Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್

ಪ್ರಸಿದ್ಧ ವೀಣಾವಾದಕರು, ಸಂಗೀತ ಅಧ್ಯಾಪಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.
ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಏಳನೆಯ ವಯಸ್ಸಿನಿಂದಲೇ ವೈಣಿಕ ಪ್ರವೀಣ ವಿ. ವೆಂಕಟಗಿರಿಯಪ್ಪನವರು, ಪ್ರೊ. ಆರ್.ಎನ್. ದೊರೆಸ್ವಾಮಿಯವರು ಮತ್ತು ಪದ್ಮಭೂಷಣ ಲಾಲ್ಗುಡಿ ಜಿ. ಜಯರಾಮನ್ ಅವರ ಶಿಷ್ಯರು. ವೀಣೆ ಶೇಷಣ್ಣನವರ ವೀಣಾ ಪರಂಪರೆಗೆ ಸೇರಿದ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ಹದಿನೈದನೆ ವಯಸ್ಸಿನಲ್ಲಿಯೇ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಾದ್ಯಂತ ಮತ್ತು ದುಬೈ, ನ್ಯೂಜಿಲೆಂಡ್ ಮುಂತಾದ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯ ‘ಎ’ ದರ್ಜೆ ಕಲಾವಿದರಾಗಿದ್ದು, ೧೯೫೦ರಿಂದ ಇವರ ಅನೇಕ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಮತ್ತು ಪ್ರದರ್ಶನ ಕಲಾವಿಭಾಗದ ಮುಖ್ಯಸ್ಥರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದು, ಅನೇಕ ಶಿಷ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಗಾನಕಲಾ ಪರಿಷತ್ತಿನ ೨೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಬಿರುದು, ಗಾಯನ ಸಮಾಜದ ‘ವರ್ಷದ ಕಲಾವಿದೆ’, ಮೈಸೂರು ತ್ಯಾಗರಾಜ ಗಾಯನ ಸಭೆಯ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು ನ್ಯೂಜಿಲೆಂಡ್‌ನಲ್ಲಿ ಆಕ್‌ಲೆಂಡ್ ಕರ್ನಾಟಕ ಮ್ಯೂಸಿಕ್ ಸೊಸೈಟಿಯ ಕಲಾ ಸಲಹೆಗಾರರು ಮತ್ತು ಪೋಷಕರು ಆಗಿದ್ದಾರೆ. ಲಂಡನ್‌ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಪಠ್ಯ ಚಟುವಟಿಕೆಗಳ ಸಮಿತಿ ಅಧ್ಯಕ್ಷರಾಗಿ, ಮುಖ್ಯ ಪರೀಕ್ಷಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದುದಾಗಿ ಲಂಡನ್ ಮುಖ್ಯಸ್ಥರಿಂದ ಮನ್ನಣೆ ಪಡೆದ ಹೆಗ್ಗಳಿಕೆ
ಇವರದು.
ಲಂಡನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗಾಗಿ ಪಠ್ಯ ವಿಷಯಗಳನ್ನೊಳಗೊಂಡ ಪುಸ್ತಕ ಪ್ರಕಟಿಸಿ ಮನ್ನಣೆ ಪಡೆದಿರುವ ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು `ವಾಗ್ಗೇಯ ವೈಭವ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರ ಕ್ಯಾಸೆಟ್‌ಗಳು ಪ್ರಚಲಿತವಾಗಿವೆ. ಪಂಚವೀಣಾ ವಾದ್ಯ ಸಮ್ಮಿಲನದ ‘ಶೃಂಗಾರವೀಣಾ ಮಾಧುರಿ’ ನಿರ್ದೇಶಕರು.
