ಡಾ|| ತೇಜಸ್ವಿ ಕಟ್ಟಿಮನಿ ಅವರು ಪ್ರಸ್ತುತ ಮಧ್ಯ ಪ್ರದೇಶದ ಅಮರ ಕಂಟಕದಲ್ಲಿರುವ ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯದ ಉಪಕುಲಪತಿಗಳು. ಧಾರವಾಡದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ತೇಜಸ್ವಿ ಕಟ್ಟಿಮನಿ ಅವರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಪದಾಧಿಕಾರಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಅಭ್ಯುದಯಕ್ಕಾಗಿ ರಚನೆಯಾಗಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ತೇಜಸ್ವಿ ಕಟೀಮನಿ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿರುವ ಕಟೀಮನಿ ಅವರು ಅನೇಕ ಅನುವಾದ ಕೃತಿಗಳನ್ನು ಸಹ ಹೊರತಂದಿದ್ದಾರೆ.
Category: ರಾಜ್ಯೋತ್ಸವ 2016
ಕೃಷ್ಣ ಅಮೋಗೆಪ್ಪ ನಾಯ್ಕಡಿ ನಾಡಿನ ಉದಯೋನ್ಮುಖ ಸೈಕಲ್ ಸವಾರರಲ್ಲಿ ಒಬ್ಬರು. ರಾಷ್ಟ್ರೀಯ ಸೀನಿಯರ್ ಟ್ರ್ಯಾಕ್ ಸೈಕ್ಲಿಂಗ್ ಬಂಗಾರದ ಪದಕ ಗಳಿಸಿ ಇತಿಹಾಸ ಸೃಷ್ಟಿಸಿರುವ ಕೃಷ್ಣ ಅವರು ಈಗಾಗಲೇ ಅನೇಕ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್ಷಿಪ್ಪುಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಏಷಿಯನ್ ಸೈಕ್ಲಿಂಗ್ ಜ್ಯೂನಿಯರ್ ಚಾಂಪಿಯನ್ಷಿಪ್ನಲ್ಲಿಯೂ ಪಾಲ್ಗೊಂಡಿದ್ದು, ಕೊರಿಯಾದಲ್ಲಿ ತರಬೇತಿ ಪಡೆದಿರುವ ಕೃಷ್ಣ ಅವರು ಪ್ರಸ್ತುತ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಎಸ್.ವಿ. ಸುನಿಲ್
ರಾಷ್ಟ್ರೀಯ ಸೀನಿಯರ್ ಹಾಕಿ ತಂಡದ ಸದಸ್ಯರಾಗಿರುವ ಕೊಡಗಿನ ಎಸ್.ವಿ.ಸುನೀಲ್ ಅವರು ೨೦೦೭ರಿಂದ ಭಾರತ ತಂಡದ ಪ್ರಮುಖ ಸದಸ್ಯರಾಗಿ ಹಲವಾರು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ.
ಜೂನಿಯರ್ ಹಾಕಿ ತಂಡದ ಸದಸ್ಯರಾಗಿ ಭಾರತವನ್ನು ಪ್ರತಿನಿಧಿಸಿರುವ ಸುನೀಲ್ ಅವರು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ರಿಯೋ ಒಲಂಪಿಕ್ಸ್ ಕ್ರೀಡೆಯಲ್ಲಿ ಉಪನಾಯಕರಾಗಿದ್ದ ಸುನೀಲ್ ಅವರು ಈವರೆಗೆ ನೂರ ಎಪ್ಪತ್ತೈದಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಸುನೀಲ್ ಅವರು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ೨೦೧೨ನೆಯ ಸಾಲಿನ ಉತ್ತಮಕ್ರೀಡಾಪಟು ಎಂಬ ಗೌರವ ಮತ್ತು ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಸುರ್ಜಿತ್ ಸಿಂಗ್
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಒಲಂಪಿಕ್ಸ್ ವಿಭಾಗಗಳಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಸುರಜಿತ್ ಸಿಂಗ್ ಅವರು ಏಕಲವ್ಯ ಪ್ರಶಸ್ತಿ ಪುರಸ್ಕೃತರು.
ಶಾಟ್ ಪುಟ್, ಡಿಸ್ಕಸ್ ಥ್, ಹ್ಯಾಮರ್ ಥೋ ಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸುರಜಿತ್ ಸಿಂಗ್ ಅನೇಕ ಅಂತರರಾಷ್ಟ್ರೀಯ ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಜಯಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಇವರು ಹಲವು ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ.
ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಪ್ರಸ್ತುತ ಸಹ ಕುಲಾಧಿಪತಿಗಳಾಗಿರುವ ಡಾ|| ಹೆಬ್ರಿ ಸುಭಾಷ್ ಕೃಷ್ಣ ಬಲ್ಲಾಳ್ ಅವರು ವಿದ್ಯೆ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಗಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ವಯಂಸೇವಾ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಬಲ್ಲಾಳ್ ಅವರು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬಡ ರೋಗಿಗಳ ವಿಮಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರಾಗಿರುವ ಬಲ್ಲಾಳ್ ಅವರು ಎಫ್.ಕೆ.ಸಿ.ಸಿ.ಐ ಉನ್ನತ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ರಾಜೋತ್ಸವ ಪುರಸ್ಕೃತರೂ ಆಗಿರುವ ಹೆಬ್ರಿ ಸುಭಾಷ್ ಕೃಷ್ಣ ಬಲ್ಲಾಳ್ ಅವರು ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಸ್ಥೆಗಳ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಜೀವ ವಿಜ್ಞಾನದಲ್ಲಿ ವಿಶಿಷ್ಟ ಸಂಶೋಧನೆಗಳನ್ನು ಮಾಡಿರುವ ಪ್ರೊ| ಕೆ.ಮುನಿಯಪ್ಪ ವಂಶವಾಹಿಗಳ ಮೂಲಕ ಹರಿದು ಬರುವ ಕ್ಯಾನ್ಸರ್ ಮತ್ತು ಟಿ.ಬಿ. ಖಾಯಿಲೆಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿದಿದ್ದಾರೆ. ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿರುವ ಪ್ರೊ|| ಕೆ.ಮುನಿಯಪ್ಪ ಅವರ ಸಾಧನೆಯು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ಪಡೆದಿದೆ.
ಕರ್ನಾಟಕ ಸರ್ಕಾರವು ರಚಿಸಿದ್ದ ವಿಷನ್ ಗ್ರೂಪ್ ಸದಸ್ಯರಾಗಿ ಸಹ ಸೇವೆ ಸಲ್ಲಿಸಿರುವ ಪ್ರೊ|| ಮುನಿಯಪ್ಪ ಅವರು ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ತಮ್ಮ ನೈಪುಣ್ಯತೆಯನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ.
ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ|| ಕೆ.ಮುನಿಯಪ್ಪರವರು ಹಲವಾರು ಸಂಶೋಧನಾ ಸಂಸ್ಥೆಗಳ ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಎಸ್.ಎಸ್.ಭಟ್ನಾಗರ್ ಪ್ರಶಸ್ತಿ ಪ್ರೊ|| ಮುನಿಯಪ್ಪ ಅವರಿಗೆ ಸಂದಿದೆ.
ಕನ್ನಡ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಹಿರಿಯರಲ್ಲಿ ಒಬ್ಬರಾದ ಜೆ.ಆರ್. ಲಕ್ಷ್ಮಣರಾವ್, ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು.
ಕರ್ನಾಟಕ ವಿಜ್ಞಾನ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಲಕ್ಷ್ಮಣರಾಯರು, ಕನ್ನಡದಲ್ಲಿ ಬರೆದಿರುವ ವಿಜ್ಞಾನ ಕೃತಿಗಳು ಹದಿನೈದಕ್ಕೂ ಹೆಚ್ಚು. ಅವರು ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಮೈಸೂರು ವಿವಿ ಹೊರತಂದ ಕನ್ನಡ ಇಂಗ್ಲಿಷ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದವರು. ಬಾಲ ವಿಜ್ಞಾನವೂ ಸೇರಿ ಅನೇಕ ವಿಜ್ಞಾನ ನಿಯತಕಾಲಿಕೆಗಳನ್ನು ಜೆ.ಆರ್.ಎಲ್. ಮುನ್ನಡೆಸಿದ್ದಾರೆ.
ಇಂದೂಧರ ಹೊನ್ನಾಪುರ
ಪತ್ರಿಕಾ ಶಿಕ್ಷಣ ಪಡೆದು ಪ್ರಜಾವಾಣಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಇಂದೂಧರ ಹೊನ್ನಾಪುರ ಅವರು ತಮ್ಮ ತನಿಖಾ ವರದಿಗಳ ಮೂಲಕ ಹೆಸರು ಮಾಡಿದವರು. ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರಲ್ಲೊಬ್ಬರಾಗಿದ್ದು ಹಲವಾರು ತನಿಖಾ ಹಾಗೂ ಮಾನವೀಯ ವರದಿಗಳನ್ನು ಸಿದ್ದಪಡಿಸಿದ ಹೆಗ್ಗಳಿಕೆ ಇವರದು.
ಮುಂಗಾರು ದೈನಿಕದ ಸಂಪಾದಕರಾಗಿದ್ದು, ನಂತರ ಸುದ್ದಿ ಸಂಗಾತಿ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಇಂದೂಧರ ಹೊನ್ನಾಪುರ ಅವರು ಪ್ರಸ್ತುತ
ಸಂವಾದ ಮಾಸಿಕದ ಸಂಪಾದಕರು.
ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
ಈಶ್ವರ ದೈತೋಟ
ಪತ್ರಿಕೋದ್ಯಮ ಪದವೀಧರರಾದ ಈಶ್ವರ ದೈತೋಟ ೧೯೭೦ರ ದಶಕದಲ್ಲಿ ಉದಯವಾಣಿ, ರಾಜಧಾನಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಈಶ್ವರ ದೈತೋಟ ಅವರು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದು, ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ನಿರೂಪಕರಾಗಿ ಮಾಧ್ಯಮಗಳಲ್ಲಿ ಅನೇಕ ನವೀನ ಪ್ರಯೋಗಗಳನ್ನು ಕೈಗೊಂಡವರು. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೊಸದೊಂದು ಆಯಾಮ ಒದಗಿಸಿದ ದೈತೋಟ ಅವರು ಅನೇಕ ಪತ್ರಿಕೋದ್ಯಮ ಕುರಿತ ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.
ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಈಶ್ವರ ದೈತೋಟ ಅವರು ೨೦ಕ್ಕೂ ಅಧಿಕ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ರಂಗದ ಅಧಿಕೃತ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇವರು ಹಲವಾರು ಮಾಧ್ಯಮ ಕಾರ್ಯಾಗಾರಗಳನ್ನು
ಏಳು ದಶಕಗಳಿಂದ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರದ ಭವಾನಿ ಎನ್. ಲಕ್ಷ್ಮೀನಾರಾಯಣ ಅವರು ಛಾಯಾಚಿತ್ರ ಅಂಕಣವನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಆರಂಭಿಸಿದ ಮೊದಲಿಗರು. ಮದರಾಸು, ಮುಂಬಯಿ ಹಾಗೂ ಬೆಂಗಳೂರಿನ ಚಲನಚಿತ್ರ ಚಟುವಟಿಕೆಗಳನ್ನು ನಿರಂತರವಾಗಿ ಛಾಯಾಗ್ರಹಣ ಮಾಡುತ್ತಿದ್ದ ಲಕ್ಷ್ಮಿನಾರಾಯಣ ಸುಧಾ ವಾರಪತ್ರಿಕೆಯಲ್ಲಿ ಸಿನಿಮಾಂಕಣ, ಮಯೂರ ಮಾಸಿಕದಲ್ಲಿ ಸಾಹಿತಿಗಳ ಛಾಯಾ ಅಂಕಣವನ್ನು ಆರಂಭಿಸಿದರು.
ಪತ್ರಿಕಾ ಛಾಯಾಗ್ರಾಹಕರಾಗಿ ಗೋಕುಲ, ಪ್ರಜಾಮತ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ರಾಜ್ ಸೇರಿದಂತೆ ಛಾಯಾಚಿತ್ರ ಕುರಿತಂತೆ ಹಲವು ಪುಸ್ತಕಗಳನ್ನು ಭವಾನಿ ಹೊರತಂದಿದ್ದಾರೆ.
ಪಿ.ಎಂ. ಮಣ್ಣೂರ
ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಪಿ.ಎಂ. ಮಣ್ಣೂರ ಕಲಬುರ್ಗಿಯಲ್ಲಿ ಸತ್ಯಕಾಮ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪಿ.ಎಂ. ಮಣ್ಣೂರ ಅವರ ಕವನ ಸಂಕಲನ ಮತ್ತು ಸಂಪಾದಕೀಯ ಸಂಗ್ರಹವೂ ಪ್ರಕಟವಾಗಿದೆ.
ಮಣ್ಣೂರ ಅವರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪತ್ರಕರ್ತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಕಲಬುರ್ಗಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಕಲಬುರ್ಗಿಯಲ್ಲಿ ಕಲಾವಿದರ ಸಂಘ ಸ್ಥಾಪಿಸಿ ಸಕ್ರಿಯರಾಗಿರುವ ಮಣ್ಣೂರ ಅವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಸನ್ಮಾನಿಸಿವೆ. ಕರ್ನಾಟಕ ಪತ್ರಿಕಾ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಗೌರವಗಳು ಇವರಿಗೆ ಸಂದಿವೆ.
ಮೊಹಮ್ಮದ್ ಇದ್ರಿಸ್ ಖಾದ್ರಿ ಅವರು ಬೀದರ್ ಜಿಲ್ಲೆಯಲ್ಲಿ ಸಮಗ್ರ ಕೃಷಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡವರು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಕಬ್ಬು ಮತ್ತು ಮಾವಿನ ತಳಿಗಳನ್ನು ಬೆಳೆಸಿ ಅತ್ಯುತ್ತಮ ಇಳುವರಿಯನ್ನು ಪಡೆದಿರುವ ಮೊಹಮದ್ ಖಾದ್ರಿ ಅವರು ಹೊಸ ತಲೆಮಾರಿನ ರೈತರಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾದ್ರಿ ಅವರ ಸಮಗ್ರ ಕೃಷಿ ಪದ್ದತಿಯನ್ನು ಗುರುತಿಸಿ ಗೌರವ ಪ್ರಶಸ್ತಿಯನ್ನು ಕೊಡಮಾಡಿದೆ. ನವದೆಹಲಿಯ ಐಸಿಎಆರ್ ಸಂಸ್ಥೆ ಸಹ ಅವರನ್ನು ಗೌರವಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ೨೦೧೫ನೆಯ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಡಾ|| ಮೊಹಮ್ಮದ್ ಇದ್ರಿಸ್ ಖಾದ್ರಿ ಅವರಿಗೆ ನೀಡಿ ಗೌರವಿಸಿದೆ.
ಕೆ. ಪುಟ್ಟಯ್ಯ
ಸೊಪ್ಪು, ಉಪ್ಪು, ವಿದ್ಯುತ್ ಖರೀದಿ ಬಿಟ್ಟರೆ ಆಹಾರ ಧಾನ್ಯಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುವ ಸಮಗ್ರ ಕೃಷಿ ಪದ್ಧತಿಯ ಪ್ರಗತಿಪರ ರೈತ ಕೆ. ಪುಟ್ಟಯ್ಯ ಅವರು ಮೊದಲಿಗೆ ಜೀತದಾಳಾಗಿ ದುಡಿಯುತ್ತಿದ್ದರು. ನಂತರ ನಾಲ್ಕು ಎಕರೆ ದರಖಾಸ್ತು ಜಮೀನು ಹೊಂದಿದ್ದು, ನಲವತ್ತು ಜನ ಅವಿಭಕ್ತ ಕುಟುಂಬದ ಬದುಕಿಗೆ ಬೇಕಾದ ಎಲ್ಲ ದವಸ ಧಾನ್ಯಗಳನ್ನು ಬೆಳೆದುಕೊಳ್ಳಬೇಕಾಗುತ್ತಿತ್ತು.
ಲಭ್ಯವಿದ್ದ ನೀರಿನ ಮೂಲಗಳನ್ನು ಉಪಯೋಗಿಸಿಕೊಂಡು ಹಸಿರೆಲೆ ಗೊಬ್ಬರ ಬಳಸಿ ಸಾವಯವ ಕೃಷಿ ನಡೆಸಿದ ಪುಟ್ಟಯ್ಯ, ಇಂದು ತಮ್ಮ ಜಮೀನಿನಲ್ಲಿ ತರಿ, ಖುಷ್ಕ ಎರಡೂ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಪಶು ಸಂಗೋಪನೆಯನ್ನು ಸಹ ಮಾಡುತ್ತಾರೆ.
ಕೃಷಿ ಹೊಂಡದಿಂದ ಬೇಸಾಯಕ್ಕೆ ಆಗುವ ಅನುಕೂಲಗಳನ್ನು ಅರಿತುಕೊಂಡು ಅದರಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಪುಟ್ಟಯ್ಯ ಬೇರೆ ರೈತರಿಗೂ ಮಾದರಿ ಆಗಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಪ್ರಗತಿಪರ ರೈತ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ಕೊಟ್ಟು ಮನೆಮಾತಾದವರು.
ಪ್ರೊ.ಜಿ.ಕೆ. ವೀರೇಶ್
ಕೇಂದ್ರ ಸರ್ಕಾರವು ಇವರ ವರದಿಗಳ ಅನುಸಾರ ಕೃಷಿ ಇಲಾಖೆಯನ್ನು ಮರು ಸಂಘಟಿಸಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಎಂದು ನಾಮಕರಣ ಮಾಡಿದೆ ಎಂಬುದು ಇವರ ಅಧ್ಯಯನಶೀಲತೆಯ ಹೆಗ್ಗಳಿಕೆಗೆ ಸಂದ ಗರಿ.
ಕೃಷಿಕರ ಸರಣಿ ಆತ್ಮಹತ್ಯೆ ಸಮಸ್ಯೆಯ ಪರಿಹಾರಕ್ಕಾಗಿ ಎರಡು ದಶಕಗಳ ಹಿಂದೆ ರಚಿಸಿದ್ದ ಆಯೋಗದ ನೇತೃತ್ವ ವಹಿಸಿದ್ದ ಪ್ರೊ| ಜಿ.ಕೆ.ವೀರೇಶ ಅವರ ಶಿಫಾರಸ್ಸುಗಳನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ಅನುಷ್ಟಾನ ಮಾಡಿದೆ.
ಸರ್ಕಾರದ ಹಲವು ಸಮಿತಿಗಳಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆಯುತ್ತಿರುವ ಪ್ರೊ. ಜಿ.ಕೆ.ವೀರೇಶ್ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸುಸ್ಥಿರ ಕೃಷಿ ಪದ್ಧತಿಯ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೃಷಿ ತಜ್ಞರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿರುವ ಜಿ.ಕೆ.ವೀರೇಶ ರೈತರಿಗೆ ಹಾಗೂ ರೈತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತಹ ಹಲವು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಭಾರತೀಯ ಕೃಷಿ ಸಂಸ್ಥೆಯ ಸಮಾಲೋಚಕರಲ್ಲೊಬ್ಬರಾದ ಡಾ|| ಜಿ.ಕೆ.ವೀರೇಶ್ ತೃತೀಯ ವಿಶ್ವದಲ್ಲಿ ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೀಲನಕಾಶೆ ರಚಿಸಿಕೊಟ್ಟ ಉನ್ನತ ಸಮಿತಿಯಲ್ಲಿ ಸಹ ಕೆಲಸ ಮಾಡಿದ್ದಾರೆ.
ಎಲ್.ಸಿ. ಸೋನ್ಸ್
ನೈಸರ್ಗಿಕ ಕೃಷಿ ಪದ್ಧತಿಯನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿರುವ ಎಲ್.ಸಿ. ಸೋನ್ಸ್ ಅವರು ತಮ್ಮ ಸೋನ್ಸ್ ಫಾರ್ಮ್ ಅನ್ನು ಮೂಡಬಿದ್ರಿಯಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಮೂಡಬಿದ್ರಿಯ ಕಸ ವಿಲೇವಾರಿಯ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಎಲ್.ಸಿ.ಸೋನ್ಸ್ ಅವರು ತಾಲೂಕಿನ ಎಲ್ಲ ಕಸವನ್ನು ತಮ್ಮ ತೋಟದಲ್ಲಿ ಸಾವಯವ ಮಾದರಿಯಲ್ಲಿ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶ ವಿದೇಶಗಳ ಹಲವು ಅಪರೂಪದ ಫಲ-ಪುಷ್ಪ ಸಂಪತ್ತನ್ನು ಬೆಳೆಸಿರುವ ಎಲ್.ಸಿ.ಸೋನ್ಸ್ ಅವರು ಮಿಶ್ರ ಬೆಳೆಯ ಪದ್ಧತಿಯ ಮೂಲಕ ರೈತ ಸ್ನೇಹಿ ಕೃಷಿ ಮಾದರಿಗಳನ್ನು ಅಳವಡಿಸಿದ್ದಾರೆ.
ಬಡವರ ಹಾಸಿಗೆ ಮತ್ತು ಹೊದಿಕೆ ಎಂದೇ ಖ್ಯಾತವಾದ ಕೌದಿ ಇಂದು ತನ್ನ ಕಲಾತ್ಮಕತೆಯಿಂದ ಕಲಾಕೃತಿಯಾಗಿ ಸಹ ಜನಮೆಚ್ಚುಗೆ ಪಡೆದಿದೆ. ಪಾರ್ವತಮ್ಮ ಪಿಟೀಲೆ ಅವರು ಈ ಜನಪದೀಯ ಕಲಾತ್ಮಕ ಪರಂಪರೆಯನ್ನು ಅತ್ಯಂತ ಸೃಜನಾತ್ಮಕವಾಗಿ ರೂಪಿಸುವಲ್ಲಿ ಸಿದ್ಧಹಸ್ತರು.
