂಡಿ ಕಳಚುತ್ತದೆ. ಇವೆಲ್ಲವನ್ನೂ ಕಾನೂನಿನಿಂದಲೇ ಸರಿಪಡಿಸಲು ಸಾಧ್ಯವಿಲ್ಲ. ಸಂರಕ್ಷಣೆ ಕುರಿತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಬೇಕು.

ಸೂಳೆಕೆರೆ (ಶಾಂತಿಸಾಗರ) ಅಧ್ಯಯನ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರ್ನಾಟಕದ ಕೆರೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕ್ರಿ.ಶ. ೧೧೨೮ರಲ್ಲಿ ಶಾಂತವ್ವ ಎಂಬಾಕೆ ಕಟ್ಟಿಸಿದ ಈ ಕೆರೆ ಏಷ್ಯದ ಅತಿದೊಡ್ಡ ಎರಡನೇ ಕೆರೆ ಎಂದು ಪ್ರಸಿದ್ಧಿಯಾಗಿದೆ (ಏಷ್ಯದ ಅತಿದೊಡ್ಡ ಕೆರೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕುಂಬಂ. ಇದರ ನೀರು ಸಂಗ್ರಹಣಾ ಸಾಮರ್ಥ್ಯ ೩,೩೭೮ ಘನ ಅಡಿ). ಸೂಳೆಕೆರೆಯ ನೀರಿನ ವಿಸ್ತೀರ್ಣ ೨,೪೬೬ ಹೆಕ್ಟೇರು, ಜಲಾನಯನ ಪ್ರದೇಶದ ವಿಸ್ತೀರ್ಣ ೮೪,೪೧೬ ಹೆಕ್ಟೇರು. ಕೆರೆಯ ಸುತ್ತಳತೆ ೩೦ ಕಿಲೋ ಮೀಟರು. ಈ ನೀರನ್ನು ಆಧರಿಸಿ ೨,೮೭೬ ಹೆಕ್ಟೇರು ಸಾಗುವಳಿಯಾಗುತ್ತಿದೆ. ಕೆರೆಯ ಕನಿಷ್ಠ ಆಳ ಐದು ಮೀಟರು, ಗರಿಷ್ಠ ಆಳ ಒಂಬತ್ತು ಮೀಟರು. ಕೆರೆಯ ನೀರಿನ ಮಟ್ಟ ಕೆಳಗೆ ಇಳಿಯುವ ಪರಿಸ್ಥಿತಿ ಎದುರಾಗಿತ್ತು. ಆಗ ಭದ್ರಾ ಅಣೆಕಟ್ಟಿನ ಕಾಲುವೆ ಸಂಪರ್ಕ ಕಲ್ಪಿಸಲಾಯಿತು. ಈಗ ಸರ್ವಋತುವಿನಲ್ಲೂ ಇದರಲ್ಲಿ ನೀರಿರುತ್ತದೆ. ಕೆರೆಯ ಅಂಚಿನ ಭಾಗದಲ್ಲಿ ಶೇ. ಸುಮಾರು ೧೫ ಭಾಗ ಒತ್ತುವರಿಯಾಗಿದ್ದರೂ, ಶೇ. ೩೦ ಭಾಗದಲ್ಲಿ ಜಲಸಸ್ಯಗಳು ಬೆಳೆದಿದ್ದರೂ, ಈ ಕೆರೆ ಕಲುಷಿತವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹತ್ತಿರದಲ್ಲಿ ಯಾವುದೇ ಕಾರ್ಖಾನೆಗಳಿಲ್ಲವಾದ್ದರಿಂದ ಕೆರೆಗೆ ಕೊಳಚೆ ಹರಿಯುವ ಸಂಭವವಿಲ್ಲ.

ವೈಜ್ಞಾನಿಕ ದೃಷ್ಟಿಯಿಂದ ಈ ಕೆರೆಯ ನೀರಿನ ಬೇರೆ ಬೇರೆ ಗುಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ. ಕೆರೆಯ ನೀರಿನ ಉಷ್ಣತೆಗಿಂತ ಇದರ ಮೇಲೆ ಬೀಸುವ ಗಾಳಿಯ ಉಷ್ಣತೆಯೇ ಹೆಚ್ಚು (೨೭.೦-೩೩.೨೦ ಡಿಗ್ರಿ ಸೆಂ.). ಈ ನೀರು ಕುಡಿಯಲು ಯೋಗ್ಯವಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗಕ್ಕೆ ಈ ಕೆರೆಯಿಂದ ದಿನವಹಿ ೩೦ ದಶಲಕ್ಷ ಲೀಟರು ನೀರು ಪೂರೈಕೆ ಸಾಧ್ಯವಾಗಿದೆ. ನೀರಿನಲ್ಲಿ ಯಾವುದೇ ವಾಸನೆ ಇಲ್ಲ, ಮಳೆಗಾಲದಲ್ಲೂ ಪ್ರಕ್ಷುಬ್ದ ಕಣಗಳು ಒಂದು ಲೀಟರ್‍ಗೆ ಮೂರು ಮಿಲಿಗ್ರಾಂಗಿಂತ ಕಡಿಮೆ. ನೀರು ಕ್ಷಾರವಾಗಿದೆ. ಇದರ ಕ್ಷಾರತೆ ೮.೪-೮.೬. ಅತ್ಯಂತ ಗಮನಾರ್ಹ ಅಂಶವೆಂದರೆ ಈ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್ ೫.೫ ರಿಂದ ೭.೪ ಮಿಲಿಗ್ರಾಂ/ಲೀಟರ್. ಇದು ವಿಶೇಷವಾಗಿ ಮೀನುಸಾಕಣೆಗೆ ಅತ್ಯಂತ ಪ್ರಶಸ್ತವಾದ ಅಂಶ. ನೀರಿನಲ್ಲಿ ನೈಟ್ರೇಟ್ ಪ್ರಮಾಣ ಅತಿ ಕಡಿಮೆ ಮತ್ತು ಅಮೋನಿಯ ಇಲ್ಲವೇ ಇಲ್ಲ. ತೇಲು ಸಸ್ಯಗಳಿದ್ದರೂ ಅವುಗಳ ಪ್ರಮಾಣ ಕಡಿಮೆ. ಹಾಗೆಯೇ ಕೆರೆಯಲ್ಲಿ ಮುಳುಗಿರುವ ಕಲ್ಲುಗಳ ಮೇಲೆ ಬೆಳೆಯುವ ಸಸ್ಯಗಳ ಪ್ರಮಾಣ ಹೆಚ್ಚು. ಜಲಚರಗಳಲ್ಲಿ ಮೃದ್ವಂಗಿಗಳು, ಕೀಟಗಳು, ಮೀನು ಮತ್ತು ಚಿಪ್ಪುಜೀವಿಗಳು ಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿವೆ. ಮೃಗಾಲ್, ಕಾಟ್ಲಾ ಮೀನುಗಳಿಗಿಂತ ರೋಹು ಮತ್ತು ಕಾರ್ಪ್ ಮೀನು ತಳಿಗಳನ್ನು ಇಲ್ಲಿ ಹೆಚ್ಚು ಬೆಳೆಸಿದ್ದಾರೆ. ರಾಜ್ಯದ ಮೀನುಗಾರಿಕೆ ಇಲಾಖೆಯ ಮೀನು ಉತ್ಪಾದನಾ ಫಾರ್ಮ್‍ಗಳಲ್ಲಿ ಇದೂ ಒಂದು. ಜಲಾನಯನ ಪ್ರದೇಶದಲ್ಲಿ ಕೃಷಿಗೆ ಬಳಸುತ್ತಿರುವ ಕೃಷಿ ಕೀಟನಾಶಕ ಮುಂದೆ ಈ ಕೆರೆಯನ್ನು ಮಲಿನಗೊಳಿಸಬಹುದೆಂಬ ಎಚ್ಚರಿಕೆಯನ್ನು ತಜ್ಞರು ಕೊಟ್ಟಿದ್ದಾರೆ. ಸ್ಥಳೀಯ ಮೀನುಗಳು ಈ ಕೆರೆಯಿಂದ ಕಣ್ಮರೆಯಾಗಿರುವ ಬಗ್ಗೆ ವರದಿಗಳಿವೆ.

ಒಂದು ಕೆರೆ ಅತ್ಯಂತ ಆರೋಗ್ಯಕರ ಪರಿಸರ ಹೊಂದಿದ್ದರೆ ಅದು ಹೇಗೆ ಒಂದು ಸಂಪನ್ಮೂಲವಾಗುತ್ತದೆ ಎಂಬುದಕ್ಕೆ ಸೂಳೆಕೆರೆ ಒಂದು ಜೀವಂತ ನಿದರ್ಶನ. ಇಲ್ಲಿ ಒಳನಾಡು ಮೀನುಗಾರಿಕೆ ಸಹಕಾರ ಸಂಘವಿದೆ. ಈ ಕೆರೆಯಿಂದ ವಾರ್ಷಿಕ ೩೫ ಲಕ್ಷ ಟನ್ನು ಮೀನು ಸಂಗ್ರಹವಾಗುತ್ತದೆ.