ಮೈಸೂರು ಬಾನಿಯ ವೀಣಾವಾದನಕ್ಕೆ ಹೆಸರಾದ ಪ್ರತಿಭಾವಂತ ವೀಣಾವಾದಕರು ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಡಿ. ಲಿಂಗಯ್ಯ

ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದ, ಬರಹ ಭಾಷಣಗಳಲ್ಲಿ ಅಪರೂಪದ ಒಳನೋಟಗಳನ್ನು ನೀಡಬಲ್ಲ ಜಾನಪದ ತಜ್ಞರು ಪ್ರೊ. ಡಿ. ಲಿಂಗಯ್ಯ ಅವರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ೧೯೩೯ ರಲ್ಲಿ ಜನಿಸಿದ ಪ್ರೊ. ಡಿ. ಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ಬೆಂಗಳೂರು ವಿಶ್ವೇಶ್ವರಪುರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಕನ್ನಡ ಪ್ರಾಧ್ಯಾಪಕ, ಕಾಲೇಜಿನ ಪ್ರಾಚಾರ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಹೀಗೆ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿ ೧೯೯೭ ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿಗಳು, ಎರಡು ವ್ಯಕ್ತಿಚಿತ್ರಗಳು, ಹನ್ನೊಂದು ಕವನಸಂಗ್ರಹಗಳು, ಮೂರು ಕಥಾಸಂಗ್ರಹಗಳು, ನಾಲ್ಕು ನಾಟಕಗಳು, ಮೂರು ಚರಿತ್ರೆ (ಸ್ವಾತಂತ್ರ್ಯ ಚಳುವಳಿ), ಮೂರು ವಿಮರ್ಶೆ, ಐದು ಜೀವನಚರಿತ್ರೆ, ೧೬ ಜಾನಪದ ಕೃತಿಗಳನ್ನು ರಚಿಸಿರುವುದಲ್ಲದೆ ೧೪ ಕೃತಿಗಳನ್ನು ಸಂಪಾದಿಸಿದ್ದಾರೆ. ಶ್ರೀಯುತರ ಲೇಖನಗಳು ಪತ್ರಿಕೆಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರೊ. ಡಿ. ಲಿಂಗಯ್ಯ ಅವರು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ — ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಯಲು ಸೀಮೆಯ ಜನಪದ ಗೀತೆಗಳು’ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ‘ಕರ್ನಾಟಕ ಜಾನಪದ ಕಾವ್ಯಗಳು’ ಕೃತಿಗೆ ರಾಜ್ಯ ಸರ್ಕಾರದ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ, ಡಾ. ಜೀ.ಶಂ.ಪ. ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಜಾನಪದ ವಿದ್ವಾಂಸರು ಪ್ರೊ. ಡಿ. ಲಿಂಗಯ್ಯ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಎಚ್.ಎಸ್. ವೆಂಕಟೇಶಮೂರ್ತಿ

ಕನ್ನಡದ ಪ್ರಸಿದ್ದ ಕವಿ, ನಾಟಕಕಾರ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತ್ಯ ರಚನಕಾರ, ಸಾಹಿತ್ಯ ಲೋಕದ ಗಣ್ಯ ಬರಹಗಾರ ಡಾ|| ಎಚ್.ಎಸ್. ವೆಂಕಟೇಶಮೂರ್ತಿ ಅವರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ಜನಿಸಿದ ಡಾ. ವೆಂಕಟೇಶಮೂರ್ತಿ ಅವರು ಬಾಲ್ಯದಿಂದಲೇ ಪ್ರತಿಭಾವಂತರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಜೀವನ ನಡೆಸಿ ಇದೀಗ ನಿವೃತ್ತರಾಗಿದ್ದಾರೆ.
ಆಳವಾದ ಚಿಂತನೆ, ಸುಲಭಗ್ರಾಹ್ಯ ನಿರೂಪಣೆ, ಆಕರ್ಷಕ ಶೈಲಿ ಇವರ ಬರವಣಿಗೆಯ ವೈಶಿಷ್ಟ್ಯ. “ಪರಿವೃತ್ತ’, ‘ಬಾಗಿಲ ಬಡಿವ ಜನ’, ‘ಮೊಗ್ತಾ’, ‘ಕ್ರಿಯಾಪರ್ವ’, ‘ಒಣಮರದ ಗಿಳಿಗಳು, ‘ಸೌಗಂಧಿಕ’, ‘ಇಂದುಮುಖಿ’, ‘ಹರಿಗೋಲು’, ‘ಮರೆತ ಸಾಲುಗಳು’, ‘ಎಲೆಗಳು ನೂರಾರು’, ‘ಅಗ್ನಿ ಸಂಭ’, ‘ಎಷ್ಟೊಂದು ಮುಗಿಲು’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾರೆ.
ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಉರಿಯ ಉಯ್ಯಾಲೆ, ಹೂವಿ ಮತ್ತು ಸಂಧಾನ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ಕವಿತೆ, ಕಥೆ, ಕಾದಂಬರಿ, ಜೀವನ ಚರಿತ್ರೆ, ನಾಟಕಗಳನ್ನು ಬರೆದು ಜನಪ್ರಿಯ ಮಕ್ಕಳ ಸಾಹಿತಿ ಎಂದು ಮನ್ನಣೆ ಗಳಿಸಿದ್ದಾರೆ.
‘ನೂರು ಮರ ನೂರು ಸ್ವರ’, ‘ಕಥನ ಕವನ’, ‘ಮೇಘದೂತ’, ‘ಕವಿತೆಯ ಜೋಡಿ’, ‘ಆಕಾಶದ ಹಕ್ಕು ಮುಂತಾದ ಇವರ ವಿಮರ್ಶಾ ಬರವಣಿಗೆಗಳು ವಿದ್ವತ್ ಲೋಕದ ಮೆಚ್ಚುಗೆಗೆ ಪಾತ್ರವಾಗಿವೆ.
ಇವರು ಬರೆದ ಅನೇಕ ಕವಿತೆಗಳು, ನಾಟಕಗಳು ಹಿಂದಿ, ಇಂಗ್ಲಿಷ್, ತೆಲುಗು, ತಮಿಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ ಅನಿಕೇತನದ ಸಂಪಾದಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಕೃತ ನಾಟಕ ಹಾಗೂ ಬಂಗಾಳಿ ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕಾಳಿದಾಸನ ‘ಋತುಸಂಹಾರ’ದ ಅನುವಾದಕ್ಕಾಗಿ ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಡಾ|| ವೆಂಕಟೇಶಮೂರ್ತಿ ಅವರು ಬರೆದ ನಾಟಕಗಳು ರಾಷ್ಟ್ರೀಯ ಮನ್ನಣೆ ಗಳಿಸಿವೆ. ವರ್ಷದ ಉತ್ತಮ ಪುಸ್ತಕಕ್ಕಾಗಿ ಕೊಡುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಇವರು ಐದು ಬಾರಿ ಪಡೆದಿದ್ದಾರೆ. ದೇವರಾಜ್ ಬಹದ್ದೂರ್ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ ಮೊದಲಾದ ಗೌರವಗಳು ಶ್ರೀಯುತರಿಗೆ ಸಂದಿವೆ.