ವಿವಿಧ ಅಳತೆಯ ಮತ್ತು ವಿನ್ಯಾಸ ಕೌದಿಗಳನ್ನು ಸಿದ್ಧಪಡಿಸುತ್ತಿರುವ ಪಾರ್ವತಮ್ಮ ಅವರ ರಚನೆಯ ಕೌದಿಗಳಲ್ಲಿ ದೇಶ ವಿದೇಶಗಳ ಆಸಕ್ತರ ಸಂಗ್ರಹಕ್ಕೆ ಸೇರಿದೆ. ಹೊಸ ತಲೆಮಾರಿನ ಆಸಕ್ತರಿಗೆ ಕೂಡ ಕೌದಿಯ ತಯಾರಿಕೆ ತರಬೇತಿ ನೀಡುತ್ತಿರುವ ಪಾರ್ವತಮ್ಮ ಅವರು ತಮ್ಮ ಕಲಾತ್ಮಕ ಕೌದಿಗಳ ಮೂಲಕ ಜನಮನ ಗೆದ್ದಿದ್ದಾರೆ.
ಕಲಬುರ್ಗಿಯ ಐಡಿಯಲ್ ಫೈನ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಲಲಿತಕಲಾ ಶಿಕ್ಷಣ ಪಡೆದಿರುವ ಬಸವರಾಜ. ಎಲ್. ಜಾನೆ ಅವರು ಹಲವು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನವನ್ನು ನೀಡಿದ್ದಾರೆ.
ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಬಸವರಾಜ ಎಲ್.ಜಾನೆ ಅವರು ಕಲಾನಿಕೇತನ ಐಡಿಯಲ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಾಶೀನಾಥ ಶಿಲ್ಪ
ಸಿಮೆಂಟ್ ಮಾಧ್ಯಮ ಬಳಸಿ ಶಿಲ್ಪಗಳನ್ನು ರಚಿಸುವ ಕಾಶೀನಾಥ ಶಿಲ್ಪಿ ಅವರು ನೂರಾರು ಅಡಿ ಎತ್ತರದ ಸಿಮೆಂಟ್ ಶಿಲ್ಪಗಳನ್ನು ರಚಿಸಿದ್ದಾರೆ. ಮುರ್ಡೇಶ್ವರದ ೧೨೦ ಅಡಿ ಎತ್ತರ ಧ್ಯಾನಸ್ಥ ಶಿವ ಮೂರ್ತಿ, ಹಿಮಾಚಲದ ಆಂಜನೇಯ, ಅಹಮದಾಬಾದ್ ಪ್ರಸನ್ನಾಂಜನೇಯ, ಶಿರಸಿ ಮಾರಿಕಾಂಬ ದೇವಾಲಯದ ಗೋಪುರ ಸೇರಿದಂತೆ ಹಲವು ಮಹತ್ವದ ನಿರ್ಮಾಣಗಳನ್ನು ಮಾಡಿದ್ದಾರೆ.
ಪರಂಪರೆಯಿಂದ ಬಂದ ಶಿಲ್ಪ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವ ಕಾಶೀನಾಥ ಅವರು ಸಿಮೆಂಟ್ ಶಿಲ್ಪಗಳ ಪ್ರಕಾರದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಜಕಣಾಚಾರಿ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪಾರಂಪರಿಕ ಶಿಲ್ಪಕಲಾ ಕುಟುಂಬದಲ್ಲಿ ಜನಿಸಿದ ಧೃವ ಪತ್ತಾರ ಅವರು ಚಿಕ್ಕವಯಸ್ಸಿನಿಂದಲೇ ಮೂರ್ತಿ ಶಿಲ್ಪ ನಿರ್ಮಾಣದಲ್ಲಿ ತೊಡಗಿಕೊಂಡವರು. ದೇವಾನುದೇವತೆಗಳ ಉತ್ಸವಮೂರ್ತಿಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಪಡೆದ ಧೃವಪತ್ತಾರ ಅವರು ರಾಜ್ಯದ ಹಲವಾರು ದೇವಾಲಯಗಳ ಉತ್ಸವಮೂರ್ತಿಗಳನ್ನು ತಯಾರು ಮಾಡಿ ಕೊಟ್ಟಿದ್ದಾರೆ.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ದೇವಾಲಯ ಹಾಗೂ ಮಠಗಳ ಉತ್ಸವಮೂರ್ತಿಗಳು ಹಾಗೂ ಬೆಳ್ಳಿಯ ಪಲ್ಲಕ್ಕಿಗಳನ್ನು ಸಿದ್ಧ ಮಾಡಿಕೊಟ್ಟಿರುವ ಧೃವಪತ್ತಾರ ಅವರು ಬೆಳ್ಳಿ ಕವಚಗಳನ್ನು ತಯಾರಿಸುವಲ್ಲಿ ನಿಪುಣರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಮ್ರ, ಬೆಳ್ಳಿ, ಹಾಗೂ ಹಿತ್ತಾಳೆ, ತಗಡುಗಳಿಂದ ಮೂರ್ತಿಗಳು ಹಾಗೂ ಬೆಳ್ಳಿ ಕಿರೀಟಗಳನ್ನು ಕಲಾತ್ಮಕವಾಗಿ ನಿರ್ಮಿಸಿರುವ ಧೃವ ಪತ್ತಾರ ನಾಡಿನ ಹೆಸರಾಂತ ಶಿಲ್ಪಕಲಾ ಕಲಾವಿದರಲ್ಲೊಬ್ಬರು.
ದೇವರಾಜ ರೆಡ್ಡಿ
ಕೃಷಿ ತಂತ್ರಜ್ಞಾನದಲ್ಲಿ ನಿಪುಣರಾದ ಭೂ-ವಿಜ್ಞಾನಿ ದೇವರಾಜ ರೆಡ್ಡಿ ಕೊಳವೆ ಬಾವಿ ಮರುಪೂರಣ ಪ್ರಯೋಗದಲ್ಲಿ ಯಶಸ್ವಿಯಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳಿಗೆ ಮರುಜೀವ ಕೊಟ್ಟವರು.
ರಾಜ್ಯದಾದ್ಯಂತ ಸಾವಿರಾರು ಕೊಳವೆ ಬಾವಿಗಳು ವಿಫಲವಾಗುವ ಸಂದರ್ಭದಲ್ಲಿ ಅವುಗಳಿಗೆ ಲಭ್ಯವಿರುವ ಅಂತರ್ಜಲ ತುಂಬುವಂತೆ ಮಾಡಿ ಕೊಳವೆ ಬಾವಿಗಳ ಮೂಲಕ ನೀರು ಉಪಯೋಗಿಸಿಕೊಳ್ಳಲು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ದೇವರಾಜ ರೆಡ್ಡಿ ಅವರ ಪ್ರಯೋಗಗಳನ್ನು ಹಲವರಿಗೆ ತರಬೇತು ನೀಡಿ ಅವರು ಕೂಡ ರಾಜ್ಯದುದ್ದಕ್ಕೂ ಜಲಮರುಪೂರಣ ಯೋಜನೆಯಲ್ಲಿ ಪಾಲುಗೊಳ್ಳುವಂತೆ ಮಾಡಿದ್ದಾರೆ. ಇವರು ಕೊಳವೆ ಬಾವಿ ಜಲಮರುಪೂರಣ ಕುರಿತ ಅನೇಕ ಪರಿಚಯಾತ್ಮಕ ಹೊತ್ತಗೆಗಳನ್ನು ರೈತಾಪಿ ಜನರಿಗೆ ಸಿಗುವಂತೆ ಮಾಡಿದ್ದಾರೆ.
ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಗಳೆರಡರಲ್ಲೂ ಸಾಧನೆ ಮಾಡಿ ಎರಡು ಗಾಯನ ಪದ್ಧತಿಗಳಲ್ಲಿಯೂ ಆಕಾಶವಾಣಿ ‘ಎ’ ಶ್ರೇಣಿಯ ಕಲಾವಿದರೆಂದು ಗುರುತಿಸಲ್ಪಟ್ಟ ಮೊದಲ ಹಾಗೂ ಏಕೈಕ ಸಂಗೀತಜ್ಞೆ ಡಾ|| ಶಕುಂತಲಾ ನರಸಿಂಹನ್.
ಸಂಗೀತ ವಿದ್ವಾಂಸರಾಗಿ, ಕಲಾವಿದರಾಗಿ ಪ್ರಸಿದ್ಧರಾದ ಶಕುಂತಲಾ ನರಸಿಂಹನ್ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಎರಡೂ ಶೈಲಿಗಳ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಪ್ರಖ್ಯಾತರಾದವರು. ಸಂಗೀತದಲ್ಲಿ ಹಲವಾರು ಚಿನ್ನದ ಪದಕಗಳನ್ನು ಪಡೆದು ಸಂಗೀತ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಸಂಪಾದಿಸಿರುವ ಹೆಗ್ಗಳಿಕೆ ಇವರದು.
ಆರ್. ಜೈಪ್ರಸಾದ್
ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಹುದ್ದೆಯಿಂದ ಪದೋನ್ನತಿ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಧಾನ ಎಂಜಿನಿಯರ್ ಆಗಿ ಹುದ್ದೆ ನಿರ್ವಹಿಸಿದ ಹೆಗ್ಗಳಿಕೆ ಇರುವ ಆರ್. ಜೈಪ್ರಸಾದ್ ಅವರು ನಾಡಿನ ಹಲವಾರು ಪ್ರಮುಖ ರಸ್ತೆಗಳ ವಿನ್ಯಾಸ ಮಾಡುವಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ.
ಏಷಿಯನ್ ಅಭಿವೃದ್ಧಿ ಬ್ಯಾಂಕ್ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಾರಿಗೆ ಸಚಿವಾಲಯದೊಂದಿಗೆ ಯೋಜನಾ ವರದಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ರಸ್ತೆ, ಬಂದರು ಹಾಗೂ ಹಲವಾರು ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ದುಡಿದಿದ್ದಾರೆ.
ಸರ್ಕಾರದ ಹಲವು ಸಂಸ್ಥೆಗಳಲ್ಲಿ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಆರ್.ಜೈಪ್ರಸಾದ್ ಅವರು ಬೆಂಗಳೂರು ಮಹಾನಗರಪಾಲಿಕೆಯ ತಾಂತ್ರಿಕ ಯೋಜನೆಗಳನ್ನು ಕೈಗೊಳ್ಳಲು ಶ್ರಮ ವಹಿಸಿದ್ದ ಇವರು ಹಲವಾರು ಮುದ್ರಿತ ತಾಂತ್ರಿಕ ಬರೆಹಗಳನ್ನು ಬರೆದಿದ್ದಾರೆ. ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಲಭಿಸಿವೆ.
ಎಂ.ಎನ್. ವಾಲ
ಉತ್ತರ ಕರ್ನಾಟಕ ಭಾಗದ ಜಾನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನಕ್ಕಾಗಿ ಮೂರು ದಶಕಗಳಿಗೂ ಅಧಿಕ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ ನಿಂಗಪ್ಪ ವಾಲಿ ಅವರು ತಮ್ಮ ಪ್ರಕಾಶನದ ಮೂಲಕ ಹಲವಾರು ಪ್ರತಿಭಾವಂತ ಲೇಖಕರ ಕೃತಿಗಳನ್ನು ಪ್ರಕಟಿಸುತ್ತ ಬಂದಿದ್ದಾರೆ.
ಎಲ್ಲ ಕನ್ನಡ ಹೋರಾಟಗಳು ಮತ್ತು ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಎಂ.ಎನ್.ವಾಲಿ ಅವರು ಹಲವಾರು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ.
ಅತಿ ಹೆಚ್ಚು ಬಾರಿ ರಕ್ತದಾನ ಮಾಡುವ ಹೆಸರುವಾಸಿಯಾಗಿರುವ ನಜೀರ್ ಅಹ್ಮದ್ ಯು.ಶೇಖ್ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತ್ತಿದ್ದಾರೆ. ಅನೇಕ ಸಾಮಾಜಿಕ, ಶೈಕ್ಷಣಿಕ, ಭಾವೈಕ್ಯತೆಯ ಕಾರ್ಯಕ್ರಮಗಳನ್ನು ಸಂಘಟಿಸುತ್ತ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಜೀರ್ ಅಹ್ಮದ್ ಅವರು ಲಯನ್ಸ್ ಕ್ಲಬ್ ಸೇವಾ ಸಂಸ್ಥೆಯಲ್ಲಿ ಸಹ ಸಕ್ರಿಯ ಕಾರ್ಯಕರ್ತರು.
ಯುವ ಪ್ರಶಸ್ತಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗಳಿಸಿರುವ ನಜೀರ್ ಅವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಉತ್ತಮ ಸಮಾಜ ಸೇವಕರೆಂದು ಗೌರವಿಸಿದೆ. ರಕ್ತದಾನ ನೀಡುವುದರ ಜೊತೆಗೆ ಹಲವಾರು ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು ಇವರ ವಿಶೇಷ.
ಟೀಂ ಯುವ ಬೀದರ್
ಬೀದರ್ ಜಿಲ್ಲೆಯಲ್ಲಿನ ಹಲವು ಸಮಾನ ಮನಸ್ಕ ಯುವಕರು ಒಗ್ಗೂಡಿ ರಚಿಸಿರುವ ಸಮಾಜಸೇವಾ ಸಂಘಟನೆ ಟೀಮ್ ಯುವ, ಬೀದರ್ ಜಿಲ್ಲೆಯಲ್ಲಿ ಸುಮಾರು ಹದಿನೈದನೆಯ ಶತಮಾನದಲ್ಲಿ ಆದಿಲ್ ಶಾಹಿ ನಿರ್ಮಿಸಿದ್ದ ಕರೇಜ್’ ಎಂಬ ನೀರು ಸರಬರಾಜು ವ್ಯವಸ್ಥೆಯನ್ನು ತಮ್ಮ ಶ್ರಮದಾನದಿಂದ ಮತ್ತೆ ಹುಡುಕಾಟ ನಡೆಸಿ, ಜಿಲ್ಲಾಡಳಿತದ ಅಗತ್ಯ ಸಹಕಾರ ಪಡೆದು, ಸಾಮಾಜಿಕ ಸಹಭಾಗಿತ್ವದಲ್ಲಿ ಮತ್ತೆ ಜಲಮೂಲಗಳನ್ನು ಪುನರಜೀವನಗೊಳಿಸಿದ ಶ್ರೇಯ ಇವರದು.
ಭೀಕರ ಬರಗಾಲದಲ್ಲಿ ಇವರು ಪುನರುಜ್ಜಿವನಗೊಳಿಸಿದ ಬೀದರ್ ನಗರದ ಬಾವಿಗಳಿಂದಾಗಿ ನಗರದ ಜನತೆಯ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗಿದ್ದು, ಟೀಮ್ ಯುವ ತಂಡದ ಸಾಧನೆಯ ಹೆಗ್ಗಳಿಕೆ.
ಶೋಷಿತ, ದಮನಿತ ಮತ್ತು ದಲಿತ ಸಮುದಾಯವನ್ನು ಸಂಘಟಿಸಿ, ಬಿ.ಕೃಷ್ಣಪ್ಪ, ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯ ಅವರುಗಳ ನೇತೃತ್ವದಲ್ಲಿ ನಡೆದ ದಲಿತ ಚಳುವಳಿಗಳಲ್ಲಿ ಸಂಘಟಕರಾಗಿ ದುಡಿದವರು ಸಿ.ಎಂ.ಮುನಿಯಪ್ಪ, ತರುವಾಯ ಅವರು ಎರಡು ಅವಧಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದವರು. ಹಾಸನ, ಚಿಕ್ಕಮಗಳೂರಿನ ಚಂಡಗೋಡು ಮತ್ತು ರಾಯಚೂರಿನ ಮಸ್ಕಿ ಜಿಲ್ಲೆಯ ಭೂಹೋರಾಟಗಳು, ಪ್ರಕರಣ ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಹಾಗು ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಜನಜಾಗೃತಿ ಮೂಡಿಸುವ ಹೋರಾಟಗಳಲ್ಲಿ ಇವರು ಸಕ್ರಿಯರಾಗಿದ್ದವರು.
ರಾಜ್ಯ ಮಟ್ಟದ ಹಲವು ಹೋರಾಟಗಳಲ್ಲಿ ಮುಂದಿನ ತಲೆಮಾರಿನ ಯುವಕರನ್ನು ಸಂಘಟಿಸಿ ಜಾಗೃತಿಗೊಳಿಸುತ್ತಿರುವ ಸಿ.ಎಂ.ಮುನಿಯಪ್ಪ ಅವರು ನಿರಂತರವಾಗಿ ಸಾಮಾಜಿಕ ಜಾಗೃತಿಯಲ್ಲಿ ತೊಡಗಿದ್ದಾರೆ.
ತುಳಸಮ್ಮ ಕೆಲೂರ
ಬಡ ಮತ್ತು ಅನಾಥ ಮಕ್ಕಳನ್ನು ಸಮಾಜವು ತಿರಸ್ಕರಿಸದಂತೆ ಅವರಿಗೆ ಎಲ್ಲರಂತೆ ಶಿಕ್ಷಣ ಮತ್ತು ತರಬೇತಿ ಕೊಡಿಸಲು ಜ್ಞಾನಸಿಂಧು ಶಾಲೆ ಆರಂಭಿಸಿರುವ ತುಳಸಮ್ಮ ಅವರು ನಿರಂತರವಾಗಿ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.
ಭಿಕ್ಷೆ ಬೇಡುವ ಮಕ್ಕಳಿಗೆ ಅಕ್ಷರ ಮತ್ತು ಅನ್ನಾಹಾರಗಳನ್ನು ಒದಗಿಸುವ ಮೂಲಕ ಒಂದರಿಂದ ಆರನೆಯ ತರಗತಿವರೆಗೆ ಉಚಿತ ಶಾಲೆ ನಡೆಸುತ್ತಿದ್ದಾರೆ. ಯೋಗ, ಸಾಹಸಕ್ರೀಡೆ, ಆಧ್ಯಾತ್ಮ ಮತ್ತು ಕಂಪ್ಯೂಟರ್ ಶಿಕ್ಷಣ ನೀಡುವ ಏರ್ಪಾಡು ಮಾಡಿರುವ ತುಳಸಮ್ಮ ಅವರು ತನ್ನ ಸ್ವಂತ ಜಮೀನು ಮತ್ತು ಆದಾಯವನ್ನು ತನ್ನ ಕುಟುಂಬದ ಆದಾಯವನ್ನು ಸಮಾಜದ ಏಳಿಗೆಗಾಗಿ ತೊಡಗಿಸಿದ್ದಾರೆ.
ನಾಲ್ಕು ದಶಕಗಳಿಂದ ದೊಡ್ಡಾಟದ ಕತೆಗಾರರಾಗಿ, ಕಲಾವಿದರಾಗಿ ನಿರ್ದೇಶಕರಾಗಿ, ದುಡಿಯುತ್ತಿರುವ ದ್ಯಾಮ್ಲಪ್ಪ ಜಾಂಗ್ಲಪ್ಪ ಲಮಾಣಿ ಅವರು ಹಲವಾರು ಪೌರಾಣಿಕ ಪ್ರಸಂಗಗಳನ್ನು ಬಯಲಾಟದಲ್ಲಿ ಅಳವಡಿಸಿದ್ದಾರೆ.
ರಾಮಾಯಣ, ಕುರುಕ್ಷೇತ್ರ, ಮೂರೂವರೆ ವಜ್ರಗಳು, ಇಂದ್ರಜೀತು ಕಾಳಗ, ಮಹೀರಾವಣ ದೊಡ್ಡಾಟ ಪ್ರಸಂಗಗಳು ದ್ಯಾಮ್ಲಪ್ಪ ಅವರಿಗೆ ಹೆಸರು ತಂದುಕೊಟ್ಟ ಮಹತ್ವದ ಪ್ರದರ್ಶನಗಳು.
ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಸನ್ಮಾನಗಳು ದ್ಯಾಮಪ್ಪ ಜಾಂಗ್ಲಪ್ಪ ಲಮಾಣಿ ಅವರಿಗೆ ಲಭಿಸಿವೆ.
ಸುಜಾತಮ್ಮ
ಬಯಲಾಟದ ಕಲಾವಿದೆಯಾಗಿ ಐವತ್ತೊಂಭತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಜಾತಮ್ಮ ಅವರು ಚಿಕ್ಕ ವಯಸ್ಸಿನಲ್ಲಿಯೇ ಗಿರಿಜಾ ಕಲ್ಯಾಣ ಬಯಲಾಟದಲ್ಲಿ ರತಿದೇವಿ ಪಾತ್ರ ಮಾಡಿ ಜನಮೆಚ್ಚುಗೆ ಪಡೆದವರು.
ಸೀತೆ, ಮಂಡೋದರಿ, ದೌಪದಿ, ಉತ್ತರೆ, ಇತ್ಯಾದಿ ವೈವಿಧ್ಯಮಯ ಬಯಲಾಟದ ಪಾತ್ರಗಳನ್ನು ಹಾಗೂ ಪೌರಾಣಿಕ ನಾಟಕಗಳಲ್ಲಿಯೂ ನಟಿಸಿರುವ ಸುಜಾತಮ್ಮ ಬಯಲಾಟ ಕಲಾಟ್ರಸ್ಟ್ ರಚಿಸಿ, ಅದರ ಮೂಲಕ ಬಯಲಾಟ ಕಲೆಯನ್ನು ವಿಸ್ತರಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ.
ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಐವತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್ ಅವರು ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಮೊದಲಿಗೆ ಕಲಾವಿದರಾಗಿ ಕಟೀಲು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಸೇವೆ ಆರಂಭಿಸಿದರು. ನಂತರ ಇರಾ ಸೋಮನಾಥೇಶ್ವರ, ಸಾಲಿಗ್ರಾಮ, ಕದ್ರಿ ಮೇಳಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ ಕಿನ್ನಿಗೋಳಿ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ ಪೇತ್ರಿ ಮಾಧವ ನಾಯ್ಕ ಅವರು ಯಕ್ಷಗಾನದಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ಸಮರ್ಥವಾಗಿ
ನಿರ್ವಹಿಸಿರುವ ಕಲಾವಿದರು.
ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗೆ ಸೇರ್ಪಡೆಯಾದ ಮಾಧವ ನಾಯ್ಕರು ಮುಖ್ಯ ವೇಷಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು. ವೃತ್ತಿ ಯಕ್ಷ ರಂಗಭೂಮಿಯಲ್ಲಿ ರಾಕ್ಷಸ ಪಾತ್ರಗಳಲ್ಲಿ ಜನಮೆಚ್ಚುಗೆ ಪಡೆದ ಮಾಧವ ನಾಯ್ಕ ಅವರು ಘಟೋತ್ಕಚ ಪಾತ್ರ ಮಾತ್ರವಲ್ಲದೆ ಹಿಡಿಂಬಿ, ಶೂರ್ಪನಖಿ ಪಾತ್ರಗಳನ್ನು ಸಹ ಸೊಗಸಾಗಿ ಮೂಡಿಸಿದ್ದಾರೆ.
ಕರ್ನಾಟಕದ ಬಹತೇಕ ಎಲ್ಲ ಯಕ್ಷಗಾನ ಮೇಳಗಳಲ್ಲಿ ಕೆಲಸ ಮಾಡಿರುವ ಪೇತ್ರಿ ಮಾಧವ ನಾಯ್ಕ ಅವರಿಗೆ ಪ್ರತಿಷ್ಠಿತ ಕು.ಶಿ. ಹರಿದಾಸ ಭಟ್ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ. ಉಡುಪಿಯ ಎಂ.ಜಿ.ಎಂ ಯಕ್ಷಗಾನ ಕೇಂದ್ರದಲ್ಲಿ ಮೂರು ದಶಕಗಳ ಕಾಲ ಕಲಾವಿದರಾಗಿ ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.
ಸಾಂಪ್ರದಾಯಿಕ ಬೊಂಬೆಯಾಟದ ಕಲಾವಿದರ ಕುಟುಂಬ ವ್ಯಕ್ತಿಗಳಾದ ಎಂ.ಆ. ರಂಗನಾಥರಾವ್ ಬೊಂಬೆಯಾಟ ವಿಧಾನಗಳಲ್ಲಿ ವೈವಿಧ್ಯತೆಯನ್ನು ತರುವ ಮೂಲಕ ಹೊಸ ಪ್ರಯೋಗಗಳನ್ನು ತಂದವರು.
ರಂಗನಾಥ ರಾವ್ ಶಿಕ್ಷಣದಲ್ಲಿಯೂ ಬೊಂಬೆಯಾಟವನ್ನು ಅಳವಡಿಸುವಂತಹ ಹೊಸ ಪ್ರಯತ್ನಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು ಶಾಲಾ ಪಠ್ಯ ಕ್ರಮದಲ್ಲಿಯೂ ಇದನ್ನು ಸೇರಿಸಲಾಗಿದೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ರಾಯರು ದೇಶ-ವಿದೇಶಗಳ ಅನೇಕ ಬೊಂಬೆಯಾಟದ ಉತ್ಸವಗಳಲ್ಲಿ ಪಾಲುಗೊಂಡು ತಮ್ಮ ತಂಡದ ವತಿಯಿಂದ ಪ್ರದರ್ಶನಗಳನ್ನು ನೀಡಿದ್ದಾರೆ.
ಮಲೆ ಮಹದೇಶ್ವರನ ಭಕ್ತರಾದ ನೀಲಗಾರರ ಪಾರಂಪರಿಕ ಕುಟುಂಬದಿಂದ ಬಂದ ನಿಂಗಣ್ಣ ನಿಂಗಶೆಟ್ಟಿ ಅವರು ನೀಲಗಾರರ ಪದವನ್ನು ಎಳೆಯ ವಯಸ್ಸಿನಲ್ಲಿಯೇ ಅಭ್ಯಾಸ ಮಾಡಿಕೊಂಡಿದ್ದಾರೆ.
ಮಂಟೇಸ್ವಾಮಿ ಗಾಯನವನ್ನು ಹಾಗೂ ಸಿದ್ದಿಪ್ಪಾಜಿ ಮಹಾಕಾವ್ಯವನ್ನು ಕಂಠಪಾಠ ಮಾಡಿಕೊಂಡು ನಾಡಿನುದ್ದಕ್ಕೂ ಹಾಡುತ್ತ ಕಲಾಸೇವೆ ಮಾಡುತ್ತಿರುವ ನಿಂಗಣ್ಣ ನಿಂಗಶೆಟ್ಟಿ ಅವರು ಅನೇಕ ಹೆಸರಾಂತ ಜಾನಪದ ಉತ್ಸವಗಳಲ್ಲಿ ಪಾಲುಗೊಂಡಿದ್ದಾರೆ.
ಚಿಕ್ಕ ಮಲಗೌಡ
ಎಳೆಯ ವಯಸ್ಸಿನಿಂದಲೇ ಜಾನಪದ ಗೀತೆಗಳನ್ನು ಹಾಡಲಾರಂಭಿಸಿದ ಚಿಕ್ಕಮರೀಗೌಡರಿಗೆ ಈಗ ೭೫ ವರ್ಷ. ಆಕಾಶವಾಣಿಯಲ್ಲಿ ಹಾಗೂ ದೂರದರ್ಶನದಲ್ಲಿ ಜಾನಪದ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು ಮಕ್ಕಳಿಗೆ ಉಚಿತವಾಗಿ ಮೂಲ ಜಾನಪದ ಶಿಕ್ಷಣವನ್ನು ನೀಡುತ್ತ ಬಂದಿದ್ದಾರೆ.
ಚಿಕ್ಕಮರೀಗೌಡ ಅವರು ಮೂಲ ಜಾನಪದ ಗಾಯನವನ್ನು ಮುಂದುವರೆಸುತ್ತ ಬಂದಿರುವ ಇವರ ಅನೇಕ ಧ್ವನಿಸುರುಳಿಗಳು ಹೊರಬಂದಿವೆ. ಇವರನ್ನು ಸಾತನೂರು ಹೋಬಳಿ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಗೌರವಿಸಲಾಗಿದೆ.
ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸೋಬಿನಾ ಮೋತೆಸ್ ಕಾಂಬ್ರೇಕರ್ ಪ್ರತಿಭಾವಂತ ಡಮಾಮಿ ನೃತ್ಯ ಕಲಾವಿದೆ. ಕರ್ನಾಟಕದ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಸಿದ್ದಿ ಜನಾಂಗದ ಪ್ರಮುಖ ನೃತ್ಯವಾದ ಡಮಾಮಿ ನೃತ್ಯ ಹಾಗೂ ವಾದ್ಯವಾದನದಲ್ಲಿ ನಿಪುಣರಾಗಿದ್ದಾರೆ.
ಸೋಬೀನಾ ಮೋತೇಸ್ ಕಾಂಬ್ರೇಕರ್ ಅವರು ಡಮಾಮಿ ನೃತ್ಯದ ಬಗ್ಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು, ಈ ಸಮುದಾಯ ಕಲೆಯನ್ನು ಮರುರೂಪಿಸುವಲ್ಲಿ ಅವರ ಶ್ರಮ ಅಪಾರ.
ಪ್ರಸಿದ್ಧ ಏಕತಾರಿ ತತ್ವಪದಗಳ ಕಲಾವಿದರಾದ ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ತತ್ವಪದ ಗಾಯನದಲ್ಲಿ ಹೆಸರು ಸಂಪಾದಿಸಿದ್ದಾರೆ. ಆಕಾಶವಾಣಿ “ಬಿ” ಗ್ರೇಡ್ ಕಲಾವಿದರಾಗಿ ಇನ್ನೂರಕ್ಕೂ ಹೆಚ್ಚು ಪದಗಳನ್ನು ಹಾಡಿರುವ ಕುರಿಯವರ ಅವರು. ಜಾನಪದ ಗೀತೆಗಳನ್ನು ರಚಿಸಿರುವಲ್ಲಿಯೂ ನೈಪುಣ್ಯತೆ ಸಾಧಿಸಿದ್ದಾರೆ.
ಹವ್ಯಾಸಿ ರಂಗಕಲಾವಿದರಾಗಿಯೂ ಜನರ ಮೆಚ್ಚುಗೆ ಪಡೆದಿರುವ ಕುರಿಯವರ ಜಾನಪದ ಯಕ್ಷಗಾನ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಲ್ಲಯ್ಯ ಹಿಡಕಲ್
ಜಮಖಂಡಿ ತಾಲೂಕಿನ ಮಧುರಕಂಡಿ ಕಲಾವಿದರ ಊರು. ಈ ಊರಿನಲ್ಲಿ ಹುಟ್ಟಿದ ಮಲ್ಲಯ್ಯನವರು ದಿ. ಸಿದ್ದಗಿರಿಸ್ವಾಮಿ ಮಠಪತಿ ಇವರ ಸಾರಥ್ಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ಬಯಲಾಟವನ್ನು ಅರ್ಥಪೂರ್ಣವಾಗಿ ಪ್ರಯೋಗಿಸಿ, ಕರ್ನಾಟಕ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಸರುಗಳಿಸಿದ್ದಾರೆ.
ಈ ಬಯಲಾಟದಲ್ಲಿ ಬರುವ ಎಲ್ಲಾ ಸ್ತ್ರೀಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಸುಮಾರು ಆರು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿ ಅದರ ಜೊತೆಗೆ ಭಜನೆ ಹಾಡುಗಾರಿಕೆ ಹಾಗೂ ಪುರಾಣ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಇವರಿಗೆ ೭೦ ವರ್ಷಗಳು ತುಂಬಿವೆ ಆದರೂ ಕಲಾ ಜೀವನದಲ್ಲಿ ನಿರತರಾಗಿದ್ದಾರೆ.
ಶಾರದಮ್ಮ
ತರೀಕೆರೆ ತಾಲೂಕಿನ ಶಾರದಮ್ಮ ಅವರು ಬೇಸಾಯದ ಕೆಲಸ ಮಾಡುತ್ತಲೇ ಜನಪದ ಹಾಡುಗಳನ್ನು ತಮ್ಮ ಸೋದರಿಯೊಂದಿಗೆ ಸೇರಿ ಕಲಿತವರು.ಬೀಸುವ ಕಲ್ಲಿನ ಪದಗಳು, ಭಜನೆ, ಜನಪದ ಗೀತೆಗಳು, ಸೋಬಾನೆ ಪದಗಳನ್ನು ತಮ್ಮ ಸುತ್ತಲ ಪರಿಸರದಲ್ಲಿ ಕೇಳುತ್ತಲೇ ಬೆಳೆದವರು.