ಕೆರೆ ಪರಿಸರ

ನಗರಗಳ ಕೆರೆಗಳ ಪರಿಸರ

ಕೆರೆಗಳ ಅಸ್ತಿತ್ವಕ್ಕೆ ದೊಡ್ಡ ಕುತ್ತು ಬಂದಿರುವುದು ನಗರಗಳಲ್ಲೇ-ಅದೂ ಮಹಾನಗರಗಳಲ್ಲಿ. ನಗರಗಳು ಬೆಳವಣಿಗೆ ತೋರಿಸಿದಂತೆ ಅವು ಹಾಕುವ ಒತ್ತಡ ಅನೇಕ ಕ್ಷೇತ್ರಗಳ ಮೇಲೆ ನಿಚ್ಚಳವಾಗಿ ಕಂಡುಬರುತ್ತದೆ. ನಗರ ಬೆಳವಣಿಗೆಗೆ ಹಲವು ಆಯಾಮಗಳಿವೆ. ಗ್ರಾಮೀಣ ಭಾಗಗಳಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆ ದೊಡ್ಡದಾಗಿದೆ. ಕೃಷಿ ತೊರೆದು ನಗರವಾಸಿಗಳಾಗಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಬಹುಮುಖ್ಯವಾಗಿ ನೆಲ ಮತ್ತು ನೀರಿನ ಮೇಲೆ ಅತ್ಯಂತ ಹೆಚ್ಚು ಒತ್ತಡ ಬೀಳುತ್ತದೆ. ನಿವೇಶನಗಳ ಬೆಲೆ ಕೈಮೀರಿ ಹೋಗುತ್ತದೆ. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ಚೆನ್ನೈ ಎಲ್ಲ ಕಡೆಯಲ್ಲೂ ನಗರೀಕರಣ ಭರದಿಂದ ಸಾಗಿದೆ. ನೆಲಬಾಕ ಸಂಸ್ಕೃತಿಗೆ ಇದು ಇಂಬುಕೊಟ್ಟಿದೆ. ಕಾನೂನನ್ನು ಮೀರಿ ಸಾಗಿರುವ ಕೆರೆಗಳ ಒತ್ತುವರಿ, ಕೆರೆಯಂಗಳದಲ್ಲೂ ತಲೆ ಎತ್ತಿರುವ ಅನೇಕ ಕಟ್ಟಡಗಳು, ಜಲಾನಯನ ಪ್ರದೇಶ ಕಣ್ಮರೆಯಾಗಿರುವುದು ಇವೆಲ್ಲವೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ಹದಿನೈದು ವರ್ಷಗಳಲ್ಲಿ ಹೈದರಾಬಾದ್ ನಗರ ೩,೨೪೫ ಹೆಕ್ಟೇರಿನಷ್ಟು ಕೆರೆಗಳನ್ನು ಕಳೆದುಕೊಂಡಿದೆ. ಚೆನ್ನೈ ಸ್ಥಿತಿ ಇದಕ್ಕಿಂತಲೂ ಘೋರ. ಕಳೆದ ಶತಮಾನದಲ್ಲಿ ಅಲ್ಲಿ ೬೫೦ ಕೆರೆಗಳಿದ್ದವು, ಈಗ ಅವು ೩೦ಕ್ಕೆ ಇಳಿದಿವೆ. ೨೦೧೨ರಲ್ಲಿ ೧,೧೩೦ ಹೆಕ್ಟೇರಿನಿಂದ ೬೪೫ ಹೆಕ್ಟೇರಿಗೆ ಕುಗ್ಗಿಹೋಗಿವೆ. ಇದರ ನೇರ ಪರಿಣಾಮ ಆ ನಗರಕ್ಕೆ ತಟ್ಟಿದೆ. ಅಂತರ್ಜಲ ಮಟ್ಟ ಕೆಳಕ್ಕೆ ಇಳಿದಿದೆ. ಕಳೆದ ಡಿಸೆಂಬರ್‍ನಲ್ಲಿ ಪ್ರಳಯ ರೂಪವಾಗಿ ಕಾಡಿದ ಜಲಪ್ರವಾಹಕ್ಕೆ ಅಲ್ಲಿನ ಕೆರೆಗಳು ನಾಶವಾಗಿರುವುದೂ ಒಂದು ಕಾರಣ. ಏಕೆಂದರೆ ಹೆಚ್ಚುವರಿ ಮಳೆನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಕೆರೆಗಳಿಗಿತ್ತು. ಅಹಮದಾಬಾದಿನಲ್ಲಿ ೨೦೦೨ ರಲ್ಲಿ ೨೩೫ ಕೆರೆಗಳಿದ್ದವು. ಮುಂದಿನ ಹತ್ತು ವರ್ಷಗಳಲ್ಲಿ ಶೇ. ೬೦ ಭಾಗ ಕೆರೆಗಳು ಕಣ್ಮರೆಯಾದವು. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಕೆರೆಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ದೆಹಲಿಯ ಉದ್ಯಾನ ಮತ್ತು ತೋಟಗಳ ಅಭಿವೃದ್ಧಿ ಸಂಘ ವರದಿ ಮಾಡಿರುವಂತೆ ೬೧೧ ಕೆರೆಗಳ ಪೈಕಿ ೨೭೪ ಕೆರೆಗಳು ಬತ್ತಿಹೋಗಿವೆ. ೧೮೦ ಕೆರೆಗಳನ್ನು ಜೀರ್ಣೋದ್ಧಾರ ಮಾಡಲಾಗದ ಸ್ಥಿತಿ ಇದೆ.

ಕೆರೆಗಳನ್ನು ನುಂಗಿ ಬೆಳೆದಿರುವ ಮಹಾ ನಗರಗಳ ಪೈಕಿ ಬೆಂಗಳೂರು ಒಂದು. ೧೯೬೦ರ ದಶಕದಲ್ಲಿ ೨೮೦ ಕೆರೆಗಳಿದ್ದವು. ಇವುಗಳನ್ನು ಪರಸ್ಪರ ಸಂಪರ್ಕಿಸುವ ರಾಜ ಕಾಲುವೆಗಳಿದ್ದವು. ಕೆರೆ ತುಂಬಿದಾಗ ಕೋಡಿ ನೀರು ಹರಿದು ಮುಂದಿನ ಕೆರೆಯನ್ನು ತುಂಬುತ್ತಿತ್ತು. ನಗರದ ಉತ್ತರ ಭಾಗದ ಜಕ್ಕೂರು ಕೆರೆ, ಹೆಬ್ಬಾಳ ಕೆರೆ, ನಾಗವಾರ ಕೆರೆ ತುಂಬಿಬಂದಾಗ ಅವು ದಕ್ಷಿಣ ಭಾಗದ ಕಲ್ಕೆರೆ, ಮಾರಗೊಂಡನಹಳ್ಳಿ ಕೆರೆ, ವರ್ತೂರು, ಬೆಳ್ಳಂದೂರು ಕೆರೆಗಳನ್ನು ತುಂಬುತ್ತಿದ್ದವು. ಈ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಸದ್ಯದಲ್ಲಿ ೮೦ ಕೆರೆಗಳನ್ನು ನಗರ ಭಾಗದಲ್ಲಿ ಗುರುತಿಸಬಹುದು. ನೀರು ತುಂಬಿದ ಕೆರೆಗಳು ಬರಿ ೩೪. ಬೆಂಗಳೂರು ಕೆರೆಗಳ ಬಗ್ಗೆ ಸರ್ಕಾರ, ಕಾರ್ಪೋರೇಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದವು ಕಾಳಜಿ ವಹಿಸಿದರೂ ಅದು ಬಹು ತಡವಾಗಿತ್ತು. ಆ ಹೊತ್ತಿಗೆ ಎಷ್ಟೋ ಕೆರೆಗಳು ಕಣ್ಮರೆಯಾಗಿದ್ದವು. ‘ಲ್ಯಾಂಡ್ ಮಾಫಿಯಾ’ ಕೆರೆ ಒತ್ತುವರಿಯಲ್ಲಿ ಆಸಕ್ತಿ ತೋರಿ ನ್ಯಾಯಬಾಹಿರವಾಗಿ ಹಣವನ್ನು ಕೊಳ್ಳೆಹೊಡೆಯಿತು. ಬೆಂಗಳೂರಿನ ಎಷ್ಟೋ ಕೆರೆಗಳನ್ನು ನುಂಗಿಹಾಕಿ ಬಡಾವಣೆಗಳು ಬೆಳೆದಿವೆ. ಇದಕ್ಕೆ ೨೮ ಕೆರೆಗಳು ಬಲಿಯಾಗಿವೆ. ಇಂದಿನ ಗಾಂಧಿಬಜಾರು, ಬಸವನಗುಡಿ ಭಾಗದಲ್ಲಿ ಹಿಂದೆ ಕಾರಂಜಿ ಕೆರೆ ಇತ್ತು. ಅಕ್ಕಿತಿಮ್ಮನಹಳ್ಳಿಯ ಕೆರೆಯನ್ನು ಕಬಳಿಸಿ ವಿಲ್ಸನ್ ಗಾರ್ಡನ್ ಹುಟ್ಟಿತು. ತಾವರೆಕೆರೆ, ಭೈರಸಂದ್ರ ಕೆರೆಗಳನ್ನು ನುಂಗಿ ಜಯನಗರ ಬಡಾವಣೆ ಬೆಳೆಯಿತು. ಕೋಡಿಚಿಕ್ಕನಹಳ್ಳಿ ಕೆರೆ, ಅರಕೆರೆ, ಹುಳಿಮಾವು ಕೆರೆ, ರೂಪೇನ ಅಗ್ರಹಾರ ಕೆರೆಗಳನ್ನು ನುಂಗಿ ಬಿ.ಟಿ.ಎಂ. ಬಡಾವಣೆ ತಲೆಯೆತ್ತಿತು. ಉತ್ತರಹಳ್ಳಿ, ಯಲಚೇನಹಳ್ಳಿ, ಹಾಲದೇವನಹಳ್ಳಿ, ಬಿಕಾಸಿಪುರ ಕೆರೆಗಳನ್ನು ಕಬಳಿಸಿ, ಬನಶಂಕರಿ ಐದನೇ ಹಂತ ತಲೆ ಎತ್ತಿದೆ. ಆಲಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಗಳು ಜೆ.ಪಿ.ನಗರ ೯ನೇಹಂತಕ್ಕೆ ಬಲಿಯಾಗಿವೆ. ಪ್ರತಿಷ್ಠಿತ ಕೆಂಪೇಗೌಡ ಬಸ್ ನಿಲ್ದಾಣ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಈಗಿರುವ ಸಿಟಿ ಮಾರ್ಕೆಟ್‍ನಲ್ಲಿ ಸಿದ್ಧಿಕಟ್ಟೆ ಎಂಬ ಕೆರೆ ಇತ್ತು. ಸರ್ಕಾರ ಕಣ್ಣುಬಿಟ್ಟು ನೋಡಿದ್ದು ೧೯೮೫ರಲ್ಲಿ. ಸರ್ಕಾರದ ಆದೇಶದಂತೆ ಎನ್. ಲಕ್ಷ್ಮಣರಾವ್ ಅವರು ನೀಡಿದ ವರದಿಯಿಂದ. ಆ ಸಮಯದಲ್ಲಿ ನಗರದ ಸುತ್ತಮುತ್ತಲ ೧೦೮ ಕೆರೆಗಳಿಗೆ ಸಂಬಂಧಿಸಿದಂತೆ ೫೦೦ ಎಕರೆ ಜಾಗ ಒತ್ತುವರಿಯಾಗಿತ್ತು.