ಸಾಹಿತ್ಯ ವಲಯದ ಬಹುತೇಕ ಎಲ್ಲ ಹಿರಿ ಕಿರಿಯರೊಡನೆ ಸ್ನೇಹಪೂರ್ಣ ಸಂಬಂಧವಿರಿಸಿಕೊಂಡು, ಎಳೆಯ ಪ್ರತಿಭೆಗಳನ್ನು ಉತ್ತೇಜಿಸುತ್ತ ಸದಾ ಹಸನ್ಮುಖಿಯಾಗಿರುವ ಕನ್ನಡದ ಗಣ್ಯ ಸಾಹಿತಿ ಡಾ|| ಎಚ್‌. ಎಸ್. ವೆಂಕಟೇಶಮೂರ್ತಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸೋಮಶೇಖರ ಇಮ್ರಾಪೂರ

ಕವಿ, ಸಂಶೋಧಕ, ಪ್ರಾಧ್ಯಾಪಕ, ಅಂಕಣಕಾರ, ಜಾನಪದ ತಜ್ಞರು ಡಾ. ಸೋಮಶೇಖರ ಇಮ್ರಾಪೂರ ಅವರು. ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ೧೯೪೦ರಲ್ಲಿ ಜನಿಸಿದ ಡಾ. ಸೋಮಶೇಖರ ಇಮ್ರಾಪೂರ ಅವರಿಗೆ ಕನ್ನಡ ಎಂ.ಎ.ಯಲ್ಲಿ ಸುವರ್ಣಪದಕ, ಜಾನಪದ ಒಗಟುಗಳು ಪಿಹೆಚ್.ಡಿ. ಪ್ರೌಢ ಪ್ರಬಂಧಕ್ಕೆ ಸುವರ್ಣಪದಕಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದ ಡಾ. ಇಮ್ರಾಪೂರ ಅವರು ವಿಶ್ವವಿದ್ಯಾನಿಲಯದ ವಿದ್ವತ್ ವಲಯದಲ್ಲಿ ನಾನಾ ಅಧಿಕಾರ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಡಾ. ಇಮ್ರಾಪೂರ ಅವರು ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಕಲೆ, ಸಾಹಿತ್ಯ ಸಂಗ್ರಹ, ಸಂಪಾದನೆ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಸಂಸ್ಕೃತಿಗೆ ಸಂಬಂಧಿಸಿದಂತೆ ೩೮ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಜಾನಪದ ಸಾಹಿತ್ಯ, ಸಂಶೋಧನೆ ಹೀಗೆ ಹತ್ತಾರು ಕ್ಷೇತ್ರದಲ್ಲಿ ಜಾನಪದ ಅಧ್ಯಯನದ ಕ್ಷಿತಿಜವನ್ನು ವಿಸ್ತರಿಸಿದ ಶ್ರೀಯುತರು ಸಾವಿರ ಒಗಟುಗಳು, ಜನಪದ ಮಹಾಭಾರತ, ಜಾನಪದ ವಿಜ್ಞಾನ, ಜಾನಪದ ವ್ಯಾಸಂಗ ಹೀಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ವಿದ್ವಾಂಸರಾಗಿರುವಂತೆ ಸಮರ್ಥ ಕವಿಯೂ ಆಗಿರುವ ಡಾ. ಇಮ್ರಾಪೂರ ಅವರು ಬಿಸಿಲ ಹೂ, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಹುತ್ತಗಳು ಹಾಗೂ ಕನ್ನಡ ಕಾವ್ಯಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ದಾಂಗ’ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಲಾಲಿಸಿ ಕೇಳ ನನಮಾತ’, ‘ಅಂಕಣ ಬರಹ’, ಭಾವತೀವ್ರತೆಯಿಂದ ಕೂಡಿದ ಗದ್ಯ ಬರವಣಿಗೆಗೆ ಹೆಗ್ಗುರುತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ೨೮ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರೆಂಬ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಗೌರವಿಸಿದೆ. ಬೇವು ಬೆಲ್ಲ’ ಅಭಿನಂದನಾ ಗ್ರಂಥವನ್ನು ಶ್ರೀಯುತರಿಗೆ
ಅರ್ಪಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರ ಜಾನಪದ ಅಧ್ಯಯನ ವಿಭಾಗವನ್ನು ಕಟ್ಟಿ ಬೆಳೆಸಿ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಜಾನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪೂರ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಬರಗೂರು ರಾಮಚಂದ್ರಪ್ಪ