ವಿವಿಧ ಕಮ್ಮಟಗಳಲ್ಲಿ ಕಿರಿಯರಿಗೆ ಜನಪದ ಗೀತೆಗಳನ್ನು ಕಲಿಸಿರುವ ಶಾರದಮ್ಮ ಅವರು ಜನಪದ ಸಿರಿಯನ್ನು ಮುಂದಿನ ತಲೆಮಾರಿಗೆ ಮುನ್ನಡೆಸುವ ಕಾಯಕದಲ್ಲಿ ಈಗಲೂ ನಿರತರು.
‘ಜನಪದ ಸಂಭ್ರಮ’ ಧ್ವನಿಸುರುಳಿಯನ್ನು ಸಹ ಶಾರದಮ್ಮನವರು ಹೊರ ತಂದಿದ್ದು ಇವರ ಸಾಧನೆಯನ್ನು ಮೆಚ್ಚಿ ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿವೆ. ಶಾರದಮ್ಮನವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವಕ್ಕೂ ಭಾಜನರಾಗಿದ್ದಾರೆ.
ತಿಮ್ಮಮ್ಮ
ಕಳೆದ ಎಂಟು ದಶಕಗಳಿಂದ ಸೋಬಾನೆ ಪದಗಳನ್ನು ಹಾಡುತ್ತಿರುವ ತಿಮ್ಮಮ್ಮ ನಂಜನಗೂಡಿನ ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ, ಬಸವಣ್ಣನವರ ಮೇಲೆ ಜನಪದ ಗೀತೆಗಳನ್ನು ಹಾಡುತ್ತಾರೆ.
ಬೆಂಗಳೂರು ಆಕಾಶವಾಣಿಯಲ್ಲಿ ಜನಪದ ಗೀತೆಗಳಿಗೆ ದನಿಯಾಗಿರುವ ತಮ್ಮ ಮಕ್ಕಳಿಗೂ ಸೋಬಾನೆ ಪದಗಳನ್ನು ಕಲಿಸಿದ್ದಾರೆ. ಹಿರಿಯ ಜನಪದ ತಜ್ಞರಾದ ಎಚ್.ಎಸ್.ನಾಗೇಗೌಡ ಮತ್ತು ಕಾಳೇಗೌಡ ನಾಗವಾರ ಅವರ ಸಮ್ಮುಖದಲ್ಲಿ ಹಾಡಿ ಅವರ ಪ್ರಶಂಸೆ ಗಳಿಸಿದ್ದಾರೆ.
ತಿಮ್ಮಮ್ಮ ಅವರ ಜನಪದ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ.
ಬ್ಲಿ.ಜಿ. ಮಹಾಪುರುಷ
ಬಾಗಲಕೋಟೆಯ ಬಸವೇಶ್ವರ ಕಲಾಮಹಾವಿದ್ಯಾಲಯದಲ್ಲಿ ಸಿತಾರ್ ಪ್ರಾಧ್ಯಾಪಕರಾಗಿ ಮುವ್ವತ್ತು ವರ್ಷ ಕಾಲ ಸೇವೆ ಸಲ್ಲಿಸಿದ ಪ್ರೊ. ವಿ.ಜಿ. ಮಹಾಪುರುಷ ತಮ್ಮ ಗುರು ಗಂಗಾಧರ ಸಂಗೀತ ವಿದ್ಯಾಲಯದ ಮೂಲಕ ಅನೇಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಬಾಗಲಕೋಟೆಯಂತಹ ಸ್ಥಳದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಸಂಗೀತ ವಾದ್ಯಗಳ ಸಂಗ್ರಹಾಲಯವನ್ನು ಸಂಗೀತ ಕಲಾವಿದರ ಭಾವಚಿತ್ರಗಳನ್ನು ಒಳಗೊಂಡ ಕಲಾಭವನವನ್ನು ನಿರ್ಮಿಸಿರುವುದು ಇವರ ಸಂಗೀತ ಪ್ರೇಮಕ್ಕೊಂದು ಸಾಕ್ಷಿ.
ಮಹಾಪುರುಷ ಅವರು ಸಿತಾರ ದರ್ಪಣ ಎಂಬ ಕೃತಿಯನ್ನು ರಚಿಸಿದ್ದು, ನಾಡಿನ ಪ್ರಮುಖ ಉತ್ಸವಗಳಲ್ಲಿ ಸಿತಾರ್ ಕಚೇರಿಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಪಂಡಿತ್ ನಾರಾಯಣ ಢಗೆ
ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದು ನಾಡಿನ ಹಲವೆಡೆ ಕಚೇರಿಗಳನ್ನು ನಡೆಸಿರುವ ನಾರಾಯಣ ಢಗೆ ಅವರು ಹಾರ್ಮೋನಿಯಂ ಹಾಗೂ ಸಿತಾರ್ ವಾದನಗಳಲ್ಲಿ ಸಹ ಪರಿಶ್ರಮ ಹೊಂದಿದವರು.
ಸುಗಮ ಸಂಗೀತ ಕ್ಷೇತ್ರದಲ್ಲಿಯೂ ಹೆಸರು ಪಡೆದಿರುವ ಪಂಡಿತ್ ನಾರಾಯಣ ಢಗೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಗೌರವವೂ ದೊರೆತಿದೆ.
ರಾಜ್ಯದುದ್ದಕ್ಕೂ ಹಲವಾರು ಶಿಷ್ಯರನ್ನು ಪಡೆದಿರುವ ಇವರು ಹೈದರಾಬಾದ್ ಕರ್ನಾಟಕದ ಮೇರು ಗಾಯಕರಾಗಿದ್ದಾರೆ.
ಕೆ.ಬಿ. ಹೈಮಾವತಮ್ಮ
ಹೈಮಾವತಮ್ಮ ಅವರು ನಾಡಿನ ಹೆಸರಾಂತ ಗಮಕಿಗಳಲ್ಲೊಬ್ಬರು. ಗಮಕದ ಜೊತೆಗೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಕೆ.ಬಿ.ಹೈಮಾವತಮ್ಮ ಅವರು ನಾಡಿನಾದ್ಯಂತ ಗಮಕ ಕಲೆಯನ್ನು ಪಸರಿಸುವ ಜೊತೆಗೆ ನೂರಾರು ಮಂದಿಯನ್ನು ಗಮಕ ಕಲೆಯಲ್ಲಿ ತರಬೇತುಗೊಳಿಸುತ್ತಿದ್ದಾರೆ.
ಕುಮಾರವ್ಯಾಸ, ಲಕ್ಷ್ಮೀಶ ಅವರನ್ನು ಕುರಿತ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೈಮಾವತಮ್ಮ ಅವರು ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.
ಗಾಯಕಿಯಾಗಿದ್ದ ದ್ವಾರಕಿ ಕೃಷ್ಣಸ್ವಾಮಿ ಶಸ್ತ್ರಚಿಕಿತ್ಸೆ ನಂತರ ಗಾಯನ ಸಾಮರ್ಥ ಕಳೆದುಕೊಂಡ ನಂತರ ಆಯ್ಕೆ ಮಾಡಿಕೊಂಡದ್ದು ಕೊಳಲು ವಾದನವನ್ನು
ದೇಶದ ಪ್ರಸಿದ್ಧ ಭರತನಾಟ್ಯ ಕಲಾವಿದರೊಂದಿಗೆ ಕೊಳಲು ವಾದನ ಸಹಕಾರ ನೀಡುತ್ತಾ ಹೆಸರು ಮಾಡಿರುವ ದ್ವಾರಕಿ ಕೃಷ್ಣಸ್ವಾಮಿ ನೃತ್ಯ ಹಾಗೂ ಸಂಗೀತ ಕ್ಷೇತ್ರವನ್ನು ಕುರಿತಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಅನೇಕ ರೂಪಕಗಳನ್ನು ಸಂಯೋಜಿಸಿರುವ ಇವರು ನೃತ್ಯ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಹಲವು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಇವರಿಗೆ ಸಂಗೀತ ನೃತ್ಯ ಅಕಾಡೆಮಿ, ಗಾಯನ ಸಮಾಜದ ಗೌರವ ಪ್ರಶಸ್ತಿಗಳು ಲಭಿಸಿವೆ.
ಕೆ. ಮುರಳೀಧರರಾವ್
ಯಕ್ಷಗಾನ ಕಲಾವಿದರ ಮನೆತನದವರಾದ ಕೆ.ಮುರಳೀಧರರಾವ್ ಮೈಸೂರಿನಲ್ಲಿ ನಾಟ್ಯಾಚಾರ್ಯರಾಗಿ ಪ್ರಸಿದ್ಧರು. ಪಂದಾನಲ್ಲೂರು ಶೈಲಿಯ ಭರತನಾಟ್ಯ ಶಿಕ್ಷಣವನ್ನು ಪಡೆದು ನಂತರ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸಿದ ಮುರಳೀಧರರಾವ್ ನಾಡಿನುದ್ದಕ್ಕೂ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಉಭಯ ನೃತ್ಯ ಪ್ರಕಾರಗಳಲ್ಲಿ ಹಲವು ಮಂದಿಗೆ ಶಿಕ್ಷಣ ನೀಡಿರುವ ಮುರಳೀಧರರಾವ್ ಅವರಿಗೆ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.
ಹುಬ್ಬಳ್ಳಿಯಲ್ಲಿ ಬಸ್ ಚಾಲಕರಾಗಿದ್ದುಕೊಂಡೇ ರಂಗಭೂಮಿಯಲ್ಲಿ ಹೆಸರು ಮಾಡಿ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯರಾದ ಸಯ್ಯದ್ (ಸತ್ಯಜಿತ್) ಕನ್ನಡ ಚಲನಚಿತ್ರ ಜಗತ್ತಿಗೆ ಪ್ರವೇಶ ಮಾಡಿದ್ದು ಖಳನಾಯಕನ ಪಾತ್ರಧಾರಿಯಾಗಿ,
ಕನ್ನಡದ ಅನೇಕ ಚಲನಚಿತ್ರಗಳಲ್ಲಿ ಖಳನಾಯಕನಾಗಿ ಹಾಗೂ ಪೋಷಕ ಪಾತ್ರಧಾರಿಯಾಗಿ ಸತ್ಯಜಿತ್ ಅವರು ನಟಿಸಿದ್ದು ಜನಮೆಚ್ಚುಗೆ ಪಡೆದಿದ್ದಾರೆ. ಸತ್ಯಜಿತ್ ಅವರು ಈವರೆಗೆ ಅಭಿನಯಿಸಿರುವ ಚಿತ್ರಗಳ ಸಂಖ್ಯೆ ೬೫೦ಕ್ಕೂ ಹೆಚ್ಚು.
ಸಾ.ರಾ. ಗೋವಿಂದು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಸಾ.ರಾ. ಗೋವಿಂದು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಚಲನಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾಲಿಟ್ಟು ನಂತರ ಕನ್ನಡ ಚಿತ್ರ ನಿರ್ಮಾಪಕರಾದವರು.
ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಳ್ಳಿ ಕಾಲುಂಗುರ ಸೇರಿದಂತೆ ಹಲವು ಚಲನಚಿತ್ರಗಳನ್ನು ಸಾ.ರಾ. ಗೋವಿಂದು ಅವರು ನಿರ್ಮಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಚಲನಚಿತ್ರ ಸಂಬಂಧದ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ರಂಗಭೂಮಿಯಲ್ಲಿ ಹಲವಾರು ಪ್ರಭಾವಶಾಲಿ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತರಾಗಿದ್ದ ಜೆ.ಕೆ. ಶ್ರೀನಿವಾಸಮೂರ್ತಿ ಚಲನಚಿತ್ರ ರಂಗವನ್ನು ಪ್ರವೇಶ ಮಾಡಿದ್ದು ನಾಯಕನಟರಾಗಿ, ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರ ಗರಡಿಯಲ್ಲಿ ಪಳಗಿದ ಶ್ರೀನಿವಾಸಮೂರ್ತಿ ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನ ಪಾತ್ರ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.
ಕನ್ನಡದ ಬೇಡಿಕೆಯ ಪೋಷಕ ನಟರಾಗಿರುವ ಶ್ರೀನಿವಾಸಮೂರ್ತಿ ಅನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರಲ್ಲದೆ ಕಿರುತೆರೆಯಲ್ಲಿಯೂ ಜನಪ್ರಿಯ ನಟರಾಗಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿದೆ.
ಲಕ್ಷ್ಮಿ
ದಕ್ಷಿಣ ಭಾರತದ ಎಲ್ಲ ಭಾಷೆಯ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳನ್ನು ವಹಿಸಿರುವ ಲಕ್ಷ್ಮಿ ಕನ್ನಡದ ಮೊದಲ ವಾಕ್ಷಿತ್ರ ಸತಿ ಸುಲೋಚನ ನಿರ್ದೇಶಕ ವೈ.ವಿ.ರಾವ್ ಅವರ ಸುಪುತ್ರಿ, ಕನ್ನಡದ ಬಹುತೇಕ ನಾಯಕರೊಂದಿಗೆ ನಟಿಸಿರುವ ಲಕ್ಷ್ಮಿ ಅವರು ಕಿರುತೆರೆಯಲ್ಲಿ ನೀನಾ ನಾನಾ, ಡ್ರಾಮಾ ಜ್ಯೂನಿಯರ್ ಸರಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ಸಮಕಾಲೀನ ಜ್ಯೂಲಿ ಚಿತ್ರದಿಂದ ಅಖಿಲಭಾರತ ಮಟ್ಟದಲ್ಲಿ ಮನೆಮಾತಾದ ಲಕ್ಷ್ಮಿ ಸಮಾಜದ ಸಮಸ್ಯೆಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಹರಿಸುವ ರಿಯಾಲಿಟಿ ಷೋಗಳ ಮೂಲಕ ನಿರ್ವಹಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಲಭಿಸಿದೆ.
ರಂಗಭೂಮಿಯಲ್ಲಿ ಜನಪ್ರಿಯ ನಟಿ ಎನಿಸಿಕೊಂಡ ರೇವತಿ ಅವರು ನಂತರ ಚಲನಚಿತ್ರ ರಂಗದಲ್ಲಿ ಕಾಲಿಟ್ಟು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಪತಿ ನಾಯಕ ನಟ ಕಲ್ಯಾಣಕುಮಾರ್ ಅವರೊಂದಿಗೆ ನಾಟಕ ತಂಡವೊಂದನ್ನು ಕಟ್ಟಿಕೊಂಡು ರಾಜ್ಯಾದ್ಯಂತ ತಿರುಗಾಟ ನಡೆಸಿದವರು ರೇವತಿ ಅವರು.
ರೇವತಿ ಕಲ್ಯಾಣಕುಮಾರ್ ಸಾಹಿತ್ಯ ಕೃತಿಗಳನ್ನು ಆಧರಿಸಿದ ಕೆಲವು ಚಿತ್ರಗಳನ್ನು ತಮ್ಮದೇ ಲಾಂಛನದಡಿಯಲ್ಲಿ ನಿರ್ಮಿಸಿದರು. ರೇವತಿ ಕಲ್ಯಾಣಕುಮಾರ್ ಅವರಿಗೆ ಫಿಲಂ ಚೇಂಬರ್ ಅಮೃತ ಮಹೋತ್ಸವ ಗೌರವವೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.
ಕರ್ನಾಟಕ ಹಿರಿಯ ರಂಗಕರ್ಮಿಗಳಲ್ಲಿ ಒಬ್ಬರಾದ ಚಂದ್ರಕುಮಾರ್ ಸಿಂಗ್ ರಂಗಭೂಮಿಯಲ್ಲಿಯೇ ತಮ್ಮ ಬದುಕನ್ನ ಕಂಡುಕೊಂಡವರು. ಅಭಿನಯ, ಸಂಘಟನೆ, ಬೆಳಕು ವಿನ್ಯಾಸ, ರಂಗಸಜ್ಜಿಕೆ ಹೀಗೆ ನಾಟಕ ರಂಗದ ಎಲ್ಲ ವಿಭಾಗಗಳಲ್ಲಿಯೂ ದುಡಿದವರು. ಹಯವದನ, ಸಂಕ್ರಾಂತಿ, ಹ್ಯಾಬ್ಲೆಟ್, ತಬರನ ಕತೆ, ಮೊದಲಾದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತಂದಾಗ ಅದಕ್ಕೆ ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸಗಳ ಮೂಲಕ ಜೀವ ತುಂಬಿದವರು ಚಂದ್ರಕುಮಾರ್ ಸಿಂಗ್,
ಬೀದಿ ನಾಟಕ, ಮೂಕಾಭಿನಯ, ಕ್ಷೇತ್ರಗಳಲ್ಲಿ ಚಂದ್ರಕುಮಾರ್ ಸಿಂಗ್ ತಮ್ಮ ಪ್ರತಿಭೆಯನ್ನು ತೋರಿದವರು. ನಾಡಿನ ಹಿರಿಯ ರಂಗಕರ್ಮಿಗಳೊಡನೆ ಸಕ್ರಿಯ ಸಂವಹನವನ್ನಿಟ್ಟುಕೊಂಡಿರುವ ಚಂದ್ರಕುಮಾರ್ ಸಿಂಗ್ ಬೆಳಕು ಮತ್ತು ರಂಗವಿನ್ಯಾಸ ತಜ್ಞರಾಗಿ ಅನೇಕ ಶಿಬಿರಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಸರ್ಕಾರದ ಪಠ್ಯಪುಸ್ತಕ ಸಮಿತಿಯಲ್ಲಿ ಕೆಲಸ ಮಾಡಿರುವ ಚಂದ್ರಕುಮಾರ್ ಸಿಂಗ್ ಚಲನಚಿತ್ರ ಹಾಗೂ ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಅವರ ಸೇವೆ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಂದಿವೆ.
ಉಮಾರಾಣಿ ಬಾಲಗಿಡದ
ಕರ್ನಾಟಕದ ವೃತ್ತಿ ಹಾಗೂ ಗ್ರಾಮೀಣ ನಾಟಕಗಳ ಹೆಸರಾಂತ ನಟಿ ಉಮಾರಾಣಿ ಇಳಕಲ್ ಅವರು ಹಾಸ್ಯದ ಪಾತ್ರಗಳಿಗೆ ಬಹಳ ಹೆಸರುವಾಸಿ.
ಅನೇಕ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ ಅಸಾಧಾರಣ ನಟಿ ಇವರು. ಹವ್ಯಾಸಿ ರಂಗಭೂಮಿಯಲ್ಲಿಯೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಉಮಾರಾಣಿ ಅವರು ತುಘಲಕ್, ಜೋಕುಮಾರಸ್ವಾಮಿ, ತಲೆದಂಡದಂತಹ ಪ್ರಯೋಗಶೀಲ ನಾಟಕಗಳಲ್ಲಿಯೂ ಪಾತ್ರ ವಹಿಸಿದ ಅಪರೂಪದ ಕಲಾವಿದೆ.
ತಮ್ಮದೇ ಆದ ನಾಟಕ ಸಂಘ ಆರಂಭಿಸಿ, ಮಹಿಳೆಯರಿಗಾಗಿಯೇ ನಾಟಕವನ್ನು ನಿರ್ದೇಶಿಸಿರುವುದು ಇವರ ಇನ್ನೊಂದು ಸಾಹಸ, ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರ ಪಾಲಿಗೆ ಬಂದಿವೆ.
ಸಮತೆಂತೋ, ಸಮುದಾಯ, ಕಲಾಪ್ರಿಯ ತಂಡಗಳೊಂದಿಗೆ ಹಲವಾರು ನಾಟಕಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿರುವ ರಾಮೇಶ್ವರಿ ವರ್ಮಾ ಅವರು ಬಿ.ವಿ.ಕಾರಂತ, ನ.ರತ್ನ, ಪ್ರಸನ್ನ, ಸತ್ಯು ಅವರಂತಹ ನುರಿತ ನಿರ್ದೇಶಕರ ಗರಡಿಯಲ್ಲಿ ಪಳಗಿದವರು. ಕಿನಾರ ಎಂಬ ಕಿರಿಯರ ರಂಗನಾಟಕವನ್ನು ಹುಟ್ಟುಹಾಕಿದ ಹಿರಿಮೆ ಇವರದು. ಹಲವು ನಾಟಕಗಳಿಗೆ ನೇಪಥ್ಯ, ವಸ್ತ್ರವಿನ್ಯಾಸ, ರಂಗಸಜ್ಜಿಕೆಗಳನ್ನು ನಿರ್ವಹಿಸಿರುವ ರಾಮೇಶ್ವರಿ ವರ್ಮಾ ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿದ್ದರು. ತುಘಲಕ್, ಸಾಯೋ ಆಟ, ಹುಚ್ಚುಕುದುರೆ, ತಾಯಿ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.
ಹೆಚ್. ಹೇಮಲತಾ
ಸುಮಾರು ಆರು ದಶಕಗಳಿಂದ ರಂಗಭೂಮಿ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿರುವ ಟಿ.ಹೆಚ್. ಹೇಮಲತಾ ಬಾಲ್ಯದಿಂದಲೇ ರಂಗಾಸಕ್ತಿ ಹೊಂದಿ, ಭರತನಾಟ್ಯ, ಸಂಗೀತಾಭ್ಯಾಸ ಮಾಡಿ, ವೃತ್ತಿ ರಂಗಭೂಮಿ ಕಂಪನಿಗಳಲ್ಲಿ ದುಡಿದರು. ನಟರಾಜ ನಾಟ್ಯಸಂಘ, ಹೊಳೆಹಡಗಲಿ ಎಂಬ ಸ್ವಂತ ನಾಟಕ ಕಂಪನಿ ಕಟ್ಟಿದ ಇವರು ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ಟಿ.ಎಚ್.ಹೇಮಲತಾ ಅವರು ಹಲವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ನಾಟಕ ಚಟುವಟಿಕೆಗಳನ್ನು ಸಂಘಟಿಸುತ್ತಿರುವ ಹೇಮಲತಾ ಅವರು ಹೇಮಲತಾ ಕಲಾವೃಂದ, ತಿಪಟೂರು ಎಂಬ ಸಂಘವನ್ನು ಸಹ ಸ್ಥಾಪಿಸಿರುತ್ತಾರೆ.