ಬೆಂಗಳೂರು ಕೆರೆಯ ನಿರ್ವಹಣೆಯಲ್ಲಂತೂ ಸದಾ ಗೊಂದಲವೇ ತುಂಬಿದೆ. ಆಡಳಿತಾತ್ಮಕವಾಗಿ ಬೆಂಗಳೂರಿನ ಕೆರೆಗಳು ಒಂದು ಸಂಸ್ಥೆಯ ಉಸ್ತುವಾರಿಯಲ್ಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ೧೨೩ ಕೆರೆಗಳನ್ನು, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ೬೦ ಕೆರೆಗಳನ್ನೂ, ಅರಣ್ಯ ಇಲಾಖೆ ೫ ಕೆರೆಗಳನ್ನೂ, ಸಣ್ಣ ನೀರಾವರಿ ಯೋಜನೆ ೧೮ ಕೆರೆಗಳನ್ನು, ಕೆರೆ ಅಭಿವೃದ್ಧಿ ಪ್ರಾಧಿಕಾರ ೪ ಕೆರೆಗಳನ್ನು ನಿರ್ವಹಿಸುವ ಹೊಣೆಯನ್ನು ಹೊತ್ತವು. ಆದರೆ ಈ ಸಂಸ್ಥೆಗಳ ನಡುವ ನಿಜವಾದ ಸಮನ್ವಯ ಇಲ್ಲದೆ ಕೆರೆ ಅಭಿವೃದ್ಧಿ ಬೇರೆ ಬೇರೆ ದಾರಿ ಹಿಡಿಯಿತು.

ಬೆಂಗಳೂರು ಕೆರೆಗಳಿಗೆ ಕುತ್ತು ತಂದಿರುವುದು ನಮ್ಮ ಒಳಚರಂಡಿ ವ್ಯವಸ್ಥೆ. ಕಲುಷಿತ ನೀರು, ಗೃಹತ್ಯಾಜ್ಯ, ಕಾರ್ಖಾನೆ ತ್ಯಾಜ್ಯ, ಇವೆಲ್ಲವೂ ಕೆರೆಗಳಿಗೇ ಹರಿಯುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಯಿತು. ಕೆರೆಗಳು ತುಂಬಿಬರಲು ಜಲಾನಯನದ ಭಾಗ ಸುರಕ್ಷಿತವಾಗಿರಬೇಕು. ಈ ಪ್ರದೇಶವೆಲ್ಲ ವಸತಿ ಕಟ್ಟಡಗಳಿಂದ ತುಂಬಿಹೋದ ಮೇಲೆ ಕೆರೆಗೆ ಹರಿದುಬರುವ ನೀರಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಇನ್ನು ಲಾಗಾಯ್ತಿನಿಂದ ತುಂಬುತ್ತಿದ್ದ ಹೂಳು ತೆಗೆಯಲು ಕೋಟ್ಯಂತರ ರೂಪಾಯಿ ಬೇಕಾಯಿತು. ಬೆಂಗಳೂರು ನಗರ ಪಾಲಿಕೆ ‘ಕೆರೆಸಿರಿ’ ಯೋಜನೆಯಲ್ಲಿ ಹಲವು ಕೆರೆಗಳ ಪುನಶ್ಚೇತನ ಮಾಡಿದರೂ (ಉದಾ: ಎಡೆಯೂರು ಕೆರೆ), ಆ ಭಾಗ್ಯ ಎಲ್ಲ ಕೆರೆಗಳಿಗೂ ಸಿಕ್ಕಲಿಲ್ಲ. ಹಲಸೂರು ಕೆರೆ ಈಗಲೂ ಮಿಲಿಟರಿ ಆಡಳಿತದಲ್ಲೇ ಇದೆ. ಅಲ್ಲಿ ಆಗಾಗ್ಗೆ ಸತ್ತ ಮೀನುಗಳೂ ರಾಶಿರಾಶಿ ಬೀಳುವುದು ಸರ್ವಸಾಮಾನ್ಯವಾಗಿದೆ. ಅಲ್ಲಿ ನೀರಿನಲ್ಲಿ ವಿಲೀನವಾದ ಆಕ್ಸಿಜನ್ ಪ್ರಮಾಣ ಕಡಿಮೆ. ಹೀಗಾಗಿ ಮತ್ತೆ ಮತ್ತೆ ಈ ಅವಘಡ ಸಂಭವಿಸುತ್ತಿದೆ. ಚರಂಡಿ ನೀರನ್ನು ಇಲ್ಲಿಗೆ ಬಿಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಹೆಬ್ಬಾಳ, ಮಡಿವಾಳ ಮತ್ತು ದೊಡ್ಡ ಬೊಮ್ಮಸಂದ್ರ ಕೆರೆಗಳ ಅಭಿವೃದ್ಧಿಗೆ ಇಂಡೋ ನಾರ್ವೇ ಎನ್ವಿರಾನ್‍ಮೆಂಟಲ್ ಪ್ರಾಜೆಕ್ಟ್ ನೆರವಿಗೆ ಬರಬೇಕಾಯಿತು. ವರ್ತೂರು ಕೆರೆ (೪೧೧.೨೧ ಎಕರೆ) ಕೆಲವು ವರ್ಷಗಳಿಂದ ಭಾರಿ ಸುದ್ಧಿ ಮಾಡುತ್ತಿದೆ. ಕೆರೆಯ ತುಂಬ ನೊರೆ ಕಾಣಿಸಿಕೊಳ್ಳುತ್ತಿದೆ. ಇದರ ಮೂಲ ಹುಡುಕುವುದು ಕಷ್ಟವೇನಲ್ಲ. ಇಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಬರುತ್ತಿದೆ. ಕಾರ್ಖಾನೆಗಳ ತ್ಯಾಜ್ಯವೂ ಸೇರುತ್ತಿದೆ. ಶುದ್ಧೀಕರಣದ ವ್ಯವಸ್ಥೆ ಸಾಲದು. ಹತ್ತಾರು ರಾಸಾಯನಿಕಗಳು ಇದರಲ್ಲಿ ವಿಲೀನವಾಗಿದೆ. ಮನೆಯಲ್ಲಿ ಬಳಸುವ ಡಿಟರ್ಜೆಂಟಗಳಿಂದಾಗಿ ನೊರೆ ಹೆಚ್ಚುತ್ತಿದೆ. ಫಾಸ್ಪೇಟ್ ಅಂಶ ಕೆರೆಗೆ ಸೇರುತ್ತಿದೆ. ಇದನ್ನೇ ಆಧರಿಸಿ ಭರ್ಜರಿಯಾಗಿ ಕಳೆ ಬೆಳೆಯುತ್ತಿದೆ. ಬೆಂಗಳೂರಿನ ಶೇ.೪೦ ಭಾಗದ ಕೊಳಚೆ ನೀರು ವರ್ತೂರು ಕೆರೆಗೆ ಹರಿಯುತ್ತಿದೆ. ಹಾಗೆಯೇ ಅಮಾನಿಕೆರೆಯ ಸ್ಥಿತಿಯೂ ಹೀನಾಯವಾಗಿದೆ. ಈ ಕೆರೆಗೆ ಅಧಿಕ ಪ್ರಮಾಣದ ಹೈಡ್ರೋ ಕಾರ್ಬನ್ ಸೇರಿರುವುದರಿಂದ ಆಗಾಗ ಬೆಂಕಿ ಕಾಣಿಸಿಕೊಳ್ಳುವ ಅಪರೂಪದ ಘಟನೆಯೂ ನಡೆಯುತ್ತದೆ. ಜೊಂಡು, ಅದನ್ನು ಆಶ್ರಯಿಸಿರುವ ಬ್ಯಾಕ್ಟೀರಿಯಗಳು ಬಿಡುವ ಅಮೋನಿಯ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಈ ನೀರನ್ನು ಯಾವುದಕ್ಕೂ ಬಳಸದ ಸ್ಥಿತಿ ಉಂಟಾಗಿದೆ.

ಹಿಂದೆ ಬೆಂಗಳೂರಿನ ಅನೇಕ ಕೆರೆಗಳು ವಿಗ್ರಹ ವಿಸರ್ಜನೆಯ ಜಾಗಗಳಾಗಿದ್ದವು. ವಿಗ್ರಹಗಳ ಪೇಂಟ್‍ನಲ್ಲಿದ್ದ ಸೀಸದ ಅಂಶವು ನೀರಿಗೆ ಸೇರುತ್ತಿತ್ತು. ಅದನ್ನು ನಿವಾರಿಸಲು ಕೆಲವು ಕೆರೆಗಳಲ್ಲಿ ಪ್ರತ್ಯೇಕ ಸಣ್ಣ ಗುಂಡಿಗಳನ್ನು ತೋಡಿ ವಿಗ್ರಹ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಲಾಲ್‍ಬಾಗ್ ಕೆರೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲಿ ಯಥೇಚ್ಛವಾಗಿ ವೃಕ್ಷಗಳಿರುವುದರಿಂದ ಅನೇಕ ಬಗೆಯ ಪಕ್ಷಿಗಳನ್ನು ಅಲ್ಲಿ ಕಾಣಬಹುದು. ಹೆಬ್ಬಾಳ ಕೆರೆ ೧೮೨ ಎಕರೆ ಇದ್ದದ್ದು ರೈಲ್ವೆ ಇಲಾಖೆ ೨೮ ಎಕರೆಯನ್ನು ಸ್ವಾಧೀನಮಾಡಿಕೊಂಡಿತು. ಈ ಕೆರೆಯ ಜೀರ್ಣೊದ್ಧಾರಕಕ್ಕಾಗಿ ೨೭೦ ಲಕ್ಷ ರೂಪಾಯಿಗಳನ್ನು ಮೀಸಲಾಗಿಟ್ಟಿತ್ತು. ಹೆಬ್ಬಾಳ ಕೆರೆಯ ವಿಶೇಷವೆಂದರೆ ಅದು ಹೆದ್ದಾರಿಯ ಬಳಿ ಇದ್ದರೂ, ಕೂಗಳತೆಯೆ ದೂರದಲ್ಲಿ ಪ್ಲೈಓವರ್ ಇದ್ದರೂ, ಕೆರೆ ಪಕ್ಷಿಗಳಿಗೆ ಆಶ್ರಯ ನೀಡಿದೆ. ಕೆರೆಗಳು ಅಂತರ್ಜಲ ಭಂಡಾರವನ್ನು ಹೆಚ್ಚಿಸುವುದು ಸಾಮಾನ್ಯರಿಗೂ ತಿಳಿದ ಸಂಗತಿ. ಕೆರೆಗಳು ಕಣ್ಮರೆಯಾಗುತ್ತಿದ್ದರೆ, ನಗರ ಸ್ಥಳಗಳೆಲ್ಲವೂ ಕಾಂಕ್ರೀಟ್‍ಮಯವಾದರೆ ಮಳೆನೀರು ಹಿಂಗುವುದು ಹೇಗೆ? ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ೨೦೦ ಕಿಲೋ ಮೀಟರ್ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿಲ್ಲ. ಇದೆಲ್ಲ ನಗರೀಕರಣದ ಪರಿಣಾಮ.