ಜನಪ್ರಿಯ ಪ್ರಾಧ್ಯಾಪಕ, ಬಂಡಾಯ ಸಾಹಿತ್ಯದ ಸೃಜನಶೀಲ ಲೇಖಕ, ಅದ್ಭುತ ಭಾಷಣಕಾರ, ಕ್ರಿಯಾಶೀಲ ಸಾಂಸ್ಕೃತಿಕ ವ್ಯಕ್ತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದ ರಾಮಚಂದ್ರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಬರಗೂರಿನಲ್ಲಿ, ಬಿ.ಎ. ಪದವಿಯನ್ನು ತುಮಕೂರಿನಲ್ಲಿ, ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಬರಗೂರರು ಸಾಹಿತಿಯಾಗಿ ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮಗೀತೆ, ಮಗುವಿನ ಹಾಡು ಕವನ ಸಂಕಲನಗಳು; ಸುಂಟರಗಾಳಿ, ಕಪ್ಪುನೆಲದ ಕೆಂಪು ಕಾಲು, ಒಂದು ಊರಿನ ಕತೆಗಳು (ಆಯ್ದ ಕತೆಗಳು) ಕಥಾ ಸಂಕಲನಗಳು; ಸೂತ್ರ, ಉಕ್ಕಿನ ಕೋಟೆ, ಒಂದು ಊರಿನ ಕತೆ, ಬೆಂಕಿ, ಸೂರ್ಯ, ಸಂಗಪ್ಪನ ಸಾಹಸಗಳು, ಸೀಳು ನೆಲ, ಭರತನಗರಿ, ಗಾಜಿನ ಮನೆ, ಸ್ವಪ್ನ ಮಂಟಪ ಕಾದಂಬರಿಗಳು; ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ಇಣಕುನೋಟ, ಸಂಸ್ಕೃತಿ-ಉಪಸಂಸ್ಕೃತಿ, ವರ್ತಮಾನ, ರಾಜಕೀಯ ಚಿಂತನೆ ವಿಚಾರ ವಿಮರ್ಶೆಯ ಕೃತಿಗಳು; ಕಪ್ಪುಹಲಗೆ, ಕೋಟೆ, ನಾಟಕಗಳಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ೨೫೦ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ ಕೀರ್ತಿ ಶ್ರೀಯುತರದು.
ಎರಡು ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನಾ ಸ್ಥಾಪಕರಾಗಿ, ಸಂಚಾಲಕರಾಗಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೌಲಿಕ ಸೇವೆ ಸಲ್ಲಿಸಿದ್ದಾರೆ.
ಬರಗೂರರು ನಿರ್ದೇಶಿಸಿದ ಚಲನಚಿತ್ರಗಳು ಒಂದು ಊರಿನ ಕಥೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲುವೇಷ ಮತ್ತು ಹಲವಾರು ಸಾಕ್ಷ್ಯಚಿತ್ರಗಳು, ಸುಂಟರಗಾಳಿ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಊರಿನ ಕಥೆ ಚಿತ್ರಕ್ಕೆ ಶ್ರೇಷ್ಠ ಲೇಖಕ, ಶ್ರೇಷ್ಠ ಸಂಭಾಷಣಕಾರ, ಚಲನಚಿತ್ರ ಪ್ರಶಸ್ತಿ, ಬೆಂಕಿ ಚಿತ್ರಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕೋಟೆ ಚಿತ್ರಕ್ಕೆ ಶ್ರೇಷ್ಠ ಗೀತರಚನಕಾರ ಪ್ರಶಸ್ತಿ, ಜನುಮದ ಜೋಡಿ ಚಿತ್ರಕ್ಕೆ ಶ್ರೇಷ್ಠ ಸಂಭಾಷಣಕಾರ ಉದಯ ಟಿ.ವಿ. ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹೀಗೆ ಬರಗೂರರು ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಗಾಗಿ ಪಡೆದ ಪ್ರಶಸ್ತಿ ಪುರಸ್ಕಾರಗಳು ಹಲವು.
ಸಾಹಿತ್ಯ, ಸಂಸ್ಕೃತಿ, ಸಿನಿಮಾ ಮುಂತಾದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಒಳಸುಳಿಗಳನ್ನು ಅಭಿವ್ಯಕ್ತಿಸಿದ ವೈವಿಧ್ಯಮಯ ಕೃತಿಗಳ ರಚನೆ, ಚಲನಚಿತ್ರ ನಿರ್ದೇಶನ ಬಹು ಶಿಸ್ತೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿಯುಳ್ಳವರು ಪ್ರೊ. ಬರಗೂರು ರಾಮಚಂದಪ್ಪ ಅವರು.