ನಾಟಕಗಳ ತಾಲೀಮು ನೋಡುತ್ತ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಮೌಲಾಸಾಬ್ ಇಮಾಂಸಾಬ್ ನದಾಫ್ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟವರು. ಮುಂದಿನ ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು
ಕಂಡುಕೊಂಡವರು.
ಹಲವಾರು ನಾಟಕ ಕಂಪೆನಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ನದಾಫ್ ಅವರು ಪ್ರಸಿದ್ಧಿ ಪಡೆದದ್ದು ಸಾಮಾಜಿಕ ನಾಟಕಗಳಲ್ಲಿ, ಪೋಲೀಸನ ಮಗಳು ನಾಟಕದಲ್ಲಿನ ಅಭಿನಯಕ್ಕಾಗಿ ವಿಶೇಷ ಪ್ರಶಂಸೆ ಪಡೆದ ಮೌಲಾಸಾಬ್ ನದಾಫ್ ಅವರಿಗೆ ಈ ನಾಟಕ ಅಭಿನಯ ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿತು.
ವೃತ್ತಿ ರಂಗಭೂಮಿಯಲ್ಲಿ ಅನೇಕ ಪಾತ್ರಗಳಿಗೆ ಜೀವ ತುಂಬಿದ ಅಪರೂಪದ ಕಲಾವಿದರು ಮೌಲಾಸಾಬ್. ಇವರಿಗೆ ನಾಟಕ ಅಕಾಡೆಮಿ ಗೌರವ ಪುರಸ್ಕಾರ ಸಹ ದೊರೆತಿದೆ.
ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಸುಕನ್ಯಾ ಮಾರುತಿ ಹೆಸರಾಂತ ಕವಿಯಿತ್ರಿ. ಪಂಚಾಗ್ನಿ ಮಧ್ಯೆ, ನಾನು-ನನ್ನವರು ಹಾಗೂ ತಾಜಮಹಲಿನ ಹಾಡು, ಅವರ ಕವನ ಸಂಕಲನಗಳು. ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಸುಕನ್ಯಾ ಅವರ ಪ್ರಯಾಣಿನಿ ಮತ್ತು ಸಂಕೃತಿ ಕೃತಿಗಳು ಖ್ಯಾತಿ ಪಡೆದಿವೆ.
ನಿರ್ಲಕ್ಷಿತ ಸಮುದಾಯದ ಹಿನ್ನೆಲೆಯಿಂದ ಬಂದಿರುವ ಸುಕನ್ಯಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಜನಪರ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು ಉತ್ತಮ ವಾಗಿ ಎಂದು ಸಹ ಖ್ಯಾತರು. ರಾಜ್ಯ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕೆ.ಟಿ. ಗಟ್ಟಿ
ಕನ್ನಡದ ಹೆಸರಾಂತ ಕತೆಗಾರರಾದ ಕೆ.ಟಿ.ಗಟ್ಟಿ ಅವರು ಹಲವಾರು ಕಾದಂಬರಿಗಳನ್ನು ರಚಿಸಿದ್ದಾರೆ.
ದೂರದ ಆಫ್ರಿಕಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಗಟ್ಟಿಯವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಗುರಿಯನ್ನಿಟ್ಟುಕೊಂಡು ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೋಷಕರಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನೂ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ.
ಇವರ ಸಾಹಿತ್ಯ ಸೇವೆಗೆ ಸಾಹಿತ್ಯ ಅಕಾಡೆಮಿ ಗೌರವ ಮತ್ತು ದ.ಕ ಜಿಲ್ಲಾ ಮತ್ತು ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗಳ ಗೌರವ ಲಭಿಸಿದೆ.
ಶಾಮಸುಂದರ
ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಕನ್ನಡ ವಿಶ್ವಕೋಶದ ಮಾನವಿಕ ಸಂಪಾದಕರಾಗಿ ನೇಮಕಗೊಂಡ ಬಿ.ಶಾಮಸುಂದರ್ ಅವರು ವಿಶ್ವಕೋಶ ವಿಭಾಗದ ಮುಖ್ಯಸ್ಥರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ಕತೆ, ಪ್ರಬಂಧಗಳನ್ನು ರಚಿಸಿರುವ ಶಾಮಸುಂದ ಅವರು ಬಾನುಲಿಯಲ್ಲಿಯೂ ಹಲವಾರು ಸಾಹಿತ್ಯಕ ಭಾಷಣಗಳನ್ನು ಮಾಡಿದ್ದಾರೆ. ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ತು, ಇವರ ಪುಸ್ತಕಗಳನ್ನು ಹೊರತಂದಿದ್ದು, ಇವರು ಬರೆದ ನಾಟಕಗಳು ಹಾಗೂ ಲೇಖನಗಳು ವಿವಿಧ ಪಠ್ಯಪುಸ್ತಕಗಳಲ್ಲಿ ಮುದ್ರಣಗೊಂಡಿವೆ.
ಬಿ.ಶಾಮಸುಂದರ ಅವರ ಸಾಹಿತ್ಯ ಸಾಧನೆಯ ಬಗ್ಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಸಹ ನಡೆದಿರುವುದು ಇವರ ಹೆಗ್ಗಳಿಕೆ.
ರಂ.ಶಾ, ಲೋಕಾಪುರ
ಕಥೆಗಾರರಾಗಿದ್ದು ಹಲವು ಕಥಾ ಸಂಕಲನಗಳನ್ನು ಹೊರತಂದಿರುವ ರಂ.ಶಾ.ಲೋಕಾಪುರ ಅವರು ಅನಂತಮೂರ್ತಿ ಮತ್ತು ಕಾರಂತರ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಸಂತ ಜ್ಞಾನೇಶ್ವರ ಅವರ ಮರಾಠಿ ಭಾಷೆಯ ಜ್ಞಾನೇಶ್ವರಿ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿರುವ ರಂ.ಶಾ.ಲೋಕಾಪುರ ಅವರು ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳ ಬಗ್ಗೆ ಮೌಲಿಕ ಸಾಹಿತ್ಯ ರಚಿಸಿದ್ದಾರೆ. ಹಾಸ್ಯ ಲೇಖನಗಳ ಮೂಲಕ ಜನಮಾನಸದಲ್ಲಿ ತಮ್ಮ ಛಾಪನ್ನು ಒತ್ತಿದ ರಂ.ಶಾ.ಲೋಕಾಪುರ ಅವರ ‘ಸಾವಿತ್ರಿ’ ಕಾದಂಬರಿಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ಈ ಕಾದಂಬರಿಯನ್ನು ಟಿ.ಎಸ್.ರಂಗಾ ಅವರು ಚಲನಚಿತ್ರವಾಗಿಸಿದರು. ಇವರ ಇನ್ನೊಂದು ಕಾದಂಬರಿ ‘ತಾಯಿ ಸಾಹೇಬ’ವನ್ನು ಗಿರೀಶ ಕಾಸರವಳ್ಳಿ ಅವರು ಚಲನಚಿತ್ರವಾಗಿಸಿದರು.
ಇವರ ಸಾಹಿತ್ಯ ಸಾಧನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.
ಬೆಜವಾಡ ಏಲ್ಲನ್
ಮಲ ಹೊರುವ ಕುಲಕಸುಬಾಗಿದ್ದ ಕುಟುಂಬದಿಂದ ಬೆಳೆದು ಬಂದ ಕೆ.ಜಿ.ಎಫ್.ನ ಬೆಜವಾಡ ವಿಲ್ಸನ್ ಇಂತಹ ಅಮಾನವೀಯ ಪದ್ಧತಿಯ ನಿಷೇಧಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ನಡೆಸಿ ಒಣ ಶೌಚಾಲಯಗಳ ನಿಷೇಧಕ್ಕೆ ಶ್ರಮಿಸಿದವರು.
೧೯೯೩ರಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶ ಅನುಷ್ಠಾನಕ್ಕೆ ೨೦೦೩ರಲ್ಲಿ ಸರ್ಮೋಚ್ಛ ನ್ಯಾಯಾಲಯದಲ್ಲಿ ಹೋರಾಡಿ ಮಲ ಹೊರುವ ಪದ್ಧತಿಗೆ ಶಾಶ್ವತ ವಿಮೋಚನೆ ಒದಗಿಸಿದವರು. ಇವರ ಮಾನವೀಯ ಹೋರಾಟವನ್ನು ಗುರುತಿಸಿ ಪ್ರತಿಷ್ಠಿತ ರೇಮನ್ ಮ್ಯಾಗೆಸೆಸ್ಸೆ ಪ್ರಶಸ್ತಿ ಗೌರವವನ್ನು ನೀಡಿ ಗೌರವಿಸಿದೆ.
ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ೨೨ನೇ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಜೊತೆಗೆ ಕಲ್ಬುರ್ಗಿಯ ಸೇಠ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಗೌರವ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯಾಯಾಂಗ ವೃತ್ತಿಯಲ್ಲಿ ಕಾಯಕ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಿದ ಶಿವರಾಜ ಪಾಟೀಲ್ ರಾಜ್ಯದ ಹಲವಾರು ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
೧೯೭೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಶಿವರಾಜ ಪಾಟೀಲರು ನಂತರ ತಮಿಳುನಾಡು ಹಾಗೂ ರಾಜಸ್ಥಾನ ಹೈಕೋರ್ಟ್ಗಳ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ಇಲಾಖೆಯ ಘನತೆ,
ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾದೇವ ಶಿವಬಸಪ್ಪ ಪಟ್ಟಣ ಅವರು ಬೆಳಗಾವಿ ರಾಮದುರ್ಗದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನರಾಗಿದ್ದರು. ರಾಮದುರ್ಗದಲ್ಲಿ ಅರಮನೆಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ದೊಡ್ಡ ದುರಂತವೇ ನಡೆದುಹೋದಾಗ ಮಹಾದೇವಪ್ಪನವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತಾದರೂ ಅವರನ್ನು ಪೋಲಿಸರು ಬಂಧಿಸಲಾಗಲಿಲ್ಲ. ಭೂಗತರಾಗಿದ್ದುಕೊಂಡೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡ ಮಹಾದೇವಪ್ಪ ಎಸ್.ಪಟ್ಟಣ ಅವರು ಸಾರ್ವಜನಿಕ ಕ್ಷೇತ್ರದಲ್ಲಿಯೂ ದೊಡ್ಡ ಹೆಸರು ಮಾಡಿದವರು. ಶಾಸಕರಾಗಿಯೂ ಆಯ್ಕೆಯಾದ ಡಾ|| ಪಟ್ಟಣ ಅವರು ಜನಸಾಮಾನ್ಯರ ನಾಯಕರಾಗಿ ನೂರ ಆರು ವಸಂತಗಳನ್ನು ಬಾಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಮಹಾದೇವಪ್ಪನವರಿಗೆ