ಈಗ ಬೆಂಗಳೂರಿನ ಕೆರೆಗಳ ಉಸ್ತುವಾರಿ ನೋಡಿಕೊಳ್ಳಲು ಸರ್ಕಾರ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಹಾಗಾಗಿ ಹಿಂದೆ ಅರಣ್ಯ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೆರೆ ಪ್ರಾಧಿಕಾರ ನಿರ್ವಹಿಸುತ್ತಿದ್ದ ಕೆಲಸವನ್ನು ಒಂದು ಛತ್ರದಡಿ ತರಲಾಗಿದೆ. ಕೆರೆಗಳ ಸಂರಕ್ಷಣೆ ಎಂದರೆ ಅವುಗಳ ದುರಸ್ತಿ, ಏರಿಯ ಸುತ್ತ ಪರಿಸರವನ್ನು ವೃದ್ಧಿಸುವುದು, ಹೂಳು ತೆಗೆಯುವುದು, ಸಾಧ್ಯವಿದ್ದ ಕಡೆ ಮನೋರಂಜನೆಗೆ ಅನುಕೂಲ ಕಲ್ಪಿಸುವ ಹೊಣೆಯೂ ಇರುತ್ತದೆ. ಕೆರೆಗಳ ವಿಸ್ತೀರ್ಣದ ಬಗ್ಗೆ ಮತ್ತೆ ಸಮೀಕ್ಷೆ ಮಾಡಿ ಹೊಸ ಮಾಹಿತಿಯ ಮೇರೆಗೆ ಕೆರೆಗಳ ಅಭಿವೃದ್ಧಿ ಮಾಡುವುದು ಈ ಸಂಸ್ಥೆಯ ಗುರಿ.

ಬೆಳ್ಳಂದೂರು ಮತ್ತು ಅದರ ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಎರಡು ಕಟ್ಟಡ ನಿರ್ಮಾಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳನ್ನು ಕಟ್ಟಿವೆ. ಇದನ್ನು ಗಮನಿಸಿದ ರಾಷ್ಟ್ರೀಯ ಹಸುರು ನ್ಯಾಯಾಧೀಕರಣ (ಎನ್.ಜಿ.ಟಿ.) ಆ ಎರಡೂ ನಿರ್ಮಾಣ ಸಂಸ್ಥೆಗಳಿಗೆ ತಲ್ ೧೧೭ ಕೋಟಿ ರೂಪಾಯಿ ಮತ್ತು ೧೩.೫ ಕೋಟಿ ರೂಪಾಯಿ ದಂಡವಿದಿಸಿದೆ. ಒತ್ತುವರಿಮಾಡಿದ ೩.೭ ಎಕರೆ ಕರೆ ಜಾಗವನ್ನು ಹಿಂತಿರುಗಿಸಲು ಸೂಚಿಸಿದೆ. ರಾಜಾಕಾಲುವೆಯ ೫೦ ಮೀಟರ್ ಪಾಸಲೆಯಲ್ಲಿ ಯಾವುದೇ ನಿರ್ಮಾಣ ಮಾಡಬಾರದೆಂದು ಕಟ್ಟಳೆ ಮಾಡಿದೆ. ಇಂಥ ದಿಟ್ಟ ಕ್ರಮದಿಂದ ಮಾತ್ರ ಬೆಂಗಳೂರಿನ ಕೆರೆಗಳನ್ನು ಉಳಿಸಿಕೊಳ್ಳಬಹುದೇನೋ.

ಕೆರೆ ಪರಿಸರ

——————————————————————————————————————————————-

Categories
ಅಂಕಣಗಳು ಪರಿಸರ ವಿಜ್ಞಾನ

ವನ್ಯಜೀವಿ ಪ್ರೇಮ – ನಮ್ಮ ನಿಮ್ಮಲ್ಲಿ!?

“ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?” – ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ – ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.

ಸಾಮಾನ್ಯ ಜನರೂ ಅಷ್ಟೆ: ನಗರ ಪ್ರದೇಶಗಳಲ್ಲಿರುವ ಜನರಿಗೆ ಕಾಡು, ಕಾಡುಪ್ರಾಣಿಗಳೆಂದರೆ ಬೆರಗು ಹುಟ್ಟಿಸುವ ಸಂಗತಿಗಳು; ದಿನನಿತ್ಯದ ಯಾಂತ್ರಿಕ ಬದುಕಿನಿಂದ ಬೇಸತ್ತಾಗ ಎಂದೋ ಒಂದು ದಿನ ಮನತಣಿಸುವ ರಂಜನೆಯ ತಾಣಗಳು.

ಇನ್ನು ಕಾಡಿನ ಸುತ್ತಮುತ್ತ ಇರುವ ಹಳ್ಳಿಗಳ ಜನರಿಗೆ ಕಾಡು – ಅವಶ್ಯಕ ವಸ್ತುಗಳನ್ನು ಉಚಿತವಾಗಿ ಒದಗಿಸುವ ಉಗ್ರಾಣ ಮಾತ್ರ. ಕಾಡುಪ್ರಾಣಿಗಳಿರುವುದೂ ತಮಗಾಗಿ ಅಥವಾ ತಾವು ಬಿಟ್ಟುಕೊಟ್ಟಿರುವುದರಿಂದಲೇ ಎಂಬ ಔದಾರ್ಯ ಬೇರೆ. ತಾವು ಕಾಡಿಗೆ ನುಗ್ಗುವ ಬಗ್ಗೆ ಯಾರೂ ಏನೂ ಕೇಳುವಹಾಗಿಲ್ಲ, ತಮ್ಮಿಂದಾಗಿಯೇ ಕಾಡುಪ್ರಾಣಿಗಳ ವಸತಿಪ್ರದೇಶ ದಿನದಿನಕ್ಕೆ ಕುಗ್ಗತೊಡಗಿರುವುದರ ಬಗೆಗೆ ಚಿಂತೆಯಿಲ್ಲ. ಆದರೆ ಕಾಡುಪ್ರಾಣಿಗಳು ಮಾತ್ರ ಅಪ್ಪಿತಪ್ಪಿಯೂ ನಾಡಿಗೆ ಬರಕೂಡದು.
ಕಾಡು ಮಾನವನ ಅತಿಕ್ರಮಣಕ್ಕಾಗಿಯೇ ಇರುವುದು; ನಾಡಿಗೆ ವನ್ಯಪ್ರಾಣಿ ಬರುವುದು ಮರಣದಂಡನೆಗೆ ಅರ್ಹವಾದ ಅಪರಾಧ – ಎಂದು ಪ್ರಾಣಿಗಳಲ್ಲೇ ಸರ್ವಶ್ರೇಷ್ಠನಾದ ಮಾನವ ನಿರ್ಣಯಿಸಿಕೊಂಡುಬಿಟ್ಟಿದ್ದಾನೆ. ಹೀಗಾಗಿ ಕಾಡಿನ ಪ್ರಾಣಿಗಳು ಮನುಷ್ಯನ ದೃಷ್ಟಿಯಲ್ಲಿ ಉಪದ್ರವಕಾರಿಗಳಾಗಿಬಿಟ್ಟಿವೆ.

ಕೇವಲ ಖುಷಿಗಾಗಿಯೋ, ಮಾಂಸಕ್ಕಾಗಿಯೋ, ಚರ್ಮ-ದಂತ-ಹಾಳುಮೂಳುಗಳಿಗಾಗಿಯೋ ತಮ್ಮವರು ಬೇಟೆಗೆ ತೊಡಗುವುದರ ಬಗೆಗೆ ಅತಿನಿರ್ಲಿಪ್ತವಾಗಿರುವ ಜನತೆಯ ಈ ಇಬ್ಬಂದಿತನ, ಮನುಕುಲದ ಬುಡಕ್ಕೇ ಬೀಳಲಿರುವ ಕೊಡಲಿಪೆಟ್ಟೆಂಬುದನ್ನು ಎಷ್ಟು ಜನ ಅರಿತಿದ್ದಾರೋ ತಿಳಿಯದು.

ಕಾಡಿನ ಒಂದೊಂದು ವೃಕ್ಷಕ್ಕೆ ಬೀಳುತ್ತಿರುವ ಕೊಡಲಿಪೆಟ್ಟಿನೊಡನೆ ವನ್ಯಜೀವಿಗಳ ಉಸಿರೂ ಕುಗ್ಗತೊಡಗಿದೆ. ಬರಗಾಲ, ಭೂಕುಸಿತ, ಪ್ರವಾಹ, ಮಣ್ಣಿನ ಸವಕಳಿ, ಅಣೆಕಟ್ಟೆಗಳಲ್ಲಿ ತುಂಬಿದ ಹೂಳು – ಹೀಗೆ ಹಲವು ಹತ್ತು ರೂಪಗಳಲ್ಲಿ ಪ್ರಕೃತಿ ತಾನು ಸೃಷ್ಟಿಸಿರುವ ಅತಿಬುದ್ಧಿವಂತ ಪ್ರಾಣಿಯ ಅವಿವೇಕಕ್ಕೆ ಸಾಕ್ಷಿಗಳನ್ನು ಮುಂದಿಡುತ್ತಿದೆ.

ಸಹನೆ, ಮಾನವೀಯತೆ, ದಯೆಗಳು ಒತ್ತಟ್ಟಿಗಿರಲಿ. ತಮ್ಮ ಜೀವನಕ್ಕೆ ಮೂಲಾಧಾರವಾದ ಪ್ರಾಣವಾಯು, ಜಲ, ಆಹಾರ, ಔಷಧಗಳ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವ ವನಸಂಪತ್ತು ಶಾಶ್ವತ ಸಂಪನ್ಮೂಲವಲ್ಲ; ಈ ಸಂಪತ್ತು ಉಳಿಯಬೇಕಾದರೆ ಕಾಡುಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಸತ್ಯದ ಅರಿವಿನಿಂದಾದರೂ ವನ-ವನ್ಯಜೀವಿಗಳ ಬಗೆಗೆ ಒಂದಿಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ.

ನಮ್ಮ ಪೂರ್ವಿಕರು ಹಾವು, ಗರುಡ, ನವಿಲು, ಹುಲಿ, ಆನೆ ಮೊದಲಾಗಿ ಸಕಲ ವನ್ಯಜೀವಿಗಳಿಗೂ ದೈವಿಕ ನೆಲೆಯಲ್ಲಿ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದರು; ನಾಗರಬನ, ದೇವರಕಾಡುಗಳಂಥ ನೆಲೆಗಳನ್ನು ರೂಪಿಸಿದ್ದರು. ಮಾನವೀಯತೆ ಮರೆತರೆ ಹೋಗಲಿ, ದೈವಭೀತಿಯಿಂದಾದರೂ ಕಾಡುಪ್ರಾಣಿಗಳನ್ನು ಉಳಿಸಲೆಂಬ ಆಶಯ ಅವರದ್ದಾಗಿತ್ತು. ಆದರೆ ಈಗ, ಮಾನವನ ನೈತಿಕ ನೆಲೆಯೇ ಕುಸಿಯುತ್ತಿರುವಾಗ ಧಾರ್ಮಿಕ ಕಟ್ಟುಪಾಡನ್ನು ಲೆಕ್ಕಿಸುವುದೆಲ್ಲಿ ಬಂತು?

ಕೃಷ್ಣಮೃಗಗಳ (ಬ್ಲಾಕ್‌ಬಕ್) ಬಗೆಗೆ ಆತ್ಮೀಯತೆ ತೋರುವ ರಾಜಸ್ಥಾನದ ಬಿಷ್ಣೋಯಿ ಜನಾಂಗದವರಾಗಲಿ, ಹೆಜ್ಜಾರ್ಲೆಗಳ (ಪೆಲಿಕಾನ್) ಬಗೆಗೆ ಅಪಾರ ಮಮತೆಯುಳ್ಳ ಕೊಕ್ಕರೆಬೆಳ್ಳೂರಿನ ಜನತೆಯಾಗಲಿ ಇಂದು ಎಲ್ಲರ ಆದರ್ಶವಾಗಬೇಕಿದೆ. ವನ್ಯಜೀವಿಗಳ ಬಗೆಗೆ ನಮ್ಮನಿಮ್ಮಲ್ಲಿ ಪ್ರೀತಿಮೂಡದ ಹೊರತು ವನಸಂಪತ್ತಿನ ರಕ್ಷಣೆ ಅಸಾಧ್ಯ.

ನಮ್ಮ ಸ್ವಾರ್ಥಲಾಲಸೆಗಳನ್ನು ಬದಿಗಿರಿಸಿ ಅರಣ್ಯದ ಪರವಾಗಿ, ಕಾಡುಪ್ರಾಣಿಗಳ ಪರವಾಗಿ ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದರಿಂದ ನಾವು ಅವುಗಳಿಗೇನೋ ಉಪಕಾರ ಮಾಡುತ್ತಿರುವೆವೆಂದು ಭ್ರಮಿಸಬೇಕಾಗಿಲ್ಲ. ಆದರೆ ಇದು, ನಮ್ಮ ಪೀಳಿಗೆಯ ಬಗೆಗೆ ಪೂರ್ವಿಕರು ತೋರುತ್ತಿದ್ದ ಕಾಳಜಿಯನ್ನೇ ಮುಂದುವರೆಸುತ್ತಿರುವುದರ ಶುಭಸೂಚನೆ ಎಂದು ಧಾರಾಳವಾಗಿ ಹೇಳಬಹುದು.

ಪ್ರಸಿದ್ಧ ಪರಿಸರಶಾಸ್ತ್ರಜ್ಞ ಡಾ| ಎಚ್. ಆರ್. ಕೃಷ್ಣಮೂರ್ತಿಯವರು ಹೇಳುವಂತೆ “ಈ ಲೋಕದಿಂದ ಮನುಷ್ಯವರ್ಗ ಅಳಿದುಹೋದರೆ ವನ್ಯಜೀವಿಗಳು ತಮ್ಮ ಪಾಡಿಗೆ ತಾವು ಆರಾಮವಾಗಿ ಬದುಕಿಯಾವು; ವನ್ಯಜೀವಿಗಳೇನಾದರೂ ಈ ಪ್ರಪಂಚದಿಂದ ಕಾಣೆಯಾದರೆ ಮಾತ್ರ ಅವುಗಳ ಹಿಂದೆಯೇ ಮನುಷ್ಯನಿಗೂ ವಿನಾಶ ಖಂಡಿತ.” ಈ ಸತ್ಯವನ್ನು ಮನಗಂಡು ವನ್ಯಪ್ರಾಣಿಗಳನ್ನೂ ಅವುಗಳ ನೆಲೆಯಾದ ಅರಣ್ಯಗಳನ್ನೂ ಸಂರಕ್ಷಿಸಬೇಕಾದುದು ನಮ್ಮ ತಕ್ಷಣದ ಕರ್ತವ್ಯ. ಅರಣ್ಯದ ಬಗೆಗಿನ ನಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಳ್ಳುವುದೇ ಈ ನಿಟ್ಟಿನಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ.

Categories
ಪರಿಸರ ಪ್ರಾಣಿ ಪ್ರಪಂಚ

ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ

ಕೃತಿ:ಹಿರಿಯಣ್ಣ ಕವಿಯ ಹಯರತ್ನ ಶ್ರೇಣಿ

ಲೇಖಕರು: ಶ್ರೀ. ಹೆಚ್. ಶೇಷಯ್ಯಂಗಾರ್

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ನಿಸರ್ಗ ಪರಿಸರ ವಿಶ್ಲೇಷಣೆ ಮತ್ತು ಸಂಶೋಧನೆ

ಮಣ್ಣು ಪರೀಕ್ಷೆ

ಕೃತಿ:ಮಣ್ಣು ಪರೀಕ್ಷೆ:
ಲೇಖಕರು: ಡಾ. ಅಶೋಕ ಎಸ್. ಆಲೂರ, ಡಾ. ಜಿ.ಎಸ್. ದಾಸೋಗ ಮತ್ತು ಡಾ. ಶಿವಾನಂದ ಬಿ. ಹೊಸಮನಿ
ಕೃತಿಯನ್ನು ಓದಿ

Categories
ಕೃಷಿ ಕೃಷಿ ಶಿಕ್ಷಣ ಕೃಷಿ ಸಂರಕ್ಷಣೆ ನಿಸರ್ಗ ಪರಿಸರ ವಿಶ್ಲೇಷಣೆ ಮತ್ತು ಸಂಶೋಧನೆ

ಸಾವಯವ ಕೃಷಿ ಒಂದು ವಿಶ್ಲೇಷಣೆ

ಕೃತಿ: ಸಾವಯವ ಕೃಷಿ ಒಂದು ವಿಶ್ಲೇಷಣೆ

ಲೇಖಕರು: ಶ್ರೀ ತಿಪ್ಪೇಸ್ವಾಮಿ

ಕೃತಿಯನ್ನು ಓದಿ     |     Download

Categories
ಕೃಷಿ ಕೃಷಿ ಶಿಕ್ಷಣ ನಿಸರ್ಗ ಪರಿಸರ

ಮಣ್ಣು ಮತ್ತು ಮಾನವ

ಕೃತಿ:ಮಣ್ಣು ಮತ್ತು ಮಾನವ
ಲೇಖಕರು ಡಾ. ಟಿ.ಎಸ್. ಚನ್ನೇಶ್
ಕೃತಿಯನ್ನು ಓದಿ

Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ನಿಸರ್ಗ ಬುಡಕಟ್ಟುಗಳು ಸಂಸ್ಕೃತಿ-ಪರಂಪರೆ

ಕೊಡಗು ವಿವರಣೆ

ಕೃತಿ-ಕೊಡಗು ವಿವರಣೆ
ಕುಲಪತಿ-ಬಿ.ಎ. ವಿವೇಕ ರೈ
ಸರಣಿ- ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಜನಪದ ಜನಪದ ಜನಪದ ವಿಜ್ಞಾನ ನಿಸರ್ಗ ಪರಿಸರ ವಿಜ್ಞಾನ - ಗಣಿತ ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ

ಹಂಪಿ ಜೀವಜಾಲ ಜಾನಪದ

ಕೃತಿ:ಹಂಪಿ ಜೀವಜಾಲ ಜಾನಪದ

ಲೇಖಕರು: ಮೊಗಳ್ಳಿ ಗಣೇಶ್

ಕೃತಿಯನ್ನು ಓದಿ     |     Download

Categories
ಇತಿಹಾಸ ಕರ್ನಾಟಕ ಇತಿಹಾಸ ಕೃಷಿ ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು ಜನಪದ ಸಾಹಿತ್ಯ ನಿಸರ್ಗ ಪರಿಸರ ಸಾಹಿತ್ಯ

ಕಾವೇರಿ ಜಾನಪದ: ಮರೆಯಲಾಗದ ಮನಸ್ಸುಗಳೊಂದಿಗೆ

ಕೃತಿ-ಕಾವೇರಿ ಜಾನಪದ
ಲೇಖಕರು-ಡಾ. ಹೆಬ್ಬಾಲೆ ಕೆ. ನಾಗೇಶ್
ಕನ್ನಡ ವಿಶ್ವವಿದ್ಯಾಲಯ
ಕೃತಿಯನ್ನು ಓದಿ

Categories
ಜೀವಶಾಸ್ತ್ರ (ಬಯಾಲಜಿ) ಪಕ್ಷಿ ಪ್ರಪಂಚ ಪರಿಸರ ಪ್ರಾಣಿ ಪ್ರಪಂಚ ಮಕ್ಕಳ ವಿಜ್ಞಾನ ವಿಜ್ಞಾನ - ಗಣಿತ

ಪ್ರಾಣಿ – ಪಕ್ಷಿ ಸಂಪುಟ

ಕೃತಿ-ಪ್ರಾಣಿ–ಪಕ್ಷಿ ಸಂಪುಟ:
ಲೇಖಕರು-ಡಾ. ಹಾ. ಬ. ದೇವರಾಜ ಸರ್ಕಾರ್, ಡಾ. ಎನ್.ಎ. ಮಧ್ಯಸ್ಥ & ಡಾ. ಎಚ್. ಎಚ್. ಷಣ್ಮುಖಮ್ಮ
ಕೃತಿಯನ್ನು ಓದಿ

Categories
ನಿಸರ್ಗ ಪರಿಸರ ವಿಶ್ಲೇಷಣೆ ಮತ್ತು ಸಂಶೋಧನೆ ಸಾಹಿತ್ಯ

ಸಸ್ಯ ಜಾನಪದ

ಕೃತಿ -ಸಸ್ಯ ಜಾನಪದ

ಸರಣಿ-ನಿಸರ್ಗ, ಪರಿಸರ, ವಿಶ್ಲೇಷಣೆ ಮತ್ತು ಸಂಶೋಧನೆ, ಸಾಹಿತ್ಯ

ಕೃತಿಯನ್ನು ಓದಿ     |     Download

Categories
ನಗರಾಭಿವೃದ್ಧಿ ಪರಿಸರ ವಿಜ್ಞಾನ

ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ

ಕೃತಿ-ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ
ಸರಣಿ-ನಗರಾಭಿವೃದ್ಧಿ, ಪರಿಸರ, ವಿಜ್ಞಾನ
ಕೃತಿಯನ್ನು ಓದಿ

Categories
ಅಂಕಣಗಳು ಜಲಕೊಯ್ಲು ನಾ ಕಾರಂತ ಪೆರಾಜೆ ಅಂಕಣ

ಬೆವರಿನ ಅಭಿಷೇಕಕೆ ಒಲಿದ ಭಾಗೀರಥಿ

ಕೃತಿ : ಜಲಕೊಯ್ಲು, ಪರಿಸರ ಅವರ ಲೇಖನಗಳು
ಲೇಖಕರು : ಜಲಕೊಯ್ಲು, ಪರಿಸರ
ಕೃತಿಯನ್ನು ಓದಿ

Categories
ಅಡ್ಡೂರು ಕೃಷ್ಣರಾವ್ ಜಲಕೊಯ್ಲು ಪರಿಸರ

ಅಂಕಣಗಳು – ಅಡ್ಡೂರು ಕೃಷ್ಣರಾವ್

ಕೃತಿ: ಅಂಕಣಗಳು – ಅಡ್ಡೂರು ಕೃಷ್ಣರಾವ್

ಲೇಖಕರು:ಅಡ್ಡೂರು ಕೃಷ್ಣರಾವ್

ಕೃತಿಯನ್ನು ಓದಿ     |     Download

Categories
ಪರಿಸರ

ಮರ ಏರುವ ವಿಜ್ಞಾನ

ಅಕ್ಟೊಬರ್ 17 ರಂದು ನಮ್ಮ ತಲ­ಕಾವೇರಿಯಲ್ಲಿ ತೀರ್ಥೋದ್ಭವ ಆಗುತ್ತಿ­ದ್ದಾಗ, ಅತ್ತ ಮಾಲ್ಡೀವ್ಸ್ ಎಂಬ ದ್ವೀಪ­ರಾಷ್ಟ್ರದ ಹನ್ನೆರಡು ಸಂಸದರು ಸಮುದ್ರ ತಳದಲ್ಲಿ ಕೂತು ಸಂಪುಟ ಸಭೆ ನಡೆಸಿದರು. ಮೈತುಂಬ ರಬ್ಬರ್ ಉಡುಗೆ ಧರಿಸಿ, ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಬಿಗಿದು, ಕಾಲಿಗೆ ಜಾಲಪಾದರಕ್ಷೆ ಸಿಕ್ಕಿಸಿಕೊಂಡು, ನೀರೊಳಕ್ಕೆ ಮುಳುಗಿ ಕೈಸನ್ನೆಗಳ ಮೂಲಕ ಹನ್ನೆರಡು ನಿಮಿಷಗಳ ಸಾಂಕೇತಿಕ ಸಭೆ ನಡೆಸಿ ಮೇಲೆದ್ದು ಬಂದರು. ‘ಭೂಮಿಯ ತಾಪಮಾನ ಹೀಗೆಯೇ ಏರುತ್ತಿದ್ದರೆ ನಮ್ಮ ಇಡೀ ದೇಶ ಮುಳುಗಿ ಹೋಗುತ್ತದೆ; ನಮ್ಮನ್ನು ನಡುನೀರಲ್ಲಿ ಕೈಬಿಡಬೇಡಿ’ ಎಂಬ ಆರ್ತ ಸಂದೇಶವನ್ನು ಜಗತ್ತಿಗೆ ಬಿತ್ತರಿಸಿದರು.
ಜನಪ್ರತಿನಿಧಿಗಳೆಂದರೆ ತಮ್ಮ ಹಿತಕ್ಕಾಗಿ ದೇಶವನ್ನೇ ಮುಳುಗಿಸಲೂ ಹಿಂದೆಮುಂದೆ ನೋಡು­ವುದಿಲ್ಲ ಎಂಬ ಭಾವನೆಯನ್ನು ತೊಡೆದು ಹಾಕುವಂತೆ ಈ ಪುಟ್ಟ ರಾಷ್ಟ್ರದ ಸಂಸ­ದರು ಮೈಚಳಿ ಬಿಟ್ಟು ನೀರಿಗೆ ಧುಮುಕಿದ್ದು ವಿಶೇಷ­ವೇನೊ ಹೌದು. ಆದರೆ ಅದು ಏಕಮೇವಾದ್ವಿತೀಯವೇನೂ ಅಲ್ಲ. ಇಂಥ­ದೊಂದು ಸಾಹಸ ಹಿಂದೆಯೂ ನಡೆದಿತ್ತು.
ಏಳು ವರ್ಷಗಳ ಹಿಂದೆ ಅಮೆರಿಕದ ವಾಷಿಂಗ್ಟನ್ ರಾಜ್ಯದ 12 ಶಾಸಕರು ಒಟ್ಟಾಗಿ ಒಂದೇ ಮರವನ್ನು ಏರಿದ್ದರು. ದಟ್ಟ ಮಳೆ­ಕಾಡಿನಲ್ಲಿ 60 ಅಡಿ ಎತ್ತರದ ಅಟ್ಟಣಿಗೆ ನಿರ್ಮಿಸಿ, ಹಗ್ಗ ಮತ್ತು ರಾಟೆಯ ಮೂಲಕ ಒಬ್ಬೊ­ಬ್ಬರನ್ನಾಗಿ ಮೇಲಕ್ಕೆಳೆದು ಕೂರಿಸ­ಲಾಗಿತ್ತು. ಅಟ್ಟಣಿಗೆಯ ಮೇಲೆ ಅವರೆಲ್ಲರ ಒಂದು ಪುಟ್ಟ ಸಮ್ಮೇಳನವನ್ನು ಏರ್ಪ­ಡಿ­ಸಲಾಗಿತ್ತು. ಜತೆಗಿದ್ದ ವೃಕ್ಷವಿಜ್ಞಾನಿಗಳು ಈ ಶಾಸಕರಿಗೆ ಅಲ್ಲೇ ಅರಣ್ಯ ಜೀವಜಾಲದ ಪಾಠ ಹೇಳಿದರು. ಮಳೆಕಾಡುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಹೇಳಿದರು. ಬರಲಿರುವ ಬಿಸಿ ಪ್ರಳಯದ ಸಂದರ್ಭದಲ್ಲಿ ಈ ವೃಕ್ಷಗಳು ಹೇಗೆ ಋತುಮಾನ ರಕ್ಷಣೆ ಹಾಗೂ ಜೀವ­ಸಂರಕ್ಷಣೆಯ ಅಂತಿಮ ಆಸರೆ ಆಗಬಹುದು ಎಂದು ವಿವರಿಸಿದರು.

ಮರಗಳ ಮಹತ್ವವನ್ನು ಸಾರಲೆಂದು ಮುಂದಿನವಾರ ವಿಶಿಷ್ಟ ‘ಕ್ಯಾನೊಪಿ ಸಮ್ಮೇಳನ’ ಬೆಂಗಳೂರಿನಲ್ಲಿ ನಡೆಯಲಿದೆ. ನಾಡಿನ ಇಕಾಲಜಿ ಮತ್ತು ಜೀವಸಂಪತ್ತಿನ ಅಧ್ಯಯನ ನಡೆಸುತ್ತಿರುವ ‘ಏಟ್ರೀ’ ಸಂಸ್ಥೆಯ ಆಶ್ರಯದಲ್ಲಿ ಏಷ್ಯದಲ್ಲೇ ಮೊದಲ ಬಾರಿಗೆ ಏರ್ಪಾಟಾಗಿರುವ ಈ ಅಂತರರಾಷ್ಟ್ರೀಯ ಮೇಳಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ವೃಕ್ಷತಜ್ಞರು ಬರತೊಡಗಿದ್ದಾರೆ. ಮರ ಏರುವಲ್ಲಿ ನಿಷ್ಣಾತರೆನಿಸಿದ ಇಬ್ಬರು ಹಿರಿಯ ಮಹಿಳಾ ವಿಜ್ಞಾನಿಗಳೂ ಬರುತ್ತಿದ್ದಾರೆ.
ಮರಗಳ ಮೇಲ್ಛಾವಣಿಯ ಜಗತ್ತು ಈಚಿನವರೆಗೂ ವಿಜ್ಞಾನಕ್ಕೆ ಅಪರಿಚಿತವಾಗಿಯೇ ಉಳಿದಿತ್ತು. ಇದಕ್ಕೊಂದು ವಿಲಕ್ಷಣ ಕಾರ­ಣವಿದೆ: ವಾನರನೆಂಬ ಪ್ರಾಣಿ ಮರದಿಂದ ಇಳಿದ ನಂತರವೇ ಮನುಷ್ಯನಾದ ತಾನೆ? ಕಾಡಿನಿಂದ ದೂರ ಹೋದಷ್ಟೂ ಮನುಷ್ಯ ‘ನಾಗರಿಕ’ ಎನ್ನಿಸಿಕೊಳ್ಳುತ್ತಾನೆ. ಈಗಲೂ ಮರ ಏರುವ ಸಾಮರ್ಥ್ಯ ಇರುವುದು ಮಣ್ಣಿನ ಮಕ್ಕಳಿಗೆ ಮಾತ್ರ. ಯಾವುದೇ ಹಳ್ಳಿಯ ಹೈದ ಪ್ಯಾಂಟ್ ಏರಿಸಿದ ಎಂದರೆ ಮರ ಏರುವುದನ್ನು ಮರೆತ ಎಂತಲೇ ಅರ್ಥ.
ಕಾಲೇಜು ಮೆಟ್ಟಿಲು ಹತ್ತಿ­ದ­ರಂತೂ ಮುಗಿಯಿತು. ಹೀಗಿರುವಾಗ ವಿಜ್ಞಾನಿ­ಗಳು ಮರ ಏರುವುದುಂಟೆ? ಅವರು ಯಂತ್ರಗಳ ಮೂಲಕ ಗಗನಚುಂಬಿ ಕಟ್ಟಡಗಳನ್ನು ಏರ­ಬಹುದು; ಅಥವಾ ಆಳದ ಗಣಿಗಳಲ್ಲಿ ಇಳಿ­ಯ­ಬಹುದು. ಗಗನ ನೌಕೆ ಏರಬಹುದು; ಸಬ್‌ಮರೀನ್‌ನಲ್ಲಿ ಕೂತು ಸಾಗರದ ತಳವನ್ನು ತಡಕಾಡಬಹುದು. ಆದರೆ ಮರಗಳನ್ನು ಏರಬಲ್ಲ ಯಂತ್ರ ಎಲ್ಲಿದೆ? ಯಂತ್ರವಿದ್ದರೂ ಮರ ಏರಲು ಬೇಕಾದ ಎಂಟೆದೆ ಎಲ್ಲಿದೆ?
ಮರ ಏರಲು ನಿಜಕ್ಕೂ ಎಂಟೆದೆ ಬೇಕು. ಗುರುತ್ವದ ವಿರುದ್ಧ ಏರಿ ಸಾಗುವ ಸ್ನಾಯುಬಲ ಬೇಕು. ಕೆಳಗಿನ ಆಳವನ್ನು ನೋಡಿ ತಲೆ ತಿರುಗ­ಬಾರದು. ಕೊಂಬೆ ತೊನೆದರೆ ಕೈಸಡಿಲಿಸ­ಬಾರದು. ಅಲ್ಲಿನ ಪಾಚಿ, ಅಣಬೆ, ತುರಿಕೆ ಎಬ್ಬಿಸುವ ಲೋಳೆಪೊರೆಗಳ ವಿರೋಧಗಳನ್ನೆಲ್ಲ ಮೀರಿ ಏರುವ ಛಾತಿ ಬೇಕು. ಇಷ್ಟಲ್ಲದೆ ಅಲ್ಲಿ ವಾಸಿಸುವ ಕಣಜ, ಇರುವೆ, ಸಹಸ್ರಪದಿ, ಜೇನು, ಹಾವುಚೇಳು ಅಥವಾ ಪಕ್ಷಿಗಳು ದಾಳಿ ನಡೆಸಿದರೆ ಎದುರಿಸುವ ತಾಕತ್ತು ಇರಬೇಕು. ಇಷ್ಟಕ್ಕೂ ಯಾಕೆ ಮರ ಏರಬೇಕು? ಬೆಲ್ಲ ಸಕ್ಕರೆಗಳಿಂದ ವಂಚಿತರಾದ ಕಾಡು ಜನರು ಜೇನಿಗಾಗಿ ಮರ ಏರುತ್ತಾರೆ. ನಾಡಿನ ಜನರಿಗೆ ಛಾವಣಿ ವೃಕ್ಷಗಳಿಂದ ಯಾವ ಲಾಭವಿದೆ?
ಯಾವ ಲಾಭ ಇಲ್ಲದೆಯೂ ಶಿಲಾರೋಹಣ, ಅಲೆಗಳ ಮೇಲೆ ಸರ್ಫಿಂಗ್, ವಿಮಾನಗಳಿಂದ ಧುಮುಕಾಟ, ಭೋರ್ಗರೆವ ನದಿ ಕೊರಕಲಿನಲ್ಲಿ ಕ್ಯಾನೋಯಿಂಗ್, ಆಳ ಕಮರಿಗೆ ಬಂಗೀ ಜಂಪಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೆ ಗೌರವ, ಮಾನ್ಯತೆ ಪ್ರಾಪ್ತಿಯಾದಾಗ ಮೂವತ್ತು ವರ್ಷಗಳ ಹಿಂದಷ್ಟೇ ಕೆಲವು ಯುವ ವಿಜ್ಞಾ­ನಿಗಳು ಮರ ಏರಲು ತೊಡಗಿದರು.
ಅವರು ಅಲ್ಲಿ ಹೊಸ ಲೋಕವೊಂದನ್ನೇ ಕಂಡರು. ಯಾವ ಪಠ್ಯಪುಸ್ತಕದಲ್ಲೂ ನೋಡಸಿಗದ ಅಪರೂಪದ ಅಣಬೆಗಳು, ಪಾಚಿಗಳು, ಸಸ್ಯಗಳು, ಪ್ರಾಣಿ­ಗಳು, ಅವುಗಳ ನಡುವಣ ಸಂಬಂಧಗಳು, ಮೇಲಾಟಗಳು ಎಲ್ಲವೂ ಒಂದೊಂದಾಗಿ ವಿಜ್ಞಾನ ಲೋಕಕ್ಕೆ ತೆರೆದುಕೊಂಡಾಗ ಮರ ಏರುವ ಹೊಸಹೊಸ ತಂತ್ರಗಳು ಬಳಕೆಗೆ ಬರತೊಡಗಿದವು. 1985ರಲ್ಲಿ ಕೋಸ್ಟಾರಿಕಾ ದೇಶದಲ್ಲಿ ಮರಗಳ ಛಾವಣಿಯ (ಕ್ಯಾನೊಪಿ) ಮೇಲೆ ಜಾಳಿಗೆಯನ್ನು ಹಾಸಿ ಅಲ್ಲಿ ನಿರ್ಭ­ಯವಾಗಿ ಓಡಾಡುತ್ತ ಅಲ್ಲಿನ ಜೀವಲೋಕದ ಅಧ್ಯಯನ ಕೈಗೊಂಡ ವ್ಯಕ್ತಿಗೆ ‘ವರ್ಷದ ವಿಜ್ಞಾನಿ’ ಎಂಬ ಪುರಸ್ಕಾರ ಸಿಕ್ಕಿದ ಮೇಲೆ ನಿಜಕ್ಕೂ ‘ಕ್ಯಾನೊಪಿ ಸೈನ್ಸ್’ ಎಂಬ ಹೊಸ ಶಾಖೆಯೇ ಆರಂಭವಾಯಿತು.
ಈಗ ಅದೊಂದು ತೀವ್ರ ಪೈಪೋಟಿಯ ರಂಗ­ವಾಗಿದೆ. ವೃಕ್ಷಗಳ ಮೇಲ್ಛಾವಣಿಯನ್ನು ‘ಜಗತ್ತಿನ ಎಂಟನೇ ಖಂಡ’ ಎಂದು ಬಣ್ಣಿಸತೊ­ಡಗಿದ್ದಾರೆ. ಏನೆಲ್ಲ ಸಾಹಸ ಮಾಡಿ ಆ ಹೊಸ­ಲೋಕಕ್ಕೆ ಹೋಗಿ ವಿಹರಿಸಬಲ್ಲ ಧೀರರು ತಮ್ಮನ್ನು ‘ಡೆಂಡ್ರೊನಾಟ್ಸ್’ ಎಂದು ಹೇಳಿ­ಕೊಳ್ಳುತ್ತಾರೆ (ಬಾಹ್ಯಾಕಾಶ ಯಾತ್ರಿಗಳನ್ನು ‘ಆಸ್ಟ್ರೊನಾಟ್ಸ್’ ಎನ್ನುವ ಹಾಗೆ, ಮರಗಳ ಶಾಖೋಪಶಾಖೆಗಳ ಮೇಲೆ ಚಲಿಸಬಲ್ಲವರು ‘ಡೆಂಡ್ರೊನಾಟ್ಸ್’). ಅಲ್ಲಿ ಸಾಮಾನ್ಯ ವಿಜ್ಞಾನಿ­ಗಳಿಗೆ ನಿಲುಕದ ಹೊಸ ವಿಜ್ಞಾನ ಇದೆ, ರೋಚ­ಕತೆ ಇದೆ, ರಂಜನೆ ಇದೆ; ಎಲ್ಲಕ್ಕಿಂತ ಮುಖ್ಯವಾಗಿ ಎತ್ತರದ ವೃಕ್ಷಗಳಲ್ಲಿ ಏನಾದರೂ ಹೊಸ ಕೆಮಿಕಲ್‌ಗಳು, ಹೊಸ ಮೂಲಿಕೆಗಳು, ಹೊಸ ಜೀವಿಗಳು ಸಿಕ್ಕರೆ ಪೇಟೆಂಟ್ ಮಾಡಿಕೊಳ್ಳುವ ಅವಕಾಶವಿದೆ.
ನೆಲದಿಂದ 150 ಅಡಿ ಎತ್ತರದ ವಿನೂತನ ಲೋಕದಲ್ಲಿ ನಾವು ಮುಟ್ಟಿದ್ದೆಲ್ಲ ಹೊಸದು! ಹೊಸ ಸಸ್ಯ, ಹೊಸ ಕೀಟ, ಹೊಸ ಪ್ರಾಣಿ, ಹೊಸ ಬಗೆಯ ನಡವಳಿಕೆ!? ಎನ್ನು­ತ್ತಾರೆ, ಅಮೆರಿಕದ ಪ್ರಖ್ಯಾತ ಛಾವಣಿವಿಜ್ಞಾನಿ ಪ್ರೊ. ನಳಿನಿ ನಾಡಕರ್ಣಿ.
ಅದಕ್ಕೆ ತಕ್ಕಂತೆ ಮರದ ತುದಿಯನ್ನು ತಲುಪುವ ಅನೇಕ ಬಗೆಯ ಹೊಸ ಹೊಸ ತಂತ್ರ­ಜ್ಞಾನಗಳೂ ವಿಕಾಸಗೊಂಡಿವೆ. ಆಕಾಶ­ಮಾರ್ಗ­ದಲ್ಲೇ ಅಲ್ಲಿಗೆ ಹೋಗಿ ಇಳಿಯು­ವವರಿಗಾಗಿ ವಿಶಾಲ ಬಲೆಗಳು, ಅದರೊಳಗೆ ಟೆಂಟ್‌ಗಳು, ಅದನ್ನು ಹೊತ್ತೊಯ್ದು ಮರಗಳ ಮೇಲೆ ಹಾಸಬಲ್ಲ ಬಿಸಿಗಾಳಿ ಬಲೂನು, ಏರ್‌ಶಿಪ್‌ಗಳು ಸಜ್ಜಾಗಿವೆ. ಮರದ ಬುಡದಿಂದಲೇ ಮೇಲೇರಿ ಓಡಾಡಬಯಸುವ ಸಾಹಸಿಗಳಿಗಾಗಿ ನಾನಾ ಬಗೆಯ ನೂಲೇಣಿಗಳು, ತೊಟ್ಟಿಲುಗಳು, ಕ್ರೇನ್­ಗಳು ರೂಪುಗೊಂಡಿವೆ. ಇವು ವಿಜ್ಞಾನಿಗಳಿಗಷ್ಟೇ ಅಲ್ಲ, ವಾರಾಂತ್ಯದಲ್ಲಿ ಮೋಜು ಮಾಡು­ವವರಿಗೂ ರೋಚಕ ಸಾಧನಗಳಾಗುತ್ತಿವೆ.
ಈಗಂತೂ ‘ಹವಾಗುಣ ಬದಲಾವಣೆ’ ಎಂಬ ಭಯದ ಗಾಳಿ ಎಲ್ಲೆಡೆ ಬೀಸುತ್ತಿರುವಾಗ ಸಹಜವಾಗಿಯೇ ಎತ್ತರದ ಮರಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಳಜಿ ಹೆಚ್ಚ­ತೊಡಗಿದೆ. ಐವತ್ತು ವರ್ಷಗಳ ಹಿಂದೆ ಭೂಮಿಯ ಶೇಕಡಾ 12ರಷ್ಟು ಭಾಗದಲ್ಲಿ, ಅದೂ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಮಳೆಕಾಡುಗಳಿದ್ದವು. ಕೃಷಿ ವಿಸ್ತರಣೆ, ನಾಟಾ­ಕಡಿತ, ಕಾಡಿನ ಬೆಂಕಿಯಿಂದಾಗಿ ಅದರಲ್ಲೂ ಅರ್ಧಭಾಗ ನಷ್ಟವಾಗಿದೆ. ಆದರೆ ಈಗಲೂ ಜಗತ್ತಿನ ಶೇಕಡಾ 40ರಷ್ಟು ಜೀವಿಗಳು ಉಷ್ಣವಲಯದ ಮಳೆಕಾಡುಗಳಲೇ ಇವೆ. ನಮ್ಮ ಪಶ್ಚಿಮಘಟ್ಟಗಳೂ ಸೇರಿದಂತೆ ಈ ಕಾಡು­ಗಳೇ ಜಗತ್ತಿನ ಹವಾಗುಣವನ್ನು, ಋತು­ಮಾನವನ್ನು ನಿಯಂತ್ರಿಸುತ್ತವೆ ಎಂಬುದು ಗೊತ್ತಾದ ಮೇಲೆ ಅವುಗಳ ಅಧ್ಯಯನ ಮತ್ತು ರಕ್ಷಣೆಗಾಗಿ ವಿಶೇಷ ಸಂಶೋಧನೆಗಳು ನಡೆಯತೊಡಗಿವೆ. ಒಂದೆರಡು ಉದಾಹರಣೆ­ಯನ್ನು ನೋಡಿ: ತೀವ್ರ ಒತ್ತಡಕ್ಕೆ ಸಿಲುಕಿದಾಗ ಎತ್ತರದ ಮರಗಳು ವಾತಾವರಣಕ್ಕೆ ಮಿಥೈಲ್ ಸ್ಯಾಲಿಸಿಲೇಟ್ ಎಂಬ ಅನಿಲವನ್ನು ಹೊರಸೂ­ಸುತ್ತವೆ
ಎಂದು ಅಮೆರಿಕದ ರಾಷ್ಟ್ರೀಯ ವಿಜ್ಞಾನ ನಿಧಿಯ ಥಾಮಸ್ ಕಾರ್ಲ್ ಅವರ ತಂಡವೊಂದು ಮರದ ಮೇಲೆ ನೂರಡಿ ಎತ್ತರದಲ್ಲಿಟ್ಟ ಸಲಕರಣೆಗಳ ಮೂಲಕ ಅಳೆದು ನೋಡಿದೆ. ಮೊನ್ನೆ ಆಗಸ್ಟ್ ತಿಂಗಳಲ್ಲಿ ಜೆನ್ನಿಫರ್ ಬಾಲ್ಚ್ ಎಂಬಾಕೆ ತನ್ನ 30 ಸಂಗಡಿಗರ ಜತೆ ಹೋಗಿ ಅಮೆಜಾನ್‌ನ 50 ಹೆಕ್ಟೇರ್ ದಟ್ಟ ಅರಣ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿಕೊಟ್ಟು ಎಷ್ಟು ಪ್ರಮಾಣದ ಇಂಗಾಲದ ಡೈಆಕ್ಸೈಡ್ ವಾತಾ­ವರಣಕ್ಕೆ ಸೇರುತ್ತದೆ ಎಂದು ವರದಿ ಮಾಡಿ­ದ್ದಾರೆ. ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‍ಮೂರ್ ಲ್ಯಾಬಿನ ಗೋವಿಂದಸ್ವಾಮಿ ಬಾಲಾ ಎಂಬುವರು ಮರಗಳು ಸೂರ್ಯನ ಶಾಖವನ್ನು ಹೇಗೆ ಹೀರಿಕೊಳ್ಳುತ್ತವೆ ಎಂದು ಅಧ್ಯಯನ ಮಾಡಿ, ‘ಉತ್ತರಕ್ಕೆ ಹೋದಂತೆ ಮರಗಳನ್ನು ಬೆಳೆಸುವುದು ಅಪಾಯಕಾರಿ’ ಎಂದಿದ್ದಾರೆ. ಅವರ ಪ್ರಕಾರ ಮಳೆಕಾಡುಗಳಲ್ಲಿ ಮರಗಳು ಹೆಚ್ಚಿಗೆ ಇದ್ದಷ್ಟೂ ಭೂಮಿಗೆ ಒಳ್ಳೆಯದು. ಆದರೆ ಸೈಬೀರಿಯಾ ಅಥವಾ ಉತ್ತರ ಅಕ್ಷಾಂಶಗಳಲ್ಲಿ ಮರಗಳು ಇಲ್ಲದಿದ್ದರೇ ಭೂಮಿಗೆ ಒಳ್ಳೆಯದು. ಏಕೆಂದರೆ ಹಿಮದ ಹಾಸಿನ ಮೇಲೆ ಬಿಸಿಲು ಬಿದ್ದರೆ ಅದು ಪ್ರತಿಫಲನವಾಗಿ ಹೊರಟು ಹೋಗುತ್ತದೆ. ಅಲ್ಲಿ ಅರಣ್ಯ ಬೆಳೆಸಿದರೆ ಅದು ಶಾಖವನ್ನು ಹೀರಿಕೊಂಡು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತದೆ!
ಆದರೆ ವಾಸ್ತವದಲ್ಲಿ ಎರಡೂ ಕಡೆ ಉಲ್ಟಾ ಆಗುತ್ತಿದೆ. ಭೂಮಿಯ ನಡುಪಟ್ಟಿಗುಂಟ ವೃಕ್ಷಗಳ ನಾಶ ಹೆಚ್ಚುತ್ತಿದೆ. ಉತ್ತರದ ದೇಶಗಳಲ್ಲಿ ಗಿಡಮರಗಳ ಪ್ರೇಮ ದಿನದಿನಕ್ಕೆ ಹೆಚ್ಚುತ್ತಿದೆ.
ಈ ಮಧ್ಯೆ ವೃಕ್ಷಗಳು ಬೆಳೆಯಬೇಕಾದಲ್ಲಿ ವೃಕ್ಷಪ್ರೇಮವನ್ನು ಹೆಚ್ಚಿಸಲೆಂದು ಬೆಂಗಳೂರಿ­ನಲ್ಲಿ ಮುಂದಿನ ಒಂದು ವಾರವಿಡೀ ಕ್ಯಾನೊಪಿ ಸಮ್ಮೇಳನ ನಡೆಯಲಿದೆ. ಪರಿಸರ ಧ್ವಂಸಕ್ಕೆ ಕಾರಣವಾಗುವ ವಿಜೃಂಭಣೆಯ ‘ಏರೋ ಶೋ’ಗಳನ್ನು ನೋಡಿದ ಇಲ್ಲಿನ ಜನರು ಈಗ ವಿಜ್ಞಾನಿಗಳ ‘ಮರ ಏರೋ ಶೋ’ವನ್ನು ಕೂಡ ನೋಡಬಹುದು.
ಆದರೆ ವಿಶೇಷ ರಂಜನೆಯನ್ನು ನಿರೀಕ್ಷಿಸಬೇಡಿ. ಅಮೆರಿಕದಲ್ಲೇನೋ ಜನಪ್ರತಿನಿಧಿಗಳನ್ನು ಮರ ಏರಿಸಬಹುದು. ಇಲ್ಲಿ ಯಾರ್‍ಯಾರನ್ನು ಏರಿಸೋಣ? ಗುಂಡ್ಯ ಅರಣ್ಯವನ್ನು ಮುಳುಗಿಸಿಯೇ ತೀರುತ್ತೇನೆಂದು ಶಪಥ ತೊಟ್ಟ ರಾಜಕಾರಣಿಗಳಿದ್ದಾರೆ; ಬೆಂಗಳೂರು ಸೆಕೆ-ಬೆಂಕಿಯೂರು ಆದರೂ ಸರಿ, ಮರಗಳನ್ನು ಕಡಿದೇ ಮೆಟ್ರೊ ರೈಲುಹಳಿ ಹಾಸುತ್ತೇನೆಂದು ಹೊರಟ ಎಂಜಿನಿಯರ್‌ಗಳು ಇದ್ದಾರೆ. ಅರಣ್ಯದ ನಡುವೆಯೇ ಗಣಿಗಾರಿಕೆ ನಡೆಸಬಹುದು ಎಂದು ವಾದಿಸಿ ಗೆಲ್ಲುವ ನ್ಯಾಯವಾದಿಗಳಿದ್ದಾರೆ. ಅವರನ್ನೆಲ್ಲ ಮರಗಳ ಮೇಲೆ ಏರಿಸಬೇಕೆಂದರೆ ಅಷ್ಟೊಂದು ಮರಗಳು ಎಲ್ಲಿವೆ ನಮ್ಮಲ್ಲಿ?